ಬುಧವಾರ, ಅಕ್ಟೋಬರ್ 28, 2015

ಮೊದಲ ತೊದಲು...

ನಮಸ್ಕಾರ.. ಸ್ವಾಗತ ನನ್ನ ಬ್ಲಾಗ್ ಗೆ... :-)

ನಾನು ವಿನಾಯಕ ಭಟ್. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಅನ್ನೋ ಚಂದದ ಮಲೆನಾಡಿನ ಹಳ್ಳಿ ನನ್ನೂರು. ಸದ್ಯಕ್ಕೆ ಅನ್ನ ಹುಡುಕಿಕೊಂಡಿರೋದು ಬೆಂಗಳೂರಿನಲ್ಲಿ.
ಹುಟ್ಟಿ ಬೆಳೆದ ಊರಿನಲ್ಲಿ ಉದ್ಯೋಗ ಹುಟ್ಟದೇ ಅದೃಷ್ಟವನ್ನ ಅರಸಿಕೊಂಡು ಪಟ್ಟಣ ಸೇರಿ,  Settle ಆಗಲು ಸರ್ಕಸ್ ಮಾಡುತ್ತಿರವ  ಲಕ್ಷಾಂತರ ಎಡಬಿಡಂಗಿಗಳಲ್ಲಿ ನಾನೂ ಒಬ್ಬ. ಹೇಳಿಕೊಳ್ಳುವಂತಹ ವಿಶೇಷತೆಗಳಿಲ್ಲದ ಸಾಮಾನ್ಯ ವ್ಯಕ್ತಿ; ಜೀವನದ ಪ್ರತಿಯೊಂದು ಸಂಗತಿಯನ್ನೂ ಭಾವುಕ ನೆಲೆಯಲ್ಲೇ ನೋಡುವವನು.
ಬರೆಯಬೇಕು ಅನ್ನೋದು ತೀರಾ ಚಿಕ್ಕಂದಿನಲ್ಲೇ ನನಗಂಟಿಕೊಂಡ "ಹುಚ್ಚು". ಓದು ಮುಗಿಸಿ ಬೆಂಗಳೂರಿಗೆ ಬಂದಮೇಲೆ ಇಲ್ಲಿನ ಜನರ ವೇಗ, ಬದುಕಿನ ಓಘವನ್ನ ನೋಡಿ ಕಾಡಲಾರಂಭಿಸಿದ "ನಾನು ಏನೂ ಅಲ್ಲ" ಎನ್ನುವ ಕೀಳರಿಮೆಯಿಂದ ಹೊರಬರಲು ನೆರವಾದ ಗೆಳೆಯ - ಮತ್ತದೇ ಬರಹ. ಹಾಗಂತ ತೀರ ಗಂಭೀರ ವಿಷಯಗಳ ಬಗ್ಗೆ ಬರೆಯುವಷ್ಟು ಬರಹಗಾರನಂತೂ ಖಂಡಿತ ಅಲ್ಲ. ತೋಚಿದ್ದನ್ನ-ಗೀಚಿದ್ದನ್ನ ನಾಲ್ಕು ಜನರೊಂದಿಗೆ ಹಂಚಿಕೊಳ್ಳಬೇಕೆಂಬ ಅಭಿಲಾಶೆಯೊಂದಿಗೆ, "ನಾಲ್ಕು ಜನ ಓದುವ ಮಟ್ಟಕ್ಕೆ ನಾನು ಬರೆಯಬಲ್ಲೆನಾ?" ಅನ್ನುವ ಭಯದ ಗುಮ್ಮನನ್ನ ಜೊತೆಯಲ್ಲಿಟ್ಟುಕೊಂಡೇ ಈ "ಬ್ಲಾಗ್" ಲೋಕಕ್ಕೆ ಕಾಲಿಡುತ್ತಿದ್ದೇನೆ.

ಕೆದಕಿದಷ್ಟೂ ಹೊಸತನದ ಪದರಗಳನ್ನ ಬಿಚ್ಚುವ ಬೆಂಗಳೂರು,  ಮುಗಿಯದ ಮಮತೆ ತೋರುವ ಅಪ್ಪ-ಅಮ್ಮ, ಕಾಡುವ ಬಾಲ್ಯದ ನೆನಪು, ಒಮ್ಮೆ ಖುಷಿಯ ಆಕಾಶದಲ್ಲಿ ತೇಲಿಸಿ, ಮರುಕ್ಷಣವೇ ಖಿನ್ನತೆಯ ಪಾತಾಳಕ್ಕೆ ನೂಕಿಬಿಡುವ ಹುಚ್ಚು ಭಾವನೆಗಳು, "ಹೆದರ್ಬೇಡ್ವೋ ಭಟ್ಟ, ನಾವಿದೀವಿ" ಅಂತ ಪ್ರತಿ ಗಂಡಾಂತರದಲ್ಲೂ ಜೊತೆನಿಲ್ಲುವ ಗೆಳೆಯರು, ಸನಿಹವೂ ನಿಲ್ಲದೇ, ದೂರನೂ ಹೋಗದೇ ಒಗಟಾಗಿ ಕಾಡುವ ಒಲವು.... ಇನ್ನೇನು ವಿಷಯ ಬೇಕು ಹೇಳಿ ಬರೆಯೋದಕ್ಕೆ? ತಿದ್ದಿತೀಡೋದಕ್ಕೆ ನೀವಿದ್ದೀರಿ; ಇನ್ನು ನನ್ನ "ಯಾನ"ವನ್ನ ಆರಂಭಿಸಬಹುದಲ್ವ....?

ಸ್ನೇಹಾಭಿಲಾಷೆಯೊಂದಿಗೆ
ವಿನಾಯಕ ಭಟ್

9 ಕಾಮೆಂಟ್‌ಗಳು:

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...