ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜನವರಿ 19, 2019

ಏಕೋ ಕಾಣೆ ಕಡಲೇ...


ಕೋ ಕಾಣೆ ಕಡಲೇ
ನೀನೆಂದರೆ ನನಗೆ ಬಲು ಪ್ರೀತಿ;
ನಿನ್ನ ತೀರದಿ ತಾನೇ ನನ್ನವಳ ಊರು?
ನಿನ್ನ ಅಲೆಯಲೆಯೂ ಅವಳದೇ ರೀತಿ.
ನಿನಗೆ ನಾನು ಎಷ್ಟೊಂದು ದೂರ
ನನಗೇಕೋ ನೀ ತುಂಬ ಸನಿಹ;
ಅಳಿಸೋಕೆ ಮುನ್ನ ಓದೊಮ್ಮೆ ಅಲೆಯೇ
ಮರಳಲ್ಲಿ ನಾ ಬರೆದ ಪ್ರೇಮದ ಬರಹ.
ಹೇಳು ಮರಳೇ ಇದುವೇ ತಾನೇ
ಅವಳು ಆಡಿಬೆಳೆದ ಜಾಗ?
ಅವಳ ಕಾಲ್ತೊಳೆದ ನವಿರಾದ ಅಲೆಯೇ
ಮತ್ತೊಮ್ಮೆ ಬರುವೆಯ ದಡಕೆ ಈಗ?
ಕಾಯುತ್ತ ನಿಂತ ಈ ನನ್ನ ಹೆಜ್ಜೆ
ದಯಮಾಡಿ ಅಳಿಸದಿರು ಅಲೆಯೇ;
ಮುಂದೊಮ್ಮೆ ಅವಳು ಬಂದಾಗ ಇಲ್ಲಿ
ಬೆರೆಯುವುದೋ ಏನೋ ಹೆಜ್ಜೆಗೆ ಹೆಜ್ಜೆ.
ಅವಳ ಮನವೂ ನಿನ್ನಂತೇ ಕಡಲೇ
ತಿಳಿಯೋಕೆ ಆಗದ ಆಳ;
ಅರಿಯಲಿ ಹೇಗೆ ಮೇಲಷ್ಟೇ ತೇಲಿ
ಒಳಗೊಳಗೇ ಸುಳಿಯೊಳಗೆ ಮುಳುಗಿದವಳ?
ಏಕೋ ಕಾಣೆ ಕಡಲೇ
ಅವಳೆಂದರೆ ನನಗೆ ನಿನ್ನಂತೇ;
ನೂರೊಂದು ಬಾರಿ ಎದೆತನಕ ಬಂದು
ದಾಟದೆಯೇ ಮರಳಿದಳು ದಡದ ರೇಖೆ.
30/5/2017

ಬಾಹುಬಲಿಗೆ..


ಪಾದಕೆರಗುವುದು
ಅಷ್ಟು ಸುಲಭವಲ್ಲ;
ನಮಸ್ಕಾರಗಳೆಲ್ಲಾ
'ಸಾಷ್ಟಾಂಗ'ವಾಗುವುದಿಲ್ಲ.
ಎಲ್ಲ ಕಳಚಿಟ್ಟ ಮೇಲೂ
ಉಳಿಯುವ 'ನಾನು'
ಅಷ್ಟು ಸುಲಭಕ್ಕೆ ಬಾಗುವುದಿಲ್ಲ‌;
ನೀ ಬಿಚ್ಚಿಟ್ಟ ಆ
ಕಟ್ಟ ಕಡೆಯ ವಸ್ತ್ರವ ಸುತ್ತಿಕೊಳ್ಳುವುದ
ನಾನಿನ್ನೂ ಬಿಟ್ಟಿಲ್ಲ.
ಈ ಘಂಟೆ, ಘಮಲುಗಳು
ನಿನ್ನೆತ್ತರವ ತಲುಪುವುದಿಲ್ಲ;
ಈ ಮಸ್ತಕದ ಹೊರೆಯ
ನಿನ್ನ ಪಾದಕೊರಗಿಸದ ಹೊರತು
ನನಗೆ ನೀ ಕಾಣುವುದಿಲ್ಲ!
ಬಾಗಿರುವೆನು ನಾನೀಗ
ಏಳುವುದಕ್ಕಾಗಿ;
ಬಾನಿಗೇ ಬೆಳೆದು ನಿಂತ
ನಿನ್ನೀ ತಳಪಾಯದ
ವಿಸ್ತಾರವ ಅರಿಯುವುದಕ್ಕಾಗಿ..
(ವಿಜಯಕರ್ನಾಟಕದ ಜುಲೈ15,2019ರ ಲವಲvkಯಲ್ಲಿ ಪ್ರಕಟಿತ.)
-ವಿನಾಯಕ ಅರಳಸುರಳಿ.

ಸೋಮವಾರ, ಏಪ್ರಿಲ್ 3, 2017

ಹೀಗೊಬ್ಬ ಶಹಜಹಾನ್...

ಇಲ್ಲೊಬ್ಬ ಷಹಜಹಾನ್
ಒಬ್ಬನೇ ಮಾತನಾಡುತ್ತಾನೆ;
ಯಾವುದೋ ತಿರುವಿನಲಿ ಗಂಟೆಗಟ್ಟಲೆ ನಿಂತು,
ನಿಟ್ಟುಸಿರಿಟ್ಟು ಮರಳುತ್ತಾನೆ.
ತನ್ನ ಹಾಡಿಗೆ ತಾನೇ ಬಿಕ್ಕಿ
ಏನೇನೋ ಗೀಚುತ್ತಾನೆ;
ಮುಮ್ತಾಜ್ ಬಂದಂತೆ ಕನಸು ಕಂಡು
ಬಾಗಿಲು ತೆರೆದು ಕಾಯುತ್ತಾನೆ...

ಅವಳು ಸ್ಪರ್ಷಿಸಿದ ಕೊರಡು ಕೂಡ
ಹೂವಾಗಿ ಅರಳುತ್ತದೆ ಅವನೊಳಗೆ;
ಅವಳು ನಿಂತ, ಕುಳಿತ, ಮಾತನಾಡಿದ ಜಾಗಗಳೆಲ್ಲಾ
ತಾಜಮಹಲುಗಳು!
ಹೀಗೆ ನೆನಪಿಗೊಂದರಂತೆ ಗೋರಿ ಕಟ್ಟುತ್ತಾ
ಮರೆಯುವ ನೆಪದಲ್ಲಿ
ಅಮರವಾಗಿಸುತ್ತಿದ್ದಾನೆ...

ಮುಮ್ತಾಜ್ ಬದುಕಿಯೇ ಇದ್ದಾಳೆ!
ಅವನನ್ನು ಕಂಡೂ ಕಾಣದಂತೆ
ತನ್ನ ಪಾಡಿಗೆ ತಾನಿದ್ದಾಳೆ;
ಅವಳ ಪಾಲಿಗವನು ಎರೆಡನೆಯ ಷಹಜಹಾನ್!
ಹಿಂದೊಬ್ಬ ಛದ್ಮವೇಷದ ಷಹಜಹಾನನನ್ನ ನಂಬಿ
ತಾನೇ ಕಟ್ಟಿದ್ದ 'ಮಹಲು'
ಒಡೆದು ಚೂರಾದಾಗಲೇ ಅವಳಿಗೆ ಅರ್ಥವಾಗಿದ್ದು-
'ತಾಜಮಹಲಲ್ಲಿ ಬದುಕುವುದಕ್ಕಾಗುವುದಿಲ್ಲ!'
ಅದಕ್ಕೇನಿದ್ದರೂ
ಬಾದ್ ಷಾನ ಅರಮನೆಯೇ ಸರಿ.

ಪಾಪ ಈ ನಿಜಷಹಜಹಾನ್;
ಬಂದೇ ಇರದವಳ ಕಳುಹಿಸಲು ಮನಸ್ಸಾಗದೇ
ತನ್ನದೇ ಗೋರಿ ಕಟ್ಟಿಕೊಳ್ಳುತ್ತಾ
ಅವಳ ಹೆಸರಿಡುತ್ತಿದ್ದಾನೆ...

('ಮಂಗಳ'ದಲ್ಲಿ ಪ್ರಕಟಿತ)

ಹೀಗೊಂದು ಪ್ರೀತಿಯ ಕಥೆ...

ಮಲೆನಾಡ ಗಂಡಿಗೆ ತುಳುನಾಡ ಹೆಣ್ಣೆಡೆಗೆ
ಹೀಗೊಂದು ಪ್ರೇಮವಂತೆ..
ಹೇಳುವುದೋ, ತಾಳುವುದೋ ಅವನ ಚಿಂತೆ!

ಕಡಲತಡಿಯ ಊರವಳು, ಮಾತಿನಲಿ ಬಲು ಜೋರು,
ತನ್ನದೋ ಮೌನರಾಗ!
ಪ್ರೀತಿಯಲಿ ಮಾತೇಕೆ? ಕಿರುನಗೆಯೆ ಸಾಕದಕೆ
ಎನ್ನುವುದು ಹೃದಯ ಆಗ!

ತನ್ನೂರ ಸೂರ್ಯನೂ ಘಾಟಿಯಿಳಿದು ಜಾರುವನು,
ತುಳುನಾಡ ಕಡಲ ಮಡಿಲಿಗೆ..
ತನ್ನಂತೆ ಅವನಿಗೂ ಪ್ರೇಮವಂತೆ!

ಮಲೆನಾಡ ಹಸಿರಿಗೆ ಹನಿಸುವ ಮಳೆಮೋಡ
ತೇಲಿಬಂತು ಹೇಳು ಎಲ್ಲಿಂದ?
ಸುರಿದ ಮಳೆ ಹನಿಯೆಲ್ಲ ಹೊಳೆಯಾಗಿ ಓಡುವುದು
ಮತ್ತದೇ ಕಡಲ ಕರೆಯಿಂದ!

ತುಳುನಾಡು - ಮಲೆನಾಡ ಬೀಗ-ನೆಂಟ ಸಂಬಂಧ
ಇಂದು ನೆನ್ನೆಯದಲ್ಲ;
ಕಡಲಿಗೂ ಕಾಡಿಗೂ 'ಮೇಘ' ದೂತ!

ಬೇಸರದ ಸಂಜೆಯಲಿ ಆಗುಂಬೆ ಗಿರಿಯೇರಿ
ಹುಡುಕುವನು ಕಡಲಿನೂರ;
ತೀರದ ಮರಳಿನಲಿ, ಓಡುವ ಅಲೆಯ ಜೊತೆ
ಆಡುತಿಹ ಅವಳ ಊರ!

ತೆಂಕಣದ ತೋಟದಲಿ ಅರಳಿನಿಂತ ಹೂವೊಂದು
ತುಂಟಘಮವ ಬೀರಿ ನಕ್ಕಿದೆ;
ಬಡಗಣದಿ ಭ್ರಮರವು ನಿದಿರೆಮರೆತಿದೆ.

('ಮಂಗಳ'ದಲ್ಲಿ ಪ್ರಕಟಿತ)

ಗುರುವಾರ, ಜನವರಿ 5, 2017

ಜೀವಜಲ

ಬರಡು ಧೂಳಿನ ಮಣ್ಣ ಕಣ್ಣಿಗೆ
ಹಸಿರು ದೃಷ್ಟಿಯ ಚಿಮುಕಿಸಿ;
ಕಲ್ಲ ನರದಲಿ ನೆತ್ತರುಕ್ಕಿಸಿ
ಜೀವ ಸಂತತಿ ಅರಳಿಸಿ.

ಸಪ್ತ ಗ್ರಹಗಳಲೆಲ್ಲೂ ಕಾಣದ
ನಾಗರೀಕತೆ ಚಿಗುರನು,
ತೀರ ತೊಟ್ಟಿಲೊಳಿಟ್ಟು ತೂಗಿದ
ಉದಕ ಮಾತೆಯ ಮಡಿಲಿದು.

ಕಡಲೊ ನದಿಯೋ, ಕೆರೆಯೋ ಝರಿಯೋ
ಸಿರಿಯು ಬತ್ತದ ಆಳವೋ;
ಅಗಾಧ ಸುಳಿಗಳ, ಪ್ರಚಂಡ ಅಲೆಗಳ
ನುಂಗಿ ನಿಂತಿಹ ಶಾಂತಿಯೋ.

ಜೀವ ವಾಹಿನಿ ಹರಿದು ಸಾಗುತ
ಹಸಿವನೆಲ್ಲವ ಕಿತ್ತಳು;
ಹರಿವು ತಾಕದ ನೆಲದ ತಾಪಕೂ
ಮಳೆಯ ಹನಿಗಳ ಸುರಿದಳು.

ವಿಷವ ಹರಿಸುವ ಕೈಯ್ಯ ದಾಹಕೂ
ಜೀವಜಲವನೆ ಎರೆವಳು;
ಯುಗವೆ ಸವೆದರೂ ಮತ್ತೆ ಹುಟ್ಟುತ
ಜಗದ ಉಳಿವಿಗೆ ದುಡಿವಳು.

('3ಕೆ: ಕನ್ನಡ ಕವಿತೆ ಕಥನ' ದ ರಾಜ್ಯೋತ್ಸವ ಕವನ ಸ್ಪರ್ಧೆ 2016ರಲ್ಲಿ ಸಮಾಧಾನಕರ ಬಹುಮಾನ ಪಡೆದ ನನ್ನ ಕವನ. ಕವನ ಸ್ಪರ್ಧೆಯ ವಿಷಯ 'ಜಲಸಂಸ್ಕೃತಿ')

ಶನಿವಾರ, ನವೆಂಬರ್ 5, 2016

ಹಾರೆನ್ನ ಹೃದಯವೇ...

ಹಾರೆನ್ನ ಹೃದಯವೇ ಆ ನೀಲ ನಭಕೆ
ನರಳುವೆಯೇಕೆ ಸೆರೆಗೆ ಸಿಕ್ಕಿ?
ನೀನೇ ಹರಡಿಕೊಂಡ ಬಲೆಯ ಹರಿದು ಹಾರಿಬಿಡು
ಬೇಕಿಲ್ಲ ಬೇರ್ಯಾರ ರೆಕ್ಕೆ.

ಕದವೇ ಇಲ್ಲದ ತೆರೆದ ಬಾಳಿದು
ಆಗಮನ, ನಿರ್ಗಮನ ಉಚಿತ;
ಕೈ ಚಾಚಿ ಬಂದಂತೇ ಕೈ ಬೀಸಿ ನಡೆದುಬಿಡು
ನಿನ್ನದೇನಿದೆ? ಎಲ್ಲ ಪೂರ್ವ ಲಿಖಿತ.

ಇರುವಷ್ಟು ಹೊತ್ತಷ್ಟೇ ಈ ಗೂಡು ನಿನದು
ಋಣ ಮುಗಿಯಿತೆಂದು ಹಾರಿಬಿಡು;
ಬಾಡಿಗೆಯ ಕೇಳದು ಸ್ವಚ್ಛಂದ ಬಾನು
ತ್ರಾಣವಿರುವಷ್ಟು ಜಗವ ಸುತ್ತಿಬಿಡು.

ಅರಿತವಗೆ ತಲೆಬಾಗಿ, ಕಿರಿಯರಿಗೆ ಗುರುವಾಗಿ,
ಹಾರಲಾಗದವಗೆ ತುತ್ತು ಗುಟಕನೀಡು;
ಹಿಗ್ಗು, ಕುಗ್ಗುಗಳಿಗೆ ಸೋಲದೇ ಸಾಗುತಿರು
ಬಾನೆಲ್ಲ ಮೊಳಗಲಿ ನಿನ್ನ ಹಾಡು.

ಸೊತಿತೇ ರೆಕ್ಕೆ? ಉಡುಗಿತೇ ತ್ರಾಣ?
ಸಾಕಿನ್ನು ಇಳಿ ಆ ಮಣ್ಣಿನೆಡೆಗೆ;
ಹಾದ ದಾರಿಯನೆಲ್ಲ ಮನದುಂಬಿ ನೆನೆದೊಮ್ಮೆ
ಒಂದಾಗಿ ಬಿಡು ಆ ಅನಂತದೊಳಗೆ.

(ತುಷಾರದ 'ಚಿತ್ರಕವನಸ್ಪರ್ಧೆ'ಯಲ್ಲಿ ಪ್ರಕಟಿತ)

ಶನಿವಾರ, ಜುಲೈ 23, 2016

ನೆನಪುಗಳು...

ಗಾಯವೊಂದಿರಲಿ ಬಿಡು, ಮುಲಾಮು ಹುಡುಕದಿರು
ಮಾಯದೇ ಉಳಿದಿರಲಿ ಅದರಷ್ಟಕೇ;
ಏನೋ ತಾಕಿದಾಗ, ಯಾರನೋ ನೆನೆದಾಗ,
ನೋವಾಗಿ ಅಳಲಿ ಅದು ತನ್ನಷ್ಟಕೇ.

ಎಲ್ಲ ಅಳಿಸಿದ ಮೇಲೂ ಗುರುತೊಂದು ಇರಬೇಕು
ಬೆಳಗಿದ ಜ್ಯೋತಿಯುಳಿಸಿದ ಕರಿ ಬತ್ತಿಯಂತೆ;
ಪಾಲು ಯಾರದೇ ಆಗಿರಲಿ, ಪ್ರೀತಿ ನಿನ್ನದು ತಾನೇ?
ನೆನಪುಗಳು ನಗುತಿರಲಿ ತಮ್ಮಷ್ಟಕೇ.

ಕರೆದವರ, ಬರದವರ, ಬಂದು ಮರೆಯಾದವರ,
ಕದ ತೆರೆದು ಕಾದಿದ್ದು ನಿಜವಲ್ಲವೇ?
ಹಿಂದೆಂದೋ ಕನಸಲ್ಲಿ ಕಾರ್ಮುಗಿಲ ದನಿ ಕೇಳಿ
ನವಿಲಾಗಿ ನಲಿದದ್ದು ಒಲವಲ್ಲವೇ?

ನಿನ್ನೆಗಳ ಪುಟಗಳಲಿ ಸರಸದಲೋ, ವಿರಸದಲೋ
ಸಹಿ ಮಾಡಿ ಹೋದವರ ಕಿರು ಹೊತ್ತಿಗೆ,
ಸಂಜೆಗಾಳಿಗೆ ಸಿಲುಕಿ ತಾನಾಗೇ ತೆರೆದಾಗ
ಕಣ್ತುಂಬಿ ನಕ್ಕುಬಿಡು ನಿನ್ನಷ್ಟಕೇ.

(ಮಂಗಳ 27.7.2016 ರಲ್ಲಿ ಪ್ರಕಟಿತ)

ಶುಕ್ರವಾರ, ಜುಲೈ 15, 2016

ಪ್ರಳಯವಾಗಲಿ ಇಂದೇ...!

ಇಳಿದು ಬಾ ಸೂರ್ಯನೇ ಇಳೆಗೆ
ಪ್ರಳಯಾಗ್ನಿ ಮಳೆಯಾಗಿ;
ಮೇಘಗಳ ಕೊಳ್ಳಿಯಾಗಿಸಿ ಹಿರಿದು 
ಕೆಂಡದುಂಡೆಗಳ ಸುರಿಸು ಬಾ!
ಮಾನವತೆ ಸತ್ತು ಮೆರೆದಾಡುತಿಹ
ಜೀವಂತ ಶವಗಳ
ಸುಟ್ಟು ಬೂದಿಯಾಗಿಸು ಬಾ!

ಮೇಲೆದ್ದು ಬಾ ಕಡಲೇ
ಅಗಾಧ ಸುನಾಮಿ ಅಲೆಗಳೊಡನೆ!
ಸುತ್ತಿ ತಳಕೆಳೆಯುವ ಸುಳಿಗಳೊಡನೆ!
ನಿನ್ನ ಬಾಹುಗಳ ಚಾಚಿ
ಈ ಕ್ರಿಮಿಗಳ ಬಾಚಿಕೋ!
ಮರಳಿ ಮೇಲೇಳದಂತೆ ನಿನ್ನ
ಕಗ್ಗತ್ತಲ ಒಡಲೊಳಗೆ ಸೆಳೆದುಕೋ!

ಬಿರಿದು ಬಾಯ್ಬಿಡು ಭುವಿಯೇ
ನಡುಗಿ ಕೆಡವು ಎಲ್ಲರನು!
ಯುಗಯಗಾಂತರವೇ ಗತಿಸಿದರೂ
ಮತ್ತೆಂದೂ ಹುಟ್ಟಿಬರದಂತೆ
ನುಂಗಿಬಿಡು ನರರಾಕ್ಷಸರನು!

ಇಳಿದು ಬಾ ಶಿವನೆ ಇಳೆಗೆ
ಪ್ರಳಯ ರುದ್ರನಾಗಿ!
ಇಂದೇ ಈ ಪರಿಯ ವಿಷಕಾರುತಲಿ
ಬೆಳೆಯುತಿದೆ ಜಗದಲಿ ಪಾಪದಬಳ್ಳಿ;
ನಾಳೆಯಾಗುವುದೇ ಬೇಡ,
ಪ್ರಳಯವಾಗಲಿ ಇಂದೇ!
ನವಮನ್ವಂತರವುದಿಸಿ
ಜಗವು ಜನಿಸಲಿ ಮತ್ತೆ ಮೊದಲಿನಿಂದ...

('ಮಂಗಳ'ದಲ್ಲಿ ಪ್ರಕಟಿತ)

ಭಾನುವಾರ, ಜುಲೈ 3, 2016

ನಿರಾಕರಣೆ...





'ಇಲ್ಲ' ಎನ್ನುವ ಒಂದು ಮಾತಲಿ
ಎನಿತು ಕನಸಿನ ಕಗ್ಗೊಲೆ;
ಗೆಲ್ಲಲಾರದೆ ಹೋದ ಒಲವದು
ಎಂದೂ ಮಾಯದ ಕಾಯಿಲೆ.

ಮಾತು-ಮಾತನು ಪೋಣಿಸಿ ತಂದೆನಾ
ಒಲವ ಬಿನ್ನಹ ಹಾರವ;
ಭ್ರಮಿತ ಮತಿಯಲಿ ಅರಿಯದಾದೆನೆ
ಮನಸು-ಮನಸಿನ ದೂರವ?

ಸಮಯದಾಟದಿ ಕಂಡ ಸೋಜಿಗ
ಸತ್ಯವೆಂದೇ ನಂಬಿದೆ;
ನಿಜದ ಬಣ್ಣವು ಕಾಣದಾಯಿತೇ
ಸ್ವಪ್ನ ಮುಸುಕಿದ ಕಣ್ಣಿಗೆ?

ಮರೆಯಬೇಕೇ, ಕಾಯಬೇಕೇ
ಬೆಳಗದೇ ಹೋದ ಜ್ಯೋತಿಯ?
ಬರುವ ನಾಳೆಯ ತಿರುವಲೆಲ್ಲೋ
ಮತ್ತೆ ಸಿಗುವುದೇ ಈ ಪ್ರೀತಿಯು?

(ಮಂಗಳ 6-7-2016ರ ಸಂಚಿಕೆಯಲ್ಲಿ ಪ್ರಕಟವಾದ ಕವನ)

ಸೋಮವಾರ, ಜೂನ್ 13, 2016

ಶಾಲೆಯ ನೆನೆದು...

೧. ಶಾಲೆಯ ದಿನಗಳು...

ಹರಿಯದ ಬಾಲ್ಯದ ಬಣ್ಣದ ಪುಟದಲಿ
ಬರೆದಿಹ ತೊದಲಿನ ಪದಗಳವು;
ತಿರುಗಿ ನೋಡಿದರೆ ಎಂದಿಗೂ ಹಸಿರು,
ಮರೆಯದ ಶಾಲೆಯ ದಿನಗಳವು.

ಬೇಧವಿಲ್ಲದೆ ಸ್ನೇಹ ಲತೆಯಲಿ
ಹೂಗಳು ಅರಳುವ ಕಾಲವದು;
ಜಾತಿ-ಧರ್ಮಗಳ ನೀತಿ ಮರೆಯುತಲಿ
ಮನಗಳ ಬೆಸೆಯುವ ಜಾಲವದು.

ಮಳೆಯ ನೀರಿನಲಿ ಬಿಟ್ಟ ದೋಣಿಯಲಿ
ಮನಸು ತೇಲಿದ ಯಾನವದು;
ಚಿಕ್ಕ ಖುಷಿಗಲೆ ಮೈಯ್ಯ ಮರೆಯುವ
ಎಳೆಯ ಹೃದಯಗಳ ಗಾನವದು.

ಪುಟಗಳ ನಡುವಳಿಕೆ ಪಟಾಕಿ ಎಲೆಯು
ಚಿಗುರಿದ ಹರುಷವು ಇಂದೆಲ್ಲಿ?
ಕಾಲವು ಕಸಿದಾ ಮರಳದ ಸೊಬಗದು
ಮಾಸದೆ ಉಳಿಯಿತು ಸ್ಮೃತಿಯಲ್ಲಿ.

೨. ಶಾಲೆಯ ನೆನೆದು...

ಮರಳಿ ಬರಬಾರದೇ ಒಮ್ಮೆ
ಕಳೆದ ಸಮಯ?
ಸೇರಬೇಕು ಮತ್ತೆ ಮಗುವಾಗಿ
ನಿನ್ನ ಹೃದಯ!

ಈ ನಿನ್ನ ಅಂಗಳದಾಳದಲಿ
ನಮ್ಮದೇ ಕೋಟಿ ಹೆಜ್ಜೆಗಳು;
ಆಳದಿಂದಲೇ ಪಿಸುಗುಡುತ್ತಿವೆ,
ಹೊಸ ಸಮಯ ತಂದ ಹೊಸ
ಮಣ್ಣಿನಡಿಯಲಿ ಹುದುಗಿ ಹೋದರೂ!
ಸದ್ದಿರದೆ ಬಹುದೂರ
ನಡೆದು ಬಂದಾಗಿದೆ,
ಹಿಂಬಾಲಿಸುತಿದೆ ಸ್ಮರಣೆಗಳಾ ನೆರಳು
ಒಂಚೂರೂ ಸವೆಯದೇ!

ಎದೆಯಾಳದಲೆಲ್ಲೋ ಮೌನವಾಗಿ
ಹೊದ್ದು ಮಲಗಿದ್ದ ನೆನಪುಗಳು
'ಸುವರ್ಣ ಸಂಭ್ರಮ'ದ ಗದ್ದಲಕೆ
ಎದ್ದು ಹೊರಟಿವೆ ಮೆರವಣಿಗೆ;
ಊರು ತೊರೆದಿಹ ಅಲೆಮಾರಿ ನಾ..
ಕೊಡದಾದೆನು ಹಿರಿದಾದುದೇನನೂ..
ಅಳಿಲು ಕೊಡುಗೆ ಈ ನನ್ನ ಬರವಣಿಗೆ....


               ***********
(ನಾನು ಓದಿದ ಶಾಲೆ ಸ.ಹಿ.ಪ್ರಾ. ಅರಳಸುರಳಿ ಐವತ್ತು ವಸಂತಗಳನ್ನ ಪೂರೈಸಿದೆ. ಕಳೆದ ವರ್ಷ ಜರುಗಿದ 'ಸುವರ್ಣ ಮಹೋತ್ಸವ'ದ ಸ್ಮರಣ ಸಂಚಿಕೆ 'ಅರಳಸುರಳಿ'ಯಲ್ಲಿ ಪ್ರಕಟವಾದ ನನ್ನ ಕವನಗಳಿವು)


ಗುರುವಾರ, ಮೇ 19, 2016

ಆಕರ್ಷಣೆ...

ಬೆಡಗನು ಬೀರುತ ಉರಿಯುವ ದೀಪವೇ
ಏತಕೆ ಕರೆಯುವೆ ಅರಿಯದ ಚಿಟ್ಟೆಯ?
ಸುಡುವುದು ತರವೇ ಸೋತುಬಂದ ಜೀವವ?


ಇತ್ತೆಲ್ಲೋ ಹಾರಾಡುತ ತನ್ನ ಪಾಡಿಗೆ;
ಕುಣಿಸುತಿರುವೆ ಏಕೆ ಹೀಗೆ ನಿನ್ನ ಹಾಡಿಗೆ?
ಎನಿತು ಚಂದ ಇದ್ದರೇನು,
ಎದೆಯ ಸುಡುವ ಜ್ವಾಲೆ ನೀನು!
ತಿಳಿಯದೀ ಕಹಿಯ ಸತ್ಯ
ಆ ಮೋಹಿತ ಬಡಪಾಯಿಗೆ...


ಕತ್ತಲಲ್ಲಿ ಕಿರಣ ತೋರಿ
ಸೆಳೆವೆ ನಿನ್ನ ಸಂಗಕೆ;
ಸೋಲಲೊಂದೆ ಕ್ಷಣವು ಸಾಕು
ಅಲೆಯುತಿರುವ ಭೃಂಗಕೆ!
ಇಳಿವ ತಾಳ್ಮೆಯೇಕೆ ಇಲ್ಲ
ಆಳದ ಅಂತರಾಳಕೆ?
ಉರಿಯೆ ಕೊನೆಗೆ ದೊರೆವ ಫಲವು
ಬರಿಯ ಮೇಲಣ ಮೋಹಕೆ..

('ಮಾನಸ'ದಲ್ಲಿ ಪ್ರಕಟಿತ)

ಗುರುವಾರ, ಮಾರ್ಚ್ 24, 2016

ಕಡಲೂರ ಮನೆಮಗಳು

ಕಡಲೂರ ಮನೆಮಗಳು ಮಲೆನಾಡಿನ ಸೊಸೆಯಾಗಿ
ಕಳೆದಿಲ್ಲ ಇನ್ನೂ ಅರೆವರುಷ;
ಮನೆತನದ ಕಿರಿ ಕೂಸು, ಮಾಗಿಲ್ಲ ಎಳೆ ಮನಸು
ನೆನೆಯುವಳು ತವರನ್ನು ಪ್ರತಿದಿವಸ.

ಕರಿಮೇಘದ ಅಂಚಿಗೆ ಮಿಂಚಿನ ಬೆಳ್ಳಿಯ
ಉಂಗುರ ತೊಡಿಸಿದೆ ಮುಂಗಾರು;
ಜಡಿಮಳೆಯು ಹಿಡಿದು ಕಡಲು ಉಕ್ಕುವ ಕಾಲ
ಹೇಗಿಹುದೋ ಏನೋ ತನ್ನೂರು.

ಮೊದಲ ಮಣ್ಣಿನ ಕಂಪು ಘಮ್ಮೆಂದು ಹೊಮ್ಮಿರಲು
ನಡೆವಾಸೆ ನೆನೆಯುತ್ತ ತುಸುದೂರ;
ದಡವ ಕೊರೆಯುತ ಕಡಲು ಮೊರೆವ ಸದ್ದಿನ ನೆನಪು
ಮೂಡಿರಲು ಮನಸೇಕೋ ಬಲು ಭಾರ.

ಅತ್ತೆಯ ಬಿಗಿ ಮುಖ ಕಂಡರೆ ನಡುಕ
ಮರೆಮಾಚಿ ನೂರೆಂಟು ಬಯಕೆಯನು;
ತುಂಬುಗಣ್ಣಲಿ ತುಳುಕಿ ನುಡಿದ ಮೌನದ ಮಾತ
ಅರಿಯದೆ ಹೋದನೆ ನನ್ನವನು?

ಬೇಸರವ ಒಸರುತಿಹ ಮಳೆಹನಿಯ ಎಣಿಸುತ
ನೋಡುತ್ತಾ ಕುಳಿತಿರಲು ಕಿಟಕಿಯಲಿ;
ಮೆಲ್ಲಗೆ ಬಂದನು ನಲ್ಲ, ಕಣ್ಣ ಮುಚ್ಚಿದ ಬಳಸಿ
ಹೂಕಂಪು ಹರಡಿತು ಕೋಣೆಯಲಿ.

ಹೂಮುಡಿಸಿ ಹೂಮೊಗಕೆ ಮುತ್ತಿಟ್ಟು ಕೇಳಿದನು
ನಡೆಯೋಣವೇ ಮಳೆಯಲ್ಲಿ ತುಸುದೂರ?
ಒಂದೇ ಕೊಡೆಯಡಿಯಲ್ಲಿ ಸಾಗುತಿರೆ ಕೈ-ಕೈ ಹಿಡಿದು
ಕರಗಿಹೋಗಿತ್ತು ಬೇಸರ.

(ಮಂಗಳ 16-3-2016ನೇ ಸಂಚಿಕೆಯಲ್ಲಿ ಪ್ರಕಟವಾದ ಕವನ)

ಮಂಗಳವಾರ, ಫೆಬ್ರವರಿ 23, 2016

ಕೋಮು ಸೌಹಾರ್ದ..

ಯುದ್ಧ ಬರುತಿದೆ, ಯುದ್ಧ ಬರುತಿದೆ
ರಕ್ತ-ಧೋಮಳೆ ಕಾದಿದೆ!
ಎದ್ದು ಹೋರಾಡುವ ಸೌಹಾರ್ದತೆಯಲಿ ನಾವೇ,
ಗದ್ದುಗೆಯಲಿ ಹೊದ್ದು ಮಲಗಿಹರಿಗೆ ಕಾಯದೇ!
ಎಲ್ಲೋ ಗಡಿಯಿಂದ ನುಸುಳಿ ಬರದು;
ನಮ್ಮ ನಡುವಲೆ ಎದೆಯ ಸೀಳುತ,
ಒಡಲ ಬಗೆಯುತ ಸಿಡಿವುದು!
ಮತದ ಮತ್ಸರ ಸುಡುತ ಹರಡಲು
ಬಹಳ ಸಮಯವು ಹಿಡಿಯದು!
ಒಡೆದ ಮನೆಯೇ ಕಿಡಿಯ ಆಗರ,
ಕಡೆಗೆ ನಾಶವು ಖಂಡಿತ!
ನಮ್ಮ ದ್ವೇಷವೆ ಅವರ ಆಯುಧ,
ನಮ್ಮ ದೋಸ್ತಿಯೆ ಅವರ ಅಂತ್ಯ!
ಗೆಲುವ ಸ್ನೇಹದಿ ಸೇರುತ.
ನಮ್ಮ ಹಬ್ಬಕೆ ನೀವೇ ನೆಂಟರು,
ನಿಮ್ಮ ಗುಡಿಗೆ ನಾವೇ ಭಂಟರು,
"ಶಾಂತಿಯುಗ"ವ ಕಟ್ಟುವ;
ವಿಷವ ಬಿತ್ತುವ ನೀಚ ನರಿಗಳ
ಅರಿತು ದೂರಕೆ ಅಟ್ಟುವ!
('ಕರಾವಳಿ ಕರ್ನಾಟಕ'ದ ಅಂತರ್ಜಾಲ ಆವೃತ್ತಿಯಲ್ಲಿ ಪ್ರಕಟವಾದ ನನ್ನ ಕವನ)

ಬುಧವಾರ, ಫೆಬ್ರವರಿ 3, 2016

ಎಂದು ಎಚ್ಚರ?

ಎಂದಿಗೆ ಎಚ್ಚರ ನಿನಗೆ?
ಎಂದಿಗೆ ಅರಿವಿನ ಬೆಳಗು?
ಶತಮಾನ ಕಳೆಯುತಿದೆ
ಮುಗಿದಿಲ್ಲ ಅನ್ಯಾಯದ ಇರುಳು!

ದೇಶಕೆ ಹನಿಸಿದ ಬೆವರೆಷ್ಟು?
ಏಳಿಗೆಯೆಡೆಗಿನ ನಡೆಯೆಷ್ಟು?
ಧರ್ಮಕೆ ಹರಿಸಿದ ನೆತ್ತರೆಷ್ಟು?
ಹರಿಸಿ ಪಡೆದ ಫಲವದೆಷ್ಟು?
ಲೆಕ್ಕ, ತರ್ಕ ಮರೆತ ಮಂದಮತಿಯೇ
ಎಂದಿಗೆ ಎಚ್ಚರ ನಿನಗೆ?

ದಕ್ಷನೊಬ್ಬನ ಸಾವು
ಮರೆತು ಹೋಯಿತು ಮೂರೇ ದಿನಕೆ
ಮಣ್ಣಲಿ ಕರಗಿಹೋದ ಅವನ ದೇಹದಂತೆಯೇ;
ನೊಂದ ಮಾನಿನಿಯ ಕೂಗು
ಮಾಸಿಹೋಯಿತು ನಡು-
-ರಸ್ತೆಯಲಿ ಚೆಲ್ಲಿದ ಅವಳ ರಕ್ತದಂತೆಯೇ!
ಮೈಮರೆತು ಮಲಗಿಹ ಜಡ ಮತಿಯೇ
ಎಂದಿಗೆ ಎಚ್ಚರ ನಿನಗೆ?

ನಕಲಿ ಕಡತಗಳನ್ನು ಪುಟಪುಟದಲ್ಲೂ
ಮೋಸದ ಲೇಖನಿಯಲಿ ಕಥೆಯಾದ,
ಅರ್ಹತೆ, ವಿದ್ಯೆ ಕೌಶಲ್ಯಗಳಿದ್ದೂ
"ಪ್ರಭಾವ"ದ ಕಣ್ಣೆದುರಲಿ ಕಸವಾದ
ದಿವಾನ, ಜವಾನ, ರಕ್ಷಕ, ನಾಯಕರಿಗೆ
ತೆತ್ತು ಸೊರಗಿಹ 'ಮಧ್ಯಮ' ಮತಿಯೇ
ಎಂದಿಗೆ ಎಚ್ಚರ ನಿನಗೆ?

('ರಂಗೋತ್ರಿ'  ಸಂಸ್ಥೆಯವರು ಆಯೋಜಿಸಿದ್ದ 'ಅಖಿಲ ಕರ್ನಾಟಕ ಪ್ರಥಮ ಯುವಕವಿ ಸಮ್ಮೇಳನ'ದಲ್ಲಿ ನಾನು ವಾಚಿಸಿದ ಕವನ)

ಗುರುವಾರ, ಜನವರಿ 14, 2016

ಒಲವಿಗೆ...

ಮೌನಮಾಮರದೊಂಟಿ ರೆಂಬೆಯ
ಉಲಿವ ನೆನಪಿನ ಕೋಗಿಲೆ;
ಕಳೆದ ಮುದಗಳ ಘಮದ ಕೊಳದಲಿ
ಅರಳಿನಿಂತಿಹ ನೈದಿಲೆ.

ಉದಯದಂಚಿನ ಒಲವ ಮಿಂಚಲಿ
ಹೃದಯ ತುಂಬಿದ ಬಿಂಬವೇ;
ಸಸಿಯ ಉಸಿರೊಳಹೊಕ್ಕ, ಹೆಮ್ಮರ-
-ಸೂಸಿ ನಿಂತಿಹ ಗಂಧವೇ.

"ಇಲ್ಲ"ಗಳ ಮುಳ್ಳುಗಳ ನಡುವಲಿ
ಇರುವುದ ಕಲಿಸಲರಳಿದ ಕುಸುಮವೇ;
ಸೊಲ್ಲ ಸವಿಯಲಿ ಕಲ್ಲ ಕರಗಿಸಿ
ಹೃದಯವಾಗಿಸಿದೊಲುಮೆಯೇ.

ದೂರಜನ್ಮದ ಬಂಧ ತೀರದಿಂ
ಅರಸಿ ಬಂದಿಹ ಅಲೆಗಳೆ;
ಕನಸು, ಕಲ್ಪನೆಯಲಿ ಮನವ ಹೆಣೆದು
ಸರಸವಾಡುವ ಬಲೆಗಳೆ.

ತಪನೆಯುಕ್ಕಿ, ವಿರಹ ಬಿಕ್ಕಿ
ಬಾಳು ಕರೆದಿಹ ಚೈತ್ರವೇ;
ಇರುಳಿನಂದದಿ ಬರುವ ಬೆಳಗಿಗೆ
ಮೆರಗು ತರಲೆಂದೇ ಈ ಅಗಲಿಕೆ?
("ಮಂಗಳ"ದಲ್ಲಿ ಪ್ರಕಟವಾದ ನನ್ನ ಕವನ)

ಶನಿವಾರ, ಜನವರಿ 9, 2016

ನನ್ನ ತಂಗಿ..

ಅದೇಕೆ ಹೀಗನ್ನಿಸುತ್ತದೋ ಗೊತ್ತಿಲ್ಲ; ಇಂಥಾದ್ದೊಂದು ತುಡಿತ ಇಂದಿಗೂ ನನ್ನ ಮನದಾಳದಲೆಲ್ಲೋ ಹಾಗೆಯೇ ಇದೆ.
ನನಗೊಬ್ಬಳು ತಂಗಿ ಇರಬೇಕಿತ್ತು!
ಮೊದಮೊದಲು ಈ ವಿಚಿತ್ರ ಬಯಕೆ ಇರೋದು ನನಗೆ ಮಾತ್ರ ಅಂದುಕೊಂಡಿದ್ದೆ. ಆದರೆ ಒಂದಿಬ್ಬರು ಗೆಳೆಯರು ಸಾಕ್ಷಾತ್ ತಮ್ಮ ಬಾಯಿಂದಲೇ ಇದನ್ನು ಹೇಳಿದಾಗ, ಬರಹಗಾರರೊಬ್ಬರ ಬ್ಲಾಗ್ ನಲ್ಲೂ ಇದನ್ನೇ ಓದಿದಾಗ ಈ ವಿಚಿತ್ರ ಭಾವನೆಗೊಳಗಾದವನು ನಾನು ಮಾತ್ರ ಅಲ್ಲ ಅಂತ ಸಮಾಧಾನವಾಯಿತು, ಹಾಗೆಯೇ ಆಶ್ಚರ್ಯವೂ ಆಯಿತು.
ನಿಜದಲ್ಲಿ ನನಗೆ ತಂಗಿಯೊಬ್ಬಳಿದ್ದಿದ್ದರೆ ಹೀಗೆಲ್ಲಾ ಅನ್ನಿಸುತ್ತಿತ್ತೋ ಇಲ್ವೋ ಗೊತ್ತಿಲ್ಲ; ಈ ತಂಗಿಯದು ತುಂಬಾ ವಿಶೇಷವಾದ ಬಂಧ. ಅವಳು ಮಮತೆ ತೋರುವ ತಾಯಿಯಾಗಿರುತ್ತಾಳೆ, ತುಂಟಾಟವಾಡುವ ಮಗುವಾಗಿರುತ್ತಾಳೆ, ಭಾವನೆಗಳನ್ನ ಹಂಚಿಕೊಳ್ಳಬಲ್ಲ ಗೆಳತಿಯೂ ಆಗಿರುತ್ತಾಳೆ. 
ಮದುವೆಯಾಗಿ ಪಟ್ಟಣ ಸೇರಿರುವ ಹೆಣ್ಣುಮಗಳು ಖಾಯಿಲೆಯಿಂದ ಬಳಲುತ್ತಿರುವ  ಅಣ್ಣನನ್ನ ತನ್ನ ಮನೆಯಲ್ಲಿಟ್ಟುಕೊಂಡು ಸಾಕ್ಷಾತ್ ತಾಯಿಯಾಗಿ ಸಲಹುತ್ತಿರವುದನ್ನ ನನ್ನ ಕುಟುಂಬದಲ್ಲೇ ಕಂಡಿದ್ದೇನೆ; ಅಷ್ಟೇ ಯಾಕೆ, ಸಹೋದರರ ಹೆಸರೆತ್ತಿದೊಡನೆ  ಹೊಳೆಯುವ ಮಮತೆಯ ಮಿಂಚೊಂದನ್ನ ನನ್ನ ಅಮ್ಮನ ಕಣ್ಣಲ್ಲಿ ಗಮನಿಸಿದ್ದೇನೆ. ಬಾಳು ಹಸನಾಗದೇಹೋದ ಅಣ್ಣನನ್ನು ನೆನೆದು ಅವಳು ಕಣ್ಣೀರಿಟ್ಟಿದ್ದನ್ನ ನೋಡಿದ್ದೇನೆ. ತವರನ್ನ ಬಿಟ್ಟುಬಂದು ಇಪ್ಪತ್ತೈದು ಸಂವತ್ಸರವೇ ಕಳೆದಿದ್ದರೂ ಇಂದಿಗೂ ಎಷ್ಟೋಸಲ ನನ್ನನ್ನ ಕರೆಯುವಾಗ ಬಾಯ್ತಪ್ಪಿ ಅವಳು ಕೂಗುವುದು ತನ್ನ ತಮ್ಮನ ಹೆಸರನ್ನ!
ಹೌದು; ನನಗೂ ಒಬ್ಬಳು ತಂಗಿಯಿರಬೇಕಿತ್ತು. ಅಪ್ಪ, ಅಮ್ಮನೂ ಕೇಳದೇ ಮುಟ್ಟದ ನನ್ನ ಪರ್ಸಿನಿಂದ ಹೇಳದೇ ಕೇಳದೇ ಹಣ ಎತ್ತಿಕೊಂಡು ಹೋಗುವ ತುಂಟ ತಂಗಿ, ನಾನು ಜಡೆಯೆಳೆದು, ರೇಗಿಸಿ, ಕೀಟಲೆ ಕೊಡುವ ಮುದ್ದು ತಂಗಿ, ತಾನು ಬಯಸಿದ ಡ್ರೆಸ್ ಕೊಡಿಸೆಂದು ದೊಂಬಾಲುಬಿದ್ದು ಹಠಮಾಡುವ ಮಗುವಿನ ಮನಸ್ಸಿನ ತಂಗಿ, ನನ್ನ ಸವಕಲು ಭಾವನೆಗಳಿಗೆ ಸಮಾಧಾನ ಹೇಳುವ ಆತ್ಮೀಯ ತಂಗಿ, ನನ್ನೆದೆಗೊರಗಿ ನಿಮಿಷಗಟ್ಟಲೆ ಕಣ್ಣೀರಿಟ್ಟು ಗಂಡನ ಮನೆಗೆ ಹೊರಟುನಿಂತಿರುವ  ಪ್ರೀತಿಯ ತಂಗಿ...
ಕೆಲವೊಮ್ಮೆ ಇದೆಲ್ಲಾ ಹುಚ್ಚು ಭಾವನೆಗಳ ಪರಾಕಾಷ್ಠೆ ಅನ್ನಿಸುತ್ತದೆ. ಆದರೆ ಇಂತಹ ಹುಚ್ಚ ನಾನೊಬ್ಬನೇ ಅಲ್ಲ ಎನ್ನುವ ಮೊಂಡು ಧೈರ್ಯದಮೇಲೆ ಇದನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳುವ ಸಾಹಸ ಮಾಡುತ್ತಿದ್ದೇನೆ. ನಿಮ್ಮ ಅಭಿಪ್ರಾಯ ಹೇಳ್ತೀರಲ್ವ?
ನನ್ನ ತಂಗಿ
ಎಳೆಯ ವಯಸು, ನಲಿವ ಮನಸು
ಕಣ್ಣ ತುಂಬ ಕನಸಿದೆ;
ಮುದ್ದು ಮುಖದ ಮುಗ್ಧ ಚೆಲುವು
ಅಮ್ಮನಂತೆಯೇ ಅನಿಸಿದೆ!
ಮನೆಯೊಳಗೆ-ಹೊರಗೆ ಕುಣಿವ ನಡೆಗೆ
ಕಾಲಗೆಜ್ಜೆ ಝಣಝಣ;
ಅವಳು ಇರದ ಒಂದು ದಿನವೂ
ಮನೆಯು ಏಕೋ ಭಣಭಣ!
ಅಡುಗೆ ಮನೆಯ ಸೇರಿ ಅಮ್ಮನ
ಕಾಡಿ ಜಗಳವಾಡಲು;
ಅಮ್ಮ ಮುನಿಯೆ ಓಡಿ ಬಂದು
ನನ್ನ ಮಡಿಲಲವಿತಳು!
ಹಬ್ಬ-ಪೂಜೆ ಬಂದರಂತೂ
ಮೈಯ್ಯ ಮರೆತು ನಲಿವಳು;
ಹಸಿರು ಲಂಗ, ಝುಮುಕಿ ಧರಿಸಿ,
ಬಿಂದು ಇಟ್ಟು, ಬಳೆಯ ತೊಟ್ಟು,
ತಾರೆಯಂತೆ ಹೊಳೆವಳು!
ಒಂದು ಕ್ಷಣದ ಕೋಪದಲ್ಲಿ
ಮುನಿದು ಒರಟನಾಗುವೆ;
ಅವಳ ಕಣ್ಣ ಹನಿಗೆ ಸೋತು
ಮುತ್ತನಿಟ್ಟು ರಮಿಸುವೆ.
ಜಾತ್ರೆಯಲ್ಲಿ ಕೈಯ್ಯ ಹಿಡಿದು
ನಡೆವ ಮುದ್ದು ಮಗುವು ನೀ;
ನನ್ನ ಮನವು ನೊಂದ ಕ್ಷಣದಿ
ನೋವ ಮರೆಸೊ ನಗುವು ನೀ..
('ಪಂಜು' ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಕವನ)

ಬುಧವಾರ, ಡಿಸೆಂಬರ್ 30, 2015

ನನ್ನೊಳಗಿನ ನಾನು..


ನನ್ನೊಳಗೊಬ್ಬ ಅವನಿದ್ದಾನೆ;
ಮೊಟ್ಟಮೊದಲ ಕೀಳರಿಮೆಯಲ್ಲಿ
ಹುಟ್ಟಿಬಂದವನು;
ನಕ್ಕು ಎಲ್ಲರೊಡನೆ ಬೆರೆಯಬಲ್ಲವನು.
ದುಃಖ ಕಂಡರೆ ಅವನ ಕಂಗಳಲಿ
ಒರೆಸಲು ಹಲವು ಕೈಗಳಿವೆ.
ನನ್ನಂತೆ ಒಂಟಿಯಲ್ಲ ಅವನು.

ನನ್ನಂತೆ ಹೆತ್ತವರ ಪಾಲಿಗವನು
ಹೆಗ್ಗಣವಲ್ಲ;
ದುರ್ಗುಣಗಳಿಲ್ಲ ಅನ್ನುವುದೊಂದೇ
ಅವನ ಸದ್ಗುಣವಲ್ಲ.

ಭಾವನೆಗಳ ಬಚ್ಚಿಟ್ಟ
ಸೆರೆಮನೆಯಲ್ಲ ಅವನ ಹೃದಯ.
ಸ್ವಚ್ಛಂದ ಮಾತುಗಳ ನವಿರಾದ ಕುಂಚದಲಿ
ಮಳೆಬಿಲ್ಲ ಮೂಡಿಸುವ ಮಾತುಗಾರ;
ಮೋಡಿಗಳ ಶರ ಹೂಡಿ ಮನದನ್ನೆಯ ಮನಕೆ
ಅವಳ ಒಲುಮೆಯ ಕದ್ದ ಜಾದೂಗಾರ.

ನನ್ನೆಲ್ಲ 'ಇಲ್ಲ'ಗಳ
ಹುಡುಹುಡುಕಿ ತೋರುವನು,
ಪ್ರತಿಯೊಂದು ಸೋಲಲ್ಲೂ
ಕುಟುಕುಟುಕಿ ಕಾಡುವನು,
'ಹೀಗಿರಬೇಕಿತ್ತು ನೀನು' ಎಂಬುದವನ ಲೇವಡಿ;
ನಾನೆಂಬ ಮಾರ್ಜಾಲದೊಳಮನದ ಹುಲಿಯವನು,
ಹತಾಶೆ ಫಲಿತ ಕಲ್ಪನಾ ನಾಯಕ
'ನನ್ನೊಳಗಿನ ನಾನು'

-ವಿನಾಯಕ ಭಟ್.

ಬುಧವಾರ, ಡಿಸೆಂಬರ್ 16, 2015

ನೆನಪು ಮರಳಿ..

ನೆನಪು ಮರಳಿ ಸುಳಿಯುತಿದೆ,
ಸೋತ ಮನವ ಕೆಣಕುತಿದೆ,
ಸತ್ತ ಬಳ್ಳಿಯಲ್ಲಿ ಅರಳಿ
ಗತದ ಘಮವ ಸೂಸುತಿದೆ.

ಆಸರೆಗೆ ಅಂಗಲಾಚಿ,
ಹನಿ ಪ್ರೇಮಕೆ ಹೃದಯ ಚಾಚಿ,
ಕಾದು ಸೋತ ಭಾವದುರಿಯ
ಹೊತ್ತು ತರುತಿದೆ
ಮತ್ತೆ ಬರುತಿದೆ.

ಕಳೆದುದರ ಹೊಳಪನರಸಿ,
ಉಳಿದುದರ ಬೆಳಕ ಮರೆಸಿ,
ಸಿಗದ ಮೋಹ ತೀರದೆಡೆಗೆ
ಮನವ ನಡೆಸಿದೆ
ಅಲೆಸಿ ದಣಿಸಿದೆ.

ಯಾರ ಹೃದಯ ಯಾರ ನೆಲೆಯೋ,
ಯಾರ ಸೆಳೆವುದ್ಯಾವ ಸೆಲೆಯೋ,
ಬಯಕೆ ಬೂದಿಯಡಿಯ ಕಾವು
ಹೊತ್ತಿ ಉರಿದಿದೆ,
ಮತ್ತೆ ಸುಡುತಿದೆ.

("ನಿಮ್ಮೆಲ್ಲರ ಮಾನಸ"ದಲ್ಲಿ ಪ್ರಕಟವಾದ ನನ್ನ ಕವನ)

ಭಾನುವಾರ, ಡಿಸೆಂಬರ್ 6, 2015

ಒಲುಮೆದೀಪ

ಮುಂಗುರುಳ ಸುರುಳಿಯಲಿ ಸುಳಿದಿರುವ ತಂಗಾಳಿ
ನನ್ನೆಡೆಗೆ ಬೀಸಿರಲು ಹಿತವಾಗಿದೆ;
ಹೂಗಳನೆ ನಾಚಿಸುವ ಈ ಕೇಷದಾ ಘಮಕೆ
ಭಾವಗಳ ಮೆರವಣಿಗೆ ಅತಿಯಾಗಿದೆ.

ಕೆನ್ನೆಯ ಗಗನದಲಿ ನಾಚಿಕೆಯ ಕೆಂಬಣ್ಣ
ತುಂಬುವ ಸೂರ್ಯನು ನಾನಾಗೊ ಹಂಬಲ;
ನೆನ್ನೆಗಳ ಪುಟಗಳಲಿ ನಾ ಅರಸಿ ಸೋತಿದ್ದ
ಒಲವಿನ ಆಸರೆಯು ನೀನೆಂದು ನಂಬಲ?

ಬಂದ ದಾರಿಯಲೆಲ್ಲ ಬರಿ ಒಂಟಿ ಹೆಜ್ಜೆಗಳೇ,
ಹೊಸದಾಗಿದೆ ಈ ಗೆಜ್ಜೆ ಕಾಲ್ಗಳ ಸಹಯಾನ;
ಲಜ್ಜೆ ತುಂಬಿದ ದನಿಯು ಮೆಲ್ಲ ಕರೆದಿರಲು,
ನನ್ನ ಹೆಸರಿಗೂ ಬಂತು ಎಂತಹ ಹೊಸತನ!

ದಿವ್ಯವಾಗಲಿದೆ ನವ್ಯ ನಾಳೆಯ ಪಯಣ
ಬೆಸೆದ ಕರಗಳೆ ಇದಕೆ ದಿಟ್ಟ ಸಾಕ್ಷಿ!
ಭವ್ಯ ಬಾಳಿನ ಕದವ ಜೊತೆಯಾಗಿ ತೆರೆಯೋಣ
ಅಡಿಯಿಡುವ ಹೊಸಿಲಲ್ಲಿ ಒಲುಮೆ ದೀಪವಿರಿಸಿ.

('ನಿಮ್ಮೆಲ್ಲರ ಮಾನಸ"ದಲ್ಲಿ ಪ್ರಕಟವಾದ ನನ್ನ ಕವನ)

ಬುಧವಾರ, ಡಿಸೆಂಬರ್ 2, 2015

ಮಡದಿಯ ನೆನಪು...

ಕಡಲಿನ ಮಡಿಲಿಗೆ ರವಿ ಕಾತರಿಸಲು,
ಶಶಿಯ ಬರುವನು ನೆನೆದು ಬಾನು ಕೆಂಪಾಗಲು,
ದೀಪವಿರದ ಹೊಸಿಲದಾಟಿ ಇರುಳು ಒಳಗಡಿಯಿಡಲು,
ಮೂಡಿಬರುವುದು ಮರಳಿ ಅವಳ ನೆನಪು.

ಸಂತೆ ಸಾಲಿನ ಬದಿಯ ತೆರೆದ ಬುಟ್ಟಿಗಳಲಿ
ಕಟ್ಟಿ ಇರಿಸಿಹ ಮಲ್ಲೆ ಘಮ್ಮೆಂದು ನಗಲು,
ದೇವಳದಿ ಅರ್ಚಕರು ಪ್ರಸಾದವೆಂದು
ಬಿಡಿ ದಳಗಳ ಬದಲು ಇಡಿ ಹೂವನೆ ಕೊಡಲು,
ಕಾಡಿ ಕೊಲುವುದು ನೀಳ ಜಡೆಯವಳ ನೆನಪು.

ಘಲ್ಲೆನುವ ಗೆಜ್ಜೆದನಿ ಎಲ್ಲಿಂದಲೋ ಕೇಳಿ
ಜೊತೆನಡೆದ ಹೆಜ್ಜೆಗಳೆ ಕಣ್ಮುಂದೆ ಬರಲು,
ಜರತಾರಿಯಂಚಿನ ಹಸಿರು ಸೀರೆಯನುಟ್ಟ
ಗುಡಿಯ ದೇವಿಯ ಪ್ರತಿಮೆ ಮನತುಂಬಿ ನಿಲಲು,
ಕಣ್ಣಂಚಿನಲಿ ಹನಿ ನನ್ನವಳ ನೆನಪು.

ಹುಸಿಮುನಿಸ ತೋರುತಲಿ ನಮ್ಮೊಲವಿನ ಹಸುಳೆ
ಅರೆತೆರೆದ ಕದದ ಮರೆಯಿಂದ ಇಣುಕಲು,
ಆ ಮೊಗದ ಆ ಬಗೆಯು ನಿನ್ನಂತೆಯೇ ಅನಿಸಿ
ಹುಟ್ಟಿ ಬರುತಿದೆ ಮತ್ತೆ ಸಾಲುಸಾಲಾಗಿ
ಅಗಲಿದ ಮಡದಿಯೆ ನಿನ್ನ ಅಮರನೆನಪು.

-ವಿನಾಯಕ ಭಟ್

("3K:ಕನ್ನಡ ಕವಿತೆ ಕಥನ" ತಂಡದವರು ಆಯೋಜಿಸಿದ್ದ "ರಾಜ್ಯೋತ್ಸವ ಕವನ ಸ್ಪರ್ಧೆ ೨೦೧೫" ರಲ್ಲಿ ಮೂರನೇ ಬಹುಮಾನ ಪಡೆದ ನನ್ನ ಕವನ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...