ಶುಕ್ರವಾರ, ಜುಲೈ 19, 2019

ಪ್ರಾರ್ಥನೆ...

ಅವರಿಬ್ಬರೂ ಪ್ರತಿದಿನ ಒಂದೇ ದೇವಸ್ಥಾನಕ್ಕೆ ಬೇರೆ ಬೇರೆ ಸಮಯದಲ್ಲಿ ಹೋಗಿ ಪ್ರಾರ್ಥಿಸುತ್ತಿದ್ದರು.

"ಅವನು ನನಗೇ ಸಿಗಲಿ ದೇವರೇ"
ಅವಳು ಬೇಡುತ್ತಿದ್ದಳು.

"ಅವಳು ನನ್ನನ್ನು ಮರೆಯುವಂತಾಗಲಿ ಭಗವಂತಾ"
ಅವನು ಕೇಳಿಕೊಳ್ಳುತ್ತಿದ್ದ.

ಕಂಬದೊಳಗಿನ ದೈವಗಣಗಳು ಇಬ್ಬರಲ್ಲಿ ಯಾರ ಬೇಡಿಕೆ ಈಡೇರುತ್ತದೋ ಎಂದು ಕುತೂಹಲದಿಂದ ಕಾಯುತ್ತಿದ್ದವು.

ದೇವರು ಸಂದಿಗ್ಧಕ್ಕೆ ಸಿಲುಕಿದ್ದ‌.

ಹೀಗಿದ್ದಾಗಲೇ ಅವನ ಹುಟ್ಟುಹಬ್ಬ ಬಂತು. ಅದು ಶತಮಾನದಲ್ಲಿ ಒಮ್ಮೆ ಮಾತ್ರ ಬರುವ ವಿಶೇಷ ದಿನವೂ ಆಗಿತ್ತು. ಅಂದು ಸಂಜೆಯ ಗೋಧೂಳೀ ಲಘ್ನದಲ್ಲಿ ಬೇಡಿಕೊಂಡಿದ್ದೆಲ್ಲಾ ಸತ್ಯವಾಗುತ್ತಿತ್ತು.

ಅವನು ದೇವಸ್ಥಾನಕ್ಕೆ ಬಂದ. ಎಂದಿನಂತೆ ಮರೆವಿನ ವರ ಬೇಡಿಕೊಂಡು ಮನೆಗೆ ನಡೆದ.

ತುಸು ಹೊತ್ತಿನ ನಂತರ ಅವಳು ಬಂದಳು.

ಅಷ್ಟರಲ್ಲಿ ಸಮಯ ಬೇಡಿದ್ದೆಲ್ಲಾ ಸತ್ಯವಾಗುವ ವಿಶೇಷ ಘಳಿಗೆಯನ್ನು ಪ್ರವೇಶಿಸಿತು.

ಕಂಬದೊಳಗಿನ ದೈವಗಣಗಳು ಉಸಿರು ಬಿಗಿಹಿಡಿದು ಕಾಯುತೊಡಗಿದವು.

"ಇವತ್ತು ಅವನ ಹುಟ್ಟಿದ ದಿನ. ಅವನು ಏನೆಲ್ಲಾ ಬೇಡಿಕೊಂಡಿದ್ದಾನೋ ಅದೆಲ್ಲಾ ಸತ್ಯವಾಗುವಂತೆ ಅನುಗ್ರಹಿಸು ದೇವರೇ"
ಹಾಗೆಂದು ಅವಳು ಮನಸ್ಪೂರ್ತಿಯಾಗಿ ಪ್ರಾರ್ಥಿಸಿದಳು.

ದೈವಗಣಗಳ ಕಣ್ಣು ತುಂಬಿ ಬಂತು.

ದೇವರು ಭಾರಹೃದಯದಿಂದ ತಲೆಯಾಡಿಸಿದ.

('ಓ ಮನಸೇ'ಲ್ಲಿ ಪ್ರಕಟಿತ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...