ಗುರುವಾರ, ಜನವರಿ 24, 2019

ಗೋಡೆ

"ಈಗ್ಲೇ ಕಟ್ತೀನಿ ಗೋಡೇನ. ಅದ್ಹೆಂಗೆ ನಮ್ಮನೆ ಅಂಗ್ಳಕ್ಕೆ ಕಾಲಿಡ್ತೀರೋ ನಾನೂ ನೋಡ್ತೀನಿ!"

ವಿಶು ಬೆಚ್ಚಿ ಎಚ್ಚರಾದ. ಕೋಣೆಯ ತುಂಬಾ ನೂರಾರು ಕರಡಿಗಳು ತುಂಬಿಕೊಂಡಂತಹಾ ಕತ್ತಲು. ಪಕ್ಕದಲ್ಲಿ ಮಲಗಿರುವ ಅಮ್ಮನ ಕುತ್ತಿಗೆಗಾಗಿ ತಡಕಾಡಿದ. ಸಿಗಲಿಲ್ಲ. ಇಷ್ಟು ಬೇಗ ಬೆಳಗಾಗಿಹೋಯ್ತಾ? ಆದರೆ ದಿನಾ ಬೆಳಗ್ಗೆ ಬರುವಂತೆ ಕಿಟಕಿಯಿಂದ ಬೆಳಕೇಕೆ ಬರ್ತಿಲ್ಲ? ಯೋಚಿಸುತ್ತಿರುವಾಗಲೇ  ಕೇಳಿತು, ಮತ್ತೊಂದು ಧ್ವನಿ:

"ನೀನೂ ಅಷ್ಟೇ. ಅದ್ಹೇಗೆ ನಮ್ಮ ಅಂಗಳದಲ್ಲಿ ಕಾಲಿಡುತ್ತೀಯೋ ನಾನೂ ನೋಡ್ತೀನಿ!"
ಇದು ಅಪ್ಪನ ಧ್ವನಿ. ಅಂಗಳದಿಂದ ಕೇಳುತ್ತಿದೆ.... "ಅಮ್ಮಾ..." ಮತ್ತೆ ತಡಕಾಡಿದ. ಯಾವ ಉತ್ತರವೂ ಬರಲಿಲ್ಲ. ಗಾಬರಿಯಾಯಿತು. ಗವ್ವೆನ್ನುವ ಕತ್ತಲನ್ನೇ ದಿಟ್ಟಿಸಿದ. ಗಾಢಾಂಧಕಾರದೊಳಗೆ ಯಾವ್ಯಾವುದೋ ಆಕೃತಿಗಳು ನಾಟ್ಯವಾಡುತ್ತಿರುವಂತೆ ತೋರಿತು. "ಅಮ್ಮಾssssss" ಎಂದು ಕೂಗುತ್ತಾ ನೇರ ಅಂಗಳಕ್ಕೇ ಓಡಿಬಂದ. 

ಈಚೆ ಅಂಗಳದಲ್ಲಿ ಅಪ್ಪ, ಆಚೆ ಅಂಗಳದಲ್ಲಿ ದೊಡ್ಡಪ್ಪ. ಇಬ್ಬರೂ ಒಬ್ಬರ ಕೈಗೊಬ್ಬರು ಸಿಗದಷ್ಟು ದೂರದಲ್ಲಿ ನಿಂತಿದ್ದರು. ಅಮ್ಮ, ದೊಡ್ಡಮ್ಮ, ಕೆಲಸದಾಳುಗಳಾದ ಸೀನು, ಮಾದು, ಬಾಬು ಎಲ್ಲರೂ ಇದ್ದರು.

"ಅದು ಸರ್ಕಾರೀ ಜಾಗ. ನಿಮ್ಮಪ್ಪನ ಸ್ವತ್ತೇನೂ ಅಲ್ಲ!"
ದೊಡ್ಡಪ್ಪ ಘೀಳಿಟ್ಟರು.

"ಅದೂ ಅಷ್ಟೇ. ಸರ್ಕಾರೀ ಜಾಗಾನೇ. ನಿಮ್ಮಪ್ಪ ಮಾಡಿಟ್ಟ ಅಸ್ತಿಯೇನೂ ಅಲ್ಲ!"
ಅಪ್ಪ ಘರ್ಜಿಸಿದ.

ಇಬ್ಬರ ಅಪ್ಪನೂ ಒಬ್ಬರೇ ಅಲ್ವಾ? ವಿಶೂಗೆ ಏನೂ ಅರ್ಥವಾಗಲಿಲ್ಲ. ಸುತ್ತ ಕತ್ತಲು ಹಾಗೇ ಇದೆ. ಇನ್ನೂ ಬೆಳಗಾಗಿಲ್ಲ. ಯಾಕೆ ಇಬ್ಬರೂ ಜಗಳಾಡುತ್ತಿರಬಹುದು?

"ಬಾಬೂ, ತಗೊಂಬಾ ಇಟ್ಟಿಗೆ, ಸಿಮೆಂಟು; ಕಟ್ಟು ಗೋಡೇನ. ಇನ್ನರ್ಧ ಗಂಟೇಲಿ ಮುಗೀಬೇಕು. ಆಕಡೆ ಮನೆಯ ಒಂದು ಕಸಾನೂ ನಮ್ಮಂಗಳಕ್ಕೆ ಬರಬಾರ್ದು!" ದೊಡ್ಡಪ್ಪ ದೊಡ್ಡದನಿಯಲ್ಲಿ ಆದೇಶವಿತ್ತರು. ಬಾಬು, ಸೀನು, ಮಾದು ಎಲ್ಲರೂ ದಡಬಡಾಯಿಸಿ ಓಡಿದರು. ಮಾದು ಇಟ್ಟಿಗೆ ತಂದ. ಸೀನು ಸಿಮೆಂಟು ಕಲಸಿದ. ಬಾಬು ಗೋಡೆಕಟ್ಟತೊಡಗಿದ. ವಿಶು ಕುತೂಹಲದಿಂದ ನೋಡುತ್ತಾ ನಿಂತ. ಮೊದಲು ನೆಲಮಟ್ಟದ ಸಾಲಾಗಿ, ಈಗಷ್ಟೇ ಭೂಮಿಯಿಂದೆದ್ದುಬಂದ ಚಿಗುರಿನಂತೆ ಮೂಡಿಬಂತು; ನೋಡನೋಡುತ್ತಿದ್ದಂತೇ ಎದೆಮಟ್ಟಕ್ಕೆ ಬೆಳೆದು, ಕೊನೆಗೆ ಆಚೆಗಿರುವುದೇನನ್ನೂ ನೋಡಲಾಗದಂತೆ ರಾತ್ರೋರಾತ್ರಿ ಬೆಳೆದುನಿಂತಿತು, ಗೋಡೆ.

                       ******************

"ಚಲ ಚಯ್ಯ ಚಯ್ಯ ಚಯ್ಯ......"

ಗೋಡೆಯಾಚೆಗಿನ ದೊಡ್ಡಪ್ಪನ ಮನೆಯಂಗಳದಲ್ಲಿ ಹಾಡುತ್ತಿತ್ತು... ಅಭಿಯ ಹಾಡುವ ಫೋನು! ವಿಶು ತನ್ನ ಕೆಂಪು ಡಯಲ್ ಫೋನಿನ ಗುಂಡಿಗಳನ್ನು ಒಂದೊಂದಾಗಿ ಒತ್ತಿದ. ಊಹೂಂ, ಯಾವುದೂ ಹಾಡಲಿಲ್ಲ. 
ಸೀದಾ ಅಡಿಗೆಮನೆಗೆ ಓಡಿದ. 

"ಅವರ ತೋಟಕ್ಕೆ ಹೋಗುವಾಗ ನಿಮ್ಮ ಅಂಗಳದಿಂದಾನೇ ಹೋಗಬೇಕು. ನೀವು ಪೇಟೆಗೆ ಹೋಗೋದಾದ್ರೆ ಅವರ ಅಂಗಳದಲ್ಲೇ ಹಾಯಬೇಕು. ಜರೂರತ್ತು ಇಬ್ಬರಿಗೂ ಇದೆ. ಸ್ವಲ್ಪ ಹೊಂದಿಕೊಂಡು ಹೋಗ್ಬಾರ್ದಾ?"
ಮೆತ್ತಗಿನ ದನಿಯಲ್ಲಿ ಕೆಲಸದಾಳು ರತ್ನ ಅಮ್ಮನಿಗೆ ಹೇಳುತ್ತಿದ್ದಳು. 
"ಹೌದು ಮಾರಾಯ್ತಿ. ಈಗ ನೋಡು, ಎರೆಡೂ ಮನೆಯವ್ರೂ ಇರೋ ನೇರ ದಾರೀನ ಬಿಟ್ಟು ಅಲ್ಲೆಲ್ಲೋ ದಿಬ್ಬ ಹತ್ತಿ ಹಾರ್ಬೇಕಾಗಿದೆ. ಸೊಪ್ಪು, ಹೊರೆ, ದರಗು ತರೋಕೆ, ಹಿಂಡಿ ಮೂಟೆ ಹೊತ್ತು ಬರೋಕೆ ಎಲ್ಲದಕ್ಕೂ ತೊಂದರೇನೇ. ಮನೆಯ ಗಂಡಸರಿಗೇ ತಾಳ್ಮೆಯಿಂದ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳೋ ಸಹನೆ ಇಲ್ಲಾಂದ್ರೆ ನಾವ್ತಾನೇ ಏನು ಮಾಡೋಣ ಹೇಳು?"
ಅಮ್ಮ ಮತ್ತಷ್ಟು ತಗ್ಗಿದ ದನಿಯಲ್ಲಿ ಉತ್ತರಿಸಿದಳು.

"ಅಭಿಯ ಫೋನಿನಂತೆ ನನ್ನ ಫೋನು ಯಾಕೆ ಹಾಡೋದಿಲ್ಲ ಅಮ್ಮಾ?"
ಅಜ್ಜಿಗೆ ಅರಿವೆಯ ಚಿಂತೆಯಾದರೆ ವಿಶಾಲನಿಗೆ ತನ್ನ ಫೋನಿನ ಚಿಂತೆ.

"ಇದರಲ್ಲಿ ಸ್ಪೀಕರ್ ಇಲ್ಲ"

"ಹಾಗಾದ್ರೆ ನಂಗೂ ಸ್ಪೀಕರ್ ಇರೋ ಫೋನು ಬೇಕು"

"ತಲೆ ತಿನ್ಬೇಡ ವಿಶು. ಮೊನ್ನೆತಾನೇ ಜಾತ್ರೇಲಿ ಹಠಮಾಡಿ ಆ ಕೆಂಪು ಫೋನು ತಗೊಂಡೆ. ಅದು ಇಷ್ಟು ಬೇಗ ಸಾಕಾಯ್ತಾ? ಅದ್ರಲ್ಲೇ ಆಡ್ಕೋ ಹೋಗು."

ಪೆಚ್ಚುಮೋರೆ ಹಾಕಿಕೊಂಡು ಅಂಗಳಕ್ಕೆ ಬಂದ. ಮುಂದಿನಸಲ ಜಾತ್ರೆಗೆ ಹಾಡುವ ಫೋನನ್ನೇ ತಗೊಳ್ತೀನಿ, ಹಸಿರು ಬಣ್ಣದ್ದು! 
ಹಾಗಂದುಕೊಂಡು ಅಲ್ಲಿ ಅನಾಥವಾಗಿ ಬಿದ್ದುಕೊಂಡಿದ್ದ ಕೆಂಪು ಡಯಲ್ ಫೋನನ್ನು ಎತ್ತಿಕೊಂಡ. ಒಂದೊಂದೇ ಬಟನ್ ಒತ್ತುತ್ತಾ ತಾನೇ ಹಾಡತೊಡಗಿದ:
"ಚಯ್ಯೋ... ಚಯ್ಯೋ.. ಚಯ್ಯೋ...
ಚಲ ಚಯ್ಯೋ ಚಯ್ಯೋ ಚಯ್ಯೋ....."

                    **************

ಅಪ್ಪ-ದೊಡ್ಡಪ್ಪನ ಜಗಳ ನಿಂತಿತ್ತು, ಜೊತೆಗೆ ಮಾತುಕತೆಯೂ. ಅಭಿಯೂ ಮೊದಲಿನಂತೆ ತನ್ನ ಜೊತೆ ಆಡಲು ಬರುತ್ತಿರಲಿಲ್ಲ. ಮೊನ್ನೆ "ರಾತ್ರೆ ಚಿಕ್ಕಮ್ಮ ಬರ್ತಾರೆ. ಹಾಡುವ ಫೋನು ತರ್ತಾರೆ. ನಾಳೆ ನಿನ್ನ ಕೆಂಪು ಫೋನೂ ತಗೊಂಬಾ, ಒಟ್ಟಿಗೇ ಆಡೋಣ" ಎಂದಿದ್ದ. ಅಷ್ಟರಲ್ಲಿ ಹೀಗಾಯ್ತು. ಅದರೂ ನಿನ್ನೆ ಮಧ್ಯಾಹ್ನ ಎಲ್ಲರೂ ಮಲಗಿದ್ದಾಗ ಯಾರಿಗೂ ಗೊತ್ತಾಗದಂತೆ ನಮ್ಮನೆ ಅಂಗಳಕ್ಕೆ ಬಂದಿದ್ದ, ತನ್ನ ಹಾಡುವ ಫೋನಿನ ಜೊತೆ! ತಾನೂ ಕೆಂಪು ಫೋನು ಹಿಡಿದುಕೊಂಡು ಓಡಿದ್ದೆ. ಅವನಿಗೆ ತನ್ನ ಫೋನಿಗಿಂತಲೂ ಈ ಡಯಲ್ ಫೋನಿನಮೇಲೇ ಆಸೆ ಜಾಸ್ತಿ. ಇಬ್ಬರೂ ಅದಲುಬದಲಾಯಿಸಿಕೊಂಡು ಆಡತೊಡಗಿದ್ದೆವು. ಅಂಗೈಯ್ಯಲ್ಲಿ ಹಿಡಿಯಬಹುದಾದಷ್ಟು ಪುಟ್ಟ ಗಾತ್ರ, ಹಸಿರು ಬಣ್ಣ, ತುದಿಯಲ್ಲೊಂದು ಎಲ್ಲೀಡಿ ಬಲ್ಪು... ಎಷ್ಟು ಚೆಂದ ಇದೆ ಅವನ ಫೋನು! ಪ್ರತೀ ಬಟನ್ ಕೂಡಾ ಹೊಳೆಯತ್ತದೆ! ಮೆತ್ತಗೆ ಕೈಯ್ಯಲ್ಲಿ ಹಿಡಿದುಕೊಂಡು ಇನ್ನೇನು ಅದರ ಬಟನ್ ಒತ್ತಬೇಕು, ಅಷ್ಟರಲ್ಲಿ ಫಾಲ್ಗುಣಿ ದೊಡ್ಮಮ್ಮ ಬಂದುಬಿಟ್ರು!

"ಕತ್ತೆ! ಎಷ್ಟುಸಲ ಹೇಳಿಲ್ಲ ಇಲ್ಲಿಗೆ ಬರ್ಬೇಡ ಅಂತ? ಕೆಟ್ಟಬುದ್ದಿ ಮಾಡ್ತೀಯಾ?" 
ಬೈದಿದ್ದು ತನಾಗಾ? ಅಭಿಗಾ? ಗೊತ್ತಾಗುವ ಮೊದಲೇ ಫೋನನ್ನು ತನ್ನಿಂದ ಕಸಿದುಕೊಂಡು, ಅಭಿಯ ಕಿವಿ ಹಿಡಿದು ದರದರಾಂತ ಎಳೆದುಕೊಂಡು ಹೋದರು. ಆಮೇಲೆ ತುಂಬಾ ಹೊತ್ತು ಅಭಿ ಅಳೋದು ಕೇಳ್ತಾನೇ ಇತ್ತು. ಮತ್ತೆ ಅವನು ಈ ಕಡೆ ಬರಲೇ ಇಲ್ಲ.

                         ****************

ಎತ್ತರದ ಗೋಡೆಯಾಚೆಗಿನ ದೊಡ್ಡಪ್ಪನ ಮನೆ ಮಾಯಾಬಜಾರಿನಂತೆ ಅನಿಸುತ್ತಿತ್ತು ವಿಶಾಲನಿಗೆ. ಅಲ್ಲಿ ಏನೆಲ್ಲಾ ಇದೆ! ಗಿರ್ರನೆ ತಿರುಗಿ ನಿಮಿಷಗಳಲ್ಲಿ ಬಟ್ಟೆ ತೊಳೆದುಕೊಡುವ ಮೆಶೀನ್ ಇದೆ. ತಣ್ಣಗೆ ಐಸ್ ಕ್ರೀಮ್ ಮಾಡಿಕೊಡುವ ಫ್ರಿಜ್ ಇದೆ. ತಮ್ಮನೆಯ ಟೀವಿಯಂತೆ ಕೇವಲ ಡಿಡಿ ಒನ್ ಮಾತ್ರ ಬರುವ ಟೀವಿಯಲ್ಲ ಅವರದ್ದು; ಅದರಲ್ಲಿ ಹತ್ತಾರು ಚಾನಲ್ ಗಳು. ದಿನಾ ಸಂಜೆ ಆರಕ್ಕೆ ಗೊಂಬೆ ಆಟ ಬರುತ್ತೆ ಅದರಲ್ಲಿ. ಎಷ್ಟು ಚಾನ್ಸ್ ಅಭಿಗೆ! ಆಡೋಕೆ ಹತ್ತಾರು ಆಟಿಕೆಗಳಿದಾವೆ. ಅವನ ಅಮ್ಮನ ಅಕ್ಕತಂಗಿಯರು ಪ್ರತೀಸಲ ಬರುವಾಗಲೂ ಅವನಿಗೆ ಏನಾದರೂ ತರುತ್ತಲೇ ಇರ್ತಾರೆ. ರಿಮೋಟ್ ಕಾರು, ಪೋಕ್ಲ್ಯಾನು, ಲೇಸರ್ ಲೈಟು, ಮಾತಾಡೋ ಗೊಂಬೆ..... ಜೊತೆಗೆ ಬಣ್ಣಬಣ್ಣದ ಬ್ಯಾಗಡೆಗಳ ಚಾಕಲೇಟುಗಳು ಬೇರೆ. ಎಷ್ಟೋಸಲ ಅವನ ಜೊತೆ ಆಡುತ್ತಿದ್ದಾಗ ಅವನನ್ನು ಮಾತ್ರ ಒಳಗೆ ಕರೆದು ಚಾಕ್ಲೇಟನ್ನೋ ಅಥವಾ ಸ್ಪೆಶಲ್ ಆಗಿ ಮಾಡಿದ ತಿಂಡಿಯನ್ನೋ ಕೊಡುತ್ತಿದ್ದರು. "ಇಲ್ಲೇ ಕೂತು ತಿನ್ಕಂಡು ಹೋಗು" ಅನ್ನುತ್ತಿದ್ದರಂತೆ. ಪಾಪ ಅಭಿ, ಕೆಲವೊಮ್ಮೆ ಅವರಿಗೆ ಗೊತ್ತಾಗದಂತೆ ಸಣ್ಣ ಚೂರೊಂದನ್ನು ತಂದು ಕೊಡುತ್ತಿದ್ದ. ಆ ಚಿಕ್ಕ ತುಂಡೇ ಎಷ್ಟು ರುಚಿಯಿರುತ್ತದೆ! ಒಳಗಿಟ್ಟುಕೊಂಡರೆ ಬಾಯ್ತುಂಬಾ ಸಿಹಿ-ಸಿಹಿ. ಇನ್ನು ಪೂರ್ಣ ಚಾಕ್ಲೇಟು ಅದೆಷ್ಟು ಸಿಹಿಯಿದ್ದಿರಬೇಡ?

ಅಪ್ಪ ಹೇಳುತ್ತಿದ್ದ. ದೊಡ್ಡಪ್ಪ ಮೊದಲು ಹೀಗಿರಲಿಲ್ಲವಂತೆ. ಚಿಕ್ಕವರಿದ್ದಾಗ ಅವರಿಗೆ ಕೊನೆಯ ತಮ್ಮನಾದ ಅಪ್ಪನ ಮೇಲೆ ತುಂಬಾ ಪ್ರೀತಿಯಿತ್ತಂತೆ. ಶಾಲೆಗೆ ಹೋಗುವಾಗ ಯಾವ್ಯಾವುದೋ ಹಣ್ಣೆಲ್ಲಾ ಕೊಯ್ದು ಕೊಡುತ್ತಿದ್ದರಂತೆ. ಅಜ್ಜ ತನ್ನನ್ನು ತೀರ್ಥಹಳ್ಳಿಯ ತೆಪ್ಪೋತ್ಸವದ ಜಾತ್ರೆಗೆ ಕರೆದೊಯ್ದಿಲ್ಲವೆಂದು ಅಪ್ಪ ಅಳುತ್ತಾ ಕುಳಿತಿದ್ದಾಗ ದೊಡ್ಡಪ್ಪನೇ ಸೈಕಲ್ನಲ್ಲಿ ಕೂರಿಸಿಕೊಂಡು, ಇಪ್ಪತ್ತು ಕಿಲೋಮೀಟರ್ ಸೈಕಲ್ ತುಳಿದು, ತೀರ್ಥಹಳ್ಳಿಯಲ್ಲಿ ಜಾತ್ರೆ ತೋರಿಸಿಕೊಂಡು ಬಂದಿದ್ದರಂತೆ. ನಂತರ ಅವರು ಬೆಂಗಳೂರಿಗೆ ಹೋದಮೇಲೆ ಪ್ರತೀಸಲ ಬರುವಾಗಲೂ ಅಪ್ಪನಿಗೆಂದು ರೇಡಿಯೋ, ಶೂ, ಸೆಂಟ್... ಹೀಗೆ ಏನಾದರೂ ಒಂದು ತರುತ್ತಲೇ ಇದ್ದರಂತೆ. "ಅತ್ತಿಗೆಯನ್ನು ಮದುವೆಯಾಗಿದ್ದೇ ಆಗಿದ್ದು, ಅಣ್ಣ ಬದಲಾಗಿಹೋದ" ಎನ್ನುತ್ತಾ ಅಪ್ಪ ನಿಟ್ಟುಸಿರಾಗುತ್ತಿದ್ದ. ಅತ್ತ ದೊಡ್ಡಪ್ಪನೂ ಅಷ್ಟೇ "ಶಂಕ್ರು ಒಳ್ಳೆಯವನೇ. ಆ ಗೌರಿ ಅವನ ತಲೆ ಕೆಡಿಸಿದಳು!" ಎನ್ನುತ್ತಿದ್ದರು. ಈ ಒಳ್ಳೆಯವರು, ಕೆಟ್ಟವರು, ಕೆಡಿಸುವವರು, ಕೆಟ್ಟವರು.... ಇವಲ್ಲರ ತಾಕಲಾಟದ ನಡುವೆ ಕೆಡವಲಾಗದ ಗೋಡೆಯೊಂದು ಬೆಳೆದು ಅಣ್ಣ ಅತ್ತ, ತಮ್ಮ ಇತ್ತ ಆಗಿದ್ದರು.

                    *****************

ಗೋಡೆ ಅಷ್ಟೇನೂ ಗಟ್ಟಿಯಿರಲಿಲ್ಲ. ಮಾರನೇ ವರ್ಷ ಮಳೆಗಾಲದಲ್ಲಿ ಅದರ ಮೇಲಿನದೆರೆಡು ಸಾಲು ಮುರಿದುಬಿತ್ತು. ಅದೇ ಮಳೆಗಾಲದಲ್ಲಿ ಅಜ್ಜ ತೀರಿಕೊಂಡ. ಅಜ್ಜ ಇದ್ದಷ್ಟು ದಿನ ಬೇರೆಬೇರೆಯಾಗಿದ್ದ ಅವನ ಮಕ್ಕಳು ಅವನ ಅಪರಕರ್ಮಗಳಿಗಾಗಿ ಒಂದಾದರು. ಸಾಮಾನು-ಸರಂಜಾಮುಗಳ ಸಾಗಾಣಿಕೆಗಾಗಿ ಗೋಡೆಯ ಮಧ್ಯದಲ್ಲೊಂದಿಷ್ಟು ಜಾಗವನ್ನು ಒಡೆದು ಬಾಗಿಲಿನಂತೆ ಮಾಡಲಾಯಿತು. ಎಷ್ಟೋ ದಿನಗಳ ನಂತರ ವಿಶಾಲ್-ಅಭಿ ಜೊತೆಯಾಗಿ ಅಂಗಳದಲ್ಲಿ ಆಡಿದರು. ಕಾರ್ಯಗಳೆಲ್ಲ ಮುಗಿದಮೇಲೂ ಕೆಡವಿದ್ದ ಜಾಗವನ್ನು ಮತ್ತೆ ಕಟ್ಟುವಷ್ಟು ರೋಶಾವೇಶ ದೊಡ್ಡಪ್ಪನಲ್ಲಾಗಲೀ, ಅಪ್ಪನಲ್ಲಾಗಲೀ ಇದ್ದಂತೆ ಕಾಣಲಿಲ್ಲ. ಸ್ವತಃ ತಾವಾಗಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುವುದು, ಒಬ್ಬರ ಮನೆಗೊಬ್ಬರು ಹೋಗಿಬರುವುದು ಮಾಡುತ್ತಿರಲಿಲ್ಲವಾದರೂ ಹಾಗೆ ಮಾಡದಂತೆ ತಮ್ಮ ಹೆಂಡತಿ, ಮಕ್ಕಳನ್ನೇನೂ ತಡೆಯಲಿಲ್ಲ. ತನಗಾಗಲೀ, ಅಭಿಗಾಗಲೀ ಮೊದಲಿನಂತೆ ಕಳ್ಳಹೆಜ್ಜೆಯಿಡುತ್ತಾ ಗೋಡೆ ದಾಟುವ ಅಗತ್ಯವಿರಲಿಲ್ಲ. ದೊಡ್ಡಮ್ಮನಾಗಲೀ, ಅಮ್ನನಾಗಲೀ ತಮ್ಮನ್ನು ಆಚೆ ಮನೆಯ ಅಂಗಳದಲ್ಲಿ ನೋಡಿ, ಮುಂಗುಸಿಯನ್ನು ಕಂಡ ಹಾವಿನಂತೆ ಭುಸುಗುಟ್ಟುತ್ತಿರಲಿಲ್ಲ. ಪ್ರತೀ ವರ್ಷ ಮಳೆಗಾಲಕ್ಕೂ ಗೋಡೆ ಇಷ್ಟಿಷ್ಟಾಗಿ ಬೀಳುತ್ತಲೇ ಹೋಯಿತು. ಎರೆಡು ಮನೆಯವರೂ ಬಿದ್ದ ಇಟ್ಟಿಗೆಗಳನ್ನು ಎತ್ತಿ ಪಕ್ಕಕ್ಕೆಸೆದು ಮುನ್ನಡೆದರು, ಮತ್ತೆ ಕಟ್ಟುವ ಪ್ರಯತ್ನ ಮಾಡದೇ.

                    *****************

ಎರೆಡು ದಶಕಗಳು ಕಳೆದವು. ವಿಶಾಲನ ಮದುವೆಯಾಗಿ ವರ್ಷ ಕಳೆದಿತ್ತು. ವಾರದ ಹಿಂದಷ್ಟೇ ಅಭಿಯ ಮದುವೆಯೂ ಆಯಿತು. ಎರೆಡೂ ಮದುವೆಯಲ್ಲಿ, ಎರೆಡೂ ಮನೆಯವರು ಸಡಗರದಿಂದ ಓಡಾಡಿದರು. ಅದೊಂದು ಸಂಜೆ ಮದುಮಕ್ಕಳನ್ನು ಕಾರು ಹತ್ತಿಸಿ ವಿಶಾಲ್ ಮರಳಿ ಮನೆಯತ್ತ ನಡೆದ. ದೊಡ್ಡಪ್ಪನ ಮನೆಯಂಗಳದಿಂದ ತನ್ನ ಮನೆಯಂಗಳಕ್ಕೆ ದಾಟುವಾಗ ಕಾಲಿಗೆ ತಗುಲಿ ಇಟ್ಟಿಗೆಯೊಂದು ಧಡ್ಡೆಂದು ಉರುಳಿತು. ಅದನ್ನು ಎತ್ತಿ ಬದಿಗೆಸೆಯಲೆಂದು ಬಗ್ಗಿದವನ ಕಣ್ಣು ಗೋಡೆಯ ಮೇಲೆ ಬಿತ್ತು.

ಗೋಡೆ... ರಾತ್ರೋರಾತ್ರಿ ಎದ್ದುನಿಂತಿದ್ದ ಗೋಡೆ....  ಅಣ್ಣ-ತಮ್ಮಂದಿರ ಮನೆ-ಮನಗಳ ನಡುವೆ ಬೆಳೆದುಕೊಂಡಿದ್ದ ಗೋಡೆ..... ರಕ್ತ ಸಂಬಂಧವನ್ನೇ ಬೇರಾಗಿಸಿದ್ದ ಗೋಡೆ... ಎಳೆಯ ಸ್ನೇಹದ ನಡುವೆ ಬೇಲಿಯಾಗಿದ್ದ ಗೋಡೆ...

ಅದಿಂದು ಗೋಡೆಯಾಗಿಯೇ ಉಳಿದಿರಲಿಲ್ಲ!

ಅಲ್ಲೀಗ ಇದ್ದದ್ದು ಒಂದೇ ಸಾಲು..... ಅಂದು, ಆ ಕಲಹದ ಗಾಢಾಂಧಕಾರದಲ್ಲಿ ಕಟ್ಟಿದ್ದ ಮೊಟ್ಟಮೊದಲ ಸಾಲು... ಉರುಳಬೇಕಾದ ಕಟ್ಟಕಡೆಯ ಸಾಲು... ಅದನ್ನೇ ದಿಟ್ಟಿಸಿ ಮುಗುಳ್ನಕ್ಕ. 
"ದಾಯಾದಿಗಳ ಕಾಲ ಮುಗಿಯಿತು ಗೋಡೆಯೇ. ಇನ್ನೇನಿದ್ದರೂ ಅಣ್ಣ-ತಮ್ಮಂದಿರ ಕಾಲ. ನಮ್ಮ ನಡುವೆ ನೀನೆಂದಿಗೂ ಬೆಳೆಯಲಾರೆ!"
ಕಾಲು ಬೀಸಿ ಬಲವಾಗಿ ನಾಲ್ಕಾರು ಬಾರಿ ಒದ್ದ. ಗೋಡೆಯ ಅಂತಿಮ ಸಾಲಿನ ಇಟ್ಟಿಗೆಗಳೆಲ್ಲಾ ಧೊಪ್ಪೆಂದು ಒಡೆದುಹೋದವು....

                   *****************

"ಆ ಹಾಳು ಯಮ್ಮೇನ ಕಟ್ಟಿ ಹಾಕೋಕಾಗಲ್ವ ಅವರಿಗೆ? ಮತ್ತೆ ನಮ್ಮನೆ ಹಿತ್ಲಿಗೆ ನುಗ್ಗಿ ಗಿಡಾನೆಲ್ಲ ತಿಂದುಹಾಕಿದೆ ಧರಿದ್ರದ್ದು"
ಗಂಗಾಳ ಕೋಪ ಮೇರೆ ಮೀರಿತ್ತು.

"ಹೋಗ್ಲಿ ಬಿಡೇ. ಅವ್ರೇನು ಬೇಕಂತ ಬಿಟ್ಟಿದ್ದಾ? ಎಲ್ಲೋ ಅವರ ಕಣ್ತಪ್ಸಿ ಬಂದಿರತ್ತೆ"
ವಿಶಾಲ ತನ್ನ ಮಡದಿಗೆ ಸಮಾಧಾನ ಹೇಳಿದ.

"ನಿಮಗೇನು ಹೇಳಿ? ನಾನು ಮೊನ್ನೆಯಷ್ಟೇ ಅಮ್ಮನ ಮನೆಯಿಂದ ತಂದು ನೆಟ್ಟಿದ್ದ ಸೇವಂತಿಗೆ ಅದು.. ಬೇರು ಸಮೇತ ತಿಂದಿದೆ ಪಾಪಿ ಎಮ್ಮೆ!"
ಎನ್ನುತ್ತಾ ಒಳಗೆ ಹೋದಳು ಗಂಗಾ. ವಿಶಾಲ್ ನಕ್ಕು ಸುಮ್ಮನಾದ.

                   *****************

"ಅಯ್ಯೋ, ಛೀ! ಇಲ್ಲಿ ನೋಡ್ರಿ ಈ ಗಲೀಜನ್ನ"
ಅಭಿಯ ಮಡದಿ ಪದ್ಮ ಕೂಗಿಕೊಂಡಳು.

"ಬೆಳ್ಳಂಬೆಳಗ್ಗೇನೇ ಏನು ನೋಡಿದ್ಯೇ?" 
ಅಭಿ ಓಡಿಬಂದ.

"ಮತ್ತೆ ನಮ್ಮ ಅಂಗಳದಲ್ಲೇ ಗಲೀಜು ಮಾಡಿದೆ ಪಕ್ಕದ್ಮನೆಯ ಕೊಳಕು ನಾಯಿ!"
ಮೂಗು ಮುಚ್ಚಿಕೊಂಡೇ ಹೇಳಿದಳು.

"ಓಹ್ ಹೌದಲ್ಲಾ.. ಇರ್ಲಿ ಈ ಕಡೆ ಬಾ. ಚೆನ್ನಿ ಬಂದೋಳು ಕ್ಲೀನ್ ಮಾಡ್ತಾಳೆ"
ಅಭಿ ತಣ್ಣಗೆ ಉತ್ತರಿಸಿದ.

"ಸರಿಯಾಗಿ ನೋಡ್ಕೊಳ್ಳೋಕಾಗದ ಮೇಲೆ ನಾಯಿ ಯಾಕೆ ಸಾಕ್ಬೇಕು ಹೇಳಿ?"

"ಅಲ್ವೇ ಅವರೇನು ಹೇಳಿ ಕಳಿಸ್ತಾರೇನೇ ಅಲ್ಲೇ ಹೋಗಿ ಗಲೀಜು ಮಾಡು ಅಂತ? ಅದಕ್ಕಾಗಿ ಪ್ರತ್ಯೇಕ ಟಾಯ್ಲೆಟ್ ಕಟ್ಸೋಕಾಗುತ್ತಾ? ಏನೋ ಒಂದ್ಸಲ ಅಡ್ಜಸ್ಟ್ ಆಗ್ಬೇಕು ಬಿಡು"

"ನಂಗೆ ಗೊತ್ತೂರಿ. ನಿಮಗೆ ನನಗಿಂತ ನಿಮ್ಮಣ್ಣನೇ ಹೆಚ್ಚು ಪ್ರೀತಿ. ಎಷ್ಟೇ ಆದ್ರೂ ನಾನು ಹೊರಗಿನವಳಲ್ವಾ!"
ಧಡಧಡನೆ ನಡೆದುಹೋದವಳನ್ನು ನೋಡಿ ಒಳಗೇ ನಕ್ಕು ಸುಮ್ಮನಾದ ಅಭಿ.

                   *****************

"ಆ ಹೆಂಗ್ಸು ಯಾಕೆ ಅಂಗಾಡ್ತಾಳೆ ವಿಶಾಲಯ್ಯ?"
ರಂಗಿ ಮೂತಿ ಮುರಿಯುತ್ತಲೇ ಕೇಳಿದಳು.

"ಯಾರು ಹೆಂಗಾಡಿದರೇ ರಂಗಿ?"

"ಅವ್ಳೇ, ಅಭಿನಂದನಯ್ಯನ ಎಂಡ್ತೀ. ನಿಮ್ಮನೆಗೆ ತರೋ ಗೊಬ್ರ,  ದರಗನ್ನ ನಮ್ಮನೆ ಅಂಗ್ಳದಾಗ್ ಒತ್ಕಂಡು ಓಗ್ಬ್ಯಾಡ. ಆಕಡೆ ದಿಬ್ಬದಾಸಿ ತಕಂಡೋಗು. ನಮ್ ಅಂಗ್ಳ ಗಲೀಜಾಯ್ತದೆ ಅಂತಾಳೆ! ಆಮ್ಯಾಕೆ ಗುಡ್ಸಿ ಕಿಲೀನ್ ಮಾಡ್ತೀನಿ ಅಂದ್ರೂ ಕೇಳಾಕಿಲ್ಲ"

ವಿಶಾಲನ ಹುಬ್ಬು ಗಂಟಾಯಿತು.

                   *****************

"ಚಿಕ್ಕಯ್ಯ, ಹಿಂಗೆ ಹೇಳ್ತೀನಂತ ತಪ್ಪು ತಿಳೀಬ್ಯಾಡಿ. ಬ್ಯಾಣದಾಗೆ ಅಕೇಸ್ಯಾ ಹಾಕುವಾಗ ನಿಮ್ದೂ ಆರಡಿ ಜಾಗ ಸೇರ್ಸಿ ಒಳಗ್ಹಾಕವ್ರೆ ನಿಮ್ ಪಕ್ಕದ್ ಮನ್ಯೋರು. ನೀವಿಂಗೇ ಸುಮ್ಕಿದ್ರೆ ಸಿವಾ ಅನ್ಸ್ಬುಡ್ತಾರೆ ಆಟೇಯ."
ಸಿಂಗನ ಮಾತುಕೇಳಿ ಆ ಕ್ಷಣಕ್ಕೆ 'ಹೂಂ' ಎಂದು ಸುಮ್ಮನಾದ ಅಭಿಗೆ ನಂತರ ಮನಸ್ಸಿನೊಳಗೇನೋ ಒಂಥರಾ ಕಿರಿಕಿರಿ ಆರಂಭವಾಯಿತು. ಮೇಲೆ ಬ್ಯಾಣಕ್ಕೆ ಹೋಗಿ ನೋಡಿದರೆ ಸಿಂಗ ಹೇಳಿದ್ದು ನಿಜವೇ! ಸ್ವಲ್ಪ ಇವರ ಜಾಗವನ್ನೂ ಸೇರಿಸಿ ಗಿಡನೆಡಲಾಗಿದೆ!

ಅಸಮಾಧಾನವೊಂದು ಸಣ್ಣಗೆ ಹೊಗೆಯಾಡಲಾರಂಭಿಸಿತು.

                   *****************


ಕೆಲವು ದಿನಗಳ ನಂತರ ಮತ್ತೆ ವಿಶಾಲನ ಮನೆ ಹಿತ್ತಲಿಗೆ ನುಗ್ಗಿದ ಅಭಿಯ ಮನೆಯ ಎಮ್ಮೆ ಕಾಲ ಮೇಲೆ ಬರೆ ಬರುವಂತೆ ಹೊಡೆತ ತಿಂದು ಓಡಿಬಂತು. ಅಭಿಯ ಮನೆಯಲ್ಲಿ ಗಲೀಜು ಮಾಡುತ್ತಿದ್ದ ವಿಶಾಲನ ಮನೆ ನಾಯಿ ಬೆನ್ನಮೇಲೆ ಬಲವಾದ ಪೆಟ್ಟುತಿಂದು ವರಲಿದ್ದು ಎರೆಡೂಮನೆಗೂ ಸ್ಪಷ್ಟವಾಗಿ ಕೇಳಿತ್ತು. 

ಅದೊಂದು ಭಾನುವಾರ ಮಧ್ಯಾಹ್ನ. ಎರೆಡೂ ಮನೆಯಲ್ಲೂ ಊಟದ ನಂತರದ ವಿಶ್ರಾಂತಿಯ ಮೌನ. ಥಟ್ಟನೆ ಎಲ್ಲರೂ ಬೆಚ್ಚಿಬೀಳುವಂತಹಾ ಕೂಗು ಕೇಳಿಬಂತು:

"ಅಮ್ಮಾ... ನನ್ ತಲೇ...... ಊಊsss"
ಎಲ್ಲರೂ ಬೆಚ್ಚಿಬಿದ್ದೆದ್ದು ಓಡುತ್ತಾ ಅಂಗಳಕ್ಕೆ ಬಂದರು. ವಿಶಾಲನ ಮಗ ಶಶಾಂಕ ತಲೆ ಒತ್ತಿಹಿಡಿದುಕೊಂಡು ಅಳುತ್ತಿದ್ದ. ಅಭಿಯ ಮಗ ಪ್ರಣವ್ ಭಯಭೀತನಾಗಿ ನೋಡುತ್ತಾ ನಿಂತಿದ್ದ.

ಗಂಗಾ, ವಿಶಾಲ್ ತಮ್ಮ ಮಗನತ್ತ ಓಡಿದರು. 
"ಏನಾಯ್ತು ಚಿನ್ನಾ" ಎಂದು ತಲೆಯಮೇಲಿಂದ ಅವನ ಕೈ ತೆಗೆದಳು. ಕೈ ತುಂಬಾ ರಕ್ತ! 

"ಕಳ್ಳ-ಪೋಲೀಸ್ ಆಡ್ತಿದ್ವಿ.... ಅವನು ಓಡ್ತಿದ್ದ.....ಗುಲಾಬಿ ಮುಳ್ಳು ಚುಚ್ತೂ....."
ಪ್ರಣವ್ ಭಯದಿಂದ ತೊದಲುತ್ತಾ ವಿಶಾಲ್ ನತ್ತಲೇ ನೋಡಿದ. 

"ಅವತ್ತೇ ಹೇಳಿದ್ದೆ ಅವ್ರಿಗೆ, ನಮ್ಮಂಗಳಕ್ಕೆ ದಾಟೋ ಜಾಗದಲ್ಲಿ ಆ ಗುಲಾಬಿ ಗಿಡ ನೆಡ್ಬೇಡಿ ಅಂತ. ಕೇಳ್ಲೀಲ. ಈಗ ನೋಡು ಏನಾಯ್ತಂತ! ಹಿಂಗೆಲ್ಲಾ ಹೇಳಿದ್ರೆ ಅವ್ರಿಗೆ ಅರ್ಥ ಆಗಲ್ಲ. ಮಾಡ್ತೀನಿ ನೋಡ್ತಿರು"
ವಿಶಾಲನ ತಂದೆ ಗುಡುಗುತ್ತಾ ಅಲ್ಲೇ ಇದ್ದ ಕೈಗತ್ತಿ ಹಿಡಿದು ವಿಶಾಲ ಕರೆಯುತ್ತಿರುವಂತೆಯೇ ಅಭಿಯ ಅಂಗಳದಂಚಿನಲ್ಲಿದ್ದ ಗಿಡದತ್ತ ನುಗ್ಗಿದರು. 

"ಅಯ್ಯೋ, ಮುಟ್ಬೇಡಿ ಅದ್ನಾ...." ಎಂದು ಅಡ್ಡಬಂದ ಪದ್ಮಾಳನ್ನು ತಳ್ಳಿ, ಗಿಡದ ಮೇಲೆರಗಿದರು.
ಅದೆಲ್ಲಿದ್ದನೋ ಅಭಿ, ದೊಡ್ಡಪ್ಪನ ಮೇಲೆ ಲಂಘಿಸಿಯೇಬಿಟ್ಟ. ಅವರ ಕೈಲಿದ್ದ ಕತ್ತಿಯನ್ನು ಕಸಿದೆಸದು, ಅವರನ್ನು ಬಲವಾಗಿ ನೂಕಿಬಿಟ್ಟ.
"ವಿಶೂ...." ಎನ್ನುತ್ತಾ ನೆಲದಮೇಲೆ ಬಿದ್ದರು, ವಿಶಾಲನ ತಂದೆ.

ಕಣ್ಣೆದುರೇ ತನ್ನ ಅಪ್ಪನ ಮೇಲೆ ಕೈಮಾಡಿದ ಅಭಿಯತ್ತ ಛಂಗನೆ ನೆಗೆದ ವಿಶಾಲ್ ಅವನ ಕತ್ತುಪಟ್ಟಿ ಹಿಡಿದು ನೂಕಿದ. ಹಿಂದಕ್ಕೆ ಬಿದ್ದ ಅಭಿ ಅಷ್ಟೇ ವೇಗದಲ್ಲಿ ಮೇಲೆದ್ದುಬಂದು ವಿಶಾಲನ ಕೊರಳಪಟ್ಟಿ ಹಿಡಿದುಕೊಂಡ... 

ಒಬ್ಬರನ್ನೊಬ್ಬರು ಎಳೆದಾಡಿಕೊಂಡರು. ಜಗ್ಗಿ ಹೊಡೆದರು. ಲಂಘಿಸಿದರು. ವಿಶಾಲನ ಗುಂಡಿ ಕಿತ್ತು ಅಭಿಯ ಕೈಗೆ ಹೋಯ್ತು; ಅಭಿಯ ಜೇಬು ಹರಿದು ವಿಶಾಲನ ಕೈಗೆ ಬಂತು. 

ಅಂದು ಇದೇ ಕೈಗಳು ಪ್ರೀತಿಯಿಂದ ವಿನಿಮಯಮಾಡಿಕೊಂಡಿದ್ದ ಆಟಿಕೆಗಳು ನೆಲದಾಳದಲ್ಲೆಲ್ಲೋ ಸಣ್ಣಗೆ ನರಳಿದವು.

ಮನೆಯ ಹೆಂಗಸರು, ಕೆಲಸದವರೆಲ್ಲಾ ಬಂದು ಇಬ್ಬರನ್ನೂ ಬೇರೆಬೇರೆಯಾಗಿಸಿ ಎಳೆದೊಯ್ದರು. 

"ಕಟ್ರೋ ಗೋಡೆನ!"
ಅಂಗಳದಲ್ಲಿ ನಿಂತು ವಿಶಾಲ್ ಘರ್ಜಿಸಿದ.

"ಮುಚ್ಚಿ ಈ ದಾರೀನಾ!"
ಅತ್ತಕಡೆಯಿಂದ ಅಭಿ ಘೀಳಿಟ್ಟ.

ಅರೆಕ್ಷಣದಲ್ಲಿ ನಡೆದುಹೋದ ಕಾಳಗವನ್ನು ಎರೆಡು ಎಳೆಯ ಜೋಡಿ ಕಣ್ಣುಗಳು ಅತ್ಯಂತ ಭಯಾಶ್ಚರ್ಯಗಳಿಂದ ನೋಡುತ್ತಿದ್ದವು:
ವಿಶಾಲನ ಮಗ ಶಶಾಂಕ ಹಾಗೂ
ಅಭಿಯ ಮಗ ಪ್ರಣವ್....

(ತುಷಾರದಲ್ಲಿ ಪ್ರಕಟಿತ)

ಶನಿವಾರ, ಜನವರಿ 19, 2019

ಬೆಂಗಳೂರಿಗೆ ಬಂದಿದ್ದು-2

ಈ ಪ್ರೀತಿ ಹಾಗೂ ಬರಹಗಳ ಒಂದು ವಿಚಿತ್ರ ಗುಣ ಏನೆಂದರೆ 'ಬಾ ಇಲ್ಲಿ' ಎಂದು ಪ್ರೀತಿಯಿಂದ ಕರೆದಾಗ ಅವು ಬರುವುದಿಲ್ಲ. ಅದೇ 'ನೀನು ನನಗಲ್ಲ ಬಿಡು' ಎಂದು ವಿಮುಖನಾದರೆ ಓಡಿ ಬಂದು ಅಪ್ಪಿಕೊಳ್ಳುತ್ತವೆ. ಬಸ್ಸು ಬಾರದ ಸಂಜೆಯೊಂದರಲ್ಲಿ ಕಾಯುತ್ತಾ ಕುಳಿತಿದ್ದಾಗ ಬರೆದ 'ಬೆಂಗಳೂರಿಗೆ ಬಂದಿದ್ದು' ಎನ್ನುವ ನನ್ನದೇ ಯಡವಟ್ಟುಗಳ ಸಂಕಲನದಂತಹಾ ಬರಹಕ್ಕೆ ದೊರೆತ ನಿಮ್ಮೆಲ್ಲರ ಪ್ರತಿಕ್ರಿಯೆಯನ್ನು ನೋಡಿ ನಿಜಕ್ಕೂ ಬೆಚ್ಚಿಬಿದ್ದಿದ್ದೇನೆ, ಅಷ್ಟೇ ಕೃತಜ್ಞನೂ ಆಗಿದ್ದೇನೆ. ಅದಕ್ಕೆ ಅಷ್ಟೆಲ್ಲ ಲೈಕು, ಕಮೆಂಟುಗಳು ಬಂದಿರುವಾಗ ಇದು ಎಲ್ಲಿ ಓದಿಸಿಕೊಳ್ಳದೇ ಹೋಗುತ್ತದೋ ಎನ್ನುವ ಭಯದಲ್ಲೇ ಅದರ ಮುಂದಿನ ಭಾಗವನ್ನು ಬರೆದುಮುಗಿಸಿದ್ದೇನೆ.
ಓದುವಿರೆಂಬ ನಂಬಿಕೆಯೊಂದಿಗೆ...

ಬೆಂಗಳೂರಿಗೆ ಬಂದಿದ್ದು-2

ಬೆಂಗಳೂರಿಗೆ ಬಂದ ಮೊದಲ ವಾರದಲ್ಲಿ, ಹೆಚ್ಚೂ ಕಡಿಮೆ ಒಂದೇ ಥರಾ ಕಾಣುವ ಬೆಂಗಳೂರಿನ ಬೀದಿಗಳ ನಡುವೆ ಅದೆಷ್ಟು ಕನ್ಫ್ಯೂಸ್ ಆಗುತ್ತಿದ್ದೆನೆಂದರೆ ನಮ್ಮ ಮನೆಯ ಮುಂದಿನದೇ ಸರ್ಕಲ್ ನಲ್ಲಿ ನಿಲ್ಲಿಸಿ, ಕಣ್ಣು ಮುಚ್ಚಿಸಿ, ಗಿರಗಿರನೆ ನಾಲ್ಕು ಸುತ್ತು ತಿರುಗಿಸಿ ವಾಪಾಸ್ ಮನೆಗೆ ಹೋಗು ನೋಡೋಣ ಎಂದರೂ ಮೇಲೆ ಕೆಳಗೆ ನೋಡುತ್ತಿದ್ದೆನೇನೋ. ಎಲ್ಲೇ ಮೂರು ದಾರಿಗಳು ಕೂಡಿರುವ ಸರ್ಕಲ್ ಕಂಡರೂ, ಅಲ್ಲಿ ನಾನು ತುಳಿಯುತ್ತಿದ್ದುದು ತಪ್ಪುಹಾದಿಯನ್ನೇ. ಯಾವುದೋ ಡೆಡ್ಡೆಂಡ್ ರಸ್ತೆಗೆ ಹೋಗಿ ಗಾಬರಿಯಲ್ಲಿ ಮೇಲೆ ಕೆಳಗೆ ನೋಡುತ್ತಾ, ಸ್ವಲ್ಪ ಹೊತ್ತಿಗೆ ಮುಂಚೆ ಇಲ್ಲೇ ಇದ್ದ ಅಕ್ಕನ ಮನೆ ಅದೆಲ್ಲಿ ಹೋಯ್ತೆಂದು ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ ಜನರ ಬಳಿ ವಿಳಾಸ ಕೇಳುತ್ತಿದ್ದೆ. ಇಂತಿಪ್ಪ ನನ್ನೊಬ್ಬನನ್ನೇ ದೂರದಲ್ಲೆಲ್ಲೋ ಇರುವ ಅದ್ಯಾವುದೋ ಕಂಪನಿಗೆ ಇಂಟರ್ವ್ಯೂಗೆ ಕಳಿಸಲು ಅಕ್ಕನಿಗಾದರೂ ಹೇಗೆ ಧೈರ್ಯ ಬಂದೀತು? ತುಸು ಯೋಚಿಸಿ, ಕೊನೆಗೆ ಅವಳೇ ನನ್ನೊಂದಿಗೆ ಹೊರಟು ನಿಂತಳು.
ತಮಾಷೆ ಇದ್ದದ್ದೇ ಅಲ್ಲಿ. ಮೂರ್ನಾಲ್ಕು ದಿನದ ಹಿಂದೆ ಬೆಂಗಳೂರಿಗೆ ಬಂದಿಳಿದ ನನಗೆ ಈ ಮಹಾನಗರದ ದೂರದ ಏರಿಯಾಗಳು ಅದೆಷ್ಟು ಅಪರಿಚಿತವಾಗಿದ್ದವೋ, ಏಳು ವರ್ಷದ ಹಿಂದೆ ಮದುವೆಯಾಗಿ ಇಲ್ಲಿಗೆ ಬಂದ ಅಕ್ಕನಿಗೂ ಅವು ಅಷ್ಟೇ ಅಪರಿಚಿತವಾಗಿದ್ದವು! ಗಿರಿನಗರ, ಬಸವನಗುಡಿಗಳಾಚೆ ಯಾವೊಂದು ಏರಿಯಾಗೂ ಸ್ವತಂತ್ರವಾಗಿ ಹೋಗದ, ವರ್ಷಕ್ಕೊಂದೆರೆಡು ಬಾರಿ ಹೋದರೂ ಭಾವನ ಜೊತೆ ಬೈಕಿನಲ್ಲಿ ಇಲ್ಲಾ ಆಟೋದಲ್ಲಿ ಹೋಗುತ್ತಿದ್ದ ಅಕ್ಕನ ಪಾಲಿಗೆ ಈ ಬಿಎಂಟಿಸಿ ಪ್ರಯಾಣವೆನನುವುದು ಮೊಟ್ಟ ಮೊದಲ ಬಾರಿಗೆ ಏರುತ್ತಿರುವ ರೋಲಕ್ ಕೋಸ್ಟರ್ರೇ ಆಗಿತ್ತು. ಹೀಗೆ ಹುಟ್ಟಾ ಬೃಹಸ್ಪತಿಗಳಾದ ನಾವಿಬ್ಬರೂ ಜೊತೆಯಾಗಿ ಇಂಟರ್ವ್ಯೂಗೆ ಹೊರಡುವುದೆಂದು ತೀರ್ಮಾನವಾಯಿತು. ಬಿಟಿಎಂ ಎನ್ನುವ ಬರೀ ಇನಿಶಿಯಲ್ ಗಳಿರುವ ಹೆಸರಿನ ಏರಿಯಾಗೆ ಹೋಗಲು ಯಾವ್ಯಾವ ಬಸ್ಸುಗಳಿವೆಯೆಂದು ತಿಳಿದುಕೊಂಡು ಹೇಳುವಂತೆ ಅಕ್ಕ ಭಾವನಿಗೆ ದೊಂಬಾಲುಬಿದ್ದಳು. ಯಾರ್ಯಾರಿಗೋ ಕಾಲ್ ಮಾಡಿ ನಮ್ಮ ಏರಿಯಾದಿಂದ ಬಿಟಿಎಂಗೆ ಹೋಗುವ ಬಸ್ಸುಗಳ ಕುಲ, ಗೋತ್ರ ವಿಚಾರಿಸಿದೆವು. ಅಂತೂ ಇಂತೂ ಅದೊಂದು ಸೋಮವಾರ ಬೆಳಗ್ಗೆ ಒಂಭತ್ತಕ್ಕೆಲ್ಲ ಸೀತಾ ಸರ್ಕಲ್ ನಲ್ಲಿ ನಿಂತು ಬಸ್ಸಿಗಾಗಿ ಕಾಯತೊಡಗಿದೆವು.
ಆಗ ಬಂತು ಟೂ ನಾಟ್ ಒನ್!
ಬಸ್ಸೊಂದು ಈ ಪಾಟಿ ರಶ್ಶಾಗಿದ್ದನ್ನು ನಾನು ನೋಡಿದ್ದೇ ಕಡಿಮೆ. ಮುಂದುಗಡೆ ಬಾಗಿಲಿನ ತುದಿಯಿಂದ ಹಿಡಿದು ಹಿಂದಿನ ಸೀಟಿನ ಮೂಲೆಯ ತನಕ ಒಂದೊಂದು ಅಡಿ ಜಾಗಕ್ಕೂ ಒಬ್ಬೊಬ್ಬ ಮನುಷ್ಯನನ್ನು ನಿಲ್ಲಿಸಿಕೊಂಡು ಬಂದಿದ್ದ ಆ ಬಸ್ಸನ್ನು ನೋಡಿ ನನಗಿಂತ ಭಯಂಕರವಾಗಿ ಬೆಚ್ಚಿಬಿದ್ದವಳು ಅಕ್ಕ. ಎಷ್ಟೋ ವರ್ಷಗಳ ಕೆಳಗೆ ಸಮಾಜ ಪುಸ್ತಕದಲ್ಲಿ ಓದಿದ್ದ 'ಜನಸಂಖ್ಯಾ ಸ್ಫೋಟ'ದ ಅರ್ಥ ಏನೆಂಬುದು ಈಗ ಇಬ್ಬರಿಗೂ ಗೊತ್ತಾಗಿತ್ತು. ಹಾಗಂತ ಮುಂದಿನ ಬಸ್ಸಿಗೆ ಕಾಯುವಷ್ಟು ಸಮಯವಿರಲಿಲ್ಲ. ಹಾಗೆ ಕಾದರೂ ಬರಲಿರುವ ಬಸ್ಸು ಇದರ ಅಜ್ಜನಂತಿದ್ದರೆ? ಎಂಬ ಭಯ ಬೇರೆ. ಅಂತೂ ಇಂತೂ ಹೇಗೋ ದಾರಿ ಮಾಡಿಕೊಂಡು ಬಸ್ಸಿನೊಳಗೆ ತೂರಿಕೊಂಡೆವು. ಒಳಗಿನ ಪರಿಸ್ಥಿತಿ ಇನ್ನೂ ಭಯಂಕರವಾಗಿತ್ತು. ಸೊಂಟ ಬಳುಕಿದ ತೆಂಗಿನ ಮರಗಳಂತೆ ನಿಂತು ನೇತಾಡಿಕೊಂಡಿದ್ದ ಜನರ ಕಾಲೊಂದು ಕಡೆ ಇದ್ದರೆ, ತಲೆ-ಕೈಗಳು ಮೇಲೆಲ್ಲೋ ಇರುವ ಪೋಲ್ ಸರಳಿನ ಕಡೆಗೆ ಓರೆಯಾಗಿ ಚಾಚಿಕೊಂಡಿದ್ದವು. ಪ್ರತಿಯೊಂದು ಹೆಜ್ಜೆಗೂ ಯಾರದೋ ಕಾಲು ತುಳಿಯುತ್ತಾ, ಅವರ ಕೆಂಗಣ್ಣಿನ ನೋಟಕ್ಕೀಡಾಗುತ್ತಾ ಹೇಗೋ ಒಳಸೇರಿಕೊಂಡೆ. ಮಹಿಳೆಯರು ಬಸ್ಸಿನ ಮುಂಭಾಗದಲ್ಲಿ ನಿಲ್ಲಬೇಕಾದ್ದರಿಂದ ಅಕ್ಕ ಅನಿವಾರ್ಯವಾಗಿ ಮುಂದೆಲ್ಲೋ ನಡೆದುಹೋದಳು. ಕಿಕ್ಕಿರಿದಿದ್ದ ಜಡೆ, ಚೂಡಿದಾರ, ಸೀರೆಗಳ ನಡುವೆ ಕರಗಿಹೋದ ಅವಳನ್ನು ಹುಡುಕುವ ವಿಫಲ ಪ್ರಯತ್ನ ಮಾಡುತ್ತಾ, ನಿಂತಲ್ಲೇ ಇಣುಕಾಡುತ್ತ ಬಸ್ಸಿನ ಪೋಲ್ ಗೆ ನೇತಾಡತೊಡಗಿದೆ.
ಟ್ರಾಫಿಕ್ ಎನ್ನುವ, ಮಹಾಮಹಾಶಹರಗಳ ಜನರನ್ನೆಲ್ಲ ಬೆಚ್ಚಿ ಬೀಳಿಸುವ ಸಮಸ್ಯಾಸುರನನ್ನು ನಾನು ಕಣ್ಣಾರೆ ನೋಡಿದ್ದು ಅದೇ ಮೊದಲು. ಇಳಿಯಬೇಕಾದ ನಿಲ್ದಾಣ ಮುಂದೆಲ್ಲಿದೆ? ಗೊತ್ತಿಲ್ಲ. ಅದಕ್ಕಿನ್ನೂ ಎಷ್ಟು ದೂರ? ಗೊತ್ತಿಲ್ಲ. ನಿಜಕ್ಕೂ ಅದು ಮುಂದೆಯೇ ಇದೆಯಾ ಅಥವಾ ಹಿಂದೆಲ್ಲೋ ದಾಟಿ ಹೋಯಿತಾ? ಅದೂ ಗೊತ್ತಿಲ್ಲ. ಆಗಲೇ ಒಂದು ಗಂಟೆ ಕಳೆದಿದೆ. ಮುಂದಿರುವ ಅಕ್ಕ ನನಗೆ ಗೊತ್ತಾಗದಂತೆ ಎಲ್ಲಾದರೂ ಇಳಿದುಕೊಂಡು ಬಿಟ್ಟರೆ ಏನಪ್ಪಾ ಗತಿ ಎಂದು ನಾನು ಯೋಚಿಸುತ್ತಿದ್ದರೆ ಅವಳು, ಹಿಂದೆಲ್ಲೋ ಇರುವ ತನ್ನ ಸಣಕಲ ತಮ್ಮ ಈ ನೂಕಾಟದ ನಡುವೆ ಅದ್ಯಾವ ಕಿಟಕಿಯ ಸಂದಿಯಿಂದ ತೂರಿ ಆಚೆ ಬಿದ್ದುಹೋಗುತ್ತಾನೋ ಎಂದು ಚಿಂತಿಸುತ್ತಾ ಹೈರಾಣಾಗಿದ್ದಳು. ಪ್ರತಿ ಎರೆಡು-ಮೂರು ನಿಲ್ದಾಣ ಸರಿದಾಗಲೂ ಇದು ಬಿಟಿಎಮ್ಮಾ ಎಂದು ಕೇಳಿ ಕಂಡೆಕ್ಟರ್ ನಿಂದ ಬೈಸಿಕೊಂಡಿದ್ದಳು. ಹೀಗೆ ಖಾಲಿ ಹತ್ತೂ ಚಿಲ್ಲರೆ ಕಿಲೋಮೀಟರ್ ಕ್ರಮಿಸಲಿಕ್ಕೆ ಒಂದೂವರೆ ಗಂಟೆ ಕಾಲ ಅಲ್ಲಾಡುತ್ತಾ, ಕುಲುಕಿ ಬಳುಕುತ್ತಾ, ಹೋಗುತ್ತಲೇ ಇರಬೇಕಾದ ಪ್ರಯಾಣ ನಿಜಕ್ಕೂ ಕಿರಿಕಿರಿ ಹುಟ್ಟಿಸುವಂತಿತ್ತು.
*******************
ಕೊನೆಗೂ ಕಂಡಕ್ಟರ್ 'ಈಸ್ಟೆಂಡ್, ಈಸ್ಟೆಂಡ್...' ಎಂದು ಕೂಗಿಕೊಂಡಾಗ ಹೋದ ಜೀವ ಬಂದಂತಾಯಿತು. ಇನ್ನೂ ಖಾಲಿಯಾಗದ ಬಸ್ಸಿನಿಂದ ಅದು ಹೇಗೋ ಎಗರಿಕೊಂಡೆ. ಇನ್ನೊಂದರ್ಥದಲ್ಲಿ ಬಾಗಿಲಿನತ್ತ ಮುಖ ಮಾಡಿ ನಿಂತ ನನ್ನನ್ನು ಜನರೇ ತಳ್ಳಿಕೊಂಡುಬಂದು ಕೆಳಗಿಳಿಸಿದರು. ನಮ್ನಮ್ಮ ಕೈ, ಕಾಲು, ತಲೆಗಳೆಲ್ಲ ನಮ್ನಮ್ಮ ಬಳಿಯೇ ಇದೆಯೆಂಬುದನ್ನು ಖಾತರಿ ಪಡಿಸಿಕೊಂಡ ನಂತರ ನಾನು-ಅಕ್ಕ ಒರಾಕಲ್ ನತ್ತ ಹೊರಟೆವು. ಎದುರು ಸಿಕ್ಕವರ ಬಳಿಯೆಲ್ಲ ಹೆಸರೊಂದು ಬಿಟ್ಟು ಮತ್ಯಾವ ವಿವರವೂ ಗೊತ್ತಿಲ್ಲದ ಒರಾಕಲ್ ನ ವಿಳಾಸ ಕೇಳುತ್ತಾ, ಗೊಂದಲದಲ್ಲಿ ಒಬ್ಬರು ಇನ್ನೊಬ್ಬರ ದಾರಿ ತಪ್ಪಿಸುತ್ತಾ, ಹೆಜ್ಜೆಗೊಂದು ಬಾರಿ ನಾವು ಹೋಗುತ್ತಿರುವ ಮಾರ್ಗವನ್ನು ಅನುಮಾನಿಸುತ್ತ ಅಂತೂ ಇಂತೂ ಒರಾಕಲ್ ನ ಅಂಗಳ ತಲುಪಿನಿಂತೆವು.
ತಲೆಯೆತ್ತಿದಷ್ಟೂ ಎತ್ತರಕ್ಕೆ ಮಹಡಿ ಮಹಡಿಯಾಗಿ ಬೆಳೆದು ನಿಂತಿದ್ದ ಆ ಕಟ್ಟಡವನ್ನು ನೋಡಿಯೇ ನನ್ನ ಅರ್ಧ ಜೀವ ಬಾಯಿಗೆ ಬಂತು. ನನ್ನಂತೆಯೇ ಇಂಟರ್ವ್ಯೂಗೆ ಬಂದಿದ್ದ ಹತ್ತಾರು ಯುವಕರು ನಮ್ಮ ಸುತ್ತ ಸೇರಿಕೊಂಡು ಪಕ್ಕಾ ಇಂಗ್ಲೀಷಿನಲ್ಲಿ ಪಿಸುಗುಟ್ಟುತ್ತ ನಿಂತಿದ್ದರು. ಅಕ್ಕನಂತೂ ಒಂದು ಕಣ್ಣಿನಲ್ಲಿ ಸುತ್ತ ನೆರೆದ ಇನ್ನಿತರ ಕ್ಯಾಂಡಿಡೇಟ್ ಗಳನ್ನೂ, ಮತ್ತೊಂದು ಕಣ್ಣಿನಲ್ಲಿ ಪೆಕರನಂತೆ ಬಾಯ್ಬಿಟ್ಟುಕೊಂಡು ಬಿಲ್ಡಿಂಗನ್ನೇ ನೋಡುತ್ತಾ ನಿಂತಿದ್ದ ನನ್ನನ್ನೂ ನೋಡುತ್ತಿದ್ದಳು- ಹುಟ್ಟುವಾಗಲೇ ಫಾರ್ಮಲ್ಸ್ ಹಾಕಿಕೊಂಡು ಹುಟ್ಟಿರುವ ಈ ಬುದ್ಧಿವಂತರನ್ನೆಲ್ಲ ಹಿಂದಿಕ್ಕಿ ಈ ನನ್ನ ತಮ್ಮ ಕೆಲಸ ಗಿಟ್ಟಿಸುವುದು ಹೌದಾ ಎಂಬಂತೆ. ನಾನೇನೂ ಅವಳ ಈ ಅನುಮಾನವನ್ನು ಸುಳ್ಳಾಗಿಸಲಿಲ್ಲ ಬಿಡಿ, ಅದು ಬೇರೆ ವಿಷಯ. ಆದರೆ ಅದಕ್ಕೂ ಮೊದಲು ನಾನು ತೋರಿಸಿದ ಓವರ್ ಕಾನ್ಫಿಡೆನ್ಸ್ ಇದೆಯಲ್ಲಾ? ಅದೇ ನಿಜವಾದ ತಮಾಷೆ.
ಲಿಫ್ಟ್ ನೊಳಗೆ ತೂರಿಕೊಂಡ ನಮ್ಮೆದುರಿಗೆ ಪಕ್ಕಾ ಹುಡುಗನಂತೆ ಫಾರ್ಮಲ್ಸ್ ತೊಟ್ಟಿದ್ದ ಹುಡುಗಿಯೊಬ್ಬಳು ಬಂದು ನಿಂತಳು. ಕೈಯಲ್ಲಿದ್ದ ಫೈಲನ್ನು ಎದೆಗವುಚಿಕೊಂಡು, ಇನ್ನೇನು ಸಾವಿರಾರು ಅಡಿ ಎತ್ತರದ ಬೆಟ್ಟದ ಮೇಲಿಂದ ನೆಗೆಯಲಿರುವವಳಂತೆ ಭಯಕ್ಕೊಳಗಾಗಿ ನಿಂತಿದ್ದ ಅವಳನ್ನು ನೋಡಿ ಅಕ್ಕನಿಗೆ ಏನನಿಸಿತೋ ಏನೋ, "ಯಾಕೆ ಅಷ್ಟೊಂದು ಟೆನ್ಷನ್ ಆಗಿದೀರ? ಇಂಟರ್ವ್ಯೂ ಭಯಾನಾ?" ಎಂದು ಕೇಳಿಯೇ ಬಿಟ್ಟಳು. ಆ ಹುಡುಗಿ ಹೌದೆಂಬಂತೆ ತಲೆಯಾಡಿಸಿ ಸಣ್ಣಗೆ ನಕ್ಕಳು. ಅವಳ ಹೆಸರು, ಊರು ಎಲ್ಲಾ ಕೇಳಿದ ಅಕ್ಕ ಕೊನೆಗೆ "ಹೆದರಬೇಡಿ. ಧೈರ್ಯವಾಗಿರಿ. ಅರಾಮಾಗಿ ಆನ್ಸರ್ ಮಾಡಿ" ಎಂದು ಧೈರ್ಯ ಹೇಳಿ ನನ್ನತ್ತ ಒಮ್ಮೆ ನೋಡಿದಳು. ನಾನು ಮಾತ್ರ ಸುತ್ತಲಿನ ಪರಿಸ್ಥಿತಿಗೂ ನನಗೂ ಸಂಬಂಧವೇ ಇಲ್ಲವೆಂಬಂತೆ, ಮದುವೆ ಮನೆಯೊಂದಕ್ಕೆ ಬಂದಿರುವ ಗಂಡಿನ ಕಡೆಯ ನೆಂಟನಂತೆ ಠೀವಿಯಿಂದ ನಿಂತುಕೊಂಡಿದ್ದೆ! ಬೆಂಗಳೂರಂಥಾ ಬೆಂಗಳೂರಲ್ಲಿ ಬೆಳದ ಹುಡುಗಿಯೇ ಹೀಗೆ ಟೆನ್ಷನ್ ಆಗಿ ನಡುಗುತ್ತಿರುವಾಗ ಅದೆಲ್ಲಿಯೋ ಇರುವ ಹಳ್ಳಿ ಮೂಲೆಯಿಂದ ಬಂದಿರುವ ನನ್ನ ಕಾನ್ಫಿಡೆನ್ಸ್, ಧೈರ್ಯಗಳನ್ನು ನೋಡಿ ಅವಳಿಗೆ ಬಹಳ ಆಶ್ಚರ್ಯವಾಗಿತ್ತು.
ಜೊತೆಗೆ ನನಗೂ.
*******************
ರಿಜಿಸ್ಟರ್ ಗಳಿಗೆ ಸಹಿ ಹಾಕಿ, ರೆಸ್ಯೂಮ್ ಕೊಟ್ಟು, ಕಿಲಕಿಲನೆ ನಡೆದಾಡುತ್ತಿರುವ ಹುಡುಗಿ-ಹುಡುಗರನ್ನು ನೋಡುತ್ತಾ ಒಂದಿಷ್ಟು ಹೊತ್ತು ಕಾದಮೇಲೆ 'ರಿಟನ್ ಟೆಸ್ಟ್' ಬರೆಯಲೆಂದು ನಮ್ಮನ್ನೆಲ್ಲ ಕೋಣೆಯೊಂದರೊಳಕ್ಕೆ ಕರೆದೊಯ್ದರು. ಆಗಷ್ಟೇ ಡಿಗ್ರಿ ಎಕ್ಸಾಮ್ ಬರೆದು ಬಂದಿದ್ದ ನನಗೆ ಆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದೇನೂ ದೊಡ್ಡ ವಿಷಯವಾಗಲಿಲ್ಲ. ಫಲಿತಾಂಶಕ್ಕಾಗಿ ಮತ್ತಷ್ಟು ಹೊತ್ತು ಕಾಯಿಸಿದರೂ ಕೊನೆಗೆ ಶುಭ ಸುದ್ದಿಯನ್ನೇ ಹೇಳಿ, ಊಟ ಮಾಡಿಕೊಂಡು ಬರುವಂತೆ ಸೂಚಿಸಿ ಕಳಿಸಿದರು. ಆಪರೇಷನ್ ಥಿಯೇಟರ್ ನ ಹೊರಗೆ ಕಾಯುವಂತೆ ಆತಂಕದಲ್ಲಿ ಕೂತಿದ್ದ ಅಕ್ಕನಿಗೆ ಈ ಶುಭಸುದ್ದಿ ತಿಳಿಸಿದ ನಂತರ ಇಬ್ಬರೂ ಊಟ ಮಾಡಲೆಂದು ಮೇಲ್ಮಹಡಿಯತ್ತ ಹೊರಟೆವು.
ಹುಡುಗರಂತೆ ಪ್ಯಾಂಟು-ಶರ್ಟು ತೊಟ್ಟ ಹುಡುಗಿಯರು, ಹುಡುಗಿಯರಂತೆ ಕಿವಿ ಚುಚ್ಚಿಸಿಕೊಂಡ ಹುಡುಗರು, ಅವರೆಲ್ಲ ನಡೆದಾಡುವ ಸ್ಟೈಲ್, ಕ್ಷಣಾರ್ಧದಲ್ಲಿ ಬೆರಳುಗಳನ್ನು ಕೀಬೋರ್ಡಿನ ತುಂಬಾ ಓಡಾಡಿಸುವ ಚಾಕಚಕ್ಯತೆ.. ಹೀಗೆ ಸುತ್ತಲಿನ ಪ್ರತಿಯೊಂದು ಸಂಗತಿಯನ್ನೂ ಮೊದಲ ಬಾರಿಗೆ ಕಣ್ತುಂಬಿಕೊಳ್ಳುತ್ತಿದ್ದ ನನಗೆ ಇದೂ ಸಹಾ ನಾವು ನಿಂತಿರುವ ಮಣ್ಣಿನ ಮೇಲೇ ಇರುವ ಒಂದು ಜಾಗ ಎಂದು ನಂಬುವುದಕ್ಕೆ ನಿಮಿಷಗಳೇ ಹಿಡಿದವು
"ಇನ್ನೊಂದು ಆರು ತಿಂಗಳು ಕಣೋ, ನೀನೂ ಹಿಂಗೇ ಆಗ್ತೀಯ ನೋಡ್ತಿರು"
ಅಕ್ಕ ಆಗಲೇ ಕನಸು ಕಾಣಲಾರಂಭಿಸಿಯಾಗಿತ್ತು. ನಾನೂ ಹೀಗೇ, ಒಂದು ಕಿವಿ ಚುಚ್ಚಿಸಿಕೊಂಡು, ಜೀನ್ಸು ಪ್ಯಾಂಟಿನ ಹುಡುಗಿಯೊಬ್ಬಳ ಜೊತೆ ಇಂಗ್ಲೀಷಿನಲ್ಲಿ ಹರಟುತ್ತಿರುವ ಚಿತ್ರವೊಂದು ನನ್ನ ಕಣ್ಮುಂದೆ ಹಾದುಹೋಯಿತು. ಊಟ ಮುಗಿಸಿ ಬಂದ ನನ್ನನ್ನು ಹದಿನಾರು ಜನರ ಗುಂಪೊಂದರಲ್ಲಿ ಸೇರಿಸಿ ಕೋಣೆಯೊಂದರೊಳಕ್ಕೆ ತುಂಬಿದರು. ಹೊರಜಗತ್ತಿನ ಗಾಳಿ-ಬೆಳಕಿನ ಸಣ್ಣ ಹನಿಯೂ ಇಲ್ಲದ ಆ ಹವಾನಿಯಂತ್ರಿತ ಕೋಣೆಯನ್ನು ನೋಡಿ ಯಾವುದೋ ಕಥೆಯಲ್ಲಿ ಓದಿದ್ದ ಹಿಟ್ಲರನ ಗ್ಯಾಸ್ ಚೇಂಬರ್ ನೆನಪಾಯಿತು. ಸುತ್ತಲಿದ್ದ ಎಲ್ಲರೂ ಜಗತ್ತಿನ ಗಂಭೀರತೆಯನ್ನೆಲ್ಲಾ ಅರ್ಧ ಗಂಟೆಯ ಮಟ್ಟಿಗೆ ಗುತ್ತಿಗೆ ಪಡೆದವರಂತೆ ಮುಖ ಬಿಗಿದುಕೊಂಡು ಕುಳಿತಿದ್ದರು. ಆಯತಾಕಾರದ ಟೇಬಲ್ ನ ಆಚೆ ಸಾಲಿನಲ್ಲಿ ನಾನು ಬೆಳಗ್ಗೆ ನೋಡಿದ್ದ ಹುಡುಗಿ, ನನಗೆ ಎದಿರಾಗಿ ಕುಳಿತಿದ್ದಳು. ಆಚೀಚೆ ನೋಡುತ್ತ ನನ್ನೆಡೆಗೊಮ್ಮೆ ನೋಡಿ ಪರಿಚಯದ ನಗೆ ನಕ್ಕಳು. ಕೆಲಸಕ್ಕೆ ಸೇರಿದ ಮೇಲೆ ಇವಳೇ ನನಗೆ ಮೊದಲ ಫ್ರೆಂಡಾಗಬಹುದೆಂದು ಕುಳಿತಲ್ಲೇ ಯೋಚಿಸಿದೆ.
"ಹಲೋ ಆಲ್. ಆಲ್ ಆಫ್ ಯು ಹ್ಯಾಡ್ ಯುವರ್ ಲಂಚ್?"
ನಗುತ್ತಾ ಒಳಬಂದ ಆಸಾಮಿ ನಮ್ಮೂರಿನ ಯಾರನ್ನೋ ಹೋಲುತ್ತಾನೆನ್ನಿಸಿತು. ಎಲ್ಲರೂ ನಾಲ್ಕೇ ನಾಲ್ಕು ಹಲ್ಲು ಬಿಟ್ಟು "ಹಲೋ ಸರ್" ಎಂದು ಮತ್ತೆ ಮುಖ ಬಿಗಿದುಕೊಂಡರು.
ಆಗ ಶುರುವಾಯಿತು ಗ್ರೂಪ್ ಡಿಸ್ಕಶನ್!
"ಭಾರತಕ್ಕೆ ಐಟಿಬಿಟಿ ಬೇಕೇ ಬೇಡವೇ? ಇದು ನಿಮ್ಮ ಈ ಹೊತ್ತಿನ ಡಿಸ್ಕಶನ್ ನ ವಿಷಯ."
ಅವನು ಅಷ್ಟಂದದ್ದೇ ತಡ, ಇಷ್ಟು ಹೊತ್ತು ಮುಖ ಬಿಮ್ಮನೆ ಮಾಡಿಕೊಂಡು ಕುಳಿತಿದ್ದವರೆಲ್ಲರೂ ಸಂಸತ್ತಿನಲ್ಲಿರುವ ರಾಜಕಾರಣಿಗಳ ಆತ್ಮಗಳನ್ನು ಮೈಮೇಲೆ ಬರಿಸಿಕೊಂಡವರಂತೆ ಮಾತನಾಡಲು ಶುರುವಿಟ್ಟುಕೊಂಡರು. ನನ್ನೆದುರೇ ಬೆಳಗ್ಗೆ ಫೈಲು ಅಪ್ಪಿಕೊಂಡು ಸಣ್ಣಗೆ ನಡುಗುತ್ತ ನಿಂತಿದ್ದ ಬೆಂಗಳೂರಿನ ಹುಡುಗಿ ಸಾಕ್ಷಾತ್ ಮಮತಾ ಬ್ಯಾನರ್ಜಿಯೂ ನಾಚುವಂತೆ ವಾದ ಮಾಡತೊಡಗಿದಳು. ಇವರನ್ನೇನಾದರೂ ಬಿಟ್ಟಿದ್ರೆ ಮೂರೇ ದಿನದಲ್ಲಿ ಭಾರತಕ್ಕೆ ಸ್ವಾತಂತ್ರ ತರುತ್ತಿದ್ದರೇನೋ ಎಂಬಂತೆ ಮಾತನಾಡಿದರು ಎಲ್ಲರೂ. ಒಬ್ಬರ ಮಾತು ಮುಗಿಯುವುದರೊಳಗೆ ಇನ್ನೊಬ್ಬರದ್ದು ಶುರುವಾಗುತ್ತಿತ್ತು. ಅದಾದಕೂಡಲೇ ಮತ್ತೊಬ್ಬರು.. ನಾನು ಮಾತ್ರ ಕಿವಿಗೆ ಹೆಡ್ ಫೋನ್ ತೊಟ್ಟ ಸದನದ ಸ್ಪೀಕರ್'ನಂತೆ ಬಾಯಿತೆರದುಕೊಂಡು ನೋಡುತ್ತಲೇ ಇದ್ದೆ.
ಭಾರತಕ್ಕೆ ಐಟಿ ಬೇಕು ಅಂದೋರಿಗೆ ಕೆಲಸ ಕೊಡ್ತಾರಾ ಅಥವಾ ಬೇಡ ಅಂದೋರಿಗಾ? ಐಟಿ ಕಂಪನಿಯ ಕೆಲಸಕ್ಕೇ ಬಂದುಕೊಂಡು ಐಟಿ ಇಂಡಸ್ಟ್ರಿಯೇ ಬೇಡ ಅನ್ನೋ ಮೂರ್ಖನಿಗೆ ಯಾರು ತಾನೇ ಕೆಲಸ ಕೊಡ್ತಾರೆ? ಅಥವಾ ಐಟಿ ಕೆಲಸಕ್ಕೇ ಬಂದು ಐಟಿಯೇ ಬೇಡ ಅನ್ನೋ ಭೂಪ ಅಂತ ಮೆಚ್ಚಿ ಕೆಲಸ ಕೊಟ್ಟು ಬಿಟ್ರೆ?
ಐಟಿ ಭಾರತಕ್ಕೆ ಬೇಕು ಅನ್ಲಾ, ಬೇಡ ಅನ್ಲಾ?
ಈ ಮಿಲಿಯನ್ ಡಾಲರ್ ಪ್ರೆಶ್ನೆಗೆ ನಾನು ಉತ್ತರ ಹುಡುಕಿಕೊಳ್ಳುವಷ್ಟರಲ್ಲಿ ದಿವ್ಯವಾಣಿಯೊಂದು ಮೊಳಗಿತು:
"ಡಿಸ್ಕಶನ್ ಈಸ್ ಓವರ್!"
ಡಿಸ್ಕಶನ್ ಕೋಣೆಯಿಂದ ನಗುತ್ತಾ ಒಬ್ಬನೇ ಹೊರಬಂದ ನನ್ನನ್ನು ಅಕ್ಕ ಉದ್ವೇಗದಿಂದ ಪ್ರಶ್ನಿಸಿದಳು:
"ಒಬ್ನೇ ಬರ್ತಿದೀಯಲ್ಲೋ? ಏನಾಯ್ತೋ? ನೀನೊಬ್ನೇ ಸೆಲೆಕ್ಟ್ ಆದ್ಯಾ?"
ನಾನು ಮತ್ತೂ ನಗುತ್ತಲೇ ಹೇಳಿದೆ:
"ನಡಿ. ಮನೆಗೆ ಹೋಗೋಣ. ನಾನೊಬ್ನೇ ರಿಜೆಕ್ಟ್ ಆದೆ!"
ಆಕಾಶವೆನ್ನುವ ಆಕಾಶ ಕಳಚಿ ಎದುರಿದ್ದ ಅಕ್ಕನ ತಲೆಯಮೇಲೆ ಧಡಾಲ್ಲನೆ ಬಿತ್ತು.
"ಅದನ್ನ ಇಷ್ಟೊಂದು ನಕ್ಕೊಂಡು ಹೇಳ್ತೀಯಲ್ಲೋ?!" ಅಕ್ಕ ಕುಸಿದಂತೆ ಕುಳಿತಳು.
ಕೆಲವೊಮ್ಮೆ ನಗೆಯೆನ್ನುವುದು ನಮ್ಮ ಅಂತರಾಳದಲ್ಲಿ ನಡೆಯುತ್ತಿರುವ ಹೊಯ್ದಾಟಗಳ ತದ್ವಿರುದ್ಧ ರೂಪವಾಗಿ, ಆದ ಮುಖಭಂಗವನ್ನು ಮರೆಮಾಚುವ ಮುಖವಾಡವಾಗಿ, ಕುಸಿದ ನಂಬಿಕೆಯ ಗಾಯವೊಂದನ್ನು ಕಾಣದಂತೆ ಮಾಡುವ ತೇಪೆಯಾಗಿ ಮುಖದ ಮೇಲೆ ಮೂಡುತ್ತದೆನ್ನುವುದು ನನಗೆ ಅರ್ಥವಾದದ್ದೇ ಆಗ.
-ವಿನಾಯಕ ಅರಳಸುರಳಿ.

ಸುಳ್ಳು ಮಾತುಗಳ ಕಿಡಿ...


ಅಂತೂ ಇಂತೂ ಚುನಾವಣೆ ಎಂಬ ಮಹಾಯುದ್ಧ ಮುಗಿದಿದೆ. ಕೆಲವರು ಗೆದ್ದು ಸೋತಿದ್ದಾರೆ. ಕೆಲವರು ಸೋತು ಗೆದ್ದಿದ್ದಾರೆ. ಇನ್ನು ಕೆಲವರು ಸೋತೆವೋ, ಗೆದ್ದೆವೋ ಎಂಬ ಗೊಂದಲದಲ್ಲೇ ಮುನ್ನಡೆಯಿಟ್ಟಿದ್ದಾರೆ. ಒಟ್ಟಾರೆಯಾಗಿ ಕವಿದ ಗೊಂದಲಗಳೆಲ್ಲ ತಾತ್ಕಾಲಿಕವಾಗಿ ಕರಗಿ ಸರ್ಕಾರವೊಂದು ರಚನೆಯಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳನ್ನು ಗಮನಿಸಿದ್ದೇ ಆದರೆ ರಾಜಕೀಯವೆನ್ನುವುದು ಹಿಂದೆಂದಿಗಿಂತ ಗಾಢವಾಗಿ ಯುವಜನತೆಯನ್ನು ತಟ್ಟಿರುವುದು ಗೋಚರವಾಗುತ್ತದೆ. ಅದು ಸ್ವಾಗತಾರ್ಹವೂ ಹೌದು. ಅದರಲ್ಲೂ ಉದ್ಯೋಗ, ಭಡ್ತಿ, ಸಂಬಳ, ಮನೆ, ಗೆಳೆಯರು, ಪ್ರವಾಸ, ಪಾರ್ಟಿ ಎಂದೆಲ್ಲ ಕೇವಲ ತಮ್ಮದೇ ವಯಕ್ತಿಕ ಚಿಂತೆಗಳೊಳಗೆ ಮುಳುಗಿಹೋಗಿದ್ದ ಸುಶಿಕ್ಷಿತ ಯುವಶಕ್ತಿ ದೇಶದ ರಾಜಕೀಯ ಭವಿಷ್ಯದ ಬಗ್ಗೆಯೂ ಕೊಂಚ ತಲೆ ಖರ್ಚು ಮಾಡಿ ನಾಲ್ಕಾರು ಕೂದಲು ಉದುರಿಸಿಕೊಳ್ಳುವಂತಾಗಿರುವುದು ಒಳ್ಳೆಯ ಲಕ್ಷಣವೂ ಹೌದು. ಆದರೆ ಅವರಲ್ಲಿ ಹೆಚ್ಚಿನವರು ತಂತಮ್ಮ ರಾಜಕೀಯ ಆಸಕ್ತಿಗಳನ್ನು ವ್ಯಕ್ತಪಡಿಸಿದ ರೀತಿಯಿದೆಯಲ್ಲ? ಅದೇ ಕೊಂಚ ಬೇಸರ ತಂದ ಸಂಗತಿ.
ಎದುರಾಳಿಯನ್ನು ಜರಿಯುವುದು, ಶತಾಯಗತಾಯ ಅವರ ಚಾರಿತ್ರ್ಯಹರಣ ಮಾಡುವುದು, ಆ ಮೂಲಕವೇ ತಾನು 'ಯೋಗ್ಯ' ಎನ್ನಿಸಿಕೊಳ್ಳಲು ಪ್ರಯತ್ನಿಸುವುದು ರಾಜಕಾರಣದ ಹುಟ್ಟುಲಕ್ಷಣ. ಈಗಂತೂ ಈ ಪ್ರಕ್ರಿಯೆ ನೂರಕ್ಕೆ ತೊಂಭತ್ತೆಂಟರಷ್ಟು ಮಿತಿಮೀರಿಯೇ ನಡೆಯುತ್ತಿದೆ. ಸುಳ್ಳು ಸುದ್ದಿಗಳಿಗೆ ರೆಕ್ಕೆ-ಪುಕ್ಕ ಕಟ್ಟಿ ಹಾರಿಬಿಡುವುದು ಸರ್ವೇಸಾಮಾನ್ಯ. ಆದು ಯಾವ ರಾಜಕಾರಣಿಗಾಗಲೀ, ರಾಜಕೀಯ ಪಕ್ಷಕ್ಕಾಗಲೀ ಹೊಸತಲ್ಲ. ಆದರೆ ಇಡೀ ನಮ್ಮ ನಾಗರಿಕ ಸಮಾಜವೇ ಈ ಅನಾಗರಿಕ ಕ್ರಮವನ್ನು ಹಿಂಬಾಲಿಸಿಕೊಂಡು ಹೋಯಿತಲ್ಲಾ? ಅದು ಚಿಂತಿಸಲೇಬೇಕಾದ ವಿಷಯ. ಪ್ರಜಾಪ್ರಭುತ್ವದೊಳಗೆ ಪ್ರಜೆಯಾಗಿ ಹುಟ್ಟಿದ ಮೇಲೆ ಯಾವುದೋ ಒಂದು ಪಕ್ಷವನ್ನು ಬೆಂಬಲಿಸುವುದು ಸಹಜ. ತಾನು ನಂಬಿದ ಸಿದ್ಧಾಂತವೇ ಶ್ರೇಷ್ಠವೆಂದು ವಾದಿಸುವುದು, ಎದುರಾಳಿಯ ಹುಳುಕು ಹಲ್ಲುಗಳ ಪಕ್ಕದಲ್ಲಿ ತಮ್ಮವರ ಅಚ್ಚಬಿಳಿಯ ದಂತಪಂಕ್ತಿಗಳನ್ನಿಟ್ಟು "ನೀವೇ ನೋಡಿ" ಎಂದು ನಾಲ್ಕು ಜನರಿಗೆ ತೋರಿಸುವುದು... ಇವೆಲ್ಲವೂ ಸರಿಯೇ. ಇಲ್ಲಿಯ ತನಕದ ಹಣ್ಣಿನಲ್ಲಿ ಯಾವ ಹುಳುವೂ ಇಲ್ಲ. ಆದರೆ ನಾವು ಬೆಂಬಲಿಸದವರು ಎಂಬ ಒಂದೇ ಒಂದು ಕಾರಣಕ್ಕೆ ಎದುರಾಳಿಯನ್ನು ಹೀನಾಮಾನವಾಗಿ ಆಡಿಕೊಳ್ಳುವುದಿದೆಯಲ್ಲಾ? ಅದೇಕೋ ಸರಿಯೆನ್ನಿಸುವುದಿಲ್ಲ. ಅದರಲ್ಲೂ ಸುಳ್ಳು ಎಂದು ಗೊತ್ತಿದ್ದೂ ಕೆಲವೊಂದು 'ಸೃಷ್ಟಿಸಲ್ಪಟ್ಟ' ವದಂತಿಗಳನ್ನು ಹಬ್ಬಿಸುವುದು, ಅಪಾಯಕಾರಿಯಾದ ದ್ವೇಷವನ್ನು ಸಮಾಜದ ಉದ್ದಗಲಕ್ಕೂ ಹರಡುವುದು, ಆದ ಅನಾಹುತಗಳನ್ನು ಜಾತ್ಯಾತೀತವಾಗಿ ಖಂಡಿಸುವ ಬದಲು ನೋವಿಗೂ-ಸಾಂತ್ವನಕ್ಕೂ ಒಂದು ವರ್ಗವನ್ನು ಸೃಷ್ಟಿಸುವುದು... ಇವೆಲ್ಲ ನಮ್ಮ ಕೈತೋಟದೊಳಕ್ಕೆ ನಾವೇ ಬಿಟ್ಟುಕೊಳ್ಳುವ ವಿಷ ಕ್ರಿಮಿಗಳಂಥವು. ಏಕೆಂದರೆ ಚುನಾವಣೆಯೇನೋ ನಾಲ್ಕೈದು ತಿಂಗಳಲ್ಲಿ ಮುಗಿದುಹೋಗುತ್ತದೆ. ಗೆದ್ದ ಅಭ್ಯರ್ಥಿ ಕೆಲ ಸಾವಿರಗಳನ್ನು ಕಾರ್ಯಕರ್ತರತ್ತ ಎಸೆದು, ಅಭಿಮಾನಿಗಳತ್ತ ಕೈ ಬೀಸುತ್ತಾ ಎತ್ತರದ, ಬೆಚ್ಚಗಿನ ಸಿಂಹಾಸನದತ್ತ ನಡೆದುಬಿಡುತ್ತಾನೆ. ಆದರೆ ಅವನ ಗೆಲುವಿಗಾಗಿ ದುಡಿದ, ಅವರ ಬಹುಪರಾಕುಗಳನ್ನೂ, ಎದುರಾಳಿಯ ಮುರ್ದಾಬಾದ್ ಗಳನ್ನೂ ಹಂಚಿ ಹರಡಿದ, ಅವನಿಗೋಸ್ಕರ ಆದಷ್ಟೂ ದೊಣ್ಣೆ ಹಿಡಿದು ಬಡಿದಾಡಿದ, ಸಾಧ್ಯವಾದಷ್ಟೂ ಮನೆ-ಮನಗಳನ್ನು ಮುರಿದ ಸಾಮಾನ್ಯ ಜನರಿದ್ದಾರಲ್ಲ? ಅವರು ಮರಳಿ ಬರಬೇಕಿರುವುದು ಮತ್ತದೇ ಸಾಮಾನ್ಯ ಜಗತ್ತಿಗೆ! ನಿನ್ನೆಯ ತನಕ ಅವರೇ ಹರಿಯ ಬಿಟ್ಟಿದ್ದ, ಯಾವಾಗ ಬೇಕಾದರೂ ವಿಷ ಕಕ್ಕಬಲ್ಲ, ಅದೇ ದ್ವೇಷದ ಮಿನ್ನಾಗರಗಳು ಚಾಪೆಯ ಕೆಳಗೆಲ್ಲೋ ಸರಿದಾಡುತ್ತಿರುವ ಕತ್ತಲ ಸಮಾಜಕ್ಕೆ. ತಮ್ಮದಲ್ಲದ ಸೋಲು - ಗೆಲುವುಗಳನ್ನು ಜನ ಬಹಳ ಬೇಗ ಮರೆತು ಹೋಗುತ್ತಾರೆ. ಆದರೆ ಆ ಒಂದು ಗೆಲುವಿಗಾಗಿ ಹರಡಿದ ದ್ವೇಷವಿದೆಯಲ್ಲ? ಅದು ಅಷ್ಟು ಸುಲಭಕ್ಕೆ ವಾಸಿಯಾಗುವುದಿಲ್ಲ.
ಈಗ ಯುವಜನರ ವಿಷಯಕ್ಕೆ ಮರಳಿ ಬರೋಣ. ಈ ಸಲದ ಚುನಾವಣೆ ಮತ್ತೆಲ್ಲ ಮಾಧ್ಯಮಗಳಿಗಿಂತ ಹೆಚ್ಚಾಗಿ ಪ್ರಸಾರವಾಗಿದ್ದು ಸಾಮಾಜಿಕ ಜಾಲತಾಣಗಳ ಮುಖೇನ. ಅತ್ಯಗಾಧ ಸಂಖ್ಯೆಯ ವೀಕ್ಷಕರಿರುವ, ಬೆರಳಂಚಿನ ಮೂಲಕವೇ ಅವರೆಲ್ಲರ ಮನಸ್ಸನ್ನು ತಲುಪಬಲ್ಲ, ಕವಡೆ ಕಾಸಿನ ಶ್ರಮವಿಲ್ಲದೇ ಅವರೆಲ್ಲರೂ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಮಾಡಬಲ್ಲ, ಅವರನ್ನು ಕೆರಳಿಸಿ, ಹೊರಳಿಸಬಲ್ಲ ಸುಲಭ ಮಾಧ್ಯಮವೆಂದರೆ ಅದು ಸಾಮಾಜಿಕ ಜಾಲತಾಣಗಳೇ ಎಂಬುದು ಪ್ರತಿಯೊಂದು ಪಕ್ಷವೂ ಅರಿತುಕೊಂಡಿರುವ ಸತ್ಯ. ಅಂತೆಯೇ ಅವರು ಅದನ್ನು ಬಳಸಿಕೊಂಡರು ಕೂಡಾ. ಆದರೆ ಹಿಂದಿನಿಂದಲೂ ಅವರು ನಡೆಸಿಕೊಂಡು ಬಂದಿರುವ ಈ ಮತ ಬೇಟೆಯ ಇಂದ್ರಜಾಲದಾಟಗಳಿಗೆ ಹಿಂದೆಂದಿಗಿಂತ ಸುಲಭವಾಗಿ ಮತ್ತು ಅಗಾಧವಾಗಿ ಸೋತವರು ನಮ್ಮ ಯುವಜನ. ಇದನ್ನು ಅವರ 'ಸೋಲು' ಎಂದು ಏಕೆ ಹೇಳುತ್ತಿದ್ದೇನೆಂದರೆ ತಟಸ್ಥವಾಗಿ ನಿಂತು ಸರಿ-ತಪ್ಪುಗಳ ಗುರುತಿಸಬಲ್ಲ ಬುದ್ಧಿಮತ್ತೆಯಿದ್ದೂ ಶತಮಾನದಿಂದ ನಡೆಯುತ್ತಾ ಬಂದಿರುವ ಕಣ್ಕಟ್ಟು ಪ್ರದರ್ಶನಗಳನ್ನು ಬಹಳ ಸುಲಭವಾಗಿ ಒಪ್ಪಿಕೊಂಡು, ತಾವೂ ಅದನ್ನೇ ಮುಂದುವರಿಸಿದರಲ್ಲಾ? ಅದು ನಿಜಕ್ಕೂ ಸೋಲೇ ಸರಿ!
ಇಲ್ಲಿ ನಾನು ಒಂದು ಪಕ್ಷವನ್ನು ಒಪ್ಪಿ ಅದಕ್ಕೆ ಮತ ಹಾಕುವುದರ ಬಗ್ಗೆ ಹೇಳುತ್ತಿಲ್ಲ. ಆದರೆ ತಾನು ನಂಬುವ ಪಕ್ಷದ ಕೀರ್ತಿ ಪತಾಕೆಯನ್ನು ಹಾರಾಡಿಸುವ ಭರದಲ್ಲಿ ನಾವು ನಡೆದುಕೊಂಡ ರೀತಿಯಿದೆಯಲ್ಲ? ಅದೇ ನಮ್ಮ ನಿಜವಾದ ಸೋಲು! ಚಿಕ್ಕದೊಂದು ಉದಾಹರಣೆ ಕೊಡುತ್ತೇನೆ: ಚುನಾವಣೆಗೆ ಸುಮಾರು ಒಂದು ತಿಂಗಳಿತ್ತೇನೋ‌‌. ಫೇಸ್ಬುಕ್ಕಿನಲ್ಲಿ ಸರ್ವಪಕ್ಷಗಳ ಬೆಂಬಲಿಗರೂ ಮನಸೋ ಇಚ್ಛೆ ಕಚ್ಚಾಡುತ್ತಿದ್ದರು. ಎಲ್ಲದರ ಮಧ್ಯೆ ಬಹುದೊಡ್ಡ ಹುದ್ದೆಯಲ್ಲಿರುವ ಮಾನ್ಯ ಮಂತ್ರಿಗಳೊಬ್ಬರು ನೀಡಿದರು ಎನ್ನಲಾದ ತೀರಾ ಕೆಳಮಟ್ಟದ ಹೇಳಿಕೆಯೊಂದನ್ನು ಸಾರುತ್ತಿರುವ ಫೋಟೋವೊಂದು ಯಾರೋ ಹಾಕಿದ್ದರು. ಮೊದಲ ನೋಟಕ್ಕೇ ಅದು ಸುಳ್ಳು ಸೃಷ್ಟಿಯೆಂಬುದು ಎಂತಹಾ ದಡ್ಡನಿಗಾದರೂ ಗೊತ್ತಾಗುವಂತಿತ್ತಾದರೂ ಅದನ್ನೇ ಮುಂದಿಟ್ಟುಕೊಂಡ ಜನ ಶಕ್ತಿ ಮೀರಿ ಬೈದಾಡಿಕೊಳ್ಳುತ್ತಿದ್ದರು. ಬಹು ಮುಖ್ಯವಾಗಿ ಅದು ಎರೆಡು ಪಂಗಡಗಳ ಭಾವನೆಗಳನ್ನು ಕೆರಳಿಸುವಂತಹಾ ಪೋಸ್ಟ್ ಆಗಿತ್ತು. ಇದೆಲ್ಲ ಸಾಮಾನ್ಯ ಸಂಗತಿಯಾದರೂ ಕಟ್ಟಕಡೆಗೆ ಎರಡು ಅಂಶಗಳು ಬಹಳ ಬೇಸರ ತರಿಸಿದವು. ಒಂದು: ತಾನು ಹಾಕುತ್ತಿರುವುದು ಸುಳ್ಳಾಂಬಟ್ಟೆ ಸಂದೇಶವೆಂಬುದು ಗೊತ್ತಿದ್ದೇ ಆ ವ್ಯಕ್ತಿ ಅದನ್ನು ಹಾಕಿದ್ದ. ಕೆಲವರು ಆ ಅಂಶವನ್ನೇ ಎತ್ತಿ ಕೇಳಿದಾಗ "ನಿಮ್ಮ ಪಕ್ಷದವರೂ ಇದನ್ನೇ ಮಾಡುತ್ತಿರುವಾಗ ನಾನೇಕೆ ಮಾಡಬಾರದು?" ಎಂಬ ಉದ್ಧಟತನದ ಉತ್ತರ ಕೊಟ್ಟ. ಎರೆಡು: ಹೀಗೆ ವಿತಂಡ ವಾದದ ಮೂಲಕ ಪ್ರಚಾರ ಪಡೆಯುತ್ತಿದ್ದವನು ಯಾವುದೋ ಪಕ್ಷದ ಕಾರ್ಯಕರ್ತನಾಗಿರದೆ ಪ್ರತಿಷ್ಠಿತ ಕಂಪನಿಯೊಂದರ ಪ್ರತಿಭಾನ್ವಿತ ಎಂಜಿನಿಯರಾಗಿದ್ದ!
ಹೌದು. ಎಂಜಿನಿಯರಾದರೂ, ಮತ್ತೊಬ್ಬನಾದರೂ ಎಲ್ಲರೂ ಮನುಷ್ಯರೇ. ಆದರೆ ಇಲ್ಲಿ ಅಷ್ಟೆಲ್ಲ ಓದಿಕೊಂಡೂ ಕುರುಡು ಅಭಿಮಾನಕ್ಕೋ, ಮತ್ತೊಂದಕ್ಕೋ ತನ್ನ ವಿವೇಚನೆಯನ್ನು ಸೇಲ್ ಮಾಡಿಕೊಂಡ ಈ ಸುಶಿಕ್ಷಿತನಿಗೂ, ಒಂದು ಬಾಟಲಿ ಸಾರಾಯಿಗೆ ತನ್ನ ಮತವನ್ನು ಮಾರಿಕೊಳ್ಳುವ ಒಬ್ಬ ಅಶಿಕ್ಷಿತನಿಗೂ ನಡುವೆ ಏನಾದರೂ ವ್ಯತ್ಯಾಸ ಉಳಿಯಿತಾ? ಇಬ್ಬರೂ ಮಾಡಿರುವುದೂ ಒಂದೇ ಅಚಾತರ್ಯವಲ್ಲವಾ? ಹಾಗೆ ನೋಡಿದರೆ ಆ ಗಾಂಪ ಕುಡಿದು, ಮತ ಹಾಕಿ ತನ್ನ ಪಾಡಿಗೆ ಹೋಗಿ ಯಾವುದೋ ರಸ್ತೆಯ ಮಧ್ಯದಲ್ಲೋ, ಮೋರಿಯ ಮಡಿಲಿನಲ್ಲೋ ಬಿದ್ದುಕೊಳ್ಳುತ್ತಾನೆ. ಆದರೆ ಈ ಪಂಡಿತ ತನಗೇರಿರುವ ಅಂಧ ನಶೆಯ ಜೊತೆ ಇನ್ನೂ ಹತ್ತು ಜನರ ನಡುವೆ ಬೆಂಕಿ ಹಚ್ಚುತ್ತಿದ್ದಾನೆ!
ಇದೊಂದು ಚಿಕ್ಕ ಉದಾಹರಣೆಯಷ್ಟೇ. ಹೀಗೆ, ಎಲುಬಿದ್ದೂ ಇಲ್ಲದಂತಿರುವ ಬೆರಳ ತುದಿಯಿಂದ ಸಾವಿರಾರು ನೀಚ ಸುದ್ದಿಗಳನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯದ ನಡುವೆ ಹರಿಯಬಿಟ್ಟವರು ಹಲವರಿದ್ದಾರೆ. ಅವುಗಳ ಸತ್ಯಾಸತ್ಯತೆಗಳ ತಿಳಿಯುವ ತಾಳ್ಮೆಯಿಲ್ಲದೆ, ಕೆಲವೊಮ್ಮೆ ತಿಳಿದೂ ತಿಳಿಯದಂತೆ ಶೇರ್, ಲೈಕ್ ಕಮೆಂಟ್ ಮಾಡುವ ಮೂಲಕ ನಾವೂ ಅದರ ಭಾಗವಾಗಿದ್ದೇವೆ‌. ಎದುರಾಳಿಯನ್ನು ವಾಚಾಮಗೋಚರ ನಿಂದಿಸುವುದೇ ದಿಟ್ಟತನದ ಪರಮಾವಧಿಯೆಂಬಂತೆ ವರ್ತಿಸಿದ್ದೇವೆ. ನಮ್ಮನ್ನು ನಾವೇ ನೇರ-ದಿಟ್ಟ-ನಿರಂತರರೆಂದು ಘೋಷಿಸಿಕೊಂಡು ಹೆಗಲು ತಟ್ಟಿಕೊಂಡಿದ್ದೇವೆ. ಎದುರಾಳಿ ಹೇಳಿದ ಒಂದು ಮಾತು ಕಿವಿಗೆ ಬಿದ್ದರೆ ಸಾಕು, ಅವನ ವಂಶವೃಕ್ಷಕ್ಕೇ ಕೈ ಹಾಕಿ ಅಲ್ಲಡಿಸಿಬಿಡುತ್ತೇವೆ. ಅವನು ಏನು ಹೇಳುತ್ತಿದ್ದಾನೆ? ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದಾನೆ? ಅಲ್ಲಿ ಸತ್ಯವಿದೆಯಾ? ಅದರಿಂದೇನಾದರೂ ಕಲಿಯುವುದಿದೆಯಾ? ಊಹೂಂ... ಅಷ್ಟು ಮಾತ್ರದ ತಾಳ್ಮೆ ನಮಗ್ಯಾರಿಗೂ ಇಲ್ಲವೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯನ್ನೂ ಈಗಾಗಲೇ ನಮ್ಮ (ಮೂಢ)ನಂಬಿಕೆಗೆ ತಕ್ಕಂತೆ ಒಂದು ಪಕ್ಷದ ಪ್ರಚಾರಕನೆಂದು ನಮಗೆ ನಾವೇ ನಿರ್ಧರಿಸಿಕೊಂಡಿದ್ದೇವೆ. ಅವನ ಪ್ರತಿಯೊಂದು ಕ್ರಮವನ್ನೂ ಹಳಿಯಲು ತಯಾರಾಗಿಯೇ ನಿಂತಿರುತ್ತೇವೆ. ಸಾಲದೆಂಬಂತೆ ನಾವು ಬೆಂಬಲಿಸುವವರ ವಿರುದ್ಧ ಒಂದೇ ಒಂದು ಹೆಜ್ಜೆಯಿಟ್ಟ ಕಾರಣಕ್ಕೇ ಹೀನಾತಿಹೀನ ಮಾತುಗಳನ್ನಾಡಿ ತಣಿಯುತ್ತೇವೆ. ಪರಿಸ್ಥಿತಿಯ, ವಾಸ್ತವದ ನಿಜವಾದ ಚಿತ್ರ ನಮ್ಮ ಕಣ್ಣುಗಳನ್ನು ತಲುಪುವುದೇ ಇಲ್ಲ. ಇದು ಅತಿಯಾದ ಬುದ್ಧಿವಂತಿಕೆ, ಅಭಿಮಾನ ಹಾಗೂ ಅಹಂನ ಪರಾಕಾಷ್ಠೆಗಳು ತಂದಿಟ್ಟಿರುವ ವಿವೇಚನಾಹೀನತೆಯಲ್ಲದೆ ಮತ್ತೇನಲ್ಲ. ನಾವಾಡುವ ಅವಾಚ್ಯಗಳು ನಮ್ಮ ವ್ಯಕ್ತಿತ್ವವನ್ನು ತಗ್ಗಿಸುತ್ತವೇ ಹೊರತು ಎದುರಾಳಿಯನ್ನಲ್ಲ.
ಈ ಎಲ್ಲ ಆವೇಶಗಳಾಚೆ ನಾವು ಮರೆತಿರುವ ಸಂಗತಿಯೆಂದರೆ, ಯಾವ ಪ್ರಚಾರ, ಪ್ರಹಸನ, ವಿಕಾಸ, ಕ್ರಾಂತಿಗಳಾದರೂ ಅವು ನಡೆಯಬೇಕಿರುವುದು ಸಾವಿರಾರು ಜನರಿರುವ ಈ ಸಮಾಜದೊಳಗೆಯೇ. ಇಲ್ಲಿ ನಾವು ಹಚ್ಚುವ ಸಣ್ಣ ಕಿಡಿಗೂ ಹೊತ್ತಿ ಉರಿಯಬಲ್ಲ ನೂರು ತರಗೆಲೆಗಳಿವೆ. ಇಂದು ಯಾರದೋ ತಾತ್ಕಾಲಿಕ ಗೆಲುವಿಗಾಗಿ ನಾವು ಅನುಸರಿಸುತ್ತಿರುವ ಕೀಳು ಹಾದಿಗಳು, ಹರಡುತ್ತಿರುವ ಮುಳ್ಳುಗಳು ಮುಂದೊಂದು ದಿನ ಮುಳ್ಳು ಹಾಗು ಮುಳ್ಳು ಮಾತ್ರವೇ ಬೆಳೆಯಬಲ್ಲ ಜಾಲಿಯ ಮರವಾಗಲಿದೆಯೆಂಬ ಸತ್ಯ ನಮಗೆಲ್ಲ ಅರಿವಾಗಬೇಕಿದೆ. ಎದುರಾಳಿಯನ್ನು ಕೆರಳಿಸುವ ಮೂಲಕ ನಾವು ಹೊಂದಲೆತ್ನಿಸುತ್ತಿರುವ ವಿಕೃತ ಆನಂದ ಕೊನೆಯಾಗಬೇಕಿದೆ. ದ್ವೇಷ ಮತ್ತೆ ಮತ್ತೆ ತನ್ನನ್ನು ಹೊಂದುವಂತೆ 'ಟೆಮ್ಟ್' ಮಾಡುವ ನಿಕೋಟಿನ್ ನಂತೆ. ಅದನ್ನು ದೂರವಿಡುವುದೊಂದೇ ಅದರಿಂದ ಪಾರಾಗಲು ಇರುವ ದಾರಿ.
-ವಿನಾಯಕ ಅರಳಸುರಳಿ.
(ನಿಮ್ಮೆಲ್ಲರ ಮಾನಸ ಜುಲೈ 2018ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ.)

ಮೊಟ್ಟ ಮೊದಲ ಕಿರುಚಿತ್ರ..

"ಅನಾಥವಾಗಬೇಕಿರುವುದು ಅನಾಥಾಶ್ರಮ/ವೃದ್ಧಾಶ್ರಮಗಳೇ ಹೊರತು ಅಪ್ಪ-ಅಮ್ಮ ಅಲ್ಲ!"
ಗೆಳೆಯ Venu Hasrali ಅವರು ಈ ಥೀಮ್ ಅನ್ನು ಹೇಳಿದಾಗ ನಿಜಕ್ಕೂ ವಾಹ್ ಎನ್ನಿಸಿತು. ಏಕಕಾಲಕ್ಕೆ ಕಿರುತೆರೆ, ಹಿರಿತೆರೆ ಹಾಗೂ ಮೊಬೈಲ್ ತೆರೆ ಮೂರರ ಬಗ್ಗೆಯೂ ಯೋಚಿಸುವ ಹಾಗೂ ಮೂರರಲ್ಲೂ ಉಳಿಯುವಂತಹಾದ್ದೇನನ್ನೋ ಮಾಡಬೇಕೆಂದು ಶ್ರಮಪಡುತ್ತಿರುವ ಗೆಳೆಯ ವೇಣು ಹಸ್ರಾಳಿ ಅವರ ನಿರ್ದೇಶನದ ಮೊಟ್ಟ ಮೊದಲ ಕಿರುಚಿತ್ರ #ಆಶೀರ್ವಾದ ಇಂದು ಬಿಡುಗಡೆಯಾಗಿದೆ. ಹಲವಾರು ಚೌಕಟ್ಟುಗಳಾಚೆಗೂ ಅವರ, ನಮ್ಮ ನಿರೀಕ್ಷೆಯನ್ನು ಮೀರಿ ಸುಂದರವಾಗಿ ಮೂಡಿಬಂದಿದೆ. ನಾನು ಬರೆದ ನಾಲ್ಕು ಸಾಲುಗಳ ಸಾಹಿತ್ಯ ಸಹಾ ರಾಮಸೇನೆಯ ನಡುವಿನ ಅಳಿಲಿನಂತೆ ನಡುವೆ ಸೇರಿಕೊಂಡಿದೆ.
ಹೊಸತಂಡ... ಹಳೆಯದೇ ಪ್ರೀತಿಯನ್ನು ಹೊಸ ದೃಶ್ಯವಾಗಿಸುವ ಹೊಸ ಪ್ರಯತ್ನ... ಒಮ್ಮೆ ನೋಡಿ... ಅಭಿಪ್ರಾಯ ತಿಳಿಸಿ.. ಇಷ್ಟವಾದಲ್ಲಿ ಶೇರ್ ಮಾಡಿ...

ಏಕೋ ಕಾಣೆ ಕಡಲೇ...


ಕೋ ಕಾಣೆ ಕಡಲೇ
ನೀನೆಂದರೆ ನನಗೆ ಬಲು ಪ್ರೀತಿ;
ನಿನ್ನ ತೀರದಿ ತಾನೇ ನನ್ನವಳ ಊರು?
ನಿನ್ನ ಅಲೆಯಲೆಯೂ ಅವಳದೇ ರೀತಿ.
ನಿನಗೆ ನಾನು ಎಷ್ಟೊಂದು ದೂರ
ನನಗೇಕೋ ನೀ ತುಂಬ ಸನಿಹ;
ಅಳಿಸೋಕೆ ಮುನ್ನ ಓದೊಮ್ಮೆ ಅಲೆಯೇ
ಮರಳಲ್ಲಿ ನಾ ಬರೆದ ಪ್ರೇಮದ ಬರಹ.
ಹೇಳು ಮರಳೇ ಇದುವೇ ತಾನೇ
ಅವಳು ಆಡಿಬೆಳೆದ ಜಾಗ?
ಅವಳ ಕಾಲ್ತೊಳೆದ ನವಿರಾದ ಅಲೆಯೇ
ಮತ್ತೊಮ್ಮೆ ಬರುವೆಯ ದಡಕೆ ಈಗ?
ಕಾಯುತ್ತ ನಿಂತ ಈ ನನ್ನ ಹೆಜ್ಜೆ
ದಯಮಾಡಿ ಅಳಿಸದಿರು ಅಲೆಯೇ;
ಮುಂದೊಮ್ಮೆ ಅವಳು ಬಂದಾಗ ಇಲ್ಲಿ
ಬೆರೆಯುವುದೋ ಏನೋ ಹೆಜ್ಜೆಗೆ ಹೆಜ್ಜೆ.
ಅವಳ ಮನವೂ ನಿನ್ನಂತೇ ಕಡಲೇ
ತಿಳಿಯೋಕೆ ಆಗದ ಆಳ;
ಅರಿಯಲಿ ಹೇಗೆ ಮೇಲಷ್ಟೇ ತೇಲಿ
ಒಳಗೊಳಗೇ ಸುಳಿಯೊಳಗೆ ಮುಳುಗಿದವಳ?
ಏಕೋ ಕಾಣೆ ಕಡಲೇ
ಅವಳೆಂದರೆ ನನಗೆ ನಿನ್ನಂತೇ;
ನೂರೊಂದು ಬಾರಿ ಎದೆತನಕ ಬಂದು
ದಾಟದೆಯೇ ಮರಳಿದಳು ದಡದ ರೇಖೆ.
30/5/2017

ಬಾಹುಬಲಿಗೆ..


ಪಾದಕೆರಗುವುದು
ಅಷ್ಟು ಸುಲಭವಲ್ಲ;
ನಮಸ್ಕಾರಗಳೆಲ್ಲಾ
'ಸಾಷ್ಟಾಂಗ'ವಾಗುವುದಿಲ್ಲ.
ಎಲ್ಲ ಕಳಚಿಟ್ಟ ಮೇಲೂ
ಉಳಿಯುವ 'ನಾನು'
ಅಷ್ಟು ಸುಲಭಕ್ಕೆ ಬಾಗುವುದಿಲ್ಲ‌;
ನೀ ಬಿಚ್ಚಿಟ್ಟ ಆ
ಕಟ್ಟ ಕಡೆಯ ವಸ್ತ್ರವ ಸುತ್ತಿಕೊಳ್ಳುವುದ
ನಾನಿನ್ನೂ ಬಿಟ್ಟಿಲ್ಲ.
ಈ ಘಂಟೆ, ಘಮಲುಗಳು
ನಿನ್ನೆತ್ತರವ ತಲುಪುವುದಿಲ್ಲ;
ಈ ಮಸ್ತಕದ ಹೊರೆಯ
ನಿನ್ನ ಪಾದಕೊರಗಿಸದ ಹೊರತು
ನನಗೆ ನೀ ಕಾಣುವುದಿಲ್ಲ!
ಬಾಗಿರುವೆನು ನಾನೀಗ
ಏಳುವುದಕ್ಕಾಗಿ;
ಬಾನಿಗೇ ಬೆಳೆದು ನಿಂತ
ನಿನ್ನೀ ತಳಪಾಯದ
ವಿಸ್ತಾರವ ಅರಿಯುವುದಕ್ಕಾಗಿ..
(ವಿಜಯಕರ್ನಾಟಕದ ಜುಲೈ15,2019ರ ಲವಲvkಯಲ್ಲಿ ಪ್ರಕಟಿತ.)
-ವಿನಾಯಕ ಅರಳಸುರಳಿ.

ವಂದಲಗನ ಸೊಪ್ಪು ಮರೀಬೇಡೀ..


"ಏನಾದ್ರೂ ಕಳ್ಕೊಂಡ್ರಾ ಅಜ್ಜಿ?"
ಒಂದು ಕೈಯ್ಯಲ್ಲಿ ಕೈಚೀಲವನ್ನು ಹಿಡಿದು, ಇನ್ನೊಂದರಿಂದ ಬಗಲಲ್ಲಿರುವ ವ್ಯಾನಿಟಿ ಬ್ಯಾಗ್ ನೊಳಗೆ ತಡಕಾಡುತ್ತಿದ್ದ ಅಜ್ಜಿ ತಲೆಯೆತ್ತಿ ನೋಡಿದಳು. ಎದುರುಗಡೆ ಹಲ್ಕಿರಿಯುತ್ತಾ ನಿಂತಿದ್ದಾನೆ ಮುದುಕ! ತನಗಿಂತ ವಯಸ್ಸಾದವನು ತನ್ನನ್ನು 'ಅಜ್ಜಿ' ಎಂದದ್ದು ಆಕೆಗೆ ರೇಗಿಹೋಯಿತು. "ಅದೆಲ್ಲಾ ನಿಮಗ್ಯಾಕೆ? ಸುಮ್ಮನೆ ನಿಮ್ಮೆದೆಷ್ಟೋ ಅಷ್ಟು ನೋಡಿಕೊಂಡು ಮುಂದೆ ಹೋಗಿ" ಎಂದು ಮುದುರುಬಿದ್ದ ಕಣ್ಣುಗಳನ್ನು ಕೆಂಪಗೆಮಾಡುತ್ತಾ ಬಿರುಸಾಗಿ ನುಡಿದಳು.
"ಮುಂದೆ ಹೋಗು ಅನ್ನೋದಕ್ಕೆ ನಾನೇನು ಭಿಕ್ಷೆ ಕೇಳಿದೆನಾ? ಪರಿಚಯದ ಅಜ್ಜಿ,
ಪಾಪ ಏನೋ ಹುಡುಕುತ್ತಿದ್ದಾರಲ್ಲಾ ಅಂತ ಕೇಳಿದೆ ಅಷ್ಟೇ" ವೃದ್ಧನ ಮುಖದಲ್ಲಿನ ಮಂದಹಾಸ ಹಾಗೇ ಇತ್ತು.
"ಏನು ಪರಿಚಯ? ನಾನಂತೂ ಇದೇ ಮೊದಲು ನಿಮ್ಮನ್ನ ನೋಡ್ತಿರೋದು. ಇನ್ನೆಲ್ಲಿಂದ ಬರ್ಬೇಕು ಪರಿಚಯ" ಮತ್ತೆ ಮತ್ತೆ ತನ್ನನ್ನು ಅಜ್ಜಿ ಎನ್ನುವ ಅಜ್ಜನ ಮೇಲೆ ಆಕೆಗಿನ್ನೂ ಕೋಪ ಹೋಗಿಲ್ಲ.
"ನೀವು ನೋಡದೇ ಇರಬಹುದು. ಆದರೆ ನಾನು ನೋಡಿದೀನಲ್ಲಾ! ನಿಮ್ಮ ಮನೆಯ ಹತ್ತಿರಾನೇ ನಾನೂ ಇರೋದು."
"ಅಷ್ಟಕ್ಕೇ ಹೀಗೆ ಮದ್ಯ ದಾರಿಯಲ್ಲಿ ಅಡ್ಡಹಾಕಿ ಮಾತನಾಡಿಸಬಹುದೂ ಅಂದುಕೊಂಡ್ರಾ? ಇಷ್ಟು ವಯಸ್ಸಾಗಿದೆ, ಸಭ್ಯತೆ ಬೇಡ್ವಾ?"
"ನೀವು ಏನು ಹುಡುಕ್ತಿದೀರಾಂತ ನಂಗೆ ಗೊತ್ತು ಅಜ್ಜೀ" ಅವಳ ಕೋಪವನ್ನ ಗಮನಿಸಿಯೇ ಇಲ್ಲದಂತೆ ನಗುತ್ತಾ ನುಡಿದರು.
"ಏನು?"
"ನಿಮ್ಮ ಮನೆಯ ವಿಳಾಸವಿರುವ ಚೀಟಿಯನ್ನ ತಾನೇ?"
"ಅದು..... ನಿಮಗ್ಹೇಗೆ ಗೊತ್ತಾಯ್ತು?" ಅಜ್ಜಿಗೆ ಪರಮಾಶ್ಚರ್ಯ.
"ನನಗೆಲ್ಲಾ ಗೊತ್ತು. ನಾನೂ ಅತ್ತಕಡೆಯೇ ಹೊರಟಿದ್ದೇನೆ. ಬನ್ನಿ ನಿಮ್ಮನ್ನೂ ಮನೆ ತಲುಪಿಸ್ತೇನೆ" ಅಜ್ಜನ ಮುಖದಲ್ಲಿ ಗೆಲುವಿನ ಮಂದಹಾಸ.
"ನಾನ್ಯಾಕೆ ನಿಮ್ಮ ಜೊತೆ ಬರ್ಲಿ? ನನಗೆ ನಮ್ಮ ಮನೆಯ ದಾರಿ ಗೊತ್ತಿದೆ" ಅಜ್ಜಿಯ ಬಿಂಕದ ನುಡಿ.
"ಹಾಗಾದರೆ ಮತ್ಯಾಕೆ ವಿಳಾಸದ ಚೀಟಿ ಹುಡುಕ್ತಿದ್ರಿ?"
".................."
"ಪರವಾಗಿಲ್ಲ ಬನ್ನಿ. ನೀವು ಮನೇ ದಾರಿ ಮರೆತ್ರೀಂತ ನಿಮ್ಮ ಯಜಮಾನ್ರಿಗೆ ಹೇಳಲ್ಲ ನಾನು"
"ಅವರು ನಿಮಗೆ ಗೊತ್ತಾ?" ಅಜ್ಜಿಗೆ ಮತ್ತೊಮ್ಮೆ ಅಚ್ಚರಿ.
"ಬುದ್ಧಿ ಬಂದಾಗಿಂದಾನೂ ಗೊತ್ತು"
"ಆದ್ರೆ ನಾನ್ಯಾವತ್ತೂ ನಿಮ್ಮನ್ನು ನೋಡೇ ಇಲ್ವಲ್ಲಾ?"
"ನಾನು ನೋಡಿದೀನಲ್ಲ"
ಹೆಜ್ಜೆಗಳು ಬೆರೆತು ಮುನ್ನಡೆದವು.
"ಅಲ್ಲಾ... ಮನೆ ದಾರಿ ಮರೆಯೋರು ಹೊರಗ್ಯಾಕೆ ಬರ್ತೀರ?" ಅಜ್ಜನ ಕುಹುಕ.
"ನಾನೇನು ದಾರಿ ಮರ್ತಿಲ್ಲ. ಈ ಬೆಂಗ್ಳೂರಲ್ಲಿ ಎಲ್ಲಾ ಬೀದಿಗಳು ಒಂದೇ ಥರಾ ಕಾಣ್ತಾವೆ. ಅದ್ಕೆ ಸ್ವಲ್ಪ ಗೊಂದಲ ಅಷ್ಟೇ"
ಸಮರ್ಥಿಸಿಕೊಳ್ಳುತ್ತಾ ಮುಂದುವರಿಸಿದಳು:
"ನಾಳೆಯಿಂದ ಬೇಸಿಗೆ ರಜೆ ಆರಂಭ. ನನ್ನ ಮೊಮ್ಮಗ ಬರ್ತಿದಾನೆ ಅಮೆರಿಕಾದಿಂದ. ಅವನಿಗೆ ದೂದ್ ಪೇಡ ಅಂದ್ರೆ ತುಂಬಾ ಇಷ್ಟ. ಆದ್ರೆ ಅವನಮ್ಮ ಇದೆಲ್ಲಾ ತಿನ್ನೋಕೆ ಬಿಡಲ್ಲ. ಅವಳಿಲ್ಲದಾಗ ನನ್ಹತ್ರ ಗಲಾಟೆ ಮಾಡ್ತಾನೆ ಪೇಡ ಕೊಡಿಸು ಅಂತ. ಅದಕ್ಕೆ ಈಗಲೇ ತಗೊಂಡೆ, ಅವರು ಬಂದ್ಮೇಲೆ ಪುರ್ಸೊತ್ತಾಗಲ್ಲ ಅಂತ."
"ಓಹೋ ಹೌದಾ....."
"ಸಣ್ಣವನಿದ್ದಾಗ ನನ್ನ ಮಗನಿಗೂ ಹಾಗೇ, ಪೇಡ ಅಂದ್ರೆ ಪ್ರಾಣ. ಆಗೆಲ್ಲಾ ನಾನು ಮನೆಲೇ ಮಾಡಿಕೊಡ್ತಿದ್ದೆ. ಈಗ ವಯಸ್ಸಾಯ್ತು ನೋಡಿ. ಮಾಡೋಕಾಗಲ್ಲ"
"ಹಾಂ. ನಿಜ ನಿಜ. ಆದ್ರೂ ಅದಕ್ಕೆ ನೀವೇ ಬರ್ಬೇಕ? ಎಷ್ಟೊಂದು ವಾಹನಗಳು ಓಡಾಡೋ ರಸ್ತೆ ಇದು"
"ಇನ್ಯಾರಿದಾರೆ ಹೇಳಿ? ನನ್ನ ಹೆಂಡತಿ ಮಕ್ಕಳಷ್ಟೇ ನನ್ನ ಪ್ರಪಂಚ ಅಂತ ಮಗ ದೂರ ಹೋದ. ಇರೋ ಒಂದು ಕಿರಾಣಿ ಅಂಗಡಿಯೇ ನನ್ನ ಜಗತ್ತು ಎನ್ನುತ್ತಾ ಗಂಡ ಹೊರಗೆ ಹೋಗ್ತಾರೆ. ಅಂದ್ಮೇಲೆ ಇವರೆಲ್ಲರೂ ನನ್ನ ಪ್ರಪಂಚ ಅಂದುಕೊಂಡಿರುವ ನಾನೇ ಈ ಎಲ್ಲಾ ಕೆಲಸ ಮಾಡಬೇಕಲ್ವಾ.....?"
ಮುದುಕನ ಮುಖದಲ್ಲಿ ಕಳವಳಿಕೆಯೊಂದು ಹಾದು ಹೋಯಿತು.
"ಅಂದಹಾಗೇ ನಿಮ್ಮನೆಯಲ್ಲಿ ಈ ವಂದಲಗ ಏನಾದ್ರೂ ಬೆಳೆದಿದೀರ? ಇದ್ದರೆ ಇವರ ಹತ್ರ ಕೊಟ್ಟು ಕಳಿಸ್ತೀರ? ಅದರ ಲೇಹ ಮಾಡಿ ಕಳಿಸ್ಬೇಕು. ದಿನಾ ಬೆಳಗ್ಗೆ ತಿಂದ್ರೆ ಮೊಮ್ಮಗನ ನೆನಪಿನ ಶಕ್ತಿ ಹೆಚ್ಚಾಗುತ್ತೆ. ಪಾಪ, ಚಿಕ್ಕ ವಯಸ್ಸಿಗೇ ಅದೆಷ್ಟೆಲ್ಲಾ ಕಲೀಬೇಕು ಅವ್ನು ."
"ಹೂಂ, ಇರ್ಬೇಕು ನೋಡ್ತೀನಿ"
ಮನೆ ಬಂತು. ಬಾಗಿಲು ತೆರೆದ ಕೆಲಸದವಳು ವೃದ್ಧನನ್ನು ನೋಡಿ ತಲೆತಗ್ಗಿಸಿ ನಿಂತಳು. ಒಳಗೆ ಬಂದೊಡನೆಯೇ ಕೈಲಿದ್ದ ಪೇಡದ ಪೊಟ್ಟಣವನ್ನು ಫ್ರಿಜ್ಜಿನಲ್ಲಿಡಲೆಂದು ಅಡುಗೆ ಕೋಣೆಗೆ ನಡೆದವಳನ್ನೇ ನೋಡುತ್ತಾ ಅಜ್ಜ ಜೇಬಿನಿಂದ ಮೊಬೈಲ್ ತೆಗೆದು ಕಿವಿಗಿಟ್ಟುಕೊಂಡರು. "ಹಲೋ ಮಾಣಿ... ಹುಡುಕೋದು ಬೇಡ, ಅನುಸೂಯ ಸಿಕ್ಕಿದ್ಲು... ಮತ್ತೆ ಸ್ವೀಟ್ಸ್ ಅಂಗಡಿಗೆ ಹೋಗಿದ್ಲು, ಮೊಮ್ಮಗನಿಗೆ ಪೇಡ ತರ್ತೀನಿ ಅಂತ. ಮನೇಗೆ ಕರ್ಕೊಂಡ್ಬಂದೆ. ಕೆಲಸವಳು ಇದಾಳೆ ಜೊತೆಗೆ. ನೀನು ಅಂಗ್ಡೀಗೆ ಬಾ. ನಾನೂ ಹೊರ್ಟಿದೀನಿ....."
ಮೊಬೈಲ್ ಜೇಬಿಗಿಳಿಸಸಿದವರು ಅಲ್ಲೇ ನಿಂತಿದ್ದ ಕೆಲಸದವಳಿಗೆ "ಜೋಪಾನ. ಮತ್ತೆ ಆಚೆ ಹೋಗದಂಗೆ ನೋಡ್ಕೋ" ಎಂದು ಗಡುಸುದನಿಯಲ್ಲಿ ತಾಕೀತು ಮಾಡಿದರು. ಅಷ್ಟರಲ್ಲಿ ಅವರ ನೋಟ ಗೋಡೆಯತ್ತ ಸರಿಯಿತು....
ಅಲ್ಲಿ ತನ್ನ ಸುತ್ತಲೂ ಗಂಧದ ಹಾರ ಹಾಕಿಸಿಕೊಂಡು ತಣ್ಣಗೆ ನಗುತ್ತಾ ನಿಂತಿತ್ತು, ವರುಷದ ಕೆಳಗೆ ಅಪಘಾತಕ್ಕೀಡಾದ ಅವರ ಮಗ, ಸೊಸೆ ಹಾಗೂ ಮೊಮ್ಮಗನ ಫೋಟೋ....
ಅದನ್ನೇ ಅರೆಕ್ಷಣ ದಿಟ್ಟಿಸಿ ನಿಟ್ಟುಸಿರಿಟ್ಟು ಅಡಿಗೆ ಮನೆಯತ್ತ ಮತ್ತೊಮ್ಮೆ ತುಂಬುಗಣ್ಣಿಂದ ನೋಡಿದರು. ಭಾರವಾದ ಹೆಜ್ಜೆಗಳನ್ನಿಡುತ್ತಾ ಹೊರಗೆ ನಡೆದವರಿಗೆ ಬಾಗಿಲಿನಿಂದ ಹೇಳಿತು ಆ ದನಿ..
"ವಂದಲಗನ ಸೊಪ್ಪು ಮರೀಬೇಡೀ....."
(ವಿಶ್ವವಾಣಿಯಲ್ಲಿ ಪ್ರಕಟವಾದ ನನ್ನ ಕಿರು ಕಥೆ.)

ಇವತ್ತು ಸ್ನೇಹಿತರ ದಿನ..

ಇವತ್ತು ಸ್ನೇಹಿತರ ದಿನ. ಬೆಳಗ್ಗೆ ಎದ್ದ ಹಾಸಿಗೆಯಲ್ಲೇ ವಾಟ್ಸಾಪ್ ತೆರೆದು ಚಂದದ ಪೋಸ್ಟೊಂದನ್ನು ಸೆಲೆಕ್ಟ್ ಮಾಡಿ ಕಾಂಟ್ಯಾಕ್ಟ್ ಲೀಸ್ಟ್ ನಲ್ಲಿರುವ ಎಲ್ಲ ಸ್ನೇಹಿತರಿಗೂ ಕಳಿಸಿದೆ. ಅವರಲ್ಲಿ ಹಲವರಿಂದ ಅಂಥಾದ್ದೇ ಒಂದು ಪೋಸ್ಟ್ ತಿರುಗಿಬಂತು. ಜೋಶ್ ನಲ್ಲಿ ನಮ್ಮ ಹಾಲಿ ಕಂಪನಿಯ ಬಾಸ್ ಗೂ ಒಂದು ಪೋಸ್ಟ್ ಇನ್ನೇನು ಫಾರ್ವರ್ಡ್ ಆಗುವುದರಲ್ಲಿತ್ತು! ಪುಣ್ಯಕ್ಕೆ ಕೊನೆಯ ಕ್ಷಣದಲ್ಲಿ ಮತ್ತೊಮ್ಮೆ ಚೆಕ್ ಮಾಡಿದ್ದರಿಂದ ಆಗಲಿದ್ದ ಅನಾಹುತ ತಪ್ಪಿಹೋಯಿತು. ಇಲ್ಲದಿದ್ದರೆ ಮುಂದೊಮ್ಮೆ ಏನಾದರೂ ಯಡವಟ್ಟು ಮಾಡಿ ಸಿಕ್ಕಿಹಾಕಿಕೊಂಡಾಗ "ನಿಮಗೆ ಫ್ರೆಂಡ್ಶಿಪ್ ಡೇ ಮೆಸೇಜ್ ನ ತಪ್ಪಿಲ್ದೇ ಕಳಿಸೋಕೆ ಬರುತ್ತೆ. ಅದೇ ಆಫೀಸ್ ಕೆಲಸ ಸರಿಯಾಗಿ ಮಾಡೋಕೆ ಬರಲ್ಲ ಅಲ್ವಾ?" ಎಂದು ಬೈಸಿಕೊಳ್ಳುವ ಅಪಾಯವಿತ್ತು. ಪುಣ್ಯ. ದೇವರು ದೊಡ್ಡವನು. ತಪ್ಪಿಸಿಬಿಟ್ಟ.
ಬಿಡಿ, ವಿಷಯ ಅದಲ್ಲ. ಸ್ನೇಹಿತರ ದಿನದಂದು ಇರುವವರು ನೆನಪಾಗುವುದು ವಾಡಿಕೆ. ಆದರೆ ಇವತ್ತೇಕೋ ಇಲ್ಲದೇ ಇರುವವನೊಬ್ಬ ಅಚಾನಕ್ಕಾಗಿ ನೆನಪಾದ. ನಿಜ ಹೇಳಬೇಕೆಂದರೆ ಅವನು ನನ್ನ ಗೆಳೆಯನೇ ಅಲ್ಲ. ಅವನ ಜೊತೆಗೆ ಕಳೆದ ಯಾವ ನೆನಪೂ ನನಗಿಲ್ಲ, ಇದೊಂದರ ಹೊರತಾಗಿ:
ಅದು ಬಹುಷಃ ನನ್ನ ಶಾಲೆಯ ಮೊದಲ ದಿನ. ಆಗೆಲ್ಲ ಈಗಿನಂತೆ ಮಾತನಾಡಲಿಕ್ಕೂ ಬಾರದ ವಯಸ್ಸಗೇ ಶಾಲೆಗೆ ಕಳಿಸುವ ಪರಿಪಾಠ ಇದ್ದಿರಲಿಲ್ಲ ನೋಡೀ? ನನಗಾಗಲೇ ಆರು ವರ್ಷ ತುಂಬಿತ್ತು. ಜೀವನದಲ್ಲಿ ಮೊದಲ ಬಾರಿಗೆ ಅಪ್ಪ-ಅಮ್ಮನನ್ನ, ಅದರಲ್ಲೂ ಎಸ್ಪೆಷಲೀ ಅಪ್ಪನನ್ನ ಬಿಟ್ಟು ಒಂದಿಡೀ ದಿನ ಕಳೆದಿದ್ದೆ. ಸಂಜೆ ನಾಲ್ಕೂ ಮೊವ್ವತ್ತಾಗಿತ್ತು. ಇನ್ನೇನು ಲಾಂಗ್ ಬೆಲ್ ಹೊಡೆದು ನಾವೆಲ್ಲ ಮನೆಗೆ ಹೊರಡಬೇಕಿತ್ತು.
ಆದರೆ ಬೆಲ್ ಹೊಡೆಯಲೇ ಇಲ್ಲ.
ನಾನಂತೂ ಗಾಬರಿಯಾಗಿಬಿಟ್ಟಿದ್ದೆ. ಯಾಕೆ ಬೆಲ್ ಹೊಡೆದಿಲ್ಲ? ನಾನು ಇವತ್ತಿಡೀ ಶಾಲೆಯಲ್ಲೇ ಇರಬೇಕಾಗತ್ತಾ? ಇನ್ನೂ ಏನೇನೋ ಯೋಚನೆಗಳು ಮನಸ್ಸಿನಲ್ಲಿ ಬಂದು ಅಳು ಬರುವಂತಾಗಿತ್ತು. ಆಗಲೇ ನಾನವನನ್ನು ಮಾತನಾಡಿಸಿದ್ದು.
ಸರಿಯಾಗಿ ನೆನಪಿದೆ. ಅವನ ಹೆಸರು ನವೀನ. ಮುಖದ ಎರೆಡೂ ಕಡೆ ಇಳಿಬಿದ್ದ ಉದ್ದ ಕೂದಲು. ಗುಂಡಿ ಅಂಗಿ. ಚಡ್ಡಿ. ಉದ್ದದ ಕ್ಯಾಟೆಲ್ ಒಂದರಲ್ಲಿ ಮಧ್ಯಾಹ್ನದ ಊಟ ತುಂಬಿಸಿಕೊಂಡು ಬರುತ್ತಿದ್ದ. ಜೋಗಿ ಚಿತ್ರದಲ್ಲಿ ಶಿವಣ್ಣ ಚಿಕ್ಕವರಿದ್ದಾಗಿನದೊಂದು ಪಾತ್ರ ಬರುತ್ತದಲ್ಲ? ಥೇಟ್ ಹಾಗೇ ಇದ್ದ. ಬಹುಷಃ ನನ್ನ ಪಕ್ಕವೇ ಕುಳಿತಿದ್ದನೋ ಏನೋ, ಸರಿಯಾಗಿ ನೆನಪಿಲ್ಲ. ಅಳು ಮುಖ ಮಾಡಿಕೊಂಡೇ 'ಶಾಲೆ ಯಾವಾಗ ಬಿಡ್ತಾರೆ?' ಅಂತ ಕೇಳಿದ್ದೆ. ಅವನು ತನ್ನ ಗೊಜಗೊಜ ಧ್ವನಿಯಲ್ಲಿ ಉತ್ತರಿಸಿದ್ದ:
"ದಾಂತಿ ಆದ್ಮೇಲೆ ಬಿಡ್ತಾರೆ!"
ಕನ್ಫ್ಯೂಸ್ ಆದ್ರಾ? ಹೆದರಬೇಡಿ. ನಿಮ್ಮ ಜೊತೆಗೆ ನಾನೂ ಇದ್ದೇನೆ. ದೇವರಾಣೆಗೂ ನನಗೂ ಏನೂ ಅರ್ಥವಾಗಿರಲಿಲ್ಲ. ಇವತ್ತಿಗೂ ಆಗಿಲ್ಲ. ನಾನು ಸುಮಾರು ಸಲ ಅವನನ್ನು ಪ್ರಶ್ನಿಸಿದ್ದೆ. ಅವನು ಮತ್ತೆ ಮತ್ತೆ ಅದೇ ಉತ್ತರ ಕೊಟ್ಟಿದ್ದ:
"ದಾಂತಿ.. ದಾಂತಿ ಆದ್ಮೇಲೆ ಬಿಡ್ತಾರೆ!"
ಈ ದಾಂತಿ ಅಂದರೆ ಏನು? ದಾಂತಿ ಮಾಡೋದಂದ್ರೆ ಏನು ಮಾಡಬೇಕು? ಅಷ್ಟಕ್ಕೂ ಅದು ಈ ಗ್ರಹದ ಮನುಷ್ಯರು ಮಾಡುವ ಕೆಲಸವೇ ಹೌದಾ? ಈ ಯಾವ ಪ್ರೆಶ್ನೆಯನ್ನೂ ದಯವಿಟ್ಟು ಕೇಳಬೇಡಿ. ಉತ್ತರ ನನಗೂ ಗೊತ್ತಿಲ್ಲ. ಆದರೆ ಅವನು ಮಾತ್ರ ಅದೊಂದು ಉತ್ತರವನ್ನು ಬಿಟ್ಟು ಮತ್ತೇನೂ ಹೇಳಿರಲಿಲ್ಲ. ಅವನ ಈ ಅನ್ಯಗ್ರಹ ಭಾಷೆಯಿಂದ ಮತ್ತಷ್ಟು ಕನ್ಫ್ಯೂಸ್ ಆದ ನಾನು ಕುಳಿತಲ್ಲೇ ಇಪ್ಪಳಿಸಿ ಇಪ್ಪಳಿಸಿ ಅಳಲಾರಂಭಿಸಿದ್ದೆ. ನಿಜ ಹೇಳಬೇಕೆಂದರೆ ಆ ಹೊತ್ತಿಗಾಗಲೇ ಶಾಲೆ ಬಿಡುವ ಲಾಂಗ್ ಬೆಲ್ ಹೊಡೆದಾಗಿತ್ತು. ಆದರೆ ನಮ್ಮ ಕ್ಲಾಸಿನವರು ಸೂರು ಹಾರಿಹೋಗುವಂತೆ ಗಲಾಟೆ ಮಾಡಿಕೊಂಡಿದ್ದರಿಂದ ಆ ಶಬ್ದ ಯಾರಿಗೂ ಕೇಳಿಸಿಯೇ ಇರಲಿಲ್ಲ. ಕೊನೆಗೆ ಕೋಲಿನ ಸಮೇತ ಬಂದ ಮಾಸ್ತರು ನಮಗದನ್ನು ಮನವರಿಕೆ ಮಾಡಿಕೊಟ್ಟರು.
ಹಾಗೆ ಗೊಜಗೊಜ ಮಾತಾಡುತ್ತಿದ್ದ ನವೀನ ಎಷ್ಟು ಸಮಯ ನಮ್ಮ ಶಾಲೆಯಲ್ಲಿದ್ದ? ಆಮೇಲೇನಾದ? ಅವನ ಊರು ಯಾವುದು? ಈಗೆಲ್ಲಿದ್ದಾನೆ? ಯಾವುದೂ ಗೊತ್ತಿಲ್ಲ. ಆದರೆ "ದಾಂತಿ ಆದ್ಮೇಲೆ" ಎನ್ನುವ ವಾಕ್ಯ ಹಾಗೂ ಉದ್ದ ಕೂದಲು ಗಿಡ್ಡ ಚಡ್ಡಿಯ ಆ ಅಸ್ಪಷ್ಟ ಆಕಾರ ಮಾತ್ರ ಮನಸ್ಸಿನಲ್ಲಿ ಉಳಿದುಹೋಗಿದೆ.
-ವಿನಾಯಕ ಅರಳಸುರಳಿ.

ಸ್ವಾತಂತ್ರೋತ್ಸವದ ಪ್ರಭಾತ್ ಪೇರಿ...

ಸಮೀಪದಿಂದಲೇ ಕೇಳಿಬಂದ ಬ್ಯಾಂಡ್ಸೆಟ್ ನ ಸದ್ದಿಗೆ ಥಟ್ಟನೆ ಎಚ್ಚರಾಯಿತು. ಸಮಯ ಇನ್ನೂ ಏಳೂ ಮೊವ್ವತ್ತು. ಅಂದರೆ ಒಂದಿಡೀ ರಜಾದಿನ ನನ್ನ ಕಣ್ಮುಂದಿದೆ! ತುಂಬಾ ಖುಷಿಯಾಯ್ತು. ಈ ಆಫೀಸಿಗೆ ರಜೆ ಇದೆ ಅನ್ನೋ ಭಾವನೆ ತರುವ ಸಂಭ್ರಮ ಇದೆಯಲ್ಲಾ? ಅದಕ್ಕಿಂತ ಮಿಗಿಲಾದುದು ಇನ್ನೊಂದಿಲ್ಲ. ಹಾಗಂತ ಸಿಕ್ಕ ಈ ಅಮೂಲ್ಯ ರಜೆಯಲ್ಲಿ ಏನು ಕಡಿದು ಗುಡ್ಡೆ ಹಾಕ್ತೀಯಪ್ಪಾ ರಾಜಾ ಅಂದ್ರೆ ಏನೂ ಇಲ್ಲ. ವಾರವಿಡೀ ಬಚ್ಚಲಿನ ನ್ಯಾಲೆಯ ಮೇಲೆ ಕಡಿದಿಟ್ಟ ಕುರಿಯ ಮಾಂಸದಂತೆ ನೇತಾಡಿಕೊಂಡಿರುವ ಬಟ್ಟೆಗಳನ್ನು ತೊಳೆದು, ವಾರದಿಂದ ಹಿಡಿ ಕಾಣದ ಕೋಣೆಯ ಕಸ ಹೊಡೆದು, ಅಡ್ಡಬಂದ ಜಿರಳೆ-ಹಕ್ಳೆಗಳ ರುಂಡ ಚೆಂಡಾಡಿ, ಸ್ನಾನ ಮಾಡಿಕೊಂಡು ಪರಿಶುದ್ಧನಾಗಿ ಕೋಣೆಯಿಂದಾಚೆ ಬರುವಷ್ಟರಲ್ಲಿ ಸೂರ್ಯ ತನ್ನ ಮಧ್ಯಾಹ್ನದ ಲಂಚ್ ಬಾಕ್ಸ್ ತೆರೆಯುತ್ತಿರುತ್ತಾನೆ. ಸಿಕ್ಕ ಬಸ್ಸು ಹತ್ತಿಕೊಂಡು ಅಕ್ಕನ ಮನೆಗೋ, ಚಿಕ್ಕಮ್ಮನ ಮನೆಗೋ ಅಥವಾ ಗೆಳೆಯನ ಭೇಟಿಗೋ ಹೊರಟರೆ ಅಲ್ಲಿಗೆ ಆ ರಜಾ ದಿನ ಸಂಪನ್ನವಾದಂತೆ.
ಬಿಡಿ. ನಾನು ಹೇಳೋಕೆ ಹೊರಟಿದ್ದು ಅದಲ್ಲ. ಬೆಳ್ಳಂಬೆಳಗ್ಗೆ ನನ್ನನ್ನು ಎಚ್ಚರಗೊಳಿಸಿದ ಆ ಪೆಪ್ಪೆರೆ ಪೆಪ್ಪೆರೆ ಬ್ಯಾಂಡ್ ಸದ್ದು ಸಮೀಪದ ಎಂಇಎಸ್ ಶಾಲೆಯ ಸ್ವಾತಂತ್ರೋತ್ಸವದ ಪ್ರಭಾತ್ ಪೇರಿಯದು. ಹಳೆಯ ನೆನಪುಗಳು ಗರಿಗೆದರೋದಕ್ಕೆ ಅಷ್ಟೇ ಸಾಕು. ಏನು? ಸ್ವತಂತ್ರ ದಿನದಂದು ಧ್ವಜಾರೋಹಣದಲ್ಲಿ ಪಾಲ್ಗೊಳ್ಳೋದು ಬಿಟ್ಟು ಏನೇನೋ ಹರಟ್ತಿದೀಯಾ ಅಂತ ಕೇಳಿದ್ರಾ? ನೋಡಿ ಈ ವಿಷಯದಲ್ಲಿ ನೀವು ನನ್ನನ್ನು ದೂರುವ ಹಾಗೇ ಇಲ್ಲ. ಮೊದಲಿದ್ದ ಕಂಪನಿಯಲ್ಲಾದರೆ ತಪ್ಪದೇ ಧ್ವಝಾರೋಹಣ ಮಾಡುತ್ತಿದ್ದರು. ಕೂಡಿಕೊಂಡು ಹೋಗಲಿಕ್ಕೆ ಜೊತೆಗೊಂದಿಷ್ಟು ಜನ ಗೆಳೆಯರೂ ಇದ್ದರು. ಆದರೀಗ ನನ್ನ ಕಂಪನಿ ಬದಲಾಗಿ, ಇದ್ದ ಗೆಳೆಯರಲ್ಲಿ ಹಲವರಿಗೆ ಮದುವೆಯಾಗಿ, ಅವರೇ ತಮ್ಮ ಸ್ವತಂತ್ರ ಕಳೆದುಕೊಂಡು, ಹೆಂಡತಿ ಎನ್ನುವ ಎಲಿಜಬೆತ್ ರಾಣಿಯ ಆಳ್ವಿಕೆಯಲ್ಲಿ ಸಿಲುಕಿಕೊಂಡಿರುವಾಗ ನಾನಾದರೂ ಯಾರ ಜೊತೆಗೆ ಹೋಗಲಿ ಹೇಳಿ? ಅಷ್ಟಾಗಿಯೂ ಹಳೆಯ ಕಂಪನಿಗೆ ಹೋದರೆ ಒಂದು ಕಾಲದಲ್ಲಿ ನಾನೇ ಸಂಬಳದ ಚೆಕ್ ಬರೆದುಕೊಟ್ಟಿದ್ದ ಅದೇ ಸೆಕ್ಯುರಿಟಿಯವರಿಂದ 'ಒಳಗೆ ಪ್ರವೇಶವಿಲ್ಲ' ಅಂತನ್ನಿಸಿಕೊಳ್ಳಬೇಕಾಗೋದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ? ಅದಕ್ಕೇ ನಾನು ಸ್ವತಂತ್ರ ದಿನಾಚರಣೆಯನ್ನು ಕೋಣೆಯಲ್ಲೇ ಆಚರಿಸುತ್ತೇನೆ.
ನೋಡಿ.. ಮಾತು ಮತ್ತೆ ದಾರಿ ತಪ್ತಿದೆ. ನಾನೇನು ಹೇಳ್ತಿದ್ದೆ? ನೆನಪುಗಳ ಬಗ್ಗೆ ಅಲ್ವಾ? ಹೌದು.. ಎಂಇಎಸ್ ಶಾಲೆಯ ಮೆರವಣಿಗೆಯ ಸದ್ದು ಕೇಳಿದಾಗ ಮೊದಲು ನೆನಪಾದದ್ದೇ ಶಾಲೆ. ಅರಳಸುರಳಿ ಶಾಲೆ. ಸುಮಾರು ಏಳು ವರ್ಷಗಳ ಕಾಲ ಈ ದಿನದಂದು ಬಾವುಟ ಹಾರಿಸಿ, ಮರವಣಿಗೆ ಹೋಗಿ, ಘೋಷಣೆ ಕೂಗಿ, ಭಾಷಣ ಕೇಳಿ, ಕೊನೆಯಲ್ಲಿ ಚಾಕ್ಲೇಟು ತಿಂದುಕೊಂಡು ಮನೆಗೆ ಬರುತ್ತಿದ್ದ ಸ.ಹಿ.ಪ್ರಾ. ಶಾಲೆ!
ಆಗಸ್ಟ್ ಹದಿನೈದಕ್ಕಿನ್ನೂ ಹತ್ತು-ಹದಿನೈದು ದಿನ ಇದ್ದಾಗಲೇ ಪಿಟಿ ಮೇಷ್ಟರ ಸುಪರ್ದಿಯಲ್ಲಿ ಬ್ಯಾಂಡ್ಸೆಟ್ ನ ಅಭ್ಯಾಸ ಆರಂಭವಾಗುತ್ತಿತ್ತು. ಸಂಜೆ ನಾಲ್ಕರ ಆಟದ ಸಮಯದಲ್ಲಿ ಆರು ಹಾಗೂ ಏಳನೇ ತರಗತಿಯ ಐದಾರೇಳು ಹುಡುಗರನ್ನು ಆಯ್ದು ಪ್ರಾಕ್ಟೀಸ್ ಕೊಡಲು ಆರಂಭಿಸುತ್ತಿದ್ದರು. ಶಾಲೆಯೆದುರು ಅಂಗಳದಲ್ಲಿ ಅಥವಾ ವಿಶಾಲವಾಗಿದ್ದ ಹಾಲ್ ರೂಮಿನಲ್ಲಿ ಅವರೆಲ್ಲ ಪೆಪ್ಪೆಪ್ಪೆ... ಪೆರೆಪೆರೆಪೆ.. ಪೇಪೆಪ್ಪೆಪ್ಪೆ... ಡುಂಡುಂಡುಂ ಎಂದು ಬಾರಿಸುತ್ತಾ ಅಭ್ಯಾಸ ಮಾಡುವುದನ್ನು ನಾವು ದೂರದಿಂದ ನೋಡುತ್ತಿದ್ದೆವು. ಪ್ರಭಾತ್ ಪೇರಿಯಲ್ಲಿ ಹಾಡಬೇಕಾದ ಹುಡುಗಿಯರು ಚೀಟಿಗಳಲ್ಲಿ ಬರೆದಿಟ್ಟುಕೊಂಡ ದೇಶಭಕ್ತಿಗೀತೆಗಳನ್ನು ರಾಗವಾಗಿ ಅಭ್ಯಾಸ ಮಾಡುತ್ತಿರುವ ಪಕ್ಕದ ಕೋಣೆಯತ್ತಲೂ ಒಂದು ಕಣ್ಣಿಟ್ಟಿರುತ್ತಿದ್ದೆವು.
ನೋಡನೋಡುತ್ತಿದ್ದಂತೆಯೇ ಆಗಸ್ಟ್ ಹದಿನೈದು ಓಡಿಕೊಂಡು ಬರುತ್ತಿತ್ತು. ಬೆಳಗ್ಗೆ ಆರೂ ಮೊವ್ವತ್ತಕ್ಕೇ ಎದ್ದು ಸ್ನಾನ ಮಾಡಿ, ಕಡುನೀಲಿಯ ಚಡ್ಡಿಗೆ ಆಕಾಶನೀಲಿಯ ಅಂಗಿಯನ್ನು ಇನ್ ಶರ್ಟ್ ಮಾಡಿಕೊಂಡು, ಕತ್ತಿಗೆ ಅದೇ ಬಣ್ಣದ ಟೈ ಕಟ್ಟಿಕೊಂಡು ಹೊರಡುತ್ತಿದ್ದೆವು. ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ನನ್ನಂತೆಯೇ ತಪ್ಪುತಪ್ಪಾಗಿ ಇನ್ಶರ್ಟ್ ಮಾಡಿಕೊಂಡಿರುವ ಇನ್ನಷ್ಟು ಹುಡುಗರೂ, ಆಕಾಶನೀಲಿ ಅಂಗಿ, ಕಡುನೀಲಿಯ ಲಂಗ ತೊಟ್ಟು, ಮಡಿಚಿದ ಜಡೆಗೆ ಕೆಂಪು ರಿಬ್ಬನ್ ಕಟ್ಟಿಕೊಂಡು ಬರುತ್ತಿರುವ ಹುಡುಗಿಯರೂ ಜೊತೆಯಾಗುತ್ತಿದ್ದರು. ಇವತ್ತು ಗ್ರಾಮ ಪಂಚಾಯತಿಯಲ್ಲಿ ಚಾಕ್ಲೇಟ್ ಕೊಡ್ತಾರೋ ಇಲ್ಲಾ ಸೋಂಪಾಪುಡಿ ಕೊಡ್ತಾರೋ ಎಂಬ ಘನಗಂಭೀರ ವಿಷಯವನ್ನು ಚರ್ಚಿಸುತ್ತಾ ಎಲ್ಲರೂ ಶಾಲೆಯತ್ತ ನಡೆಯುತ್ತಿದ್ದೆವು.
ಹೇಳೋಕೆ ಮರೆತೆ. ಈ ಸ್ವತಂತ್ರ ದಿನ, ಗಾಂಧೀಜಯಂತಿ, ಗಣರಾಜ್ಯ ದಿನಗಳಂದು ಚಕ್ಕರ್ ಹಾಕಿದರೂ ಒಂದು ಪಕ್ಷ ಪಾರಾಗಬಹುದಿತ್ತೇನೋ, ಆದರೆ ಯೂನಿಫಾಂ ಹಾಕದೇ ಬಂದರೆ ಮಾತ್ರ ಪಾರಾಗುವುದಕ್ಕೆ ಸಾಧ್ಯವೇ ಇರಲಿಲ್ಲ. ಕಾರ್ಯಕ್ರಮವೆಲ್ಲ ಮುಗಿದ ಮೇಲೆ ಅಂತಹಾ 'ವಿಶೇಷ ವಿದ್ಯಾರ್ಥಿ'ಗಳನ್ನು ಸ್ವತಃ ಹೆಡ್ ಮೇಷ್ಟರೇ, ತಮ್ಮ ಕೈಯಾರೆ ವಿಚಾರಿಸಿಕೊಳ್ಳುತ್ತಿದ್ದರು. "ಸ್ವಾತಂತ್ರ ದಿನಾಚರಣೆಗೆ ಯೂನಿಫಾಂ ಹಾಕ್ಕೊಂಡ್ಬೇರ್ಕಂತ ಗೊತ್ತಾಗಲ್ವೇನೋ ನಾನ್ ಸೆನ್ಸ್ ಫೆಲೋ" ಎಂಬ ಅವರ ಅಬ್ಬರವನ್ನು ಅವರ ರೂಲ್ ದೊಣ್ಣೆ ಮುಂದುವರಿಸುತ್ತಿತ್ತು. ಹಾಗಾಗಿ ನಾವು ಏನೇ ತಪ್ಪಿಸಿದರೂ ಯೂನಿಫಾಂ ತಪ್ಪಿಸುತ್ತಿರಲಿಲ್ಲ.
ಸ್ವತಂತ್ರ ದಿನದ ಇನ್ನೊಂದು ಸಂಭ್ರಮವೆಂದರೆ ಬಾವುಟ ಕೊಳ್ಳುವುದು! ಎರೆಡು ರೂಪಾಯಿಯದು, ಐದು ರೂಪಾಯಿಯದು, ಹತ್ತರದ್ದು... ಹೀಗೆ ನಾನಾ ಬೆಲೆಯ, ಬೆಲೆಗೆ ತಕ್ಕ ಗಾತ್ರದ ಬಾವುಟಗಳು ವಾರದ ಕೆಳಗೇ ಊರಿನ ಎಲ್ಲ ಅಂಗಡಿಗಳಿಗೂ ಬಂದು, ಪಥಸಂಚಲನಕ್ಕೆ ಹೊರಟ ಸೈನಿಕರಂತೆ ಸಾಲಾಗಿ ನಿಂತಿರುತ್ತಿದ್ದವು. ಬರೀ ಬಾವುಟ ಮಾತ್ರವಲ್ಲ, ಜೇಬಿಗೆ ಪಿನ್ನು ಚುಚ್ಚಿ ಸಿಕ್ಕಿಸಿಕೊಳ್ಳುವ ಎರೆಡಿಂಚಿನ ಮಿನಿ ಸ್ಟಿಕ್ಕರ್ ಬಾವುಟ, ಮಣಿಕಟ್ಟಿಗೆ ಹಾಕಿಕೊಳ್ಳಬಹುದಾದ ಕೇಸರಿ-ಬಿಳಿ-ಹಸಿರಿನ ಬಟ್ಟೆಯ ಬ್ಯಾಂಡ್, ಮುಂದಲೆಗಷ್ಟೇ ಹಾಕಬಲ್ಲ ಅದೇ ಬಣ್ಣಗಳ ಕಾಗದದ ಟೋಪಿ... ಹೀಗೆ ಬಾವುಟಗಳು ನಾನಾ ವಿಧ, ರೂಪ, ಆಕಾರಗಳಲ್ಲಿ ಬಂದು ನಮ್ಮ ಕೈಸೇರಿ ಕುಳಿತುಕೊಳ್ಳುತ್ತಿದ್ದವು. ಒಂದು ಸಲವಂತೂ ಅಪ್ಪನಿಗೆ ಅದೇನನ್ನಿಸಿತ್ತೋ ಏನೋ, ಹೆಚ್ಚೂ ಕಡಿಮೆ ಶಾಲೆಯಲ್ಲಿ ಹಾರಿಸುವಷ್ಟೇ ದೊಡ್ಡದಾದ ಬಟ್ಟೆಯ ಬಾವುಟವೊಂದನ್ನು ಹೇಳದೇ ಕೇಳದೇ ತಂದುಬಿಟ್ಟಿದ್ದರು! ಅದಕ್ಕೆ ದೊಣ್ಣೆಯೊಂದನ್ನು ತಾವೇ ಕೆತ್ತಿ ಸಿಕ್ಕಿಸಿ ಮನೆಯೆದುರಿನ ಕಂಬದಲ್ಲಿ ಧ್ವಜಾರೋಹಣ ಮಾಡಿದ್ದರು. ಅದು ಹಾರುವಷ್ಟು ಜೋರು ಗಾಳಿ ಬೀಸುತ್ತಿರಲಿಲ್ಲವಾದರೂ ಅದರ ಗಾತ್ರ ನೋಡಿದ ನನಗೆ ಎಲ್ಲಿಲ್ಲದ ಖುಷಿಯಾಗಿತ್ತು. ಹೋತೂಬಂತೂ ಅದನ್ನೇ ನೋಡುತ್ತಾ, ಕೋಲು ತಿರುಗಿಸಿ ಅದರ ದಿಕ್ಕು ಬದಲಿಸುತ್ತಾ ಸಂಭ್ರಮಿಸಿದ್ದೆ. ಆದರೆ 'ಬಿಸಿಲಿಗೆ ಹಾಳಾಗತ್ತೆ' ಎಂದು ತೆಗೆದು ಕೋಣೆಯೊಳಗಿಟ್ಟ ಆ ಬಾವುಟ ಯಾವುದೋ ಮೂಲೆಗೆ ಸೇರಿದ್ದು ಮತ್ತೆ ಸಿಗಲೇ ಇಲ್ಲ.

**********

"ಕ್ಲಾಸ್ ವಿಶ್ರಾಮ್... ಕ್ಲಾಸ್ ಸಾವ್ಧಾನ್..."
ಕಾಶ್ಶನ್ ಕೊಡುವ ಹುಡುಗನ ಸದ್ದಿಗೆ ತಕ್ಕಂತೆ ಶಾಲೆಯ ಆವರಣದಲ್ಲಿ ಸಾಲಾಗಿ ನಿಂತ ನಾವೆಲ್ಲ ಕಾಲನ್ನು ಎತ್ತಿಡುತ್ತಿದ್ದೇವೆ. ನಾಲ್ಕು ಹೆಜ್ಜೆ ಮುಂದಕ್ಕೆ ನಡೆದು ಬಂದ ಎಸ್ಡೀಎಂಸಿ ಅಧ್ಯಕ್ಷರು ಧ್ವಝಕಂಬದ ಮುಂದೆ ನಿಂತು ಹೆಡ್ ಮೇಷ್ಟರು ಬಿಚ್ಚಿಕೊಟ್ಟ ಹಗ್ಗವನ್ನು ಎಳೆಯುತ್ತಾರೆ. ಕಂಬದ ತುದಿಯಲ್ಲಿ ಕಟ್ಟಲ್ಪಟ್ಟ ಧ್ವಜ ಫಟ್ಟನೆ ಬಿಚ್ಚಿಕೊಳ್ಳುತ್ತದೆ.
"ಸಲಾಮ್ಯಾಂ ದೋ"
ಎಲ್ಲರೂ ಸೆಲ್ಯೂಟ್ ಹೊಡೆದು ತಲೆಯೆತ್ತಿ ಧ್ವಜದತ್ತಲೇ ನೋಡುತ್ತಾ ಮೊದಲು ಜನಗಣಮನವನ್ನೂ, ನಂತರ ವಂದೇ ಮಾತರಂ ಅನ್ನೂ ಹಾಡುತ್ತೇವೆ. ನಂತರ ಪ್ರಭಾತ್ ಪೇರಿ. ಬ್ಯಾಂಡ್ಸೆಟ್ಟಿನ ಹುಡುಗರೂ, ದೇಶಭಕ್ತಿಗೀತೆಯ ಹುಡುಗಿಯರೂ ಹಾಗೂ ಟೀಚರ್ (ಮೇಡಂ)ಗಳೂ ಮುಂದೆ ನಡೆಯುತ್ತಾರೆ. ಅವರ ಹಿಂದೆ ಹುಡುಗರು ಹಾಗೂ ಹುಡಿಗಿಯರು ಎಂಬ ಎರೆಡು ಪ್ರತ್ಯೇಕ ಸಾಲುಗಳಾಗಿ ಕವಲೊಡೆದ ನಾವೆಲ್ಲ ಹೆಜ್ಜೆ ಹಾಕುತ್ತೇವೆ. ಮೊದಲು ನಮ್ಮ ಮೆರವಣಿಗೆ ಗ್ರಾಮಪಂಚಾಯತಿಯತ್ತ ನಡೆಯುತ್ತದೆ. ಆರಂಭದ ಹತ್ತು ನಿಮಿಷ 'ಬೋಲೋ ಭಾರತ್ ಮಾತಾಕೀ.... ಜೈ', 'ವಂದೇ ಮಾತರಂ...', 'ಶಿಸ್ತು... ಶಾಂತಿ, ಶಾಂತಿ... ಶಿಸ್ತು', 'ಇಂಕಿಲಾಬ್... ಜಿಂದಾಬಾದ್', 'ಮಹಾತ್ಮಾ ಗಾಂಧೀಕೀ... ಜೈ' ಎಂಬೆಲ್ಲ ಘೋಷಣೆಗಳೊಂದಿಗೆ ಗಂಭೀರವಾಗಿಯೇ ಸಾಗುವ ನಮ್ಮ ನಡಿಗೆ ನಮ್ಮನ್ನು ನಿಯಂತ್ರಿಸುತ್ತಿರುವ ಮೇಷ್ಟ್ರು ಆಚೆ ಹೋಗುತ್ತಿದ್ದಂತೆಯೇ ಮಂಗನಾಟಕ್ಕೆ ತಿರುಗುತ್ತದೆ. ನಾನು ಅವನಿಗಿಂತ ಮುಂದೆ ಹೋಗ್ಬೇಕು, ನಾನು ಇವನ ಹಿಂದೆ ನಿಲ್ಬೇಕು ಎಂದೆಲ್ಲ ಪಂಥ ಕಟ್ಟುತ್ತಾ, ಜಗಳಾಡುತ್ತಾ ಸಾಲು ಬಿಟ್ಟು ಓಡುತ್ತೇವೆ. ಅಷ್ಟರಲ್ಲಿ ರಸ್ತೆಯ ಪಕ್ಕದಲ್ಲಿ ತನ್ನಪಾಡಿಗೆ ಮಲಗಿದ್ದ ನಾಯಿಯತ್ತ ಯಾರೋ ಕಲ್ಲೆಸೆಯುತ್ತಾರೆ. ಒದೆ ತಿಂದ ಅದು ಕಂಯ್ಯಯ್ಯೋ ಎಂದು ಕೂಗುತ್ತಾ ದಿಕ್ಕಾಪಾಲಾಗಿ ಓಡುತ್ತದೆ. ಬೆಚ್ಚಿಬಿದ್ದ ಮೇಷ್ಟ್ರು 'ಏಯ್ ಯಾರೋ ಅವ್ನೂ' ಎನ್ನುತ್ತಾ ಓಡಿಬರುತ್ತಾರೆ. ನಾವೆಲ್ಲ ಕಿಸಕ್ಕನೆ ನಕ್ಕು ಸುಮ್ಮನಾಗುತ್ತೇವೆ.
ಹೀಗೆ ನಮ್ಮ ಮೆರವಣಿಗೆ ಗ್ರಾಮಪಂಚಾಯಿತಿ ಕಛೇರಿಯನ್ನು ತಲುಪುತ್ತದೆ. ಮೊದಲೇ ಕಿರಿದಾದ ಅದರ ಅಂಗಳದಲ್ಲಿ ನಿಲ್ಲುವಾಗ ನಮ್ಮೊಳಗೇ ವಾದ-ವಿವಾದಗಳೇರ್ಪಡುತ್ತವೆ. ಮಳೆ ಬಂದು ಜಾರುಬಂಡಿಯಾಗಿರುವ ಆ ನೆಲದಲ್ಲಿ ಸಾಲಾಗಿ ಜಮೆಯಾಗುವಾಗ ಏನಿಲ್ಲವೆಂದರೂ ಸಾಲಿಗೆ ಇಬ್ಬರಂತೆ ಧಸಾಲ್ ಧಸಾಲ್ಲನೆ ಜಾರಿಬೀಳುತ್ತಾರೆ. ಉಳಿದವರು ಕಿಸಕ್ಕನೆ ನಗುತ್ತಲೇ ಸಾಲಾಗಿ ನಿಲ್ಲುತ್ತಾರೆ. ಅಲ್ಲೂ ಧ್ವಝಾರೋಹಣವಾಗಿ ಎಲ್ಲರ ನಿರೀಕ್ಷೆಯಂತೆ ಸೋಂಪಾಪುಡಿ ಹಂಚಲಾಗುತ್ತದೆ. ತಿಂದ ಕೈಯನ್ನು ಚಡ್ಡಿಗೂ, ಲಂಗಕ್ಕೂ ಒರೆಸಿಕೊಳ್ಳುತ್ತಾ ಎಲ್ಲರೂ ಮೆರವಣಿಗೆ ಮುಂದುವರಿಸುತ್ತೇವೆ. ಸುಬ್ರಹ್ಮಣ್ಯ ಸರ್ಕಲ್ ಗೊಂದು ಸುತ್ತುಹಾಕಿದ ನಮ್ಮ ಪ್ರಭಾತ್ ಪೇರಿಯ ಮೆರವಣಿಗೆ ಮತ್ತೆ ಶಾಲೆಯಂಗಳಕ್ಕೆ ಬಂದು ಸಮಾಪ್ತಿಯಾಗುತ್ತದೆ. ಈ ದಿನದ ಅತಿ ಮುಖ್ಯ ಕಾರ್ಯಕ್ರಮ ಆರಂಭವಾಗುವುದೇ ಈಗ. ಅದರ ಹೆಸರು:
ಭಾಷಣದ ಕಾರ್ಯಕ್ರಮ!

**********

"ಮಾನ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅವರೇ, ಎಸ್ಡಿಎಂಸಿ ಸದಸ್ಯರಾದ ಇವರೇ, ಮುಖ್ಯ ಅತಿಥಿಗಳಾದ ಮತ್ತೊಬ್ಬರೇ..... ಹಾಗೂ ನನ್ನ ಪುಟಾಣಿ ಮಕ್ಕಳೇ"
ಹೀಗೆ ಶುರುವಾಗುತ್ತವೆ ಎಲ್ಲರ ಭಾಷಣಗಳು. ನಾನು ಶಾಲೆಯಲ್ಲಿದ್ದಾಗ ಅತ್ಯಂತ ಬೇಸರ ತರಿಸುತ್ತಿದ್ದ ಭಾಗವೆಂದರೆ ಅದು ಈ ಭಾಷಣದ್ದು. ವಿಶಾಲವಾದ ಹಾಲ್ ರೂಂ ಕೊಠಡಿಯ ನೆಲದ ಮೇಲೆ ನಮ್ಮನ್ನೆಲ್ಲ "ಶ್.. ಮಾತಾಡಬಾರ್ದು. ಅಲ್ಲಾಡಬಾರ್ದು..." ಎಂಬೆಲ್ಲ ಬೆದರಿಕೆಗಳ ಜೊತೆಗೆ ಸಾಲಾಗಿ ಕೂರಿಸಿ, ಎದುರಿಗಿನ ವೇದಿಕೆಯೇರುತ್ತಿದ್ದ ಮೇಷ್ಟರು ಹಾಗೂ ಗಣ್ಯರೆಲ್ಲ ಸಭಾಕಾರ್ಯಕ್ರಮವನ್ನು ಆರಂಭಿಸುತ್ತಿದ್ದರು. ಸಭಾಕಾರ್ಯಕ್ರಮವೆಂದರೆ ಮತ್ತೇನಲ್ಲ. ವೇದಿಕೆಯ ಈ ತುದಿಯಿಂದ ಆ ತುದಿಯ ತನಕ ಖುರ್ಚಿಯಲ್ಲಿ ಸಾಲಾಗಿ ಕುಳಿತವರೆಲ್ಲ ನಿಮಿಷಗಟ್ಟಲೆ ಮಾಡುವ ಭಾಷಣ!
ನುರಿತ ಭಾಷಣಕಾರರಾದ ಪ್ರತಿಯೊಬ್ಬರೂ ಏನಿಲ್ಲವೆಂದರೂ ಇಪ್ಪತ್ತರಿಂದ ಮೊವ್ವತ್ತು ನಿಮಿಷ ಮಾತನಾಡುತ್ತಿದ್ದರು. ತಪ್ಪು ತಿಳೀಬೇಡಿ. ಭಾಷಣ ಮಾಡುವುದರ ಬಗ್ಗೆ ಈಗ ನನಗೆ ಯಾವ ದೂರೂ ಇಲ್ಲ. ಆದರೆ ಆಗಿನ ವಯಸ್ಸಿಗೆ ಹಾಗೆ ಅಲ್ಲಾಡದೆ, ಏನೂ ಕಿತಾಪತಿ ಮಾಡದೇ, ಪಕ್ಕದಲ್ಲಿರುವವನನ್ನು ಗೋಳು ಹೊಯ್ಯದೇ, ಎರೆಡು-ಎರೆಡೂವರೆ ಗಂಟೆ ಸುಮ್ಮನೆ ಕೂರುವುದೆಂದರೆ ಎಂತಹಾ ಕಷ್ಟ ಎಂಬುದನ್ನು ನೀವೇ ಯೋಚಿಸಿನೋಡಿ. ನಾವೂ ಅಷ್ಟೇ. ಮೊದಲ ಒಂದೋ ಎರೆಡೋ ಭಾಷಣವನ್ನು ಸುಮ್ಮನೆ ಆಲಿಸುತ್ತಿದ್ದೆವು. ಆದರೆ ಮೇಷ್ಟರು ಏನೇ ಬೆದರಕೆ ಹಾಕಿದರೂ ನಮ್ಮೀ ತಾಳ್ಮೆ ಇಪ್ಪತ್ತು-ಮೊವ್ವತ್ತು ನಿಮಿಷಕ್ಕಿಂತ ಹೆಚ್ಚಿಗೆ ನಿಲ್ಲುತ್ತಿರಲಿಲ್ಲ. ಕುಳಿತಲ್ಲೇ ಪಕ್ಕದವನ ಜೊತೆ ಯಾವುದೋ ಬಾನ್ಗಡಿ ಆರಂಭಿಸುತ್ತಿದ್ದೆವು.
ಹೀಗೆ ಕೈಯಲ್ಲಿ ಯಾವುದೇ ಸಾಮಗ್ರಿಯಿಲ್ಲದೆ, ಸಭೆಯಲ್ಲಿ ಗಂಭೀರವಾಗಿ ಕುಳಿತಿರುವಾಗ ಬೇಜಾರು ಕಳೆಯಲಿಕ್ಕೆ ನಾವು ಮಾಡುತ್ತಿದ್ದ ಚಟುವಟಿಕೆಗಳದೇ ಒಂಥರಾ ಗಮ್ಮತ್ತು. ಎದುರೆಲ್ಲೋ ಕುಳಿತವನಿಗೆ ಸುಮ್ಮನೆ ಚಿವುಟುವುದು, ಕಾಗದ ಚಿಕ್ಕ ಉಂಡೆ ಕಟ್ಟಿ ಯಾರದೋ ಮೇಲೆ ಎಸೆಯುವುದು, ಎಂಥದೋ ಕಸವನ್ನು ತೆಗೆದು ಎದುರಿಗಿನವನ ಅಂಗಿಯೊಳಗೆ ಹಾಕುವುದು, ಕೈಯನ್ನು ಗಸಗಸನೆ ಉಜ್ಜಿದಾಗ ಬರುವ ಬೆಂಕಿಕಡ್ಡಿಯ ವಾಸನೆಯನ್ನು ಮೂಸುವುದು, ಎದುರಿಗೆ ಮೇಷ್ಟರುಗಳ ದಂಡೇ ಇದೆಯೆನ್ನುವುದನ್ನೂ ಮರೆತು ದೊಡ್ಡ ದನಿಯಲ್ಲಿ ಮಾತನಾಡತೊಡಗುವುದು... ಇಷ್ಟೇ ಅಲ್ಲ, ಇವೆಲ್ಲವನ್ನೂ ಮೀರಿದ ನಿಶ್ಯಬ್ದ ಕೀಟಲೆಗಳನ್ನು ಮಾಡುವ ಅಸಾಸುರನೊಬ್ಬ ನನ್ನ ಗೆಳೆಯರ ಗುಂಪಿನಲ್ಲಿದ್ದ. ಅವನ ದೇಹದ ಅದ್ಯಾವ ಕ್ರೋಮೋಜೋಮ್ ನಲ್ಲಿ ವ್ಯತ್ಯಾಸವಾಗಿತ್ತೋ ಗೊತ್ತಿಲ್ಲ, ಕುಳಿತಲ್ಲೇ ಮುಖವನ್ನು ಹೇಗ್ಹೇಗೋ ಮಾಡಿ, ಬಾಯೊಳಗೆ ನಾಲಿಗೆಯನ್ನು ಹೇಗ್ಹೇಗೋ ಆಡಿಸುತ್ತಿದ್ದ. ಥಟ್ಟನೆ ಅವನ ಕಣ್ಣಿನಿಂದ ನೀರು ಜಾರುತ್ತಿತ್ತು! ಹಾಗೆ ಸುರಿದ ನೀರನ್ನು ಸೆಲೋ ಗ್ರಿಪ್ಪರ್ ಪೆನ್ ನ ಕ್ಯಾಪ್ನಲ್ಲಿ ಶೇಖರಿಸುವುದೇ ನಮ್ಮ ಆಟವಾಗಿತ್ತು. ಬಾಯಲ್ಲಿ ಹೆಹೆಹೆ ಎಂದು ನಗುತ್ತಾ, ಕಣ್ಣಲ್ಲಿ ಧಾರಾಕಾರವಾಗಿ ನೀರು ಸುರಿಸುತ್ತಾ ವಿಚಿತ್ರವಾಗಿ ಕಾಣುತ್ತಿದ್ದ ಅವನಿಗೆ ತನ್ನ ಕಣ್ಣೀರಿನಿಂದ ಒಂದು ಕ್ಯಾಪ್ ಭರ್ತಿ ಮಾಡುವುದೇ ಗುರಿಯಾಗಿರುತ್ತಿತ್ತು‌. ಪಕ್ಕದಲ್ಲಿ ಕುಳಿತ ನಾವೆಲ್ಲ ಪಿಸುಮಾತುಗಳ ಮೂಲಕವೇ ಅವನಿಗೆ ಬಕಾಪ್ ಹೇಳಿ ಮತ್ತಷ್ಟು ಕಣ್ಣೀರು ಸುರಿಸಲಿಕ್ಕೆ ಪ್ರೋತ್ಸಾಹಿಸುತ್ತಿದ್ದೆವು. ಸಭೆಯಲ್ಲಿ ಕುಳಿತು ಇಂತಹಾ ಕಪಿಚೇಷ್ಟೆ ಮಾಡಿದ್ದಕ್ಕೆ ನಮಗೆಲ್ಲ ಮಾರನೇ ದಿನ ಪ್ರತ್ಯೇಕ ಬಹುಮಾನಗಳು ಕಾದಿರುತ್ತಿದ್ದವಾದರೂ ಅದೆಲ್ಲ ನಾಳೆಯ ವಿಷಯವಾದ್ದರಿಂದ ಯಾರೂ ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅಧ್ಯಕ್ಷರ ಭಾಷಣ ಮುಗಿದು ವಂದನಾರ್ಪಣೆ ಆರಂಭವಾಗುತ್ತಿದ್ದಂತೆಯೇ ಎಲ್ಲರಲ್ಲೂ ಹೊಸ ಉತ್ಸಾಹವೊಂದು ಸಂಚಾರವಾಗುತ್ತಿತ್ತು. ಇಷ್ಟು ಹೊತ್ತು ಪ್ರತಿಯೊಂದು ಭಾಷಣ ಮುಗಿದಾಗ ಮೂಕಿ ಚಿತ್ರದ ನಟರಂತೆ ಕೈತಟ್ಟುವ ನಟನೆ ಮಾಡುತ್ತಿದ್ದವರೆಲ್ಲ ಈಗ ಆದ್ಯಕ್ಷರ ಭಾಷಣ ಹಾಗೂ ವಂದನಾರ್ಪಣೆಗಳಿಗೆ, ಯಾರು ಯಾರಿಗೆ ವಂದನೆಗಳನ್ನು ಸಲ್ಲಿಸಿದರು ಎಂಬುದನ್ನೂ ಕೇಳಿಸಿಕೊಳ್ಳದೆ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದೆವು. ಪಕ್ಕದಲ್ಲೇ ಪ್ಲಾಸ್ಟಿಕ್ ಕವರ್ ಗಳೊಳಗೆ ಕುಳಿತಿರುತ್ತಿದ್ದ ಚಾಕ್ಲೇಟುಗಳು ನಮ್ಮೀ ಚಪ್ಪಾಳೆಗಳಿಂದ ಉತ್ಸಾಹಗೊಂಡು ಮತ್ತಷ್ಟು ಉಲ್ಲಾಸದಿಂದ ನಮ್ಮ ಕೈ ಸೇರಲಿಕ್ಕೆ ತಯಾರಾಗುತ್ತಿದ್ದವು.
-ವಿನಾಯಕ ಅರಳಸುರಳಿ.

ಪ್ರೀತಿಸಿ ಸೋಲುವ ದೇವಯಾನಿಯರು...


ಏಕೋ ದೇವಯಾನಿ ಬಹಳ ಕಾಡುತ್ತಾಳೆ.
"ನೀವು ನನ್ನ ಬುದ್ಧಿಯಾದರೆ ಅವನು ನನ್ನ ಹೃದಯ!"
"ನಿನಗೆ ನಾನು ಬೇಕೋ, ಇಲ್ಲಾ ಆ ಕಚ ಬೇಕೋ?" ಎಂಬ, ಜಗತ್ತಿನ ಬಹುತೇಕ ಹೆಣ್ಣು ಹೆತ್ತ ತಂದೆಯರು ಕೇಳುವ ಪ್ರೆಶ್ನೆಯನ್ನೇ ಕೇಳುವ ಶುಕ್ರಾಚಾರ್ಯರಿಗೆ ಮಗಳು ದೇವಯಾನಿ ಕೊಡುವ ಉತ್ತರವಿದು. ರಾಕ್ಷಸರ ಗುರುಗಳಾದ ಶುಕ್ರಾಚಾರ್ಯರಿಗೆ ಸತ್ತವರನ್ನು ಮತ್ತೆ ಬದುಕಿಸುವ ಮೃತ ಸಂಜೀವಿನಿ ವಿದ್ಯೆ ತಿಳಿದಿರುತ್ತದೆ. ಅದನ್ನು ಕಲಿಯಲೋಸುಗ ದೇವಲೋಕದಿಂದ ಇಳಿದುಬರುವವನೇ ದೇವಗುರು ಬೃಹಸ್ಪತಿಗಳ ಮಗನಾದ ಕಚ. ಅವನ ಮುಖ್ಯ ಉದ್ದೇಶವೇ ಅದಾದರೂ ಅದಕ್ಕಾಗಿ ಅವನು ಗೆಲ್ಲಬೇಕಾದುದು ಶುಕ್ರಾಚಾರ್ಯರನ್ನ. ಲೋಕಕಲ್ಯಾಣಾರ್ಥವಾದ ಆ ತಂತ್ರವೇನೋ ಸರಿಯಾದ್ದೇ. ಆದರೆ ಆ ಮಹತ್ಕಾರ್ಯಕ್ಕೆ ದಾಳವಾಗಿ ಬಳಕೆಯಾಗುವವಳು ಮಾತ್ರ ಮುಗ್ಧ ಪ್ರೀತಿಯ ದೇವಯಾನಿ!
ದೇವಯಾನಿ ಪ್ರೀತಿಸುತ್ತಾಳೆ. ಋಷಿಪುತ್ರನಾದ ಸ್ಪುರದ್ರೂಪಿ ಕಚನನನ್ನು ಮೊದಲ ನೋಟದಿಂದಲೇ ಇನ್ನಿಲ್ಲದಂತೆ ಆರಾಧಿಸುತ್ತಾಳೆ. ಮತ್ತೆ ಮತ್ತೆ ರಾಕ್ಷಸರು ಅವನನ್ನು ಕೊಂದು ಬಿಸಾಡಿದಾಗಲೂ ಭೋರಿಟ್ಟು ಅಳುತ್ತಾಳೆ. "ಅವನನ್ನು ಬದುಕಿಸಿಕೊಡು" ಎಂದು ಶುಕ್ರಾಚಾರ್ಯರ ಬಳಿ ಮಗುವಿನಂತೆ ಹಠ ಹಿಡಿಯುತ್ತಾಳೆ. ಪ್ರೀತಿಯ ಮಗಳ ಕಣ್ಣೀರನ್ನು ನೋಡಲಾಗದ ತಂದೆ ತಮಗೆ ಮಾತ್ರ ತಿಳಿದ ಮೃತ ಸಂಜೀವಿನಿ ವಿದ್ಯೆಯನ್ನು ಬಳಸಿ ಕಚನನ್ನು ಬದುಕಿಸುತ್ತಾರೆ. ಮೊದಲ ಬಾರಿ ಅಸುರರು ಅವನನ್ನು ಕತ್ತರಿಸಿ ತೋಳಗಳಿಗೆಸೆದಾಗ, ಎರೆಡನೇ ಬಾರಿ ಸಮುದ್ರಕ್ಕೆಸೆದಾಗ ಅವರ ಕೆಲಸ ಸುಲಭವಾಗಿಯೇ ಆಗುತ್ತದೆ. ಆದರೆ ಮೂರನೇ ಬಾರಿ ಮತ್ತೂ ತಲೆ ಓಡಿಸುವ ರಾಕ್ಷಸರು ಕಚನನ್ನು ಕೊಂದು, ಅವನ ದೇಹವನ್ನು ಸುಟ್ಟು ಬೂದಿಮಾಡಿ ಮಧ್ಯದಲ್ಲಿ ಹಾಕಿ ಶುಕ್ರಾಚಾರ್ಯರಿಗೇ ಕುಡಿಸುತ್ತಾರೆ. ಹೊರಹೋದ ಕಚ ಸಂಜೆಯಾದಾಗಲೂ ಮರಳಿ ಬಾರದಿದ್ದಾಗ ದೇವಯಾನಿ ಮತ್ತೆ ಅಳತೊಡಗುತ್ತಾಳೆ. ಮತ್ತೆ ತಂದೆಯೆದುರು ಕಚನನ್ನು ಹುಡುಕಿ ತರುವಂತೆ ಭೋರಿಡುತ್ತಾಳೆ. ಈ ಬಾರಿ ಶುಕ್ರಾಚಾರ್ಯರು ಕೂಗಿ ಕರೆದಾಗ ಕಚ ಅವರ ಹೊಟ್ಟೆಯಿಂದಲೇ ಓಗೊಡುತ್ತಾನೆ. ಕೊನೆಗೆ ಹೊಟ್ಟೆಯಲ್ಲಿರುವಂತೆಯೇ ಅವನಿಗೆ ಮೃತ ಸಂಜೀವಿನಿ ಮಂತ್ರ ಕಲಿಸಿ, ನಂತರ ಅವನಿಗೆ ಜೀವನೀಡುತ್ತಾರೆ. ಅವರ ಹೊಟ್ಟೆ ಸೀಳಿಕೊಂಡು ಹೊರಬರುವ ಕಚ ಅದೇ ವಿದ್ಯೆಯನ್ನು ಬಳಸಿ ಅವರಿಗೆ ಮರುಜೀವ ಕೊಡುತ್ತಾನೆ.
ಕಥೆಯ ಕಾಡುವ ಭಾಗ ಶುರುವಾಗುವುದೇ ಇಲ್ಲಿ. ಬಂದ ಕೆಲಸ ಪೂರೈಸಿಕೊಂಡ ಕಚ ಹೊರಟುನಿಲ್ಲುತ್ತಾನೆ‌. ಅಷ್ಟು ಸುಲಭದಲ್ಲಿ ಬಾರದ ಲೋಕಕ್ಕೆ ಹೊರಟುನಿಂತ ಅವನ ಬಳಿ ದೇವಯಾನಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ. ನೀನೆಂದರೆ ತನಗೆ ಅದೆಷ್ಟು ಪ್ರೀತಿಯೆಂಬುದನ್ನು ಪರಿಪರಿಯಾಗಿ ವರ್ಣಿಸುತ್ತಾಳೆ. ತಂದೆಯ ಬಳಿ ಮಾಡಿದಂತೆಯೇ ಹಠಮಾಡುತ್ತಾಳೆ. ನೀನಿಲ್ಲದೆ ಬದುಕಲಾರೆ ಎನ್ನುತ್ತಾಳೆ. ಕಣ್ಣೀರಾಗುತ್ತಾಳೆ. ಬಿಟ್ಟು ಹೋಗಬೇಡ ಎಂದು ಗೋಗರೆಯುತ್ತಾಳೆ. ಆದರೆ ಅಚಲನಾದ ಕಚ ಯಾವುದಕ್ಕೂ ಕರಗುವುದಿಲ್ಲ. ಹತಾಶಳಾದ ದೇವಯಾನಿ "ಮೃತ ಸಂಜೀವಿನಿ ನಿನಗೆ ಉಪಯೋಗಕ್ಕೆ ಬಾರದೇ ಹೋಗಲಿ" ಎಂದು ಶಪಿಸುತ್ತಾಳೆ. ಆಗಲಾದರೂ ಅವನು ತನ್ನನ್ನು ಒಪ್ಪುವನೇನೋ ಎಂದು ಅವನತ್ತ ಆಸೆಯಿಂದ ನೋಡುತ್ತಾಳೆ. ಆದರೆ ಅವಳಿಗೇ ತಿರುಗಿ ಶಪಿಸುವ ಕಚ ತಿರುಗಿಯೂ ನೋಡದೆ, ಬದುಕೇ ನೀನೆಂದು ಪ್ರೀತಿಸಿದ ದೇವಯಾನಿಯ ಪಾಲಿಗೆ ಕಾಡುವ ನೋವನ್ನಷ್ಟೇ ಉಳಿಸಿ ಹೊರಟೇಹೋಗುತ್ತಾನೆ.
ಹಾಗೆ ನೋಡಿದರೆ ಕಚನನ್ನು ಪ್ರೀತಿಸಿದ ದೇವಯಾನಿ ನೊಂದಿದ್ದೇ ಹೆಚ್ಚು. ಪ್ರತೀ ಬಾರಿಯೂ ಅವನು ಮನೆಯಿಂದಾಚೆ ಹೋಗುವಾಗ ಆತಂಕದಿಂದಲೇ ಕಳಿಸಿಕೊಡುತ್ತಾಳೆ. ಹೊರ ಹೋದ ಅವನು ಕತ್ತಲಾದರೂ ಮರಳಿ ಬಾರದಾದಾಗ, ಕಾಡೆಲ್ಲ ಅಲೆದು ಹುಡುಕಿದರೂ ಅವನು ಕಾಣದೇ ಹೋದಾಗ, ಅವನನ್ನು ಬದುಕಿಸಲು ತಂದೆ ಹಿಂದೆಮುಂದೆ ಯೋಚಿಸಿದಾಗ.... ದೇವಯಾನಿ ಅತ್ತೇ ಅಳುತ್ತಾಳೆ. ಪ್ರೀತಿಸದ ಕೆಲಕ್ಷಣಗಳ ಹೊರತಾಗಿ ಪ್ರೇಮವೆಂಬುದು ಅವಳ ಬದುಕಿನಲ್ಲಿ ಸಂಭ್ರಮವನ್ನು ಚಿಗುರಿಸುವುದೇ ಇಲ್ಲ. ಆದರೂ ಸಹಾ ದೇವಯಾನಿ ಪ್ರೀತಿಸುತ್ತಲೇ ಹೋಗುತ್ತಾಳೆ. ಇಡೀ ಅಸುರ ಜಗತ್ತೇ ಅವನನ್ನು ತನ್ನಿಂದ ದೂರ ಮಾಡಲು ಹವಣಿಸುವಾಗಲೂ ಎದೆಯೊಳಗೆ ಕನಸುಗಳನ್ನಿಟ್ಟುಕೊಂಡು ಕನವರಿಸುತ್ತಾಳೆ. ಪ್ರತೀ ಬಾರಿ ಅವನು ನಿರ್ಜೀವವಾದಾಗಲೂ ಅವನನ್ನು ಬದುಕಿಸಿಕೊಳ್ಳುತ್ತಾಳೆ. ಹಾಗೆ ತಾನು ಬದುಕಿಸಿಕೊಂಡ ಹುಡುಗ ತನಗೇ ಸಿಗುತ್ತಾನೆಂದು ಸಂಭ್ರಮಿಸುತ್ತಾಳೆ. ಅವನಿಗಾಗಿ ಸುರಿಸುವ ಒಂದೊಂದು ಕಣ್ಣೀರ ಹನಿಯೂ ಮುಂದೊಂದು ದಿನ ಸಂಭ್ರಮದ ಮುತ್ತಾಗುತ್ತದೆಂದು ಭ್ರಮಿಸುತ್ತಾಳೆ.
ಕೊನೆಗೆ ಮಾಯದ ನೆನಪುಗಳ ಹೃದಯದಲ್ಲೇ ಮರೆಮಾಡಿಕೊಂಡು, ಕಚನ ಶಾಪದಂತೆ ಋಷಿಪುತ್ರನಲ್ಲದ, ಕ್ಷತ್ರಿಯನಾದ ಯಯಾತಿಯನ್ನು ಮದುವೆಯಾಗುತ್ತಾಳೆ.
************
ದೇವಯಾನಿ.. ದೇವಲೋಕದಂದಿಳಿದುಬಂದ ತನ್ನನ್ನು, ಹಿಂದೆಂದೋ ಬೇರಾಗಿದ್ದ ತನ್ನ ಬದುಕಿನ ಭಾಗವೇ ಮರಳಿ ಬಂತೇನೋ ಎಂಬಂತೆ ನಲ್ಮೆಯಿಂದ ಬರಮಾಡಿಕೊಂಡ ದೇವಯಾನಿ.. ಮೊಟ್ಟ ಮೊದಲ ನೋಟದಲ್ಲೇ ತನ್ನೊಡನೆ ಬದುಕಿನ ಕಟ್ಟ ಕಡೆಯ ಹೆಜ್ಜೆಯನ್ನು ನಡೆಯಬೇಕೆಂದು ನಿರ್ಧರಿಸಿ ಸಾವಿರ ಕನಸುಕಂಡ ದೇವಯಾನಿ.. ಪ್ರತಿದಿನ ತಾನು ಮನೆಯಿಂದ ಹೊರಡುವಾಗ ಭಾರ ಹೃದಯದಿಂದ ಬೀಳ್ಕೊಡುತ್ತಿದ್ದ ಹೂವಿನಂತಹಾ ದೇವಯಾನಿ.. ಸಂಜೆ ಮರಳುವ ಹೊತ್ತಿಗೆ ಮೈಯೆಲ್ಲ ಹೃದಯವಾಗಿ ಕಾದು ನಿಂತಿರುತ್ತಿದ್ದ ಪ್ರೇಮ ಮೂರ್ತಿ ದೇವಯಾನಿ.. ಅಸುರರ ಕೈಲಿ ದಾರುಣವಾಗಿ ಹತ್ಯೆಯಾದ ತನ್ನನ್ನು ಮತ್ತೆ ಮತ್ತೆ ಬದುಕಿಸಿಕೊಂಡ ದೇವಯಾನಿ.. ಹೆತ್ತ ತಂದೆಯ ಪ್ರಾಣವನ್ನೂ ಪಣಕ್ಕಿಟ್ಟು ತಾನೆಂಬ ಮೋಸಗಾರನನ್ನು ಉಳಿಸಿಕೊಂಡ ದೇವಯಾನಿ.
ಹಿಡಿ ಪ್ರೀತಿಯೊಂದಲ್ಲದೆ ಮತ್ತಾವ ಸೌಭಾಗ್ಯವನ್ನೂ ಬಯಸದೆ ತನ್ನನ್ನು ಇಷ್ಟೆಲ್ಲ ಆರಾಧಿಸಿದ ದೇವಯಾನಿ..
ಯಾಕೆ ಕಚನ ದೃಷ್ಟಿಗೆ ದೇವಯಾನಿ ಹೀಗೆ ಕಾಣಲಿಲ್ಲ? ಯಾಕೆ ಕೊನೆಗೂ ಅವನಿಂದ ಅವಳನ್ನು ಪ್ರೀತಿಸಲಾಗಲೇ ಇಲ್ಲ? ತನ್ನನ್ನು ಇನ್ನಿಲ್ಲದಂತೆ ಪ್ರೀತಿಸಿದ ಜೀವ ಎದುರಲ್ಲಿ ನಿಂತು ಕೈಚಾಚಿದಾಗಲೂ ಏಕವನು ಕರಗಲಿಲ್ಲ? ಒಂದು ಹೃದಯದಲ್ಲಿ ಅಷ್ಟೊಂದು ಉತ್ಕಟವಾದ ಜ್ಯೋತಿಯನ್ನುರಿಸಿದ ಪ್ರೀತಿ ಅದೇಕೆ ಇನ್ನೊಂದು ಮನದಲ್ಲಿ ಸಣ್ಣ ಕಿಡಿಯನ್ನೂ ಹಚ್ಚದೇ ನಂದಿ ಹೋಯಿತು?
ಪ್ರೆಶ್ನೆಗಳು ಮೃತ ಕಚನಂತೆಯೇ ಎದ್ದೆದ್ದು ಬಂದು ಕಾಡುತ್ತವೆ.
ಕಚನ ದೃಷ್ಟಿ ಅಚಲವಾಗಿತ್ತು. ಅವನಿಗೆ ಸಾಧ್ಯತೆ-ಅಸಾಧ್ಯತೆಗಳ ಅರಿವಿತ್ತು. ಕರ್ತವ್ಯ ಪ್ರಜ್ಞೆ ಸ್ಪಷ್ಟವಾಗಿತ್ತು. ಕಾರ್ಯವನ್ನು ಈಡೇರಿಸಿಕೊಳ್ಳುವ ಜಾಣತನವಿತ್ತು. ಆದರೆ ದೇವಯಾನಿ? ಅವಳು ಹಾಗಲ್ಲ. ಅವಳಿಗೆ ತಿಳಿದಿದ್ದುದು ಒಂದೇ.. ಪ್ರೀತಿಸುವುದು. ಸರಿ-ತಪ್ಪು, ಸಾಧ್ಯತೆ-ಅಸಾಧ್ಯತೆ, ದೈವಿಕತೆ-ರಾಕ್ಷಸತೆ, ನಿಜ-ಮೋಸ.. ಇವೆಲ್ಲವುಗಳಾಚೆಗೆ ನಿರ್ಮಲ ಹೃದಯದಿಂದ ಪ್ರೀತಿಸುವ ಮುಗ್ಧತೆಯೊಂದೇ ಅವಳಲ್ಲಿದ್ದುದು. ಬಹುಷಃ ಮುಗ್ಧವಾದ ಹೃದಯವೊಂದಲ್ಲದೆ ಮತ್ತಾರಿಗೂ ಜಗತ್ತಿನಲ್ಲಿ ಇಷ್ಟೊಂದು ಉತ್ಕಟವಾಗಿ ಪ್ರೀತಿಸಲಿಕ್ಕೆ ಸಾಧ್ಯವಿಲ್ಲವೇನೋ ಎಂಬಂತೆ ಪ್ರೀತಿಸಿದ ದೇವಯಾನಿ ಪ್ರೀತಿಸಿ ಮೋಸಹೋದ ಜಗತ್ತಿನೆಲ್ಲ ಮನಸ್ಸುಗಳ ಪ್ರತೀಕವಾಗಿ ಉಳಿದುಹೋದಳು.
************
ದೇವಯಾನಿ ಇಂದಿಗೂ ಜೀವಂತವಾಗಿದ್ದಾಳೆ. ಆಧುನಿಕ ಕಲಿಯುಗುದಲ್ಲೂ ತನ್ನಂತೆಯೇ ಮೋಸ ಹೋಗುವ ಮುಗ್ಧ ಹೃದಯಗಳ ನಿಶ್ಯಬ್ಧ ಬಿಕ್ಕುಗಳಲ್ಲಿ ಉಸಿರಾಡಿಕೊಂಡಿದ್ದಾಳೆ. ಅವನ ರೂಪಕ್ಕೋ, ಜಾಣತನಕ್ಕೋ, ಮಾತಿನಲ್ಲಿನ ಸರಸಕ್ಕೋ, ಎಂದೆಂದೂ ಕೈ ಬಿಡನೆಂಬ ದಿವ್ಯ ನಂಬಿಕೆಗೋ ಸೋತು ಕರಗಿದ, ತನ್ನಂಥವರೇ ಆದ ಕೋಟ್ಯಾಂತರ ದೇವಯಾನಿಯರಲ್ಲಿ ಹಂಚಿಹೋಗಿದ್ದಾಳೆ. ಬಿಟ್ಟು ಹೋಗಲೆಂದೇ ಬಳಿಬರುವ ಕಚನಿಂದ ಘಾಸಿಗೊಳ್ಳಲೆಂದೇ ಅವನನ್ನು ಅಪಾರವಾಗಿ ಪ್ರೀತಿಸಿಕೊಂಡಿದ್ದಾಳೆ. ಆ ಋಷಿಪುತ್ರನಂತೆ ಯಾವ ಮಹದುದ್ದೇಶವಿಲ್ಲದೆಯೂ ಸಹಾ ಅವನಿಗಿಂತ ಕಠೋರವಾಗಿ ತಿರಸ್ಕರಿಸಿ ಹೋಗುವನಿಗೆಂದೇ ಜಾರಲಿರುವ ಕಂಬನಿಗಳ ಕಾದಿಟ್ಟುಕೊಂಡಿದ್ದಾಳೆ.
ಕೊನೆಗೆ ಅವನದೇ ಶಾಪದಂತೆ, ತನಗೆ ಜೊತೆಯಾಗುವ ಯಾವುದೋ ಯಯಾತಿಯಲ್ಲಿ ಮತ್ತೆ ಮತ್ತೆ ಕರಗಿ ಅಮರಳಾಗುತ್ತಿದ್ದಾಳೆ.
(ಮಾನಸದಲ್ಲಿ ಪ್ರಕಟಿತ)
-ವಿನಾಯಕ ಅರಳಸುರಳಿ.

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...