ಭಾನುವಾರ, ನವೆಂಬರ್ 12, 2017

ಪುಳಿಯೋಗರೆ ಉಡ್ಡಯನ!



ಬ್ರಹ್ಮಚಾರಿ ಜೀವನದ ಸಾರ್ವತ್ರಿಕ ಸಮಸ್ಯೆಗಳಲ್ಲಿ ಅಡಿಗೆ ಮಾಡಿಕೊಳ್ಳುವುದೂ ಒಂದು ಎನ್ನುವುದು ನನಗೆ ತುಂಬಾ ತಡವಾಗಿ ಅರ್ಥವಾದ ಸತ್ಯ. ಈ ಮೊದಲು ಕೆಲವು ಗೆಳೆಯರು "ಹೊರಗಡೆ ತಿಂದೂ ತಿಂದೂ ಸಾಕಾಗಿದೆ ಮಗಾ. ಬೇಗ ಮದುವೆ ಆಗ್ಬೇಕು" ಎಂದರೆ "ಅಲ್ವೋ ಒಂದು ಪ್ಲೇಟ್ ಚಿತ್ರಾನ್ನ, ಎರೆಡು ಪ್ಲೇಟ್ ಸೌತ್ ಮೀಲ್ಸ್'ಗೋಸ್ಕರ ಫೈವ್ ಸ್ಟಾರ್ ಹೋಟೆಲ್ನೇ ಪರ್ಚೇಸ್ ಮಾಡ್ತೀನಿ ಅಂತೀಯಲ್ಲೋ" ಎಂದು ತೀರಾ ಉಡಾಫೆಯಿಂದ ನಗುತ್ತಿದ್ದೆ. ಹುಟ್ಟಿದ ಮೊದಲ ಇಪ್ಪತ್ತೊಂದು ವರ್ಷ ಅಮ್ಮನ ಕೈಯ್ಯಡಿಗೆ ಸವಿಯುತ್ತಾ ಕಳೆದವನು ನಾನು. ನನ್ನ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ, ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ಮೊದಲ ಎರೆಡು ಕಂಪನಿಯವರೂ ಅತೀ ಕಡಿಮೆಬೆಲೆಗೆ ಮೂರು ಹೊತ್ತೂ ಊಟ ಕೊಟ್ಟಿದ್ದರು. ಇನ್ನು ರಜೆ ಇದ್ದ ಶನಿವಾರ ಭಾನುವಾರಗಳ ಬೆಳಗ್ಗೆ ಹಸಿವಾದರೆ ಅಕ್ಕಿ ಗಂಜಿ, ಇಲ್ಲದಿದ್ದರೆ ಹಾಪ್ ಕಾಮ್ಸ್'ನ ಬಾಳೇಹಣ್ಣು. ಮಧ್ಯಾಹ್ನ, ರಾತ್ರೆಗಳ ಊಟಕ್ಕೆ ಒಂದೋ ನೆಂಟರ ಮನೆ, ಇಲ್ಲವಾದರೆ ಮುಕ್ಕಾಲು ಲೋಟ ಅಕ್ಕಿಯನ್ನು ಮುಕ್ಕಾಲು ಬಟ್ಟಲು ನೀರಿನಲ್ಲಿ ಮುಳುಗಿಸಿ, ಇಂಡಕ್ಷನ್ ಒಲೆಯಮೇಲಿಟ್ಟು ಬೇಯಿಸಿ ಕೊನೆಗೆ ತಯಾರಾಗುವ, ಹೆಚ್ಚೂಕಡಿಮೆ ಅನ್ನವನ್ನೇ ಹೋಲುವ ಪದಾರ್ಥವನ್ನು ಹತ್ತಿರದ ಹೋಟೆಲ್ನಿಂದ ತಂದ ಸಾಂಬಾರಿನಲ್ಲಿ ಕಲಸಿಕೊಂಡು ತಿನ್ನುತ್ತಾ "ಎಲ್ಲಾ ಸೋಂಬೇರಿಗಳೂ ಹೋಟೆಲ್ನಲ್ಲಿ ತಿನ್ನುವಾಗ ರೂಮ್ನಲ್ಲೇ ಅಡಿಗೆ ಮಾಡಿಕೊಳ್ಳೋ ನಾವೆಷ್ಟು ಶ್ರಮಜೀವಿಗಳು ಅಲ್ವಾ ಮಗಾ?" ಎಂದು ರೂಮ್ ಮೆಟ್ ಹತ್ರ ಜಂಭಕೊಚ್ಚಿಕೊಳ್ಳುತ್ತಿದ್ದೆ.  ಹೀಗೆ ಒಟ್ಟಾರೆ ಬದುಕಿನ ಇಪ್ಪತ್ತಾರು ವರ್ಷಗಳು ಅಡಿಗೆಯೆಂಬ ಉಸಿರಾಟದಷ್ಟೇ ಸಹಜವಾದ, ಆದರೆ ಅಷ್ಟೇ ನಾಜೂಕಾದ ಕ್ರಿಯೆಯನ್ನು ಕಲಿಯದೆಯೇ ಕಳೆದುಹೋಗಿತ್ತು. ಕಾಳುಶ್ರಮವಿಲ್ಲದೇ ತಿನ್ನುತ್ತಿದ್ದ ಆಹಾರವೇನೂ ಸುಮ್ಮನೆ ಗಂಟಲಿಗಿಳಿಯುತ್ತಿರಲಿಲ್ಲ. "ಇದೇನಮ್ಮ, ದಿನಾ ಇದೇ ದೋಸೆ, ಉಪ್ಪಿಟ್ಟು, ರೊಟ್ಟಿ ಮಾಡ್ತೀಯಾ", "ಯಾರ್ ಗುರೂ ಅಡಿಗೆ ಮಾಡಿದ್ದು? ಬರೀ ಬಟಾಣಿ ಹಾಕಿ ಬೇಯ್ಸಿದಾರೆ", " ಏನ್ರೀ ಇವ್ರು, ಅನ್ನ ಸರಿಯಾಗಿ ಬೆಂದೇ ಇಲ್ಲ. ಹೋದವಾರ ಮಾಡಿದ್ದೇ ಮತ್ತೆ ಮಾಡಿದಾರೆ" ಎಂಬ ಇನ್ನೂ ಮುಂತಾದ ಟೀಕೆಗಳು ಅನ್ನ ಇಳಿದ ಅದೇ ಗಂಟಲಿನಿಂದ ಹೊರಬರುತ್ತಿದ್ದವು. ಆದರೆ ಕೇವಲ ಮೊವತೈದು ರುಪಾಯಿಗೆ ತಿಂಗಳಿಡೀ ಊಟ ಕೊಡುತ್ತಿದ್ದ ಎರೆಡನೇ ಕಂಪನಿಯನ್ನೂ ಬಿಟ್ಟೆನೋಡಿ? ಆಗಲೇ ಗೊತ್ತಾಗಿದ್ದು- ಅನ್ನದ ಹಾಗೂ ಅನ್ನದಾತರ ಮಹತ್ವ.

ಊಟದ ಮಟ್ಟಿಗೆ ಹೊಸ ಕಂಪನಿ ಹೊಸ ಹೊಸ ಸಮಸ್ಯೆಗಳನ್ನೊಡ್ಡಿತ್ತು. ಮೊದಲ ದಿನ ಮಧ್ಯಾಹ್ನವೇ ಶುರುವಾಯಿತು ಊಟದ ಬೇಟೆ. ಕಂಪನಿಯಿದ್ದ ಸುಮಾರು ಅರ್ಧ-ಮುಕ್ಕಾಲು ಕಿಲೋಮೀಟರ್ ಸುತ್ತಳತೆಯಲ್ಲಿ ಒಂದೇ ಒಂದು ಚಿಕ್ಕ-ಚೊಕ್ಕ ಹೋಟೆಲ್ ಕಣ್ಣಿಗೆ ಬೀಳಲಿಲ್ಲ. ಇದ್ದ ಒಂದೇ ಒಂದು ಹೋಟೆಲಿಗೆ ನುಗ್ಗಿ 'ಒಂದು ಸೌತ್ ಮೀಲ್ಸ್' ಎಂದು ನೂರರ ನೋಟು ಚಾಚಿದೆ. ನೋಡ ನೋಡುತ್ತಿದ್ದಂತೆ ನನ್ನ ಕೈಲಿದ್ದ ನೂರರ ನೋಟನ್ನು ಕಸಿದುಕೊಂಡ ಕ್ಯಾಶಿಯರ್ ಬಡ್ಡೀಮಗ ಮರಳಿಕೊಟ್ಟಿದ್ದು ಬರೀ ಹತ್ತು ರೂಪಾಯಿಯನ್ನ! ಕೆಲವೇ ಸೆಕೆಂಡ್'ಗಳ ಕೆಳಗೆ ನೂರರ ನೋಟಿದ್ದ ಕೈಗೀಗ ಬರೀ ಹತ್ತರ ಹರಕು ನೋಟು ಬಂದ ಅದ್ಭುತವನ್ನು ಪೆಚ್ಚಾಗಿ ನೋಡುತ್ತಾ ನಿಂತ ನನಗೆ ಬೆಂಗಳೂರು ಸಿಂಗಾಪುರ ಆಗಿದೆ ಅನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ.

ಈಗ ಮಧ್ಯಾಹ್ನದೂಟಕ್ಕಿರುವ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸತೊಡಗಿದೆ. ಒಂದೊತ್ತಿನ ಊಟಕ್ಕೆ ಸಾವಿರಗಟ್ಟಲೆ ತೆರುವುದಕ್ಕೆ ನಾನು ಯಾವ ಅಂಬಾನಿಯ ಅಳಿಯನೂ ಅಲ್ಲ. ಅಮ್ಮ ಸೂಚಿಸಿದ 'ಮದುವೆ ಆಗ್ಬಿಡು' ಎನ್ನುವುದು ಅತ್ಯಂತ ದುಬಾರಿ ಹಾಗೂ ಅಪಾಯಕಾರಿ ಮಾರ್ಗ. ಇನ್ನುಳಿದ ಏಕೈಕ ದಾರಿ ರೂಮಿನಲ್ಲೇ ಮಾಡಿಕೊಳ್ಳುವುದು. ಅಂದಹಾಗೇ ಇದು ಈಗ ಹೊಳೆದ ಉಪಾಯವೇನೂ ಆಗಿರಲಿಲ್ಲ. ಈ ಕಂಪನಿಗೆ ಆಯ್ಕೆಯಾದಾಗ "ಮಧ್ಯಾಹ್ನ ಊಟಕ್ಕೇನು ಮಾಡ್ತೀಯ?" ಎಂದು ಕೇಳದವರಿಗೆಲ್ಲ "ಪುಳಿಯೋಗರೆ, ಚಿತ್ರಾನ್ನ, ಉಪ್ಪಿಟ್ಟು... ಹೀಗೇ ಏನಾದ್ರೂ ರೂಮಲ್ಲೇ ಮಾಡಿ ತಗೊಂಡೋಗ್ತೀನಿ" ಎಂದು ಎದೆಯುಬ್ಬಿಸಿಕೊಂಡು ಹೇಳಿದ್ದೆ. ಅವರು ಅಚ್ಚರಿಯಲ್ಲಿ "ಅರೆರೇ ಹೌದಾ? ಶಭಾಶ್!" ಎಂದು ಮೆಚ್ಚಿದಾಗ ವೀರ ಕರ್ನಲ್'ನಂತೆ ಮೀಸೆ ತಿರುವಿಕೊಂಡಿದ್ದೆ. ಆದರೆ ಅಪ್ಪೀತಪ್ಪೀ ಯಾರಾದರೂ ಒಬ್ಬ "ಏನು ಹಾಕಿ ಉಪ್ಪಿಟ್ಟು ಮಾಡ್ತೀಯಪ್ಪ ನಳಮಹಾರಾಜ?" ಎಂದು ಕೇಳಿದ್ದರೂ ಉತ್ತರಕ್ಕೆ ನಾಲ್ಕು ಆಪ್ಶನ್ ಕೇಳುತ್ತಿದ್ದೆನೆನ್ನುವುದು ನನಗೆ ಮಾತ್ರ ಗೊತ್ತಿದ್ದ ಸತ್ಯ! ಇನ್ನಷ್ಟೇ ಕಲಿತು ಅಡಿಗೆ ಮಾಡಬೇಕಾದವನು, ಈಗಾಗಲೇ ಬಂಡಿಗಟ್ಟಲೆ ಬೇಯಿಸಿ ಬಿಸಾಕಿರುವ ಬಾಣಸಿಗನಂತೆ ಫೋಸ್ ಕೊಟ್ಟಿದ್ದೆ. ಅದ್ಯಾವ ಶಕುನ ದೇವತೆ ಅಸ್ತು ಅಂದಿದ್ದರೋ ಗೊತ್ತಿಲ್ಲ, ಆ ಸುಳ್ಳು ಸತ್ಯವಾಗುವ ಕಾಲವೀಗ ಬಂದೇಬಿಟ್ಟಿತು.

ಸಂಜೆ ಬಂದವನೇ ನೇರ ಅಂಗಡಿಗೆ ಹೋಗಿ "ಪುಳಿಯೋಗರೆ ಮಿಕ್ಸ್ ಯಾವ್ದ್ಯಾವ್ದಿದೆ?" ಎಂದೆ. ಮುತ್ತಿಕೊಂಡಿದ್ದ ಗ್ರಾಹಕರ ನಡುವೆ ಸುಸ್ತಾಗಿದ್ದ ಅಂಗಡಿಯವನು "ಅಯ್ಯಂಗಾರ್ ಇದೆ ಕೊಡ್ಲಾ ಸರ್?" ಎಂದ. ನನಗೆ ಗೊತ್ತಿರೋ ಮಟ್ಟಿಗೆ ಈ ಅಯ್ಯಂಗಾರಿಗಳು ಎಂದರೆ ತಮಿಳುನಾಡಿನವರೋ, ಕೇರಳದವರೋ ಇರಬೇಕು. "ಅವರ ಶೈಲಿ ನಂಗೆ ಅಷ್ಟಾಗಿ ಆಗಿಬರೋಲ್ಲ. ನಮ್ಮೂರಿನ ಈ ಅಡಿಗ, ಐತಾಳ, ಭಟ್ಟ ಅಂತ ಯಾವ್ದಾದ್ರೂ ಇದ್ಯಾ ಗುರೂ?" ಎಂದು ಕೇಳಬೇಕೆಂದುಕೊಂಡೆ. ಆದರೆ ಅವನ ಪಕ್ಕದಲ್ಲಿದ್ದ ತಕ್ಕಡಿಯ ತೂಕದ ಕಲ್ಲು ಹಾಗೂ ಅವನ ಅಸಮಾಧಾನದ ಮುಖ ನೋಡಿ ಭಯವಾಗಿ 'ಭಾರತೀಯರೆಲ್ಲ ಒಂದೇ' ಎಂಬ ನಿರ್ಧಾರಕ್ಕೆ ಬಂದು "ಸರಿ, ಅಯ್ಯಂಗಾರನ್ನೇ ಕೊಡಿ" ಎಂದೆ. ಜೊತೆಗೆ ಎರೆಡು ವಾರಕ್ಕಾಗುವಷ್ಟು ಅಡಿಗೆ ಎಣ್ಣೆಯನ್ನೂ ಖರೀದಿಸಿ ರೂಮಿಗೆ ಬಂದು ಪವಡಿಸಿದೆ. ನಿದಿರೆಯಲ್ಲಿ ನಾನು ಭರ್ಜರಿ ಪುಳಿಯೋಗರೆ ಮಾಡಿದಂತೆ, ಅದನ್ನು ನನ್ನ ಹೊಸ ಸಹೋದ್ಯೋಗಿಗಳೆಲ್ಲ ಚಪ್ಪರಿಸಿಕೊಂಡು ತಿಂದು ಡರ್ರನೆ ತೇಗಿದಂತೆ ಕನಸು ಕಂಡು ಮಲಗಿದಲ್ಲೇ ಬೆನ್ನು ತಟ್ಟಿಕೊಂಡೆ.

ಕೊನೆಗೂ ನನ್ನ ಪುಳಿಯೋಗರೆ ಪ್ರಯೋಗದ ಹಗಲು ಬಂದೇಬಿಟ್ಟಿತು. ಒಂದು ಗಂಟೆ ಮುಂಚೆಯೇ ಎದ್ದು ಯಾವ ಫೈವ್ ಸ್ಟಾರ್ ಹೋಟೆಲಿನ ಅಡಿಗೆಭಟ್ಟನಿಗೂ ಕಮ್ಮಿ ಇಲ್ಲದಂತೆ ಆಪ್ರೋನ್ ಕ್ಲಾತ್ ಕಟ್ಟಿಕೊಂಡು ತಯಾರಾದೆ. ಒಂದು ಆ್ಯಂಗಲ್'ನಿಂದ ಅನ್ನದಂತೇ ಕಾಣುತ್ತಿದ್ದ ಪದಾರ್ಥವನ್ನು ತಯಾರಿಸಿ ಪಕ್ಕಕ್ಕಿಟ್ಟೆ.

ಮುಂದಿನ ಸರದಿ ಪುಳಿಯೋಗರೆ ಮಿಕ್ಸ್ ನದು!

ಸ್ಟೀಲ್ ಪಾತ್ರೆಯನ್ನು ಇಂಡಕ್ಷನ್ ಒಲೆಯ ಮೇಲಿಟ್ಟು ಚಾಲೂಮಾಡಿದೆ. ಪಾತ್ರೆಯೊಳಕ್ಕೆ ಪಾಮಾಯಿಲನ್ನು ಸುರಿದು ಬಾಯಿ ಒಡೆದ ಪುಳಿಯೋಗರೆ ಪೊಟ್ಟಣ ತೆಗೆದುಕೊಂಡೆ. ಅರೆಕ್ಷಣದಲ್ಲಿ ಎಣ್ಣೆ ಚಿಟಿಚಿಟಿಗುಟ್ಟಲು ಪ್ರಾರಂಭಿಸಿತು. ಅಲ್ಲಿಯ ತನಕ ಎಲ್ಲವೂ ಸರಿಯಾಗಿಯೇ ಇತ್ತು, ಆದರೆ ಕೈಲಿದ್ದ ಪೊಟ್ಟಣದ ಅಷ್ಟೂ ಪುಳಿಯೋಗರೆ ಪುಡಿಯನ್ನು ಪಾತ್ರೆಯೊಳಕ್ಕೆ ಸುರಿದು ಮುಖದ ತುಂಬಾ ಕಣ್ಣಿದ್ದ 'ಕಣ್ ಸೆಟ್ಗ'ದಿಂದ ಅಲ್ಲಾಡಿಸತೊಡಗಿದೆ ನೋಡಿ,  ಇದ್ದಕ್ಕಿದ್ದಂತೆಯೇ ಎದುರಿದ್ದ ಪಾತ್ರೆಯೊಳಗೆ ಕೋಲಾಹಲ ಆರಂಭವಾಯಿತು! ಒಳಗಿದ್ದ ಎಣ್ಣೆ ಈಗಷ್ಟೇ ಬಂದ ಅಪರಿಚಿತ ಪುಳಿಯೋಗರೆ ಪುಡಿಯ ಜೊತೆ ಚಿಟಿಚಿಟಿಯೆನ್ನುತ್ತಾ ಭೀಕರ ಹೋರಾಟಕ್ಕಿಳಿಯಿತು. ಬೇಯುತ್ತಿದ್ದ ಪುಳಿಯೋಗರೆ ಪುಡಿ ಕಪ್ಪುಬಣ್ಣಕ್ಕೆ ತಿರುಗತೊಡಗಿತು. ಈ ಮಾರಾಮಾರಿಕಂಡು ಗಾಬರಿಯಾದ ನಾನು ಒಲೆಯ ಸ್ವಿಚ್ ಆರಿಸಿ ಕೈ ಹಿಂದೆತರುತ್ತಿದ್ದೆ...

ಢಮಾರ್!

ಅದ್ಯಾವ ರಾಸಾಯನಿಕ ಕ್ರಿಯೆ ನಡೆಯಿತೋ, ಎಣ್ಣೆ-ಪುಳಿಯೋಗರೆಪುಡಿಗಳ ಅದ್ಯಾವ ಅಣು-ಪರಮಾಣುಗಳು ಕಚ್ಚಾಡಿಕೊಂಡವೋ ಗೊತ್ತಿಲ್ಲ, ದೊಡ್ಡ ಸದ್ದಿನೊಂದಿಗೆ ಸ್ಫೋಟ ಸಂಭವಿಸಿ ಪಾತ್ರೆಯೇ ಅಲ್ಲಾಡಿಹೋಯಿತು. ಬೆಚ್ಚಿಬಿದ್ದ ನಾನು ಬಾಂಬ್ ಸ್ಫೋಟಕ್ಕ ಸಿಲುಕಿದವನಂತೆ ಛಂಗನೆ ನೆಗೆದು ಪಕ್ಕದಲ್ಲಿದ್ದ ಮಂಚವೇರಿಕುಳಿತೆ!

ಸುಟ್ಟ ಹೊಗೆ, ಕರಟಿದ ವಾಸನೆ, ಮೇಜಿನ ಮೇಲೆಲ್ಲಾ ಚೆಲ್ಲಾಪಿಲ್ಲಿಯಾದ ಕಡಲೆಬೀಜ-ಪುಳಿಯೋಗರೆ ಪುಡಿಗಳು...  ಉಪಗ್ರಹವನ್ನು ಹೊತ್ತ ರಾಕೇಟೊಂದು ಈಗಷ್ಟೇ ಬಾಹ್ಯಾಕಾಶಕ್ಕೆ ಹಾರಿದ ಜಾಗದಲ್ಲಿ ಇರುವಂತಹಾ ಎಲ್ಲಾ ಲಕ್ಷಣಗಳೂ ಅಲ್ಲಿದ್ದವು. ಪುಣ್ಯಕ್ಕೆ ಒಲೆಯ ಸ್ವಿಚ್ಚನ್ನು ನಾನಾಗಲೇ ಆರಿಸಿದ್ದರಿಂದ ಸ್ಫೋಟ ಅಲ್ಲಿಗೇ ನಿಂತಿತು. ಆಗಿದ್ದಾದರೂ ಏನೆಂಬುದೇ ಅರಿವಾಗದೆ ಕಂಗಾಲದ ನಾನು ಮೆಲ್ಲನೆ ಸುಧಾರಿಸಿಕೊಂಡೆ. ನಾನು ಕೊಂಡು ತಂದದ್ದು ಪುಳಿಯೋಗರೆ ಪುಡಿಯೋ ಅಥವಾ ಬೇರ್ಯಾವ ಆಸ್ಫೋಟನಾಕಾರಿ ಸಾಮಗ್ರಿಯೋ ಎಂದು ಪರೀಕ್ಷಿಸಿದೆ. ಯಾರಿಗೆ ಗೊತ್ತು? ಆಲ್-ಖೈದಾದವರೋ, ಇನ್ಯಾವ ಉಗ್ರ ಸಂಘಟನೆಯವರೋ ಪುಳಿಯೋಗರೆ ಪ್ಯಾಕ್ನಲ್ಲಿ ಪುಡಿಪುಡಿ ಬಾಂಬ್ ತುಂಬಿಸಿ ಕಳಿಸಿರಲಿಕ್ಕೂ ಸಾಕು! ಅಥವಾ ಮೊದಲು ನಾನು ಅಯ್ಯಂಗಾರನ್ನು ಬೇಡ ಅಂದಿದ್ದನ್ನೇನಾದರೂ ಕೇಳಿಸಿಕೊಂಡ, ಇಲ್ಲೇ ಎಲ್ಲೋ ತೆಲಾಡುತ್ತಿರುವ ಯಾವದೋ ಅಯ್ಯಂಗಾರಿ ಆತ್ಮ ಹೀಗೆ ಮಾಡಿದ್ದರೂ ಮಾಡಿರಬಹುದು.

ಸಂಜೆ ಈ ಘಟನೆಯ ಕುರಿತಾದ ಸಮಗ್ರ ವರದಿಯೊಂದನ್ನು ತಯಾರಿಸಿ, ಗೆಳತಿಯೊಬ್ಬಳಿಗೆ ಒಪ್ಪಿಸಿ ಅವಳ ತಜ್ಞ ಅಭಿಪ್ರಾಯ ಕೇಳಿದೆ. ಎರೆಡು ನಿಮಿಷಗಳ ಕಾಲ ಸುಧೀರ್ಘವಾಗಿ ನಕ್ಕ ಅವಳು ಒಲೆಯ ಉಷ್ಣದ ಪ್ರಮಾಣ ಜಾಸ್ತಿ ಇದ್ದುದು ಹಾಗೂ ಸ್ಟೀಲ್ ಪಾತ್ರೆಗೆ ಪಾಮಾಯಿಲ್ ಹಿಡಿಸದೇ ಹೋಗಿದ್ದೇ ಈ ಸ್ಫೋಟಕ್ಕೆ ಕಾರಣವೆಂದು ತೀರ್ಪುಕೊಟ್ಟಳು. ಅಲ್ಲದೆ ತಾನು ಅಡಿಗೆ ಮಾಡತೊಡಗಿದ್ದ ಆರಂಭದಲ್ಲೂ ಹೀಗೇ  ಆಗುತ್ತಿತ್ತೆಂದು ಹೇಳಿ 'ಆಸ್ಫೋಟವಿಲ್ಲದೆ ಅಡಿಗೆ ಕಲಿತವರಿಲ್ಲವೈ' ಎಂದು ಸಮಾಧಾನಮಾಡಿದಳು.

ಅಂದು ಮಧ್ಯಾಹ್ನ ಮತ್ತೆ ಹೋಟೆಲ್ನಲ್ಲಿ ಹತ್ತರ ಹರಕು ನೋಟು ಹಿಡಿದುಕೊಂಡು ಸೋಡಬೆರೆಸಿದ ಅನ್ನತಿನ್ನುತ್ತಾ ಕುಳಿತಿದ್ದಾಗ ಹಿಂದಿನ ಕಛೇರಿಯಲ್ಲಿ ಪ್ರೀತಿಯಿಂದ ಬಡಿಸುತ್ತಿದ್ದ ಹೆಡ್ ಕುಕ್ ಅಜ್ಜಿ, ಮನೆಯಿಂದ ತಂದದ್ದನ್ನು ಹಂಚಿಕೊಳ್ಳುತ್ತಿದ್ದ ಸಹೋದ್ಯೋಗಿಗಳು, ಕೇಳಿದ್ದನ್ನೆಲ್ಲ ಬೇಸರವಿಲ್ಲದೆ ಮಾಡಿ ಬಡಿಸುವ ಅಮ್ಮ ಕಣ್ಮುಂದೆ ನಿಂತಂತಾಯಿತು. ಎದ್ದು ಕೈ ತೊಳೆದುಕೊಂಡೆ. ಸಿಂಕಿನಲ್ಲಿ ಮುಖಕ್ಕೆರಚಿಕೊಂಡ ನೀರಿನ ಜೊತೆಗೆ ಒಂದೆರೆಡು ಕಣ್ಣ ಹನಿಗಳೂ ಸದ್ದಿಲ್ಲದೇ ಜಾರಿಹೋದವು.

(12-11-2017ರ ವಿಶ್ವವಾಣಿ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಿತ)

ಸೋಮವಾರ, ನವೆಂಬರ್ 6, 2017

ಮರೆವಿನೊಳಗಿನ ಮಹಲು

"ಏನಾದ್ರೂ ಕಳ್ಕೊಂಡ್ರಾ ಅಜ್ಜಿ?"

ಒಂದು ಕೈಯ್ಯಲ್ಲಿ ಕೈಚೀಲವನ್ನು ಹಿಡಿದು, ಇನ್ನೊಂದರಿಂದ ಬಗಲಲ್ಲಿರುವ ವ್ಯಾನಿಟಿ ಬ್ಯಾಗ್ ನೊಳಗೆ ತಡಕಾಡುತ್ತಿದ್ದ ಅಜ್ಜಿ ತಲೆಯೆತ್ತಿ ನೋಡಿದಳು. ಎದುರುಗಡೆ ಹಲ್ಕಿರಿಯುತ್ತಾ ನಿಂತಿದ್ದಾನೆ ಮುದುಕ! ತನಗಿಂತ ವಯಸ್ಸಾದವನು ತನ್ನನ್ನು 'ಅಜ್ಜಿ' ಎಂದದ್ದು ಆಕೆಗೆ ರೇಗಿಹೋಯಿತು. "ಅದೆಲ್ಲಾ ನಿಮಗ್ಯಾಕೆ? ಸುಮ್ಮನೆ ನಿಮ್ಮೆದೆಷ್ಟೋ ಅಷ್ಟು ನೋಡಿಕೊಂಡು ಮುಂದೆ ಹೋಗಿ" ಎಂದು ಮುದುರುಬಿದ್ದ ಕಣ್ಣುಗಳನ್ನು ಕೆಂಪಗೆಮಾಡುತ್ತಾ ಬಿರುಸಾಗಿ ನುಡಿದಳು.

"ಮುಂದೆ ಹೋಗು ಅನ್ನೋದಕ್ಕೆ ನಾನೇನು ಭಿಕ್ಷೆ ಕೇಳಿದೆನಾ? ಪರಿಚಯದ ಅಜ್ಜಿ,
 ಪಾಪ ಏನೋ ಹುಡುಕುತ್ತಿದ್ದಾರಲ್ಲಾ ಅಂತ ಕೇಳಿದೆ ಅಷ್ಟೇ" ವೃದ್ಧನ ಮುಖದಲ್ಲಿನ ಮಂದಹಾಸ ಹಾಗೇ ಇತ್ತು.

"ಏನು ಪರಿಚಯ? ನಾನಂತೂ ಇದೇ ಮೊದಲು ನಿಮ್ಮನ್ನ ನೋಡ್ತಿರೋದು. ಇನ್ನೆಲ್ಲಿಂದ ಬರ್ಬೇಕು ಪರಿಚಯ" ಮತ್ತೆ ಮತ್ತೆ ತನ್ನನ್ನು ಅಜ್ಜಿ ಎನ್ನುವ ಅಜ್ಜನ ಮೇಲೆ ಆಕೆಗಿನ್ನೂ ಕೋಪ ಹೋಗಿಲ್ಲ.

"ನೀವು ನೋಡದೇ ಇರಬಹುದು. ಆದರೆ ನಾನು ನೋಡಿದೀನಲ್ಲಾ! ನಿಮ್ಮ ಮನೆಯ ಹತ್ತಿರಾನೇ ನಾನೂ ಇರೋದು."

"ಅಷ್ಟಕ್ಕೇ ಹೀಗೆ ಮದ್ಯ ದಾರಿಯಲ್ಲಿ ಅಡ್ಡಹಾಕಿ ಮಾತನಾಡಿಸಬಹುದೂ ಅಂದುಕೊಂಡ್ರಾ? ಇಷ್ಟು ವಯಸ್ಸಾಗಿದೆ, ಸಭ್ಯತೆ ಬೇಡ್ವಾ?"

"ನೀವು ಏನು ಹುಡುಕ್ತಿದೀರಾಂತ ನಂಗೆ ಗೊತ್ತು ಅಜ್ಜೀ" ಅವಳ ಕೋಪವನ್ನ ಗಮನಿಸಿಯೇ ಇಲ್ಲದಂತೆ ನಗುತ್ತಾ ನುಡಿದರು.

"ಏನು?"

"ನಿಮ್ಮ ಮನೆಯ ವಿಳಾಸವಿರುವ ಚೀಟಿಯನ್ನ ತಾನೇ?"

"ಅದು..... ನಿಮಗ್ಹೇಗೆ ಗೊತ್ತಾಯ್ತು?" ಅಜ್ಜಿಗೆ  ಪರಮಾಶ್ಚರ್ಯ.

"ನನಗೆಲ್ಲಾ ಗೊತ್ತು. ನಾನೂ ಅತ್ತಕಡೆಯೇ ಹೊರಟಿದ್ದೇನೆ. ಬನ್ನಿ ನಿಮ್ಮನ್ನೂ ಮನೆ ತಲುಪಿಸ್ತೇನೆ" ಅಜ್ಜನ ಮುಖದಲ್ಲಿ ಗೆಲುವಿನ ಮಂದಹಾಸ.

"ನಾನ್ಯಾಕೆ ನಿಮ್ಮ ಜೊತೆ ಬರ್ಲಿ? ನನಗೆ ನಮ್ಮ ಮನೆಯ ದಾರಿ ಗೊತ್ತಿದೆ" ಅಜ್ಜಿಯ ಬಿಂಕದ ನುಡಿ.

"ಹಾಗಾದರೆ ಮತ್ಯಾಕೆ ವಿಳಾಸದ ಚೀಟಿ ಹುಡುಕ್ತಿದ್ರಿ?"

".................."

"ಪರವಾಗಿಲ್ಲ ಬನ್ನಿ. ನೀವು ಮನೇ ದಾರಿ ಮರೆತ್ರೀಂತ ನಿಮ್ಮ ಯಜಮಾನ್ರಿಗೆ ಹೇಳಲ್ಲ ನಾನು"

"ಅವರು ನಿಮಗೆ ಗೊತ್ತಾ?"  ಅಜ್ಜಿಗೆ ಮತ್ತೊಮ್ಮೆ ಅಚ್ಚರಿ.

"ಬುದ್ಧಿ ಬಂದಾಗಿಂದಾನೂ ಗೊತ್ತು"

"ಆದ್ರೆ ನಾನ್ಯಾವತ್ತೂ ನಿಮ್ಮನ್ನು ನೋಡೇ ಇಲ್ವಲ್ಲಾ?"

"ನಾನು ನೋಡಿದೀನಲ್ಲ"

ಹೆಜ್ಜೆಗಳು ಬೆರೆತು ಮುನ್ನಡೆದವು.

"ಅಲ್ಲಾ... ಮನೆ ದಾರಿ ಮರೆಯೋರು ಹೊರಗ್ಯಾಕೆ ಬರ್ತೀರ?" ಅಜ್ಜನ ಕುಹುಕ.

"ನಾನೇನು ದಾರಿ ಮರ್ತಿಲ್ಲ. ಈ ಬೆಂಗ್ಳೂರಲ್ಲಿ ಎಲ್ಲಾ ಬೀದಿಗಳು ಒಂದೇ ಥರಾ ಕಾಣ್ತಾವೆ. ಅದ್ಕೆ ಸ್ವಲ್ಪ ಗೊಂದಲ ಅಷ್ಟೇ"
ಸಮರ್ಥಿಸಿಕೊಳ್ಳುತ್ತಾ ಮುಂದುವರಿಸಿದಳು:
"ನಾಳೆಯಿಂದ ಬೇಸಿಗೆ ರಜೆ ಆರಂಭ. ನನ್ನ ಮೊಮ್ಮಗ ಬರ್ತಿದಾನೆ ಅಮೆರಿಕಾದಿಂದ. ಅವನಿಗೆ ದೂದ್ ಪೇಡ ಅಂದ್ರೆ ತುಂಬಾ ಇಷ್ಟ. ಆದ್ರೆ ಅವನಮ್ಮ ಇದೆಲ್ಲಾ ತಿನ್ನೋಕೆ ಬಿಡಲ್ಲ. ಅವಳಿಲ್ಲದಾಗ ನನ್ಹತ್ರ ಗಲಾಟೆ ಮಾಡ್ತಾನೆ ಪೇಡ ಕೊಡಿಸು ಅಂತ. ಅದಕ್ಕೆ ಈಗಲೇ ತಗೊಂಡೆ, ಅವರು ಬಂದ್ಮೇಲೆ ಪುರ್ಸೊತ್ತಾಗಲ್ಲ ಅಂತ."

"ಓಹೋ ಹೌದಾ....."

"ಸಣ್ಣವನಿದ್ದಾಗ ನನ್ನ ಮಗನಿಗೂ  ಹಾಗೇ, ಪೇಡ ಅಂದ್ರೆ ಪ್ರಾಣ. ಆಗೆಲ್ಲಾ ನಾನು ಮನೆಲೇ ಮಾಡಿಕೊಡ್ತಿದ್ದೆ. ಈಗ ವಯಸ್ಸಾಯ್ತು ನೋಡಿ. ಮಾಡೋಕಾಗಲ್ಲ"

"ಹಾಂ. ನಿಜ ನಿಜ. ಆದ್ರೂ ಅದಕ್ಕೆ ನೀವೇ ಬರ್ಬೇಕ? ಎಷ್ಟೊಂದು ವಾಹನಗಳು ಓಡಾಡೋ ರಸ್ತೆ ಇದು"

"ಇನ್ಯಾರಿದಾರೆ ಹೇಳಿ? ನನ್ನ ಹೆಂಡತಿ ಮಕ್ಕಳಷ್ಟೇ ನನ್ನ ಪ್ರಪಂಚ ಅಂತ ಮಗ ದೂರ ಹೋದ. ಇರೋ ಒಂದು ಕಿರಾಣಿ ಅಂಗಡಿಯೇ ನನ್ನ ಜಗತ್ತು  ಎನ್ನುತ್ತಾ ಗಂಡ ಹೊರಗೆ ಹೋಗ್ತಾರೆ. ಅಂದ್ಮೇಲೆ  ಇವರೆಲ್ಲರೂ ನನ್ನ ಪ್ರಪಂಚ ಅಂದುಕೊಂಡಿರುವ ನಾನೇ ಈ ಎಲ್ಲಾ ಕೆಲಸ ಮಾಡಬೇಕಲ್ವಾ.....?"
ಮುದುಕನ ಮುಖದಲ್ಲಿ ಕಳವಳಿಕೆಯೊಂದು ಹಾದು ಹೋಯಿತು.

"ಅಂದಹಾಗೇ ನಿಮ್ಮನೆಯಲ್ಲಿ ಈ ವಂದಲಗ ಏನಾದ್ರೂ ಬೆಳೆದಿದೀರ? ಇದ್ದರೆ ಇವರ ಹತ್ರ ಕೊಟ್ಟು ಕಳಿಸ್ತೀರ? ಅದರ ಲೇಹ ಮಾಡಿ ಕಳಿಸ್ಬೇಕು. ದಿನಾ ಬೆಳಗ್ಗೆ ತಿಂದ್ರೆ ಮೊಮ್ಮಗನ ನೆನಪಿನ ಶಕ್ತಿ ಹೆಚ್ಚಾಗುತ್ತೆ. ಪಾಪ, ಚಿಕ್ಕ ವಯಸ್ಸಿಗೇ ಅದೆಷ್ಟೆಲ್ಲಾ ಕಲೀಬೇಕು ಅವ್ನು ."

"ಹೂಂ, ಇರ್ಬೇಕು ನೋಡ್ತೀನಿ"

ಮನೆ ಬಂತು. ಬಾಗಿಲು ತೆರೆದ ಕೆಲಸದವಳು ವೃದ್ಧನನ್ನು ನೋಡಿ ತಲೆತಗ್ಗಿಸಿ ನಿಂತಳು. ಒಳಗೆ ಬಂದೊಡನೆಯೇ ಕೈಲಿದ್ದ ಪೇಡದ ಪೊಟ್ಟಣವನ್ನು ಫ್ರಿಜ್ಜಿನಲ್ಲಿಡಲೆಂದು ಅಡುಗೆ ಕೋಣೆಗೆ ನಡೆದವಳನ್ನೇ ನೋಡುತ್ತಾ ಅಜ್ಜ ಜೇಬಿನಿಂದ ಮೊಬೈಲ್ ತೆಗೆದು ಕಿವಿಗಿಟ್ಟುಕೊಂಡರು. "ಹಲೋ ಮಾಣಿ... ಹುಡುಕೋದು ಬೇಡ, ಅನುಸೂಯ ಸಿಕ್ಕಿದ್ಲು... ಮತ್ತೆ ಸ್ವೀಟ್ಸ್ ಅಂಗಡಿಗೆ ಹೋಗಿದ್ಲು, ಮೊಮ್ಮಗನಿಗೆ ಪೇಡ ತರ್ತೀನಿ ಅಂತ. ಮನೇಗೆ ಕರ್ಕೊಂಡ್ಬಂದೆ. ಕೆಲಸವಳು ಇದಾಳೆ ಜೊತೆಗೆ. ನೀನು ಅಂಗ್ಡೀಗೆ ಬಾ. ನಾನೂ ಹೊರ್ಟಿದೀನಿ....."

ಮೊಬೈಲ್ ಜೇಬಿಗಿಳಿಸಸಿದವರು ಅಲ್ಲೇ ನಿಂತಿದ್ದ ಕೆಲಸದವಳಿಗೆ  "ಜೋಪಾನ. ಮತ್ತೆ ಆಚೆ ಹೋಗದಂಗೆ ನೋಡ್ಕೋ" ಎಂದು ಗಡುಸುದನಿಯಲ್ಲಿ ತಾಕೀತು ಮಾಡಿದರು. ಅಷ್ಟರಲ್ಲಿ ಅವರ ನೋಟ ಗೋಡೆಯತ್ತ ಸರಿಯಿತು....

ಅಲ್ಲಿ  ತನ್ನ ಸುತ್ತಲೂ ಗಂಧದ ಹಾರ ಹಾಕಿಸಿಕೊಂಡು ತಣ್ಣಗೆ ನಗುತ್ತಾ ನಿಂತಿತ್ತು, ವರುಷದ ಕೆಳಗೆ ಅಪಘಾತಕ್ಕೀಡಾದ ಅವರ ಮಗ, ಸೊಸೆ ಹಾಗೂ ಮೊಮ್ಮಗನ ಫೋಟೋ....

ಅದನ್ನೇ ಅರೆಕ್ಷಣ ದಿಟ್ಟಿಸಿ ನಿಟ್ಟುಸಿರಿಟ್ಟು ಅಡಿಗೆ ಮನೆಯತ್ತ ಮತ್ತೊಮ್ಮೆ ತುಂಬುಗಣ್ಣಿಂದ ನೋಡಿದರು. ಭಾರವಾದ ಹೆಜ್ಜೆಗಳನ್ನಿಡುತ್ತಾ ಹೊರಗೆ ನಡೆದವರಿಗೆ ಬಾಗಿಲಿನಿಂದ ಹೇಳಿತು ಆ ದನಿ..

"ವಂದಲಗನ ಸೊಪ್ಪು ಮರೀಬೇಡೀ....."


(ವಿಶ್ವವಾಣಿ ಸಾಪ್ತಾಹಿಕ 'ವಿರಾಮ'ದ ೫-೧೧-೨೦೧೭ರ ಸಂಚಿಕೆಯಲ್ಲಿ ಪ್ರಕಟಿತ)

ಶನಿವಾರ, ನವೆಂಬರ್ 4, 2017

ರಜೆಯಲ್ಲಿ ಕಾಣುವ ಬೆಂಗಳೂರು

ನವೆಂಬರ್ ಒಂದು ಕೂಡಾ ಮುಗಿದಿದೆ. ಅಲ್ಲಿಗೆ 2017ರ ಕ್ಯಾಲೆಂಡರ್ ನ ರಜಾದಿನಗಳೆಲ್ಲ ಬಹುತೇಕ ಮುಗಿದಹಾಗೇ. ಕ್ರಿಸ್ಮಸ್ ಒಂದೇ ಉಳಿದುಕೊಂಡಿರುವ ಈ ಕ್ಯಾಲೆಂಡರ್ ನ ಕಟ್ಟಕಡೆಯ ಹಬ್ಬ.
ಈ ಸಾಲುಸಾಲು ರಜೆಗಳು ಬಂದಾಗ ಬೆಂಗಳೂರಿನಲ್ಲೆ ಉಳಿದುಹೋಗುವರಿಗೆ ಸಿಗುವ ಅತಿದೊಡ್ಡ ಖುಷಿ ಏನು ಗೊತ್ತಾ? ಖಾಲಿ ರೋಡುಗಳು ಹಾಗೂ ಖಾಲಿ ಬಸ್ಸುಗಳು! ಇಷ್ಟುದಿನ ಕಾಲು ಮುರಿದ ಆಮೆಯಂತೆ ಕುಗುರುತ್ತಾ ಸಾಗುತ್ತಿದ್ದ ಇದೇ ರಸ್ತೆಗಳಲ್ಲಿನ ವಾಹನಗಳಿಗೀಗ ಊರಿನ ಬಸ್ಸಿನಂತೆ ಸುಂಯ್ಯನೆ ಓಡತೊಡಗುತ್ತವೆ. ಅದೇಕೋ ಗೊತ್ತಿಲ್ಲ, ರಶ್ಶಿಲ್ಲದ ಬಿಎಂಟಿಸಿ ಗಳಲ್ಲಿ ಓಡಾಡುವುದೆಂದರೆ ನನಗೊಂಥರಾ ಖುಷಿ. ನಗರದೊಳಗಿನ ಅದೇ ಬನಶಂಕರಿ, ಜಯನಗರ, ಬಸವನಗುಡಿಗಳಲ್ಲಾಗಿರಬಹುದು ಅಥವಾ ಊರ ಹೊರಗಿನ ಯಲಹಂಕ, ಜಾಲಹಳ್ಳಿ, ಬಿಇಎಲ್ ಗಳಲ್ಲಾಗಿರಬಹುದು, ಇಷ್ಟುದಿನ ಬಸುರಿ ಹೆಂಗಸಿನಂತೆ ಮಾರಿಗೊಮ್ಮೆ ನಿಲ್ಲುತ್ತಾ, ಏದುಸಿರು ಬಿಡುತ್ತಾ, ಚಿಕ್ಕ ಏರು ಬಂದರೂ ಭರ್ರೋ ಎಂದು ಬೊಬ್ಬಿಡುತ್ತಾ, ಒಳಗೆ ಒಂಟಿಕಾಲಿನಲ್ಲಿ ನಿಂತ ಐಟಿಬಿಟಿ ತಪಸ್ವಿಗಳೆಲ್ಲ ಒಬ್ಬರ ಮೇಲೊಬ್ಬರು ಮಗುಚಿ ಬೀಳುವಂತೆ ಥಟಾಥಟ್ಟನೆ ಬ್ರೇಕುಹಾಕುತ್ತಾ, ಅಡ್ಡಬಂದ ಬೈಕಿನವನು ಮನೆಯಲ್ಲಿ ಹೇಳಿಬಂದಿದ್ದಾನಾ ಇಲ್ಲವಾ ಎಂದು ವಿಚಾರಿಸಿಕೊಳ್ಳುತ್ತಾ, ನಿಲ್ಲುತ್ತಾ, ತೆವಳುತ್ತಾ, ಚಲಿಸುತ್ತಿದ್ದ ಪ್ರಯಾಣವಿಂದು ತಂಗಾಳಿ ಮುಖಕ್ಕೆ ರಾಚುವಷ್ಟರಮಟ್ಟಿಗೆ ವೇಗವಾಗಿ ಓಡುತ್ತಿದೆ. ಇಷ್ಟುದಿನ ಉರಿಸಿದ್ದಪ್ಪನಂತೆ ಭುಸುಗುಟ್ಟುತ್ತಿದ್ದ ಕಂಡಕ್ಟರ್ ಇಂದು ಉಲ್ಲಾಸದಿಂದ "ಬೆಳ್ಳಿ ರಥದಲಿ ಸೂರ್ಯ ತಂದ ಕಿರಣಾ" ಎಂದು ಹಾಡುತ್ತಿದ್ದಾನೆ. ಎರೆಡು ರೂಪಾಯಿ ಚಿಲ್ಲರೆಗೇ ಮನೆ ಮಂದಿಯೆಲ್ಲರ ಮಾನ ಹರಾಜು ಹಾಕುತ್ತಿದ್ದವನಿಂದು ಏಳು ರೂ ಚಿಲ್ಲರೆಯನ್ನು ಸದ್ದಿಲ್ಲದೆ ಕೊಟ್ಟುಬಿಟ್ಟಿದ್ದಾನೆ. ಕಿಟಕಿಯಿಂದ ಹೊರಗೆ ನೋಡಿದರೆ ಇಷ್ಟು ದಿನ ಬಾಸಿನ ಮುಖದಂತೆ ಬಿರುಸಾಗಿ ಕಾಣುತ್ತಿದ್ದ ಹೊರಗಿನ ವಾತಾವಾರಣ ಇಂದು 'ಅವಳ' ವದನದಷ್ಟು ನಿರ್ಮಲವಾಗಿದೆ. ಈ ಉಲ್ಲಾಸಮಯ ಪ್ರಯಾಣದಲ್ಲಿ ಕೈಯಲ್ಲಿ ಹಿಡಿದ ಪುಸ್ತಕದೊಳಗಿನ ಶೆರ್ಲಾಕ್ ಹೋಮ್ಸ್ ಹಿಂದೆಂದಿಗಿಂತ ರೋಚಕವಾಗಿ ಕಥೆಹೇಳುತ್ತಿದ್ದಾರೆ.
ಇನ್ನು ಬೆಂಗಳೂರಿನ ಬೀದಿಗಳಂತೂ ಸೀಸನ್ನಿಗೆ ತಕ್ಕಂತೆ ಸಿಂಗರಿಸಿಕೊಳ್ಳುತ್ತವೆ. ಗಣಪತಿ ಹಬ್ಬದ ರಜೆಯಲ್ಲಿ ಎಲ್ಲಿ ನೋಡಿದರೂ ಒಂದಡಿಯಿಂದ ಹಿಡಿದು ಒಂಭತ್ತಡಿಯ ತನಕದ, ಹಲವಾರು ಭಾವ-ಭಂಗಿಗಳ ಗಣೇಶನ ವಿಗ್ರಹಗಳು, ಸ್ವತಂತ್ರ ದಿನಾಚರಣೆಯ ಸಮಯದಲ್ಲಿ ವಾಹನಗಳ ಕಿವಿಗೆ ಚುಚ್ಚಿಕೊಂಡ ತ್ರಿವರ್ಣ ಧ್ವಝಗಳು, ರಾಜ್ಯೋತ್ಸವದ ದಿನ ಪಟಪಟ ಹಾರಾಡುತ್ತಾ ಓಡುವ ಕನ್ನಡದ ಬಾವುಟಗಳು, ದೀಪಾವಳಿಯಲ್ಲಿ ಮನೆಮನೆಯ ಬಾಗಿಲಲಲ್ಲೂ ಮಿನುಗುವ ದೀಪ, ಪಟಾಕಿ, ನಕ್ಷತ್ರಕಡ್ಡಿಗಳು... ಹೀಗೇ ಬೆಂಗಳೂರಿಗೆ ಬೆಂಗಳೂರೇ ಒಂದಿಲ್ಲೊಂದು ಬಣ್ಣ/ಬೆಳಕಿನಲ್ಲಿ ತೊಯ್ದುಹೋಗುತ್ತದೆ. ಯಾವ ಕಲಿಗಾಲ ಮುರಕೊಂಡು ಬಿದ್ದರೂ, ಎಷ್ಟೇ ಬುದ್ಧಿ ತುಂಬಿ ತುಳುಕಿದರೂ, ಯಾವ ರಾಜಕಾರಣಿ ಬತ್ತಿ ಇಟ್ಟರೂ, ಯಾವ ಘಾತುಕ ಶಕ್ತಿ ಬಾಯಿಬಡಿದುಕೊಂಡರೂ, ಹಬ್ಬ-ಭಾಷೆ-ಸಂಸ್ಕೃತಿ.. ಈ ಮೂರು ಸಂಭ್ರಮಗಳನ್ನು ಮನುಷ್ಯನಿಂದ, ಮನಸ್ಸಿನಿಂದ ದೂರಮಾಡುವುದು ಸಾಧ್ಯವೇ ಇಲ್ಲ ಅಂತ ಅನಿಸೋದು ಇಂತಹಾ ಆಚರಣೆಗಳನ್ನು ನೋಡಿದಾಗಲೇ‌. ಈ ಎಲ್ಲ ಸಂಭ್ರಮಗಳ ಕಣ್ತುಂಬಿಕೊಳ್ಳುತ್ತಾ, ಕಿವಿಗೊಂದು ಇಯರ್ ಫೋನು ಚುಚ್ಚಿಕೊಂಡೋ, ಇಲ್ಲಾ ಪುಸ್ತಕವೊಂದನ್ನು ಹಿಡಿದುಕೊಂಡೋ ಕಿಟಕಿ ಬದಿಯ ಸೀಟಿನಲ್ಲಿ ಕುಳಿತು ಬೆಂಗಳೂರು ಸುತ್ತುವಂತಹಾ ಈ ಮೋಜು ಎಂತಹದ್ದೆಂಬುದನ್ನು ಬಲ್ಲವ ಮಾತ್ರ ಬಲ್ಲ! ಎತ್ತರದ ಫ್ಲೈ ಓವರುಗಳ ಮೇಲಿಂದ ಕಾಣುವ ಪಕ್ಷಿನೋಟ, ಆಳದ ಅಂಡರ್ ಪಾಸ್ಗಳ ಕತ್ತಲೆಯೊಳಗಿನ ನಮ್ಮದೇ ಬಸ್ಸಿನ ಪ್ರತಿಧ್ವನಿಯ ಸದ್ದು, ಬಸವನಗುಡಿಯಲ್ಲಿ ಮೂಗಿಗೆ ರಾಚುವ ಹೂಹಣ್ಣುಗಳ ಘಮಲು, ಕಾದು ಕಾದು ಕೊನೆಗೂ ಬಂದ ನಾ ಹತ್ತಬೇಕಾದ ಬಸ್ಸು.. ಬೆಂಗಳೂರೂ ನನ್ನೂರಿನಂತೆನಿಸುತ್ತದೆ.
ಆದರೆ ಸಧ್ಯಕ್ಕೆ ಬೆಂಗಳೂರಿನಲ್ಲಿ ಒತ್ತಡವೊಂದನ್ನು ಬಿಟ್ಟು ಮತ್ತೇನೂ ಸ್ಥಿರವಾಗಿಲ್ಲ. ಒಂದು ಭಾನುವಾರ ಅಥವಾ ಎರೆಡು ದಿನದ ದೀಪಾವಳಿ ಮುಗಿಯುತ್ತಿದ್ದಂತೆ ಮತ್ತದೇ ಟ್ರಾಫಿಕ್ಕು ಮರಳಿಬಂದು ಬೆಂಗಳೂರಿನ ರಸ್ತೆಗಳನ್ನು ಅಟಕಾಯಿಸಿಕೊಳ್ಳುತ್ತದೆ. ಮತ್ತದೇ ನಿಲ್ಲಲಾಗದ ರಶ್ಶು, ಮುಂದೆ ಹೋಗದ ಟ್ರಾಫಿಕ್ಕು, ಜೇಬುಕತ್ತರಿಸುವ ಕಾಕರು... ಇವೆಲ್ಲದರ ನಡುವೆ ಕೆಲಕ್ಷಣಗಳ ಉಲ್ಲಾಸ ತರುವ ಭಾನುವಾರವೇ ಮುಂತಾದ ಇನ್ನಿತರ ರಜಾದಿನಗಳಿಗೊಂದು ದೊಡ್ಡ ಸಲಾಂ ಹೇಳಬೇಕೆಂದು ಇಷ್ಟೆಲ್ಲ ಬರೆದೆ.

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...