ಗುರುವಾರ, ಡಿಸೆಂಬರ್ 14, 2017

ಪರಮೇಶಿ ಪರಾಕ್ರಮ

ಪರಮೇಶಿಗೆ ಪತ್ತೇದಾರಿ ಕಾದಂಬರಿಗಳೆಂದರೆ ಇನ್ನಿಲ್ಲದ ಹುಚ್ಚು. ತನ್ನ ಚಾಣಾಕ್ಷ ಬುದ್ಧಿಯಿಂದ ಖಳರ ಜೊತೆಗೆ ಸೆಣೆಸುತ್ತಾ, ಕೊಲೆಗಾರನನ್ನು ಸೆರೆಹಿಡಿಯುತ್ತಾ, ನಾಯಕಿಯನ್ನು ಇಂಪ್ರೆಸ್ ಮಾಡುವ ನಾಯಕನೊಂದಿಗೆ ತನ್ನನ್ನು ಹೋಲಿಸಿಕೊಂಡು ಹಗಲುಗನಸು ಕಾಣುವುದು ಪರಮೇಶಿಯ ನೆಚ್ಚಿನ ಅಭ್ಯಾಸಗಳಲ್ಲೊಂದು. ಬನೀನು ತೊಟ್ಟ ಬೇತಾಳದಂತಿರುವ ತನ್ನ ಭುಜಬಲದ ಮೇಲೆ ಅವನಿಗೊಂದು ತೆರನಾದ ಅಭಿಮಾನ. ಸಣ್ಣವನಿದ್ದಾಗ ತನಗಿಂತ ನಾಲ್ಕುಪಟ್ಟು ದಪ್ಪವಿದ್ದ ಕೋದಂಡನೊಂದಿಗೆ ಹೇಗೆ ಸೆಣೆಸಿದ್ದನೆನ್ನುವುದನ್ನು ಈಗಲೂ ನೆನಪಿಸಿಕೊಂಡು ಮೀಸೆ ತಿರುವಿಕೊಳ್ಳುವ ಪರಮೇಶಿ ಸದಾ ಚಿಕ್ಕ ತೋಳಿನ, ಮೈಗೆ ಅಂಟಿಕೊಂಡಂತಿರುವ ಬಟ್ಟೆಗಳನ್ನೇ ಧರಿಸುತ್ತಾನೆ‌. ಕನ್ನಡಿ ಕಂಡರೆ ಸಾಕು, ಪರಮೇಶಿಯ ಅಂಗಿ ಅವನ ಮೈಮೇಲೆ ನಿಲ್ಲುವುದಿಲ್ಲ. ಹಲ್ಮಟ್ಟೆ ಕಚ್ಚಿಹಿಡಿದು, ವಾರಗಳ ಹಿಂದೆ ಒಣಗಿಹೋದ ನುಗ್ಗೇಕಾಯಿಯಂತಿರುವ ತನ್ನ ಮಾಂಸಖಂಡಗಳನ್ನು ಬಿಗಿಗೊಳಸಿ "ಹೂಂ" ಎಂದು ಹೂಂಕರಿಸುತ್ತಾನೆ. ಇನ್ನೇನು ಮುರಿದು ಹೋಗುವಂತಿರುವ ಅವನ ಮೂಳೆಗಳನ್ನು ಕಂಡ ಕನ್ನಡಿ ಗಡಗಡನೆ ನಡುಗುತ್ತದೆ.

ಊರಿನಲ್ಲಿ ಡಿಗ್ರಿ ಓದುತ್ತಿದ್ದ ದಿನಗಳಲ್ಲಿ ಮನೆಯಲ್ಲಿದ್ದ ತೂಕದ ಕಲ್ಲು, ಕಬ್ಬಿಣದ ಸರಳೇ ಮುಂತಾದ ಭಾರದ ವಸ್ತುಗಳನ್ನೆಲ್ಲ ಹೇಗ್ಹೇಗೋ ಎತ್ತಿಳಿಸಿ ವ್ಯಾಯಾಮ ಮಾಡುತ್ತಾ ಮನೆಯವರನ್ನೆಲ್ಲ ಭಯಬೀಳಿಸುತ್ತಿದ್ದ ಪರಮೇಶಿ  ಕಳೆದ ಆರು ತಿಂಗಳಿಂದ ಪ್ರತಿದಿನ ಜಿಮ್'ಗೆ ಹೋಗುತ್ತಿದ್ದಾನೆ. ಇವನ ದೇಹದಾರ್ಢ್ಯವನ್ನು ಹೆಚ್ಚಿಸಬಲ್ಲ ಯಾವ ಉಪಕರಣವೂ ಅಲ್ಲಿಲ್ಲವೆನ್ನುವುದು ಬೇರೆ ವಿಷಯ ಬಿಡಿ. ಅಲ್ಲಿ ಮೊದಲ ದಿನ ಅಂಗಿ ಕಳಚಿದಾಗ ಇವನ ಡಯೆಟ್ ಮಾಡದೇ ಬಂದಿರುವ ಸಿಕ್ಸ್ ಪ್ಯಾಕನ್ನು ನೋಡಿ ಟ್ರೈನರ್ ಕೂಡಾ ಬೆಚ್ಚಿಬಿದ್ದದ್ದು ಈಗ ಇತಿಹಾಸ. ಅಲ್ಲದೇ ಸಂಜೆ ತನ್ನ ರೂಮಿನೆದುರಿಗಿನ ಪಾರ್ಕಿನಲ್ಲಿ ಮಕ್ಕಳಿಗೆ ಹೇಳಿಕೊಡುವ ಕರಾಟೆಯ ಪಟ್ಟು-ಪೆಟ್ಟುಗಳನ್ನು ಪರಮೇಶಿ ಆಸಕ್ತಿಯಿಂದ ನೋಡಿಕೊಳ್ಳುತ್ತಾನೆ. ರೂಮ್ ಮೇಟ್ ಇಲ್ಲದ ಹೊತ್ತಿನಲ್ಲಿ 'ಕ್ಯೂ ಯಾ ಹೈ....' ಎಂಬ ಭಯಾನಕ ಕೂಗಿನೊಂದಿಗೆ ಕರಾಟೆ ಅಭ್ಯಾಸಕ್ಕೆ ತೊಡಗಿದನೆಂದರೆ ಗೋಡೆಯ ಮೇಲಿರುವ ಹಲ್ಲಿ, ಜೇಡ, ಜಿರಳೆಗಳೆಲ್ಲ ಬಿದ್ದು ಓಡತೊಡಗುತ್ತವೆ‌.

ಪರಮೇಶಿಯ ಸಣಕಲು ದೇಹದ ಹಿಂದಿರುವ ಅಗಾಧ ಶಕ್ತಿಯ ಅರಿವಿಲ್ಲದ ಗೆಳೆಯರು ಅವನನ್ನು ಹಾಸ್ಯಮಾಡುತ್ತಾರೆ. ಆದರೆ ಇವತ್ತಲ್ಲ ನಾಳೆ ತನ್ನೊಳಗಿರುವ ಸಿಂಹ ಆಚೆಗೆ ಬರುತ್ತದೆನ್ನುವುದು ಪರಮೇಶಿಗೆ ಮಾತ್ರ ಗೊತ್ತಿರುವ ಸತ್ಯ. ತನ್ನ ಕಲ್ಪನೆಯಲ್ಲಿ ತಾನು ಖಳರೊಂದಿಗೆ ಹೇಗೆ ಸೆಣೆಸುತ್ತೇನೆಂದು ಗೊತ್ತಿಲ್ಲದೆ ಮಾತಾಡುವ ಅವರನ್ನು ನೋಡಿ ಒಳಗೊಳಗೇ ನಗುವ ಪರಮೇಶಿ ಆಫೀಸಿನ ಸುಂದರಿ- ರಿಸೆಪ್ಷನಿಸ್ಟು ಲೀಶಾಳನ್ನು ಸಹಾ ಅನೇಕ ಬಾರಿ ರೌಡಿಗಳಿಂದ ಕಾಪಾಡಿದ್ದಾನೆ.

ಹೀಗಿದ್ದಾಗ ಪರಮೇಶಿಯ ಪರಾಕ್ರಮ ಜಗತ್ತಿಗೆ ತಿಳಿಯುವಂತಹಾ ಘಟನೆಯೊಂದು ನಡೆದೇಹೋಯಿತು. ಅದೊಂದು ಗಿಜಿಗುಡುತ್ತಿದ್ದ ಸೋಮವಾರ ಬೆಳಗ್ಗೆ ಯಾವುದೋ ಕೆಲಸದ ಮೇಲೆ ಬ್ಯಾಂಕಿಗೆ ಹೋಗಿದ್ದ ಪರಮೇಶಿ ಉದ್ದದ ಕ್ಯೂನಲ್ಲಿ ನಿಂತು ಚಲನ್ ತುಂಬುವುದರಲ್ಲಿ ನಿರತನಾಗಿದ್ದ. ಎಲ್ಲರೂ ತಂತಮ್ಮ ಕೆಲಸಗಳಲ್ಲಿ ಮುಳುಗಿಹೋಗಿದ್ದರು.

ಆಗ ಕೇಳಿತು ಅಪಾಯದ ಸೈರನ್!

ಆಗಲಿರುವ ಅನಾಹುತವೇನೆಂಬುದನ್ನು ಹೇಳದೇ ಕ್ಯೂಂವ್ ಕ್ಯೂಂವ್ ಎಂದು ಒಂದೇ ಸಮನೆ ಬಾಯ್ಬಡಿದುಕೊಳ್ಳತೊಡಗಿದ ಸೆಕ್ಯೂರಿಟಿ ಸೈರನ್ನಿಗೆ ನಿಂತ, ಕುಳಿತ, ಓಡಾಡುತ್ತಿದ್ದ ಗ್ರಾಹಕರೆಲ್ಲರೂ ದಂಗಾಗಿ ಸುತ್ತಲೂ ನೋಡತ್ತಿರುವಾಗಲೇ ದಪ್ಪ ಮೀಸೆಯ, ಕೈಯ್ಯಲ್ಲಿ ಮಾರುದ್ದದ ರೈಫಲ್ ಹಿಡಿದ ಠೋಣಪನೊಬ್ಬ ಬ್ಯಾಂಕಿನ ಒಳಗೆಬಂದು ಬಾಗಿಲುಹಾಕಿಬಿಟ್ಟ!

ಹೈಜಾಕ್!

ನೂರಾರು ಪತ್ತೇದಾರಿ ಕಾದಂಬರಿ, ಸಿನೆಮಾಗಳನ್ನು ನೋಡಿ ಪಳಗಿದ್ದ ಪರಮೇಶಿಯ ಚತುರ ಬುದ್ಧಿ ಕ್ಷಣಾರ್ಧದಲ್ಲಿ ಹಾಗೆಂದು ನಿರ್ಧರಿಸಿಬಿಟ್ಟಿತು. ಅವನು ನಿಂತ ಜಾಗದಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿ ಕೈಯ್ಯಲ್ಲಿ ಮಾರುದ್ದದ ರೈಫಲ್ ಹಿಡಿದ ಆ ಕ್ರೂರಮುಖದ ಉಗ್ರಗಾಮಿ ನಡೆದುಬರುತ್ತಿದ್ದ. ಇದೇ ಸರಿಯಾದ ಸಮಯ, ತನ್ನ ನಿಜವಾದ ತಾಕತ್ತೇನೆನ್ನುವುದನ್ನು ಜಗತ್ತಿಗೆ ತೋರಿಸಬೇಕು... ಪರಮೇಶಿಯೊಳಗಿನ ಸಿಂಹ ಬಾಲ ಬೀಸತೊಡಗಿತು.

"ಕ್ಯೂ.. ಯಾ... ಹೈ.."

ಸಾಲಿನಲ್ಲಿ ಹಿಂದೆ ಮುಂದೆ ನಿಂತವರೆಲ್ಲ ಬೆಚ್ಚಿಬೀಳುವಂತೆ ಕಿರುಚಿದ ಪರಮೇಶಿ ಛಂಗನೆ ಕುಪ್ಪಳಿಸಿ ಮುಂದಡಿಯಿಡುತ್ತಿದ್ದ ಆತಂಕವಾದಿಯ ಹೊಟ್ಟೆಗೆ ಬಲವಾಗಿ ಒಂದೇಟುಹಾಕಿದ. ತೀರಾ ಅನಿರೀಕ್ಷಿತವಾಗಿದ್ದ ಈ ಪ್ರಹಾರಕ್ಕೆ ಬೆಚ್ಚಿದ ಅವನು ಎರೆಡು ಹೆಜ್ಜೆ ಹಿಂದಕ್ಕೆ ಸರಿದ‌ನಾದರೂ ಮರುಕ್ಷಣವೇ ಸುಧಾರಿಸಿಕೊಂಡು ಪರಮೇಶಿಯ ಮೇಲೆರಗಿದ. ನೋಡನೋಡುತ್ತಿದ್ದಂತೆಯೇ ಬ್ಯಾಂಕಿನ ಆವರಣ ರಣರಂಗವಾಗಿ ಹೋಯಿತು. ಮುಂದಿನ ಮೂರು ನಿಮಿಷಗಳ ಕಾಲ ನಡೆದ ಭೀಕರ ಹೋರಾಟದಲ್ಲಿ ಪರಮೇಶಿಗೆ ಆಶ್ಚರ್ಯವಾಗುವಂತಹಾ ಘಟನೆಯೊಂದು ನಡೆದುಹೋಯಿತು. ಪರಮೇಶಿಯ ಪ್ರತಿಯೊಂದು ಕರಾಟೆ ಪಟ್ಟಿಗೂ ತಕ್ಕ ಪ್ರತ್ಯುತ್ತರ ನೀಡುತ್ತಿದ್ದ ಆತಂಕವಾದಿಯ ಜೊತೆಗೆ ಪ್ಯೂನ್ ಪಾಪಣ್ಣ ಹಾಗೂ ಕ್ಯಾಶಿಯರ್ ಕಾಮರಾಜ್ ಕೂಡಾ ಸೇರಿಕೊಂಡುಬಿಟ್ಟರು. ಇದೇನಿದು ಆಶ್ಚರ್ಯ? ಇವರೂ ಸಹಾ ಆತಂಕವಾದಿಯ ಜೊತೆಗೆ ಶಾಮೀಲಾಗಿದ್ದಾರಾ? ಹಾಗೆಂದು ಯೋಚಿಸುತ್ತಲೇ ಪರಮೇಶಿ ತನ್ನ ಧಾಳಿಯನ್ನು ತೀವ್ರಗೊಳಿಸಿದ. ಆದರೆ ಮುಂದಿನ ಕೆಲವೇ ನಿಮಿಷಗಳಲ್ಲಿ ಮೂವರೂ ಸೇರಿ ಭೀಕರವಾಗಿ ಎಗರಾಡುತ್ತಿದ್ದ ಪರಮೇಶಿಯನ್ನು ಹಿಡಿದು ಒಂದು ಹದಕ್ಕೆ ತಂದರು.

ತಾನು ಅಷ್ಟೆಲ್ಲ ವೀರಾವೇಶದಿಂದ ಹೋರಾಡಿದ್ದು ಯಾವುದೋ ಅಲ್-ಖೈದಾ ಉಗ್ರವಾದಿಯೊಂದಿಗೆ ಅಲ್ಲವೆಂದೂ, ಅಚಾನಕ್ಕಾಗಿ ಕೂಗತೊಡಗಿದ ಸೈರನ್ನನ್ನು ಪರೀಕ್ಷಿಸಲೆಂದು ಒಳಗೆ ಬಂದಿದ್ದ, ಆಗಷ್ಟೇ ಡ್ಯೂಟಿಗೆ ಹಾಜರಾಗಿ ಇನ್ನೂ ಯೂನಿಫಾಮ್ ತೊಡದ ಬ್ಯಾಂಕಿನ ಸೆಕ್ಯೂರಿಟಿ ಗಾರ್ಡ್ ಶೇರ್ ಸಿಂಗ್'ನ ಜೊತೆಯೆಂದೂ ಅರ್ಥವಾಗುವ ಹೊತ್ತಿಗೆ ಪರಮೇಶಿಯನ್ನು ಅವನೊಳಗಿನ ಸಿಂಹದ ಜೊತೆಗೇ ಹೆಡೆಮುರಿಕಟ್ಟಿ ಮೂಲೆಯಲ್ಲಿ ಕೂರಿಸಲಾಗಿತ್ತು.

('ಮಂಗಳ'ದಲ್ಲಿ ಪ್ರಕಟಿತ)

ಭಾನುವಾರ, ನವೆಂಬರ್ 12, 2017

ಪುಳಿಯೋಗರೆ ಉಡ್ಡಯನ!



ಬ್ರಹ್ಮಚಾರಿ ಜೀವನದ ಸಾರ್ವತ್ರಿಕ ಸಮಸ್ಯೆಗಳಲ್ಲಿ ಅಡಿಗೆ ಮಾಡಿಕೊಳ್ಳುವುದೂ ಒಂದು ಎನ್ನುವುದು ನನಗೆ ತುಂಬಾ ತಡವಾಗಿ ಅರ್ಥವಾದ ಸತ್ಯ. ಈ ಮೊದಲು ಕೆಲವು ಗೆಳೆಯರು "ಹೊರಗಡೆ ತಿಂದೂ ತಿಂದೂ ಸಾಕಾಗಿದೆ ಮಗಾ. ಬೇಗ ಮದುವೆ ಆಗ್ಬೇಕು" ಎಂದರೆ "ಅಲ್ವೋ ಒಂದು ಪ್ಲೇಟ್ ಚಿತ್ರಾನ್ನ, ಎರೆಡು ಪ್ಲೇಟ್ ಸೌತ್ ಮೀಲ್ಸ್'ಗೋಸ್ಕರ ಫೈವ್ ಸ್ಟಾರ್ ಹೋಟೆಲ್ನೇ ಪರ್ಚೇಸ್ ಮಾಡ್ತೀನಿ ಅಂತೀಯಲ್ಲೋ" ಎಂದು ತೀರಾ ಉಡಾಫೆಯಿಂದ ನಗುತ್ತಿದ್ದೆ. ಹುಟ್ಟಿದ ಮೊದಲ ಇಪ್ಪತ್ತೊಂದು ವರ್ಷ ಅಮ್ಮನ ಕೈಯ್ಯಡಿಗೆ ಸವಿಯುತ್ತಾ ಕಳೆದವನು ನಾನು. ನನ್ನ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ, ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ಮೊದಲ ಎರೆಡು ಕಂಪನಿಯವರೂ ಅತೀ ಕಡಿಮೆಬೆಲೆಗೆ ಮೂರು ಹೊತ್ತೂ ಊಟ ಕೊಟ್ಟಿದ್ದರು. ಇನ್ನು ರಜೆ ಇದ್ದ ಶನಿವಾರ ಭಾನುವಾರಗಳ ಬೆಳಗ್ಗೆ ಹಸಿವಾದರೆ ಅಕ್ಕಿ ಗಂಜಿ, ಇಲ್ಲದಿದ್ದರೆ ಹಾಪ್ ಕಾಮ್ಸ್'ನ ಬಾಳೇಹಣ್ಣು. ಮಧ್ಯಾಹ್ನ, ರಾತ್ರೆಗಳ ಊಟಕ್ಕೆ ಒಂದೋ ನೆಂಟರ ಮನೆ, ಇಲ್ಲವಾದರೆ ಮುಕ್ಕಾಲು ಲೋಟ ಅಕ್ಕಿಯನ್ನು ಮುಕ್ಕಾಲು ಬಟ್ಟಲು ನೀರಿನಲ್ಲಿ ಮುಳುಗಿಸಿ, ಇಂಡಕ್ಷನ್ ಒಲೆಯಮೇಲಿಟ್ಟು ಬೇಯಿಸಿ ಕೊನೆಗೆ ತಯಾರಾಗುವ, ಹೆಚ್ಚೂಕಡಿಮೆ ಅನ್ನವನ್ನೇ ಹೋಲುವ ಪದಾರ್ಥವನ್ನು ಹತ್ತಿರದ ಹೋಟೆಲ್ನಿಂದ ತಂದ ಸಾಂಬಾರಿನಲ್ಲಿ ಕಲಸಿಕೊಂಡು ತಿನ್ನುತ್ತಾ "ಎಲ್ಲಾ ಸೋಂಬೇರಿಗಳೂ ಹೋಟೆಲ್ನಲ್ಲಿ ತಿನ್ನುವಾಗ ರೂಮ್ನಲ್ಲೇ ಅಡಿಗೆ ಮಾಡಿಕೊಳ್ಳೋ ನಾವೆಷ್ಟು ಶ್ರಮಜೀವಿಗಳು ಅಲ್ವಾ ಮಗಾ?" ಎಂದು ರೂಮ್ ಮೆಟ್ ಹತ್ರ ಜಂಭಕೊಚ್ಚಿಕೊಳ್ಳುತ್ತಿದ್ದೆ.  ಹೀಗೆ ಒಟ್ಟಾರೆ ಬದುಕಿನ ಇಪ್ಪತ್ತಾರು ವರ್ಷಗಳು ಅಡಿಗೆಯೆಂಬ ಉಸಿರಾಟದಷ್ಟೇ ಸಹಜವಾದ, ಆದರೆ ಅಷ್ಟೇ ನಾಜೂಕಾದ ಕ್ರಿಯೆಯನ್ನು ಕಲಿಯದೆಯೇ ಕಳೆದುಹೋಗಿತ್ತು. ಕಾಳುಶ್ರಮವಿಲ್ಲದೇ ತಿನ್ನುತ್ತಿದ್ದ ಆಹಾರವೇನೂ ಸುಮ್ಮನೆ ಗಂಟಲಿಗಿಳಿಯುತ್ತಿರಲಿಲ್ಲ. "ಇದೇನಮ್ಮ, ದಿನಾ ಇದೇ ದೋಸೆ, ಉಪ್ಪಿಟ್ಟು, ರೊಟ್ಟಿ ಮಾಡ್ತೀಯಾ", "ಯಾರ್ ಗುರೂ ಅಡಿಗೆ ಮಾಡಿದ್ದು? ಬರೀ ಬಟಾಣಿ ಹಾಕಿ ಬೇಯ್ಸಿದಾರೆ", " ಏನ್ರೀ ಇವ್ರು, ಅನ್ನ ಸರಿಯಾಗಿ ಬೆಂದೇ ಇಲ್ಲ. ಹೋದವಾರ ಮಾಡಿದ್ದೇ ಮತ್ತೆ ಮಾಡಿದಾರೆ" ಎಂಬ ಇನ್ನೂ ಮುಂತಾದ ಟೀಕೆಗಳು ಅನ್ನ ಇಳಿದ ಅದೇ ಗಂಟಲಿನಿಂದ ಹೊರಬರುತ್ತಿದ್ದವು. ಆದರೆ ಕೇವಲ ಮೊವತೈದು ರುಪಾಯಿಗೆ ತಿಂಗಳಿಡೀ ಊಟ ಕೊಡುತ್ತಿದ್ದ ಎರೆಡನೇ ಕಂಪನಿಯನ್ನೂ ಬಿಟ್ಟೆನೋಡಿ? ಆಗಲೇ ಗೊತ್ತಾಗಿದ್ದು- ಅನ್ನದ ಹಾಗೂ ಅನ್ನದಾತರ ಮಹತ್ವ.

ಊಟದ ಮಟ್ಟಿಗೆ ಹೊಸ ಕಂಪನಿ ಹೊಸ ಹೊಸ ಸಮಸ್ಯೆಗಳನ್ನೊಡ್ಡಿತ್ತು. ಮೊದಲ ದಿನ ಮಧ್ಯಾಹ್ನವೇ ಶುರುವಾಯಿತು ಊಟದ ಬೇಟೆ. ಕಂಪನಿಯಿದ್ದ ಸುಮಾರು ಅರ್ಧ-ಮುಕ್ಕಾಲು ಕಿಲೋಮೀಟರ್ ಸುತ್ತಳತೆಯಲ್ಲಿ ಒಂದೇ ಒಂದು ಚಿಕ್ಕ-ಚೊಕ್ಕ ಹೋಟೆಲ್ ಕಣ್ಣಿಗೆ ಬೀಳಲಿಲ್ಲ. ಇದ್ದ ಒಂದೇ ಒಂದು ಹೋಟೆಲಿಗೆ ನುಗ್ಗಿ 'ಒಂದು ಸೌತ್ ಮೀಲ್ಸ್' ಎಂದು ನೂರರ ನೋಟು ಚಾಚಿದೆ. ನೋಡ ನೋಡುತ್ತಿದ್ದಂತೆ ನನ್ನ ಕೈಲಿದ್ದ ನೂರರ ನೋಟನ್ನು ಕಸಿದುಕೊಂಡ ಕ್ಯಾಶಿಯರ್ ಬಡ್ಡೀಮಗ ಮರಳಿಕೊಟ್ಟಿದ್ದು ಬರೀ ಹತ್ತು ರೂಪಾಯಿಯನ್ನ! ಕೆಲವೇ ಸೆಕೆಂಡ್'ಗಳ ಕೆಳಗೆ ನೂರರ ನೋಟಿದ್ದ ಕೈಗೀಗ ಬರೀ ಹತ್ತರ ಹರಕು ನೋಟು ಬಂದ ಅದ್ಭುತವನ್ನು ಪೆಚ್ಚಾಗಿ ನೋಡುತ್ತಾ ನಿಂತ ನನಗೆ ಬೆಂಗಳೂರು ಸಿಂಗಾಪುರ ಆಗಿದೆ ಅನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ.

ಈಗ ಮಧ್ಯಾಹ್ನದೂಟಕ್ಕಿರುವ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸತೊಡಗಿದೆ. ಒಂದೊತ್ತಿನ ಊಟಕ್ಕೆ ಸಾವಿರಗಟ್ಟಲೆ ತೆರುವುದಕ್ಕೆ ನಾನು ಯಾವ ಅಂಬಾನಿಯ ಅಳಿಯನೂ ಅಲ್ಲ. ಅಮ್ಮ ಸೂಚಿಸಿದ 'ಮದುವೆ ಆಗ್ಬಿಡು' ಎನ್ನುವುದು ಅತ್ಯಂತ ದುಬಾರಿ ಹಾಗೂ ಅಪಾಯಕಾರಿ ಮಾರ್ಗ. ಇನ್ನುಳಿದ ಏಕೈಕ ದಾರಿ ರೂಮಿನಲ್ಲೇ ಮಾಡಿಕೊಳ್ಳುವುದು. ಅಂದಹಾಗೇ ಇದು ಈಗ ಹೊಳೆದ ಉಪಾಯವೇನೂ ಆಗಿರಲಿಲ್ಲ. ಈ ಕಂಪನಿಗೆ ಆಯ್ಕೆಯಾದಾಗ "ಮಧ್ಯಾಹ್ನ ಊಟಕ್ಕೇನು ಮಾಡ್ತೀಯ?" ಎಂದು ಕೇಳದವರಿಗೆಲ್ಲ "ಪುಳಿಯೋಗರೆ, ಚಿತ್ರಾನ್ನ, ಉಪ್ಪಿಟ್ಟು... ಹೀಗೇ ಏನಾದ್ರೂ ರೂಮಲ್ಲೇ ಮಾಡಿ ತಗೊಂಡೋಗ್ತೀನಿ" ಎಂದು ಎದೆಯುಬ್ಬಿಸಿಕೊಂಡು ಹೇಳಿದ್ದೆ. ಅವರು ಅಚ್ಚರಿಯಲ್ಲಿ "ಅರೆರೇ ಹೌದಾ? ಶಭಾಶ್!" ಎಂದು ಮೆಚ್ಚಿದಾಗ ವೀರ ಕರ್ನಲ್'ನಂತೆ ಮೀಸೆ ತಿರುವಿಕೊಂಡಿದ್ದೆ. ಆದರೆ ಅಪ್ಪೀತಪ್ಪೀ ಯಾರಾದರೂ ಒಬ್ಬ "ಏನು ಹಾಕಿ ಉಪ್ಪಿಟ್ಟು ಮಾಡ್ತೀಯಪ್ಪ ನಳಮಹಾರಾಜ?" ಎಂದು ಕೇಳಿದ್ದರೂ ಉತ್ತರಕ್ಕೆ ನಾಲ್ಕು ಆಪ್ಶನ್ ಕೇಳುತ್ತಿದ್ದೆನೆನ್ನುವುದು ನನಗೆ ಮಾತ್ರ ಗೊತ್ತಿದ್ದ ಸತ್ಯ! ಇನ್ನಷ್ಟೇ ಕಲಿತು ಅಡಿಗೆ ಮಾಡಬೇಕಾದವನು, ಈಗಾಗಲೇ ಬಂಡಿಗಟ್ಟಲೆ ಬೇಯಿಸಿ ಬಿಸಾಕಿರುವ ಬಾಣಸಿಗನಂತೆ ಫೋಸ್ ಕೊಟ್ಟಿದ್ದೆ. ಅದ್ಯಾವ ಶಕುನ ದೇವತೆ ಅಸ್ತು ಅಂದಿದ್ದರೋ ಗೊತ್ತಿಲ್ಲ, ಆ ಸುಳ್ಳು ಸತ್ಯವಾಗುವ ಕಾಲವೀಗ ಬಂದೇಬಿಟ್ಟಿತು.

ಸಂಜೆ ಬಂದವನೇ ನೇರ ಅಂಗಡಿಗೆ ಹೋಗಿ "ಪುಳಿಯೋಗರೆ ಮಿಕ್ಸ್ ಯಾವ್ದ್ಯಾವ್ದಿದೆ?" ಎಂದೆ. ಮುತ್ತಿಕೊಂಡಿದ್ದ ಗ್ರಾಹಕರ ನಡುವೆ ಸುಸ್ತಾಗಿದ್ದ ಅಂಗಡಿಯವನು "ಅಯ್ಯಂಗಾರ್ ಇದೆ ಕೊಡ್ಲಾ ಸರ್?" ಎಂದ. ನನಗೆ ಗೊತ್ತಿರೋ ಮಟ್ಟಿಗೆ ಈ ಅಯ್ಯಂಗಾರಿಗಳು ಎಂದರೆ ತಮಿಳುನಾಡಿನವರೋ, ಕೇರಳದವರೋ ಇರಬೇಕು. "ಅವರ ಶೈಲಿ ನಂಗೆ ಅಷ್ಟಾಗಿ ಆಗಿಬರೋಲ್ಲ. ನಮ್ಮೂರಿನ ಈ ಅಡಿಗ, ಐತಾಳ, ಭಟ್ಟ ಅಂತ ಯಾವ್ದಾದ್ರೂ ಇದ್ಯಾ ಗುರೂ?" ಎಂದು ಕೇಳಬೇಕೆಂದುಕೊಂಡೆ. ಆದರೆ ಅವನ ಪಕ್ಕದಲ್ಲಿದ್ದ ತಕ್ಕಡಿಯ ತೂಕದ ಕಲ್ಲು ಹಾಗೂ ಅವನ ಅಸಮಾಧಾನದ ಮುಖ ನೋಡಿ ಭಯವಾಗಿ 'ಭಾರತೀಯರೆಲ್ಲ ಒಂದೇ' ಎಂಬ ನಿರ್ಧಾರಕ್ಕೆ ಬಂದು "ಸರಿ, ಅಯ್ಯಂಗಾರನ್ನೇ ಕೊಡಿ" ಎಂದೆ. ಜೊತೆಗೆ ಎರೆಡು ವಾರಕ್ಕಾಗುವಷ್ಟು ಅಡಿಗೆ ಎಣ್ಣೆಯನ್ನೂ ಖರೀದಿಸಿ ರೂಮಿಗೆ ಬಂದು ಪವಡಿಸಿದೆ. ನಿದಿರೆಯಲ್ಲಿ ನಾನು ಭರ್ಜರಿ ಪುಳಿಯೋಗರೆ ಮಾಡಿದಂತೆ, ಅದನ್ನು ನನ್ನ ಹೊಸ ಸಹೋದ್ಯೋಗಿಗಳೆಲ್ಲ ಚಪ್ಪರಿಸಿಕೊಂಡು ತಿಂದು ಡರ್ರನೆ ತೇಗಿದಂತೆ ಕನಸು ಕಂಡು ಮಲಗಿದಲ್ಲೇ ಬೆನ್ನು ತಟ್ಟಿಕೊಂಡೆ.

ಕೊನೆಗೂ ನನ್ನ ಪುಳಿಯೋಗರೆ ಪ್ರಯೋಗದ ಹಗಲು ಬಂದೇಬಿಟ್ಟಿತು. ಒಂದು ಗಂಟೆ ಮುಂಚೆಯೇ ಎದ್ದು ಯಾವ ಫೈವ್ ಸ್ಟಾರ್ ಹೋಟೆಲಿನ ಅಡಿಗೆಭಟ್ಟನಿಗೂ ಕಮ್ಮಿ ಇಲ್ಲದಂತೆ ಆಪ್ರೋನ್ ಕ್ಲಾತ್ ಕಟ್ಟಿಕೊಂಡು ತಯಾರಾದೆ. ಒಂದು ಆ್ಯಂಗಲ್'ನಿಂದ ಅನ್ನದಂತೇ ಕಾಣುತ್ತಿದ್ದ ಪದಾರ್ಥವನ್ನು ತಯಾರಿಸಿ ಪಕ್ಕಕ್ಕಿಟ್ಟೆ.

ಮುಂದಿನ ಸರದಿ ಪುಳಿಯೋಗರೆ ಮಿಕ್ಸ್ ನದು!

ಸ್ಟೀಲ್ ಪಾತ್ರೆಯನ್ನು ಇಂಡಕ್ಷನ್ ಒಲೆಯ ಮೇಲಿಟ್ಟು ಚಾಲೂಮಾಡಿದೆ. ಪಾತ್ರೆಯೊಳಕ್ಕೆ ಪಾಮಾಯಿಲನ್ನು ಸುರಿದು ಬಾಯಿ ಒಡೆದ ಪುಳಿಯೋಗರೆ ಪೊಟ್ಟಣ ತೆಗೆದುಕೊಂಡೆ. ಅರೆಕ್ಷಣದಲ್ಲಿ ಎಣ್ಣೆ ಚಿಟಿಚಿಟಿಗುಟ್ಟಲು ಪ್ರಾರಂಭಿಸಿತು. ಅಲ್ಲಿಯ ತನಕ ಎಲ್ಲವೂ ಸರಿಯಾಗಿಯೇ ಇತ್ತು, ಆದರೆ ಕೈಲಿದ್ದ ಪೊಟ್ಟಣದ ಅಷ್ಟೂ ಪುಳಿಯೋಗರೆ ಪುಡಿಯನ್ನು ಪಾತ್ರೆಯೊಳಕ್ಕೆ ಸುರಿದು ಮುಖದ ತುಂಬಾ ಕಣ್ಣಿದ್ದ 'ಕಣ್ ಸೆಟ್ಗ'ದಿಂದ ಅಲ್ಲಾಡಿಸತೊಡಗಿದೆ ನೋಡಿ,  ಇದ್ದಕ್ಕಿದ್ದಂತೆಯೇ ಎದುರಿದ್ದ ಪಾತ್ರೆಯೊಳಗೆ ಕೋಲಾಹಲ ಆರಂಭವಾಯಿತು! ಒಳಗಿದ್ದ ಎಣ್ಣೆ ಈಗಷ್ಟೇ ಬಂದ ಅಪರಿಚಿತ ಪುಳಿಯೋಗರೆ ಪುಡಿಯ ಜೊತೆ ಚಿಟಿಚಿಟಿಯೆನ್ನುತ್ತಾ ಭೀಕರ ಹೋರಾಟಕ್ಕಿಳಿಯಿತು. ಬೇಯುತ್ತಿದ್ದ ಪುಳಿಯೋಗರೆ ಪುಡಿ ಕಪ್ಪುಬಣ್ಣಕ್ಕೆ ತಿರುಗತೊಡಗಿತು. ಈ ಮಾರಾಮಾರಿಕಂಡು ಗಾಬರಿಯಾದ ನಾನು ಒಲೆಯ ಸ್ವಿಚ್ ಆರಿಸಿ ಕೈ ಹಿಂದೆತರುತ್ತಿದ್ದೆ...

ಢಮಾರ್!

ಅದ್ಯಾವ ರಾಸಾಯನಿಕ ಕ್ರಿಯೆ ನಡೆಯಿತೋ, ಎಣ್ಣೆ-ಪುಳಿಯೋಗರೆಪುಡಿಗಳ ಅದ್ಯಾವ ಅಣು-ಪರಮಾಣುಗಳು ಕಚ್ಚಾಡಿಕೊಂಡವೋ ಗೊತ್ತಿಲ್ಲ, ದೊಡ್ಡ ಸದ್ದಿನೊಂದಿಗೆ ಸ್ಫೋಟ ಸಂಭವಿಸಿ ಪಾತ್ರೆಯೇ ಅಲ್ಲಾಡಿಹೋಯಿತು. ಬೆಚ್ಚಿಬಿದ್ದ ನಾನು ಬಾಂಬ್ ಸ್ಫೋಟಕ್ಕ ಸಿಲುಕಿದವನಂತೆ ಛಂಗನೆ ನೆಗೆದು ಪಕ್ಕದಲ್ಲಿದ್ದ ಮಂಚವೇರಿಕುಳಿತೆ!

ಸುಟ್ಟ ಹೊಗೆ, ಕರಟಿದ ವಾಸನೆ, ಮೇಜಿನ ಮೇಲೆಲ್ಲಾ ಚೆಲ್ಲಾಪಿಲ್ಲಿಯಾದ ಕಡಲೆಬೀಜ-ಪುಳಿಯೋಗರೆ ಪುಡಿಗಳು...  ಉಪಗ್ರಹವನ್ನು ಹೊತ್ತ ರಾಕೇಟೊಂದು ಈಗಷ್ಟೇ ಬಾಹ್ಯಾಕಾಶಕ್ಕೆ ಹಾರಿದ ಜಾಗದಲ್ಲಿ ಇರುವಂತಹಾ ಎಲ್ಲಾ ಲಕ್ಷಣಗಳೂ ಅಲ್ಲಿದ್ದವು. ಪುಣ್ಯಕ್ಕೆ ಒಲೆಯ ಸ್ವಿಚ್ಚನ್ನು ನಾನಾಗಲೇ ಆರಿಸಿದ್ದರಿಂದ ಸ್ಫೋಟ ಅಲ್ಲಿಗೇ ನಿಂತಿತು. ಆಗಿದ್ದಾದರೂ ಏನೆಂಬುದೇ ಅರಿವಾಗದೆ ಕಂಗಾಲದ ನಾನು ಮೆಲ್ಲನೆ ಸುಧಾರಿಸಿಕೊಂಡೆ. ನಾನು ಕೊಂಡು ತಂದದ್ದು ಪುಳಿಯೋಗರೆ ಪುಡಿಯೋ ಅಥವಾ ಬೇರ್ಯಾವ ಆಸ್ಫೋಟನಾಕಾರಿ ಸಾಮಗ್ರಿಯೋ ಎಂದು ಪರೀಕ್ಷಿಸಿದೆ. ಯಾರಿಗೆ ಗೊತ್ತು? ಆಲ್-ಖೈದಾದವರೋ, ಇನ್ಯಾವ ಉಗ್ರ ಸಂಘಟನೆಯವರೋ ಪುಳಿಯೋಗರೆ ಪ್ಯಾಕ್ನಲ್ಲಿ ಪುಡಿಪುಡಿ ಬಾಂಬ್ ತುಂಬಿಸಿ ಕಳಿಸಿರಲಿಕ್ಕೂ ಸಾಕು! ಅಥವಾ ಮೊದಲು ನಾನು ಅಯ್ಯಂಗಾರನ್ನು ಬೇಡ ಅಂದಿದ್ದನ್ನೇನಾದರೂ ಕೇಳಿಸಿಕೊಂಡ, ಇಲ್ಲೇ ಎಲ್ಲೋ ತೆಲಾಡುತ್ತಿರುವ ಯಾವದೋ ಅಯ್ಯಂಗಾರಿ ಆತ್ಮ ಹೀಗೆ ಮಾಡಿದ್ದರೂ ಮಾಡಿರಬಹುದು.

ಸಂಜೆ ಈ ಘಟನೆಯ ಕುರಿತಾದ ಸಮಗ್ರ ವರದಿಯೊಂದನ್ನು ತಯಾರಿಸಿ, ಗೆಳತಿಯೊಬ್ಬಳಿಗೆ ಒಪ್ಪಿಸಿ ಅವಳ ತಜ್ಞ ಅಭಿಪ್ರಾಯ ಕೇಳಿದೆ. ಎರೆಡು ನಿಮಿಷಗಳ ಕಾಲ ಸುಧೀರ್ಘವಾಗಿ ನಕ್ಕ ಅವಳು ಒಲೆಯ ಉಷ್ಣದ ಪ್ರಮಾಣ ಜಾಸ್ತಿ ಇದ್ದುದು ಹಾಗೂ ಸ್ಟೀಲ್ ಪಾತ್ರೆಗೆ ಪಾಮಾಯಿಲ್ ಹಿಡಿಸದೇ ಹೋಗಿದ್ದೇ ಈ ಸ್ಫೋಟಕ್ಕೆ ಕಾರಣವೆಂದು ತೀರ್ಪುಕೊಟ್ಟಳು. ಅಲ್ಲದೆ ತಾನು ಅಡಿಗೆ ಮಾಡತೊಡಗಿದ್ದ ಆರಂಭದಲ್ಲೂ ಹೀಗೇ  ಆಗುತ್ತಿತ್ತೆಂದು ಹೇಳಿ 'ಆಸ್ಫೋಟವಿಲ್ಲದೆ ಅಡಿಗೆ ಕಲಿತವರಿಲ್ಲವೈ' ಎಂದು ಸಮಾಧಾನಮಾಡಿದಳು.

ಅಂದು ಮಧ್ಯಾಹ್ನ ಮತ್ತೆ ಹೋಟೆಲ್ನಲ್ಲಿ ಹತ್ತರ ಹರಕು ನೋಟು ಹಿಡಿದುಕೊಂಡು ಸೋಡಬೆರೆಸಿದ ಅನ್ನತಿನ್ನುತ್ತಾ ಕುಳಿತಿದ್ದಾಗ ಹಿಂದಿನ ಕಛೇರಿಯಲ್ಲಿ ಪ್ರೀತಿಯಿಂದ ಬಡಿಸುತ್ತಿದ್ದ ಹೆಡ್ ಕುಕ್ ಅಜ್ಜಿ, ಮನೆಯಿಂದ ತಂದದ್ದನ್ನು ಹಂಚಿಕೊಳ್ಳುತ್ತಿದ್ದ ಸಹೋದ್ಯೋಗಿಗಳು, ಕೇಳಿದ್ದನ್ನೆಲ್ಲ ಬೇಸರವಿಲ್ಲದೆ ಮಾಡಿ ಬಡಿಸುವ ಅಮ್ಮ ಕಣ್ಮುಂದೆ ನಿಂತಂತಾಯಿತು. ಎದ್ದು ಕೈ ತೊಳೆದುಕೊಂಡೆ. ಸಿಂಕಿನಲ್ಲಿ ಮುಖಕ್ಕೆರಚಿಕೊಂಡ ನೀರಿನ ಜೊತೆಗೆ ಒಂದೆರೆಡು ಕಣ್ಣ ಹನಿಗಳೂ ಸದ್ದಿಲ್ಲದೇ ಜಾರಿಹೋದವು.

(12-11-2017ರ ವಿಶ್ವವಾಣಿ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಿತ)

ಸೋಮವಾರ, ನವೆಂಬರ್ 6, 2017

ಮರೆವಿನೊಳಗಿನ ಮಹಲು

"ಏನಾದ್ರೂ ಕಳ್ಕೊಂಡ್ರಾ ಅಜ್ಜಿ?"

ಒಂದು ಕೈಯ್ಯಲ್ಲಿ ಕೈಚೀಲವನ್ನು ಹಿಡಿದು, ಇನ್ನೊಂದರಿಂದ ಬಗಲಲ್ಲಿರುವ ವ್ಯಾನಿಟಿ ಬ್ಯಾಗ್ ನೊಳಗೆ ತಡಕಾಡುತ್ತಿದ್ದ ಅಜ್ಜಿ ತಲೆಯೆತ್ತಿ ನೋಡಿದಳು. ಎದುರುಗಡೆ ಹಲ್ಕಿರಿಯುತ್ತಾ ನಿಂತಿದ್ದಾನೆ ಮುದುಕ! ತನಗಿಂತ ವಯಸ್ಸಾದವನು ತನ್ನನ್ನು 'ಅಜ್ಜಿ' ಎಂದದ್ದು ಆಕೆಗೆ ರೇಗಿಹೋಯಿತು. "ಅದೆಲ್ಲಾ ನಿಮಗ್ಯಾಕೆ? ಸುಮ್ಮನೆ ನಿಮ್ಮೆದೆಷ್ಟೋ ಅಷ್ಟು ನೋಡಿಕೊಂಡು ಮುಂದೆ ಹೋಗಿ" ಎಂದು ಮುದುರುಬಿದ್ದ ಕಣ್ಣುಗಳನ್ನು ಕೆಂಪಗೆಮಾಡುತ್ತಾ ಬಿರುಸಾಗಿ ನುಡಿದಳು.

"ಮುಂದೆ ಹೋಗು ಅನ್ನೋದಕ್ಕೆ ನಾನೇನು ಭಿಕ್ಷೆ ಕೇಳಿದೆನಾ? ಪರಿಚಯದ ಅಜ್ಜಿ,
 ಪಾಪ ಏನೋ ಹುಡುಕುತ್ತಿದ್ದಾರಲ್ಲಾ ಅಂತ ಕೇಳಿದೆ ಅಷ್ಟೇ" ವೃದ್ಧನ ಮುಖದಲ್ಲಿನ ಮಂದಹಾಸ ಹಾಗೇ ಇತ್ತು.

"ಏನು ಪರಿಚಯ? ನಾನಂತೂ ಇದೇ ಮೊದಲು ನಿಮ್ಮನ್ನ ನೋಡ್ತಿರೋದು. ಇನ್ನೆಲ್ಲಿಂದ ಬರ್ಬೇಕು ಪರಿಚಯ" ಮತ್ತೆ ಮತ್ತೆ ತನ್ನನ್ನು ಅಜ್ಜಿ ಎನ್ನುವ ಅಜ್ಜನ ಮೇಲೆ ಆಕೆಗಿನ್ನೂ ಕೋಪ ಹೋಗಿಲ್ಲ.

"ನೀವು ನೋಡದೇ ಇರಬಹುದು. ಆದರೆ ನಾನು ನೋಡಿದೀನಲ್ಲಾ! ನಿಮ್ಮ ಮನೆಯ ಹತ್ತಿರಾನೇ ನಾನೂ ಇರೋದು."

"ಅಷ್ಟಕ್ಕೇ ಹೀಗೆ ಮದ್ಯ ದಾರಿಯಲ್ಲಿ ಅಡ್ಡಹಾಕಿ ಮಾತನಾಡಿಸಬಹುದೂ ಅಂದುಕೊಂಡ್ರಾ? ಇಷ್ಟು ವಯಸ್ಸಾಗಿದೆ, ಸಭ್ಯತೆ ಬೇಡ್ವಾ?"

"ನೀವು ಏನು ಹುಡುಕ್ತಿದೀರಾಂತ ನಂಗೆ ಗೊತ್ತು ಅಜ್ಜೀ" ಅವಳ ಕೋಪವನ್ನ ಗಮನಿಸಿಯೇ ಇಲ್ಲದಂತೆ ನಗುತ್ತಾ ನುಡಿದರು.

"ಏನು?"

"ನಿಮ್ಮ ಮನೆಯ ವಿಳಾಸವಿರುವ ಚೀಟಿಯನ್ನ ತಾನೇ?"

"ಅದು..... ನಿಮಗ್ಹೇಗೆ ಗೊತ್ತಾಯ್ತು?" ಅಜ್ಜಿಗೆ  ಪರಮಾಶ್ಚರ್ಯ.

"ನನಗೆಲ್ಲಾ ಗೊತ್ತು. ನಾನೂ ಅತ್ತಕಡೆಯೇ ಹೊರಟಿದ್ದೇನೆ. ಬನ್ನಿ ನಿಮ್ಮನ್ನೂ ಮನೆ ತಲುಪಿಸ್ತೇನೆ" ಅಜ್ಜನ ಮುಖದಲ್ಲಿ ಗೆಲುವಿನ ಮಂದಹಾಸ.

"ನಾನ್ಯಾಕೆ ನಿಮ್ಮ ಜೊತೆ ಬರ್ಲಿ? ನನಗೆ ನಮ್ಮ ಮನೆಯ ದಾರಿ ಗೊತ್ತಿದೆ" ಅಜ್ಜಿಯ ಬಿಂಕದ ನುಡಿ.

"ಹಾಗಾದರೆ ಮತ್ಯಾಕೆ ವಿಳಾಸದ ಚೀಟಿ ಹುಡುಕ್ತಿದ್ರಿ?"

".................."

"ಪರವಾಗಿಲ್ಲ ಬನ್ನಿ. ನೀವು ಮನೇ ದಾರಿ ಮರೆತ್ರೀಂತ ನಿಮ್ಮ ಯಜಮಾನ್ರಿಗೆ ಹೇಳಲ್ಲ ನಾನು"

"ಅವರು ನಿಮಗೆ ಗೊತ್ತಾ?"  ಅಜ್ಜಿಗೆ ಮತ್ತೊಮ್ಮೆ ಅಚ್ಚರಿ.

"ಬುದ್ಧಿ ಬಂದಾಗಿಂದಾನೂ ಗೊತ್ತು"

"ಆದ್ರೆ ನಾನ್ಯಾವತ್ತೂ ನಿಮ್ಮನ್ನು ನೋಡೇ ಇಲ್ವಲ್ಲಾ?"

"ನಾನು ನೋಡಿದೀನಲ್ಲ"

ಹೆಜ್ಜೆಗಳು ಬೆರೆತು ಮುನ್ನಡೆದವು.

"ಅಲ್ಲಾ... ಮನೆ ದಾರಿ ಮರೆಯೋರು ಹೊರಗ್ಯಾಕೆ ಬರ್ತೀರ?" ಅಜ್ಜನ ಕುಹುಕ.

"ನಾನೇನು ದಾರಿ ಮರ್ತಿಲ್ಲ. ಈ ಬೆಂಗ್ಳೂರಲ್ಲಿ ಎಲ್ಲಾ ಬೀದಿಗಳು ಒಂದೇ ಥರಾ ಕಾಣ್ತಾವೆ. ಅದ್ಕೆ ಸ್ವಲ್ಪ ಗೊಂದಲ ಅಷ್ಟೇ"
ಸಮರ್ಥಿಸಿಕೊಳ್ಳುತ್ತಾ ಮುಂದುವರಿಸಿದಳು:
"ನಾಳೆಯಿಂದ ಬೇಸಿಗೆ ರಜೆ ಆರಂಭ. ನನ್ನ ಮೊಮ್ಮಗ ಬರ್ತಿದಾನೆ ಅಮೆರಿಕಾದಿಂದ. ಅವನಿಗೆ ದೂದ್ ಪೇಡ ಅಂದ್ರೆ ತುಂಬಾ ಇಷ್ಟ. ಆದ್ರೆ ಅವನಮ್ಮ ಇದೆಲ್ಲಾ ತಿನ್ನೋಕೆ ಬಿಡಲ್ಲ. ಅವಳಿಲ್ಲದಾಗ ನನ್ಹತ್ರ ಗಲಾಟೆ ಮಾಡ್ತಾನೆ ಪೇಡ ಕೊಡಿಸು ಅಂತ. ಅದಕ್ಕೆ ಈಗಲೇ ತಗೊಂಡೆ, ಅವರು ಬಂದ್ಮೇಲೆ ಪುರ್ಸೊತ್ತಾಗಲ್ಲ ಅಂತ."

"ಓಹೋ ಹೌದಾ....."

"ಸಣ್ಣವನಿದ್ದಾಗ ನನ್ನ ಮಗನಿಗೂ  ಹಾಗೇ, ಪೇಡ ಅಂದ್ರೆ ಪ್ರಾಣ. ಆಗೆಲ್ಲಾ ನಾನು ಮನೆಲೇ ಮಾಡಿಕೊಡ್ತಿದ್ದೆ. ಈಗ ವಯಸ್ಸಾಯ್ತು ನೋಡಿ. ಮಾಡೋಕಾಗಲ್ಲ"

"ಹಾಂ. ನಿಜ ನಿಜ. ಆದ್ರೂ ಅದಕ್ಕೆ ನೀವೇ ಬರ್ಬೇಕ? ಎಷ್ಟೊಂದು ವಾಹನಗಳು ಓಡಾಡೋ ರಸ್ತೆ ಇದು"

"ಇನ್ಯಾರಿದಾರೆ ಹೇಳಿ? ನನ್ನ ಹೆಂಡತಿ ಮಕ್ಕಳಷ್ಟೇ ನನ್ನ ಪ್ರಪಂಚ ಅಂತ ಮಗ ದೂರ ಹೋದ. ಇರೋ ಒಂದು ಕಿರಾಣಿ ಅಂಗಡಿಯೇ ನನ್ನ ಜಗತ್ತು  ಎನ್ನುತ್ತಾ ಗಂಡ ಹೊರಗೆ ಹೋಗ್ತಾರೆ. ಅಂದ್ಮೇಲೆ  ಇವರೆಲ್ಲರೂ ನನ್ನ ಪ್ರಪಂಚ ಅಂದುಕೊಂಡಿರುವ ನಾನೇ ಈ ಎಲ್ಲಾ ಕೆಲಸ ಮಾಡಬೇಕಲ್ವಾ.....?"
ಮುದುಕನ ಮುಖದಲ್ಲಿ ಕಳವಳಿಕೆಯೊಂದು ಹಾದು ಹೋಯಿತು.

"ಅಂದಹಾಗೇ ನಿಮ್ಮನೆಯಲ್ಲಿ ಈ ವಂದಲಗ ಏನಾದ್ರೂ ಬೆಳೆದಿದೀರ? ಇದ್ದರೆ ಇವರ ಹತ್ರ ಕೊಟ್ಟು ಕಳಿಸ್ತೀರ? ಅದರ ಲೇಹ ಮಾಡಿ ಕಳಿಸ್ಬೇಕು. ದಿನಾ ಬೆಳಗ್ಗೆ ತಿಂದ್ರೆ ಮೊಮ್ಮಗನ ನೆನಪಿನ ಶಕ್ತಿ ಹೆಚ್ಚಾಗುತ್ತೆ. ಪಾಪ, ಚಿಕ್ಕ ವಯಸ್ಸಿಗೇ ಅದೆಷ್ಟೆಲ್ಲಾ ಕಲೀಬೇಕು ಅವ್ನು ."

"ಹೂಂ, ಇರ್ಬೇಕು ನೋಡ್ತೀನಿ"

ಮನೆ ಬಂತು. ಬಾಗಿಲು ತೆರೆದ ಕೆಲಸದವಳು ವೃದ್ಧನನ್ನು ನೋಡಿ ತಲೆತಗ್ಗಿಸಿ ನಿಂತಳು. ಒಳಗೆ ಬಂದೊಡನೆಯೇ ಕೈಲಿದ್ದ ಪೇಡದ ಪೊಟ್ಟಣವನ್ನು ಫ್ರಿಜ್ಜಿನಲ್ಲಿಡಲೆಂದು ಅಡುಗೆ ಕೋಣೆಗೆ ನಡೆದವಳನ್ನೇ ನೋಡುತ್ತಾ ಅಜ್ಜ ಜೇಬಿನಿಂದ ಮೊಬೈಲ್ ತೆಗೆದು ಕಿವಿಗಿಟ್ಟುಕೊಂಡರು. "ಹಲೋ ಮಾಣಿ... ಹುಡುಕೋದು ಬೇಡ, ಅನುಸೂಯ ಸಿಕ್ಕಿದ್ಲು... ಮತ್ತೆ ಸ್ವೀಟ್ಸ್ ಅಂಗಡಿಗೆ ಹೋಗಿದ್ಲು, ಮೊಮ್ಮಗನಿಗೆ ಪೇಡ ತರ್ತೀನಿ ಅಂತ. ಮನೇಗೆ ಕರ್ಕೊಂಡ್ಬಂದೆ. ಕೆಲಸವಳು ಇದಾಳೆ ಜೊತೆಗೆ. ನೀನು ಅಂಗ್ಡೀಗೆ ಬಾ. ನಾನೂ ಹೊರ್ಟಿದೀನಿ....."

ಮೊಬೈಲ್ ಜೇಬಿಗಿಳಿಸಸಿದವರು ಅಲ್ಲೇ ನಿಂತಿದ್ದ ಕೆಲಸದವಳಿಗೆ  "ಜೋಪಾನ. ಮತ್ತೆ ಆಚೆ ಹೋಗದಂಗೆ ನೋಡ್ಕೋ" ಎಂದು ಗಡುಸುದನಿಯಲ್ಲಿ ತಾಕೀತು ಮಾಡಿದರು. ಅಷ್ಟರಲ್ಲಿ ಅವರ ನೋಟ ಗೋಡೆಯತ್ತ ಸರಿಯಿತು....

ಅಲ್ಲಿ  ತನ್ನ ಸುತ್ತಲೂ ಗಂಧದ ಹಾರ ಹಾಕಿಸಿಕೊಂಡು ತಣ್ಣಗೆ ನಗುತ್ತಾ ನಿಂತಿತ್ತು, ವರುಷದ ಕೆಳಗೆ ಅಪಘಾತಕ್ಕೀಡಾದ ಅವರ ಮಗ, ಸೊಸೆ ಹಾಗೂ ಮೊಮ್ಮಗನ ಫೋಟೋ....

ಅದನ್ನೇ ಅರೆಕ್ಷಣ ದಿಟ್ಟಿಸಿ ನಿಟ್ಟುಸಿರಿಟ್ಟು ಅಡಿಗೆ ಮನೆಯತ್ತ ಮತ್ತೊಮ್ಮೆ ತುಂಬುಗಣ್ಣಿಂದ ನೋಡಿದರು. ಭಾರವಾದ ಹೆಜ್ಜೆಗಳನ್ನಿಡುತ್ತಾ ಹೊರಗೆ ನಡೆದವರಿಗೆ ಬಾಗಿಲಿನಿಂದ ಹೇಳಿತು ಆ ದನಿ..

"ವಂದಲಗನ ಸೊಪ್ಪು ಮರೀಬೇಡೀ....."


(ವಿಶ್ವವಾಣಿ ಸಾಪ್ತಾಹಿಕ 'ವಿರಾಮ'ದ ೫-೧೧-೨೦೧೭ರ ಸಂಚಿಕೆಯಲ್ಲಿ ಪ್ರಕಟಿತ)

ಶನಿವಾರ, ನವೆಂಬರ್ 4, 2017

ರಜೆಯಲ್ಲಿ ಕಾಣುವ ಬೆಂಗಳೂರು

ನವೆಂಬರ್ ಒಂದು ಕೂಡಾ ಮುಗಿದಿದೆ. ಅಲ್ಲಿಗೆ 2017ರ ಕ್ಯಾಲೆಂಡರ್ ನ ರಜಾದಿನಗಳೆಲ್ಲ ಬಹುತೇಕ ಮುಗಿದಹಾಗೇ. ಕ್ರಿಸ್ಮಸ್ ಒಂದೇ ಉಳಿದುಕೊಂಡಿರುವ ಈ ಕ್ಯಾಲೆಂಡರ್ ನ ಕಟ್ಟಕಡೆಯ ಹಬ್ಬ.
ಈ ಸಾಲುಸಾಲು ರಜೆಗಳು ಬಂದಾಗ ಬೆಂಗಳೂರಿನಲ್ಲೆ ಉಳಿದುಹೋಗುವರಿಗೆ ಸಿಗುವ ಅತಿದೊಡ್ಡ ಖುಷಿ ಏನು ಗೊತ್ತಾ? ಖಾಲಿ ರೋಡುಗಳು ಹಾಗೂ ಖಾಲಿ ಬಸ್ಸುಗಳು! ಇಷ್ಟುದಿನ ಕಾಲು ಮುರಿದ ಆಮೆಯಂತೆ ಕುಗುರುತ್ತಾ ಸಾಗುತ್ತಿದ್ದ ಇದೇ ರಸ್ತೆಗಳಲ್ಲಿನ ವಾಹನಗಳಿಗೀಗ ಊರಿನ ಬಸ್ಸಿನಂತೆ ಸುಂಯ್ಯನೆ ಓಡತೊಡಗುತ್ತವೆ. ಅದೇಕೋ ಗೊತ್ತಿಲ್ಲ, ರಶ್ಶಿಲ್ಲದ ಬಿಎಂಟಿಸಿ ಗಳಲ್ಲಿ ಓಡಾಡುವುದೆಂದರೆ ನನಗೊಂಥರಾ ಖುಷಿ. ನಗರದೊಳಗಿನ ಅದೇ ಬನಶಂಕರಿ, ಜಯನಗರ, ಬಸವನಗುಡಿಗಳಲ್ಲಾಗಿರಬಹುದು ಅಥವಾ ಊರ ಹೊರಗಿನ ಯಲಹಂಕ, ಜಾಲಹಳ್ಳಿ, ಬಿಇಎಲ್ ಗಳಲ್ಲಾಗಿರಬಹುದು, ಇಷ್ಟುದಿನ ಬಸುರಿ ಹೆಂಗಸಿನಂತೆ ಮಾರಿಗೊಮ್ಮೆ ನಿಲ್ಲುತ್ತಾ, ಏದುಸಿರು ಬಿಡುತ್ತಾ, ಚಿಕ್ಕ ಏರು ಬಂದರೂ ಭರ್ರೋ ಎಂದು ಬೊಬ್ಬಿಡುತ್ತಾ, ಒಳಗೆ ಒಂಟಿಕಾಲಿನಲ್ಲಿ ನಿಂತ ಐಟಿಬಿಟಿ ತಪಸ್ವಿಗಳೆಲ್ಲ ಒಬ್ಬರ ಮೇಲೊಬ್ಬರು ಮಗುಚಿ ಬೀಳುವಂತೆ ಥಟಾಥಟ್ಟನೆ ಬ್ರೇಕುಹಾಕುತ್ತಾ, ಅಡ್ಡಬಂದ ಬೈಕಿನವನು ಮನೆಯಲ್ಲಿ ಹೇಳಿಬಂದಿದ್ದಾನಾ ಇಲ್ಲವಾ ಎಂದು ವಿಚಾರಿಸಿಕೊಳ್ಳುತ್ತಾ, ನಿಲ್ಲುತ್ತಾ, ತೆವಳುತ್ತಾ, ಚಲಿಸುತ್ತಿದ್ದ ಪ್ರಯಾಣವಿಂದು ತಂಗಾಳಿ ಮುಖಕ್ಕೆ ರಾಚುವಷ್ಟರಮಟ್ಟಿಗೆ ವೇಗವಾಗಿ ಓಡುತ್ತಿದೆ. ಇಷ್ಟುದಿನ ಉರಿಸಿದ್ದಪ್ಪನಂತೆ ಭುಸುಗುಟ್ಟುತ್ತಿದ್ದ ಕಂಡಕ್ಟರ್ ಇಂದು ಉಲ್ಲಾಸದಿಂದ "ಬೆಳ್ಳಿ ರಥದಲಿ ಸೂರ್ಯ ತಂದ ಕಿರಣಾ" ಎಂದು ಹಾಡುತ್ತಿದ್ದಾನೆ. ಎರೆಡು ರೂಪಾಯಿ ಚಿಲ್ಲರೆಗೇ ಮನೆ ಮಂದಿಯೆಲ್ಲರ ಮಾನ ಹರಾಜು ಹಾಕುತ್ತಿದ್ದವನಿಂದು ಏಳು ರೂ ಚಿಲ್ಲರೆಯನ್ನು ಸದ್ದಿಲ್ಲದೆ ಕೊಟ್ಟುಬಿಟ್ಟಿದ್ದಾನೆ. ಕಿಟಕಿಯಿಂದ ಹೊರಗೆ ನೋಡಿದರೆ ಇಷ್ಟು ದಿನ ಬಾಸಿನ ಮುಖದಂತೆ ಬಿರುಸಾಗಿ ಕಾಣುತ್ತಿದ್ದ ಹೊರಗಿನ ವಾತಾವಾರಣ ಇಂದು 'ಅವಳ' ವದನದಷ್ಟು ನಿರ್ಮಲವಾಗಿದೆ. ಈ ಉಲ್ಲಾಸಮಯ ಪ್ರಯಾಣದಲ್ಲಿ ಕೈಯಲ್ಲಿ ಹಿಡಿದ ಪುಸ್ತಕದೊಳಗಿನ ಶೆರ್ಲಾಕ್ ಹೋಮ್ಸ್ ಹಿಂದೆಂದಿಗಿಂತ ರೋಚಕವಾಗಿ ಕಥೆಹೇಳುತ್ತಿದ್ದಾರೆ.
ಇನ್ನು ಬೆಂಗಳೂರಿನ ಬೀದಿಗಳಂತೂ ಸೀಸನ್ನಿಗೆ ತಕ್ಕಂತೆ ಸಿಂಗರಿಸಿಕೊಳ್ಳುತ್ತವೆ. ಗಣಪತಿ ಹಬ್ಬದ ರಜೆಯಲ್ಲಿ ಎಲ್ಲಿ ನೋಡಿದರೂ ಒಂದಡಿಯಿಂದ ಹಿಡಿದು ಒಂಭತ್ತಡಿಯ ತನಕದ, ಹಲವಾರು ಭಾವ-ಭಂಗಿಗಳ ಗಣೇಶನ ವಿಗ್ರಹಗಳು, ಸ್ವತಂತ್ರ ದಿನಾಚರಣೆಯ ಸಮಯದಲ್ಲಿ ವಾಹನಗಳ ಕಿವಿಗೆ ಚುಚ್ಚಿಕೊಂಡ ತ್ರಿವರ್ಣ ಧ್ವಝಗಳು, ರಾಜ್ಯೋತ್ಸವದ ದಿನ ಪಟಪಟ ಹಾರಾಡುತ್ತಾ ಓಡುವ ಕನ್ನಡದ ಬಾವುಟಗಳು, ದೀಪಾವಳಿಯಲ್ಲಿ ಮನೆಮನೆಯ ಬಾಗಿಲಲಲ್ಲೂ ಮಿನುಗುವ ದೀಪ, ಪಟಾಕಿ, ನಕ್ಷತ್ರಕಡ್ಡಿಗಳು... ಹೀಗೇ ಬೆಂಗಳೂರಿಗೆ ಬೆಂಗಳೂರೇ ಒಂದಿಲ್ಲೊಂದು ಬಣ್ಣ/ಬೆಳಕಿನಲ್ಲಿ ತೊಯ್ದುಹೋಗುತ್ತದೆ. ಯಾವ ಕಲಿಗಾಲ ಮುರಕೊಂಡು ಬಿದ್ದರೂ, ಎಷ್ಟೇ ಬುದ್ಧಿ ತುಂಬಿ ತುಳುಕಿದರೂ, ಯಾವ ರಾಜಕಾರಣಿ ಬತ್ತಿ ಇಟ್ಟರೂ, ಯಾವ ಘಾತುಕ ಶಕ್ತಿ ಬಾಯಿಬಡಿದುಕೊಂಡರೂ, ಹಬ್ಬ-ಭಾಷೆ-ಸಂಸ್ಕೃತಿ.. ಈ ಮೂರು ಸಂಭ್ರಮಗಳನ್ನು ಮನುಷ್ಯನಿಂದ, ಮನಸ್ಸಿನಿಂದ ದೂರಮಾಡುವುದು ಸಾಧ್ಯವೇ ಇಲ್ಲ ಅಂತ ಅನಿಸೋದು ಇಂತಹಾ ಆಚರಣೆಗಳನ್ನು ನೋಡಿದಾಗಲೇ‌. ಈ ಎಲ್ಲ ಸಂಭ್ರಮಗಳ ಕಣ್ತುಂಬಿಕೊಳ್ಳುತ್ತಾ, ಕಿವಿಗೊಂದು ಇಯರ್ ಫೋನು ಚುಚ್ಚಿಕೊಂಡೋ, ಇಲ್ಲಾ ಪುಸ್ತಕವೊಂದನ್ನು ಹಿಡಿದುಕೊಂಡೋ ಕಿಟಕಿ ಬದಿಯ ಸೀಟಿನಲ್ಲಿ ಕುಳಿತು ಬೆಂಗಳೂರು ಸುತ್ತುವಂತಹಾ ಈ ಮೋಜು ಎಂತಹದ್ದೆಂಬುದನ್ನು ಬಲ್ಲವ ಮಾತ್ರ ಬಲ್ಲ! ಎತ್ತರದ ಫ್ಲೈ ಓವರುಗಳ ಮೇಲಿಂದ ಕಾಣುವ ಪಕ್ಷಿನೋಟ, ಆಳದ ಅಂಡರ್ ಪಾಸ್ಗಳ ಕತ್ತಲೆಯೊಳಗಿನ ನಮ್ಮದೇ ಬಸ್ಸಿನ ಪ್ರತಿಧ್ವನಿಯ ಸದ್ದು, ಬಸವನಗುಡಿಯಲ್ಲಿ ಮೂಗಿಗೆ ರಾಚುವ ಹೂಹಣ್ಣುಗಳ ಘಮಲು, ಕಾದು ಕಾದು ಕೊನೆಗೂ ಬಂದ ನಾ ಹತ್ತಬೇಕಾದ ಬಸ್ಸು.. ಬೆಂಗಳೂರೂ ನನ್ನೂರಿನಂತೆನಿಸುತ್ತದೆ.
ಆದರೆ ಸಧ್ಯಕ್ಕೆ ಬೆಂಗಳೂರಿನಲ್ಲಿ ಒತ್ತಡವೊಂದನ್ನು ಬಿಟ್ಟು ಮತ್ತೇನೂ ಸ್ಥಿರವಾಗಿಲ್ಲ. ಒಂದು ಭಾನುವಾರ ಅಥವಾ ಎರೆಡು ದಿನದ ದೀಪಾವಳಿ ಮುಗಿಯುತ್ತಿದ್ದಂತೆ ಮತ್ತದೇ ಟ್ರಾಫಿಕ್ಕು ಮರಳಿಬಂದು ಬೆಂಗಳೂರಿನ ರಸ್ತೆಗಳನ್ನು ಅಟಕಾಯಿಸಿಕೊಳ್ಳುತ್ತದೆ. ಮತ್ತದೇ ನಿಲ್ಲಲಾಗದ ರಶ್ಶು, ಮುಂದೆ ಹೋಗದ ಟ್ರಾಫಿಕ್ಕು, ಜೇಬುಕತ್ತರಿಸುವ ಕಾಕರು... ಇವೆಲ್ಲದರ ನಡುವೆ ಕೆಲಕ್ಷಣಗಳ ಉಲ್ಲಾಸ ತರುವ ಭಾನುವಾರವೇ ಮುಂತಾದ ಇನ್ನಿತರ ರಜಾದಿನಗಳಿಗೊಂದು ದೊಡ್ಡ ಸಲಾಂ ಹೇಳಬೇಕೆಂದು ಇಷ್ಟೆಲ್ಲ ಬರೆದೆ.

ಶನಿವಾರ, ಸೆಪ್ಟೆಂಬರ್ 23, 2017

ಬೆಕ್ಕುಗಳ ಜೊತೆಗೆ ಭಾವ-ಬಂಧ...



ಮನುಷ್ಯನಿಗೆ ಅತಿ ಪ್ರಿಯವಾದ ಪ್ರಾಣಿಗಳಲ್ಲಿ ಮೊದಲನೆಯದು ನಾಯಿ. ಅದರ ನಂತರದ ಸ್ಥಾನದಲ್ಲಿ, ಮನುಷ್ಯನಿಗೆ ಅತೀ ಹತ್ತಿರದಲ್ಲಿ, ತೊಡೆಯ ಮೇಲೇ ಕುಳಿತು ಗರ್ವದಿಂದ ಮೀಸೆ ತಿರುವುತ್ತಿರುವ ಇನ್ನೊಂದು ಪ್ರಾಣಿಯೆಂದರೆ ಬೆಕ್ಕು. ಕೆಲವರ ಹೊರತಾಗಿ ನಾಯಿಯನ್ನು ಮನೆಯೊಳಗೆ ಬಿಟ್ಟುಕೊಳ್ಳುವವರು ಕಡಿಮೆ. ನಾಯಿಯ ಸಂಚಾರ ಅಂಗಳ, ವರಾಂಡ, ಇನ್ನೂ ಹೆಚ್ಚೆಂದರೆ ಜಗುಲಿ(ಹಾಲ್) ಗಳಿಗೆ ಸೀಮಿತವಾಗಿರುತ್ತದೆ. ಆದರೆ ಬೆಕ್ಕು ಹಾಗಲ್ಲ. ಅದು ಸರ್ವ ಸ್ವತಂತ್ರಿ. ಅಡಿಗೆಮನೆ, ಮಲಗುವ ಕೋಣೆಯೂ  ಸೇರಿದಂತೆ ಮನೆಯ ಮತ್ಯಾವುದೇ ಕೋಣೆಗಳಲ್ಲಿ, ಮೂಲೆಮೂಲೆಗಳಲ್ಲಿ ಯಾವ ಸಂದರ್ಭದಲ್ಲಾದರೂ ಓಡಾಡುವ ಅಧಿಕಾರ ಅದಕ್ಕಿದೆ. ಪಟ್ಟಣದ ಹಲವಾರು ಮನೆಗಳಲ್ಲಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಮನೆಯ ಯಜಮಾನನಿಗಿಂತಲೂ ಹೆಚ್ಚಿನ ಠೀವಿಯಲ್ಲಿ, ಸೋಫಾಮೇಲೆ ಕಾಲುಚಾಚಿ ಮಲಗಿರುವ ನುಣುಪು ಮೈ-ಕುಡಿಮೀಸೆಯ ಮಾರ್ಜಾಲವನ್ನು ನೀವು ನೋಡಬಹುದು. ಮೆತ್ತಗಿನ ಸೋಫಾಮೇಲೆ ಅಷ್ಟೇ ಮೆತ್ತಗಿರುವ ತನ್ನ ದೇಹವನ್ನು ಚಾಚಿಕೊಂಡು, ತನ್ನ ಮುಂಗೈಯ್ಯಿಗೆ ಬಳಿದುಕೊಂಡ ಎಂಜಲಿನಿಂದ ಮೈ-ಮುಖವನ್ನೆಲ್ಲಾ ವರೆಸಿಕೊಳ್ಳುತ್ತಾ ಗಮ್ಮತ್ತಾಗಿ ಕುಳಿತಿರುವ ಈ ಬೆಕ್ಕಣ್ಣನ ಪಕ್ಕ ನೀವು ಹೋಗಿ ಕುಳಿತುನೋಡಿ; ಅರೆಕ್ಷಣ ತನ್ನ ಕೆಲಸ ನಿಲ್ಲಿಸಿ ಸಾಲ ಕೇಳಲು ಬಂದವನನ್ನು ನೋಡುವ ಸಾವುಕಾರನಂತೆ ನಿಮ್ಮತ್ತ ಗಂಭೀರನೋಟ ಬೀರಿ, ಮತ್ತೆ ತನ್ನ ಕೆಲಸ ಮುಂದುವರೆಸುತ್ತದೆ.

'ಎಷ್ಟೇ ಪ್ರೀತಿಯಿದ್ದರೂ ಬೆಂಗಳೂರಿನಲ್ಲಿ ರಸ್ತೆ-ಕಾಂಪೌಂಡುಗಳ ಮೇಲೆ ಕುಳಿತಿರುವ, ಓಡಾಡುತ್ತಿರುವ ಅಥವಾ ನಿದ್ರಿಸುತ್ತಿರುವ ಯಾವುದೇ ಅಪರಿಚಿತ ಮಾರ್ಜಾಲವನ್ನು ಮಾತನಾಡಿಸುವುದು ಅಪಾಯಕಾರಿ' ಎನ್ನುವುದು ವರ್ಷಗಳ ಕೆಳಗೆ ನನಗೆ ಗೊತ್ತಾದ ಸತ್ಯ. ಹಿಂದೊಮ್ಮೆ ರೊಮ್ಯಾಂಟಿಕ್ ತಂಗಾಳಿಯೊಂದು ಬೀಸುತ್ತಿದ್ದ ಸಂಜೆಯಲ್ಲಿ ಟೆರಾಸ್ ಮೇಲೆ ಕುಳಿತಿದ್ದ ಮಾರ್ಜಾಲ ತರುಣಿಯೊಬ್ಬಳು ನನ್ನ ಕಣ್ಣಿಗೆ ಬಿದ್ದಿದ್ದಳು. ಬಾಯಿಯಿಂದ ಎಂಜಲನ್ನು ತನ್ನ ನುಣುಪು ಕೈಯ್ಯ ಮೂಲಕ ಮುಖಕ್ಕೆಲ್ಲಾ ಸವರಿಕೊಂಡು 'ಮೇಕಪ್' ಮಾಡಿಕೊಳ್ಳುತ್ತಿದ್ದ ಆ ಚೆಲುವೆಯನ್ನು ಕಂಡ, ಮೊದಲೇ ಬೆಕ್ಕುಗಳೆಂದರೆ ಬೆಟ್ಟದಷ್ಟು ಪ್ರೀತಿಯಿರುವ ನಾನು ಮತ್ತಷ್ಟು ರೊಮ್ಯಾಂಟಿಕ್ ಆಗಿಬಿಟ್ಟಿದ್ದೆ. ಅಲ್ಲದೇ ಊರುಬಿಟ್ಟ ಮೇಲೆ ಬೆಕ್ಕು, ನಾಯಿಗಳ ಒಡನಾಟವೂ ಕಮ್ಮಿಯಾಗಿತ್ತಲ್ಲಾ, ಈಗ ಹೇಗಾದರೂ ಇವಳನ್ನು ಒಲಿಸಿಕೊಳ್ಳಲೇಬೇಕೆಂದು ನಿರ್ಧರಿಸಿ ಸಾಧ್ಯವಾದಷ್ಟು ಸುಮಧುರ ದನಿಯಲ್ಲಿ "ತ್ಚುತ್ಚುತ್ಚು.. ಬಾಬಾಬಾ" ಎಂದು ಕರೆದೆ. ಯಾವುದೋ ಕಬಾಬ್ ಹೋಟೆಲ್ ಮುಂದೆ 'ಪೀಸ್'ಗಾಗಿ ಕಾದುನಿಂತಿರುವ ತನ್ನ ಬಾಯ್ ಫ್ರೆಂಡ್ ನ ಯೋಚನೆಯಲ್ಲಿದ್ದಳೋ ಏನೋ, ಅನಿರೀಕ್ಷಿತವಾಗಿ ತೇಲಿಬಂದ ನನ್ನ ಧ್ವನಿ ಕೇಳಿ ಅರೆಕ್ಷಣ ಬೆಚ್ಚಿಬಿದ್ದು ನನ್ನನ್ನೇ ಗುರಾಯಿಸತೊಡಗಿದಳು. ನಾನು ಮತ್ತಷ್ಟು ರೊಮ್ಯಾಂಟಿಕ್ ಸ್ವರದಲ್ಲಿ "ತ್ಚುತ್ಚುತ್ಚೂ... ಮಿಯಾಂವ್.. ಬಾಬಾಬಾ" ಎಂದು ಕರೆಯುತ್ತಾ ಎರೆಡು ಹೆಜ್ಜೆ ಮುಂದಿಟ್ಟಿದ್ದಷ್ಟೇ, ಬಾಯ್ಬಿಟ್ಟರೆ "ಪಿಂಕಿ ಕಮಾನ್... ಮ್ಯೂಮ್ಯೂ" ಎಂದೋ, "ಬಿಲ್ಲಿ ಭಯ್ಯಾ ಆಜಾವೋ" ಎಂದೋ ಕರೆಯುವ ಬಿಟಿಎಮ್ ಬಡಾವಣೆಯ ನಾರ್ಥ್ ಇಂಡಿಯನ್ ಜನರನ್ನೇ ಹೆಚ್ಚಾಗಿ ನೋಡಿ ಅಭ್ಯಾಸವಿದ್ದ ಈ ಮಾರ್ಜಾಲಕುಮಾರಿ ನನ್ನ ಲೋಕಲ್ ಭಾಷೆ ಕೇಳಿ ಕೆರಳಿಹೋದಳು. ಅಲ್ಲದೇ ಕೆದರಿದ ಕೂದಲು, ಕುರುಚಲು ಗಡ್ಡ, ಸೋಡಾಗ್ಲಾಸ್ ತೊಟ್ಟಿದ್ದ ನಾನು  ಬೆಕ್ಕುಗಳನ್ನು ಜೀವಂತ ಸುಟ್ಟುತಿನ್ನುವ 'ಬೆಕ್ಕು ಭಕ್ಷಕ' ಆದಿವಾಸಿಯಂತೆ ಕಂಡೆನೋ ಏನೋ, ತುದಿಗಾಲಿನಲ್ಲಿ ಸೆಟೆದು ನಿಂತು, ತನ್ನ ರೋಮಗಳನ್ನಲ್ಲಾ ನಿಮಿರಿಸಿ, ಬಾಲವನ್ನು ಈಟಿಯಂತೆ ಚೂಪಗೆ ನಿಲ್ಲಿಸಿಕೊಂಡು "ವ್ವ್.. ಈಯಾಂವ್...ಯೂಂವ್..." ಎಂದು ಕಿರುಚತೊಡಗಿದಳು. ನನ್ನ ಇಪ್ಪತ್ನಾಲಕ್ಕು ವರ್ಷಗಳ ಅನುಭವದಲ್ಲಿ ಅದುವರೆಗೆ ಬಾ ಎಂದಾಗ ಬರುವ ಬೆಕ್ಕುಗಳನ್ನು ನೋಡಿದ್ದೆ. ಬಿದ್ದು ಓಡಿಹೋಗಿರುವ ಬೆಕ್ಕುಗಳನ್ನೂ ನೋಡಿದ್ದೆ, ಆದರೆ ಹೀಗೆ 'ಪರಚು'ಯುದ್ಧಕ್ಕೆ ನಿಂತ ಬೆಕ್ಕನ್ನು ನೋಡುತ್ತಿದ್ದುದು ಇದೇ ಮೊದಲು! ಇನ್ನೊಂದು ಮಾತನಾಡಿದರೂ ಒದೆ ಬೀಳುವುದು ಖಂಡಿತವೆಂಬುದು ಅರ್ಥವಾಗಿ "ಕ್ಷಮಾ ಕೀಜಿಯೇ ಬಿಲ್ಲೀ ರಾಣೀ" ಎಂದು ಅಲ್ಲಿಂದ ಕಾಲ್ಕಿತ್ತೆ.

ಮಲೆನಾಡು ಮೂಲೆಯ ಹಳ್ಳಿಯೊಂದರಲ್ಲಿರುವ ನಮ್ಮನೆಯಲ್ಲಿ ಮೊದಲಿನಿಂದಲೂ ಇಲಿಗಳ ಹಾವಳಿ ಜಾಸ್ತಿ. ಹಗಲು ಹೊತ್ತಿನಲ್ಲಿ ಬಿಲಗಳಲ್ಲಿ, ಗೋಡೆಯ ಸಂದುಗೊಂದಿಯಲ್ಲಿ, ಗೊಬ್ಬರಗುಂಡಿಯ ಹೊಂಡಗಳಲ್ಲಿ ಅಡಗಿಕೊಂಡಿರುವ ಇವುಗಳು ರಾತ್ರೆಯಾಗುತ್ತಿದ್ದಂತೆಯೇ ಸಂಸಾರ ಸಮೇತವಾಗಿ ದರೋಡೆಗಿಳಿಯುತ್ತಿದ್ದವು. ತಡರಾತ್ರಿ ದರೋಡೆಕೋರರಾದ ಈ ಇಲಿಗಳದ್ದೊಂದು ರಗಳೆಯಾದರೆ ಇವನ್ನು ಹಿಡಿಯಲು ಬರುವ ಬೆಕ್ಕು-ಹಾವುಗಳದ್ದು ಇನ್ನೊಂದು ತೆರನಾದ ಹಾವಳಿ. ಇವುಗಳಿಗೆಲ್ಲಾ ಮಣ್ಣಿನ ಗೋಡೆಗಳು, ಪೆಟ್ಟಿಗೆ-ಟ್ರಂಕ್ ಗಳು, ಬುಟ್ಟಿ,ಗುದ್ದಲಿ,ಪಿಕಾಸಿಗಳೇ ಇತ್ಯಾದಿ ಸಾಮಾನು ಸರಂಜಾಮುಗಳಿಂದ ತುಂಬಿಹೋಗಿದ್ದ ನಮ್ಮ ಹಳೆಯ ಮನೆ ಅಮೇಜಾನ್ ಕಾಡಿನಂತೆ ಕಾಣುತ್ತಿತ್ತೋ ಏನೋ, ಇಲ್ಲಿ ಮನುಷ್ಯನೆಂಬ ಎರೆಡುಕಾಲಿನ ಸರ್ವೋಚ್ಛ ಪ್ರಾಣಿ ಇದ್ದಾನೆಂಬುದನ್ನೂ ಲೆಕ್ಕಿಸದೆ ತಮ್ಮ ಬೇಟೆಯನ್ನು ಬೆನ್ನಟ್ಟಿ ಹೊತ್ತಲ್ಲದ ಹೊತ್ತಿನಲ್ಲಿ ಒಳನುಗ್ಗಿಬಿಡುತ್ತಿದ್ದವು. ಹೀಗೆ ಬರುವವುಗಳಲ್ಲಿ ಹಾವುಗಳನ್ನು ಹೆದರಿಸಿ(ಹೆದರಿ!) ಓಡಿಸುತ್ತಿದ್ದೆವು. ಆದರೆ ಇಲಿಗಳ ಹಾವಳಿ ತಪ್ಪಿಸುವ ಈ ಮುದ್ದುಮುಖದ ಮಾರ್ಜಾಲಗಳ ಮೇಲೆ ಯಾರೂ ಕೈಮಾಡುತ್ತಿರಲಿಲ್ಲವಾದ್ದರಿಂದ ಅವುಗಳಿಗೆ ನಮ್ಮ ಮನೆ ಅಕ್ಷರಶಃ ಸ್ವತಂತ್ರ ಅಮೆಜಾನ್ ಕಾಡೇ ಆಗಿತ್ತು.

ಹೀಗೆ ಚಿಕ್ಕಂದಿನಿಂದಲೂ ತರಹೇವಾರಿ ರೀತಿಯ ಬೆಕ್ಕುಗಳನ್ನು ನೋಡುತ್ತಾ ಬಂದಿದ್ದೇನೆ. ಮನೆಯ ಸುತ್ತಮುತ್ತ ಓಡಾಡುತ್ತಿದ್ದ ಬೆಕ್ಕುಗಳಿಗೆ ಅವುಗಳ ಬಣ್ಣ, ಗಾತ್ರ, ರೂಪಗಳಿಗನುಗುಣವಾಗಿ ಅಪ್ಪ ಒಂದೊಂದು ಹೆಸರಿಡುತ್ತಿದ್ದರು. ಮೈಯ್ಯ ಹೆಚ್ಚಿನ ಭಾಗ ಬಿಳಿಯಾಗಿದ್ದು ಮಧ್ಯೆಮಧ್ಯೆ ಕಂದು ಹಾಗೂ ಕೆಂಚು ಮಿಶ್ರಿತ ರೋಮಗಳಿರುವ ದೈತ್ಯಗಾತ್ರದ 'ಪಾಂಡು ಬೆಕ್ಕು', ಪ್ರತೀ ಆರು ತಿಂಗಳಿಗೊಮ್ಮೆ ಬಸುರಿಯಾಗಿ, 'ಬಯಕೆ' ತೀರಿಸಿಕೊಳ್ಳುವುದಕ್ಕೆ ಅಡಿಗೆಮನೆಯಲ್ಲಿ ಕಳ್ಳತನಮಾಡಿ, ಬಸುರಿಯೆಂಬ ಕಾರಣಕ್ಕೆ ಬೀಳಬೇಕಾದ ಒದೆಗಳಿಂದ ಬಚಾವಾಗುತ್ತಿದ್ದ 'ಬಿಲ್ಲಿ ಬೆಕ್ಕು', ಕಂದು-ಪಾಚಿ ಬಣ್ಣ ಮಿಶ್ರಿತ 'ಪಾಚು ಬೆಕ್ಕು', ಪಕ್ಕದ ಗೌಡರ ಮನೆಯಲ್ಲಿ ನಾನ್ವೆಜ್ ತಿಂದು ದಷ್ಟಪುಷ್ಟವಾಗಿ ಬೆಳೆದ ದೈತ್ಯ 'ಕೆಂಚ ರಾಕ್ಷಸ' ಇತ್ಯಾದಿ. ಇವುಗಳಲ್ಲಿ ಸಂಪೂರ್ಣ ಡಿಫರೆಂಟಾಗಿರುವವೆಂದರೆ ದೈತ್ಯ ಪಾಂಡುಬೆಕ್ಕುಗಳು. ಪಾಂಡುಬೆಕ್ಕುಗಳೆಂದರೆ ಯಾರ ಕೈಗೂ ಸಿಗದೆ ಪೋಲಿ ಅಲೆಯುವ 'ಮಾಳ'(ಗಂಡು)ಗಳು. ಶುದ್ಧ ಮಾಂಸಾಹಾರಿಗಳಾದ ಅವುಗಳ ಎದುರೇ ಹಾಲಿನ ಬಟ್ಟಲಿಟ್ಟುಹೋದರೂ ಮುಟ್ಟಿಮೂಸುತ್ತಿರಲಿಲ್ಲ. ಎಷ್ಟೇ ಮುದ್ದಾಗಿ ಬಾಬಾ.. ತ್ಚುತ್ಚು.. ಮಿಯಾಂವ್.... ಎಂದು ಪ್ರೀತಿಯಿಂದ ಕರೆದರೂ ಹತ್ತಿರ ಬರುತ್ತಿರಲಿಲ್ಲ. ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಕಣ್ಣಿಗೆ ಬೀಳುತ್ತಿದ್ದ ಈ ದೈತ್ಯ ಬೆಕ್ಕುಗಳ ಸಾಮರ್ಥ್ಯದ ಮೇಲೆ ನನಗೊಂದು ವಿಧವಾದ ಅಭಿಮಾನ. ಇವೇ ಪ್ರಪಂಚದ ಅತೀ ಶಕ್ತಿಶಾಲಿ ಬೆಕ್ಕುಗಳು ಎನ್ನುವ ನಂಬಿಕೆ. ತಾವು ನೆಲೆನಿಂತ ಸೀಮೆಯಲ್ಲಿ ಮತ್ತೊಂದು ಗಂಡುಬೆಕ್ಕು ಬರುವುದನ್ನು ಇವು ಸುತರಾಂ ಸಹಿಸುತ್ತಿರಲಿಲ್ಲ. ತಮ್ಮ ಇಲಾಖೆಯಲ್ಲಿ ಅಪ್ಪಿತಪ್ಪಿ ಮತ್ಯಾವುದೇ ಮಾಳಬೆಕ್ಕಿನ ನೆರಳು ಕಂಡರೂ ಮುಗಿದೇ ಹೋಯಿತು, ಅದನ್ನು ಅಲ್ಲೇ ಅಡ್ಡಹಾಕಿ, ತಮ್ಮ ಬಲವಾದ ಚೋಟಿನಿಂದ(ಪಂಜ) ಅದರ ಕೆನ್ನೆಗೆ ನಾಲ್ಕು ಬಾರಿಸಿ, ತನ್ನ ಮ್ಯಾಂವ್ ಭಾಷೆಯಲ್ಲಿ "ಇನ್ನೊಮ್ಮೆ ಇಲ್ಲಿಗೆ ಬಂದರೆ ಹುಷಾರ್!" ಎಂದು ಊರಿಗೆಲ್ಲಾ ಕೇಳುವಂತೆ ಎಚ್ಚರಿಕೆ ಕೊಟ್ಟು ದೂರ ಅಟ್ಟುತ್ತಿದ್ದವು. ಆದರೆ ಕೆಲವೊಮ್ಮೆ ಎದುರಾಳಿಯೂ ಪ್ರಬಲನಾಗಿದ್ದಾಗ ಈ ಹೋರಾಟ ಅಷ್ಟು ಸುಲಭವಾಗಿ ಮುಗಿಯುತ್ತಿರಲಿಲ್ಲ. ಸ್ಪರ್ಧಿ-ಪ್ರತಿಸ್ಪರ್ಧಿಗಳೆರೆಡೂ ಎತ್ತರದ ಗೋಡೆಯ ಮೇಲೋ, ಹಂಚು ಮಾಡಿನ ಮೇಲೋ ಎದುರುಬದುರಾಗಿ, ನಿಮಿಷಗಟ್ಟಲೆ ಕದಲದಂತೆ ನಿಂತು ಒಂದನ್ನೊಂದು ಬೈದುಕೊಳ್ಳುತ್ತಿದ್ದವು. "ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ...." ಎಂದು ಮಾತ್ರಾಗಣಸಹಿತ ವಾಕ್ಯುದ್ಧ ನಡೆಸುತ್ತಿದ್ದವೋ, "ಇದು ಈ ಅರ್ಮುಗಂ ಕೋಟೆ ಕಣೋ" ಎಂದು ಮಾಸ್ ಡೈಲಾಗ್ ಹೊಡೆಯುತ್ತಿದ್ದವೋ ಗೊತ್ತಿಲ್ಲ, ಹುಲುಮಾನವರಾದ ನಮಗೆ ಕೇಳುತ್ತಿದ್ದುದು 'ಮೀsssಯಾಂವ್ssss' ಎನ್ನುವ ಕಿರುಚಾಟ ಮಾತ್ರ! ಕೊನೆಗೆ ಅಪ್ಪನೋ ಅಮ್ಮನೋ ಹೋಗಿ, ಭೀಮ-ದುರ್ಯೋಧನರಂತೆ ತೊಡೆತಟ್ಟಿ ('ಪಂಜ' ತಟ್ಟಿ!) ನಿಂತಿರುವ ಇವುಗಳ ಮೇಲೇ ಕಲ್ಲನ್ನೋ, ನೀರನ್ನೋ ಎಸೆದಾಗ ಬೆಚ್ಚಿ ಕೆಳಗೆ ಜಿಗಿದು ಒಂದನ್ನೊಂದು ಬೆನ್ನಟ್ಟುತ್ತಾ ರಾತ್ರೆಯ ಕತ್ತಲಲ್ಲಿ ಅಂತರ್ಧಾನವಾಗುತ್ತಿದ್ದವು.

ಅದೇಕೋ ಗೊತ್ತಿಲ್ಲ, ರೂಪದಲ್ಲಿ ಹುಲಿಯ ಹತ್ತಿರದ ಸಂಬಂಧಿಗಳಂತೆ ಕಾಣುವ ಈ ಬೆಕ್ಕುಗಳ ಮೇಲೆ ಮೊದಲಿನಿಂದಲೂ ನನಗೊಂದು ತೆರನಾದ ಪ್ರೀತಿತುಂಬಿದ ಕುತೂಹಲ. ಎಲ್ಲೇ ಪುಟಾಣಿ ಬೆಕ್ಕುಮರಿ ಕಂಡರೂ ಅದನ್ನು ಮನೆಗೆ ಒಯ್ಯೋಣವೆಂದು ನಾನು ಹಠ ಹಿಡಿಯುವುದು, ಅಮ್ಮ/ಅಪ್ಪ ಗದರಿಸಿ ಸುಮ್ಮನಾಗಿಸುವುದು ನಡೆಯುತ್ತಲೇ ಇರುತ್ತಿತ್ತು. ನಮ್ಮನೆಗೆ ತಾನಾಗೇ ಬಂದು ಸೇರಿಕೊಂಡಿದ್ದ ಪಾಚುಬೆಕ್ಕು ಅಮ್ಮ ಬೆಳಗ್ಗೆ ಏಳುತ್ತಿದ್ದಂತೆಯೇ ಅದೆಲ್ಲಿಂದಲೋ ಓಡಿಬಂದು ಮ್ಯಾಂವ್ ಮ್ಯಾಂವ್ ಎನ್ನುತ್ತಾ, ಅವಳ ಕಾಲಿಗೆ ತನ್ನ ನುಣುಪಾದ ಮೈಯ್ಯನ್ನು ಸವರುತ್ತಾ ಹಾಲು ಹಾಕುವಂತೆ ಪೂಸಿಹೊಡೆಯುವುದನ್ನೂ, ತನಗೆಂದೇ ಮೀಸಲಿಟ್ಟ ಬಟ್ಟಲಿಗೆ ಹಾಕಿದ ಹಾಲನ್ನು ಜಗತ್ತಿನ ಇನ್ಯಾರಿಗೂ ಕಾಣದಂತೆ(!) ಕಣ್ಮುಚ್ಚಿಕೊಂಡು ಕುಡಿಯುವುದನ್ನೂ ನಾನು ಕುತೂಹಲದಿಂದ ನೋಡುತ್ತಿದ್ದೆ. ಕೆಲವೊಮ್ಮೆ ಹಠಮಾಡಿ ನಾನೇ ಬಟ್ಟಲಿಗೆ ಹಾಲು ಹಾಕುತ್ತಿದ್ದೆ. ಅದು ಬಾಲ ನೆಟ್ಟಗೆ ಮಾಡಿಕೊಂಡು ಏರುದನಿಯಲ್ಲಿ ಕೂಗುತ್ತಾ ಹಾಲಿನ ಲೋಟ ಹಿಡಿದ ನನ್ನನ್ನು ಹಿಂಬಾಲಿಸಿಕೊಂಡು ಓಡಿ ಬರುವುದನ್ನು ನೋಡುವುದೇ ನನಗೊಂದು ಹೆಮ್ಮೆ. ತನ್ನ ಬಟ್ಟಲಿಗೆ ಹಾಕಿದ ಹಾಲನ್ನದು ಕಣ್ಮುಚ್ಚಿಕೊಂಡು ಚಪ್ಪರಿಸುವಾಗ ಹಿತವಾಗಿ ಮೈದಡವುತ್ತಾ ಅದರ ಸ್ನೇಹ ಸಂಪಾದಿಸಲು ಪ್ರಯತ್ನಿಸುತ್ತಿದ್ದೆ. ಅಡಿಗೆಮನೆಯಲ್ಲಿ ನಾವು ಸಾಲಾಗಿ ಕುಳಿತು ತಿಂಡಿ ತಿನ್ನುವಾಗ ತಾನೂ ಸಾಲಿನ ಕೊನೆಯಲ್ಲಿ ಕಾಲು ಮಡಿಚಿಕೊಂಡು ಕುಳಿತು, ನಮ್ಮ ತಟ್ಟೆಯಲ್ಲಿದ್ದ ತಿಂಡಿಯನ್ನು ಆಸೆಯಿಂದ ದಿಟ್ಟಿಸುತ್ತ, ಏನಿಲ್ಲವೆಂದರೂ ಎರೆಡು-ಮೂರು ದೋಸೆ/ರೊಟ್ಟಿ/ಚಪಾತಿಗಳನ್ನು ಹೊಟ್ಟೆಗಿಳಿಸುತ್ತಿತ್ತು. ಹಸಿವಾದಾಗ ಜಗತ್ತಿನ ಅತ್ಯಂತ ಸಾಧು ಪ್ರಾಣಿಯಂತೆ ಫೋಸ್ ಕೊಡುತ್ತಾ, ವಿನಮ್ರ ದನಿಯಲ್ಲಿ ಕೂಗುತ್ತಾ ಬಳಿಗೆ ಬರುತ್ತಿದ್ದ ಅದಕ್ಕೆ ಊಟವಾಗುತ್ತಿದ್ದಂತೆಯೇ ಆಟವಾಡವ ಮೂಡ್ ಬಂದು ಒಂದೋ ಅಡಿಗೆಮನೆಯ ಹೊಸಿಲಿನ ಮೇಲೆ ಕುಳಿತು ಆಚೀಚೆ ಓಡಾಡುವರ ಕಾಲನ್ನು ತನ್ನ ಪಂಜದಿಂದ ಹಿಡಿದುಕೊಂಡು ಕಚ್ಚುತ್ತಿತ್ತು; ಇಲ್ಲಾ ಅಂಗಳದ ಕಟ್ಟೆಯಮೇಲೋ, ಹುಲ್ಲುಗೊಣಬೆಯ ಮೇಲೋ ಕುಳಿತು ಮುಖತೊಳೆಯಲಾರಂಭಿಸುತ್ತಿತ್ತು.  ಆಗೇನಾದರೂ ನಾನು ಹತ್ತಿರ ಹೋದರೆ ಕುಳಿತಲ್ಲೇ ಅಂಗಾತ ಬಿದ್ದುಕೊಂಡು ಗುಲಾಬಿ ಮುಳ್ಳುಗಳಂತಿರುವ ಉಗುರುಗಳಿಂದ ಕೂಡಿದ ತನ್ನ ಕೈಯ್ಯನ್ನು ಬೀಸುತ್ತಾ ಆಟಕ್ಕೆ ಬರುವಂತೆ ಸವಾಲೆಸೆಯುತ್ತಿತ್ತು. ಅದರ ಸವಾಲನ್ನು ಸ್ವೀಕರಿಸಿದ ನಾನು ತೆಂಗಿನ ಗರಿಯನ್ನೋ, ಹಿಡಿಕಡ್ಡಿಯನ್ನೋ ಹಿಡಿದು ಅದರ ಮೈ-ಮೂತಿಗಳಿಗೆಲ್ಲಾ ತಾಗಿಸಿದರೆ, ತನ್ನೆರೆಡೂ ಪುಟಾಣಿ ಪಂಜಗಳಿಂದ ಆ ತೆಳ್ಳಗಿನ ಕಡ್ಡಿಯನ್ನು ಹಿಡಿದು ಬಾಯಿಗೆ ಹಾಕಿಕೊಳ್ಳಲೆತ್ನಿಸುತ್ತಾ ನೆಲದ ತುಂಬಾ ಹೊರಳಾಡುತ್ತಿತ್ತು. ಅದು ಉಳುಚಿಹೋಗುವ ಕಡ್ಡಿಯನ್ನು ಹಿಡಿದುಕೊಂಡು ತೆರೆದ ಬಾಯಿಯೊಳಕ್ಕೆ ತುಂಬಿಕೊಳ್ಳುವುದು, ನಾನು ಆ ಕಡ್ಡಿಯನ್ನು ತಪ್ಪಿಸಿ ಮಲಗಿರುವ ಅದರ ಮೃದುವಾದ ಹೊಟ್ಟೆ-ಎದೆಭಾಗಕ್ಕೆ ಅದೇ ಕಡ್ಡಿಯಿಂದ ಕಚಗುಳಿ ಕೊಡುವುದು, ಕಚಗುಳಿ ಇಡಿಸಿಕೊಂಡೂ ನಗಲಾಗದ ಅದು ಮಲಗಿದಲ್ಲೇ ಪಲ್ಟಿ ಹೊಡೆಯುವುದು... ಹೀಗೆ ಮೋಜಿನಿಂದ ಸಾಗುತ್ತಿತ್ತು ನಮ್ಮ ಆಟ.

ಹೀಗೆ ಪ್ರೀತಿಯಿಂದ ಸಾಕಿದ ಬೆಕ್ಕಿನ ಸಂಗ-ಸ್ನೇಹ ಎಷ್ಟು ಖುಷಿ ಕೊಡುತ್ತದೆಯೋ, ಅವುಗಳ ಸಾವು ಅಷ್ಟೇ ನೋವುಂಟುಮಾಡುತ್ತದೆ. ಬೆಕ್ಕೊಂದು ಸರಾಸರಿ ಹತ್ತರಿಂದ ಹನ್ನೆರೆಡು ವರ್ಷ ಬದುಕಬಲ್ಲದೆಂಬ ಅಂದಾಜಿದೆಯಾದರೂ ಆ ಕಾಲಕ್ಕೆ ನಾವು ಸಾಕಿದ್ದ ಯಾವುದೇ ಬೆಕ್ಕು ಆರೇಳು ವರ್ಷಕ್ಕಿಂತ ಹೆಚ್ಚು ಬದುಕಿದ್ದನ್ನು ನಾನು ನೋಡಿಲ್ಲ. ನಾಯಿಗಳ ಬಾಯಿಗೆ ಸಿಕ್ಕಿ, ತಮ್ಮದೇ ಕುಲಬಾಂಧವರಿಂದ ಕಚ್ಚಿಸಿಕೊಂಡು, ವಾಹನಗಳಡಿಗೆ ಅಪ್ಪಚ್ಚಿಯಾಗಿ.. ಹೀಗೇ ಬೆಕ್ಕುಗಳ ಬದುಕು ಒಂದಿಲ್ಲೊಂದು ದುರಂತ ಅಂತ್ಯ ಕಾಣುವುದೇ ಹೆಚ್ಚು. ಹಳ್ಳಿಗಳಲ್ಲಂತೂ ಎಲ್ಲೆಂದರಲ್ಲಿ ಓಡಾಡುವ ಇವುಗಳು ಹೇಳದೇ ಕೇಳದೇ ನಾಪತ್ತೆಯಾಗಿಬಿಡುವುದೇ ಜಾಸ್ತಿ. ಹೀಗಾದಾಗೆಲ್ಲ ಎಲ್ಲೇ, ಯಾವುದೇ ಬೆಕ್ಕಿನ 'ಮ್ಯಾಂವ್' ಕೇಳಿಸಿದರೂ ಒಂದು ಕ್ಷಣ ಅದು ನಮ್ಮ ಮುದ್ದಿನ ಬೆಕ್ಕೇ ಇರಬಹುದೇನೋ ಅನಿಸುವುದು ಸಹಜವಾದರೂ ನನ್ನ ಪ್ರಕಾರ ಪ್ರೀತಿಯಿಂದ ಸಾಕಿದ ಬೆಕ್ಕೊಂದು ಕಣ್ಣೆದುರೇ ಮೃತವಾಗುವುದಕ್ಕಿಂತ ಹೀಗೇ ನಾಪತ್ತೆಯಾಗಿಹೋಗುವುದೇ ಮೇಲು.  ಸಾಕಿದ ಬೆಕ್ಕೊಂದು ನಾಪತ್ತೆಯಾದಾಗ "ಮಾಂಸದ ಆಸೆಗೆ ಅಲ್ಲೆಲ್ಲೋ ಯಾರದೋ ಮನೆಗೆ ಹೋಗಿ ಸೇರಿಕೊಂಡಿದೆಯಂತೆ" ಅಂತ ನಮ್ಮನಮ್ಮಲ್ಲೇ ಮಾತನಾಡಿಕೊಂಡು ಸಮಾಧಾನಮಾಡಿಕೊಳ್ಳಬಹುದು. ಚಿಕ್ಕಂದಿನಲ್ಲಿ ಶಾಲೆಯಿಂದ ಮರಳುವ ನನಗಾಗಿ ಬಾಗಿಲಲ್ಲೇ ಕಾದುಕುಳಿತಿರುತ್ತಿದ್ದ, ಓದುತ್ತಾ ಕುಳಿತ ನನ್ನ ತೊಡೆಯೇರಿ ಮುದ್ದಾಗಿ ನಿದ್ರಿಸುತ್ತಿದ್ದ, ಮನೆಯೊಳಗೆ ಹರಿದು ಬರುತ್ತಿದ್ದ ಹಾವನ್ನು ಅಡ್ಡಹಾಕಿ ತಡೆದು ಶೌರ್ಯ ಮೆರೆದಿದ್ದ, ಬಾಲ ಎತ್ತಿಕೊಂಡು ಮ್ಯಾಂವ್ ಮ್ಯಾಂವ್ ಎಂದು ಮನೆಯ ತುಂಬಾ ಓಡಾಡುತ್ತಾ ಎಲ್ಲರ ಪ್ರೀತಿಪಾತ್ರವಾಗಿದ್ದ ಪಾಚುಬೆಕ್ಕು ಕಾರಣವೇ ಗೊತ್ತಾಗದಂತೆ ಅನ್ನಾಹಾರ ಬಿಟ್ಟು ಕೃಶವಾಗುತ್ತಾ ಆಗುತ್ತಾ ಕೊನೆಗೊಂದು ದಿನ ಅಪ್ಪನ ಕೈಯ್ಯಲ್ಲಿ ಗಂಗಾಜಲ ಬಿಡಿಸಿಕೊಂಡು ಇಹಲೋಕ ತ್ಯಜಿಸಿದ ಕ್ಷಣ ನೆನಪಾದಾಗ ಈಗಲೂ ಸಂಕಟವಾಗುತ್ತದೆ. ಮೊನ್ನೆಮೊನ್ನೆಯವರೆಗೂ ಮುದ್ದಾಗಿ ಓಡಾಡಿಕೊಂಡಿದ್ದ ಆ ಪುಟ್ಟ ಜೀವ ಸಾವಿನ ಸಂಕಟ ತಾಳಲಾರದೆ ಕಟ್ಟಕಡೆಯ ಬಾರಿಗೆಂಬಂತೆ ಕ್ಷೀಣದನಿಯಲ್ಲೊಮ್ಮೆ ನರಳಿ ನಿಶ್ಚಲವಾಗಿಹೋದಾಗ ಮನೆಯವರೆಲ್ಲರ ಕಣ್ಣಲ್ಲೂ ನೀರು. ಕೊನೆಗೆ ಹಿತ್ತಲಲ್ಲೊಂದು ಗುಂಡಿತೋಡಿ ಹೂಳುವ ಕ್ಷಣದಲ್ಲಿ ತೆರೆದೇ ಇದ್ದ ಅದರ ಮೃತ ಕಣ್ಣುಗಳಲ್ಲಿ ಕಂಡ ಆ ಯಾತನೆಯ ಚಿತ್ರ ಇಂದಿಗೂ ಮನಸ್ಸಿನಲ್ಲೇ ಉಳಿದುಹೋಗಿದೆ.

ನಾಯಿಗಳಷ್ಟಲ್ಲದಿದ್ದರೂ ಬೆಕ್ಕುಗಳೂ ಒಂದು ಮಟ್ಟಕ್ಕೆ ಭಾವುಕ ಜೀವಿಗಳು. ಮುಪ್ಪಡರಿ, ಸರಿಯಾಗಿ ನಡೆಯಲೂ ಆಗದೇ, ರೋಮವುದುರಿ ಮೈಯ್ಯೆಲ್ಲಾ ದದ್ದರಿಸಿಹೋಗಿ, ಎಲ್ಲರಿಂದ ಕಡೆಗಣಿಕೆಗೊಳಪಟ್ಟಿದ್ದ ಗಂಡು ಬೆಕ್ಕೊಂದರೆಡೆಗೆ ಅದರ ಯೌವನದ ದಿನಗಳ ಸಂಗಾತಿಯಾಗಿದ್ದ ಹೆಣ್ಣು ಬೆಕ್ಕೊಂದು ತೋರಿಸಿದ್ದ ಪ್ರೀತಿಯನ್ನು ಕಣ್ಣಾರೆ ನೋಡಿದ ಮೇಲೇ ನನಗೆ ಹೀಗನಿಸಿದ್ದು. ಅದೊಂದು ಸುಡುಸುಡು ಬಿಸಿಲಿನ ಮಧ್ಯಾಹ್ನ 'ಅವಳು' ಈಗಷ್ಟೇ ಊಟ ಮುಗಿಸಿ ಅಂಗಳದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತ ಮಲಗಿದ್ದಳು. ಇದ್ದಕ್ಕಿದ್ದಂತೆ ಹುಲ್ಲುಗೊಣಬೆಯಲ್ಲಿ ಏನೋ ಸರಸರ ಸರಿದಾಟ. ಅವಳು ಕಾಲುಗಳ ಮೇಲಿಟ್ಟುಕೊಂಡಿದ್ದ ತಲೆಯನ್ನು ಫಕ್ಕನೆ ಎತ್ತಿ ಅತ್ತ ನೋಡಿದರೆ ಅಲ್ಲಿದ್ದುದು ಜೀವವೇ ಭಾರವಾದಂತೆ ಆಯಾಸದ ಹೆಜ್ಜೆಯಿಡುತ್ತಾ ಬರುತ್ತಿದ್ದ ತನ್ನ ಮುದಿಗೆಳೆಯ. ಅದೇನಾಯಿತೋ ಏನೋ, ಅವಳು ಮರುಕ್ಷಣವೇ ಮಲಗಿದಲ್ಲಿಂದ ಎದ್ದು ನೇರ ಅಡಿಗೆಮನೆಯ ಒಳಗೋಡಿದಳು‌. ಅಲ್ಲಿದ್ದ ನನ್ನಮ್ಮನೊಂದಿಗೆ ಜಗಳಾಡಿ, ಕೂಗಿ, ಗಲಾಟೆಮಾಡಿ, ತಾನು ಈಗಷ್ಟೇ ಕುಡಿದು ಖಾಲಿ ಮಾಡಿದ್ದ ಬಟ್ಟಲಿಗೆ ಮತ್ತೊಂದಿಷ್ಟು ಹಾಲು ಹಾಕಿಸಿಕೊಂಡಳು. ಆದರೆ ಬಟ್ಟಲಿಗೆ ಹಾಲುಬಿದ್ದ ಮರುಕ್ಷಣವೇ ನೋಡುತ್ತಿದ್ದ ನಾನು-ಅಮ್ಮ ಅಚ್ಚರಿಪಡುವಂತೆ ಒಂದು ತೊಟ್ಟು ಹಾಲನ್ನೂ ಕುಡಿಯದೇ ತಾನು ಇಷ್ಟೊತ್ತು ಗಲಾಟೆ ಮಾಡಿದ್ದೇ ಸುಳ್ಳೇನೋ ಎಂಬಂತೆ ಹೊರನಡೆದು, ಮೊದಲು ಮಲಗಿದ ಜಾಗದಲ್ಲೇ ಕಾಲುಚಾಚಿ ಮಲಗಿಬಿಟ್ಟಳು! ನೋಡನೋಡುತ್ತಿದ್ದಂತೆಯೇ ಅಂಗಳದಲ್ಲಿದ್ದ ಅವಳ ಮುದಿಗೆಳೆಯ ಅದೇ ಆಯಾಸದ ಭಾರ ಹೆಜ್ಜೆಗಳನ್ನಿಡುತ್ತಾ ಒಳಹೊಕ್ಕು ಬಟ್ಟಲಿನಲ್ಲಿದ್ದ ಹಾಲು ಕುಡಿಯತೊಡಗಿದ! ನನಗಂತೂ ಕಣ್ಣು ಹೊರಬರುವಷ್ಟು ಅಚ್ಚರಿ. ನಾವೆಲ್ಲರೂ ಕಡೆಗಣಿಸಿದ್ದ, ಸಾವಿಗೆ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿದ್ದ ಆ ಮುದಿಬೆಕ್ಕು.. ಅದು ತನಗೆ ಹಸಿವಾಗಿದೆಯೆಂದಾಗಲೀ, ಹಾಲು ಹಾಕಿಸೆಂದಾಗಲೀ ಒಂದು ಮಾತೂ ಬಾಯ್ಬಿಟ್ಟು ಕೇಳಿರಲಿಲ್ಲ. ಅದ್ಯಾವ ಮೂಕ ಸಂವೇದನೆಯೋ, ಭಾವ ಸಂವಹನೆಯೋ.. ನೂರಾರು ಭಾಷೆಗಳ, ಸಾವಿರಾರು ಪದಗಳ ಮೀರಿದ ಮಾತುಕತೆಯೊಂದು ಅಲ್ಲಿ ಒಂದು ಸಣ್ಣ ಇಶಾರೆಯೂ ಇಲ್ಲದಷ್ಟು ಮೌನದಲ್ಲಿ ನಡೆದುಹೋಗಿತ್ತು.

ಹೇಳುತ್ತಾ ಹೋದರೆ ಮಾರ್ಜಾಲ ಲೋಕದಲ್ಲಿ ಇಂತಹ ಹತ್ತಾರು ಭಾವುಕ ಸಂಗತಿಗಳಿವೆ‌. ತಾನಿಲ್ಲದ ಹೊತ್ತಿನಲ್ಲಿ ಧಾಳಿಮಾಡಿದ 'ಮಾಳ' ಬೆಕ್ಕೊಂದಕ್ಕೆ ಬಲಿಯಾದ ತನ್ನ ಎರೆಡುವಾರ ಪ್ರಾಯದ ಮೂರು ಪುಟಾಣಿ ಮರಿಗಳ ಶವವನ್ನು ತೋರಿಸುತ್ತಾ, ನೋಡಲು ಬಂದವರೆಲ್ಲರ ಕಾಲಿಗೆ ಸುತ್ತುಬರುತ್ತಾ, ಅರ್ಥವಾಗದ ಅದ್ಯಾವುದೋ ಕೂಗಿನಲ್ಲಿ ರೋಧಿಸುತ್ತಿದ್ದ ತಾಯಿಬೆಕ್ಕಿನ ನೋವು ತುಂಬಿದ ಕೂಗು ಇಂದಿಗೂ ನೆನೆಪಿನಲ್ಲುಳಿದಿದೆ.

                 *****************

ತಮ್ಮ ಕುಲಬಾಂಧವರನ್ನೆಲ್ಲ ಬಿಟ್ಟು ಮನುಷ್ಯನೊಂದಿಗೆ ರಾಜಿಮಾಡಿಕೊಂಡು, ಮುದ್ದಿಸಿಕೊಂಡು ಬದುಕುವ ಈ ಕುಡಿಮೀಸೆಯ ಮಾರ್ಜಾಲಗಳ ಒಡನಾಟ ಬೆಂಗಳೂರಿಗೆ ಬಂದಮೇಲೆ ನಿಂತೇಹೋಗಿದೆ. ಇಲ್ಲಿ ನಾಲಿಗೆಗೆ ಉಚ್ಛರಿಸಲಿಕ್ಕೂ ಕಷ್ಟವಾಗುವ ತಳಿಗಳಿಂದ ಗುರುತಿಸಲ್ಪಡುವ, ಡ್ಯಾನಿ, ಮಾರ್ಕೋ, ಸ್ಯಾಮ್ ಮುಂತಾದ ಮನುಷ್ಯರಿಗಿಂತಲೂ ಚಂದದ ಹೆಸರುಗಳಿಂದ ಕರೆಯಿಸಿಕೊಳ್ಳುವ, ಉದ್ದುದ್ದ ರೋಮದ, ಥಟ್ಟನೆ ನೋಡಿದರೆ ವಿಗ್ ಹಾಕಿಕೊಂಡ ಕುಳ್ಳ ನಾಯಿಯಂತೆ ಕಾಣುವ, ತರಹೇವಾರಿ ರೂಪ-ಆಕಾರಗಳ, ತನ್ನ ಒಂದು ಚಿಕ್ಕ ಪಲ್ಟಿಗೂ ಮನೆಯವರೆಲ್ಲರಿಂದ ಶಭಾಶ್ಗಿರಿಯನ್ನು ಪಡೆಯುವ ಮುದ್ದು ಬೆಕ್ಕಣ್ಣಗಳನ್ನು ನೋಡುವಾಗ ಬಾಲ್ಯದ ಬಿಲ್ಲಿ, ಪಾಚು, ಪಾಂಡುಗಳೆಲ್ಲ ಮತ್ತೆ ಜೀವಂತವಾಗಿ ಮೀಸೆ ಕುಣಿಸಿದಂತಾಗುತ್ತದೆ. ಮುಂದೊಂದು ದಿನ ಮತ್ತದೇ ಹಳ್ಳಿ ಜೀವನಕ್ಕೆ ಮರಳಿ, ಹೊಸಿಲ ಮೇಲೆ ಕುಳಿತ ಬೆಕ್ಕನ್ನು ಬೊಗಸೆಯಲ್ಲಿ ಹಿಡಿದು ಮುದ್ದಿಸುವೆನೆಂಬ ಕನಸೊಂದು ಹೊಸತಾಗಿ ಅರಳುತ್ತದೆ.

[ಈ ಬರಹವು ಕೆಲವೊಂದು ಕತ್ತರಿ ಪ್ರಯೋಗಗಳೊಂದಿಗೆ ದಿನಾಂಕ 24-9-2017ರ  ವಿಶ್ವವಾಣಿ ವಿರಾಮ ಸಾಪ್ತಾಹಿಕದ 'ಮಾರ್ಜಾಲ ಮೋಹ' ಅಂಕಣದಲ್ಲಿ 'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ' ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿದೆ.]

ಸೋಮವಾರ, ಆಗಸ್ಟ್ 14, 2017

ಮಳೆಗಾಲ ಬಂತೋ ಮಲೆನಾಡ ಶಾಲೆಗೆ...



ಅದು ಮೇ ತಿಂಗಳ ಕೊನೆಯ ವಾರ. ಪುಟ್ಟು ಗೋಡೆಗೆ ಎಸೆಯಲ್ಪಟ್ಟು ಒಲ್ಲದ ಮನಸ್ಸಿನಿಂದ ಪುಟಿದು ಬರುತ್ತಿರುವ ಚೆಂಡಿಗೆ ಅಷ್ಟೇ ಒಲ್ಲದ ಮನಸ್ಸಿನಿಂದ ಬ್ಯಾಟು ತಾಗಿಸುತ್ತಾ ಅಂಗಳದಲ್ಲಿ ನಿಂತಿದ್ದಾನೆ. ಇಷ್ಟು ದಿನ ಅವನ ಪುಂಡಾಟ, ಚೇಷ್ಟೆ, ಗಲಾಟೆಗಳಿಗೆ ಜೊತೆಯಾಗಿದ್ದ ಅತ್ತೆ-ಮಾವ-ಚಿಕ್ಕಮ್ಮನ ಮಕ್ಕಳೆಲ್ಲಾ ಕೆಲವೇ ನಿಮಿಷದ ಕೆಳಗೆ ಬಸ್ಸು ಹತ್ತಿ ತಂತಮ್ಮ ಊರಿಗೆ ಹೊರಟುಹೋಗಿದ್ದಾರೆ. ಈ ಬೇಸರ ಒಂದುಕಡೆಯಾದರೆ ಕಳೆದೆರೆಡು ತಿಂಗಳಿಂದ ಸ್ವತಂತ್ರವಾಗಿ ಹಾರಿ, ಕುಣಿದು, ಕುಪ್ಪಳಿಸುವಂತೆ ಮಾಡಿದ್ದ ಬೇಸಿಗೆ ರಜೆ ಇನ್ನು ಮೂರೇ ಮೂರು ದಿನದಲ್ಲಿ ಮುಗಿದು ಹೋಗುತ್ತದೆನ್ನುವ ಸಂಕಟ ಇನ್ನೊಂದುಕಡೆ. ಜೊತೆಗೆ ದಪ್ಪ ಮೀಸೆಯ ಸಿದ್ರಾಮ ಮೇಷ್ಟ್ರು ರಜೆಯಲ್ಲಿ ಮಾಡಲು ಕೊಟ್ಟಿದ್ದ ಹೋಂ ವರ್ಕ್ ಮುಗಿದಿಲ್ಲವೆಂಬ ಆತಂಕಬೇರೆ! ಈಗ ಜಗತ್ತಿನ ಅತ್ಯಂತ ದುಃಖತಪ್ತ ಜೀವಿಗಳಲ್ಲಿ ಪುಟ್ಟುವೂ ಒಬ್ಬ. ಆಟದ ಮೇಲಿನ ಬೇಸರ ಜಾಸ್ತಿಯಾದಾಗಲೇ ಅಮ್ಮ ಮಾಡಿದ ಹಲಸಿನಕಾಯಿ ಚಿಪ್ಸು ನೆನಪಾಗುತ್ತದೆ. ಅಡಿಗೆಮನೆಗೆ ಬಂದು ಮೆಲ್ಲಗೆ ನಾಗಂದಿಗೆಯ ಮೇಲಿರುವ ಡಬ್ಬಿಯಿಳಿಸಿ, ಒಂದಿಷ್ಟು ಚಿಪ್ಸನ್ನು ತಟ್ಟೆಗೆ ಹಾಕಿಕೊಂಡು ಕ್ರುಂಕ್ರುಂ ಶಬ್ಧಮಾಡುತ್ತಾ ತಿನ್ನುತ್ತಿದ್ದಾನೆ. ಇದ್ದಕ್ಕಿದ್ದಂತೆ ಅವನೆದುರು ನೆಲದಮೇಲೆ ಕಿಟಕಿ ಸರಳುಗಳ ನೆರೆಳಿನ ಸಮೇತ ಬೀಳುತ್ತಿದ್ದ ಬಿಸಿಲು ಮಂದವಾಗುತ್ತಾ ಆಗುತ್ತಾ ಮಾಯವೇ ಆಗಿಬಿಡುತ್ತದೆ. ಪುಟ್ಟು ಕುತೂಹಲದಿಂದ ಹೊರಬಂದು ಆಕಾಶದೆಡೆಗೆ ನೋಡುತ್ತಾನೆ. ಅದೆಲ್ಲಿದ್ದವೋ ಏನೋ, ಆಕಾಶದ ಎಂಟು ಮೂಲೆಗಳಿಂದಲೂ ಹಿರಿ,ಕಿರಿ,ಮರಿ,ಭಾರೀ ಮೋಡಗಳೆಲ್ಲಾ ನುಗ್ಗಿಬಂದು ಸೂರ್ಯನನ್ನು ಮುಚ್ಚಿಬಿಡುತ್ತವೆ. ಬಿಸಿಲಿದ್ದದ್ದೇ ಸುಳ್ಳೇನೋ ಎಂಬಷ್ಟು ಮುಸುಕು. ಗಾಳಿ ಸುಂಯ್ಯನೆ ಬೀಸುತ್ತಾ ಮಾವು, ಅಡಿಕೆ, ತೆಂಗಿನ ಮರಗಳೆಲ್ಲವೂ ಯಾರೋ ಜುಟ್ಟು ಹಿಡಿದೆಳೆಯುತ್ತಿರುವಂತೆ ಅಲ್ಲಾಡತೊಡಗುತ್ತವೆ. ನೋಡ ನೋಡುತ್ತಿದ್ದಂತೆ ಕಪ್ಪು ಮೋಡದಂಚಿನಲ್ಲಿ ಮಿಂಚೊಂದು ಫಳೀರನೆ ಹೊಳೆಯುತ್ತದೆ. ಅದರ ಬೆನ್ನಿಗೇ ಹಂಚುಮಾಡಿನ ಮೇಲೆ ದೈತ್ಯ ಕಲ್ಲುಗುಂಡೊಂದು ಉರುಳಿಬರುತ್ತಿರುವಂತಹಾ ಸದ್ದಿನ ಗುಡುಗುಡು ಗುಡುಗು! 

"ಸಿಡ್ಲು ಹೊಡೀತು. ಬಾ ಅಪ್ಪಿ ಒಳ್ಗೇ" ಅಮ್ಮ ಕೂಗುತ್ತಾಳೆ. ನಾಲ್ಕೂ ಮೊವತ್ತರಿಂದ ಏಕ್ ದಂ ಆರೂ ಮೊವತ್ತಕ್ಕೆ ಜಿಗಿದ ಹವಾಮಾನಕ್ಕೆ ಹೆದರಿದ ಪುಟ್ಟು ಒಳಗೆ ಬರಲೆಂದು ತಿರುಗುತ್ತಾನೆ.

'ಟಪ್!'

ಮೇಘಲೋಕದಿಂದುರುಳಿಬಂದ ತಂಪು ಹನಿಯೊಂದು ಪುಟ್ಟುವಿನ ಕೆನ್ನೆಯ ಮೇಲೆ ಬೀಳುತ್ತದೆ. ಅದು ಆ ವರುಷದ ಮೊದಲ ಮಳೆಹನಿ! ನೋಡುನೋಡುತ್ತಿದ್ದಂತೆ ಮೇಲೆಲ್ಲೋ ನೂರಾರು ಹಳೆಯ ಚಲನಚಿತ್ರ ನಾಯಕಿಯರು ಗೋಳೋ ಎಂದು ಅಳುತ್ತಿರುವಂತೆ ಹನಿಗಳು ಪಟಪಟನೆ ಜಾರತೊಡಗುತ್ತವೆ. ಬಿಸಿಲಿನ ಹೊಡೆತಕ್ಕೆ ಧೂಳುಧೂಳಾಗಿ ಒಡೆದುಹೋಗಿದ್ದ ಅಂಗಳದ ಮಣ್ಣೆಲ್ಲ ಮಳೆಯಲಿ ನೆಂದು, ಛಳಿಗೆ ಒಂದನ್ನೊಂದು ಗಟ್ಟಿಯಾಗಿ ತಬ್ಬಿಕೊಂಡು ಘಮ್ಮೆಂಬ ಕಂಪು ಮೂಗಿಗೆ ರಾಚುತ್ತದೆ. ಹಂಚಿನ ಮಾಡಿನ ಮೇಲೆ ಹನಿಗಳು ಬೀಳುತ್ತಿರುವ ಟಪಟಪ ಸದ್ದು ಹಂತ ಹಂತವಾಗಿ ತಾರಕಕ್ಕೇರುತ್ತದೆ. ಕತ್ತಲೆಂದು ಸ್ವಿಚ್ ಹಾಕಿದರೆ ಮಿಂಚು-ಗುಡುಗುಗಳ ಭಯಕ್ಕೆ ಕರೆಂಟು ಯಾವಾಗಲೋ ಪರಾರಿಯಾಗಿಬಿಟ್ಟಿದೆ. ಅದಿನ್ನು ಮರಳಿ ಬರುವುದು ನಾಳೆಯೋ, ನಾಡಿದ್ದೋ ಇಲ್ಲಾ ಮುಂದಿನ ವಾರವೋ ಎಂಬುದು ಸಾಕ್ಷಾತ್ ಲೈನ್ ಮ್ಯಾನ್ ಮಂಜಣ್ಣನಿಗೂ ಗೊತ್ತಿರಲಿಕ್ಕಿಲ್ಲ.

ಪುಟ್ಟು ಅಪ್ಪ-ಅಮ್ಮನ ಜೊತೆ ವರಾಂಡದಲ್ಲಿ ನಿಂತು ಮೊದಲ ಮಳೆಯಲ್ಲಿ ತೋಯುತ್ತ ನಿಂತಿರುವ ಅಂಗಳವನ್ನೂ, ಮಾಡಿನಿಂದ ಸುಂಯ್ಯನೆ ಜಾರುತ್ತಿರುವ ಹನಿಗಳನ್ನೂ, ಮಿಂದು ಶುಚಿಯಾಗುತ್ತಿರುವ ಮರಗಳನ್ನೂ ಸಂಭ್ರಮದಿಂದ ನೋಡುತ್ತಿದ್ದಾನೆ. ಇದ್ದಕ್ಕಿದ್ದಂತೆ ಹನಿಗಳ ಶಬ್ದ ಹೆಚ್ಚಿ ತಟತಟನೆ ಸದ್ದಾಗುತ್ತದೆ.

"ಅಮ್ಮಾ.. ಆನೆಕಲ್ಲು!"
ಪುಟ್ಟು ಕಿರುಚಿಕೊಳ್ಳುತ್ತಾನೆ.

"ಅದು ಆನೆಕಲ್ಲಲ್ದ ಅಪ್ಪಿ, ಆಲೀಕಲ್ಲು. ತಡೀ. ಪಾತ್ರೆ ತರ್ತಿ" ಅಮ್ಮ ಒಳಗಿನಿಂದ ಪುಟ್ಟ ಬಟ್ಟಲೊಂದನ್ನು ತರುತ್ತಾಳೆ. ಹಂಚಿನ ಮೇಲೆ, ಮಣ್ಣಿನ ಮೇಲೆ, ಅಂಗಳದ ಚಪ್ಪಡಿ ಕಲ್ಲಿನ ಮೇಲೆ ಟಪಟಪನೆ ಬೀಳುತ್ತಿರುವ ಮೋಡದ ತುಣುಕುಗಳನ್ನು ಮೂವರೂ ಆಯ್ದು ಬಟ್ಟಲಿನೊಳಕ್ಕೆ ತುಂಬಿಕೊಳ್ಳುತ್ತಾರೆ. ಹೆಕ್ಕುತ್ತಿರುವಾಗಲೇ ಮೂರ್ನಾಲ್ಕು ಆಲಿಕಲ್ಲುಗಳನ್ನು ಪುಟ್ಟು ಮೆತ್ತಗೆ, ಅಪ್ಪ-ಅಮ್ಮನಿಗೆ ಕಾಣದಂತೆ ಬಾಯಿಗೆಸೆದುಕೊಳ್ಳುತ್ತಾನೆ. ಕರೆಂಟಿಲ್ಲದ ರಾತ್ರಿ ಚಿಮಣಿ ದೀಪದ ಬೆಳಕಲ್ಲಿ ಊಟ ಮುಗಿಸಿ ಬೇಗನೆ ಮಲಗಿಕೊಳ್ಳುತ್ತಾರೆ. ಮನೆಯೆದುರು ಗುಡ್ಡದ ನೀರೆಲ್ಲ ಮೇಲಿಂದ ಧುಮುಕುತ್ತಿರುವ ಧಡಧಡ ಸದ್ದು ಕೇಳಿಸಿಕೊಳ್ಳುತ್ತಲೇ ಪುಟ್ಟು ನಿದ್ರೆಗೆ ಜಾರುತ್ತಾನೆ.

                       *************

ಶಾಲೆ ಆರಂಭವಾಗಿದೆ. ಬೆನ್ನಿಗೆ ಬ್ಯಾಗು ಏರಿಸಿಕೊಂಡು ಅಪ್ಪ ತಂದುಕೊಟ್ಟ, ಗುಂಡಿ ಒತ್ತಿದೊಡನೆ ಥಟ್ಟನೆ ತರೆದುಕೊಳ್ಳುವ ಬಟನ್ ಛತ್ರಿಯನ್ನು ಮೆಲ್ಲಗೆ ತಿರುಗಿಸುತ್ತಾ ಪುಟ್ಟು ಶಾಲೆಗೆ ಹೋಗುತ್ತಿದ್ದಾನೆ. ರಸ್ತೆಯ ಎರೆಡೂ ಬದಿ ತೋಡಿನಲ್ಲಿ ಹರಿಯುತ್ತಿರುವ ನೀರು ಅವನನ್ನು ಆಟಕ್ಕೆ ಕರೆಯುತ್ತಿದೆ. ಶಾಲೆಗೆ ತಡವಾಗುತ್ತದೆನ್ನುವ ಭಯಕ್ಕೆ ನೀರಿನಾಟವನ್ನು ಸಂಜೆಗೆ ಮುಂದೂಡಿ ನಡೆಯುತ್ತಿದ್ದಾನೆ. ಮುಖ್ಯ ರಸ್ತೆ ತಲುಪಿದೊಡನೆ ಮೇಲಿನಮಕ್ಕಿಯಿಂದ ಬರುತ್ತಿರುವ ಸುಮಂತ ಎದುರಾಗಿದ್ದಾನೆ. ಅವನೂ ಸಹಾ ತನ್ನಂತೆಯೇ ಅರ್ಧ ಹೋಂ ವರ್ಕ್ ಮಾಡಿರುವುದು ಕೇಳಿ ಪುಟ್ಟುವಿಗೆ ಕೊಂಚ ಧೈರ್ಯ ಬಂದಿದೆ. ಅವನ ಬಣ್ಣಬಣ್ಣದ ಛತ್ರಿಯಂಚಿನಲ್ಲಿ ನೇತಾಡುತ್ತಿರುವ 'ಸೀಟಿ'ಯನ್ನೊಮ್ಮೆ ಊದಲು ಪುಟ್ಟುವಿಗೆ ಆಸೆಯಾಗಿದೆ.

ಮಳೆಯ ಕಾರಣ ಶಾಲೆಯ ಅಂಗಳದಲ್ಲಿ ನಡೆಯಬೇಕಿದ್ದ ಪ್ರಾರ್ಥನೆ 'ಹಾಲ್ ರೂಮ್'ಗೆ ವರ್ಗಾವಣೆಯಾಗಿದೆ. ತಡವಾಗಿ ಓಡುತ್ತಾ ಬಂದ ಗೋಪಿ ಅಂಗಳದಲ್ಲಿ ಜಾರಿಬಿದ್ದು ಅಂಗಿಯೆಲ್ಲಾ ಕೆಸರುಮಾಡಿಕೊಂಡಿದ್ದಾನೆ. ಹೊರಗೆ ಭರ್ರೆಂದು ಸುರಿಯುತ್ತಿರುವ ಮಳೆಯ ಸದ್ದಿನ ನಡುವೆಯೇ ಕನ್ನಡ ಮೇಷ್ಟ್ರು ದೊಡ್ಡ ದನಿಯಲ್ಲಿ ರಾಗವಾಗಿ ಪದ್ಯ ಹಾಡುತ್ತಿದ್ದಾರೆ:

"ಮಳೆ ಬಂತು ಮಳೆ
ಅಂಗಳದಲ್ಲಿ ಹೊಳೆ;
ನಾನು ಓಡಿ ಜಾರಿಬಿದ್ದು 
ಅಂಗಿಯೆಲ್ಲ ಕೊಳೆ!"

ಎಲ್ಲರೂ ಗೋಪಿಯತ್ತ ನೋಡಿ ಮುಸಿಮುಸಿ ನಕ್ಕಿದ್ದಾರೆ. ನಾಚಿಕೊಂಡ ಗೋಪಿ ಕುಳಿತಲ್ಲೇ ಮತ್ತಷ್ಟು ಮುರುಟಿಕೊಂಡಿದ್ದಾನೆ. ಸಿದ್ರಾಮ ಮೇಷ್ಟ್ರು ರಜೆಯ ಹೋಂ ವರ್ಕನ್ನು ನಾಳೆ ನೋಡುವುದಾಗಿ ಹೇಳಿದ್ದು ಕೇಳಿ ಪುಟ್ಟುವಿಗೆ ಸಮಾಧಾನವಾಗಿದೆ. ಸಂಜೆ ಮಳೆ ಕಡಿಮೆಯಾಗಿದ್ದರಿಂದ ನಾಲ್ಕು ಗಂಟೆಗೆ 'ಆಟದ ಬೆಲ್ಲು' ಹೊಡೆಯಲಾಗಿದೆ. ಮಕ್ಕಳೆಲ್ಲಾ ಹೋ ಎನ್ನುತ್ತಾ ಹೊರಗೋಡಿಬರುತ್ತಿದ್ದಾರೆ. ಜಪ್ಪೆ ಆಡುತ್ತಿದ್ದ ಚೈತ್ರ ಧಸಾಲ್ಲನೆ ಜಾರಿಬಿದ್ದದ್ದು ನೋಡಿ ಹುಡುಗರೆಲ್ಲ ಕಿಸಕ್ಕನೆ ನಕ್ಕಿದ್ದಾರೆ. ಪುಟ್ಟು ಗೋಪಿ-ಸುಮಂತರ ಜೊತೆಸೇರಿ ರಸ್ತೆಯ ಪಕ್ಕದ ತೋಡಿನಲ್ಲಿ ಹರಿಯುತ್ತಿರುವ ನೀರಿಗೆ ಆಣೆಕಟ್ಟು ಕಟ್ಟುತ್ತಿದ್ದಾನೆ. ಹರಿದು ಬಂದ ನೀರನ್ನು ತಡೆದು ನಿಲ್ಲಿಸಿ ಆಡುತ್ತಿರುವ ಕಿಲಾಡಿಗಳ ಮೇಲೆ ಸಿದ್ರಾಮ ಮಾಸ್ತರ ಕೆಂಗಣ್ಣು ಬಿದ್ದಿದೆ. ಮೂವರನ್ನೂ ಸಾಲಾಗಿ ನಿಲ್ಲಿಸಿ ಎರೆಡೆರೆಡು ಬಾರಿಸಲಾಗಿದೆ. ಏಟು ತಿಂದು ನೋವಾದ ಅಂಗೈಯ್ಯನ್ನು ಛತ್ರಿಯ ಕಡ್ಡಿಯಂಚಿನಿಂದ ಜಾರುತ್ತಿರುವ ಹನಿಗಳಿಗೆ ಚಾಚಿಕೊಂಡು ಪುಟ್ಟು ಮನೆಯತ್ತ ನಡೆಯುತ್ತಿದ್ದಾನೆ. 

                     ****************

ದಿನ ಕಳೆದಂತೆಲ್ಲಾ ಮುಂಗಾರಿನ ಆಟಾಟೋಪ ಹೆಚ್ಚಿದೆ. ತುಂಗಾನದಿಯಲ್ಲಿ ಯಾರದೋ ಶವ ತೇಲಿಹೋಗುತ್ತಿತ್ತೆಂಬ ಸುದ್ದಿ ಎಲ್ಲೆಡೆ ಸುಳಿದಾಡುತ್ತಿದೆ. ತೀರ್ಥಹಳ್ಳಿಯ ಬೀದಿಗಳಲ್ಲಿ ಓಡಾಡುತ್ತಿದ್ದ ಹುಚ್ಚನೊಬ್ಬ ಏಕಾಏಕಿ ನಾಪತ್ತೆಯಾಗಿದ್ದು ಆ ಶವ ಅವನದೇ ಇರಬಹುದೆಂಬ ಗುಮಾನಿ ಎದ್ದಿದೆ. ನೆಲ್ಲೀಸರದಲ್ಲಿ ಸೇತುವೆಯೇ ಕೊಚ್ಚಿಹೋಗಿರುವುದರಿಂದ ಗೋಪಿ ಎರೆಡು ದಿನದಿಂದ ಶಾಲೆಗೆ ಬಂದಿಲ್ಲ. ತನ್ನ ಮನೆಯ ಬಳಿಯೂ ಸೇತುವೆ ಕೊಚ್ಚಿಹೋಗುವಂತಹಾ ದೊಡ್ಡ ಹಳ್ಳ ಇರಬಾರದಿತ್ತಾ ಎಂದು ಚಿಂತಿಸುತ್ತಲೇ ಪುಟ್ಟು ಶಾಲೆಗೆ ಹೊರಟಿದ್ದಾನೆ. ಬೆಳಗ್ಗೆ ಪ್ರಾರ್ಥನೆಯಾಗುತ್ತಿದ್ದಂತೆಯೇ ಹೆಡ್ ಮೇಷ್ಟ್ರು "ಜಿಲ್ಲಾಧಿಕಾರಿಗಳ ಘೋಷಣೆಯಂತೆ ಇವತ್ತು ಶಾಲೆಗೆ ರಜೆ ನೀಡುತ್ತಿದ್ದೇವೆ. ಎಲ್ರೂ ಹುಷಾರಾಗಿ ಮನೆ ತಲುಪಿಕೊಳ್ಳಿ. ಹಳ್ಳ, ಸೇತುವೆ ದಾಟಿ ಹೋಗಬೇಕಾದ ಮಕ್ಳೆಲ್ಲ ಆಫೀಸ್ ರೂಮಿಗೆ ಬನ್ನಿ" ಎಂದಿದ್ದಾರೆ. ಮಕ್ಕಳೆಲ್ಲಾ "ಹೋss......" ಎಂದು ಕೂಗುತ್ತಾ ಚದುರಿದ್ದಾರೆ. ಪುಟ್ಟು ನೇರ ಮನೆಗೆ ಹೋಗದೇ ಮೊದಲೇ ಮಾತಾಡಿಕೊಂಡಂತೆ ಸುಮಂತನ ಮನೆಯ ಹಿಂದಿನ ಗುಡ್ಡಕ್ಕೆ ಹೋಗಿದ್ದಾನೆ. ಅಲ್ಲಿ ಕೈಗೆಟುಕುವ ಎತ್ತರದಲ್ಲೇ ಬಿಟ್ಟಿರುವ ನೇರಳೆ ಹಣ್ಣುಗಳನ್ನು ಕೈ-ಬಾಯಿಗಳೆಲ್ಲಾ ನೀಲಿಯಾಗುವಷ್ಟು ಇಬ್ಬರೂ ತಿಂದಿದ್ದಾರೆ. ಮರಳಿ ಬರುವಾಗ ಕೇರೆ ಹಾವೊಂದು ಸರ್ರನೆ ಹರಿಯುತ್ತಾ ಅವರ ದಾರಿಗೆ ಅಡ್ಡಹೋಗಿದೆ. ಭೀತರಾದ ಇಬ್ಬರೂ ಓಡೋಡಿ ಮನೆಸೇರಿಕೊಂಡಿದ್ದಾರೆ. ಅಂಗಳದಲ್ಲೇ ಒಂದಡಿ ಆಳದ ಬಾವಿ ತೋಡಿ, ಪೆನ್ನಿನ ಕೊಳವೆಗಳನ್ನು ಪೈಪಿನಂತೆ ಸಿಕ್ಕಿಸಿದ್ದಾರೆ. ಬಾವಿ ತುಂಬಿ ಪೈಪಿನಲ್ಲಿ ನೀರುಕ್ಕಿ ಬರುತ್ತಿರುವ ಸಂಭ್ರಮವನ್ನು ನೋಡಿ ಮೈಮರೆಯುತ್ತಿದ್ದಾರೆ.

ಪಾಚಿ ಕಟ್ಟಿ ಜಾರುತ್ತಿರುವ ಅಂಗಳಕ್ಕೆ ಅಪ್ಪ ಅಡಿಕೆ ದಬ್ಬೆಗಳ 'ಸಾರ' ಹಾಕಿದ್ದಾನೆ. ಅಂಗಳದ ತುಂಬಾ ಡೇರೆ ಗಿಡಗಳು ಹೂಬಿಟ್ಟು ನಿಂತಿವೆ. ಎಲೆಗಳ ಮಧ್ಯೆ ಅಡಗಿಕೊಂಡು ಹೂವು ತಿನ್ನುವ ಕಂಬಳಿಹುಳು, ಸಿಂಬಳದ ಹುಳುಗಳಿಗೆ ಅಮ್ಮ ಬೈಯ್ಯುತ್ತಲೇ ಬೂದಿ ಎರಚುತ್ತಿದ್ದಾಳೆ. ಅಪ್ಪ ತೋಟಕ್ಕೆ ಔಷಧಿ ಹೊಡೆಯಲು ತಯಾರಿ ಮಾಡುತ್ತಿದ್ದಾನೆ. ಕೇವಲ ಚಡ್ಡಿಯನ್ನಷ್ಟೇ ಧರಿಸಿರುವ ಸೀನ ಕಾಲಿಗೆ 'ಕೊಟ್ಟೆ ಮಣೆ' ಹಾಕಿಕೊಂಡು ಅಡಿಕೆ ಮರ ಹತ್ತಲು ತಯಾರಾಗಿದ್ದಾನೆ. ಗುಡ್ಡದಲ್ಲಿ ಅಲ್ಲಲ್ಲಿ 'ಜಲ' ಎದ್ದು ತಿಳಿಯಾದ ನೀರು ಮಳೆ ನೀರಿನ ಜೊತೆ ಸೇರಿಕೊಂಡು ಜುಳಜುಳನೆ ಹರಿದುಬರುತ್ತಿದೆ. ದಡದ ಮೇಲೆ ಕುಳಿತ ದೈತ್ಯ 'ಗ್ವಾಂಟ್ರು ಕಪ್ಪೆ'ಯೊಂದು ಕ್ರೋಂ ಕ್ರೋಂ ಎಂದು ಹಾಡುತ್ತಿದೆ. ಹಸಿರು ಹಾವೊಂದು ಬೇಲಿಯ ಗಿಡದ ಮೇಲೆ ಅಡಗಿಕೊಂಡು ಆ ದೊಳ್ಳ ಕಪ್ಪೆಯನ್ನು ನುಂಗುವ ಕನಸು ಕಾಣುತ್ತಿದೆ. ಚಕ್ಕುಲಿ ಹುಳವೊಂದು ದಾರಿ ತಪ್ಪಿ ಜಗುಲಿಗೆ ಬಂದು ಪುಟ್ಟ ಮಗುವಿನ ಕೈಯ್ಯಲ್ಲಿ ಸಿಕ್ಕಿಹಾಕಿಕೊಂಡಿದೆ. ಇನ್ನೂ ವರುಷ ತುಂಬದ ಮಗು ತಾನು ಮುಟ್ಟಿದೊಡನೆ ಚಕ್ಕುಲಿಯಾಗಿ ಬಿದ್ದುಕೊಂಡ ಆ ವಿಚಿತ್ರದತ್ತ ತನ್ನ ಪುಟಾಣಿ ಬೆರಳು ಚಾಚಿ 'ಕಚ್ಚೂ...' ಎನ್ನುತ್ತಿದೆ. ಹಳ್ಳದಲ್ಲಿ ಪುಟ್ಟು ತೇಲಿಬಿಟ್ಟ ದೋಣಿ ಓಲಾಡುತ್ತಾ ಮುಂದಮುಂದಕ್ಕೆ ಸಾಗುತ್ತಿದೆ.

                     ****************

ಜೂನ್, ಜುಲೈಗಳು ಮಳೆಯಲ್ಲಿ ಕೊಚ್ಚಿಹೋಗಿ ಕೊಂಚ ಬಿಸಿಲಿನ ಆಗಸ್ಟ್ ಬಂದಿದೆ. ಆಗಸ್ಟ್ ಹದಿನೈದರ ಸ್ವತಂತ್ರ ದಿನಾಚರಣೆಗೆ ಶಾಲೆಯಲ್ಲಿ ತಯಾರಿಗಳು ಮುಗಿದಿವೆ. ಗ್ರಾಮಪಂಚಾಯ್ತಿ ಅಧ್ಯಕ್ಷರ ಕೈಯ್ಯಂದ ಎಳೆಯಲ್ಪಟ್ಟು ಧ್ವಜಕಂಬದ ತುತ್ತತುದಿಯಲ್ಲಿ ತನ್ನ ಅಶೋಕ ಚಕ್ರಸಹಿತ ತ್ರಿವರ್ಣವನ್ನು ಬಾನಿಗೆ ಬೀಸುತ್ತಾ ನಿಂತಿರುವ ಧ್ವಜವನ್ನು ನೋಡಲು ಸೂರ್ಯನೂ ತನ್ನ ಎಳೆಯ ಕಿರಣಗಳ ಜೊತೆ ಹಾಜರಾಗಿದ್ದಾನೆ. ಮಕ್ಕಳೆಲ್ಲರೂ 'ಸೆಲ್ಯೂಟ್' ಹೊಡೆದು ರಾಷ್ಟ್ರಗೀತೆ ಹಾಡುತ್ತಿದ್ದಾರೆ. ಒಳಗಡೆ ಆಫೀಸು ರೂಮಿನಲ್ಲಿ ಮಕ್ಕಳಿಗೆ ಹಂಚಲೆಂದು ಡಬ್ಬಿಯೊಳಗಿಟ್ಟಿರುವ ಚಾಕ್ಲೇಟುಗಳೂ ತಮ್ಮ ಬ್ಯಾಗಡೆಯಂಚನ್ನು ಮೇಲಕ್ಕೆತ್ತಿ 'ಸೆಲ್ಯೂಟ್' ಸ್ಥಿತಿಯಲ್ಲಿ ರಾಷ್ಟ್ರಗೀತೆಯನ್ನು ಆಲಿಸುತ್ತಿವೆ.


('ಮಾನಸ'ದ ಆಗಸ್ಟ್ 2017ರ ಸಂಚಿಕೆಯಲ್ಲಿ ಪ್ರಕಟಿತ)

ಗುರುವಾರ, ಜುಲೈ 27, 2017

ಊರ ದಾರಿಯ ಚಿತ್ರಗಳು... (ಚಿತ್ರಬರಹಗಳು)

ಅದೇಕೋ ಗೊತ್ತಿಲ್ಲ, ಊರಿನ ಬಗ್ಗೆ, ಅಲ್ಲಿಯ ಮಳೆಯ ಬಗ್ಗೆ ಎಷ್ಟೇ ಬರೆದರೂ, ಎಷ್ಟೇ ಮಾತಾಡಿದರೂ ಮುಗಿಯೋದೇ ಇಲ್ಲ. ನಾನು ಹಾಗೂ ನನ್ನ ರೂಮ್ ಮೆಟ್ ಸುಮಂತ ಹೊತ್ತಲ್ಲದ ಹೊತ್ತಿನಲ್ಲಿ ಎದ್ದು ಕುಳಿತು ಊರು, ಅಲ್ಲಿಯ ಮಳೆ, ತುಂಬಿ ಹರಿಯುವ ತುಂಗಾ ಹೊಳೆ, ಅಮ್ಮ ಮಾಡುವ ಬಿಸಿಬಿಸಿ ನೀರ್ದೋಸೆ ಹಾಗೂ ಇವನ್ನೆಲ್ಲ ಬಿಟ್ಟು ಈ ಬೆಂಗಳೂರೆನ್ನುವ ಬಂಗಾರದ ಬೋನಿನಲ್ಲಿ ಬಿಕನಾಸಿಗಳಂತೆ ಬದುಕುತ್ತಿರುವ ನಾವು.. ಇವೆಲ್ಲದರ ಬಗ್ಗೆ ಗಂಟೆಗಟ್ಟಲೆ ಮಾತಾಡಿಕೊಳ್ಳುತ್ತೇವೆ. ಅದರಲ್ಲೂ ಆಫೀಸಿನಲ್ಲಿ ಕೆಲಸ ತಲೆಮೇಲೆ ಅಡರಿಕೂತ ವಾರಾರಂಭದ ದಿನಗಳಲ್ಲಂತೂ ಊರು ಹಾಗೂ ಅಲ್ಲಿನ ಮಳೆ ನನ್ನನ್ನು ಇನ್ನಿಲ್ಲದಂತೆ ಕಾಡುತ್ತದೆ. ಬಾಸ್ ಸೀಟಿನಲ್ಲಿ ಇಲ್ಲದ ಚಿಕ್ಕ ಗ್ಯಾಪ್ ನಲ್ಲೇ ಯಾವುದಾದರೊಂದು ಬ್ಲಾಗ್ ತೆರೆದು ಅದರಲ್ಲಿರುವ ಮಲೆನಾಡಿನ ಮಳೆಯ ಲೇಖನಗಳನ್ನೂ, ಚಿತ್ರಗಳನ್ನೂ ನೋಡಿ ಅಷ್ಟರಮಟ್ಟಿಗಾದರೂ 'ತಂಪಾಗಲು' ಪ್ರಯತ್ನಿಸುತ್ತೇನೆ. ಏನೇನೋ ಕವನ, ಲೇಖನ ಗೀಚುತ್ತಾ ಮಾನಸಿಕವಾಗಿ ಊರಿಗೆ ಹತ್ತಿರಾಗಲು ಪ್ರಯತ್ನಿಸುತ್ತೇನೆ. 

ಹೀಗೆಲ್ಲ ಇರುವಾಗಲೇ ಕಳೆದೈದು ವರುಷಗಳಿಂದ ಕಾಯುತ್ತಿದ್ದ ದಿವ್ಯಘಳಿಗೆಯೊಂದು ಈ ವರ್ಷ ಬಂದುಬಿಟ್ಟಿದೆ. ಒಂದು ಕಂಪನಿ ಬಿಟ್ಟು ಇನ್ನೊಂದನ್ನು ಸೇರಿಕೊಳ್ಳುವ ಚಿಕ್ಕ ಗ್ಯಾಪ್ನಲ್ಲಿ ಒಂದು ವಾರದ ರಜೆಸಿಕ್ಕಿಬಿಟ್ಟಿದೆ. ಅದೂ ಜುಲೈ ತಿಂಗಳ ಕೊನೆಯ ವಾರದಲ್ಲಿ! ಕಳೆದ ಒಂದೂವರೆ ತಿಂಗಳಿಂದ ಸರಿಯಾಗಿ ಬಾರದೇ ಕಾಡಿದ್ದ ಮುಂಗಾರು ಈಗ ಒಂದುವಾರದ ಹಿಂದಷ್ಟೇ ಮುನಿಸುಬಿಟ್ಟು ಸುರಿಯಲಾರಂಭಿಸಿದೆ. ಯಾವಾಗ ಪೋನ್ ಮಾಡಿದರೂ ಅಮ್ಮ ಹೇಳುವ "ಮಳೆ ಶಬ್ದ ಕಣೋ, ನಿನ್ ಮಾತು ಸರಿಯಾಗಿ ಕೇಳಿಸ್ತಿಲ್ಲ" ಎನ್ನುವ ಮಾತುಗಳು ಮತ್ತಷ್ಟು ಖುಷಿ ಕೊಡುತ್ತವೆ. ಅಲ್ಲದೇ ಕಳೆದ ವಾರ ಊರಿಗೆ ಹೋಗಿಬಂದ ಸುಮಂತ ತೀರ್ಥಹಳ್ಳಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯ ಚಿತ್ರಗಳನ್ನು ಕಣ್ಣ ತುಂಬಾ ತುಂಬಿಕೊಂಡು ಬಂದಿದ್ದಾನೆ. ಫೆಸ್ಬುಕ್ಕಿನಲ್ಲಿ ಕುರುವಳ್ಳಿ ಸೇತುವೆಯ ಎದೆಮಟ್ಟಕ್ಕೆ ತುಂಬಿ ಹರಿಯುತ್ತಿರುವ ತುಂಗೆಯ ಫೋಟೋಗಳು ಒಂದರ ಹಿಂದೊಂದರಂತೆ ಅಪ್ಲೋಡಾಗುತ್ತಿವೆ. ಇದೆಲ್ಲದರಿಂದ ಉದ್ವೇಗಗೊಂಡ ಮನಸ್ಸು ತೆಂಗಿನಕಾಯಿ ಕಂಡ ಓತಿಕೇತದಂತೆ ಊರಿನತ್ತ ಓಡತೊಡಗಿದೆ...

ಇದೊಂದು ಶುಭ್ರವಾದ ಭಾನುವಾರ ಹಿಂದೆಂದೂ ಇಲ್ಲದ ಸಂಭ್ರಮದೊಂದಿಗೆ ನನ್ನೆದುರು ತೆರೆದುಕೊಂಡಿದೆ. ಬಸ್ ಸ್ಟಾಂಡಿನತನಕ ಬಂದು ಬೈ ಹೇಳಿದ ಸುಮಂತನಿಗೆ ಕೈ ಬೀಸಿ ಮೆಜಸ್ಟಿಕ್ಕಿನ ಬಸ್ಸೇರಿ ಕುಳಿತಿದ್ದೇನೆ. 

"ಮುಂಜಾವಿನ ಅಭಿಶೇಕಕೆ ಮೃದುವಾಯಿತು ನೆಲವು..."
"ಎಂದೆಂದೂ ಮುಗಿಯದೆ ಇರಲಿ.. ಈ ಪಯಣ ಸಾಗುತಲಿರಲಿ.." 
ಇಯರ್ ಫೋನಿನೊಳಗೆ ಕುಳಿತ ಬಿ.ಆರ್. ಛಾಯಾ, ಹರಿಹರನ್ ಖುಷಿಯಿಂದ ಹಾಡುತ್ತಿದ್ದಾರೆ. 

ಈ ಹಗಲು ಪ್ರಯಾಣವೆಂದರೆ ನನಗೆ ಒಂಥರಾ ಖುಷಿ. ಬೀದಿ ದೀಪಗಳು ಹಲ್ಲುಕಿರಿಯುವ ಹೊತ್ತಿಗೆ ಬಸ್ಸುಹತ್ತಿ, ಸೂರ್ಯ ಹಲ್ಲುಜ್ಜುವ ಹೊತ್ತಿಗೆ ಊರಿಗೆ ಬಂದಿಳಿಯುವ ಕತ್ತಲ ಪ್ರಯಾಣ ನಿಜಕ್ಕೂ ಬೇಸರದಾಯಕ. ಹತ್ತಿದ ಊರಿನಿಂದ ಇಳಿಯುವ ಊರಿನ ತನಕ ಎದಿರಾಗುವ ಹತ್ತಾರು ಗದ್ದೆ, ಬಯಲು, ಕೆರೆ, ಹಳ್ಳಿ, ಪಟ್ಟಣ, ತೋಟಗಳನ್ನೆಲ್ಲಾ ಕಣ್ಕಾಣದ ಕತ್ತಲಿನಲ್ಲೇ ಹಾದುಬರುವ ಈ ರಾತ್ರಿಯಾನದಲ್ಲಿ ನಾವು ಸಾಗಿಬಂದ ದೂರ ನಿಜಕ್ಕೂ ಸೊನ್ನೆ. ಅದಕ್ಕೇ ಒಂದು ವಾರದಷ್ಟು ದೀರ್ಘ ರಜೆ ಸಿಕ್ಕ ಸಂದರ್ಭಗಳಲ್ಲಿ ನಾನು ಹಗಲಿನ ಪ್ರಯಾಣವನ್ನೇ ಆಯ್ದುಕೊಳ್ಳುತ್ತೇನೆ. ಬೆಂಗಳೂರಿನ ಕಟ್ಟಡಮಯ ಹಾದಿ ಕೊನೆಯಾದ ಮೇಲೆ ಒಂದೊಂದಾಗಿ ಎದಿರಾಗುವ ತುಮಕೂರು, ಗುಬ್ಬಿ, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿಗಳನ್ನು ನೋಡುತ್ತಲೇ ಹಗಲು-ಮಧ್ಯಾಹ್ನ-ಸಂಜೆಗಳು ಸವೆಯಬೇಕು. ಇಲ್ಲಿ ತಂತಮ್ಮ ದಿನಚರಿಯಲ್ಲಿ ಮುಳುಗಿಹೋಗಿರುವ ನೂರಾರು ಜನರ ನಡುವೆ ಹಾದುಬರುವಾಗ "ಬದುಕುವುದಕ್ಕೆ ಬೆಂಗಳೂರೊಂದೇ ಕಟ್ಟಕಡೆಯ ಕರ್ಮಭೂಮಿಯಲ್ಲ" ಎನ್ನುವ ದಿವ್ಯ ನೆಮ್ಮದಿಯೊಂದು ಬಲವಾಗುತ್ತಾ ಹೋಗುತ್ತದೆ. ಮುಂದೊಂದು ದಿನ ನಾನೂ ಆ ಕಾಂಕ್ರೀಟ್ ಕಾಡನ್ನು ತೊರೆದು ಇವರಂತೆಯೇ ನನ್ನೂರಿನಲ್ಲಿ ಬದುಕುತ್ತೇನೆನ್ನುವ ಚಂದದ ಹಗಲುಗನಸೊಂದು ರೆಪ್ಪೆಗಳನ್ನಪ್ಪಿ ಚಂದದ ನಿದಿರೆಗೆ ನನ್ನನ್ನು ತಳ್ಳುತ್ತದೆ.

ಇವು ಬೆಂಗಳೂರು-ಶಿವಮೊಗ್ಗ ಹಾದಿಯಲ್ಲಿ ಕಂಡ ಕೆಲ ಚಿತ್ರಗಳು. ನಾನೇನೂ ಭಯಂಕರ ಫೋಟೋಗ್ರಾಫರ್ ಅಲ್ಲದಿರುವುದರಿಂದ, ಗಡಗಡನೆ ನಡುಗುತ್ತಾ ಓಡುವ ಬಸ್ಸಿನಿಂದ ತೆಗೆದವಾಗಿರುವುದರಿಂದ, ನನ್ನ ಮೊಬೈಲ್ನದು ಅಷ್ಟೇನೂ ನುರಿತ ಕ್ಯಾಮರಾ ಅಲ್ಲದಿದ್ದರಿಂದ, ಅದರಲ್ಲಿ ಸಾಕಷ್ಟು ಚಾರ್ಜ್ ಕೂಡಾ ಇಲ್ಲದಿದ್ದರಿಂದ ಇಲ್ಲಿನ ಫೋಟೋಗಳು ಭಾರೀ ಚಂದ ಬಂದಿಲ್ಲವೆನ್ನುವುದನ್ನು ಮೊದಲೇ ಹೇಳಿಬಿಡುತ್ತೇನೆ. ನೋಡಿ, ಹೇಗಿದೆ ಅಂತ ಹೇಳಿ...

1)

ಮುರುಕು ಮರದಾಚೆಗೆ ಕೆಮ್ಮಣ್ಣ ಹೊಲ. ನಡುವಿನ ಹಸಿರು ದಾರಿಯಲ್ಲಿ ಸಾಗಿದರೆ ತುದಿಯಲ್ಲೊಂದು ಬೋಳುಗುಡ್ಡ. ಅದನ್ನು ಹತ್ತಿ ನೋಡಿದರೆ ಈ ಹೊಲ, ಮರ, ಟಾರು ರಸ್ತೆ, ಭರ್ರನೆ ಓಡುತ್ತಿರುವ ನಾನು ಕುಳಿತಿರುವ ಈ ಬಸ್ಸು... ಇವೆಲ್ಲ ಎಷ್ಟು ಚಂದ ಕಾಣಬಹುದು ಅಲ್ವಾ?

2)

ಪೊದೆಗಳ ಹಿಂದಿನ ತೆಂಗಿನ ಮರಗಳು ನೆಟ್ಟಿದ್ದೋ ತಾವಾಗೇ ಹುಟ್ಟಿಕೊಂಡದ್ದೋ ಗೊತ್ತಿಲ್ಲ. ಅದರ ಹಿಂಭಾಗದಲ್ಲಿನ ಗುಡ್ಡದ ಮೇಲಿರುವ ಮನೆಗಳಲ್ಲಿ ವಾಸಿಸುವ ಜನರು ಮಾತ್ರ ಪುಣ್ಯವಂತರೇ ಸರಿ!



3)

ಕವಿಯುತ್ತಿರುವ ಕರಿಮೋಡ ಇನ್ನೇನು ಸುರಿಸಲಿರುವ ಮಳೆಯಲ್ಲಿ ನೆನೆಯಲು ತಯಾರಾಗಿ ನಿಂತಿರುವ ಅರೆಬೋಳು ಮರ, ಕೆಮ್ಮಣ್ಣ ನೆಲೆ ಹಾಗೂ ದಿಗಂತದಂಚಿನ ಬೆಟ್ಟ!


4)


ಮೋಡವೇ ನೋಡು ಬಾ.. ವೃಕ್ಷದಾ ನರ್ತನ...!


5)

ಒಂದ್ಸಲನಾದ್ರೂ ಈ ದಾರೀಗುಂಟ ಸೈಕಲ್ ಹೊಡ್ಕಂಡು ಹೋಗ್ಬೇಕು ನೋಡಿ...


6)


ಅದೇ ಬಾನು, ಅದೇ ನೆಲ,
ಅದೇ ಹಳಿ, ಅದೇ ಹೊಲ,
ಈ ಪಯಣ ನೂತನ!


7)

ಮೋಡದ ಎದೆಗೆ ತಿವಿದು ನಿಂತಿರುವ ವಿದ್ಯುತ್ ಸ್ಥಾವರ. ನನ್ನಂತೆಯೆ ಊರಿಗೆ ಹೋಗುವ ಸಡಗರದಲ್ಲಿ ಕುಣಿಯುತ್ತಿರುವ ನೂರಾರು ಮನಸ್ಸುಗಳನ್ನು ಹೊತ್ತು ಬರಲಿರುವ ರೈಲಿಗಾಗಿ ಕಾಯುತ್ತಾ ಮೇಘಗಳ ಚಪ್ಪರಕಟ್ಟಿ ನಿಂತಿರುವ ರೈಲ್ವೇಹಳಿ!

ಮೊಬೈಲ್ನಲ್ಲಿ ಚಾರ್ಜ್ ಇಲ್ಲದಿದ್ದರಿಂದ, ನಾನು ನುರಿತ ಫೋಟೋ ಗ್ರಾಫರ್ ಅಲ್ಲದಿರುವುದರಿಂದ ಹೆಚ್ಚಿನ ಹಾಗೂ ಚಂದದ ಫೋಟೋಗಳನ್ನು ತೆಗೆಯಲಾಗಲಿಲ್ಲ. ಕವಿದ ಮೋಡ, ಬೀಸುತ್ತಿದ್ದ ತಂಗಾಳಿಗಳು "ಮಳೆಬರುವ ಹಾಗಿದೆ..." ಎಂದು ಹಾಡುತ್ತಿದ್ದವಾದರೂ ಬೆಂಗಳೂರಿನಿಂದ ಭದ್ರಾವತಿಯ ತನಕ ಸಣ್ಣ ಕೆಸರಿನ ಪಸೆಯೂ ಕಾಣಲಿಲ್ಲ. ಆದರೆ ಶಿವಮೊಗ್ಗ ಹತ್ತಿರವಾದಂತೆಲ್ಲ ಮಳೆಯ ಕುರುಹುಗಳು ದಟ್ಟವಾಗುತ್ತಾಹೋದವು. ಇಷ್ಟೆಲ್ಲ ಖುಷಿಗಳ ನಡುವೆಯೇ ಮುಂದಿನವಾರ ಇದೇ ದಿನ, ಇದೇ ದಾರಿಯಲ್ಲಿ, ಇಂದಿನ ಖುಷಿಗಿಂತ ದುಪ್ಪಟ್ಟು ಬೇಸರದಲ್ಲಿ, ಇಂದು ಹೋಗುತ್ತಿರುವ ದಿಕ್ಕಿಗೆ ತದ್ವಿರುದ್ಧವಾದ ದಾರಿಯಲ್ಲಿ ಬೆಂಗಳೂರಿನ ಕಡೆಗೆ ಸಾಗುತ್ತಿರುತ್ತೇನೆನ್ನುವುದು ನೆನಪಾಗಿ ಸಣ್ಣಗೆ ಹೊಟ್ಟೆ ತೊಳೆಸಿದಂತಾಗಿದ್ದು ಸುಳ್ಳಲ್ಲ. 

                     **************

ಊರೊಳಗಿನ ಚಿತ್ರಗಳು:



ಬುಧವಾರ, ಜುಲೈ 26, 2017

ಹಾರಾಟದ ಸುತ್ತಮುತ್ತ..




ಪ್ರತಿದಿನ ಬೆಳಗ್ಗೆ ಬೆಂಗಳೂರು-ಹೊಸೂರು ಮುಖ್ಯರಸ್ತೆಯ ರೂಪೇನ ಅಗ್ರಹಾರ ನಿಲ್ದಾಣದಲ್ಲಿ ನಿಂತು ಕಂಪನಿಯ ವಾಹನಕ್ಕಾಗಿ ಕಾಯುವುದು ನನ್ನ ದಿನಚರಿ. 'ಹೊಸೂರು ರೋಡ್' ಎಂದೇ (ಕು)ಖ್ಯಾತವಾದ ಈ ರಸ್ತೆಯನ್ನು ದಾಟುವುದಕ್ಕೂ, ಉಕ್ಕಿ ಹರಿಯುತ್ತಿರುವ ನದಿಯೊಂದನ್ನು ಈಜಿ ದಡಸೇರುವುದಕ್ಕೂ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ. ಎರೆಡೂ ನಿಲ್ಲದ ಪ್ರವಾಹಗಳೇ! ಸಿಲ್ಕ್ ಬೋರ್ಡ್ ಎನ್ನುವ ಬೃಹತ್ ಜಂಕ್ಷನ್ ನಿಂದ ಕಟ್ಟೆಯೊಡೆದು ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೊಸೂರುಗಳ ಕಡೆಗೆ ಧಾವಿಸುವ ಸಾವಿರಾರು ಬೈಕು, ಕಾರು, ಬಸ್ಸೇ ಇತ್ಯಾದಿ ವಾಹನಗಳು ಭರಗುಡುತ್ತಾ ಓಡುತ್ತಿದ್ದರೆ ಈ ದ್ವಿಪಥ ರಸ್ತೆ ಅಕ್ಷರಶಃ ಬಿಸಿಲು, ಧೂಳು, ಹೊಗೆಗಳಿಂದ ಬೇಯುವ ಅಗ್ನಿಕುಂಡವಾಗಿಬಿಡುತ್ತದೆ. ಇಂತಹಾ ನೂರಾರು ರಸ್ತೆಗಳು ಒಟ್ಟು ಮೊತ್ತವೇ ಆಗಿರುವ ಬೆಂಗಳೂರಿಗೆ ಇದೇನು ಹೆಚ್ಚಲ್ಲ ಬಿಡಿ. ಇಲ್ಲಿ ನಿಂತು ಕಾಯುವಾಗೆಲ್ಲಾ ನನ್ನನ್ನು ವಿಚಿತ್ರ ಬಯಕೆಯೊಂದು ಕಾಡುತ್ತದೆ.

ಮನುಷ್ಯನಿಗೂ ಹಾರಲು ಬರಬೇಕಿತ್ತು!

ಚಿಕ್ಕವನಿದ್ದಾಗ ದೂರ್ ದರ್ಶನ್ ದಲ್ಲಿ 'ಜೈ ಹನುಮಾನ್' ಧಾರಾವಾಹಿಯಲ್ಲಿ ಆಂಜನೇಯ ಬಾನಿಗೆ ನೆಗೆದು ಹಾರಾಡುವುದನ್ನು ನೋಡುವಾಗಲೂ ಹೀಗೇ ಅನಿಸುತ್ತಿತ್ತು. ಹ...  ಒಂದು ನಿಮಿಷ. ರೆಕ್ಕೆಯಿಲ್ಲದಿದ್ದರೂ ವಿಧಾನಸೌಧದ ಸೂರು ಕಿತ್ತುಹೋಗುವಂತೆ ಹಾರಾಡುವ, ನೆಗೆದಾಡುವ ರಾಜಕಾರಣಿಗಳನ್ನು ನಾನೂ ನೋಡಿದ್ದೇನೆ. ಆದರೆ ನಾನು ಹೇಳುತ್ತಿರುವುದು ಆ ಹಾರಾಟದ ಬಗ್ಗೆಯಲ್ಲ; ಹಾತೆಹುಳಗಳಿಂದ ಹಿಡಿದು ದೈತ್ಯ ಹದ್ದುಗಳತನಕ ನೂರಾರು ಜಾತಿಯ ಕೀಟ-ಪಕ್ಷಿಗಳು ಸಣ್ಣ ಸದ್ದನ್ನೂ ಮಾಡದೇ ರೆಕ್ಕೆ-ಪುಕ್ಕ ಬಿಚ್ಚಿ ಬಾನಿನೆತ್ತರದಲ್ಲಿ ತೇಲಾಡುತ್ತಾವಲ್ಲಾ, ಆ ಹಾರಾಟದ ಬಗ್ಗೆ. ನಾವು ಮನುಷ್ಯರೂ ಹೀಗೇ ಹಾರುವಂತಿದ್ದರೆ ನಮ್ಮ ಪೃಥ್ವಿಯ ಎಷ್ಟೋ ಸಮಸ್ಯೆಗಳು ಹುಟ್ಟುತ್ತಲೇ ಇರಲಿಲ್ಲ ಅಲ್ವಾ?!

ನಮ್ಮ ಕಥೆಗಳನ್ನೇ ತೆಗೆದುಕೊಳ್ಳೋಣ. ನಾವು ಬೆಳಗ್ಗೆ ಎದ್ದವರೇ ಶಾಲೆಗೋ, ಕಾಲೇಜುಗೋ, ಆಫೀಸಿಗೋ ಹೊರಡುತ್ತೇವೆ. ಇನ್ನೂ ತಿಂಡಿ ತಿಂದಿಲ್ಲ, ಟೈ ಕಟ್ಟಿಕೊಂಡಿಲ್ಲ, ಶೂ ಪಾಲಿಶ್ ಆಗಿಲ್ಲ. ಶಾಲೆಯ/ಕಛೇರಿಯ ಬಸ್ಸು/ಕ್ಯಾಬು ಬರುವುದರೊಳಗೆ ಎಷ್ಟೆಲ್ಲಾ ಕೆಲಸ ಮುಗಿಸಿ ತಯಾರಾಗಬೇಕು. ಆ ಗಡಿಬಿಡಿಯಲ್ಲಿ ಏನೇನ್ನೋ ಮರೆತುಬಿಡುತ್ತೇವೆ. ವಿದ್ಯಾರ್ಥಿಗಳು ಅರ್ಧರಾತ್ರೆಯ ತನಕ ಕುಳಿತು ಬರೆದಿದ್ದ ಹೋಂ ವರ್ಕನ್ನು ಟೇಬಲ್ ಮೇಲೇ ಬಿಟ್ಟುಹೋಗುತ್ತಾರೆ. ಕಛೇರಿಯ ಯಾವುದೋ ಪ್ರಮುಖ ಫೈಲು ಸೋಫಾ ಮೇಲೇ ಉಳಿದುಬಿಟ್ಟಿರುತ್ತದೆ. ಬಸ್ ಪಾಸು ಯಾವುದೋ ಪ್ಯಾಂಟಿನ ಜೇಬಿನಲ್ಲಿ ಅವಿತಿರುತ್ತದೆ. ಐಡಿ ಕಾರ್ಡು ಮತ್ತೆಲ್ಲೋ ಕೈತಪ್ಪುತ್ತದೆ. ಬಸ್ಸಿನಲ್ಲಿ 'ಪಾಸ್' ಎಂದು ಹೇಳಿ ಜೇಬಿನಲ್ಲಿ ಪಾಸ್ ಇಲ್ಲದೇಹೋದಾಗ ಕಂಡಕ್ಟರ್ 'ಸಂಸ್ಕೃತ'ದಲ್ಲಿ ಬುದ್ಧಿಮಾತು ಹೇಳುತ್ತಾನೆ. ಹೋಂ ವರ್ಕ್ ತಂದಿಲ್ಲವೆಂದೊಡನೆಯೇ ಶಾಲೆಯ ಮಾಸ್ತರು ಕೈಯ್ಯಲ್ಲಿರುವ ಬೆತ್ತವನ್ನು ಟಿಪ್ಪೂಸುಲ್ತಾನನ ಖಡ್ಗದಂತೆ ಝಳಪಿಸುತ್ತಾರೆ. ಆಫೀಸಿನಲ್ಲಿ ಬಾಸು ಮರೆತ ಫೈಲನ್ನು ನೆನೆನೆನೆದು ತಾಂಡವ ನೃತ್ಯವನ್ನೇ ಆಡುತ್ತಾನೆ. ಇದಕ್ಕೆಲ್ಲಾ ಮೂಲಕಾರಣ ನಮಗಾಗಿ ಕಾಯದ ಕ್ಯಾಬು ಹಾಗೂ ಬಸ್ಸುಗಳು!

ಇರುವ ಒಂದೇ ಒಂದು ಭೂಮಿಯನ್ನು ಈ ವಾಹನಗಳು ಗಬ್ಬೆಬ್ಬಸುತ್ತಿರುವ ಬಗ್ಗೆ ಹೊಸತಾಗಿ ಏನೂ ಹೇಳಬೇಕಿಲ್ಲ. ವಿಜ್ಞಾನಿಗಳ ಮಾತನ್ನೇ ನಂಬುವುದಾದರೆ ಇನ್ನು ಮೊವತ್ತು-ನಲವತ್ತು ವರ್ಷಗಳಲ್ಲಿ ಪ್ರಪಂಚದ ಪೆಟ್ರೋಲ್, ಡೀಸೆಲ್ ಗಳೆಲ್ಲಾ ಮುಗಿದುಹೋಗುತ್ತವೆ. ದುಬೈನ ಕಟ್ಟಕಡೆಯ ಬಾವಿಯಲ್ಲೂ ಪೆಟ್ರೋಲ್ ಬತ್ತಿಹೋಗಿ ಫುಸ್ಸೆನ್ನುವ ಗಾಳಿಯೊಂದೇ ಉಳಿಯುವ ಆ ದಿನವನ್ನು, ವಿಪರೀತ ಎನ್ನುವಷ್ಟು ವಾಹನಗಳ ಮೇಲೆ ಅವಲಂಬಿತವಾಗಿರುವ ನಾವು-ನೀವು ಕಲ್ಪಿಸಿಕೊಳ್ಳುವುದೂ ಕಷ್ಟ. ವಿದೇಶಗಳಲ್ಲಿ, ನಮ್ಮ ಕೆಲವು ಪಟ್ಟಣಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ಬರಬಹುದು. ಆದರೆ ಮೊಬೈಲನ್ನು ಚಾರ್ಜ್ ಮಾಡಿಕೊಳ್ಳುವುದಕ್ಕೇ ಪರದಾಡುವಷ್ಟು ಕರೆಂಟ್ ನ ಅಭಾವವಿರುವ ನಮ್ಮ ಹಳ್ಳಿಗಳ ಕಥೆ? ಅವರೆಲ್ಲಾ ಮತ್ತೆ ಕುದುರೆ, ಎತ್ತುಗಳ ಕಾಲಿಗೇ ಬೀಳಬೇಕು! ಇದೆಲ್ಲವನ್ನೂ ಯೋಚಿಸಿದಾಗ 'ಮಿಲಿಯನ್ ಡಾಲರ್' ಪ್ರೆಶ್ನೆಯೊಂದು ನನ್ನೊಳಗೆ ಮೂಡುತ್ತದೆ:

ಕಾಗೆ, ಗೂಬೆಗಳಿಗೂ ಇರುವ ರೆಕ್ಕೆ ಮನುಷ್ಯನಿಗೇಕಿಲ್ಲ?

ಒಮ್ಮೆ ಕಲ್ಪನೆ ಮಾಡಿಕೊಳ್ಳೋಣ. ಹಾರುವ ಶಕ್ತಿಯೊಂದಿದ್ದರೆ ಬೆಳಗ್ಗೆ ಒಂಭತ್ತಕ್ಕೋ, ಹತ್ತಕ್ಕೋ ಶುರುವಾಗುವ ಕಛೇರಿ, ಶಾಲೆಗಾಗಿ ಏಳೂ ಮೊವತ್ತಕ್ಕೇ ಮನೆಬಿಡುವ ಅಗತ್ಯವಿರುತ್ತಿರಲ್ಲಿಲ್ಲ. ನಿಧಾನಕ್ಕೆ ಎದ್ದು ಬೇಕಾದಷ್ಟು ಬಾರಿ ಆಕಳಿಸಬಹುದಿತ್ತು. ಬಿಸಿಬಿಸಿ ಕಾಫಿಯನ್ನು ಮೆಲ್ಲಗೆ ಹೀರುತ್ತಾ ನ್ಯೂಸ್ ಪೇಪರ್ ನ ಕಟ್ಟಕಡೆಯ ಮೂಲೆಯಲ್ಲಿರುವ ಜಾಹೀರಾತನ್ನೂ ಬಿಡದಂತೆ ಸಕಲ ಜ್ಞಾನವನ್ನೂ ತಲೆಯೊಳಗೆ ತುಂಬಿಕೊಳ್ಳಬಹುದಿತ್ತು. ತಿಂಡಿ ಬೇಯಿಸಿತ್ತಿರುವ ಹೆಂಡತಿಗೆ ತಿಳಿಯದಂತೆ ಎರೆಡು ಸುತ್ತು 'ದಮ್' ಎಳೆಯಬಹುದಿತ್ತು. ಇಷ್ಟದ ಹಾಡನ್ನು ಕೋರಸ್ ನ ಸಮೇತ ಹಾಡಿಕೊಳ್ಳುತ್ತಾ ಸ್ನಾನ ಮಾಡಬಹುದಿತ್ತು. ಈ ಸಂಭ್ರಮಗಳೆಲ್ಲಾ ಮುಗಿದು, ಇನ್ನೇನು ಅರ್ಧಗಂಟೆಯಷ್ಟೇ ಉಳಿದಿದೆಯೆನ್ನುವಾಗ ಅಂಗಳಕ್ಕೋ, ಟೆರಾಸಿಗೋ ಬಂದು ದೀರ್ಘವಾಗಿ ಉಸಿರೆಳೆದುಕೊಂಡು, ಎರೆಡೂ ಕೈಯ್ಯನ್ನು ಪಟಪಟನೆ ಆಡಿಸಿದರಾಯಿತು, ನಮ್ಮ ಪ್ರಯಾಣ ಶುರು! ಹೊಂಡಗುಂಡಿಗಳಿಗೆ ಬರೆದುಕೊಟ್ಟಿರುವ ರಸ್ತೆಗಳು, ತೊಟ್ಟಿಗಿಂತ ಜಾಸ್ತಿ ರಸ್ತೆಯ ಮೇಲೇ ಬಿದ್ದಿರುವ ಕಸಕಡ್ಡಿಗಳು, ತೋಡಿರಾಗ ಹಾಡುತ್ತಾ ಹಾರಿಬಂದು ನಮ್ಮಿಂದ ಬಲವಂತವಾಗಿ ರಕ್ತದಾನ ಮಾಡಿಸಿಕೊಳ್ಳುವ   ಸೊಳ್ಳೆಗಳು, ರಸ್ತೆಯನ್ನೇ ಮೋರಿಯನ್ನಾಗಿಸಿಕೊಂಡು ನಿಂತಿರುವ ಕೊಳಚೆ ನೀರು.... ಇದ್ಯಾವುದರ ತಲೆಬಿಸಿಯಿಲ್ಲದೇ, ವೇಲು, ಕರ್ಚೀಫೇ ಇತ್ಯಾದಿಗಳನ್ನು ಮೂತಿಗೆ ಬಿಗಿದುಕೊಳ್ಳುವ ರಗಳೆಯಿಲ್ಲದೇ ಹಾಯಾಗಿ ಹಾರುತ್ತಾ ಆಫೀಸು/ಶಾಲೆಗಳನ್ನು ತಲುಪಬಹುದಿತ್ತು. ಹೋಗಿ ಟೆರಾಸಿನ ಮೇಲೆ 'ಲ್ಯಾಂಡ್' ಆಗಿ ಒಮ್ಮೆ ಮೇಲಕ್ಕೆ ನೋಡಿದರೆ ಬಾಸ್ ಕೂಡಾ ಸೇರಿದಂತೆ ಸೂಟು-ಬೂಟು ತೊಟ್ಟ ನೂರಾರು ಉದ್ಯೋಗಿಗಳು ಹಾರುತ್ತಾ ಬರುತ್ತಿರುವ ವಿಹಂಗಮ ದೃಶ್ಯ ಕಣ್ಣಿಗೆ ಬೀಳುತ್ತಿತ್ತು!

ಹಾರಾಟದಿಂದ ತಪ್ಪಿಹೋಗುವ ಇನ್ನೊಂದು ಅಪಾಯವೆಂದರೆ ಬೀದಿನಾಯಿಗಳ ಧಾಳಿ. ಹಗಲಿನ ಹೊತ್ತಿನಲ್ಲಿ ಪಾಪಚ್ಚಿಗಳಂತೆ ಬಿದ್ದುಕೊಂಡಿರುವ ಈ ನಿರ್ಗತಿಕ ಶ್ವಾನಗಳು ರಾತ್ರೆಯಾಗುತ್ತಿರುವಂತೆಯೇ 'ಗ್ರಾಮಸಿಂಹ'ಗಳಾಗಿಬಿಡುತ್ತವೆ. ಇಡೀ ಏರಿಯಾವನ್ನೇ ತಮ್ಮ ಸುಪರ್ದಿಗೆ ತೆಗೆದುಕೊಂಡು ಗಸ್ತು ತಿರುಗುತ್ತಾ ಎದುರಿಗೆ ಸಿಗುವ ಒಬ್ಬಂಟಿ ಯಾತ್ರಿಕರನ್ನು ಬೆದರಿಸುತ್ತವೆ. ಅದರಲ್ಲೂ ಚಿಂದಿ ಜೀನ್ಸ್, ನಾಲ್ಕಾರು ಜೇಬು-ಬಾಲಗಳಿರುವ ಕಾರ್ಗೋ ಪ್ಯಾಂಟ್ ನಂತಹಾ 'ಡಿಂಗ್ರಿ' ಉಡುಪು ತೊಟ್ಟವರು ಕಂಡರಂತೂ ಮುಗಿದೇಹೋಯಿತು, ಹೀನಾಮಾನವಾಗಿ ಬೊಗಳುತ್ತಾ ಧಾಳಿಮಾಡಿಬಿಡುತ್ತವೆ. ಹೀಗಾಗಿ ರಾತ್ರೆ ಒಬ್ಬಂಟಿಯಾಗಿ ಓಡಾಡುವರು ಹಾಗೂ 'ಡಿಂಗ್ರಿ' ವಸ್ತ್ರ ತೊಡುವವರಿಗೆ ಹಾರುವ ಶಕ್ತಿ ವರದಾನವಾಗಲಿದೆ. ಇನ್ನು ಲಕ್ಷಾಂತರ ಪತಿರಾಯರುಗಳಿಗೆ ಈ 'ಹಾರಾಟ'ದಿಂದ ಅದೆಷ್ಟು ಉಪಯೋಗವಾಗುತ್ತದೆ ಗೊತ್ತಾ? ಅವರಿನ್ನು ಪದೇ ಪದೇ ತಮ್ಮ ಹೆಂಡತಿಯನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗುವ ಅಗತ್ಯವೇ ಇರುವುದಿಲ್ಲ. ಕ್ರೆಡಿಟ್ ಕಾರ್ಡನ್ನು ಅದರ ಪಾಸ್ ವರ್ಡಿನ ಸಮೇತ ಕೈಲಿಟ್ಟು ಕಳಿಸಿಕೊಟ್ಟರಾಯಿತು, ಮಹಿಳಾಮಣಿಗಳು ತಮ್ಮ ಪಾಡಿಗೆ ಹಾರಿಕೊಂಡು ಹೊರಟುಬಿಡುತ್ತಾರೆ.  ತಮಗೆ ಬೇಕಾದಷ್ಟು ಶಾಪಿಂಗ್ ಮಾಡಿಕೊಂಡು, ಅಂಗಡಿಯಲ್ಲಿರುವ ಅಷ್ಟೂ ವೆರೈಟಿಗಳನ್ನೂ ಆಚೆ ತರಿಸಿ, ಯಾವ ವಾಹನದ ಹಂಗಿಲ್ಲದೇ ಸ್ವತಂತ್ರವಾಗಿ ಹಾರುತ್ತಾ ಬಂದುಬಿಡುತ್ತಾರೆ. ಹಾಂ, ಈ ಒಡವೆ, ಬಟ್ಟೆ ಅಂಗಡಿಗಳ ಸೇಲ್ಸ್ ಮ್ಯಾನ್ ಗಳಿಗೆ ಮಾತ್ರ ಈ 'ಹಾರಾಟ'ದಿಂದ ತೊಂದರೆಯಾಗುತ್ತಿತ್ತೆನ್ನುವುದರಲ್ಲಿ ಸಂಶಯವೇ ಇಲ್ಲ. ಇಲ್ಲದ ಟ್ರಾಫಿಕ್ನಿಂದ ಉಳಿಯುವ ಸಮಯವನ್ನೂ ಈ ಮಹಿಳಾಮಣಿಗಳು ಅಂಗಡಿಯಲ್ಲಿ ಸೆಲೆಕ್ಷನ್ ಗೆಂದೇ ವ್ಯಯಿಸುವುದರಿಂದ ಅವರ ಶ್ರಮ ಹೆಚ್ಚಾಗುತ್ತದೆ. ಹೀಗಾಗಿ ಅವರೆಲ್ಲಾ ಒಟ್ಟಾಗಿ ನಮ್ಮೀ 'ಹಾರು ಸಿದ್ಧಾಂತ'ದ ವಿರುದ್ಧ ಹೋರಾಟನಡೆಸುವ ಅಪಾಯವೂ ಇಲ್ಲದಿಲ್ಲ.

ಹಾಗಂತ ಹಾರಾಟದಿಂದ ಬರೀ ಉಪಯೋಗಗಳು ಮಾತ್ರ ಇವೆಯೆಂದು ಹೇಳುವಂತಿಲ್ಲ. ಎಲ್ಲೆಲ್ಲಿ 'ಹಾರಾಟ' ಹೆಚ್ಚಾಗುತ್ತದೋ ಅಲ್ಲೆಲ್ಲಾ ನಿಯಮಾವಳಿಗಳು ಹುಟ್ಟಿಕೊಳ್ಳುತ್ತವೆ. ಇಲ್ಲೂ ಅಷ್ಟೇ. ಎತ್ತರದ ಟವರ್ ಗಳನ್ನು ಕಟ್ಟಿಸಿ, ಜೇಬಿಗೆ ಪೀಪಿ ಸಿಕ್ಕಿಸಿಕೊಂಡ ಟ್ರಾಫಿಕ್ ಪೋಲೀಸರನ್ನು ಅಲ್ಲಲ್ಲಿ ನಿಲ್ಲಿಸಿ ಹಾರುತ್ತಾ ಬರುವವರ ಮೇಲೊಂದು ಕಣ್ಣಿಡಬೇಕಾಗುತ್ತದೆ. ಏಕೆಂದರೆ ಈಗ ರಸ್ತೆಗಳಲ್ಲಿ ವೀಲಿಂಗ್ ಮಾಡುವ, ಹ್ಯಾಂಡಲ್ ಬಿಟ್ಟು ಬೈಕ್ ಓಡಿಸುವ ಬಿಸಿರಕ್ತದ ಹುಡುಗರು ಆಕಾಶದಲ್ಲಿ  ಒಂದೇ ಕೈ ಬಡಿಯುವುದು, ಗಾಳಿಯಲ್ಲಿ ಪಲ್ಟಿ ಹೊಡೆಯುವುದೇ ಮುಂತಾದ ಕಪಿಚೇಷ್ಟೆಗಳನ್ನ ಮಾಡಲಿಕ್ಕೂ ಸಾಕು. ಇನ್ನು ಕೆಲವು ಮುರುಷಪುಂಗವರು ಕುಡಿದು ಹಾರುತ್ತಾ ಬಂದು 'ಶಿವಾ' ಎಂದು ತಮ್ಮಪಾಡಿಗೆ ಹೋಗುತ್ತಿರುವ ಬಡಪಾಯಿಗಳಿಗೆ ಢೀ ಕುಟ್ಟಿ, ಕೊನೆಗೆ ಇಬ್ಬರೂ ಕಾಲುಮೇಲಾಗಿ ನೆಲಕ್ಕೆ ಬೀಳುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ!  ಸಿಗ್ನಲ್ ಗಳಲ್ಲಿ ಕಡಲೆಕಾಯಿ, ಸೊಳ್ಳೆ ಬ್ಯಾಟ್, ನೀರಿನ ಬಾಟಲಿ,  ಇತ್ಯಾದಿಗಳನ್ನು ಮಾರುವ ರಸ್ತೆ ವ್ಯಾಪಾರಿಗಳೆಲ್ಲಾ ಹಾರುತ್ತಾ ಹಿಂದೆ ಬಂದು ತಮ್ಮ ಉತ್ಪನ್ನಗಳನ್ನು ಕೊಳ್ಳುವಂತೆ ಬೇಡಿಕೆ (ಬೆದರಿಕೆ!) ಇಡುತ್ತಾ ಬೆನ್ನಟ್ಟಿಬರುವ ಸಂಭವವೂ ಇಲ್ಲದಿಲ್ಲ. ಸರಗಳ್ಳರೇ ಮುಂತಾದವರು ಹಾರುಗಳ್ಳರುಗಳಾಗಿ ಬದಲಾಗಿ ನಡುಆಕಾಶದಲ್ಲೇ ಧಾಳಿನಡೆಸುವ ಸಾಧ್ಯತೆಗಳೂ ಹೆಚ್ಚಿವೆ. ಈ ಎಲ್ಲಾ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಈಗಿರುವ ರಸ್ತೆ ನಿಯಮಗಳಂತೆಯೇ 'ಹಾರಾಟ ವಿಧೇಯಕ'ಗಳನ್ನು ರೂಪಿಸಬೇಕಾಗುತ್ತದೆ. 

ಈ ಒಂದೆರೆಡು ದುಷ್ಪರಿಣಾಮಗಳ ಹೊರತಾಗಿ ಹೇಳುವುದಾದರೆ ಹಾರಾಟ ಒಂದು ಅದ್ಭುತ ಶಕ್ತಿ. ನಿಮಗೆಲ್ಲಾ ಜೀವವಿಕಾಸದ ಸಿದ್ಧಾಂತ ನೆನಪಿದೆಯಾ? ಸಮುದ್ರದಲ್ಲಿ ಮಾತ್ರವಿದ್ದ ಜೀವಿಸಂಕುಲ ನೀರಿನಿಂದ ಮೇಲಕ್ಕೆ ಎಗರುತ್ತಾ ಎಗರುತ್ತಾ ಕ್ರಮೇಣ ಅವುಗಳಲ್ಲಿ ನೆಲದಮೇಲಿನ ವಾತಾವರಣಕ್ಕೆ ಬೇಕಾದ ರಚನೆಗಳು ಮೈಗೂಡಿದವಂತೆ. ಅಂತೆಯೇ ನಾವುಗಳೂ ಇವತ್ತಿನಿಂದಲೇ ದಿನಕ್ಕೆ ಅರ್ಧಗಂಟೆಯಾದರೂ ಕೈಯ್ಯನ್ನು ರೆಕ್ಕೆಯಂತೆ ಬಡಿಯುತ್ತಾ ಮಂಚ, ಕಟ್ಟೆ, ದಿಬ್ಬ ಮುಂತಾದ ಚಿಕ್ಕ ಎತ್ತರಗಳಿಂದ ಹಾರಲು ಪ್ರಯತ್ನಿಸುವುದು ಒಳ್ಳೆಯದು. ಯಾರಿಗೆ ಗೊತ್ತು? ಕೊನೆಗೆ ನಮ್ಮ ಮೊಮ್ಮಕ್ಕಳು, ಮರಿಮಕ್ಕಳ ಕಾಲಕ್ಕಾದರೂ ಕನಿಷ್ಟ ಬಾವಲಿಗಿರುವಂತಹಾ ರೆಕ್ಕೆಗಳು ಮೂಡಿದರೂ ಮೂಡಬಹುದು! ಆಗ ನನ್ನೀ ಲೇಖನವು 'ಹ್ಯೂಮನ್ ಫ್ಲೈ ಥಿಯರಿ' ಅಂತಲೋ, 'ಮನುಷ್ಯನ ಹಾರು ಸಿದ್ಧಾಂತ' ಅಂತಲೋ ಪ್ರಸಿದ್ಧವಾಗಿ ನನಗೆ ನೊಬೆಲ್ ಬಹುಮಾನ ದೊರೆತರೂ ದೊರೆಯಬಹುದು. ಇಂತಹಾ ಒಂದು ಮಹಾನ್ ವಿಕಾಸದ ಮುನ್ನುಡಿಕಾರರಾದ ನಾನು-ನೀವು 'ಹಾರು ಸಿದ್ಧಾಂತದ ಹರಿಕಾರರು' ಎಂದು ಮೋಡಗಳ ಮೇಲಿನ ವೇದಿಕೆಯಲ್ಲಿ ಹಾರಾಡುತ್ತಾ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಸೃಷ್ಟಿಯಾದರೂ ಆಗಬಹುದು. ಏನಂತೀರಾ?

ವಿಶೇಷ ಸೂಚನೆ: ಈ ಲೇಖನದಿಂದ ಪ್ರೇರಿತರಾಗಿ ಬೇಗ ರೆಕ್ಕೆಗಳು ಬರಬೇಕೆಂಬ ಅತಿಯಾಸೆಯಿಂದ, ಹಾರಿಯೇ ಬಿಡುತ್ತೇನೆಂಬ ಓವರ್ ಕಾನ್ಫಿಡೆನ್ಸ್ ನಿಂದ ಎತ್ತರದ ಮಹಡಿಯಿಂದಲೋ, ಮರದಿಂದಲೋ ಧುಮುಕಿ ಕೈ, ಕಾಲು, ಸೊಂಟ ಮುರಿದುಕೊಂಡರೆ ಅದಕ್ಕೆ ಲೇಖಕರು ಜವಾಬ್ದಾರರಾಗಿರುವುದಿಲ್ಲ!

(ಮಂಗಳ 24-5-2017ರ ಸಂಚಿಕೆಯಲ್ಲಿ ಪ್ರಕಟವಾದ ನಗೆಬರಹ)

ಭಾನುವಾರ, ಜುಲೈ 23, 2017

ಮೂಡುಗುಡ್ಡೆ ಪ್ರೀಮಿಯರ್ ಲೀಗ್!



ಚಿಕ್ಕವನಿದ್ದಾಗ ನನಗೆ ಕ್ರಿಕೆಟ್ ಎಂದರೆ ಒಂದು ರೀತಿ ಕೋಪ. ಡಿಡಿ1 ರಲ್ಲಿ ಕಡ್ಡಾಯವಾಗಿ ನೇರ ಪ್ರಸಾರವಾಗುತ್ತಿದ್ದ ಭಾರತದ ಪಂದ್ಯಗಳು ವಾರಕ್ಕೆ ಒಮ್ಮೆ ಮಾತ್ರ ಬರುವ ನನ್ನ ಮೆಚ್ಚಿನ ಭಾನುವಾರದ ಸಿನೆಮಾವನ್ನು ನುಂಗಿ ಹಾಕುತ್ತವೆಂಬುದೇ ನನ್ನ ಬೇಸರಕ್ಕೆ ಕಾರಣವಾಗಿತ್ತು. ಆದ್ದರಿಂದಲೇ ಕ್ರಿಕೆಟ್ ಆಟದ ಅಆಇಈಗಳೇ ಗೊತ್ತಿಲ್ಲದ ನನ್ನ ಅಮ್ಮ "ಈ ರಿಪ್ಲೈ, ಅಡ್ವರ್ಟೈಸ್ ಗಳನ್ನ ಮತ್ತೆಮತ್ತೆ ಹಾಕ್ದೇ ಇದ್ದಿದ್ರೆ ಆಟ ಬೇಗ ಮುಗ್ದು ಪಿಚ್ಚರ್ ನೋಡ್ಲಕ್ಕಿತ್ತು" ಎಂದು ವಾದಿಸುವಾಗ ಹೌದೌದು ಎಂದು ತಲೆ ಆಡಿಸುತ್ತಿದ್ದೆ. ಅದರಲ್ಲೂ ಒಂದು ಇನ್ನಿಂಗ್ಸ್ ಮುಗಿದ ನಂತರ ಬರುತ್ತಿದ್ದ 'ಫೋರ್ಥ್ ಅಂಪಾಯರ್' (ಆಗ ಅದಕ್ಕೇನನ್ನುತ್ತಿದ್ದರೋ ನೆನಪಿಲ್ಲ) ಬಂದಾಗಲಂತೂ ಅಮ್ಮನಿಗೆ ಪಿತ್ತ ನೆತ್ತಿಗೇರುತ್ತಿತ್ತು. "ಹಿಂಗೆ ಕೂತ್ಕಂಡು ಕಟ್ಟೆ ಪಂಚಾಯ್ತಿ ಮಾಡೋ ಬದ್ಲು ಬೇಗ ಬೇಗ ಆಡಿ ಮುಗ್ಸಬಾರ್ದಾ" ಎಂದು ಟೀವಿಯಲ್ಲಿ ಪಂದ್ಯದ ಬಗ್ಗೆ ಚರ್ಚಿಸುತ್ತಾ ಕುಳಿತಿರುವ ಕಪಿಲ್ ದೇವ್, ರವಿ ಶಾಸ್ತ್ರಿಗಳನ್ನೆಲ್ಲಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. 

ಏನೂ ಅರ್ಥವಾಗದಿದ್ದರೂ ಕೆಲವೊಮ್ಮೆ ನಾನು ಓದಲೆಂದು ನಮ್ಮನೆಯಲ್ಲಿದ್ದ ಅಕ್ಕನ ಜೊತೆ ಕುಳಿತು ಕ್ರಿಕೆಟ್ ನೋಡುತ್ತಿದ್ದೆ. ಕ್ರಿಕೆಟ್ ನ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದ ಅಕ್ಕ ಏನೂ ಗೊತ್ತಿಲ್ಲದ ನನಗೆ "ನೋಡಿಲ್ಲಿ, ಹಿಂಗೆ ಹೊಡೆದ್ರೆ ಸಿಕ್ಸ್, ಹಿಂಗೆ ಹೊಡೆದ್ರೆ ಫೋರ್" ಎಂದು ಸದಭಿನಯಪೂರ್ವಕವಾಗಿ ತೋರಿಸುತ್ತಿದ್ದಳು. ಅವಳನ್ನು ಅನುಕರಿಸಲಾಗದ ನಾನು ಪೆಕರನಂತೆ ಕೈಯ್ಯನ್ನು ಹೇಗ್ಹೇಗೋ ಬೀಸಿ "ಹಿಂಗೆ ಹೊಡೆದ್ರೆ?" ಎಂದು ಕೇಳುತ್ತಿದ್ದೆ. ಇದುವರೆಗೆ ಯಾವ ತಂಡದ ಯಾವ ಬ್ಯಾಟ್ಸ್ ಮನ್ ಕೂಡಾ ಹೊಡೆಯದ ಆ ವಿಚಿತ್ರ ಹೊಡೆತವನ್ನು ಕಂಡು ಗಲಿಬಿಲಿಗೊಂಡ ಅವಳು "ಹಂಗೆ ಹೊಡೆದ್ರೆ ಫರ್ಸ್ಟ್ ಬಾಲಿಗೇ ಓಟ್ ಆಗ್ತೀಯ ಅಷ್ಟೇ" ಎಂದು ಗದರುತ್ತಾ ಮತ್ತೊಮ್ಮೆ ಬರಿಗೈಯ್ಯಲ್ಲಿ ಗಾಳಿಗೆ ಸಿಕ್ಸರ್-ಫೋರ್ ಬಾರಿಸಿ ತೋರಿಸುತ್ತಿದ್ದಳು. ಅವಳ ಪರಮವಿಧೆಯ ಗಾಂಪ ಶಿಶ್ಯನಾದ ನಾನು ಆ ಅದ್ಭುತ 'ಶಾಟ್'ಗೆ ಬೆರಗಾಗಿ ತಲೆದೂಗುತ್ತಿದ್ದೆ.

ನಾನು, ನನ್ನ ತಮ್ಮ ಹಾಗೂ ಚಿಕ್ಕಪ್ಪನ ಮಗ- ನಮ್ಮ ಕೇರಿಯಲ್ಲಿದ್ದುದು ಒಟ್ಟು ಮೂವರು ಹುಡುಗರು. ಆಗಿನ್ನೂ ನಮ್ಮ ದೈನಂದಿನ ಆಟಗಳೊಳಗೆ ಕ್ರಿಕೆಟ್ ಪ್ರವೇಶಿಸಿರಲಿಲ್ಲ. ನಮ್ಮ ಮೇಲೆ ಶಕ್ತಿಮಾನ್, ಜೂನಿಯರ್-ಜಿ, ಜೈ ಹನುಮಾನ್ ನಂತಹಾ ಫಿಕ್ಷನ್ ಹಾಗೂ ಪೌರಾಣಿಕ ಧಾರಾವಾಹಿಗಳ ಪ್ರಭಾವ ತುಸು ಹೆಚ್ಚೇ ಇದ್ದುದರಿಂದ ನಾವಾಡುವ ಆಟಗಳಲ್ಲೂ ಸಹಾ ಅವೇ ಇರುತ್ತಿದ್ದವು. ಕೈಗೆ ಸಿಕ್ಕ ದೊಣ್ಣೆ,ಕೋಲು-ಕೊಕ್ರುಗಳನ್ನು ಖಡ್ಗ-ಗದೆಗಳಂತೆ ಹಿಡಿದು ಬಾಯಿಂದ ಠಾಣ್ ಠಾಣ್ ಎನ್ನುವ ಸದ್ದು ಹೊರಡಿಸುತ್ತಾ ಅಂಗಳದಲ್ಲೇ ಭಯಾನಕ ಯುದ್ಧದ ಸನ್ನಿವೇಶವನ್ನು ಸೃಷ್ಟಿಸುತ್ತಿದ್ದೆವು. ನನ್ನ ತಮ್ಮನಂತೂ ಮೋಟುದ್ದದ ಕೋಲನ್ನು ಮಂತ್ರದಂಡದಂತೆ ಬೀಸುತ್ತಾ, ಚಿತ್ರವಿಚಿತ್ರ ಮಂತ್ರಗಳನ್ನು ಪಠಿಸುತ್ತಾ ಎಲ್ಲರನ್ನೂ ಬೆಚ್ಚಿಬೀಳಿಸುತ್ತಿದ್ದ. ಹೀಗಿದ್ದ ನಮ್ಮ 'ಫಿಕ್ಷನ್' ಲೋಕಕ್ಕೆ ಕ್ರಿಕೆಟ್ಟನ್ನು ಪರಿಚಯಿಸಿದವರು ಪಕ್ಕದ ಮನೆಯಲ್ಲೇ ಇದ್ದ ನಮ್ಮ ಅಣ್ಣ (ದೊಡ್ಡಪ್ಪನ ಮಗ). ದೂರದೂರಿನಲ್ಲಿದ್ದ ತಮ್ಮ ಅಂಗಡಿಯನ್ನು ಮುಚ್ಚಿ ಮನೆಯಲ್ಲೇ ಇರಲಾರಂಭಿಸಿದ ಅವರು ಕಾಗೆ-ಗುಬ್ಬಿ ಆಟ ಆಡುತ್ತಿದ್ದ ನಮ್ಮ ಕೈಗೆ ಮೊದಲ ಬಾರಿಗೆ ಚೆಂಡು-ದಾಂಡು ಕೊಟ್ಟರು.

ಕೊಟ್ಟಿದ್ದನ್ನು ಶಿಸ್ತಾಗಿ ತೆಗೆದುಕೊಂಡಿದ್ದೇನೋ ಹೌದು, ಆದರೆ ಆಡಲು ಬರಬೇಕಲ್ಲ? ಬ್ಯಾಟನ್ನು ಗದೆಯಂತೆಯೂ, ಬಾಲನ್ನು ಬಾಂಬಂತೆಯೂ ಬೀಸುತ್ತಾ ಕ್ರಿಕೆಟ್ಟನ್ನೂ ಪೌರಾಣಿಕ-ಫಿಕ್ಷನ್ ಮಿಶ್ರಿತ ಹೈಬ್ರೀಡ್ ಯುದ್ಧದಂತೆ ಆಡುತ್ತಿರುವ ನಮ್ಮ ಶೈಲಿ ನೋಡಿ ಅಕ್ಷರಷಃ ಬೆಚ್ಚಿಬಿದ್ದ ಅಣ್ಣ ಕೊನೆಗೆ ಸ್ವತಃ ತಾವೇ ಅಂಗಳಕ್ಕಿಳಿದರು. ನಮಗೆ ಕಲಿಸುತ್ತಾ, ತಾವೂ ಆಡುತ್ತಾ ಕ್ರಿಕೆಟ್ ಎನ್ನುವ ಎಂದೂ ವಾಸಿಯಾಗದ ಹುಚ್ಚನ್ನು ನಮ್ಮ ತಲೆಯೊಳಕ್ಕೆ ತುಂಬಿದರು. ನೂರುಕೋಟಿ ಭಾರತೀಯರ ಉಸಿರಾಟವಾಗಿರುವ, ಆಡಿದಷ್ಟೂ ಆಡಬೇಕೆನಿಸುವ ಈ ಆಟ ನಮಗೆ ಇನ್ನಿಲ್ಲದಷ್ಟು ಇಷ್ಟವಾಗಿಹೋಯಿತು. ಶನಿವಾರ ಮಧ್ಯಾಹ್ನವಾದರೆ ಸಾಕು, ಯಾವ ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ಕಡಿಮೆಯಿಲ್ಲದ ಸಂಭ್ರಮವೊಂದು ನಮ್ಮನೆಯ ಅಂಗಳದಲ್ಲಿ ಜಮಾಯಿಸುತ್ತಿತ್ತು. ಆದರೆ ಇಲ್ಲಿ ನಮ್ಮ ಆಟಕ್ಕೆ ಹತ್ತಾರು ಅಡೆತಡೆಗಳು. ನಮ್ಮನೆ ಇರುವುದು ಗುಡ್ಡದ ಇಳಿಜಾರಿನ ನಡುವೆಯಾಗಿರುವುದರಿಂದ ಸುತ್ತಲೂ ಆಳವಾದ ತಗ್ಗು-ಹೊಂಡಗಳಿವೆ. ಸಾಲದ್ದಕ್ಕೆ ಈ ಹೊಂಡ-ತಗ್ಗುಗಳ ತುಂಬಾ ತರಹೇವಾರಿ ಗಿಡ,ಗಂಟಿ, ಪೊದೆಗಳು ಒತ್ತಾಗಿ ಬೆಳೆದು ಅಲ್ಲೆಲ್ಲೂ ಕಾಲಿಡದಂತಾಗಿದೆ. ನೇರವಾಗಿ ಅಥವಾ ಬಲಭಾಗದಲ್ಲಿ ಸ್ವಲ್ಪ ಜೋರಾಗಿ ಹೊಡೆದರೂ ಚೆಂಡು ಛಂಗನೆ ಹಾರಿ ಈ ಆಳಹೊಂಡದ ಪೊದೆಗಳ ನಡುವೆಲ್ಲೋ ಮರೆಯಾಗಿ, ಆಡಿದ್ದಕ್ಕಿಂತಲೂ ಹೆಚ್ಚಿನ ಸಮಯ ಚೆಂಡು ಹುಡುಕಲಿಕ್ಕೇ ವ್ಯಯವಾಗುತ್ತಿತ್ತು. ಬಹುಷಃ ಬೇರೆಲ್ಲಾದರೂ ಇಷ್ಟು ಹುಡುಕಿದ್ದರೆ ಭಾರೀ ಖಜಾನೆಯೇ ಸಿಗುತ್ತಿತ್ತೋ ಏನೋ, ಚೆಂಡು ಮಾತ್ರ ಸಿಗುತ್ತಿರಲಿಲ್ಲ. ಹುಡುಕುವ ಕಣ್ಣಿಗೆ ಹಳದಿ ಬಣ್ಣದ ವಸ್ತುಗಳೆಲ್ಲವೂ ಬಾಲ್ ನಂತೆಯೇ ಕಂಡು ದಾರಿ ತಪ್ಪಿಸುತ್ತಿದ್ದವು. ಇದು ಸಾಯಲಿ ಎಂದು ಎಡಕ್ಕೇನಾದರೂ ಹೊಡೆದರೆ ಮುಗಿದೇ ಹೋಯಿತು. ಚೆಂಡು ಮನೆಗೆ ತಗುಲಿ, ಮಣ್ಣಿನ ಗೋಡೆಯಿಂದ ಮಣ್ಣು ಧಸಾಲ್ಲನೆ ಉದುರಿ, ಒಳಗಿದ್ದ ಅಪ್ಪನಿಗೆ ಪಿತ್ತ ಕೆದರಿ, ನಾವು ಹುಗಿದ ವಿಕೆಟನ್ನೇ ಕಿತ್ತು ನಮಗೆ ನಾಲ್ಕು ಬಿಗಿಯುವುದರಲ್ಲಿ ಅನುಮಾನವೇ ಇರಲಿಲ್ಲ.

ಆ ದಿನಗಳಲ್ಲಿ ನೂರಿನ್ನೂರು ರೂಪಾಯಿ ಬೆಲೆ ಬಾಳುತ್ತಿದ್ದ ಹೊಸ ಬ್ಯಾಟು ಬೇಕೆಂದೇನಾದರೂ ಕೇಳಿದ್ದೇ ಆದರೆ ಅಪ್ಪ ಕೋಪದಲ್ಲಿ 'ಮಾಸ್ಟರ್-ಬ್ಲಾಸ್ಟರ್' ಆಗಿಬಿಡುವ ಅಪಾಯವಿದ್ದುದರಿಂದ ನಾವು ಆ 'ರಿಸ್ಕ್' ತೆಗೆದುಕೊಂಡಿರಲಿಲ್ಲ. ಯಥೇಚ್ಚವಾಗಿ ಬಿದ್ದಿರುತ್ತಿದ್ದ ತೆಂಗಿನ ಗರಿಗಳಲ್ಲಿ ಒಳ್ಳೆಯದೊಂದನ್ನು ಆಯ್ದು, ಅದರ ತಲೆಯನ್ನು ಅಗತ್ಯಕ್ಕೆ ತಕ್ಕಂತೆ ಕೊಯ್ದು, ಬುಡವನ್ನು ಹಿಡಿಕೆಯಂತೆ ಚಿಕ್ಕದಾಗಿ ಕತ್ತರಿಸಿ, ಮಧ್ಯದಲ್ಲಿ 'MRF' ಎಂದು ದೊಡ್ಡಕ್ಷರಗಳಲ್ಲಿ ಕೆತ್ತಿ ನಮ್ಮದೇ ಆದ ಬ್ಯಾಟನ್ನು ಸಿದ್ಧಪಡಿಸಿಕೊಂಡಿದ್ದೆವು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ನನ್ನ ಗೆಳೆಯನೊಬ್ಬ ಅಡಿಕೆ ಮರದ ಹಾಳೆಯನ್ನೇ ಕತ್ತರಿಸಿ 'ಪ್ಯಾಡ್' ನಂತೆ ಕೈ-ಕಾಲುಗಳಿಗೆ ಕಟ್ಟಿಕೊಂಡು ಯಾವ ತೆಂಡೂಲ್ಕರ್ ಗೂ ಕಮ್ಮಿ ಇಲ್ಲದಂತೆ ಸರ್ವಸನ್ನದ್ಧನಾಗಿ ತನ್ನ ಆರು ವರ್ಷದ ತಂಗಿಯ ಜೊತೆ ಆಡಲು ಅಂಗಳಕ್ಕಿಳಿಯುತ್ತಿದ್ದ! 

ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದ ತಮ್ಮಂದಿರನ್ನು ಜೊತೆಗೂಡಿಸಿಕೊಂಡು ಆಟವನ್ನು ಪೂರ್ಣಗೊಳಿಸುವುದು ನನ್ನ ಪಾಲಿಗೆ ದೊಡ್ಡ ಸವಾಲಾಗಿತ್ತು. ಸದಾ ತಾವೇ ಬ್ಯಾಟಿಂಗ್ ಮಾಡಬೇಕು ಹಾಗೂ ತಾವೇ ಗೆಲ್ಲಬೇಕು ಎಂದು ಹಟ ಮಾಡುತ್ತಿದ್ದ ಅವರಿಬ್ಬರೂ ಅದು ಸಾಧ್ಯವಾಗದೇ ಹೋದಾಗ ರಗಳೆ ತೆಗೆಯುತ್ತಿದ್ದರು. ಎಷ್ಟೋ ಸಲ ಕ್ರಿಕೆಟ್ ನಲ್ಲಿ ಆರಂಭವಾದ ಆಟ ಮಲ್ಲಯುದ್ಧ-ಮುಷ್ಠಿಯುದ್ಧಗಳಲ್ಲಿ ಅಂತ್ಯವಾಗುತ್ತಿತ್ತು. ಕೊನೆಗೆ ಈ ಹೊಡೆದಾಟವನ್ನು ತಡೆಯಲು ನಾವು ಅದ್ಭುತ ಉಪಾಯವೊಂದನ್ನು ಕಂಡುಕೊಂಡೆವು. ಅದೇನೆಂದರೆ ನಾವು ನಮ್ಮದೇ ಹೆಸರಿನಲ್ಲಿ ಆಡುವ ಬದಲು ಅಂತರಾಷ್ಟ್ರೀಯ ಆಟಗಾರರ ಹೆಸರಿನಲ್ಲಿ ಆಡುವುದು! ಒಮ್ಮೆ 'ಸಚಿನ್' ಆಗಿ ಔಟಾದ ನನ್ನ ತಮ್ಮ ಸ್ವಲ್ಪ ದೂರ ನಡೆದುಹೋಗಿ 'ಸೆಹ್ವಾಗ್' ಆಗಿ ಮರಳಿಬರುತ್ತಿದ್ದ. ನಾನ್ ಸ್ಟ್ರೈಕರ್ ನಲ್ಲಿರುವ ನನ್ನ ಚಿಕ್ಕಪ್ಪನ ಮಗ ದ್ರಾವಿಡ್ ಆದರೆ ಇವರಿಬ್ಬರಿಗೂ ಬೌಲಿಂಗ್ ಮಾಡುತ್ತಿರುವ ನಾನು ಜಹೀರ್ ಖಾನ್! ಹೀಗೆ ಕೋಟಿಕೋಟಿ ಬೆಲೆಬಾಳುವ ಆಟಗಾರರೆಲ್ಲಾ ನಮ್ಮ ಮುರುಕು ಮನೆಯಂಗಳದಲ್ಲಿ ತೆಂಗಿನ ಗರಿಯ ಬ್ಯಾಟ್ ಹಿಡಿದು ಬಿಟ್ಟಿಯಾಗಿ ಆಡಿ ಔಟಾಗುವ 'ಅದ್ಭುತ'ವನ್ನು ನೋಡಿ ನಮಗೆ ಕ್ರಿಕೆಟ್ ಕಲಿಸಿದ್ದ ನಮ್ಮಣ್ಣ ತಲೆತಲೆ ಚಚ್ಚಿಕೊಳ್ಳುತ್ತಿದ್ದರು.

ಆಗಷ್ಟೇ ಶುರುವಾಗಿದ್ದ ಐಪಿಎಲ್ ನಿಂದ ಪ್ರಭಾವಿತರಾದ ನಾವು 'ಎಂಪಿಎಲ್' (ಮೂಡುಗುಡ್ಡೆ ಪ್ರೀಮಿಯರ್ ಲೀಗ್!) ಎನ್ನುವ ಹೊಸ ಪಂದ್ಯಾವಳಿಯನ್ನೇ ಆರಂಭಿಸಿಬಿಟ್ಟೆವು. ಕೇವಲ ವಿದೇಶೀ ಆಟಗಾರರು ಮಾತ್ರವಲ್ಲದೆ ಎಷ್ಟೋ ವರ್ಷಗಳ ಕೆಳಗೆ ರಿಟೈರ್ಡ್ ಆಗಿರುವ ಆಟಗಾರರೂ ನಮ್ಮೀ ಪಂದ್ಯಾವಳಿಯಲ್ಲಿ ಬಿಡ್ ಆಗಿದ್ದರು. (ಒಮ್ಮೆಯಂತೂ ನನ್ನ ತಮ್ಮಂದಿರೇ ಕಟ್ಟಿದ ತಂಡವೊಂದರಲ್ಲಿ ಎರೆಡು ಮೂರು ಜನ ಡಬ್ಲ್ಯೂ.ಡಬ್ಲ್ಯೂ.ಇ. 'ಹೊಡೆದಾಟ'ಗಾರರೂ ಸೇರಿಕೊಂಡುಬಿಟ್ಟಿದ್ದರು! ಹೇಗಿದ್ದರೂ ಆಟದ ಕೊನೆಯಲ್ಲಿ ಬಡಿದಾಡಲಿಕ್ಕೆ ಬೇಕಾಗುತ್ತಾರೆಂದು ನಾನೂ ಸುಮ್ಮನಿದ್ದೆ.) ಒಮ್ಮೆ ಹೀಗೇ 'ಗಂಗೂಲಿ ಹೋದ್ನಂತೆ, ಗಿಲ್ ಕ್ರಿಸ್ಟ್ ಬಂದ್ನಂತೆ' ಎಂದು ಗಟ್ಟಿಯಾಗಿ ಮಾತನಾಡುತ್ತಾ ಆಡುತ್ತಿದ್ದಾಗ ಅಲ್ಲೇ ಇದ್ದ ಅಣ್ಣ "ಯಾರ್ಯಾರನ್ನೋ ಕರ್ಸ್ತೀರಲ್ಲಾ, ಹಂಗೇ ನಮ್ಮ ಕೊನೆ ತೆಗೆಯೋ ಮಂಜನನ್ನೂ ಕರ್ಸ್ರೋ ಮಾರಾಯಾ. ಅಡಿಕೆ ಕೊನೆ ಎಲ್ಲಾ ಹಣ್ಣಾಗಿದೆ" ಎಂದಾಗ ಕೆಲಸದಾಳುಗಳೆಲ್ಲ ಗೊಳ್ಳನೆ ನಕ್ಕಿದ್ದರು.

ಪಂದ್ಯದ ಪ್ರತೀ ಬಾಲಿನ ಸ್ಕೋರ್ ಮಾತ್ರವಲ್ಲದೇ, ನಂತರ ಆ ಪಂದ್ಯದ ಕುರಿತಾಗಿ ಪತ್ರಿಕೆಯಲ್ಲಿ ಬರುವ ವರದಿಯನ್ನೂ ಸಹಾ ಬರೆಯುತ್ತಿದ್ದೆವು. ಒರಿಜಿನಲ್ ಐಪಿಎಲ್ ನಂತೆ ಇಲ್ಲಿಯೂ ಸಹಾ ವಿವಾದಗಳಿಗೇನೂ ಕೊರತೆಯಿರಲಿಲ್ಲ. ತಮ್ಮ ಇಷ್ಟದ ಆಟಗಾರನ ಹೆಸರು ಬಂದಾಗ ತುಂಬಾ ಚೆನ್ನಾಗಿ ಆಡುತ್ತಿದ್ದ ನನ್ನ ತಮ್ಮಂದಿರು, ತಮಗೆ ಇಷ್ಟವಿಲ್ಲದವನು ಬಂದಾಗ ಬೇಕೆಂದೇ ಔಟಾಗುತ್ತಿದ್ದರು. ನೈಜ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಸದಾ ಹೆಚ್ಚೆಚ್ಚು ರನ್ ಗಳಿಸುತ್ತಾ ನಮ್ಮ ಕೋಪಕ್ಕೆ ಗುರಿಯಗಿದ್ದ ರಿಕಿ ಪಾಂಟಿಂಗ್ ನಂತಹಾ ಆಟಗಾರರು ನಮ್ಮ ಆಟದಲ್ಲಿ ಒಂದೂ ರನ್ ಹೊಡೆಯದೇ ತಮಗೆ ತಾವೇ ವಿಕೆಟ್ ಗೆ ಹೊಡೆದುಕೊಂಡು 'ಹಿಟ್ ವಿಕೆಟ್' ಆಗಿಬಿಡುತ್ತಿದ್ದರು! ಇದನ್ನು ಸಮರ್ಥಿಸಿಕೊಳ್ಳುವುದಕ್ಕೆ 'ಇಂಟರ್ನ್ಯಾಷನಲ್ ಮ್ಯಾಚ್ ಗಳೂ ಹೀಗೇ ಆಗೋದು' ಎನ್ನುವ ಹೊಸ ವಾದವನ್ನೇ ಸೃಷ್ಟಿಸಿದ್ದೆವು!

ನಮ್ಮ ಕ್ರಿಕೆಟ್ ಗಿದ್ದ ಅತಿದೊಡ್ಡ ವಿರೋಧಿಯೆಂದರೆ ನಮ್ಮ ದೊಡ್ಡಪ್ಪ. ಸದಾ ಏನಾದರೊಂದು ಉಪಯೋಗಕಾರಿ ಕೆಲಸ ಮಾಡುತ್ತಲೇ ಇರುತ್ತಿದ್ದ ಅವರ ಕಣ್ಣಿಗೆ ಈ ಕ್ರಿಕೆಟ್ ಎನ್ನುವುದು ಜಗತ್ತಿನ ಅತ್ಯಂತ ನಿರುಪಯುಕ್ತ ಚಟುವಟಿಕೆಯಂತೆ ಕಾಣುತ್ತಿತ್ತು. ಇತ್ತಕಡೆ ನಮ್ಮ ಅಟ ಶುರುವಾಗುತ್ತಿದ್ದಂತೆಯೇ ಅತ್ತಕಡೆ ಅವರ ಗೊಣಗಾಟದ ಕಾಮೆಂಟ್ರಿ ಶುರುವಾಗುತ್ತಿತ್ತು. ಒಂದು ಮಧ್ಯಾಹ್ನ ಎಂದಿನಂತೆ ನಮ್ಮ ಎಂಪಿಎಲ್ ಶುರುವಾಗಿತ್ತು. ದೊಡ್ಡಪ್ಪ ಮಲಗಿದ್ದಾರೆಂಬ ಧೈರ್ಯದಲ್ಲಿ ಟಾಸ್ ಹಾರಿಸಿ ಮೊದಲು ಬ್ಯಾಟಿಂಗ್ ಮಾಡುವ ತಂಡದ ಪರವಾಗಿ ಆಗಷ್ಟೇ ಆಟ ಆರಂಭಿಸಿದ್ದೆವು. ಅದೆಲ್ಲಿದ್ದರೋ ಗೊತ್ತಿಲ್ಲ, "ಮತ್ತೆ ಶುರುವಾಯ್ತಾ ನಿಮ್ ಗಲಾಟೆ?" ಎಂದು ಸೈಲೆನ್ಸರ್ ಅಳವಡಿಸಿರುವ ಗುಡುಗಿನಂತೆ ಗುಡುಗುತ್ತಾ ಅಂಗಳದಲ್ಲಿ ಪ್ರತ್ಯಕ್ಷವಾಗಿಯೇಬಿಟ್ಟರು. ನಾವು ಆಟ ನಿಲ್ಲಿಸಲಿಲ್ಲವಾದರೂ ಚೆಂಡು ಅವರ ಮನೆಯಂಗಳಕ್ಕೆ ಹೋಗದಂತೆ ನಿಧಾನವಾಗಿ ಆಡತೊಡಗಿದೆವು. ಪರಿಣಾಮವಾಗಿ ಮೊದಲು ಬ್ಯಾಟ್ ಮಾಡಿದ ತಂಡ 20 ಓವರ್ ಗಳಲ್ಲಿ ಕೇವಲ 99 ರನ್ ಗಳನ್ನಷ್ಟೇ ಗಳಿಸುವಂತಾಯಿತು. ಆದರೆ ಇನ್ನೊಂದು ತಂಡದ ಬ್ಯಾಟಿಂಗ್ ಮಾಡುವಾಗ ದೊಡ್ಡಪ್ಪ ಮನೆಯಲ್ಲಿರಲಿಲ್ಲವಾದ್ದರಿಂದ ಬಿಡುಬೀಸಾಗಿ ಬ್ಯಾಟ್ ಬೀಸಿ ಆ ಚಿಕ್ಕ ಮೊತ್ತವನ್ನು ಸುಲಭದಲ್ಲಿ 'ಚೇಸ್' ಮಾಡಲಾಯಿತು. ಪಂದ್ಯದ ಕೊನೆಗೆ 'ಮ್ಯಾನ್ ಆಫ್ ದಿ ಮ್ಯಾಚ್' ಕೊಡಬೇಕಲ್ಲಾ? ಮೊದಲ ಇನ್ನಿಂಗ್ಸ್ ಆಡುವಾಗ ನಮ್ಮನ್ನೆಲ್ಲಾ ಹೆದರಿಸಿ, ಚಿಕ್ಕ ಮೊತ್ತಕ್ಕೆ ಕಟ್ಟಿಹಾಕಲು ಪ್ರತ್ಯಕ್ಷ ಹಾಗೂ ಪರೊಕ್ಷ ಕಾರಣವಾಗಿದ್ದ ದೊಡ್ಡಪ್ಪನನ್ನೇ 'ಪಂದ್ಯ ಪುರುಷ' ಎಂದು ಒಮ್ಮತದಿಂದ ಘೋಷಿಸಲಾಯಿತು. 'ಮ್ಯಾನ್ ಆಫ್ ದಿ ಮ್ಯಾಚ್: ರಂಗಣ್ಣ ದೊಡ್ಡಪ್ಪ' ಎಂದು ಬರೆದುಕೊಂಡಿರುವ ಆ ಪುಸ್ತಕ ಹಳೆಯ ಟ್ರಂಕ್ ಒಂದರ ಮೂಲೆಯಲ್ಲಿ ಇಂದಿಗೂ ಹಾಗೇ ಇದೆ. ಗದರುತ್ತಿದ್ದ ದೊಡ್ಡಪ್ಪ ಮಾತ್ರ ಶಾಶ್ವತವಾಗಿ ಮಾತು ನಿಲ್ಲಿಸಿಬಿಟ್ಟಿದ್ದಾರೆ.

                        ****************

ಊರಿನಲ್ಲಿ, ಖಾಲಿ ಅಂಗಳ-ಬಯಲುಗಳಲ್ಲಿ ಕ್ರಿಕೆಟ್ ಆಡುವುದು ಒಂದು ಕಥೆಯಾದರೆ ಬೆಂಗಳೂರಿನಂತಹಾ ನಗರಗಳ ತುಂಬಿ ತುಳುಕುವ ಮೈದಾನಗಳಲ್ಲಿ ಆಡುವವರದು ಇನ್ನೊಂದು ಕಥೆ. ಇಲ್ಲಿ ಒಂದು ಮೈದಾನದಲ್ಲಿ ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ತಂಡಗಳು ಒಟ್ಟಿಗೇ ಕ್ರಿಕೆಟ್ ಆಡುತ್ತಿರುತ್ತವೆ. ಒಬ್ಬರ ಪಿಚ್ ಕೊನೆಯಾದ ಸ್ವಲ್ಪ ಅಂತರದಲ್ಲೇ ಇನ್ನೊಬ್ಬರದು ಆರಂಭವಾಗಿರುತ್ತದೆ. ಈ ಇಬ್ಬರ ಮಧ್ಯದ ಚಿಕ್ಕ ಗ್ಯಾಪ್ನಲ್ಲೇ ಪ್ಲಾಸ್ಟಿಕ್ ಬ್ಯಾಟು ಬಾಲು ಹಿಡದ ನಾಲ್ಕಾರು ಚಿಲ್ಟಾರಿಗಳ 'ಅಂಡರ್ ನೈಂಟೀನ್' ಮ್ಯಾಚ್ ನಡೆದಿರುತ್ತದೆ! ಆ ಕಡೆಯಿಂದೊಬ್ಬ ಬೌಲಿಂಗ್ ಮಾಡಲು ಓಡಿಬಂದರೆ ಇತ್ತಲಿಂದ ಇನ್ನೊಬ್ಬ ರನ್ ಗಳಿಸಲು ಓಡಿಹೋಗುತ್ತಾನೆ. ಇಬ್ಬರ ಮಧ್ಯದಲ್ಲಿ ಫೀಲ್ಡಿಂಗ್ ಮಾಡುವನೊಬ್ಬ ಅದೆಲ್ಲಿಂದಲೋ ನುಗ್ಗಿಬಂದು ಧಸಾಲ್ಲನೆ ಬೀಳುತ್ತಾನೆ. ಯಾರನ್ನು ಎತ್ತಬೇಕೋ, ಯಾರನ್ನು ಔಟ್ ಮಾಡಬೇಕೋ, ಯಾರಿಗೆ ಚೆಂಡು ಮರಳಿಸಬೇಕೋ... ಸಾಕ್ಷಾತ್ ದೇವರೇ ಬಂದರೂ ಕನ್ಫ್ಯೂಸ್ ಆಗುವುದರಲ್ಲಿ ಸಂಶಯವಿಲ್ಲ. ಇನ್ನು ಈ ಗೊಂದಲವೇ ಬೇಡವೆಂದು ಬೌಂಡರಿ ಕಾಯಲು ಸೀಮಾರೇಖೆಯ ಬಳಿ ನಿಂತು ಮೇಲೆ ನೋಡಿದರೆ ಒಂದೇ ಸಲಕ್ಕೆ ನಾಲ್ಕು ಚೆಂಡುಗಳು ಸಂಸಾರ ಸಮೇತ ಗಾಳಿಯಲ್ಲಿ ಹಾರಿಬರುತ್ತವೆ! ಅತ್ತಲಿಂದ ಯಾರೋ 'ಬಾಲ್ss.. ಬಾಲ್ss..' ಎಂದು ಕಿರುಚಿಕೊಳ್ಳುತ್ತಾರೆ. 'ಅಂಚಿ, ಪಿಂಚಿ, ಚಾವಲ ಚುಂಚಿ..' ಎಂದು ಕವಡೆ ಶಾಸ್ತ್ರ ಬಳಸಿ ಯಾವುದೋ ಒಂದು ಚೆಂಡನ್ನು ಕೊನೆಗೂ ಹಿಡಿದು, ಎದುರಾಳಿಯನ್ನು ಔಟ್ ಮಾಡಿದ ಸಂಭ್ರಮದಲ್ಲಿ 'ಹೀ ಯಾ.. ಹೂssss' ಎಂದು ಸಂಭ್ರಮಿಸವಾಗ ನಮ್ಮ ತಂಡದ ಆಟಗಾರರೆಲ್ಲ ಕೆಂಗಣ್ಣು ಬೀರುತ್ತಾ ನಿಂತಿರುತ್ತಾರೆ. ಏಕೆಂದು ತಿರುಗಿ ನೋಡಿದರೆ ನಾವು ನಿಜವಾಗಿ ಹಿಡಿಯಬೇಕಿದ್ದ ಚೆಂಡು ಬೌಂಡರಿ ಗೆರೆ ದಾಟಿ ಮೈದಾನದಾಚೆಗಿನ ಮೋರಿಯತ್ತ ಓಡುತ್ತಿರುತ್ತದೆ!

                        ****************

ವಯಸ್ಸು ಹೆಚ್ಚಿದಂತೆಲ್ಲ ಮೈದಾನ ದೂರವಾಗಿ ಆಸ್ಪತ್ರೆ ಹತ್ತಿರವಾಗುತ್ತಿದೆ. ಕ್ರಿಕೆಟ್ ಆಡುತ್ತಿದ್ದಾಗ ಒಳಗೆಲ್ಲೋ ಇದ್ದ ಹೊಟ್ಟೆ ಈಗ ಆಟವೆನ್ನುವುದು ಬರೀ ಟೀವಿಯಲ್ಲಿ ನೋಡುವ ಸರಕಾಗಿರುವುದರಿಂದ ಹೊರಬಂದು ಮತ್ತೆ ಸರಾಗವಾಗಿ ಕ್ರಿಕೆಟ್ ಆಡಲಾಗದಂತೆ ಮಾಡಿದೆ. ಅಲ್ಲದೇ ಉತ್ಸಾಹದಿಂದ ಪಂದ್ಯಗಳನ್ನೂ, ಪಂದ್ಯಾವಳಿಗಳನ್ನೂ ಆಯೋಜಿಸುತ್ತಿದ್ದ ಗೆಳೆಯರಿಂದು ಮನೆ, ಮಕ್ಕಳು, ಸಂಸಾರ ಎಂದು ಬಿಡುವಿಲ್ಲದಾಗಿದ್ದಾರೆ. ಅಲ್ಲಿ ಊರಿನಲ್ಲೂ ಅಮ್ಮ ಸಗಣಿನೀರು ಬಳಿದ ಅಂಗಳದಲ್ಲೀಗ ಆಡಿ ಧೂಳೆಬ್ಬಿಸುವ ಮಕ್ಕಳ ಕಲರವವಿಲ್ಲ. ಹತ್ತಾರು ಚೆಂಡುಗಳ ಬಚ್ಚಿಟ್ಟುಕೊಂಡು ಕಾಡಿಸುತ್ತಿದ್ದ ಪೊದೆಯಿಂದಾವೃತವಾದ ಹೊಂಡವಿಂದು ಹುಡುಕಲು ಬರುವ ಹುಡುಗರಿಲ್ಲದೇ ಹಾಳು ಬಿದ್ದಿದೆ.
ತಮ್ಮೊಡಲ ತುಂಬಾ ಹತ್ತಾರು ಸ್ಕೋರ್ ಹೆಸರಿನ ಸವಿಸವಿ ನೆನಪುಗಳನ್ನು ಬರೆದುಕೊಂಡಿರುವ ಪುಸ್ತಕಗಳು ಪೆಟ್ಟಿಗೆಯಲ್ಲಿ ಬೆಚ್ಚಗೆ ಕುಳಿತುಬಿಟ್ಟಿವೆ. ಊರಿಗೆ ಹೋದ ರಜೆಯ ಸಂಜೆಯೊಂದರಲ್ಲಿ ನಿಂತು ನೋಡುವಾಗ ಖಾಲೀ ಹೊಡೆಯುತ್ತಿರುವ ಅಂಗಳ ಮುಂದೆಂದೋ ಸಚಿನ್, ದ್ರಾವಿಡ್ ಗಳಾಗಿ ಮತ್ತೆ ಆಡಲು ಬರಲಿರುವ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಕಾಯುತ್ತಿರುವಂತೆ ಭಾಸವಾಗುತ್ತದೆ. 

ನಾನು ಹೀಗೆಲ್ಲಾ ಯೋಚಿಸುತ್ತಾ ನಿಂತಿರುವಾಗಲೇ ಅಂದು ನಮಗೆ ಕ್ರಿಕೆಟ್ ಕಲಿಸಿದ್ದ ಅಣ್ಣನ ಹತ್ತು ವರ್ಷದ ಮಗ "ಅಣ್ಣಾ.." ಎನ್ನುತ್ತಾ ನನ್ನತ್ತ ಓಡಿಬರುತ್ತಾನೆ. ಅವನ ಕೈಯ್ಯಲ್ಲಿ ಮತ್ತದೇ ಮೋಟುದ್ದದ ಬ್ಯಾಟು, ಟೆನ್ನಿಸ್ ಬಾಲು! ನೋಡುತ್ತಾ ನಿಂತ ನನ್ನ ಕೈಗೆ ಚೆಂಡು ಕೊಡುತ್ತಾ ಹೇಳುತ್ತಾನೆ:

"ಕ್ರಿಕೆತ್ ಆಡಣ ಕಣಾ... ನಾನು ವಿರಾಟ್ ಕೋಹ್ಲಿ, ನೀನು ಭುವನೇಶ್ವರ್ ಕುಮಾರ್!"

('ವಿಶ್ವವಾಣಿ'ಯ 23.7.2017ರ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಿತ)

ಬುಧವಾರ, ಜುಲೈ 5, 2017

ಸಮಯ ಅದೆಷ್ಟು ಸುಂದರವಾಗಿ ಹಿಂದಿರುಗಿ ಬರುತ್ತೆ ಅಲ್ವಾ?


ಮಧ್ಯಾಹ್ನ ಹನ್ನೆರೆಡರ ಸಮಯ. ಶ್ರೀನಿವಾಸನಗರದ ಆ ಮನೆಯಲ್ಲಿ ನೆನಪೊಂದು ಚಿಪ್ಪೊಡೆಯಲು ತಯಾರಾಗಿ ನನ್ನೆದುರು ಕುಳಿತಿತ್ತು. ನಾನು ತುಟಿಬಿಚ್ಚದೇ ನೋಡುತ್ತಿದ್ದೆ. 

"ನಾನು ನೈಟ್ ಡ್ಯೂಟಿ ಮುಗಿಸಿ ಆಗಷ್ಟೇ ರೂಮಿಗೆ ಬಂದಿದ್ದೆ" 
ಅವನು ಕೊನೆಗೂ ಮೌನ ಮುರಿದ.

"ಅಂದೇಕೋ ಎಂದೂ ಇಲ್ಲದ ಹಸಿವು. ನಿದ್ರೆ ಹತ್ತಲಿಲ್ಲ. ಬಲವಂತವಾಗಿ ಕಣ್ಮುಚ್ಚಿ ನಿದ್ರಿಸುವ ಪ್ರಯತ್ನದಲ್ಲಿದ್ದೆ. ಆಗಲೇ ರಾಜಾಜೀನಗರದ ಚಿಕ್ಕಮ್ಮನ ಮನೆಯಿಂದ ಕಾಲ್ ಬಂದಿದ್ದು. "ಈಗಲೇ ಹೊರಟು ಬಾ. ಅಪ್ಪಂಗೆ ಹುಷಾರಿಲ್ವಂತೆ" ಎಂದರು. ಆದರೆ ಅವರ ಮನೆ ತಲುಪುವ ಹೊತ್ತಿಗಾಗಲೇ ನನಗೆ ಅರ್ಥವಾಗಿಹೋಯಿತು- ಇದು ಕೇವಲ ಹುಷಾರು ತಪ್ಪಿರುವ ವಿಷಯವಲ್ಲ ಅಂತ"

ಅವನ ಧ್ವನಿಯಲ್ಲಿನ ಕಂಪನ ನೇರ ನನ್ನೆದೆಗೇ ಬಡಿಯುತ್ತಿತ್ತು. "ಮುಂದೇನಾಯ್ತು?" ಎನ್ನುವಂತೆ ನೋಡಿದೆ.

"ಕಾರು ಮಾಡಿಕೊಂಡು ನನ್ನನ್ನು ಊರಿಗೆ ಕರೆದೊಯ್ದರು. ಮನೆಯ ತುಂಬಾ ಜನ- ರಸ್ತೆಯಲ್ಲಿ, ಅಂಗಳದಲ್ಲಿ, ಜಗುಲಿಯಲ್ಲಿ... ನನ್ನನ್ನು ನೋಡುತ್ತಿದ್ದಂತೆ ಎಲ್ಲರೂ ಸರಿದುನಿಂತರು. ಆಗ ಕಂಡಿತು... ಜಗುಲಿಯಲ್ಲಿ ಮಲಗಿಸಿದ್ದ ಅಪ್ಪನ ದೇಹ..."

ಅವನ ಸ್ವರ ಮುಂದೆ ಮಾತನಾಡಲಾರದಷ್ಟು ಗದ್ಗದಿತವಾಯಿತು. ಅರೆ ನಿಮಿಷ ಮೌನವಾದ. ಅಂದು ನಡೆದ ಆ ಘಟನೆಯು ಚಿತ್ರಗಳಾಗಿ ನನ್ನ ಕಲ್ಪನೆಯಲ್ಲಿ ಕದಲತೊಡಗಿದವು.

"ಹಿಂದಿನ ದಿನ ರಾತ್ರೆಯಷ್ಟೇ ನನ್ನೊಂದಿಗೆ ಮಾತನಾಡಿದ್ದರು. ರಜೆ ಹಾಕಿ ಊರಿಗೆ ಬಾ ಎಂದಿದ್ದರು. ಅದೇ ಅವರೊಂದಿಗಿನ ಕೊನೆಯ ಮಾತಾಗಿಹೋಯಿತು"

ಅವನ ಕಣ್ಣು ತುಂಬಿ ಹರಿದವು, ಜೊತೆಗೆ ನನ್ನವೂ... ಅಪ್ಪನ ನೆನಪಿಗೆ ಹಾಗೂ ಹಳೆಯದನ್ನು ನೆನಪಿಸಿ ಅವನನ್ನು ಅಳಿಸಿದ ಪಶ್ಚಾತ್ತಾಪಕ್ಕೆ. ಏನು ಹೇಳಬೇಕೆಂದು ತಿಳಿಯಲಿಲ್ಲ. ಜನ್ಮನೀಡಿದ,  ಇಪ್ಪತ್ತೆರೆಡು ವರ್ಷಗಳ ಕಾಲ ನೆರಳಾಗಿ ಬೆಳೆಸಿದ, ಇನ್ನೂ ಇಪ್ಪತೈದು ವರ್ಷ ಜೊತೆಗಿದ್ದು ಮಗನ ಬದುಕಿನ ಏಳಿಗೆಗಳನ್ನು ಕಣ್ಣಾರೆ ಸವಿಯಬೇಕಿದ್ದ ತಂದೆಯನ್ನು ರಾತ್ರೆ ಬೆಳಗಾಗುವುದರೊಳಗೆ ಕಳಕೊಂಡ ಆ ನಿರ್ಭಾಗ್ಯ ಮಗನೊಂದಿಗೆ ಎರೆಡು ಹನಿ ಕಣ್ಣೀರಿನ ಹೊರತಾಗಿ ಬೇರೇನು ಮಾತನಾಡಲೂ ನನ್ನಿಂದಾಗಲಿಲ್ಲ. 

                    *************

ಪ್ರೀತಿಯ ಅಪ್ಪಾ,

ಈ ಘಟನೆಯನ್ನು ಕೇಳಿದ ಮೇಲೂ ನಿನ್ನ ನೆನಪಾಗದಿರುವುದಕ್ಕೆ ಹೇಗೆ ತಾನೇ ಸಾಧ್ಯ ಹೇಳು? ಯಾರದೋ ಅಪ್ಪನ ಕಥೆಕೇಳಿ ನನ್ನ ಕಣ್ಣಿನಲ್ಲಿ ನೀರಾಗಿ ತುಳುಕಿದ್ದು ನಿನ್ನ ಮಮತೆಯೇ ಅಲ್ವಾ? ಹೌದು... ಇದೇ ನನಗೂ ನಿನಗೂ ಇರುವ ವ್ಯತ್ಯಾಸ. ಪಟ್ಟಣದ ಐಶಾರಾಮಿನಲ್ಲಿ ಹಾಯಾಗಿರುವ ನನಗೆ ನಿನ್ನ ನೆನಪಾಗಬೇಕೆಂದರೆ ಒಂದೋ ಕಷ್ಟ ಬರಬೇಕು; ಇಲ್ಲಾ ಇಂಥಾದ್ದೊಂದು ಕಥೆ ಕೇಳಬೇಕು. ಆದರೆ ನಿನಗೆ ಹಾಗಲ್ಲ. ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರೆ ಮಲಗುವ ತನಕ ನೀನು ಸುರಿಸುವ ಸಾವಿರಾರು ಬೆವರ ಹನಿಗಳಲ್ಲಿ, ದೇವರ ತಲೆಯ ಮೇಲೆ ಹರಿಸುವ ಅಭಿಶೇಕದ ಧಾರೆಯಲ್ಲಿ, ಮಣ್ಣ ಉತ್ತುವ ಏದುಸಿರಿನಲ್ಲಿ, ಫಲವ ಹೊತ್ತುತರುವ ಸಂತಸದಲ್ಲಿ, ಕೊನೆಗೆ ನಡುರಾತ್ರೆಯಲ್ಲಿ ಹೆದರಿಸಿ ಎಚ್ಚರಗೊಳಿಸಿದ ಸ್ವಪ್ನದ ಕನವರಿಕೆಯಲ್ಲೂ ಇರುವುದು 'ಮಗ ಚೆನ್ನಾಗಿರಲಿ' ಎನ್ನುವ ಹಾರೈಕೆಯೊಂದೇ.

ನನಗಿನ್ನೂ ಚೆನ್ನಾಗಿ ನೆನಪಿದೆ ಅಪ್ಪಾ... ಬೆಳ್ಳಂಬೆಳಗ್ಗೆ ಅಳುತ್ತಾ ಏಳುತ್ತಿದ್ದ ನನ್ನ ಮುಖ ತೊಳೆಸಿ ನೀನು 'ಸಾಮಿ ಚಿತ್ತ ಮಾಡು' ಎಂದು ದೇವರೆದುರು ನಿಲ್ಲಿಸುತ್ತಿದ್ದುದು, 'ನಾನೂ ಬತ್ತೀನಿ ತಡಿಯಾ' ಎಂದು ಕೂಗುತ್ತಾ ಒಂದು ಕೈಯ್ಯಲ್ಲಿ ಜಾರಿಹೋಗುತ್ತಿರುವ ಚಡ್ಡಿಯನ್ನೂ, ಇನ್ನೊಂದು ಕೈಯ್ಯಲ್ಲಿ ಮೋಟುದ್ದದ ಪೈಪನ್ನೂ ಹಿಡಿದುಕೊಂಡು ಹಿಂದೆಹಿಂದೆ ಓಡಿ ಬರುತ್ತಿದ್ದ ನನ್ನ ಕೈ ಹಿಡಿದು ತೋಟಕ್ಕೆ ಕರೆದೊಯ್ಯುತ್ತಿದ್ದುದು, ಶಬ್ದಕ್ಕೇ ಹೆದರುವ ನನ್ನನ್ನು ಅಡಿಕೆಮರದ ಮರೆಯಲ್ಲಿ ನಿಲ್ಲಿಸಿ ನೀನು ಮೋಟಾರು ಸ್ಟಾರ್ಟ್ ಮಾಡುತ್ತಿದ್ದುದು, 'ಕೊನೆ ಬೀಳತ್ತೆ ಇಲ್ಲೇ ನಿಂತ್ಕ' ಎಂದು ನನ್ನನ್ನು ದೂರನಿಲ್ಲಿಸಿ ನೀನು ಅಡಿಕೆ ಕೊನೆ ಹಿಡಿಯುತ್ತಿದ್ದುದು..... ಎಲ್ಲವೂ ನಿನ್ನೆಯೋ ಮೊನ್ನೆಯೋ ನಡೆದಷ್ಟು ಹಸಿರಾಗಿವೆ. ನಿನ್ನಂತೆಯೇ ಕೈ ಕಟ್ಟಿ ನಿಲ್ಲುತ್ತಿದ್ದ ನನ್ನನ್ನು ನೋಡಿದವರೆಲ್ಲಾ "ಥೇಟ್ ಅಪ್ಪನ ಥರಾನೇ" ಎಂದಾಗ ನನಗೇನೋ ಒಂದು ಹೆಮ್ಮೆ. ಏಕೆಂದರೆ ಅವತ್ತಿನ ನನ್ನ ಪುಟ್ಟ ಪ್ರಪಂಚದಲ್ಲಿ ನೀನೇ ಹೀರೋ. ನನ್ನ ಬಿಟ್ಟು ನೀನು ಅಡಿಕೆ ಮಂಡಿಗೋ, ಅಜ್ಜನ ಮನೆಗೋ ಹೊರಟುನಿಂತಾಗ ನಾನು ಅದೆಷ್ಟು ಅಳುತ್ತಿದ್ದೆ! ನೀನು "ಪೇಪಿ ತರ್ತೀನಿ ಅಕಾ" ಎಂದು ಪೂಸಿ ಹೊಡೆದರೂ ಕೇಳುತ್ತಿರಲಿಲ್ಲ. "ನಾನೂ ಬತ್ತೀನಾ" ಎಂದು ರಚ್ಚೆ ಹಿಡಿದು ಹೊರಳಾಡುತ್ತಿದ್ದೆ. ನಿನ್ನ ಹಿಂದೆಯೇ ಬಸ್ಸಿನೊಳಕ್ಕೆ ನುಗ್ಗಲು ಬಂದ ನನ್ನನ್ನು ಅಮ್ಮ ಬಲವಂತವಾಗಿ ಎಳೆದೊಯ್ದು ಚುಳುಕೆಯೇಟು ಕೊಡುವವರೆಗೂ ನನ್ನ ಅಳು ನಿಲ್ಲುತ್ತಿರಲಿಲ್ಲ. ಸಾಗರದಿಂದ ಮರಳುವಾಗ ನೀನು ಹೊತ್ತು ತಂದಿದ್ದ ಮೂರು ಚಕ್ರದ ಸೈಕಲ್, ಪ್ರತಿದಿನ ಸಂಜೆ ಉಪೇಂದ್ರನ ಅಂಗಡಿಯಿಂದ ತರುತ್ತಿದ್ದ ಕಂಬಾರ್ ಕಟ್ಟು - ಬೆಣ್ಣೆ ಬಿಸ್ಕತ್ತು, ಸಾಗರದ ಅಡಿಕೆ ಮಂಡಿಯೆದುರಿನ ಮರದ ಬೆಂಚಿನಮೇಲೆ ಕೂರಿಸಿಕೊಂಡು ಓದಿಹೇಳಿದ ಡಿಂಗನ ಕಥೆ, ಯಾವುದೋ ಹೆಸರಿಲ್ಲದ ಗೂಡಂಗಡಿಯಲ್ಲಿ ಕೊಡಿಸಿದ ಪೀಲೆ, ನನ್ನನ್ನು ಮಾತ್ರ ಉಪ್ಪರಿಗೆಗೆ ಕರೆದೊಯ್ದು ತೋರಿಸಿದ್ದ ಹಳದಿಬಣ್ಣದ ಟಿಂಟಿಂ ಗಾಡಿ.... ಇವೆಲ್ಲವೂ ಇಂದಿಗೂ ನನ್ನ ಸ್ಮೃತಿಪೆಟ್ಟಿಗೆಯೊಳಗೆ ಭದ್ರವಾಗಿವೆ. ಮನಸ್ಸು ಮಗುವಾಗಿ ಹಠಹಿಡಿದ ಸಂಜೆಗಳಲ್ಲಿ ಅವನ್ನೆಲ್ಲಾ ಒಂದೊಂದಾಗಿ ಆಚೆ ತೆಗೆಯುತ್ತೇನೆ. ಮತ್ತದೇ ಸೈಕಲ್ ತುಳಿದು, ಕಂಬಾರ್ಕಟ್ಟು ಮೆಂದು, ಟಿಂಟಿಂ ಗಾಡಿಯನ್ನು ನೂಕಿ ಸಂಭ್ರಮಿಸುತ್ತೇನೆ, ಮನತುಂಬಿಕೊಳ್ಳುತ್ತೇನೆ.

ನಾನು ಶಾಲೆಗೆ ಹೋಗಲಾರಂಭಿಸಿದಾಗ ನನ್ನನ್ನು 'ಡ್ರಾಪ್' ಮಾಡುವುದಕ್ಕೆ ಅಮ್ಮ ಬರುತ್ತಿದ್ದಳೇ ಹೊರತು ನಿನ್ನನ್ನು ಕಳಿಸುತ್ತಿರಲಿಲ್ಲ. ಏಕೆಂದರೆ ಶಾಲೆಯ ಗೇಟು ತಲುಪಿದಕೂಡಲೇ 'ಹೋ..' ಎಂದು ಅಳುತ್ತಾ "ನಾನು ಶಾಲೆಗೆ ಹೋಗಲ್ಲಾ.." ಎಂದು ಹಠಹಿಡಿಯುತ್ತಿದ್ದ ನನಗೆ ಬೈದು ಬೆದರಿಸುವ ಮನಸ್ಸಿರದ ನೀನು "ನಾಳೆಯಿಂದ ಹೋದ್ರಾಯ್ತು ಬಾ" ಎಂದು ಮರಳಿ ಮನೆಗೆ ಕರೆತರುತ್ತಿದ್ದೆ. ಆದರೆ ನನ್ನೀ ಅಳು ಹಠಗಳೆಲ್ಲಾ ಅಮ್ಮನ ಹತ್ತಿರ ನಡೆಯುತ್ತಿರಲಿಲ್ಲ. "ಹೋಗ್ತೀಯಾ ಇಲ್ವಾ" ಎಂದು ದಾಸವಾಳಗಿಡದ ಬರಲು ಹಿಡಿದು ಬೆನ್ನಟ್ಟಿಬರಲಾರಂಭಿಸಿದಳೆಂದರೆ, ನಾನು ಶಾಲೆ ತಲುಪುವತನಕ ಅವಳ 'ಚೇಸಿಂಗ್' ನಿಲ್ಲುತ್ತಿರಲಿಲ್ಲ.

ನಿನ್ನದು ಒಂದು ಥರಾ ಕರಡಿಪ್ರೀತಿ! ನನಗೆ ಹೊಡೆದನೆಂಬ ಕಾರಣಕ್ಕೆ ಮಾವನ ಮಗನನ್ನು ಗಿರಿಗಿರಿ ತಿರುಗಿಸಿ ಬಿಸುಟಿದ್ದೆಯಲ್ಲಾ.... ಅದನ್ನು ನೆನಪಿಸಿಕೊಂಡಾಗಲೆಲ್ಲಾ ಹಾಗನಿಸುತ್ತದೆ. ಕೋಪವನ್ನು ಸದಾ ನಿನ್ನ ಪಟಾಪಟಿ ಚಡ್ಡಿಯ ಜೇಬಿನಲ್ಲೇ ಇಟ್ಟುಕೊಂಡಿರುತ್ತೀಯ ಅಲ್ವಾ? ಈ ವಿಷಯದಲ್ಲಿ ನಿನ್ನ ಆವೇಶಕ್ಕೆ ಸಿಲುಕುವವೆಂದರೆ ಮನುಷ್ಯರಿಗಿಂತ ಹೆಚ್ಚಾಗಿ ವಸ್ತುಗಳು! ಕಾರಣವೇ ಇಲ್ಲದೆ ಕನೆಕ್ಷನ್ ಕಳಚಿಹೋದ ನೀರಿನ ಪೈಪು, ಏನನ್ನೋ ಕಡಿಯುವಾಗ ಕೈಮೇಲೆಬಂದ ಕತ್ತಿ, ಒದ್ದೆಯಾಗಿ ನಿನ್ನ ಕಾಲು ಜಾರುವಂತೆ ಮಾಡಿದ ಸಿಮೆಂಟುನೆಲ, ನಡೆಯುವಾಗ ತಲೆಗೆತಾಗಿ ನೋವುಂಟುಮಾಡಿದ ಬಾಗಿಲಿನ ಛಾವಣಿ, ಸರಿಯಾಗಿ ಹಾಡದೆ ಕೊರ್ ಎನ್ನುವ ರೇಡಿಯೋ... ಇವೆಲ್ಲವೂ ನಿನ್ನಿಂದ ಬಿಸಾಡಿಸಿಕೊಂಡು, 'ಸಾಯಿ' ಎಂದು ಬೈಸಿಕೊಂಡವುಗಳೇ. ಆಗೆಲ್ಲಾ ಅಮ್ಮ ಮರೆಯಲ್ಲಿ ನಿಂತು ಮುಸಿಮುಸಿ ನಗುತ್ತಿದ್ದಳು, ಜೊತೆಗೆ ನಾನೂ. ಆದರೆ ಈಗ ಅನಿಸುತ್ತಿದೆ: ಠೀಕುಠಾಕಿನ ಬಣ್ಣದ ಜಗತ್ತಿಗೆ ಹೊಂದಿಕೊಳ್ಳಲಾಗದ, ಕಡೆಗಣಿಸಿ ಮೂಲೆಗುಂಪು ಮಾಡಿದವರಿಗೆ ಎದುರು ಹೇಳಲಾರದ ಬಡತನದ ಅಸಹಾಯಕತೆಯನ್ನು ಹೀಗೆ ವಸ್ತುಗಳ ಮೇಲೆ ತೀರಿಸಿಕೊಳ್ಳುವುದನ್ನ ಅಭ್ಯಾಸಮಾಡಿಕೊಂಡಿದ್ದೆಯೆಂದು.

ಶ್.... ಅಮ್ಮನಿಗೆ ಕೇಳದಂತೆ ಮೆತ್ತಗೆ ಹೇಳು. ದಿನವಿಡೀ ತೋಟದಲ್ಲಿ, ಬೇಲಿ-ಪೊದರುಗಳ ಇರುಕಿನಲ್ಲೇ ಓಡಾಡುವವನಾಗಿದ್ದರೂ ನಿನಗೆ ಹಾವು-ಚೇಳುಗಳೆಂದರೆ, ಕಾಡು ಪ್ರಾಣಿಗಳೆಂದರೆ ತುಂಬಾ ಭಯ ಅಲ್ವಾ? ಮದುವೆಯಾದ ಹೊಸತರಲ್ಲಿ ಅಮ್ಮನಜೊತೆ ತೋಟದಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹಾರ್ಬೆಕ್ಕೊಂದು (ಮರದ ಮೇಲೆ ವಾಸಿಸುವ ಬೆಕ್ಕಿನ ಜಾತಿಗೆ ಸೇರಿದ ಪುಟ್ಟ ಪ್ರಾಣಿ) ಮರದಿಂದ ಮರಕ್ಕೆ ಹಾರುತ್ತಾ ಬರುತ್ತಿರುವುದನ್ನು ನೋಡಿ ಗಾಬರಿಯಾದ ನೀನು ಜೊತೆಗಿದ್ದ ಹೆಂಡತಿಯನ್ನು ಅಲ್ಲೇ ಬಿಟ್ಟು ಓಟಕಿತ್ತಿದ್ದೆಯಂತೆ? ತೋಟದ ಅಂಚಿನ ಸುರಕ್ಷಿತ ಜಾಗ ತಲುಪಿ 'ಹೆಂಡತಿ ಇದಾಳಾ ಇಲ್ಲಾ ಹಾರ್ಬೆಕ್ಕು ಕಚ್ಕೊಂಡೋಯ್ತಾ' ಎನ್ನುವಂತೆ ತಿರುಗಿ ನೋಡಿದ್ದೆಯಂತೆ? ನಿನ್ನ ಓಟದ ರಭಸವನ್ನು ತನ್ನ ಪಾಡಿಗೆ ತಾನು ಆಡುತ್ತಿದ್ದ ಆ ಪುಟ್ಟ ಪ್ರಾಣಿಯೂ ಬೆರಗಾಗಿ ನಿಂತು ನೋಡಿತಂತೆ. ಅಮ್ಮ ಆಗಾಗ ಹೇಳಿಕೊಂಡು ನಗುತ್ತಿರುತ್ತಾಳೆ. ಆದರೂ ಕಾಡು ಪ್ರಾಣಿಗಳೆಂದರೆ ನಿನಗೆ ತುಂಬಾ ಕುತೂಹಲ. ಅದಕ್ಕೆಂದೇ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲನ್ನು ಹಾಕಿಸಿಕೊಂಡಿದ್ದೀಯ. ಅದರಲ್ಲಿ ಬರುವ ಹುಲಿ, ಸಿಂಹ, ಚಿರತೆಗಳನ್ನೆಲ್ಲಾ ನೋಡುತ್ತಾ ಮೈಮರೆಯುತ್ತೀಯ. ಮುಂದಿನಸಲ ನೀನು ಬೆಂಗಳೂರಿಗೆ ಬಂದಾಗ ಬನ್ನೇರುಘಟ್ಟದ ಸಂರಕ್ಷಿತಾರಣ್ಯದಲ್ಲಿ 'ಸಫಾರಿ'ಗೆ ಕರೆದೊಯ್ಯುತ್ತೇನೆ. ನಿನ್ನ ನೆಚ್ಚಿನ ಹುಲಿ, ಸಿಂಹ, ಕರಡಿ, ಹೆಬ್ಬಾವುಗಳನ್ನೆಲ್ಲಾ ಹತ್ತಿರದಿಂದ ನೋಡಿದಾಗ ನಿನ್ನ ಮುಖದಲ್ಲಿ ಮೂಡುವ ಬೆರಗನ್ನು ಒಮ್ಮೆ ನೋಡಬೇಕೆಂಬ ಆಸೆ ನನಗೆ.

ಇನ್ನು ಹಳೆಯ ಸಿನೆಮಾಗಳೆಂದರೆ ನಿನಗೆ ಇನ್ನಿಲ್ಲದಷ್ಟು ಹುಚ್ಚು. ಟಿವಿಯಲ್ಲಿ ಚಾನೆಲ್ ಚೇಂಜ್ ಮಾಡುವಾಗ ಮಧ್ಯದಲ್ಲೆಲ್ಲೋ ಅಪ್ಪಿತಪ್ಪಿ ಡಾ. ರಾಜಕುಮಾರ್ ರ ಮುಖ ಕಂಡರೆ ಸಾಕು "ಹೇ ತಡಿತಡಿ, ಹಾಕು ಅದನ್ನ" ಎಂದು ಕುಳಿತುಬಿಡ್ತೀಯ. ಅವರ ಪ್ರತಿಯೊಂದು ಸಿನೆಮಾವನ್ನೂ ನಿನ್ನ ಯಾವುದೋಒಂದು ಹಳೆಯ, ಮಧುರ ನೆನಪಿನೊಂದಿಗೆ ಬೆಸೆದುಕೊಂಡಿದ್ದೀಯ. ಯಾವ ಸಿನೆಮಾ ಯಾವ ವರ್ಷ ರಿಲೀಸ್ ಆಯ್ತು, ಅದರ ನಟರು, ಸಂಗೀತ-ಸಾಹಿತ್ಯ ನಿರ್ದೇಶಕರು ಯಾರ್ಯಾರು, ಅಂದಿನ ಗ್ರಾಮಪಂಚಾಯತಿಯ ಗ್ರಾಮಾಫೋನು ಆ ಹಾಡುಗಳನ್ನು ಹೇಗೆ ಹಾಡುತ್ತಿತ್ತು, ಕಾಮೆಂಟರಿ ಕೇಳುವ ಅಣ್ಣನ ಜೊತೆ 'ಚಿತ್ರಗೀತೆ ಹಾಕು' ಎಂದು ಹೇಗೆಲ್ಲಾ ಜಗಳಾಡಿದ್ದೆ... ಇದನ್ನೆಲ್ಲಾ ಮತ್ತೆಮತ್ತೆ ನೆನಪಿಸಿಕೊಂಡು ಹೇಳುತ್ತೀಯ, ತೀರಾ ನಮಗೂ ಬಾಯಿಪಾಠವಾಗುವಷ್ಟು! ಚಿಕ್ಕ ಮಗುವೊಂದು ತನ್ಮಯನಾಗಿ ಕಾರ್ಟೂನು ನೋಡುವಷ್ಟೇ ಶ್ರದ್ಧೆಯಿಂದ ಚಲನಚಿತ್ರದೊಳಗೆ ಮುಳುಗಿಹೋಗ್ತೀಯ ಅಲ್ವಾ?ಅವತ್ತು ಪಕ್ಕದಮನೆಯಲ್ಲಿ ಮನೆಯವರು, ಕೆಲಸದವರು ಎಲ್ಲರೂ ಅಡಿಕೆಸುಲಿಯುತ್ತಾ ಕುಳಿತಿದ್ದಾಗ ಹಾಕಿದ್ದ ಫಿಲಮ್ಮೊಂದರಲ್ಲಿ ವಿಲನ್ ಹೀರೋನನ್ನು ಹೊಡೆಯುವ ದೃಶ್ಯನೋಡಿ ರೊಚ್ಚಿಗೆದ್ದ ನೀನು "ಯಾಕೋ ಹೊಡೆತ ತಿಂತೀಯಾ? ತಿರುಗಿ ಒದೆಯೋ ಅವ್ನಿಗೆ!" ಎಂದು ಕೂಗುತ್ತಾ ಟೀವಿಯತ್ತ ನುಗ್ಗಿದ್ದ ದೃಶ್ಯ ಈಗಲೂ ಕಣ್ಣಿಮುಂದಿದೆ. ಎಲ್ಲರೂ "ಹೋ" ಎಂದು ಕಿರುಚಿ ನಿನ್ನನ್ನು ಪಿಚ್ಚರ್ರಿನ ಹೊಡೆದಾಟದ ಕಣದಿಂದ ಈ ಲೋಕಕ್ಕೆ ಮರಳಿತರದೇಹೋಗಿದ್ದರೆ ವಿಲನ್ ನ ಮೇಲಿನ ಕೋಪಕ್ಕೆ ಟಿವಿಗೊಂದು ಗತಿ ಕಾಣಿಸುತ್ತಿದ್ದಿ ಅಲ್ವಾ? ಅಂದು ಅದು ತಮಾಷೆಯಾಗಿ ಕಂಡಿತ್ತಾದರೂ ಈಗ ಅನಿಸುತ್ತಿದೆ- ನಿನ್ನ ಈ ಕಳೆದುಹೋಗುವಿಕೆ, ತನ್ಮಯತೆ, ಭಾವುಕತೆಗಳು ನನ್ನೊಳಗೂ ಹರಿದುಬಂದಿವೆಯೇನೋ ಎಂದು.

ಅರವತ್ತು ವರ್ಷಗಳ ಜೀವನದಲ್ಲಿ ನೀನು ಸೃಷ್ಟಿಸಿಕೊಂಡ ಪ್ರಪಂಚದೊಳಗೊಮ್ಮೆ ಇಣುಕಿದರೆ ಅಚ್ಚರಿಯಾಗುತ್ತದೆ. ಕೊಳೆರೋಗ ಬಂದರೂ, ಬೆಳೆ ನೆಲಕಚ್ಚಿದರೂ ಯಾವ ಸರಕಾರದೆದುರೂ ಕೈಚಾಚಲಿಲ್ಲ. ಯಾರೊಬ್ಬರ ನಯಾಪೈಸೆಯ ಋಣವನ್ನೂ ಇಟ್ಟುಕೊಳ್ಳಲಿಲ್ಲ. ನಿನ್ನ ಖಾಯಿಲೆಗಳಿಗೆ ನಿನ್ನದೇ ವೈದ್ಯ, ನಿನ್ನದೇ ಪಥ್ಯ. ಹೊಟ್ಟೆನೋವು ಬಂದಾಗ ಪಣತಕೊಟ್ಟಿಗೆಗೆ ಹೋಗಿ ತಲೆಕೆಳಗಾಗಿ ನಿಲ್ಲುವುದು, ಟೀ ಕುಡಿಯುವುದು, ದ್ರಾಕ್ಷಿ ತಿನ್ನುವುದು.... ಇದನ್ನೆಲ್ಲಾ ನಿನಗೆ ಯಾವ ವೈದ್ಯಪುಸ್ತಕ ಹೇಳಿಕೊಟ್ಟಿತೋ ಗೊತ್ತಿಲ್ಲ. ನಿನ್ನ ನಂಬಿಕೆಗಳೇ ನಿನಗೆ ಔಷಧಿ! ಉಪ್ಪು- ಹುಳಿಗಳಿಲ್ಲದ ಸಾದಾ ಊಟ ತಿಂದುಕೊಂಡೇ ದಿನಪೂರ್ತಿ ಮನೆಯಂಗಳದ ಈ ಅಂಚಿನಿಂದ ತೋಟದಕೊನೆಯ ಆ ಅಂಚಿನತನಕದ ಒಂದೊಂದು ಹುಲ್ಲುಕಡ್ಡಿಯನ್ನೂ ವಿಚಾರಿಸಿಕೊಳ್ಳುವ ಚೈತನ್ಯ, ಶ್ರದ್ಧೆಯನ್ನು ಕೇವಲ ಎಸೆಸ್ಸೆಲ್ಸಿ ಕಲಿತ ನಿನಗೆ ಅದ್ಯಾವ ಶಾಲೆ ಕಲಿಸಿಕೊಟ್ಟಿತೆಂಬುದೇ ನನಗೆ ದೊಡ್ಡ ಅಚ್ಚರಿ. ಈ ವಯಸ್ಸಿನಲ್ಲೂ ನೀನು ದೂರದ ಗುಡ್ಡದಿಂದ ಹೊತ್ತು ತರುವ ದೈತ್ಯ ಸೊಪ್ಪಿನ ಹೊರೆಯನ್ನು ಅಲ್ಲಾಡಿಸಲೂ ನನ್ನಿಂದಾಗುವುದಿಲ್ಲ!

                       ****************

ಬೆಳೆದಂತೆಲ್ಲಾ ಮಕ್ಕಳು ದೊಡ್ಡವರಾಗುತ್ತಾರೆ, ಹೆತ್ತವರು ಮಕ್ಕಳಾಗುತ್ತಾರೆ. ವರ್ಷಗಳ ಕೆಳಗೆ ನೀನು ಮೊದಲಬಾರಿಗೆ ಬೆಂಗಳೂರಿಗೆ ಬಂದು ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದೆ. ಹಳ್ಳಿಯ ಹಸಿರು, ನಿಶ್ಯಬ್ದತೆಗಳಲ್ಲಿ ಬೆರೆತುಹೋಗಿದ್ದ ನಿನಗೆ ಈ ಬೆಂಗಳೂರಿನ ಸಂದಣಿ, ಸದ್ದುಗದ್ದಲಗಳನ್ನು ನೋಡಿ ಆತಂಕವಾಗಿತ್ತು. ರಾತ್ರೆ ಮಲಗುವುದಕ್ಕೆ ಜಾಗ ಸಾಲುವುದಿಲ್ಲವೆಂದು ನಿನ್ನನ್ನು ಅಲ್ಲೇ ಬಿಟ್ಟ ನಾನು ಇನ್ನೊಬ್ಬ ಚಿಕ್ಕಮ್ಮನ ಮನೆಗೆ ಹೊರಟುನಿಂತಾಗ "ಪುಟ್ಟು ಇಲ್ಲೇ ಇರಲಿ" ಎಂದು ಹಠಮಾಡುವಂತೆ ಹೇಳಿದೆಯಲ್ಲಾ, ಆಗೇಕೋ ಅಪರಿಚಿತ ಊರಿನಲ್ಲಿ ಅಮ್ಮ ಜೊತೆಗೇ ಇರಬೇಕೆಂದು ಹಠಮಾಡುವ ಮುಗ್ಧ ಮಗುವಿನಂತೆ ಕಂಡುಬಿಟ್ಟೆ. ಬಸವನಗುಡಿಯ ಭರಗುಟ್ಟುವ ಟ್ರಾಫಿಕ್ನಲ್ಲಿ ನಿನ್ನ ಕೈಹಿಡಿದು ರಸ್ತೆ ದಾಟಿಸುತ್ತಿದ್ದಾಗ ಹಿಂದೆಂದೋ ಇದೇ ಕೈ ಹಿಡಿದು ನಾನು ಹೆದರುತ್ತಾ ರಸ್ತೆದಾಟಿದ್ದ ನೆನಪೊಂದು ಮನದಾಳದಲ್ಲಿ ಮುಗುಳ್ನಕ್ಕಿತ್ತು.

ನಾಲ್ಕು ಜನರೊಂದಿಗೆ ಬೆರೆಯದ ನಿನ್ನ ಏಕಾಂಗಿತನ, ಸಿಟ್ಟನ್ನು ದೊಡ್ಡದನಿಯಲ್ಲಿ ವ್ಯಕ್ತಪಡಿಸುವ ನಿನ್ನ ಕೋಪಗಳನ್ನು ನೋಡಿದವರೆಲ್ಲಾ ನಿನ್ನನ್ನು 'ಒಂಟಿಗ', 'ರಾಕ್ಷಸ' ಎನ್ನುತ್ತಾರೆ. ಆದರೆ ನನಗೆ ಮಾತ್ರ ಗೊತ್ತು ಅಪ್ಪಾ.. ಹೆರಿಗೆಯ ಸಮಯದಲ್ಲಿ ಅಮ್ಮನನ್ನು ಆಸ್ಪತ್ರೆಗೆ ಸೇರಿಸಲು ನೆರವಾದ ಹಿರಿಯನೆದುರು, ಮನೆಗೆ ಕರೆದು ಅಕ್ಕರೆಯಿಂದ ಉಪಚರಿಸಿದ ಅಣ್ಣನ ಮಗನೆದುರು, ಬಹಳ ವರ್ಷಗಳ ನಂತರ ನೋಡಿದ ಗ್ರಾಮದೇವರ ಉತ್ಸವದೆದುರು ನಿಂತು ಭಾವುಕನಾಗಿ ಕಣ್ಣೊರೆಸಿಕೊಂಡ ನಿನ್ನ ಮನಸ್ಸು ಅದೆಷ್ಟು ಮೃದುವೆನ್ನುವುದು. ನಿನ್ನೊಳಗೆ ಹತ್ತಾರು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡ, ಯಾರೂ ಗುರುತಿಸದೇ ಹೋದರೂ ಇಂದಿಗೂ ಜೀವಂತವಾಗಿರುವ ನಟನೊಬ್ಬನಿದ್ದಾನೆ. ಎಂತಹಾ ರೇಡಿಯೋವನ್ನೂ ಹಾಡಿಸಬಲ್ಲ 'ಮೆಕ್ಯಾನಿಕ್' ಇದ್ದಾನೆ. ಯಾವ ಸಂಘ-ಸಂಸ್ಥೆಯೂ ಗುರುತಿಸಿ ಸನ್ಮಾನಿಸದೇಹೋದ ಪ್ರಗತಿಪರ ಕೃಷಿಕನಿದ್ದಾನೆ. ಕೊನೆಗೆ ಸಮಾಜಕ್ಕೆ ಹೆದರಿ ತನ್ನ ಸಾಮರ್ಥ್ಯಗಳನ್ನು ತನ್ನೊಳಗೇ ಮುಚ್ಚಿಟ್ಟುಕೊಂಡು ಕೊಂದುಕೊಂಡ ಮುಗ್ಧ ಅಸಹಾಯಕನಿದ್ದಾನೆ....

ಆದರೇನಂತೆ? ನಾನಿದ್ದೇನೆ.. ನೀನು ಅರ್ಧ ಹೆಣೆದು ಪಕ್ಕಕ್ಕಿಟ್ಟ ಕಸೂತಿಗಳಿಂದು ನನ್ನ ಕೈಯ್ಯಲ್ಲಿವೆ. ನಿನ್ನ ಕನಸಿನ ಮುಂದುವರಿದ ಭಾಗವೇ ನಾನಾಗಿ ಎಲ್ಲವನ್ನೂ ಪೂರ್ಣಗೊಳಿಸುತ್ತೇನೆ. ನೀ ನೆಟ್ಟ ಪ್ರತಿ ಗಿಡದ ಹಸಿರನ್ನೂ ನನ್ನ ಉಸಿರಿನಂತೆ ಕಾಯುತ್ತೇನೆ...

ಹೇಳೋಕೆ ಮರೆತೆ. ಮೊನ್ನೆ ನನಗೊಂದು ಕನಸು ಬಿತ್ತು. ಬೆಳಗಿನಜಾವ ಬಿದ್ದ ನಿಜವಾಗುವ ಕನಸು! ಅದರಲ್ಲಿ ನೀನು ಮುಂದೆಂದೋ ಹುಟ್ಟಲಿರುವ ನನ್ನ ಪುಟಾಣಿ ಮಗಳ ಕೈಹಿಡಿದು ತೋಟಕ್ಕೆ ನಡೆಸಿಕೊಂಡು ಹೋಗುತ್ತಿದ್ದೆ. ಅಂದು ನನ್ನ ನಡೆಸಿಕೊಂಡು ಹೋಗಿದ್ದೆಯಲ್ಲಾ, ಹಾಗೇ!

ಸಮಯ ಅದೆಷ್ಟು ಸುಂದರವಾಗಿ ಹಿಂದಿರುಗಿಬರುತ್ತದೆ ಅಲ್ವಾ?

ಇಂತಿ ನಿನ್ನ ಪ್ರೀತಿಯ
ಪುಟ್ಟು

(ಶ್ರೀ. ಗುರುಪ್ರಸಾದ ಕುರ್ತಕೋಟಿ ಅವರು ಸಂಪಾದಿಸಿದ 'ಎಲ್ಲರಂಥವನಲ್ಲ ನನ್ನಪ್ಪ' ಕೃತಿಯಲ್ಲಿ ಪ್ರಕಟವಾದ ಲೇಖನ)

ಸೋಮವಾರ, ಮೇ 8, 2017

ಅಜ್ಜನ ಊರು ಹಾಗೂ ಅಲ್ಲಿನ ದೆವ್ವದ ಕಥೆಗಳು...

ನೀವು ಈ ದೆವ್ವ-ಭೂತಗಳನ್ನು ನಂಬ್ತೀರಾ? ನಾನಂತು ನಂಬುತ್ತೇನೆ. ನಾನೇನೋ ಹಗಲಿನ ಹೊತ್ತಿನಲ್ಲಿ ಜೊತೆಗಿರುವ ಮೂರುವರೆ ಪೈಸೆ ಧೈರ್ಯದಲ್ಲಿ 'ಈ ದೆವ್ವ ಗಿವ್ವ ಎಲ್ಲಾ ಸುಳ್ಳು' ಅನ್ನೋದು; ಅದು ಇಲ್ಲೇ ಯಾವುದೋ ಹುಣಿಸೆ ಮರದಲ್ಲಿ ನೇತಾಡುತ್ತಿರುವ ದೆವ್ವವೊಂದರ ಕಿವಿಗೆ ಬೀಳೋದು; ಆಮೇಲೆ ರಾತ್ರಿಯಾಗಿ ಎಲ್ಲರೂ ಮಲಗಿದ ಮೇಲೆ ಅದು ಮರದಿಂದ ಇಳಿದು ನೇರ ನನ್ನ ರೂಮಿಗೆ ಬಂದು "ಏನಂದೆ ಮಗನೇ? ಇನ್ನೊಂದ್ಸಲ ಹೇಳು" ಅಂತ ಕೋರೆಹಲ್ಲು ತೋರಿಸಿ ನಗೋದು; ಆಮೇಲೆ ನಾನು.......
ಇದೆಲ್ಲಾ ಯಾಕೆ ಬೇಕು ಹೇಳಿ? ಅದಕ್ಕೇ ನಾನು ಈ ದೆವ್ವಗಳನ್ನ ಕೆರಳಿಸುವಂತಹ ಯಾವ ಹೇಳಿಕೆಗಳನ್ನು ಕೊಡಬಾರದೂಂತ ನಿರ್ಧರಿಸಿಬಿಟ್ಟಿದ್ದೇನೆ!

ಹಾಗಂತ ನೀವು ನನ್ನ ಹೆದರುಪುಕ್ಲ ಅಂತ ಆಡಿಕೊಳ್ಳೋದೇನೂ ಬೇಡ. ನಮ್ಮ ಮನೆಯಲ್ಲಿ ಇರೋದ್ರಲ್ಲಿ ನಾನೇ ಧೈರ್ಯವಂತ! ಅಪ್ಪ, ಅಮ್ಮ ಹಾಗೂ ತಮ್ಮ ರಾತ್ರಿ ಹೊತ್ತಲ್ಲಿ ಹೊರಗೆ ಓಡಾಡುವ ವಿಷಯದಲ್ಲಿ ಪುಕ್ಕಲರೇ! ಈ ವಿಷಯದಲ್ಲಿ ನಾನೇ ಇದ್ದಿದ್ದರಲ್ಲಿ ಗಟ್ಟಿಗ. ನಮ್ಮ ಮನೆ ಇರೋದು ನಮ್ಮೂರಿನ ಮುಖ್ಯ ರಸ್ತೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ. ಬೀದಿ ದೀಪಗಳಿಲ್ಲದ, ಅಕ್ಕಪಕ್ಕ ಮನೆಗಳೂ ಇಲ್ಲದ ಮಣ್ಣ ದಾರಿಯಲ್ಲಿ ಮರಗಳ ಮಧ್ಯೆ, ಮಧ್ಯರಾತ್ರಿಯಲ್ಲಿ ಸಹಾ ಒಬ್ಬನೇ ನಡೆದುಬರುತ್ತೇನೆಂಬ ಕಾರಣಕ್ಕೆ ನನಗೆ ಈ ಧೈರ್ಯಶಾಲಿಯೆಂಬ ಬಿರುದು ಬಂದಿದ್ದು.

ಆದರೆ ನಿಜದಲ್ಲಿ ನನ್ನ ಅವಸ್ಥೆ ನನಗೆ ಮಾತ್ರ ಗೊತ್ತು! ಮೊದಲು ನಾನು ಊರಿನಲ್ಲಿದ್ದಾಗ ಅಪರೂಪಕ್ಕೆ ಊರಿಗೆ ಬರುತ್ತಿದ್ದ ಗೆಳೆಯರನ್ನು ಭೇಟಿಯಾಗಿ, ರಾತ್ರೆ ಒಂಭತ್ತರ ತನಕ ಊರೆಲ್ಲಾ ತಿರುಗಿ, ನಂತರ ಒಬ್ಬನೇ ನಡೆದು ಮನೆಗೆ ಬರುತ್ತಿದ್ದೆ. ಊರಿನ ಟಾರ್ ರಸ್ತೆಯಿಂದ ನಮ್ಮ ಕೇರಿಯ ಮಣ್ಣ ರಸ್ತೆಗೆ ತಿರುಗಿ ಇಪ್ಪತ್ತು ಮೊವತ್ತು ಹೆಜ್ಜೆ ನಡೆದರೆ ಎಡಭಾಗದಲ್ಲಿರುವ ಇಳಿಜಾರಿನಲ್ಲಿ ತುಂಬಾ ಹಳೆಯ ಕಾಲದ ಬಾವಿಯೊಂದಿದೆ. ಅದರ ಪಕ್ಕದಲ್ಲೇ ದಟ್ಟವಾದ ಪೊದೆಗಳಿಂದಾವೃತವಾದ ಬೃಹತ್ ಅತ್ತಿಯ ಮರವೂ ಇದೆ. ಅದು ಭೀಕರವಾದ ಸರ್ಪಗಳ ವಾಸಸ್ಥಾನವೆಂದು ಅಪ್ಪ ಆಗಾಗ ಹೇಳುತ್ತಾರೆ. ಅಲ್ಲದೇ ಕೆಲವು ವರ್ಷಗಳ ಕೆಳಗೆ ಸುಮಾರು ಹದಿಮೂರು ಅಡಿ ಉದ್ದದ ಕಾಳಿಂಗ ಸರ್ಪವೊಂದು ಅದೇ ಪೊದರಿನಿಂದ ಹೊರಬಂದು ಎದುರೇ ಇರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನುಗ್ಗಿದ್ದನ್ನ ನಾನೇ ಕಣ್ಣಾರೆ ನೋಡಿದ್ದೇನೆ. ಸಾಲದ್ದಕ್ಕೆ ನಾನು ಚಿಕ್ಕವನಿದ್ದಾಗ ಸುಕ್ಕಡ್ಯಾ ಎನ್ನುವವನೊಬ್ಬ ಅದೇ ಬಾವಿಗೆ ಬಿದ್ದು ಸತ್ತಿದ್ದ ಕೂಡಾ! ಬಾವಿಯ ನೀರಿನಲ್ಲಿ ಮುಖ ಕೆಳಗಾಗಿ ತೇಲುತ್ತಿರುವ ಸುಕಡ್ಯಾನ ಚಿತ್ರ ಈಗಲೂ ಕಣ್ಮುಂದೆ ಹಾಗೇ ಇದೆ. ಇಷ್ಟೆಲ್ಲಾ ಭೀಬತ್ಸಗಳಿರುವ ದಾರಿಯಲ್ಲಿ ರಾತ್ರೆ ಒಬ್ಬನೇ ನಡೆಯುವಾಗ ಎಲ್ಲವೂ ನೆನಪಾಗುತ್ತದೆ. ಮತ್ತೆ ಮತ್ತೆ ಹಿಂದಕ್ಕೆ- ಮುಂದಕ್ಕೆ ಮೊಬೈಲ್ ಟಾರ್ಚ್ ಹಾಕಿ ಸಮೀಪದಲ್ಲಿ ಯಾವುದೇ ದೆವ್ವವಾಗಲೀ, ಕಾಳಸರ್ಪವಾಗಲೀ ಇಲ್ಲವೆಂದು ಖಚಿತಪಡಿಸಿಕೊಳ್ಳುತ್ತಾ, ಸಣ್ಣ ಸದ್ದಾದರೂ ಬೆಚ್ಚಿಬೀಳುತ್ತ, ಮನಸ್ಸಿನಲ್ಲೇ ಗಾಯತ್ರೀ ಮಂತ್ರ ಪಠಿಸುತ್ತಾ ಹೇಗೋ ಮನೆತಲುಪದಮೇಲೇ ಗಟ್ಟಿಯಾಗಿ ಉಸಿರಾಡುತ್ತೇನೆಂಬುದು ಗೊತ್ತಿಲ್ಲದ  ಮನೆಯವರು ನನ್ನನ್ನು ಧೈರ್ಯಶಾಲಿ ಎಂದು ತಿಳಿದಿದ್ದರು!

ಆದರೆ ಕೊನೆಗೂ ಒಮ್ಮೆ ನಾನೆಂತಹ ರಣಧೀರನೆಂಬುದು ಎಲ್ಲರಿಗೂ ಗೊತ್ತಾಗಿಹೋಯಿತು. ಅದು ನಾನು ಕೊನೆಯ ವರ್ಷದ ಡಿಗ್ರಿ ಓದುತ್ತಿದ್ದ ಸಮಯ. ಆಗಷ್ಟೇ ಹೊಸದಾಗಿ ಮ್ಯೂಸಿಕ್ ಕೇಳಬಲ್ಲ ಮೊಬೈಲ್ ಖರೀದಿಸಿದ್ದೆ. ರಾತ್ರೆ ಎಲ್ಲರೂ ಮಲಗಿದ ಮೇಲೆ ಸ್ವಲ್ಪ ಹೊತ್ತು ಕಿವಿಗೆ ಇಯರ್ ಫೋನ್ ಚುಚ್ಚಿಕೊಂಡು  ಅಂಗಳದ ಕತ್ತಲಲ್ಲಿ ಅತ್ತಿಂದಿತ್ತ ಓಡಾಡುತ್ತಾ ಹಾಡುಕೇಳುವುದು ನನ್ನ ನಿತ್ಯದ ಅಭ್ಯಾಸ. ಎಷ್ಟೇ ಆದರೂ 'ಧೈರ್ಯಶಾಲಿ'ಯಲ್ವಾ! ಅಂದೂ ಕೂಡಾ ಹಾಗೇ ಅತ್ತಿಂದಿತ್ತ, ಇತ್ತಿಂದತ್ತ ನಡೆದಾಡುತ್ತಾ ಹಾಡು ಕೇಳುತ್ತಿದ್ದೆ; ಥಟ್ಟನೆ ಕಾಲಿಗೆ ಏನೋ ಸಿಲುಕಿಂದಂತಾಯಿತು. ಅದೇನೆಂದು ಪರೀಕ್ಷಿಸಲು ಕಾಲನ್ನು ಮೆಲ್ಲಗೆ ಅಲ್ಲಾಡಿಸಿದೆ. ಆಗಲೇ ನನಗೆ ಗೊತ್ತಾಗಿದ್ದು...

ಘಟಸರ್ಪವೊಂದು ನನ್ನ ಕಾಲಿಗೆ ಸುತ್ತಿಕೊಂಡಿತ್ತು!!!

ಕೈಯ್ಯಲ್ಲಿದ್ದ ಇಯರ್ ಫೋನನ್ನು ಮೊಬೈಲ್ ನ ಸಮೇತ ಎಸೆದು "ಅಯ್ಯಯ್ಯಪ್ಪಾ.... ಹಾವೂ..." ಎಂದು ಸೀದಾ ಮನೆಯಕಡೆ ಓಡಿದೆ. ಕಾಲಿಗೆ ಸುತ್ತಿಕೊಂಡಿದ್ದ ಆ ಕ್ರೂರ ಸರ್ಪವೂ ನನ್ನನ್ನು ಹಿಂಬಾಲಿಸಿತು. ನನ್ನ ಹಾಹಾಕಾರ ಕೇಳಿ ಬೆಚ್ಚಿಬಿದ್ದು ಎಚ್ಚರಾದ ಅಪ್ಪ ಅಮ್ಮ, ಕೈಗೆ ಸಿಕ್ಕಿದ ಕಟ್ಟಿಗೆ, ಪೊರಕೆಗಳನ್ನು ಹಿಡಿದುಕೊಂಡು ತಮ್ಮ ಧೀರ ಪುತ್ರನನ್ನು ಬೆನ್ನಟ್ಟಿಬರುತ್ತಿರುವ ಘಟಸರ್ಪಕ್ಕೊಂದು ಗತಿ ಕಾಣಿಸಲು ಸಿದ್ಧರಾಗಿ ನಿಂತರು.. ಅಷ್ಟರಲ್ಲಿ ತಮ್ಮ ಲೈಟ್ ಹಾಕಿದ. ಎಲ್ಲಿ ನೋಡಿದರೂ ಹಾವಿನ ಸುಳಿವೇ ಇಲ್ಲ! ಅಷ್ಟು ಬೇಗ ಎಲ್ಲಿ ಹೋಯಿತೆಂದು ಹುಡುಕುತ್ತಾ ಎಲ್ಲರೂ ಅಂಗಳದೆದುರಿನ ಬಾಗಿಲಿನತ್ತ ಬಂದೆವು. ಅಲ್ಲಿ ಬಿದ್ದಿತ್ತು.... ಗೊಬ್ಬರದ ಚೀಲಗಳನ್ನು ಹೊಲಿಯಲು ಬಳಸುವ ಮಾರುದ್ದದ ಪ್ಲಾಸ್ಟಿಕ್ ಹಗ್ಗ!

ಆಗಿದ್ದಿಷ್ಟೇ: ಅಂಗಳದ ಮಧ್ಯದಲ್ಲಿ ಸುರುಳಿಯಾಗಿ ಬಿದ್ದಿದ್ದ ಹಗ್ಗ ನಡೆದಾಡುವಾಗ ನನ್ನ ಕಾಲಿಗೆ ಸುತ್ತಿಕೊಂಡಿದೆ. ಮೊದಲೇ ತಲೆಯ ತುಂಬಾ ಪ್ರೇತ, ಸರ್ಪಾದಿಗಳನ್ನು ತುಂಬಿಕೊಂಡಿರುವ ನಾನು ಅದನ್ನೇ ಹಾವೆಂದೆಣಿಸಿ ಜೀವಭಯದಲ್ಲಿ ಓಟ ಕಿತ್ತಿದ್ದೆ. ಕಾಲಿಗೆ ಸುತ್ತಿಕೊಂಡು ಬಾಗಿಲ ತನಕ ಜೊತೆಗೇ ಬಂದ ಹಗ್ಗ ಬಾಗಿಲ ಬುಡದಲ್ಲಿ ಜಾರಿಹೋಗಿತ್ತು.

ಸರಿರಾತ್ರಿಯಲ್ಲಿ ನನ್ನನ್ನು ಇಷ್ಟೆಲ್ಲಾ ಅಟ್ಟಾಡಿಸಿದ ಆ ಭಯಾನಕ ಸರ್ಪವನ್ನು ನೋಡುತ್ತಾ ಮೂವರೂ ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದರೆ ನಾನು ಮಾತ್ರ ಅದನ್ನು ಸುಟ್ಟುಬಿಡುವಂತೆ ಗುರಾಯಿಸುತ್ತಾ ನಿಂತೆ....

                  *******************

ದೆವ್ವಗಳು ಇವೆಯೋ ಇಲ್ಲವೋ, ಅವುಗಳ ಹೆಸರಿನಲ್ಲಿ ಹತ್ತುಹಲವು ಸ್ವಾರಸ್ಯಕರ ಕಥೆಗಳಿರುವುದಂತೂ ನಿಜ. ನನ್ನ ಅಜ್ಜನ ಮನೆಯಿರುವುದು ಸಾಗರ ತಾಲೋಕಿನ ಒಂದು ಹಳ್ಳಿಯಲ್ಲಿ.  ಅಲ್ಲಿ ಒಳಗೊಳಗೆ ಹೋದಂತೆಲ್ಲಾ ಪ್ರತೀ ಕಿಲೋಮೀಟರ್ ಗೆ ಮೂರೋ ನಾಲ್ಕೋ ಮನೆಗಳಿವೆ ಅಷ್ಟೇ. ಈಗ ಸಂಖ್ಯೆ ಜಾಸ್ತಿಯಾಗಿದೆ ಬಿಡಿ; ಗುಡ್ಡ, ಬೆಟ್ಟ, ಕಾಡುಗಳೇ ಹೆಚ್ಚಾಗಿರುವ ಆ ಊರಿನಲ್ಲಿ ದೆವ್ವ-ಭೂತದ ಕಥೆಗಳು ಅನೇಕ. ನನಗೆ ಅಜ್ಜ ಹಾಗೂ ಅಮ್ಮ ಹೇಳಿದ ಕೆಲವೊಂದು ಕಥೆಗಳನ್ನು ನಿಮಗೂ ಹೇಳುತ್ತೇನೆ ಕೇಳಿ:

ಅಜ್ಜನ ಮನೆಯಿರುವುದು ಮುಖ್ಯ ರಸ್ತೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಕಾಡಿನ ಮಧ್ಯೆ. ಎಡಗಡೆಯ ಗುಡ್ಡ ಹಾಗೂ ಬಲಗಡೆಯ ಇಳಿಜಾರಿನ ಮಧ್ಯೆ ಸಾಗುತ್ತದೆ ಇಕ್ಕಟ್ಟಾದ ಮಣ್ಣು ರಸ್ತೆ. ಸುತ್ತಲೂ ಕಾಡು, ಪೊದರು ಹಾಗೂ ಹುಲ್ಲು. ಮನೆಗೆ ಏನೇ ಸಣ್ಣದೊಂದು ವಸ್ತು ಬೇಕೆಂದರೂ ಐದು ಕಿಲೋ ಮೀಟರ್ ದೂರದ ತುಮರಿಗೇ ಹೋಗಬೇಕು. ಅಮ್ಮ ಚಿಕ್ಕವಳಿದ್ದಾಗ ಅವಳಪ್ಪ ಅಂದರೆ ನನ್ನ ಅಜ್ಜ ಹಗಲಿಡೀ ದೇವರ ಪೂಜೆ ಹಾಗೂ ತೋಟದ ಕೆಲಸಗಳಲ್ಲಿ ಮುಳುಗಿಹೋಗಿರುತ್ತಿದ್ದ. ಸಂಜೆ ಕಳೆದ ಮೇಲೆ ಮನೆಗೆ ಬೇಕಾದ ವಸ್ತುಗಳನ್ನ ತರಲೆಂದು ದೂರದ ತುಮರಿಗೆ ಹೋಗುತ್ತಿದ್ದ. ಮರಳುವಾಗ ರಾತ್ರೆ ಹತ್ತಾಗುತ್ತಿತ್ತು. ಒಮ್ಮೆ ಆ ಕಿಷ್ಕಿಂದೆಯಂತಹಾ ದಾರಿಯಲ್ಲಿ, ಕಾಳ ಕತ್ತಲಿನಲ್ಲಿ ಒಬ್ಬನೇ ಸಾಮಾನುಗಳ ಮೂಟೆ ಹೊತ್ತು ಬರುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಯಾರೋ ನಿಂತಂತೆ ಭಾಸವಾಯಿತು. ಅದರತ್ತ ಗಮನ ಹರಿಸದೇ ಮುಂದೆ ಬಂದರೆ ಸ್ವಲ್ಪ ದೂರದಲ್ಲಿ ಮತ್ತೆ ಅದೇ ಆಕೃತಿ ನಿಂತಿದೆ! ಅದನ್ನೂ ಕಡೆಗಣಿಸಿ ಮುಂದೆ ಬಂದರೆ ಹಿಂದಿನಿಂದ "ಚಿದಂಬರಾ... ಚಿದಂಬರಾ..." ಎಂದು ಕರೆದ ಸದ್ದು! ಆದರೆ ದಿನವೂ ಗಂಟೆಗಟ್ಟಲೆ ಜಪತಪಾದಿಗಳನ್ನು ಮಾಡುತ್ತಿದ್ದ ಅಜ್ಜ ಇದ್ಯಾವುದಕ್ಕೂ ಹೆದರದೇ ಮನೆ ತಲುಪಿದನಂತೆ.

ಇನ್ನೊಮ್ಮೆ ಅಜ್ಜನ ಜೊತೆ ಮನೆಯ ಎದುರಿನ ಕಣದಲ್ಲಿಕೆಲಸ ಮಾಡುತ್ತಿದ್ದ ನನ್ನ ದೊಡ್ಡ ಮಾವ (ಆಗಿನ್ನೂ ಅವರು ಚಿಕ್ಕವರಿದ್ದರು) ಗುದ್ದಲಿಯನ್ನು ಅಲ್ಲೇ ಮರೆತು ಬಂದುಬಿಟ್ಟರು. ರಾತ್ರೆ ಊಟ ಮಾಡಿದ ಮೇಲೆ ಅದನ್ನು ತರಲೆಂದು ಮತ್ತೆ ಅಲ್ಲಿಗೆ ಹೋಗಿ ನೋಡಿದರೆ ಆ ಜಾಗದಲ್ಲಿ  ಬಿಳಿಯ ಆಕೃತಿಯೊಂದು ಗುದ್ದಲಿಯನ್ನು ಹಿಡಿದು ನಿಂತುಕೊಂಡಿದೆ! ಇವರು ನೋಡುತ್ತಿರುವಂತೆಯೇ ಅದು ಕುಳ್ಳಗಾಗುತ್ತಾ ಹೋಗಿ ಕೊನೆಗೆ ಮಾಯವೇ ಆಯಿತಂತೆ. ಭೀತರಾಗಿ ಅಳುತ್ತಾ ಮನೆಗೆ ಬಂದ ಮಾವ ಒಂದು ವಾರ ಛಳಿ ಜ್ವರ ಹಿಡಿದು ಮಲಗಿಬಿಟ್ಟರು.

ಇವೆಲ್ಲಾ ನಮಗೆ ಅಜ್ಜ ಹೇಳಿದ ಕಥೆಯಾದ್ದರಿಂದ ಅದನ್ನು ಅಷ್ಟಾಗಿ ನಂಬುವಂತಿಲ್ಲ. ಏಕೆಂದರೆ ಮೊದಲೇ "ಬೋಕಾಳಿ ಮಾಂತ್ರಿಕ" ಎಂದು ತಮಾಷೆ ಮಾಡಲ್ಪಡುತ್ತಿದ್ದ ಅಜ್ಜ ಹೇಳುವುದರಲ್ಲಿ ಅರ್ಧಕ್ಕರ್ಧ ಬೋಕಾಳಿಯೇ ಆಗಿರುತ್ತಿತ್ತು. ಆದರೆ ಮುಂದಿನದು ನನಗೆ ಅಮ್ಮ ಹೇಳಿದ ಕಥೆ. ಇವತ್ತಿಗೂ ಅವಳು ಅದನ್ನು ಸತ್ಯ ಎಂದೇ ವಾದಿಸುತ್ತಾಳೆ.

ಆಗ ಅಮ್ಮ ಇನ್ನೂ ಮಿಡ್ಲಿಸ್ಕೂಲಿನಲ್ಲಿದ್ದಳು. ಒಂದು ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ಬಂದು ಊಟವಾದ ಮೇಲೆ ಅಕ್ಕ ಪಕ್ಕದ ಮನೆಯ ಹುಡುಗ ಹುಡುಗಿಯರೆಲ್ಲಾ ಒಟ್ಟಾಗಿ ಸ್ವಲ್ಪ ದೂರದಲ್ಲಿದ್ದ ತೋಟಕ್ಕೆ ಪೇರಳೆ ಹಣ್ಣುಕೊಯ್ಯಲು ಹೊರಟರು. ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ಹೊರಟವರಿಗೆ ಗೊತ್ತಿಲ್ಲದ ಸಂಗತಿಯೆಂದರೆ ಆ ಜಾಗದ ಸಮೀಪದಲ್ಲಿ ಕೆಲವೇ ದಿನಗಳ ಕೆಳಗೆ ಅಕಾಲ ಮರಣಕ್ಕೀಡಾಗಿದ್ದ ಬಾಣಂತಿಯೊಬ್ಬಳನ್ನು ಸುಟ್ಟಿದ್ದರೆಂಬುದು!

ಎಲ್ಲರೂ ಪೇರಳೆ ಮರಕ್ಕೆ ಲಗ್ಗೆಯಿಟ್ಟರು. ಬೇಕಾದಷ್ಟು ಹಣ್ಣು ತಿಂದು ಉಳಿದಿದ್ದನ್ನು ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡು ಇನ್ನೇನು ಹೊರಡಬೇಕು, ಅಷ್ಟರಲ್ಲಿ ಭಯಾನಕವಾದ ಆರ್ತನಾದವೊಂದು ತೀರಾ ಹತ್ತಿರದಿಂದಲೇ ಕೇಳಿಬಂತು! ಸುತ್ತಲೂ ನೋಡಿದ ಅಮ್ಮನಿಗೆ ಏನೂ ಕಾಣಲಿಲ್ಲ. ಆದರೆ ಜೊತೆಯಲ್ಲಿದ್ದವರೆಲ್ಲಾ 'ದೆವ್ವ ಬರ್ತಿದ್ದು... ಓಡೇ' ಅಂತ ಅರಚಿದಾಗ ಹಿಂದುಮುಂದು ನೋಡದೇ ನಾಗಾಲೋಟ ಕಿತ್ತಿದ್ದಾಳೆ. ಆ ಭಯಾನಕ ಸದ್ದೂ ಇವರನ್ನು ಬೆನ್ನತ್ತಿ ಬಂದಿದೆ. ಓಟದ ಮಧ್ಯೆ ಒಮ್ಮೆ ಅಮ್ಮ ತಿರುಗಿ ನೋಡಿದಳಂತೆ. ವಿವರಣೆಗೆ ನಿಲುಕದ, ವಿಚಿತ್ರ ಆಕಾರವೊಂದು ಕಪ್ಪಿನಿಂದ ಕಪ್ಪಿಗೆ (ಅಡಿಕೆ ತೋಟದಲ್ಲಿ ಎರೆಡು ಸಾಲುಗಳ ನಡುವೆ ಮಾಡಿರುವ ಕಾಲುವೆಯಂತಹ ಉದ್ದದ ತೋಡು) ಹಾರುತ್ತಾ ಬರುತ್ತಿರುವುದು ಕಂಡಿದೆ. ಮತ್ತೇನೂ ಯೋಚಿಸದೆ ಪ್ರತಿಯೊಬ್ಬರೂ ಒಬ್ಬೊಬ್ಬ ಆಂಜನೇಯನಂತೆ ಹೊಂಡ,ಗುಂಡಿ,ಏರು, ತಗ್ಗುಗಳೆಲ್ಲವನ್ನೂ ಒಂದೇ ನೆಗೆತಕ್ಕೆ ನೆಗೆಯುತ್ತಾ ಮನೆ ತಲುಪಿದರು. ತನ್ನ 'ಸೀಮೆ' ಮುಗಿಯುವ ತನಕ ಇವರನ್ನು ಬೆನ್ನಟ್ಟಿದ ಆ ಅವರ್ಣನೀಯ ಆಕೃತಿ ನಂತರ ಮರೆಯಾಯಿತು.

ಇನ್ನೊಂದು ಅವಳ ಶಾಲೆಯಲ್ಲಿ ನಡೆದ ಘಟನೆ: ಆಗ ಶಾಲೆಗಳಲ್ಲಿ ಈಗಿನಂತೆ ಬಿಸಿಯೂಟ ಇರಲಿಲ್ಲ. ಮಧ್ಯಾಹ್ನದ ಊಟಕ್ಕೆ  ಮನೆ ಸಮೀಪವಿರುವವರು ತಮ್ಮ ಮನೆಗೇ ಹೋಗುತ್ತಿದ್ದರೆ, ಉಳಿದವರು ಹತ್ತಿರದಲ್ಲಿರುವ ತಮ್ಮ ಪರಿಚಿತರ ಮನೆಗೋ ಅಥವಾ ನೆಂಟರಿಷ್ಟರ ಮನೆಗೋ ಹೋಗುತ್ತಿದ್ದರು. ಹಾಗಾಗಿ ಮಧ್ಯಾಹ್ನ ಊಟದ ಸಮಯದಲ್ಲಿ ಶಾಲೆಯಲ್ಲಿರುತ್ತಿದ್ದವರು ತೀರಾ ಕಡಿಮೆ. ಕೆಲವೊಂದು ಹುಡುಗಿಯರ ನಡುವೆ ಹೀಗೆ ಊಟಕ್ಕೆ ಹೋಗಿ ಬರುವುದರಲ್ಲೊಂದು ಪೈಪೋಟಿ- ಯಾರು ಮೊದಲು ಊಟ ಮುಗಿಸಿ ಬರುತ್ತಾರೆ ಅಂತ. ಈ ಸ್ಪರ್ಧೆಯಲ್ಲಿ ಸದಾ ಸೋಲುತ್ತಿದ್ದ ಹುಡುಗಿಯೊಬ್ಬಳು ಏನೇ ಆದರೂ ಇಂದು ತಾನು ಗೆಲ್ಲಲೇ ಬೇಕೆಂದು ಒಂದು ದಿನ ಮಧ್ಯಾಹ್ನ ಬಹಳ ಬೇಗ ಊಟ ಮುಗಿಸಿ ಮರಳಿದಳಂತೆ. ತರಗತಿಗೆ ಬಂದು ನೋಡಿದರೆ ಇನ್ನೂ ಯಾರೂ ಬಂದಿಲ್ಲ. ಕೊನೆಗೂ ತಾನು ಗೆದ್ದೆನೆಂದು ಬೀಗುತ್ತಾ, ಗೆಳತಿಯರು ಬಂದ ಮೇಲೆ ಅವರಿಗೆ ಹೇಗೆ ಹೊಟ್ಟೆ ಉರಿಸಬೇಕೆಂದು ಯೋಚಿಸುತ್ತಾ ಒಬ್ಬಳೇ ತರಗತಿಯಲ್ಲಿ ಕೂತಿದ್ದಾಳೆ. ಆಗಲೇ ಕೊಠಡಿಯ ಹಿಂದಿನ ಭಾಗದ, ಕಾಡಿನಕಡೆ ತೆರೆದಿರುವ ಕಿಟಕಿಯಿಂದ ಘಲ್..ಘಲ್.. ಎಂದು ಬಳೆಯ ಸದ್ದು ಕೇಳಿದೆ. ಗೆಳತಿಯರು ಬಂದರೆಂದು ಅವಳು ಇಣುಕಿ ನೋಡಿದರೆ ಯಾರೂ ಇಲ್ಲ! ಅಷ್ಟರಲ್ಲಿ ಮತ್ತದೇ ಕಡೆಯಿಂದ ಬಳೆಯ ಸದ್ದು, ಈ ಬಾರಿ ತುಸು ಜೋರಾಗೇ ಕೇಳಿದೆ. ತಾನು ಗೆದ್ದೆನೆಂಬ ಹೊಟ್ಟೇಕಿಚ್ಚಿಗೆ ತನ್ನ ಗೆಳತಿಯರೇ ಹೀಗೆ ಹೆದರಿಸುತ್ತಿದ್ದಾರೆಂದೆಣಿಸಿದ ಅವಳು "ನನ್ನೇ ಹೆದರಿಸ್ತ್ರಾ? ಹಿಂದಿಂದ ಬಂದ್ರೆ ಯಂಗ್ ಗೊತ್ತಾಗ್ತಲ್ಲೆ ಅಂದ್ಕಂಡ್ರಾ" ಎನ್ನುತ್ತಾ ಕಿಟಕಿಯತ್ತ ನಡೆದಿದ್ದಾಳೆ.

ಆಗಲೇ ಕಿಟಕಿಯ ಸರಳುಗಳ ಮೇಲೆ ಬಣ್ಣಬಣ್ಣದ ಬಳೆಗಳನ್ನು ತೊಟ್ಟಿರುವ ವಿಕಾರವಾದ ಕಡುಗಪ್ಪು ಕೈಯೊಂದು ಕಂಡಿದೆ!

ಭೀತಳಾದ ಹುಡುಗಿ ಕಿರುಚಿಕೊಂಡು ಕೊಠಡಿಯಿಂದ ಹೊರಾಗೋಡಿದಳು. ಮುಖ ಬಿಳುಚಿಕೊಂಡು ಓಡಿ ಬರುತ್ತಿರುವವಳನ್ನು ಆಗಷ್ಟೇ ಶಾಲೆ ಪ್ರವೇಶಿಸುತ್ತಿದ್ದ ಮಾಸ್ತರು ನಿಲ್ಲಿಸಿ ಏನಾಯಿತೆಂದು ಕೇಳಿದರು. ಅವಳು ನಡೆದದ್ದೆಲ್ಲವನ್ನೂ ಹೇಳಿ, ಅವರೂ ಬಂದು ನೋಡಿದರೆ ಕೊಠಡಿಯಲ್ಲಿ ಯಾವ ಬಳೆಯೂ ಇಲ್ಲ, ಕೈಯ್ಯೂ ಇಲ್ಲ!

ಹೆದರಿದ ಹುಡುಗಿ ವಾರ ಪೂರಾ ಛಳಿ ಜ್ವರ ಬಂದು ಮಲಗಿದ್ದಳೆಂದು ಪ್ರತ್ಯೇಕಾವಾಗಿ ಹೇಳಬೇಕಿಲ್ಲವಲ್ಲಾ?

                       ****************

ಇವೆಲ್ಲವೂ ನಾನು ಹುಟ್ಟುವ ಮೊದಲೇ ನಡೆದ ಅಥವಾ ಸೃಷ್ಟಿಸಿದ ಕಥೆಗಳು. ಆದರೆ ಇಂದಿಗೂ ಜೀವಂತವಾಗಿರುವ ಘಟನೆಯೊಂದು ದೆವ್ವ ಭೂತಗಳ ಬಗ್ಗೆ ತೀರಾ ಹಗುರವಾಗಿ ಯೋಚಿಸದಂತೆ ಮಾಡಿದೆ.

ನನ್ನ ಅಜ್ಜಿಯ (ಅಮ್ಮನ ಅಮ್ಮ) ಕೊನೆಯ ತಂಗಿ ಆಗ ಎರೆಡು-ಮೂರು ತಿಂಗಳ ಬಾಣಂತಿಯಾಗಿದ್ದರು. ಒಂದು ದಿನ ರಾತ್ರಿ ಮನೆಯವರೆಲ್ಲಾ ಊಟ ಮಾಡಿದ ಬಾಳೇ ಎಲೆಗಳನ್ನು ಎಸೆಯಲೆಂದು ಮನೆಯ ಹಿಂದಿನ ಗೊಬ್ಬರದ ಗುಂಡಿಯತ್ತ ಹೋದವರು ಭಯದಿಂದ ನಡುಗುತ್ತಾ ವಾಪಾಸು ಬಂದರು. ಏನಾಯಿತೆಂದು ಕೇಳಿದರೆ ಅಲ್ಲಿ ಯಾರೋ ಇದ್ದಾರೆಂದು ಹೊರಗಿನ ಕತ್ತಲಿನತ್ತ ಕೈ ತೋರಿಸುತ್ತಾ ಮತ್ತಷ್ಟು ನಡುಗಿದರು.

ಆ ಘಟನೆ ನಡೆದ ಕೆಲ ದಿನಗಳಿಗೆಲ್ಲಾ ಅವರ ವರ್ತನೆ ಬದಲಾಗುತ್ತಾ ಹೋಯಿತು. ಏನೋ ಕೆಲಸ ಮಾಡುತ್ತಿದ್ದವರು ಇದ್ದಕ್ಕಿದ್ದಂತೆ ಒಂದು ಮೂಲೆ ಸೇರಿ ಕುಳಿತುಬಿಡುತ್ತಿದ್ದರು. ತಮ್ಮಷ್ಟಕ್ಕೆ ತಾವೇ ಗಿಟಿಗಿಟಿ ಅಂತ ನಗಲಾರಂಭಿಸುತ್ತಿದ್ದರು. ಬರುಬರುತ್ತಾ ಅದು ವಿಪರೀತಕ್ಕೆ ತಿರುಗಿತ್ತು. 'ಆ' ಸ್ಥಿತಿಗೆ ಹೋದಾಗ ಎದುರಿಗಿದ್ದವರ ಮೇಲೆ ಹರಿಹಾಯಲಾರಂಭಿಸಿದರು. ಕೊನೆಗೆ ನಾನಾ ಜಪ-ತಪಾದಿ ಮಂತ್ರ-ಪೂಜೆಗಳಿಂದ ಅವರನ್ನು ಒಂದು ಹಂತಕ್ಕೆ ಸುಧಾರಿಸಿದರಂತೆ.

ಅವರು ಈಗಲೂ ಹಾಗೇ ಇದ್ದಾರೆ. ಚೆನ್ನಾಗಿ ಮಾತನಾಡುತ್ತಿರುವವರ ಧಾಟಿ ಇದ್ದಕ್ಕಿದ್ದಂತೆಯೇ ಬದಲಾಗಿಬಿಡುತ್ತದೆ. ಒಮ್ಮೆಗೇ ವಿಚಿತ್ರವಾದ ನಗು, ಸ್ವರದಲ್ಲೊಂದು ಗಡಸುತನ ಬಂದುಬಿಡುತ್ತದೆ. ಆ ಇಳಿವಯಸ್ಸಿನ ದೇಹದಲ್ಲೂ ಅಗಾಧವಾದ ಶಕ್ತಿ ಅದೆಲ್ಲಿಂದ ಬರುತ್ತದೋ ಏನೋ, ಅಪ್ರಿಯವಾಗಿ ಮಾತನಾಡಿದವರ ಹಾಗೂ ತಡೆಯಲು ಬಂದವರ ಮೇಲೆ ಧಾಳಿ ಮಾಡುತ್ತಾರೆ. ಒಮ್ಮೆ ಅವರು ಒಳಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಹೊರಗೆ ಅವರ ಸಂಬಂಧಿಕರಲ್ಲೇ ಒಬ್ಬರು 'ಭೂತ-ಪ್ರೇತ ಎಂತದೂ ಇಲ್ಲೆ. ಎಲ್ಲ ಬರೀ ನಾಟ್ಕ!' ಅಂದರಂತೆ. ಒಳಗಿದ್ದ ಯಾರಿಗೂ ಕೇಳಿಸದ್ದು ಅವರಿಗೆ ಮಾತ್ರ ಹೇಗೆ ಕೆಳಿಸಿತೋ ಏನೋ,  'ಏನೋ ಅಂದೆ? ಇನ್ನೊಂದ್ಸಲ ಹೇಳು ನೋಡಣ' ಎನ್ನುತ್ತಾ ಸೀರೆ ಎತ್ತಿಕಟ್ಟಿ ನುಗ್ಗಿಬಂದೇಬಿಟ್ಟರು. ಕಕ್ಕಾಬಿಕ್ಕಿಯಾದ ಆ ಆಸಾಮಿ ಒಂದೇ ನೆಗೆತಕ್ಕೆ ಬೇಲಿ ಹಾರಿ ತಮ್ಮ ಮನೆಯತ್ತ ಓಟ ಕಿತ್ತರು!
                        ******************

ಭಯದ ಕಣ್ಣಿಗೆ ಪ್ರತಿಯೊಂದೂ ಭೂತವೇ. ಉದಾಹರಣೆಗೆ ನಮಗೆಲ್ಲ ನಮ್ನಮ್ಮ ಬಾಸ್ ಗಳು ದೆವ್ವದಂತೆ ಕಾಣುವುದು ಯಾಕೆ ಹೇಳಿ? ಒಳಗೆಲ್ಲೋ ಅವರಮೇಲಿರುವ ಭಯದಿಂದ ತಾನೇ? ಇತ್ತೀಚೆಗೆ ಭೂತಗಳ ಚೇಷ್ಟೆ ಕಡಿಮೆಯಾಗಿದೆ ಅಂತ ನಾವೆಲ್ಲ ನಿರಾಳರಾಗಿದ್ದೇವೆ ನಿಜ; ಆದರೆ ಯಾರಿಗೆ ಗೊತ್ತು, ಅವೂ ಸಹಾ ನಮ್ಮಂತೇ 'ಅಪ್ಡೇಟ್' ಆಗಿ ಕತ್ತಲ ಸ್ಮಶಾನಗಳಿಂದ, ಪಾಳುಬಿದ್ದ ಬಂಗಲೆಗಳಿಂದ ಹೊರಬಂದು ಈ ರಾಜಕಾರಣಿಗಳ, ಭ್ರಷ್ಟ ಅಧಿಕಾರಿಗಳ, ಆಫೀಸಿನ ಬಾಸ್ ಗಳ ದೇಹಸೇರಿ 'ಆಧುನಿಕ' ರೀತಿಯಲ್ಲಿ ನಮ್ಮನ್ನು ಕಾಡುತ್ತಿರಬಹುದಲ್ಲವೇ?!

ಭೂತಗಳ ನಾಡಾಗಿದ್ದ ನಮ್ಮ ಅಜ್ಜನಮನೆಯಲ್ಲಿ ನಾನು ಬೇಸ್ತುಬಿದ್ದ ಈ ಕೆಳಗಿನ ಕಥೆಯ ಮೂಲಕ ನನ್ನೀ ಲೇಖನವನ್ನು ಮುಗಿಸುತ್ತೇನೆ.

ಸುಮಾರು ಹದಿನೈದು ವರ್ಷಗಳ ಕೆಳಗೆ, ತೀರಿಹೋದ ಅಜ್ಜಿಯ ಅಪರಕರ್ಮಗಳಿದ್ದುದರಿಂದ ಅಮ್ಮ ಹಾಗೂ ಅವಳ ಅಣ್ಣ, ತಂಗಿಯರೆಲ್ಲ ಅಜ್ಜನ ಮನೆಯಲ್ಲಿ ಒಟ್ಟಾಗಿದ್ದರು. ಒಳಗೆ ವಿವಿಧ ಕ್ರಿಯಾಕರ್ಮಗಳು ನಡೆಯುತ್ತಿದ್ದರೆ ಮಕ್ಕಳಾದ ನಾವು ಹೊರಗಡೆ ಆಡಿಕೊಳ್ಳುತ್ತಿದ್ದೆವು. ಭೂತಗಳ ಬಗ್ಗೆ ಎಷ್ಟೇ ಭಯವಿದ್ದರೂ ಹಗಲಿಡೀ ನಾವು ಆಡುತ್ತಿದ್ದುದು ಭೂತದ ಆಟಗಳನ್ನೇ. ರಾತ್ರೆಯಾದರೆ ಎಲ್ಲರೂ ಒಂದು ಕೋಣೆಯಲ್ಲಿ ಒಟ್ಟಾಗಿ ಭೂತದ ಕಥೆಗಳನ್ನು ಹೇಳುವ ಸ್ಪರ್ಧೆಯನ್ನೇ ಏರ್ಪಡಿಸುತ್ತಿದ್ದೆವು. ಒಬ್ಬರಿಗಿಂತ ಒಬ್ಬರು ಭಯಾನಕ, ಭೀಭತ್ಸಕರವಾದ ಭೂತಗಳ ಕಥೆ ಹೇಳುತ್ತಾ, ನಾವು ಸೃಷ್ಟಿಸಿದ ಪ್ರೇತಗಳನ್ನು ನೆನೆದು ನಾವೇ ಗಡಗಡ ನಡುಗುತ್ತಾ ಸ್ಪರ್ಧೆ ಮುಂದುವರಿಸಿತ್ತಿದ್ದೆವು.

ಆದಿನ ಮಧ್ಯಾಹ್ನವೂ ಅಂತಹದ್ದೇ ಆಟವೊಂದನ್ನ ಆಯೋಜಿಸಲಾಗಿತ್ತು. ಮನೆಯಿಂದ ಸ್ವಲ್ಪ ದೂರದಲ್ಲಿ ಅಡಿಕೆ ದಬ್ಬೆಯ ಹಳೆಯ ಬೇಲಿಗಳನ್ನು ಇರಿಸಿದ್ದರು. ಅಲ್ಲೇ ನಮ್ಮ ಆಟ ಶುರುವಾಯಿತು. ಆಟದ ಕಥೆ ಇಷ್ಟೇ. ಅದೊಂದು ಭೂತದ ಬಂಗಲೆ. ನಾವು ಹೇಗೋ ಅದರೊಳಗೆ ಸಿಕ್ಕಿಕೊಳ್ಳುತ್ತೇವೆ. ಭೂತ ನಮ್ಮನ್ನು ಕಾಡಿಸುತ್ತದೆ. ಕೊನೆಗೆ ಕಥೆಯ ಹೀರೋ ಬಂದು ಭೂತವನ್ನು ಸಾಯಿಸಿ (!!) ನಮ್ಮನ್ನೆಲ್ಲಾ ಕಾಪಾಡುತ್ತಾನೆ.

ಪಾತ್ರಗಳ ಹಂಚಿಕೆ ಶುರುವಾಯಿತು. ಒಬ್ಬಳಿಗೆ ಮುಖಕ್ಕೆ ಭೂತದಂತೆ ಬಿಳೀ ಬಟ್ಟೆ ಹೊದಿಸಿ ನಿಲ್ಲಿಸಲಾಯಿತು. ಮಾತಿನಲ್ಲಿ ಜೋರಿನವನಾದ, ನನ್ನ ದೊಡ್ಡ ಮಾವನ ಮಗ ಎಲ್ಲರನ್ನೂ ಕಾಪಾಡುವ ಹೀರೋ ಆಗಿ ಕೈಯ್ಯಲ್ಲೊಂದು ಮಂತ್ರದಂಡ ಹಿಡಿದು ನಿಂತ. ಉಳಿದವರೆಲ್ಲರೂ ದಾರಿ ತಪ್ಪಿದವರಾಗಿ ಬೇಲಿಯ ಬಂಗಲೆಯೊಳಗೆ ಕುಳಿತೆವು. ಆಟ ಇನ್ನೇನು ಆರಂಭವಾಗಬೇಕು.

"ಅಲ್ನೋಡಿ ಅಲ್ಲಿ.... ದೆವ್ವ!"
ತಂಗಿ ಕೈ ತೋರಿಸಿದ ದಿಕ್ಕಿನತ್ತಲೇ ಎಲ್ಲರೂ ನೋಡಿದೆವು. ಕುಳ್ಳಗೆ ದಪ್ಪಗಿರುವ, ಕೊರಳಲ್ಲಿ ಮೂಳೆಯ ಮಾಲೆ ಧರಿಸಿರುವ ಭಯಾನಕ ದೆವ್ವವೊಂದು ವಿಕಾರವಾಗಿ ಬಾಯಿ ತೆರೆದುಕೊಂಡು ನಮ್ಮತ್ತಲೇ ನಡೆದು ಬರುತ್ತಿತ್ತು!!!

ಅಷ್ಟೇ! ಕಥೆಯಲ್ಲಷ್ಟೇ ಬರಬೇಕಿದ್ದ ದೆವ್ವ ಹೀಗೆ ಭೀಕರ ರೂಪದಲ್ಲಿ ಕಣ್ಣೆದುರೇ ಬರುತ್ತಿರುವುದನ್ನು ನೋಡಿ ಕಕ್ಕಾಬಿಕ್ಕಿಯಾದ ಪಾತ್ರಧಾರಿಗಳೆಲ್ಲಾ ಕಣ್ಮುಚ್ಚಿ ತರೆಯುವುದರೊಳಗೆ ಸತ್ತೆನೋ ಕೆಟ್ಟೆನೋ ಎಂದು ಎದ್ದು ಓಡತೊಡಗಿದೆವು. ದೆವ್ವದ ಜೊತೆ ಬಡಿದಾಡುವ 'ಹೀರೋ' ಆಗಿದ್ದ ಮಾವನ ಮಗ ಕೈಯ್ಯಲ್ಲಿದ್ದ ದಂಡವನ್ನ ಎತ್ತಲೋ ಬಿಸಾಡಿ ಎಲ್ಲರಿಗಿಂತಲೂ ಮುಂದೆ ಓಡುತ್ತಿದ್ದ. "ಕಾಪಾಡೀsss..." ಎಂದು ಕಿರುಚುತ್ತಾ  ಮನೆಯ ಆವರಣ ತಲುಪಿ ಒಮ್ಮೆ ತಿರುಗಿ ನೋಡಿದರೆ ದೆವ್ವ ಅಟ್ಟಹಾಸ ಮಾಡುತ್ತಾ ಗೇಟು ತೆರೆದುಕೊಂಡು ಒಳಗೇ ಬರಿತ್ತಿದೆ! ಮತ್ತಷ್ಟು ಹೆದರಿದ ಪುಟ್ಟ ಹುಡುಗಿಯೊಬ್ಬಳು ಜೋರಾಗಿ ಕಿರುಚಿಕೊಂಡುಬಿಟ್ಟಳು. ಅಷ್ಟರಲ್ಲಿ ಒಳಗಿಂದ ಓಡಿಬಂದ ಚಿಕ್ಕಮ್ಮ ಒಂದೊಂದು ಬಾರಿಸಿ ಎಲ್ಲರನ್ನೂ ಈ ಲೋಕಕ್ಕೆ  ಇಳಿಸಿದರು.

ಆಗಿದ್ದೇನೆಂದರೆ, ಯಾವುದೋ ಶಾಸ್ತ್ರದ ಪೂರೈಕೆಗಾಗಿ ಹೊಳೆಗೆ ಹೋಗಿದ್ದ ನಮ್ಮ ಮಾವ ಬಿಳಿಬಣ್ಣದ ತುಂಡು ಪಂಚೆ ತೊಟ್ಟು ನಡೆದು ಬರುತ್ತಿದ್ದರು. ಸದಾ ಬಾಯಿಗೆ ಹಲ್ಸೆಟ್ ಹಾಕಿಕೊಳ್ಳುತ್ತಿದ್ದ ಅವರು ಇಂದು ಹಾಗೇ ಬೊಚ್ಚುಬಾಯಿ ಬಿಟ್ಟುಕೊಂಡು ಬರುತ್ತಿದ್ದರಲ್ಲದೇ ಹೊಳೆಯ ಕೆಸರಿನಲ್ಲಿ ಕಾಲು ಜಾರಿದ್ದರಿಂದ ಮೈ ಮಣ್ಣಾಗಿತ್ತು. ಸೊಂಟ ಹಾಗೂ ಕೊರಳಲ್ಲಿ ಕೊಳಕಾದ ತುಂಡು ಪಾಣಿ ಪಂಚೆ, ಕತ್ತಲ ಗುಹೆಯೊಂದರ ದ್ವಾರದಂತಿರುವ ಬೊಚ್ಚುಬಾಯಿ, ಬೊಕ್ಕ ತಲೆ, ಕುಳ್ಳ ನಿಲುವು, ಕಪ್ಪು- ಗುಂಡು ದೇಹ.... ನಮ್ಮ ಕಲ್ಪನೆಯ ಭೂತಕ್ಕಿಂತ ಒಂದು ಕೈ ಹೆಚ್ಚೇ ಭಯಾನಕವಾಗಿ ಕಾಣುತ್ತಿದ್ದರು ನಮ್ಮ ಮಾವ. ಎಲ್ಲರೂ ಹೆದರಿದೆವಾದರೂ ಪುಣ್ಯಕ್ಕೆ ಯಾರಿಗೂ ಛಳಿ ಜ್ವರ ಬರಲಿಲ್ಲ. ಇಲ್ಲವಾದರೆ ಎಲ್ಲರೂ ಇನ್ನೊಂದು ಸುತ್ತು ಒದೆ ತಿನ್ನಬೇಕಾಗುತ್ತಿತ್ತು...!

('ಪ್ರತಿಲಿಪಿ ಕನ್ನಡ'ದಲ್ಲಿ ಪ್ರಕಟಿತ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...