ಸೋಮವಾರ, ಜುಲೈ 2, 2018

ಬೆಂಗಳೂರಿಗೆ ಬಂದಿದ್ದು-1

ಇದನ್ನೆಲ್ಲ ಯಾಕೆ ಬರೆಯುತ್ತಿದ್ದೇನಂತ ನನಗೂ ಗೊತ್ತಿಲ್ಲ. ಏನನ್ನೂ ಬರೆಯದೇ ಮೂರು ತಿಂಗಳಾಗಿದೆ. ಏನೇ ಬರೆದರೂ ಅವರಿಗೆ ಏನನಿಸುತ್ತದೋ, ಇವರು ಏನಂತ ಆಡಿಕೊಳ್ತಾರೋ, ಇದರಲದಲಿ ಕ್ವಾಲಿಟಿ ಇದೆಯೋ ಇಲ್ವೋ ಅನ್ನುವ ಇನ್ನೂ ನುಂತಾದ ಅನುಮಾನಗಳು ಅದೆಲ್ಲಿಂದಲೋ ಬಂದು ಮನಸ್ಸನ್ನು ಹೊಕ್ಕಿಕೊಂಡು ಏನೂ ಬರೆಯಲಾಗದೆ ಓದ್ದಾಡಿಹೋಗಿದ್ದೇನೆ‌. ಬಹುಷಃ ಆ ತಳಮಳವನ್ನು ಓಡಿಸಲಿಕ್ಕೆ ಹಾಗೂ ಯಾರೂ ಓದದಿದ್ದರೂ ಕೇವಲ ನನಗೋಸ್ಕರ ಬರೆಯುವ ಆತ್ಮ ಸ್ಥೈರ್ಯವೊಂದನ್ನು ಬೆಳೆಸಿಕೊಳ್ಳಲಿಕ್ಕೆಂದೇ ಇದನ್ನು ಬರೆಯುತ್ತಿದ್ದೇನೆ ಅಥವಾ ಹಾಗಂತ ನಂಬಿಕೊಂಡಿದ್ದೇನೆ. ಅದಕ್ಕೆ ಸರಿಯಾಗಿ, ಇಂದಿಗೆ ನಾನು ಬೆಂಗಳೂರಿಗೆ ಬಂದು ಆರು ವರ್ಷ ತುಂಬಿದೆ. ಅದನ್ನೇ ಹೆಳೆಯಾಗಿಟ್ಟುಕೊಂಡು ಏನೋ ಒಂದು ಬರೆಯುತ್ತಿದ್ದೇನೆ‌.

ನೀವ್ಯಾರೂ ಓದುವ ಸಾಹಸ ಮಾಡುವುದಿಲ್ಲವೆನ್ನುವ ಧೈರ್ಯದ ಮೇಲೆ...

                        *****************

ಆರು ವರ್ಷಗಳು!

ಅದು ಹೇಗೆ ಕಳೆದವೋ ಗೊತ್ತಿಲ್ಲ. ನಿನ್ನೆ-ಮೊನ್ನೆಯಷ್ಟೇ ಊರು ಬಿಟ್ಟಿದ್ದೆ.. ಎಸ್ಸಾರೆಸ್ ನ ಸೀಟಿನಲ್ಲಿ ಬಾರದ ನಿದ್ರೆಗೆ ತೂಕಡಿಸಿದ್ದೆ. ಮೆಜಸ್ಟಿಕ್ಕೆನ್ನುವ ಎಂದೂಕರಗದ ಜನದಟ್ಟಣೆಯಲ್ಲಿ ಕಂಗಾಲಾಗಿ ನಿಂತಿದ್ದೆ.. ಆಗಲೇ ಆರು ವರ್ಷವಾಗಿಹೋಯ್ತೇ? ಬದುಕಿನ ಬಟ್ಟಲಿನಿಂದ ಆರು ವರ್ಷಗಳೆಂಬ ಅತ್ಯಮೂಲ್ಯ ಆರು ಲೋಟದಷ್ಟು ಪನ್ನೀರು ಸುರಿದು ಹೋದದ್ದು ಗೊತ್ತೇ ಆಗಲಿಲ್ಲವಲ್ಲ?

ಅದು 2012ರ ಜೂನ್ ತಿಂಗಳ ಮೂರನೇ ವಾರ. ಆಗಿನ್ನೂ ಡಿಗ್ರಿ ಪರೀಕ್ಷೆ ಮುಗಿಸಿ ಒಂದು ತಿಂಗಳು ಕಳೆದಿತ್ತಷ್ಟೇ. ಗೆಳೆಯರೆಲ್ಲ ಎಲ್ಲೆಲ್ಲೋ ನಡೆಯುವ ಉದ್ಯೋಗ ಮೇಳಗಳಿಗೆ ನುಗ್ಗುತ್ತಾ, ಬೆಂಗಳೂರಿನಲ್ಲಿ ತಮಗಿರುವ ಪ್ರಭಾವಗಳ ಪಟ್ಟಿ ಮಾಡುತ್ತಾ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ನಡೆಯುವ ಇಂಟರ್ವ್ಯೂಗಳ ಕುರಿತಾಗಿ ರೋಚಕ ಕಥೆ ಹೇಳುತ್ತಾ ಭಯಹುಟ್ಟಿಸುತ್ತಿದ್ದರೆ ನಾನು ಮಾತ್ರ ಯಾವ ಇಂಟರ್ವ್ಯೂಗೂ ಹೋಗದೇ ಅಮ್ಮ ಮಾಡಿಹಾಕಿದ ಚಟ್ಣಿಯಲ್ಲಿ ಎಷ್ಟು ಉಪ್ಪು ಕಡಿಮೆಯಾಗಿದೆಯೆಂಬುದನ್ನು ಕಂಡುಹಿಡಿಯುತ್ತಾ ಮನೆಯಲ್ಲೇ ಕುಳಿತುಕೊಂಡಿದ್ದೆ. ಮನಸ್ಸಿನಲ್ಲಿ ಆತಂಕದ ಹೊರತು ಮತ್ತೇನೂ ಇರಲಿಲ್ಲ. ಎಂಕಾಂ ಮಾಡೋಣವೆನ್ನುವ ಅರೆಮನದ ಯೋಚನೆಗೆ ಅಪ್ಪನ ಕೂಗಾಟ ಆಗಷ್ಟೇ ಬ್ರೇಕ್ ಹಾಕಿತ್ತು.

ಆಗ ಬಂದಿತ್ತು ಅಕ್ಕನ ಕಾಲ್. "ಒರಾಕಲ್ ಅಂತ ದೊಡ್ಡ ಕಂಪನಿ ಕಣೋ‌. ಅದೆಷ್ಟೋ ದೇಶದಲ್ಲಿ ಇದರ ಬ್ರಾಂಚ್ ಗಳಿದಾವಂತೆ. ಸ್ಟಾರ್ಟಿಂಗೇ ಹದಿನೈದು ಸಾವಿರ ಸಂಬಳ ಕೊಡ್ತಾರೆ. ನನ್ನ ಫ್ರೆಂಡ್ ರೇಖ ಅಂತ... ಅಲ್ಲೇ ಕೆಲಸ ಮಾಡ್ಕೊಂಡಿದಾಳೆ. ನಿಂಗೆ ಖಂಡಿತ ಕೆಲಸ ಆಗತ್ತೆ ಅಂದಿದಾಳೆ. ನೀನು ನಾಡಿದ್ದೇ ಹೊರಟು ಬಾ!"

ನಂಬಿದರೆ ನಂಬಿ, ಬಿಟ್ಟರೆ ಬಿಡಿ; ಅದೇ ದಿನ ಸಂಜೆ ಗುಡ್ಡದ ತುದಿಯಲ್ಲಿ ಒಬ್ಬನೇ ನಿಂತುಕೊಂಡು ತುಸು ಜೋರಾಗೇ ಹಾಡಿಕೊಂಡಿದ್ದೆ:

"ಸಿಕ್ಕಿದೇ ಸಿಕ್ಕಿದೇ.. ನಂಗೂ ಲೈಫು ಸಿಕ್ಕಿದೆ...
ಲಕ್ಕಿದೇ ಲಕ್ಕಿದೇ.. ನಂಗೂ ಒಂದು ಲುಕ್ಕಿದೆ!"

ಸ್ಟೆಪ್ಪು ಹಾಕೊದೊಂದೇ ಬಾಕಿ. ಅದಾಗಿ ಎರೆಡನೇ ದಿನ ರಾತ್ರಿಗೆಲ್ಲ ಮೂರು ಜೊತೆ ಬಟ್ಟೆ ಹಾಗೂ ಏಳ್ನೂರೈವತ್ತು ರೂಪಾಯಿಗಳ 'ಬೃಹತ್' ಆಸ್ತಿಯನ್ನು ಬ್ಯಾಗಿಗೆ ತುಂಬಿಕೊಂಡು ಬೆಂಗಳೂರಿನ ಬಸ್ಸು ಹತ್ತಿದ್ದೆ.

ಈಗ ಯೋಚಿಸುತ್ತೇನೆ. ಏನಾಗುತ್ತಿತ್ತು ಊರಿನಲ್ಲೇ ಇದ್ದಿದ್ದರೆ? ಅದೇ ತೋಟ, ಆಳು ಬಾರದ ದಿನ "ಉದ್ರು ಹೆಕ್ಕೊಡು ಬಾ ಮಗಾ" ಎಂದು ಕರೆಯುತ್ತಿದ್ದ ಅಪ್ಪ, "ತರಕಾರಿ ತಂದ್ಕೊಡೋ" ಎನ್ನುವ ಅಮ್ಮ, ಇವರಿಬ್ಬರ ಮಾತಿಗೂ ಕಿಂಚಿತ್ ಬೆಲೆ ಕೊಡದೆ ಅಬ್ಬೇಪಾರಿಯಂತೆ  ಓಡಾಡಿಕೊಂಡಿರುವ ಅಹಂಕಾರದ ನಾನು, "ಇವನ ಹಣೆಬರ ಇಷ್ಟೇ" ಎಂದು ಆಡಿಕೊಳ್ಳುವ ಜನ, ಬೆಂಗಳೂರಿನ ಬಸ್ಸಿನಿಂದಿಳಿದು ನನ್ನನ್ನು ನೋಡಿದರೂ ನೋಡದಂತೆ ನಡೆದು ಹೋಗುವ ಹಳೇ ಹುಡುಗಿ, ಬಹಳ ಪ್ರಯಾಸದ ನಂತರ ನಮ್ಮೂರಲ್ಲೇ ಸಿಗುತ್ತಿದ್ದ ಚಿಕ್ಕದೊಂದು ಕೆಲಸ, ಬಂದರೂ ಬಾರದಂತಿರುತ್ತಿದ್ದ ಸಂಬಳ...

ಬದುಕೆಂಬ ಬದುಕು ಹೇಗೆ ಯಾವ ಸೂಚನೆಯೂ ಇಲ್ಲದೆ ಮಹತ್ವದ 'ಟ್ರ್ಯಾಕ್' ಒಂದಕ್ಕೆ ದಾಟಿಕೊಂಡುಬಿಟ್ಟಿತೆಂಬುದನ್ನು ನೆನೆದರೆ ಈಗ ಆಶ್ಚರ್ಯವೆನಿಸುತ್ತದೆ. ಹಾಗಂತ ಇಂದೇನೋ ಭಾರೀ ದೊಡ್ಡ ಸಾಧನೆ ಮಾಡಿದ ಜ್ಞಾನ-ವೇದಾಂತ ಚಿಂತಾಮಣಿಯೋ, ಮತ್ಯಾವ ಕೋತಪ್ನಾಯ್ಕನೋ ಆಗಿದ್ದೇನೆಂದು ಹೇಳುತ್ತಿಲ್ಲ. ಆದರೆ ಕನಿಷ್ಠ ಅಪ್ಪ-ಅಮ್ಮನೊಂದಿಗೆ ಪ್ರೀತಿಯಿಂದ ಎರೆಡು ಮಾತನಾಡುವ, ಅವರ ಬಗ್ಗೆ, ಮನೆಯ ಬಗ್ಗೆ ಜವಾಬ್ದಾರಿಯಿಂದ ಎರೆಡು ನಿಮಿಷ ಯೋಚಿಸುವ, ನನ್ನೂರಿನ, ನನ್ನ ಜನರ ಮಹತ್ವವನ್ನು ಸ್ವಲ್ಪವಾದರೂ ಅರ್ಥ ಮಾಡಿಕೊಂಡಿರುವ, ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಬದುಕನ್ನು ನಾನೇ ನಡೆಸಬಲ್ಲ ಮನುಷ್ಯನಾಗಿದ್ದೇನೆಂದರೆ ಅದಕ್ಕೆ ಅಂದು ಬೆಂಗಳೂರಿಗೆ ಹೊರಟು ಬಂದ ಆ ಘಳಿಗೆಯೇ ಕಾರಣ.

ಈಗ ಕಥೆಗೆ ಮರಳಿ ಬರೋಣ. ಬಸ್ಸು ಶಹರದತ್ತ ಓಡುತ್ತಿತ್ತು‌. ಊರ ಹೊರಗಿನ ಗುಡ್ಡಗಳ ಹಿಂದೆ ಸೂರ್ಯ ಮುಳುಗಿದ್ದನ್ನು ಬಸ್ಸಿನ ಕಿಟಕಿಯಲ್ಲಿ ನೋಡುವಾಗ ಕಣ್ತುಂಬಿ ಬಂದಿತ್ತಾ? ಸರಿಯಾಗಿ ನೆನಪಿಲ್ಲ. ಆದರೆ ಇನ್ನೂ ಸೂರ್ಯ ಹುಟ್ಟುವ ಮೊದಲೇ ನಮ್ಮೂರ ನಡು ಮಧ್ಯಾಹ್ನದ ತುಂಬು ಸಂತೆಯಷ್ಟು ದಟ್ಟವಾಗಿ, ಬೀದಿದೀಪಗಳ ಬೆಳಕಿನಲ್ಲಿ ಹಗಲಲ್ಲದ ಹಗಲಾಗಿ ಜಗಮಗಿಸುತ್ತಾ ನಿಂತಿದ್ದ ಮೆಜಸ್ಟಿಕ್ನಲ್ಲಿ ನನ್ನನ್ನಿಳಿಸಿದ ಬಸ್ಸು ಹೊರಟೇ ಹೋದಾಗ ಅದೇ ಕಣ್ಣಲ್ಲಿ ಭಯ ಉಕ್ಕಿ ಬಂದಿದ್ದು ಮಾತ್ರ ಸುಳ್ಳಲ್ಲ‌. ನನ್ನನ್ನು 'ರಿಸೀವ್' ಮಾಡಲು ಭಾವನ ಜೊತೆ ಕಾರುಹತ್ತಿ ಬಂದಿದ್ದ ಅಕ್ಕನಂತೂ ನನಗಿಂತ ಅರ್ಧ ಕೆಜಿ ಜಾಸ್ತಿಯೇ ಆತಂಕಗೊಂಡಿದ್ದಳು. "ಸಿಟಿ ನೋಡದವನು. ಎಲ್ಲಿ ಕಳೆದು ಗಿಳೆದು ಹೋದಾನೋ. ಯಾವ ಮಕ್ಕಳ ಕಳ್ಳ ಅವನನ್ನು ಎತ್ತಕೊಂಡು ಹೋಗುತ್ತಾನೋ?" ಎಂಬ ಭಯದಲ್ಲೇ ರಾತ್ರಿಯಿಡೀ ನಿದ್ರೆಯಿಲ್ಲದೇ ಕಳೆದಿದ್ದಳು.
(ನಾವು ಎಷ್ಟೇ ಬೆಳೆದು ಕಳ್ನನ್ ಮಕ್ಳಾದ್ರೂ ಈ ಅಮ್ಮ, ಅಕ್ಕಂದಿರ ಕಣ್ಣಲ್ಲಿ ಮಾತ್ರ ಚಿಕ್ಕ ಮಕ್ಕಳೇ!) ನಾನು ಬೆಂಗಳೂರು ತಲುಪುವ ಅರ್ಧ ಗಂಟೆ ಮೊದಲೇ ಭಾವನನ್ನು ಎಬ್ಬಿಸಿಕೊಂಡು ಮೆಜಸ್ಟಿಕ್ಕಿಗೆ ಬಂದು ಕಾಯುತ್ತಾ  ಕುಳಿತುಬಿಟ್ಟಿದ್ದಳು, ಅಕ್ಕನೆಂಬ ಆ ಎರೆಡನೇ ಅಮ್ಮ.

                       ***********

"ಎಲ್ಲಿದ್ದೀಯ ಪುಟ್ಟ?"

ಹಾಗಂತ ಕೇಳಿದ ಭಾವನಿಗೆ ಹೇಳುವದಕ್ಕೆ ನನ್ನ ಕಣ್ಣೆದುರು ನೂರು ಉತ್ತರಗಳಿದ್ದವು. "ಇದೊಂದು ದೊಡ್ಡ ರೋಡು.. ಯಾಕೋ ಗೊತ್ತಿಲ್ಲ, ಇಲ್ಲಿ ಕಾರು, ಬಸ್ಸುಗಳೆಲ್ಲ ನಿಂತು ನಿಂತು ಹೋಗ್ತಿದಾವೆ.. ಎದುರಿಗೊಂದು ದೊಡ್ಡ ಬಿಲ್ಡಿಂಗಿದೆ... ಪಕ್ಕದಲ್ಲೇ ಒಂದು ಟೀ ಅಂಗಡಿಯಿದೆ... ಅಲ್ಲಿ ಸುಮಾರು ಜನ ಕಾಪಿ ಕುಡಿಯುತ್ತಿದ್ದಾರೆ... ಮುಂದುಗಡೆಯೇ ಒಂದು ಕರ್ನಾಟಕ ಬ್ಯಾಂಕ್ ಎಟಿಎಂ ಇದೆ..."

ನಾನು ಕೊಟ್ಟ ಯಾವ ಸುಳಿವೂ ಭಾವನಿಗೆ ನಾನಿರುವ ನಿರ್ದಿಷ್ಟ ಜಾಗ ಯಾವುದೆಂದು ಅರ್ಥಮಾಡಿಸಲಿಕ್ಕೆ ಸಾಕಾಗುವಂತಿರಲಿಲ್ಲ. ಅಳೆದರೆ ಅರ್ಧ ಕಿಲೋಮೀಟರ್ ಇರಬಹುದಾದ ನನ್ನ ತೀರ್ಥಹಳ್ಳಿ ಪೇಟೆಯಲ್ಲಾದರೆ ಈ ಟೀ ಅಂಗಡಿ, ಎಟಿಎಂಗಳೆಲ್ಲ ದೊಡ್ಡ ದೊಡ್ಡ ಲ್ಯಾಂಡ್ ಮಾರ್ಕ್ ಗಳೇ. ಆದರೆ ಈ ಬೆಂಗಳೂರಿನಲ್ಲಿ? ಅಂಥವು ಮಾರಿಗೆ ಮೂರು ಸಿಗುತ್ತವೆ. ಅದಕ್ಕೇ ಇಲ್ಲಿ ಬಸ್ ಸ್ಟ್ಯಾಂಡ್, ವಾಟರ್ ಟ್ಯಾಂಕ್ ಮುಂತಾದ ದೊಡ್ಡದೊಡ್ಡವನ್ನೇ ಗುರುತಾಗಿ ಹೇಳಬೇಕು!

ಅಂತೂ ಇಂತೂ ಅದು ಹೇಗೋ ನಾನಿದ್ದ ಜಾಗವನ್ನು ಪತ್ತೆಹಚ್ಚಿದ ಭಾವ ಮೃದುವಾಗಿ ಹಾಗೆಂದು ಹೇಳಿದ್ದರು. ಹಾಗೆ ಬೆಂಗಳೂರು ಮೊದಲ ಹೆಜ್ಜೆಯಿಂದಲೇ ದಡ್ಡ ಶಿಖಾಮಣಿಯಾದ ನನಗೆ ಪಾಠ ಮಾಡಲು ಶುರುವಿಟ್ಟುಕೊಂಡಿತ್ತು.

                     ************

"ತಿಂಗಳಿಗೆ ಹದಿನೈದು ಸಾವಿರ!"

ಅಷ್ಟು ಹಣವನ್ನು ಯಾವ್ಯಾವ ಸಂದಿಯಲ್ಲಿ ಮುಚ್ಚಿಡಬೇಕೆಂದು ಯೋಚಿಸಿ ಯೋಚಿಸಿಯೇ ನಾನು ಸುಸ್ತಾಗಿದ್ದೆ. "ನಂಗೆ ತಿಂಗ್ಳಿಗೆ ಹತ್ತು ಸಾವಿರ ಬಂದ್ರೆ ಸಾಕು. ಅರಾಮಾಗಿರ್ತೀನಿ" ಎಂದು ಶುದ್ಧ ಬೋಳೇ ಶಂಕರನಂತೆ ಹೇಳಿಕೊಂಡು ತಿರುಗುತ್ತಿದ್ದವನು ನಾನು. ಈಗ ಅದರ ಮೇಲೆ ಮತೈದು ಸಾವಿರ ಸಿಗಲಿದೆಯೆಂಬ ಕಲ್ಪನೆಗೇ ನಾನು ಶ್ರೀಮಂತರ ಸಾಲಿನಲ್ಲಿ ಕೂತಾಗಿತ್ತು‌. ಅದೂ ಅಲ್ಲದೆ ನನಗಿದ್ದ ಇನ್ನೊಂದು ಪೆದ್ದ ನಂಬಿಕೆಯೆಂದರೆ ಒರಾಕಲ್ ನಲ್ಲಿ ನನಗೆ ಕೆಲಸ ಸಿಕ್ಕೇ ಸಿಗುತ್ತದೆ ಎಂಬುದು. ಅಕ್ಕ ಈಗಾಗಲೇ ತನ್ನ ಗೆಳತಿಗೆ ಹೇಳಿಟ್ಟಿದ್ದಾಳೆ‌. ಅವಳು ಅದೆಂತದೋ ಹೆಸರಿನ ಆ ದೊಡ್ಡ ಕಂಪನಿಯ ಸೀಟೊಂದರ ಮೇಲೆ ಕರ್ಚೀಫು ಹಾಕಿ ಅದನ್ನು ನನಗಾಗೇ ಕಾದಿರಿಸಿದ್ದಾಳೆ. ನಾನು ನೇರ ಹೋಗಿ ಅಲ್ಲಿ ಕೂರುವುದೊಂದೇ ಬಾಕಿ!

ನಮ್ಮೂರಿನ ಗುರುಶಕ್ತಿ ಬಸ್ಸಿನಲ್ಲಿ ಸೀಟು ಹಿಡಿದಷ್ಟೇ ಸುಲಭಕ್ಕೆ ಒರಾಕಲ್ ಎನ್ನುವ ಭಾರೀ ಎಂಎನ್ಸೀಯೊಂದರ ನೌಕರಿಯನ್ನೂ ಹಿಡಿದುಬಿಡಬಹುದೆಂದು ನಾನಂದುಕೊಂಡಿದ್ದರಲ್ಲಿ ನನ್ನ ತಪ್ಪೇನೂ ಇರಲಿಲ್ಲ. ಏಕೆಂದರೆ ಸಾಕ್ಷಾತ್ ಅಕ್ಕನೇ
ಅಂಥಾದ್ದೊಂದು ನಂಬಿಕೆ ಬರುವಂಥಾ ಧಾಟಿಯಲ್ಲಿ ಮಾತಾಡಿದ್ದಳು. ಹೀಗೆ ನೌಕರಿ ಸಿಗುವ ಮೊದಲೇ ಸಂಬಳ ಇಡಲಿಕ್ಕೆ ತಿಜೋರಿ ಖರೀದಿಸುವಂತಹಾ ಮೂರ್ಖ ಓವರ್ ಕಾ‌ನ್ಫಿಡೆನ್ಸೊಂದು ನಾನು ಬೆಂಗಳೂರಿಗೆ ಹೊರಡುವಾಗಲೇ ನನ್ನೊಳಗೆ ಸೇರಿಕೊಂಡುಬಿಟ್ಟಿತ್ತು. ಬಹುಷಃ ಅಂಥಾದ್ದೊಂದು ಅತಿಯಾದ ಆತ್ಮವಿಶ್ವಾಸವಿಲ್ಲದೇ ಹೋಗಿದ್ದರೆ  ನಾನು ಬೆಂಗಳೂರಿಗೆ ಬರುತ್ತಲೇ ಇರಲಿಲ್ಲವೋ ಏನೋ? ಅದು ಏನೇ ಆದರೂ ಈಗಾಗಲೇ ಕರ್ಚೀಫು ಹಾಸಿ ಕಾಯ್ದಿರಿಸಿರುವ ಸಿಂಹಾಸನಕ್ಕೆ ಪಟ್ಟಾಭಿಷೇಕದ ಶಾಸ್ತ್ರ ಮಾಡಿ ಮುಗಿಸಲೆಂದು ನಾನು ಅಕ್ಕ ಹೊರಟೆವು. ಆ ಪಟ್ಟಾಭಿಷೇಕದ ಹೆಸರೇ

"ಇಂಟರ್ವ್ಯೂ!"

ಜೀವನದ ಮೊಟ್ಟಮೊದಲ ಇಂಟರ್ವ್ಯೂ ಅನ್ನು ನಾನು ಎದುರಿಸಿದ್ದು ಬಲು ತಮಾಷೆಯ ಘಟನೆ.

-ವಿನಾಯಕ ಅರಳಸುರಳಿ.

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...