ಶನಿವಾರ, ಜುಲೈ 23, 2016

ನೆನಪುಗಳು...

ಗಾಯವೊಂದಿರಲಿ ಬಿಡು, ಮುಲಾಮು ಹುಡುಕದಿರು
ಮಾಯದೇ ಉಳಿದಿರಲಿ ಅದರಷ್ಟಕೇ;
ಏನೋ ತಾಕಿದಾಗ, ಯಾರನೋ ನೆನೆದಾಗ,
ನೋವಾಗಿ ಅಳಲಿ ಅದು ತನ್ನಷ್ಟಕೇ.

ಎಲ್ಲ ಅಳಿಸಿದ ಮೇಲೂ ಗುರುತೊಂದು ಇರಬೇಕು
ಬೆಳಗಿದ ಜ್ಯೋತಿಯುಳಿಸಿದ ಕರಿ ಬತ್ತಿಯಂತೆ;
ಪಾಲು ಯಾರದೇ ಆಗಿರಲಿ, ಪ್ರೀತಿ ನಿನ್ನದು ತಾನೇ?
ನೆನಪುಗಳು ನಗುತಿರಲಿ ತಮ್ಮಷ್ಟಕೇ.

ಕರೆದವರ, ಬರದವರ, ಬಂದು ಮರೆಯಾದವರ,
ಕದ ತೆರೆದು ಕಾದಿದ್ದು ನಿಜವಲ್ಲವೇ?
ಹಿಂದೆಂದೋ ಕನಸಲ್ಲಿ ಕಾರ್ಮುಗಿಲ ದನಿ ಕೇಳಿ
ನವಿಲಾಗಿ ನಲಿದದ್ದು ಒಲವಲ್ಲವೇ?

ನಿನ್ನೆಗಳ ಪುಟಗಳಲಿ ಸರಸದಲೋ, ವಿರಸದಲೋ
ಸಹಿ ಮಾಡಿ ಹೋದವರ ಕಿರು ಹೊತ್ತಿಗೆ,
ಸಂಜೆಗಾಳಿಗೆ ಸಿಲುಕಿ ತಾನಾಗೇ ತೆರೆದಾಗ
ಕಣ್ತುಂಬಿ ನಕ್ಕುಬಿಡು ನಿನ್ನಷ್ಟಕೇ.

(ಮಂಗಳ 27.7.2016 ರಲ್ಲಿ ಪ್ರಕಟಿತ)

ಶುಕ್ರವಾರ, ಜುಲೈ 15, 2016

ಪ್ರಳಯವಾಗಲಿ ಇಂದೇ...!

ಇಳಿದು ಬಾ ಸೂರ್ಯನೇ ಇಳೆಗೆ
ಪ್ರಳಯಾಗ್ನಿ ಮಳೆಯಾಗಿ;
ಮೇಘಗಳ ಕೊಳ್ಳಿಯಾಗಿಸಿ ಹಿರಿದು 
ಕೆಂಡದುಂಡೆಗಳ ಸುರಿಸು ಬಾ!
ಮಾನವತೆ ಸತ್ತು ಮೆರೆದಾಡುತಿಹ
ಜೀವಂತ ಶವಗಳ
ಸುಟ್ಟು ಬೂದಿಯಾಗಿಸು ಬಾ!

ಮೇಲೆದ್ದು ಬಾ ಕಡಲೇ
ಅಗಾಧ ಸುನಾಮಿ ಅಲೆಗಳೊಡನೆ!
ಸುತ್ತಿ ತಳಕೆಳೆಯುವ ಸುಳಿಗಳೊಡನೆ!
ನಿನ್ನ ಬಾಹುಗಳ ಚಾಚಿ
ಈ ಕ್ರಿಮಿಗಳ ಬಾಚಿಕೋ!
ಮರಳಿ ಮೇಲೇಳದಂತೆ ನಿನ್ನ
ಕಗ್ಗತ್ತಲ ಒಡಲೊಳಗೆ ಸೆಳೆದುಕೋ!

ಬಿರಿದು ಬಾಯ್ಬಿಡು ಭುವಿಯೇ
ನಡುಗಿ ಕೆಡವು ಎಲ್ಲರನು!
ಯುಗಯಗಾಂತರವೇ ಗತಿಸಿದರೂ
ಮತ್ತೆಂದೂ ಹುಟ್ಟಿಬರದಂತೆ
ನುಂಗಿಬಿಡು ನರರಾಕ್ಷಸರನು!

ಇಳಿದು ಬಾ ಶಿವನೆ ಇಳೆಗೆ
ಪ್ರಳಯ ರುದ್ರನಾಗಿ!
ಇಂದೇ ಈ ಪರಿಯ ವಿಷಕಾರುತಲಿ
ಬೆಳೆಯುತಿದೆ ಜಗದಲಿ ಪಾಪದಬಳ್ಳಿ;
ನಾಳೆಯಾಗುವುದೇ ಬೇಡ,
ಪ್ರಳಯವಾಗಲಿ ಇಂದೇ!
ನವಮನ್ವಂತರವುದಿಸಿ
ಜಗವು ಜನಿಸಲಿ ಮತ್ತೆ ಮೊದಲಿನಿಂದ...

('ಮಂಗಳ'ದಲ್ಲಿ ಪ್ರಕಟಿತ)

ಭಾನುವಾರ, ಜುಲೈ 3, 2016

ನಿರಾಕರಣೆ...





'ಇಲ್ಲ' ಎನ್ನುವ ಒಂದು ಮಾತಲಿ
ಎನಿತು ಕನಸಿನ ಕಗ್ಗೊಲೆ;
ಗೆಲ್ಲಲಾರದೆ ಹೋದ ಒಲವದು
ಎಂದೂ ಮಾಯದ ಕಾಯಿಲೆ.

ಮಾತು-ಮಾತನು ಪೋಣಿಸಿ ತಂದೆನಾ
ಒಲವ ಬಿನ್ನಹ ಹಾರವ;
ಭ್ರಮಿತ ಮತಿಯಲಿ ಅರಿಯದಾದೆನೆ
ಮನಸು-ಮನಸಿನ ದೂರವ?

ಸಮಯದಾಟದಿ ಕಂಡ ಸೋಜಿಗ
ಸತ್ಯವೆಂದೇ ನಂಬಿದೆ;
ನಿಜದ ಬಣ್ಣವು ಕಾಣದಾಯಿತೇ
ಸ್ವಪ್ನ ಮುಸುಕಿದ ಕಣ್ಣಿಗೆ?

ಮರೆಯಬೇಕೇ, ಕಾಯಬೇಕೇ
ಬೆಳಗದೇ ಹೋದ ಜ್ಯೋತಿಯ?
ಬರುವ ನಾಳೆಯ ತಿರುವಲೆಲ್ಲೋ
ಮತ್ತೆ ಸಿಗುವುದೇ ಈ ಪ್ರೀತಿಯು?

(ಮಂಗಳ 6-7-2016ರ ಸಂಚಿಕೆಯಲ್ಲಿ ಪ್ರಕಟವಾದ ಕವನ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...