ಮಂಗಳವಾರ, ಜುಲೈ 30, 2019

ಯಾವ ಜನ್ಮದ ಮೈತ್ರಿ…



“ಅಯ್ಯೋ ಅಸ್ತಿ ಪಂಜರವೇ.. ಇನ್ನೂ ತಯಾರಾಗಿಲ್ವ ನೀನು?”


ಜೀನ್ಸ್ ಪ್ಯಾಂಟು ತೊಟ್ಟು, ತೋಳಿನ ಬನಿಯನ್ ಧರಿಸಿ ಇನ್ನೇನು ಅಂಗಿ ಹಾಕಿಕೊಳ್ಳಬೇಕೆನ್ನುವಷ್ಟರಲ್ಲಿ ಮಹಡಿಯ ಮೇಲಿನ ನನ್ನ ಸಿಂಗಲ್ ರೂಮಿನ ಬಾಗಿಲು ದಡದಡನೆ ಸದ್ದು ಮಾಡಿತ್ತು. ಅದರ ಜೊತೆಗೇ ಘಲಘಲಿಸಿದ, ಕೈಬಳೆಗಳೆರೆಡು ಪರಸ್ಪರ ಸೋಕಿಕೊಂಡ ಶಬ್ದ ಬಾಗಿಲು ಬಡಿಯುತ್ತಿರುವುದು ವೈಶ್ಣವಿಯೇ ಎಂಬುದನ್ನು ಸಾಬೀತುಪಡಿಸಿತ್ತು. ಹಾಕಿಕೊಳ್ಳಬೇಕಿರುವ ಅಂಗಿಯನ್ನು ಕೈಯಲ್ಲೇ ಹಿಡಿದು ಬಾಗಿಲು ತೆರೆದರೆ ತಲೆಯಿಂದ ಕಾಲಿನ ತನಕ ಫುಲ್ ಪ್ಯಾಕಪ್ ಆಗಿ, ತೋಳಲ್ಲಿ ವ್ಯಾನಿಟಿ ಬ್ಯಾಗನ್ನೂ, ಬೆನ್ನಲ್ಲಿ ಇನ್ನೊಂದು ಬ್ಯಾಗನ್ನೂ ಧರಿಸಿದ ವೈಶ್ಣವಿಯೆಂಬ ಐದಡಿಯ ಅಕಾರ “ಅಸ್ತಿಪಂಜರವೇ” ಎನ್ನುತ್ತಾ ಪ್ರತ್ಯಕ್ಷವಾಯಿತು.


“ಅಲ್ವೇ ಹಿಡಿಂಬೆ, ಬಸ್ಸಿರೋದೇ ಹತ್ತೂವರೆಗೆ. ಈಗಿನ್ನೂ ಗಂಟೆ ಎಂಟೂ ಆಗಿಲ್ಲ, ಅಷ್ಟರಲ್ಲೇ ಗಡಿಬಿಡಿ ಮಾಡ್ತೀಯಲ್ಲೇ? ಅಲ್ಲಿ ಕೆಎಸ್ಸಾರ್ಟಿಸಿ ಸ್ಟಾಪಿನ ಕಲ್ಲು ಬೆಂಚಿನ ಮೇಲೆ ಕೂತು ತೂಕಡಿಸೋದಕ್ಕೆ ಇಷ್ಟು ಅರ್ಜೆಂಟಾ ನಿಂಗೆ?”


ಬಾಗಿಲಿಗಡ್ಡ ನಿಂತ ನನ್ನನ್ನು ತಳ್ಳಿಕೊಂಡೇ ಒಳಬಂದಳನ್ನು ಪ್ರಶ್ನಿಸಿದೆ. “ಅದೆಲ್ಲ ಆಮೇಲೆ ಹೇಳ್ತೀನಿ. ನೀನೀಗ ಬೇಗ ಹೊರಡು” ಎನ್ನುತ್ತಾ ಮಂಚದ ಮೇಲಿದ್ದ ಜಯಂತ ಕಾಯ್ಕಿಣಿಯವರ ‘ತೂಫಾನ್ ಮೇಯ್ಲ್’ ಅನ್ನು ತಿರುವಿಹಾಕತೊಡಗಿದಳು. ನಾನು ಶರ್ಟ್ ನ ಗುಂಡಿ ಹಾಕಿಕೊಳ್ಳುತ್ತಾ ಕನ್ನಡಿಯತ್ತ ನಡೆದೆ.


ದೀಪಾವಳಿಗೆ ಊರಿಗೆ ಹೋಗುವುದು ಆರು ವರ್ಷಗಳ ಬೆಂಗಳೂರಿನ ಬದುಕಿನಲ್ಲಿ ನಾನು ಒಂದು ಬಾರಿಯೂ ತಪ್ಪಿಸದೇ ಅನುಸರಿಸಿಕೊಂಡು ಬಂದಿರುವ ಅಭ್ಯಾಸ. ‘ಮಾಮು ಬಂದಾ’ ಎಂದು ಖುಷಿಯಿಂದ ಕುಣಿಯುವ ಪಕ್ಕದ ಮನೆಯ ಆಕಾಂಕ್ಷುವಿನ ಜೊತೆ ಗುಡ್ಡದ ಮೇಲೆಲ್ಲಾ ಅಲೆಯುತ್ತಾ ಪಟಾಕಿ ಹೊಡೆಸುವುದು ದಶಕದಾಚೆ ಬಿಟ್ಟು ಬಂದ ಬಾಲ್ಯಕ್ಕೆ ಮತ್ತೆ ಹತ್ತಿರವಾಗಿಸುವ ಆಟ. ಆದರೆ ಈ ಬಾರಿಯ ವಿಶೇಷವೆಂದರೆ ಜೊತೆಯಲ್ಲಿ ವೈಶ್ಣವಿಯೂ ಇರುವುದು. “ನಾನು ವಿಹಾರ್ ನ ಮನೆಗೇ ಬರ್ತಿದ್ದೀನಿ. ನೀನೂ ಅಲ್ಲಿಗೇ ಬಾ” ಎಂಬ ಕಟ್ಟಪ್ಪಣೆ ಸಾಗರದಲ್ಲಿರುವ ಅವಳ ಅಮ್ಮನಿಂದ ಬಂದ ಮರುಕ್ಷಣವೇ ವೈಶ್ಣವಿ ನನಗೆ ಮೆಸೇಜ್ ರವಾನಿಸಿದ್ದಳು.
“ಅಮ್ಮ ಹಬ್ಬಕ್ಕೆ ನಿಮ್ಮನೆಗೇ ಬರ್ತಾಳಂತೆ. ಒಂದಿನ ಜಾಸ್ತಿ ರಜ ಹಾಕೋ.. ಪಣಂಬೂರು ಬೀಚಿಗೆ ಹೋಗಿಬರೋಣ ಮಧು ಕಾರಲ್ಲಿ. ಅದೇ.. ನಿನ್ನ ಹುಡುಗಿಯ ಊರಿಗೆ.”


ನನ್ನ ಹುಡುಗಿಯ ಊರು….


ಕೇಳಲು ಹಿತವೆನಿಸಿತ್ತು. ಜೊತೆಜೊತೆಗೆ ಕೈಹಿಡಿದು ಒಂದು ಹೆಜ್ಜೆಯಾದರೂ ನಡೆಯಲಿಲ್ಲ. ಎದುರು ಬದುರಾಗಿ ಕುಳಿತು ಒಂದು ಲೋಟ ಕಾಫಿಯನ್ನೂ ಗುಟುಕರಿಸಲಿಲ್ಲ. ಒಬ್ಬರು ಇನ್ನೊಬ್ಬರಿಗಾಗಿ ದಾರಿಯಲ್ಲಿ ನಿಂತು ಕಾಯಲಿಲ್ಲ‌. ಸಂಜೆಯ ಕಲ್ಲು ಬೆಂಚಿನಲ್ಲಿ ಒಬ್ಬರಿಗೊಬ್ಬರು ಆತು ಕುಳಿತು ನೆನಪಿನ ಜೋಳಿಗೆಯಿಂದ ಹಳೆಯದೊಂದು ಖುಷಿಯನ್ನೋ, ನೋವನ್ನೋ ಆಚೆತೆಗೆದು ಹೇಳುತ್ತಾ ಹೆಗಲಿಗೆ ತಲೆಯಾನಿಸಲಿಲ್ಲ..


ಅದರೂ ಅವಳು ನನ್ನ ಹುಡುಗಿ.


ನನ್ನ ನೂರು ಕರೆ, ಬಿನ್ನಹಗಳಿಗೆ ಕಿವುಡಿಯಾಗಿ ನಡೆದುಹೋದಳು. ಒಂದು ಹೊರಳು ನೋಟಕ್ಕಾಗಿ ಕಾದು ನಿಂತ ನನ್ನೆಡೆಗೆ ತಿರುಗಿಯೂ ನೋಡದೆ ಹೊರಟುಹೋದಳು. ಈ ಹೊತ್ತಿಗೆ ಅದ್ಯಾರೋ ನೂರು ಬೋಟುಗಳ ಒಡೆಯನ ತೋಳಿನಲ್ಲಿ ಬಂಧಿಯಾಗಿ ನನಗೆಂದೂ ಎಟುಕದ ಸಮುದ್ರದಲ್ಲಿ ವಿಹರಿಸುತ್ತಿರುವಳು.


ಆದರೂ ಅವಳು ನನ್ನ ಹುಡುಗಿ!


ಪ್ರೇಮದ ದಿವ್ಯ ಅನುಭೂತಿಯೆಂದರೆ ಇದೇ ಅಲ್ಲವೇ? ಎಂದೂ ಬಾರದವರನ್ನು ಕಳಿಸಿಕೊಡಲು ಒದ್ದಾಡುವುದು. ಸಿಕ್ಕಿಯೇ ಇಲ್ಲದ್ದನ್ನು ಕಳೆದುಕೊಳ್ಳುವ ವೇದನೆಯಲ್ಲಿ ನರಳುವುದು. ಶುರುವೇ ಆಗದ್ದನ್ನು ಮುಗಿಯಲು ಬಿಡೆನೆಂದು ಹಠ ಹಿಡಿಯುವುದು ಹಾಗೂ ಕೈತಪ್ಪಿಹೋದ ಮೇಲೂ ಅದು ನನ್ನದೇ ಎಂದು ನಂಬುವುದು...


“ಏನ್ ಸರ್? ಕನ್ನಡೀಲಿ ಹಳೇ ಹುಡುಗಿಯ ಬಿಂದಿ ಕಾಣ್ತಿದೆಯಾ?”
ವೈಶ್ಣವಿ ಗಿಟಿಗಿಟಿ ನಕ್ಕಳು.


“ಇಲ್ಲ ಮೇಡಂ. ಸುಶೀಲ ಟೀಚರ್ ಮಗಳ ಮುಂಬುಹಲ್ಲು ಕಾಣ್ತಿದೆ”
ನನ್ನ ಯೋಚನೆಗಳ ಸುಳಿವು ಬಿಟ್ಟುಕೊಡುವ ಇಚ್ಛೆಯಿಲ್ಲದೆ ಮಾರುತ್ತರ ನೀಡಿದೆ.


“ಕಂಡರೆ ನೋಡಿಕೋ. ಈಗ ಕನ್ನಡಿಬಿಟ್ಟು ಈಚೆ ಬಾ. ಅದು ಹೆಣ್ಣುಮಕ್ಕಳ ರಂಗಸ್ಥಳ” ಎನ್ನುತ್ತಾ ನನ್ನನ್ನು ಹಿಂದಕ್ಕೆಳೆದು ದರ್ಪಣದ ಮುಂದೆ ತಾನು ಸ್ಥಾಪಿತಳಾದಳು. ಮೂರು ಕವಲಾಗಿ ಸುಳಿಯೊಡೆದು ಪರಸ್ಪರ ಸುತ್ತಿಕೊಂಡಿದ್ದ ಜಡೆಯನ್ನು ಬೆನ್ನಿನಿಂದ ಮುಂದಕ್ಕೆ ವರ್ಗಾಯಿಸಿಕೊಂಡು ಅದರ ಬ್ರಶ್ ನಂತಹಾ ತುದಿಯನ್ನು ಬಾಚಿಕೊಳ್ಳತೊಡಗಿದಳು. ಬಾಚಿ ಬಾಚಿ ಮತ್ತಷ್ಟು ಚೂಪಾದ ಅದನ್ನು ಹಾವಿನಂತೆ ಸುರುಳಿಸುತ್ತಿ ತಲೆಯ ಹಿಂಭಾಗದ ಇಳಿಜಾರಿನಲ್ಲಿ ಎತ್ತಿ ಮಡಿಚಿಕಟ್ಟಿಕೊಂಡು ಥಟ್ಟನೆ ತಿರುಗಿ ಅಯಾಮ್ ರೆಡಿ! ಎಂದು ಕಣ್ಣುಮಿಟುಕಿಸಿದಳು. ಮೋಟು ಜಡೆಯನ್ನು ಹೀಗೇ ಬಾಚಿ ಬಾಚಿ ಎತ್ತಿಕಟ್ಟಿಕೊಳ್ಳುತ್ತಿದ್ದವಳು ಅಮ್ಮ. “ನಂಗೆ ಮೊದ್ಲು ಎಷ್ಟು ದಪ್ಪ ಜಡೆಯಿತ್ತು ಗೊತ್ತಾ? ಶಾಲೇಲಿ ಎಲ್ರೂ ನನ್ನ ನೋಡಿ ಹೊಟ್ಟೆಕಿಚ್ಚು ಪಡ್ತಿದ್ರು. ಅದ್ಯಾರ ದೃಷ್ಟಿ ಬಿತ್ತೋ ಏನೋ, ಎಲ್ಲಾ ಉದ್ರಿ ಹಿಂಗಾಯ್ತು” ಎನ್ನುತ್ತಾ ತನ್ನ ಮೋಟು ಜಡೆಯನ್ನೇ ಹಿಂದೆಂದೋ ಇದ್ದ ದಟ್ಟ ಕೂದಲೆಂಬಂತೆ ನೀವುತ್ತಾ ಬೇಸರಿಸುತ್ತಿದ್ದರೆ, ಉದುರಿ ಹೋಗಿರುವುದು ಹಾಗೂ ಈಗ ಇರುವುದು.. ಈ ಎರೆಡರ ಪ್ರಾಮುಖ್ಯತೆಯೂ ಗೊತ್ತಿಲ್ಲದ ಆರೇಳು ವರ್ಷದ ನಾನು ಅವಳು ಎತ್ತಿಕಟ್ಟಿದ ಜಡೆಯ ಉಂಡೆಯನ್ನು ಮೆಲ್ಲನೆ ಸೋಕಿ ಹೂಂ ಎನ್ನುತ್ತಿದ್ದೆ.


ಆದರೆ ‘ಜ್ಯೋತಿ’ಯ ಜಡೆ ಹೀಗಿರಲಿಲ್ಲ. ಅದು ದಟ್ಟ, ನೀಳ. ರಸ್ತೆ ಬದಿಯಲ್ಲಿ ಅವಳನ್ನೇ ಕಾಯುತ್ತಾ ನಿಂತ ನನ್ನನ್ನು ನೋಡಿಯೂ ನೋಡದಂತೆ ಬೆನ್ನು ಹಾಕಿ ನಡೆಯುತ್ತಿದ್ದವಳ ಬೆನ್ನಿನ ತುಂಬಾ ಲೋಲಕದಂತೆ ನೇತಾಡುತ್ತಾ ನನ್ನನ್ನು ಮತ್ತಷ್ಟು ಮೋಹಕನನ್ನಾಗಿಸುತ್ತಿತ್ತು. ಅದೆಷ್ಟೇ ದೂರದಿಂದ ನೋಡಿದರೂ ಅದು ಅವಳೇ ಎಂದು ಗುರುತು ಹತ್ತುತ್ತಿದ್ದುದೇ ಅವಳ ಆ ನೀಳ ಜಡೆಯಿಂದ. ತುಂಬು ಬೆನ್ನಿನ ಮೇಲೆ ಕಪ್ಪು ಬಿಳಲಿನಂತೆ ಇಳಿಬಿದ್ದ ಜಡೆ, ಕೈಯನ್ನು ಆಚೀಚೆ ಬೀಸದೇ ಮೊಲದಂತೆ ಮುದುರಿಕೊಂಡು ನಡೆಯುವ ಭಂಗಿ… ಇವೆಲ್ಲ ಒಂದುಗೂಡಿ ಅವಳೆಂಬ ಚೆಲುವೆಗೆ ಪ್ರತ್ಯೇಕವಾದ ನಿಲುವೊಂದನ್ನು ಕೊಟ್ಟಿದ್ದವು. ಬೆನ್ನು ಹಾಕಿ ನಡೆದಾಗಲೂ ನನಗೆ ತೋರದೇ ಮರೆಮಾಚಿರುವ ಅವಳ ಇನ್ನೊಂದು ಮುಖ ನನ್ನತ್ತಲೇ ನೋಡಿ ಮುಗುಳ್ನಗುತ್ತಿರುವಂತೆ ನಾನು ಪರವಶನಾಗುತ್ತಿದ್ದೆ. ಈಗಲೂ ಅಷ್ಟೇ, ಬಸ್ಸಿನಲ್ಲಿ  ಕುಳಿತು ಸಾಗುವಾಗ ಹೊರಗಡೆ ರಸ್ತೆಯಲ್ಲಿ, ಸೆಕೆಂಡಿನ ನೂರೊಂದನೇ ಭಾಗದಲ್ಲಿ ಅವಳು ರಪ್ಪನೆ ಹಾದುಹೋದರೂ ನನಗೆ ತಿಳಿದುಬಿಡುತ್ತದೆ… ಅದು ಅವಳೇ ಎಂದು. ಬಹುಷಃ ಈ ಅಂತರಂಗದೊಳಗೆ ಅವಳಷ್ಟು ಗಾಢವಾಗಿ ಇನ್ಯಾವ ರೂಪವೂ ಅಚ್ಚೊತ್ತಲಾರದೇನೋ?


ಯೋಚನೆಗಳ ಹರಿವು ಬತ್ತುವ ಹೊತ್ತಿಗೆ ನಮ್ಮನ್ನು ಹೊತ್ತ ಬಿಎಂಟಿಸಿ ಬಸ್ಸು ಮೆಜಸ್ಟಿಕ್ ನಿಲ್ದಾಣ ಪ್ರವೇಶಿಸುತ್ತಿತ್ತು.


              *****************


“ಅಯ್ಯೋ.. ನೀರಿನ ಬಾಟಲಿ ಮರೆತೇ ಬಿಟ್ಟೆ!”


ನಿಲ್ದಾಣದ ಬೆಂಚಿನ ಮೇಲೆ ಚಕ್ಕಳಮಕ್ಕಳ ಹಾಕಿಕೊಂಡು ತಪಸ್ವಿನಿಯಂತೆ ಕುಳಿತಿದ್ದವಳು ಥಟ್ಟನೆ ಜಾಂಬವತಿಯಂತೆ ಕೆಳಗೆರಗಿಕೊಂಡಳು.


“ಅಷ್ಟಕ್ಕೇ ಇಷ್ಟ್ಯಾಕೆ ಶಾಕ್ ಆಗ್ತೀಯ ಮಾರಾಯ್ತೀ? ಅಲ್ನೋಡು, ಆ ಗೂಡಂಗಡೀಲಿ ನಿನ್ಹಂಗೆ ಬಾಟಲಿ ಮರೆತುಬರುವವರಿಗಂತಾನೇ ಬಾಟಲಿ ಬಾಟಲಿಗಟ್ಟಲೆ ನೀರಿಟ್ಟುಕೊಂಡಿದ್ದಾರೆ. ನಿಜ ಹೇಳಬೇಕಂದ್ರೆ ಅವರ ಹೊಟ್ಟೆಪಾಡು ನಡೆಸುವವರೇ ನಿನ್ನಂತಹಾ ಮರೆಗುಳಿ ಜಾಂಬವತಿಯರು” ಎಂದು ಗೂಡಂಗಡಿಯತ್ತ ನಡೆಯತೊಡಗಿದೆ. ಹಿಂದಿನಿಂದ “ಎರೆಡು ಬಾಟ್ಲಿ ತಗೊಂಬಾ” ಎಂದು ಕೂಗಿದ್ದು ಕೇಳಿಸಿದರೂ ಕೇಳಿಸದಂತೆ ನಡೆದು ಅರ್ಧ ಲೀಟರ್ ನ ಒಂದು ಬಾಟಲಿಯೊಂದಿಗೆ ಮರಳಿದೆ. ಹುಡುಗಿ ತಪಸ್ವಿನಿಯ ಫೋಸಿಗೆ ಮರಳಿದ್ದಳು.


“ಎರೆಡು ಬಾಟ್ಲಿ ತಗೊಂಬಾ ಅಂದ್ನಲ್ಲಾ? ಯಾಕೆ ಒಂದೇ ತಂದೆ?” ಬಾಟಲಿಯ ಮುಚ್ಚಳ ತೆರೆಯುತ್ತಲೇ ಆಕ್ಷೇಪಿಸಿದಳು.


“ಸ್ನಾನ ಮಾಡ್ಬೇಕಂತಿದೇಯೇನು? ಇಷ್ಟು ಸಾಕು ಸುಮ್ನಿರು. ಪ್ರಯಾಣ ಮಾಡುವಾಗ ಜಾಸ್ತಿ ನೀರು ಕುಡೀಬಾರ್ದು. ನಾನೇನೂ ಮಧ್ಯದಲ್ಲಿ ನೀರು ಕುಡಿಯಲ್ಲ. ಇನ್ನೊಂದು ಬಾಟಲ್ ಯಾಕೆ, ತಲೆಗೆ ಜಪ್ಪೋಕೆ?” ಪ್ರಶ್ನಿಸಿದೆ.


“ನೋಡು ಪುಟ್ಟಾ.. ಹೆಣ್ಮಕ್ಕಳ ಹತ್ರ ಪ್ರತಿಯೊಂದು ವಿಷಯಾನೂ ಯಾಕೆ ಏನು ಅಂತ ವಿವರಣೆ ಕೇಳಬಾರದು. ವಿವರಿಸಲಾಗದ, ವಿವರಿಸಿದರೂ ನಿಮ್ಮಂಥಾ ಶಾಣ್ಯಾರಿಗೆ ಅರ್ಥವಾಗದ ಎಷ್ಟೋ ಸಂಗತಿಗಳಿವೆ ನಮ್ಮೀ ಪ್ರಪಂಚದಲ್ಲಿ. ಸುಮ್ನೇ ಜಾಣ ಮರಿ ಥರಾ ಹೋಗಿ ಇನ್ನೊಂದು ಬಾಟಲಿ ತಗೊಂಬಾ ನಡಿ… “
ಬೆನ್ನಿಗೆ ಕೈಯಿಟ್ಟು ತಳ್ಳಿದವಳನ್ನು ದುರದುರನೆ ನೋಡಿ ಮೇಲೆದ್ದೆ. ಏನಾದರೂ ಹೇಳಿ ರೇಗಿಸಬೇಕೆನಿಸುತ್ತಿತ್ತಾದರೂ ಅವಳು ಹೇಳಿದ ‘ಹೆಣ್ಮಕ್ಕಳ ವಿಷಯ’ ಎಂಬ ಪದ ನನ್ನ ಬಾಯಿ ಕಟ್ಟಿಸಿತು. ಮತ್ತೊಂದು ನೀರಿನ ಬಾಟಲಿ ಕೊಂಡು ತಿರುಗಿ ನೋಡಿದರೆ ತಲೆಯ ತನಕ ಪುಲ್ ಓವರ್ ಎಳೆದುಕೊಂಡು ಬೆಂಚಿಗೆ ಅಂಟಿ ಕುಳಿತಿರುವ ಹುಡುಗಿ ಛಳಿಗೆ ಸಿಕ್ಕ ಮೊಲದಂತೆ ಕಂಡಳು.


ಇಂದು ಈ ರಾತ್ರಿಯಲ್ಲಿ ಒಟ್ಟಿಗೇ ಹೊರಟು ನಿಂತಿರುವ ಈ ನಮ್ಮ ಪ್ರಯಾಣ ಆರಂಭವಾದದ್ದು ಬರೀ ಒಂದು ವರ್ಷದ ಕೆಳಗೆ. ಅದೊಂದು ನೆಮ್ಮದಿಯ ಭಾನುವಾರದಂದು ಗಿರಿನಗರದ ಬೀದಿಯೊಂದರಲ್ಲಿ ಅಕ್ಕನ ಮಗನ ಕೈಹಿಡಿದು ನಡೆಯುತ್ತಿದ್ದಾಗ ದಾರಿಬದಿಯ ತರಕಾರಿಯಂಗಡಿಯಿಂದ ಆಚೆ ಬರುತ್ತಾ ಕಣ್ಣಿಗೆ ಬಿದ್ದ ಈ ಐದಡಿ ಕುಳ್ಳದ ಹೆಣ್ಣು ಆಕೃತಿಗೂ ನನಗೂ ಹದಿಮೂರು ವರ್ಷಗಳ ಹಿಂದಿನ ಪರಿಚಯವಿದೆಯೆಂಬುದು ಥಟ್ಟನೆ ನೆನಪಾಗಿತ್ತು. ಎಲ್ಲೋ ಕೈಮರೆತಿದ್ದ ನವಿಲುಗರಿಯೊಂದು ಮತ್ತೆಂದೋ, ಯಾವುದೋ ಪುಸ್ತಕದ ಪುಟ ತೆರೆದಾಗ ಅಚಾನಕ್ಕಾಗಿ ಸಿಕ್ಕಿಂತೆ ಸಿಕ್ಕಿದವಳು ಬಾಲ್ಯದ ಗೆಳತಿ ವೈಶ್ಣವಿ. ಅವಳೊಬ್ಬಳೇ ಸಿಕ್ಕಿದ್ದರೆ ಆ ಭೇಟಿ ‘ಹೇಗಿದ್ದೀ? ಅರಾಮಾ? ಈಗೆಲ್ಲಿದ್ದೀ? ಮದುವೆಯಾಯ್ತಾ?’ ಎಂಬ ಪ್ರಿ-ರೆಕಾರ್ಡೆಡ್ ಕುಶಲೋಪರಿಯಲ್ಲೇ ಮುಗಿದುಹೋಗುತ್ತಿತ್ತೇನೋ? ಆದರೆ ಜೊತೆಯಲ್ಲಿ ಅವಳ ತಾಯಿ- ಸುಶೀಲ ಟೀಚರ್ ಕೂಡಾ ಇದ್ದರಲ್ಲಾ, ಹಾಗಾಗಿ ಆ ಭೇಟಿ ಅವಳ ಮನೆಯ ತನಕವೂ ಕರೆದೊಯ್ದಿತ್ತು. ಅಂದಿನ ಆ ಅನಿರೀಕ್ಷಿತ ಕ್ಷಣದಲ್ಲಿ ಮತ್ತೆ ಭೇಟಿಯಾದವರು ನಾನು ಹಾಗೂ ವೈಶ್ಣವಿಯಾದರೂ ಆ ನೆಪದಲ್ಲಿ ಹಳೆಯ ಸ್ನೇಹವನ್ನು ಮತ್ತೆ ಗಾಢವಾಗಿಸಿಕೊಂಡವರು ಊರಿನಲ್ಲಿರುವ ನನ್ನ ಅಮ್ಮ ಹಾಗೂ ಸಾಗರದಲ್ಲಿ ಟೀಚರ್ ಆಗಿರುವ ಅವಳ ಅಮ್ಮ. ಹದಿಮೂರು ವರ್ಷಗಳ ಹಿಂದೆ ಮುಗಿದೇ ಹೋಯಿತೆಂಬಂತೆ ಕೊನೆಗೊಂಡಿದ್ದ ಅವರಿಬ್ಬರ ಪರಿಚಯ ನನ್ನ ಕಣ್ಣಿಗೆ ವೈಶ್ಣವಿ ಬೀಳುವ ಮೂಲಕ ಪುನರಾರಂಭವಾಗಿತ್ತು. ಒಂದೇ ತವರಿನ ಒಂದೇ ಕಾಲಘಟ್ಟದಿಂದ ಬಂದವರಾದ ಅವರಿಗೆ ಆತ್ಮೀಯರಾಗುವುದಕ್ಕೆ ನಮಗಿಂತಲೂ ಹೆಚ್ಚಿನ ನೆಪಗಳಿದ್ದವು. ಇಪ್ಪತ್ತು ವರ್ಷಗಳ ಕೆಳಗೆ ಇಸ್ಕೂಲಿನಲ್ಲಿ ಓದುತ್ತಿದ್ದ ನಾನು ಒದಗಿಸಿದ, ‘ಶಾಲೆಗೆ ಹೊಸದಾಗಿ ವರ್ಗವಾಗಿ ಬಂದಿರುವ ಟೀಚರ್ ಕೂಡಾ ಸಾಗರದವರೇ’ ಎಂಬ ಚಿಕ್ಕ ಮಾಹಿತಿಯಿಂದ ಬೆಳೆದ ಸ್ನೇಹ ಅವರದು. ಊರಿನಲ್ಲಿದ್ದಷ್ಟೂ ದಿವಸ ಜೊತೆಯಾಗಿ ಹಪ್ಪಳ, ಸಂಡಿಗೆ ಮಾಡುತ್ತಾ, ಗಿಡಗಂಟಿಗಳ ನೆಟ್ಟು ಸಲಹುತ್ತಾ, ದೊಡ್ಡದನಿಯಲ್ಲಿ ಹರಟುತ್ತಾ ಅವರು ಕಳೆಯುತ್ತಿದ್ದ ಅದೇ ಭಾನುವಾರದ ಸಂಜೆಗಳನ್ನು ನಾನು ಹಾಗೂ ವೈಶ್ಣವಿ ಧರೆಗುಂಡಿಯ ಮಣ್ಣಿನಲ್ಲಿ ಜಾರುಬಂಡಿಯಾಡುತ್ತಾ, ತೋಟದ ಹಳ್ಳದಲ್ಲಿ ಆಣೆಕಟ್ಟು ಕಟ್ಟುತ್ತಾ ಸವಿಯುತ್ತಿದ್ದೆವು. ‘ಗುಬ್ಬಚ್ಚಿ ಗುಬ್ಬಚ್ಚಿ ಬಾ.. ಬಾ.. ಬಣ್ಧದ ಚಾಪೀಸ್ ಕೊಡ್ತೀವಿ.‌.” ಎಂದು ಮನೆಯ ಹಿಂದಿನ ಮರದಡಿ ನಿಂತು ಗುಬ್ಬಿಗಳನ್ನು ಹಾಡಿ ಕರೆದಿದ್ದೆವು. ಪ್ರತಿದಿನ ಮುಂಜಾನೆ ಶಾಲೆಗೆ ಹೊರಡುವ ವೇಳೆಯಲ್ಲಿ ಊರ ಮಧ್ಯದ ಸುಬ್ರಹ್ಮಣ್ಯ ಸರ್ಕಲ್, ಬಲಗಡೆಯ ಮಣ್ಣುದಾರಿಯಿಂದ ಬರುವ ನನ್ನನ್ನೂ, ಎಡಗಡೆಯ ಟಾರು ರಸ್ತೆಯಿಂದ ಬರುವ ಅವಳನ್ನೂ ಜೊತೆಮಾಡಿ ಶಾಲೆಗೆ ಕಳುಹಿಸಲು ಕಾಯುತ್ತಿತ್ತು. ಟೀಚರ್ ರ ಮಗಳ ಜೊತೆಗೆ ಮಾತ್ರವಲ್ಲದೆ ಸಾಕ್ಷಾತ್ ಟೀಚರ್ ರ ಜೊತೆಗೂ ಆತ್ಮೀಯತೆಯಿಂದಿರುವವನೆಂಬುದು ಇಡೀ ಶಾಲೆಯಲ್ಲೇ ನನಗೊಂದು ಗತ್ತನ್ನು ಕೊಟ್ಟಿತ್ತು ಹಾಗೂ ಮುಂದಿನ ಆರು ವರ್ಷಗಳ ಕಾಲ ಅದು ಮೆಂಯ್ಟೇನ್ ಆಗಿತ್ತು.


ಆದರೆ ಆರನೇ ವರ್ಷದ ಕೊನೆಯ ಬೇಸಿಗೆ ಎಂದಿನಂತೆ ಬರಲಿಲ್ಲ.


ಜೊತೆಯಾಗಿ ತೇಲಿಬಿಟ್ಟ ಹತ್ತಾರು ದೋಣಿಗಳಾಗಲೇ ಕಡಲು ತಲುಪಿದ್ದವು. ನಾವು ಕಿತ್ತಾಡಿಕೊಳ್ಳತ್ತ ನೀರೆರೆದ ಗಿಡಗಳಲ್ಲಾಗಲೇ ಮಲ್ಲಿಗೆ, ಸೇವಂತಿಗೆಗಳು ಅರಳಿನಿಂತಿದ್ದವು. ಹಿಂದಿನ ಅಂಗಳದ ಹಲಸಿನ ಮರದಲ್ಲಿ ನಾವು ಕರೆದ ಗುಬ್ಬಿಗಳೆಲ್ಲ ಬಂದು ಕುಳಿತು ನಮ್ಮನ್ನೇ ಕರೆಯುತ್ತಿದ್ದವು.


ವೈಶ್ಣವಿ ಹೊರಟುನಿಂತಿದ್ದಳು.


‘ಟ್ರಾನ್ಸ್ ಫರ್’ ಎಂಬ ಗಾಡಿ ನಿಲ್ದಾಣದಲ್ಲಿ ನಿಂತು ಕರೆಯುತ್ತಿತ್ತು. ನನ್ನಮ್ಮ ಹಾಗೂ ಸುಶೀಲ ಟೀಚರ್ ಒಬ್ಬರನ್ನೊಬ್ಬರು ತಬ್ಬಿಕೊಂಡು ಅತ್ತರು. ನಾವು ಸುಮ್ಮನೆ ನಿಂತೆವು. ಸಂಜೆಯ ಹೊತ್ತಿಗೆ ಧೂಳೆಬ್ಬಿಸುತ್ತಾ ಬಂದ ಪಟ್ಟಣದ ಬಸ್ಸಿನೊಳಗೆ ಅವರು ಎಳೆದುಕೊಂಡು ಹತ್ತಿದ ಸಾಮಾನು ಸರಂಜಾಮುಗಳ ನಡುವೆ ತಾನೂ ಒಂದು ವಸ್ತುವೆಂಬಂತೆ ಏರಿಕುಳಿತ ವೈಶ್ಣವಿ ನೆನಪಿನ ಪುಟಗಳತ್ತ ಸಾಗಿಮರೆಯಾದಳು.


                   ****************


ಮರಳಿ ಸಿಕ್ಕ ಗೆಳತಿಯ ಬಾಡಿಗೆ ಮನೆಗೆ ಹೋದಾಗ ಕಾಫಿಯ ಜೊತೆಗೆ ಸಿಕ್ಕ ಮತ್ತೊಂದು ಸಂಗತಿಯೆಂದರೆ ಅವಳ ಮದುವೆಯ ಸಮಾಚಾರ. ಸಾಮಾನ್ಯದವರ್ಯಾರನ್ನೂ ಒಪ್ಪದ ಮಗಳಿಗೆ ಅಸಾಮಾನ್ಯ ವರನೊಬ್ಬನನ್ನು ಹುಡುಕೀ ಹುಡುಕೀ ಅವಳ ತಾಯಿ ದಣಿದಿದ್ದರು.  ಸಿಕ್ಕು, ನಾನೂ ಇವಳ ಆತ್ಮೀಯರ ಪಟ್ಟಿಯಲ್ಲೊಬ್ಬನೆಂದು ಖಾತ್ರಿಯಾದ ದಿನವೇ ಇವಳ ಶಾದಿ ಡಾಟ್ ಕಾಂನ ಪ್ರೊಫೈಲ್ಲನ್ನು ಅಂದಗಾಣಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. “ಎಂಥೆಂಥಾ ಸಂಬಂಧಗಳು ಬಂದಿದ್ವು ಗೊತ್ತಾ? ಚಿನ್ನದ ತಕ್ಕಡೀಲಿ ತೂಗಬಹುದಾದಂಥಾ ಗಂಡುಗಳು. ನಾನು ಬರೀ ಆಸ್ತಿ ಬಗ್ಗೆ ಮಾತಾಡ್ತಿಲ್ಲ ಹಾಂ… ಆದ್ರೆ ಇವನಿಗೆ ಕೂದಲು ಕಡಿಮೆ, ಅವನ ಹೈಟ್ ಕಮ್ಮಿ, ಇವನು ಉರಿಸಿದ್ದಪ್ಪನಂತಿದ್ದಾನೆ, ಅವನು ಸಾಧು, ಅವ ಒಂಥರಾ ಮಳ್ಳನ ಥರಾ ಇದಾನೆ ಅಂತ ಒಬ್ಬೊಬ್ಬರಿಗೂ ಒಂದೊಂದು ನೆಪ ಹೇಳಿ ನಿರಾಕರಿಸಿಬಿಟ್ಟಳು. ಈಗ ನಿಮ್ಮೂರಿನಿಂದಲೇ ಎರೆಡು ಒಳ್ಳೆಯ ಸಂಬಂಧಗಳು ಬಂದಿದಾವೆ. ಒಬ್ಬ ಶ್ರೀನಿವಾಸ ಕೇಕೋಡರ ಮಗ. ಒಳ್ಳೆಯ ಗುಣದವನು. ಸ್ಥಿತಿವಂತರೂ ಹೌದು. ಹೈದರಾಬಾದಿನಲ್ಲಿ ಇಂಜಿನಿಯರ್ ಆಗಿದಾನೆ. ಇನ್ನೊಬ್ಬ ಪರಮೇಶ ಶಾಸ್ತ್ರಿಗಳ ಮಗ. ಅವನ ಗುಣದ ಬಗ್ಗೆ ಅವನ ಇಡೀ ಕೇರಿಯೇ ಹಾಡಿಕೊಂಡು ಹೊಗಳತ್ತೆ! ಬಿಟ್ಟರೆ ಸಿಗದ ಸಂಬಂಧಗಳು. ನೀನೇ ಏನಾದ್ರೂ ಬಣಿಸಿ ಅವಳನ್ನ ಮದುವೆಗೊಪ್ಪಿಸು ವಿಹಾರ” ಎಂದು ಹೆಚ್ಚೂ ಕಡಿಮೆ ಅಂಗಲಾಚಿದಂತೆ ಕೇಳಿಕೊಂಡಿದ್ದರು.


ಆದರೆ ಮದುವೆಯೆಂದೊಡನೆ ವೈಶ್ಣವಿಯ ಕ್ಯಾಸೆಟ್ ಬೇರೆಯ ರಾಗವನ್ನೇ ಹಾಡುತ್ತಿತ್ತು. “ಬಡತನ ಮತ್ತು ಕುಡುಕತನ- ಇವೆರೆಡೂ ಕೊಡುವ ಹಿಂಸೆಗಳೆಂಥಾದ್ದೆಂಬುದನ್ನು ನಾನು ನೋಡಿದೀನಿ ಕಣೋ. ಅಮ್ಮನಿಗಿದು ಹೆಗಲ ಮೇಲಿನ ಜವಾಬ್ದಾರಿ ಕಳೆದುಕೊಳ್ಳುವ ಸಂಗತಿ. ಆದರೆ ನನಗೆ ಜೀವನ ಪೂರ್ತಿ ಸಂಬಂಧವೊಂದನ್ನು ಹೆಗಲಮೇಲಿಟ್ಟುಕೊಂಡು ಬದುಕಬೇಕಾದ ಸಂಗತಿ! ಗೊತ್ತೇ ಇಲ್ಲದವನೊಬ್ಬನ ಬೊಗಸೆಯೊಳಗೆ ನನ್ನಿಡೀ ಬದುಕನ್ನೇ ಇಟ್ಟು ‘ಒಪ್ಪಿಸಿಕೋ ದೊರೆಯೇ’ ಅನ್ನುವ ಮೊದಲು, ಇರುವ ಒಂದೇ ಒಂದು ಬದುಕಿನುದ್ದಕ್ಕೂ ನನ್ನನ್ನು ಸಂಭಾಳಿಸುವ ಯೋಗ್ಯತೆ ಅವನಿಗಿದೆಯಾ ಅಂತ ಸೂಕ್ಷ್ಮವಾಗಿ ಗಮನಿಸುವುದರಲ್ಲಿ ಏನು ತಪ್ಪಿದೆ?” ಎಂದ ಅವಳ ಮಾತಿನಲ್ಲಿ ನನಗೆ ನನ್ನ ಜ್ಯೋತಿ ಆಡಿಹೋದ ಕೊನೆಯ ಮಾತುಗಳೇ ಅನುರಣಿಸಿದ್ದವು:


“ನಾನು ಚೆನ್ನಾಗಿ ಓದಿಕೊಂಡೆ. ಒಳ್ಳೆಯ ಕೆಲಸ ಹಿಡಿದೆ. ಯಾಕೆ ಹೇಳಿ ವಿಹಾರ್? ನನ್ನ ಹಾಗೂ ಗಂಡು ದಿಕ್ಕಿಲ್ಲದ ನನ್ನ ಅಪ್ಪ-ಅಮ್ಮನ ಸುಭದ್ರ ನಾಳೆಗಳಿಗೋಸ್ಕರ ಅಲ್ವಾ? ನನಗೆ ಗೊತ್ತು. ಮದುವೆಯ ವಿಷಯದಲ್ಲಿ ನನಗೆ ಹತ್ತಾರು ಆಯ್ಕೆಗಳಿವೆ ಹಾಗೂ ಅವುಗಳ ಪೈಕಿ ನಾನು ಉತ್ತಮವಾದುದ್ದನ್ನೇ ಆಯ್ದುಕೊಳ್ಳುತ್ತೇನೆ. ಈಗ, ಪ್ರೀತಿಯೆಂಬ ಈ ಕ್ಷಣಿಕ ಭಾವುಕತೆಗೆ ಸೋತು ಒಂದಿಡೀ ಬದುಕನ್ನು ನನ್ನ ಕಲ್ಪನೆಯಂತಿರದ ನಿಮ್ಮೊಂದಿಗೆ ಹಂಚಿಕೊಳ್ಳಲಾರೆ. ನನ್ನನ್ನು ಕ್ಷಮಿಸಿ…”


ಪ್ರೀತಿ, ಮದುವೆ, ಸಂಬಂಧ.. ಇವೆಲ್ಲ ಕೇಳಲಿಕ್ಕೆ ಎಲ್ಲರಿಗೂ ಒಂದೇ ರೀತಿಯ ಪದಗಳು. ಆದರೆ ಪ್ರತಿಯೊಬ್ಬರ ಅಂತರಾಳದಲ್ಲೂ ಹೇಗೆ ಬೇರೆಬೇರೆಯ ಚಿತ್ರವನ್ನೇ ಬಿಡಿಸುತ್ತಾವಲ್ಲಾ? ಇವೆಲ್ಲ ಒಂದಾಗಿ ಸೇರುವ ಆ ಬಿಂದು ಯಾವುದು? ಮದುವೆಯಾ? ಪ್ರತಿಯೊಂದು ಮದುವೆಯಲ್ಲೂ ಈ ಎಲ್ಲ ಸಂಗತಿಗಳೂ ಒಂದಾಗಿ ಕೂಡುತ್ತವೆಯಾ? ನಮ್ಮೆಲ್ಲರಿಗೂ ನಾವ್ನಾವು ಬಯಸಿದ್ದೇ ದೊರಕುತ್ತದೆಯಾ? ಸುತ್ತುತ್ತಿರುವ ಚಕ್ರದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬೆನ್ನಟ್ಟುತ್ತಾ ತಿರುಗುತ್ತಿರುವ, ಯಾರಿಗೆ ಯಾರೂ ಸಿಗದ ಬೇರೆ ಬೇರೆ ಅಂಚುಗಳೇ ನಾವೆಲ್ಲ?
ಕಿಟಕಿಯಾಚೆಗೆ ಸರಿದುಹೋಗುತ್ತಿದ್ದ ಕತ್ತಲಿನ ಚಿತ್ರಗಳಂತೆಯೇ ಪ್ರೆಶ್ನೆಗಳು ಹಾದುಹೋಗುತ್ತಿದ್ದವು.


                  ****************


ಬೆಳಗಿನ ಎರೆಡನೇ ಜಾವದ ಕತ್ತಲ ರಸ್ತೆಗೆ ಪ್ರಖರ ಬೆಳಕನ್ನೆರಚುತ್ತಾ ಬಸ್ಸು ಮುಂದಕ್ಕೋಡುತ್ತಿತ್ತು. ನನ್ನ ಹೆಗಲಿಗೊರಗಿಕೊಂಡಿದ್ದ ವೈಶ್ಣವಿ ಗಾಢವಾದ ನಿದ್ರೆಯಲ್ಲಿದ್ದಳು. ಅವಳ ನಿದ್ರೆಗೆ ಭಂಗ ಬರದಂತೆ ಕುಳಿತಲ್ಲೇ ಮೆಲ್ಲನೆ ಮಿಸುಕಾಡಿ ನನ್ನ ಭಂಗಿಯನ್ನು ಕೊಂಚ ಬದಲಾಯಿಸಿದೆ. ಆದರೂ ಆ ಸೂಕ್ಷ್ಮ ಅಲುಗಾಟದಿಂದ ಕೊಂಚ ವಿಚಲಿತಳಾದಂತೆ ನಿದ್ರೆಗಣ್ಣಿನಲ್ಲೇ ಏನೋ ಮಣಗುಟ್ಟಿದಳು. ನನಗೆ ಆಶ್ಚರ್ಯವಾಯಿತು. ಎಷ್ಟು ಗಾಢವಾಗಿ ನಿದ್ರಿಸುತ್ತಿದ್ದಾಳೆ… ಕನವರಿಸುವಷ್ಟು! ಈ ಇರುಳಿನ ಈ ಪ್ರಯಾಣದಲ್ಲಿ ನನ್ನ ಹೆಗಲಿಗೊರಗಿ ನಿದ್ರಿಸುತ್ತಿದ್ದಾಳೆ. ಮುಂದಿನ ವರುಷ ಇದೇ ಇರುಳಿನ ಇಂಥಾದ್ದೇ ಪ್ರಯಾಣದಲ್ಲಿ ತನ್ನ ಗಂಡನ ಹೆಗಲಿಗೊರಗಿ ಇಷ್ಟೇ ನಿಷ್ಕಲ್ಮಷವಾಗಿ ನಿದ್ರಿಸುತ್ತಿರುತ್ತಾಳೆ. ಅವರ ನಡುವೆ ಪ್ರೀತಿಯಿರುತ್ತದೆ. ದಂಪತಿಗಳೆಂಬ ಅನ್ಯೋನ್ಯತೆಯಿರುತ್ತದೆ. ಹಾಗಾದರೆ ನಮ್ಮ ನಡುವಿರುವುದೇನು? ಸ್ನೇಹವಾ? ನಂಬಿಕೆಯಾ? ವಿಶ್ವಾಸವಾ? ಅಥವಾ ಅವೆಲ್ಲವನ್ನೂ ಮೀರಿದ ಮತ್ಯಾವುದೋ ಮಧುರವಾದ, ಆದರೆ ಅಷ್ಟೇ ಕ್ಷಣಿಕವಾದ ನಂಟಾ? ಮುಂದೊಂದು ದಿನ ಗಂಡನ ಹೆಗಲಿಗೊರಗಿ ನಿದ್ರಿಸುವಾಗ ಇವಳಿಗೆ ಈ ದಿನ, ಈ ಇರುಳು, ಈ ಪ್ರಯಾಣಗಳೆಲ್ಲಾ ನೆನಪಾಗುತ್ತಾವಾ? ತನಗೆ ಎಚ್ಚರವಾಗದಿರಲೆಂದು ಮಿಸುಕಾಡದೇ ಕುಳಿತಿದ್ದ ನಾನು ನೆನಪಾಗುತ್ತೇನಾ?


ಜ್ಯೋತಿಗೆ ನನ್ನ ನೆನಪಾಗುತ್ತಿದೆಯಾ?


ನಾನು ಅವಳಿಗಾಗಿ ಕಾದು ನಿಂತ ಜಾಗ, ಆಡಿದ ಮಾತು, ಹಿಂಬಾಲಿಸಿದ ಹಾದಿ, ಕೊಟ್ಟ ಹೂವು.. ಇವುಗಳಲ್ಲಿ ಯಾವೊಂದಾದರೂ ನನ್ನ ನೆನಪು ತರದೇ ಹೋಗುತ್ತವೆಯಾ?


ಅವಳ ನೆನಪುಗಳು ಬಸ್ಸಿನ ಕಿಟಕಿ ಮುಚ್ಚಿದರೂ ಅಗೋಚರ ರಂಧ್ರವೊಂದರಿಂದ ನಸುಳಿ ಬರುವ ಛಳಿಗಾಳಿಯಂತೆ ನುಗ್ಗಿಬರತೊಡಗಿದವು. ಎಲ್ಲಿರಬಹುದು ಅವಳು? ಎಂದೂ ಮುಗಿಯದ ಈ ದಿವ್ಯ ಕನವರಿಕೆಯನ್ನು ನನ್ನ ಪಾಲಿಗೆ ಕೊಟ್ಟು ಈ ಕ್ಷಣದಲ್ಲಿ ಅದ್ಯಾರ ಹೆಗಲಿಗೊರಗಿ ನಿದ್ರಿಸುತ್ತಿರಬಹುದು?


ಹೀಗೆ ನಾನು ಈ ಲೋಕದ್ದೇ ಅಲ್ಲವೆಂಬಂತಹಾ ಯೋಚನೆಗಳಲ್ಲಿ ಕಳೆದುಹೋಗಿದ್ದಾಗಲೇ ಹೆಗಲಿಗೊರಗಿದ್ದ ವೈಶ್ಣವಿಯಲ್ಲೇನೋ ತಳಮಳ ಸಂಭವಿಸತೊಡಗಿತು. ನಾನು ನೋಡುತ್ತಿರುವಂತೆಯೇ ಬೆಚ್ಚಿದಂತೆ ಕಣ್ತೆರೆದು ಒಂದು ಕೈಯನ್ನು ಬಾಯಿಗಡ್ಡವಿಟ್ಟುಕೊಂಡು, ಇನ್ನೊಂದರಿಂದ ಮುಚ್ಚಿದ ಕಿಟಕಿಯ ಗಾಜನ್ನು ಎಳೆಯತೊಡಗಿದಳು. ತಕ್ಷಣ ಪರಿಸ್ಥತಿಯ ಅರಿವಾದ ನಾನು ಕಿಟಕಿಯನ್ನು ಹಿಂದಕ್ಕೆಳೆದು ಅವಳಿಗೆ ತಲೆ ಹೊರಗೆ ಹಾಕಲು ಅನುವುಮಾಡಿಕೊಟ್ಟೆ. ಮುಂದಿನ ಹಲವು ನಿಮಿಷಗಳ ಕಾಲ ಬಿಟ್ಟೂ ಬಿಟ್ಟೂ ಕರುಳೇ ಆಚೆ ಬಂದಂತೆ ಹೊಟ್ಟೆಯಲ್ಲಿರುವುದನ್ನೆಲ್ಲಾ ಕಾರಿಕೊಂಡು ಸೀಟಿಗೊರಗಿದವಳನ್ನು ನೋಡಿ ಕಳವಳವಾಯಿತು. ಪಾಪ, ಯಾವಾಗಲೂ ಸ್ಲೀಪರ್ ಟ್ರೈನಿನಲ್ಲೋ, ರಾಜಹಂಸದಲ್ಲೋ ಓಡಾಡುತ್ತಿದ್ದವಳು. ಈ ಬಾರಿ ನಾನೇ ಒತ್ತಾಯ ಮಾಡಿ ನೆಟ್ಟಗಿನ ಸೀಟುಗಳ ಒರಟು ಪ್ರಯಾಣದ ಕರ್ನಾಟಕ ಸಾರಿಗೆ ಬಸ್ಸು ಹತ್ತಿಸಿದ್ದೆ.


“ಪ್ರಯಾಣ ಮಾಡುವಾಗ ವಾಂತಿಯಾಗುತ್ತೆ ಅಂತ ಮೊದಲೇ ಹೇಳೋದಲ್ವೇನೇ ಹುಡುಗೀ.. ಸ್ಲೀಪರ್ರೋ, ಸೆಮಿ ಸ್ಲೀಪರ್ರೋ ಬುಕ್ ಮಾಡ್ತಿದ್ದೆ..”
ಪಶ್ಚಾತ್ತಾಪದಿಂದ ಕೇಳಿದೆ.


“ವಾಂತಿಯಾಗುವುದಕ್ಕೆ ಪ್ರಯಾಣದ ಕುಲುಕಾಟವೇ ಕಾರಣವಾಗಬೇಕಿಲ್ಲ ಕಣೋ” ಬಳಲಿಕೆಯ ಮಧ್ಯೆಯೂ ಕ್ಷೀಣವಾಗು ನಕ್ಕು ಮುಂದುವರಿಸಿದಳು. “ನಡೆಯುವಾಗಲೂ ಆಗುತ್ತದೆ, ಕುಳಿತಿರುವಾಗಲೂ ಆಗುತ್ತದೆ.. ಅಷ್ಟೇ ಏಕೆ, ಸುಮ್ಮನೆ ನಿದ್ರಿಸುವಾಗಲೂ ಯಾವುದೋ ಕೆಟ್ಟಕನಸಿನಾಳದಿಂದ ಎದ್ದುಬಂದು, ನನ್ನನ್ನೂ ಎಬ್ಬಿಸಿ ವಿಷಕಾರಿಕೊಳ್ಳುತ್ತದೆ.. ‌ನನಗೆ ಗರ್ಭಕೋಶದ ತೊಂದರೆಯಿದೆ…”


“ಗರ್ಭಕೋಶಾನಾ?”
ಹೆಚ್ಚೂಕಮ್ಮಿ ಕಿರುಚಿದಂತೆಯೇ ಕೇಳಿದ ನನಗೆ ನಿಜಕ್ಕೂ ಆಘಾತವಾಗಿತ್ತು.


“ಏನು ಹೇಳ್ತಿದೀಯ ವೈಶು? ಏನಾಗಿದೆ ನಿನಗೆ? ಅದೇನದು ಗರ್ಭಕೋಶದ ಖಾಯಿಲೆ? ಯಾಕೆ ಬಂತು ಅದು? ಡಾಕ್ಟರಿಗೆ ತೋರ್ಸಿದೀಯಾ? ನನಗ್ಯಾಕೆ ಹೇಳಲಿಲ್ಲ ಈ ವಿಷಯಾನ?”
ಮನದಲ್ಲಿ ಸಾಲುಸಾಲಾಗಿ ಮೂಡಿದ ಆತಂಕದ ಪ್ರೆಶ್ನೆಗಳನ್ನೆಲ್ಲ ಹಾಗ್ಹಾಗೇ ಕೇಳಿದೆ‌‌.


“ಯಾಕೆ ಬಂತು ಅಂದರೆ ಏನು ಹೇಳಲಿ ಹೇಳು? ಮೊದಮೊದಲು ತಿಂಗಳಿಗೆ ಹೊರಗಾಗುವುದು ವ್ಯತ್ಯಾಸವಾಯಿತು. ಬರುಬರುತ್ತಾ ಅದು ತಾರಾಮಾರಿ ಹೊಟ್ಟೆನೋವಿಗೆ ಹಾಗೂ ವಾಂತಿಗೆ ತಿರುಗಿತು. ಪರಿಚಯದವರೇ ಆದ ಡಾಕ್ಟರೊಬ್ಬರಿಗೆ ತೋರಿಸ್ತಿದೇನೆ. ವಾಸಿಯಾಗುತ್ತೆ ಅಂದಿದಾರೆ. ಆಗುವ ತನಕ ಇದೆಲ್ಲ ಇದ್ದದ್ದೇ…”


“ಅಮ್ಮನಿಗೆ ಹೇಳಿದೀಯಾ?”


“ಹೇಳಿ ಏನು ಪ್ರಯೋಜನ ಹೇಳು? ಪಾಪ, ಅವಳ ಖಾಯಿಲೆಗಳೇ ಅವಳಿಗಾಗಿದೆ. ಜೊತೆಗೆ ನನ್ನದನ್ನೂ ಸೇರಿಸಿ ಅವಳ ರಾತ್ರೆಗಳ ನಿದ್ರೆಯನ್ನ ಕೆಡಿಸಲಾ? ಅಷ್ಟಕ್ಕೂ ಅವಳಿಗೇನಾದರೂ ಹೇಳಿದರೆ ಸುಮ್ಮನೆ ಗಾಬರಿಯಾಗ್ತಾಳೆ. ಕೆಲಸಬಿಡು, ಊರಿಗೆ ಬಾ, ಈ ಡಾಕ್ಟರಿಗೆ ತೋರಿಸು, ಆ ದೇವಸ್ಥಾನಕ್ಕೆ ಹೋಗು, ಈ ಬೆಟ್ಟ ಹತ್ತು, ಮದುವೆಯಾಗು ಅಂತೆಲ್ಲ ಗಡಿಬಿಡಿ ಮಾಡ್ತಾಳೆ. ಹೆಣ್ಮಕ್ಕಳ ಬಾಳಿನ ಸಕಲ ಸಮಸ್ಯೆಗಳಿಗೂ ಮದುವೆಯೇ ಮದ್ದು ಎಂಬುದು ಅವಳ ನಂಬಿಕೆ. ಅದಕ್ಕೇ ಅವಳಿಗೇನೂ ಹೇಳದೇ ಇದು ವಾಸಿಯಾಗುವ ತನಕ ಏನಾದರೊಂದು ನೆಪ ಹೇಳಿ ಮದುವೆಯನ್ನು ಮುಂದೂಡುತ್ತಿದ್ದೇನೆ.”


ದಣಿದ ಒಡಲಾಳದಿಂದ ನೋವಿನ ಸಮೇತ ಹೊರಬಂದ ಆ ಮಾತುಗಳನ್ನು ಕೇಳಿ ಬಹಳ ಖೇದವೆನಿಸಿತು. ಮಕ್ಕಳಾಗಿಲ್ಲ. ಮದುವೆಯೇ ಆಗಿಲ್ಲ. ಇಷ್ಟರಲ್ಲೇ ‘ಗರ್ಭಕೋಶ’ ಎನ್ನುವ ಅಷ್ಟು ದೊಡ್ಡ ಪದವನ್ನು ಎತ್ತಾಡುವಂತೆ ಮಾಡಿರುವ ಖಾಯಿಲೆ ಯಾವುದಿರಬಹುದು? ಕೇಳಬೇಕೆನಿಸಿದರೂ ಬಳಲಿ ಬಸವಳಿದವಳ ಬಳಿ ಬೇರೇನೂ ಕೇಳಲಾಗಲಿಲ್ಲ. ಹೆಗಲಿಗೆ ಒರಗಿ ಕಷ್ಟದಿಂದೆಂಬಂತೆ ಕಣ್ಮುಚ್ಚಿದವಳ ಮುಖ ಬಸ್ಸಿನ ಕುಲುಕಾಟಕ್ಕೆ ಹೆಗಲಿನಿಂದ ಜಾರಿಹೋಗದಂತೆ ಕೈ ಅಡ್ಡ ಇಟ್ಟೆ.


‘ಇವಳಿಗೆ ಕೇಕೋಡರ ಮಗನಿಗಿಂತ ಶ್ರೀಮಂತನಾದ, ಶಾಸ್ತ್ರಿಗಳ ಮಗನಿಗಿಂತ ಸದ್ಗುಣನಾದ ವರ ದೊರಕಲಿ ದೇವರೇ..’


ಮನಸ್ಸು ಅಪ್ರಯತ್ನದಿಂದ ಹಾರೈಸಿತು. ನಿದ್ರೆಯೆಂಬುದು ಕಿಟಕಿಯಾಚೆಗಿನ ದೂರದ ಕತ್ತಲಿನ ಮಡುವಿನಲ್ಲಿ ಮುಳುಗಿ ಹೋಗಿರುವ ಬೀದಿದೀಪದಂತೆ ಕ್ಷೀಣವಾಯಿತು.


“ಹೆಣ್ಣುಮಕ್ಕಳ ಪ್ರಪಂಚದಲ್ಲಿ ನಿಮಗೆ ಅರ್ಥವಾಗದಂತಹಾ ಅದೆಷ್ಟೋ ಸೂಕ್ಷ್ಮ ಸಂಗತಿಗಳಿವೆ ವಿಹಾರ್..”


ಆ ಮಾತು ಅವಳ ನಿದ್ರೆಯ ಲೋಕದಿಂದಲೇ ಅನುರಣಿಸುತ್ತಿರುವಂತೆ ಭಾಸವಾಯಿತು. ಈ ಹೆಣ್ಣೆಂಬ ಜೀವಿಯೇ ಹೀಗೆ..  ತನಗಷ್ಟೇ ಸೀಮಿತವಾದ ಅದೆಷ್ಟೋ ಗುಟ್ಟು, ಸಂಗತಿ, ತುಮುಲಗಳನ್ನು ಒಳಗಿಟ್ಟುಕೊಂಡೇ ನಮ್ಮೊಂದಿಗೆ ಬೆರೆಯುತ್ತದೆ. ಇಷ್ಟು ದಿನ ಮದುವೆಯ ವಿಷಯದಲ್ಲಿವಳು ನಡೆದುಕೊಳ್ಳುತ್ತಿದ್ದ ರೀತಿಯನ್ನು ರೂಪ, ಹಣ, ಅಂತಸ್ತುಗಳ ಮೇಲಿನ ವ್ಯಾಮೋಹವೆಂದೇ ತಿಳಿದಿದ್ದೆ. ಅದರ ಹಿಂದೆ ಹೀಗೊಂದು ಸಂಕಟವಿದೆಯೆಂಬ ಸಣ್ಣ ಕಲ್ಪನೆಯೂ ಬಂದಿರಲಿಲ್ಲ. ಕಣ್ಣೆದುರು ಸದಾ ನಗುಮುಖ ತೋರಿಸಿಕೊಂಡಿರುವವಳಿಗೇ ಇಂಥಾದ್ದೊಂದು ತಳಮಳಿಸುವ ಗುಪ್ತ ಚಹರೆಯೊಂದಿರುವಾಗ ಬೆನ್ನುಹಾಕಿ ನಡೆದು ಹೋದವಳೊಳಗೆ ಅದಿನ್ನೆಂತಹಾ ವೇದನೆಗಳಿದ್ದಿರಬಹುದು?


ಯಾಕೋ ಜ್ಯೋತಿ ತೀವ್ರವಾಗಿ ಕಾಡತೊಡಗಿದಳು.


                 ************************


ಎಂಟರ ಎಳೆ ಬಿಸಿಲಿನಲ್ಲಿ ನಮ್ಮ ಮನೆ ಹೊಳೆಯುತ್ತಾ ನಿಂತಿತ್ತು. ಉಣಗೋಲು ತೆರೆಯುತ್ತಿದ್ದಂತೆಯೇ ಮುದ್ದಿನ ಭರದಲ್ಲಿ ತಲೆ, ಬಾಲ ಕುಣಿಸುತ್ತಾ ನನ್ನ ಮೇಲೆರಗಿದ ಟಾಮಿಯನ್ನು ವೈಶ್ಣವಿ “ಏ ನಾನು ನಿಮ್ಮನೆ ಗೆಸ್ಟ್ ಕಣೋ.. ನನ್ನೂ ಮಾತಾಡ್ಸೋ..” ಎನ್ನುತ್ತಾ ತನ್ನಕಡೆಗೆಳೆದುಕೊಂಡಳು. ಟಾಮಿಯನ್ನು ಅವಳ ಅಪ್ಪುಗೆಗೊಪ್ಪಿಸಿ ಅಂಗಳ ದಾಟಿದವನಿಗೆ ಜಗುಲಿಯ ಕುರ್ಚಿಯ ಮೇಲೆ ದಿನಪತ್ರಿಕೆ ಹಿಡಿದು ಕುಳಿತಿರುವವರನ್ನು ನೋಡಿ ಆಶ್ಚರ್ಯವಾಯಿತು. ವೈಶ್ಣವಿಯ ಸೋದರಮಾವ ಭಾಸ್ಕರರಾಯರು. ಗಂಡುದಿಕ್ಕಿಲ್ಲದ ವೈಶ್ಣವಿಯ ಕುಟುಂಬದಲ್ಲಿ ಯಾವೊಂದು ಗುರುತರ ಸಂಗತಿ ಜರುಗಿದರೂ ಅದು ಇವರ ಭಾಗವಹಿಸುವಿಕೆಯಿಲ್ಲದೇ ಮುಗಿದದ್ದೇ ಇಲ್ಲ. ಅವರೇ ಬಂದಿದ್ದಾರೆಂದರೆ ಶಾಸ್ತ್ರಿಗಳ ಪುತ್ರನಿಗೋ, ಕೇಕೋಡರ ಮಗನಿಗೋ ಕಂಕಣಬಲ ಕೂಡಿಬಂದಿದೆ ಎಂದು ಊಹಿಸಿಕೊಂಡು ಒಳಗೇ ನಕ್ಕು ಮುನ್ನಡೆದೆ. ಒಳಗಿನ ಕೋಣೆಗಳಲ್ಲಿ ಅಮ್ಮಂದಿರಿಬ್ಬರೂ ಸಮರೋಪಾದಿಯಲ್ಲಿ ಓಡಾಡಿಕೊಂಡಿದ್ದರು. ನಮ್ಮನ್ನು  ಕಂಡವರೇ “ಬನ್ನಿ. ಬೇಗ ಕೈಕಾಲ್ಮುಖ ತೊಳ್ಕೊಂಡು ತಿಂಡಿ ತಿನ್ನಿ” ಎಂದು ಗಡಿಬಿಡಿ ತೋರಿದರು. ಇಷ್ಟು ಗಡಿಬಿಡಿಯಲ್ಲಿ ತಿಂಡಿತಿಂದು ಹಿಡಿಯಬೇಕಿರುವುದು ಯಾವ ಫ್ಲೈಟನ್ನೆನ್ನುವುದು ಅರ್ಥವಾಗದೆ ನಾನೂ, ವೈಶ್ಣವಿಯೂ ಒಬ್ಬರ ಮುಖ ಒಬ್ಬರು ನೋಡಿಕೊಂಡೆವಾದರೂ ನನ್ನ ಮನದಲ್ಲಾಗಲೇ ಊದು ಬತ್ತಿಯಾಗಿ ಹೊಗೆಯಾಡುತ್ತಿದ್ದ ಸಂದೇಹವೀಗ ಒಲೆಕುಂಟೆಯಾಯಿತು. ಸಾಧಾರಣವಾಗಿ ಹಬ್ಬದ, ಗಡಿಬಿಡಿಯ ಬೆಳಗುಗಳಲ್ಲಿ ಮಾಡುವ ಒಗ್ಗರಣೆ ಕಲಸಿದ ತೆಳು ಅವಲಕ್ಕಿಯನ್ನು ತಿಂದು ಮುಗಿಸುವಷ್ಟರಲ್ಲಿ ಹೆಚ್ಚೂ ಕಡಿಮೆ ಉಣಗೋಲು ಹಾರಿಕೊಂಡೇ ಬಂದ ಅಣ್ಣನ ಮಗ ಸಾಕೇತ “ಅರ್ಜೆಂಟ್ ಮಿಲ್ಲಿಗೆ ಹೋಗ್ಬೇಕು ಬಾ” ಎನ್ನುತ್ತಾ ಇನ್ನೂ ಒಣಗದ, ನನ್ನ ತೊಳೆದ ಕೈಯನ್ನು ಹಿಡಿದುಕೊಂಡು ದರದರನೆ ಎಳೆದುಕೊಂಡೇ ಹೋಗತೊಡಗಿದ. ಜಗುಲಿಯಿಂದಾಚೆ ಕಾಲಿಡುವ ಮುನ್ನ ಹೊರಳಿನೋಡಿದ ನನಗೆ ‘ಏನು ವಿಷಯ?’ ಎಂದು ಪ್ರಶ್ನಿಸುತ್ತಿದ್ದ ವೈಶ್ಣವಿಯೂ, ಅವಳನ್ನು ಅವಳ ಪ್ರಶ್ನೆಯ ಸಮೇತ ಕೋಣೆಯೊಳಗೆ ತಳ್ಳಿಕೊಂಡು ಹೋಗುತ್ತಿದ್ದ ಸೋದರ ಮಾವ ಭಾಸ್ಕರರೂ ಕಣ್ಣಿಗೆ ಬಿದ್ದರು. ಈ ಧಾವಾಂತಗಳೇ ಸಾಕಿತ್ತು, ವೈಶ್ಣವಿಯನ್ನು ನೋಡಲಿಕ್ಕೆ ಗಂಡಿನ ಕಡೆಯವರು ಬರಲಿದ್ದಾರೆಂದು ಅರ್ಥವಾಗುವುದಕ್ಕೆ. ಯಾರಿರಬಹುದು ಆ ಪುಣ್ಯಾತ್ಮ? ಕೇಕೋಡರ ಮಗನಾ? ಶಾಸ್ತ್ರಿಗಳ ಸುಪುತ್ರನಾ? ಅಥವಾ ಇನ್ಯಾವುದೋ ಸಂಸ್ಥಾನದ ಯುವರಾಜನಾ? ಇವರ ಗಡಿಬಿಡಿ ಕಂಡರೆ ಯಾವುದೋ ದೊಡ್ಡ ಮನೆತನದ ಯುವರಾಜನೇ ಇರಬೇಕು. ಪಾಪ ವೈಶು- ಟೂರು, ಟ್ರಿಪ್ಪು ಎಂದೆಲ್ಲಾ ಕುಣಿದಾಡಿಕೊಂಡು ಬಂದಳು. ಇಲ್ಲಿವರೆಲ್ಲಾ ಸೇರಿ ಇಷ್ಟು ದೊಡ್ಡ ರೈಲು ಹತ್ತಿಸಲಿದ್ದಾರೆಂಬುದು ಹುಡುಗಿಗೆ ಗೊತ್ತಾಗುವುದಾದರೂ ಹೇಗೆ ಎಂದುಕೊಂಡೆ. ದಾರಿಯಿಡೀ ಕಾಡಿದರೂ ಸಾಕೇತ ಬರಲಿರುವ ಗಂಡಿನ ಜುಟ್ಟು, ಜನಿವಾರಗಳ ಬಗ್ಗೆ ಚಿಕ್ಕ ವಿವರವನ್ನೂ ಬಾಯ್ಬಿಡಲಿಲ್ಲ. ಗದರಿಸಿ ಕೇಳಿದಾಗ ‘ಇಂದಾವರದ ಗಂಡು’ ಎಂದಷ್ಟೇ ಹೇಳಿ ತಾನು ಗುನುಗುತ್ತಿದ್ದ ಹಾಡಿನೊಳಗೆ ತೂರಿಕೊಂಡ. ಮನೆ ತಲುಪುವಷ್ಟೂ ಹೊತ್ತು ನಾನು ಇಂದಾವರದಲ್ಲಿರುವ‌ ಎಲ್ಲಾ ಮದುವೆ ವಯಸ್ಸಿಗೆ ಬಂದಿರುವ ಯುವರಾಜರನ್ನೂ, ಅವರ ಸರಾಸರಿ  ವರಮಾನವನ್ನೂ ಲೆಕ್ಕ ಹಾಕುತ್ತಲೇ ಕುಳಿತುಕೊಂಡೆ.


ಮರಳಿ ಮನೆಯೊಳಗೆ ಕಾಲಿಡುವ ಹೊತ್ತಿಗೆ ಮನಸ್ಸು ಇನ್ನೇನು ಬಿಡಿಸಿಕೊಳ್ಳಲಿರುವ ಒಗಟಿನ ಉತ್ತರಕ್ಕಾಗಿ ಕಾತರವಾಗಿತ್ತು.  ಒಳ ಬಂದ ನನ್ನನ್ನು ಬಂದ ವೇಗದಲ್ಲೇ ಬಚ್ಚಲುಮನೆಗೆ ರವಾನಿಸಿಲಾಯಿತು. ಸುತ್ತಮುತ್ತಲೆಲ್ಲೂ ವೈಶ್ಣವಿಯ ಸುಳಿವೇ ಇರಲಿಲ್ಲ. ಅವಳ ದಿಬ್ಬಣದ ಡ್ರೈವರ್ ನಾನೇ ಎಂಬುದು ಹೊರಗೆ ನಿಂತಿದ್ದ ಭಾಸ್ಕರರಾಯರ ಇನೋವಾವನ್ನು ನೋಡಿದಾಗಲೇ ಅರಿವಾಗಿತ್ತು. ಈಗ ನನ್ನ ಸ್ನಾನಕ್ಕೂ ಗಡಿಬಿಡಿ ಮಾಡುವುದನ್ನು ನೋಡಿದಾಗ ಅದು ಖಾತ್ರಿಯಾಯಿತು. ಬಹುಷಃ ಗಂಡಿಗೆ ಪರಿಚಯವಿರುವ ಯಾರದೋ ಮನೆಯಲ್ಲಿ ಹೆಣ್ಣುನೋಡುವ ಶಾಸ್ತ್ರ ಇಟ್ಟುಕೊಂಡಿದ್ದಾರೆ. ಅಲ್ಲಿಗೆ ಹೊರಡಲಿಕ್ಕೆಂದೇ ಇಷ್ಟೆಲ್ಲ ಗಡಿಬಿಡಿ ಎಂದುಕೊಂಡೆ. ಇಲ್ಲಿ ಇಷ್ಟೆಲ್ಲಾ ಧಾವಂತ ಸೃಷ್ಟಿಸಿರುವ ಆ ರಣಧೀರ ಕುಟುಂಬ ಯಾವುದೆಂದು ಚಿಂತಿಸುತ್ತಲೇ ಸ್ನಾನ ಮುಗಿಸಿ ಹೊರಬಂದವನನ್ನು ಭಾಸ್ಕರರಾಯರ ಗಂಭೀರ ಮುಖ ಎದಿರಾಯಿತು.


“ದೇವರಿಗೆ ನಮಸ್ಕಾರ ಮಾಡಿ ಬಾ. ನಿನ್ನ ಜೊತೆ ಮಾತಾಡೋದಿದೆ.”
ಏಕೆ, ಏನು ಎಂಬ ಮರುಪ್ರೆಶ್ನೆಗಳಿಗೆ ಆಸ್ಪದವೇ ಇಲ್ಲದಷ್ಟು ಗಂಭೀರವಾಗಿತ್ತು ಅವರ ಧ್ವನಿ. ನಡೆಯುತ್ತಿರುವ ಪ್ರಹಸನಗಳೆಲ್ಲದರ ಗುಟ್ಟನ್ನೂ ತಿಳಿದಿರುವ, ನಿಗೂಢ ತುಂಟ ನಗೆ ನಗುತ್ತಾ ನಿಂತಿದ್ದ ಫೋಟೋದ ದೇವರಿಗೆ ನಮಸ್ಕರಿಸಿ ಭಾಸ್ಕರ ರಾಯರು ಇದ್ದಲ್ಲಿಗೆ ಮರಳಿದೆ. ಅವರ ಜೊತೆಗೇ ಅಪ್ಪ ಹಾಗೂ ಅಮ್ಮನೂ ಅಲ್ಲಿ ಕಾಯುತ್ತಾ ನಿಂತಿರುವುದು ನನ್ನ ಕುತೂಹಲಕ್ಕೆ ಎಣ್ಣೆಸುರಿಯಿತು.


“ವೈಶ್ಣವಿಯದೂ ನಿನ್ನದೂ ಜಾತಕ ನೋಡಿಸಿಕೊಂಡು ಬಂದಿದ್ದೇವೆ”
ನನಗೆ ನನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಇಷ್ಟು ಹೊತ್ತು ನಡೆದಿದ್ದ ರಹಸ್ಯ ಕಾರ್ಯಾಚರಣೆಯ ಮೊದಲ ಬಾಂಬು ನನ್ನ ಬುಡದಲ್ಲೇ ಢಮಾರೆಂದಿತ್ತು.


“ಏನು!? ವೈಶ್ಣವಿ ಹಾಗೂ ನನ್ನ ಜಾತಕವಾ? ಯಾಕೆ?”


ಧೀರ್ಘ ಮಾತಿಗೆ ಅನುವಾಗುವವರಂತೆ ಭಾಸ್ಕರರು ಶ್ವಾಸಕೋಶದ ತುಂಬಾ ಉಸಿರೆಳೆದುಕೊಂಡು ಆರಂಭಿಸಿದರು.  
“ನೋಡು ವಿಹಾರ್, ಕಾಲ ಯಾರನ್ನೂ ಕಾಯೋದಿಲ್ಲ. ನೀವು, ಈಗಿನಕಾಲದ ಹುಡುಗರಿಗೆ ಅದು ಅರ್ಥವಾಗೋದಿಲ್ಲ. ಏನೋ ಕಡಿದು ಗುಡ್ಡೆ ಹಾಕುವವರಂತೆ ಈಗಲೇ ಮದುವೆ ಬೇಡ, ಇನ್ನೆರೆಡು ವರ್ಷ ಬೇಡ ಅಂತೆಲ್ಲ ವರಾತ ಹೂಡುತ್ತೀರ. ಕೊನೆಗೆ ವಯಸ್ಸು ಮೀರಿದ ಗಡಿಬಿಡಿಯಲ್ಲಿ ಸಿಕ್ಕ ಯಾರಿಗೋ ಸಿಕ್ಕಿಹಾಕಿಕೊಳ್ತೀರ‌. ನಿಮ್ಮ ವಿಷಯದಲ್ಲಿ ಹಾಗಾಗುವುದು ಬೇಡ. ಹೇಳೀ ಕೇಳೀ ನಿಮ್ಮಿಬ್ಬರದೂ ಹಳೆಯ ಪರಿಚಯ. ಹೊಸದಾಗಿ ಹೊಂದಿಕೊಂಡು ಹೋಗಲಿಕ್ಕೆ ನಿಮ್ಮಿಬ್ಬರಿಗೆ, ಕನಿಷ್ಠ ನಿಮ್ಮ ಮನೆಯವರ ನಡುವೆಯಾದರೂ ಅಂತಹಾ ಅಪರಿಚಿತತೆಯೇನಿಲ್ಲ. ತಂದೆಯಿಲ್ಲದ ಒಬ್ಬಳೇ ಮಗಳನ್ನು ಕಣ್ಣಳತೆಯಲ್ಲೇ ಇರುವ, ಗೊತ್ತಿರುವವರ ಮನೆಗೇ ಕೊಡಬೇಕಂತ ಸುಶೀಲಾಗೂ ಬಹಳ ಆಸೆಯಿತ್ತು.. ಅದಕ್ಕೇ ನಾವು ಹಿರಿಯರು ಕೂತು ಈ ಮಾತುಕತೆಯಾಡಿದ್ದೇವೆ. ಅಂಗೈಯಲ್ಲೇ ಇರುವ ಬೆಣ್ಣೆಗೂ ಕಾಯಿಸಬೇಕಿರುವ ತುಪ್ಪಕ್ಕೂ ಜಾತಕ ಕೂಡಿಸಿದ್ದೇವೆ. ಇವತ್ತು ದೇವಸ್ಥಾನದಲ್ಲಿ ನಿಮ್ಮೆದುರೇ ಪ್ರಸಾದ ಕೇಳಿಸುತ್ತೇವೆ. ಹಾಗಂತ ನಿಮ್ಮ ಯಾವ ಇಚ್ಛೆಯನ್ನೂ ಮುರಿಯುವ ಮನಸ್ಸು ನಮಗಿಲ್ಲ. ನಿಮ್ನಿಮ್ಮ ಬದುಕಿನ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಅಂತಿಮ ಹೊಣೆಯನ್ನು ನಿಮಗೇ ಬಿಡುತ್ತಿದ್ದೇವೆ. ಇಬ್ಬರಿಗೂ ಇನ್ನೊಂದು ವಾರ ಕಾಲಾವಕಾಶವಿದೆ. ಮುಂದಿನದು ನಿಮಗೇ ಬಿಟ್ಟಿದ್ದು”


ಯಾವುದೋ ಸಿನೆಮಾದ ಯಾವುದೋ ಪಾತ್ರವೊಂದರ ಕಥೆಯಲ್ಲಿ ಬರುತ್ತಿದ್ದ ತಿರುವೊಂದು ಈಗ ನನ್ನ ಬದುಕಿನಲ್ಲೇ ಬಂದ ಪರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯದೆ ಭಾಸ್ಕರರ ಮುಖವನ್ನೇ ನೋಡುತ್ತಾ ನಿಂತೆ. ನಾನು ಕೇಳಿಸಿಕೊಂಡಿದ್ದು ನಿಜವಾ? ಮದುವೆಯ ವಿಷಯದಲ್ಲಿ ತನ್ನದೇ ಆದ ವಿಸ್ತಾರ ಕನಸುಗಳಿರುವ ವೈಶ್ಣವಿಯ ಬದುಕಿಗೆ ನನ್ನನ್ನು ಅಪವಾದಿಸಲಾಗುತ್ತಿದೆಯಾ? ಇದಕ್ಕೆ ಅವಳ ಸಹಮತವಿದೆಯಾ? ಯಾವುದೋ ಹುಡುಗಿಯ ಹಿಂದೆ ವರ್ಷಗಟ್ಟಲೆ ಅಲೆದು ತಿರಸ್ಕೃತನಾಗಿ ಬಂದವನೆಂದು ತಿಳಿದೂ ನನ್ನ ಪಕ್ಕದಲ್ಲವಳು ವಧುವಾಗಿ ನಿಲ್ಲುತ್ತಾಳಾ? ಗೊಂದಲಗಳು ಸಮರೋಪಾದಿಯಲ್ಲಿ ಎದೆಯೊಳಗೆ ಪುಟಿದೇಳತೊಡಗಿದವು.


ಆಗ ಬಂದಳು ವೈಶ್ಣವಿ..


ತಿಳಿನೀಲಿ ಬಣ್ಣದ ಸೀರೆ. ಕೊರಳ ಬಳಸಿ ಬಂದು ಸೆರಗಿನ ಇಳಿಜಾರಿನೊಳಗೆ ಮಾಯವಾಗಿರುವ ಎರೆಡೆಳೆಯ ಸರ. ಹೋದ ಜನ್ಮದಲ್ಲೆಂದೋ ನಾನೇ ಮುಡಿಸಿದಂತೆ, ನೇರ ನನ್ನ ನೆನಪಿಗೇ ಸಂಬಂಧಿಸಿದಂತೆ ಅತ್ಯಂತ ಪರಿಚಿತವಾದ ಪರಿಮಳ ಹೊಮ್ಮಿಸುತ್ತಿರುವ ಮುಡಿಯ ಮಲ್ಲಿಗೆ. ಸೂರ್ಯ ಮುಳುಗಿದ ಬಾನಿನಲ್ಲಿ ಎದ್ದುಬಂದ ಮಿಣುಕು ತಾರೆಯಂತಹಾ ಹಣೆಯ ಚುಕ್ಕಿ ಬಿಂದಿ, ಇವುಗಳೆಲ್ಲವೂ ಒಟ್ಟಾಗಿ ಸೃಷ್ಟಿಸಿರುವ ದಿವ್ಯ ಸೌಂದರ್ಯದ ಭಾರಕ್ಕೋ, ಯಾರನ್ನೂ ನೇರವಾಗಿ ನೋಡಲಾಗದ ಸಂಕೋಚಕ್ಕೋ ನೆಲದಮೇಲೆ ನೆಟ್ಟಿರುವ ನೋಟ..


ಇದುವರೆಗೆ ನಾನು ನೋಡದ ಹೊಸ ಚಹರೆಯೊಂದನ್ನು ಅವಳು ಧರಿಸಿ ಬಂದಿರುವಂತೆ ಭಾಸವಾಯಿತು. ಏನನ್ನೂ ಹೇಳಲಾರದವನಾಗಿ ಸುಮ್ಮನೆ ನಡೆದು ಇನೋವಾದ ಮುಂದುಗಡೆ ಚಾಲಕನ ಪಕ್ಕದ ಸೀಟನ್ನೇರಿ ಕುಳಿತುಕೊಂಡೆ‌. ಇಲ್ಲೇ ಏಕೆ ಕುಳಿತೆ? ಅವಳ ಕಣ್ಣಿನಿಂದ ಪಾರಾಗುವುದಕ್ಕಾ? ಖಾತ್ರಿಯಿರಲಿಲ್ಲ. ಆದರೆ ಹಾಗೆ ಕುಳಿತಮೇಲೆ ಅಮೂಲ್ಯವಾದುದೇನನ್ನೋ ಹಿಂದೆ ಬಿಟ್ಟು ಬಂದಿರುವಂತೆ ಮನಸ್ಸು ಚಡಪಡಿಸತೊಡಗಿತು. ದೇವಸ್ಥಾನ ತಲುಪುವವರೆಗೂ ಓರೆ ಕನ್ನಡಿಯಲ್ಲಿ ನನ್ನನ್ನೇ ಹುಡುಕುವವನಂತೆ ಹಿಂದಿನ ಸೀಟಿನಲ್ಲಿ ತನ್ನ ಅಮ್ಮನಿಗೊರಗಿ ಕುಳಿತಿದ್ದ ಅವಳ ಪ್ರತಿಬಿಂಬಕ್ಕಾಗಿ ಅರಸುತ್ತಲೇ ಇದ್ದೆ.


ದೇವಸ್ಥಾನ ಬಂತು. ಎಲ್ಲರೂ ಇಳಿದೆವು. ದೇವರೆದುರಲ್ಲಿ ನಿಂತು ಜಾರಲಿರುವ ಹೂವಿಗಾಗಿ ಕಾಯುತ್ತಿದ್ದಾಗ ಮನಸ್ಸೇಕೋ ಶುಭ ಸೂಚನೆಯೇ ದೊರೆಯಲೆಂದು ಪ್ರಾರ್ಥಿಸಿಕೊಂಡಿತು. ಪಕ್ಕದಲ್ಲಿ ನಿಂತ ವೈಶ್ಣವಿಯೂ ಅದನ್ನೇ ಕೇಳಿಕೊಳ್ಳುತ್ತಿದ್ದಾಳಾ? ಅಂದಾಜಿಸಲಾಗಲಿಲ್ಲ. ಎಲ್ಲರ ಹಾರೈಕೆಯಂತೆ ದೇವರ ಮುಡಿಗಿರಿಸಿದ್ದ ಹೂವಿನ ಗೊಂಚಲು ಬಲಕ್ಕೇ ಜಾರಿಬಿತ್ತು. ಎಲ್ಲರೂ ಖುಷಿಯಿಂದ ಹೋ ಎಂದರು. ನಾನು ವೈಶ್ಣವಿಯನ್ನೇ ನೋಡಿದೆ. ಅವಳು ದೇವರನ್ನೇ ನೋಡುತ್ತಿದ್ದಳು.


ಮನೆಗೆ ಮರಳುತ್ತಿದ್ದಂತೆಯೇ ವೈಶ್ಣವಿ ಇಬ್ಬರು ಅಮ್ಮಂದಿರ ಜೊತೆಗೆ ಅಡುಗೆಮನೆ ಸೇರಿಕೊಂಡುಬಿಟ್ಟಳು. ಅವಳಿರುವ ಕಾರಣಕ್ಕೇ ನನ್ನದೇ ಮನೆಯ ಒಂದು ಭಾಗವಾದ ಆ ಕೋಣೆಯೊಳಗೆ ಕಾಲಿಡುವುದಕ್ಕೂ ಆಗದೆ ಮನಸ್ಸು ಹಿಂಜರಿಯತೊಡಗಿತು. ಇನ್ನು ಅವಳಾದರೂ ಎದುರೇ ಬರದೆ ಅಡಗಿದಂತೆ ಓಡಾಡಿಕೊಂಡಿದ್ದಳು. ಅಡುಗೆಮನೆಯ ಕಿಟಕಿಯಿಂದ ಕಂಡ ಅವಳು ಮುಡಿದ ಹೂ, ಕೋಣೆಯೊಳಗೆ ನಡೆದು ಬಾಗಿಲು ಎಳೆದುಕೊಂಡವಳ ಬಳೆತುಂಬಿದ ಕೈ, ಪಕ್ಕವೇ ಹಾದುಹೋದಾಗ ನನ್ನ ಕೈಗೆ ಸೋಕಿಹೋದ‌ ಸೀರೆ ಸೆರಗು.‌. ಹೀಗೆ ದಿನವಿಡೀ ಅವಳು ಸಂಪೂರ್ಣವಾಗಿ ಸಿಗದೇ ಒಂದು ಅನುಭೂತಿಯಂತೆ, ಚಂದದ ಕನಸಿನಂತೆ ಸುಳಿದಾಡಿಕೊಂಡಿದ್ದಳು. ಕೆಲವೇ ಗಂಟೆಗಳ ಕೆಳಗೆ ಒಂದಿಡೀ ರಾತ್ರೆ ಒಬ್ಬರ ಹೆಗಲಿಗೊಬ್ಬರು ಆತು ಕುಳಿತು ಬಂದ ನಮ್ಮಿಬ್ಬರ ನಡುವೆ ಇದ್ದಕ್ಕಿದ್ದಂತೆಯೇ ಸೃಷ್ಟಿಯಾದ ಈ ಸಂಕೋಚದ ಮರೆ ಅಚ್ಚರಿಯದಾಗಿತ್ತು.


ಆದರೆ ಅವಳು ಮಾತಿಗೆ ಸಿಗದೆ ದೂರ‌ ಹೋದಷ್ಟೂ ಮನಸ್ಸಿನ ಹೊಯ್ದಾಟ ಜಾಸ್ತಿಯಾಗತೊಡಗಿತ್ತು. ನಾನು ಯೋಚಿಸುತ್ತಿರುವುದು ಸರಿಯೇ? ಇಷ್ಟು ದಿನ ನನ್ನ ಗಾಢ ಪ್ರೀತಿಯ ಇನ್ನೊಂದು ಕಥೆ ಹೇಳಿಕೊಂಡವಳೆದುರೇ ನಿಂತು ‘ನಾನು ನಿನ್ನನ್ನು ಒಪ್ಪಿದ್ದೇನೆ’ ಎಂದು ಹೇಗೆ ಹೇಳಲಿ? ಅಷ್ಟಕ್ಕೂ ನಾನು ಮದುವೆಯಾಗಬೇಕೇ? ಜ್ಯೋತಿಯ ಮೇಲಿನ ನನ್ನ ಅನುರಾಗ ಇಲ್ಲಿಗೇ ಮುಗಿಯಬೇಕೇ? ಇವೆಲ್ಲದಕ್ಕೂ ಮುನ್ನ ವೈಶ್ಣವಿಯ ಮನಸ್ಸಿನಲ್ಲೇನಿದೆ? ಒಂದೂ ಅರ್ಥಕ್ಕೆ ನಿಲುಕದಾಯಿತು. ಏನೇ ಆದರೂ ಸಂಜೆ ಅವಳೊಂದಿಗೆ ಮತಾಡಲೇಬೇಕೆಂದು ಲೆಕ್ಕಹಾಕಿ ಮಧ್ಯಾಹ್ನದ ಕಿರುನಿದಿರೆಗೆಂದು ಅಡ್ಡಾದೆ.


         **************************


ರಾತ್ರೆ ಬಾಕಿಯಾದ ನಿದಿರೆಯನ್ನೆಲ್ಲ ಮುಗಿಸಿ ಎದ್ದಾಗ ಮನಸ್ಸು ಹಗುರಾಗಿತ್ತು. ಎದ್ದು ಮುಖ ತೊಳೆದುಕೊಂಡು ಒಳಬಂದವನೆದುರು ಅಚ್ಚರಿಯೆಂಬಂತೆ “ಆಯ್ತಾ ನಿದ್ರೆ?” ಎನ್ನುತ್ತಾ ವೈಶ್ಣವಿ ಕಾಫಿ ಲೋಟದ ಸಮೇತ ಹಾಜರಾದಳು. ನಾನಗಿ ಕೇಳುವ ಮೊದಲೇ “ದೇವಸ್ಥಾನಕ್ಕೆ ಹೋಗ್ಬರೋಣ್ವ?” ಎಂದು ನನ್ನ ಆಲೋಚನೆಯನ್ನು ನೇರ ಕಣ್ಣಿನಿಂದಲೇ ಕದ್ದವಳಂತೆ ಕೇಳಿಬಿಟ್ಟಳು. ಸುಮಾರು ಹದಿಮೂರು ವರ್ಷಗಳ ಹಿಂದಿನ ಸಂಜೆಯೊಂದು ಮತ್ತೆ ಜೀವಂತವಾದ ಹಳೆಯ ದಾರಿಯಲ್ಲಿ ಇಬ್ಬರೂ ನಡೆಯತೊಡಗಿದೆವು.


“ಮತ್ತೆ… ಏನಂತ ಡಿಸೈಡ್ ಮಾಡಿದ್ರಿ ಸಾರ್?”
ಗುಡ್ಡದಲ್ಲಿ ಅಡ್ಡಾಗಿ ಒರಗಿದ್ದ ಮರದ ಮೇಲೆ ಕೂರುತ್ತಾ ಕೇಳಿದವಳ ಮಾತಿನಲ್ಲಿ ಎಂದಿನ ಸಲುಗೆಯಿತ್ತು‌. ನಮ್ಮ ಮಾತುಗಳನ್ನು ಆಲಿಸಲಿಕ್ಕಾಗಿಯೇ ಎಂಬಂತೆ ಸುತ್ತಲಿನ ಕಾಡು ನವಿರಾದ ನಿಶ್ಯಬ್ದದಲ್ಲಿ ನಿಂತಿತ್ತು.


“ನನಗೇನೂ ತೋಚುತ್ತಿಲ್ಲ ವೈಶು. ಕಳೆದೊಂದು ವರ್ಷದಲ್ಲಿ ನನ್ನ ಬದುಕಿನ ಅತಿ ಚಿಕ್ಕ ಹೊಯ್ದಾಟವನ್ನೂ ಬಿಡದೆ ನಿನ್ನ ಬಳಿ ಹೇಳಿಕೊಂಡಿದ್ದೇನೆ. ಜ್ಯೋತಿಯ ಮೇಲಿನ ನನ್ನ ಅನುರಾಗವನ್ನು ಅವಳಿಗೆ ಹೇಳಿದ್ದಕ್ಕಿಂತ ಹೆಚ್ಚಿಗೆ ನಿನ್ನ ಬಳಿ ತೋಡಿಕೊಂಡಿದ್ದೇನೆ. ಅವಳ ಕುರಿತಾದ ನನ್ನ ಚಿಕ್ಕ ಕನವರಿಕೆಯೂ ನಿನಗೆ ಗೊತ್ತಿದೆ. ಈಗ ಅದೇ ಕನಸುಗಳೊಳಗೆ ನೀನು ತುಂಬಿಕೋ ಎಂದು ಹೇಗೆ ಹೇಳಲಿ? ನಿನ್ನ ಕಲ್ಪನೆಯಲ್ಲಿರುವ ವರ ನಾನಾಗಲಾರೆನೆಂಬ ಸತ್ಯ ಗೊತ್ತಿದ್ದೂ…”


ಮಾತಿನ ಉಳಿದ ಭಾಗವನ್ನು ನೀನೇ ಪೂರ್ತಿಮಾಡೆಂಬಂತೆ ಅಲ್ಲಿಗೇ ನಿಲ್ಲಿಸಿಬಿಟ್ಟೆ‌.


“ಕಲ್ಪನೆ... ಯಾರಿಗಿಲ್ಲ ಹೇಳು? ನಿನಗಿಲ್ವಾ? ನಿನ್ನ ಜ್ಯೋತಿಗಿಲ್ವಾ? ಕಲ್ಪನೆಗಳೆಲ್ಲ ನೂರಕ್ಕೆ ನೂರರಷ್ಟು ನಿಜವಾಗುವುದು ಕಲ್ಪನೆಯಲ್ಲಿ ಮಾತ್ರ! ಅಷ್ಟಕ್ಕೂ ನೀನು ನಾನು ಬಯಸಿದಂತಿಲ್ಲ ಅಂತ ಯಾಕಂದುಕೊಂಡೆ?”


ಆಶ್ಚರ್ಯದಿಂದ ನೋಡಿದೆ. ಮದುವೆಯ ವಿಷಯ ಎದ್ದಾಗಿನಿಂದಲೂ ಮುಖ ತಪ್ಪಿಸಿಕೊಂಡು ಓಡಾಡುತ್ತಿದ್ದವಳಿಂದ ಇಂತಹಾದ್ದೊಂದು ಮಾತನ್ನು ನಿರೀಕ್ಷಿಸಿಯೇ ಇರಲಿಲ್ಲ. ಬೆಳಗಿನಿಂದ ಸಂಭವಿಸುತ್ತಿದ್ದ ಅಚ್ಚರಿಗಳ ಪೈಕಿ ಇದೇ ದೊಡ್ಡದೆನಿಸಿತು. ವೈಶ್ಣವಿ ಮುಂದುವರಿಸಿದಳು‌.


“ಜ್ಯೋತಿ ಜ್ಯೋತಿ ಅಂತ ಅಷ್ಟೆಲ್ಲ ಕಥೆ ಹೇಳಿದೆಯಲ್ಲ? ನೀನು ಹೇಳುತ್ತಿದ್ದೀ ಅಂತಷ್ಟೇ ಅದನ್ನ ಕೇಳಿಸಿಕೊಳ್ಳುತ್ತಿದ್ದೆ ಅಂದುಕೊಂಡೆಯಾ? ಅಷ್ಟಕ್ಕೂ ನಿನ್ನ ಬದುಕಿನಲ್ಲಿ ಆ ಜ್ಯೋತಿ ಯಾರು ಗೊತ್ತಾ? ಮಂಜು ಕವಿದ ಯಾವುದೇ ಗಾಜು ಕಂಡರೂ ಅದರ ಮೇಲೆ  ಬರೆಯುತ್ತೀಯಲ್ಲ.. ಆ ಹೆಸರೇ ಜ್ಯೋತಿ. ಕಥೆ ಪುಸ್ತಕದ ಮಧ್ಯದಲ್ಲೆಲ್ಲೋ ಸಾಲೊಂದರಲ್ಲಿ ಬಂದ ‘ಜ್ಯೋತಿ’ ಪದವನ್ನು ಹೆಕ್ಕಿ ಅಂಡರ್ ಲೈನ್ ಮಾಡ್ತೀಯಲ್ಲಾ, ಆ ವಿಶೇಷಣವೇ ಜ್ಯೋತಿ. ಹಸಿರು ಬಣ್ಣದ ಅಂಗಿ ಹಾಕಿಕೊಂಡು ‘ಇದು ಅವಳ ಚೂಡಿದಾರಕ್ಕೆ ಮ್ಯಾಚ್ ಆಗ್ತಿತ್ತು’ ಅಂತೀಯಲ್ಲಾ, ಆ ನೆನಪೇ ಜ್ಯೋತಿ. ಅವಳು ಮರೆತ ನಿನ್ನ ಹುಟ್ಟುಹಬ್ಬದ ದಿನ ಮೊಬೈಲ್ ರಿಂಗಾದಾಗೆಲ್ಲ ‘ಅವಳೇ’ ಅಂತ ಆಸೆಯಿಂದ ಎತ್ತಿಕೊಳ್ತೀಯಲ್ಲಾ, ಆ ಹುಚ್ಚು ನಿರೀಕ್ಷೆಯೇ ಜ್ಯೋತಿ. ಯಾವತ್ತೂ ಇಲ್ಲದವನು ಅವಳ ಹುಟ್ಟು ಹಬ್ಬದ ದಿನ ದೇವಸ್ಥಾನಕ್ಕೆ ಹೋಗಿ ನಿಲ್ಲುತ್ತೀಯಲ್ಲಾ, ಆ ಪ್ರಾರ್ಥನೆಯೇ ಜ್ಯೋತಿ. ಅವಳೆಂದರೆ ನಿನ್ನ ಪಾಲಿಗೆ ಅಷ್ಟೇ ಕಣೋ.. ಮಂಜಿನ ಮೇಲಿನ ಹೆಸರು. ಹೆಸರಿನ ಕೆಳಗೆ ಬರೆದ ಅಡಿಗೆರೆ. ನೆನಪಾಗಿ ಕಾಡುವ ಬಣ್ಣ. ಹೆಸರು ಗೊತ್ತಿಲ್ಲದೆ ರಿಂಗಾಗುವ ಅನಾಮಿಕ ಕರೆ. ದೊರೆಯದೆಂದು ತಿಳಿದೂ ಬೇಡಿಕೊಳ್ಳುವ ಪ್ರಾರ್ಥನೆ! ನಿಜ ವಿಹಾರ್.. ಜ್ಯೋತಿಯೆನ್ನುವುದು ನಿನ್ನ ಪಾಲಿಗೆ ವ್ಯಕ್ತಿಯಲ್ಲ. ಭೌತಿಕ ದೇಹವಲ್ಲ. ಅದೊಂದು ಆತ್ಮದಂತಹಾ ಅನುಭೂತಿ. ಅದು ನಿನ್ನೊಳಗಿನ ಅನುರಾಗವನ್ನು ಸಜೀವಗೊಳಿಸಿದ ಜೀವಜಲ. ಬೆಳಗ್ಗೆ ಭಾಸ್ಕರ ಮಾವ ನಮ್ಮ ಮದುವೆಯ ವಿಚಾರವನ್ನು ಪ್ರಸ್ತಾಪಿಸಿದಾಗ ನನಗೆ ಸಣ್ಣಗೆ ಆಘಾತವಾಯಿತು. ಪಕ್ಕದಲ್ಲೇ, ಪಡಸಾಲೆಯ ಕೋಣೆಯಲ್ಲೇ ಸುಳಿದಾಡಿಕೊಂಡಿದ್ದ ಈ ಹುಡುಗನೇಕೆ ಒಮ್ಮೆಯಾದರೂ ನನ್ನ ಕನಸಿನಲ್ಲಿ ಬಾರದೇ ಹೋದನೆಂದು ಅಚ್ಚರಿಯಾಯಿತು. ಆದರೆ ವಿಹಾರ್, ನನ್ನ ಪಾಲಿಗೆ ಮದುವೆಯೆಂಬುದು ಬೇರೆಯವರದಕ್ಕಿಂತ ತುಸು ಹೆಚ್ಚೇ ಕೊಂಡಿಗಳಿರುವ ಸಂಬಂಧದ ಸೂಕ್ಷ್ಮ ಎಳೆ ಕಣೋ. ಅದು ಕೇವಲ ಈಗಿರುವ ಪಿಜಿ ತೊರೆದು ಒನ್ ಬಿಎಚ್ಕೆ ಮನೆಗೆ ವರ್ಗವಾಗುವ ಸಂಗತಿಯಲ್ಲ. ಚಿಕ್ಕಂದಿನಿಂದಲೂ ನಾನು ಕಾಣದೇ ಹೋದ ಕುಟುಂಬ ವಾತಾವರಣದಲ್ಲಿ ಸೇರಿಕೊಳ್ಳುವುದು.‌ನನ್ನ ಹೊರತು ಬೇರಾರೂ ತನ್ನವರಿಲ್ಲದ ಅಮ್ಮನನ್ನೂ ಅದರೊಳಗೆ ಸೇರಿಸಿಕೊಳ್ಳುವುದು. ನಾನು ಕೇಳದೇ ಹೋದ, ಕಥೆ ಹೇಳುವ ಅಜ್ಜ-ಅಜ್ಜಿಯರ ಪ್ರೀತಿಯನ್ನು ನನ್ನ ಮಗುವಿಗೆ ಒದಗಿಸಿಕೊಡುವುದು. ಈಗ ಅನಿಸುತ್ತಿದೆ.. ನಾನು ಕಲ್ಪಿಸಿಕೊಂಡ ಆ ಬದುಕು ನನ್ನ ಎದುರೇ ಇತ್ತು.  ಕೈ ಚಾಚಿದರೆ ಸಿಗುವಷ್ಟು ಸಮೀಪದಲ್ಲೇ ಸುಳಿದಾಡಿಕೊಂಡಿತ್ತು... ನಿನ್ನ ರೂಪದಲ್ಲಿ! ನಿನ್ನ ಹೆಸರಿನಲ್ಲಿ ನಾನು ಕಳೆದುಕೊಂಡ ಬಾಲ್ಯ, ಅಮ್ಮನ ಬದುಕಿನ ಸಂಜೆಗಳನ್ನು ಕಳೆಯಲಿಕ್ಕ ಆತ್ಮೀಯವಾದುದೊಂದು ಅಂಗಳ, ಹಾಗೂ ನನಗೆ ತಲೆಯಾನಿಸಿ ಬದುಕಲಿಕ್ಕೊಬ್ಬ ಪ್ರಾಮಾಣಿಕ ಗೆಳೆಯ ದೊರೆಯುವುದಾದರೆ ಈ ಸಂಬಂಧಕ್ಕೆ ನನ್ನ ಸಮ್ಮತಿಯಿದೆ. ಇನ್ನು ಮುಂದಿನದ್ದೆಲ್ಲ ನಿನ್ನ ಚಿತ್ತ…”


ಹಿನ್ನೆಲೆಯಲ್ಲಿ ಮುಳುಗುತ್ತಿದ್ದ ಸೂರ್ಯನೀಗ ಅವಳ ಹಣೆಯ ಕುಂಕುಮದ ಬಣ್ಣಕ್ಕೇ ತಿರುಗಿದ್ದ. ದೇವಸ್ಥಾನದಲ್ಲಿ ಮುಡಿದ ಹೂವಿನ್ನೂ ಅವಳ ಮುಡಿಯಲ್ಲೇ ಇತ್ತು. ಈ ಸಂಜೆಯ ಹಿನ್ನೆಲೆಯಲ್ಲವಳು ಬೇರೆಯೇ ಆಗಿ ಕಾಣುತ್ತಿದ್ದಳು. ನನಗ ಹೇಳಲಿಕ್ಕೆ ಇನ್ನೇನೂ ಉಳಿದಿರಲಿಲ್ಲ‌‌. ಅವಳಾಡಿದ ಮಾತುಗಳಲ್ಲಿ ನನ್ನದೂ ಸೇರಿಹೋಗಿತ್ತು. ಮನಸ್ಸೀಗ ಹಗುರವಾಗಿತ್ತು. ಏನನ್ನೂ ಹೇಳದೇ ಅವಳ ಪಕ್ಕ ಕುಳಿತುಕೊಂಡೆ. ನಾನು ಹೇಳದ‌ ಉತ್ತರ ಅವಳಿಗೆ ಅರ್ಥವಾದಂತೆ ಮೆಲ್ಲಗೆ ಹೆಗಲಿಗೆ ತಲೆಯಾನಿಸಿದಳು. ಹೆಸರು ಗೊತ್ತಿಲ್ಲದ ಹಕ್ಕಿಯೊಂದು ಎಲ್ಲೋ ಕುಳಿತು ಹಾಡುತ್ತಿತ್ತು.


ಅಷ್ಟರಲ್ಲಿ ಏನೋ ನೆನಪಾಗಿ ಥಟ್ಟನೆ ಕೇಳಿದಳು:
“ಹೇ.. ಮರೆತೇ ಬಿಟ್ಟಿದ್ದೆ. ನಿನ್ನೆ ನನ್ನ ಖಾಯಿಲೆಯ ಬಗ್ಗೆ ಹೇಳಿದೆನಲ್ಲಾ, ಅದರ ಬಗ್ಗೆ ನೀನೇನೂ ಕೇಳಲೇ ಇಲ್ಲಾ?”


“ಅದ್ಯಾವ ದೊಡ್ಡ ವಿಷಯ ಬಿಡು. ಸೇಫ್ಟಿಗೆ ಯಾವಾಗಲೂ ಎರೆಡು ಬಾಟಲಿ ನೀರು ಜೊತೆಗಿಟ್ಟುಕೊಂಡರಾಯಿತು..”
ತಣ್ಣಗೆ ಉತ್ತರಿಸಿದೆ.


“ನಿನ್ನಜ್ಜೀ” ಎಂದು ಮುಖ ಕಿವುಚುತ್ತಾ ನನ್ನ ತೋಳು ಚಿವುಟಿ ನಕ್ಕಳು. ನಾನೂ ನಕ್ಕೆ. ಈ ನಗುವಿಗಾಗಿಯೇ ಕಾಯುತ್ತಿದ್ದನೇನೋ ಎಂಬಂತೆ ಸಂತೃಪ್ತನಾದ ಸೂರ್ಯ ಬೆಟ್ಟಗಳ ಹಿಂದೆ ಜಾರಿಹೋದ.


(ಆಗಸ್ಟ್ 2019ರ ಮಯೂರದಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...