ಬುಧವಾರ, ಜೂನ್ 22, 2016

ಮೊದಲ ದಿನ ಮೌನ, ಅಳುವೇ...

ಹುಟ್ಟಿನ ಹೊರತಾಗಿ ಪ್ರತಿಯೊಂದು 'ಮೊದಲ ದಿನ'ದ ಹಿಂದೆಯೂ ಮುಗಿದುಹೋದ 'ಕೊನೆಯ ದಿನ'ವೊಂದಿರುತ್ತದೆ ಹಾಗೂ ಈ ಮೊದಲ ದಿನಗಳಲ್ಲದು ನೆನಪಾಗಿ ಕಾಡುತ್ತದೆ. ಶಾಲೆಯ ಮೊದಲ ದಿನ, ಪ್ರೌಢಶಾಲೆಯ  ಮೊದಲ ದಿನ, ಕಾಲೇಜ್ ನ  ಮೊದಲ ದಿನ, ನೌಕರಿಯ ಮೊದಲ ದಿನ, ಹೊಸಕಂಪನಿಯಲ್ಲಿನ  ಮೊದಲ ದಿನ, ಹೆಣ್ಣಿಗೆ ಮದುವೆಯ ನಂತರದ  ಮೊದಲ ದಿನ..... ಹೀಗೇ ಜೀವನದಲ್ಲಿ ಅದೆಷ್ಟೋ ಮೊದಲ ದಿನಗಳು ಬರುತ್ತಲೇ ಇರುತ್ತವೆ. ಇಲ್ಲಿ ಮೊದಲ ದಿನ ಎಂದರೆ ಮೊಟ್ಟ ಮೊದಲ ದಿನ ಮಾತ್ರವಲ್ಲ, ಮನಸ್ಸು ಹೊಸ ಸ್ಥಳ, ವಾತಾವರಣಗಳಿಗೆ ಹೊಂದಿಕೊಳ್ಳುವ ತನಕದ ಪ್ರತಿಯೊಂದು ದಿನವೂ ಮೊದಲ ದಿನವೇ! 

ಬಹುಷಃ ಎಲ್ಲರಿಗೂ ಹೀಗೇ ಅನ್ನಿಸುವುದಿಲ್ಲವೇನೋ. ತೀರಾ ಭಾವುಕವಾಗಿ ಯೋಚಿಸುವ, ಬಂದೊದಗಿದ ಹೊಸ ಪರಿಸರದಲ್ಲಿ ಬೇಗನೇ ಬೆರೆಯಲಾಗದೇ ಒದ್ದಾಡುವವರನ್ನ ಈ initial day's sindrome ಗಾಢವಾಗಿ ಕಾಡುತ್ತದೆ. ಆದರೆ ಎಲ್ಲರನ್ನೂ ಕಾಡುವ ಹಾಗೂ ಎಲ್ಲರ ನೆನಪಿನಲ್ಲಿ ಉಳಿಯುವ ದಿನವೆಂದರೆ ಮೊದಲ ಬಾರಿಗೆ ಶಾಲೆಗೆ ಸೇರಿದ ದಿನಗಳು....

ನಿಮಗೆಲ್ಲಾ ಶಾಲೆಯ ಮೊದಲ ದಿನ ನೆನಪಿರಬೇಕಲ್ಲಾ? ನನಗಂತೂ ಈಗಲೂ ಕಣ್ಣ ಮುಂದೆ ಬಣ್ಣದ ಚಿತ್ರದಂತೆ ಸರಿದಾಡುತ್ತಿದೆ ಆ ದಿನ... ಹುಟ್ಟಿದ ಮೊದಲ ಆರು ವರ್ಷಗಳು ಅಪ್ಪ-ಅಮ್ಮನ ಜೊತೆ ಆರಾಮವಾಗಿ ಕಳೆದುಹೋಗಿತ್ತು. ಶಕ್ತಿಮಾನ್ ಹಾಗೂ ಕನ್ನಡ ಸಿನೆಮಾದ ಹೊಡೆದಾಟದ ದೃಶ್ಯಗಳಿಂದ ಪ್ರಭಾವಿತನಾಗಿ ಬಾಯಲ್ಲಿ ಡಿಶೂಂ ಡಿಶೂಂ ಅನ್ನುತ್ತಾ, ಕೈ ಕಾಲು ಬೀಸುತ್ತಾ ಮನೆ, ಅಂಗಳ, ತೋಟಗಳಲ್ಲೆಲ್ಲಾ ಸ್ವಚ್ಛಂದವಾಗಿ ನನ್ನ ಪಾಡಿಗೆ ಆಟಾಡಿಕೊಂಡಿದ್ದೆ. ಬೆಳಗ್ಗೆ ಬೆಲ್ಲ-ಬೆಣ್ಣೆಯ ಜೊತೆ ಅಮ್ಮ ಮಾಡುತ್ತಿದ್ದ ದೋಸೆ, ರೊಟ್ಟಿ, ಚಪಾತಿಗಳು, ಅಪ್ಪನ ಜೊತೆ ಅಡ್ಡಾಡುತ್ತಿದ್ದ ಹಸಿರು ಹಸಿರು ಅಡಿಕೆ ತೋಟ, ಅಲ್ಲಿ ಕುತೂಹಲ ಹುಟ್ಟಿಸುತ್ತಿದ್ದ ಏಡಿಕುಣಿ, ಡುರ್ರ್ ಎಂದು ಘರ್ಜಿಸಿ ಹೆದರಿಸುತ್ತಿದ್ದ ನೀರು ಬಿಡುವ ಮೋಟರ್, ಸಂಜೆ ಅಪ್ಪ ತರುತ್ತಿದ್ದ ಕಂಬಾರ್ ಕಟ್(ಕಡ್ಲೆ ಮಿಠಾಯಿ), ನಿಂಬೆಹುಳಿ ಚಾಕ್ಲೇಟ್, ಆಗಾಗ  ಅಮ್ಮನ ಜೊತೆ ಹೋಗಿ ನೋಡುತ್ತಿದ್ದ ತೀರ್ಥಹಳ್ಳಿ ಪೇಟೆ.... ಅದೊಂದು ಪುಟ್ಟ, ಸುಂದರ ಪ್ರಪಂಚ. 

ಹೀಗಿರುವಾಗ ಅದೊಂದು ಘೋರ ದಿನ ಬಂದೇ ಬಿಟ್ಟಿತು. ಶಾಲೆಗೆ ಸೇರಬೇಕಾದ ದಿನ! ಬೆಳಗ್ಗೆ ಬೇಗ ಎಬ್ಬಿಸಿದ ಅಮ್ಮ ಒಳ್ಳೆಯ ಅಂಗಿ-ಚಡ್ಡಿ ತೊಡಿಸಿ, ಪೌಡರ್ ಹಚ್ಚಿ, ಕುಂಕುಮ ಇಡಿಸಿ ನನ್ನನ್ನ ತಯಾರು ಮಾಡಿದಳು. ಮೊನ್ನೆಯಷ್ಟೇ ತಂದ ಹೊಚ್ಚ ಹೊಸ, ಬಣ್ಣದ ಬ್ಯಾಗ್ ಗೆ ಹೊಸ ಸ್ಲೇಟು-ಕಡ್ಡಿ (ಬಳಪ), ನೀರಿನ ಬಾಟಲಿ, ವರೆಸೋ ಬಟ್ಟೆ ಎಲ್ಲಾ ತುಂಬಿ ನನ್ನ ಬೆನ್ನಿಗೇರಿಸಿದಳು. ಅಪ್ಪನ ಕೈ ಹಿಡಿದು ಹೊರಟಾಗ ಗೇಟಿನ ತನಕ ಬಂದು ಟಾಟಾ ಮಾಡಿ ಕಳಿಸಿದಳು. ಸಾಲು ಕಂಬಗಳ ಬೇಲಿಯ ನಡುವಿದ್ದ ಗೇಟನ್ನ ದಾಟಿ ಶಾಲೆಯ ಆವರಣದೊಳಗಡಿಯಿಡುತ್ತಿದ್ದಂತೆಯೇ ಅಪ್ಪನ ಕೈ ಹಿಡಿದಿದ್ದ ನನ್ನ ಕೈಗಳ ಹಿಡಿತ ಬಿಗಿಯಾಯಿತು. ಅಲ್ಲಿ ನಮ್ಮನೆಗಿಂತ ಮೂರು ಪಟ್ಟು ದೊಡ್ಡದಿರುವ, ಸಾಲು ಸಾಲು ಕೊಠಡಿಗಳ ಶಾಲೆ, ಯೂನಿಫಾಂ ತೊಟ್ಟು ಕಾರಿಡಾರ್ ಮೇಲೆ ಓಡಾಡುತ್ತಿರುವ ಮಕ್ಕಳು, ಆಫೀಸ್ ರೂಮೆದುರು ನಿಂತಿರುವ ಬಿಗಿಮುಖದ ಮೇಷ್ಟ್ರು... ಹಿಂದೆಂದೂ ನೋಡದ ಈ ಅಪರಿಚಿತ ದೃಶ್ಯಗಳು ದಿಗಿಲು ಹುಟ್ಟಿಸಿದವು. ಅಪ್ಪ ನೇರವಾಗಿ ಆಫೀಸ್ ರೂಮೊಳಗೆ ನಡೆದ. ಅಲ್ಲಿ ಕೂತಿದ್ದರು ಹೆಡ್ ಮೇಷ್ಟ್ರು. ಮೊದಲು ಅಪ್ಪನ ಜೊತೆ ಮಾತಾಡಿದವರು ಆಮೇಲೆ ನನ್ನನ್ನ ಕೇಳಿದರು:
'ಏನೋ? ಇಪ್ಪತ್ತರ ತನಕ ಮಗ್ಗಿ ಬರುತ್ತಂತೆ ಹೌದಾ?'
ನನಗೆ 'ಹೂಂ' ಅನ್ನಲೂ ಆಗದಷ್ಟು ಭಯ! ನನ್ನ ದಿಗಿಲುಬಿದ್ದ ಮುಖವನ್ನ ನೋಡಿ ನಗುತ್ತಾ, ನನ್ನ ಕೈಗೊಂದು ಪುಸ್ತಕ ಕೊಟ್ಟರು. ಹುಲಿಮುಖದ ಚಿತ್ರವಿರುವ ಮುಖಪುಟವಿದ್ದ ಒಂದನೇ ತರಗತಿಯ ಪಠ್ಯ ಪುಸ್ತಕವದು. ಅದನ್ನ ಬ್ಯಾಗಿನೊಳಗಿಟ್ಟುಕೊಟ್ಟ ಅಪ್ಪ ನನ್ನನ್ನು ಒಂದನೇ ತರಗತಿಯ ಕೊಠಡಿಯೊಳಗೆ ಕೂರಿಸಿ 'ಸಂಜೆ ಬಂದು ಕರ್ಕೊಂಡೋಗ್ತೀನಿ ಆಯ್ತಾ?' ಅಂತ ಹೇಳಿ ಹೊರನಡೆದ.  ತುಂಬಿ ನಿಂತಿದ್ದ ಕಣ್ಗಳಲ್ಲೇ ಒಮ್ಮೆ ಸುತ್ತ ನೋಡಿದೆ. ಮರದ ಹಲಗೆಯ ಮೇಲೆ ಕೂತು ದೊಡ್ಡ ದನಿಯಲ್ಲಿ ಮಾತಾಡುತ್ತಾ, ಒಬ್ಬರಿಗೊಬ್ಬರು ಎಳೆದಾಡುತ್ತಾ, ಗಲಾಟೆ ಮಾಡುತ್ತಾ ಕೂತಿರುವ ನನ್ನದೇ ವಯಸ್ಸಿನ ಹತ್ತಾರು ಅಪರಿಚಿತ ಮುಖಗಳು....

ಅಪ್ಪ ಇನ್ನೂ ಶಾಲೆಯ ಗೇಟ್ ದಾಟಿರಲಿಲ್ಲ. ಅಷ್ಟು ಹೊತ್ತು ಕಷ್ಟದಿಂದ ತಡೆದಿಟ್ಟುಕೊಂಡಿದ್ದ ಅಳುವೆಲ್ಲಾ ಕಿತ್ತುಕೊಂಡುಬಂದು "ಅಪ್ಪಾ....ನಾನೂ ಬರ್ತೀನಿ.. " ಅಂತ ಅಳುತ್ತಾ ಅಪ್ಪನ ಹಿಂದೆಯೇ ಓಡಿದೆ! ಅಪ್ಪ ಏನೇನೋ ಬಣಿಸಿ ನೋಡಿದ. ಏನೇ ರಮಿಸಿದರೂ ನಾನು ಒಪ್ಪಲಿಲ್ಲ.ಅಪ್ಪ ಕೊನೆಗೂ ಸೋತು 'ಸರಿ ನಾಳೆಯಿಂದ ಬಂದ್ರಾಯ್ತು ಬಾ' ಅಂತ ಮನೆಗೆ ವಾಪಾಸ್ ಕರೆದುಕೊಂಡು ಬಂದ. ಆದರೆ ಮರುದಿನವೂ ಇದೇ ಘಟನೆ ಮರುಕಳಿಸಿದಾಗ ಅಕ್ಷರಷಃ ವ್ಯಗ್ರಳಾಗಿದ್ದು ಮಾತ್ರ ಅಮ್ಮ! ಹೋದ ಚಂದದಲ್ಲೇ ಮರಳಿಬರುತ್ತಿದ್ದ ನನಗಾಗಿ ದಾಸವಾಳ ಗಿಡದ ಬರಲು (ಕೋಲು) ಹಿಡಿದು ಕಾಯುತ್ತಿದ್ದಳು! 'ಬರಲು ಸೇವೆ' ಬಾಗಿಲಲ್ಲೇ ಆರಂಭವಾಯಿತು. ಅತ್ತು, ಮುಖ ಕೆಂಪಾಗಿ ನಿಂತಿದ್ದ ನನಗೆ ನಾಲ್ಕು ಬಾರಿಸಿ, ಕೈಗೊಂದು ಸ್ಲೇಟು-ಕಡ್ಡಿ ಕೊಟ್ಟು " ಸಂಜೆ ತನಕ ಅಆಇಈ, ಮಗ್ಗಿ, ಕಾಗುಣಿತ ಬರೀತ ಕೂತಿರು. ಶಾಲೆಗೆ ಹೋಗ್ದಿದ್ದಕ್ಕೆ ಇದೇ ಶಿಕ್ಷೆ ನಿಂಗೆ!"  ಎಂದು ಅಬ್ಬರಿಸಿದಳು. ಮಾರನೇ ದಿನ "ಇವತ್ತು ಅವನ್ನ ನಾನು ಶಾಲೆಗೆ ಬಿಡ್ತೀನಿ" ಅಂತ ಮತ್ತೊಂದು ಬರಲು ಹಿಡಿದು ಹೊರಟೇ ಬಿಟ್ಟಳು! ಮನೆಯಿಂದ ಶಾಲೆಯ ತನಕ ರಸ್ತೆಯುದ್ದಕ್ಕೂ ಅಳುತ್ತಾ ಓಡುತ್ತಿದ್ದ ನನ್ನನ್ನೂ, ಕೋಲು ಹಿಡಿದು ಹಿಂದೆಯೇ ಅಟ್ಟಿಸಿಕೊಂಡು ಬರುತ್ತಿದ್ದ ಅಮ್ಮನನ್ನೂ ಇಡೀ ಅರಳಸುರಳಿ ಊರಿಗೆ ಊರೇ ಮುಸಿಮುಸಿ ನಗುತ್ತಾ ನೋಡುತ್ತಿತ್ತು! 

ಅಂತೂ ಇಂತೂ ಅಮ್ಮನ ಏಟಿಗೆ ಹೆದರಿ ನಾನು ಶಾಲೆಗೆ ಹೋಗುವಂತಾಯಿತು. ಎಷ್ಟೇ ತಡೆದರೂ ಮನೆಯ ನೆನಪುಗಳು ನಿಲ್ಲುತ್ತಿರಲಿಲ್ಲ.  ಆಗಾಗ ಅದು ಅಳುವಾಗಿ ಉಕ್ಕಿ ಬರುತ್ತಿತ್ತು. ದಪ್ಪ ಮೀಸೆಯ ಮೇಷ್ಟರುಗಳಂತೂ ನಮಗೆ ಹೊಡೆಯಲೆಂದೇ ಈ ಭೂಮಿಗೆ ಬಂದವರಂತೆ ಕಾಣುತ್ತಿದ್ದರು. ಅದೊಂದು ಸಲ ಪಾಠ ಮಾಡುತ್ತಿದ್ದ ಯೋಗೀಶ್ವರಪ್ಪ ಮೇಷ್ಟ್ರನ್ನ ಮನೆಯ ಗುಂಗಿನಲ್ಲಿ 'ಅಪ್ಪ' ಅಂತ ಕೂಗಿ ನಗೆಪಾಟಲಾಗಿದ್ದೆ! ಅಪರಿಚಿತ ಮುಖಗಳ ನಡುವೆ ಶಾಲೆ ಮುಗಿಯುವ ಸಮಯದ 'ಲಾಂಗ್ ಬೆಲ್'ಗಾಗಿ ಕಾಯುತ್ತಾ ಕೂತಿರುತ್ತಿದ್ದೆ. ಅದರೆ ಮುಂದೆ ಅವೇ ಅಪರಿಚಿತ ಮುಖಗಳು ನನ್ನ ಗೆಳೆಯರಾದವು. ಕೈ ಹಿಡಿದು ಆಟದ ಬೈಲಿಗೆ ಕರೆದೊಯ್ದವು. ಜೊತೆಯಲ್ಲಿ ಆಡಿದವು. ನೆಲ್ಲಿಕಾಯಿ, ಸಂಪಿಗೆ ಹಣ್ಣು ತಂದು ತಿನ್ನಲು ಕೊಟ್ಟವು. ಜಗಳಾಡಿ ಅಳಿಸಿದವು, ತಮಾಷೆಮಾಡಿ ನಗಿಸಿದವು. ಮುಂದೆ ಶಾಲೆ ಆತ್ಮೀಯವಾಯಿತು. ಕೊನೆಗೆ ಏಳನೇ ತರಗತಿ ಮುಗಿಸಿ ಹೊರಟುನಿಂತಾಗ ಥೇಟ್ ನನ್ನ ಮನೆಯಂತೆಯೇ ಕಂಡಿತು. ವರ್ಷಗಳೇ ಕಳೆದರೂ ಇಂದಿಗೂ ಹಚ್ಚ ಹಸಿರಾಗಿರುವ, ಚಂದದ ನೆನಪಾಗಿ ಉಳಿದುಬಿಟ್ಟಿತು....

                    ************

ಬಹುಷಃ ನೆನಪುಗಳಷ್ಟು ಗಾಢವಾಗಿ ಮನುಷ್ಯನನ್ನು ಮತ್ತೇನೂ ಕಾಡಲಾರದೇನೋ. ಹಿಂದೆಂದೋ ಜೊತೆಯಾಗಿ ನಕ್ಕ ನೆನಪುಗಳು ಇಂದು ಕಂಬನಿಯಾಗಿ ಕಾಡುತ್ತವೆ; ಅತ್ತ ನೆನಪುಗಳು ತುಟಿಯಂಚಲ್ಲಿ ಮುಗುಳ್ನಗೆಯಾಗಿ ಮೂಡುತ್ತವೆ. ಒಟ್ಟಿನಲ್ಲಿ ಎಂದೋ ಸವಿದ ಸವಿಯೊಂದನ್ನ ಮತ್ತೆ ನಾಲಿಗೆಯಂಚಲ್ಲಿ ಮೂಡಿಸಿ ಹೃದಯದ ಹಸಿವನ್ನು ಹೆಚ್ಚಿಸುತ್ತವೆ ಈ ಹಾಳು ನೆನಪುಗಳು...

ಹೊಸ ಕಂಪನಿಗೆ ಸೇರಿ ಒಂದು ವಾರವಷ್ಟೇ ಆಗಿದೆ. ಮೊದಲೇ ಹೇಳಿದಂತೆ ಹೊಸ ವಾತಾವರಣದ ಈ ಮೊದಮೊದಲ ದಿನಗಳೆಂದರೆ ನೆನಪುಗಳ ಪರ್ವ ಕಾಲ. ಹಳೆಯ ಕಂಪನಿ ಬಿಟ್ಟು ಇಲ್ಲಿ ಸೇರುವ ಮಧ್ಯಂತರದ ಮೂರು ವಾರ ಊರಿನಲ್ಲಿದ್ದು ಬಂದುದ್ದರಿಂದ ಮನೆಯ ನೆನಪುಗಳೂ ಇವಕ್ಕೆ ಜೊತೆ ಸೇರಿಕೊಂಡು ಮನಸ್ಸು ಅಕ್ಷರಷಃ ಮಗುವಾಗಿಬಿಟ್ಟಿದೆ. ಬೆಳಗ್ಗೆ ಎದ್ದೊಡನೆಯೇ 'ನಾನಿವತ್ತು ಆಫೀಸಿಗೆ ಹೋಗಲ್ಲ' ಅಂತ ಹಠಮಾಡತೊಡಗುತ್ತದೆ. ಅದನ್ನ ರಮಿಸುತ್ತಾ,  ಸಮಾಧಾನ ಮಾಡುತ್ತಾ ದಟ್ಟ ಟ್ರಾಫಿಕ್ನ ನಡುವೆ, ರಶ್ ಬಸ್ನಲ್ಲಿ ಒಂಟಿ ಕಾಲಲ್ಲಿ ನಿಂತು ಆಫೀಸ್ ಗೆ ಬರುವಷ್ಟರಲ್ಲಿ ಸಾಕುಸಾಕಾಗುತ್ತದೆ. ಇಲ್ಲಿ ನೂರಾರು ಅಪರಿಚಿತ ಮುಖಗಳು. ಕೇಳೇ ಇರದ ರೂಲ್ಸ್ ಗಳು. ತರಹೇವಾರಿ ಯಂತ್ರಗಳು. ವಿಭಿನ್ನ ಹಾವಭಾವಗಳು. ಸಂತೆಯಂತೆ ಸದಾ ಗಿಜಿಗುಡುವ ಸಂದಣಿ. ಇದೆಲ್ಲದರ ನಡುವೆ ಗೆಳೆಯರಿಲ್ಲದೆ ಒಂಟಿಯಾಗಿ ಮುದುಡುವ ಮನಸ್ಸು ಮತ್ತೆ ಮತ್ತೆ ಓಡುವುದು ಒಮ್ಮೆ ಬಾಲ್ಯಕ್ಕೆ,  ಮತ್ತೊಮ್ಮೆ ಹಳೇ ಕಂಪನಿಗೆ!

ಐದು ನಿಮಿಷ ತಡವಾಗಿ ಹೋದರೂ ಆಫೀಸ್ನಲ್ಲಿ ತಿಂಡಿ ಸಿಗುವುದಿಲ್ಲ. ಉಪವಾಸ ಆಚೆ ಬರುವಾಗ 'ತಿಂಡಿಗೆ ಬಾರೋ' ಅಂತ ಕರೆಯುವ ಅಮ್ಮನ ನೆನಪಾಗುತ್ತದೆ.
ಎಷ್ಟೇ ತಡವಾಗಿ ಹೋದರೂ 'ಕರೆದ್ಕೂಡ್ಲೇ ಬರೋಕಾಗಲ್ಲ' ಅಂತ ಬಯ್ಯುತ್ತಲೇ ತಟ್ಟೆಗೆ ತಿಂಡಿ ಹಾಕಿ 'ಕಾಫಿ ಬೇಕಾ, ಹಾಲಾ?' ಎಂದು ಕೇಳುವ ಅವಳ ಪ್ರೀತಿಯ ದನಿ ಕಿವಿಯಲ್ಲಿ ಗುಂಯ್ಗುಟ್ಟುತ್ತದೆ...

ಮೊದಲ ಉದ್ಯೋಗ ಕೊಟ್ಟು, ಕೆಲಸ ಕಲಿಸಿ, ಸಂಬಳ ನೀಡಿ, ನಾಲ್ಕು ವರ್ಷಗಳ ಕಾಲ ತನ್ನ 'Family'ಯ ಸದಸ್ಯನಾಗಿ ಸಲಹಿದ ಸಂಸ್ಥೆ ಹೆಜ್ಜೆಗೊಮ್ಮೆ ನೆನಪಾಗುತ್ತದೆ. ಹತ್ತಾರು ಮುಖಗಳ ನಡುವೆಲ್ಲೋ 'ಅಲ್ಲಿಯ' ಗೆಳೆಯನನ್ನು ಕಂಡಂತಾಗುತ್ತದೆ. ಯಾರದೋ ಮಾತಿನ ಧಾಟಿ ಇನ್ಯಾರನ್ನೋ ನೆನಪಿಸುತ್ತದೆ. ಹಿಂಡು ಹಿಂಡು ಜನರ ನಡುವಲ್ಲಿ ನನ್ನವರನ್ನು ಹುಡುಕಿ ಸೋಲುತ್ತೇನೆ. ಖಾಲಿ ಟೇಬಲ್ನಲ್ಲಿ ಕೂತು ಉಣ್ಣುವಾಗ ಸದಾ ಜೊತೆಗಿರುತ್ತಿದ್ದ ಗೆಳೆಯರ ದಂಡು ಕಣ್ಣೆದುರು ಮೂಡುತ್ತದೆ. ಎಲ್ಲೋ  ಹಸಿರುಡುಗೆ ತೊಟ್ಟ ಆಕೃತಿಯೊಂದು ಕಂಡಾಗ 'ಅವಳೇ' ಎದುರು ನಿಂತಂತಾಗುತ್ತದೆ......

                    **************
ಹೆಚ್ಚುತ್ತಿರುವ ಜವಾಬ್ದಾರಿಗಳಿಗನುಗುಣವಾಗಿ ಹೆಚ್ಚಿಸಿಕೊಳ್ಳಲೇಬೇಕಾಗಿರುವ ಸಂಪಾದನೆ, ಬೆಳೆಸಲೇಬೇಕಾಗಿರುವ ಕರಿಯರ್, ತಲುಪಲೇಬೇಕಾಗಿರುವ ಗೋಲ್ ಗಳು, ಕಟ್ಟಲೇಬೆಕಾಗಿರುವ ಮನೆ.... ಈ ಜವಾಬ್ದಾರಿಗಳು ಮನುಷ್ಯನನ್ನು ಎಷ್ಟೊಂದು ಅಲೆಸುತ್ತವೆ ಅಲ್ವಾ? ಒಂದು ಕಡೆ ನೆಲೆಯಾಗಿ ನಿಲ್ಲುವುದಕ್ಕೆ ಬಿಡುವುದೇ ಇಲ್ಲ. 'ಇದು ನನ್ನ ಜಾಗ' ಅನ್ನಿಸುವ ಹೊತ್ತಿಗೆ ಅಲ್ಲಿಂದ ಕಾಲ್ಕೀಳುವ ಸಮಯ ಬಂದುಬಿಡುತ್ತದೆ....

ಇವೆಲ್ಲಾ ನನ್ನ ಖಾಸಗೀ ಭಾವನೆಗಳು, ನನಗೆ ಮಾತ್ರ ಸಂಬಂಧಿಸಿದವು. ಇವನ್ನೆಲ್ಲಾ ಹೀಗೆ ಹೇಳಿಕೊಳ್ಳುವುದು ಸರಿಯೋ, ತಪ್ಪೋ ಗೊತ್ತಿಲ್ಲ. ಆದರೆ ಒಳಗೆ ಮಡುಗಟ್ಟಿ ನಿಂತ ಭಾವನೆಗಳನ್ನ ಕೊಂಚವಾದರೂ ಹೊರಹರಿಸಿ ಅಷ್ಟಾದರೂ ಹಗುರಾಗಲೆಂದು ಇಷ್ಟೆಲ್ಲಾ ಗೀಚಿದ್ದೇನೆ, ಇದರಲ್ಲಿ ಕೆಲವು ನಿಮ್ಮದೂ ಆಗಿರಬಹುದೆಂಬ ನಂಬಿಕೆಯೊಂದಿಗೆ.....

ಸೋಮವಾರ, ಜೂನ್ 13, 2016

ಶಾಲೆಯ ನೆನೆದು...

೧. ಶಾಲೆಯ ದಿನಗಳು...

ಹರಿಯದ ಬಾಲ್ಯದ ಬಣ್ಣದ ಪುಟದಲಿ
ಬರೆದಿಹ ತೊದಲಿನ ಪದಗಳವು;
ತಿರುಗಿ ನೋಡಿದರೆ ಎಂದಿಗೂ ಹಸಿರು,
ಮರೆಯದ ಶಾಲೆಯ ದಿನಗಳವು.

ಬೇಧವಿಲ್ಲದೆ ಸ್ನೇಹ ಲತೆಯಲಿ
ಹೂಗಳು ಅರಳುವ ಕಾಲವದು;
ಜಾತಿ-ಧರ್ಮಗಳ ನೀತಿ ಮರೆಯುತಲಿ
ಮನಗಳ ಬೆಸೆಯುವ ಜಾಲವದು.

ಮಳೆಯ ನೀರಿನಲಿ ಬಿಟ್ಟ ದೋಣಿಯಲಿ
ಮನಸು ತೇಲಿದ ಯಾನವದು;
ಚಿಕ್ಕ ಖುಷಿಗಲೆ ಮೈಯ್ಯ ಮರೆಯುವ
ಎಳೆಯ ಹೃದಯಗಳ ಗಾನವದು.

ಪುಟಗಳ ನಡುವಳಿಕೆ ಪಟಾಕಿ ಎಲೆಯು
ಚಿಗುರಿದ ಹರುಷವು ಇಂದೆಲ್ಲಿ?
ಕಾಲವು ಕಸಿದಾ ಮರಳದ ಸೊಬಗದು
ಮಾಸದೆ ಉಳಿಯಿತು ಸ್ಮೃತಿಯಲ್ಲಿ.

೨. ಶಾಲೆಯ ನೆನೆದು...

ಮರಳಿ ಬರಬಾರದೇ ಒಮ್ಮೆ
ಕಳೆದ ಸಮಯ?
ಸೇರಬೇಕು ಮತ್ತೆ ಮಗುವಾಗಿ
ನಿನ್ನ ಹೃದಯ!

ಈ ನಿನ್ನ ಅಂಗಳದಾಳದಲಿ
ನಮ್ಮದೇ ಕೋಟಿ ಹೆಜ್ಜೆಗಳು;
ಆಳದಿಂದಲೇ ಪಿಸುಗುಡುತ್ತಿವೆ,
ಹೊಸ ಸಮಯ ತಂದ ಹೊಸ
ಮಣ್ಣಿನಡಿಯಲಿ ಹುದುಗಿ ಹೋದರೂ!
ಸದ್ದಿರದೆ ಬಹುದೂರ
ನಡೆದು ಬಂದಾಗಿದೆ,
ಹಿಂಬಾಲಿಸುತಿದೆ ಸ್ಮರಣೆಗಳಾ ನೆರಳು
ಒಂಚೂರೂ ಸವೆಯದೇ!

ಎದೆಯಾಳದಲೆಲ್ಲೋ ಮೌನವಾಗಿ
ಹೊದ್ದು ಮಲಗಿದ್ದ ನೆನಪುಗಳು
'ಸುವರ್ಣ ಸಂಭ್ರಮ'ದ ಗದ್ದಲಕೆ
ಎದ್ದು ಹೊರಟಿವೆ ಮೆರವಣಿಗೆ;
ಊರು ತೊರೆದಿಹ ಅಲೆಮಾರಿ ನಾ..
ಕೊಡದಾದೆನು ಹಿರಿದಾದುದೇನನೂ..
ಅಳಿಲು ಕೊಡುಗೆ ಈ ನನ್ನ ಬರವಣಿಗೆ....


               ***********
(ನಾನು ಓದಿದ ಶಾಲೆ ಸ.ಹಿ.ಪ್ರಾ. ಅರಳಸುರಳಿ ಐವತ್ತು ವಸಂತಗಳನ್ನ ಪೂರೈಸಿದೆ. ಕಳೆದ ವರ್ಷ ಜರುಗಿದ 'ಸುವರ್ಣ ಮಹೋತ್ಸವ'ದ ಸ್ಮರಣ ಸಂಚಿಕೆ 'ಅರಳಸುರಳಿ'ಯಲ್ಲಿ ಪ್ರಕಟವಾದ ನನ್ನ ಕವನಗಳಿವು)


ಬುಧವಾರ, ಜೂನ್ 8, 2016

ಅಭಿವೃದ್ದಿ, ನಗರೀಕರಣ ಮತ್ತು ನಾವು...

"ಅಭಿವೃದ್ಧಿ " ಅನ್ನುವುದು ಜಗತ್ತಿನ ಮೂಲಭೂತ ಲಕ್ಷಣ. ಇಂದಿನ ಪ್ರಪಂಚ ನಿಂತಿರುವುದೇ ಅಭಿವೃದ್ಧಿ ಸೂತ್ರದ ಮೇಲೆ. ಸಕಾರಾತ್ಮಕವಾದ, ಏಳಿಗೆಯೆಡೆಗಿನ ಪ್ರತಿಯೊಂದೂ ಬದಲಾವಣೆಯೂ ಅಭಿವೃದ್ಧಿಯೇ. ಪ್ರತಿಯೊಂದು  ನಿನ್ನೆ  ಮತ್ತು ನಾಳೆಯ ಮಧ್ಯೆ ಜಗದ ಯಾವುದೋ ಒಂದು ಮೂಲೆಯಲ್ಲಾದರೂ ಸೂಕ್ಮಾತಿಸೂಕ್ಮ ಅಭಿವೃದ್ಧಿ ನಡೆದೇ ಇರುತ್ತದೆ, ನಡೆಯಲೇ ಬೇಕು! ಸೃಷ್ಟಿಯಲ್ಲಿ ಸಾವಿರಾರು ವರ್ಷಗಳ ಹಿಂದೆ ಘಟಿಸಿದ 'ಮಾನವ ವಿಕಾಸ'ವೂ ಸಹಾ ಒಂದರ್ಥದಲ್ಲಿ ಅವನು ಸಾಧಿಸಿದ ಅಭಿವೃದ್ಧಿಯೇ. ಕಾಡಿನಲ್ಲಿ ಮರದ, ಕಲ್ಲಿನ ಅಯುಧಗಳನ್ನ ಹಿಡಿದು ಪ್ರಾಣಿಗಳ ಹಿಂದೆ ಓಡುತ್ತದ್ದ ವಾನರರೂಪಿ ಆದಿಮಾನವ ಇಂದು ಭೂಮಂಡಲವನ್ನೇ ದಾಟಿ ಮಂಗಳನೆಡೆಗೆ ಹಾರಿದ್ದಾನೆಂದರೆ ಅವನಲ್ಲಿ ಉರಿಯುತ್ತಿರುವ ಅಭಿವೃದ್ಧಿಯ ತೀವ್ರತೆ ಎಷ್ಟಿರಬಹುದು!

ಪೊದೆಗಳಲ್ಲಿ, ಮರದ ಪೊಟರೆಗಳಲ್ಲಿ, ಗುಹೆಗಳಲ್ಲಿ ವಾಸಿಸುತ್ತಿದ್ದ ಅವನು ಮೆಲ್ಲನೆ ಕಲ್ಲು, ಬಂಡೆ, ರೆಂಬೆ-ಕೊಂಬೆಗಳನ್ನ ಬಳಸಿ ಕೃತಕ ಮನೆ ನಿರ್ಮಿಸಿಕೊಂಡು. ಮುಂದೆ ಅವು ಮಣ್ಣಿನ ಗೋಡೆ ಹಾಗೂ ಹುಲ್ಲು ಮಾಡಿನ ಗುಡಿಸಲುಗಳಾದವು. ಹತ್ತಾರು ಗುಡಿಸಲುಗಳು ಸೇರಿ ಊರು-ಕೇರಿಗಳು ರೂಪುಗೊಂಡವು.

ಮಾನವ ಜೀವನದ ಅಗತ್ಯತೆಗಳನ್ನೇ ಬಂಡವಾಳವಾಗಿಟ್ಟುಕೊಂಡು ಹೊಸ-ಹೊಸ ಸಂಶೋಧನೆಗಳಾಗುತ್ತಾ ಹೋದವು. ದೈನಂದಿನ ಕೆಲಸಕಾರ್ಯಗಳಿಗೆ ನೆರವಾಗುವ ಪರಿಕರಗಳ ಅವಿಷ್ಕಾರಗಳಾಗಿ, ಅವುಗಳ ಬಳಕೆ ಸಾಗರಗಳಾಚೆಗಿನ ದೇಶ-ವಿದೇಶಗಳಿಗೂ ಹಬ್ಬಿದವು. ಮುಂದೆ ಕೈಗಾರಿಕಾ ಕ್ರಾಂತಿ, ಜಾಗತೀಕರಣಗಳ ಪ್ರಭಾವದಿಂದ ಜಗತ್ತಿನ ನಾನಾ ದೇಶಗಳ ಜನರು ಕಾರ್ಖಾನೆ,ಕೈಗಾರಿಕೆಗಳ ಸ್ಥಾಪನೆಯಲ್ಲಿ ಆಸಕ್ತರಾದರು. ಅದಕ್ಕೆ ಸೂಕ್ತವಾದ ವಾತಾವರಣ, ಸೌಕರ್ಯಗಳ ಲಭ್ಯತೆ ಮುಂತಾದ ಅನುಕೂಲಗಳಿರುವ ಪ್ರದೇಶಗಳಲ್ಲಿ ಕಾರ್ಖನೆ, ಕೈಗಾರಿಕೆ, ಸಂಸ್ಥೆಗಳು ಚಿಗುರಿಕೊಂಡವು. ಅಲ್ಲಿ ಸಹಜವಾಗಿಯೇ ಉದ್ಯೋಗ ಸೃಷ್ಟಿಯಾಯಿತು. ಬೇರೆಬೇರೆ ಪ್ರದೇಶಗಳ ಜನರು ಅತ್ತ ಮುಖಮಾಡಿದರು. ಹೀಗೆ ಜನಸಾಂದ್ರತೆ ಹೆಚ್ಚಿದ ಪರಿಣಾಮವಾಗಿ ಅವರ ಅಗತ್ಯತೆಗಳನ್ನ ಪೂರೈಸುವುದನ್ನೇ 'ವ್ಯಾಪಾರ'ವನ್ನಾಗಿಸಿಕೊಂಡ ಅಂಗಡಿ-ಮುಂಗಟ್ಟುಗಳೂ, ಸೇವಾಸಂಸ್ಥೆಗಳೂ ಹುಟ್ಟಿಕೊಂಡವು. ಜೀವನ ಸುಲಭವಾಗುತ್ತಾ ಹೋಯಿತು. ಮತ್ತಷ್ಟು ಜನ ಬಂದರು. ನಗರ ತನ್ನ ಗಡಿಗಳನ್ನ ಒಡೆದುಕೊಂಡು ಬೆಳೆಯತೊಡಗಿತು. ಹೀಗೆ ಕಗ್ಗಾಡುಗಳಾಗಿದ್ದ ಪ್ರದೇಶಗಳು ಕಾಲದ ಕುಲುಮೆಯಲ್ಲಿ ಅರಳುತ್ತಾ ಗುಡಿಸಲುಗಳಾಗಿ, ಮನೆಗಳಾಗಿ, ಊರು-ಕೇರಿಗಳಾಗಿ, ಪಟ್ಟಣಗಳಾಗಿ, ಕೊನೆಗೆ ಮಹಾನಗರಗಳಾಗಿ ಬೆಳೆದು ನಿಂತವು.

ಹಳ್ಳಿ ಮತ್ತು ನಗರಗಳು ದೇಶವೊಂದರ ಎರೆಡು ಕಣ್ಣುಗಳಿದ್ದಂತೆ. ಯಾವುದರಲ್ಲಿ ಧೂಳು ಬಿದ್ದರೂ ಎರೆಡೂ ಅಳಲೇಬೇಕು! ಅಷ್ಟರ ಮಟ್ಟಿಗೆ ಎರೆಡು ಆಂತರಿಕವಾಗಿ ಒಂದಕ್ಕೊಂದು ಬೆಸೆದುಕೊಂಡಿವೆ. ಮೇಲ್ನೋಟಕ್ಕೆ ಈ ಮಾತು ಅಸಂಬದ್ಧವೆನಿಸಿದರೂ ಸೂಕ್ಷವಾಗಿ ಗಮನಿಸಿದರೆ ಇದು ಹೌದೆಂಬುದು ಅರಿವಾಗುತ್ತದೆ. ಹಳ್ಳಿ ಮತ್ತು ನಗರಗಳ ಸಮತೋಲನವೇ ದೇಶದ ಸಮತೋಲನ. ಆದರೆ ಕಳೆದ ಕೆಲವು ದಶಕಗಳಲ್ಲಿ ಜನರು ಪಟ್ಟಣಗಳತ್ತ ಹೆಚ್ಚು ಆಕರ್ಶಿತರಾಗುತ್ತಿದ್ದಾರೆ. ಹೆಚ್ಚಿಗೆ ಓದಿಕೊಂಡರೆ, ಒಳ್ಳೆಯ ಉದ್ಯೋಗ ಬೇಕೆಂದರೆ, ಹಣ ಗಳಿಸಬೇಕೆಂದರೆ, ಅನುಕೂಲಕರ ಬದುಕನ್ನ ಬಯಸುವುದಾದರೆ ನಗರವಾಸಿಗಳಾಗಬೇಕೆಂಬುದು ನದಿ-ಹೊಳೆಗಳು ಸಮುದ್ರ ಸೇರುವಷ್ಟೇ ಅನಿವಾರ್ಯ ಮತ್ತು ಸಾಮಾನ್ಯ ಸಂಗತಿಯಾಗಿದೆ. 

ಈ ಸಮಸ್ಯೆಗೆ ಮೂಲ ಕಾರಣವಾಗಿರುವ, ಇಂತಹದ್ದೊಂದು ಅಭಿವೃದ್ಧಿಯು ಮಾನವ ಜಗತ್ತಿಗೆ, ಈ ಪ್ರಪಂಚಕ್ಕೆ ಬೇಕಿತ್ತ ಅಂತ ಕೇಳಿಕೊಂಡರೆ, 'ಹೌದು' ಎನ್ನುವ ಉತ್ತರವೇ ಸರಿ ಎನ್ನಿಸುತ್ತದೆ. ಬದಲಾವಣೆ ಮತ್ತು ಬೆಳವಣಿಗೆಗಳು ಬರೀ ಮನುಷ್ಯನ ಅನುಕೂಲಕ್ಕಾಗಿ ಅದುದಲ್ಲ. ಅವು ಮನುಷ್ಯನ ಅಸ್ತಿತ್ವದ ಉಳಿವಿಗೆ ನೆರವಾದ ಅಂಶಗಳೂ ಹೌದು. ಬದಲಾವಣೆಗೆ ತೆರೆದುಕೊಳ್ಳದ ತಪ್ಪಿಗೆ ದೈತ್ಯ ಡೈನೋಸಾರ್ ಗಳೇ ತಮ್ಮ ಅಸ್ತಿತ್ವ ಕಳೆದುಕೊಂಡು ನಿರ್ನಾಮವಾದವು ಎಂಬ ವಾದವನ್ನು ನಾವು ಕೇಳಿದ್ದೇವೆ. ಇನ್ನೊಂದು ತಾಜಾ ಉದಾಹರಣೆ ಹೇಳುವುದಾದರೆ 'ನೋಕಿಯ'ದಂತಹ ಜಗತ್ಪ್ರಸಿದ್ಧ ಮೊಬೈಲ್ ತಯಾರಕ ಕಂಪನಿಯು ಯಾವ ತಪ್ಪನ್ನೆಸಗದಿದ್ದರೂ ಇದ್ದಕ್ಕಿದ್ದಂತೇ ಮಾರುಕಟ್ಟೆಯಲ್ಲಿ ಮಣ್ಣಾಗಲು ಮುಖ್ಯ ಕಾರಣವೆಂದರೆ ಕ್ಷಣ-ಕ್ಷಣವೂ ಬದಲಾಗುತ್ತಿದ್ದ ಮಾರುಕಟ್ಟೆಯ ಬೆಳವಣಿಗೆಗೆ ತನ್ನನ್ನು ತಾನು ತೆರೆದುಕೊಳ್ಳದೇ ಹೋದುದು!

ಹೌದು. ಮನುಷ್ಯ ಅದೇ ಗೊಂಡಾರಣ್ಯದ ಗುಹೆಗಳಲ್ಲಿ, ಮುರುಕಲು ಗುಡಿಸಲುಗಳಲ್ಲಿ, ಉಳಿಯುವುದು ಸಾಧ್ಯವಿರಲಿಲ್ಲ. ಅವನು ಕಾಲದ ಜೊತೆಗೇ ಬದಲಾಗಬೇಕಿತ್ತು, ಬದಲಾದ. ವ್ಯವಸ್ಥೆಗಳನ್ನ ಅಭಿವೃದ್ಧಿಗೊಳಿಸುತ್ತಾ ನಗರ, ಮಹಾನಗರಗಳನ್ನ ಕಟ್ಟಿಕೊಂಡದ್ದೂ ಕೂಡ ತಪ್ಪಲ್ಲ.ಆದರೆ ಯಾವಾಗ ಅದು ಒಂದು ಹಂತವನ್ನ ಮೀರಿತೋ ಅಗಲೇ ಅದು ಸಮಸ್ಯೆಯಾಗಿದ್ದು.ಉದಾಹರಣೆಗೆ ನಮ್ಮ ಬೆಂಗಳೂರನ್ನೇ ತೆಗೆದುಕೊಳ್ಳೋಣ: ಬರೀ ಒಂದೂಕಾಲು ದಶಕದ ಕೆಳಗೆ ನಗರದ ಹೃದಯ ಭಾಗವಾಗಿರುವ ಮೆಜಸ್ಟಿಕ್ಕನ್ನ ಕೇಂದ್ರವಾಗಿಟ್ಟುಕೊಂಡು ಒಂದು ವೃತ್ತ ಎಳೆದರೆ ಹತ್ತು-ಹನ್ನೆರೆಡು ಕಿಲೋಮೀಟರ್ ಪರಿಧಿಯೊಳಗೆ ಇಡೀ ಬೆಂಗಳೂರೇ ಮುಗಿದುಹೋಗುತ್ತಿತ್ತು. ಆದರೆ ಇಂದು ಅದರ ಮೂರುಪಟ್ಟು ವಿಸ್ತಾರಗೊಂಡಿದೆ ಬೆಂಗಳೂರು. ಇನ್ನು ಕೆಲವೇ ವರುಷಗಳಲ್ಲಿ ಒಂದುಕಡೆ ನೆಲಮಂಗಲದವರೆಗೆ, ಇನೊಂದುಕಡೆ ಹೊಸೂರಿನವರೆಗೆ, ಮತ್ತೊಂದುಕಡೆ ಚಿಕ್ಕ-ದೊಡ್ಡ ಬಳ್ಳಾಪುರಗಳಾಚೆಗೂ 'ಬೆಂಗಳೂರು ನಗರ'ವೇ ವ್ಯಾಪಿಸಿ ನಿಂತರೂ ಅಚ್ಚರಿಪಡುವಂತಿಲ್ಲ. ಇದರಿಂದ ಜನರಿಗೆ, ರಾಜ್ಯಕ್ಕೆ ಹಾಗೂ ದೇಶಕ್ಕೂ ಲಾಭವಿದೆ. ಲಕ್ಷಾಂತರ ಜನರಿಗೆ ಉದ್ಯೋಗ ದೊರೆತು, ದೇಶದ ಆರ್ಥೀಕ ಸ್ಥತಿ ಸುಧಾರಿಸುತ್ತದೆ. ಸಂಪನ್ಮೂಲಗಳು ಸದ್ಬಳಕೆಯಾಗುತ್ತವೆ. ವಾಣಿಜ್ಯ-ವಹಿವಾಟು ವ್ಯಾಪಾರವೂ ವೃದ್ಧಿಸುತ್ತದೆ. ಇದೆಲ್ಲಾ ಸರಿಯೇ. ಅದರೆ ಈ ಎಲ್ಲಾ ಬದಲಾವಣೆ, ಅಭಿವೃದ್ಧಿ, ಬೆಳವಣಿಗೆಗಳೂ ವ್ಯವಸ್ತಿತವಾಗಿ ಅಗುತ್ತಿವೆಯ? ಖಂಡಿತ ಇಲ್ಲ!

ಹಿಗ್ಗುತ್ತಾ ಹೋಗುವ ಮಹಾನಗರ ತನ್ನ ಸುತ್ತಮುತ್ತಲಿನ ಮರಗಿಡ, ಗದ್ದೆ, ತೋಟ, ಹುಲ್ಲುಬಯಲು ಮುಂತಾದ ನೈಸರ್ಗಿಕ ಪರಿಸರವನ್ನೂ ನುಂಗಿಕೊಂಡೇ ಬೆಳೆಯಬೇಕು; ಗುಡ್ಡ-ಬೆಟ್ಟಗಳನ್ನ ಕತ್ತರಿಸಲೇಬೇಕು. ಸಾವಿರಾರು ಮರಗಳನ್ನ ಕಡಿದುರುಳಿಸುವ ಮನುಷ್ಯ ಅದರ ಹತ್ತು ಭಾಗದಷ್ಟಾದರೂ ಮತ್ತೆ ನೆಟ್ಟುಬೆಳೆಸಬೇಕೆಂದು ಯೋಚಿಸುವುದೇ ಇಲ್ಲ. ಆದುನಿಕ ನಗರಿಯಲ್ಲಿ ದಿನವೂ ಟನ್ ಗಟ್ಟಲೆ  ಸೃಷ್ಟಿಯಾಗುವ ತ್ಯಾಜ್ಯವೂ ಅತ್ಯಾಧುನಿಕವಾಗೇ ಇರುತ್ತದೆ. ವರುಷಗಳೇ ಕಳೆದರೂ ಅವು ಮಣ್ಣಿನಲ್ಲಿ ಮಣ್ಣಾಗುವುದೇ ಇಲ್ಲ. ಇನ್ನು ನಾವು ಬಾಡಿಗೆಗೆ ಪಡೆದ ಮನೆಯನ್ನೇ ಸ್ವಂತದ್ದರಂತೆ ಸ್ವಚ್ಚವಾಗಿಟ್ಟುಕೊಳ್ಳಲು ಯೋಚಿಸುವ 'ನಾಗರೀಕ'ರಾದ ನಾವು, ನಮ್ಮ ನಗರವನ್ನು ಹೇಗೆತಾನೇ ಶುಚಿಯಾಗಿಟ್ಟುಕೊಂಡೇವು? ಕಂಡಲ್ಲಿ ಉಗುಳುತ್ತೇವೆ,  ರಾತ್ರೆ 9 ದಾಟಿದ ಮೇಲೆ ಮೆಲ್ಲನೆ ಕಸದ ಕಂತೆಯನ್ನ ಹಿಡಿದು ಹೊರಬಂದು 'ಇಲ್ಲಿ ಕಸ ಹಾಕಬಾರದು' ಎಂಬ ಫಲಕವೇ ಮುಚ್ಚಿಹೋಗುವಷ್ಟು ಕಸದ ರಾಶಿಯನ್ನೆಸೆದು ತಣ್ಣಗೆ ನಮ್ಮ-ನಮ್ಮ ಮನೆ ರೂಮುಗಳನ್ನ ಸೇರಿಕೊಳ್ಳುತ್ತೇವೆ. 

ನಾಲ್ಕೈದು ಜನ ಕೂರಬಹುದಾದ ದೈತ್ಯ ಕಾರಿನಲ್ಲಿ ನಮ್ಮ 'ಘನತೆ'ಯನ್ನಷ್ಟೇ ಪಕ್ಕದಲ್ಲಿ ಕೂರಿಸಿಕೊಂಡು, ಟ್ರಾಫಿಕ್ ಜ್ಯಾಮ್, ಇಂಧನವ್ಯಯ, ಮಾಲಿನ್ಯಗಳ ಬಗ್ಗೆ ಯೋಚಿಸದೇ ಪ್ರಯಾಣಿಸುತ್ತೇವೆ. ಬತ್ತಿಹೋದ ಕೆರೆಯ ತುಂಬಾ ಮಣ್ಣುಹೊಯ್ದು ಎತ್ತರೆತ್ತರದ ಅಪಾರ್ಟಮೆಂಟಗಳನ್ನ ಕಟ್ಟುತ್ತೇವೆ. ಅಪ್ಪಿತಪ್ಪಿ ನೀರಿರುವ ಕೆರೆಯೇನಾದರೂ ಕಂಡರೆ ನಗರದ ಸಕಲ ಮೋರಿಗಳ ನೀರನ್ನೂ ಅಲ್ಲಿಗೇ ಹರಿಸುತ್ತೇವೆ. ಹೀಗೆ ಮಾಲಿನ್ಯ-ಅಸಮತೋಲನಗಳಿಗೆ ನಮ್ಮ ಕೈಲಾದಷ್ಟೂ ಕೊಡುಗೆಗಳನ್ನು ಬಿಚ್ಚುಗೈಯಿಂದ ನೀಡುತ್ತೇವೆ!

ಹೌದು. ಇಂದು ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ಸಮಸ್ಯೆಗಳಾದ ಗಾಳಿ,ಜಲ,ಶಬ್ದ ಮತ್ತು ಭೂ ಮಾಲಿನ್ಯಗಳಾಗಲೀ, ಹೆಚ್ಚುತ್ತಿರುವ ತಾಪಮಾನಕ್ಕಾಗಲೀ, ಹಿಮಕರಗಿ ಏರುತ್ತಿರುವ ಸಮುದ್ರಮಟ್ಟಕ್ಕಾಗಲೀ, ಅತಿವೃಷ್ಟಿ-ಅನಾವೃಷ್ಟಿಗಳಿಗಾಗಲೀ ಸಿಂಹಪಾಲು ಕಾರಣವಾಗಿರುವುದು ನಗರಗಳೇ. ಚೀನಾದ ಕೆಲವು ನಗರಗಳಲ್ಲಿ ಬೆಳಗಿನಜಾವದ ಮಜಿಗಿಂತಲೂ ಗಾಢವಾಗಿ ಕವಿದಿರುವ ಹೊಗೆಯ ಮೋಡಗಳನ್ನು ಕಾಣಬಹುದೆದಂದು ಪತ್ರಿಕೆಗಳು ವರದಿಮಾಡಿದ್ದವು. ಹಾಗಾದರೇ ಆಧುನೀಕರಣ ಬರಲೇಬಾರದಿತ್ತಾ? ನಗರೀಕರಣವಾದದ್ದೇ ತಪ್ಪಾ? ಖಂಡಿತ ಅಲ್ಲ. ಪ್ರತಿಯೊಂದು ಸಂಗತಿಯಲ್ಲೂ ಅನುಕೂಲ ಹಾಗೂ ಅನಾನುಕೂಲಗಳೆಂಬ ಎರೆಡು ಮುಖಗಳಿದ್ದೇ ಇರುತ್ತವೆ. ಅನುಕೂಲಕ್ಕಾಗಿ ಅದನ್ನು ಬಳಸಿಕೊಳ್ಳುವ ನಾವು ಅದರಿಂದಾಗುವ ಸಮಸ್ಯೆಗಳ ಅರಿವಿದ್ದೂ ಅದನ್ನ ಗಂಭೀರವಾಗಿ ಪರಿಗಣಿಸದೇ ಹೋದದ್ದು ಮಾತ್ರ ತಪ್ಪು. 

ಹೇಗೆ ಸಮಸ್ಯೆ ನಮ್ಮಿಂದಾರಂಭವಾಗಿದೆಯೋ ಹಾಗೆಯೇ ಅದರ ಪರಿಹಾರವೂ ನಮ್ಮೊಳಗೇ ಇದೆ. ಅದಕ್ಕಾಗಿ ನಾವೇನೂ ಬಸ್ಸು, ಕಾರು, ವಿಮಾನಗಳನ್ನೆಲ್ಲ ಕುಟ್ಟಿ ಪುಡಿಮಾಡಿ ಸಮುದ್ರಕ್ಕೆಸೆಯಬೇಕಿಲ್ಲ; ಆಧುನಿಕ ಉಪಕರಣಾದಿಗಳನ್ನ ಬದಿಗೊತ್ತಿ ಸೊಪ್ಪ-ತೊಗಟೆಗಳನ್ನ ಮೈಗೆ ಸುತ್ತಿಕೊಂಡು ಮತ್ತೆ ಆದಿಮಾನವರಾಗಬೇಕಿಲ್ಲ.ಬರೀ ನಮ್ಮ ಅನುಕೂಲದ ಪರಿಧಿಯಲ್ಲಿ ಕುಳಿತು ಯೋಚಿಸುವುದನ್ನು ಬಿಟ್ಟು, ಅದರಾಚೆಗೆ ಬಂದು ನಮ್ಮ ಸುತ್ತಲಿನ ಹದಗೆಟ್ಟ ಪರಿಸ್ಥಿತಯನ್ನ ಒಮ್ಮೆ ನೋಡಬೇಕು. ಅದರಲ್ಲಿ ನಮ್ಮ ಪಾತ್ರ ಏನೆಂಬುದನ್ನ ಮನಗಾಣಬೇಕು ಮತ್ತು ತಿದ್ದಿಕೊಳ್ಳಬೇಕು. ಬಲುಮುಖ್ಯವಾಗಿ ಮಿತಿಮೀರಿದ ಹಾಗೂ ಪರಿಸರದ ಸಮತೋಲನವನ್ನು ಹಾಳುಮಾಡುವಂತಹ ಕಾರ್ಯಚಟುವಟಿಕೆಗಳನ್ನು ನಿಯಂತ್ರಣದಲ್ಲಿಡಬೇಕು.ಹೀಗೆ ವ್ಯಕ್ತಿ-ವ್ಯಕ್ತಿಯಿಂದ ಆರಂಭವಾಗುವ ಬದಲಾವಣೆಗಳು ಮುಂದೆ ಸಮಾಜವನ್ನೇ ಸುಧಾರಿಸುತ್ತವೆ. 

ಇವೆಲ್ಲಾ ಆಧುನೀಕರಣ ಹಾಗೂ ನಗರೀಕರಣದಿಂದ ಪರಿಸರದ ಮೇಲಾದ ಪರಿಣಾಮಗಳು. ಹಾಗೆಯೇ ಇಷ್ಟೇ ಪ್ರಮಾಣದಲ್ಲಿ ಇವುಗಳ ಪ್ರಭಾವಕ್ಕೊಳಗಾದ ಮತ್ತೆರೆಡು ಸಂಗತಿಗಳೆಂದರೆ ನಮ್ಮ ಸಂಸ್ಕೃತಿ ಮತ್ತು ನಮ್ಮ ಹಳ್ಳಿಗಳು. ಆಧುನೀಕರಣದ ಹೆಸರಲ್ಲಿ ಬೆಳೆದುನಿಂತ ನಗರಗಳಲ್ಲಿ ಮೆಲ್ಲನೆ ಹಬ್ಬುತ್ತಾ ಹೋದದ್ದು ಪಾಶ್ಚಾತ್ಯ ಸಂಸ್ಖೃತಿಯ ಪ್ರಭಾವ. ಅಲ್ಲಿನ ವಸ್ತ್ರ ವಿನ್ಯಾಸ, ಶಿಕ್ಷಣ, ಜೀವನ ಶೈಲಿಗಳು ಮಾತ್ರವಲ್ಲದೇ ಕೊನೆಗೆ ಅಲ್ಲಿರುವ ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಬಂಧಗಳ ಪರಿಕಲ್ಪನೆಯನ್ನೂ ಸಹಾ ನಗರಗಳು ಮೈಗೂಡಿಸಿಕೊಂಡವು. ಒಂದು ಮಟ್ಟಕ್ಕೆ ಇದರಿಂದ ಸಮಾಜಕ್ಕೆ ಒಳಿತೇ ಆಯಿತು. ಎಷ್ಟೋ ಮೌಢ್ಯಗಳೂ, ಕುರುಡು ಆಚಾರಗಳ ಕುರಿತಾದ ನಂಬಿಕೆಗಳು ಬದಲಾದವು.ಜಾತಿ-ಧರ್ಮಗಳ ನಡುವಿನ ಕಂದಕಗಳ ಆಳ ಕೊಂಚ ಕಡಿಮೆಯಾಯಿತು. ಆದರೆ ಹಳ್ಳಿ ಬದುಕಿನ ಅತಿ ಸುಂದರ ಪದ್ಧತಿಗಳಾದ ಕೊಡು-ಕೊಳ್ಳುವಿಕೆಗಳೂ, ಸಹಕಾರ ಮನೋಭಾವಗಳೂ ನಗರ ಬದುಕಿನಲ್ಲಿ ಕೊಚ್ಚಿಹೂದವು. ನೆರೆ-ಹೊರೆಯೆನ್ನುವ ಕಲ್ಪನೆ ಮರೆಯಾಗಿ ಪಟ್ಟಣವೆನ್ನುವುದು ಅಪರಿಚಿತ ಸಂತೆಯಂತಾಗಿಬಿಟ್ಟಿದೆ. ಇನ್ನು ಕೃಷಿಯ ತವರಾದ ಹಳ್ಳಿಗಳಿಂದ ಜನ ವಿಮುಖರಾಗುತ್ತಿರುವುದು ಭವಿಷ್ಯಕ್ಕೆ ದೊಡ್ಡ ಸವಾಲು. ವ್ಯವಸಾಯ ರಂಗದಲ್ಲಿರುವ ನೂರೆಂಟು ತೊಡಕುಗಳು, ಅಭದ್ರತೆ, ಆತಂಕಗಳನ್ನು ನೋಡಿ ದಣಿದಿರುವ ಯುವ ಪೀಳಿಗೆ ನಗರ ಜೀವನದ ಸೊಬಗಿಗೆ ಮರುಳಾಗುತ್ತಿದೆ. ಕೆಲವೊಮ್ಮೆ ಇದು ಅನಿವಾರ್ಯವೂ ಹೌದು. ನಗರದ ಶ್ರಮರಹಿತ ಜೀವನ ಭೌತಿಕ ಹಾಗೂ ಮಾನಸಿಕವಾಗಿ ಮನುಷ್ಯನನ್ನು ದುರ್ಬಲಗೊಳಿಸುತ್ತಿದೆ. ಆದರೆ ಎದುರು   ಹೊಳೆಯುತ್ತಿರುವ ವೈಭವ ಕಣ್ಣಿಗೆ ಕಾಣುತ್ತದೇ ಹೊರತು ಅದರಾಳದಲ್ಲಿ ಮರೆಯಾಗಿ ಬೆರೆತಿರುವ ಅಪಾಯಗಳು ಗೋಚರವಾಗುವುದೇ ಇಲ್ಲ!

ನಗರಗಳು ನಗರಗಳಾಗೇ ಇರಲಿ, ಹಳ್ಳಿಗಳು ಹಳ್ಳಿಗಳಾಗೇ ಇರಲಿ. ಆದರೆ ಅಭಿವೃದ್ಧಿ ಎನ್ನುವುದು ಮಾತ್ರ ಈ ಎರೆಡರಲ್ಲೂ ವ್ಯಾಪಿಸಬೇಕು. ಕೈಗಾರಿಕಾ ಕ್ರಾಂತಿಯಂತೆಯೇ ಕೃಷಿವಲಯದಲ್ಲೂ ಹಸಿರುಕ್ರಾಂತಿಯಾಗಬೇಕು. ಎರೆಡೂ ಕಡೆ ಸ್ವಚ್ಛತೆಯೂ ಸೆರಿದಂತೆ ಇನ್ನಿತರ ಮೂಲಭೂತ ವಿಷಯಗಳು ವೃದ್ಧಿಯಾಗಬೇಕು. ಅಗತ್ಯತೆಗನುಗುಣವಾಗಿ ಸೌಲಭ್ಯಗಳು ಹಂಚಿಕೆಯಾಗಬೇಕು. ಆರ್ಥಿಕ ಸುಸ್ತಿಥಿಗಳಿಸಲು ನಗರಕ್ಕೇ ಹೋಗಬೇಕೆನ್ನುವ ಬದಲು ಹಳ್ಳಿಗಳಲ್ಲೇ ಪರ್ಯಾಯ ಜೀವನೋಪಾಯಗಳನ್ನ ಕಂಡುಕೊಳ್ಳಬೇಕು. ತುಂಬಾ ಮುಖ್ಯವಾಗಿ ಈ ಅಂಶಗಳೆಲ್ಲವೂ  ನಮಗೆ ಮನದಟ್ಟಗಬೇಕು. ಆಗಲೇ ಅಭಿವೃದ್ಧಿ ಹಾಗೂ ನಗರೀಕರಣಗಳ ನಿಜವಾದ ಲಾಭ ಸಮಾಜಕ್ಕೆ ಸಿಗಲು ಸಾಧ್ಯ.

('ಅಖಿಲ ಕರ್ನಾಟಕ ಪ್ರಥಮ ಯುವಕವಿ ಸಮ್ಮೇಳನ'ದ ಸ್ಮರಣ ಸಂಚಿಕೆಗಾಗಿ ಬರೆದ ಲೇಖನ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...