ಹಾಸ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಾಸ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜುಲೈ 8, 2020

ಬ್ಯಾಚುಲರ್ ಆಫ್ ಕೊರೋನಾ


ದೂರದ ಚೀನಾದಲ್ಲೆಲ್ಲೋ ಹುಟ್ಟಿದೆಯಂತೆ ಎಂಬ ಸುದ್ದಿ ಕಿವಿಯಿಂದ ತೂರಿ ಮೆದುಳನ್ನು ತಲುಪುವುದರೊಳಗೇ ಕೊರೋನಾ ಅದ್ಯಾವುದೋ ಫ್ಲೈಟಿನಿಂದಿಳಿದು ಇಡೀ ಬೆಂಗಳೂರಿನ ತುಂಬಾ ಓಡಾಡುತ್ತಿದೆ. ಪರಿಣಾಮವಾಗಿ ಜಪ್ಪಯ್ಯ ಎಂದರೂ ರಜೆ ನೀಡದ ಕಠಿಣ ಮ್ಯಾನೇಜ್ಮೆಂಟಿನವರೂ ಮುಖಕ್ಕೊಂದು ಮಾಸ್ಕ್ ಧರಿಸಿಕೊಂಡು ಬಂದು ತುರ್ತು ಮೀಟಿಂಗ್ ನಡೆಸಿ, ಒಂದು ವಾರ 'ವರ್ಕ್ ಫ್ರಂ ಹೋಂ' ಮಾಡಿರೆಂದು ಘೋಷಿಸಿ, ಎರೆಡೆರಡು ಬಾರಿ ಕೈತೊಳೆದುಕೊಂಡು ಹೋಗಿಯೇಬಿಟ್ಟರು.

ಯಾವ ವಿಮಾನದ ಸಮೀಪಕ್ಕೂ ಹೋಗದ, ಕೆಮ್ಮು-ಸೀನುಗಳನ್ನೂ ತಾಕಿಸಿಕೊಳ್ಳದ ನನ್ನ ಬಾಳಲ್ಲಿ ನಿಜವಾದ ಕೊರೋನಾ ಅಟ್ಟಹಾಸ ಶುರುವಾಗಿದ್ದೇ ಆಗ. ರಜೆ ಘೋಷಣೆಯಾದ ಸಂಜೆಯೇ ಹೋಟೆಲ್ ಗೆ ನುಗ್ಗಿದವನು ಸಣ್ಣ ಪಾರ್ಟಿಯ ಮಾದರಿಯಲ್ಲೊಂದಷ್ಟು ತಿಂದು, ನೆತ್ತಿಗೆ ಸಿಲುಕಿ, ಕೋಲ್ಡ್ ವಾಟರ್ ಕುಡಿದುಬಿಟ್ಟೆ. ತಣ್ಣೀರೆಂಬುದು ಕೊರೋನಾ ಕಣ್ತೆರೆಯುವ ಮೊದಲಿನಿಂದಲೇ ಕೆಮ್ಮಿಗೆ ತಾಯಿ. ಇನ್ನು ಇಡೀ ಪ್ರಪಂಚವೇ ಕೆಮ್ಮುತ್ತಿರುವ ಹೊತ್ತಿನಲ್ಲಿ ಅದು ಸುಮ್ಮನ್ನಿದ್ದೀತೇ? ಕುಡಿದು ಕೆಳಗಿಟ್ಟು ಬಿಲ್ ಪಾವತಿಸುವುದರೊಳಗೆ ಕೆಮ್ಮು ಪ್ರತ್ಯಕ್ಷವಾಯಿತು. ಮರುದಿನ ಬೆಳಗ್ಗೆ ಖೊಕ್ ಖೊಕ್ ಎನ್ನುತ್ತಾ ಎದ್ದವನಿಗೆ ನಮ್ಮ ಏರಿಯಾದಲ್ಲೇ ಕೊರೋನಾ ಸೋಂಕಿತನೊಬ್ಬ ಪತ್ತೆಯಾಗಿದ್ದಾನೆಂಬ ಆಘಾತಕಾರಿ ಸುದ್ದಿ ತಿಳಿಯಿತು. ಹೊರಗೆಲ್ಲೂ ತಿನ್ನಬಾರದು, ಕುರುಕಲು ತಿಂಡಿಗಳದಂತೂ ಹೆಸರೂ ಹೇಳಬಾರದು, ಥಂಡಿ ಪಾನೀಯಗಳಿಂದ ಕನಿಷ್ಟ ಒಂದು ಮೈಲಿ ದೂರವನ್ನಾದರೂ ಕಾಯ್ದುಕೊಳ್ಳಬೇಕು ಎಂಬೆಲ್ಲ ಕಟ್ಟಾಜ್ಞೆಗಳನ್ನು ಅಮ್ಮ ಫೋನಿನಲ್ಲೇ ಹೊರಡಿಸಿದಳು. ಅಲ್ಲಿಗೆ ನನ್ನ ಮುಂದಿನ ಒಂದು ವಾರ ವನವಾಸ-ಅಜ್ಞಾತವಾಸಗಳೆರೆಡರ ಭೀಕರ ಮಿಶ್ರಣದಂತಿರುತ್ತದೆಂಬುದು ನನಗೆ ಅರ್ಥವಾಗಿಹೋಯಿತು. ಸಾಲದ್ದಕ್ಕೆ ಆಫೀಸಿಗೆ ಕರೆ ಮಾಡಿದರೆ ಆಕಳಿಸುತ್ತಾ ಫೋನೆತ್ತಿಕೊಂಡ ಆಫೀಸ್ ಬಾಯ್ "ನಮ್ಮ ಏರಿಯಾದಲ್ಲಿ ಜೋರಾಗಿ ಕೆಮ್ಮುತ್ತಿದ್ದ ಮೂವರನ್ನು ಕಾರ್ಪೋರೇಷನ್ ಗಾಡಿಯಲ್ಲಿ ತುಂಬಿಕೊಂಡು ಹೋದ್ರು ಸಾ. ನೀವೂ ಜಾಸ್ತಿ ಕೆಮ್ಬೇಡಿ ಸಾ" ಎಂದುಬಿಟ್ಟ. ಸತ್ಯವೂ ಆಗಿರಬಹುದಾದ ಆ ಸಂಗತಿಯನ್ನು ಕೇಳಿ ಫೋನಿಟ್ಟ ನನಗೆ ಇಲ್ಲೇ ಎಲ್ಲೋ ಕಾರ್ಪೋರೇಷನ್ ಗಾಡಿಯ ಸದ್ದು ಕೇಳಿದಂತಾಗಿ ಕೆಮ್ಮು ಉಬ್ಬರಿಸಿ ಬಂತು.

ಸರಿ, ಈಗ ತಿಂಡಿಯ ಶಾಸ್ತ್ರವಾಗಬೇಕಲ್ಲ? ಅಮ್ಮನಂತೂ ಹೋಟಲ್ ಗಳನ್ನು ಕೊರೋನಾ ಗೆಸ್ಟ್ ಹೌಸ್ ಮಾಡಿಕೊಂಡಿದೆಯೆಂಬಂತೆ ಹೆದರಿಸಿದ್ದಳು. ಅಡುಗೆ ಸೌಟನ್ನು ಬಾಹ್ಯಗ್ರಹದ ಏಲಿಯನ್ ನ ಅಸ್ತ್ರದಂತೆ ನೋಡುತ್ತಿದ್ದ ನನಗೆ ಗೊತ್ತಿದ್ದುದು ಉಪ್ಪಿಟ್ಟು, ಚಿತ್ರಾನ್ನಗಳು ಮಾತ್ರ. ಅದನ್ನೇ ಮಾಡೋಣವೆಂದು ಮುಖಕ್ಕೊಂದು ಕರ್ಚೀಫು ಸುತ್ತಿಕೊಂಡು ಸಮೀಪದ ಅಂಗಡಿಗೆ ಹೊರಟೆ. ಕೆಮ್ಮನ್ನು ಆದಷ್ಟೂ ಗಂಟಲಿನಲ್ಲೇ ತಡೆಹಿಡಿದು ಉಪ್ಪಿಟ್ಟು ಮಿಕ್ಸ್ ಕೊಡುವಂತೆ ಅಂಗಡಿಯಾತನಿಗೆ ಕೇಳಿದೆ. ಆದರೆ ಬಹಳ ಗಿರಾಕಿಗಳಿದ್ದರಿಂದ ಅಂಗಡಿಯಾತ ನನ್ನತ್ತ ಅಷ್ಟು ಬೇಗನೆ ತಿರುಗಲೇ ಇಲ್ಲ. ಗಂಟಲಿನಲ್ಲೇ ಒತ್ತಿ ಹಿಡಿದಿದ್ದ ಕೆಮ್ಮಾಗಲೇ ಸುನಾಮಿಯ ರೂಪ ತಾಳಿತ್ತು. ಇನ್ನೂ ತಡವಾದರೆ ಕಷ್ಟವೆಂದು "ಬೇಗ ಕೊಡಿ" ಎಂದು ಕೇಳಲು ಬಾಯಿತೆರೆದದ್ದೇ ತಡ, ತಡೆಹಿಡಿದಿದ್ದ ಕೆಮ್ಮು ಖೊಕ್ ಖೊಕ್ ಎಂಬ ಭೀಕರ ಸದ್ದಿನೊಂದಿಗೆ ಹೊರಬಂದೇ ಬಿಟ್ಟಿತು‌. ಅಷ್ಟೇ! ಸುತ್ತ ನಿಂತವರೆಲ್ಲಾ ಹುಲಿಯ ಘರ್ಜನೆಯನ್ನು ಕೇಳಿದಂತೆ ಕಂಗಾಲಾಗಿ ನನ್ನತ್ತ ನೋಡತೊಡಗಿದರು. ಅಂಗಡಿಯವನಂತೂ ಸಾಕ್ಷಾತ್ ಕೊರೋನಾ ವೈರಸ್ಸೇ ಐದಡಿ ಎತ್ತರಕ್ಕೆ ಬೆಳೆದು ಎದುರು ನಿಂತಿರುವಂತೆ ಬೆಚ್ಚಿಬಿದ್ದು ಉಪ್ಪಿಟ್ಟು ಮಿಕ್ಸ್ ನ ಪ್ಯಾಕೇಟಿನೊಂದಿಗೆ ಓಡೋಡಿಬಂದ. ಇನ್ನೊಂದು ಕೆಮ್ಮು ಕೆಮ್ಮಿದರೂ ಇವರೆಲ್ಲಾ ಸೇರಿ ನನ್ನನ್ನು ಮುನ್ಸಿಪಾಲಿಟಿಯ ಗಾಡಿಗೆ ಹತ್ತಿಸುವುದು ಗ್ಯಾರಂಟಿಯೆಂದು ಹೆದರಿ ರೂಮಿನತ್ತ ಓಟಕಿತ್ತೆ.

ಒಲೆಯ ಮೇಲೆ ಮುಚ್ಚಿಟ್ಟ ಬಾಂಡ್ಲಿಯೊಳಗೆ ಉಪ್ಪಿಟ್ಟು ತಕತಕ ಬೇಯುತ್ತಾ ಸಿದ್ಧವಾಯಿತು. ತಟ್ಟೆಗೆ ಬಡಿಸಿಕೊಳ್ಳಲೆಂದು ಸೌಟು ಹಾಕಿ ನೋಡಿದರೆ ಉಪ್ಪಿಟ್ಟು ಎದುರುಗಡೆ ರಸ್ತೆಯಲ್ಲಿ ಮನೆಕಟ್ಟಲು ಕಲಸುತ್ತಿರುವ ಕಾಂಕ್ರೀಟಿನಂತೆ ಗಟ್ಟಿಗಟ್ಟಿ! ಕೊರೋನಾಗೆ ವ್ಯಾಕ್ಸಿನ್ನಾದರೂ ಸಿಗಬಹುದು, ಆದರೆ 'ಒಂದು ಲೋಟ ರವೆಗೆ ಎಷ್ಟು ನೀರು ಹಾಕಬೇಕು?' ಎಂಬ ಬ್ಯಾಚುಲರ್ ಜೀವನದ ಮಿಲಿಯನ್ ಡಾಲರ್ ಪ್ರೆಶ್ನೆಗೆ ಉತ್ತರ ದೊರಕಲಾರದೇನೋ ಎಂದುಕೊಳ್ಳುತ್ತಲೇ ಉಪ್ಪಿಟ್ಟನ್ನು ಬಾಯಿಗಿಟ್ಟುಕೊಂಡೆ. ಮೊದಲೇ ಕಿಚಕಿಚ ಎನ್ನುತ್ತಿದ್ದ ಗಂಟಲು ಕಾಂಕ್ರೀಟಿನಂತಹಾ ಉಪ್ಪಿಟ್ಟು ತನ್ನ ಮೂಲಕ ಹಾದುಹೋಗುವಾಗ ಖೊಕ್ ಖೊಕ್ ಎಂದು ಪ್ರತಿಭಟಿಸತೊಡಗಿತು.

ಹೀಗೆ ಬೆಳಗಿನ ತಿಂಡಿಯಲ್ಲಿ ಅಮೋಘವಾಗಿ ಹೋದ ಮರ್ಯಾದೆಯನ್ನು ಮಧ್ಯಾಹ್ನದೂಟದಲ್ಲಿ ಚಿತ್ರಾನ್ನ ಮಾಡುವ ಮೂಲಕ ಮರಳಿ ಗಳಿಸಬೇಕೆಂದು ದೃಢನಿರ್ಧಾರ ಮಾಡಿದೆ. ಒಂದು ಕೈಯಲ್ಲಿ ಬೋಂಡಾ ಕರಿಯುತ್ತಾ ಇನ್ನೊಂದು ಕೈಯಲ್ಲಿ ಚಪಾತಿ ಹಿಟ್ಟಿನ ಕತ್ತು ಹಿಸುಕುವ ನಮ್ಮೂರಿನ ನುರಿತ ಅಡುಗೆ ಭಟ್ಟರೊಬ್ಬರನ್ನು ಮನಸ್ಸಿನಲ್ಲೇ ನೆನೆಯುತ್ತಾ ಒಗ್ಗರಣೆ ಬಾಂಡಲಿಯನ್ನು ಒಲೆಯ ಮೇಲಿಟ್ಟೆ. ಅದ್ಯಾವ ಜನ್ಮದ ಸಿಟ್ಟಿತ್ತೋ ಏನೋ, ನಾನು ಒಂದೊಂದೇ ಪದಾರ್ಥವನ್ನು ಹಾಕಿದಾಗಲೂ ಬಾಂಡಲಿ ಫಿರಂಗಿಯಂತೆ ಢಮಾರೆಂದು ಸಿಡಿಯುತ್ತಾ ಬಿಸಿಯೆಣ್ಣೆಯಲ್ಲಿ ಬೆಂದ ಸಾಸಿವೆ ಕಾಳುಗಳನ್ನು ನನ್ನತ್ತ ಉಗುಳುತ್ತಿತ್ತು. ಅದರಿಂದ ಪಾರಾಗುತ್ತಾ ಅಂತೂಇಂತೂ ಒಗ್ಗರಣೆ ಮುಗಿಸಿ ಅಕ್ಕಿ ತೊಳೆಯಲೆಂದು ನೋಡಿದರೆ ನೀರು ಇಷ್ಟೇ ಇಷ್ಟಿದೆ! ಸರಿ, ಹೆಂಡತಿ ಗಂಡನಿಗೆ ಅಡ್ಜಸ್ಟ್ ಆಗದಿದ್ದರೆ ಗಂಡನೇ ಹೆಂಡತಿಗೆ ಹೊಂದಿಕೊಳ್ಳಬೇಕು ತಾನೇ? ಅಂತೆಯೇ ನೀರಿಗೆ ತಕ್ಕಷ್ಟು ಅಕ್ಕಿಯಿಟ್ಟು ಅಂತೂಇಂತೂ (ವಿ)ಚಿತ್ರಾನ್ನವೊಂದು ತಯಾರಾಯಿತು. ಆ ಕಡೆಯಿಂದ ಉಪ್ಪಿಟ್ಟಿನಂತೆ, ಈ ಕಡೆಯಿಂದ ಬಿಸಿಬೇಳೆ ಬಾತಿನಂತೆ ಕಾಣುತ್ತಿದ್ದ ಅದನ್ನು ನೋಡಿದಾಗ ಬಹುಷಃ ಮನುಷ್ಯ ಮೊಟ್ಟಮೊದಲಬಾರಿಗೆ ತಯಾರಿಸಿದ ಚಿತ್ರಾನ್ನ ಹೀಗೇ ಇದ್ದಿರಬಹುದೇನೋ ಎಂಬ ಅನುಮಾನವುಂಟಾಯಿತು. ಇಂತಹಾ ವಿಚಿತ್ರ ಸೃಷ್ಟಿಗೆ ಕಾರಣವಾದ ಕೊರೋನಾದ ಮೇಲೆ ಕೋಪವುಕ್ಕಿ ಬಂತು.
ಹೀಗೆ ಉಪ್ಪಿಟ್ಟು, ವಿಚಿತ್ರಾನ್ನಗಳ ತಿಂದು ಕೆಮ್ಮುತ್ತಿದ್ದವನಿಗೆ ಟೆರಾಸಿನಲ್ಲೇನೋ ಸದ್ದು ಕೇಳಿ ಹೊರಬಂದರೆ ತನ್ನ ಹುಡುಗಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿರುವ ಕೆಳಗಿನ ಮನೆಯ ನಾರ್ಥೀ ಹುಡುಗ ಕಣ್ಣಿಗೆ ಬಿದ್ದ. ಕೆಮ್ಮಿದಾಗ ಸಿರಪ್ ಕುಡಿಸಲಿಕ್ಕಾದರೂ ನನಗೊಬ್ಬ ಗೆಳತಿಯಿಲ್ಲವಲ್ಲಾ ಎಂದು ಹತಾಷೆಯಿಂದ ಮೊಬೈಲ್ ನೋಡಿಕೊಂಡವನಿಗೆ ಅಲ್ಲಿ ಅಮ್ಮ ಫಾರ್ವರ್ಡ್ ಮಾಡಿದ್ದ 'ಶುಂಠಿಕಷಾಯ ಮಾಡಿಕೊಳ್ಳುವ ಬಗೆ' ಎಂಬ ಮೆಸೇಜ್ ಕಣ್ಣಿಗೆ ಬಿತ್ತು. ಅಮ್ಮನೆಂಬ ಅಮ್ಮನೇ ಆರೈಕೆಗೆ ನಿಂತಿರುವಾಗ ಯಾವ ಕೊರೋನಾ ತಾನೇ ಏನು ಮಾಡೀತೆಂದು ಧೈರ್ಯಹೇಳಿಕೊಳ್ಳುತ್ತಾ ರೂಮಿನೊಳಗೆ ನಡೆದೆ.

(ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ)

ಶುಕ್ರವಾರ, ಜುಲೈ 19, 2019

ಶ್ವಾನಗಳೆಲ್ಲ ಸಭೆಸೇರಿದವು!



ಎಳೆ ಬಿಸಿಲಲ್ಲಿ ಛಳಿ ಕಾಸುತ್ತ ಕಾರ್ಪೋರೇಷನ್ ಶಾಲೆಯ ಬಯಲಿನಲ್ಲಿ ಮಲಗಿ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವ ಪೊಮೇರಿಯನ್ ಜೂಲ್ನಾಯಿಯನ್ನೇ ನೋಡುತ್ತ ಪರಪರನೆ ಮೈ ಕೆರೆದುಕೊಳ್ಳುತ್ತ ತೂಕಡಿಸಿಕೊಂಡಿದ್ದರು ಕೆಂಚಣ್ಣ ಹಾಗೂ ಕರಿಯಣ್ಣ ಶ್ವಾನಗಳು. ಪಕ್ಕದಲ್ಲೇ ಹಲವಾರು ಮಕ್ಕಳು ಕ್ರಿಕೆಟ್ ಆಡುತ್ತ ಭಾನುವಾರದ ಮಜವನ್ನು ಸವಿಯುತ್ತಿದ್ದರು. ಇದ್ದಕ್ಕಿದ್ದಂತೆ ಹಾರೆ, ಪಿಕಾಸಿ, ಕಂಬ, ಶಾಮಿಯಾನಗಳ ಜೊತೆ ನುಗ್ಗಿದ ಕೆಲ ಕೂಲಿಕಾರರು ಮಕ್ಕಳನ್ನೆಲ್ಲ ಓಡಿಸಿ, ಬಯಲಿನ ಮಧ್ಯ ಬಿದ್ದಿರುವ ಕಲ್ಲು, ಕಸಗಳನ್ನೆಲ್ಲ ಎತ್ತಿ ಸ್ವಚ್ಛಗೊಳಿಸತೊಡಗಿದಾಗ ಕೆಂಚ, ಕರಿಯರಿಬ್ಬಗೂ ಮಹದಾಶ್ಚರ್ಯ. ಮುಂಗಾಲುಗಳೆರೆಡನ್ನೂ ಮುಂದೆ ಚಾಚಿ ಮೈ ಮುರಿಯುತ್ತ ಕೆಂಚಣ್ಣ ಬಾಯಿ ತೆರೆದ:
"ಗಣೇಶನ ಹಬ್ಬ ಮುಗೀತು. ರಾಜ್ಯೋತ್ಸವ ಮುಗೀತು. ಎಲೆಕ್ಷನ್ನೂ ಆಯ್ತು. ಈಗ ಇದ್ಯಾವ ಹೊಸ ಕಾರ್ಯಕ್ರಮ ಕರಿಯಣ್ಣ?"
ಬಾಯೊಳಗಿನ ಚೂಪು ಹಲ್ಲೆಲ್ಲವೂ ಹೊರಗೆ ತೋರುವಂತೆ ಆಕಳಿಸುತ್ತಿದ್ದ ಕರಿಯಣ್ಣನಿಗೂ ಅದೇ ಪ್ರೆಶ್ನೆ ಕಾಡತೊಡಗಿತ್ತು.
"ಬಹುಷಃ ಶಾಲೆಯ ಯೂನಿಯನ್ ಡೇ ಇರ್ಬೇಕು. ಅಲ್ಲಿಗೆ ಈ ವಾರದಲ್ಲೇ ಇನ್ನೊಂದೊಳ್ಳೇ ಊಟ ಕಾದಿದೆ ಅಂತಾಯ್ತು! ಇರು ಕೇಳ್ಕಂಡು ಬರ್ತೀನಿ."
ಡೊಂಕು ಬಾಲ ಬೀಸುತ್ತ ಕೆಲಸಗಾರರತ್ತ ನಡೆದುಹೋದ ಕರಿಯಣ್ಣನನ್ನೇ ನೋಡುತ್ತ "ಹಂಗೇ ಅಡಿಗೆ ವೆಜ್ಜೋ, ನಾನ್ವೆಜ್ಜೋ ಅಂತಾನೂ ಕೇಳು ಮಚ್ಚಾ" ಎಂದು ಕೂಗಿದ ಕೆಂಚಣ್ಣ. ಸಿಗಲಿರುವ ಮೂಳೇ ಪೀಸಿನ ಕನಸು ಅವನ ಬಾಯ್ತುಂಬಾ ನೀರಾಗಿ ಸುರಿಯತೊಡಗಿತ್ತು.
"ಕಂಯ್ಯಯ್ಯೋ, ಕಂಯ್ಯಯ್ಯೋ...."
ಕೆಲಸದವನು ಬೀಸಿದ ದೊಣ್ಣೆಯೇಟು ಸರಿಯಾಗಿಯೇ ಬಿದ್ದಿತ್ತು. ಪಕ್ಕದಲ್ಲಿರುವ ಮರಗಳೆಲ್ಲ ಅಲ್ಲಾಡಿಹೋಗುವಂತೆ ಕೂಗಿಕೊಂಡ ಕರಿಯಣ್ಣ ಬಾಲವನ್ನು ಕಾಲುಗಳ ಮಧ್ಯೆ ತೂರಿಸಿಕೊಂಡು ಕೆಂಚಣ್ಣನಿದ್ದಲ್ಲಿಗೆ ಓಡತೊಡಗಿದ. ಆದರೆ ವದೆ ತಿಂದ ಅವನ ಮೊದಲ ಆರ್ತನಾದ ಮುಗಿಯುವ ಮೊದಲೇ ಕೆಂಚಣ್ಣ ಓಡಿ ಶಾಲೆಯ ಗೇಟು ತಲುಪಿಯಾಗಿತ್ತು. ಇದನ್ನು ಕಂಡು ಮತ್ತಷ್ಟು ಭೀತನಾದ ಕರಿಯ ತನ್ನ ಸಕಲ ಸಾಮರ್ಥ್ಯವನ್ನೂ ಕಾಲುಗಳಿಗೆ ಹರಿಯಬಿಟ್ಟು ಓಡುತ್ತಾ ಹೋಗಿ ಕೆಂಚನನ್ನು ಹಿಂದಿಕ್ಕಿದ. ಹೀಗೆ ಒಬ್ಬರ ಓಟದಿಂದ ಇನ್ನೊಬ್ಬರು ಭಯ ಹೆಚ್ಚಸಿಕೊಳ್ಳುತ್ತ ಓಡಿ ಕೊನೆಗೆ ಮುಖ್ಯರಸ್ತೆಗೆ ಬಂದು ನಿಂತರು.
"ಮಾಹಿತಿ ಕೇಳಲಿಕ್ಕೆ ಹೋದ್ರೆ ದೊಣ್ಣೇಲಿ ಬಡೀತಾರೆ. ರೇಬೀಸ್ ಪೀಡಿತರು!"
ವದೆ ಬಿದ್ದ ಬೆನ್ನನ್ನು ನೆಕ್ಕಿಕೊಳ್ಳುತ್ತಲೇ ಕರಿಯಣ್ಣ ಬೈದುಕೊಂಡ.
"ಯಾವುದೋ ಮಹಾಸಭೆಯಂತೆ ಮಚ್ಚೀ. ತುಂಬಾ ಜನ ಸೇರ್ತಾರಂತೆ!"
"ಅಯ್ಯೋ ನಿನ್ನ ಬಾಲ ತುಂಡಾಗ! ವಿಷಯ ಗೊತ್ತಿದ್ರೂ ನನ್ನ ಕೇಳ್ಕೊಂಡ್ಬಾ ಅಂತ ಕಳಿಸಿ ಬೆಳ್ ಬೆಳ್ಗೆನೇ ವದೆ ತಿನ್ಸಿದ್ಯಲ್ಲೋ ಕಾಟನ್ ಪೇಟೆ ಕೆಂಚಾ!"
ಕರಿಯಣ್ಣ ಅಬ್ಬರಿಸಿದ.
"ಕೂಲ್ ಮಚ್ಚೀ, ಕೂಲ್. ನಂಗೂ ಗೊತ್ತಿರ್ಲೀಲ. ನಿಂಗೆ ಅವನು ದೊಣ್ಣೇಲಿ ಬಡಿದಿದ್ದು ನೋಡಿ ನಾನು ಗೇಟಾಚೆಗೆ ಓಡಿ ಹೋಗ್ತಿದ್ನಲ್ಲ? ಆಗ ಅಲ್ಲಿಬ್ಬರು ಮಾತಾಡಿಕೊಳ್ತಿದ್ರು"
ಹಲ್ಕಿರಿಯುತ್ತ ಹೇಳಿದ ಕೆಂಚಣ್ಣ.
"ಮಹಾಸಭೆನಾ? ಹಾಗೆಂದರೇನು? ಅದರಲ್ಲೂ ಊಟ ಇರತ್ತಾ?"
ಹಿಂಗಾಲಿನಿಂದ ಕಿವಿ ಕೆರೆದುಕೊಳ್ಳುತ್ತಾ ಕೇಳಿದ ಕರಿಯನಿಗೆ ಗೊತ್ತಿಲ್ಲ ಎಂಬಂತೆ ತಾರಮ್ಮಯ್ಯ ತೋರಿದ ಕೆಂಚಣ್ಣ. ಆಗಲೇ ದೂರದಲ್ಲಿ ಬರುತ್ತಿದ್ದ ಎತ್ತರ ನಿಲುವಿನ, ಕಾಬೆ ಕೋಲಿನಂತಹಾ ಕಾಲಿನ, ಕಡುಗಪ್ಪು ಮೈಯ ಡಾಬರ್ ತಾತ ಅವರ ಕಣ್ಣಿಗೆ ಬಿದ್ದದ್ದು. ಡಾಬರ್ ತಾತ ಹಲವಾರು ವರ್ಷ ಶ್ರೀಮಂತರ ಮನೆಯೊಂದರಲ್ಲಿ ಸಾಕಲ್ಪಟ್ಟಿದ್ದ ಅನುಭವಿ. ಒಡೆಯನ ಮನೆಯವರ ಜೊತೆಯೇ ನಾಲ್ಕಾರು ಊರು ಸುತ್ತಿದವರು. ಹೊಸ ಹುಳ ತಲೆಗೆ ಹೊಕ್ಕಿದ್ದ ನಾಯಿಗಳಿಬ್ಬರೂ ಅವರ ಬಳಿ ಹೋಗಿ ತಮ್ಮ ಅನುಮಾನವನ್ನು ಕೇಳಿಕೊಂಡರು.
"ಮಹಾಸಭೆ ಎಂದರೆ ನಾಡಿನಾದ್ಯಂತ ಇರುವ ಒಂದೇ ಗುಂಪು ಅಥವಾ ವರ್ಗಕ್ಕೆ ಸೇರಿದವರೆಲ್ಲ ಒಂದೆಡೆ ಸೇರಿ ತಮ್ಮ ಬದುಕು, ಭವಿಷ್ಯ, ಸಮಸ್ಯೆಗಳ ಬಗ್ಗೆ ಚರ್ಚಿಸುವುದು. ಅದಕ್ಕೆ ಬೇಕಾದ ಪರಿಹಾರ ಹಾಗೂ ಹೋರಾಟಗಳ ಬಗ್ಗೆ ನಿರ್ಣಯ ಕೈಗೊಳ್ಳುವುದು."
ಅಷ್ಟಂದ ಡಾಬರ್ ತಾತ ಕನ್ನಡಕ ಸರಿಪಡಿಸಿಕೊಳ್ಳುತ್ತಾ ನಡೆದುಹೋದರು.
                     ************
ಕೆಲಸದವನು ಏಟು ಕೊಟ್ಟ ಜಾಗ ಅವತ್ತಿಡೀ ಕರಿಯಣ್ಣನಿಗೆ ಚುಳುಕ್ ಎನ್ನುತ್ತಲೇ ಇತ್ತು. ಕೊನೆಗೂ ತಾಳಲಾಗದೆ ಅವನು ಹೇಳಿಯೇಬಿಟ್ಟ.
"ನಾವೂ ಹೀಗೊಂದು ಮಹಾಸಭೆ ಮಾಡಬೇಕು! ನಗರದ ನೂರಾರು ಏರಿಯಾಗಳಲ್ಲಿ ಹಂಚಿಹೋಗಿರುವ ನಮ್ಮವರನ್ನೆಲ್ಲ ಒಟ್ಟಿಗೆ ಸೇರಿಸಿ ಸುಖಾಸುಮ್ಮನೆ ನಮ್ಮನ್ನು ಶಿಕ್ಷಿಸುವ ಮನುಷ್ಯನ ವಿರುದ್ದ ಜೊತೆಯಾಗಿ ಹೋರಾಡಬೇಕು!"
ಕೆಂಚಣ್ಣನಿಗೂ ಆ ನಿರ್ಧಾರ ಸರಿ ಎನ್ನಿಸಿತು. ವಾರದ ಕೆಳಗಷ್ಟೇ ವ್ಯಕ್ತಿಯೊಬ್ಬ ಅವನ ಬಾಲದ ತುದಿಯ ಮೇಲೆ ಬೈಕು ಹತ್ತಿಸಿದ್ದ ನೋವು ಇನ್ನೂ ಚುಳುಕ್ಕೆನ್ನುತ್ತಿತ್ತು. ಇಬ್ಬರೂ ಸೇರಿ ಬೆಂಗಳೂರಿನ ಬೇರೆ ಬೇರೆ ಏರಿಯಾಗಳಲ್ಲಿ ತಿಂದುಂಡು ತಿರುಗಾಡುತ್ತಾ ಕಚ್ಚಾಡಿಕೊಂಡಿರುವ ಹಿರಿ, ಕಿರಿ, ಮರಿ, ಪುರುಷ, ಮಹಿಳಾ ಶ್ವಾನಗಳನ್ನೆಲ್ಲ ಭೇಟಿಯಾಗಿ ಈ ಬಗ್ಗೆ ಚರ್ಚಿಸುವುದೆಂದು ನಿರ್ಧರಿಸಿದರು.
ಆದರೆ ಹೀಗೆ ವಿವಿಧ ಬೀದಿಗಳ ಶ್ವಾನ ಬಾಂಧವರನ್ನೆಲ್ಲ ಭೇಟಿಯಾಗ ಹೊರಟ ಕೆಂಚ, ಕರಿಯರಿಬ್ಬರಿಗೂ ಭಯಾನಕ ಅನುಭವ ಕಾದಿತ್ತು. ತಮ್ಮ ಏರಿಯಾಗೆ ಬಂದ ಈ ಇಬ್ಬರು ಆಗುಂತಕರ ಮೇಲೆ ಆ ಆ ಏರಿಯಾದ ಡಾನ್ ಶ್ವಾನಗಳು ಭೀಕರವಾಗಿ ಬೊಗಳುತ್ತಾ ಮುಗಿಬಿದ್ದರು. ಇವರು ತಮ್ಮ ಮಹಾಸಭೆಯ ಬಗ್ಗೆ ಬಾಯಿಬಿಡುವ ಮೊದಲೇ ಇವರ ಮೈಮೇಲೆ ಮಹಾಮಹಾ ಗಾಯಗಳಾಗಿದ್ದವು. ಬಿಟಿಎಂನಲ್ಲಂತೂ ಕೆಂಚಣ್ಣ 'ಕಬಾಬ್ ನಾಗ'ನಿಂದ ತಪ್ಪಿಸಿಕೊಳ್ಳಲು ಹೋಗಿ ಬಿಬಿಎಂಪಿಯವರು ತೋಡಿಟ್ಟುಹೋಗಿದ್ದ ಆಳದ ಹೊಂಡದೊಳಗೆ ಕಾಲುಮೇಲಾಗಿ ಬಿದ್ದುಬಿಟ್ಟ.
"ಅಯ್ಯೋ ಮುಟ್ಠಾಳರಾ, ಮೊದಲೇ ಹೇಳೋದಲ್ವ? ಮನುಷ್ಯರ ನಡುವೆ ಇದ್ದೂ ಇದ್ದೂ ನಮ್ಮವರಿಗೂ ಅವರ ಗುಣವೇ ಬಂದುಬಿಟ್ಟಿದೆ. ಗಂಡಸೊಬ್ಬ 'ತಪ್ಪು ಮಾಡಿದ್ದು ನಾನಲ್ಲ' ಅಂತ ಬಾಯ್ಬಿಡುವ ಮೊದಲೇ ಅವನನ್ನು ಹಿಡಿದು ಚಚ್ಚಿಹಾಕುತ್ತಾರೆ. ಪ್ರಚಾರ, ಅಡ್ವರ್ಟೈಸ್ ಗಳಿಗೆಲ್ಲ ಲೇಡೀಸನ್ನೇ ಕಳಿಸಬೇಕು!"
ಮೋರಿ ಬದಿಯಲ್ಲಿ ಗಾಯವೇ ಮೈಯ್ಯಾಗಿ ಮಲಗಿದ್ದ ಕೆಂಚ, ಕರಿಯರನ್ನು ಮರುಕದಿಂದ ನೋಡುತ್ತ ಡಾಬರ್ ತಾತ ಹೇಳಿದರು. ನಂತರ ಮೂವರೂ ಕೂತು ಮಾತಾಡಿ ನುಣುಪುಗೂದಲಿನ ಸುಂದರ ಜ್ಯೂಲ್ನಾಯಿ ಡಾಲಿಯನ್ನು ಈ ಕೆಲಸಕ್ಕಾಗಿ ನೇಮಿಸಿದರು. ವೈಯ್ಯಾರದಿಂದ ಬೀದಿಬೀದಿಗೂ ನಡೆದುಹೋದ ಡಾಲಿ ತನ್ನ ಮೃದುಮಧುರ ಬೊಗಳುಗಳ ಮೂಲಕ ಮಹಾಸಭೆಗೆ ಬರುವಂತೆ ಎಲ್ಲರ ಮನವೊಲಿಸುವಲ್ಲಿ ಯಶಸ್ವಿಯಾದಳು. ಜೊತೆಗೆ ಮಹಾಸಭೆಯ ದಿನ ಮೂರೂಹೊತ್ತೂ ಮಹಾನಗರದ ನಾನಾ ಹೋಟೆಲುಗಳಿಂದ ಎಸೆಯಲ್ಪಟ್ಟ  ಮೂಳೆ ಪೀಸುಗಳೇ ಮುಂತಾದ ಐಟಮ್ಗಳ ಭರ್ಜರಿ ಭೋಜನವಿರುತ್ತದೆಂದು ಹೇಳುವುದನ್ನೂ ಅವಳು ಮರೆಯಲಿಲ್ಲ.
                 ******************
ಅಂದುಕೊಂಡಂತೆಯೇ ಮಹಾಸಭೆಯ ದಿನ ಬಂದೇ ಬಿಟ್ಟಿತು. ಜಗತ್ತಿನ ವಿವಿಧ ಭಾಗಗಳ ಶ್ವಾನಗಳ ಬಗ್ಗೆ ಟೀವಿ ಯಲ್ಲಿ ನೋಡಿ ತಿಳಿದುಕೊಂಡಿರುವ ಅನುಭವಿ ಡಾಬರ್ ತಾತನನ್ನು ಮಹಾಸಭೆಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಊರ ಹೊರಗೆ ಕಸ ಎಸೆಯಲೆಂದೇ ಮೀಸಲಿಟ್ಟಿರುವ, ಮನುಷ್ಯರು ಅಷ್ಟಾಗಿ ಬಾರದ ಮೋರಿ ಪಾಳ್ಯದ ಎತ್ತರದ ದಿಬ್ಬವೊಂದರ ಮೇಲೆ ವೇದಿಕೆ ನಿರ್ಮಿಸಲಾಗಿತ್ತು. ಸಮಯವಾಗುತ್ತಿದ್ದಂತೆಯೇ ಬೇರೆಬೇರೆ ಏರಿಯಾದ ಶ್ವಾನಗಳು ಗುಂಪಾಗಿ ಬರತೊಡಗಿದರು. ಎಲ್ಲರೂ ಮಸ್ತಾನಿ ಹೋಟೆಲ್ ನ ಕಬಾಬ್ ಪೀಸಿನ 'ವೆಲ್ಕಮ್ ಡಿಶ್' ತಿಂದು ವೇದಿಕೆಯತ್ತ ನಡೆಯತೊಡಗಿದರು‌.
ಹೀಗೆ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆಯೇ ವೇದಿಕೆಯ ಮುಂದೆ ಕೋಲಾಹಲ ಶುರುವಾಯಿತು. ಸ್ವಾಗತ ಗೀತೆಯನ್ನು ಹಾಡಲಿರುವ ಪಿಂಕಿ ಪೊಮೇರಿಯನ್ ಳ ಪಕ್ಕ ಖಾಲಿ ಇದ್ದ ಒಂದೇ ಒಂದು ಸೀಟಿನಲ್ಲಿ ತಾನೇ ಕೂರಬೇಕೆಂದು ಬೂದಿಗುಡ್ಡೆ ಬಸಿಯ ಹಾಗೂ ಕುಂಟುಕಾಲು ಡ್ಯಾನಿ ಪೈಪೋಟಿಗೆ ಬಿದ್ದರು. ಗುರ್ ಗುರ್ ಎನ್ನುವ ಸಣ್ಣ ವಾದದೊಂದಿಗೆ ಶುರುವಾದ ಅವರ ಜಗಳ ತಾರಕಕ್ಕೆ ಹೋಗಿ, ಡ್ಯಾನಿಯ ಮೂರನೇ ಕಾಲನ್ನು ಬಸಿಯ ಇನ್ನೇನು ಕಚ್ಚಬೇಕು, ಅಷ್ಟರಲ್ಲಿ ಕೆಂಚ-ಕರಿಯರು ಮೊದಲೇ ತಯಾರಿಸಿದ್ದ 'ಆ್ಯಂಟಿ ಬಡಿದಾಟ ಸಂಘ'ದ ಕಟ್ಟುಮಸ್ತು ಶ್ವಾನಗಳು ಅಲ್ಲಿಗೆ ಬಂದು ಅವರಿಬ್ಬರನ್ನೂ ಹಿಡಿದುಕೂರಿಸಿ ಸಮಾಧಾನಪಡಿಸಿದರು.
ಅಂತೂ ಇಂತೂ ಮಹಾಸಭೆ ಆರಂಭವಾಯಿತು. ಕುಮಾರಿ ಪಿಂಕಿ ಪೊಮೇರಿಯನ್ ಬಾಲ ಕುಣಿಸುತ್ತಾ ವೇದಿಕೆಗೆ ನಡೆದುಹೋಗಿ, ತಾನೇ ರಚಿಸಿ, ಸಂಗೀತ ಸಂಯೋಜಿಸಿದ "ನಾವೆಲ್ಲರೂ ಶ್ವಾನಗಳು, ಒಂದೇ ಬೀದಿಯ ಬಂಧುಗಳು..." ಹಾಡನ್ನು ಪ್ರಾರ್ಥನಾಗೀತೆಯಾಗಿ ಹಾಡಿದಳು. ಅದಕ್ಕೆ ಕೆಂಚ ಹಾಗೂ ಗೆಳೆಯರ ತಂಡದವರು ಪರಸ್ಪರ ಕೈಕೈ (ಕಾಲುಕಾಲು) ಹಿಡಿದುಕೊಂಡು ನರ್ತಿಸಿದರು. ನಂತರ ಡಾಬರ್ ತಾತನ ಅಧ್ಯಕ್ಷತೆಯಲ್ಲಿ "ಬೀದಿ ಬಾಂಧವರ ಜ್ವಲಂತ ಸಮಸ್ಯೆಗಳು" ವಿಷಯದಡಿ ಚರ್ಚಾಕಾರ್ಯಕ್ರಮ ಆರಂಭವಾಯಿತು. ಕನ್ನಡಕ ಸರಿಪಡಿಸಿಕೊಂಡ ಡಾಬರ್ ತಾತ ತಮ್ಮ ಪ್ರಾಸ್ತವಿಕ ಮಾತುಗಳನ್ನು ಆರಂಭಿಸಿದರು. "ದೂರದ ಏರಿಯಾಗಳಿಂದ ಬಂದಿರುವ ನನ್ನ ಶ್ವಾನ ಮಿತ್ರರೇ, ಇಂದು ಸರಿಯಾದ ಸಮಯದಲ್ಲೇ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಇಪ್ಪತ್ತೊಂದನೇ ಶತಮಾನದ ಎರೆಡನೇ ದಶಕ ಮುಗಿಯುತ್ತಾ ಬಂದರೂ ಶ್ವಾನಗಳ ಜೀವನ ಕ್ರಮದಲ್ಲಿ ಬದಲಾವಣೆಗಳಾಗಿಲ್ಲ. ಪರಿಹಾರದ ಮಾತನಾಡುವ ಮೊದಲು ಸಮಸ್ಯೆಗಳು ಸ್ಪಷ್ಟವಾಗಬೇಕು. ಈಗ ಒಬ್ಬೊಬ್ಬರಾಗಿ ನಿಮ್ಮ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ" ಎಂದರು.
ಮೊದಲಿಗೆ ಮೈಕು ಪಡೆದು ಮಾತಿಗಾರಂಭಿಸಿದ ಕರಿಯಣ್ಣ ಸಾಕಷ್ಟು ತಯಾರಿಯೊಂದಿಗೇ ಬಂದಿದ್ದ. "ಬಂಧುಗಳೇ, 'ಗ್ರಾಮ ಸಿಂಹ' ಎಂದೇ ಖ್ಯಾತರಾದ ನಮ್ಮನ್ನು, ಇಡೀ ಭೂಮಿಯೇ ತನ್ನದೆಂದು ಭ್ರಮಿಸಿರುವ ಸ್ವಾರ್ಥಿ ಮನುಷ್ಯ ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದಾನೆ. ಎಲ್ಲಿ ಕಂಡರಲ್ಲಿ ನಮ್ಮ ಮೇಲೆ ದೊಣ್ಣೆ ಬೀಸುವುದು, ಕಲ್ಲೆಸೆಯುವುದು ಮಾಡುತ್ತಾನೆ. ಹುಲಿ, ಆನೆ, ಜಿಂಕೆ ಎಲ್ಲದರ ಹಿತಾಸಕ್ತಿಗಳ ರಕ್ಷಣೆಗೂ ಸಂಘಗಳಿವೆ. ಆದರೆ ನಮ್ಮ ಹೆಸರಿನಲ್ಲಿ ಯಾವ ಕಮಿಟಿಯೂ ಇಲ್ಲ. ರಾಜ್ಯದ ಆಯವ್ಯಯದಲ್ಲಾಗಲೀ, ಕೇಂದ್ರ ಬಜೆಟ್ ನಲ್ಲಾಗಲೀ ಶ್ವಾನ ಕಲ್ಯಾಣಕ್ಕೆಂದು ಒಂದು ಪೈಸೆಯನ್ನೂ ಮೀಸಲಿಡುತ್ತಿಲ್ಲ. ಇನ್ನು ದೀಪಾವಳಿಯ ಸಮಯದಲ್ಲಂತೂ ನಮ್ಮ ಗೋಳು ಕೇಳುವಂತೆಯೇ ಇಲ್ಲ. ಬಾಲಗಳಿಗೆ ಪಟಾಕಿ ಸರ ಕಟ್ಟಿ, ಊರೆಲ್ಲ ಅಟ್ಟಾಡಿಸಿ ಗೋಳುಹೊಯ್ದುಕೊಳ್ಳುತ್ತಾರೆ. ನಮ್ಮ ಬಾಲವನ್ನವರು ‘ರಾಕೇಟ್ ಉಡ್ಡಯನ ಕಟ್ಟೆ’ ಎಂದು ಭಾವಿಸಿರುವಂತಿದೆ" ಎಂದನು.
ಮೈಕು ಇಸಿದುಕೊಂಡು ಅವನ ಮಾತನ್ನು ಮುಂದುವರೆಸಿದ ಕೆಂಚಣ್ಣ "ಅಷ್ಟೇ ಅಲ್ಲ ಬಂಧುಗಳೇ, ರಾಕ್ಷಸ ಲಾರಿಗಳಲ್ಲಿ ಬರುವ ಮಹಾನಗರ ಪಾಲಿಕೆಯವರು ಬಲವಂತವಾಗಿ ನಮ್ಮವರನ್ನು ಹೊತ್ತೊಯ್ದು ಸಂತಾನ ಹರಣ ಚಿಕಿತ್ಸೆಗೆ ಒಳಪಡಿಸುತ್ತಿದ್ದಾರೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕಿರುವ ನಮ್ಮ ಭವಿಷ್ಯದ ವಂಶಾವಳಿಯನ್ನೇ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ" ಎಂದು, ಕೊಂಚ ದನಿ ತಗ್ಗಿಸಿ "ಬಲ್ಲ ಮೂಲಗಳ ಪ್ರಕಾರ ಬೌಬೌ ಬಿರಿಯಾನಿ ಎನ್ನುವ ನಿಷೇಧಿತ ಖಾದ್ಯವೊಂದರ ತಯಾರಿಕೆಗಾಗಿ ನಮ್ಮ ಬೀದಿ ಬಾಂಧವರ ಕಳ್ಳಸಾಗಣಿಕೆ ಅವ್ಯಹತವಾಗಿ ನಡೆಯುತ್ತಿದೆ. ಯಾವುದೇ ದೊಡ್ಡ ಲಾರಿಯನ್ನು ಕಂಡರೂ ನಮ್ಮವರು ಹೆದರಿ ಬಾಲ ಮುದುರಿಕೊಂಡು ಓಡುವಂತಾಗಿದೆ. ಅಲ್ಲದೆ ಬೀದಿಯಲ್ಲಿ ನಮ್ಮ ಪಾಡಿಗೆ ಮಲಗಿರುವಾಗ ಬೈಕು, ಕಾರು ಬಸ್ಸುಗಳನ್ನು ಮೇಲೆ ಹತ್ತಿಸಿ, ಆಸ್ಪತ್ರೆಗೂ ಸೇರಿಸದೇ ಪರಾರಿಯಾಗುತ್ತಾರೆ" ಎನ್ನುತ್ತಾ ತನ್ನ ಬಾಲವನ್ನು ನೆಕ್ಕಿಕೊಂಡನು‌.
ಅಷ್ಟರಲ್ಲಿ ಪಕ್ಕದಲ್ಲೇ ಕುಳಿತಿದ್ದ ಎಚ್ಡೀಕೋಟೆಯಿಂದ ಬಂದವನಾದ ಬೀರ ಮೈಕನ್ನು ಕಸಿದುಕೊಂಡು "ಕೇವಲ ನಗರದಲ್ಲಿ ಮಾತ್ರವಲ್ಲ, ಗ್ರಾಮಾಂತರ ಪ್ರದೇಶದಲ್ಲೂ ಶ್ವಾನಗಳ ಬದುಕು ಅಪಾಯದಲ್ಲಿದೆ ಮಿತ್ರರೇ. ರಾತ್ರೆಯ ಹೊತ್ತಲ್ಲಿ ಊರೊಳಗೆ ನುಗ್ಗಿ ನಮ್ಮನ್ನು ಜೀವಂತ ಹೊತ್ತೊಯ್ಯುವ ಚಿರತೆ, ಕುರ್ಕಗಳ ಕುರಿತಾಗಿಯೂ ನಾವಿಂದು ಚರ್ಚಿಸಬೇಕಿದೆ" ಎಂದು ಬೊಗಳಿದನು. ಅಷ್ಟರಲ್ಲಿ ಮತ್ತೆ ಮೈಕನ್ನು ಎಳೆದುಕೊಂಡ ಕೆಂಚ-ಕರಿಯರು "ಸಮಸ್ಯೆ ಕೇವಲ ಹೊರಗಿನಿಂದ ಮಾತ್ರ ಬರುತ್ತಿಲ್ಲ. ನಮ್ಮ ನಮ್ಮ ನಡುವೆಯೇ ಭಿನ್ನಾಭಿಪ್ರಾಯಗಳಿವೆ. ಶ್ವಾನ ಸಮಾಜದಲ್ಲಿ ಪುರುಷ ಹಾಗೂ ಮಹಿಳಾ ನಾಯಿಗಳ ನಡುವೆ ಭೇದಭಾವ ತೋರಲಾಗುತ್ತಿದೆ. ಪುರುಷ ಶ್ವಾನಗಳಿಗೆ ಅನ್ಯಾಯವಾಗುತ್ತಿದೆ. ಸಂಜೆಯ ವಾಕಿಂಗ್ ಗೆಂದು ಪಕ್ಕದ ಏರಿಯಾಗೆ ಹೋದರೆ ನಮ್ಮವರೇ ನಮ್ಮಮೇಲೆ ಗುಂಪಾಗಿ ಧಾಳಿ ಮಾಡಿ ಕಚ್ಚಿ ಗಾಯಗೊಳಿಸುತ್ತಾರೆ. ಆದರೆ ಮಹಿಳೆಯರನ್ನು ಸುಮ್ಮನೆ ಬಿಡಲಾಗುತ್ತದೆ” ಎಂದು ತಿಂಗಳ ಕೆಳಗೆ ತಮ್ಮ ಮೈಮೇಲಾದ ಗಾಯಗಳನ್ನು ಪರಪರ ಕೆರೆದುಕೊಳ್ಳುತ್ತಾ ನುಡಿದರು. ಈ ಮಾತು ಕೇಳುತ್ತಿದ್ದಂತೆಯೇ ಸಭೆಯಲ್ಲಿದ್ದ, ಈ ಹಿಂದೆ ಅಕ್ಕಪಕ್ಕದ ಏರಿಯಾದವರಿಂದ ಕಚ್ಚಿಸಿಕೊಂಡ ಪುರುಷ ಶ್ವಾನಗಳೆಲ್ಲ ಊಊ ಎಂದು ಒಕ್ಕೋರಲಿನಿಂದ ಊಳಿಡುವ ಮೂಲಕ ಬೆಂಬಲ ಸೂಚಿಸಿದರು.
ಎಲ್ಲರ ಸಮಸ್ಯೆಗಳನ್ನೂ ಆಲಿಸಿದ ಡಾಬರ್ ತಾತ  ಪ್ರತಿಯೊಂದು ಏರಿಯಾದ ಪ್ರತಿನಿಧಿಗಳನ್ನೂ ಕೂರಿಸಿಕೊಂಡು ಸುಧೀರ್ಘ ಚರ್ಚೆ ನಡೆಸಿದ ನಂತರ ಎಲ್ಲ ಸಮಸ್ಯೆಗಳಿಗೂ ಪರಿಹಾರವಿರುವ ವಿಧೇಯಕವೊಂದನ್ನು ತಯಾರಿಸಿದರು. ಅದು ಹೀಗಿತ್ತು:
*ಏರಿಯಾವಾರು ಕಲಹ ಬಿಡಬೇಕು. ಪಕ್ಕದ ಏರಿಯಾದ ನಾಯಿಯೊಬ್ಬ ನಮ್ಮ ಏರಿಯಾಗೆ ಬಂದರೆ ಅವನನ್ನು ಅತಿಥಿಯಂತೆ ಕಾಣಬೇಕೇ ಹೊರತು, ಗುಂಪುಕಟ್ಟಿಕೊಂಡು ಕಚ್ಚಿ ಓಡಿಸಬಾರದು.
* ಸಂತಾನ ಹರಣ ಚಿಕಿತ್ಸೆಯ ವಿರುದ್ಧ, ನಾಯಿ ಹಿಡಿಯುವ ನಗರ ಪಾಲಿಕೆಯವರು ಹಾಗೂ ಸುಮ್ಮಸುಮ್ಮನೆ ಕಲ್ಲು, ದೊಣ್ಣೆ ಎಸೆಯುವವರ ವಿರುದ್ಧ ಸಾಮೂಹಿಕ ಹೋರಾಟ ನಡೆಸಬೇಕು. ಅವರು ಕಂಡಲ್ಲಿ ಅಟ್ಟಿಸಿಕೊಂಡು ಹೋಗುವುದು, ಗುಂಪಾಗಿ ನಿಂತು ಘೋಷಣೆ ಕೂಗುವ (ಬೊಗಳುವ!) ಮೂಲಕ ತೀವ್ರವಾಗಿ ಖಂಡಿಸಬೇಕು‌.
* ಕಸ ಆಯುವ ಬಡಪಾಯಿಗಳ ಮೇಲೆ ಎಗರಾಡಬಾರದು. ಅವರನ್ನು ಅಟ್ಟಿಸಿಕೊಂಡು ಹೋಗಬಾರದು.
*ಹಾಗೆಯೇ ರಾತ್ರೆ ಒಂಟಿಯಾಗಿ ಬ್ಯಾಗು ಹಿಡಿದು ಓಡಾಡುವ ದಾರಿಹೋಕರ ಮೇಲೆ ಎರಗಬಾರದು. ಬದಲಿಗೆ ಬಾಲ ಆಡಿಸುವುದು, ಮುದ್ದುಮುದ್ದಾಗಿ ಕುಂಯ್ಗುಟ್ಟುವುದು, ಪಲ್ಟಿ ಹೊಡೆಯುವುದು ಮಾಡುವ ಮೂಲಕ ಜನರ ಪ್ರೀತಿ ಸಂಪಾದಿಸಬೇಕು.
* ಗ್ರಾಮಭಾಗದ ನಾಯಿಗಳನ್ನು ಹಿಡಿದು ಕೊಲ್ಲಲುತ್ತಿರುವ ಕುರ್ಕ, ಚಿರತೆಗಳ ಜೊತೆ ಸಂಧಾನ-ಮಾತುಕತೆ ನಡೆಸಬೇಕು. ಅವರು ಒಪ್ಪದಿದ್ದಲ್ಲಿ ಅವರ ವಿರುದ್ಧ ಹೋರಾಡಲು ಮುಧೋಳ, ಡಾಬರ್, ರ್ಯಾಟ್ ವಿಲ್ಲರ್ ಮುಂತಾದ ಗಟ್ಟಿಮುಟ್ಟಾದ ಶ್ವಾನಗಳ ಪಡೆಯೊಂದನ್ನು ಕಟ್ಟಬೇಕು.
* ವಾಹನಗಳಿಗೆ ಸಿಕ್ಕಿ ಗಾಯಗೊಳ್ಳುವ ನಾಯಿಗಳಿಗೆ ಮನುಷ್ಯನಿಂದಲೇ ಪರಿಹಾರ ಕೊಡಿಸಬೇಕು. ಕೊಡದ ಪಕ್ಷದಲ್ಲಿ ಅಂಥವರ ಫೋಟೋ, ವೀಡಿಯೋಗಳನ್ನು ಫೇಸ್ಬುಕ್, ಯೂಟ್ಯೂಬ್ ಗಳಿಗೆ ಅಪ್ಲೋಡ್ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಖಂಡಿಸಬೇಕು.
*ಈ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಶ್ವಾನಗಳಿಗೆ ಹಮ್ಮುರಬಿ ಹಾಗೂ ಸೌದಿ ಅರೇಬಿಯಾ ಮಾದರಿಯ ‘ಬೆರಳ್ ಗೆ ಬೆರಳ್. ಕೊರಳ್ ಗೆ ಕೊರಳ್’ ಶಿಕ್ಷೆಗಳನ್ನು ನೀಡಲಾಗುವುದು!
ಹೀಗೆ ಚರ್ಚಾಗೋಷ್ಠಿ ಸಂಪನ್ನವಾಗಿ, ಮಧ್ಯಾಹ್ನದ ಊಟವಾದ ನಂತರ ಸಾಂಸ್ಕೃತಿಕ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಆರಂಭವಾದವು. ತಮ್ಮ ಅಮೂಲ್ಯ ಕೃತಿಗಳ ಮೂಲಕ ಶ್ವಾನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಅನೇಕ ಶ್ವಾನಗಳಿಗೆ ಪ್ರಶಸ್ತಿನೀಡಲಾಯಿತು. 'ಕಂಬ ಕಂಡೊಡನೆ ನಮಗೇನಾಗುತ್ತದೆ?' ಗೆ ಅತ್ಯುತ್ತಮ ಮನೋವೈಜ್ಞಾನಿಕ ಕೃತಿಯೆಂದೂ, 'ಬಳೇಪೇಟೆಯವ ಜೂಲು ಚೆಲುವೆ' ಕಾದಂಬರಿಗೆ ಅತ್ಯುತ್ತಮ ಸಾಮಾಜಿಕ ಕಾದಂಬರಿಯೆಂದೂ, ‘ಮೈ ಕೆರೆದುಕೊಳ್ಳಲು ಸುಲಭ ವಿಧಾನಗಳು’ ಕೃತಿಗೆ ಅತ್ಯುತ್ತಮ ವೈದ್ಯಕೀಯ ಕೃತಿಯೆಂದೂ, 'ಮಹಾನಗರಪಾಲಿಕೆಯವರೇ ಹುಷಾರ್!' ನಾಟಕಕ್ಕೆ ಅತ್ಯುತ್ತಮ ಕ್ರಾಂತಿಕಾರಿ ನಾಟಕವೆಂದೂ ಪ್ರಶಸ್ತಿ ನೀಡಲಾಯಿತು. ಜೊತೆಗೆ ಐದು ವರ್ಷ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಿಸ್ಟರ್ ಮುಧೋಳ್ ಅವರನ್ನು ಸನ್ಮಾನಿಸಲಾಯಿತು. ಅವರ ಮುಂದಾಳತ್ವದಲ್ಲಿ ಮರಿ ಶ್ವಾನಗಳಿಗೆ ಉಚಿತ ಆತ್ಮರಕ್ಷಣಾ ತರಬೇತಿ ನೀಡುವ ಕುರಿತಾಗಿಯೂ ಚರ್ಚಿಸಲಾಯಿತು. ಕೊನೆಗೆ ವಂದನಾರ್ಪಣೆಯ ವೇಳೆ ಸ್ವತಃ ಡಾಬರ್ ತಾತ “ನೀ ಜೈಲಲಿ ಹುಟ್ಟಿ ಬಯಲಿಗೆ ಬಂದೆ ಕೃಷ್ಣ ಕೃಷ್ಣ ಕೃಷ್ಣ… ನಾ ಬೋನಲಿ ಹುಟ್ಟಿ ಬೀದಿಗೆ ಬಂದೆ ಏಕೆ ಹೀಗೆ ಕೃಷ್ಣ?” ಎಂದು ಭಾವುಕರಾಗಿ ಹಾಡಿದ್ದನ್ನು ಕೇಳಿ ಶ್ವಾನಗಳೆಲ್ಲರ ಕಣ್ಣೂ ಮಂಜಾಯ್ತು. ದುಃಖಿತರಾದ ಎಲ್ಲರಲ್ಲೂ ಉತ್ಸಾಹ ಚಿಮ್ಮಿಸಲೆಂದು ಆಂಗ್ಲ ಹಾಡಿನ ಸಿಡಿ ಹಾಕಲಾಯಿತು. ‘ಹೂ ಲೆಟ್ ದ ಡಾಗ್ಸ್ ಔಟ್?’ ಹಾಡಿಗೆ ಶ್ವಾನಗಳೆಲ್ಲ ಬಾಲ ಕುಣಿಸತ್ತಾ, ನಾಲಿಗೆ ಹೊರಚಾಚಿಕೊಂಡು ಕುಣಿಯತೊಡಗಿದರು. ವೇದಿಕೆಯ ಮೇಲೆ ಮಾತ್ರವಲ್ಲದೆ ಕೆಳಗಿನ ಸಭೆಯಲ್ಲೂ ನರ್ತನ ಆರಂಭವಾಯಿತು. ಕುಣಿದು ಕುಪ್ಪಳಿಸಿದ ಶ್ವಾನಗಳೆಲ್ಲ ಇಂತಹಾದ್ದೊಂದು ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಿದ ಕೆಂಚ, ಕರಿಯರನ್ನು ಹೆಗಲ ಮೇಲೆ ಹೊತ್ತು ಕುಣಿಯತೊಡಗಿದರು.
“ಡರ್… ಪೋಂವ್..ಪೋಂವ್”
ಅವರ ಸಂಭ್ರಮವನ್ನು ಹರಿಯುವಂತಹಾ ಭಾರೀ ವಾಹನದ ಸದ್ದೊಂದು ಇದ್ದಕ್ಕಿದ್ದಂತೆ ಕೇಳಿಬಂತು.
“ಬಿಬಿಎಂಪಿ ಲಾರಿ ಬರ್ತಿದೆ. ಎಲ್ರೂ ಓಡಿ!”
ಅಷ್ಟೇ! ಖುಷಿಯಿಂದ ಜಿಗಿದಾಡುತ್ತಿದ್ದ ನಾಯಿಗಳೆಲ್ಲ ಹೊತ್ತಿದ್ದ ಕೆಂಚ ಕರಿಯರನ್ನು ಎತ್ತಿ ಬಿಸಾಕಿ ದಿಕ್ಕಾಪಾಲಾಗಿ ಓಡತೊಡಗಿದರು. ಮೋರಿಪಾಳ್ಯದ ಬೂದಿಗುಡ್ಡೆಯ ಮೇಲೆ ನಾಯಿಗಳೆಲ್ಲ ಸೇರಿಕೊಂಡು ಗಲಾಟೆ ಮಾಡುತ್ತಿವೆಯೆಂದು ಯಾರೋ ಬಿಬಿಎಂಪಿಯವರಿಗೆ ಫೋನ್ ಮಾಡಿ ಕಂಪ್ಲೇಟ್ ಕೊಟ್ಟಿದ್ದರಿಂದ ನಾಯಿ ಹಿಡಿಯುವ ವಾಹನ ಅಲ್ಲಿಗೆ ಧಾವಿಸಿಬಂದಿತ್ತು. ಆದರೆ ಅಷ್ಟು ದೂರದಿಂದಲೇ ಅದರ ಶಬ್ದವನ್ನು ಗುರುತಿಸಿದ ಶ್ವಾನಗಳೆಲ್ಲ ಚಿರತೆಯ ವೇಗದಲ್ಲಿ ಓಡುತೊಡಗಿದವು. ಸಿಕ್ಕ ಕೆಲವು ನಾಯಿಗಳನ್ನು ತುಂಬಿಕೊಂಡ ಬಿಬಿಎಂಪಿ ವಾಹನ ಭೋಂಭೋಂ ಎಂದು ವಿಜಯೋತ್ಸಾಹ ಮಾಡುತ್ತಾ ಮರಳಿಹೋಯಿತು‌.
ಕಾಲ್ತುಳಿತದಿಂದ, ಬಿಬಿಎಂಪಿ ವಾಹನದಿಂದ ತಪ್ಪಿಸಿಕೊಂಡು ತಮ್ಮ ಏರಿಯಾ ತಲುಪುವಷ್ಟರಲ್ಲಿ ಕೆಂಚ-ಕರಿಯರಿಬ್ಬರ ಜೀವ ಬಾಯಿಗೆ ಬಂದಿತ್ತು.

('ಮಂಗಳ''ಲ್ಲಿ ಪ್ರಕಟಿತ ಲೇಖನ)

ಶನಿವಾರ, ಜನವರಿ 19, 2019

ಬೆಂಗಳೂರಿಗೆ ಬಂದಿದ್ದು-2

ಈ ಪ್ರೀತಿ ಹಾಗೂ ಬರಹಗಳ ಒಂದು ವಿಚಿತ್ರ ಗುಣ ಏನೆಂದರೆ 'ಬಾ ಇಲ್ಲಿ' ಎಂದು ಪ್ರೀತಿಯಿಂದ ಕರೆದಾಗ ಅವು ಬರುವುದಿಲ್ಲ. ಅದೇ 'ನೀನು ನನಗಲ್ಲ ಬಿಡು' ಎಂದು ವಿಮುಖನಾದರೆ ಓಡಿ ಬಂದು ಅಪ್ಪಿಕೊಳ್ಳುತ್ತವೆ. ಬಸ್ಸು ಬಾರದ ಸಂಜೆಯೊಂದರಲ್ಲಿ ಕಾಯುತ್ತಾ ಕುಳಿತಿದ್ದಾಗ ಬರೆದ 'ಬೆಂಗಳೂರಿಗೆ ಬಂದಿದ್ದು' ಎನ್ನುವ ನನ್ನದೇ ಯಡವಟ್ಟುಗಳ ಸಂಕಲನದಂತಹಾ ಬರಹಕ್ಕೆ ದೊರೆತ ನಿಮ್ಮೆಲ್ಲರ ಪ್ರತಿಕ್ರಿಯೆಯನ್ನು ನೋಡಿ ನಿಜಕ್ಕೂ ಬೆಚ್ಚಿಬಿದ್ದಿದ್ದೇನೆ, ಅಷ್ಟೇ ಕೃತಜ್ಞನೂ ಆಗಿದ್ದೇನೆ. ಅದಕ್ಕೆ ಅಷ್ಟೆಲ್ಲ ಲೈಕು, ಕಮೆಂಟುಗಳು ಬಂದಿರುವಾಗ ಇದು ಎಲ್ಲಿ ಓದಿಸಿಕೊಳ್ಳದೇ ಹೋಗುತ್ತದೋ ಎನ್ನುವ ಭಯದಲ್ಲೇ ಅದರ ಮುಂದಿನ ಭಾಗವನ್ನು ಬರೆದುಮುಗಿಸಿದ್ದೇನೆ.
ಓದುವಿರೆಂಬ ನಂಬಿಕೆಯೊಂದಿಗೆ...

ಬೆಂಗಳೂರಿಗೆ ಬಂದಿದ್ದು-2

ಬೆಂಗಳೂರಿಗೆ ಬಂದ ಮೊದಲ ವಾರದಲ್ಲಿ, ಹೆಚ್ಚೂ ಕಡಿಮೆ ಒಂದೇ ಥರಾ ಕಾಣುವ ಬೆಂಗಳೂರಿನ ಬೀದಿಗಳ ನಡುವೆ ಅದೆಷ್ಟು ಕನ್ಫ್ಯೂಸ್ ಆಗುತ್ತಿದ್ದೆನೆಂದರೆ ನಮ್ಮ ಮನೆಯ ಮುಂದಿನದೇ ಸರ್ಕಲ್ ನಲ್ಲಿ ನಿಲ್ಲಿಸಿ, ಕಣ್ಣು ಮುಚ್ಚಿಸಿ, ಗಿರಗಿರನೆ ನಾಲ್ಕು ಸುತ್ತು ತಿರುಗಿಸಿ ವಾಪಾಸ್ ಮನೆಗೆ ಹೋಗು ನೋಡೋಣ ಎಂದರೂ ಮೇಲೆ ಕೆಳಗೆ ನೋಡುತ್ತಿದ್ದೆನೇನೋ. ಎಲ್ಲೇ ಮೂರು ದಾರಿಗಳು ಕೂಡಿರುವ ಸರ್ಕಲ್ ಕಂಡರೂ, ಅಲ್ಲಿ ನಾನು ತುಳಿಯುತ್ತಿದ್ದುದು ತಪ್ಪುಹಾದಿಯನ್ನೇ. ಯಾವುದೋ ಡೆಡ್ಡೆಂಡ್ ರಸ್ತೆಗೆ ಹೋಗಿ ಗಾಬರಿಯಲ್ಲಿ ಮೇಲೆ ಕೆಳಗೆ ನೋಡುತ್ತಾ, ಸ್ವಲ್ಪ ಹೊತ್ತಿಗೆ ಮುಂಚೆ ಇಲ್ಲೇ ಇದ್ದ ಅಕ್ಕನ ಮನೆ ಅದೆಲ್ಲಿ ಹೋಯ್ತೆಂದು ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ ಜನರ ಬಳಿ ವಿಳಾಸ ಕೇಳುತ್ತಿದ್ದೆ. ಇಂತಿಪ್ಪ ನನ್ನೊಬ್ಬನನ್ನೇ ದೂರದಲ್ಲೆಲ್ಲೋ ಇರುವ ಅದ್ಯಾವುದೋ ಕಂಪನಿಗೆ ಇಂಟರ್ವ್ಯೂಗೆ ಕಳಿಸಲು ಅಕ್ಕನಿಗಾದರೂ ಹೇಗೆ ಧೈರ್ಯ ಬಂದೀತು? ತುಸು ಯೋಚಿಸಿ, ಕೊನೆಗೆ ಅವಳೇ ನನ್ನೊಂದಿಗೆ ಹೊರಟು ನಿಂತಳು.
ತಮಾಷೆ ಇದ್ದದ್ದೇ ಅಲ್ಲಿ. ಮೂರ್ನಾಲ್ಕು ದಿನದ ಹಿಂದೆ ಬೆಂಗಳೂರಿಗೆ ಬಂದಿಳಿದ ನನಗೆ ಈ ಮಹಾನಗರದ ದೂರದ ಏರಿಯಾಗಳು ಅದೆಷ್ಟು ಅಪರಿಚಿತವಾಗಿದ್ದವೋ, ಏಳು ವರ್ಷದ ಹಿಂದೆ ಮದುವೆಯಾಗಿ ಇಲ್ಲಿಗೆ ಬಂದ ಅಕ್ಕನಿಗೂ ಅವು ಅಷ್ಟೇ ಅಪರಿಚಿತವಾಗಿದ್ದವು! ಗಿರಿನಗರ, ಬಸವನಗುಡಿಗಳಾಚೆ ಯಾವೊಂದು ಏರಿಯಾಗೂ ಸ್ವತಂತ್ರವಾಗಿ ಹೋಗದ, ವರ್ಷಕ್ಕೊಂದೆರೆಡು ಬಾರಿ ಹೋದರೂ ಭಾವನ ಜೊತೆ ಬೈಕಿನಲ್ಲಿ ಇಲ್ಲಾ ಆಟೋದಲ್ಲಿ ಹೋಗುತ್ತಿದ್ದ ಅಕ್ಕನ ಪಾಲಿಗೆ ಈ ಬಿಎಂಟಿಸಿ ಪ್ರಯಾಣವೆನನುವುದು ಮೊಟ್ಟ ಮೊದಲ ಬಾರಿಗೆ ಏರುತ್ತಿರುವ ರೋಲಕ್ ಕೋಸ್ಟರ್ರೇ ಆಗಿತ್ತು. ಹೀಗೆ ಹುಟ್ಟಾ ಬೃಹಸ್ಪತಿಗಳಾದ ನಾವಿಬ್ಬರೂ ಜೊತೆಯಾಗಿ ಇಂಟರ್ವ್ಯೂಗೆ ಹೊರಡುವುದೆಂದು ತೀರ್ಮಾನವಾಯಿತು. ಬಿಟಿಎಂ ಎನ್ನುವ ಬರೀ ಇನಿಶಿಯಲ್ ಗಳಿರುವ ಹೆಸರಿನ ಏರಿಯಾಗೆ ಹೋಗಲು ಯಾವ್ಯಾವ ಬಸ್ಸುಗಳಿವೆಯೆಂದು ತಿಳಿದುಕೊಂಡು ಹೇಳುವಂತೆ ಅಕ್ಕ ಭಾವನಿಗೆ ದೊಂಬಾಲುಬಿದ್ದಳು. ಯಾರ್ಯಾರಿಗೋ ಕಾಲ್ ಮಾಡಿ ನಮ್ಮ ಏರಿಯಾದಿಂದ ಬಿಟಿಎಂಗೆ ಹೋಗುವ ಬಸ್ಸುಗಳ ಕುಲ, ಗೋತ್ರ ವಿಚಾರಿಸಿದೆವು. ಅಂತೂ ಇಂತೂ ಅದೊಂದು ಸೋಮವಾರ ಬೆಳಗ್ಗೆ ಒಂಭತ್ತಕ್ಕೆಲ್ಲ ಸೀತಾ ಸರ್ಕಲ್ ನಲ್ಲಿ ನಿಂತು ಬಸ್ಸಿಗಾಗಿ ಕಾಯತೊಡಗಿದೆವು.
ಆಗ ಬಂತು ಟೂ ನಾಟ್ ಒನ್!
ಬಸ್ಸೊಂದು ಈ ಪಾಟಿ ರಶ್ಶಾಗಿದ್ದನ್ನು ನಾನು ನೋಡಿದ್ದೇ ಕಡಿಮೆ. ಮುಂದುಗಡೆ ಬಾಗಿಲಿನ ತುದಿಯಿಂದ ಹಿಡಿದು ಹಿಂದಿನ ಸೀಟಿನ ಮೂಲೆಯ ತನಕ ಒಂದೊಂದು ಅಡಿ ಜಾಗಕ್ಕೂ ಒಬ್ಬೊಬ್ಬ ಮನುಷ್ಯನನ್ನು ನಿಲ್ಲಿಸಿಕೊಂಡು ಬಂದಿದ್ದ ಆ ಬಸ್ಸನ್ನು ನೋಡಿ ನನಗಿಂತ ಭಯಂಕರವಾಗಿ ಬೆಚ್ಚಿಬಿದ್ದವಳು ಅಕ್ಕ. ಎಷ್ಟೋ ವರ್ಷಗಳ ಕೆಳಗೆ ಸಮಾಜ ಪುಸ್ತಕದಲ್ಲಿ ಓದಿದ್ದ 'ಜನಸಂಖ್ಯಾ ಸ್ಫೋಟ'ದ ಅರ್ಥ ಏನೆಂಬುದು ಈಗ ಇಬ್ಬರಿಗೂ ಗೊತ್ತಾಗಿತ್ತು. ಹಾಗಂತ ಮುಂದಿನ ಬಸ್ಸಿಗೆ ಕಾಯುವಷ್ಟು ಸಮಯವಿರಲಿಲ್ಲ. ಹಾಗೆ ಕಾದರೂ ಬರಲಿರುವ ಬಸ್ಸು ಇದರ ಅಜ್ಜನಂತಿದ್ದರೆ? ಎಂಬ ಭಯ ಬೇರೆ. ಅಂತೂ ಇಂತೂ ಹೇಗೋ ದಾರಿ ಮಾಡಿಕೊಂಡು ಬಸ್ಸಿನೊಳಗೆ ತೂರಿಕೊಂಡೆವು. ಒಳಗಿನ ಪರಿಸ್ಥಿತಿ ಇನ್ನೂ ಭಯಂಕರವಾಗಿತ್ತು. ಸೊಂಟ ಬಳುಕಿದ ತೆಂಗಿನ ಮರಗಳಂತೆ ನಿಂತು ನೇತಾಡಿಕೊಂಡಿದ್ದ ಜನರ ಕಾಲೊಂದು ಕಡೆ ಇದ್ದರೆ, ತಲೆ-ಕೈಗಳು ಮೇಲೆಲ್ಲೋ ಇರುವ ಪೋಲ್ ಸರಳಿನ ಕಡೆಗೆ ಓರೆಯಾಗಿ ಚಾಚಿಕೊಂಡಿದ್ದವು. ಪ್ರತಿಯೊಂದು ಹೆಜ್ಜೆಗೂ ಯಾರದೋ ಕಾಲು ತುಳಿಯುತ್ತಾ, ಅವರ ಕೆಂಗಣ್ಣಿನ ನೋಟಕ್ಕೀಡಾಗುತ್ತಾ ಹೇಗೋ ಒಳಸೇರಿಕೊಂಡೆ. ಮಹಿಳೆಯರು ಬಸ್ಸಿನ ಮುಂಭಾಗದಲ್ಲಿ ನಿಲ್ಲಬೇಕಾದ್ದರಿಂದ ಅಕ್ಕ ಅನಿವಾರ್ಯವಾಗಿ ಮುಂದೆಲ್ಲೋ ನಡೆದುಹೋದಳು. ಕಿಕ್ಕಿರಿದಿದ್ದ ಜಡೆ, ಚೂಡಿದಾರ, ಸೀರೆಗಳ ನಡುವೆ ಕರಗಿಹೋದ ಅವಳನ್ನು ಹುಡುಕುವ ವಿಫಲ ಪ್ರಯತ್ನ ಮಾಡುತ್ತಾ, ನಿಂತಲ್ಲೇ ಇಣುಕಾಡುತ್ತ ಬಸ್ಸಿನ ಪೋಲ್ ಗೆ ನೇತಾಡತೊಡಗಿದೆ.
ಟ್ರಾಫಿಕ್ ಎನ್ನುವ, ಮಹಾಮಹಾಶಹರಗಳ ಜನರನ್ನೆಲ್ಲ ಬೆಚ್ಚಿ ಬೀಳಿಸುವ ಸಮಸ್ಯಾಸುರನನ್ನು ನಾನು ಕಣ್ಣಾರೆ ನೋಡಿದ್ದು ಅದೇ ಮೊದಲು. ಇಳಿಯಬೇಕಾದ ನಿಲ್ದಾಣ ಮುಂದೆಲ್ಲಿದೆ? ಗೊತ್ತಿಲ್ಲ. ಅದಕ್ಕಿನ್ನೂ ಎಷ್ಟು ದೂರ? ಗೊತ್ತಿಲ್ಲ. ನಿಜಕ್ಕೂ ಅದು ಮುಂದೆಯೇ ಇದೆಯಾ ಅಥವಾ ಹಿಂದೆಲ್ಲೋ ದಾಟಿ ಹೋಯಿತಾ? ಅದೂ ಗೊತ್ತಿಲ್ಲ. ಆಗಲೇ ಒಂದು ಗಂಟೆ ಕಳೆದಿದೆ. ಮುಂದಿರುವ ಅಕ್ಕ ನನಗೆ ಗೊತ್ತಾಗದಂತೆ ಎಲ್ಲಾದರೂ ಇಳಿದುಕೊಂಡು ಬಿಟ್ಟರೆ ಏನಪ್ಪಾ ಗತಿ ಎಂದು ನಾನು ಯೋಚಿಸುತ್ತಿದ್ದರೆ ಅವಳು, ಹಿಂದೆಲ್ಲೋ ಇರುವ ತನ್ನ ಸಣಕಲ ತಮ್ಮ ಈ ನೂಕಾಟದ ನಡುವೆ ಅದ್ಯಾವ ಕಿಟಕಿಯ ಸಂದಿಯಿಂದ ತೂರಿ ಆಚೆ ಬಿದ್ದುಹೋಗುತ್ತಾನೋ ಎಂದು ಚಿಂತಿಸುತ್ತಾ ಹೈರಾಣಾಗಿದ್ದಳು. ಪ್ರತಿ ಎರೆಡು-ಮೂರು ನಿಲ್ದಾಣ ಸರಿದಾಗಲೂ ಇದು ಬಿಟಿಎಮ್ಮಾ ಎಂದು ಕೇಳಿ ಕಂಡೆಕ್ಟರ್ ನಿಂದ ಬೈಸಿಕೊಂಡಿದ್ದಳು. ಹೀಗೆ ಖಾಲಿ ಹತ್ತೂ ಚಿಲ್ಲರೆ ಕಿಲೋಮೀಟರ್ ಕ್ರಮಿಸಲಿಕ್ಕೆ ಒಂದೂವರೆ ಗಂಟೆ ಕಾಲ ಅಲ್ಲಾಡುತ್ತಾ, ಕುಲುಕಿ ಬಳುಕುತ್ತಾ, ಹೋಗುತ್ತಲೇ ಇರಬೇಕಾದ ಪ್ರಯಾಣ ನಿಜಕ್ಕೂ ಕಿರಿಕಿರಿ ಹುಟ್ಟಿಸುವಂತಿತ್ತು.
*******************
ಕೊನೆಗೂ ಕಂಡಕ್ಟರ್ 'ಈಸ್ಟೆಂಡ್, ಈಸ್ಟೆಂಡ್...' ಎಂದು ಕೂಗಿಕೊಂಡಾಗ ಹೋದ ಜೀವ ಬಂದಂತಾಯಿತು. ಇನ್ನೂ ಖಾಲಿಯಾಗದ ಬಸ್ಸಿನಿಂದ ಅದು ಹೇಗೋ ಎಗರಿಕೊಂಡೆ. ಇನ್ನೊಂದರ್ಥದಲ್ಲಿ ಬಾಗಿಲಿನತ್ತ ಮುಖ ಮಾಡಿ ನಿಂತ ನನ್ನನ್ನು ಜನರೇ ತಳ್ಳಿಕೊಂಡುಬಂದು ಕೆಳಗಿಳಿಸಿದರು. ನಮ್ನಮ್ಮ ಕೈ, ಕಾಲು, ತಲೆಗಳೆಲ್ಲ ನಮ್ನಮ್ಮ ಬಳಿಯೇ ಇದೆಯೆಂಬುದನ್ನು ಖಾತರಿ ಪಡಿಸಿಕೊಂಡ ನಂತರ ನಾನು-ಅಕ್ಕ ಒರಾಕಲ್ ನತ್ತ ಹೊರಟೆವು. ಎದುರು ಸಿಕ್ಕವರ ಬಳಿಯೆಲ್ಲ ಹೆಸರೊಂದು ಬಿಟ್ಟು ಮತ್ಯಾವ ವಿವರವೂ ಗೊತ್ತಿಲ್ಲದ ಒರಾಕಲ್ ನ ವಿಳಾಸ ಕೇಳುತ್ತಾ, ಗೊಂದಲದಲ್ಲಿ ಒಬ್ಬರು ಇನ್ನೊಬ್ಬರ ದಾರಿ ತಪ್ಪಿಸುತ್ತಾ, ಹೆಜ್ಜೆಗೊಂದು ಬಾರಿ ನಾವು ಹೋಗುತ್ತಿರುವ ಮಾರ್ಗವನ್ನು ಅನುಮಾನಿಸುತ್ತ ಅಂತೂ ಇಂತೂ ಒರಾಕಲ್ ನ ಅಂಗಳ ತಲುಪಿನಿಂತೆವು.
ತಲೆಯೆತ್ತಿದಷ್ಟೂ ಎತ್ತರಕ್ಕೆ ಮಹಡಿ ಮಹಡಿಯಾಗಿ ಬೆಳೆದು ನಿಂತಿದ್ದ ಆ ಕಟ್ಟಡವನ್ನು ನೋಡಿಯೇ ನನ್ನ ಅರ್ಧ ಜೀವ ಬಾಯಿಗೆ ಬಂತು. ನನ್ನಂತೆಯೇ ಇಂಟರ್ವ್ಯೂಗೆ ಬಂದಿದ್ದ ಹತ್ತಾರು ಯುವಕರು ನಮ್ಮ ಸುತ್ತ ಸೇರಿಕೊಂಡು ಪಕ್ಕಾ ಇಂಗ್ಲೀಷಿನಲ್ಲಿ ಪಿಸುಗುಟ್ಟುತ್ತ ನಿಂತಿದ್ದರು. ಅಕ್ಕನಂತೂ ಒಂದು ಕಣ್ಣಿನಲ್ಲಿ ಸುತ್ತ ನೆರೆದ ಇನ್ನಿತರ ಕ್ಯಾಂಡಿಡೇಟ್ ಗಳನ್ನೂ, ಮತ್ತೊಂದು ಕಣ್ಣಿನಲ್ಲಿ ಪೆಕರನಂತೆ ಬಾಯ್ಬಿಟ್ಟುಕೊಂಡು ಬಿಲ್ಡಿಂಗನ್ನೇ ನೋಡುತ್ತಾ ನಿಂತಿದ್ದ ನನ್ನನ್ನೂ ನೋಡುತ್ತಿದ್ದಳು- ಹುಟ್ಟುವಾಗಲೇ ಫಾರ್ಮಲ್ಸ್ ಹಾಕಿಕೊಂಡು ಹುಟ್ಟಿರುವ ಈ ಬುದ್ಧಿವಂತರನ್ನೆಲ್ಲ ಹಿಂದಿಕ್ಕಿ ಈ ನನ್ನ ತಮ್ಮ ಕೆಲಸ ಗಿಟ್ಟಿಸುವುದು ಹೌದಾ ಎಂಬಂತೆ. ನಾನೇನೂ ಅವಳ ಈ ಅನುಮಾನವನ್ನು ಸುಳ್ಳಾಗಿಸಲಿಲ್ಲ ಬಿಡಿ, ಅದು ಬೇರೆ ವಿಷಯ. ಆದರೆ ಅದಕ್ಕೂ ಮೊದಲು ನಾನು ತೋರಿಸಿದ ಓವರ್ ಕಾನ್ಫಿಡೆನ್ಸ್ ಇದೆಯಲ್ಲಾ? ಅದೇ ನಿಜವಾದ ತಮಾಷೆ.
ಲಿಫ್ಟ್ ನೊಳಗೆ ತೂರಿಕೊಂಡ ನಮ್ಮೆದುರಿಗೆ ಪಕ್ಕಾ ಹುಡುಗನಂತೆ ಫಾರ್ಮಲ್ಸ್ ತೊಟ್ಟಿದ್ದ ಹುಡುಗಿಯೊಬ್ಬಳು ಬಂದು ನಿಂತಳು. ಕೈಯಲ್ಲಿದ್ದ ಫೈಲನ್ನು ಎದೆಗವುಚಿಕೊಂಡು, ಇನ್ನೇನು ಸಾವಿರಾರು ಅಡಿ ಎತ್ತರದ ಬೆಟ್ಟದ ಮೇಲಿಂದ ನೆಗೆಯಲಿರುವವಳಂತೆ ಭಯಕ್ಕೊಳಗಾಗಿ ನಿಂತಿದ್ದ ಅವಳನ್ನು ನೋಡಿ ಅಕ್ಕನಿಗೆ ಏನನಿಸಿತೋ ಏನೋ, "ಯಾಕೆ ಅಷ್ಟೊಂದು ಟೆನ್ಷನ್ ಆಗಿದೀರ? ಇಂಟರ್ವ್ಯೂ ಭಯಾನಾ?" ಎಂದು ಕೇಳಿಯೇ ಬಿಟ್ಟಳು. ಆ ಹುಡುಗಿ ಹೌದೆಂಬಂತೆ ತಲೆಯಾಡಿಸಿ ಸಣ್ಣಗೆ ನಕ್ಕಳು. ಅವಳ ಹೆಸರು, ಊರು ಎಲ್ಲಾ ಕೇಳಿದ ಅಕ್ಕ ಕೊನೆಗೆ "ಹೆದರಬೇಡಿ. ಧೈರ್ಯವಾಗಿರಿ. ಅರಾಮಾಗಿ ಆನ್ಸರ್ ಮಾಡಿ" ಎಂದು ಧೈರ್ಯ ಹೇಳಿ ನನ್ನತ್ತ ಒಮ್ಮೆ ನೋಡಿದಳು. ನಾನು ಮಾತ್ರ ಸುತ್ತಲಿನ ಪರಿಸ್ಥಿತಿಗೂ ನನಗೂ ಸಂಬಂಧವೇ ಇಲ್ಲವೆಂಬಂತೆ, ಮದುವೆ ಮನೆಯೊಂದಕ್ಕೆ ಬಂದಿರುವ ಗಂಡಿನ ಕಡೆಯ ನೆಂಟನಂತೆ ಠೀವಿಯಿಂದ ನಿಂತುಕೊಂಡಿದ್ದೆ! ಬೆಂಗಳೂರಂಥಾ ಬೆಂಗಳೂರಲ್ಲಿ ಬೆಳದ ಹುಡುಗಿಯೇ ಹೀಗೆ ಟೆನ್ಷನ್ ಆಗಿ ನಡುಗುತ್ತಿರುವಾಗ ಅದೆಲ್ಲಿಯೋ ಇರುವ ಹಳ್ಳಿ ಮೂಲೆಯಿಂದ ಬಂದಿರುವ ನನ್ನ ಕಾನ್ಫಿಡೆನ್ಸ್, ಧೈರ್ಯಗಳನ್ನು ನೋಡಿ ಅವಳಿಗೆ ಬಹಳ ಆಶ್ಚರ್ಯವಾಗಿತ್ತು.
ಜೊತೆಗೆ ನನಗೂ.
*******************
ರಿಜಿಸ್ಟರ್ ಗಳಿಗೆ ಸಹಿ ಹಾಕಿ, ರೆಸ್ಯೂಮ್ ಕೊಟ್ಟು, ಕಿಲಕಿಲನೆ ನಡೆದಾಡುತ್ತಿರುವ ಹುಡುಗಿ-ಹುಡುಗರನ್ನು ನೋಡುತ್ತಾ ಒಂದಿಷ್ಟು ಹೊತ್ತು ಕಾದಮೇಲೆ 'ರಿಟನ್ ಟೆಸ್ಟ್' ಬರೆಯಲೆಂದು ನಮ್ಮನ್ನೆಲ್ಲ ಕೋಣೆಯೊಂದರೊಳಕ್ಕೆ ಕರೆದೊಯ್ದರು. ಆಗಷ್ಟೇ ಡಿಗ್ರಿ ಎಕ್ಸಾಮ್ ಬರೆದು ಬಂದಿದ್ದ ನನಗೆ ಆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದೇನೂ ದೊಡ್ಡ ವಿಷಯವಾಗಲಿಲ್ಲ. ಫಲಿತಾಂಶಕ್ಕಾಗಿ ಮತ್ತಷ್ಟು ಹೊತ್ತು ಕಾಯಿಸಿದರೂ ಕೊನೆಗೆ ಶುಭ ಸುದ್ದಿಯನ್ನೇ ಹೇಳಿ, ಊಟ ಮಾಡಿಕೊಂಡು ಬರುವಂತೆ ಸೂಚಿಸಿ ಕಳಿಸಿದರು. ಆಪರೇಷನ್ ಥಿಯೇಟರ್ ನ ಹೊರಗೆ ಕಾಯುವಂತೆ ಆತಂಕದಲ್ಲಿ ಕೂತಿದ್ದ ಅಕ್ಕನಿಗೆ ಈ ಶುಭಸುದ್ದಿ ತಿಳಿಸಿದ ನಂತರ ಇಬ್ಬರೂ ಊಟ ಮಾಡಲೆಂದು ಮೇಲ್ಮಹಡಿಯತ್ತ ಹೊರಟೆವು.
ಹುಡುಗರಂತೆ ಪ್ಯಾಂಟು-ಶರ್ಟು ತೊಟ್ಟ ಹುಡುಗಿಯರು, ಹುಡುಗಿಯರಂತೆ ಕಿವಿ ಚುಚ್ಚಿಸಿಕೊಂಡ ಹುಡುಗರು, ಅವರೆಲ್ಲ ನಡೆದಾಡುವ ಸ್ಟೈಲ್, ಕ್ಷಣಾರ್ಧದಲ್ಲಿ ಬೆರಳುಗಳನ್ನು ಕೀಬೋರ್ಡಿನ ತುಂಬಾ ಓಡಾಡಿಸುವ ಚಾಕಚಕ್ಯತೆ.. ಹೀಗೆ ಸುತ್ತಲಿನ ಪ್ರತಿಯೊಂದು ಸಂಗತಿಯನ್ನೂ ಮೊದಲ ಬಾರಿಗೆ ಕಣ್ತುಂಬಿಕೊಳ್ಳುತ್ತಿದ್ದ ನನಗೆ ಇದೂ ಸಹಾ ನಾವು ನಿಂತಿರುವ ಮಣ್ಣಿನ ಮೇಲೇ ಇರುವ ಒಂದು ಜಾಗ ಎಂದು ನಂಬುವುದಕ್ಕೆ ನಿಮಿಷಗಳೇ ಹಿಡಿದವು
"ಇನ್ನೊಂದು ಆರು ತಿಂಗಳು ಕಣೋ, ನೀನೂ ಹಿಂಗೇ ಆಗ್ತೀಯ ನೋಡ್ತಿರು"
ಅಕ್ಕ ಆಗಲೇ ಕನಸು ಕಾಣಲಾರಂಭಿಸಿಯಾಗಿತ್ತು. ನಾನೂ ಹೀಗೇ, ಒಂದು ಕಿವಿ ಚುಚ್ಚಿಸಿಕೊಂಡು, ಜೀನ್ಸು ಪ್ಯಾಂಟಿನ ಹುಡುಗಿಯೊಬ್ಬಳ ಜೊತೆ ಇಂಗ್ಲೀಷಿನಲ್ಲಿ ಹರಟುತ್ತಿರುವ ಚಿತ್ರವೊಂದು ನನ್ನ ಕಣ್ಮುಂದೆ ಹಾದುಹೋಯಿತು. ಊಟ ಮುಗಿಸಿ ಬಂದ ನನ್ನನ್ನು ಹದಿನಾರು ಜನರ ಗುಂಪೊಂದರಲ್ಲಿ ಸೇರಿಸಿ ಕೋಣೆಯೊಂದರೊಳಕ್ಕೆ ತುಂಬಿದರು. ಹೊರಜಗತ್ತಿನ ಗಾಳಿ-ಬೆಳಕಿನ ಸಣ್ಣ ಹನಿಯೂ ಇಲ್ಲದ ಆ ಹವಾನಿಯಂತ್ರಿತ ಕೋಣೆಯನ್ನು ನೋಡಿ ಯಾವುದೋ ಕಥೆಯಲ್ಲಿ ಓದಿದ್ದ ಹಿಟ್ಲರನ ಗ್ಯಾಸ್ ಚೇಂಬರ್ ನೆನಪಾಯಿತು. ಸುತ್ತಲಿದ್ದ ಎಲ್ಲರೂ ಜಗತ್ತಿನ ಗಂಭೀರತೆಯನ್ನೆಲ್ಲಾ ಅರ್ಧ ಗಂಟೆಯ ಮಟ್ಟಿಗೆ ಗುತ್ತಿಗೆ ಪಡೆದವರಂತೆ ಮುಖ ಬಿಗಿದುಕೊಂಡು ಕುಳಿತಿದ್ದರು. ಆಯತಾಕಾರದ ಟೇಬಲ್ ನ ಆಚೆ ಸಾಲಿನಲ್ಲಿ ನಾನು ಬೆಳಗ್ಗೆ ನೋಡಿದ್ದ ಹುಡುಗಿ, ನನಗೆ ಎದಿರಾಗಿ ಕುಳಿತಿದ್ದಳು. ಆಚೀಚೆ ನೋಡುತ್ತ ನನ್ನೆಡೆಗೊಮ್ಮೆ ನೋಡಿ ಪರಿಚಯದ ನಗೆ ನಕ್ಕಳು. ಕೆಲಸಕ್ಕೆ ಸೇರಿದ ಮೇಲೆ ಇವಳೇ ನನಗೆ ಮೊದಲ ಫ್ರೆಂಡಾಗಬಹುದೆಂದು ಕುಳಿತಲ್ಲೇ ಯೋಚಿಸಿದೆ.
"ಹಲೋ ಆಲ್. ಆಲ್ ಆಫ್ ಯು ಹ್ಯಾಡ್ ಯುವರ್ ಲಂಚ್?"
ನಗುತ್ತಾ ಒಳಬಂದ ಆಸಾಮಿ ನಮ್ಮೂರಿನ ಯಾರನ್ನೋ ಹೋಲುತ್ತಾನೆನ್ನಿಸಿತು. ಎಲ್ಲರೂ ನಾಲ್ಕೇ ನಾಲ್ಕು ಹಲ್ಲು ಬಿಟ್ಟು "ಹಲೋ ಸರ್" ಎಂದು ಮತ್ತೆ ಮುಖ ಬಿಗಿದುಕೊಂಡರು.
ಆಗ ಶುರುವಾಯಿತು ಗ್ರೂಪ್ ಡಿಸ್ಕಶನ್!
"ಭಾರತಕ್ಕೆ ಐಟಿಬಿಟಿ ಬೇಕೇ ಬೇಡವೇ? ಇದು ನಿಮ್ಮ ಈ ಹೊತ್ತಿನ ಡಿಸ್ಕಶನ್ ನ ವಿಷಯ."
ಅವನು ಅಷ್ಟಂದದ್ದೇ ತಡ, ಇಷ್ಟು ಹೊತ್ತು ಮುಖ ಬಿಮ್ಮನೆ ಮಾಡಿಕೊಂಡು ಕುಳಿತಿದ್ದವರೆಲ್ಲರೂ ಸಂಸತ್ತಿನಲ್ಲಿರುವ ರಾಜಕಾರಣಿಗಳ ಆತ್ಮಗಳನ್ನು ಮೈಮೇಲೆ ಬರಿಸಿಕೊಂಡವರಂತೆ ಮಾತನಾಡಲು ಶುರುವಿಟ್ಟುಕೊಂಡರು. ನನ್ನೆದುರೇ ಬೆಳಗ್ಗೆ ಫೈಲು ಅಪ್ಪಿಕೊಂಡು ಸಣ್ಣಗೆ ನಡುಗುತ್ತ ನಿಂತಿದ್ದ ಬೆಂಗಳೂರಿನ ಹುಡುಗಿ ಸಾಕ್ಷಾತ್ ಮಮತಾ ಬ್ಯಾನರ್ಜಿಯೂ ನಾಚುವಂತೆ ವಾದ ಮಾಡತೊಡಗಿದಳು. ಇವರನ್ನೇನಾದರೂ ಬಿಟ್ಟಿದ್ರೆ ಮೂರೇ ದಿನದಲ್ಲಿ ಭಾರತಕ್ಕೆ ಸ್ವಾತಂತ್ರ ತರುತ್ತಿದ್ದರೇನೋ ಎಂಬಂತೆ ಮಾತನಾಡಿದರು ಎಲ್ಲರೂ. ಒಬ್ಬರ ಮಾತು ಮುಗಿಯುವುದರೊಳಗೆ ಇನ್ನೊಬ್ಬರದ್ದು ಶುರುವಾಗುತ್ತಿತ್ತು. ಅದಾದಕೂಡಲೇ ಮತ್ತೊಬ್ಬರು.. ನಾನು ಮಾತ್ರ ಕಿವಿಗೆ ಹೆಡ್ ಫೋನ್ ತೊಟ್ಟ ಸದನದ ಸ್ಪೀಕರ್'ನಂತೆ ಬಾಯಿತೆರದುಕೊಂಡು ನೋಡುತ್ತಲೇ ಇದ್ದೆ.
ಭಾರತಕ್ಕೆ ಐಟಿ ಬೇಕು ಅಂದೋರಿಗೆ ಕೆಲಸ ಕೊಡ್ತಾರಾ ಅಥವಾ ಬೇಡ ಅಂದೋರಿಗಾ? ಐಟಿ ಕಂಪನಿಯ ಕೆಲಸಕ್ಕೇ ಬಂದುಕೊಂಡು ಐಟಿ ಇಂಡಸ್ಟ್ರಿಯೇ ಬೇಡ ಅನ್ನೋ ಮೂರ್ಖನಿಗೆ ಯಾರು ತಾನೇ ಕೆಲಸ ಕೊಡ್ತಾರೆ? ಅಥವಾ ಐಟಿ ಕೆಲಸಕ್ಕೇ ಬಂದು ಐಟಿಯೇ ಬೇಡ ಅನ್ನೋ ಭೂಪ ಅಂತ ಮೆಚ್ಚಿ ಕೆಲಸ ಕೊಟ್ಟು ಬಿಟ್ರೆ?
ಐಟಿ ಭಾರತಕ್ಕೆ ಬೇಕು ಅನ್ಲಾ, ಬೇಡ ಅನ್ಲಾ?
ಈ ಮಿಲಿಯನ್ ಡಾಲರ್ ಪ್ರೆಶ್ನೆಗೆ ನಾನು ಉತ್ತರ ಹುಡುಕಿಕೊಳ್ಳುವಷ್ಟರಲ್ಲಿ ದಿವ್ಯವಾಣಿಯೊಂದು ಮೊಳಗಿತು:
"ಡಿಸ್ಕಶನ್ ಈಸ್ ಓವರ್!"
ಡಿಸ್ಕಶನ್ ಕೋಣೆಯಿಂದ ನಗುತ್ತಾ ಒಬ್ಬನೇ ಹೊರಬಂದ ನನ್ನನ್ನು ಅಕ್ಕ ಉದ್ವೇಗದಿಂದ ಪ್ರಶ್ನಿಸಿದಳು:
"ಒಬ್ನೇ ಬರ್ತಿದೀಯಲ್ಲೋ? ಏನಾಯ್ತೋ? ನೀನೊಬ್ನೇ ಸೆಲೆಕ್ಟ್ ಆದ್ಯಾ?"
ನಾನು ಮತ್ತೂ ನಗುತ್ತಲೇ ಹೇಳಿದೆ:
"ನಡಿ. ಮನೆಗೆ ಹೋಗೋಣ. ನಾನೊಬ್ನೇ ರಿಜೆಕ್ಟ್ ಆದೆ!"
ಆಕಾಶವೆನ್ನುವ ಆಕಾಶ ಕಳಚಿ ಎದುರಿದ್ದ ಅಕ್ಕನ ತಲೆಯಮೇಲೆ ಧಡಾಲ್ಲನೆ ಬಿತ್ತು.
"ಅದನ್ನ ಇಷ್ಟೊಂದು ನಕ್ಕೊಂಡು ಹೇಳ್ತೀಯಲ್ಲೋ?!" ಅಕ್ಕ ಕುಸಿದಂತೆ ಕುಳಿತಳು.
ಕೆಲವೊಮ್ಮೆ ನಗೆಯೆನ್ನುವುದು ನಮ್ಮ ಅಂತರಾಳದಲ್ಲಿ ನಡೆಯುತ್ತಿರುವ ಹೊಯ್ದಾಟಗಳ ತದ್ವಿರುದ್ಧ ರೂಪವಾಗಿ, ಆದ ಮುಖಭಂಗವನ್ನು ಮರೆಮಾಚುವ ಮುಖವಾಡವಾಗಿ, ಕುಸಿದ ನಂಬಿಕೆಯ ಗಾಯವೊಂದನ್ನು ಕಾಣದಂತೆ ಮಾಡುವ ತೇಪೆಯಾಗಿ ಮುಖದ ಮೇಲೆ ಮೂಡುತ್ತದೆನ್ನುವುದು ನನಗೆ ಅರ್ಥವಾದದ್ದೇ ಆಗ.
-ವಿನಾಯಕ ಅರಳಸುರಳಿ.

ಸೋಮವಾರ, ಜುಲೈ 2, 2018

ಬೆಂಗಳೂರಿಗೆ ಬಂದಿದ್ದು-1

ಇದನ್ನೆಲ್ಲ ಯಾಕೆ ಬರೆಯುತ್ತಿದ್ದೇನಂತ ನನಗೂ ಗೊತ್ತಿಲ್ಲ. ಏನನ್ನೂ ಬರೆಯದೇ ಮೂರು ತಿಂಗಳಾಗಿದೆ. ಏನೇ ಬರೆದರೂ ಅವರಿಗೆ ಏನನಿಸುತ್ತದೋ, ಇವರು ಏನಂತ ಆಡಿಕೊಳ್ತಾರೋ, ಇದರಲದಲಿ ಕ್ವಾಲಿಟಿ ಇದೆಯೋ ಇಲ್ವೋ ಅನ್ನುವ ಇನ್ನೂ ನುಂತಾದ ಅನುಮಾನಗಳು ಅದೆಲ್ಲಿಂದಲೋ ಬಂದು ಮನಸ್ಸನ್ನು ಹೊಕ್ಕಿಕೊಂಡು ಏನೂ ಬರೆಯಲಾಗದೆ ಓದ್ದಾಡಿಹೋಗಿದ್ದೇನೆ‌. ಬಹುಷಃ ಆ ತಳಮಳವನ್ನು ಓಡಿಸಲಿಕ್ಕೆ ಹಾಗೂ ಯಾರೂ ಓದದಿದ್ದರೂ ಕೇವಲ ನನಗೋಸ್ಕರ ಬರೆಯುವ ಆತ್ಮ ಸ್ಥೈರ್ಯವೊಂದನ್ನು ಬೆಳೆಸಿಕೊಳ್ಳಲಿಕ್ಕೆಂದೇ ಇದನ್ನು ಬರೆಯುತ್ತಿದ್ದೇನೆ ಅಥವಾ ಹಾಗಂತ ನಂಬಿಕೊಂಡಿದ್ದೇನೆ. ಅದಕ್ಕೆ ಸರಿಯಾಗಿ, ಇಂದಿಗೆ ನಾನು ಬೆಂಗಳೂರಿಗೆ ಬಂದು ಆರು ವರ್ಷ ತುಂಬಿದೆ. ಅದನ್ನೇ ಹೆಳೆಯಾಗಿಟ್ಟುಕೊಂಡು ಏನೋ ಒಂದು ಬರೆಯುತ್ತಿದ್ದೇನೆ‌.

ನೀವ್ಯಾರೂ ಓದುವ ಸಾಹಸ ಮಾಡುವುದಿಲ್ಲವೆನ್ನುವ ಧೈರ್ಯದ ಮೇಲೆ...

                        *****************

ಆರು ವರ್ಷಗಳು!

ಅದು ಹೇಗೆ ಕಳೆದವೋ ಗೊತ್ತಿಲ್ಲ. ನಿನ್ನೆ-ಮೊನ್ನೆಯಷ್ಟೇ ಊರು ಬಿಟ್ಟಿದ್ದೆ.. ಎಸ್ಸಾರೆಸ್ ನ ಸೀಟಿನಲ್ಲಿ ಬಾರದ ನಿದ್ರೆಗೆ ತೂಕಡಿಸಿದ್ದೆ. ಮೆಜಸ್ಟಿಕ್ಕೆನ್ನುವ ಎಂದೂಕರಗದ ಜನದಟ್ಟಣೆಯಲ್ಲಿ ಕಂಗಾಲಾಗಿ ನಿಂತಿದ್ದೆ.. ಆಗಲೇ ಆರು ವರ್ಷವಾಗಿಹೋಯ್ತೇ? ಬದುಕಿನ ಬಟ್ಟಲಿನಿಂದ ಆರು ವರ್ಷಗಳೆಂಬ ಅತ್ಯಮೂಲ್ಯ ಆರು ಲೋಟದಷ್ಟು ಪನ್ನೀರು ಸುರಿದು ಹೋದದ್ದು ಗೊತ್ತೇ ಆಗಲಿಲ್ಲವಲ್ಲ?

ಅದು 2012ರ ಜೂನ್ ತಿಂಗಳ ಮೂರನೇ ವಾರ. ಆಗಿನ್ನೂ ಡಿಗ್ರಿ ಪರೀಕ್ಷೆ ಮುಗಿಸಿ ಒಂದು ತಿಂಗಳು ಕಳೆದಿತ್ತಷ್ಟೇ. ಗೆಳೆಯರೆಲ್ಲ ಎಲ್ಲೆಲ್ಲೋ ನಡೆಯುವ ಉದ್ಯೋಗ ಮೇಳಗಳಿಗೆ ನುಗ್ಗುತ್ತಾ, ಬೆಂಗಳೂರಿನಲ್ಲಿ ತಮಗಿರುವ ಪ್ರಭಾವಗಳ ಪಟ್ಟಿ ಮಾಡುತ್ತಾ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ನಡೆಯುವ ಇಂಟರ್ವ್ಯೂಗಳ ಕುರಿತಾಗಿ ರೋಚಕ ಕಥೆ ಹೇಳುತ್ತಾ ಭಯಹುಟ್ಟಿಸುತ್ತಿದ್ದರೆ ನಾನು ಮಾತ್ರ ಯಾವ ಇಂಟರ್ವ್ಯೂಗೂ ಹೋಗದೇ ಅಮ್ಮ ಮಾಡಿಹಾಕಿದ ಚಟ್ಣಿಯಲ್ಲಿ ಎಷ್ಟು ಉಪ್ಪು ಕಡಿಮೆಯಾಗಿದೆಯೆಂಬುದನ್ನು ಕಂಡುಹಿಡಿಯುತ್ತಾ ಮನೆಯಲ್ಲೇ ಕುಳಿತುಕೊಂಡಿದ್ದೆ. ಮನಸ್ಸಿನಲ್ಲಿ ಆತಂಕದ ಹೊರತು ಮತ್ತೇನೂ ಇರಲಿಲ್ಲ. ಎಂಕಾಂ ಮಾಡೋಣವೆನ್ನುವ ಅರೆಮನದ ಯೋಚನೆಗೆ ಅಪ್ಪನ ಕೂಗಾಟ ಆಗಷ್ಟೇ ಬ್ರೇಕ್ ಹಾಕಿತ್ತು.

ಆಗ ಬಂದಿತ್ತು ಅಕ್ಕನ ಕಾಲ್. "ಒರಾಕಲ್ ಅಂತ ದೊಡ್ಡ ಕಂಪನಿ ಕಣೋ‌. ಅದೆಷ್ಟೋ ದೇಶದಲ್ಲಿ ಇದರ ಬ್ರಾಂಚ್ ಗಳಿದಾವಂತೆ. ಸ್ಟಾರ್ಟಿಂಗೇ ಹದಿನೈದು ಸಾವಿರ ಸಂಬಳ ಕೊಡ್ತಾರೆ. ನನ್ನ ಫ್ರೆಂಡ್ ರೇಖ ಅಂತ... ಅಲ್ಲೇ ಕೆಲಸ ಮಾಡ್ಕೊಂಡಿದಾಳೆ. ನಿಂಗೆ ಖಂಡಿತ ಕೆಲಸ ಆಗತ್ತೆ ಅಂದಿದಾಳೆ. ನೀನು ನಾಡಿದ್ದೇ ಹೊರಟು ಬಾ!"

ನಂಬಿದರೆ ನಂಬಿ, ಬಿಟ್ಟರೆ ಬಿಡಿ; ಅದೇ ದಿನ ಸಂಜೆ ಗುಡ್ಡದ ತುದಿಯಲ್ಲಿ ಒಬ್ಬನೇ ನಿಂತುಕೊಂಡು ತುಸು ಜೋರಾಗೇ ಹಾಡಿಕೊಂಡಿದ್ದೆ:

"ಸಿಕ್ಕಿದೇ ಸಿಕ್ಕಿದೇ.. ನಂಗೂ ಲೈಫು ಸಿಕ್ಕಿದೆ...
ಲಕ್ಕಿದೇ ಲಕ್ಕಿದೇ.. ನಂಗೂ ಒಂದು ಲುಕ್ಕಿದೆ!"

ಸ್ಟೆಪ್ಪು ಹಾಕೊದೊಂದೇ ಬಾಕಿ. ಅದಾಗಿ ಎರೆಡನೇ ದಿನ ರಾತ್ರಿಗೆಲ್ಲ ಮೂರು ಜೊತೆ ಬಟ್ಟೆ ಹಾಗೂ ಏಳ್ನೂರೈವತ್ತು ರೂಪಾಯಿಗಳ 'ಬೃಹತ್' ಆಸ್ತಿಯನ್ನು ಬ್ಯಾಗಿಗೆ ತುಂಬಿಕೊಂಡು ಬೆಂಗಳೂರಿನ ಬಸ್ಸು ಹತ್ತಿದ್ದೆ.

ಈಗ ಯೋಚಿಸುತ್ತೇನೆ. ಏನಾಗುತ್ತಿತ್ತು ಊರಿನಲ್ಲೇ ಇದ್ದಿದ್ದರೆ? ಅದೇ ತೋಟ, ಆಳು ಬಾರದ ದಿನ "ಉದ್ರು ಹೆಕ್ಕೊಡು ಬಾ ಮಗಾ" ಎಂದು ಕರೆಯುತ್ತಿದ್ದ ಅಪ್ಪ, "ತರಕಾರಿ ತಂದ್ಕೊಡೋ" ಎನ್ನುವ ಅಮ್ಮ, ಇವರಿಬ್ಬರ ಮಾತಿಗೂ ಕಿಂಚಿತ್ ಬೆಲೆ ಕೊಡದೆ ಅಬ್ಬೇಪಾರಿಯಂತೆ  ಓಡಾಡಿಕೊಂಡಿರುವ ಅಹಂಕಾರದ ನಾನು, "ಇವನ ಹಣೆಬರ ಇಷ್ಟೇ" ಎಂದು ಆಡಿಕೊಳ್ಳುವ ಜನ, ಬೆಂಗಳೂರಿನ ಬಸ್ಸಿನಿಂದಿಳಿದು ನನ್ನನ್ನು ನೋಡಿದರೂ ನೋಡದಂತೆ ನಡೆದು ಹೋಗುವ ಹಳೇ ಹುಡುಗಿ, ಬಹಳ ಪ್ರಯಾಸದ ನಂತರ ನಮ್ಮೂರಲ್ಲೇ ಸಿಗುತ್ತಿದ್ದ ಚಿಕ್ಕದೊಂದು ಕೆಲಸ, ಬಂದರೂ ಬಾರದಂತಿರುತ್ತಿದ್ದ ಸಂಬಳ...

ಬದುಕೆಂಬ ಬದುಕು ಹೇಗೆ ಯಾವ ಸೂಚನೆಯೂ ಇಲ್ಲದೆ ಮಹತ್ವದ 'ಟ್ರ್ಯಾಕ್' ಒಂದಕ್ಕೆ ದಾಟಿಕೊಂಡುಬಿಟ್ಟಿತೆಂಬುದನ್ನು ನೆನೆದರೆ ಈಗ ಆಶ್ಚರ್ಯವೆನಿಸುತ್ತದೆ. ಹಾಗಂತ ಇಂದೇನೋ ಭಾರೀ ದೊಡ್ಡ ಸಾಧನೆ ಮಾಡಿದ ಜ್ಞಾನ-ವೇದಾಂತ ಚಿಂತಾಮಣಿಯೋ, ಮತ್ಯಾವ ಕೋತಪ್ನಾಯ್ಕನೋ ಆಗಿದ್ದೇನೆಂದು ಹೇಳುತ್ತಿಲ್ಲ. ಆದರೆ ಕನಿಷ್ಠ ಅಪ್ಪ-ಅಮ್ಮನೊಂದಿಗೆ ಪ್ರೀತಿಯಿಂದ ಎರೆಡು ಮಾತನಾಡುವ, ಅವರ ಬಗ್ಗೆ, ಮನೆಯ ಬಗ್ಗೆ ಜವಾಬ್ದಾರಿಯಿಂದ ಎರೆಡು ನಿಮಿಷ ಯೋಚಿಸುವ, ನನ್ನೂರಿನ, ನನ್ನ ಜನರ ಮಹತ್ವವನ್ನು ಸ್ವಲ್ಪವಾದರೂ ಅರ್ಥ ಮಾಡಿಕೊಂಡಿರುವ, ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಬದುಕನ್ನು ನಾನೇ ನಡೆಸಬಲ್ಲ ಮನುಷ್ಯನಾಗಿದ್ದೇನೆಂದರೆ ಅದಕ್ಕೆ ಅಂದು ಬೆಂಗಳೂರಿಗೆ ಹೊರಟು ಬಂದ ಆ ಘಳಿಗೆಯೇ ಕಾರಣ.

ಈಗ ಕಥೆಗೆ ಮರಳಿ ಬರೋಣ. ಬಸ್ಸು ಶಹರದತ್ತ ಓಡುತ್ತಿತ್ತು‌. ಊರ ಹೊರಗಿನ ಗುಡ್ಡಗಳ ಹಿಂದೆ ಸೂರ್ಯ ಮುಳುಗಿದ್ದನ್ನು ಬಸ್ಸಿನ ಕಿಟಕಿಯಲ್ಲಿ ನೋಡುವಾಗ ಕಣ್ತುಂಬಿ ಬಂದಿತ್ತಾ? ಸರಿಯಾಗಿ ನೆನಪಿಲ್ಲ. ಆದರೆ ಇನ್ನೂ ಸೂರ್ಯ ಹುಟ್ಟುವ ಮೊದಲೇ ನಮ್ಮೂರ ನಡು ಮಧ್ಯಾಹ್ನದ ತುಂಬು ಸಂತೆಯಷ್ಟು ದಟ್ಟವಾಗಿ, ಬೀದಿದೀಪಗಳ ಬೆಳಕಿನಲ್ಲಿ ಹಗಲಲ್ಲದ ಹಗಲಾಗಿ ಜಗಮಗಿಸುತ್ತಾ ನಿಂತಿದ್ದ ಮೆಜಸ್ಟಿಕ್ನಲ್ಲಿ ನನ್ನನ್ನಿಳಿಸಿದ ಬಸ್ಸು ಹೊರಟೇ ಹೋದಾಗ ಅದೇ ಕಣ್ಣಲ್ಲಿ ಭಯ ಉಕ್ಕಿ ಬಂದಿದ್ದು ಮಾತ್ರ ಸುಳ್ಳಲ್ಲ‌. ನನ್ನನ್ನು 'ರಿಸೀವ್' ಮಾಡಲು ಭಾವನ ಜೊತೆ ಕಾರುಹತ್ತಿ ಬಂದಿದ್ದ ಅಕ್ಕನಂತೂ ನನಗಿಂತ ಅರ್ಧ ಕೆಜಿ ಜಾಸ್ತಿಯೇ ಆತಂಕಗೊಂಡಿದ್ದಳು. "ಸಿಟಿ ನೋಡದವನು. ಎಲ್ಲಿ ಕಳೆದು ಗಿಳೆದು ಹೋದಾನೋ. ಯಾವ ಮಕ್ಕಳ ಕಳ್ಳ ಅವನನ್ನು ಎತ್ತಕೊಂಡು ಹೋಗುತ್ತಾನೋ?" ಎಂಬ ಭಯದಲ್ಲೇ ರಾತ್ರಿಯಿಡೀ ನಿದ್ರೆಯಿಲ್ಲದೇ ಕಳೆದಿದ್ದಳು.
(ನಾವು ಎಷ್ಟೇ ಬೆಳೆದು ಕಳ್ನನ್ ಮಕ್ಳಾದ್ರೂ ಈ ಅಮ್ಮ, ಅಕ್ಕಂದಿರ ಕಣ್ಣಲ್ಲಿ ಮಾತ್ರ ಚಿಕ್ಕ ಮಕ್ಕಳೇ!) ನಾನು ಬೆಂಗಳೂರು ತಲುಪುವ ಅರ್ಧ ಗಂಟೆ ಮೊದಲೇ ಭಾವನನ್ನು ಎಬ್ಬಿಸಿಕೊಂಡು ಮೆಜಸ್ಟಿಕ್ಕಿಗೆ ಬಂದು ಕಾಯುತ್ತಾ  ಕುಳಿತುಬಿಟ್ಟಿದ್ದಳು, ಅಕ್ಕನೆಂಬ ಆ ಎರೆಡನೇ ಅಮ್ಮ.

                       ***********

"ಎಲ್ಲಿದ್ದೀಯ ಪುಟ್ಟ?"

ಹಾಗಂತ ಕೇಳಿದ ಭಾವನಿಗೆ ಹೇಳುವದಕ್ಕೆ ನನ್ನ ಕಣ್ಣೆದುರು ನೂರು ಉತ್ತರಗಳಿದ್ದವು. "ಇದೊಂದು ದೊಡ್ಡ ರೋಡು.. ಯಾಕೋ ಗೊತ್ತಿಲ್ಲ, ಇಲ್ಲಿ ಕಾರು, ಬಸ್ಸುಗಳೆಲ್ಲ ನಿಂತು ನಿಂತು ಹೋಗ್ತಿದಾವೆ.. ಎದುರಿಗೊಂದು ದೊಡ್ಡ ಬಿಲ್ಡಿಂಗಿದೆ... ಪಕ್ಕದಲ್ಲೇ ಒಂದು ಟೀ ಅಂಗಡಿಯಿದೆ... ಅಲ್ಲಿ ಸುಮಾರು ಜನ ಕಾಪಿ ಕುಡಿಯುತ್ತಿದ್ದಾರೆ... ಮುಂದುಗಡೆಯೇ ಒಂದು ಕರ್ನಾಟಕ ಬ್ಯಾಂಕ್ ಎಟಿಎಂ ಇದೆ..."

ನಾನು ಕೊಟ್ಟ ಯಾವ ಸುಳಿವೂ ಭಾವನಿಗೆ ನಾನಿರುವ ನಿರ್ದಿಷ್ಟ ಜಾಗ ಯಾವುದೆಂದು ಅರ್ಥಮಾಡಿಸಲಿಕ್ಕೆ ಸಾಕಾಗುವಂತಿರಲಿಲ್ಲ. ಅಳೆದರೆ ಅರ್ಧ ಕಿಲೋಮೀಟರ್ ಇರಬಹುದಾದ ನನ್ನ ತೀರ್ಥಹಳ್ಳಿ ಪೇಟೆಯಲ್ಲಾದರೆ ಈ ಟೀ ಅಂಗಡಿ, ಎಟಿಎಂಗಳೆಲ್ಲ ದೊಡ್ಡ ದೊಡ್ಡ ಲ್ಯಾಂಡ್ ಮಾರ್ಕ್ ಗಳೇ. ಆದರೆ ಈ ಬೆಂಗಳೂರಿನಲ್ಲಿ? ಅಂಥವು ಮಾರಿಗೆ ಮೂರು ಸಿಗುತ್ತವೆ. ಅದಕ್ಕೇ ಇಲ್ಲಿ ಬಸ್ ಸ್ಟ್ಯಾಂಡ್, ವಾಟರ್ ಟ್ಯಾಂಕ್ ಮುಂತಾದ ದೊಡ್ಡದೊಡ್ಡವನ್ನೇ ಗುರುತಾಗಿ ಹೇಳಬೇಕು!

ಅಂತೂ ಇಂತೂ ಅದು ಹೇಗೋ ನಾನಿದ್ದ ಜಾಗವನ್ನು ಪತ್ತೆಹಚ್ಚಿದ ಭಾವ ಮೃದುವಾಗಿ ಹಾಗೆಂದು ಹೇಳಿದ್ದರು. ಹಾಗೆ ಬೆಂಗಳೂರು ಮೊದಲ ಹೆಜ್ಜೆಯಿಂದಲೇ ದಡ್ಡ ಶಿಖಾಮಣಿಯಾದ ನನಗೆ ಪಾಠ ಮಾಡಲು ಶುರುವಿಟ್ಟುಕೊಂಡಿತ್ತು.

                     ************

"ತಿಂಗಳಿಗೆ ಹದಿನೈದು ಸಾವಿರ!"

ಅಷ್ಟು ಹಣವನ್ನು ಯಾವ್ಯಾವ ಸಂದಿಯಲ್ಲಿ ಮುಚ್ಚಿಡಬೇಕೆಂದು ಯೋಚಿಸಿ ಯೋಚಿಸಿಯೇ ನಾನು ಸುಸ್ತಾಗಿದ್ದೆ. "ನಂಗೆ ತಿಂಗ್ಳಿಗೆ ಹತ್ತು ಸಾವಿರ ಬಂದ್ರೆ ಸಾಕು. ಅರಾಮಾಗಿರ್ತೀನಿ" ಎಂದು ಶುದ್ಧ ಬೋಳೇ ಶಂಕರನಂತೆ ಹೇಳಿಕೊಂಡು ತಿರುಗುತ್ತಿದ್ದವನು ನಾನು. ಈಗ ಅದರ ಮೇಲೆ ಮತೈದು ಸಾವಿರ ಸಿಗಲಿದೆಯೆಂಬ ಕಲ್ಪನೆಗೇ ನಾನು ಶ್ರೀಮಂತರ ಸಾಲಿನಲ್ಲಿ ಕೂತಾಗಿತ್ತು‌. ಅದೂ ಅಲ್ಲದೆ ನನಗಿದ್ದ ಇನ್ನೊಂದು ಪೆದ್ದ ನಂಬಿಕೆಯೆಂದರೆ ಒರಾಕಲ್ ನಲ್ಲಿ ನನಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂಬುದು. ಅಕ್ಕ ಈಗಾಗಲೇ ತನ್ನ ಗೆಳತಿಗೆ ಹೇಳಿಟ್ಟಿದ್ದಾಳೆ‌. ಅವಳು ಅದೆಂತದೋ ಹೆಸರಿನ ಆ ದೊಡ್ಡ ಕಂಪನಿಯ ಸೀಟೊಂದರ ಮೇಲೆ ಕರ್ಚೀಫು ಹಾಕಿ ಅದನ್ನು ನನಗಾಗೇ ಕಾದಿರಿಸಿದ್ದಾಳೆ. ನಾನು ನೇರ ಹೋಗಿ ಅಲ್ಲಿ ಕೂರುವುದೊಂದೇ ಬಾಕಿ!

ನಮ್ಮೂರಿನ ಗುರುಶಕ್ತಿ ಬಸ್ಸಿನಲ್ಲಿ ಸೀಟು ಹಿಡಿದಷ್ಟೇ ಸುಲಭಕ್ಕೆ ಒರಾಕಲ್ ಎನ್ನುವ ಭಾರೀ ಎಂಎನ್ಸೀಯೊಂದರ ನೌಕರಿಯನ್ನೂ ಹಿಡಿದುಬಿಡಬಹುದೆಂದು ನಾನಂದುಕೊಂಡಿದ್ದರಲ್ಲಿ ನನ್ನ ತಪ್ಪೇನೂ ಇರಲಿಲ್ಲ. ಏಕೆಂದರೆ ಸಾಕ್ಷಾತ್ ಅಕ್ಕನೇ
ಅಂಥಾದ್ದೊಂದು ನಂಬಿಕೆ ಬರುವಂಥಾ ಧಾಟಿಯಲ್ಲಿ ಮಾತಾಡಿದ್ದಳು. ಹೀಗೆ ನೌಕರಿ ಸಿಗುವ ಮೊದಲೇ ಸಂಬಳ ಇಡಲಿಕ್ಕೆ ತಿಜೋರಿ ಖರೀದಿಸುವಂತಹಾ ಮೂರ್ಖ ಓವರ್ ಕಾ‌ನ್ಫಿಡೆನ್ಸೊಂದು ನಾನು ಬೆಂಗಳೂರಿಗೆ ಹೊರಡುವಾಗಲೇ ನನ್ನೊಳಗೆ ಸೇರಿಕೊಂಡುಬಿಟ್ಟಿತ್ತು. ಬಹುಷಃ ಅಂಥಾದ್ದೊಂದು ಅತಿಯಾದ ಆತ್ಮವಿಶ್ವಾಸವಿಲ್ಲದೇ ಹೋಗಿದ್ದರೆ  ನಾನು ಬೆಂಗಳೂರಿಗೆ ಬರುತ್ತಲೇ ಇರಲಿಲ್ಲವೋ ಏನೋ? ಅದು ಏನೇ ಆದರೂ ಈಗಾಗಲೇ ಕರ್ಚೀಫು ಹಾಸಿ ಕಾಯ್ದಿರಿಸಿರುವ ಸಿಂಹಾಸನಕ್ಕೆ ಪಟ್ಟಾಭಿಷೇಕದ ಶಾಸ್ತ್ರ ಮಾಡಿ ಮುಗಿಸಲೆಂದು ನಾನು ಅಕ್ಕ ಹೊರಟೆವು. ಆ ಪಟ್ಟಾಭಿಷೇಕದ ಹೆಸರೇ

"ಇಂಟರ್ವ್ಯೂ!"

ಜೀವನದ ಮೊಟ್ಟಮೊದಲ ಇಂಟರ್ವ್ಯೂ ಅನ್ನು ನಾನು ಎದುರಿಸಿದ್ದು ಬಲು ತಮಾಷೆಯ ಘಟನೆ.

-ವಿನಾಯಕ ಅರಳಸುರಳಿ.

ಗುರುವಾರ, ಡಿಸೆಂಬರ್ 14, 2017

ಪರಮೇಶಿ ಪರಾಕ್ರಮ

ಪರಮೇಶಿಗೆ ಪತ್ತೇದಾರಿ ಕಾದಂಬರಿಗಳೆಂದರೆ ಇನ್ನಿಲ್ಲದ ಹುಚ್ಚು. ತನ್ನ ಚಾಣಾಕ್ಷ ಬುದ್ಧಿಯಿಂದ ಖಳರ ಜೊತೆಗೆ ಸೆಣೆಸುತ್ತಾ, ಕೊಲೆಗಾರನನ್ನು ಸೆರೆಹಿಡಿಯುತ್ತಾ, ನಾಯಕಿಯನ್ನು ಇಂಪ್ರೆಸ್ ಮಾಡುವ ನಾಯಕನೊಂದಿಗೆ ತನ್ನನ್ನು ಹೋಲಿಸಿಕೊಂಡು ಹಗಲುಗನಸು ಕಾಣುವುದು ಪರಮೇಶಿಯ ನೆಚ್ಚಿನ ಅಭ್ಯಾಸಗಳಲ್ಲೊಂದು. ಬನೀನು ತೊಟ್ಟ ಬೇತಾಳದಂತಿರುವ ತನ್ನ ಭುಜಬಲದ ಮೇಲೆ ಅವನಿಗೊಂದು ತೆರನಾದ ಅಭಿಮಾನ. ಸಣ್ಣವನಿದ್ದಾಗ ತನಗಿಂತ ನಾಲ್ಕುಪಟ್ಟು ದಪ್ಪವಿದ್ದ ಕೋದಂಡನೊಂದಿಗೆ ಹೇಗೆ ಸೆಣೆಸಿದ್ದನೆನ್ನುವುದನ್ನು ಈಗಲೂ ನೆನಪಿಸಿಕೊಂಡು ಮೀಸೆ ತಿರುವಿಕೊಳ್ಳುವ ಪರಮೇಶಿ ಸದಾ ಚಿಕ್ಕ ತೋಳಿನ, ಮೈಗೆ ಅಂಟಿಕೊಂಡಂತಿರುವ ಬಟ್ಟೆಗಳನ್ನೇ ಧರಿಸುತ್ತಾನೆ‌. ಕನ್ನಡಿ ಕಂಡರೆ ಸಾಕು, ಪರಮೇಶಿಯ ಅಂಗಿ ಅವನ ಮೈಮೇಲೆ ನಿಲ್ಲುವುದಿಲ್ಲ. ಹಲ್ಮಟ್ಟೆ ಕಚ್ಚಿಹಿಡಿದು, ವಾರಗಳ ಹಿಂದೆ ಒಣಗಿಹೋದ ನುಗ್ಗೇಕಾಯಿಯಂತಿರುವ ತನ್ನ ಮಾಂಸಖಂಡಗಳನ್ನು ಬಿಗಿಗೊಳಸಿ "ಹೂಂ" ಎಂದು ಹೂಂಕರಿಸುತ್ತಾನೆ. ಇನ್ನೇನು ಮುರಿದು ಹೋಗುವಂತಿರುವ ಅವನ ಮೂಳೆಗಳನ್ನು ಕಂಡ ಕನ್ನಡಿ ಗಡಗಡನೆ ನಡುಗುತ್ತದೆ.

ಊರಿನಲ್ಲಿ ಡಿಗ್ರಿ ಓದುತ್ತಿದ್ದ ದಿನಗಳಲ್ಲಿ ಮನೆಯಲ್ಲಿದ್ದ ತೂಕದ ಕಲ್ಲು, ಕಬ್ಬಿಣದ ಸರಳೇ ಮುಂತಾದ ಭಾರದ ವಸ್ತುಗಳನ್ನೆಲ್ಲ ಹೇಗ್ಹೇಗೋ ಎತ್ತಿಳಿಸಿ ವ್ಯಾಯಾಮ ಮಾಡುತ್ತಾ ಮನೆಯವರನ್ನೆಲ್ಲ ಭಯಬೀಳಿಸುತ್ತಿದ್ದ ಪರಮೇಶಿ  ಕಳೆದ ಆರು ತಿಂಗಳಿಂದ ಪ್ರತಿದಿನ ಜಿಮ್'ಗೆ ಹೋಗುತ್ತಿದ್ದಾನೆ. ಇವನ ದೇಹದಾರ್ಢ್ಯವನ್ನು ಹೆಚ್ಚಿಸಬಲ್ಲ ಯಾವ ಉಪಕರಣವೂ ಅಲ್ಲಿಲ್ಲವೆನ್ನುವುದು ಬೇರೆ ವಿಷಯ ಬಿಡಿ. ಅಲ್ಲಿ ಮೊದಲ ದಿನ ಅಂಗಿ ಕಳಚಿದಾಗ ಇವನ ಡಯೆಟ್ ಮಾಡದೇ ಬಂದಿರುವ ಸಿಕ್ಸ್ ಪ್ಯಾಕನ್ನು ನೋಡಿ ಟ್ರೈನರ್ ಕೂಡಾ ಬೆಚ್ಚಿಬಿದ್ದದ್ದು ಈಗ ಇತಿಹಾಸ. ಅಲ್ಲದೇ ಸಂಜೆ ತನ್ನ ರೂಮಿನೆದುರಿಗಿನ ಪಾರ್ಕಿನಲ್ಲಿ ಮಕ್ಕಳಿಗೆ ಹೇಳಿಕೊಡುವ ಕರಾಟೆಯ ಪಟ್ಟು-ಪೆಟ್ಟುಗಳನ್ನು ಪರಮೇಶಿ ಆಸಕ್ತಿಯಿಂದ ನೋಡಿಕೊಳ್ಳುತ್ತಾನೆ. ರೂಮ್ ಮೇಟ್ ಇಲ್ಲದ ಹೊತ್ತಿನಲ್ಲಿ 'ಕ್ಯೂ ಯಾ ಹೈ....' ಎಂಬ ಭಯಾನಕ ಕೂಗಿನೊಂದಿಗೆ ಕರಾಟೆ ಅಭ್ಯಾಸಕ್ಕೆ ತೊಡಗಿದನೆಂದರೆ ಗೋಡೆಯ ಮೇಲಿರುವ ಹಲ್ಲಿ, ಜೇಡ, ಜಿರಳೆಗಳೆಲ್ಲ ಬಿದ್ದು ಓಡತೊಡಗುತ್ತವೆ‌.

ಪರಮೇಶಿಯ ಸಣಕಲು ದೇಹದ ಹಿಂದಿರುವ ಅಗಾಧ ಶಕ್ತಿಯ ಅರಿವಿಲ್ಲದ ಗೆಳೆಯರು ಅವನನ್ನು ಹಾಸ್ಯಮಾಡುತ್ತಾರೆ. ಆದರೆ ಇವತ್ತಲ್ಲ ನಾಳೆ ತನ್ನೊಳಗಿರುವ ಸಿಂಹ ಆಚೆಗೆ ಬರುತ್ತದೆನ್ನುವುದು ಪರಮೇಶಿಗೆ ಮಾತ್ರ ಗೊತ್ತಿರುವ ಸತ್ಯ. ತನ್ನ ಕಲ್ಪನೆಯಲ್ಲಿ ತಾನು ಖಳರೊಂದಿಗೆ ಹೇಗೆ ಸೆಣೆಸುತ್ತೇನೆಂದು ಗೊತ್ತಿಲ್ಲದೆ ಮಾತಾಡುವ ಅವರನ್ನು ನೋಡಿ ಒಳಗೊಳಗೇ ನಗುವ ಪರಮೇಶಿ ಆಫೀಸಿನ ಸುಂದರಿ- ರಿಸೆಪ್ಷನಿಸ್ಟು ಲೀಶಾಳನ್ನು ಸಹಾ ಅನೇಕ ಬಾರಿ ರೌಡಿಗಳಿಂದ ಕಾಪಾಡಿದ್ದಾನೆ.

ಹೀಗಿದ್ದಾಗ ಪರಮೇಶಿಯ ಪರಾಕ್ರಮ ಜಗತ್ತಿಗೆ ತಿಳಿಯುವಂತಹಾ ಘಟನೆಯೊಂದು ನಡೆದೇಹೋಯಿತು. ಅದೊಂದು ಗಿಜಿಗುಡುತ್ತಿದ್ದ ಸೋಮವಾರ ಬೆಳಗ್ಗೆ ಯಾವುದೋ ಕೆಲಸದ ಮೇಲೆ ಬ್ಯಾಂಕಿಗೆ ಹೋಗಿದ್ದ ಪರಮೇಶಿ ಉದ್ದದ ಕ್ಯೂನಲ್ಲಿ ನಿಂತು ಚಲನ್ ತುಂಬುವುದರಲ್ಲಿ ನಿರತನಾಗಿದ್ದ. ಎಲ್ಲರೂ ತಂತಮ್ಮ ಕೆಲಸಗಳಲ್ಲಿ ಮುಳುಗಿಹೋಗಿದ್ದರು.

ಆಗ ಕೇಳಿತು ಅಪಾಯದ ಸೈರನ್!

ಆಗಲಿರುವ ಅನಾಹುತವೇನೆಂಬುದನ್ನು ಹೇಳದೇ ಕ್ಯೂಂವ್ ಕ್ಯೂಂವ್ ಎಂದು ಒಂದೇ ಸಮನೆ ಬಾಯ್ಬಡಿದುಕೊಳ್ಳತೊಡಗಿದ ಸೆಕ್ಯೂರಿಟಿ ಸೈರನ್ನಿಗೆ ನಿಂತ, ಕುಳಿತ, ಓಡಾಡುತ್ತಿದ್ದ ಗ್ರಾಹಕರೆಲ್ಲರೂ ದಂಗಾಗಿ ಸುತ್ತಲೂ ನೋಡತ್ತಿರುವಾಗಲೇ ದಪ್ಪ ಮೀಸೆಯ, ಕೈಯ್ಯಲ್ಲಿ ಮಾರುದ್ದದ ರೈಫಲ್ ಹಿಡಿದ ಠೋಣಪನೊಬ್ಬ ಬ್ಯಾಂಕಿನ ಒಳಗೆಬಂದು ಬಾಗಿಲುಹಾಕಿಬಿಟ್ಟ!

ಹೈಜಾಕ್!

ನೂರಾರು ಪತ್ತೇದಾರಿ ಕಾದಂಬರಿ, ಸಿನೆಮಾಗಳನ್ನು ನೋಡಿ ಪಳಗಿದ್ದ ಪರಮೇಶಿಯ ಚತುರ ಬುದ್ಧಿ ಕ್ಷಣಾರ್ಧದಲ್ಲಿ ಹಾಗೆಂದು ನಿರ್ಧರಿಸಿಬಿಟ್ಟಿತು. ಅವನು ನಿಂತ ಜಾಗದಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿ ಕೈಯ್ಯಲ್ಲಿ ಮಾರುದ್ದದ ರೈಫಲ್ ಹಿಡಿದ ಆ ಕ್ರೂರಮುಖದ ಉಗ್ರಗಾಮಿ ನಡೆದುಬರುತ್ತಿದ್ದ. ಇದೇ ಸರಿಯಾದ ಸಮಯ, ತನ್ನ ನಿಜವಾದ ತಾಕತ್ತೇನೆನ್ನುವುದನ್ನು ಜಗತ್ತಿಗೆ ತೋರಿಸಬೇಕು... ಪರಮೇಶಿಯೊಳಗಿನ ಸಿಂಹ ಬಾಲ ಬೀಸತೊಡಗಿತು.

"ಕ್ಯೂ.. ಯಾ... ಹೈ.."

ಸಾಲಿನಲ್ಲಿ ಹಿಂದೆ ಮುಂದೆ ನಿಂತವರೆಲ್ಲ ಬೆಚ್ಚಿಬೀಳುವಂತೆ ಕಿರುಚಿದ ಪರಮೇಶಿ ಛಂಗನೆ ಕುಪ್ಪಳಿಸಿ ಮುಂದಡಿಯಿಡುತ್ತಿದ್ದ ಆತಂಕವಾದಿಯ ಹೊಟ್ಟೆಗೆ ಬಲವಾಗಿ ಒಂದೇಟುಹಾಕಿದ. ತೀರಾ ಅನಿರೀಕ್ಷಿತವಾಗಿದ್ದ ಈ ಪ್ರಹಾರಕ್ಕೆ ಬೆಚ್ಚಿದ ಅವನು ಎರೆಡು ಹೆಜ್ಜೆ ಹಿಂದಕ್ಕೆ ಸರಿದ‌ನಾದರೂ ಮರುಕ್ಷಣವೇ ಸುಧಾರಿಸಿಕೊಂಡು ಪರಮೇಶಿಯ ಮೇಲೆರಗಿದ. ನೋಡನೋಡುತ್ತಿದ್ದಂತೆಯೇ ಬ್ಯಾಂಕಿನ ಆವರಣ ರಣರಂಗವಾಗಿ ಹೋಯಿತು. ಮುಂದಿನ ಮೂರು ನಿಮಿಷಗಳ ಕಾಲ ನಡೆದ ಭೀಕರ ಹೋರಾಟದಲ್ಲಿ ಪರಮೇಶಿಗೆ ಆಶ್ಚರ್ಯವಾಗುವಂತಹಾ ಘಟನೆಯೊಂದು ನಡೆದುಹೋಯಿತು. ಪರಮೇಶಿಯ ಪ್ರತಿಯೊಂದು ಕರಾಟೆ ಪಟ್ಟಿಗೂ ತಕ್ಕ ಪ್ರತ್ಯುತ್ತರ ನೀಡುತ್ತಿದ್ದ ಆತಂಕವಾದಿಯ ಜೊತೆಗೆ ಪ್ಯೂನ್ ಪಾಪಣ್ಣ ಹಾಗೂ ಕ್ಯಾಶಿಯರ್ ಕಾಮರಾಜ್ ಕೂಡಾ ಸೇರಿಕೊಂಡುಬಿಟ್ಟರು. ಇದೇನಿದು ಆಶ್ಚರ್ಯ? ಇವರೂ ಸಹಾ ಆತಂಕವಾದಿಯ ಜೊತೆಗೆ ಶಾಮೀಲಾಗಿದ್ದಾರಾ? ಹಾಗೆಂದು ಯೋಚಿಸುತ್ತಲೇ ಪರಮೇಶಿ ತನ್ನ ಧಾಳಿಯನ್ನು ತೀವ್ರಗೊಳಿಸಿದ. ಆದರೆ ಮುಂದಿನ ಕೆಲವೇ ನಿಮಿಷಗಳಲ್ಲಿ ಮೂವರೂ ಸೇರಿ ಭೀಕರವಾಗಿ ಎಗರಾಡುತ್ತಿದ್ದ ಪರಮೇಶಿಯನ್ನು ಹಿಡಿದು ಒಂದು ಹದಕ್ಕೆ ತಂದರು.

ತಾನು ಅಷ್ಟೆಲ್ಲ ವೀರಾವೇಶದಿಂದ ಹೋರಾಡಿದ್ದು ಯಾವುದೋ ಅಲ್-ಖೈದಾ ಉಗ್ರವಾದಿಯೊಂದಿಗೆ ಅಲ್ಲವೆಂದೂ, ಅಚಾನಕ್ಕಾಗಿ ಕೂಗತೊಡಗಿದ ಸೈರನ್ನನ್ನು ಪರೀಕ್ಷಿಸಲೆಂದು ಒಳಗೆ ಬಂದಿದ್ದ, ಆಗಷ್ಟೇ ಡ್ಯೂಟಿಗೆ ಹಾಜರಾಗಿ ಇನ್ನೂ ಯೂನಿಫಾಮ್ ತೊಡದ ಬ್ಯಾಂಕಿನ ಸೆಕ್ಯೂರಿಟಿ ಗಾರ್ಡ್ ಶೇರ್ ಸಿಂಗ್'ನ ಜೊತೆಯೆಂದೂ ಅರ್ಥವಾಗುವ ಹೊತ್ತಿಗೆ ಪರಮೇಶಿಯನ್ನು ಅವನೊಳಗಿನ ಸಿಂಹದ ಜೊತೆಗೇ ಹೆಡೆಮುರಿಕಟ್ಟಿ ಮೂಲೆಯಲ್ಲಿ ಕೂರಿಸಲಾಗಿತ್ತು.

('ಮಂಗಳ'ದಲ್ಲಿ ಪ್ರಕಟಿತ)

ಭಾನುವಾರ, ನವೆಂಬರ್ 12, 2017

ಪುಳಿಯೋಗರೆ ಉಡ್ಡಯನ!



ಬ್ರಹ್ಮಚಾರಿ ಜೀವನದ ಸಾರ್ವತ್ರಿಕ ಸಮಸ್ಯೆಗಳಲ್ಲಿ ಅಡಿಗೆ ಮಾಡಿಕೊಳ್ಳುವುದೂ ಒಂದು ಎನ್ನುವುದು ನನಗೆ ತುಂಬಾ ತಡವಾಗಿ ಅರ್ಥವಾದ ಸತ್ಯ. ಈ ಮೊದಲು ಕೆಲವು ಗೆಳೆಯರು "ಹೊರಗಡೆ ತಿಂದೂ ತಿಂದೂ ಸಾಕಾಗಿದೆ ಮಗಾ. ಬೇಗ ಮದುವೆ ಆಗ್ಬೇಕು" ಎಂದರೆ "ಅಲ್ವೋ ಒಂದು ಪ್ಲೇಟ್ ಚಿತ್ರಾನ್ನ, ಎರೆಡು ಪ್ಲೇಟ್ ಸೌತ್ ಮೀಲ್ಸ್'ಗೋಸ್ಕರ ಫೈವ್ ಸ್ಟಾರ್ ಹೋಟೆಲ್ನೇ ಪರ್ಚೇಸ್ ಮಾಡ್ತೀನಿ ಅಂತೀಯಲ್ಲೋ" ಎಂದು ತೀರಾ ಉಡಾಫೆಯಿಂದ ನಗುತ್ತಿದ್ದೆ. ಹುಟ್ಟಿದ ಮೊದಲ ಇಪ್ಪತ್ತೊಂದು ವರ್ಷ ಅಮ್ಮನ ಕೈಯ್ಯಡಿಗೆ ಸವಿಯುತ್ತಾ ಕಳೆದವನು ನಾನು. ನನ್ನ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ, ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ಮೊದಲ ಎರೆಡು ಕಂಪನಿಯವರೂ ಅತೀ ಕಡಿಮೆಬೆಲೆಗೆ ಮೂರು ಹೊತ್ತೂ ಊಟ ಕೊಟ್ಟಿದ್ದರು. ಇನ್ನು ರಜೆ ಇದ್ದ ಶನಿವಾರ ಭಾನುವಾರಗಳ ಬೆಳಗ್ಗೆ ಹಸಿವಾದರೆ ಅಕ್ಕಿ ಗಂಜಿ, ಇಲ್ಲದಿದ್ದರೆ ಹಾಪ್ ಕಾಮ್ಸ್'ನ ಬಾಳೇಹಣ್ಣು. ಮಧ್ಯಾಹ್ನ, ರಾತ್ರೆಗಳ ಊಟಕ್ಕೆ ಒಂದೋ ನೆಂಟರ ಮನೆ, ಇಲ್ಲವಾದರೆ ಮುಕ್ಕಾಲು ಲೋಟ ಅಕ್ಕಿಯನ್ನು ಮುಕ್ಕಾಲು ಬಟ್ಟಲು ನೀರಿನಲ್ಲಿ ಮುಳುಗಿಸಿ, ಇಂಡಕ್ಷನ್ ಒಲೆಯಮೇಲಿಟ್ಟು ಬೇಯಿಸಿ ಕೊನೆಗೆ ತಯಾರಾಗುವ, ಹೆಚ್ಚೂಕಡಿಮೆ ಅನ್ನವನ್ನೇ ಹೋಲುವ ಪದಾರ್ಥವನ್ನು ಹತ್ತಿರದ ಹೋಟೆಲ್ನಿಂದ ತಂದ ಸಾಂಬಾರಿನಲ್ಲಿ ಕಲಸಿಕೊಂಡು ತಿನ್ನುತ್ತಾ "ಎಲ್ಲಾ ಸೋಂಬೇರಿಗಳೂ ಹೋಟೆಲ್ನಲ್ಲಿ ತಿನ್ನುವಾಗ ರೂಮ್ನಲ್ಲೇ ಅಡಿಗೆ ಮಾಡಿಕೊಳ್ಳೋ ನಾವೆಷ್ಟು ಶ್ರಮಜೀವಿಗಳು ಅಲ್ವಾ ಮಗಾ?" ಎಂದು ರೂಮ್ ಮೆಟ್ ಹತ್ರ ಜಂಭಕೊಚ್ಚಿಕೊಳ್ಳುತ್ತಿದ್ದೆ.  ಹೀಗೆ ಒಟ್ಟಾರೆ ಬದುಕಿನ ಇಪ್ಪತ್ತಾರು ವರ್ಷಗಳು ಅಡಿಗೆಯೆಂಬ ಉಸಿರಾಟದಷ್ಟೇ ಸಹಜವಾದ, ಆದರೆ ಅಷ್ಟೇ ನಾಜೂಕಾದ ಕ್ರಿಯೆಯನ್ನು ಕಲಿಯದೆಯೇ ಕಳೆದುಹೋಗಿತ್ತು. ಕಾಳುಶ್ರಮವಿಲ್ಲದೇ ತಿನ್ನುತ್ತಿದ್ದ ಆಹಾರವೇನೂ ಸುಮ್ಮನೆ ಗಂಟಲಿಗಿಳಿಯುತ್ತಿರಲಿಲ್ಲ. "ಇದೇನಮ್ಮ, ದಿನಾ ಇದೇ ದೋಸೆ, ಉಪ್ಪಿಟ್ಟು, ರೊಟ್ಟಿ ಮಾಡ್ತೀಯಾ", "ಯಾರ್ ಗುರೂ ಅಡಿಗೆ ಮಾಡಿದ್ದು? ಬರೀ ಬಟಾಣಿ ಹಾಕಿ ಬೇಯ್ಸಿದಾರೆ", " ಏನ್ರೀ ಇವ್ರು, ಅನ್ನ ಸರಿಯಾಗಿ ಬೆಂದೇ ಇಲ್ಲ. ಹೋದವಾರ ಮಾಡಿದ್ದೇ ಮತ್ತೆ ಮಾಡಿದಾರೆ" ಎಂಬ ಇನ್ನೂ ಮುಂತಾದ ಟೀಕೆಗಳು ಅನ್ನ ಇಳಿದ ಅದೇ ಗಂಟಲಿನಿಂದ ಹೊರಬರುತ್ತಿದ್ದವು. ಆದರೆ ಕೇವಲ ಮೊವತೈದು ರುಪಾಯಿಗೆ ತಿಂಗಳಿಡೀ ಊಟ ಕೊಡುತ್ತಿದ್ದ ಎರೆಡನೇ ಕಂಪನಿಯನ್ನೂ ಬಿಟ್ಟೆನೋಡಿ? ಆಗಲೇ ಗೊತ್ತಾಗಿದ್ದು- ಅನ್ನದ ಹಾಗೂ ಅನ್ನದಾತರ ಮಹತ್ವ.

ಊಟದ ಮಟ್ಟಿಗೆ ಹೊಸ ಕಂಪನಿ ಹೊಸ ಹೊಸ ಸಮಸ್ಯೆಗಳನ್ನೊಡ್ಡಿತ್ತು. ಮೊದಲ ದಿನ ಮಧ್ಯಾಹ್ನವೇ ಶುರುವಾಯಿತು ಊಟದ ಬೇಟೆ. ಕಂಪನಿಯಿದ್ದ ಸುಮಾರು ಅರ್ಧ-ಮುಕ್ಕಾಲು ಕಿಲೋಮೀಟರ್ ಸುತ್ತಳತೆಯಲ್ಲಿ ಒಂದೇ ಒಂದು ಚಿಕ್ಕ-ಚೊಕ್ಕ ಹೋಟೆಲ್ ಕಣ್ಣಿಗೆ ಬೀಳಲಿಲ್ಲ. ಇದ್ದ ಒಂದೇ ಒಂದು ಹೋಟೆಲಿಗೆ ನುಗ್ಗಿ 'ಒಂದು ಸೌತ್ ಮೀಲ್ಸ್' ಎಂದು ನೂರರ ನೋಟು ಚಾಚಿದೆ. ನೋಡ ನೋಡುತ್ತಿದ್ದಂತೆ ನನ್ನ ಕೈಲಿದ್ದ ನೂರರ ನೋಟನ್ನು ಕಸಿದುಕೊಂಡ ಕ್ಯಾಶಿಯರ್ ಬಡ್ಡೀಮಗ ಮರಳಿಕೊಟ್ಟಿದ್ದು ಬರೀ ಹತ್ತು ರೂಪಾಯಿಯನ್ನ! ಕೆಲವೇ ಸೆಕೆಂಡ್'ಗಳ ಕೆಳಗೆ ನೂರರ ನೋಟಿದ್ದ ಕೈಗೀಗ ಬರೀ ಹತ್ತರ ಹರಕು ನೋಟು ಬಂದ ಅದ್ಭುತವನ್ನು ಪೆಚ್ಚಾಗಿ ನೋಡುತ್ತಾ ನಿಂತ ನನಗೆ ಬೆಂಗಳೂರು ಸಿಂಗಾಪುರ ಆಗಿದೆ ಅನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ.

ಈಗ ಮಧ್ಯಾಹ್ನದೂಟಕ್ಕಿರುವ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸತೊಡಗಿದೆ. ಒಂದೊತ್ತಿನ ಊಟಕ್ಕೆ ಸಾವಿರಗಟ್ಟಲೆ ತೆರುವುದಕ್ಕೆ ನಾನು ಯಾವ ಅಂಬಾನಿಯ ಅಳಿಯನೂ ಅಲ್ಲ. ಅಮ್ಮ ಸೂಚಿಸಿದ 'ಮದುವೆ ಆಗ್ಬಿಡು' ಎನ್ನುವುದು ಅತ್ಯಂತ ದುಬಾರಿ ಹಾಗೂ ಅಪಾಯಕಾರಿ ಮಾರ್ಗ. ಇನ್ನುಳಿದ ಏಕೈಕ ದಾರಿ ರೂಮಿನಲ್ಲೇ ಮಾಡಿಕೊಳ್ಳುವುದು. ಅಂದಹಾಗೇ ಇದು ಈಗ ಹೊಳೆದ ಉಪಾಯವೇನೂ ಆಗಿರಲಿಲ್ಲ. ಈ ಕಂಪನಿಗೆ ಆಯ್ಕೆಯಾದಾಗ "ಮಧ್ಯಾಹ್ನ ಊಟಕ್ಕೇನು ಮಾಡ್ತೀಯ?" ಎಂದು ಕೇಳದವರಿಗೆಲ್ಲ "ಪುಳಿಯೋಗರೆ, ಚಿತ್ರಾನ್ನ, ಉಪ್ಪಿಟ್ಟು... ಹೀಗೇ ಏನಾದ್ರೂ ರೂಮಲ್ಲೇ ಮಾಡಿ ತಗೊಂಡೋಗ್ತೀನಿ" ಎಂದು ಎದೆಯುಬ್ಬಿಸಿಕೊಂಡು ಹೇಳಿದ್ದೆ. ಅವರು ಅಚ್ಚರಿಯಲ್ಲಿ "ಅರೆರೇ ಹೌದಾ? ಶಭಾಶ್!" ಎಂದು ಮೆಚ್ಚಿದಾಗ ವೀರ ಕರ್ನಲ್'ನಂತೆ ಮೀಸೆ ತಿರುವಿಕೊಂಡಿದ್ದೆ. ಆದರೆ ಅಪ್ಪೀತಪ್ಪೀ ಯಾರಾದರೂ ಒಬ್ಬ "ಏನು ಹಾಕಿ ಉಪ್ಪಿಟ್ಟು ಮಾಡ್ತೀಯಪ್ಪ ನಳಮಹಾರಾಜ?" ಎಂದು ಕೇಳಿದ್ದರೂ ಉತ್ತರಕ್ಕೆ ನಾಲ್ಕು ಆಪ್ಶನ್ ಕೇಳುತ್ತಿದ್ದೆನೆನ್ನುವುದು ನನಗೆ ಮಾತ್ರ ಗೊತ್ತಿದ್ದ ಸತ್ಯ! ಇನ್ನಷ್ಟೇ ಕಲಿತು ಅಡಿಗೆ ಮಾಡಬೇಕಾದವನು, ಈಗಾಗಲೇ ಬಂಡಿಗಟ್ಟಲೆ ಬೇಯಿಸಿ ಬಿಸಾಕಿರುವ ಬಾಣಸಿಗನಂತೆ ಫೋಸ್ ಕೊಟ್ಟಿದ್ದೆ. ಅದ್ಯಾವ ಶಕುನ ದೇವತೆ ಅಸ್ತು ಅಂದಿದ್ದರೋ ಗೊತ್ತಿಲ್ಲ, ಆ ಸುಳ್ಳು ಸತ್ಯವಾಗುವ ಕಾಲವೀಗ ಬಂದೇಬಿಟ್ಟಿತು.

ಸಂಜೆ ಬಂದವನೇ ನೇರ ಅಂಗಡಿಗೆ ಹೋಗಿ "ಪುಳಿಯೋಗರೆ ಮಿಕ್ಸ್ ಯಾವ್ದ್ಯಾವ್ದಿದೆ?" ಎಂದೆ. ಮುತ್ತಿಕೊಂಡಿದ್ದ ಗ್ರಾಹಕರ ನಡುವೆ ಸುಸ್ತಾಗಿದ್ದ ಅಂಗಡಿಯವನು "ಅಯ್ಯಂಗಾರ್ ಇದೆ ಕೊಡ್ಲಾ ಸರ್?" ಎಂದ. ನನಗೆ ಗೊತ್ತಿರೋ ಮಟ್ಟಿಗೆ ಈ ಅಯ್ಯಂಗಾರಿಗಳು ಎಂದರೆ ತಮಿಳುನಾಡಿನವರೋ, ಕೇರಳದವರೋ ಇರಬೇಕು. "ಅವರ ಶೈಲಿ ನಂಗೆ ಅಷ್ಟಾಗಿ ಆಗಿಬರೋಲ್ಲ. ನಮ್ಮೂರಿನ ಈ ಅಡಿಗ, ಐತಾಳ, ಭಟ್ಟ ಅಂತ ಯಾವ್ದಾದ್ರೂ ಇದ್ಯಾ ಗುರೂ?" ಎಂದು ಕೇಳಬೇಕೆಂದುಕೊಂಡೆ. ಆದರೆ ಅವನ ಪಕ್ಕದಲ್ಲಿದ್ದ ತಕ್ಕಡಿಯ ತೂಕದ ಕಲ್ಲು ಹಾಗೂ ಅವನ ಅಸಮಾಧಾನದ ಮುಖ ನೋಡಿ ಭಯವಾಗಿ 'ಭಾರತೀಯರೆಲ್ಲ ಒಂದೇ' ಎಂಬ ನಿರ್ಧಾರಕ್ಕೆ ಬಂದು "ಸರಿ, ಅಯ್ಯಂಗಾರನ್ನೇ ಕೊಡಿ" ಎಂದೆ. ಜೊತೆಗೆ ಎರೆಡು ವಾರಕ್ಕಾಗುವಷ್ಟು ಅಡಿಗೆ ಎಣ್ಣೆಯನ್ನೂ ಖರೀದಿಸಿ ರೂಮಿಗೆ ಬಂದು ಪವಡಿಸಿದೆ. ನಿದಿರೆಯಲ್ಲಿ ನಾನು ಭರ್ಜರಿ ಪುಳಿಯೋಗರೆ ಮಾಡಿದಂತೆ, ಅದನ್ನು ನನ್ನ ಹೊಸ ಸಹೋದ್ಯೋಗಿಗಳೆಲ್ಲ ಚಪ್ಪರಿಸಿಕೊಂಡು ತಿಂದು ಡರ್ರನೆ ತೇಗಿದಂತೆ ಕನಸು ಕಂಡು ಮಲಗಿದಲ್ಲೇ ಬೆನ್ನು ತಟ್ಟಿಕೊಂಡೆ.

ಕೊನೆಗೂ ನನ್ನ ಪುಳಿಯೋಗರೆ ಪ್ರಯೋಗದ ಹಗಲು ಬಂದೇಬಿಟ್ಟಿತು. ಒಂದು ಗಂಟೆ ಮುಂಚೆಯೇ ಎದ್ದು ಯಾವ ಫೈವ್ ಸ್ಟಾರ್ ಹೋಟೆಲಿನ ಅಡಿಗೆಭಟ್ಟನಿಗೂ ಕಮ್ಮಿ ಇಲ್ಲದಂತೆ ಆಪ್ರೋನ್ ಕ್ಲಾತ್ ಕಟ್ಟಿಕೊಂಡು ತಯಾರಾದೆ. ಒಂದು ಆ್ಯಂಗಲ್'ನಿಂದ ಅನ್ನದಂತೇ ಕಾಣುತ್ತಿದ್ದ ಪದಾರ್ಥವನ್ನು ತಯಾರಿಸಿ ಪಕ್ಕಕ್ಕಿಟ್ಟೆ.

ಮುಂದಿನ ಸರದಿ ಪುಳಿಯೋಗರೆ ಮಿಕ್ಸ್ ನದು!

ಸ್ಟೀಲ್ ಪಾತ್ರೆಯನ್ನು ಇಂಡಕ್ಷನ್ ಒಲೆಯ ಮೇಲಿಟ್ಟು ಚಾಲೂಮಾಡಿದೆ. ಪಾತ್ರೆಯೊಳಕ್ಕೆ ಪಾಮಾಯಿಲನ್ನು ಸುರಿದು ಬಾಯಿ ಒಡೆದ ಪುಳಿಯೋಗರೆ ಪೊಟ್ಟಣ ತೆಗೆದುಕೊಂಡೆ. ಅರೆಕ್ಷಣದಲ್ಲಿ ಎಣ್ಣೆ ಚಿಟಿಚಿಟಿಗುಟ್ಟಲು ಪ್ರಾರಂಭಿಸಿತು. ಅಲ್ಲಿಯ ತನಕ ಎಲ್ಲವೂ ಸರಿಯಾಗಿಯೇ ಇತ್ತು, ಆದರೆ ಕೈಲಿದ್ದ ಪೊಟ್ಟಣದ ಅಷ್ಟೂ ಪುಳಿಯೋಗರೆ ಪುಡಿಯನ್ನು ಪಾತ್ರೆಯೊಳಕ್ಕೆ ಸುರಿದು ಮುಖದ ತುಂಬಾ ಕಣ್ಣಿದ್ದ 'ಕಣ್ ಸೆಟ್ಗ'ದಿಂದ ಅಲ್ಲಾಡಿಸತೊಡಗಿದೆ ನೋಡಿ,  ಇದ್ದಕ್ಕಿದ್ದಂತೆಯೇ ಎದುರಿದ್ದ ಪಾತ್ರೆಯೊಳಗೆ ಕೋಲಾಹಲ ಆರಂಭವಾಯಿತು! ಒಳಗಿದ್ದ ಎಣ್ಣೆ ಈಗಷ್ಟೇ ಬಂದ ಅಪರಿಚಿತ ಪುಳಿಯೋಗರೆ ಪುಡಿಯ ಜೊತೆ ಚಿಟಿಚಿಟಿಯೆನ್ನುತ್ತಾ ಭೀಕರ ಹೋರಾಟಕ್ಕಿಳಿಯಿತು. ಬೇಯುತ್ತಿದ್ದ ಪುಳಿಯೋಗರೆ ಪುಡಿ ಕಪ್ಪುಬಣ್ಣಕ್ಕೆ ತಿರುಗತೊಡಗಿತು. ಈ ಮಾರಾಮಾರಿಕಂಡು ಗಾಬರಿಯಾದ ನಾನು ಒಲೆಯ ಸ್ವಿಚ್ ಆರಿಸಿ ಕೈ ಹಿಂದೆತರುತ್ತಿದ್ದೆ...

ಢಮಾರ್!

ಅದ್ಯಾವ ರಾಸಾಯನಿಕ ಕ್ರಿಯೆ ನಡೆಯಿತೋ, ಎಣ್ಣೆ-ಪುಳಿಯೋಗರೆಪುಡಿಗಳ ಅದ್ಯಾವ ಅಣು-ಪರಮಾಣುಗಳು ಕಚ್ಚಾಡಿಕೊಂಡವೋ ಗೊತ್ತಿಲ್ಲ, ದೊಡ್ಡ ಸದ್ದಿನೊಂದಿಗೆ ಸ್ಫೋಟ ಸಂಭವಿಸಿ ಪಾತ್ರೆಯೇ ಅಲ್ಲಾಡಿಹೋಯಿತು. ಬೆಚ್ಚಿಬಿದ್ದ ನಾನು ಬಾಂಬ್ ಸ್ಫೋಟಕ್ಕ ಸಿಲುಕಿದವನಂತೆ ಛಂಗನೆ ನೆಗೆದು ಪಕ್ಕದಲ್ಲಿದ್ದ ಮಂಚವೇರಿಕುಳಿತೆ!

ಸುಟ್ಟ ಹೊಗೆ, ಕರಟಿದ ವಾಸನೆ, ಮೇಜಿನ ಮೇಲೆಲ್ಲಾ ಚೆಲ್ಲಾಪಿಲ್ಲಿಯಾದ ಕಡಲೆಬೀಜ-ಪುಳಿಯೋಗರೆ ಪುಡಿಗಳು...  ಉಪಗ್ರಹವನ್ನು ಹೊತ್ತ ರಾಕೇಟೊಂದು ಈಗಷ್ಟೇ ಬಾಹ್ಯಾಕಾಶಕ್ಕೆ ಹಾರಿದ ಜಾಗದಲ್ಲಿ ಇರುವಂತಹಾ ಎಲ್ಲಾ ಲಕ್ಷಣಗಳೂ ಅಲ್ಲಿದ್ದವು. ಪುಣ್ಯಕ್ಕೆ ಒಲೆಯ ಸ್ವಿಚ್ಚನ್ನು ನಾನಾಗಲೇ ಆರಿಸಿದ್ದರಿಂದ ಸ್ಫೋಟ ಅಲ್ಲಿಗೇ ನಿಂತಿತು. ಆಗಿದ್ದಾದರೂ ಏನೆಂಬುದೇ ಅರಿವಾಗದೆ ಕಂಗಾಲದ ನಾನು ಮೆಲ್ಲನೆ ಸುಧಾರಿಸಿಕೊಂಡೆ. ನಾನು ಕೊಂಡು ತಂದದ್ದು ಪುಳಿಯೋಗರೆ ಪುಡಿಯೋ ಅಥವಾ ಬೇರ್ಯಾವ ಆಸ್ಫೋಟನಾಕಾರಿ ಸಾಮಗ್ರಿಯೋ ಎಂದು ಪರೀಕ್ಷಿಸಿದೆ. ಯಾರಿಗೆ ಗೊತ್ತು? ಆಲ್-ಖೈದಾದವರೋ, ಇನ್ಯಾವ ಉಗ್ರ ಸಂಘಟನೆಯವರೋ ಪುಳಿಯೋಗರೆ ಪ್ಯಾಕ್ನಲ್ಲಿ ಪುಡಿಪುಡಿ ಬಾಂಬ್ ತುಂಬಿಸಿ ಕಳಿಸಿರಲಿಕ್ಕೂ ಸಾಕು! ಅಥವಾ ಮೊದಲು ನಾನು ಅಯ್ಯಂಗಾರನ್ನು ಬೇಡ ಅಂದಿದ್ದನ್ನೇನಾದರೂ ಕೇಳಿಸಿಕೊಂಡ, ಇಲ್ಲೇ ಎಲ್ಲೋ ತೆಲಾಡುತ್ತಿರುವ ಯಾವದೋ ಅಯ್ಯಂಗಾರಿ ಆತ್ಮ ಹೀಗೆ ಮಾಡಿದ್ದರೂ ಮಾಡಿರಬಹುದು.

ಸಂಜೆ ಈ ಘಟನೆಯ ಕುರಿತಾದ ಸಮಗ್ರ ವರದಿಯೊಂದನ್ನು ತಯಾರಿಸಿ, ಗೆಳತಿಯೊಬ್ಬಳಿಗೆ ಒಪ್ಪಿಸಿ ಅವಳ ತಜ್ಞ ಅಭಿಪ್ರಾಯ ಕೇಳಿದೆ. ಎರೆಡು ನಿಮಿಷಗಳ ಕಾಲ ಸುಧೀರ್ಘವಾಗಿ ನಕ್ಕ ಅವಳು ಒಲೆಯ ಉಷ್ಣದ ಪ್ರಮಾಣ ಜಾಸ್ತಿ ಇದ್ದುದು ಹಾಗೂ ಸ್ಟೀಲ್ ಪಾತ್ರೆಗೆ ಪಾಮಾಯಿಲ್ ಹಿಡಿಸದೇ ಹೋಗಿದ್ದೇ ಈ ಸ್ಫೋಟಕ್ಕೆ ಕಾರಣವೆಂದು ತೀರ್ಪುಕೊಟ್ಟಳು. ಅಲ್ಲದೆ ತಾನು ಅಡಿಗೆ ಮಾಡತೊಡಗಿದ್ದ ಆರಂಭದಲ್ಲೂ ಹೀಗೇ  ಆಗುತ್ತಿತ್ತೆಂದು ಹೇಳಿ 'ಆಸ್ಫೋಟವಿಲ್ಲದೆ ಅಡಿಗೆ ಕಲಿತವರಿಲ್ಲವೈ' ಎಂದು ಸಮಾಧಾನಮಾಡಿದಳು.

ಅಂದು ಮಧ್ಯಾಹ್ನ ಮತ್ತೆ ಹೋಟೆಲ್ನಲ್ಲಿ ಹತ್ತರ ಹರಕು ನೋಟು ಹಿಡಿದುಕೊಂಡು ಸೋಡಬೆರೆಸಿದ ಅನ್ನತಿನ್ನುತ್ತಾ ಕುಳಿತಿದ್ದಾಗ ಹಿಂದಿನ ಕಛೇರಿಯಲ್ಲಿ ಪ್ರೀತಿಯಿಂದ ಬಡಿಸುತ್ತಿದ್ದ ಹೆಡ್ ಕುಕ್ ಅಜ್ಜಿ, ಮನೆಯಿಂದ ತಂದದ್ದನ್ನು ಹಂಚಿಕೊಳ್ಳುತ್ತಿದ್ದ ಸಹೋದ್ಯೋಗಿಗಳು, ಕೇಳಿದ್ದನ್ನೆಲ್ಲ ಬೇಸರವಿಲ್ಲದೆ ಮಾಡಿ ಬಡಿಸುವ ಅಮ್ಮ ಕಣ್ಮುಂದೆ ನಿಂತಂತಾಯಿತು. ಎದ್ದು ಕೈ ತೊಳೆದುಕೊಂಡೆ. ಸಿಂಕಿನಲ್ಲಿ ಮುಖಕ್ಕೆರಚಿಕೊಂಡ ನೀರಿನ ಜೊತೆಗೆ ಒಂದೆರೆಡು ಕಣ್ಣ ಹನಿಗಳೂ ಸದ್ದಿಲ್ಲದೇ ಜಾರಿಹೋದವು.

(12-11-2017ರ ವಿಶ್ವವಾಣಿ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಿತ)

ಬುಧವಾರ, ಜುಲೈ 26, 2017

ಹಾರಾಟದ ಸುತ್ತಮುತ್ತ..




ಪ್ರತಿದಿನ ಬೆಳಗ್ಗೆ ಬೆಂಗಳೂರು-ಹೊಸೂರು ಮುಖ್ಯರಸ್ತೆಯ ರೂಪೇನ ಅಗ್ರಹಾರ ನಿಲ್ದಾಣದಲ್ಲಿ ನಿಂತು ಕಂಪನಿಯ ವಾಹನಕ್ಕಾಗಿ ಕಾಯುವುದು ನನ್ನ ದಿನಚರಿ. 'ಹೊಸೂರು ರೋಡ್' ಎಂದೇ (ಕು)ಖ್ಯಾತವಾದ ಈ ರಸ್ತೆಯನ್ನು ದಾಟುವುದಕ್ಕೂ, ಉಕ್ಕಿ ಹರಿಯುತ್ತಿರುವ ನದಿಯೊಂದನ್ನು ಈಜಿ ದಡಸೇರುವುದಕ್ಕೂ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ. ಎರೆಡೂ ನಿಲ್ಲದ ಪ್ರವಾಹಗಳೇ! ಸಿಲ್ಕ್ ಬೋರ್ಡ್ ಎನ್ನುವ ಬೃಹತ್ ಜಂಕ್ಷನ್ ನಿಂದ ಕಟ್ಟೆಯೊಡೆದು ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೊಸೂರುಗಳ ಕಡೆಗೆ ಧಾವಿಸುವ ಸಾವಿರಾರು ಬೈಕು, ಕಾರು, ಬಸ್ಸೇ ಇತ್ಯಾದಿ ವಾಹನಗಳು ಭರಗುಡುತ್ತಾ ಓಡುತ್ತಿದ್ದರೆ ಈ ದ್ವಿಪಥ ರಸ್ತೆ ಅಕ್ಷರಶಃ ಬಿಸಿಲು, ಧೂಳು, ಹೊಗೆಗಳಿಂದ ಬೇಯುವ ಅಗ್ನಿಕುಂಡವಾಗಿಬಿಡುತ್ತದೆ. ಇಂತಹಾ ನೂರಾರು ರಸ್ತೆಗಳು ಒಟ್ಟು ಮೊತ್ತವೇ ಆಗಿರುವ ಬೆಂಗಳೂರಿಗೆ ಇದೇನು ಹೆಚ್ಚಲ್ಲ ಬಿಡಿ. ಇಲ್ಲಿ ನಿಂತು ಕಾಯುವಾಗೆಲ್ಲಾ ನನ್ನನ್ನು ವಿಚಿತ್ರ ಬಯಕೆಯೊಂದು ಕಾಡುತ್ತದೆ.

ಮನುಷ್ಯನಿಗೂ ಹಾರಲು ಬರಬೇಕಿತ್ತು!

ಚಿಕ್ಕವನಿದ್ದಾಗ ದೂರ್ ದರ್ಶನ್ ದಲ್ಲಿ 'ಜೈ ಹನುಮಾನ್' ಧಾರಾವಾಹಿಯಲ್ಲಿ ಆಂಜನೇಯ ಬಾನಿಗೆ ನೆಗೆದು ಹಾರಾಡುವುದನ್ನು ನೋಡುವಾಗಲೂ ಹೀಗೇ ಅನಿಸುತ್ತಿತ್ತು. ಹ...  ಒಂದು ನಿಮಿಷ. ರೆಕ್ಕೆಯಿಲ್ಲದಿದ್ದರೂ ವಿಧಾನಸೌಧದ ಸೂರು ಕಿತ್ತುಹೋಗುವಂತೆ ಹಾರಾಡುವ, ನೆಗೆದಾಡುವ ರಾಜಕಾರಣಿಗಳನ್ನು ನಾನೂ ನೋಡಿದ್ದೇನೆ. ಆದರೆ ನಾನು ಹೇಳುತ್ತಿರುವುದು ಆ ಹಾರಾಟದ ಬಗ್ಗೆಯಲ್ಲ; ಹಾತೆಹುಳಗಳಿಂದ ಹಿಡಿದು ದೈತ್ಯ ಹದ್ದುಗಳತನಕ ನೂರಾರು ಜಾತಿಯ ಕೀಟ-ಪಕ್ಷಿಗಳು ಸಣ್ಣ ಸದ್ದನ್ನೂ ಮಾಡದೇ ರೆಕ್ಕೆ-ಪುಕ್ಕ ಬಿಚ್ಚಿ ಬಾನಿನೆತ್ತರದಲ್ಲಿ ತೇಲಾಡುತ್ತಾವಲ್ಲಾ, ಆ ಹಾರಾಟದ ಬಗ್ಗೆ. ನಾವು ಮನುಷ್ಯರೂ ಹೀಗೇ ಹಾರುವಂತಿದ್ದರೆ ನಮ್ಮ ಪೃಥ್ವಿಯ ಎಷ್ಟೋ ಸಮಸ್ಯೆಗಳು ಹುಟ್ಟುತ್ತಲೇ ಇರಲಿಲ್ಲ ಅಲ್ವಾ?!

ನಮ್ಮ ಕಥೆಗಳನ್ನೇ ತೆಗೆದುಕೊಳ್ಳೋಣ. ನಾವು ಬೆಳಗ್ಗೆ ಎದ್ದವರೇ ಶಾಲೆಗೋ, ಕಾಲೇಜುಗೋ, ಆಫೀಸಿಗೋ ಹೊರಡುತ್ತೇವೆ. ಇನ್ನೂ ತಿಂಡಿ ತಿಂದಿಲ್ಲ, ಟೈ ಕಟ್ಟಿಕೊಂಡಿಲ್ಲ, ಶೂ ಪಾಲಿಶ್ ಆಗಿಲ್ಲ. ಶಾಲೆಯ/ಕಛೇರಿಯ ಬಸ್ಸು/ಕ್ಯಾಬು ಬರುವುದರೊಳಗೆ ಎಷ್ಟೆಲ್ಲಾ ಕೆಲಸ ಮುಗಿಸಿ ತಯಾರಾಗಬೇಕು. ಆ ಗಡಿಬಿಡಿಯಲ್ಲಿ ಏನೇನ್ನೋ ಮರೆತುಬಿಡುತ್ತೇವೆ. ವಿದ್ಯಾರ್ಥಿಗಳು ಅರ್ಧರಾತ್ರೆಯ ತನಕ ಕುಳಿತು ಬರೆದಿದ್ದ ಹೋಂ ವರ್ಕನ್ನು ಟೇಬಲ್ ಮೇಲೇ ಬಿಟ್ಟುಹೋಗುತ್ತಾರೆ. ಕಛೇರಿಯ ಯಾವುದೋ ಪ್ರಮುಖ ಫೈಲು ಸೋಫಾ ಮೇಲೇ ಉಳಿದುಬಿಟ್ಟಿರುತ್ತದೆ. ಬಸ್ ಪಾಸು ಯಾವುದೋ ಪ್ಯಾಂಟಿನ ಜೇಬಿನಲ್ಲಿ ಅವಿತಿರುತ್ತದೆ. ಐಡಿ ಕಾರ್ಡು ಮತ್ತೆಲ್ಲೋ ಕೈತಪ್ಪುತ್ತದೆ. ಬಸ್ಸಿನಲ್ಲಿ 'ಪಾಸ್' ಎಂದು ಹೇಳಿ ಜೇಬಿನಲ್ಲಿ ಪಾಸ್ ಇಲ್ಲದೇಹೋದಾಗ ಕಂಡಕ್ಟರ್ 'ಸಂಸ್ಕೃತ'ದಲ್ಲಿ ಬುದ್ಧಿಮಾತು ಹೇಳುತ್ತಾನೆ. ಹೋಂ ವರ್ಕ್ ತಂದಿಲ್ಲವೆಂದೊಡನೆಯೇ ಶಾಲೆಯ ಮಾಸ್ತರು ಕೈಯ್ಯಲ್ಲಿರುವ ಬೆತ್ತವನ್ನು ಟಿಪ್ಪೂಸುಲ್ತಾನನ ಖಡ್ಗದಂತೆ ಝಳಪಿಸುತ್ತಾರೆ. ಆಫೀಸಿನಲ್ಲಿ ಬಾಸು ಮರೆತ ಫೈಲನ್ನು ನೆನೆನೆನೆದು ತಾಂಡವ ನೃತ್ಯವನ್ನೇ ಆಡುತ್ತಾನೆ. ಇದಕ್ಕೆಲ್ಲಾ ಮೂಲಕಾರಣ ನಮಗಾಗಿ ಕಾಯದ ಕ್ಯಾಬು ಹಾಗೂ ಬಸ್ಸುಗಳು!

ಇರುವ ಒಂದೇ ಒಂದು ಭೂಮಿಯನ್ನು ಈ ವಾಹನಗಳು ಗಬ್ಬೆಬ್ಬಸುತ್ತಿರುವ ಬಗ್ಗೆ ಹೊಸತಾಗಿ ಏನೂ ಹೇಳಬೇಕಿಲ್ಲ. ವಿಜ್ಞಾನಿಗಳ ಮಾತನ್ನೇ ನಂಬುವುದಾದರೆ ಇನ್ನು ಮೊವತ್ತು-ನಲವತ್ತು ವರ್ಷಗಳಲ್ಲಿ ಪ್ರಪಂಚದ ಪೆಟ್ರೋಲ್, ಡೀಸೆಲ್ ಗಳೆಲ್ಲಾ ಮುಗಿದುಹೋಗುತ್ತವೆ. ದುಬೈನ ಕಟ್ಟಕಡೆಯ ಬಾವಿಯಲ್ಲೂ ಪೆಟ್ರೋಲ್ ಬತ್ತಿಹೋಗಿ ಫುಸ್ಸೆನ್ನುವ ಗಾಳಿಯೊಂದೇ ಉಳಿಯುವ ಆ ದಿನವನ್ನು, ವಿಪರೀತ ಎನ್ನುವಷ್ಟು ವಾಹನಗಳ ಮೇಲೆ ಅವಲಂಬಿತವಾಗಿರುವ ನಾವು-ನೀವು ಕಲ್ಪಿಸಿಕೊಳ್ಳುವುದೂ ಕಷ್ಟ. ವಿದೇಶಗಳಲ್ಲಿ, ನಮ್ಮ ಕೆಲವು ಪಟ್ಟಣಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ಬರಬಹುದು. ಆದರೆ ಮೊಬೈಲನ್ನು ಚಾರ್ಜ್ ಮಾಡಿಕೊಳ್ಳುವುದಕ್ಕೇ ಪರದಾಡುವಷ್ಟು ಕರೆಂಟ್ ನ ಅಭಾವವಿರುವ ನಮ್ಮ ಹಳ್ಳಿಗಳ ಕಥೆ? ಅವರೆಲ್ಲಾ ಮತ್ತೆ ಕುದುರೆ, ಎತ್ತುಗಳ ಕಾಲಿಗೇ ಬೀಳಬೇಕು! ಇದೆಲ್ಲವನ್ನೂ ಯೋಚಿಸಿದಾಗ 'ಮಿಲಿಯನ್ ಡಾಲರ್' ಪ್ರೆಶ್ನೆಯೊಂದು ನನ್ನೊಳಗೆ ಮೂಡುತ್ತದೆ:

ಕಾಗೆ, ಗೂಬೆಗಳಿಗೂ ಇರುವ ರೆಕ್ಕೆ ಮನುಷ್ಯನಿಗೇಕಿಲ್ಲ?

ಒಮ್ಮೆ ಕಲ್ಪನೆ ಮಾಡಿಕೊಳ್ಳೋಣ. ಹಾರುವ ಶಕ್ತಿಯೊಂದಿದ್ದರೆ ಬೆಳಗ್ಗೆ ಒಂಭತ್ತಕ್ಕೋ, ಹತ್ತಕ್ಕೋ ಶುರುವಾಗುವ ಕಛೇರಿ, ಶಾಲೆಗಾಗಿ ಏಳೂ ಮೊವತ್ತಕ್ಕೇ ಮನೆಬಿಡುವ ಅಗತ್ಯವಿರುತ್ತಿರಲ್ಲಿಲ್ಲ. ನಿಧಾನಕ್ಕೆ ಎದ್ದು ಬೇಕಾದಷ್ಟು ಬಾರಿ ಆಕಳಿಸಬಹುದಿತ್ತು. ಬಿಸಿಬಿಸಿ ಕಾಫಿಯನ್ನು ಮೆಲ್ಲಗೆ ಹೀರುತ್ತಾ ನ್ಯೂಸ್ ಪೇಪರ್ ನ ಕಟ್ಟಕಡೆಯ ಮೂಲೆಯಲ್ಲಿರುವ ಜಾಹೀರಾತನ್ನೂ ಬಿಡದಂತೆ ಸಕಲ ಜ್ಞಾನವನ್ನೂ ತಲೆಯೊಳಗೆ ತುಂಬಿಕೊಳ್ಳಬಹುದಿತ್ತು. ತಿಂಡಿ ಬೇಯಿಸಿತ್ತಿರುವ ಹೆಂಡತಿಗೆ ತಿಳಿಯದಂತೆ ಎರೆಡು ಸುತ್ತು 'ದಮ್' ಎಳೆಯಬಹುದಿತ್ತು. ಇಷ್ಟದ ಹಾಡನ್ನು ಕೋರಸ್ ನ ಸಮೇತ ಹಾಡಿಕೊಳ್ಳುತ್ತಾ ಸ್ನಾನ ಮಾಡಬಹುದಿತ್ತು. ಈ ಸಂಭ್ರಮಗಳೆಲ್ಲಾ ಮುಗಿದು, ಇನ್ನೇನು ಅರ್ಧಗಂಟೆಯಷ್ಟೇ ಉಳಿದಿದೆಯೆನ್ನುವಾಗ ಅಂಗಳಕ್ಕೋ, ಟೆರಾಸಿಗೋ ಬಂದು ದೀರ್ಘವಾಗಿ ಉಸಿರೆಳೆದುಕೊಂಡು, ಎರೆಡೂ ಕೈಯ್ಯನ್ನು ಪಟಪಟನೆ ಆಡಿಸಿದರಾಯಿತು, ನಮ್ಮ ಪ್ರಯಾಣ ಶುರು! ಹೊಂಡಗುಂಡಿಗಳಿಗೆ ಬರೆದುಕೊಟ್ಟಿರುವ ರಸ್ತೆಗಳು, ತೊಟ್ಟಿಗಿಂತ ಜಾಸ್ತಿ ರಸ್ತೆಯ ಮೇಲೇ ಬಿದ್ದಿರುವ ಕಸಕಡ್ಡಿಗಳು, ತೋಡಿರಾಗ ಹಾಡುತ್ತಾ ಹಾರಿಬಂದು ನಮ್ಮಿಂದ ಬಲವಂತವಾಗಿ ರಕ್ತದಾನ ಮಾಡಿಸಿಕೊಳ್ಳುವ   ಸೊಳ್ಳೆಗಳು, ರಸ್ತೆಯನ್ನೇ ಮೋರಿಯನ್ನಾಗಿಸಿಕೊಂಡು ನಿಂತಿರುವ ಕೊಳಚೆ ನೀರು.... ಇದ್ಯಾವುದರ ತಲೆಬಿಸಿಯಿಲ್ಲದೇ, ವೇಲು, ಕರ್ಚೀಫೇ ಇತ್ಯಾದಿಗಳನ್ನು ಮೂತಿಗೆ ಬಿಗಿದುಕೊಳ್ಳುವ ರಗಳೆಯಿಲ್ಲದೇ ಹಾಯಾಗಿ ಹಾರುತ್ತಾ ಆಫೀಸು/ಶಾಲೆಗಳನ್ನು ತಲುಪಬಹುದಿತ್ತು. ಹೋಗಿ ಟೆರಾಸಿನ ಮೇಲೆ 'ಲ್ಯಾಂಡ್' ಆಗಿ ಒಮ್ಮೆ ಮೇಲಕ್ಕೆ ನೋಡಿದರೆ ಬಾಸ್ ಕೂಡಾ ಸೇರಿದಂತೆ ಸೂಟು-ಬೂಟು ತೊಟ್ಟ ನೂರಾರು ಉದ್ಯೋಗಿಗಳು ಹಾರುತ್ತಾ ಬರುತ್ತಿರುವ ವಿಹಂಗಮ ದೃಶ್ಯ ಕಣ್ಣಿಗೆ ಬೀಳುತ್ತಿತ್ತು!

ಹಾರಾಟದಿಂದ ತಪ್ಪಿಹೋಗುವ ಇನ್ನೊಂದು ಅಪಾಯವೆಂದರೆ ಬೀದಿನಾಯಿಗಳ ಧಾಳಿ. ಹಗಲಿನ ಹೊತ್ತಿನಲ್ಲಿ ಪಾಪಚ್ಚಿಗಳಂತೆ ಬಿದ್ದುಕೊಂಡಿರುವ ಈ ನಿರ್ಗತಿಕ ಶ್ವಾನಗಳು ರಾತ್ರೆಯಾಗುತ್ತಿರುವಂತೆಯೇ 'ಗ್ರಾಮಸಿಂಹ'ಗಳಾಗಿಬಿಡುತ್ತವೆ. ಇಡೀ ಏರಿಯಾವನ್ನೇ ತಮ್ಮ ಸುಪರ್ದಿಗೆ ತೆಗೆದುಕೊಂಡು ಗಸ್ತು ತಿರುಗುತ್ತಾ ಎದುರಿಗೆ ಸಿಗುವ ಒಬ್ಬಂಟಿ ಯಾತ್ರಿಕರನ್ನು ಬೆದರಿಸುತ್ತವೆ. ಅದರಲ್ಲೂ ಚಿಂದಿ ಜೀನ್ಸ್, ನಾಲ್ಕಾರು ಜೇಬು-ಬಾಲಗಳಿರುವ ಕಾರ್ಗೋ ಪ್ಯಾಂಟ್ ನಂತಹಾ 'ಡಿಂಗ್ರಿ' ಉಡುಪು ತೊಟ್ಟವರು ಕಂಡರಂತೂ ಮುಗಿದೇಹೋಯಿತು, ಹೀನಾಮಾನವಾಗಿ ಬೊಗಳುತ್ತಾ ಧಾಳಿಮಾಡಿಬಿಡುತ್ತವೆ. ಹೀಗಾಗಿ ರಾತ್ರೆ ಒಬ್ಬಂಟಿಯಾಗಿ ಓಡಾಡುವರು ಹಾಗೂ 'ಡಿಂಗ್ರಿ' ವಸ್ತ್ರ ತೊಡುವವರಿಗೆ ಹಾರುವ ಶಕ್ತಿ ವರದಾನವಾಗಲಿದೆ. ಇನ್ನು ಲಕ್ಷಾಂತರ ಪತಿರಾಯರುಗಳಿಗೆ ಈ 'ಹಾರಾಟ'ದಿಂದ ಅದೆಷ್ಟು ಉಪಯೋಗವಾಗುತ್ತದೆ ಗೊತ್ತಾ? ಅವರಿನ್ನು ಪದೇ ಪದೇ ತಮ್ಮ ಹೆಂಡತಿಯನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗುವ ಅಗತ್ಯವೇ ಇರುವುದಿಲ್ಲ. ಕ್ರೆಡಿಟ್ ಕಾರ್ಡನ್ನು ಅದರ ಪಾಸ್ ವರ್ಡಿನ ಸಮೇತ ಕೈಲಿಟ್ಟು ಕಳಿಸಿಕೊಟ್ಟರಾಯಿತು, ಮಹಿಳಾಮಣಿಗಳು ತಮ್ಮ ಪಾಡಿಗೆ ಹಾರಿಕೊಂಡು ಹೊರಟುಬಿಡುತ್ತಾರೆ.  ತಮಗೆ ಬೇಕಾದಷ್ಟು ಶಾಪಿಂಗ್ ಮಾಡಿಕೊಂಡು, ಅಂಗಡಿಯಲ್ಲಿರುವ ಅಷ್ಟೂ ವೆರೈಟಿಗಳನ್ನೂ ಆಚೆ ತರಿಸಿ, ಯಾವ ವಾಹನದ ಹಂಗಿಲ್ಲದೇ ಸ್ವತಂತ್ರವಾಗಿ ಹಾರುತ್ತಾ ಬಂದುಬಿಡುತ್ತಾರೆ. ಹಾಂ, ಈ ಒಡವೆ, ಬಟ್ಟೆ ಅಂಗಡಿಗಳ ಸೇಲ್ಸ್ ಮ್ಯಾನ್ ಗಳಿಗೆ ಮಾತ್ರ ಈ 'ಹಾರಾಟ'ದಿಂದ ತೊಂದರೆಯಾಗುತ್ತಿತ್ತೆನ್ನುವುದರಲ್ಲಿ ಸಂಶಯವೇ ಇಲ್ಲ. ಇಲ್ಲದ ಟ್ರಾಫಿಕ್ನಿಂದ ಉಳಿಯುವ ಸಮಯವನ್ನೂ ಈ ಮಹಿಳಾಮಣಿಗಳು ಅಂಗಡಿಯಲ್ಲಿ ಸೆಲೆಕ್ಷನ್ ಗೆಂದೇ ವ್ಯಯಿಸುವುದರಿಂದ ಅವರ ಶ್ರಮ ಹೆಚ್ಚಾಗುತ್ತದೆ. ಹೀಗಾಗಿ ಅವರೆಲ್ಲಾ ಒಟ್ಟಾಗಿ ನಮ್ಮೀ 'ಹಾರು ಸಿದ್ಧಾಂತ'ದ ವಿರುದ್ಧ ಹೋರಾಟನಡೆಸುವ ಅಪಾಯವೂ ಇಲ್ಲದಿಲ್ಲ.

ಹಾಗಂತ ಹಾರಾಟದಿಂದ ಬರೀ ಉಪಯೋಗಗಳು ಮಾತ್ರ ಇವೆಯೆಂದು ಹೇಳುವಂತಿಲ್ಲ. ಎಲ್ಲೆಲ್ಲಿ 'ಹಾರಾಟ' ಹೆಚ್ಚಾಗುತ್ತದೋ ಅಲ್ಲೆಲ್ಲಾ ನಿಯಮಾವಳಿಗಳು ಹುಟ್ಟಿಕೊಳ್ಳುತ್ತವೆ. ಇಲ್ಲೂ ಅಷ್ಟೇ. ಎತ್ತರದ ಟವರ್ ಗಳನ್ನು ಕಟ್ಟಿಸಿ, ಜೇಬಿಗೆ ಪೀಪಿ ಸಿಕ್ಕಿಸಿಕೊಂಡ ಟ್ರಾಫಿಕ್ ಪೋಲೀಸರನ್ನು ಅಲ್ಲಲ್ಲಿ ನಿಲ್ಲಿಸಿ ಹಾರುತ್ತಾ ಬರುವವರ ಮೇಲೊಂದು ಕಣ್ಣಿಡಬೇಕಾಗುತ್ತದೆ. ಏಕೆಂದರೆ ಈಗ ರಸ್ತೆಗಳಲ್ಲಿ ವೀಲಿಂಗ್ ಮಾಡುವ, ಹ್ಯಾಂಡಲ್ ಬಿಟ್ಟು ಬೈಕ್ ಓಡಿಸುವ ಬಿಸಿರಕ್ತದ ಹುಡುಗರು ಆಕಾಶದಲ್ಲಿ  ಒಂದೇ ಕೈ ಬಡಿಯುವುದು, ಗಾಳಿಯಲ್ಲಿ ಪಲ್ಟಿ ಹೊಡೆಯುವುದೇ ಮುಂತಾದ ಕಪಿಚೇಷ್ಟೆಗಳನ್ನ ಮಾಡಲಿಕ್ಕೂ ಸಾಕು. ಇನ್ನು ಕೆಲವು ಮುರುಷಪುಂಗವರು ಕುಡಿದು ಹಾರುತ್ತಾ ಬಂದು 'ಶಿವಾ' ಎಂದು ತಮ್ಮಪಾಡಿಗೆ ಹೋಗುತ್ತಿರುವ ಬಡಪಾಯಿಗಳಿಗೆ ಢೀ ಕುಟ್ಟಿ, ಕೊನೆಗೆ ಇಬ್ಬರೂ ಕಾಲುಮೇಲಾಗಿ ನೆಲಕ್ಕೆ ಬೀಳುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ!  ಸಿಗ್ನಲ್ ಗಳಲ್ಲಿ ಕಡಲೆಕಾಯಿ, ಸೊಳ್ಳೆ ಬ್ಯಾಟ್, ನೀರಿನ ಬಾಟಲಿ,  ಇತ್ಯಾದಿಗಳನ್ನು ಮಾರುವ ರಸ್ತೆ ವ್ಯಾಪಾರಿಗಳೆಲ್ಲಾ ಹಾರುತ್ತಾ ಹಿಂದೆ ಬಂದು ತಮ್ಮ ಉತ್ಪನ್ನಗಳನ್ನು ಕೊಳ್ಳುವಂತೆ ಬೇಡಿಕೆ (ಬೆದರಿಕೆ!) ಇಡುತ್ತಾ ಬೆನ್ನಟ್ಟಿಬರುವ ಸಂಭವವೂ ಇಲ್ಲದಿಲ್ಲ. ಸರಗಳ್ಳರೇ ಮುಂತಾದವರು ಹಾರುಗಳ್ಳರುಗಳಾಗಿ ಬದಲಾಗಿ ನಡುಆಕಾಶದಲ್ಲೇ ಧಾಳಿನಡೆಸುವ ಸಾಧ್ಯತೆಗಳೂ ಹೆಚ್ಚಿವೆ. ಈ ಎಲ್ಲಾ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಈಗಿರುವ ರಸ್ತೆ ನಿಯಮಗಳಂತೆಯೇ 'ಹಾರಾಟ ವಿಧೇಯಕ'ಗಳನ್ನು ರೂಪಿಸಬೇಕಾಗುತ್ತದೆ. 

ಈ ಒಂದೆರೆಡು ದುಷ್ಪರಿಣಾಮಗಳ ಹೊರತಾಗಿ ಹೇಳುವುದಾದರೆ ಹಾರಾಟ ಒಂದು ಅದ್ಭುತ ಶಕ್ತಿ. ನಿಮಗೆಲ್ಲಾ ಜೀವವಿಕಾಸದ ಸಿದ್ಧಾಂತ ನೆನಪಿದೆಯಾ? ಸಮುದ್ರದಲ್ಲಿ ಮಾತ್ರವಿದ್ದ ಜೀವಿಸಂಕುಲ ನೀರಿನಿಂದ ಮೇಲಕ್ಕೆ ಎಗರುತ್ತಾ ಎಗರುತ್ತಾ ಕ್ರಮೇಣ ಅವುಗಳಲ್ಲಿ ನೆಲದಮೇಲಿನ ವಾತಾವರಣಕ್ಕೆ ಬೇಕಾದ ರಚನೆಗಳು ಮೈಗೂಡಿದವಂತೆ. ಅಂತೆಯೇ ನಾವುಗಳೂ ಇವತ್ತಿನಿಂದಲೇ ದಿನಕ್ಕೆ ಅರ್ಧಗಂಟೆಯಾದರೂ ಕೈಯ್ಯನ್ನು ರೆಕ್ಕೆಯಂತೆ ಬಡಿಯುತ್ತಾ ಮಂಚ, ಕಟ್ಟೆ, ದಿಬ್ಬ ಮುಂತಾದ ಚಿಕ್ಕ ಎತ್ತರಗಳಿಂದ ಹಾರಲು ಪ್ರಯತ್ನಿಸುವುದು ಒಳ್ಳೆಯದು. ಯಾರಿಗೆ ಗೊತ್ತು? ಕೊನೆಗೆ ನಮ್ಮ ಮೊಮ್ಮಕ್ಕಳು, ಮರಿಮಕ್ಕಳ ಕಾಲಕ್ಕಾದರೂ ಕನಿಷ್ಟ ಬಾವಲಿಗಿರುವಂತಹಾ ರೆಕ್ಕೆಗಳು ಮೂಡಿದರೂ ಮೂಡಬಹುದು! ಆಗ ನನ್ನೀ ಲೇಖನವು 'ಹ್ಯೂಮನ್ ಫ್ಲೈ ಥಿಯರಿ' ಅಂತಲೋ, 'ಮನುಷ್ಯನ ಹಾರು ಸಿದ್ಧಾಂತ' ಅಂತಲೋ ಪ್ರಸಿದ್ಧವಾಗಿ ನನಗೆ ನೊಬೆಲ್ ಬಹುಮಾನ ದೊರೆತರೂ ದೊರೆಯಬಹುದು. ಇಂತಹಾ ಒಂದು ಮಹಾನ್ ವಿಕಾಸದ ಮುನ್ನುಡಿಕಾರರಾದ ನಾನು-ನೀವು 'ಹಾರು ಸಿದ್ಧಾಂತದ ಹರಿಕಾರರು' ಎಂದು ಮೋಡಗಳ ಮೇಲಿನ ವೇದಿಕೆಯಲ್ಲಿ ಹಾರಾಡುತ್ತಾ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಸೃಷ್ಟಿಯಾದರೂ ಆಗಬಹುದು. ಏನಂತೀರಾ?

ವಿಶೇಷ ಸೂಚನೆ: ಈ ಲೇಖನದಿಂದ ಪ್ರೇರಿತರಾಗಿ ಬೇಗ ರೆಕ್ಕೆಗಳು ಬರಬೇಕೆಂಬ ಅತಿಯಾಸೆಯಿಂದ, ಹಾರಿಯೇ ಬಿಡುತ್ತೇನೆಂಬ ಓವರ್ ಕಾನ್ಫಿಡೆನ್ಸ್ ನಿಂದ ಎತ್ತರದ ಮಹಡಿಯಿಂದಲೋ, ಮರದಿಂದಲೋ ಧುಮುಕಿ ಕೈ, ಕಾಲು, ಸೊಂಟ ಮುರಿದುಕೊಂಡರೆ ಅದಕ್ಕೆ ಲೇಖಕರು ಜವಾಬ್ದಾರರಾಗಿರುವುದಿಲ್ಲ!

(ಮಂಗಳ 24-5-2017ರ ಸಂಚಿಕೆಯಲ್ಲಿ ಪ್ರಕಟವಾದ ನಗೆಬರಹ)

ಸೋಮವಾರ, ಮೇ 8, 2017

ಅಜ್ಜನ ಊರು ಹಾಗೂ ಅಲ್ಲಿನ ದೆವ್ವದ ಕಥೆಗಳು...

ನೀವು ಈ ದೆವ್ವ-ಭೂತಗಳನ್ನು ನಂಬ್ತೀರಾ? ನಾನಂತು ನಂಬುತ್ತೇನೆ. ನಾನೇನೋ ಹಗಲಿನ ಹೊತ್ತಿನಲ್ಲಿ ಜೊತೆಗಿರುವ ಮೂರುವರೆ ಪೈಸೆ ಧೈರ್ಯದಲ್ಲಿ 'ಈ ದೆವ್ವ ಗಿವ್ವ ಎಲ್ಲಾ ಸುಳ್ಳು' ಅನ್ನೋದು; ಅದು ಇಲ್ಲೇ ಯಾವುದೋ ಹುಣಿಸೆ ಮರದಲ್ಲಿ ನೇತಾಡುತ್ತಿರುವ ದೆವ್ವವೊಂದರ ಕಿವಿಗೆ ಬೀಳೋದು; ಆಮೇಲೆ ರಾತ್ರಿಯಾಗಿ ಎಲ್ಲರೂ ಮಲಗಿದ ಮೇಲೆ ಅದು ಮರದಿಂದ ಇಳಿದು ನೇರ ನನ್ನ ರೂಮಿಗೆ ಬಂದು "ಏನಂದೆ ಮಗನೇ? ಇನ್ನೊಂದ್ಸಲ ಹೇಳು" ಅಂತ ಕೋರೆಹಲ್ಲು ತೋರಿಸಿ ನಗೋದು; ಆಮೇಲೆ ನಾನು.......
ಇದೆಲ್ಲಾ ಯಾಕೆ ಬೇಕು ಹೇಳಿ? ಅದಕ್ಕೇ ನಾನು ಈ ದೆವ್ವಗಳನ್ನ ಕೆರಳಿಸುವಂತಹ ಯಾವ ಹೇಳಿಕೆಗಳನ್ನು ಕೊಡಬಾರದೂಂತ ನಿರ್ಧರಿಸಿಬಿಟ್ಟಿದ್ದೇನೆ!

ಹಾಗಂತ ನೀವು ನನ್ನ ಹೆದರುಪುಕ್ಲ ಅಂತ ಆಡಿಕೊಳ್ಳೋದೇನೂ ಬೇಡ. ನಮ್ಮ ಮನೆಯಲ್ಲಿ ಇರೋದ್ರಲ್ಲಿ ನಾನೇ ಧೈರ್ಯವಂತ! ಅಪ್ಪ, ಅಮ್ಮ ಹಾಗೂ ತಮ್ಮ ರಾತ್ರಿ ಹೊತ್ತಲ್ಲಿ ಹೊರಗೆ ಓಡಾಡುವ ವಿಷಯದಲ್ಲಿ ಪುಕ್ಕಲರೇ! ಈ ವಿಷಯದಲ್ಲಿ ನಾನೇ ಇದ್ದಿದ್ದರಲ್ಲಿ ಗಟ್ಟಿಗ. ನಮ್ಮ ಮನೆ ಇರೋದು ನಮ್ಮೂರಿನ ಮುಖ್ಯ ರಸ್ತೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ. ಬೀದಿ ದೀಪಗಳಿಲ್ಲದ, ಅಕ್ಕಪಕ್ಕ ಮನೆಗಳೂ ಇಲ್ಲದ ಮಣ್ಣ ದಾರಿಯಲ್ಲಿ ಮರಗಳ ಮಧ್ಯೆ, ಮಧ್ಯರಾತ್ರಿಯಲ್ಲಿ ಸಹಾ ಒಬ್ಬನೇ ನಡೆದುಬರುತ್ತೇನೆಂಬ ಕಾರಣಕ್ಕೆ ನನಗೆ ಈ ಧೈರ್ಯಶಾಲಿಯೆಂಬ ಬಿರುದು ಬಂದಿದ್ದು.

ಆದರೆ ನಿಜದಲ್ಲಿ ನನ್ನ ಅವಸ್ಥೆ ನನಗೆ ಮಾತ್ರ ಗೊತ್ತು! ಮೊದಲು ನಾನು ಊರಿನಲ್ಲಿದ್ದಾಗ ಅಪರೂಪಕ್ಕೆ ಊರಿಗೆ ಬರುತ್ತಿದ್ದ ಗೆಳೆಯರನ್ನು ಭೇಟಿಯಾಗಿ, ರಾತ್ರೆ ಒಂಭತ್ತರ ತನಕ ಊರೆಲ್ಲಾ ತಿರುಗಿ, ನಂತರ ಒಬ್ಬನೇ ನಡೆದು ಮನೆಗೆ ಬರುತ್ತಿದ್ದೆ. ಊರಿನ ಟಾರ್ ರಸ್ತೆಯಿಂದ ನಮ್ಮ ಕೇರಿಯ ಮಣ್ಣ ರಸ್ತೆಗೆ ತಿರುಗಿ ಇಪ್ಪತ್ತು ಮೊವತ್ತು ಹೆಜ್ಜೆ ನಡೆದರೆ ಎಡಭಾಗದಲ್ಲಿರುವ ಇಳಿಜಾರಿನಲ್ಲಿ ತುಂಬಾ ಹಳೆಯ ಕಾಲದ ಬಾವಿಯೊಂದಿದೆ. ಅದರ ಪಕ್ಕದಲ್ಲೇ ದಟ್ಟವಾದ ಪೊದೆಗಳಿಂದಾವೃತವಾದ ಬೃಹತ್ ಅತ್ತಿಯ ಮರವೂ ಇದೆ. ಅದು ಭೀಕರವಾದ ಸರ್ಪಗಳ ವಾಸಸ್ಥಾನವೆಂದು ಅಪ್ಪ ಆಗಾಗ ಹೇಳುತ್ತಾರೆ. ಅಲ್ಲದೇ ಕೆಲವು ವರ್ಷಗಳ ಕೆಳಗೆ ಸುಮಾರು ಹದಿಮೂರು ಅಡಿ ಉದ್ದದ ಕಾಳಿಂಗ ಸರ್ಪವೊಂದು ಅದೇ ಪೊದರಿನಿಂದ ಹೊರಬಂದು ಎದುರೇ ಇರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನುಗ್ಗಿದ್ದನ್ನ ನಾನೇ ಕಣ್ಣಾರೆ ನೋಡಿದ್ದೇನೆ. ಸಾಲದ್ದಕ್ಕೆ ನಾನು ಚಿಕ್ಕವನಿದ್ದಾಗ ಸುಕ್ಕಡ್ಯಾ ಎನ್ನುವವನೊಬ್ಬ ಅದೇ ಬಾವಿಗೆ ಬಿದ್ದು ಸತ್ತಿದ್ದ ಕೂಡಾ! ಬಾವಿಯ ನೀರಿನಲ್ಲಿ ಮುಖ ಕೆಳಗಾಗಿ ತೇಲುತ್ತಿರುವ ಸುಕಡ್ಯಾನ ಚಿತ್ರ ಈಗಲೂ ಕಣ್ಮುಂದೆ ಹಾಗೇ ಇದೆ. ಇಷ್ಟೆಲ್ಲಾ ಭೀಬತ್ಸಗಳಿರುವ ದಾರಿಯಲ್ಲಿ ರಾತ್ರೆ ಒಬ್ಬನೇ ನಡೆಯುವಾಗ ಎಲ್ಲವೂ ನೆನಪಾಗುತ್ತದೆ. ಮತ್ತೆ ಮತ್ತೆ ಹಿಂದಕ್ಕೆ- ಮುಂದಕ್ಕೆ ಮೊಬೈಲ್ ಟಾರ್ಚ್ ಹಾಕಿ ಸಮೀಪದಲ್ಲಿ ಯಾವುದೇ ದೆವ್ವವಾಗಲೀ, ಕಾಳಸರ್ಪವಾಗಲೀ ಇಲ್ಲವೆಂದು ಖಚಿತಪಡಿಸಿಕೊಳ್ಳುತ್ತಾ, ಸಣ್ಣ ಸದ್ದಾದರೂ ಬೆಚ್ಚಿಬೀಳುತ್ತ, ಮನಸ್ಸಿನಲ್ಲೇ ಗಾಯತ್ರೀ ಮಂತ್ರ ಪಠಿಸುತ್ತಾ ಹೇಗೋ ಮನೆತಲುಪದಮೇಲೇ ಗಟ್ಟಿಯಾಗಿ ಉಸಿರಾಡುತ್ತೇನೆಂಬುದು ಗೊತ್ತಿಲ್ಲದ  ಮನೆಯವರು ನನ್ನನ್ನು ಧೈರ್ಯಶಾಲಿ ಎಂದು ತಿಳಿದಿದ್ದರು!

ಆದರೆ ಕೊನೆಗೂ ಒಮ್ಮೆ ನಾನೆಂತಹ ರಣಧೀರನೆಂಬುದು ಎಲ್ಲರಿಗೂ ಗೊತ್ತಾಗಿಹೋಯಿತು. ಅದು ನಾನು ಕೊನೆಯ ವರ್ಷದ ಡಿಗ್ರಿ ಓದುತ್ತಿದ್ದ ಸಮಯ. ಆಗಷ್ಟೇ ಹೊಸದಾಗಿ ಮ್ಯೂಸಿಕ್ ಕೇಳಬಲ್ಲ ಮೊಬೈಲ್ ಖರೀದಿಸಿದ್ದೆ. ರಾತ್ರೆ ಎಲ್ಲರೂ ಮಲಗಿದ ಮೇಲೆ ಸ್ವಲ್ಪ ಹೊತ್ತು ಕಿವಿಗೆ ಇಯರ್ ಫೋನ್ ಚುಚ್ಚಿಕೊಂಡು  ಅಂಗಳದ ಕತ್ತಲಲ್ಲಿ ಅತ್ತಿಂದಿತ್ತ ಓಡಾಡುತ್ತಾ ಹಾಡುಕೇಳುವುದು ನನ್ನ ನಿತ್ಯದ ಅಭ್ಯಾಸ. ಎಷ್ಟೇ ಆದರೂ 'ಧೈರ್ಯಶಾಲಿ'ಯಲ್ವಾ! ಅಂದೂ ಕೂಡಾ ಹಾಗೇ ಅತ್ತಿಂದಿತ್ತ, ಇತ್ತಿಂದತ್ತ ನಡೆದಾಡುತ್ತಾ ಹಾಡು ಕೇಳುತ್ತಿದ್ದೆ; ಥಟ್ಟನೆ ಕಾಲಿಗೆ ಏನೋ ಸಿಲುಕಿಂದಂತಾಯಿತು. ಅದೇನೆಂದು ಪರೀಕ್ಷಿಸಲು ಕಾಲನ್ನು ಮೆಲ್ಲಗೆ ಅಲ್ಲಾಡಿಸಿದೆ. ಆಗಲೇ ನನಗೆ ಗೊತ್ತಾಗಿದ್ದು...

ಘಟಸರ್ಪವೊಂದು ನನ್ನ ಕಾಲಿಗೆ ಸುತ್ತಿಕೊಂಡಿತ್ತು!!!

ಕೈಯ್ಯಲ್ಲಿದ್ದ ಇಯರ್ ಫೋನನ್ನು ಮೊಬೈಲ್ ನ ಸಮೇತ ಎಸೆದು "ಅಯ್ಯಯ್ಯಪ್ಪಾ.... ಹಾವೂ..." ಎಂದು ಸೀದಾ ಮನೆಯಕಡೆ ಓಡಿದೆ. ಕಾಲಿಗೆ ಸುತ್ತಿಕೊಂಡಿದ್ದ ಆ ಕ್ರೂರ ಸರ್ಪವೂ ನನ್ನನ್ನು ಹಿಂಬಾಲಿಸಿತು. ನನ್ನ ಹಾಹಾಕಾರ ಕೇಳಿ ಬೆಚ್ಚಿಬಿದ್ದು ಎಚ್ಚರಾದ ಅಪ್ಪ ಅಮ್ಮ, ಕೈಗೆ ಸಿಕ್ಕಿದ ಕಟ್ಟಿಗೆ, ಪೊರಕೆಗಳನ್ನು ಹಿಡಿದುಕೊಂಡು ತಮ್ಮ ಧೀರ ಪುತ್ರನನ್ನು ಬೆನ್ನಟ್ಟಿಬರುತ್ತಿರುವ ಘಟಸರ್ಪಕ್ಕೊಂದು ಗತಿ ಕಾಣಿಸಲು ಸಿದ್ಧರಾಗಿ ನಿಂತರು.. ಅಷ್ಟರಲ್ಲಿ ತಮ್ಮ ಲೈಟ್ ಹಾಕಿದ. ಎಲ್ಲಿ ನೋಡಿದರೂ ಹಾವಿನ ಸುಳಿವೇ ಇಲ್ಲ! ಅಷ್ಟು ಬೇಗ ಎಲ್ಲಿ ಹೋಯಿತೆಂದು ಹುಡುಕುತ್ತಾ ಎಲ್ಲರೂ ಅಂಗಳದೆದುರಿನ ಬಾಗಿಲಿನತ್ತ ಬಂದೆವು. ಅಲ್ಲಿ ಬಿದ್ದಿತ್ತು.... ಗೊಬ್ಬರದ ಚೀಲಗಳನ್ನು ಹೊಲಿಯಲು ಬಳಸುವ ಮಾರುದ್ದದ ಪ್ಲಾಸ್ಟಿಕ್ ಹಗ್ಗ!

ಆಗಿದ್ದಿಷ್ಟೇ: ಅಂಗಳದ ಮಧ್ಯದಲ್ಲಿ ಸುರುಳಿಯಾಗಿ ಬಿದ್ದಿದ್ದ ಹಗ್ಗ ನಡೆದಾಡುವಾಗ ನನ್ನ ಕಾಲಿಗೆ ಸುತ್ತಿಕೊಂಡಿದೆ. ಮೊದಲೇ ತಲೆಯ ತುಂಬಾ ಪ್ರೇತ, ಸರ್ಪಾದಿಗಳನ್ನು ತುಂಬಿಕೊಂಡಿರುವ ನಾನು ಅದನ್ನೇ ಹಾವೆಂದೆಣಿಸಿ ಜೀವಭಯದಲ್ಲಿ ಓಟ ಕಿತ್ತಿದ್ದೆ. ಕಾಲಿಗೆ ಸುತ್ತಿಕೊಂಡು ಬಾಗಿಲ ತನಕ ಜೊತೆಗೇ ಬಂದ ಹಗ್ಗ ಬಾಗಿಲ ಬುಡದಲ್ಲಿ ಜಾರಿಹೋಗಿತ್ತು.

ಸರಿರಾತ್ರಿಯಲ್ಲಿ ನನ್ನನ್ನು ಇಷ್ಟೆಲ್ಲಾ ಅಟ್ಟಾಡಿಸಿದ ಆ ಭಯಾನಕ ಸರ್ಪವನ್ನು ನೋಡುತ್ತಾ ಮೂವರೂ ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದರೆ ನಾನು ಮಾತ್ರ ಅದನ್ನು ಸುಟ್ಟುಬಿಡುವಂತೆ ಗುರಾಯಿಸುತ್ತಾ ನಿಂತೆ....

                  *******************

ದೆವ್ವಗಳು ಇವೆಯೋ ಇಲ್ಲವೋ, ಅವುಗಳ ಹೆಸರಿನಲ್ಲಿ ಹತ್ತುಹಲವು ಸ್ವಾರಸ್ಯಕರ ಕಥೆಗಳಿರುವುದಂತೂ ನಿಜ. ನನ್ನ ಅಜ್ಜನ ಮನೆಯಿರುವುದು ಸಾಗರ ತಾಲೋಕಿನ ಒಂದು ಹಳ್ಳಿಯಲ್ಲಿ.  ಅಲ್ಲಿ ಒಳಗೊಳಗೆ ಹೋದಂತೆಲ್ಲಾ ಪ್ರತೀ ಕಿಲೋಮೀಟರ್ ಗೆ ಮೂರೋ ನಾಲ್ಕೋ ಮನೆಗಳಿವೆ ಅಷ್ಟೇ. ಈಗ ಸಂಖ್ಯೆ ಜಾಸ್ತಿಯಾಗಿದೆ ಬಿಡಿ; ಗುಡ್ಡ, ಬೆಟ್ಟ, ಕಾಡುಗಳೇ ಹೆಚ್ಚಾಗಿರುವ ಆ ಊರಿನಲ್ಲಿ ದೆವ್ವ-ಭೂತದ ಕಥೆಗಳು ಅನೇಕ. ನನಗೆ ಅಜ್ಜ ಹಾಗೂ ಅಮ್ಮ ಹೇಳಿದ ಕೆಲವೊಂದು ಕಥೆಗಳನ್ನು ನಿಮಗೂ ಹೇಳುತ್ತೇನೆ ಕೇಳಿ:

ಅಜ್ಜನ ಮನೆಯಿರುವುದು ಮುಖ್ಯ ರಸ್ತೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಕಾಡಿನ ಮಧ್ಯೆ. ಎಡಗಡೆಯ ಗುಡ್ಡ ಹಾಗೂ ಬಲಗಡೆಯ ಇಳಿಜಾರಿನ ಮಧ್ಯೆ ಸಾಗುತ್ತದೆ ಇಕ್ಕಟ್ಟಾದ ಮಣ್ಣು ರಸ್ತೆ. ಸುತ್ತಲೂ ಕಾಡು, ಪೊದರು ಹಾಗೂ ಹುಲ್ಲು. ಮನೆಗೆ ಏನೇ ಸಣ್ಣದೊಂದು ವಸ್ತು ಬೇಕೆಂದರೂ ಐದು ಕಿಲೋ ಮೀಟರ್ ದೂರದ ತುಮರಿಗೇ ಹೋಗಬೇಕು. ಅಮ್ಮ ಚಿಕ್ಕವಳಿದ್ದಾಗ ಅವಳಪ್ಪ ಅಂದರೆ ನನ್ನ ಅಜ್ಜ ಹಗಲಿಡೀ ದೇವರ ಪೂಜೆ ಹಾಗೂ ತೋಟದ ಕೆಲಸಗಳಲ್ಲಿ ಮುಳುಗಿಹೋಗಿರುತ್ತಿದ್ದ. ಸಂಜೆ ಕಳೆದ ಮೇಲೆ ಮನೆಗೆ ಬೇಕಾದ ವಸ್ತುಗಳನ್ನ ತರಲೆಂದು ದೂರದ ತುಮರಿಗೆ ಹೋಗುತ್ತಿದ್ದ. ಮರಳುವಾಗ ರಾತ್ರೆ ಹತ್ತಾಗುತ್ತಿತ್ತು. ಒಮ್ಮೆ ಆ ಕಿಷ್ಕಿಂದೆಯಂತಹಾ ದಾರಿಯಲ್ಲಿ, ಕಾಳ ಕತ್ತಲಿನಲ್ಲಿ ಒಬ್ಬನೇ ಸಾಮಾನುಗಳ ಮೂಟೆ ಹೊತ್ತು ಬರುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಯಾರೋ ನಿಂತಂತೆ ಭಾಸವಾಯಿತು. ಅದರತ್ತ ಗಮನ ಹರಿಸದೇ ಮುಂದೆ ಬಂದರೆ ಸ್ವಲ್ಪ ದೂರದಲ್ಲಿ ಮತ್ತೆ ಅದೇ ಆಕೃತಿ ನಿಂತಿದೆ! ಅದನ್ನೂ ಕಡೆಗಣಿಸಿ ಮುಂದೆ ಬಂದರೆ ಹಿಂದಿನಿಂದ "ಚಿದಂಬರಾ... ಚಿದಂಬರಾ..." ಎಂದು ಕರೆದ ಸದ್ದು! ಆದರೆ ದಿನವೂ ಗಂಟೆಗಟ್ಟಲೆ ಜಪತಪಾದಿಗಳನ್ನು ಮಾಡುತ್ತಿದ್ದ ಅಜ್ಜ ಇದ್ಯಾವುದಕ್ಕೂ ಹೆದರದೇ ಮನೆ ತಲುಪಿದನಂತೆ.

ಇನ್ನೊಮ್ಮೆ ಅಜ್ಜನ ಜೊತೆ ಮನೆಯ ಎದುರಿನ ಕಣದಲ್ಲಿಕೆಲಸ ಮಾಡುತ್ತಿದ್ದ ನನ್ನ ದೊಡ್ಡ ಮಾವ (ಆಗಿನ್ನೂ ಅವರು ಚಿಕ್ಕವರಿದ್ದರು) ಗುದ್ದಲಿಯನ್ನು ಅಲ್ಲೇ ಮರೆತು ಬಂದುಬಿಟ್ಟರು. ರಾತ್ರೆ ಊಟ ಮಾಡಿದ ಮೇಲೆ ಅದನ್ನು ತರಲೆಂದು ಮತ್ತೆ ಅಲ್ಲಿಗೆ ಹೋಗಿ ನೋಡಿದರೆ ಆ ಜಾಗದಲ್ಲಿ  ಬಿಳಿಯ ಆಕೃತಿಯೊಂದು ಗುದ್ದಲಿಯನ್ನು ಹಿಡಿದು ನಿಂತುಕೊಂಡಿದೆ! ಇವರು ನೋಡುತ್ತಿರುವಂತೆಯೇ ಅದು ಕುಳ್ಳಗಾಗುತ್ತಾ ಹೋಗಿ ಕೊನೆಗೆ ಮಾಯವೇ ಆಯಿತಂತೆ. ಭೀತರಾಗಿ ಅಳುತ್ತಾ ಮನೆಗೆ ಬಂದ ಮಾವ ಒಂದು ವಾರ ಛಳಿ ಜ್ವರ ಹಿಡಿದು ಮಲಗಿಬಿಟ್ಟರು.

ಇವೆಲ್ಲಾ ನಮಗೆ ಅಜ್ಜ ಹೇಳಿದ ಕಥೆಯಾದ್ದರಿಂದ ಅದನ್ನು ಅಷ್ಟಾಗಿ ನಂಬುವಂತಿಲ್ಲ. ಏಕೆಂದರೆ ಮೊದಲೇ "ಬೋಕಾಳಿ ಮಾಂತ್ರಿಕ" ಎಂದು ತಮಾಷೆ ಮಾಡಲ್ಪಡುತ್ತಿದ್ದ ಅಜ್ಜ ಹೇಳುವುದರಲ್ಲಿ ಅರ್ಧಕ್ಕರ್ಧ ಬೋಕಾಳಿಯೇ ಆಗಿರುತ್ತಿತ್ತು. ಆದರೆ ಮುಂದಿನದು ನನಗೆ ಅಮ್ಮ ಹೇಳಿದ ಕಥೆ. ಇವತ್ತಿಗೂ ಅವಳು ಅದನ್ನು ಸತ್ಯ ಎಂದೇ ವಾದಿಸುತ್ತಾಳೆ.

ಆಗ ಅಮ್ಮ ಇನ್ನೂ ಮಿಡ್ಲಿಸ್ಕೂಲಿನಲ್ಲಿದ್ದಳು. ಒಂದು ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ಬಂದು ಊಟವಾದ ಮೇಲೆ ಅಕ್ಕ ಪಕ್ಕದ ಮನೆಯ ಹುಡುಗ ಹುಡುಗಿಯರೆಲ್ಲಾ ಒಟ್ಟಾಗಿ ಸ್ವಲ್ಪ ದೂರದಲ್ಲಿದ್ದ ತೋಟಕ್ಕೆ ಪೇರಳೆ ಹಣ್ಣುಕೊಯ್ಯಲು ಹೊರಟರು. ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ಹೊರಟವರಿಗೆ ಗೊತ್ತಿಲ್ಲದ ಸಂಗತಿಯೆಂದರೆ ಆ ಜಾಗದ ಸಮೀಪದಲ್ಲಿ ಕೆಲವೇ ದಿನಗಳ ಕೆಳಗೆ ಅಕಾಲ ಮರಣಕ್ಕೀಡಾಗಿದ್ದ ಬಾಣಂತಿಯೊಬ್ಬಳನ್ನು ಸುಟ್ಟಿದ್ದರೆಂಬುದು!

ಎಲ್ಲರೂ ಪೇರಳೆ ಮರಕ್ಕೆ ಲಗ್ಗೆಯಿಟ್ಟರು. ಬೇಕಾದಷ್ಟು ಹಣ್ಣು ತಿಂದು ಉಳಿದಿದ್ದನ್ನು ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡು ಇನ್ನೇನು ಹೊರಡಬೇಕು, ಅಷ್ಟರಲ್ಲಿ ಭಯಾನಕವಾದ ಆರ್ತನಾದವೊಂದು ತೀರಾ ಹತ್ತಿರದಿಂದಲೇ ಕೇಳಿಬಂತು! ಸುತ್ತಲೂ ನೋಡಿದ ಅಮ್ಮನಿಗೆ ಏನೂ ಕಾಣಲಿಲ್ಲ. ಆದರೆ ಜೊತೆಯಲ್ಲಿದ್ದವರೆಲ್ಲಾ 'ದೆವ್ವ ಬರ್ತಿದ್ದು... ಓಡೇ' ಅಂತ ಅರಚಿದಾಗ ಹಿಂದುಮುಂದು ನೋಡದೇ ನಾಗಾಲೋಟ ಕಿತ್ತಿದ್ದಾಳೆ. ಆ ಭಯಾನಕ ಸದ್ದೂ ಇವರನ್ನು ಬೆನ್ನತ್ತಿ ಬಂದಿದೆ. ಓಟದ ಮಧ್ಯೆ ಒಮ್ಮೆ ಅಮ್ಮ ತಿರುಗಿ ನೋಡಿದಳಂತೆ. ವಿವರಣೆಗೆ ನಿಲುಕದ, ವಿಚಿತ್ರ ಆಕಾರವೊಂದು ಕಪ್ಪಿನಿಂದ ಕಪ್ಪಿಗೆ (ಅಡಿಕೆ ತೋಟದಲ್ಲಿ ಎರೆಡು ಸಾಲುಗಳ ನಡುವೆ ಮಾಡಿರುವ ಕಾಲುವೆಯಂತಹ ಉದ್ದದ ತೋಡು) ಹಾರುತ್ತಾ ಬರುತ್ತಿರುವುದು ಕಂಡಿದೆ. ಮತ್ತೇನೂ ಯೋಚಿಸದೆ ಪ್ರತಿಯೊಬ್ಬರೂ ಒಬ್ಬೊಬ್ಬ ಆಂಜನೇಯನಂತೆ ಹೊಂಡ,ಗುಂಡಿ,ಏರು, ತಗ್ಗುಗಳೆಲ್ಲವನ್ನೂ ಒಂದೇ ನೆಗೆತಕ್ಕೆ ನೆಗೆಯುತ್ತಾ ಮನೆ ತಲುಪಿದರು. ತನ್ನ 'ಸೀಮೆ' ಮುಗಿಯುವ ತನಕ ಇವರನ್ನು ಬೆನ್ನಟ್ಟಿದ ಆ ಅವರ್ಣನೀಯ ಆಕೃತಿ ನಂತರ ಮರೆಯಾಯಿತು.

ಇನ್ನೊಂದು ಅವಳ ಶಾಲೆಯಲ್ಲಿ ನಡೆದ ಘಟನೆ: ಆಗ ಶಾಲೆಗಳಲ್ಲಿ ಈಗಿನಂತೆ ಬಿಸಿಯೂಟ ಇರಲಿಲ್ಲ. ಮಧ್ಯಾಹ್ನದ ಊಟಕ್ಕೆ  ಮನೆ ಸಮೀಪವಿರುವವರು ತಮ್ಮ ಮನೆಗೇ ಹೋಗುತ್ತಿದ್ದರೆ, ಉಳಿದವರು ಹತ್ತಿರದಲ್ಲಿರುವ ತಮ್ಮ ಪರಿಚಿತರ ಮನೆಗೋ ಅಥವಾ ನೆಂಟರಿಷ್ಟರ ಮನೆಗೋ ಹೋಗುತ್ತಿದ್ದರು. ಹಾಗಾಗಿ ಮಧ್ಯಾಹ್ನ ಊಟದ ಸಮಯದಲ್ಲಿ ಶಾಲೆಯಲ್ಲಿರುತ್ತಿದ್ದವರು ತೀರಾ ಕಡಿಮೆ. ಕೆಲವೊಂದು ಹುಡುಗಿಯರ ನಡುವೆ ಹೀಗೆ ಊಟಕ್ಕೆ ಹೋಗಿ ಬರುವುದರಲ್ಲೊಂದು ಪೈಪೋಟಿ- ಯಾರು ಮೊದಲು ಊಟ ಮುಗಿಸಿ ಬರುತ್ತಾರೆ ಅಂತ. ಈ ಸ್ಪರ್ಧೆಯಲ್ಲಿ ಸದಾ ಸೋಲುತ್ತಿದ್ದ ಹುಡುಗಿಯೊಬ್ಬಳು ಏನೇ ಆದರೂ ಇಂದು ತಾನು ಗೆಲ್ಲಲೇ ಬೇಕೆಂದು ಒಂದು ದಿನ ಮಧ್ಯಾಹ್ನ ಬಹಳ ಬೇಗ ಊಟ ಮುಗಿಸಿ ಮರಳಿದಳಂತೆ. ತರಗತಿಗೆ ಬಂದು ನೋಡಿದರೆ ಇನ್ನೂ ಯಾರೂ ಬಂದಿಲ್ಲ. ಕೊನೆಗೂ ತಾನು ಗೆದ್ದೆನೆಂದು ಬೀಗುತ್ತಾ, ಗೆಳತಿಯರು ಬಂದ ಮೇಲೆ ಅವರಿಗೆ ಹೇಗೆ ಹೊಟ್ಟೆ ಉರಿಸಬೇಕೆಂದು ಯೋಚಿಸುತ್ತಾ ಒಬ್ಬಳೇ ತರಗತಿಯಲ್ಲಿ ಕೂತಿದ್ದಾಳೆ. ಆಗಲೇ ಕೊಠಡಿಯ ಹಿಂದಿನ ಭಾಗದ, ಕಾಡಿನಕಡೆ ತೆರೆದಿರುವ ಕಿಟಕಿಯಿಂದ ಘಲ್..ಘಲ್.. ಎಂದು ಬಳೆಯ ಸದ್ದು ಕೇಳಿದೆ. ಗೆಳತಿಯರು ಬಂದರೆಂದು ಅವಳು ಇಣುಕಿ ನೋಡಿದರೆ ಯಾರೂ ಇಲ್ಲ! ಅಷ್ಟರಲ್ಲಿ ಮತ್ತದೇ ಕಡೆಯಿಂದ ಬಳೆಯ ಸದ್ದು, ಈ ಬಾರಿ ತುಸು ಜೋರಾಗೇ ಕೇಳಿದೆ. ತಾನು ಗೆದ್ದೆನೆಂಬ ಹೊಟ್ಟೇಕಿಚ್ಚಿಗೆ ತನ್ನ ಗೆಳತಿಯರೇ ಹೀಗೆ ಹೆದರಿಸುತ್ತಿದ್ದಾರೆಂದೆಣಿಸಿದ ಅವಳು "ನನ್ನೇ ಹೆದರಿಸ್ತ್ರಾ? ಹಿಂದಿಂದ ಬಂದ್ರೆ ಯಂಗ್ ಗೊತ್ತಾಗ್ತಲ್ಲೆ ಅಂದ್ಕಂಡ್ರಾ" ಎನ್ನುತ್ತಾ ಕಿಟಕಿಯತ್ತ ನಡೆದಿದ್ದಾಳೆ.

ಆಗಲೇ ಕಿಟಕಿಯ ಸರಳುಗಳ ಮೇಲೆ ಬಣ್ಣಬಣ್ಣದ ಬಳೆಗಳನ್ನು ತೊಟ್ಟಿರುವ ವಿಕಾರವಾದ ಕಡುಗಪ್ಪು ಕೈಯೊಂದು ಕಂಡಿದೆ!

ಭೀತಳಾದ ಹುಡುಗಿ ಕಿರುಚಿಕೊಂಡು ಕೊಠಡಿಯಿಂದ ಹೊರಾಗೋಡಿದಳು. ಮುಖ ಬಿಳುಚಿಕೊಂಡು ಓಡಿ ಬರುತ್ತಿರುವವಳನ್ನು ಆಗಷ್ಟೇ ಶಾಲೆ ಪ್ರವೇಶಿಸುತ್ತಿದ್ದ ಮಾಸ್ತರು ನಿಲ್ಲಿಸಿ ಏನಾಯಿತೆಂದು ಕೇಳಿದರು. ಅವಳು ನಡೆದದ್ದೆಲ್ಲವನ್ನೂ ಹೇಳಿ, ಅವರೂ ಬಂದು ನೋಡಿದರೆ ಕೊಠಡಿಯಲ್ಲಿ ಯಾವ ಬಳೆಯೂ ಇಲ್ಲ, ಕೈಯ್ಯೂ ಇಲ್ಲ!

ಹೆದರಿದ ಹುಡುಗಿ ವಾರ ಪೂರಾ ಛಳಿ ಜ್ವರ ಬಂದು ಮಲಗಿದ್ದಳೆಂದು ಪ್ರತ್ಯೇಕಾವಾಗಿ ಹೇಳಬೇಕಿಲ್ಲವಲ್ಲಾ?

                       ****************

ಇವೆಲ್ಲವೂ ನಾನು ಹುಟ್ಟುವ ಮೊದಲೇ ನಡೆದ ಅಥವಾ ಸೃಷ್ಟಿಸಿದ ಕಥೆಗಳು. ಆದರೆ ಇಂದಿಗೂ ಜೀವಂತವಾಗಿರುವ ಘಟನೆಯೊಂದು ದೆವ್ವ ಭೂತಗಳ ಬಗ್ಗೆ ತೀರಾ ಹಗುರವಾಗಿ ಯೋಚಿಸದಂತೆ ಮಾಡಿದೆ.

ನನ್ನ ಅಜ್ಜಿಯ (ಅಮ್ಮನ ಅಮ್ಮ) ಕೊನೆಯ ತಂಗಿ ಆಗ ಎರೆಡು-ಮೂರು ತಿಂಗಳ ಬಾಣಂತಿಯಾಗಿದ್ದರು. ಒಂದು ದಿನ ರಾತ್ರಿ ಮನೆಯವರೆಲ್ಲಾ ಊಟ ಮಾಡಿದ ಬಾಳೇ ಎಲೆಗಳನ್ನು ಎಸೆಯಲೆಂದು ಮನೆಯ ಹಿಂದಿನ ಗೊಬ್ಬರದ ಗುಂಡಿಯತ್ತ ಹೋದವರು ಭಯದಿಂದ ನಡುಗುತ್ತಾ ವಾಪಾಸು ಬಂದರು. ಏನಾಯಿತೆಂದು ಕೇಳಿದರೆ ಅಲ್ಲಿ ಯಾರೋ ಇದ್ದಾರೆಂದು ಹೊರಗಿನ ಕತ್ತಲಿನತ್ತ ಕೈ ತೋರಿಸುತ್ತಾ ಮತ್ತಷ್ಟು ನಡುಗಿದರು.

ಆ ಘಟನೆ ನಡೆದ ಕೆಲ ದಿನಗಳಿಗೆಲ್ಲಾ ಅವರ ವರ್ತನೆ ಬದಲಾಗುತ್ತಾ ಹೋಯಿತು. ಏನೋ ಕೆಲಸ ಮಾಡುತ್ತಿದ್ದವರು ಇದ್ದಕ್ಕಿದ್ದಂತೆ ಒಂದು ಮೂಲೆ ಸೇರಿ ಕುಳಿತುಬಿಡುತ್ತಿದ್ದರು. ತಮ್ಮಷ್ಟಕ್ಕೆ ತಾವೇ ಗಿಟಿಗಿಟಿ ಅಂತ ನಗಲಾರಂಭಿಸುತ್ತಿದ್ದರು. ಬರುಬರುತ್ತಾ ಅದು ವಿಪರೀತಕ್ಕೆ ತಿರುಗಿತ್ತು. 'ಆ' ಸ್ಥಿತಿಗೆ ಹೋದಾಗ ಎದುರಿಗಿದ್ದವರ ಮೇಲೆ ಹರಿಹಾಯಲಾರಂಭಿಸಿದರು. ಕೊನೆಗೆ ನಾನಾ ಜಪ-ತಪಾದಿ ಮಂತ್ರ-ಪೂಜೆಗಳಿಂದ ಅವರನ್ನು ಒಂದು ಹಂತಕ್ಕೆ ಸುಧಾರಿಸಿದರಂತೆ.

ಅವರು ಈಗಲೂ ಹಾಗೇ ಇದ್ದಾರೆ. ಚೆನ್ನಾಗಿ ಮಾತನಾಡುತ್ತಿರುವವರ ಧಾಟಿ ಇದ್ದಕ್ಕಿದ್ದಂತೆಯೇ ಬದಲಾಗಿಬಿಡುತ್ತದೆ. ಒಮ್ಮೆಗೇ ವಿಚಿತ್ರವಾದ ನಗು, ಸ್ವರದಲ್ಲೊಂದು ಗಡಸುತನ ಬಂದುಬಿಡುತ್ತದೆ. ಆ ಇಳಿವಯಸ್ಸಿನ ದೇಹದಲ್ಲೂ ಅಗಾಧವಾದ ಶಕ್ತಿ ಅದೆಲ್ಲಿಂದ ಬರುತ್ತದೋ ಏನೋ, ಅಪ್ರಿಯವಾಗಿ ಮಾತನಾಡಿದವರ ಹಾಗೂ ತಡೆಯಲು ಬಂದವರ ಮೇಲೆ ಧಾಳಿ ಮಾಡುತ್ತಾರೆ. ಒಮ್ಮೆ ಅವರು ಒಳಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಹೊರಗೆ ಅವರ ಸಂಬಂಧಿಕರಲ್ಲೇ ಒಬ್ಬರು 'ಭೂತ-ಪ್ರೇತ ಎಂತದೂ ಇಲ್ಲೆ. ಎಲ್ಲ ಬರೀ ನಾಟ್ಕ!' ಅಂದರಂತೆ. ಒಳಗಿದ್ದ ಯಾರಿಗೂ ಕೇಳಿಸದ್ದು ಅವರಿಗೆ ಮಾತ್ರ ಹೇಗೆ ಕೆಳಿಸಿತೋ ಏನೋ,  'ಏನೋ ಅಂದೆ? ಇನ್ನೊಂದ್ಸಲ ಹೇಳು ನೋಡಣ' ಎನ್ನುತ್ತಾ ಸೀರೆ ಎತ್ತಿಕಟ್ಟಿ ನುಗ್ಗಿಬಂದೇಬಿಟ್ಟರು. ಕಕ್ಕಾಬಿಕ್ಕಿಯಾದ ಆ ಆಸಾಮಿ ಒಂದೇ ನೆಗೆತಕ್ಕೆ ಬೇಲಿ ಹಾರಿ ತಮ್ಮ ಮನೆಯತ್ತ ಓಟ ಕಿತ್ತರು!
                        ******************

ಭಯದ ಕಣ್ಣಿಗೆ ಪ್ರತಿಯೊಂದೂ ಭೂತವೇ. ಉದಾಹರಣೆಗೆ ನಮಗೆಲ್ಲ ನಮ್ನಮ್ಮ ಬಾಸ್ ಗಳು ದೆವ್ವದಂತೆ ಕಾಣುವುದು ಯಾಕೆ ಹೇಳಿ? ಒಳಗೆಲ್ಲೋ ಅವರಮೇಲಿರುವ ಭಯದಿಂದ ತಾನೇ? ಇತ್ತೀಚೆಗೆ ಭೂತಗಳ ಚೇಷ್ಟೆ ಕಡಿಮೆಯಾಗಿದೆ ಅಂತ ನಾವೆಲ್ಲ ನಿರಾಳರಾಗಿದ್ದೇವೆ ನಿಜ; ಆದರೆ ಯಾರಿಗೆ ಗೊತ್ತು, ಅವೂ ಸಹಾ ನಮ್ಮಂತೇ 'ಅಪ್ಡೇಟ್' ಆಗಿ ಕತ್ತಲ ಸ್ಮಶಾನಗಳಿಂದ, ಪಾಳುಬಿದ್ದ ಬಂಗಲೆಗಳಿಂದ ಹೊರಬಂದು ಈ ರಾಜಕಾರಣಿಗಳ, ಭ್ರಷ್ಟ ಅಧಿಕಾರಿಗಳ, ಆಫೀಸಿನ ಬಾಸ್ ಗಳ ದೇಹಸೇರಿ 'ಆಧುನಿಕ' ರೀತಿಯಲ್ಲಿ ನಮ್ಮನ್ನು ಕಾಡುತ್ತಿರಬಹುದಲ್ಲವೇ?!

ಭೂತಗಳ ನಾಡಾಗಿದ್ದ ನಮ್ಮ ಅಜ್ಜನಮನೆಯಲ್ಲಿ ನಾನು ಬೇಸ್ತುಬಿದ್ದ ಈ ಕೆಳಗಿನ ಕಥೆಯ ಮೂಲಕ ನನ್ನೀ ಲೇಖನವನ್ನು ಮುಗಿಸುತ್ತೇನೆ.

ಸುಮಾರು ಹದಿನೈದು ವರ್ಷಗಳ ಕೆಳಗೆ, ತೀರಿಹೋದ ಅಜ್ಜಿಯ ಅಪರಕರ್ಮಗಳಿದ್ದುದರಿಂದ ಅಮ್ಮ ಹಾಗೂ ಅವಳ ಅಣ್ಣ, ತಂಗಿಯರೆಲ್ಲ ಅಜ್ಜನ ಮನೆಯಲ್ಲಿ ಒಟ್ಟಾಗಿದ್ದರು. ಒಳಗೆ ವಿವಿಧ ಕ್ರಿಯಾಕರ್ಮಗಳು ನಡೆಯುತ್ತಿದ್ದರೆ ಮಕ್ಕಳಾದ ನಾವು ಹೊರಗಡೆ ಆಡಿಕೊಳ್ಳುತ್ತಿದ್ದೆವು. ಭೂತಗಳ ಬಗ್ಗೆ ಎಷ್ಟೇ ಭಯವಿದ್ದರೂ ಹಗಲಿಡೀ ನಾವು ಆಡುತ್ತಿದ್ದುದು ಭೂತದ ಆಟಗಳನ್ನೇ. ರಾತ್ರೆಯಾದರೆ ಎಲ್ಲರೂ ಒಂದು ಕೋಣೆಯಲ್ಲಿ ಒಟ್ಟಾಗಿ ಭೂತದ ಕಥೆಗಳನ್ನು ಹೇಳುವ ಸ್ಪರ್ಧೆಯನ್ನೇ ಏರ್ಪಡಿಸುತ್ತಿದ್ದೆವು. ಒಬ್ಬರಿಗಿಂತ ಒಬ್ಬರು ಭಯಾನಕ, ಭೀಭತ್ಸಕರವಾದ ಭೂತಗಳ ಕಥೆ ಹೇಳುತ್ತಾ, ನಾವು ಸೃಷ್ಟಿಸಿದ ಪ್ರೇತಗಳನ್ನು ನೆನೆದು ನಾವೇ ಗಡಗಡ ನಡುಗುತ್ತಾ ಸ್ಪರ್ಧೆ ಮುಂದುವರಿಸಿತ್ತಿದ್ದೆವು.

ಆದಿನ ಮಧ್ಯಾಹ್ನವೂ ಅಂತಹದ್ದೇ ಆಟವೊಂದನ್ನ ಆಯೋಜಿಸಲಾಗಿತ್ತು. ಮನೆಯಿಂದ ಸ್ವಲ್ಪ ದೂರದಲ್ಲಿ ಅಡಿಕೆ ದಬ್ಬೆಯ ಹಳೆಯ ಬೇಲಿಗಳನ್ನು ಇರಿಸಿದ್ದರು. ಅಲ್ಲೇ ನಮ್ಮ ಆಟ ಶುರುವಾಯಿತು. ಆಟದ ಕಥೆ ಇಷ್ಟೇ. ಅದೊಂದು ಭೂತದ ಬಂಗಲೆ. ನಾವು ಹೇಗೋ ಅದರೊಳಗೆ ಸಿಕ್ಕಿಕೊಳ್ಳುತ್ತೇವೆ. ಭೂತ ನಮ್ಮನ್ನು ಕಾಡಿಸುತ್ತದೆ. ಕೊನೆಗೆ ಕಥೆಯ ಹೀರೋ ಬಂದು ಭೂತವನ್ನು ಸಾಯಿಸಿ (!!) ನಮ್ಮನ್ನೆಲ್ಲಾ ಕಾಪಾಡುತ್ತಾನೆ.

ಪಾತ್ರಗಳ ಹಂಚಿಕೆ ಶುರುವಾಯಿತು. ಒಬ್ಬಳಿಗೆ ಮುಖಕ್ಕೆ ಭೂತದಂತೆ ಬಿಳೀ ಬಟ್ಟೆ ಹೊದಿಸಿ ನಿಲ್ಲಿಸಲಾಯಿತು. ಮಾತಿನಲ್ಲಿ ಜೋರಿನವನಾದ, ನನ್ನ ದೊಡ್ಡ ಮಾವನ ಮಗ ಎಲ್ಲರನ್ನೂ ಕಾಪಾಡುವ ಹೀರೋ ಆಗಿ ಕೈಯ್ಯಲ್ಲೊಂದು ಮಂತ್ರದಂಡ ಹಿಡಿದು ನಿಂತ. ಉಳಿದವರೆಲ್ಲರೂ ದಾರಿ ತಪ್ಪಿದವರಾಗಿ ಬೇಲಿಯ ಬಂಗಲೆಯೊಳಗೆ ಕುಳಿತೆವು. ಆಟ ಇನ್ನೇನು ಆರಂಭವಾಗಬೇಕು.

"ಅಲ್ನೋಡಿ ಅಲ್ಲಿ.... ದೆವ್ವ!"
ತಂಗಿ ಕೈ ತೋರಿಸಿದ ದಿಕ್ಕಿನತ್ತಲೇ ಎಲ್ಲರೂ ನೋಡಿದೆವು. ಕುಳ್ಳಗೆ ದಪ್ಪಗಿರುವ, ಕೊರಳಲ್ಲಿ ಮೂಳೆಯ ಮಾಲೆ ಧರಿಸಿರುವ ಭಯಾನಕ ದೆವ್ವವೊಂದು ವಿಕಾರವಾಗಿ ಬಾಯಿ ತೆರೆದುಕೊಂಡು ನಮ್ಮತ್ತಲೇ ನಡೆದು ಬರುತ್ತಿತ್ತು!!!

ಅಷ್ಟೇ! ಕಥೆಯಲ್ಲಷ್ಟೇ ಬರಬೇಕಿದ್ದ ದೆವ್ವ ಹೀಗೆ ಭೀಕರ ರೂಪದಲ್ಲಿ ಕಣ್ಣೆದುರೇ ಬರುತ್ತಿರುವುದನ್ನು ನೋಡಿ ಕಕ್ಕಾಬಿಕ್ಕಿಯಾದ ಪಾತ್ರಧಾರಿಗಳೆಲ್ಲಾ ಕಣ್ಮುಚ್ಚಿ ತರೆಯುವುದರೊಳಗೆ ಸತ್ತೆನೋ ಕೆಟ್ಟೆನೋ ಎಂದು ಎದ್ದು ಓಡತೊಡಗಿದೆವು. ದೆವ್ವದ ಜೊತೆ ಬಡಿದಾಡುವ 'ಹೀರೋ' ಆಗಿದ್ದ ಮಾವನ ಮಗ ಕೈಯ್ಯಲ್ಲಿದ್ದ ದಂಡವನ್ನ ಎತ್ತಲೋ ಬಿಸಾಡಿ ಎಲ್ಲರಿಗಿಂತಲೂ ಮುಂದೆ ಓಡುತ್ತಿದ್ದ. "ಕಾಪಾಡೀsss..." ಎಂದು ಕಿರುಚುತ್ತಾ  ಮನೆಯ ಆವರಣ ತಲುಪಿ ಒಮ್ಮೆ ತಿರುಗಿ ನೋಡಿದರೆ ದೆವ್ವ ಅಟ್ಟಹಾಸ ಮಾಡುತ್ತಾ ಗೇಟು ತೆರೆದುಕೊಂಡು ಒಳಗೇ ಬರಿತ್ತಿದೆ! ಮತ್ತಷ್ಟು ಹೆದರಿದ ಪುಟ್ಟ ಹುಡುಗಿಯೊಬ್ಬಳು ಜೋರಾಗಿ ಕಿರುಚಿಕೊಂಡುಬಿಟ್ಟಳು. ಅಷ್ಟರಲ್ಲಿ ಒಳಗಿಂದ ಓಡಿಬಂದ ಚಿಕ್ಕಮ್ಮ ಒಂದೊಂದು ಬಾರಿಸಿ ಎಲ್ಲರನ್ನೂ ಈ ಲೋಕಕ್ಕೆ  ಇಳಿಸಿದರು.

ಆಗಿದ್ದೇನೆಂದರೆ, ಯಾವುದೋ ಶಾಸ್ತ್ರದ ಪೂರೈಕೆಗಾಗಿ ಹೊಳೆಗೆ ಹೋಗಿದ್ದ ನಮ್ಮ ಮಾವ ಬಿಳಿಬಣ್ಣದ ತುಂಡು ಪಂಚೆ ತೊಟ್ಟು ನಡೆದು ಬರುತ್ತಿದ್ದರು. ಸದಾ ಬಾಯಿಗೆ ಹಲ್ಸೆಟ್ ಹಾಕಿಕೊಳ್ಳುತ್ತಿದ್ದ ಅವರು ಇಂದು ಹಾಗೇ ಬೊಚ್ಚುಬಾಯಿ ಬಿಟ್ಟುಕೊಂಡು ಬರುತ್ತಿದ್ದರಲ್ಲದೇ ಹೊಳೆಯ ಕೆಸರಿನಲ್ಲಿ ಕಾಲು ಜಾರಿದ್ದರಿಂದ ಮೈ ಮಣ್ಣಾಗಿತ್ತು. ಸೊಂಟ ಹಾಗೂ ಕೊರಳಲ್ಲಿ ಕೊಳಕಾದ ತುಂಡು ಪಾಣಿ ಪಂಚೆ, ಕತ್ತಲ ಗುಹೆಯೊಂದರ ದ್ವಾರದಂತಿರುವ ಬೊಚ್ಚುಬಾಯಿ, ಬೊಕ್ಕ ತಲೆ, ಕುಳ್ಳ ನಿಲುವು, ಕಪ್ಪು- ಗುಂಡು ದೇಹ.... ನಮ್ಮ ಕಲ್ಪನೆಯ ಭೂತಕ್ಕಿಂತ ಒಂದು ಕೈ ಹೆಚ್ಚೇ ಭಯಾನಕವಾಗಿ ಕಾಣುತ್ತಿದ್ದರು ನಮ್ಮ ಮಾವ. ಎಲ್ಲರೂ ಹೆದರಿದೆವಾದರೂ ಪುಣ್ಯಕ್ಕೆ ಯಾರಿಗೂ ಛಳಿ ಜ್ವರ ಬರಲಿಲ್ಲ. ಇಲ್ಲವಾದರೆ ಎಲ್ಲರೂ ಇನ್ನೊಂದು ಸುತ್ತು ಒದೆ ತಿನ್ನಬೇಕಾಗುತ್ತಿತ್ತು...!

('ಪ್ರತಿಲಿಪಿ ಕನ್ನಡ'ದಲ್ಲಿ ಪ್ರಕಟಿತ)

ಶನಿವಾರ, ಡಿಸೆಂಬರ್ 31, 2016

ಪರಮೇಶಿ ಪ್ರಸಂಗ




ಪರಮೇಶಿ ದೈವಭಕ್ತನೇ. ಆದರೂ ಅವನಿಗೆ ವಿಷ್ಣುವಿನ 'ಅವತಾರ'ಗಳ ಬಗ್ಗೆ ಅನುಮಾನಗಳಿದ್ದವು. ಯಾವುದೋ ಆಪತ್ತು ಬಂದಕೂಡಲೇ ಗಂಡಾಗಿದ್ದವನು ಮೋಹಿನಿಯಾಗುವುದು, ವರಾಹವಾಗುವುದು, ಉಗ್ರ ನರಸಿಂಹನಾಗುವುದು ಹೇಗೆ ಸಾಧ್ಯ? ಅದರಲ್ಲೂ ಎಸ್ಪೆಶಲಿ ಗಂಡಸರು! ಅವರು ಹಾಗೆಲ್ಲಾ ಬದಲಾಗುವವರೇ ಅಲ್ಲ. ಮೆನ್ ಆರ್ ಆಲ್ವೇಸ್ ಮೆನ್! ಆಫಿಸಿನಲ್ಲಿ ಲೇಡಿ ಬಾಸ್ ಭದ್ರಕಾಳಿಯಾಗಿ, ಚಂಡಿಚಾಮುಂಡಿಯಾಗಿ, ಕನ್ನಡದ ಕಿರಣ್ ಬೇಡಿಯಾಗಿ....ಹೀಗೇ ಕ್ಷಣಕ್ಕೊಂದು ಭಯಾನಕ ರೂಪ ತಾಳುತ್ತಾ  ತನ್ನ ಮೇಲೆ ರೌದ್ರ ತಾಂಡವವಾಡಿದರೂ ತಾನು ಮಾತ್ರ ಡಾಬರ್ ಮನ್ ಅನ್ನು ಕಂಡ ಬಡಕಲು ಬೀದಿನಾಯಿಯಂತೆ ಬಾಲ ಮುದುರಿಕೊಂಡೇ ನಿಂತಿರುತ್ತೇನೆ. ತಾನು ಮಾತ್ರ ಅಲ್ಲ; ಹಿಂದಿನ ಜನ್ಮದ ಕೋಪವನ್ನೂ ಈ ಜನ್ಮಕ್ಕೆ 'ಕ್ಯಾರಿ ಫಾರ್ವಡ್' ಮಾಡಿಕೊಂಡು ಬಂದಂತಿರುವ ಅವರೆದುರು ಆರಡಿ ಎತ್ತರದ, ಜಿಮ್ ಬಾಡಿಯ ಕೋದಂಡನೂ ಬರೀ ದಂಡವೇ! 

ಬಾಸ್ ಗೆ ಎದಿರಾಡಬೇಕೆಂದು ಅದೆಷ್ಟೇ  ಪ್ರಯತ್ನಿಸಿದರೂ ಪರಮೇಶಿಗೆ ಸಾಧ್ಯವಾಗುವುದೇ ಇಲ್ಲ.  ಹಿಂದಿನ ರಾತ್ರಿ ನೋಡಿದ ಅಣ್ಣಾವ್ರ ಚಿತ್ರದಿಂದ ಪ್ರೇರಿತನಾಗಿ ಇದ್ದ ಬದ್ದ ಧೈರ್ಯವನ್ನೆಲ್ಲಾ ಜೊತೆಗೂಡಿಸಿ "ಇವತ್ತು ಅವರಿಗೆ ಸರಿಯಾಗಿ ಉತ್ತರಕೊಡ್ತೇನೆ!" ಅಂತ ಎದೆಯುಬ್ಬಿಸಿಕೊಂಡು ಹೊರಡುವುದೇನೋ ನಿಜ. ಆದರೆ ಒಂದು ಸಲ ಅವರ ಬಿಗಿದ ಮುಖ, ದಪ್ಪ ಕನ್ನಡಕದೊಳಗಿಂದ ತನ್ನೆಡೆಗೆ ಬೆಂಕಿಯುಗುಳಲು ಸಿದ್ಧವಾಗಿರುವ ಕಣ್ಣು, ಮೇಲೆರೆಗಲು ತಯಾರಾಗಿರುವಂತೆ ಸೆಟೆದು ಕುಳಿತಿರುವ ಭಂಗಿ- ಇದನ್ನೆಲ್ಲಾ ನೋಡುತ್ತಿದ್ದಂತೆಯೇ ರಿಟೈರ್ಮೆಂಟಿಗೆ ಸನಿಹವಾಗಿದ್ದರೂ ಚಾಂಪಿನ್ ಆಗಿಯೇ ಉಳಿದಿರುವ ಹಳೇ ಜಟ್ಟಿಯನ್ನು ಕಂಡಂತಾಗಿ, ಅವನ ಧೈರ್ಯವೆಲ್ಲಾ ಬಾಗಿಲಿನಲ್ಲೇ ಹಾರಿಹೋಗಿ, ಮತ್ತೆ ಬಾಲ ಮುದುರಿದ ನಾಯಿಯಾಗಿಬಿಡುತ್ತಿದ್ದ! ಎಂದಿನಂತೆ ಕೈಕಟ್ಟಿ, ತಲೆ ತಗ್ಗಿಸಿ ತನ್ನ ಮೇಲಾಗುತ್ತಿರುವ 'ಸಹಸ್ರ ನಾಮಾರ್ಚನೆ'ಯನ್ನು ಶ್ರದ್ಧೆಯಿಂದ ಕೇಳಿಸಿಕೊಂಡು ತನ್ನ ಜಾಗಕ್ಕೆ ಮರಳುತ್ತಿದ್ದ.

ಉದ್ಯೋಗಕ್ಕೆ ಸೇರಿದ ಆರಂಭದಲ್ಲಿ ಕೆಲಸ ಗೊತ್ತಿಲ್ಲದ ಕಾರಣದಿಂದ ಹಾಗೂ ಬಾಸ್ ಮೇಲಿನ ಭಯದಿಂದ ಹೆಚ್ಚೆಚ್ಚು ತಪ್ಪುಗಳಾಗುತ್ತಿದ್ದವು. ಅಲ್ಲದೇ ಮೊದಲೇ ಎಡಬಿಡಂಗಿ ಗುಣದವನೂ ಆಗಿದ್ದರಿಂದ ಒಂದಿಲ್ಲೊಂದು ತಪ್ಪು ಮಾಡುತ್ತಲೇ ಇದ್ದ ಪರಮೇಶಿ. 'ಫರ್ಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರಷನ್' ಎಂಬಂತೆ ಮೊದಲ ಹೆಜ್ಜೆಯಲ್ಲೇ 'ಯಡವಟ್ಟು' ಎಂಬ ಹಣೆಪಟ್ಟಿ ಹಚ್ಚಕೊಂಡವನಿಗೆ ಬಾಸ್ ರಿಂದ ಆಗಾಗ ಮಹಾಮಂಗಳಾರತಿ ನಡೆಯುತ್ತಲೇ ಇತ್ತು. ಕೆಲವೊಮ್ಮೆ ತನ್ನದಲ್ಲದ ಅಥವಾ ತೀರಾ ಕ್ಷುಲ್ಲಕ ತಪ್ಪಿಗೂ ತಾರಾಮಾರಿ ಬೈಗಳು ಕೇಳಬೇಕಾಗುತ್ತಿತ್ತು. ತಿರುಗಿ ಹೇಳಲೂ ಆಗದೆ, ತೀರಾ ಸಹಿಸಿಕೊಳ್ಳಲೂ ಆಗದೇ ಬೋನಿಗೆ ಬಿದ್ದ ಕರಡಿಯಂತಾಗಿತ್ತು ಪರಮೇಶಿಯ ಸ್ಥಿತಿ. ಆದರೂ ಅವನೇನು ಸಂಪೂರ್ಣ ತೆಪ್ಪಗಿರುತ್ತಿರಲಿಲ್ಲ. ಅವಕಾಶ ಸಿಕ್ಕಾಗೆಲ್ಲಾ ಆತ್ಮೀಯ ಸಹೋದ್ಯೋಗಿಗಳೆದುರು, ಗೆಳೆಯರುದುರು ಹಾಗೂ ಮನೆಯವರೆದುರು ತನ್ನ ಬಾಸ್ ಅನ್ನು ಕ್ಷುದ್ರಾತಿಕ್ಷುದ್ರ ಜೀವಿಗಳಿಗೆ ಹೋಲಿಸಿ ತಮಾಷೆಮಾಡುವ ಮೂಲಕ ಅಷ್ಟರಮಟ್ಟಿಗೆ ತನ್ನ ಉರಿ ಕಡಿಮೆಮಾಡಿಕೊಳ್ಳುತ್ತಿದ್ದ. 

ಹೀಗಿರುವಾಗ ಅದೊಂದು ದಿನ ಅನಿರೀಕ್ಷಿತ ಘಟನೆಯೊಂದು ನಡೆದುಹೋಯಿತು. ಅದ್ಯಾವುದೋ ಅತಿ ಮುಖ್ಯ ಕಾಗದಪತ್ರವೊಂದು ಅಚಾನಕ್ಕಾಗಿ ಕಾಣೆಯಾಯಿಗಿಬಿಟ್ಟಿತು. ಪರಮೇಶಿಗೋ ಅದನ್ನು ಖುದ್ದು ಬಾಸ್ ಗೆ ಕೊಟ್ಟಂತೆ ಮಾಸಲು ಮಾಸಲು ನೆನಪು; ಆದರೆ ಅವರು ಮಾತ್ರ ನೀನದನ್ನು ಕೊಟ್ಟದ್ದೇ ಸುಳ್ಳು ಎಂದು ವಾದಿಸತೊಡಗಿದ್ದರು. ಸಾಲದ್ದಕ್ಕೆ ಎಲ್ಲರೆದುರೇ ಪರಮೇಶಿಯ ಮರೆವನ್ನು, ಬೇಜಾವಬ್ದಾರಿಗಳನ್ನು ದೊಡ್ಡ ಗಂಟಲಿನಲ್ಲಿ ಹರಾಜು ಹಾಕುತೊಡಗಿದರು. ಈ ಕುರುಕ್ಷೇತ್ರ ನೋಡಲಾಗದೆ ಎಲ್ಲರೂ ಭೂತಕನ್ನಡಿ ಹಿಡಿದುಕೊಂಡು ಹುಡುಕಲಾಗಿ, ಎಷ್ಟೆಲ್ಲಾ ಗಲಾಟೆ ಸೃಷ್ಟಿಸಿದ ಆ ಪತ್ರ ಕೊನೆಗೂ ಬಾಸ್  ಟೇಬಲ್ ಮೇಲೆ ರಾಶಿಬಿದ್ದಿದ್ದ ಕಡತಗಳ ಮಧ್ಯದಿಂದಲೇ ಎದ್ದು ಬಂತು! ಎಲ್ಲರೂ ಅಯ್ಯೋ ಪಾಪ ಎನ್ನುವಂತೆ ತನ್ನೆಡೆಗೆ ನೋಡಿದ್ದೇ ತಡ, ಅದೆಷ್ಟೋ ದಿನದಿಂದ ಸಹಿಸಿಕೊಂಡಿದ್ದ ಉಗ್ರ ಕೋಪವೆಲ್ಲಾ ತಾನೇ ಆಗಿ ಎದ್ದುನಿಂತ ಪರಮೇಶಿ. ಕೈಲಿದ್ದ ಫೈಲನ್ನು ರಪ್ ಎಂದು ಟೇಬಲ್ ಮೇಲೆ ಕುಕ್ಕಿದವನೇ "ಮುಂದಿನ ಸಲ ಮಾತನಾಡುವ ಮೊದಲು ಒಮ್ಮೆ ನಿಮ್ಮ ಕಾಲ ಬುಡ ನೋಡಿಕೊಳ್ಳಿ" ಎಂದು ಗುಡುಗಿ, ದಢಾಲ್ಲೆಂದು ಬಾಗಿಲು ತಳ್ಳಿಕೊಂಡು ನಡೆದೇಬಿಟ್ಟ. 

ಒಂದು ಕ್ಷಣದ ಆವೇಶದಲ್ಲಿ ಹಾಗೊಂದು ಮಾತಂದು ಬಂದವನಿಗೆ ನೆತ್ತಿಗೇರಿದ್ದ ಕೋಪ ಇಳಿದ ಕೂಡಲೇ ನಡುಕ ಶುರುವಾಯಿತು. ತಾನೇನೂ ಎದುರಾಡದೆಯೇ ಅಷ್ಟೆಲ್ಲಾ ಎಗರಾಡುತ್ತಿದ್ದವರು ಇನ್ನು ಮುಂದೆ ಸುಮ್ಮನಿರುತ್ತಾರೆಯೇ? ಕನ್ನಡಕದೊಳಗಿನ ತಮ್ಮೆರೆಡೂ ಹದ್ದಿನ ಕಣ್ಣುಗಳನ್ನೂ ನನ್ನ ಮೇಲೇ ನೆಟ್ಟು ತಪ್ಪುಗಳನ್ನು ಹುಡುಕುತ್ತಾರೆ. ತಾನಾಡಿದ ಮಾತಿಗೆ ಬಡ್ಡಿ ಸಮೇತ ಜಿದ್ದಿ ತೀರಿಸಿಕೊಳ್ಳುತ್ತಾರೆ! ಅವನು ಕ್ಯಾಂಟೀನಿನಲ್ಲಿ ಕೈಯ್ಯಲ್ಲಿ ಅನ್ನದ ತುತ್ತು ಹಿಡಿದು ಹೀಗೆಲ್ಲಾ ಚಿಂತಿಸುತ್ತಿದ್ದಾಗ ಆಕಾಶದಲ್ಲಿ ಅದ್ಯಾವ ದೇವರು 'ಅಸ್ತು' ಅಂದರೋ ಏನೋ, ಮತ್ತೆ ತನ್ನ ಕ್ಯಾಬಿನ್ ಗೆ ಮರಳುವ ಹೊತ್ತಿಗೆ ಅವನ ಜಂಘಾಬಲವನ್ನೇ ಉಡುಗಿಸುವಂತಹ ಸುದ್ದಿಯೊಂದು ಅವನಿಗಾಗಿ ಕಾದು ಕೂತಿತ್ತು. ಅವನು ಆಚೆ ಹೋಗುತ್ತಿದ್ದಂತೆಯೇ ಇತ್ತಕಡೆ ಬ್ಯಾಂಕಿಂದ ಫೋನ್ ಬಂತಂತೆ. ನಾಲ್ಕು ದಿನದ ಹಿಂದೆ ಯಾವುದೋ ಸಪ್ಲೈಯರ್ ಹೆಸರಿಗೆ ಅವನು ಬರೆದಿದ್ದ ಚೆಕ್ಕೊಂದು 'ಸ್ಪೆಲ್ಲಿಂಗ್ ಮಿಸ್ಟೇಕ್' ಎಂಬ ಕಾರಣಕ್ಕೆ ಬೌನ್ಸ್ ಆಗಿತ್ತು! 

ಕೊಲ್ಲಲು ಬಂದವನ ಕೈಗೆ ಕೋವಿ ಕೊಟ್ಟಂತಾಯಿತು ಪರಮೇಶಿಯ ಸ್ಥಿತಿ. ಮೊದಲೇ ಗಾಯಗೊಂಡ ಹುಲಿಯಾಗಿದ್ದ ಬಾಸ್ ಈ ಸುದ್ದಿ ಕೇಳಿ ಸಾಕ್ಷಾತ್ ಸಿಂಹಿಣಿಯೇ ಆಗಿದ್ದರು. 'ಬರಲಿ ಅವನು. ಸರಿಯಾಗಿ ಮಾಡ್ತೀನಿ!' ಎಂದು ಘರ್ಜಿಸಿದ್ದರು. ಆದರೆ ಅದೇ ಸಮಯಕ್ಕೆ ಯಾವುದೋ ಕಸ್ಟಮರ್ ಜೊತೆಗೆ ಮೀಟಿಂಗ್ ಹಾಗೂ ಲಂಚ್ ಇದ್ದಿದ್ದರಿಂದ ಅಲ್ಲಿಗೆ ಹೋಗಿದ್ದರು. ಬಂದಮೇಲೆ ಅವರು ಮಾಡುವ ಮೊದಲ ಕೆಲಸವೇ ತನಗೊಂದು ಗತಿ ಕಾಣಿಸುವುದು. ಮುಗಿದೇ ಹೋಯ್ತು ತನ್ನ ಕಥೆ!

ಪರಮೇಶಿ ನಡುಗಿಹೋದ. ಎಂದೋ ಮರೆತಿದ್ದ ಮನೆದೇವರಿಗೆ ಹರಕೆಹೊತ್ತ. ಕುಳಿತಲ್ಲಿಂದಲೇ ದೂರದಲ್ಲಿರುವ ಇಷ್ಟದೈವ ಗುಡಿಬಂಡೆ ಆಂಜನೇಯನಿಗೆ ಅಡ್ಡಬಿದ್ದ. ಯಾರೇ ಬಂದು ತನ್ನ ಡಿಪಾರ್ಟ್ ಮೆಂಟಿನ ಬಾಗಿಲು ತೆಗೆದರೂ ಅದು 'ಅವರೇ' ಎಂದೆಣಿಸಿ ಅವನ ಎದೆ ಧಸಕ್ ಎನ್ನುತ್ತಿತ್ತು. ಮುಂದಿನ ಒಂದು ಗಂಟೆಯ ಒಂದೊಂದು ನಿಮಿಷವನ್ನೂ ಎರಗಲಿರುವ ಸಿಡಿಲಿನ ಉದ್ದಗಲಗಳನ್ನು ಕಲ್ಪಿಸಿಕೊಳ್ಳುತ್ತಲೇ  ಕಳೆದುಬಿಟ್ಟ.

ಆಗ ತೆರೆಯಿತು ಬಾಗಿಲು. ಜೊತೆಗೇ ಔವ್ssssss ಎಂಬ ಭಯಾನಕ ತೇಗಿನ ಶಬ್ದ! ತನ್ನ ಪಾಲಿನ ಯಮರಾಯನ ಕೋಣ ತನ್ನ ಡಿಪಾರ್ಟ್ಮೆಂಟಿನ ಬಾಗಿಲಿನಲ್ಲಿಯೇ ಬಾಲ ಬೀಸುತ್ತಾ ನಿಂತಿದೆ ಎಂಬುದು ಗೊತ್ತಾಗಿಹೋಯಿತು ಪರಮೇಶಿಗೆ. ಕಣ್ಣು ಕೂಡಾ ಅಲುಗಿಸದೇ ತನ್ನೆದುರಿನ ಕಂಪ್ಯೂಟರ್ ನೋಡುತ್ತಾ ಕುಳಿತುಬಿಟ್ಟ. ಮುಂದೆ ಧಕ್ ಎಂದು ಆಟೋಮ್ಯಾಟಿಕ್ ಬಾಗಿಲು ಹಾಕಿಕೊಂಡ ಸದ್ದು; ಟಕ್ ಟುಕ್, ಟಕ್ ಟುಕ್ ಎಂಬ ಕಾಲ್ನಡಿಗೆ; ಕರ್ರ್... ಎಂದು ಈಸಿ ಚೇರಿನಮೇಲೆ ಕುಳಿತ ಶಬ್ದ. ಮುಂದಿನ ಎರೆಡು ನಿಮಿಷ ಅಸಹನೀಯ ಮೌನ. ಕೂಡಲೇ "ಪರಮೇಶಿ, ಬನ್ನಿ ಇಲ್ಲಿ" ಎಂಬ ಮರಣಕರೆ!

ಬಲಿಪೀಠದೆಡೆಗೆ ನಡೆಯವ ಕುರಿಯಂತೆ ನಡೆದು ಬಂದು "ಯೆಸ್ ಮ್ಯಾಡಮ್" ಎಂದು ಕೈಕಟ್ಟಿ ನಿಂತ. "ಏನ್ ಕೆಲಸ ಮಾಡ್ತೀರ್ರೀ ನೀವು????" ಎಂಬ ಘರ್ಜನೆಯನ್ನು ನಿರೀಕ್ಷಿಸಿದ್ದವನಿಗೆ ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. "ಚೆಕ್ ಬರೆಯುವಾಗ ಹುಷಾರಾಗಿ ಬರೀರಿ ಆಯ್ತಾ? ತಪ್ಪಾದರೆ ಕ್ಯಾನ್ಸಲ್ ಮಾಡಿ. ಅದನ್ನೇ ಕಳಿಸ್ಬೇಡಿ" ತೀರಾ ತಗ್ಗಿದ, ಮೃದುವಾದ, ಸಣ್ಣನೆಯ ದನಿಯಲ್ಲಿ ನುಡಿದಿದ್ದರು, ತೀರಾ ಚಿಕ್ಕ ಮಗುವೊಂದಕ್ಕೆ ಹೇಳುವಂತೆ! ಇದು ನಿಜವೆಂದು ನಂಬುವುದಕ್ಕೆ ಪರಮೇಶಿಗೆ ನಿಮಿಷಗಳೇ ಹಿಡಿದವು. ಅದಾಗಿ ಕೆಲವೇ ನಿಮಿಷಗಳಲ್ಲಿ ಹೊರಟೇಹೋಗಿಬಿಟ್ಟರು ಪರಮೇಶಿಯ ಉರಿಗೋಪದ ಮೇಡಮ್.

ನಿಜವಾಗಿ ನಡೆದದ್ದು ಏನೆಂದು ಪರಮೇಶಿಗೆ ಗೊತ್ತಾದದ್ದೇ ಸಂಜೆ. ಕೆಲಸ ಮುಗಿಸಿ ಮನೆಗೆ ಹೊರಟವನನ್ನು ಮರೆಗೆ ಕರೆದುಕೊಂಡುಹೋದ ಆಫೀಸಿನ ಸಹಾಯಕ ಸಿಬ್ಬಂದಿಯಲ್ಲೊಬ್ಬನಾದ ರಮೇಶಣ್ಣ ಗುಟ್ಟಾಗಿ ಕೇಳಿದರು: 
"ನಿಮ್ಮ ಬಾಸ್ ಇದಾರಾ ಸರ್?" 
"ಇಲ್ಲರೀ. ಬೇಗ ಹೊರಟೋದ್ರು. ಯಾಕೆ ಏನ್ ವಿಷ್ಯ?"
"ಅಯ್ಯೋ ಯಾಕೆ ಕೇಳ್ತೀರ. ಅನಾಹುತ ಆಗೋಯ್ತು ಸರ್. ಇವತ್ತು ಬಂದಿದ್ದ ಕಸ್ಟಮರ್ಸ್ ಗಂತ ನಾನ್ ವೆಜ್ ಊಟ ತರ್ಸಿದ್ವಾ. ಅವರ ಊಟ ಮುಗಿದ್ರೂ ಒಂದು ಐಟಮ್ ಸ್ವಲ್ಪ ಜಾಸ್ತೀನೇ ಉಳಿದುಬಿಡ್ತು. ಅದ್ಕೇ ನಾನೂ, ನಮ್ ಹುಡುಗ್ರೂ ಸ್ವಲ್ಪ್ ಸ್ವಲ್ಪ ಹಾಕ್ಕೊಂಡ್ ತಿಂದ್ವಿ. ಅದೇನ್ ಹಾಕಿ ಆ ದರಿದ್ರದ ಚಿಕನ್ ಮಡಿದ್ರೋ ಏನೋ, ಸ್ವಲ್ಪ ಹೊತ್ತಿಗೇ ಎಲ್ರಿಗೂ ಹೊಟ್ಟೆಯೊಳ್ಗೆ ಗುಡಗುಡಾಂತ ಶುರುವಾಯ್ತು ನೋಡಿ, ಆಗಿಂದ ಈಗಿನ್ ತನಕ ಸುಮಾರ್ ಆರ್ಸಲ ಟಾಯ್ಲೆಟ್ ಗೆ ಹೋಗ್ಬಂದೆ. ನನ್ ಪುಣ್ಯ, ಕಸ್ಟಮರ್ಸ್ಯಾರೂ ತಿನ್ಲೀಲ ಆ ದರಿದ್ರಾನ. ಆದ್ರೆ ನಿಮ್ ಬಾಸ್ ಗೆ ಮಾತ್ರ ನಾನೇ ಒತ್ತಾಯ ಮಾಡಿ ಎರೆಡೆರೆಡ್ಸಲ ಬಡ್ಸಿ ತಿನ್ಸ್ಬಿಟ್ಟೆ ಸಾರ್! ಅದ್ಕೇ ಕೇಳ್ದೆ ಹೇಗಿದಾರೇಂತ. ಯಾರಿಗೂ ಹೇಳ್ಬೇಡಿ ಆಯ್ತಾ?" ಎಂದವನೇ ಮತ್ತೆ ಟಾಯ್ಲೆಟ್ ಕಡೆಗೆ ಓಡಿದ!

ಬಾಲಕ್ಕೆ ಅಷ್ಟೆಲ್ಲಾ ಬೆಂಕಿ ಹಿಡಿದಿದ್ದ ಆಟಂ ಬಾಂಬ್ ಸಿಡಿಯದೇ ಯಾಕೆ ಠುಸ್ಸಾಯಿತೆಂಬುದು ಆಗ ಗೊತ್ತಾಯ್ತು ಪರಮೇಶಿಗೆ. ರಮೇಶಣ್ಣನ ಒತ್ತಾಯಕ್ಕೆ ಸಿಕ್ಕಿ ದೋಷವಿದ್ದ ಚಿಕನನ್ನು ತುಸು ಹೆಚ್ಚೇ ತಿಂದಿದ್ದ ಬಾಸ್ ಗೆ ಸ್ವಲ್ಪ ಹೊತ್ತಿನಲ್ಲೇ ಹೊಟ್ಟೆಯೊಳಗೆ 'ಗುಡಗುಡ' ಆರಂಭವಾಗಿತ್ತು ಹಾಗೂ ಕ್ಯಾಬಿನ್ ಗೆ ಮರಳುವ ಹೊತ್ತಿಗದು ಉಲ್ಬಣಿಸಿತ್ತು. ತನ್ನೆದುರು ಗಟ್ಟಿಯಾಗಿ "ಏಯ್ss" ಎಂದು ಉಸುರಿದ್ದರೂ ಕುಳಿತಲ್ಲೇ 'ಅನಾಹುತ'ವಾಗಿಬಿಡುವ ಸಂಭವವಿದ್ದರಿಂದ ಮೆತ್ತಗೆ ಪಾಠಹೇಳಿ ಕಳಿಸಿಬಿಟ್ಟರು. ಆ 'ಬಾಧೆ'ಯ ನಡುವೆಯೂ ತನ್ನನ್ನು ಕರೆದು ಚೆಕ್ಕಿನ ವಿಷಯ ಮಾತನಾಡಿದ್ದರೆಂದರೆ ಅವರೊಳಗೆ ಅದೆಷ್ಟು ಕೋಪವಿದ್ದಿರಬೇಡ! ಅಂತೂ ಇಂತೂ ಚಿಕನ್ ರೂಪದಲ್ಲಿ ಬಂದು ತನ್ನನ್ನು ಬೀಸುವ ದೊಣ್ಣೆಯಿಂದ ಪಾರುಮಾಡಿದ ದೇವರಿಗೆ ಹಾಗೂ ಅದನ್ನು ತಿನ್ನಿಸಿದ ರಮೇಶಣ್ಣನಿಗೆ ಮನದೊಳಗೇ ವಂದಸಿ ಮನೆಕಡೆ ಹೆಜ್ಜೆಹಾಕಿದ ಪರಮೇಶಿ.

(ಡಿಸೆಂಬರ್ 2016ರ 'ತುಷಾರ'ದಲ್ಲಿ ಪ್ರಕಟಿತ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...