ಗುರುವಾರ, ಜನವರಿ 5, 2017

ಜೀವಜಲ

ಬರಡು ಧೂಳಿನ ಮಣ್ಣ ಕಣ್ಣಿಗೆ
ಹಸಿರು ದೃಷ್ಟಿಯ ಚಿಮುಕಿಸಿ;
ಕಲ್ಲ ನರದಲಿ ನೆತ್ತರುಕ್ಕಿಸಿ
ಜೀವ ಸಂತತಿ ಅರಳಿಸಿ.

ಸಪ್ತ ಗ್ರಹಗಳಲೆಲ್ಲೂ ಕಾಣದ
ನಾಗರೀಕತೆ ಚಿಗುರನು,
ತೀರ ತೊಟ್ಟಿಲೊಳಿಟ್ಟು ತೂಗಿದ
ಉದಕ ಮಾತೆಯ ಮಡಿಲಿದು.

ಕಡಲೊ ನದಿಯೋ, ಕೆರೆಯೋ ಝರಿಯೋ
ಸಿರಿಯು ಬತ್ತದ ಆಳವೋ;
ಅಗಾಧ ಸುಳಿಗಳ, ಪ್ರಚಂಡ ಅಲೆಗಳ
ನುಂಗಿ ನಿಂತಿಹ ಶಾಂತಿಯೋ.

ಜೀವ ವಾಹಿನಿ ಹರಿದು ಸಾಗುತ
ಹಸಿವನೆಲ್ಲವ ಕಿತ್ತಳು;
ಹರಿವು ತಾಕದ ನೆಲದ ತಾಪಕೂ
ಮಳೆಯ ಹನಿಗಳ ಸುರಿದಳು.

ವಿಷವ ಹರಿಸುವ ಕೈಯ್ಯ ದಾಹಕೂ
ಜೀವಜಲವನೆ ಎರೆವಳು;
ಯುಗವೆ ಸವೆದರೂ ಮತ್ತೆ ಹುಟ್ಟುತ
ಜಗದ ಉಳಿವಿಗೆ ದುಡಿವಳು.

('3ಕೆ: ಕನ್ನಡ ಕವಿತೆ ಕಥನ' ದ ರಾಜ್ಯೋತ್ಸವ ಕವನ ಸ್ಪರ್ಧೆ 2016ರಲ್ಲಿ ಸಮಾಧಾನಕರ ಬಹುಮಾನ ಪಡೆದ ನನ್ನ ಕವನ. ಕವನ ಸ್ಪರ್ಧೆಯ ವಿಷಯ 'ಜಲಸಂಸ್ಕೃತಿ')

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...