ಮಂಗಳವಾರ, ಜುಲೈ 30, 2019

ಯಾವ ಜನ್ಮದ ಮೈತ್ರಿ…



“ಅಯ್ಯೋ ಅಸ್ತಿ ಪಂಜರವೇ.. ಇನ್ನೂ ತಯಾರಾಗಿಲ್ವ ನೀನು?”


ಜೀನ್ಸ್ ಪ್ಯಾಂಟು ತೊಟ್ಟು, ತೋಳಿನ ಬನಿಯನ್ ಧರಿಸಿ ಇನ್ನೇನು ಅಂಗಿ ಹಾಕಿಕೊಳ್ಳಬೇಕೆನ್ನುವಷ್ಟರಲ್ಲಿ ಮಹಡಿಯ ಮೇಲಿನ ನನ್ನ ಸಿಂಗಲ್ ರೂಮಿನ ಬಾಗಿಲು ದಡದಡನೆ ಸದ್ದು ಮಾಡಿತ್ತು. ಅದರ ಜೊತೆಗೇ ಘಲಘಲಿಸಿದ, ಕೈಬಳೆಗಳೆರೆಡು ಪರಸ್ಪರ ಸೋಕಿಕೊಂಡ ಶಬ್ದ ಬಾಗಿಲು ಬಡಿಯುತ್ತಿರುವುದು ವೈಶ್ಣವಿಯೇ ಎಂಬುದನ್ನು ಸಾಬೀತುಪಡಿಸಿತ್ತು. ಹಾಕಿಕೊಳ್ಳಬೇಕಿರುವ ಅಂಗಿಯನ್ನು ಕೈಯಲ್ಲೇ ಹಿಡಿದು ಬಾಗಿಲು ತೆರೆದರೆ ತಲೆಯಿಂದ ಕಾಲಿನ ತನಕ ಫುಲ್ ಪ್ಯಾಕಪ್ ಆಗಿ, ತೋಳಲ್ಲಿ ವ್ಯಾನಿಟಿ ಬ್ಯಾಗನ್ನೂ, ಬೆನ್ನಲ್ಲಿ ಇನ್ನೊಂದು ಬ್ಯಾಗನ್ನೂ ಧರಿಸಿದ ವೈಶ್ಣವಿಯೆಂಬ ಐದಡಿಯ ಅಕಾರ “ಅಸ್ತಿಪಂಜರವೇ” ಎನ್ನುತ್ತಾ ಪ್ರತ್ಯಕ್ಷವಾಯಿತು.


“ಅಲ್ವೇ ಹಿಡಿಂಬೆ, ಬಸ್ಸಿರೋದೇ ಹತ್ತೂವರೆಗೆ. ಈಗಿನ್ನೂ ಗಂಟೆ ಎಂಟೂ ಆಗಿಲ್ಲ, ಅಷ್ಟರಲ್ಲೇ ಗಡಿಬಿಡಿ ಮಾಡ್ತೀಯಲ್ಲೇ? ಅಲ್ಲಿ ಕೆಎಸ್ಸಾರ್ಟಿಸಿ ಸ್ಟಾಪಿನ ಕಲ್ಲು ಬೆಂಚಿನ ಮೇಲೆ ಕೂತು ತೂಕಡಿಸೋದಕ್ಕೆ ಇಷ್ಟು ಅರ್ಜೆಂಟಾ ನಿಂಗೆ?”


ಬಾಗಿಲಿಗಡ್ಡ ನಿಂತ ನನ್ನನ್ನು ತಳ್ಳಿಕೊಂಡೇ ಒಳಬಂದಳನ್ನು ಪ್ರಶ್ನಿಸಿದೆ. “ಅದೆಲ್ಲ ಆಮೇಲೆ ಹೇಳ್ತೀನಿ. ನೀನೀಗ ಬೇಗ ಹೊರಡು” ಎನ್ನುತ್ತಾ ಮಂಚದ ಮೇಲಿದ್ದ ಜಯಂತ ಕಾಯ್ಕಿಣಿಯವರ ‘ತೂಫಾನ್ ಮೇಯ್ಲ್’ ಅನ್ನು ತಿರುವಿಹಾಕತೊಡಗಿದಳು. ನಾನು ಶರ್ಟ್ ನ ಗುಂಡಿ ಹಾಕಿಕೊಳ್ಳುತ್ತಾ ಕನ್ನಡಿಯತ್ತ ನಡೆದೆ.


ದೀಪಾವಳಿಗೆ ಊರಿಗೆ ಹೋಗುವುದು ಆರು ವರ್ಷಗಳ ಬೆಂಗಳೂರಿನ ಬದುಕಿನಲ್ಲಿ ನಾನು ಒಂದು ಬಾರಿಯೂ ತಪ್ಪಿಸದೇ ಅನುಸರಿಸಿಕೊಂಡು ಬಂದಿರುವ ಅಭ್ಯಾಸ. ‘ಮಾಮು ಬಂದಾ’ ಎಂದು ಖುಷಿಯಿಂದ ಕುಣಿಯುವ ಪಕ್ಕದ ಮನೆಯ ಆಕಾಂಕ್ಷುವಿನ ಜೊತೆ ಗುಡ್ಡದ ಮೇಲೆಲ್ಲಾ ಅಲೆಯುತ್ತಾ ಪಟಾಕಿ ಹೊಡೆಸುವುದು ದಶಕದಾಚೆ ಬಿಟ್ಟು ಬಂದ ಬಾಲ್ಯಕ್ಕೆ ಮತ್ತೆ ಹತ್ತಿರವಾಗಿಸುವ ಆಟ. ಆದರೆ ಈ ಬಾರಿಯ ವಿಶೇಷವೆಂದರೆ ಜೊತೆಯಲ್ಲಿ ವೈಶ್ಣವಿಯೂ ಇರುವುದು. “ನಾನು ವಿಹಾರ್ ನ ಮನೆಗೇ ಬರ್ತಿದ್ದೀನಿ. ನೀನೂ ಅಲ್ಲಿಗೇ ಬಾ” ಎಂಬ ಕಟ್ಟಪ್ಪಣೆ ಸಾಗರದಲ್ಲಿರುವ ಅವಳ ಅಮ್ಮನಿಂದ ಬಂದ ಮರುಕ್ಷಣವೇ ವೈಶ್ಣವಿ ನನಗೆ ಮೆಸೇಜ್ ರವಾನಿಸಿದ್ದಳು.
“ಅಮ್ಮ ಹಬ್ಬಕ್ಕೆ ನಿಮ್ಮನೆಗೇ ಬರ್ತಾಳಂತೆ. ಒಂದಿನ ಜಾಸ್ತಿ ರಜ ಹಾಕೋ.. ಪಣಂಬೂರು ಬೀಚಿಗೆ ಹೋಗಿಬರೋಣ ಮಧು ಕಾರಲ್ಲಿ. ಅದೇ.. ನಿನ್ನ ಹುಡುಗಿಯ ಊರಿಗೆ.”


ನನ್ನ ಹುಡುಗಿಯ ಊರು….


ಕೇಳಲು ಹಿತವೆನಿಸಿತ್ತು. ಜೊತೆಜೊತೆಗೆ ಕೈಹಿಡಿದು ಒಂದು ಹೆಜ್ಜೆಯಾದರೂ ನಡೆಯಲಿಲ್ಲ. ಎದುರು ಬದುರಾಗಿ ಕುಳಿತು ಒಂದು ಲೋಟ ಕಾಫಿಯನ್ನೂ ಗುಟುಕರಿಸಲಿಲ್ಲ. ಒಬ್ಬರು ಇನ್ನೊಬ್ಬರಿಗಾಗಿ ದಾರಿಯಲ್ಲಿ ನಿಂತು ಕಾಯಲಿಲ್ಲ‌. ಸಂಜೆಯ ಕಲ್ಲು ಬೆಂಚಿನಲ್ಲಿ ಒಬ್ಬರಿಗೊಬ್ಬರು ಆತು ಕುಳಿತು ನೆನಪಿನ ಜೋಳಿಗೆಯಿಂದ ಹಳೆಯದೊಂದು ಖುಷಿಯನ್ನೋ, ನೋವನ್ನೋ ಆಚೆತೆಗೆದು ಹೇಳುತ್ತಾ ಹೆಗಲಿಗೆ ತಲೆಯಾನಿಸಲಿಲ್ಲ..


ಅದರೂ ಅವಳು ನನ್ನ ಹುಡುಗಿ.


ನನ್ನ ನೂರು ಕರೆ, ಬಿನ್ನಹಗಳಿಗೆ ಕಿವುಡಿಯಾಗಿ ನಡೆದುಹೋದಳು. ಒಂದು ಹೊರಳು ನೋಟಕ್ಕಾಗಿ ಕಾದು ನಿಂತ ನನ್ನೆಡೆಗೆ ತಿರುಗಿಯೂ ನೋಡದೆ ಹೊರಟುಹೋದಳು. ಈ ಹೊತ್ತಿಗೆ ಅದ್ಯಾರೋ ನೂರು ಬೋಟುಗಳ ಒಡೆಯನ ತೋಳಿನಲ್ಲಿ ಬಂಧಿಯಾಗಿ ನನಗೆಂದೂ ಎಟುಕದ ಸಮುದ್ರದಲ್ಲಿ ವಿಹರಿಸುತ್ತಿರುವಳು.


ಆದರೂ ಅವಳು ನನ್ನ ಹುಡುಗಿ!


ಪ್ರೇಮದ ದಿವ್ಯ ಅನುಭೂತಿಯೆಂದರೆ ಇದೇ ಅಲ್ಲವೇ? ಎಂದೂ ಬಾರದವರನ್ನು ಕಳಿಸಿಕೊಡಲು ಒದ್ದಾಡುವುದು. ಸಿಕ್ಕಿಯೇ ಇಲ್ಲದ್ದನ್ನು ಕಳೆದುಕೊಳ್ಳುವ ವೇದನೆಯಲ್ಲಿ ನರಳುವುದು. ಶುರುವೇ ಆಗದ್ದನ್ನು ಮುಗಿಯಲು ಬಿಡೆನೆಂದು ಹಠ ಹಿಡಿಯುವುದು ಹಾಗೂ ಕೈತಪ್ಪಿಹೋದ ಮೇಲೂ ಅದು ನನ್ನದೇ ಎಂದು ನಂಬುವುದು...


“ಏನ್ ಸರ್? ಕನ್ನಡೀಲಿ ಹಳೇ ಹುಡುಗಿಯ ಬಿಂದಿ ಕಾಣ್ತಿದೆಯಾ?”
ವೈಶ್ಣವಿ ಗಿಟಿಗಿಟಿ ನಕ್ಕಳು.


“ಇಲ್ಲ ಮೇಡಂ. ಸುಶೀಲ ಟೀಚರ್ ಮಗಳ ಮುಂಬುಹಲ್ಲು ಕಾಣ್ತಿದೆ”
ನನ್ನ ಯೋಚನೆಗಳ ಸುಳಿವು ಬಿಟ್ಟುಕೊಡುವ ಇಚ್ಛೆಯಿಲ್ಲದೆ ಮಾರುತ್ತರ ನೀಡಿದೆ.


“ಕಂಡರೆ ನೋಡಿಕೋ. ಈಗ ಕನ್ನಡಿಬಿಟ್ಟು ಈಚೆ ಬಾ. ಅದು ಹೆಣ್ಣುಮಕ್ಕಳ ರಂಗಸ್ಥಳ” ಎನ್ನುತ್ತಾ ನನ್ನನ್ನು ಹಿಂದಕ್ಕೆಳೆದು ದರ್ಪಣದ ಮುಂದೆ ತಾನು ಸ್ಥಾಪಿತಳಾದಳು. ಮೂರು ಕವಲಾಗಿ ಸುಳಿಯೊಡೆದು ಪರಸ್ಪರ ಸುತ್ತಿಕೊಂಡಿದ್ದ ಜಡೆಯನ್ನು ಬೆನ್ನಿನಿಂದ ಮುಂದಕ್ಕೆ ವರ್ಗಾಯಿಸಿಕೊಂಡು ಅದರ ಬ್ರಶ್ ನಂತಹಾ ತುದಿಯನ್ನು ಬಾಚಿಕೊಳ್ಳತೊಡಗಿದಳು. ಬಾಚಿ ಬಾಚಿ ಮತ್ತಷ್ಟು ಚೂಪಾದ ಅದನ್ನು ಹಾವಿನಂತೆ ಸುರುಳಿಸುತ್ತಿ ತಲೆಯ ಹಿಂಭಾಗದ ಇಳಿಜಾರಿನಲ್ಲಿ ಎತ್ತಿ ಮಡಿಚಿಕಟ್ಟಿಕೊಂಡು ಥಟ್ಟನೆ ತಿರುಗಿ ಅಯಾಮ್ ರೆಡಿ! ಎಂದು ಕಣ್ಣುಮಿಟುಕಿಸಿದಳು. ಮೋಟು ಜಡೆಯನ್ನು ಹೀಗೇ ಬಾಚಿ ಬಾಚಿ ಎತ್ತಿಕಟ್ಟಿಕೊಳ್ಳುತ್ತಿದ್ದವಳು ಅಮ್ಮ. “ನಂಗೆ ಮೊದ್ಲು ಎಷ್ಟು ದಪ್ಪ ಜಡೆಯಿತ್ತು ಗೊತ್ತಾ? ಶಾಲೇಲಿ ಎಲ್ರೂ ನನ್ನ ನೋಡಿ ಹೊಟ್ಟೆಕಿಚ್ಚು ಪಡ್ತಿದ್ರು. ಅದ್ಯಾರ ದೃಷ್ಟಿ ಬಿತ್ತೋ ಏನೋ, ಎಲ್ಲಾ ಉದ್ರಿ ಹಿಂಗಾಯ್ತು” ಎನ್ನುತ್ತಾ ತನ್ನ ಮೋಟು ಜಡೆಯನ್ನೇ ಹಿಂದೆಂದೋ ಇದ್ದ ದಟ್ಟ ಕೂದಲೆಂಬಂತೆ ನೀವುತ್ತಾ ಬೇಸರಿಸುತ್ತಿದ್ದರೆ, ಉದುರಿ ಹೋಗಿರುವುದು ಹಾಗೂ ಈಗ ಇರುವುದು.. ಈ ಎರೆಡರ ಪ್ರಾಮುಖ್ಯತೆಯೂ ಗೊತ್ತಿಲ್ಲದ ಆರೇಳು ವರ್ಷದ ನಾನು ಅವಳು ಎತ್ತಿಕಟ್ಟಿದ ಜಡೆಯ ಉಂಡೆಯನ್ನು ಮೆಲ್ಲನೆ ಸೋಕಿ ಹೂಂ ಎನ್ನುತ್ತಿದ್ದೆ.


ಆದರೆ ‘ಜ್ಯೋತಿ’ಯ ಜಡೆ ಹೀಗಿರಲಿಲ್ಲ. ಅದು ದಟ್ಟ, ನೀಳ. ರಸ್ತೆ ಬದಿಯಲ್ಲಿ ಅವಳನ್ನೇ ಕಾಯುತ್ತಾ ನಿಂತ ನನ್ನನ್ನು ನೋಡಿಯೂ ನೋಡದಂತೆ ಬೆನ್ನು ಹಾಕಿ ನಡೆಯುತ್ತಿದ್ದವಳ ಬೆನ್ನಿನ ತುಂಬಾ ಲೋಲಕದಂತೆ ನೇತಾಡುತ್ತಾ ನನ್ನನ್ನು ಮತ್ತಷ್ಟು ಮೋಹಕನನ್ನಾಗಿಸುತ್ತಿತ್ತು. ಅದೆಷ್ಟೇ ದೂರದಿಂದ ನೋಡಿದರೂ ಅದು ಅವಳೇ ಎಂದು ಗುರುತು ಹತ್ತುತ್ತಿದ್ದುದೇ ಅವಳ ಆ ನೀಳ ಜಡೆಯಿಂದ. ತುಂಬು ಬೆನ್ನಿನ ಮೇಲೆ ಕಪ್ಪು ಬಿಳಲಿನಂತೆ ಇಳಿಬಿದ್ದ ಜಡೆ, ಕೈಯನ್ನು ಆಚೀಚೆ ಬೀಸದೇ ಮೊಲದಂತೆ ಮುದುರಿಕೊಂಡು ನಡೆಯುವ ಭಂಗಿ… ಇವೆಲ್ಲ ಒಂದುಗೂಡಿ ಅವಳೆಂಬ ಚೆಲುವೆಗೆ ಪ್ರತ್ಯೇಕವಾದ ನಿಲುವೊಂದನ್ನು ಕೊಟ್ಟಿದ್ದವು. ಬೆನ್ನು ಹಾಕಿ ನಡೆದಾಗಲೂ ನನಗೆ ತೋರದೇ ಮರೆಮಾಚಿರುವ ಅವಳ ಇನ್ನೊಂದು ಮುಖ ನನ್ನತ್ತಲೇ ನೋಡಿ ಮುಗುಳ್ನಗುತ್ತಿರುವಂತೆ ನಾನು ಪರವಶನಾಗುತ್ತಿದ್ದೆ. ಈಗಲೂ ಅಷ್ಟೇ, ಬಸ್ಸಿನಲ್ಲಿ  ಕುಳಿತು ಸಾಗುವಾಗ ಹೊರಗಡೆ ರಸ್ತೆಯಲ್ಲಿ, ಸೆಕೆಂಡಿನ ನೂರೊಂದನೇ ಭಾಗದಲ್ಲಿ ಅವಳು ರಪ್ಪನೆ ಹಾದುಹೋದರೂ ನನಗೆ ತಿಳಿದುಬಿಡುತ್ತದೆ… ಅದು ಅವಳೇ ಎಂದು. ಬಹುಷಃ ಈ ಅಂತರಂಗದೊಳಗೆ ಅವಳಷ್ಟು ಗಾಢವಾಗಿ ಇನ್ಯಾವ ರೂಪವೂ ಅಚ್ಚೊತ್ತಲಾರದೇನೋ?


ಯೋಚನೆಗಳ ಹರಿವು ಬತ್ತುವ ಹೊತ್ತಿಗೆ ನಮ್ಮನ್ನು ಹೊತ್ತ ಬಿಎಂಟಿಸಿ ಬಸ್ಸು ಮೆಜಸ್ಟಿಕ್ ನಿಲ್ದಾಣ ಪ್ರವೇಶಿಸುತ್ತಿತ್ತು.


              *****************


“ಅಯ್ಯೋ.. ನೀರಿನ ಬಾಟಲಿ ಮರೆತೇ ಬಿಟ್ಟೆ!”


ನಿಲ್ದಾಣದ ಬೆಂಚಿನ ಮೇಲೆ ಚಕ್ಕಳಮಕ್ಕಳ ಹಾಕಿಕೊಂಡು ತಪಸ್ವಿನಿಯಂತೆ ಕುಳಿತಿದ್ದವಳು ಥಟ್ಟನೆ ಜಾಂಬವತಿಯಂತೆ ಕೆಳಗೆರಗಿಕೊಂಡಳು.


“ಅಷ್ಟಕ್ಕೇ ಇಷ್ಟ್ಯಾಕೆ ಶಾಕ್ ಆಗ್ತೀಯ ಮಾರಾಯ್ತೀ? ಅಲ್ನೋಡು, ಆ ಗೂಡಂಗಡೀಲಿ ನಿನ್ಹಂಗೆ ಬಾಟಲಿ ಮರೆತುಬರುವವರಿಗಂತಾನೇ ಬಾಟಲಿ ಬಾಟಲಿಗಟ್ಟಲೆ ನೀರಿಟ್ಟುಕೊಂಡಿದ್ದಾರೆ. ನಿಜ ಹೇಳಬೇಕಂದ್ರೆ ಅವರ ಹೊಟ್ಟೆಪಾಡು ನಡೆಸುವವರೇ ನಿನ್ನಂತಹಾ ಮರೆಗುಳಿ ಜಾಂಬವತಿಯರು” ಎಂದು ಗೂಡಂಗಡಿಯತ್ತ ನಡೆಯತೊಡಗಿದೆ. ಹಿಂದಿನಿಂದ “ಎರೆಡು ಬಾಟ್ಲಿ ತಗೊಂಬಾ” ಎಂದು ಕೂಗಿದ್ದು ಕೇಳಿಸಿದರೂ ಕೇಳಿಸದಂತೆ ನಡೆದು ಅರ್ಧ ಲೀಟರ್ ನ ಒಂದು ಬಾಟಲಿಯೊಂದಿಗೆ ಮರಳಿದೆ. ಹುಡುಗಿ ತಪಸ್ವಿನಿಯ ಫೋಸಿಗೆ ಮರಳಿದ್ದಳು.


“ಎರೆಡು ಬಾಟ್ಲಿ ತಗೊಂಬಾ ಅಂದ್ನಲ್ಲಾ? ಯಾಕೆ ಒಂದೇ ತಂದೆ?” ಬಾಟಲಿಯ ಮುಚ್ಚಳ ತೆರೆಯುತ್ತಲೇ ಆಕ್ಷೇಪಿಸಿದಳು.


“ಸ್ನಾನ ಮಾಡ್ಬೇಕಂತಿದೇಯೇನು? ಇಷ್ಟು ಸಾಕು ಸುಮ್ನಿರು. ಪ್ರಯಾಣ ಮಾಡುವಾಗ ಜಾಸ್ತಿ ನೀರು ಕುಡೀಬಾರ್ದು. ನಾನೇನೂ ಮಧ್ಯದಲ್ಲಿ ನೀರು ಕುಡಿಯಲ್ಲ. ಇನ್ನೊಂದು ಬಾಟಲ್ ಯಾಕೆ, ತಲೆಗೆ ಜಪ್ಪೋಕೆ?” ಪ್ರಶ್ನಿಸಿದೆ.


“ನೋಡು ಪುಟ್ಟಾ.. ಹೆಣ್ಮಕ್ಕಳ ಹತ್ರ ಪ್ರತಿಯೊಂದು ವಿಷಯಾನೂ ಯಾಕೆ ಏನು ಅಂತ ವಿವರಣೆ ಕೇಳಬಾರದು. ವಿವರಿಸಲಾಗದ, ವಿವರಿಸಿದರೂ ನಿಮ್ಮಂಥಾ ಶಾಣ್ಯಾರಿಗೆ ಅರ್ಥವಾಗದ ಎಷ್ಟೋ ಸಂಗತಿಗಳಿವೆ ನಮ್ಮೀ ಪ್ರಪಂಚದಲ್ಲಿ. ಸುಮ್ನೇ ಜಾಣ ಮರಿ ಥರಾ ಹೋಗಿ ಇನ್ನೊಂದು ಬಾಟಲಿ ತಗೊಂಬಾ ನಡಿ… “
ಬೆನ್ನಿಗೆ ಕೈಯಿಟ್ಟು ತಳ್ಳಿದವಳನ್ನು ದುರದುರನೆ ನೋಡಿ ಮೇಲೆದ್ದೆ. ಏನಾದರೂ ಹೇಳಿ ರೇಗಿಸಬೇಕೆನಿಸುತ್ತಿತ್ತಾದರೂ ಅವಳು ಹೇಳಿದ ‘ಹೆಣ್ಮಕ್ಕಳ ವಿಷಯ’ ಎಂಬ ಪದ ನನ್ನ ಬಾಯಿ ಕಟ್ಟಿಸಿತು. ಮತ್ತೊಂದು ನೀರಿನ ಬಾಟಲಿ ಕೊಂಡು ತಿರುಗಿ ನೋಡಿದರೆ ತಲೆಯ ತನಕ ಪುಲ್ ಓವರ್ ಎಳೆದುಕೊಂಡು ಬೆಂಚಿಗೆ ಅಂಟಿ ಕುಳಿತಿರುವ ಹುಡುಗಿ ಛಳಿಗೆ ಸಿಕ್ಕ ಮೊಲದಂತೆ ಕಂಡಳು.


ಇಂದು ಈ ರಾತ್ರಿಯಲ್ಲಿ ಒಟ್ಟಿಗೇ ಹೊರಟು ನಿಂತಿರುವ ಈ ನಮ್ಮ ಪ್ರಯಾಣ ಆರಂಭವಾದದ್ದು ಬರೀ ಒಂದು ವರ್ಷದ ಕೆಳಗೆ. ಅದೊಂದು ನೆಮ್ಮದಿಯ ಭಾನುವಾರದಂದು ಗಿರಿನಗರದ ಬೀದಿಯೊಂದರಲ್ಲಿ ಅಕ್ಕನ ಮಗನ ಕೈಹಿಡಿದು ನಡೆಯುತ್ತಿದ್ದಾಗ ದಾರಿಬದಿಯ ತರಕಾರಿಯಂಗಡಿಯಿಂದ ಆಚೆ ಬರುತ್ತಾ ಕಣ್ಣಿಗೆ ಬಿದ್ದ ಈ ಐದಡಿ ಕುಳ್ಳದ ಹೆಣ್ಣು ಆಕೃತಿಗೂ ನನಗೂ ಹದಿಮೂರು ವರ್ಷಗಳ ಹಿಂದಿನ ಪರಿಚಯವಿದೆಯೆಂಬುದು ಥಟ್ಟನೆ ನೆನಪಾಗಿತ್ತು. ಎಲ್ಲೋ ಕೈಮರೆತಿದ್ದ ನವಿಲುಗರಿಯೊಂದು ಮತ್ತೆಂದೋ, ಯಾವುದೋ ಪುಸ್ತಕದ ಪುಟ ತೆರೆದಾಗ ಅಚಾನಕ್ಕಾಗಿ ಸಿಕ್ಕಿಂತೆ ಸಿಕ್ಕಿದವಳು ಬಾಲ್ಯದ ಗೆಳತಿ ವೈಶ್ಣವಿ. ಅವಳೊಬ್ಬಳೇ ಸಿಕ್ಕಿದ್ದರೆ ಆ ಭೇಟಿ ‘ಹೇಗಿದ್ದೀ? ಅರಾಮಾ? ಈಗೆಲ್ಲಿದ್ದೀ? ಮದುವೆಯಾಯ್ತಾ?’ ಎಂಬ ಪ್ರಿ-ರೆಕಾರ್ಡೆಡ್ ಕುಶಲೋಪರಿಯಲ್ಲೇ ಮುಗಿದುಹೋಗುತ್ತಿತ್ತೇನೋ? ಆದರೆ ಜೊತೆಯಲ್ಲಿ ಅವಳ ತಾಯಿ- ಸುಶೀಲ ಟೀಚರ್ ಕೂಡಾ ಇದ್ದರಲ್ಲಾ, ಹಾಗಾಗಿ ಆ ಭೇಟಿ ಅವಳ ಮನೆಯ ತನಕವೂ ಕರೆದೊಯ್ದಿತ್ತು. ಅಂದಿನ ಆ ಅನಿರೀಕ್ಷಿತ ಕ್ಷಣದಲ್ಲಿ ಮತ್ತೆ ಭೇಟಿಯಾದವರು ನಾನು ಹಾಗೂ ವೈಶ್ಣವಿಯಾದರೂ ಆ ನೆಪದಲ್ಲಿ ಹಳೆಯ ಸ್ನೇಹವನ್ನು ಮತ್ತೆ ಗಾಢವಾಗಿಸಿಕೊಂಡವರು ಊರಿನಲ್ಲಿರುವ ನನ್ನ ಅಮ್ಮ ಹಾಗೂ ಸಾಗರದಲ್ಲಿ ಟೀಚರ್ ಆಗಿರುವ ಅವಳ ಅಮ್ಮ. ಹದಿಮೂರು ವರ್ಷಗಳ ಹಿಂದೆ ಮುಗಿದೇ ಹೋಯಿತೆಂಬಂತೆ ಕೊನೆಗೊಂಡಿದ್ದ ಅವರಿಬ್ಬರ ಪರಿಚಯ ನನ್ನ ಕಣ್ಣಿಗೆ ವೈಶ್ಣವಿ ಬೀಳುವ ಮೂಲಕ ಪುನರಾರಂಭವಾಗಿತ್ತು. ಒಂದೇ ತವರಿನ ಒಂದೇ ಕಾಲಘಟ್ಟದಿಂದ ಬಂದವರಾದ ಅವರಿಗೆ ಆತ್ಮೀಯರಾಗುವುದಕ್ಕೆ ನಮಗಿಂತಲೂ ಹೆಚ್ಚಿನ ನೆಪಗಳಿದ್ದವು. ಇಪ್ಪತ್ತು ವರ್ಷಗಳ ಕೆಳಗೆ ಇಸ್ಕೂಲಿನಲ್ಲಿ ಓದುತ್ತಿದ್ದ ನಾನು ಒದಗಿಸಿದ, ‘ಶಾಲೆಗೆ ಹೊಸದಾಗಿ ವರ್ಗವಾಗಿ ಬಂದಿರುವ ಟೀಚರ್ ಕೂಡಾ ಸಾಗರದವರೇ’ ಎಂಬ ಚಿಕ್ಕ ಮಾಹಿತಿಯಿಂದ ಬೆಳೆದ ಸ್ನೇಹ ಅವರದು. ಊರಿನಲ್ಲಿದ್ದಷ್ಟೂ ದಿವಸ ಜೊತೆಯಾಗಿ ಹಪ್ಪಳ, ಸಂಡಿಗೆ ಮಾಡುತ್ತಾ, ಗಿಡಗಂಟಿಗಳ ನೆಟ್ಟು ಸಲಹುತ್ತಾ, ದೊಡ್ಡದನಿಯಲ್ಲಿ ಹರಟುತ್ತಾ ಅವರು ಕಳೆಯುತ್ತಿದ್ದ ಅದೇ ಭಾನುವಾರದ ಸಂಜೆಗಳನ್ನು ನಾನು ಹಾಗೂ ವೈಶ್ಣವಿ ಧರೆಗುಂಡಿಯ ಮಣ್ಣಿನಲ್ಲಿ ಜಾರುಬಂಡಿಯಾಡುತ್ತಾ, ತೋಟದ ಹಳ್ಳದಲ್ಲಿ ಆಣೆಕಟ್ಟು ಕಟ್ಟುತ್ತಾ ಸವಿಯುತ್ತಿದ್ದೆವು. ‘ಗುಬ್ಬಚ್ಚಿ ಗುಬ್ಬಚ್ಚಿ ಬಾ.. ಬಾ.. ಬಣ್ಧದ ಚಾಪೀಸ್ ಕೊಡ್ತೀವಿ.‌.” ಎಂದು ಮನೆಯ ಹಿಂದಿನ ಮರದಡಿ ನಿಂತು ಗುಬ್ಬಿಗಳನ್ನು ಹಾಡಿ ಕರೆದಿದ್ದೆವು. ಪ್ರತಿದಿನ ಮುಂಜಾನೆ ಶಾಲೆಗೆ ಹೊರಡುವ ವೇಳೆಯಲ್ಲಿ ಊರ ಮಧ್ಯದ ಸುಬ್ರಹ್ಮಣ್ಯ ಸರ್ಕಲ್, ಬಲಗಡೆಯ ಮಣ್ಣುದಾರಿಯಿಂದ ಬರುವ ನನ್ನನ್ನೂ, ಎಡಗಡೆಯ ಟಾರು ರಸ್ತೆಯಿಂದ ಬರುವ ಅವಳನ್ನೂ ಜೊತೆಮಾಡಿ ಶಾಲೆಗೆ ಕಳುಹಿಸಲು ಕಾಯುತ್ತಿತ್ತು. ಟೀಚರ್ ರ ಮಗಳ ಜೊತೆಗೆ ಮಾತ್ರವಲ್ಲದೆ ಸಾಕ್ಷಾತ್ ಟೀಚರ್ ರ ಜೊತೆಗೂ ಆತ್ಮೀಯತೆಯಿಂದಿರುವವನೆಂಬುದು ಇಡೀ ಶಾಲೆಯಲ್ಲೇ ನನಗೊಂದು ಗತ್ತನ್ನು ಕೊಟ್ಟಿತ್ತು ಹಾಗೂ ಮುಂದಿನ ಆರು ವರ್ಷಗಳ ಕಾಲ ಅದು ಮೆಂಯ್ಟೇನ್ ಆಗಿತ್ತು.


ಆದರೆ ಆರನೇ ವರ್ಷದ ಕೊನೆಯ ಬೇಸಿಗೆ ಎಂದಿನಂತೆ ಬರಲಿಲ್ಲ.


ಜೊತೆಯಾಗಿ ತೇಲಿಬಿಟ್ಟ ಹತ್ತಾರು ದೋಣಿಗಳಾಗಲೇ ಕಡಲು ತಲುಪಿದ್ದವು. ನಾವು ಕಿತ್ತಾಡಿಕೊಳ್ಳತ್ತ ನೀರೆರೆದ ಗಿಡಗಳಲ್ಲಾಗಲೇ ಮಲ್ಲಿಗೆ, ಸೇವಂತಿಗೆಗಳು ಅರಳಿನಿಂತಿದ್ದವು. ಹಿಂದಿನ ಅಂಗಳದ ಹಲಸಿನ ಮರದಲ್ಲಿ ನಾವು ಕರೆದ ಗುಬ್ಬಿಗಳೆಲ್ಲ ಬಂದು ಕುಳಿತು ನಮ್ಮನ್ನೇ ಕರೆಯುತ್ತಿದ್ದವು.


ವೈಶ್ಣವಿ ಹೊರಟುನಿಂತಿದ್ದಳು.


‘ಟ್ರಾನ್ಸ್ ಫರ್’ ಎಂಬ ಗಾಡಿ ನಿಲ್ದಾಣದಲ್ಲಿ ನಿಂತು ಕರೆಯುತ್ತಿತ್ತು. ನನ್ನಮ್ಮ ಹಾಗೂ ಸುಶೀಲ ಟೀಚರ್ ಒಬ್ಬರನ್ನೊಬ್ಬರು ತಬ್ಬಿಕೊಂಡು ಅತ್ತರು. ನಾವು ಸುಮ್ಮನೆ ನಿಂತೆವು. ಸಂಜೆಯ ಹೊತ್ತಿಗೆ ಧೂಳೆಬ್ಬಿಸುತ್ತಾ ಬಂದ ಪಟ್ಟಣದ ಬಸ್ಸಿನೊಳಗೆ ಅವರು ಎಳೆದುಕೊಂಡು ಹತ್ತಿದ ಸಾಮಾನು ಸರಂಜಾಮುಗಳ ನಡುವೆ ತಾನೂ ಒಂದು ವಸ್ತುವೆಂಬಂತೆ ಏರಿಕುಳಿತ ವೈಶ್ಣವಿ ನೆನಪಿನ ಪುಟಗಳತ್ತ ಸಾಗಿಮರೆಯಾದಳು.


                   ****************


ಮರಳಿ ಸಿಕ್ಕ ಗೆಳತಿಯ ಬಾಡಿಗೆ ಮನೆಗೆ ಹೋದಾಗ ಕಾಫಿಯ ಜೊತೆಗೆ ಸಿಕ್ಕ ಮತ್ತೊಂದು ಸಂಗತಿಯೆಂದರೆ ಅವಳ ಮದುವೆಯ ಸಮಾಚಾರ. ಸಾಮಾನ್ಯದವರ್ಯಾರನ್ನೂ ಒಪ್ಪದ ಮಗಳಿಗೆ ಅಸಾಮಾನ್ಯ ವರನೊಬ್ಬನನ್ನು ಹುಡುಕೀ ಹುಡುಕೀ ಅವಳ ತಾಯಿ ದಣಿದಿದ್ದರು.  ಸಿಕ್ಕು, ನಾನೂ ಇವಳ ಆತ್ಮೀಯರ ಪಟ್ಟಿಯಲ್ಲೊಬ್ಬನೆಂದು ಖಾತ್ರಿಯಾದ ದಿನವೇ ಇವಳ ಶಾದಿ ಡಾಟ್ ಕಾಂನ ಪ್ರೊಫೈಲ್ಲನ್ನು ಅಂದಗಾಣಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. “ಎಂಥೆಂಥಾ ಸಂಬಂಧಗಳು ಬಂದಿದ್ವು ಗೊತ್ತಾ? ಚಿನ್ನದ ತಕ್ಕಡೀಲಿ ತೂಗಬಹುದಾದಂಥಾ ಗಂಡುಗಳು. ನಾನು ಬರೀ ಆಸ್ತಿ ಬಗ್ಗೆ ಮಾತಾಡ್ತಿಲ್ಲ ಹಾಂ… ಆದ್ರೆ ಇವನಿಗೆ ಕೂದಲು ಕಡಿಮೆ, ಅವನ ಹೈಟ್ ಕಮ್ಮಿ, ಇವನು ಉರಿಸಿದ್ದಪ್ಪನಂತಿದ್ದಾನೆ, ಅವನು ಸಾಧು, ಅವ ಒಂಥರಾ ಮಳ್ಳನ ಥರಾ ಇದಾನೆ ಅಂತ ಒಬ್ಬೊಬ್ಬರಿಗೂ ಒಂದೊಂದು ನೆಪ ಹೇಳಿ ನಿರಾಕರಿಸಿಬಿಟ್ಟಳು. ಈಗ ನಿಮ್ಮೂರಿನಿಂದಲೇ ಎರೆಡು ಒಳ್ಳೆಯ ಸಂಬಂಧಗಳು ಬಂದಿದಾವೆ. ಒಬ್ಬ ಶ್ರೀನಿವಾಸ ಕೇಕೋಡರ ಮಗ. ಒಳ್ಳೆಯ ಗುಣದವನು. ಸ್ಥಿತಿವಂತರೂ ಹೌದು. ಹೈದರಾಬಾದಿನಲ್ಲಿ ಇಂಜಿನಿಯರ್ ಆಗಿದಾನೆ. ಇನ್ನೊಬ್ಬ ಪರಮೇಶ ಶಾಸ್ತ್ರಿಗಳ ಮಗ. ಅವನ ಗುಣದ ಬಗ್ಗೆ ಅವನ ಇಡೀ ಕೇರಿಯೇ ಹಾಡಿಕೊಂಡು ಹೊಗಳತ್ತೆ! ಬಿಟ್ಟರೆ ಸಿಗದ ಸಂಬಂಧಗಳು. ನೀನೇ ಏನಾದ್ರೂ ಬಣಿಸಿ ಅವಳನ್ನ ಮದುವೆಗೊಪ್ಪಿಸು ವಿಹಾರ” ಎಂದು ಹೆಚ್ಚೂ ಕಡಿಮೆ ಅಂಗಲಾಚಿದಂತೆ ಕೇಳಿಕೊಂಡಿದ್ದರು.


ಆದರೆ ಮದುವೆಯೆಂದೊಡನೆ ವೈಶ್ಣವಿಯ ಕ್ಯಾಸೆಟ್ ಬೇರೆಯ ರಾಗವನ್ನೇ ಹಾಡುತ್ತಿತ್ತು. “ಬಡತನ ಮತ್ತು ಕುಡುಕತನ- ಇವೆರೆಡೂ ಕೊಡುವ ಹಿಂಸೆಗಳೆಂಥಾದ್ದೆಂಬುದನ್ನು ನಾನು ನೋಡಿದೀನಿ ಕಣೋ. ಅಮ್ಮನಿಗಿದು ಹೆಗಲ ಮೇಲಿನ ಜವಾಬ್ದಾರಿ ಕಳೆದುಕೊಳ್ಳುವ ಸಂಗತಿ. ಆದರೆ ನನಗೆ ಜೀವನ ಪೂರ್ತಿ ಸಂಬಂಧವೊಂದನ್ನು ಹೆಗಲಮೇಲಿಟ್ಟುಕೊಂಡು ಬದುಕಬೇಕಾದ ಸಂಗತಿ! ಗೊತ್ತೇ ಇಲ್ಲದವನೊಬ್ಬನ ಬೊಗಸೆಯೊಳಗೆ ನನ್ನಿಡೀ ಬದುಕನ್ನೇ ಇಟ್ಟು ‘ಒಪ್ಪಿಸಿಕೋ ದೊರೆಯೇ’ ಅನ್ನುವ ಮೊದಲು, ಇರುವ ಒಂದೇ ಒಂದು ಬದುಕಿನುದ್ದಕ್ಕೂ ನನ್ನನ್ನು ಸಂಭಾಳಿಸುವ ಯೋಗ್ಯತೆ ಅವನಿಗಿದೆಯಾ ಅಂತ ಸೂಕ್ಷ್ಮವಾಗಿ ಗಮನಿಸುವುದರಲ್ಲಿ ಏನು ತಪ್ಪಿದೆ?” ಎಂದ ಅವಳ ಮಾತಿನಲ್ಲಿ ನನಗೆ ನನ್ನ ಜ್ಯೋತಿ ಆಡಿಹೋದ ಕೊನೆಯ ಮಾತುಗಳೇ ಅನುರಣಿಸಿದ್ದವು:


“ನಾನು ಚೆನ್ನಾಗಿ ಓದಿಕೊಂಡೆ. ಒಳ್ಳೆಯ ಕೆಲಸ ಹಿಡಿದೆ. ಯಾಕೆ ಹೇಳಿ ವಿಹಾರ್? ನನ್ನ ಹಾಗೂ ಗಂಡು ದಿಕ್ಕಿಲ್ಲದ ನನ್ನ ಅಪ್ಪ-ಅಮ್ಮನ ಸುಭದ್ರ ನಾಳೆಗಳಿಗೋಸ್ಕರ ಅಲ್ವಾ? ನನಗೆ ಗೊತ್ತು. ಮದುವೆಯ ವಿಷಯದಲ್ಲಿ ನನಗೆ ಹತ್ತಾರು ಆಯ್ಕೆಗಳಿವೆ ಹಾಗೂ ಅವುಗಳ ಪೈಕಿ ನಾನು ಉತ್ತಮವಾದುದ್ದನ್ನೇ ಆಯ್ದುಕೊಳ್ಳುತ್ತೇನೆ. ಈಗ, ಪ್ರೀತಿಯೆಂಬ ಈ ಕ್ಷಣಿಕ ಭಾವುಕತೆಗೆ ಸೋತು ಒಂದಿಡೀ ಬದುಕನ್ನು ನನ್ನ ಕಲ್ಪನೆಯಂತಿರದ ನಿಮ್ಮೊಂದಿಗೆ ಹಂಚಿಕೊಳ್ಳಲಾರೆ. ನನ್ನನ್ನು ಕ್ಷಮಿಸಿ…”


ಪ್ರೀತಿ, ಮದುವೆ, ಸಂಬಂಧ.. ಇವೆಲ್ಲ ಕೇಳಲಿಕ್ಕೆ ಎಲ್ಲರಿಗೂ ಒಂದೇ ರೀತಿಯ ಪದಗಳು. ಆದರೆ ಪ್ರತಿಯೊಬ್ಬರ ಅಂತರಾಳದಲ್ಲೂ ಹೇಗೆ ಬೇರೆಬೇರೆಯ ಚಿತ್ರವನ್ನೇ ಬಿಡಿಸುತ್ತಾವಲ್ಲಾ? ಇವೆಲ್ಲ ಒಂದಾಗಿ ಸೇರುವ ಆ ಬಿಂದು ಯಾವುದು? ಮದುವೆಯಾ? ಪ್ರತಿಯೊಂದು ಮದುವೆಯಲ್ಲೂ ಈ ಎಲ್ಲ ಸಂಗತಿಗಳೂ ಒಂದಾಗಿ ಕೂಡುತ್ತವೆಯಾ? ನಮ್ಮೆಲ್ಲರಿಗೂ ನಾವ್ನಾವು ಬಯಸಿದ್ದೇ ದೊರಕುತ್ತದೆಯಾ? ಸುತ್ತುತ್ತಿರುವ ಚಕ್ರದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬೆನ್ನಟ್ಟುತ್ತಾ ತಿರುಗುತ್ತಿರುವ, ಯಾರಿಗೆ ಯಾರೂ ಸಿಗದ ಬೇರೆ ಬೇರೆ ಅಂಚುಗಳೇ ನಾವೆಲ್ಲ?
ಕಿಟಕಿಯಾಚೆಗೆ ಸರಿದುಹೋಗುತ್ತಿದ್ದ ಕತ್ತಲಿನ ಚಿತ್ರಗಳಂತೆಯೇ ಪ್ರೆಶ್ನೆಗಳು ಹಾದುಹೋಗುತ್ತಿದ್ದವು.


                  ****************


ಬೆಳಗಿನ ಎರೆಡನೇ ಜಾವದ ಕತ್ತಲ ರಸ್ತೆಗೆ ಪ್ರಖರ ಬೆಳಕನ್ನೆರಚುತ್ತಾ ಬಸ್ಸು ಮುಂದಕ್ಕೋಡುತ್ತಿತ್ತು. ನನ್ನ ಹೆಗಲಿಗೊರಗಿಕೊಂಡಿದ್ದ ವೈಶ್ಣವಿ ಗಾಢವಾದ ನಿದ್ರೆಯಲ್ಲಿದ್ದಳು. ಅವಳ ನಿದ್ರೆಗೆ ಭಂಗ ಬರದಂತೆ ಕುಳಿತಲ್ಲೇ ಮೆಲ್ಲನೆ ಮಿಸುಕಾಡಿ ನನ್ನ ಭಂಗಿಯನ್ನು ಕೊಂಚ ಬದಲಾಯಿಸಿದೆ. ಆದರೂ ಆ ಸೂಕ್ಷ್ಮ ಅಲುಗಾಟದಿಂದ ಕೊಂಚ ವಿಚಲಿತಳಾದಂತೆ ನಿದ್ರೆಗಣ್ಣಿನಲ್ಲೇ ಏನೋ ಮಣಗುಟ್ಟಿದಳು. ನನಗೆ ಆಶ್ಚರ್ಯವಾಯಿತು. ಎಷ್ಟು ಗಾಢವಾಗಿ ನಿದ್ರಿಸುತ್ತಿದ್ದಾಳೆ… ಕನವರಿಸುವಷ್ಟು! ಈ ಇರುಳಿನ ಈ ಪ್ರಯಾಣದಲ್ಲಿ ನನ್ನ ಹೆಗಲಿಗೊರಗಿ ನಿದ್ರಿಸುತ್ತಿದ್ದಾಳೆ. ಮುಂದಿನ ವರುಷ ಇದೇ ಇರುಳಿನ ಇಂಥಾದ್ದೇ ಪ್ರಯಾಣದಲ್ಲಿ ತನ್ನ ಗಂಡನ ಹೆಗಲಿಗೊರಗಿ ಇಷ್ಟೇ ನಿಷ್ಕಲ್ಮಷವಾಗಿ ನಿದ್ರಿಸುತ್ತಿರುತ್ತಾಳೆ. ಅವರ ನಡುವೆ ಪ್ರೀತಿಯಿರುತ್ತದೆ. ದಂಪತಿಗಳೆಂಬ ಅನ್ಯೋನ್ಯತೆಯಿರುತ್ತದೆ. ಹಾಗಾದರೆ ನಮ್ಮ ನಡುವಿರುವುದೇನು? ಸ್ನೇಹವಾ? ನಂಬಿಕೆಯಾ? ವಿಶ್ವಾಸವಾ? ಅಥವಾ ಅವೆಲ್ಲವನ್ನೂ ಮೀರಿದ ಮತ್ಯಾವುದೋ ಮಧುರವಾದ, ಆದರೆ ಅಷ್ಟೇ ಕ್ಷಣಿಕವಾದ ನಂಟಾ? ಮುಂದೊಂದು ದಿನ ಗಂಡನ ಹೆಗಲಿಗೊರಗಿ ನಿದ್ರಿಸುವಾಗ ಇವಳಿಗೆ ಈ ದಿನ, ಈ ಇರುಳು, ಈ ಪ್ರಯಾಣಗಳೆಲ್ಲಾ ನೆನಪಾಗುತ್ತಾವಾ? ತನಗೆ ಎಚ್ಚರವಾಗದಿರಲೆಂದು ಮಿಸುಕಾಡದೇ ಕುಳಿತಿದ್ದ ನಾನು ನೆನಪಾಗುತ್ತೇನಾ?


ಜ್ಯೋತಿಗೆ ನನ್ನ ನೆನಪಾಗುತ್ತಿದೆಯಾ?


ನಾನು ಅವಳಿಗಾಗಿ ಕಾದು ನಿಂತ ಜಾಗ, ಆಡಿದ ಮಾತು, ಹಿಂಬಾಲಿಸಿದ ಹಾದಿ, ಕೊಟ್ಟ ಹೂವು.. ಇವುಗಳಲ್ಲಿ ಯಾವೊಂದಾದರೂ ನನ್ನ ನೆನಪು ತರದೇ ಹೋಗುತ್ತವೆಯಾ?


ಅವಳ ನೆನಪುಗಳು ಬಸ್ಸಿನ ಕಿಟಕಿ ಮುಚ್ಚಿದರೂ ಅಗೋಚರ ರಂಧ್ರವೊಂದರಿಂದ ನಸುಳಿ ಬರುವ ಛಳಿಗಾಳಿಯಂತೆ ನುಗ್ಗಿಬರತೊಡಗಿದವು. ಎಲ್ಲಿರಬಹುದು ಅವಳು? ಎಂದೂ ಮುಗಿಯದ ಈ ದಿವ್ಯ ಕನವರಿಕೆಯನ್ನು ನನ್ನ ಪಾಲಿಗೆ ಕೊಟ್ಟು ಈ ಕ್ಷಣದಲ್ಲಿ ಅದ್ಯಾರ ಹೆಗಲಿಗೊರಗಿ ನಿದ್ರಿಸುತ್ತಿರಬಹುದು?


ಹೀಗೆ ನಾನು ಈ ಲೋಕದ್ದೇ ಅಲ್ಲವೆಂಬಂತಹಾ ಯೋಚನೆಗಳಲ್ಲಿ ಕಳೆದುಹೋಗಿದ್ದಾಗಲೇ ಹೆಗಲಿಗೊರಗಿದ್ದ ವೈಶ್ಣವಿಯಲ್ಲೇನೋ ತಳಮಳ ಸಂಭವಿಸತೊಡಗಿತು. ನಾನು ನೋಡುತ್ತಿರುವಂತೆಯೇ ಬೆಚ್ಚಿದಂತೆ ಕಣ್ತೆರೆದು ಒಂದು ಕೈಯನ್ನು ಬಾಯಿಗಡ್ಡವಿಟ್ಟುಕೊಂಡು, ಇನ್ನೊಂದರಿಂದ ಮುಚ್ಚಿದ ಕಿಟಕಿಯ ಗಾಜನ್ನು ಎಳೆಯತೊಡಗಿದಳು. ತಕ್ಷಣ ಪರಿಸ್ಥತಿಯ ಅರಿವಾದ ನಾನು ಕಿಟಕಿಯನ್ನು ಹಿಂದಕ್ಕೆಳೆದು ಅವಳಿಗೆ ತಲೆ ಹೊರಗೆ ಹಾಕಲು ಅನುವುಮಾಡಿಕೊಟ್ಟೆ. ಮುಂದಿನ ಹಲವು ನಿಮಿಷಗಳ ಕಾಲ ಬಿಟ್ಟೂ ಬಿಟ್ಟೂ ಕರುಳೇ ಆಚೆ ಬಂದಂತೆ ಹೊಟ್ಟೆಯಲ್ಲಿರುವುದನ್ನೆಲ್ಲಾ ಕಾರಿಕೊಂಡು ಸೀಟಿಗೊರಗಿದವಳನ್ನು ನೋಡಿ ಕಳವಳವಾಯಿತು. ಪಾಪ, ಯಾವಾಗಲೂ ಸ್ಲೀಪರ್ ಟ್ರೈನಿನಲ್ಲೋ, ರಾಜಹಂಸದಲ್ಲೋ ಓಡಾಡುತ್ತಿದ್ದವಳು. ಈ ಬಾರಿ ನಾನೇ ಒತ್ತಾಯ ಮಾಡಿ ನೆಟ್ಟಗಿನ ಸೀಟುಗಳ ಒರಟು ಪ್ರಯಾಣದ ಕರ್ನಾಟಕ ಸಾರಿಗೆ ಬಸ್ಸು ಹತ್ತಿಸಿದ್ದೆ.


“ಪ್ರಯಾಣ ಮಾಡುವಾಗ ವಾಂತಿಯಾಗುತ್ತೆ ಅಂತ ಮೊದಲೇ ಹೇಳೋದಲ್ವೇನೇ ಹುಡುಗೀ.. ಸ್ಲೀಪರ್ರೋ, ಸೆಮಿ ಸ್ಲೀಪರ್ರೋ ಬುಕ್ ಮಾಡ್ತಿದ್ದೆ..”
ಪಶ್ಚಾತ್ತಾಪದಿಂದ ಕೇಳಿದೆ.


“ವಾಂತಿಯಾಗುವುದಕ್ಕೆ ಪ್ರಯಾಣದ ಕುಲುಕಾಟವೇ ಕಾರಣವಾಗಬೇಕಿಲ್ಲ ಕಣೋ” ಬಳಲಿಕೆಯ ಮಧ್ಯೆಯೂ ಕ್ಷೀಣವಾಗು ನಕ್ಕು ಮುಂದುವರಿಸಿದಳು. “ನಡೆಯುವಾಗಲೂ ಆಗುತ್ತದೆ, ಕುಳಿತಿರುವಾಗಲೂ ಆಗುತ್ತದೆ.. ಅಷ್ಟೇ ಏಕೆ, ಸುಮ್ಮನೆ ನಿದ್ರಿಸುವಾಗಲೂ ಯಾವುದೋ ಕೆಟ್ಟಕನಸಿನಾಳದಿಂದ ಎದ್ದುಬಂದು, ನನ್ನನ್ನೂ ಎಬ್ಬಿಸಿ ವಿಷಕಾರಿಕೊಳ್ಳುತ್ತದೆ.. ‌ನನಗೆ ಗರ್ಭಕೋಶದ ತೊಂದರೆಯಿದೆ…”


“ಗರ್ಭಕೋಶಾನಾ?”
ಹೆಚ್ಚೂಕಮ್ಮಿ ಕಿರುಚಿದಂತೆಯೇ ಕೇಳಿದ ನನಗೆ ನಿಜಕ್ಕೂ ಆಘಾತವಾಗಿತ್ತು.


“ಏನು ಹೇಳ್ತಿದೀಯ ವೈಶು? ಏನಾಗಿದೆ ನಿನಗೆ? ಅದೇನದು ಗರ್ಭಕೋಶದ ಖಾಯಿಲೆ? ಯಾಕೆ ಬಂತು ಅದು? ಡಾಕ್ಟರಿಗೆ ತೋರ್ಸಿದೀಯಾ? ನನಗ್ಯಾಕೆ ಹೇಳಲಿಲ್ಲ ಈ ವಿಷಯಾನ?”
ಮನದಲ್ಲಿ ಸಾಲುಸಾಲಾಗಿ ಮೂಡಿದ ಆತಂಕದ ಪ್ರೆಶ್ನೆಗಳನ್ನೆಲ್ಲ ಹಾಗ್ಹಾಗೇ ಕೇಳಿದೆ‌‌.


“ಯಾಕೆ ಬಂತು ಅಂದರೆ ಏನು ಹೇಳಲಿ ಹೇಳು? ಮೊದಮೊದಲು ತಿಂಗಳಿಗೆ ಹೊರಗಾಗುವುದು ವ್ಯತ್ಯಾಸವಾಯಿತು. ಬರುಬರುತ್ತಾ ಅದು ತಾರಾಮಾರಿ ಹೊಟ್ಟೆನೋವಿಗೆ ಹಾಗೂ ವಾಂತಿಗೆ ತಿರುಗಿತು. ಪರಿಚಯದವರೇ ಆದ ಡಾಕ್ಟರೊಬ್ಬರಿಗೆ ತೋರಿಸ್ತಿದೇನೆ. ವಾಸಿಯಾಗುತ್ತೆ ಅಂದಿದಾರೆ. ಆಗುವ ತನಕ ಇದೆಲ್ಲ ಇದ್ದದ್ದೇ…”


“ಅಮ್ಮನಿಗೆ ಹೇಳಿದೀಯಾ?”


“ಹೇಳಿ ಏನು ಪ್ರಯೋಜನ ಹೇಳು? ಪಾಪ, ಅವಳ ಖಾಯಿಲೆಗಳೇ ಅವಳಿಗಾಗಿದೆ. ಜೊತೆಗೆ ನನ್ನದನ್ನೂ ಸೇರಿಸಿ ಅವಳ ರಾತ್ರೆಗಳ ನಿದ್ರೆಯನ್ನ ಕೆಡಿಸಲಾ? ಅಷ್ಟಕ್ಕೂ ಅವಳಿಗೇನಾದರೂ ಹೇಳಿದರೆ ಸುಮ್ಮನೆ ಗಾಬರಿಯಾಗ್ತಾಳೆ. ಕೆಲಸಬಿಡು, ಊರಿಗೆ ಬಾ, ಈ ಡಾಕ್ಟರಿಗೆ ತೋರಿಸು, ಆ ದೇವಸ್ಥಾನಕ್ಕೆ ಹೋಗು, ಈ ಬೆಟ್ಟ ಹತ್ತು, ಮದುವೆಯಾಗು ಅಂತೆಲ್ಲ ಗಡಿಬಿಡಿ ಮಾಡ್ತಾಳೆ. ಹೆಣ್ಮಕ್ಕಳ ಬಾಳಿನ ಸಕಲ ಸಮಸ್ಯೆಗಳಿಗೂ ಮದುವೆಯೇ ಮದ್ದು ಎಂಬುದು ಅವಳ ನಂಬಿಕೆ. ಅದಕ್ಕೇ ಅವಳಿಗೇನೂ ಹೇಳದೇ ಇದು ವಾಸಿಯಾಗುವ ತನಕ ಏನಾದರೊಂದು ನೆಪ ಹೇಳಿ ಮದುವೆಯನ್ನು ಮುಂದೂಡುತ್ತಿದ್ದೇನೆ.”


ದಣಿದ ಒಡಲಾಳದಿಂದ ನೋವಿನ ಸಮೇತ ಹೊರಬಂದ ಆ ಮಾತುಗಳನ್ನು ಕೇಳಿ ಬಹಳ ಖೇದವೆನಿಸಿತು. ಮಕ್ಕಳಾಗಿಲ್ಲ. ಮದುವೆಯೇ ಆಗಿಲ್ಲ. ಇಷ್ಟರಲ್ಲೇ ‘ಗರ್ಭಕೋಶ’ ಎನ್ನುವ ಅಷ್ಟು ದೊಡ್ಡ ಪದವನ್ನು ಎತ್ತಾಡುವಂತೆ ಮಾಡಿರುವ ಖಾಯಿಲೆ ಯಾವುದಿರಬಹುದು? ಕೇಳಬೇಕೆನಿಸಿದರೂ ಬಳಲಿ ಬಸವಳಿದವಳ ಬಳಿ ಬೇರೇನೂ ಕೇಳಲಾಗಲಿಲ್ಲ. ಹೆಗಲಿಗೆ ಒರಗಿ ಕಷ್ಟದಿಂದೆಂಬಂತೆ ಕಣ್ಮುಚ್ಚಿದವಳ ಮುಖ ಬಸ್ಸಿನ ಕುಲುಕಾಟಕ್ಕೆ ಹೆಗಲಿನಿಂದ ಜಾರಿಹೋಗದಂತೆ ಕೈ ಅಡ್ಡ ಇಟ್ಟೆ.


‘ಇವಳಿಗೆ ಕೇಕೋಡರ ಮಗನಿಗಿಂತ ಶ್ರೀಮಂತನಾದ, ಶಾಸ್ತ್ರಿಗಳ ಮಗನಿಗಿಂತ ಸದ್ಗುಣನಾದ ವರ ದೊರಕಲಿ ದೇವರೇ..’


ಮನಸ್ಸು ಅಪ್ರಯತ್ನದಿಂದ ಹಾರೈಸಿತು. ನಿದ್ರೆಯೆಂಬುದು ಕಿಟಕಿಯಾಚೆಗಿನ ದೂರದ ಕತ್ತಲಿನ ಮಡುವಿನಲ್ಲಿ ಮುಳುಗಿ ಹೋಗಿರುವ ಬೀದಿದೀಪದಂತೆ ಕ್ಷೀಣವಾಯಿತು.


“ಹೆಣ್ಣುಮಕ್ಕಳ ಪ್ರಪಂಚದಲ್ಲಿ ನಿಮಗೆ ಅರ್ಥವಾಗದಂತಹಾ ಅದೆಷ್ಟೋ ಸೂಕ್ಷ್ಮ ಸಂಗತಿಗಳಿವೆ ವಿಹಾರ್..”


ಆ ಮಾತು ಅವಳ ನಿದ್ರೆಯ ಲೋಕದಿಂದಲೇ ಅನುರಣಿಸುತ್ತಿರುವಂತೆ ಭಾಸವಾಯಿತು. ಈ ಹೆಣ್ಣೆಂಬ ಜೀವಿಯೇ ಹೀಗೆ..  ತನಗಷ್ಟೇ ಸೀಮಿತವಾದ ಅದೆಷ್ಟೋ ಗುಟ್ಟು, ಸಂಗತಿ, ತುಮುಲಗಳನ್ನು ಒಳಗಿಟ್ಟುಕೊಂಡೇ ನಮ್ಮೊಂದಿಗೆ ಬೆರೆಯುತ್ತದೆ. ಇಷ್ಟು ದಿನ ಮದುವೆಯ ವಿಷಯದಲ್ಲಿವಳು ನಡೆದುಕೊಳ್ಳುತ್ತಿದ್ದ ರೀತಿಯನ್ನು ರೂಪ, ಹಣ, ಅಂತಸ್ತುಗಳ ಮೇಲಿನ ವ್ಯಾಮೋಹವೆಂದೇ ತಿಳಿದಿದ್ದೆ. ಅದರ ಹಿಂದೆ ಹೀಗೊಂದು ಸಂಕಟವಿದೆಯೆಂಬ ಸಣ್ಣ ಕಲ್ಪನೆಯೂ ಬಂದಿರಲಿಲ್ಲ. ಕಣ್ಣೆದುರು ಸದಾ ನಗುಮುಖ ತೋರಿಸಿಕೊಂಡಿರುವವಳಿಗೇ ಇಂಥಾದ್ದೊಂದು ತಳಮಳಿಸುವ ಗುಪ್ತ ಚಹರೆಯೊಂದಿರುವಾಗ ಬೆನ್ನುಹಾಕಿ ನಡೆದು ಹೋದವಳೊಳಗೆ ಅದಿನ್ನೆಂತಹಾ ವೇದನೆಗಳಿದ್ದಿರಬಹುದು?


ಯಾಕೋ ಜ್ಯೋತಿ ತೀವ್ರವಾಗಿ ಕಾಡತೊಡಗಿದಳು.


                 ************************


ಎಂಟರ ಎಳೆ ಬಿಸಿಲಿನಲ್ಲಿ ನಮ್ಮ ಮನೆ ಹೊಳೆಯುತ್ತಾ ನಿಂತಿತ್ತು. ಉಣಗೋಲು ತೆರೆಯುತ್ತಿದ್ದಂತೆಯೇ ಮುದ್ದಿನ ಭರದಲ್ಲಿ ತಲೆ, ಬಾಲ ಕುಣಿಸುತ್ತಾ ನನ್ನ ಮೇಲೆರಗಿದ ಟಾಮಿಯನ್ನು ವೈಶ್ಣವಿ “ಏ ನಾನು ನಿಮ್ಮನೆ ಗೆಸ್ಟ್ ಕಣೋ.. ನನ್ನೂ ಮಾತಾಡ್ಸೋ..” ಎನ್ನುತ್ತಾ ತನ್ನಕಡೆಗೆಳೆದುಕೊಂಡಳು. ಟಾಮಿಯನ್ನು ಅವಳ ಅಪ್ಪುಗೆಗೊಪ್ಪಿಸಿ ಅಂಗಳ ದಾಟಿದವನಿಗೆ ಜಗುಲಿಯ ಕುರ್ಚಿಯ ಮೇಲೆ ದಿನಪತ್ರಿಕೆ ಹಿಡಿದು ಕುಳಿತಿರುವವರನ್ನು ನೋಡಿ ಆಶ್ಚರ್ಯವಾಯಿತು. ವೈಶ್ಣವಿಯ ಸೋದರಮಾವ ಭಾಸ್ಕರರಾಯರು. ಗಂಡುದಿಕ್ಕಿಲ್ಲದ ವೈಶ್ಣವಿಯ ಕುಟುಂಬದಲ್ಲಿ ಯಾವೊಂದು ಗುರುತರ ಸಂಗತಿ ಜರುಗಿದರೂ ಅದು ಇವರ ಭಾಗವಹಿಸುವಿಕೆಯಿಲ್ಲದೇ ಮುಗಿದದ್ದೇ ಇಲ್ಲ. ಅವರೇ ಬಂದಿದ್ದಾರೆಂದರೆ ಶಾಸ್ತ್ರಿಗಳ ಪುತ್ರನಿಗೋ, ಕೇಕೋಡರ ಮಗನಿಗೋ ಕಂಕಣಬಲ ಕೂಡಿಬಂದಿದೆ ಎಂದು ಊಹಿಸಿಕೊಂಡು ಒಳಗೇ ನಕ್ಕು ಮುನ್ನಡೆದೆ. ಒಳಗಿನ ಕೋಣೆಗಳಲ್ಲಿ ಅಮ್ಮಂದಿರಿಬ್ಬರೂ ಸಮರೋಪಾದಿಯಲ್ಲಿ ಓಡಾಡಿಕೊಂಡಿದ್ದರು. ನಮ್ಮನ್ನು  ಕಂಡವರೇ “ಬನ್ನಿ. ಬೇಗ ಕೈಕಾಲ್ಮುಖ ತೊಳ್ಕೊಂಡು ತಿಂಡಿ ತಿನ್ನಿ” ಎಂದು ಗಡಿಬಿಡಿ ತೋರಿದರು. ಇಷ್ಟು ಗಡಿಬಿಡಿಯಲ್ಲಿ ತಿಂಡಿತಿಂದು ಹಿಡಿಯಬೇಕಿರುವುದು ಯಾವ ಫ್ಲೈಟನ್ನೆನ್ನುವುದು ಅರ್ಥವಾಗದೆ ನಾನೂ, ವೈಶ್ಣವಿಯೂ ಒಬ್ಬರ ಮುಖ ಒಬ್ಬರು ನೋಡಿಕೊಂಡೆವಾದರೂ ನನ್ನ ಮನದಲ್ಲಾಗಲೇ ಊದು ಬತ್ತಿಯಾಗಿ ಹೊಗೆಯಾಡುತ್ತಿದ್ದ ಸಂದೇಹವೀಗ ಒಲೆಕುಂಟೆಯಾಯಿತು. ಸಾಧಾರಣವಾಗಿ ಹಬ್ಬದ, ಗಡಿಬಿಡಿಯ ಬೆಳಗುಗಳಲ್ಲಿ ಮಾಡುವ ಒಗ್ಗರಣೆ ಕಲಸಿದ ತೆಳು ಅವಲಕ್ಕಿಯನ್ನು ತಿಂದು ಮುಗಿಸುವಷ್ಟರಲ್ಲಿ ಹೆಚ್ಚೂ ಕಡಿಮೆ ಉಣಗೋಲು ಹಾರಿಕೊಂಡೇ ಬಂದ ಅಣ್ಣನ ಮಗ ಸಾಕೇತ “ಅರ್ಜೆಂಟ್ ಮಿಲ್ಲಿಗೆ ಹೋಗ್ಬೇಕು ಬಾ” ಎನ್ನುತ್ತಾ ಇನ್ನೂ ಒಣಗದ, ನನ್ನ ತೊಳೆದ ಕೈಯನ್ನು ಹಿಡಿದುಕೊಂಡು ದರದರನೆ ಎಳೆದುಕೊಂಡೇ ಹೋಗತೊಡಗಿದ. ಜಗುಲಿಯಿಂದಾಚೆ ಕಾಲಿಡುವ ಮುನ್ನ ಹೊರಳಿನೋಡಿದ ನನಗೆ ‘ಏನು ವಿಷಯ?’ ಎಂದು ಪ್ರಶ್ನಿಸುತ್ತಿದ್ದ ವೈಶ್ಣವಿಯೂ, ಅವಳನ್ನು ಅವಳ ಪ್ರಶ್ನೆಯ ಸಮೇತ ಕೋಣೆಯೊಳಗೆ ತಳ್ಳಿಕೊಂಡು ಹೋಗುತ್ತಿದ್ದ ಸೋದರ ಮಾವ ಭಾಸ್ಕರರೂ ಕಣ್ಣಿಗೆ ಬಿದ್ದರು. ಈ ಧಾವಾಂತಗಳೇ ಸಾಕಿತ್ತು, ವೈಶ್ಣವಿಯನ್ನು ನೋಡಲಿಕ್ಕೆ ಗಂಡಿನ ಕಡೆಯವರು ಬರಲಿದ್ದಾರೆಂದು ಅರ್ಥವಾಗುವುದಕ್ಕೆ. ಯಾರಿರಬಹುದು ಆ ಪುಣ್ಯಾತ್ಮ? ಕೇಕೋಡರ ಮಗನಾ? ಶಾಸ್ತ್ರಿಗಳ ಸುಪುತ್ರನಾ? ಅಥವಾ ಇನ್ಯಾವುದೋ ಸಂಸ್ಥಾನದ ಯುವರಾಜನಾ? ಇವರ ಗಡಿಬಿಡಿ ಕಂಡರೆ ಯಾವುದೋ ದೊಡ್ಡ ಮನೆತನದ ಯುವರಾಜನೇ ಇರಬೇಕು. ಪಾಪ ವೈಶು- ಟೂರು, ಟ್ರಿಪ್ಪು ಎಂದೆಲ್ಲಾ ಕುಣಿದಾಡಿಕೊಂಡು ಬಂದಳು. ಇಲ್ಲಿವರೆಲ್ಲಾ ಸೇರಿ ಇಷ್ಟು ದೊಡ್ಡ ರೈಲು ಹತ್ತಿಸಲಿದ್ದಾರೆಂಬುದು ಹುಡುಗಿಗೆ ಗೊತ್ತಾಗುವುದಾದರೂ ಹೇಗೆ ಎಂದುಕೊಂಡೆ. ದಾರಿಯಿಡೀ ಕಾಡಿದರೂ ಸಾಕೇತ ಬರಲಿರುವ ಗಂಡಿನ ಜುಟ್ಟು, ಜನಿವಾರಗಳ ಬಗ್ಗೆ ಚಿಕ್ಕ ವಿವರವನ್ನೂ ಬಾಯ್ಬಿಡಲಿಲ್ಲ. ಗದರಿಸಿ ಕೇಳಿದಾಗ ‘ಇಂದಾವರದ ಗಂಡು’ ಎಂದಷ್ಟೇ ಹೇಳಿ ತಾನು ಗುನುಗುತ್ತಿದ್ದ ಹಾಡಿನೊಳಗೆ ತೂರಿಕೊಂಡ. ಮನೆ ತಲುಪುವಷ್ಟೂ ಹೊತ್ತು ನಾನು ಇಂದಾವರದಲ್ಲಿರುವ‌ ಎಲ್ಲಾ ಮದುವೆ ವಯಸ್ಸಿಗೆ ಬಂದಿರುವ ಯುವರಾಜರನ್ನೂ, ಅವರ ಸರಾಸರಿ  ವರಮಾನವನ್ನೂ ಲೆಕ್ಕ ಹಾಕುತ್ತಲೇ ಕುಳಿತುಕೊಂಡೆ.


ಮರಳಿ ಮನೆಯೊಳಗೆ ಕಾಲಿಡುವ ಹೊತ್ತಿಗೆ ಮನಸ್ಸು ಇನ್ನೇನು ಬಿಡಿಸಿಕೊಳ್ಳಲಿರುವ ಒಗಟಿನ ಉತ್ತರಕ್ಕಾಗಿ ಕಾತರವಾಗಿತ್ತು.  ಒಳ ಬಂದ ನನ್ನನ್ನು ಬಂದ ವೇಗದಲ್ಲೇ ಬಚ್ಚಲುಮನೆಗೆ ರವಾನಿಸಿಲಾಯಿತು. ಸುತ್ತಮುತ್ತಲೆಲ್ಲೂ ವೈಶ್ಣವಿಯ ಸುಳಿವೇ ಇರಲಿಲ್ಲ. ಅವಳ ದಿಬ್ಬಣದ ಡ್ರೈವರ್ ನಾನೇ ಎಂಬುದು ಹೊರಗೆ ನಿಂತಿದ್ದ ಭಾಸ್ಕರರಾಯರ ಇನೋವಾವನ್ನು ನೋಡಿದಾಗಲೇ ಅರಿವಾಗಿತ್ತು. ಈಗ ನನ್ನ ಸ್ನಾನಕ್ಕೂ ಗಡಿಬಿಡಿ ಮಾಡುವುದನ್ನು ನೋಡಿದಾಗ ಅದು ಖಾತ್ರಿಯಾಯಿತು. ಬಹುಷಃ ಗಂಡಿಗೆ ಪರಿಚಯವಿರುವ ಯಾರದೋ ಮನೆಯಲ್ಲಿ ಹೆಣ್ಣುನೋಡುವ ಶಾಸ್ತ್ರ ಇಟ್ಟುಕೊಂಡಿದ್ದಾರೆ. ಅಲ್ಲಿಗೆ ಹೊರಡಲಿಕ್ಕೆಂದೇ ಇಷ್ಟೆಲ್ಲ ಗಡಿಬಿಡಿ ಎಂದುಕೊಂಡೆ. ಇಲ್ಲಿ ಇಷ್ಟೆಲ್ಲಾ ಧಾವಂತ ಸೃಷ್ಟಿಸಿರುವ ಆ ರಣಧೀರ ಕುಟುಂಬ ಯಾವುದೆಂದು ಚಿಂತಿಸುತ್ತಲೇ ಸ್ನಾನ ಮುಗಿಸಿ ಹೊರಬಂದವನನ್ನು ಭಾಸ್ಕರರಾಯರ ಗಂಭೀರ ಮುಖ ಎದಿರಾಯಿತು.


“ದೇವರಿಗೆ ನಮಸ್ಕಾರ ಮಾಡಿ ಬಾ. ನಿನ್ನ ಜೊತೆ ಮಾತಾಡೋದಿದೆ.”
ಏಕೆ, ಏನು ಎಂಬ ಮರುಪ್ರೆಶ್ನೆಗಳಿಗೆ ಆಸ್ಪದವೇ ಇಲ್ಲದಷ್ಟು ಗಂಭೀರವಾಗಿತ್ತು ಅವರ ಧ್ವನಿ. ನಡೆಯುತ್ತಿರುವ ಪ್ರಹಸನಗಳೆಲ್ಲದರ ಗುಟ್ಟನ್ನೂ ತಿಳಿದಿರುವ, ನಿಗೂಢ ತುಂಟ ನಗೆ ನಗುತ್ತಾ ನಿಂತಿದ್ದ ಫೋಟೋದ ದೇವರಿಗೆ ನಮಸ್ಕರಿಸಿ ಭಾಸ್ಕರ ರಾಯರು ಇದ್ದಲ್ಲಿಗೆ ಮರಳಿದೆ. ಅವರ ಜೊತೆಗೇ ಅಪ್ಪ ಹಾಗೂ ಅಮ್ಮನೂ ಅಲ್ಲಿ ಕಾಯುತ್ತಾ ನಿಂತಿರುವುದು ನನ್ನ ಕುತೂಹಲಕ್ಕೆ ಎಣ್ಣೆಸುರಿಯಿತು.


“ವೈಶ್ಣವಿಯದೂ ನಿನ್ನದೂ ಜಾತಕ ನೋಡಿಸಿಕೊಂಡು ಬಂದಿದ್ದೇವೆ”
ನನಗೆ ನನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಇಷ್ಟು ಹೊತ್ತು ನಡೆದಿದ್ದ ರಹಸ್ಯ ಕಾರ್ಯಾಚರಣೆಯ ಮೊದಲ ಬಾಂಬು ನನ್ನ ಬುಡದಲ್ಲೇ ಢಮಾರೆಂದಿತ್ತು.


“ಏನು!? ವೈಶ್ಣವಿ ಹಾಗೂ ನನ್ನ ಜಾತಕವಾ? ಯಾಕೆ?”


ಧೀರ್ಘ ಮಾತಿಗೆ ಅನುವಾಗುವವರಂತೆ ಭಾಸ್ಕರರು ಶ್ವಾಸಕೋಶದ ತುಂಬಾ ಉಸಿರೆಳೆದುಕೊಂಡು ಆರಂಭಿಸಿದರು.  
“ನೋಡು ವಿಹಾರ್, ಕಾಲ ಯಾರನ್ನೂ ಕಾಯೋದಿಲ್ಲ. ನೀವು, ಈಗಿನಕಾಲದ ಹುಡುಗರಿಗೆ ಅದು ಅರ್ಥವಾಗೋದಿಲ್ಲ. ಏನೋ ಕಡಿದು ಗುಡ್ಡೆ ಹಾಕುವವರಂತೆ ಈಗಲೇ ಮದುವೆ ಬೇಡ, ಇನ್ನೆರೆಡು ವರ್ಷ ಬೇಡ ಅಂತೆಲ್ಲ ವರಾತ ಹೂಡುತ್ತೀರ. ಕೊನೆಗೆ ವಯಸ್ಸು ಮೀರಿದ ಗಡಿಬಿಡಿಯಲ್ಲಿ ಸಿಕ್ಕ ಯಾರಿಗೋ ಸಿಕ್ಕಿಹಾಕಿಕೊಳ್ತೀರ‌. ನಿಮ್ಮ ವಿಷಯದಲ್ಲಿ ಹಾಗಾಗುವುದು ಬೇಡ. ಹೇಳೀ ಕೇಳೀ ನಿಮ್ಮಿಬ್ಬರದೂ ಹಳೆಯ ಪರಿಚಯ. ಹೊಸದಾಗಿ ಹೊಂದಿಕೊಂಡು ಹೋಗಲಿಕ್ಕೆ ನಿಮ್ಮಿಬ್ಬರಿಗೆ, ಕನಿಷ್ಠ ನಿಮ್ಮ ಮನೆಯವರ ನಡುವೆಯಾದರೂ ಅಂತಹಾ ಅಪರಿಚಿತತೆಯೇನಿಲ್ಲ. ತಂದೆಯಿಲ್ಲದ ಒಬ್ಬಳೇ ಮಗಳನ್ನು ಕಣ್ಣಳತೆಯಲ್ಲೇ ಇರುವ, ಗೊತ್ತಿರುವವರ ಮನೆಗೇ ಕೊಡಬೇಕಂತ ಸುಶೀಲಾಗೂ ಬಹಳ ಆಸೆಯಿತ್ತು.. ಅದಕ್ಕೇ ನಾವು ಹಿರಿಯರು ಕೂತು ಈ ಮಾತುಕತೆಯಾಡಿದ್ದೇವೆ. ಅಂಗೈಯಲ್ಲೇ ಇರುವ ಬೆಣ್ಣೆಗೂ ಕಾಯಿಸಬೇಕಿರುವ ತುಪ್ಪಕ್ಕೂ ಜಾತಕ ಕೂಡಿಸಿದ್ದೇವೆ. ಇವತ್ತು ದೇವಸ್ಥಾನದಲ್ಲಿ ನಿಮ್ಮೆದುರೇ ಪ್ರಸಾದ ಕೇಳಿಸುತ್ತೇವೆ. ಹಾಗಂತ ನಿಮ್ಮ ಯಾವ ಇಚ್ಛೆಯನ್ನೂ ಮುರಿಯುವ ಮನಸ್ಸು ನಮಗಿಲ್ಲ. ನಿಮ್ನಿಮ್ಮ ಬದುಕಿನ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಅಂತಿಮ ಹೊಣೆಯನ್ನು ನಿಮಗೇ ಬಿಡುತ್ತಿದ್ದೇವೆ. ಇಬ್ಬರಿಗೂ ಇನ್ನೊಂದು ವಾರ ಕಾಲಾವಕಾಶವಿದೆ. ಮುಂದಿನದು ನಿಮಗೇ ಬಿಟ್ಟಿದ್ದು”


ಯಾವುದೋ ಸಿನೆಮಾದ ಯಾವುದೋ ಪಾತ್ರವೊಂದರ ಕಥೆಯಲ್ಲಿ ಬರುತ್ತಿದ್ದ ತಿರುವೊಂದು ಈಗ ನನ್ನ ಬದುಕಿನಲ್ಲೇ ಬಂದ ಪರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯದೆ ಭಾಸ್ಕರರ ಮುಖವನ್ನೇ ನೋಡುತ್ತಾ ನಿಂತೆ. ನಾನು ಕೇಳಿಸಿಕೊಂಡಿದ್ದು ನಿಜವಾ? ಮದುವೆಯ ವಿಷಯದಲ್ಲಿ ತನ್ನದೇ ಆದ ವಿಸ್ತಾರ ಕನಸುಗಳಿರುವ ವೈಶ್ಣವಿಯ ಬದುಕಿಗೆ ನನ್ನನ್ನು ಅಪವಾದಿಸಲಾಗುತ್ತಿದೆಯಾ? ಇದಕ್ಕೆ ಅವಳ ಸಹಮತವಿದೆಯಾ? ಯಾವುದೋ ಹುಡುಗಿಯ ಹಿಂದೆ ವರ್ಷಗಟ್ಟಲೆ ಅಲೆದು ತಿರಸ್ಕೃತನಾಗಿ ಬಂದವನೆಂದು ತಿಳಿದೂ ನನ್ನ ಪಕ್ಕದಲ್ಲವಳು ವಧುವಾಗಿ ನಿಲ್ಲುತ್ತಾಳಾ? ಗೊಂದಲಗಳು ಸಮರೋಪಾದಿಯಲ್ಲಿ ಎದೆಯೊಳಗೆ ಪುಟಿದೇಳತೊಡಗಿದವು.


ಆಗ ಬಂದಳು ವೈಶ್ಣವಿ..


ತಿಳಿನೀಲಿ ಬಣ್ಣದ ಸೀರೆ. ಕೊರಳ ಬಳಸಿ ಬಂದು ಸೆರಗಿನ ಇಳಿಜಾರಿನೊಳಗೆ ಮಾಯವಾಗಿರುವ ಎರೆಡೆಳೆಯ ಸರ. ಹೋದ ಜನ್ಮದಲ್ಲೆಂದೋ ನಾನೇ ಮುಡಿಸಿದಂತೆ, ನೇರ ನನ್ನ ನೆನಪಿಗೇ ಸಂಬಂಧಿಸಿದಂತೆ ಅತ್ಯಂತ ಪರಿಚಿತವಾದ ಪರಿಮಳ ಹೊಮ್ಮಿಸುತ್ತಿರುವ ಮುಡಿಯ ಮಲ್ಲಿಗೆ. ಸೂರ್ಯ ಮುಳುಗಿದ ಬಾನಿನಲ್ಲಿ ಎದ್ದುಬಂದ ಮಿಣುಕು ತಾರೆಯಂತಹಾ ಹಣೆಯ ಚುಕ್ಕಿ ಬಿಂದಿ, ಇವುಗಳೆಲ್ಲವೂ ಒಟ್ಟಾಗಿ ಸೃಷ್ಟಿಸಿರುವ ದಿವ್ಯ ಸೌಂದರ್ಯದ ಭಾರಕ್ಕೋ, ಯಾರನ್ನೂ ನೇರವಾಗಿ ನೋಡಲಾಗದ ಸಂಕೋಚಕ್ಕೋ ನೆಲದಮೇಲೆ ನೆಟ್ಟಿರುವ ನೋಟ..


ಇದುವರೆಗೆ ನಾನು ನೋಡದ ಹೊಸ ಚಹರೆಯೊಂದನ್ನು ಅವಳು ಧರಿಸಿ ಬಂದಿರುವಂತೆ ಭಾಸವಾಯಿತು. ಏನನ್ನೂ ಹೇಳಲಾರದವನಾಗಿ ಸುಮ್ಮನೆ ನಡೆದು ಇನೋವಾದ ಮುಂದುಗಡೆ ಚಾಲಕನ ಪಕ್ಕದ ಸೀಟನ್ನೇರಿ ಕುಳಿತುಕೊಂಡೆ‌. ಇಲ್ಲೇ ಏಕೆ ಕುಳಿತೆ? ಅವಳ ಕಣ್ಣಿನಿಂದ ಪಾರಾಗುವುದಕ್ಕಾ? ಖಾತ್ರಿಯಿರಲಿಲ್ಲ. ಆದರೆ ಹಾಗೆ ಕುಳಿತಮೇಲೆ ಅಮೂಲ್ಯವಾದುದೇನನ್ನೋ ಹಿಂದೆ ಬಿಟ್ಟು ಬಂದಿರುವಂತೆ ಮನಸ್ಸು ಚಡಪಡಿಸತೊಡಗಿತು. ದೇವಸ್ಥಾನ ತಲುಪುವವರೆಗೂ ಓರೆ ಕನ್ನಡಿಯಲ್ಲಿ ನನ್ನನ್ನೇ ಹುಡುಕುವವನಂತೆ ಹಿಂದಿನ ಸೀಟಿನಲ್ಲಿ ತನ್ನ ಅಮ್ಮನಿಗೊರಗಿ ಕುಳಿತಿದ್ದ ಅವಳ ಪ್ರತಿಬಿಂಬಕ್ಕಾಗಿ ಅರಸುತ್ತಲೇ ಇದ್ದೆ.


ದೇವಸ್ಥಾನ ಬಂತು. ಎಲ್ಲರೂ ಇಳಿದೆವು. ದೇವರೆದುರಲ್ಲಿ ನಿಂತು ಜಾರಲಿರುವ ಹೂವಿಗಾಗಿ ಕಾಯುತ್ತಿದ್ದಾಗ ಮನಸ್ಸೇಕೋ ಶುಭ ಸೂಚನೆಯೇ ದೊರೆಯಲೆಂದು ಪ್ರಾರ್ಥಿಸಿಕೊಂಡಿತು. ಪಕ್ಕದಲ್ಲಿ ನಿಂತ ವೈಶ್ಣವಿಯೂ ಅದನ್ನೇ ಕೇಳಿಕೊಳ್ಳುತ್ತಿದ್ದಾಳಾ? ಅಂದಾಜಿಸಲಾಗಲಿಲ್ಲ. ಎಲ್ಲರ ಹಾರೈಕೆಯಂತೆ ದೇವರ ಮುಡಿಗಿರಿಸಿದ್ದ ಹೂವಿನ ಗೊಂಚಲು ಬಲಕ್ಕೇ ಜಾರಿಬಿತ್ತು. ಎಲ್ಲರೂ ಖುಷಿಯಿಂದ ಹೋ ಎಂದರು. ನಾನು ವೈಶ್ಣವಿಯನ್ನೇ ನೋಡಿದೆ. ಅವಳು ದೇವರನ್ನೇ ನೋಡುತ್ತಿದ್ದಳು.


ಮನೆಗೆ ಮರಳುತ್ತಿದ್ದಂತೆಯೇ ವೈಶ್ಣವಿ ಇಬ್ಬರು ಅಮ್ಮಂದಿರ ಜೊತೆಗೆ ಅಡುಗೆಮನೆ ಸೇರಿಕೊಂಡುಬಿಟ್ಟಳು. ಅವಳಿರುವ ಕಾರಣಕ್ಕೇ ನನ್ನದೇ ಮನೆಯ ಒಂದು ಭಾಗವಾದ ಆ ಕೋಣೆಯೊಳಗೆ ಕಾಲಿಡುವುದಕ್ಕೂ ಆಗದೆ ಮನಸ್ಸು ಹಿಂಜರಿಯತೊಡಗಿತು. ಇನ್ನು ಅವಳಾದರೂ ಎದುರೇ ಬರದೆ ಅಡಗಿದಂತೆ ಓಡಾಡಿಕೊಂಡಿದ್ದಳು. ಅಡುಗೆಮನೆಯ ಕಿಟಕಿಯಿಂದ ಕಂಡ ಅವಳು ಮುಡಿದ ಹೂ, ಕೋಣೆಯೊಳಗೆ ನಡೆದು ಬಾಗಿಲು ಎಳೆದುಕೊಂಡವಳ ಬಳೆತುಂಬಿದ ಕೈ, ಪಕ್ಕವೇ ಹಾದುಹೋದಾಗ ನನ್ನ ಕೈಗೆ ಸೋಕಿಹೋದ‌ ಸೀರೆ ಸೆರಗು.‌. ಹೀಗೆ ದಿನವಿಡೀ ಅವಳು ಸಂಪೂರ್ಣವಾಗಿ ಸಿಗದೇ ಒಂದು ಅನುಭೂತಿಯಂತೆ, ಚಂದದ ಕನಸಿನಂತೆ ಸುಳಿದಾಡಿಕೊಂಡಿದ್ದಳು. ಕೆಲವೇ ಗಂಟೆಗಳ ಕೆಳಗೆ ಒಂದಿಡೀ ರಾತ್ರೆ ಒಬ್ಬರ ಹೆಗಲಿಗೊಬ್ಬರು ಆತು ಕುಳಿತು ಬಂದ ನಮ್ಮಿಬ್ಬರ ನಡುವೆ ಇದ್ದಕ್ಕಿದ್ದಂತೆಯೇ ಸೃಷ್ಟಿಯಾದ ಈ ಸಂಕೋಚದ ಮರೆ ಅಚ್ಚರಿಯದಾಗಿತ್ತು.


ಆದರೆ ಅವಳು ಮಾತಿಗೆ ಸಿಗದೆ ದೂರ‌ ಹೋದಷ್ಟೂ ಮನಸ್ಸಿನ ಹೊಯ್ದಾಟ ಜಾಸ್ತಿಯಾಗತೊಡಗಿತ್ತು. ನಾನು ಯೋಚಿಸುತ್ತಿರುವುದು ಸರಿಯೇ? ಇಷ್ಟು ದಿನ ನನ್ನ ಗಾಢ ಪ್ರೀತಿಯ ಇನ್ನೊಂದು ಕಥೆ ಹೇಳಿಕೊಂಡವಳೆದುರೇ ನಿಂತು ‘ನಾನು ನಿನ್ನನ್ನು ಒಪ್ಪಿದ್ದೇನೆ’ ಎಂದು ಹೇಗೆ ಹೇಳಲಿ? ಅಷ್ಟಕ್ಕೂ ನಾನು ಮದುವೆಯಾಗಬೇಕೇ? ಜ್ಯೋತಿಯ ಮೇಲಿನ ನನ್ನ ಅನುರಾಗ ಇಲ್ಲಿಗೇ ಮುಗಿಯಬೇಕೇ? ಇವೆಲ್ಲದಕ್ಕೂ ಮುನ್ನ ವೈಶ್ಣವಿಯ ಮನಸ್ಸಿನಲ್ಲೇನಿದೆ? ಒಂದೂ ಅರ್ಥಕ್ಕೆ ನಿಲುಕದಾಯಿತು. ಏನೇ ಆದರೂ ಸಂಜೆ ಅವಳೊಂದಿಗೆ ಮತಾಡಲೇಬೇಕೆಂದು ಲೆಕ್ಕಹಾಕಿ ಮಧ್ಯಾಹ್ನದ ಕಿರುನಿದಿರೆಗೆಂದು ಅಡ್ಡಾದೆ.


         **************************


ರಾತ್ರೆ ಬಾಕಿಯಾದ ನಿದಿರೆಯನ್ನೆಲ್ಲ ಮುಗಿಸಿ ಎದ್ದಾಗ ಮನಸ್ಸು ಹಗುರಾಗಿತ್ತು. ಎದ್ದು ಮುಖ ತೊಳೆದುಕೊಂಡು ಒಳಬಂದವನೆದುರು ಅಚ್ಚರಿಯೆಂಬಂತೆ “ಆಯ್ತಾ ನಿದ್ರೆ?” ಎನ್ನುತ್ತಾ ವೈಶ್ಣವಿ ಕಾಫಿ ಲೋಟದ ಸಮೇತ ಹಾಜರಾದಳು. ನಾನಗಿ ಕೇಳುವ ಮೊದಲೇ “ದೇವಸ್ಥಾನಕ್ಕೆ ಹೋಗ್ಬರೋಣ್ವ?” ಎಂದು ನನ್ನ ಆಲೋಚನೆಯನ್ನು ನೇರ ಕಣ್ಣಿನಿಂದಲೇ ಕದ್ದವಳಂತೆ ಕೇಳಿಬಿಟ್ಟಳು. ಸುಮಾರು ಹದಿಮೂರು ವರ್ಷಗಳ ಹಿಂದಿನ ಸಂಜೆಯೊಂದು ಮತ್ತೆ ಜೀವಂತವಾದ ಹಳೆಯ ದಾರಿಯಲ್ಲಿ ಇಬ್ಬರೂ ನಡೆಯತೊಡಗಿದೆವು.


“ಮತ್ತೆ… ಏನಂತ ಡಿಸೈಡ್ ಮಾಡಿದ್ರಿ ಸಾರ್?”
ಗುಡ್ಡದಲ್ಲಿ ಅಡ್ಡಾಗಿ ಒರಗಿದ್ದ ಮರದ ಮೇಲೆ ಕೂರುತ್ತಾ ಕೇಳಿದವಳ ಮಾತಿನಲ್ಲಿ ಎಂದಿನ ಸಲುಗೆಯಿತ್ತು‌. ನಮ್ಮ ಮಾತುಗಳನ್ನು ಆಲಿಸಲಿಕ್ಕಾಗಿಯೇ ಎಂಬಂತೆ ಸುತ್ತಲಿನ ಕಾಡು ನವಿರಾದ ನಿಶ್ಯಬ್ದದಲ್ಲಿ ನಿಂತಿತ್ತು.


“ನನಗೇನೂ ತೋಚುತ್ತಿಲ್ಲ ವೈಶು. ಕಳೆದೊಂದು ವರ್ಷದಲ್ಲಿ ನನ್ನ ಬದುಕಿನ ಅತಿ ಚಿಕ್ಕ ಹೊಯ್ದಾಟವನ್ನೂ ಬಿಡದೆ ನಿನ್ನ ಬಳಿ ಹೇಳಿಕೊಂಡಿದ್ದೇನೆ. ಜ್ಯೋತಿಯ ಮೇಲಿನ ನನ್ನ ಅನುರಾಗವನ್ನು ಅವಳಿಗೆ ಹೇಳಿದ್ದಕ್ಕಿಂತ ಹೆಚ್ಚಿಗೆ ನಿನ್ನ ಬಳಿ ತೋಡಿಕೊಂಡಿದ್ದೇನೆ. ಅವಳ ಕುರಿತಾದ ನನ್ನ ಚಿಕ್ಕ ಕನವರಿಕೆಯೂ ನಿನಗೆ ಗೊತ್ತಿದೆ. ಈಗ ಅದೇ ಕನಸುಗಳೊಳಗೆ ನೀನು ತುಂಬಿಕೋ ಎಂದು ಹೇಗೆ ಹೇಳಲಿ? ನಿನ್ನ ಕಲ್ಪನೆಯಲ್ಲಿರುವ ವರ ನಾನಾಗಲಾರೆನೆಂಬ ಸತ್ಯ ಗೊತ್ತಿದ್ದೂ…”


ಮಾತಿನ ಉಳಿದ ಭಾಗವನ್ನು ನೀನೇ ಪೂರ್ತಿಮಾಡೆಂಬಂತೆ ಅಲ್ಲಿಗೇ ನಿಲ್ಲಿಸಿಬಿಟ್ಟೆ‌.


“ಕಲ್ಪನೆ... ಯಾರಿಗಿಲ್ಲ ಹೇಳು? ನಿನಗಿಲ್ವಾ? ನಿನ್ನ ಜ್ಯೋತಿಗಿಲ್ವಾ? ಕಲ್ಪನೆಗಳೆಲ್ಲ ನೂರಕ್ಕೆ ನೂರರಷ್ಟು ನಿಜವಾಗುವುದು ಕಲ್ಪನೆಯಲ್ಲಿ ಮಾತ್ರ! ಅಷ್ಟಕ್ಕೂ ನೀನು ನಾನು ಬಯಸಿದಂತಿಲ್ಲ ಅಂತ ಯಾಕಂದುಕೊಂಡೆ?”


ಆಶ್ಚರ್ಯದಿಂದ ನೋಡಿದೆ. ಮದುವೆಯ ವಿಷಯ ಎದ್ದಾಗಿನಿಂದಲೂ ಮುಖ ತಪ್ಪಿಸಿಕೊಂಡು ಓಡಾಡುತ್ತಿದ್ದವಳಿಂದ ಇಂತಹಾದ್ದೊಂದು ಮಾತನ್ನು ನಿರೀಕ್ಷಿಸಿಯೇ ಇರಲಿಲ್ಲ. ಬೆಳಗಿನಿಂದ ಸಂಭವಿಸುತ್ತಿದ್ದ ಅಚ್ಚರಿಗಳ ಪೈಕಿ ಇದೇ ದೊಡ್ಡದೆನಿಸಿತು. ವೈಶ್ಣವಿ ಮುಂದುವರಿಸಿದಳು‌.


“ಜ್ಯೋತಿ ಜ್ಯೋತಿ ಅಂತ ಅಷ್ಟೆಲ್ಲ ಕಥೆ ಹೇಳಿದೆಯಲ್ಲ? ನೀನು ಹೇಳುತ್ತಿದ್ದೀ ಅಂತಷ್ಟೇ ಅದನ್ನ ಕೇಳಿಸಿಕೊಳ್ಳುತ್ತಿದ್ದೆ ಅಂದುಕೊಂಡೆಯಾ? ಅಷ್ಟಕ್ಕೂ ನಿನ್ನ ಬದುಕಿನಲ್ಲಿ ಆ ಜ್ಯೋತಿ ಯಾರು ಗೊತ್ತಾ? ಮಂಜು ಕವಿದ ಯಾವುದೇ ಗಾಜು ಕಂಡರೂ ಅದರ ಮೇಲೆ  ಬರೆಯುತ್ತೀಯಲ್ಲ.. ಆ ಹೆಸರೇ ಜ್ಯೋತಿ. ಕಥೆ ಪುಸ್ತಕದ ಮಧ್ಯದಲ್ಲೆಲ್ಲೋ ಸಾಲೊಂದರಲ್ಲಿ ಬಂದ ‘ಜ್ಯೋತಿ’ ಪದವನ್ನು ಹೆಕ್ಕಿ ಅಂಡರ್ ಲೈನ್ ಮಾಡ್ತೀಯಲ್ಲಾ, ಆ ವಿಶೇಷಣವೇ ಜ್ಯೋತಿ. ಹಸಿರು ಬಣ್ಣದ ಅಂಗಿ ಹಾಕಿಕೊಂಡು ‘ಇದು ಅವಳ ಚೂಡಿದಾರಕ್ಕೆ ಮ್ಯಾಚ್ ಆಗ್ತಿತ್ತು’ ಅಂತೀಯಲ್ಲಾ, ಆ ನೆನಪೇ ಜ್ಯೋತಿ. ಅವಳು ಮರೆತ ನಿನ್ನ ಹುಟ್ಟುಹಬ್ಬದ ದಿನ ಮೊಬೈಲ್ ರಿಂಗಾದಾಗೆಲ್ಲ ‘ಅವಳೇ’ ಅಂತ ಆಸೆಯಿಂದ ಎತ್ತಿಕೊಳ್ತೀಯಲ್ಲಾ, ಆ ಹುಚ್ಚು ನಿರೀಕ್ಷೆಯೇ ಜ್ಯೋತಿ. ಯಾವತ್ತೂ ಇಲ್ಲದವನು ಅವಳ ಹುಟ್ಟು ಹಬ್ಬದ ದಿನ ದೇವಸ್ಥಾನಕ್ಕೆ ಹೋಗಿ ನಿಲ್ಲುತ್ತೀಯಲ್ಲಾ, ಆ ಪ್ರಾರ್ಥನೆಯೇ ಜ್ಯೋತಿ. ಅವಳೆಂದರೆ ನಿನ್ನ ಪಾಲಿಗೆ ಅಷ್ಟೇ ಕಣೋ.. ಮಂಜಿನ ಮೇಲಿನ ಹೆಸರು. ಹೆಸರಿನ ಕೆಳಗೆ ಬರೆದ ಅಡಿಗೆರೆ. ನೆನಪಾಗಿ ಕಾಡುವ ಬಣ್ಣ. ಹೆಸರು ಗೊತ್ತಿಲ್ಲದೆ ರಿಂಗಾಗುವ ಅನಾಮಿಕ ಕರೆ. ದೊರೆಯದೆಂದು ತಿಳಿದೂ ಬೇಡಿಕೊಳ್ಳುವ ಪ್ರಾರ್ಥನೆ! ನಿಜ ವಿಹಾರ್.. ಜ್ಯೋತಿಯೆನ್ನುವುದು ನಿನ್ನ ಪಾಲಿಗೆ ವ್ಯಕ್ತಿಯಲ್ಲ. ಭೌತಿಕ ದೇಹವಲ್ಲ. ಅದೊಂದು ಆತ್ಮದಂತಹಾ ಅನುಭೂತಿ. ಅದು ನಿನ್ನೊಳಗಿನ ಅನುರಾಗವನ್ನು ಸಜೀವಗೊಳಿಸಿದ ಜೀವಜಲ. ಬೆಳಗ್ಗೆ ಭಾಸ್ಕರ ಮಾವ ನಮ್ಮ ಮದುವೆಯ ವಿಚಾರವನ್ನು ಪ್ರಸ್ತಾಪಿಸಿದಾಗ ನನಗೆ ಸಣ್ಣಗೆ ಆಘಾತವಾಯಿತು. ಪಕ್ಕದಲ್ಲೇ, ಪಡಸಾಲೆಯ ಕೋಣೆಯಲ್ಲೇ ಸುಳಿದಾಡಿಕೊಂಡಿದ್ದ ಈ ಹುಡುಗನೇಕೆ ಒಮ್ಮೆಯಾದರೂ ನನ್ನ ಕನಸಿನಲ್ಲಿ ಬಾರದೇ ಹೋದನೆಂದು ಅಚ್ಚರಿಯಾಯಿತು. ಆದರೆ ವಿಹಾರ್, ನನ್ನ ಪಾಲಿಗೆ ಮದುವೆಯೆಂಬುದು ಬೇರೆಯವರದಕ್ಕಿಂತ ತುಸು ಹೆಚ್ಚೇ ಕೊಂಡಿಗಳಿರುವ ಸಂಬಂಧದ ಸೂಕ್ಷ್ಮ ಎಳೆ ಕಣೋ. ಅದು ಕೇವಲ ಈಗಿರುವ ಪಿಜಿ ತೊರೆದು ಒನ್ ಬಿಎಚ್ಕೆ ಮನೆಗೆ ವರ್ಗವಾಗುವ ಸಂಗತಿಯಲ್ಲ. ಚಿಕ್ಕಂದಿನಿಂದಲೂ ನಾನು ಕಾಣದೇ ಹೋದ ಕುಟುಂಬ ವಾತಾವರಣದಲ್ಲಿ ಸೇರಿಕೊಳ್ಳುವುದು.‌ನನ್ನ ಹೊರತು ಬೇರಾರೂ ತನ್ನವರಿಲ್ಲದ ಅಮ್ಮನನ್ನೂ ಅದರೊಳಗೆ ಸೇರಿಸಿಕೊಳ್ಳುವುದು. ನಾನು ಕೇಳದೇ ಹೋದ, ಕಥೆ ಹೇಳುವ ಅಜ್ಜ-ಅಜ್ಜಿಯರ ಪ್ರೀತಿಯನ್ನು ನನ್ನ ಮಗುವಿಗೆ ಒದಗಿಸಿಕೊಡುವುದು. ಈಗ ಅನಿಸುತ್ತಿದೆ.. ನಾನು ಕಲ್ಪಿಸಿಕೊಂಡ ಆ ಬದುಕು ನನ್ನ ಎದುರೇ ಇತ್ತು.  ಕೈ ಚಾಚಿದರೆ ಸಿಗುವಷ್ಟು ಸಮೀಪದಲ್ಲೇ ಸುಳಿದಾಡಿಕೊಂಡಿತ್ತು... ನಿನ್ನ ರೂಪದಲ್ಲಿ! ನಿನ್ನ ಹೆಸರಿನಲ್ಲಿ ನಾನು ಕಳೆದುಕೊಂಡ ಬಾಲ್ಯ, ಅಮ್ಮನ ಬದುಕಿನ ಸಂಜೆಗಳನ್ನು ಕಳೆಯಲಿಕ್ಕ ಆತ್ಮೀಯವಾದುದೊಂದು ಅಂಗಳ, ಹಾಗೂ ನನಗೆ ತಲೆಯಾನಿಸಿ ಬದುಕಲಿಕ್ಕೊಬ್ಬ ಪ್ರಾಮಾಣಿಕ ಗೆಳೆಯ ದೊರೆಯುವುದಾದರೆ ಈ ಸಂಬಂಧಕ್ಕೆ ನನ್ನ ಸಮ್ಮತಿಯಿದೆ. ಇನ್ನು ಮುಂದಿನದ್ದೆಲ್ಲ ನಿನ್ನ ಚಿತ್ತ…”


ಹಿನ್ನೆಲೆಯಲ್ಲಿ ಮುಳುಗುತ್ತಿದ್ದ ಸೂರ್ಯನೀಗ ಅವಳ ಹಣೆಯ ಕುಂಕುಮದ ಬಣ್ಣಕ್ಕೇ ತಿರುಗಿದ್ದ. ದೇವಸ್ಥಾನದಲ್ಲಿ ಮುಡಿದ ಹೂವಿನ್ನೂ ಅವಳ ಮುಡಿಯಲ್ಲೇ ಇತ್ತು. ಈ ಸಂಜೆಯ ಹಿನ್ನೆಲೆಯಲ್ಲವಳು ಬೇರೆಯೇ ಆಗಿ ಕಾಣುತ್ತಿದ್ದಳು. ನನಗ ಹೇಳಲಿಕ್ಕೆ ಇನ್ನೇನೂ ಉಳಿದಿರಲಿಲ್ಲ‌‌. ಅವಳಾಡಿದ ಮಾತುಗಳಲ್ಲಿ ನನ್ನದೂ ಸೇರಿಹೋಗಿತ್ತು. ಮನಸ್ಸೀಗ ಹಗುರವಾಗಿತ್ತು. ಏನನ್ನೂ ಹೇಳದೇ ಅವಳ ಪಕ್ಕ ಕುಳಿತುಕೊಂಡೆ. ನಾನು ಹೇಳದ‌ ಉತ್ತರ ಅವಳಿಗೆ ಅರ್ಥವಾದಂತೆ ಮೆಲ್ಲಗೆ ಹೆಗಲಿಗೆ ತಲೆಯಾನಿಸಿದಳು. ಹೆಸರು ಗೊತ್ತಿಲ್ಲದ ಹಕ್ಕಿಯೊಂದು ಎಲ್ಲೋ ಕುಳಿತು ಹಾಡುತ್ತಿತ್ತು.


ಅಷ್ಟರಲ್ಲಿ ಏನೋ ನೆನಪಾಗಿ ಥಟ್ಟನೆ ಕೇಳಿದಳು:
“ಹೇ.. ಮರೆತೇ ಬಿಟ್ಟಿದ್ದೆ. ನಿನ್ನೆ ನನ್ನ ಖಾಯಿಲೆಯ ಬಗ್ಗೆ ಹೇಳಿದೆನಲ್ಲಾ, ಅದರ ಬಗ್ಗೆ ನೀನೇನೂ ಕೇಳಲೇ ಇಲ್ಲಾ?”


“ಅದ್ಯಾವ ದೊಡ್ಡ ವಿಷಯ ಬಿಡು. ಸೇಫ್ಟಿಗೆ ಯಾವಾಗಲೂ ಎರೆಡು ಬಾಟಲಿ ನೀರು ಜೊತೆಗಿಟ್ಟುಕೊಂಡರಾಯಿತು..”
ತಣ್ಣಗೆ ಉತ್ತರಿಸಿದೆ.


“ನಿನ್ನಜ್ಜೀ” ಎಂದು ಮುಖ ಕಿವುಚುತ್ತಾ ನನ್ನ ತೋಳು ಚಿವುಟಿ ನಕ್ಕಳು. ನಾನೂ ನಕ್ಕೆ. ಈ ನಗುವಿಗಾಗಿಯೇ ಕಾಯುತ್ತಿದ್ದನೇನೋ ಎಂಬಂತೆ ಸಂತೃಪ್ತನಾದ ಸೂರ್ಯ ಬೆಟ್ಟಗಳ ಹಿಂದೆ ಜಾರಿಹೋದ.


(ಆಗಸ್ಟ್ 2019ರ ಮಯೂರದಲ್ಲಿ ಪ್ರಕಟಿತ)

ಶನಿವಾರ, ಜುಲೈ 20, 2019

ಓ ಮೇಘವೇ...






ಇತ್ತೀಚಿನ ವರುಷಗಳಲ್ಲಿ ಅತೀ ಹೆಚ್ಚು ಜನರಿಂದ ಆಮಂತ್ರಣಕ್ಕೊಳಗಾಗುತ್ತಿರುವ ಸುಪ್ರಸಿದ್ಧ ಅತಿಥಿಗಳೆಂದರೆ ಅವು ಮಳೆ ಮೋಡಗಳು. ಮೊದಲೆಲ್ಲಾ ಮೇ ತಿಂಗಳ ಕೊನೆಯ ವಾರದಲ್ಲಿ ಯಾರಾದರೂ ಕರೆಯುವ ಮೊದಲೇ ಹಾಜರಾಗಿ ಆಕಾಶದುದ್ದಕ್ಕೂ ಕೋಟೆ ಕಟ್ಟಿಕೊಂಡು ಜಡಿಮಳೆಸುರಿಸುತ್ತಾ 'ಎಂಥಾ ಮರ್ರೆ ಇದು.. ಮಧ್ಯಾಹ್ನ ಮೂರ್ಗಂಟೆಗೇ ಕತ್ಲಾದಂಗಿತ್ತಲೆ' ಎಂದು ಬೈಸಿಕೊಳ್ಳುತ್ತಿದ್ದ ಮೋಡಗಳಿಗೆ ಹಠಾತ್ತನೆ ಅದೇನು ಬೇಸರವಾಯಿತೋ ಏನೋ, ಜೂನ್ ಹದಿನೈದು ಕಳೆದರೂ ಬಾರದೇ, ಹಿಂದೆ ತನ್ನನ್ನು ಬೈದಿದ್ದ ಅದೇ ಬಾಯಿಗಳಿಂದ "ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೇ" ಎಂದು ಹಾಡಿಸಿಕೊಳ್ಳುತ್ತಿವೆ.

ಮೋಡಗಳು ಪ್ರತಿದಿನ ನಮ್ಮ ಕಣ್ಣೆದುರೇ ಸುಳಿದಾಡಿಕೊಂಡಿದ್ದರೂ ಅವನ್ನು ನಾವು ಹೆಚ್ಚಾಗಿ ಗಮನಿಸುವುದು ಮಳೆಗಾಲದಲ್ಲಿ ಮಾತ್ರ. ಥೇಟ್ ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಮಳೆ ಬಾರದಿದ್ದಾಗಲೇ ನಾವು ಮೋಡಗಳ ಹುಡುಕಾಟದಲ್ಲಿ ತೊಡಗುತ್ತೇವೆ. ಸೃಷ್ಟಿಯ ಸುಂದರ ಸೋಜಿಗಗಳಾದ ಮೋಡಗಳು ಅದೇ ಸೃಷ್ಟಿಯ ಇನ್ನಿತರ ನೈಸರ್ಗಿಕ ರಚನೆಗಳಾದ ಸಾಗರ, ಪರ್ವತ, ಅರಣ್ಯ, ನೆಲಗಳೊಡನೆ ಸೋದರ ಸಂಬಂಧಿಯಂತೆ ವರ್ತಿಸುವುದನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಅಲ್ಲೆಲ್ಲೋ ಇರುವ ಸಮುದ್ರವಂತೆ. ಅದರ ನೀರು ಬಿಸಿಲಿಗೆ ಆವಿಯಾಗುವುದಂತೆ. ಅದರಿಂದ ಹುಟ್ಟಿಕೊಂಡ ಮೋಡಗಳು ಇನ್ನೆಲ್ಲಿಗೋ ತೇಲಿ ಹೋಗಿ ಮಳೆ ಸುರಿಸಿ ಮತ್ತದೇ ಬಿಸಿಲಿನ ಧಗೆಯನ್ನು ಇಳಿಸಿ ಕಡಲ ಬೇಗೆಯನ್ನು ಕಡಿಮೆಮಾಡುವುದಂತೆ. ಸುರಿದ ಮಳೆಗೆ ನೆಲ ಚಿಗುರಿ, ಕಾಡು ಬೆಳೆದು, ಅದೇ ಕಾಡು ಮತ್ತೆ ಮಳೆಯನ್ನು ಕರೆಯುವುದಂತೆ. ಜಲ ಚಿಮ್ಮಿ, ನೀರು ಹರಿದು ಮತ್ತದೇ ಕಡಲಿನಲ್ಲಿ ಅಂತರ್ಧಾನವಾಗುವುದಂತೆ... ನಿರಂತರವಾಗಿ ತಿರುಗುತ್ತಾ ಸೃಷ್ಟಿಯ ಉಳಿವಿಗಾಗಿ ಕೆಲಸಮಾಡುವ ನಿಸರ್ಗದ ಈ ತಿರುಗಣೆಯಲ್ಲಿ ಮೋಡಗಳು ಜೀವ ರಚನೆಯ ರಾಯಭಾರಿಗಳಂತೆ ಕೆಲಸಮಾಡುತ್ತವೆ.

ನನಗೆ ಮೋಡ ಹಾಗೂ ಆಕಾಶಗಳೆರೆಡೂ ಬೇರೆ ಬೇರೆಯೆಂಬುದು ಜ್ಞಾನೋದಯವಾಗಿದ್ದೇ ಶಾಲೆ ಸೇರಿಕೊಂಡ ಮೇಲೆ. ಅಳತೆಗೋಲುಗಳ ಲೆಕ್ಕಕ್ಕೆ ಸಿಗದ ಅಗಾಧ ಎತ್ತರದಲ್ಲಿ ನೀಲಿಯಾಗಿ ಹಬ್ಬಿರುವ ಕಾಲ್ಪನಿಕ ಆಕಾಶಕ್ಕೂ, ಅದರ ಕೆಳಗೆ ಮಾಯಾವೀ ಚಾಪೆಗಳಂತೆ ತೇಲುತ್ತಾ ಓಡುತ್ತಿರುವ ಮೋಡಕ್ಕೂ ನಡುವಿನ ಅಂತರವನ್ನು ಮೊದಲ ಬಾರಿಗೆ ಗುರುತಿಸಿದಾಗ ಯುರೇಕಾ... ಎಂದು ಕೂಗುವಷ್ಟು ಉದ್ವೇಗವಾಗಿತ್ತು. ಸದಾ ಯಾವುದೋ ದೂರದೂರಿಗೆ ಹೊರಟ ಅಲೆಮಾರಿಗಳಂತೆ ಓಡುತ್ತಲೇ ಇರುವ ಮೋಡಗಳು ನೆಲದಿಂದ ಕಿಲೋಮೀಟರ್ ಗಳಷ್ಟು ಎತ್ತರದಲ್ಲಿರುತ್ತವೆ. ಅಷ್ಟು ಎತ್ತರದಿಂದ ನೋಡುವುದಕ್ಕೋ ಏನೋ, ಅವುಗಳಿಗೆ ಮಳೆಯಿಲ್ಲದೆ ಕಾದ ನೆಲದ ಬಾಯಾರಿದ ಬಿರುಕುಗಳುಒಮ್ಮೊಮ್ಮೆ ಕಾಣಿಸುವುದೇ ಇಲ್ಲ! ತಮ್ನನ್ನೇ ಕಾಯುತ್ತಾ ಎದೆಬಿರಿದಿರುವ ಒಣನೆಲಕ್ಕೆ ಕೊಂಚವಾದರೂ ಮಳೆ ಸುರಿಸದೆಯೇ ತಮ್ಮ ಪಾಡಿಗೆ ತಾವು ಮುಂದಕ್ಕೆ ಹೋಗಿ, ಇನ್ನೆಲ್ಲೋ ಬೆಂಗಳೂರು, ಮುಂಬೈಗಳಂತಹಾ ನೀರು ಇಂಗದ ಶಹರಗಳ ತಲೆಯ ಮೇಲೆ ಧೋ ಎಂಬ ಬೊಬ್ಬೆಯೊಂದಿಗೆ ತಮ್ಮೊಡಲಿನ ಹನಿಗಳನ್ನೆಲ್ಲಾ ಸುರಿಸಿ, ಪಟ್ಟಣವನ್ನು ಭಾರವಾಗಿಸಿ, ತಾವು ಹಗುರಾಗುವುದು ಮೋಡಗಳ ವಿಚಿತ್ರ ಜಾಯಮಾನ.

ಬರಿಯ ಕಪ್ಪು-ಬಿಳುಪು ಬಣ್ಣಗಳಷ್ಟನ್ನೇ ಹೊಂದಿರುವ ಮೋಡಗಳಿಗೆ ಸಾರ್ವತ್ರಿಕವಾಗಿ ಬಣ್ಣ ಬಳಿಯುವ ಕೆಲಸ ಸೂರ್ಯನದ್ದು. ಸೂರ್ಯ ಹುಟ್ಟುವ ಹಾಗೂ ಮುಳುಗುವ ವೇಳೆಗಳಲ್ಲಿ ಅವನ ಸ್ವಾಗತ ಹಾಗೂ ವಿದಾಯಗಳಿಗಾಗಿ ನೆರೆಯುವ ಮೋಡಗಳಿಗೆ ಬಣ್ಣಬಣ್ಣದ ಬಟ್ಟೆಯನ್ನು ಸೂರ್ಯನೇ ತೊಡಿಸುತ್ತಾನೆ. ಒಂದಷ್ಟು ಕೆಂಪು, ಒಂದಷ್ಟು ಹಳದಿ, ಒಂದಷ್ಟು ನೀಲಿ ಬಣ್ಣಗಳು ಬೇರೆ ಬೇರೆ ಅನುಪಾತದಲ್ಲಿ ಮೇಘಗಳನ್ನಾವರಿಸಿ ನಿಂತು ಇಡೀ ಬಾನಿಗೆ ಬಾನೇ ಬಣ್ಣದಂಗಡಿಯ ಗೋಡೆಯಂತಾಗಿಬಿಡುತ್ತದೆ. ಮೋಡಗಳ ಸಂದಿಯಿಂದ ಚಿಮ್ಮಿ ಮತ್ಯಾವುದೋ ಮೋಡದ ಮೇಲೆ ಬೀಳುತ್ತಿರುವ ಕಿರಣಗಳನ್ನು ಕಂಡಾಗ ಒಂದು ಮೋಡವು ಇನ್ನೊಂದಕ್ಕೆ ಬೆಳಕಿನ ನೀರನ್ನೆರಚುತ್ತಾ ಆಡುತ್ತಿರುವಂತೆ ಭಾಸವಾಗುತ್ತದೆ.

ಇಂತಿಪ್ಪ ಮೋಡಗಳು ಕೇವಲ ಮಳೆಯನ್ನು ಮಾತ್ರವಲ್ಲ, ಮನುಷ್ಯನ ಮನಸ್ಸನ್ನೂ ನಿಯಂತ್ರಿಸುತ್ತವೆ. ಬೆಳ್ಳಂಬೆಳಗ್ಗೆ ಆಗಸದಲ್ಲಿ ಮೋಡ ಕವಿದಿತ್ತೆಂದರೆ ಮನಸ್ಸೂ ಒಂಥರಾ ಮಂಕಾಗಿಬಿಡುತ್ತದೆ. ಮಧ್ಯಾಹ್ನದ ವೇಳೆ ಕವಿಯುವ ಮೋಡಗಳೊಳಗೆ ಉಸ್ಸಪ್ಪಾ.. ಎನ್ನುವ ನಿಟ್ಟುಸಿರಿರುತ್ತದೆ. ಸಂಜೆ ಕವಿದ ಮೇಘಗಳ ಹಿಂದೆ ಕಾಮನ ಬಿಲ್ಲಿನ ನಿರೀಕ್ಷೆಯಿರುತ್ತದೆ. ಮನಸ್ಸಿನಲ್ಲಿ ಯಾವ ರೂಪವಿದ್ದರೆ ಆ ರೂಪ ಮೇಘಗಳಲ್ಲೂ ಕಾಣುವುದು ಮತ್ತೊಂದು ಸೋಜಿಗ. ಭಕ್ತರಿಗೆ ದೇವರಂತೆಯೂ, ಪ್ರಿಯತಮನಿಗೆ ಪ್ರೇಯಸಿಯ ಚಹರೆಯಂತೆಯೂ ದರ್ಶನಕೊಡುವ ಇವು ರೈತರಿಗೆ ಅಗಾಧ ನೆಮ್ಮದಿಯ ನಿಟ್ಟುಸಿರಿನ ರಾಶಿಯಂತೆ ಗೋಚರಿಸುತ್ತವೆ. ಮೋಡಗಳು ಆಡುವ ನೆರಳು-ಬೆಳಕಿನ ನಿಜವಾದ ಆಟವನ್ನು ನೋಡಬೇಕೆಂದರೆ ಎತ್ತರದ ಬೆಟ್ಟವನ್ನೋ, ಪರ್ವತವನ್ನೋ ಏರಿ ನಿಲ್ಲಬೇಕು. ಒಂದೇ ಬೆಟ್ಟದ ಅರ್ಧ ಇಳಿಜಾರಿನ ಮೇಲೆ ನೆರಳನ್ನೂ, ಇನ್ನರ್ಧದ ಮೇಲೆ ಬಿಸಿಲನ್ನೂ ಉಂಟುಮಾಡಿರುವ ಸೋಜಿಗದ ನೋಟ ಅಲ್ಲಷ್ಟೇ ಕಾಣಲು ಸಾಧ್ಯ. ಅಲ್ಲೆಲ್ಲೋ ದೂರದಲ್ಲಿ ಮಳೆಯನ್ನು ಸಿಂಪಡಿಸುತ್ತಾ, ರಸ್ತೆ, ಕಾಡು, ವಾಹನ, ಮನೆ, ಮಂದಿಗಳನ್ನೆಲ್ಲಾ ರಾಡಿ ಮಾಡುತ್ತಾ ಇನ್ನೆಲ್ಲಿಗೋ ಧಾವಿಸುತ್ತಿರುವ ಮೋಡದ ತರಲೆ ನೋಟ ನೋಡಲು ಸಿಗುವುದು ಅಲ್ಲಿಂದ ಮಾತ್ರ.

                       ****************

ಮೋಡ ಸರ್ವಾಂತರ್ಯಾಮಿ. ನಮ್ಮ ಭೂಮಿ ಮಾತ್ರವಲ್ಲ, ಸೌರಮಂಡಲ ಹಾಗೂ ಅದರಾಚೆಗಿನ ಗ್ರಹಗಳ ಆಕಾಶದಲ್ಲೂ ಸಹಾ ತೇಲುವ ಮೋಡಗಳೇ ತುಂಬಿವೆ. ಹಾಗಂತ ಎಲ್ಲಾ ಗ್ರಹದ ಎಲ್ಲಾ ಮೋಡಗಳೂ ನೀರಿನ ಮಳೆಯನ್ನೇ ಸುರಿಸುವುದಿಲ್ಲ! ಏಕೆಂದರೆ ಒಂದೊಂದು ಗ್ರಹದ ಮೋಡಗಳೊಳಗಿನ ಸಂಯೋಜನೆಯೂ ಒಂದೊಂದು ತೆರನಾಗಿರುತ್ತದಂತೆ. ಇಥೇನ್, ಮಿಥೇನ್ ಮುಂತಾದ ವಿಷಾನಿಲಗಳಿಂದ ಕೂಡಿದ ಆ ಮೋಡಗಳು ಕರಗಿದಾಗ ಆಮ್ಲ, ಪ್ರತ್ಯಾಮ್ಲಗಳ ಆ್ಯಸಿಡ್ ಮಳೆಯೇ ಸುರಿದುಬಿಡುತ್ತದೆ. ಇನ್ನು ಸೌರಮಂಡಲದ ಅತಿ ದೈತ್ಯ ಗ್ರಹವಾದ ಗುರುವಿನ ವಾತಾವರಣದಲ್ಲಿ ಹೈಡ್ರೋಜನ್ ಹಾಗೂ ನೈಟ್ರೋಜನ್ ಗಳಿಂದಾದ ಮೋಡಗಳು ತೇಲುತ್ತಿವೆಯಂತೆ. 1995ರಲ್ಲಿ ಮೊದಲ ಬಾರಿಗೆ ಗುರುವಿನ ವಾತಾವರಣವನ್ನು ಪ್ರವೇಶಿಸಿದ 'ಗೆಲಿಲಿಯೋ' ಆಕಾಶನೌಕೆಯ ಕ್ಯಾಮರಾ ಕಣ್ಣಿಗೆ ಬಣ್ಣಬಣ್ಣದ ಅನಿಲಗಳನ್ನು ಮೈತುಂಬಾ ಬಳಿದುಕೊಂಡು, ಫಳೀರೆಂಬ ಮಿಂಚಿನ ಚಾಟಿಗಳನ್ನು ಝಳಪಿಸುತ್ತಾ ತೇಲುತ್ತಿದ್ದ ನೂರಾರು ಮೋಡಗಳು ಕಂಡಿದ್ದವು.  ಸುಮಾರು ಸಾವಿರಾರು ವೋಲ್ಟ್ ಗಳಷ್ಟು ವಿದ್ಯುತ್ ತರಂಗಗಳನ್ನು ಹೊಂದಿದ್ದ, ಓಡಾಡುವ ಜನರೇಟರ್ ಗಳಂತಿದ್ದ ಈ ಮೋಡಗಳೇ ಕೊನೆಗೆ ಗೆಲಿಲಿಯೋ ಪ್ರೋಬನ್ನು ಸುಟ್ಟು ಕರಕಲಾಗಿಸಿದ್ದವು. ಅಂತೆಯೇ ವಿಜ್ಞಾನಿಗಳ ಮಾತನ್ನು ನಂಬುವುದಾದರೆ ಯುರೇನಸ್, ನೆಪ್ಚೂನ್ ಗ್ರಹಗಳಲ್ಲಿನ ಮೋಡಗಳು ಅಕ್ಷರಷಃ ವಜ್ರದ ಮಳೆಯನ್ನೇ ಸುರಿಸುತ್ತವಂತೆ! ಅವುಗಳ ಅಂತರಾಳದಲ್ಲಿ ಹೇರಳವಾಗಿ ತುಂಬಿರುವ ಇಂಗಾಲದ ಮೋಡಗಳು ವಾತಾವರಣದ ಅತಿಯಾದ ಒತ್ತಡದೊಂದಿಗೆ ವರ್ತಿಸುವುದೇ ಇದಕ್ಕೆ ಕಾರಣ ಎಂಬುದು ವಿಜ್ಞಾನಿಗಳ ಅಂದಾಜು. ಹಾಗೇ, ಭೂಮಿಯಿಂದ 53 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ HD189733ಬಿ ಎನ್ನುವ ಏಲಿಯನ್ ಗ್ರಹದಲ್ಲಿನ ಖತರ್ನಾಕ್ ಮೇಘಗಳು ಅಲ್ಲಿನ ನೆಲಕ್ಕೆ ಗಾಜಿನ ಮಳೆಯನ್ನೇ ಸುರಿಸುತ್ತವಂತೆ! ಹೀಗೆ ಮೋಡಗಳು ಸದಾ ತಾವಿರುವ ವಾತಾವರಣಕ್ಕೆ ತಕ್ಕಂತೆ ವರ್ತಿಸುತ್ತಾ ಮನುಷ್ಯನ ಕುತೂಹಲದ ಪರಿಧಿಯನ್ನು ವಿಸ್ತರಿಸುತ್ತಲೇ ಅನಂತಾಕಾಶದಲ್ಲಿ ತೇಲುತ್ತಿವೆ.

                       ****************

ಯಾವ ಗ್ರಹದಲ್ಲಿ ಎಂಥದೇ ಮಳೆ ಬಂದರೂ ನಮ್ಮ ಭೂಮಿಯಲ್ಲಿನ ಮೋಡಗಳು ನಮ್ಮ ಮೇಲೆ ಮುನಿಸಿಕೊಂಡಿರುವುದಂತೂ ಸತ್ಯ. ಪ್ರತೀ ಬಾರಿಯ ಮಳೆಗಾಲದಲ್ಲೂ ಇದು ಸಾಬೀತಾಗುತ್ತಿದೆ. ತಮ್ಮ ಅಸಹಾಯ ಸೋದರರಾದ ಅರಣ್ಯ, ಗುಡ್ಡ, ಕೆರೆ, ನದಿಗಳ ಮೇಲೆ ಮನುಷ್ಯ ತೋರುತ್ತಿರುವ ದಬ್ಬಾಳಿಕೆಗೆ ಪರಮ ಶಕ್ತರಾದ  ಮೇಘಗಳು ಅತಿವೃಷ್ಟಿ, ಅನಾವೃಷ್ಟಿಗಳ ಮೂಲಕ ಸೇಡು ತೀರಿಸಿಕೊಳ್ಳುತ್ತಿವೆ. ಹೀಗೆ ತಮ್ಮ ಅಂಕೆಗೆ ಸಿಲುಕದೆ ಜಿದ್ದು ತೀರಿಸಿಕೊಳ್ಳುವ ಮೋಡಗಳನ್ನು ಹದ್ದುಬಸ್ತಿನಲ್ಲಿಡುವ ಪ್ರಯತ್ನಗಳೂ ನಡೆಯುತ್ತಿವೆ. ಮೋಡ ಬಿತ್ತನೆಯಂತಹಾ ತಂತ್ರಜ್ಞಾನದ ಮೂಲಕ ಮೋಡಗಳನ್ನು ಉದ್ದೇಪಿಸಿ ಮಳೆ ಬರಿಸಲಿಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಖುದ್ದು ಸರ್ಕಾರವೇ ಹರಿಸುತ್ತಿದೆ. ಆದರೆ ಮೋಡಗಳು ಮಾತ್ರ ಇಂತಹಾ ಯಾವ ಒತ್ತಡಕ್ಕೂ ಜಗ್ಗದೇ ಋತುಚಕ್ರದ ಅಂಗಗಳ ಮೇಲೆ ಮನುಷ್ಯ ತೋರುತ್ತಿರುವ ಅತಿಯಾದ ಹಸ್ತಕ್ಷೇಪವನ್ನು ತಮ್ಮದೇ ರೀತಿಯಲ್ಲಿ ಪ್ರತಿಭಟಿಸುತ್ತಿವೆ. 'ಪ್ರಳಯವಾಗುವ ಕಾಲಕ್ಕೆ ಹೊಳ ಊಳುತ್ತಿರುವ ಎಡ ಭಾಗದ ಎತ್ತಿನ ಮೇಲೆ ಬೀಳುವ ಮಳೆ ಬಲಭಾಗದೆತ್ತಿನ ಮೇಲೆ ಬೀಳುವುದಿಲ್ಲ' ಎನ್ನುವುದು ಹಿಂದಿನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಗಾದೆ. ಈಗಾಗಲೇ ಆ ಅಂತರ 'ಪಕ್ಕದ ಏರಿಯಾದಲ್ಲಿ ಬಿದ್ದ ಮಳೆ ಈ ಏರಿಯಾದಲ್ಲಿ ಬಿದ್ದಿಲ್ಲ'  ಎನ್ನುವಷ್ಟು ಸಮೀಪಕ್ಕೆ ಬಂದಾಗಿದೆ. ಈಗಲೂ ನಾವು ಎಚ್ಚೆತ್ತುಕೊಳ್ಳದೇ ಹೋದರೆ ಎರೆಡೆತ್ತುಗಳನ್ನು ಕಟ್ಟಿಕೊಂಡು ಕಾಯುತ್ತಾ ಕೂರುವುದೊಂದೇ ಉಳಿಯುವ ದಾರಿಯಾಗುತ್ತದೆ.

(ಜುಲೈ 21ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ)

ಮದುವೆ ಛತ್ರದ ಚಿತ್ರಗಳು...



'ರಾಧಾ ವೆಡ್ಸ್ ಕೃಷ್ಣಮೂರ್ತಿ'
ಇಡೀ ದ್ವಾಪರಯುಗದಲ್ಲಿ ನಡೆಯದೇ ಹೋದ ಮದುವೆಯೊಂದು ಈಗ ಲಕ್ಷಾಂತರ ವರ್ಷಗಳ ನಂತರ ನಡೆಯುತ್ತಿರುವಂತೆ ಕಾಣುತ್ತಿರುವ ಆ ಬೋರ್ಡನ್ನು ದ್ವಾರಬಾಗಿಲಿನಲ್ಲಿ ತೊಟ್ಟುಕೊಂಡು ನಿಂತಿರುವ ಛತ್ರದ ಹೆಸರು ಏನೋ ಇದೆ. ಹೆಸರು  ಏನೇ ಆದರೂ ಅವುಗಳೊಳಗೆ ನಡೆಯುವುದು ಒಂದೇ ತಾನೇ? ಮದುವೆ! ಬಣ್ಣ ಬಳಿದ ಥರ್ಮಾಕೋಲಿನಲ್ಲಿ ಸುಂದರವಾಗಿ ಕೆತ್ತಿರುವ ಹುಡುಗನ ಹೆಸರಿನ ಕೆಳಗೆ 'ಬಿ.ಇ.' ಎಂದೂ, ಹುಡುಗಿಯ ಹೆಸರ ಕೆಳಗೆ 'ಎಲ.ಎಲ್.ಬಿ' ಎಂದೂ ಸಿನೆಮಾದ ಹೆಸರಿನ ಕೆಳಗೆ ಬರೆಯುವ ಟ್ಯಾಗ್ ಲೈನ್ ನಂತೆ ಹೆಸರಿನ ಅಕ್ಷರಕ್ಕಿಂತ ಕೊಂಚ ಕಿರಿದಾಗಿ, ಆದರೆ ಸ್ಪಷ್ಟವಾಗಿ ಕಾಣುವಂತೆ ಬರೆಯಲಾಗಿದೆ. ಸಮಾಜದ ಎರೆಡು ಬೇರೆಬೇರೆ ಸ್ತಂಭಗಳಾದ ಐಟಿ ಹಾಗೂ ನ್ಯಾಯಾಂಗಗಳ ವಿಶೇಷ ಸಮ್ಮಿಲನದಂತಿರುವ ಈ ಮದುವೆಯನ್ನು ನೋಡುವ ಕುತೂಹಲಕ್ಕೆಂಬಂತೆ ಹತ್ತಾರು ಜನ ಆ ದೊಡ್ಡ ಬೋರ್ಡಿನ ಕೆಳಗಿನಿಂದ ಹಾದು ಮದುವೆ ಮಂಟಪವಿರುವ ಛತ್ರದ ಮೊದಲ ಮಹಡಿಯತ್ತ ನಡೆಯುತ್ತಿದ್ದಾರೆ. ಬಾಗಿಲಿನಿಲ್ಲಿ ನಿಂತು ರಾಣಿಯರ ಕಾಲದ ಪರಿಚಾರಿಕೆಯರನ್ನು ನೆನಪಿಸುತ್ತಿರುವ ಕೋಮಲಾಂಗಿಯರು ಏನೆಂದು ತಿಳಿಯದ ಸುಗಂಧ ದ್ರವ್ಯಕ್ಕೆ ತಮ್ಮ ಆಕರ್ಶಕ ಮುಗುಳ್ನಗೆ ಬೆರೆಸಿ ಒಳಕ್ಕೆ ನಡೆಯುತ್ತಿರುವವರ ಮೇಲೆ ಸಿಂಪಡಿಸುತ್ತಿದ್ದಾರೆ. ನಗರದ ಟ್ರಾಫಿಕ್ಕು, ಧೂಳು, ಹೊಗೆಗಳಲ್ಲಿ ಮಿಂದು ಬಂದವರ ಬೆವರಿನ ವಾಸನೆ ಕಲ್ಯಾಣ ಮಂಟಪದೊಳಗೆ ತುಂಬದಿರಲಿ ಎಂಬುದೂ ಅದರ ಹಿಂದಿನ ಉದ್ದೇಶವೋ ಏನೋ? ಪಕ್ಕದಲ್ಲೇ ಸಾಲಾಗಿ ಇರಿಸಿರುವ ಬಳುಕುವ ಸೊಂಟದ ಪ್ಲಾಸ್ಟಿಕ್ ಲೋಟಗಳಲ್ಲಿನ ಸ್ವಾಗತ ಪೇಯವನ್ನು ಹೈಹೀಲ್ಡ್ ತೊಟ್ಟ ಚತುರೆಯರು ಅಷ್ಟೇ ನಾಜೂಕಾಗಿ ಎತ್ತಿಕೊಂಡು ಲಿಪ್ಸ್ಟಿಕ್ ಕೆಡದಂತೆ ಹೀರಿ ಒಳಗೆ ನಡೆಯುತ್ತಿದ್ದಾರೆ. ಸೂಟುಬೂಟಿನ ಗಂಭೀರ ಜೆಂಟಲ್ ಮೆನ್ ಗಳು ಅದನ್ನು ಕುಡಿಯಲೆಂದು ಮನಸ್ಸಿನಲ್ಲೇ ಕೈ ಚಾಚಿದರೂ ತಮ್ಮೊಳಗಿರುವ ಸಕ್ಕರೆಯ ಗೋದಾಮಿನ ನೆನಪಾಗಿ, ಮತ್ತಷ್ಟು ಗಂಭೀರ ವದನರಾಗಿ ಒಳಗಡಿಯಿಡುತ್ತಿದ್ದಾರೆ.
ಒಳಗೆ ಬಾಗಿಲಿನಾಚೆ ಹೆಂಗಸು-ಗಂಡಸರ ಸಣ್ಣ ಗುಂಪೊಂದು ನಿಂತಿದೆ. ಹೆಣ್ಣು ಹಾಗೂ ಗಂಡಿನ ಕಡೆಯ ದೂರದ ಸಂಬಂಧಿಗಳಾಗಿರಬಹುದಾದ ಅವರು ಒಳಬರುವ ಪ್ರತಿಯೊಬ್ಬರನ್ನೂ 'ಓಹೋಹೋ ಬನ್ನಿ ಬನ್ನಿ. ಪಾನಕ ತಗೊಂಡ್ರಾ' ಎಂದು ಅಪಾರವಾದ ನಗೆಯ ಮೂಲಕ ಸ್ವಾಗತಿಸುತ್ತಿದ್ದಾರೆ. ಕೊಂಚ ಮಟ್ಟಿಗೆ ಪರಿಚಯ ಇದ್ದವರನ್ನು ಹೆಗಲು ತಬ್ಬಿ, ಬೆನ್ನು ತಟ್ಟಿ ಒಳಗೆ ಕಳಿಸಲಾಗುತ್ತಿದೆ. ಬೆಳಗಿನಿಂದ ಇದನ್ನೇ ಮಾಡುತ್ತಿರುವುದರಿಂದ ಅವರ ತಬ್ಬುವ ಹಾಗೂ ಬೆನ್ನು ತಟ್ಟುವ ವೇಗ ಕೊಂಚ ಬಿರುಸಾಗಿದೆಯಾದರೂ ಮುಖದ ಮೇಲಿನ ಮುಗುಳ್ನಗೆ ತಾಜಾ ಆಗಿಯೇ ಇದೆ.
ಸಭೆಯಲ್ಲಿ ಸಾಲಾಗಿ ಇರಿಸಿರುವ ಕುರ್ಚಿಗಳೆಲ್ಲ ಮಧ್ಯಾಹ್ನದ ಸೆಕೆಗೇನೋ ಎಂಬಂತೆ ಮೇಲೆ ತಿರುಗುತ್ತಿರುವ ಫ್ಯಾನುಗಳಿಗೆ ದೇಹವೊಡ್ಡಿಕೊಂಡು ತಮ್ಮ ಮೇಲೆ ಯಾರೂ ಕೂರದಿರಲಿ ಎಂದು ಬೇಡಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಅಲಲ್ಲಿ ಚಿಕ್ಕ ಗುಂಪಿನಲ್ಲಿ ಕುಳಿತು ಪರಸ್ಪರ ಕುಶಲೋಪರಿಯಲ್ಲಿ ತೊಡಗಿರುವವರು 'ಇವಳು ನನ್ನ ದೊಡ್ಡಮ್ಮನ ಕೊನೆಯ ಮಗನ ಅತ್ತೆಯ ಮಗಳು, ಇವನು ನನ್ನ ಭಾವನ ಅತ್ತೆಯ ಹಿರಿಯ ಮಗ' ಎಂದು ಯಾರಿಗೋ ಯಾರನ್ನೋ ಪರಿಚಯಿಸುತ್ತಿದ್ದಾರೆ. ಇದನ್ನು ಕೇಳಿಸಿಕೊಂಡವರು ಮೈಲುಗಟ್ಟಲೆ ದೂರಕ್ಕಿರುವ ಆ ಸಂಬಂಧದ ಕೊಂಡಿಯಲ್ಲಿ ಅವರಿಗೆ ಇವರು ಏನಾಗಬೇಕೆಂಬುದು ಅರ್ಥವಾಗದೇ ಪೆಚ್ಚು ನಗೆ ನಗುತ್ತಾ 'ಓಹೋಹೋ‌‌.. ಹೌದಾ‌.‌. ಸಂತೋಷ' ಎನ್ನುತ್ತ ತನ್ನೆದುರಿರುವ ಅಪರಿಚಿತ ವ್ಯಕ್ತಿಯ ಕೈಕುಲುಕುತ್ತಿದ್ದಾರೆ. ಈ ರೀತಿಯ ಸಂಭಾಷಣೆಯಲ್ಲಿ ಕಳೆದುಹೋಗಿರುವ ಕೆಲವರು ತಾವು ಬಂದಿರುವುದು ಮದುಮಕ್ಕಳನ್ನು ನೋಡಲಿಕ್ಕೆಂಬುದನ್ನೇ ಮರೆತು ಕುರ್ಚಿ ತಿರುಗಿಸಿಕೊಂಡು ವೇದಿಕೆಗೇ ಬೆನ್ನು ಹಾಕಿ ಕುಳಿತು ಪಟಂಗ ಹೊಡೆಯುತ್ತಿದ್ದಾರೆ. ಗಾಗ್ರಾ, ಚೂಡಿದಾರ್ ತೊಟ್ಟಿರುವ ಜಿಂಕೆಗಳಂತೆ ಕಿಲಕಿಲ ನಗುತ್ತಿರುವ ಹುಡುಗಿಯರು ತಮ್ಮನ್ನು ಹಿಂಬಾಲಿಸುತ್ತಿರುವ ಹುಡುಗನೋಟಗಳ ಜೊತೆ ಕಣ್ಣಾಮುಚ್ಚಾಲೆಯಾಡುತ್ತಿದ್ದಾರಾದರೂ, ತಮ್ಮ ತಲೆಯಲ್ಲೇ ವ್ಯವಸ್ಥಿತವಾದ ಶಾದಿ ಡಾಟ್ ಕಾಂ ಜಾಲವೊಂದನ್ನು ಹೊಂದಿರುವ ನಡುವಯಸ್ಸಿನ ಮಹಿಳಾಮಣಿಗಳ ದೃಷ್ಟಿಯಿಂದ ಪಾರಾಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇಂತಹಾ ಚಂದದ ಅವಿವಾಹಿತ ಹುಡುಗಿಯರನ್ನು ತಮ್ಮ ತೀಕ್ಷ್ಣ ನೆನಪಿನೊಳಗೆ ದಾಖಲಿಸಿಕೊಳ್ಳುತ್ತಿರುವ ಆ ಮಹಿಳಾಮಣಿಗಳು ತಮ್ಮ ಸಂಬಂಧದ ಯಾವ ಅವಿವಾಹಿತ ಹುಡುಗನಿಗೆ ಇವಳು ಜೋಡಿಯಾಗುತ್ತಾಳೆಂದು ಕ್ಷಣಾರ್ಧದಲ್ಲೇ ಹೊಂದಿಸಿಬಿಟ್ಟಿದ್ದಾರೆ. ಹೀಗೆ ಇಂದು ನಡೆಯುತ್ತಿರುವ ಒಂದು ಮದುವೆಯು ಮುಂದೆ ನಡೆಯಲಿರುವ ಎಷ್ಟೋ ಮದೆವೆಗಳಿಗೆ ನಾಂದಿಯಾಗಿದೆ.
ಮೇಲುಗಡೆ ವೇದಿಕೆಯಲ್ಲಿ ಸೀರೆ, ಪಂಚೆಗಳ ಸರಭರ ಸಡಗರದಿಂದ ಸಾಗಿದೆ. ಓಡಾಡುವ ಬಂಗಾರದಂಗಡಿಯಂತಿರುವ ಹೆಂಗಸರು ಕಿಲಕಿಲನೆ ನಗುತ್ತಾ, ಒಬ್ಬರ ಒಡವೆಯನ್ನು ಇನ್ನೊಬ್ಬರು ತಮ್ಮ ಸೂಕ್ಷ್ಮ ನೋಟದಲ್ಲಿ ದಾಖಲಿಸಿಕೊಳ್ಳತ್ತಲೇ ಮಂಟಪದಲ್ಲಿನ ವಸ್ತುಗಳನ್ನು ಆಚೆಯಿಂದೀಚೆಗೆ, ಈಚೆಯಿಂದಾಚೆಗೆ ಸಾಗಿಸುತ್ತಾ ಮಂಗಳ ಕಾರ್ಯಗಳಿಗೆ ನೆರವಾಗುತ್ತಿದ್ದಾರೆ. ಇಡೀ ಮದುವೆಯ ಜವಾಬ್ದಾರಿಯನ್ನೇ ಟವೆಲ್ಲಾಗಿಸಿಕೊಂಡು ಹೆಗಲ ಮೇಲೆ ಹಾಕಿಕೊಂಡಿರುವ ಕೆಲ ಹಿರಿಯ ಯಜಮಾನರುಗಳು ನಡೆಯುತ್ತಿರುವ ಕಾರ್ಯಯಂತ್ರಕ್ಕೊಂದು ಗಡಿಬಿಡಿಯನ್ನು ಕರುಣಿಸಿದ್ದಾರೆ. ಆಗಾಗ ಸಡಿಲವಾಗುತ್ತಿರುವ ತನ್ನ ಐಟಿ ಗತ್ತಿನ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ ಯಜ್ಞಕುಂಡದ ಮುಂದೆ ಕುಳಿತಿರುವ ಪಂಚೆ-ಶಲ್ಯದ ಮದುಮಗ ನೇರ ದೃಷ್ಟಿಯನ್ನು ಪುರೋಹಿತರ ಮೇಲೂ, ವಾರೆದೃಷ್ಟಿಯನ್ನು ಪಕ್ಕ ಕುಳಿತಿರುವ ಮದುಮಗಳ ಮೇಲೂ ನೆಟ್ಟಿದ್ದಾನೆ. ಇಡೀ ಸಭೆಯೇ ತನ್ನನ್ನು ನೋಡುತ್ತಿರುವ ನೋಟಕ್ಕಿಂತಲೂ ಈ ಕಳ್ಳ ನೋಟಕ್ಕೇ ಹೆಚ್ಚು ತಲೆ ತಗ್ಗಿಸಿರುವ ವಧುವಿನ ಕೆನ್ನೆ ಕಾಲು ಭಾಗ ಅಗ್ನಿ ಕುಂಡದ ತಾಪದಿಂದಲೂ, ಇನ್ನು ಕಾಲು ಭಾಗ ನಾಚೆಕೆಯಿಂದಲೂ, ಉಳಿದರ್ಧ ಭಾಗ ಮೇಕಪ್ ನ ರೋಸ್ ನಿಂದಲೂ ಕೆಂಪಾಗಿದೆ. ನೇರ ಕಾಂಜೀವರಂಗೇ ಹೋಗಿ ಕೊಂಡು ತಂದ ಘಟವಾಣಿ ಸೀರೆಯನ್ನುಟ್ಟಿರುವ ಮದುಮಗನ ತಾಯಿ ವಧುವಿನ ಮೊಗ್ಗಿನ ಜಡೆಯನ್ನು ಆಗಾಗ ಸರಿಪಡಿಸುತ್ತಿದ್ದಾಳೆ. ಎಲ್ಲ ಸೂಚನೆಗಳನ್ನೂ ವಿಧೇಯನಾಗಿ ಪಾಲಿಸುತ್ತಿರುವ ಹೆಣ್ಣಿನ ತಂದೆ ಆಗಾಗ ಸಭೆಯತ್ತ ನೋಡುತ್ತಾ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆಯೆಂಬುದನ್ನು ಖಾತರಿಪಡಿಸಿಕೊಳ್ಳುತ್ತಿದ್ದಾನೆ. ವೇದಿಕೆಯ ಪಕ್ಕದಲ್ಲಿರುವ ವಾದ್ಯವೃಂದದಿಂದ 'ಒಲವೇ ಜೀವನ ಸಾಕ್ಷಾತ್ಕಾರ' ಹಾಡಿನ ಶಹನಾಯ್ ವರ್ಷನ್ ಹೊಮ್ಮುತ್ತಿದೆ. ಅಷ್ಟರಲ್ಲಿ ಪುರೋಹಿತರು 'ಗಟ್ಟಿಮೇಳ ಗಟ್ಟಿಮೇಳ' ಎನ್ನಲಾಗಿ ಪೇಪೇಪೇ ಡುಂಡುಂಡುಂ ತಾರಕಕ್ಕೇರಿದೆ.
ಅರ್ಧ ಮದುವೆ ಪುರೋಹಿತರ ಸೂಚನೆಯಂತೆ ನಡೆದರೆ ಮುಕ್ಕಾಲು ಭಾಗ ಶಾಸ್ತ್ರ-ಸಂಪ್ರದಾಯಗಳು ಕ್ಯಾಮರಾ ಮ್ಯಾನ್ ನ ಆಣತಿಯಂತೆ ಜರುಗಿವೆ. ಧಾರೆ ಎರೆದದ್ದು, ಪರದೆ ಹಿಡಿದದ್ದು, ತರ್ಪಣ ಕೊಟ್ಟಿದ್ದರಿಂದ ಹಿಡಿದು ತಾಳಿಕಟ್ಟಿದ್ದರ ತನಕ ಎಲ್ಲವೂ ಅವನು ಹೇಳಿದ ಭಾವ-ಭಂಗಿಗಳಲ್ಲಿಯೇ ಆಗಿವೆ. ಈಗಾಗಲೇ ಹಿಂದಿನ ದಿನದ 'ನಾಂದಿ'ಯನ್ನೂ, ರಾತ್ರಿಯ ಆರತಕ್ಷತೆಯನ್ನೂ ನೂರಾರು ಫೋಟೋಗಳಲ್ಲಿ ಸೆರೆಹಿಡಿದಿರುವ ದಣಿವು ಅವನ ಹಣೆಯ ಮೇಲೆ ಬೆವರಾಗಿ ಸಾಲುಗಟ್ಟಿದೆ. ತಾಳಿ ಕಟ್ಟುವ ಶಾಸ್ತ್ರ ಮುಗಿದ ಕೆಲ ಹೊತ್ತಿಗೇ ವೇದಿಕೆಯ ಮೇಲಿನ ಚಿತ್ರವೇ ಬದಲಾಗಿದೆ. ಅಗ್ನಿಕುಂಡ ಉರಿಯುತ್ತಾ, ಪುರೋಹಿತರ ಮಂತ್ರಘೋಷಗಳಿಂದ ತುಂಬಿದ್ದ ಜಾಗವೀಗ ಸೂಟುಬೂಟು, ಫ್ಲಾಶುಲೈಟುಗಳಿಂದ ಕಂಗೊಳಿಸುತ್ತಿದೆ. ಹಿನ್ನೆಲೆಯಲ್ಲಿ ಅರಮನೆಯ ಬಾಗಿಲು, ಕಂಬಗಳಂತಹಾ ಕುಸುರಿ ಕೆತ್ತನೆಯ ಮಾದರಿಗಳನ್ನಿಟ್ಟು ಅವುಗಳಿಗೆ ಪ್ಲಾಸ್ಟಿಕ್ ನ ಬಳ್ಳಿಗಳನ್ನೂ, ವಿವಿಧ ಮಾಲೆ, ಬಿಡಿ ಹೂಗಳನ್ನು ಇಳಿಬಿಟ್ಟು ವೇದಿಕೆಯನ್ನು ಸಿಂಗರಿಸಲಾಗಿದೆ. ಮಂಟಪದ ಆಚೀಚೆ  ನಿಲ್ಲಿಸಿರುವ ಎರೆಡು ಗೊಂಬೆಗಳು ಮದುಮಕ್ಕಳನ್ನು ಹರಸಲೆಂದು ನೇರ ಗಂಧರ್ವ ಲೋಕದಿಂದ ಬಂದಿರುವ ದೇವದೂತರಂತೆ ಕಾಣುತ್ತಿವೆ. ಮದುಮಗನೀಗ ರಾಮ್ ರಾಜ್ ಪಂಚೆಯಿಂದ ಹೊರಬಂದು ರೇಮಂಡ್ ಸೂಟಿನೊಳಗೆ ತೂರಿಕೊಂಡಿದ್ದಾನೆ. ಮದುಮಗಳು ಕಾಂಜೀವರಂನಿಂದ ಧರ್ಮಾವರಂಗೆ ಬಂದುನಿಂತಿದ್ದಾಳೆ‌. ಹದಿನೈದು ಸಾವಿರ ವೆಚ್ಛದ ವಿಶೇಷ ಮೇಕಪ್ ಬಳಿಸಿಕೊಂಡಿರುವ ಅವಳೀಗ ಅವಳೇ ಅಲ್ಲವೆಂಬಷ್ಟು ಬೇರೆಯವಳಾಗಿ ಕಂಗೊಳಿಸುತ್ತಿದ್ದಾಳೆ. ವಿಶೇಷ ಬಣ್ಣದ ಕೋಟು ತೊಟ್ಟು ಟೈ ಧರಿಸಿರುವ ಗಂಡಿನ ತಂದೆಯನ್ನು ಫಕ್ಕನೆ ನೋಡಿದವರಿಗೆ ಇವರು ಈ ಮೊದಲು ಚಂದನ ವಾಹಿನಿಯಲ್ಲಿ ವಾರ್ತೆ ಓದುತ್ತಿದ್ದರೇನೋ ಎಂಬ ಅನುಮಾನ ಕಾಡುತ್ತಿದೆ. ಟೈಯನ್ನು ಆಗಾಗ ಸರಿಪಡಿಸಿಕೊಳ್ಳುತ್ತಿರುವ ಅವರು ಪ್ರತೀಬಾರಿ ಕ್ಯಾಮರಾದ ಮುಂದೆ ನಿಂತಾಗಲೂ ಇನ್ನೇನು "ನಮಸ್ಕಾರ. ವಾರ್ತೆಗಳು. ಓದುತ್ತಿರುವವರು ಎಂ.ಎನ್. ವಿಠ್ಠಲ ರಾವ್. ಮುಖ್ಯಾಂಶಗಳು" ಎಂದು ಹೆಡ್ ಲೈನ್ಸ್ ಹೇಳಲು ಆರಂಭಿಸುತ್ತಾರೇನೋ ಎಂಬ ಭ್ರಮೆಯಾಗುತ್ತಿದೆ‌. ಹೀಗೆ ಇದ್ದಕ್ಕಿದ್ದಂತೆ ಸಮಯ ವೇದಗಳ ಕಾಲದಿಂದ ಐಟಿಯುಗಕ್ಕೆ ಬದಲಾಗಿರುವಂತೆ ಎಲ್ಲವೂ ಬದಲಾಗಿ ಸಾಲುಸಾಲು ಲೈಟು, ಫ್ಲಾಶು, ಫೋಟೋ, ಸೆಲ್ಫೀಗಳಿಂದ ವೇದಿಕೆಯೀಗ ಲಕಲಕನೆ ಹೊಳೆಯತೊಡಗಿದೆ.
ಮದುವೆಗಿಂತ ದೀರ್ಘವಾಗಿ ಫೋಟೋ ಕಾರ್ಯಕ್ರಮವೇ ನಡೆಯುತ್ತಿರುವುದು ಪುರೋಹಿತರಿಗೆ ವಿರಾಮವನ್ನೂ, ಕ್ಯಾಮರಾಮ್ಯಾನ್ ಗೆ ಆಯಾಸವನ್ನೂ ಉಂಟುಮಾಡಿದೆ. ಛಾಯಾಗ್ರಾಹಕ ಲಕಲಕ ಹೊಳೆಯುವ ಹೆಂಗಸರನ್ನೂ, ಕರ್ನಲ್ ನಗುವಿನ ಗಂಡಸರನ್ನೂ, ಅವರವರ ನಗೆಯ ಸಮೇತ ಸೆರೆಹಿಡಿಯುತ್ತಿದ್ದಾನೆ. ಇನ್ನೇನು ಕ್ಲಿಕ್ಕಿಸಬೇಕೆನ್ನುವಷ್ಟರಲ್ಲಿ ಹುಡುಗಿಯೊಬ್ಬಳು ತನ್ನ ಮುಂಗುರಳನ್ನು ಹಿಂದೆ ಸರಿಸಲು ಕೈಯೆತ್ತಿರುವುದರಿಂದ ಆ ಫೋಟೋವನ್ನು ಮತ್ತೆ ತೆಗೆಯಬೇಕಾಗಿಬಂದಿದೆ. ಫೋಟೋ, ಫೋಸುಗಳೆಂದರೇನೆಂದೇ ತಿಳಿಯದೆ ಎತ್ತಲೋ ನೋಡುತ್ತಿರುವ ಚಿಕ್ಕ ಮಗುವಿನ ದೃಷ್ಟಿಯನ್ನು ಕ್ಯಾಮರಾದತ್ತ ಸೆಳೆಯುವ ಹೆಚ್ಚುವರಿ ಜವಾಬ್ದಾರಿಯೂ ಫೋಟೋಗ್ರಾಫರ್ ನ ಮೇಲೇ ಬಿದ್ದಿದೆ. ಕಿಚ್ ಕಿಚ್.. ಕೂ ಕೂ‌.. ಟುಕ್ ಟುಕ್.. ಎಂದು ಇಂಕಾ ನಾಗರೀಕತೆಯ ಆದಿವಾಸಿಯಂತೆ ವಿಚಿತ್ರ ಸದ್ದು ಹೊರಡಿಸುವ ಮೂಲಕ ಕೊನೆಗೂ ಅವನು ಮಗುವಿನಿಂದ ಫೋಸು ತೆಗೆಸುವಲ್ಲಿ ಯಶಸ್ವಿಯಾಗಿದ್ದಾನೆ‌. ಅಷ್ಟರಲ್ಲಿ "ಹೇ ಡ್ಯೂಡ್, ಲುಕ್ಕಿಂಗ್ ಆಸಮ್, ಕಂಗ್ರಾಟ್ಸ್ ಡಾ ತಂಬೀ..." ಎಂಬ ಗೌಜಿನೊಂದಿಗೆ ಮದುಮಗನ ಸಹೋದ್ಯೋಗಿ ಟೆಕ್ಕಿಗಳ ಗುಂಪೊಂದು ವೇದಿಕೆಗೆ ಧಾಳಿಯಿಟ್ಟಿದೆ. ತನ್ನ ಕ್ಯಾಮರಾದಲ್ಲಿ ಮಾತ್ರವಲ್ಲದೆ ಅವರು ಕೊಟ್ಟ ಮೊಬೈಲ್ನಲ್ಲೂ ಫೋಟೋ ಕ್ಲಿಕ್ಕಿಸಿದ ಫೋಟೋಗ್ರಾಫರ್ ಮುಂದಿನ ಫೋಟೋಗಾಗಿ ತಯಾರಾಗುತ್ತಿದ್ದಾನೆ. ಆದರೆ ಅಷ್ಟು ಬೇಗ ವೇದಿಕೆಯಿಂದಿಳಿಯದ ಟೆಕ್ಕಿಗಳು ವಿವಿಧ ಭಂಗಿಗಳಲ್ಲಿ ಮೂತಿ ತಿರುಗಿಸಿಕೊಂಡು ಸೆಲ್ಫೀ ಹೊಡೆಯತೊಡಗಿದ್ದಾರೆ. ಮರುದಿನ ಬರಲಿರುವ ಲೈಕು, ಕಮೆಂಟುಗಳು ಮಾತ್ರವಲ್ಲದೆ ತಮ್ಮ ಯೋಯೋ ಸ್ಟೈಲನ್ನೂ ಗಮನದಲ್ಲಿಟ್ಟಿಕೊಂಡು ಅವರು ಹೊಡೆದುಕೊಳ್ಳುತ್ತಿರುವ ಸೆಲ್ಫೀಗಳು ಅಷ್ಟು ಬೇಗ ಮುಗಿಯುವಂತೆ ಕಾಣುತ್ತಿಲ್ಲ.
ನಿನ್ನೆ ಸಂಜೆಯ ಆರತಕ್ಷತೆಯ ಸಮಯದಿಂದಲೂ ಹಲ್ಲುಕಿರಿಯುತ್ತಲೇ ಇರುವ ಮದುಮಕ್ಕಳಿಗೆ ತುಟಿ, ವಸಡು, ಗಲ್ಲಗಳೆಲ್ಲಾ ನೋಯತೊಡಗಿವೆ. ಯಾರೇ ಎದುರು ಬಂದರೂ ಅವರ ಹಲ್ಲುಗಳು ತಾನಾಗೇ ಹೀ ಎಂದು ಕಿರಿದು, ಹಸ್ತಲಾಘವಕ್ಕೆ ಕೈಚಾಚುವುದೀಗ ಅವರಿಗೆ ಅಭ್ಯಸವಾಗಿಹೋಗಿ, ಫೋಟೋ ಸೆಶನ್ ನ ನಂತರವೂ ಈ ಚಾಳಿ ಮುಂದುವರಿಯುತ್ತದೇನೋ ಎಂಬ ಸಣ್ಣ ಭಯ ಅವರನ್ನೀಗ ಕಾಡತೊಡಗಿದೆ. ಕ್ಯಾಮರಾಮ್ಯಾನ್ ಈಗಾಗಲೇ ಅರ್ಧ ದಾರಿ ಕೋಮಾಗೇ ಹೋಗಿಬಿಟ್ಟಿದ್ದಾನೆ. ವೇದಿಕೆಯಲ್ಲಿ ಫೋಟೋ ತೆಗೆಸಿಕೊಳ್ಳಲಿಕ್ಕೆ ಯಾರೂ ಇಲ್ಲದ ಎರೆಡು ನಿಮಿಷದ ಸೈಕಲ್ ಗ್ಯಾಪಿನಲ್ಲೇ ಅವನು ಸರಸರನೆ ತನ್ನ ಕ್ಯಾಮರಾ, ಫ್ಲಾಶ್ ಲೈಟ್, ಬಿಳಿಯ ಛತ್ರಿಗಳನ್ನೆಲ್ಲ ಮಡಿಚಿಟ್ಟು ತಿರುಗಿಯೂ ನೋಡದಂತೆ ಊಟದ ಹಾಲ್ ನತ್ತ ಪೇರಿಕಿತ್ತಿದ್ದಾನೆ.
ಇಷ್ಟು ಹೊತ್ತು ವೇದಿಕೆಯ ಕೊನೆಯ ಸಾಲಿನಲ್ಲಿ ಕುಳಿತಿದ್ದ ಸಣಕಲು ದೇಹದ, ಕಾಂತಿ ಮುಗಿದ ಕಣ್ಣುಗಳ ಗಂಡು ಆಕೃತಿಯೊಂದು ಈಗ ಎದ್ದು ವೇದಿಕೆಯತ್ತ ನಡೆದುಬಂದಿದೆ. ಇಂತಹಾ ದಟ್ಟ ಗೌಜಿನ ನಡುವೆಯೂ ಪರಮ ಏಕಾಂತವೊಂದರಿಂದ ಎದ್ದುಬಂದಂತಿರುವ ಅವನನ್ನು 'ಇವನು ಮಾಧವ. ನನ್ನ ಹಳೆಯ ಕೊಲೀಗ್' ಎಂದು ಮದುಮಗಳು ಮದುಮಗನಿಗೆ ಪರಿಚಯಿಸಿದಾಗ, ಅವಳನ್ನು ಮನಸಾರೆ ಪ್ರೀತಿಸಿದ್ದ ಅವನೊಳಗಿನ ಪ್ರೇಮಿ ಮೌನವಾಗಿ ನರಳಿದ್ದಾನೆ. ತಾನೆಂದೂ ಹಿಡಿಯಲಾಗದೇಹೋದ ಅವಳ ಕರವನ್ನು ಜೀವಮಾನವಿಡೀ ಹಿಡಿದು ನಡೆಯಲಿರುವ ಮದುಮಗನ ಭಾಗ್ಯವಂತ ಕೈಗಳನ್ನು ಕುಲುಕಿದ ಆ ವಿಫಲ ಪ್ರೇಮಿ ಯಾವ ಫೋಟೋದಲ್ಲೂ ದಾಖಲಾಗದೇ ವೇದಿಕೆಯಿಳಿದು ನಡೆದಿದ್ದಾನೆ‌‌. ಮೊದಲ ಬಾರಿಗೆ ಅವಳ ಮೇಲೆ ಪ್ರೀತಿಯಾದ ದಿನ ಪ್ರೇಮ ನಿವೇದನೆಯ ಜೊತೆಗೆ ಕೊಡಬೇಕೆಂದು ಅವನು ಕೊಯ್ದುತಂದಿದ್ದ, ಕೊನೆಗೂ ಜೇಬಿನಲ್ಲೇ ಬಾಡಿಹೋದ ಹೂವೊಂದು ಮರುಜನ್ಮ ಪಡೆದು ಹಳೆಯ ನೆನಪಿನ ಹೊಸ ಹೂವಾಗಿ ಅವನು ಅವಳಿಗೆ 'ಹ್ಯಾಪಿ ಮ್ಯಾರೀಡ್ ಲೈಫ್' ಎಂದು ಕೊಟ್ಟ ಬೊಕ್ಕೆಯಲ್ಲಿ ಸೇರಿಕೊಂಡು ಬೆಚ್ಚಗೆ ಕುಳಿತಿದೆ.
ಕೆಳಗಡೆ ಊಟದ ಕೊಠಡಿಯಲ್ಲಿ ಊಟ ಭರ್ಜರಿಯಾಗಿ ಸಾಗಿದೆ. ಕ್ಯಾಮರಾವನ್ನು ತನ್ನ ಅಸಿಸ್ಟೆಂಟಿಗೆ ಕೊಟ್ಟ ಫೋಟೋಗ್ರಾಫರ್ ಗಡಿಬಿಡಿಯಲ್ಲಿ ಊಟಕ್ಕೆ ತೊಡಗಿದ್ದಾನೆ‌. ಬಾಳೇಲೆಗೆ ಬೀಳುತ್ತಿದ್ದಂತೆಯೇ ಸುನಾಮಿಯಂತೆ ಓಡುತ್ತಿರುವ ಬಿಸಿಬಿಸಿ ಸಾರನ್ನು ತಡೆಯಲಿಕ್ಕೆ ಹುಡುಗನೊಬ್ಬ ಪಾಡುಪಡುತ್ತಿದ್ದಾನೆ. ಪುಟಾಣಿ ಕೈಯಿಂದ ಕೋಸಂಬರಿಯ ಒಂದೊಂದೇ ಎಳೆಯನ್ನು ಹೆಕ್ಕಿ ತಿನ್ನುತ್ತಿರುವ ಮಗುವಿಗೆ ಅದರ ಅಮ್ಮ ಅವಳ ಮನಸ್ಸಿನಷ್ಟೇ ಮೃದುವಾಗಿ ನುರಿದ ಕೈತುತ್ತನ್ನು ತಿನ್ನಿಸುತ್ತಿದ್ದಾಳೆ. ನಡುಗುವ ಕೈಯ ವಯೋವೃದ್ಧ ಬಡಿಸುವ ಭಟ್ಟರು ತಾವು ಬಡಿಸಬಹುದಾದ ಏಕಮಾತ್ರ ವಸ್ತುವಾದ ನೀರನ್ನು ಆನೆ ಸೊಂಡಿನಿಲಾಕಾರದ ಮೂತಿಯ ಕ್ಯಾಟಲ್ ನಿಂದ ಮೆಲ್ಲಗೆ ಲೋಟಗಳಿಗೆ ಸುರಿಯುತ್ತಾ ಮುನ್ನಡೆಯುತ್ತಿದ್ದಾರೆ. ಹತ್ತಿಪ್ಪತ್ತು ಜನರಿಗೆ ಬಡಿಸುವಷ್ಟರಲ್ಲಿ ಕ್ಯಾಟಲ್ ಖಾಲಿಯಾಗಿ, ಅದನ್ನು ಮತ್ತೆ ತುಂಬಿಸಿಕೊಂಡು ಬರುವಷ್ಟರಲ್ಲಿ ಈಗಾಗಲೇ ನೀರು ಹಾಕಿಸಿಕೊಂಡವರೂ ಮತ್ತೆ ನೀರು ಬೇಕೆನ್ನುತ್ತಿರುವುದರಿಂದ ಅವರೀಗ ಕಂಗಾಲಾಗಿದ್ದಾರೆ. ಸಕಾಲಕ್ಕೆ ಆಚೆಕಡೆಯಿಂದ ಚಿಕ್ಕ ಹುಡುಗನೊಬ್ಬ ಮತ್ತೊಂದು ನೀರಿನ ಕ್ಯಾಟಲ್  ತಂದು, ಅವರು ಬೈಸಿಕೊಳ್ಳುವುದು ತಪ್ಪಿದೆ. ಈಚೆ ಸಾಲಿನಲ್ಲಿ ಕುಳಿತಿರುವ ಮದುಮಗನ ತಮ್ಮ ಎದುರುಗಡೆ ಕುಳಿತಿರುವ ಮದುಮಗಳ ತಂಗಿಯತ್ತ ಕಳ್ಳನೋಟ ಬೀರುತ್ತಿದ್ದಾನೆ. ಪಂಕ್ತಿಯಲ್ಲಿ ಕುಳಿತು ಬಾಳೇಲೆಯಲ್ಲಿನ ಜಿಲೇಬಿಗಿಂತ ಸಿಹಿಯಾದ ನಗೆ ಬೀರುತ್ತಿರುವ ಹಸಿರು ಲಂಗದ ಹುಡುಗಿಯೊಬ್ಬಳು ಬೇಡಬೇಡವೆನ್ನುತ್ತಿದ್ದರೂ ಬಡಿಸುವ ಹುಡುಗ ಅವಳಿಗೆ ಒಂದು ಬರ್ಫಿ ಜಾಸ್ತಿ ಬಡಿಸಿದ್ದಾನೆ. ಅವನ ಮನಸ್ಸಿನಲ್ಲಿ ಆ ಕ್ಷಣದಲ್ಲಿ ಎದ್ದಿರವ ಸಿಹಿಯಾದ ಭಾವನೆಯೇ ಅವಳ ಬಾಳೇಲೆಯಲ್ಲಿ ಬರ್ಫಿಯಾಗಿ ಅವತಾರವೆತ್ತಿದೆ‌‌‌. ಬಿರಬಿರನೆ ಊಟ ಮುಗಿಸಿಕೊಂಡು ಬಂದ ಫೋಟೋಗ್ರಾಫರ್ ಹೊಸ ಚೈತನ್ಯದೊಂದಿಗೆ ಮರಳಿ ಕ್ಯಾಮರಾ ಹಿಡಿದುಕೊಂಡು ಡರ್ರೆಂದು ತೇಗುತ್ತಿರುವ ಮಂದಿಯನ್ನು ಅವರ ತೇಗಿನ ಸಮೇತ ಚಿತ್ರೀಕರಿಸುತ್ತಿದ್ದಾನೆ. ಇಷ್ಟು ದಿನ ತಳ್ಳುಗಾಡಿಯಲ್ಲಿ ಒಣ ಪಲಾವ್ ತಿನ್ನುತ್ತಿದ್ದ ಛತ್ರದ ಸೆಕ್ಯೂರಿಟಿಯವನಿಗೂ ಇಂದು ಮೃಷ್ಟಾನ್ನ ಭೋಜನ ದೊರಕಿ ತೃಪ್ತಿಯಾಗುವಷ್ಟು ಉಂಡಿದ್ದಾನೆ‌. ಸಾಲಿನಲ್ಲಿ ನಿಂತು ಕೈತೊಳೆಯುವಾಗ ಮದುಮಗಳ ತಂಗಿಯ ಕೈ ಮದುಮಗನ ತಮ್ಮನ ಕೈಗೆ ಸೋಕಿ ನಲ್ಲಿಯಲ್ಲಿ ಬೀಳುತ್ತಿರುವ ನೀರೆಲ್ಲಾ ಪನ್ನೀರಾಗಿ ಪರಿವರ್ತನೆಯಾಗಿದೆ.
                 ******************
ಅಲ್ಲಿ ಊಟ ಮುಗಿಸಿ ಒಬ್ಬೊಬ್ಬರೇ ಹೊರಡುತ್ತಿದ್ದರೆ ಇಲ್ಲಿ ಗೊಂಬೆ, ಸ್ತಂಭ, ದ್ವಾರಗಳು ವೇದಿಕೆಯಿಂದಿಳಿದು ಹೊರಗೆ ನಿಂತಿರುವ ಲಾರಿಯತ್ತ ಸಾಗುತ್ತಿವೆ. ಮತ್ತೊಂದು ಮದುವೆ ನಡೆಯುವ ತನಕ ಕತ್ತಲ ಗೋಡೌನ್ ನಲ್ಲಿ ಬಂಧಿಯಾಗಿರಬೇಕಲ್ಲಾ ಎಂಬ ಅವುಗಳ ದುಃಖ ಮುಖವನ್ನು ಗಮನಿಸಿದವರಿಗೆ ಮಾತ್ರ ಕಾಣುತ್ತಿದೆ. ಕೆಲವೇ ಕ್ಷಣಗಳ ಹಿಂದಿನ ಮಾಲೆಯೀಗ ಬಿಡಿಬಿಡಿ ಹೂವಾಗಿ ನೆಲದ ಮೇಲೆ ಬಿದ್ದಿದೆ. ಓಡೋಡಿಬಂದಿರುವ ಛತ್ರದ ಕೆಲಸದಾಳಿನ ಮಗಳು ಆ ಹೂಗಳನ್ನು ಆಯ್ದು ಬೊಗಸೆಗೆ ತುಂಬಿಕೊಳ್ಳುತ್ತಿದ್ದಾಳೆ. ಜಗದ ಕೋಮಲತೆಯನ್ನೆಲ್ಲ ಕೈಯಲ್ಲಿ ಹಿಡಿದ ಖುಷಿಯಲ್ಲಿ ಅವಳ ಮುಖ ಅರಳಿರುವ ಪರಿಗೆ ಇಡೀ ಮದುವೆಯೇ ಸಾರ್ಥಕವಾದಂತೆ ಭಾಸವಾಗುತ್ತಿದೆ.
ಹೆಣ್ಣು ಜೀವನದನ ಒಂದು ಆಯಾಮದಿಂದ ಇನ್ನೊಂದು ಆಯಾಮಕ್ಕೆ ದಾಟುವ ಹೊಸ್ತಿಲಿನಲ್ಲಿ  ಮದುಮಗಳು ಕಣ್ತುಂಬಿಕೊಂಡು ನಿಂತಿದ್ದಾಳೆ. ಅವಳು ತಂದೆ ತಾಯಿಯನ್ನು ತಬ್ಬಿ ಅಳುವಾಗ ಇಷ್ಟು ಹೊತ್ತು ನಗುನಗುತ್ತಾ ಓಡಾಡಿಕೊಂಡಿದ್ದ ತಮ್ಮನೂ ಓಡಿ ಬಂದು ಅವಳನ್ನು ಬಿಗಿದಪ್ಪಿದ್ದಾನೆ. ನವಜೋಡಿಯನ್ನು ಕೂರಿಸಿಕೊಂಡ ಕಾರು ಹೊಸ ಸಂಬಂಧಗಳ, ಹೊಸ ಪುಳಕಗಳ, ಹೊಸ ಸವಾಲುಗಳ, ಹೊಸ ಆಸೆ-ಕನಸುಗಳ, ಹೊಸ ನೋವು-ಕಣ್ಣೀರುಗಳ ಹೊಸ ಬದುಕಿನತ್ತ  ಅವರನ್ನು ಕೊಂಡೊಯ್ದಿದೆ. ಅವರನ್ನು ಕಳುಹಿಸಿಕೊಟ್ಟ ಹೆಣ್ಣಿನ ತಂದೆ ಮನೆಯೆದುರಿನ ಚಪ್ಪರ ತೆಗೆಯುತ್ತಾ ದ್ವಾರಕ್ಕೆ ಕಟ್ಟಿದ ಮಲ್ಲಗೆಯ ಮಾಲೆಯನ್ನು ಕಳಚುವಾಗ ಅದನ್ನು ಸಂಭ್ರಮದಿಂದ ಮುಡಿಯುತ್ತಿದ್ದ ಮಗಳ ನೆನಪು ಉಕ್ಕಿಬಂದು ದುಃಖ ಉಮ್ಮಳಿಸಿದೆ.
ಅಲ್ಲಿ, ದೂರ ದಾರಿಯ ತಿರುವಿನಲ್ಲಿ ಕಾರು ಹೊರಳಿದಾಗ ಮದುಮಗಳ ಮುಡಿಯಿಂದ ಹೂವೊಂದು ಜಾರಿ ಮದುಮಗನ ತೊಡೆಯ ಮೇಲೆ ಬಿದ್ದಿದೆ. ಅವನು ಅದನ್ನು ಮೃದುವಾಗಿ ಹಿಡಿದು ಅವಳ ಮುಡಿಗೇ ಮರಳಿಸಿದ ಪರಿಗೆ ಸೋತ ಅವಳು ಅವನ ಹೆಗಲಿಗೆ ತಲೆಯಾನಿಸಿದ್ದಾಳೆ. ಹೊರಗಡೆ ಬಾನಿನಲ್ಲಿ ಚಂದದ ಸಂಜೆಯೊಂದು ಮುಳುಗುತ್ತಾ ಅವರ ಬದುಕಿನ ಮಧುರ ಇರುಳಿಗೆ ದಾರಿಮಾಡಿಕೊಟ್ಟಿದೆ. ಬೆಳದಿಂಗಳು ಮೆಲ್ಲನೆ ಮೂಡುತ್ತಿದೆ‌.
('ತುಷಾರ'ದ ಆಗಸ್ಟ್ 2019ರ ಸಂಚಿಕೆಯಲ್ಲಿ ಪ್ರಕಟಿತ)



ಶುಕ್ರವಾರ, ಜುಲೈ 19, 2019

ಶ್ವಾನಗಳೆಲ್ಲ ಸಭೆಸೇರಿದವು!



ಎಳೆ ಬಿಸಿಲಲ್ಲಿ ಛಳಿ ಕಾಸುತ್ತ ಕಾರ್ಪೋರೇಷನ್ ಶಾಲೆಯ ಬಯಲಿನಲ್ಲಿ ಮಲಗಿ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವ ಪೊಮೇರಿಯನ್ ಜೂಲ್ನಾಯಿಯನ್ನೇ ನೋಡುತ್ತ ಪರಪರನೆ ಮೈ ಕೆರೆದುಕೊಳ್ಳುತ್ತ ತೂಕಡಿಸಿಕೊಂಡಿದ್ದರು ಕೆಂಚಣ್ಣ ಹಾಗೂ ಕರಿಯಣ್ಣ ಶ್ವಾನಗಳು. ಪಕ್ಕದಲ್ಲೇ ಹಲವಾರು ಮಕ್ಕಳು ಕ್ರಿಕೆಟ್ ಆಡುತ್ತ ಭಾನುವಾರದ ಮಜವನ್ನು ಸವಿಯುತ್ತಿದ್ದರು. ಇದ್ದಕ್ಕಿದ್ದಂತೆ ಹಾರೆ, ಪಿಕಾಸಿ, ಕಂಬ, ಶಾಮಿಯಾನಗಳ ಜೊತೆ ನುಗ್ಗಿದ ಕೆಲ ಕೂಲಿಕಾರರು ಮಕ್ಕಳನ್ನೆಲ್ಲ ಓಡಿಸಿ, ಬಯಲಿನ ಮಧ್ಯ ಬಿದ್ದಿರುವ ಕಲ್ಲು, ಕಸಗಳನ್ನೆಲ್ಲ ಎತ್ತಿ ಸ್ವಚ್ಛಗೊಳಿಸತೊಡಗಿದಾಗ ಕೆಂಚ, ಕರಿಯರಿಬ್ಬಗೂ ಮಹದಾಶ್ಚರ್ಯ. ಮುಂಗಾಲುಗಳೆರೆಡನ್ನೂ ಮುಂದೆ ಚಾಚಿ ಮೈ ಮುರಿಯುತ್ತ ಕೆಂಚಣ್ಣ ಬಾಯಿ ತೆರೆದ:
"ಗಣೇಶನ ಹಬ್ಬ ಮುಗೀತು. ರಾಜ್ಯೋತ್ಸವ ಮುಗೀತು. ಎಲೆಕ್ಷನ್ನೂ ಆಯ್ತು. ಈಗ ಇದ್ಯಾವ ಹೊಸ ಕಾರ್ಯಕ್ರಮ ಕರಿಯಣ್ಣ?"
ಬಾಯೊಳಗಿನ ಚೂಪು ಹಲ್ಲೆಲ್ಲವೂ ಹೊರಗೆ ತೋರುವಂತೆ ಆಕಳಿಸುತ್ತಿದ್ದ ಕರಿಯಣ್ಣನಿಗೂ ಅದೇ ಪ್ರೆಶ್ನೆ ಕಾಡತೊಡಗಿತ್ತು.
"ಬಹುಷಃ ಶಾಲೆಯ ಯೂನಿಯನ್ ಡೇ ಇರ್ಬೇಕು. ಅಲ್ಲಿಗೆ ಈ ವಾರದಲ್ಲೇ ಇನ್ನೊಂದೊಳ್ಳೇ ಊಟ ಕಾದಿದೆ ಅಂತಾಯ್ತು! ಇರು ಕೇಳ್ಕಂಡು ಬರ್ತೀನಿ."
ಡೊಂಕು ಬಾಲ ಬೀಸುತ್ತ ಕೆಲಸಗಾರರತ್ತ ನಡೆದುಹೋದ ಕರಿಯಣ್ಣನನ್ನೇ ನೋಡುತ್ತ "ಹಂಗೇ ಅಡಿಗೆ ವೆಜ್ಜೋ, ನಾನ್ವೆಜ್ಜೋ ಅಂತಾನೂ ಕೇಳು ಮಚ್ಚಾ" ಎಂದು ಕೂಗಿದ ಕೆಂಚಣ್ಣ. ಸಿಗಲಿರುವ ಮೂಳೇ ಪೀಸಿನ ಕನಸು ಅವನ ಬಾಯ್ತುಂಬಾ ನೀರಾಗಿ ಸುರಿಯತೊಡಗಿತ್ತು.
"ಕಂಯ್ಯಯ್ಯೋ, ಕಂಯ್ಯಯ್ಯೋ...."
ಕೆಲಸದವನು ಬೀಸಿದ ದೊಣ್ಣೆಯೇಟು ಸರಿಯಾಗಿಯೇ ಬಿದ್ದಿತ್ತು. ಪಕ್ಕದಲ್ಲಿರುವ ಮರಗಳೆಲ್ಲ ಅಲ್ಲಾಡಿಹೋಗುವಂತೆ ಕೂಗಿಕೊಂಡ ಕರಿಯಣ್ಣ ಬಾಲವನ್ನು ಕಾಲುಗಳ ಮಧ್ಯೆ ತೂರಿಸಿಕೊಂಡು ಕೆಂಚಣ್ಣನಿದ್ದಲ್ಲಿಗೆ ಓಡತೊಡಗಿದ. ಆದರೆ ವದೆ ತಿಂದ ಅವನ ಮೊದಲ ಆರ್ತನಾದ ಮುಗಿಯುವ ಮೊದಲೇ ಕೆಂಚಣ್ಣ ಓಡಿ ಶಾಲೆಯ ಗೇಟು ತಲುಪಿಯಾಗಿತ್ತು. ಇದನ್ನು ಕಂಡು ಮತ್ತಷ್ಟು ಭೀತನಾದ ಕರಿಯ ತನ್ನ ಸಕಲ ಸಾಮರ್ಥ್ಯವನ್ನೂ ಕಾಲುಗಳಿಗೆ ಹರಿಯಬಿಟ್ಟು ಓಡುತ್ತಾ ಹೋಗಿ ಕೆಂಚನನ್ನು ಹಿಂದಿಕ್ಕಿದ. ಹೀಗೆ ಒಬ್ಬರ ಓಟದಿಂದ ಇನ್ನೊಬ್ಬರು ಭಯ ಹೆಚ್ಚಸಿಕೊಳ್ಳುತ್ತ ಓಡಿ ಕೊನೆಗೆ ಮುಖ್ಯರಸ್ತೆಗೆ ಬಂದು ನಿಂತರು.
"ಮಾಹಿತಿ ಕೇಳಲಿಕ್ಕೆ ಹೋದ್ರೆ ದೊಣ್ಣೇಲಿ ಬಡೀತಾರೆ. ರೇಬೀಸ್ ಪೀಡಿತರು!"
ವದೆ ಬಿದ್ದ ಬೆನ್ನನ್ನು ನೆಕ್ಕಿಕೊಳ್ಳುತ್ತಲೇ ಕರಿಯಣ್ಣ ಬೈದುಕೊಂಡ.
"ಯಾವುದೋ ಮಹಾಸಭೆಯಂತೆ ಮಚ್ಚೀ. ತುಂಬಾ ಜನ ಸೇರ್ತಾರಂತೆ!"
"ಅಯ್ಯೋ ನಿನ್ನ ಬಾಲ ತುಂಡಾಗ! ವಿಷಯ ಗೊತ್ತಿದ್ರೂ ನನ್ನ ಕೇಳ್ಕೊಂಡ್ಬಾ ಅಂತ ಕಳಿಸಿ ಬೆಳ್ ಬೆಳ್ಗೆನೇ ವದೆ ತಿನ್ಸಿದ್ಯಲ್ಲೋ ಕಾಟನ್ ಪೇಟೆ ಕೆಂಚಾ!"
ಕರಿಯಣ್ಣ ಅಬ್ಬರಿಸಿದ.
"ಕೂಲ್ ಮಚ್ಚೀ, ಕೂಲ್. ನಂಗೂ ಗೊತ್ತಿರ್ಲೀಲ. ನಿಂಗೆ ಅವನು ದೊಣ್ಣೇಲಿ ಬಡಿದಿದ್ದು ನೋಡಿ ನಾನು ಗೇಟಾಚೆಗೆ ಓಡಿ ಹೋಗ್ತಿದ್ನಲ್ಲ? ಆಗ ಅಲ್ಲಿಬ್ಬರು ಮಾತಾಡಿಕೊಳ್ತಿದ್ರು"
ಹಲ್ಕಿರಿಯುತ್ತ ಹೇಳಿದ ಕೆಂಚಣ್ಣ.
"ಮಹಾಸಭೆನಾ? ಹಾಗೆಂದರೇನು? ಅದರಲ್ಲೂ ಊಟ ಇರತ್ತಾ?"
ಹಿಂಗಾಲಿನಿಂದ ಕಿವಿ ಕೆರೆದುಕೊಳ್ಳುತ್ತಾ ಕೇಳಿದ ಕರಿಯನಿಗೆ ಗೊತ್ತಿಲ್ಲ ಎಂಬಂತೆ ತಾರಮ್ಮಯ್ಯ ತೋರಿದ ಕೆಂಚಣ್ಣ. ಆಗಲೇ ದೂರದಲ್ಲಿ ಬರುತ್ತಿದ್ದ ಎತ್ತರ ನಿಲುವಿನ, ಕಾಬೆ ಕೋಲಿನಂತಹಾ ಕಾಲಿನ, ಕಡುಗಪ್ಪು ಮೈಯ ಡಾಬರ್ ತಾತ ಅವರ ಕಣ್ಣಿಗೆ ಬಿದ್ದದ್ದು. ಡಾಬರ್ ತಾತ ಹಲವಾರು ವರ್ಷ ಶ್ರೀಮಂತರ ಮನೆಯೊಂದರಲ್ಲಿ ಸಾಕಲ್ಪಟ್ಟಿದ್ದ ಅನುಭವಿ. ಒಡೆಯನ ಮನೆಯವರ ಜೊತೆಯೇ ನಾಲ್ಕಾರು ಊರು ಸುತ್ತಿದವರು. ಹೊಸ ಹುಳ ತಲೆಗೆ ಹೊಕ್ಕಿದ್ದ ನಾಯಿಗಳಿಬ್ಬರೂ ಅವರ ಬಳಿ ಹೋಗಿ ತಮ್ಮ ಅನುಮಾನವನ್ನು ಕೇಳಿಕೊಂಡರು.
"ಮಹಾಸಭೆ ಎಂದರೆ ನಾಡಿನಾದ್ಯಂತ ಇರುವ ಒಂದೇ ಗುಂಪು ಅಥವಾ ವರ್ಗಕ್ಕೆ ಸೇರಿದವರೆಲ್ಲ ಒಂದೆಡೆ ಸೇರಿ ತಮ್ಮ ಬದುಕು, ಭವಿಷ್ಯ, ಸಮಸ್ಯೆಗಳ ಬಗ್ಗೆ ಚರ್ಚಿಸುವುದು. ಅದಕ್ಕೆ ಬೇಕಾದ ಪರಿಹಾರ ಹಾಗೂ ಹೋರಾಟಗಳ ಬಗ್ಗೆ ನಿರ್ಣಯ ಕೈಗೊಳ್ಳುವುದು."
ಅಷ್ಟಂದ ಡಾಬರ್ ತಾತ ಕನ್ನಡಕ ಸರಿಪಡಿಸಿಕೊಳ್ಳುತ್ತಾ ನಡೆದುಹೋದರು.
                     ************
ಕೆಲಸದವನು ಏಟು ಕೊಟ್ಟ ಜಾಗ ಅವತ್ತಿಡೀ ಕರಿಯಣ್ಣನಿಗೆ ಚುಳುಕ್ ಎನ್ನುತ್ತಲೇ ಇತ್ತು. ಕೊನೆಗೂ ತಾಳಲಾಗದೆ ಅವನು ಹೇಳಿಯೇಬಿಟ್ಟ.
"ನಾವೂ ಹೀಗೊಂದು ಮಹಾಸಭೆ ಮಾಡಬೇಕು! ನಗರದ ನೂರಾರು ಏರಿಯಾಗಳಲ್ಲಿ ಹಂಚಿಹೋಗಿರುವ ನಮ್ಮವರನ್ನೆಲ್ಲ ಒಟ್ಟಿಗೆ ಸೇರಿಸಿ ಸುಖಾಸುಮ್ಮನೆ ನಮ್ಮನ್ನು ಶಿಕ್ಷಿಸುವ ಮನುಷ್ಯನ ವಿರುದ್ದ ಜೊತೆಯಾಗಿ ಹೋರಾಡಬೇಕು!"
ಕೆಂಚಣ್ಣನಿಗೂ ಆ ನಿರ್ಧಾರ ಸರಿ ಎನ್ನಿಸಿತು. ವಾರದ ಕೆಳಗಷ್ಟೇ ವ್ಯಕ್ತಿಯೊಬ್ಬ ಅವನ ಬಾಲದ ತುದಿಯ ಮೇಲೆ ಬೈಕು ಹತ್ತಿಸಿದ್ದ ನೋವು ಇನ್ನೂ ಚುಳುಕ್ಕೆನ್ನುತ್ತಿತ್ತು. ಇಬ್ಬರೂ ಸೇರಿ ಬೆಂಗಳೂರಿನ ಬೇರೆ ಬೇರೆ ಏರಿಯಾಗಳಲ್ಲಿ ತಿಂದುಂಡು ತಿರುಗಾಡುತ್ತಾ ಕಚ್ಚಾಡಿಕೊಂಡಿರುವ ಹಿರಿ, ಕಿರಿ, ಮರಿ, ಪುರುಷ, ಮಹಿಳಾ ಶ್ವಾನಗಳನ್ನೆಲ್ಲ ಭೇಟಿಯಾಗಿ ಈ ಬಗ್ಗೆ ಚರ್ಚಿಸುವುದೆಂದು ನಿರ್ಧರಿಸಿದರು.
ಆದರೆ ಹೀಗೆ ವಿವಿಧ ಬೀದಿಗಳ ಶ್ವಾನ ಬಾಂಧವರನ್ನೆಲ್ಲ ಭೇಟಿಯಾಗ ಹೊರಟ ಕೆಂಚ, ಕರಿಯರಿಬ್ಬರಿಗೂ ಭಯಾನಕ ಅನುಭವ ಕಾದಿತ್ತು. ತಮ್ಮ ಏರಿಯಾಗೆ ಬಂದ ಈ ಇಬ್ಬರು ಆಗುಂತಕರ ಮೇಲೆ ಆ ಆ ಏರಿಯಾದ ಡಾನ್ ಶ್ವಾನಗಳು ಭೀಕರವಾಗಿ ಬೊಗಳುತ್ತಾ ಮುಗಿಬಿದ್ದರು. ಇವರು ತಮ್ಮ ಮಹಾಸಭೆಯ ಬಗ್ಗೆ ಬಾಯಿಬಿಡುವ ಮೊದಲೇ ಇವರ ಮೈಮೇಲೆ ಮಹಾಮಹಾ ಗಾಯಗಳಾಗಿದ್ದವು. ಬಿಟಿಎಂನಲ್ಲಂತೂ ಕೆಂಚಣ್ಣ 'ಕಬಾಬ್ ನಾಗ'ನಿಂದ ತಪ್ಪಿಸಿಕೊಳ್ಳಲು ಹೋಗಿ ಬಿಬಿಎಂಪಿಯವರು ತೋಡಿಟ್ಟುಹೋಗಿದ್ದ ಆಳದ ಹೊಂಡದೊಳಗೆ ಕಾಲುಮೇಲಾಗಿ ಬಿದ್ದುಬಿಟ್ಟ.
"ಅಯ್ಯೋ ಮುಟ್ಠಾಳರಾ, ಮೊದಲೇ ಹೇಳೋದಲ್ವ? ಮನುಷ್ಯರ ನಡುವೆ ಇದ್ದೂ ಇದ್ದೂ ನಮ್ಮವರಿಗೂ ಅವರ ಗುಣವೇ ಬಂದುಬಿಟ್ಟಿದೆ. ಗಂಡಸೊಬ್ಬ 'ತಪ್ಪು ಮಾಡಿದ್ದು ನಾನಲ್ಲ' ಅಂತ ಬಾಯ್ಬಿಡುವ ಮೊದಲೇ ಅವನನ್ನು ಹಿಡಿದು ಚಚ್ಚಿಹಾಕುತ್ತಾರೆ. ಪ್ರಚಾರ, ಅಡ್ವರ್ಟೈಸ್ ಗಳಿಗೆಲ್ಲ ಲೇಡೀಸನ್ನೇ ಕಳಿಸಬೇಕು!"
ಮೋರಿ ಬದಿಯಲ್ಲಿ ಗಾಯವೇ ಮೈಯ್ಯಾಗಿ ಮಲಗಿದ್ದ ಕೆಂಚ, ಕರಿಯರನ್ನು ಮರುಕದಿಂದ ನೋಡುತ್ತ ಡಾಬರ್ ತಾತ ಹೇಳಿದರು. ನಂತರ ಮೂವರೂ ಕೂತು ಮಾತಾಡಿ ನುಣುಪುಗೂದಲಿನ ಸುಂದರ ಜ್ಯೂಲ್ನಾಯಿ ಡಾಲಿಯನ್ನು ಈ ಕೆಲಸಕ್ಕಾಗಿ ನೇಮಿಸಿದರು. ವೈಯ್ಯಾರದಿಂದ ಬೀದಿಬೀದಿಗೂ ನಡೆದುಹೋದ ಡಾಲಿ ತನ್ನ ಮೃದುಮಧುರ ಬೊಗಳುಗಳ ಮೂಲಕ ಮಹಾಸಭೆಗೆ ಬರುವಂತೆ ಎಲ್ಲರ ಮನವೊಲಿಸುವಲ್ಲಿ ಯಶಸ್ವಿಯಾದಳು. ಜೊತೆಗೆ ಮಹಾಸಭೆಯ ದಿನ ಮೂರೂಹೊತ್ತೂ ಮಹಾನಗರದ ನಾನಾ ಹೋಟೆಲುಗಳಿಂದ ಎಸೆಯಲ್ಪಟ್ಟ  ಮೂಳೆ ಪೀಸುಗಳೇ ಮುಂತಾದ ಐಟಮ್ಗಳ ಭರ್ಜರಿ ಭೋಜನವಿರುತ್ತದೆಂದು ಹೇಳುವುದನ್ನೂ ಅವಳು ಮರೆಯಲಿಲ್ಲ.
                 ******************
ಅಂದುಕೊಂಡಂತೆಯೇ ಮಹಾಸಭೆಯ ದಿನ ಬಂದೇ ಬಿಟ್ಟಿತು. ಜಗತ್ತಿನ ವಿವಿಧ ಭಾಗಗಳ ಶ್ವಾನಗಳ ಬಗ್ಗೆ ಟೀವಿ ಯಲ್ಲಿ ನೋಡಿ ತಿಳಿದುಕೊಂಡಿರುವ ಅನುಭವಿ ಡಾಬರ್ ತಾತನನ್ನು ಮಹಾಸಭೆಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಊರ ಹೊರಗೆ ಕಸ ಎಸೆಯಲೆಂದೇ ಮೀಸಲಿಟ್ಟಿರುವ, ಮನುಷ್ಯರು ಅಷ್ಟಾಗಿ ಬಾರದ ಮೋರಿ ಪಾಳ್ಯದ ಎತ್ತರದ ದಿಬ್ಬವೊಂದರ ಮೇಲೆ ವೇದಿಕೆ ನಿರ್ಮಿಸಲಾಗಿತ್ತು. ಸಮಯವಾಗುತ್ತಿದ್ದಂತೆಯೇ ಬೇರೆಬೇರೆ ಏರಿಯಾದ ಶ್ವಾನಗಳು ಗುಂಪಾಗಿ ಬರತೊಡಗಿದರು. ಎಲ್ಲರೂ ಮಸ್ತಾನಿ ಹೋಟೆಲ್ ನ ಕಬಾಬ್ ಪೀಸಿನ 'ವೆಲ್ಕಮ್ ಡಿಶ್' ತಿಂದು ವೇದಿಕೆಯತ್ತ ನಡೆಯತೊಡಗಿದರು‌.
ಹೀಗೆ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆಯೇ ವೇದಿಕೆಯ ಮುಂದೆ ಕೋಲಾಹಲ ಶುರುವಾಯಿತು. ಸ್ವಾಗತ ಗೀತೆಯನ್ನು ಹಾಡಲಿರುವ ಪಿಂಕಿ ಪೊಮೇರಿಯನ್ ಳ ಪಕ್ಕ ಖಾಲಿ ಇದ್ದ ಒಂದೇ ಒಂದು ಸೀಟಿನಲ್ಲಿ ತಾನೇ ಕೂರಬೇಕೆಂದು ಬೂದಿಗುಡ್ಡೆ ಬಸಿಯ ಹಾಗೂ ಕುಂಟುಕಾಲು ಡ್ಯಾನಿ ಪೈಪೋಟಿಗೆ ಬಿದ್ದರು. ಗುರ್ ಗುರ್ ಎನ್ನುವ ಸಣ್ಣ ವಾದದೊಂದಿಗೆ ಶುರುವಾದ ಅವರ ಜಗಳ ತಾರಕಕ್ಕೆ ಹೋಗಿ, ಡ್ಯಾನಿಯ ಮೂರನೇ ಕಾಲನ್ನು ಬಸಿಯ ಇನ್ನೇನು ಕಚ್ಚಬೇಕು, ಅಷ್ಟರಲ್ಲಿ ಕೆಂಚ-ಕರಿಯರು ಮೊದಲೇ ತಯಾರಿಸಿದ್ದ 'ಆ್ಯಂಟಿ ಬಡಿದಾಟ ಸಂಘ'ದ ಕಟ್ಟುಮಸ್ತು ಶ್ವಾನಗಳು ಅಲ್ಲಿಗೆ ಬಂದು ಅವರಿಬ್ಬರನ್ನೂ ಹಿಡಿದುಕೂರಿಸಿ ಸಮಾಧಾನಪಡಿಸಿದರು.
ಅಂತೂ ಇಂತೂ ಮಹಾಸಭೆ ಆರಂಭವಾಯಿತು. ಕುಮಾರಿ ಪಿಂಕಿ ಪೊಮೇರಿಯನ್ ಬಾಲ ಕುಣಿಸುತ್ತಾ ವೇದಿಕೆಗೆ ನಡೆದುಹೋಗಿ, ತಾನೇ ರಚಿಸಿ, ಸಂಗೀತ ಸಂಯೋಜಿಸಿದ "ನಾವೆಲ್ಲರೂ ಶ್ವಾನಗಳು, ಒಂದೇ ಬೀದಿಯ ಬಂಧುಗಳು..." ಹಾಡನ್ನು ಪ್ರಾರ್ಥನಾಗೀತೆಯಾಗಿ ಹಾಡಿದಳು. ಅದಕ್ಕೆ ಕೆಂಚ ಹಾಗೂ ಗೆಳೆಯರ ತಂಡದವರು ಪರಸ್ಪರ ಕೈಕೈ (ಕಾಲುಕಾಲು) ಹಿಡಿದುಕೊಂಡು ನರ್ತಿಸಿದರು. ನಂತರ ಡಾಬರ್ ತಾತನ ಅಧ್ಯಕ್ಷತೆಯಲ್ಲಿ "ಬೀದಿ ಬಾಂಧವರ ಜ್ವಲಂತ ಸಮಸ್ಯೆಗಳು" ವಿಷಯದಡಿ ಚರ್ಚಾಕಾರ್ಯಕ್ರಮ ಆರಂಭವಾಯಿತು. ಕನ್ನಡಕ ಸರಿಪಡಿಸಿಕೊಂಡ ಡಾಬರ್ ತಾತ ತಮ್ಮ ಪ್ರಾಸ್ತವಿಕ ಮಾತುಗಳನ್ನು ಆರಂಭಿಸಿದರು. "ದೂರದ ಏರಿಯಾಗಳಿಂದ ಬಂದಿರುವ ನನ್ನ ಶ್ವಾನ ಮಿತ್ರರೇ, ಇಂದು ಸರಿಯಾದ ಸಮಯದಲ್ಲೇ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಇಪ್ಪತ್ತೊಂದನೇ ಶತಮಾನದ ಎರೆಡನೇ ದಶಕ ಮುಗಿಯುತ್ತಾ ಬಂದರೂ ಶ್ವಾನಗಳ ಜೀವನ ಕ್ರಮದಲ್ಲಿ ಬದಲಾವಣೆಗಳಾಗಿಲ್ಲ. ಪರಿಹಾರದ ಮಾತನಾಡುವ ಮೊದಲು ಸಮಸ್ಯೆಗಳು ಸ್ಪಷ್ಟವಾಗಬೇಕು. ಈಗ ಒಬ್ಬೊಬ್ಬರಾಗಿ ನಿಮ್ಮ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ" ಎಂದರು.
ಮೊದಲಿಗೆ ಮೈಕು ಪಡೆದು ಮಾತಿಗಾರಂಭಿಸಿದ ಕರಿಯಣ್ಣ ಸಾಕಷ್ಟು ತಯಾರಿಯೊಂದಿಗೇ ಬಂದಿದ್ದ. "ಬಂಧುಗಳೇ, 'ಗ್ರಾಮ ಸಿಂಹ' ಎಂದೇ ಖ್ಯಾತರಾದ ನಮ್ಮನ್ನು, ಇಡೀ ಭೂಮಿಯೇ ತನ್ನದೆಂದು ಭ್ರಮಿಸಿರುವ ಸ್ವಾರ್ಥಿ ಮನುಷ್ಯ ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದಾನೆ. ಎಲ್ಲಿ ಕಂಡರಲ್ಲಿ ನಮ್ಮ ಮೇಲೆ ದೊಣ್ಣೆ ಬೀಸುವುದು, ಕಲ್ಲೆಸೆಯುವುದು ಮಾಡುತ್ತಾನೆ. ಹುಲಿ, ಆನೆ, ಜಿಂಕೆ ಎಲ್ಲದರ ಹಿತಾಸಕ್ತಿಗಳ ರಕ್ಷಣೆಗೂ ಸಂಘಗಳಿವೆ. ಆದರೆ ನಮ್ಮ ಹೆಸರಿನಲ್ಲಿ ಯಾವ ಕಮಿಟಿಯೂ ಇಲ್ಲ. ರಾಜ್ಯದ ಆಯವ್ಯಯದಲ್ಲಾಗಲೀ, ಕೇಂದ್ರ ಬಜೆಟ್ ನಲ್ಲಾಗಲೀ ಶ್ವಾನ ಕಲ್ಯಾಣಕ್ಕೆಂದು ಒಂದು ಪೈಸೆಯನ್ನೂ ಮೀಸಲಿಡುತ್ತಿಲ್ಲ. ಇನ್ನು ದೀಪಾವಳಿಯ ಸಮಯದಲ್ಲಂತೂ ನಮ್ಮ ಗೋಳು ಕೇಳುವಂತೆಯೇ ಇಲ್ಲ. ಬಾಲಗಳಿಗೆ ಪಟಾಕಿ ಸರ ಕಟ್ಟಿ, ಊರೆಲ್ಲ ಅಟ್ಟಾಡಿಸಿ ಗೋಳುಹೊಯ್ದುಕೊಳ್ಳುತ್ತಾರೆ. ನಮ್ಮ ಬಾಲವನ್ನವರು ‘ರಾಕೇಟ್ ಉಡ್ಡಯನ ಕಟ್ಟೆ’ ಎಂದು ಭಾವಿಸಿರುವಂತಿದೆ" ಎಂದನು.
ಮೈಕು ಇಸಿದುಕೊಂಡು ಅವನ ಮಾತನ್ನು ಮುಂದುವರೆಸಿದ ಕೆಂಚಣ್ಣ "ಅಷ್ಟೇ ಅಲ್ಲ ಬಂಧುಗಳೇ, ರಾಕ್ಷಸ ಲಾರಿಗಳಲ್ಲಿ ಬರುವ ಮಹಾನಗರ ಪಾಲಿಕೆಯವರು ಬಲವಂತವಾಗಿ ನಮ್ಮವರನ್ನು ಹೊತ್ತೊಯ್ದು ಸಂತಾನ ಹರಣ ಚಿಕಿತ್ಸೆಗೆ ಒಳಪಡಿಸುತ್ತಿದ್ದಾರೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕಿರುವ ನಮ್ಮ ಭವಿಷ್ಯದ ವಂಶಾವಳಿಯನ್ನೇ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ" ಎಂದು, ಕೊಂಚ ದನಿ ತಗ್ಗಿಸಿ "ಬಲ್ಲ ಮೂಲಗಳ ಪ್ರಕಾರ ಬೌಬೌ ಬಿರಿಯಾನಿ ಎನ್ನುವ ನಿಷೇಧಿತ ಖಾದ್ಯವೊಂದರ ತಯಾರಿಕೆಗಾಗಿ ನಮ್ಮ ಬೀದಿ ಬಾಂಧವರ ಕಳ್ಳಸಾಗಣಿಕೆ ಅವ್ಯಹತವಾಗಿ ನಡೆಯುತ್ತಿದೆ. ಯಾವುದೇ ದೊಡ್ಡ ಲಾರಿಯನ್ನು ಕಂಡರೂ ನಮ್ಮವರು ಹೆದರಿ ಬಾಲ ಮುದುರಿಕೊಂಡು ಓಡುವಂತಾಗಿದೆ. ಅಲ್ಲದೆ ಬೀದಿಯಲ್ಲಿ ನಮ್ಮ ಪಾಡಿಗೆ ಮಲಗಿರುವಾಗ ಬೈಕು, ಕಾರು ಬಸ್ಸುಗಳನ್ನು ಮೇಲೆ ಹತ್ತಿಸಿ, ಆಸ್ಪತ್ರೆಗೂ ಸೇರಿಸದೇ ಪರಾರಿಯಾಗುತ್ತಾರೆ" ಎನ್ನುತ್ತಾ ತನ್ನ ಬಾಲವನ್ನು ನೆಕ್ಕಿಕೊಂಡನು‌.
ಅಷ್ಟರಲ್ಲಿ ಪಕ್ಕದಲ್ಲೇ ಕುಳಿತಿದ್ದ ಎಚ್ಡೀಕೋಟೆಯಿಂದ ಬಂದವನಾದ ಬೀರ ಮೈಕನ್ನು ಕಸಿದುಕೊಂಡು "ಕೇವಲ ನಗರದಲ್ಲಿ ಮಾತ್ರವಲ್ಲ, ಗ್ರಾಮಾಂತರ ಪ್ರದೇಶದಲ್ಲೂ ಶ್ವಾನಗಳ ಬದುಕು ಅಪಾಯದಲ್ಲಿದೆ ಮಿತ್ರರೇ. ರಾತ್ರೆಯ ಹೊತ್ತಲ್ಲಿ ಊರೊಳಗೆ ನುಗ್ಗಿ ನಮ್ಮನ್ನು ಜೀವಂತ ಹೊತ್ತೊಯ್ಯುವ ಚಿರತೆ, ಕುರ್ಕಗಳ ಕುರಿತಾಗಿಯೂ ನಾವಿಂದು ಚರ್ಚಿಸಬೇಕಿದೆ" ಎಂದು ಬೊಗಳಿದನು. ಅಷ್ಟರಲ್ಲಿ ಮತ್ತೆ ಮೈಕನ್ನು ಎಳೆದುಕೊಂಡ ಕೆಂಚ-ಕರಿಯರು "ಸಮಸ್ಯೆ ಕೇವಲ ಹೊರಗಿನಿಂದ ಮಾತ್ರ ಬರುತ್ತಿಲ್ಲ. ನಮ್ಮ ನಮ್ಮ ನಡುವೆಯೇ ಭಿನ್ನಾಭಿಪ್ರಾಯಗಳಿವೆ. ಶ್ವಾನ ಸಮಾಜದಲ್ಲಿ ಪುರುಷ ಹಾಗೂ ಮಹಿಳಾ ನಾಯಿಗಳ ನಡುವೆ ಭೇದಭಾವ ತೋರಲಾಗುತ್ತಿದೆ. ಪುರುಷ ಶ್ವಾನಗಳಿಗೆ ಅನ್ಯಾಯವಾಗುತ್ತಿದೆ. ಸಂಜೆಯ ವಾಕಿಂಗ್ ಗೆಂದು ಪಕ್ಕದ ಏರಿಯಾಗೆ ಹೋದರೆ ನಮ್ಮವರೇ ನಮ್ಮಮೇಲೆ ಗುಂಪಾಗಿ ಧಾಳಿ ಮಾಡಿ ಕಚ್ಚಿ ಗಾಯಗೊಳಿಸುತ್ತಾರೆ. ಆದರೆ ಮಹಿಳೆಯರನ್ನು ಸುಮ್ಮನೆ ಬಿಡಲಾಗುತ್ತದೆ” ಎಂದು ತಿಂಗಳ ಕೆಳಗೆ ತಮ್ಮ ಮೈಮೇಲಾದ ಗಾಯಗಳನ್ನು ಪರಪರ ಕೆರೆದುಕೊಳ್ಳುತ್ತಾ ನುಡಿದರು. ಈ ಮಾತು ಕೇಳುತ್ತಿದ್ದಂತೆಯೇ ಸಭೆಯಲ್ಲಿದ್ದ, ಈ ಹಿಂದೆ ಅಕ್ಕಪಕ್ಕದ ಏರಿಯಾದವರಿಂದ ಕಚ್ಚಿಸಿಕೊಂಡ ಪುರುಷ ಶ್ವಾನಗಳೆಲ್ಲ ಊಊ ಎಂದು ಒಕ್ಕೋರಲಿನಿಂದ ಊಳಿಡುವ ಮೂಲಕ ಬೆಂಬಲ ಸೂಚಿಸಿದರು.
ಎಲ್ಲರ ಸಮಸ್ಯೆಗಳನ್ನೂ ಆಲಿಸಿದ ಡಾಬರ್ ತಾತ  ಪ್ರತಿಯೊಂದು ಏರಿಯಾದ ಪ್ರತಿನಿಧಿಗಳನ್ನೂ ಕೂರಿಸಿಕೊಂಡು ಸುಧೀರ್ಘ ಚರ್ಚೆ ನಡೆಸಿದ ನಂತರ ಎಲ್ಲ ಸಮಸ್ಯೆಗಳಿಗೂ ಪರಿಹಾರವಿರುವ ವಿಧೇಯಕವೊಂದನ್ನು ತಯಾರಿಸಿದರು. ಅದು ಹೀಗಿತ್ತು:
*ಏರಿಯಾವಾರು ಕಲಹ ಬಿಡಬೇಕು. ಪಕ್ಕದ ಏರಿಯಾದ ನಾಯಿಯೊಬ್ಬ ನಮ್ಮ ಏರಿಯಾಗೆ ಬಂದರೆ ಅವನನ್ನು ಅತಿಥಿಯಂತೆ ಕಾಣಬೇಕೇ ಹೊರತು, ಗುಂಪುಕಟ್ಟಿಕೊಂಡು ಕಚ್ಚಿ ಓಡಿಸಬಾರದು.
* ಸಂತಾನ ಹರಣ ಚಿಕಿತ್ಸೆಯ ವಿರುದ್ಧ, ನಾಯಿ ಹಿಡಿಯುವ ನಗರ ಪಾಲಿಕೆಯವರು ಹಾಗೂ ಸುಮ್ಮಸುಮ್ಮನೆ ಕಲ್ಲು, ದೊಣ್ಣೆ ಎಸೆಯುವವರ ವಿರುದ್ಧ ಸಾಮೂಹಿಕ ಹೋರಾಟ ನಡೆಸಬೇಕು. ಅವರು ಕಂಡಲ್ಲಿ ಅಟ್ಟಿಸಿಕೊಂಡು ಹೋಗುವುದು, ಗುಂಪಾಗಿ ನಿಂತು ಘೋಷಣೆ ಕೂಗುವ (ಬೊಗಳುವ!) ಮೂಲಕ ತೀವ್ರವಾಗಿ ಖಂಡಿಸಬೇಕು‌.
* ಕಸ ಆಯುವ ಬಡಪಾಯಿಗಳ ಮೇಲೆ ಎಗರಾಡಬಾರದು. ಅವರನ್ನು ಅಟ್ಟಿಸಿಕೊಂಡು ಹೋಗಬಾರದು.
*ಹಾಗೆಯೇ ರಾತ್ರೆ ಒಂಟಿಯಾಗಿ ಬ್ಯಾಗು ಹಿಡಿದು ಓಡಾಡುವ ದಾರಿಹೋಕರ ಮೇಲೆ ಎರಗಬಾರದು. ಬದಲಿಗೆ ಬಾಲ ಆಡಿಸುವುದು, ಮುದ್ದುಮುದ್ದಾಗಿ ಕುಂಯ್ಗುಟ್ಟುವುದು, ಪಲ್ಟಿ ಹೊಡೆಯುವುದು ಮಾಡುವ ಮೂಲಕ ಜನರ ಪ್ರೀತಿ ಸಂಪಾದಿಸಬೇಕು.
* ಗ್ರಾಮಭಾಗದ ನಾಯಿಗಳನ್ನು ಹಿಡಿದು ಕೊಲ್ಲಲುತ್ತಿರುವ ಕುರ್ಕ, ಚಿರತೆಗಳ ಜೊತೆ ಸಂಧಾನ-ಮಾತುಕತೆ ನಡೆಸಬೇಕು. ಅವರು ಒಪ್ಪದಿದ್ದಲ್ಲಿ ಅವರ ವಿರುದ್ಧ ಹೋರಾಡಲು ಮುಧೋಳ, ಡಾಬರ್, ರ್ಯಾಟ್ ವಿಲ್ಲರ್ ಮುಂತಾದ ಗಟ್ಟಿಮುಟ್ಟಾದ ಶ್ವಾನಗಳ ಪಡೆಯೊಂದನ್ನು ಕಟ್ಟಬೇಕು.
* ವಾಹನಗಳಿಗೆ ಸಿಕ್ಕಿ ಗಾಯಗೊಳ್ಳುವ ನಾಯಿಗಳಿಗೆ ಮನುಷ್ಯನಿಂದಲೇ ಪರಿಹಾರ ಕೊಡಿಸಬೇಕು. ಕೊಡದ ಪಕ್ಷದಲ್ಲಿ ಅಂಥವರ ಫೋಟೋ, ವೀಡಿಯೋಗಳನ್ನು ಫೇಸ್ಬುಕ್, ಯೂಟ್ಯೂಬ್ ಗಳಿಗೆ ಅಪ್ಲೋಡ್ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಖಂಡಿಸಬೇಕು.
*ಈ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಶ್ವಾನಗಳಿಗೆ ಹಮ್ಮುರಬಿ ಹಾಗೂ ಸೌದಿ ಅರೇಬಿಯಾ ಮಾದರಿಯ ‘ಬೆರಳ್ ಗೆ ಬೆರಳ್. ಕೊರಳ್ ಗೆ ಕೊರಳ್’ ಶಿಕ್ಷೆಗಳನ್ನು ನೀಡಲಾಗುವುದು!
ಹೀಗೆ ಚರ್ಚಾಗೋಷ್ಠಿ ಸಂಪನ್ನವಾಗಿ, ಮಧ್ಯಾಹ್ನದ ಊಟವಾದ ನಂತರ ಸಾಂಸ್ಕೃತಿಕ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಆರಂಭವಾದವು. ತಮ್ಮ ಅಮೂಲ್ಯ ಕೃತಿಗಳ ಮೂಲಕ ಶ್ವಾನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಅನೇಕ ಶ್ವಾನಗಳಿಗೆ ಪ್ರಶಸ್ತಿನೀಡಲಾಯಿತು. 'ಕಂಬ ಕಂಡೊಡನೆ ನಮಗೇನಾಗುತ್ತದೆ?' ಗೆ ಅತ್ಯುತ್ತಮ ಮನೋವೈಜ್ಞಾನಿಕ ಕೃತಿಯೆಂದೂ, 'ಬಳೇಪೇಟೆಯವ ಜೂಲು ಚೆಲುವೆ' ಕಾದಂಬರಿಗೆ ಅತ್ಯುತ್ತಮ ಸಾಮಾಜಿಕ ಕಾದಂಬರಿಯೆಂದೂ, ‘ಮೈ ಕೆರೆದುಕೊಳ್ಳಲು ಸುಲಭ ವಿಧಾನಗಳು’ ಕೃತಿಗೆ ಅತ್ಯುತ್ತಮ ವೈದ್ಯಕೀಯ ಕೃತಿಯೆಂದೂ, 'ಮಹಾನಗರಪಾಲಿಕೆಯವರೇ ಹುಷಾರ್!' ನಾಟಕಕ್ಕೆ ಅತ್ಯುತ್ತಮ ಕ್ರಾಂತಿಕಾರಿ ನಾಟಕವೆಂದೂ ಪ್ರಶಸ್ತಿ ನೀಡಲಾಯಿತು. ಜೊತೆಗೆ ಐದು ವರ್ಷ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಿಸ್ಟರ್ ಮುಧೋಳ್ ಅವರನ್ನು ಸನ್ಮಾನಿಸಲಾಯಿತು. ಅವರ ಮುಂದಾಳತ್ವದಲ್ಲಿ ಮರಿ ಶ್ವಾನಗಳಿಗೆ ಉಚಿತ ಆತ್ಮರಕ್ಷಣಾ ತರಬೇತಿ ನೀಡುವ ಕುರಿತಾಗಿಯೂ ಚರ್ಚಿಸಲಾಯಿತು. ಕೊನೆಗೆ ವಂದನಾರ್ಪಣೆಯ ವೇಳೆ ಸ್ವತಃ ಡಾಬರ್ ತಾತ “ನೀ ಜೈಲಲಿ ಹುಟ್ಟಿ ಬಯಲಿಗೆ ಬಂದೆ ಕೃಷ್ಣ ಕೃಷ್ಣ ಕೃಷ್ಣ… ನಾ ಬೋನಲಿ ಹುಟ್ಟಿ ಬೀದಿಗೆ ಬಂದೆ ಏಕೆ ಹೀಗೆ ಕೃಷ್ಣ?” ಎಂದು ಭಾವುಕರಾಗಿ ಹಾಡಿದ್ದನ್ನು ಕೇಳಿ ಶ್ವಾನಗಳೆಲ್ಲರ ಕಣ್ಣೂ ಮಂಜಾಯ್ತು. ದುಃಖಿತರಾದ ಎಲ್ಲರಲ್ಲೂ ಉತ್ಸಾಹ ಚಿಮ್ಮಿಸಲೆಂದು ಆಂಗ್ಲ ಹಾಡಿನ ಸಿಡಿ ಹಾಕಲಾಯಿತು. ‘ಹೂ ಲೆಟ್ ದ ಡಾಗ್ಸ್ ಔಟ್?’ ಹಾಡಿಗೆ ಶ್ವಾನಗಳೆಲ್ಲ ಬಾಲ ಕುಣಿಸತ್ತಾ, ನಾಲಿಗೆ ಹೊರಚಾಚಿಕೊಂಡು ಕುಣಿಯತೊಡಗಿದರು. ವೇದಿಕೆಯ ಮೇಲೆ ಮಾತ್ರವಲ್ಲದೆ ಕೆಳಗಿನ ಸಭೆಯಲ್ಲೂ ನರ್ತನ ಆರಂಭವಾಯಿತು. ಕುಣಿದು ಕುಪ್ಪಳಿಸಿದ ಶ್ವಾನಗಳೆಲ್ಲ ಇಂತಹಾದ್ದೊಂದು ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಿದ ಕೆಂಚ, ಕರಿಯರನ್ನು ಹೆಗಲ ಮೇಲೆ ಹೊತ್ತು ಕುಣಿಯತೊಡಗಿದರು.
“ಡರ್… ಪೋಂವ್..ಪೋಂವ್”
ಅವರ ಸಂಭ್ರಮವನ್ನು ಹರಿಯುವಂತಹಾ ಭಾರೀ ವಾಹನದ ಸದ್ದೊಂದು ಇದ್ದಕ್ಕಿದ್ದಂತೆ ಕೇಳಿಬಂತು.
“ಬಿಬಿಎಂಪಿ ಲಾರಿ ಬರ್ತಿದೆ. ಎಲ್ರೂ ಓಡಿ!”
ಅಷ್ಟೇ! ಖುಷಿಯಿಂದ ಜಿಗಿದಾಡುತ್ತಿದ್ದ ನಾಯಿಗಳೆಲ್ಲ ಹೊತ್ತಿದ್ದ ಕೆಂಚ ಕರಿಯರನ್ನು ಎತ್ತಿ ಬಿಸಾಕಿ ದಿಕ್ಕಾಪಾಲಾಗಿ ಓಡತೊಡಗಿದರು. ಮೋರಿಪಾಳ್ಯದ ಬೂದಿಗುಡ್ಡೆಯ ಮೇಲೆ ನಾಯಿಗಳೆಲ್ಲ ಸೇರಿಕೊಂಡು ಗಲಾಟೆ ಮಾಡುತ್ತಿವೆಯೆಂದು ಯಾರೋ ಬಿಬಿಎಂಪಿಯವರಿಗೆ ಫೋನ್ ಮಾಡಿ ಕಂಪ್ಲೇಟ್ ಕೊಟ್ಟಿದ್ದರಿಂದ ನಾಯಿ ಹಿಡಿಯುವ ವಾಹನ ಅಲ್ಲಿಗೆ ಧಾವಿಸಿಬಂದಿತ್ತು. ಆದರೆ ಅಷ್ಟು ದೂರದಿಂದಲೇ ಅದರ ಶಬ್ದವನ್ನು ಗುರುತಿಸಿದ ಶ್ವಾನಗಳೆಲ್ಲ ಚಿರತೆಯ ವೇಗದಲ್ಲಿ ಓಡುತೊಡಗಿದವು. ಸಿಕ್ಕ ಕೆಲವು ನಾಯಿಗಳನ್ನು ತುಂಬಿಕೊಂಡ ಬಿಬಿಎಂಪಿ ವಾಹನ ಭೋಂಭೋಂ ಎಂದು ವಿಜಯೋತ್ಸಾಹ ಮಾಡುತ್ತಾ ಮರಳಿಹೋಯಿತು‌.
ಕಾಲ್ತುಳಿತದಿಂದ, ಬಿಬಿಎಂಪಿ ವಾಹನದಿಂದ ತಪ್ಪಿಸಿಕೊಂಡು ತಮ್ಮ ಏರಿಯಾ ತಲುಪುವಷ್ಟರಲ್ಲಿ ಕೆಂಚ-ಕರಿಯರಿಬ್ಬರ ಜೀವ ಬಾಯಿಗೆ ಬಂದಿತ್ತು.

('ಮಂಗಳ''ಲ್ಲಿ ಪ್ರಕಟಿತ ಲೇಖನ)

ಪ್ರಾರ್ಥನೆ...

ಅವರಿಬ್ಬರೂ ಪ್ರತಿದಿನ ಒಂದೇ ದೇವಸ್ಥಾನಕ್ಕೆ ಬೇರೆ ಬೇರೆ ಸಮಯದಲ್ಲಿ ಹೋಗಿ ಪ್ರಾರ್ಥಿಸುತ್ತಿದ್ದರು.

"ಅವನು ನನಗೇ ಸಿಗಲಿ ದೇವರೇ"
ಅವಳು ಬೇಡುತ್ತಿದ್ದಳು.

"ಅವಳು ನನ್ನನ್ನು ಮರೆಯುವಂತಾಗಲಿ ಭಗವಂತಾ"
ಅವನು ಕೇಳಿಕೊಳ್ಳುತ್ತಿದ್ದ.

ಕಂಬದೊಳಗಿನ ದೈವಗಣಗಳು ಇಬ್ಬರಲ್ಲಿ ಯಾರ ಬೇಡಿಕೆ ಈಡೇರುತ್ತದೋ ಎಂದು ಕುತೂಹಲದಿಂದ ಕಾಯುತ್ತಿದ್ದವು.

ದೇವರು ಸಂದಿಗ್ಧಕ್ಕೆ ಸಿಲುಕಿದ್ದ‌.

ಹೀಗಿದ್ದಾಗಲೇ ಅವನ ಹುಟ್ಟುಹಬ್ಬ ಬಂತು. ಅದು ಶತಮಾನದಲ್ಲಿ ಒಮ್ಮೆ ಮಾತ್ರ ಬರುವ ವಿಶೇಷ ದಿನವೂ ಆಗಿತ್ತು. ಅಂದು ಸಂಜೆಯ ಗೋಧೂಳೀ ಲಘ್ನದಲ್ಲಿ ಬೇಡಿಕೊಂಡಿದ್ದೆಲ್ಲಾ ಸತ್ಯವಾಗುತ್ತಿತ್ತು.

ಅವನು ದೇವಸ್ಥಾನಕ್ಕೆ ಬಂದ. ಎಂದಿನಂತೆ ಮರೆವಿನ ವರ ಬೇಡಿಕೊಂಡು ಮನೆಗೆ ನಡೆದ.

ತುಸು ಹೊತ್ತಿನ ನಂತರ ಅವಳು ಬಂದಳು.

ಅಷ್ಟರಲ್ಲಿ ಸಮಯ ಬೇಡಿದ್ದೆಲ್ಲಾ ಸತ್ಯವಾಗುವ ವಿಶೇಷ ಘಳಿಗೆಯನ್ನು ಪ್ರವೇಶಿಸಿತು.

ಕಂಬದೊಳಗಿನ ದೈವಗಣಗಳು ಉಸಿರು ಬಿಗಿಹಿಡಿದು ಕಾಯುತೊಡಗಿದವು.

"ಇವತ್ತು ಅವನ ಹುಟ್ಟಿದ ದಿನ. ಅವನು ಏನೆಲ್ಲಾ ಬೇಡಿಕೊಂಡಿದ್ದಾನೋ ಅದೆಲ್ಲಾ ಸತ್ಯವಾಗುವಂತೆ ಅನುಗ್ರಹಿಸು ದೇವರೇ"
ಹಾಗೆಂದು ಅವಳು ಮನಸ್ಪೂರ್ತಿಯಾಗಿ ಪ್ರಾರ್ಥಿಸಿದಳು.

ದೈವಗಣಗಳ ಕಣ್ಣು ತುಂಬಿ ಬಂತು.

ದೇವರು ಭಾರಹೃದಯದಿಂದ ತಲೆಯಾಡಿಸಿದ.

('ಓ ಮನಸೇ'ಲ್ಲಿ ಪ್ರಕಟಿತ )

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...