ಒಮ್ಮೆ ಓದಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಒಮ್ಮೆ ಓದಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜನವರಿ 19, 2019

ಮೊಟ್ಟ ಮೊದಲ ಕಿರುಚಿತ್ರ..

"ಅನಾಥವಾಗಬೇಕಿರುವುದು ಅನಾಥಾಶ್ರಮ/ವೃದ್ಧಾಶ್ರಮಗಳೇ ಹೊರತು ಅಪ್ಪ-ಅಮ್ಮ ಅಲ್ಲ!"
ಗೆಳೆಯ Venu Hasrali ಅವರು ಈ ಥೀಮ್ ಅನ್ನು ಹೇಳಿದಾಗ ನಿಜಕ್ಕೂ ವಾಹ್ ಎನ್ನಿಸಿತು. ಏಕಕಾಲಕ್ಕೆ ಕಿರುತೆರೆ, ಹಿರಿತೆರೆ ಹಾಗೂ ಮೊಬೈಲ್ ತೆರೆ ಮೂರರ ಬಗ್ಗೆಯೂ ಯೋಚಿಸುವ ಹಾಗೂ ಮೂರರಲ್ಲೂ ಉಳಿಯುವಂತಹಾದ್ದೇನನ್ನೋ ಮಾಡಬೇಕೆಂದು ಶ್ರಮಪಡುತ್ತಿರುವ ಗೆಳೆಯ ವೇಣು ಹಸ್ರಾಳಿ ಅವರ ನಿರ್ದೇಶನದ ಮೊಟ್ಟ ಮೊದಲ ಕಿರುಚಿತ್ರ #ಆಶೀರ್ವಾದ ಇಂದು ಬಿಡುಗಡೆಯಾಗಿದೆ. ಹಲವಾರು ಚೌಕಟ್ಟುಗಳಾಚೆಗೂ ಅವರ, ನಮ್ಮ ನಿರೀಕ್ಷೆಯನ್ನು ಮೀರಿ ಸುಂದರವಾಗಿ ಮೂಡಿಬಂದಿದೆ. ನಾನು ಬರೆದ ನಾಲ್ಕು ಸಾಲುಗಳ ಸಾಹಿತ್ಯ ಸಹಾ ರಾಮಸೇನೆಯ ನಡುವಿನ ಅಳಿಲಿನಂತೆ ನಡುವೆ ಸೇರಿಕೊಂಡಿದೆ.
ಹೊಸತಂಡ... ಹಳೆಯದೇ ಪ್ರೀತಿಯನ್ನು ಹೊಸ ದೃಶ್ಯವಾಗಿಸುವ ಹೊಸ ಪ್ರಯತ್ನ... ಒಮ್ಮೆ ನೋಡಿ... ಅಭಿಪ್ರಾಯ ತಿಳಿಸಿ.. ಇಷ್ಟವಾದಲ್ಲಿ ಶೇರ್ ಮಾಡಿ...

ನಾನು ಬರೆದ ಹಾಡು..

ಸಿನಿಮಾದ ಹಾಡುಗಳಿಗೆ ತಮ್ಮದೇ ಸಾಹಿತ್ಯ ಬರೆದು ಹಾಡಿಕೊಳ್ಳುವುದು ಬಹಳ ಜನರಿಗಿರುವ ಖಯಾಲಿ. ಅದರ ಪಲ್ಲವಿಗೋ, ಚರಣಕ್ಕೋ ಹೊಂದುವಂತಹಾ ಒಂದು ಚಂದದ ಸಾಲು ಸಿಕ್ಕಿಬಿಟ್ಟರೆ ಸಾಕು, ಮಂದೆ ಅದು ತನ್ನಂತಾನೇ ಬರೆಸಿಕೊಳ್ಳುತ್ತಾ ಮತ್ತೊಂದು ಹಾಡೇ ಆಗಿಬಿಡುತ್ತದೆ. ಹೀಗೆ ಗುನುಗಿಕೊಳ್ಳುವವರ ಬಾಯಲ್ಲಿ ಅವರದೇ ಆದ ಹೊಸ ಹೊಸ ಸಾಹಿತ್ಯದ ಉಡುಗೆ ತೊಟ್ಟು, ಗುನುಗಿಸಿಕೊಂಡು, ಕೊನೆಗೆ ಅವರಲ್ಲೇ ಮುಗಿದುಹೋಗುವ ಸಿನಿಮಾ ಹಾಡುಗಳು ಅದೆಷ್ಟೋ?
ಹೀಗೆ ನಾನು ಗುನುಗಲಿಕ್ಕೆಂದೇ ಎರೆಡು ವರ್ಷಗಳ ಕೆಳಗೆ ಬರೆದಿದ್ದ ಸಾಹಿತ್ಯವೊಂದು ಮೋಹನ ತೋಡಾರ್ ಅವರ ಧ್ವನಿಗೆ ಸಿಕ್ಕಿ ಹಾಡಾಗಿದೆ. ಮಂಗಳೂರಿನ ಜನ ಯಾವುದೇ ಕಾರ್ಯಕ್ಕೆ ಕೂತರೂ ಶಿಲ್ಪಿಗಳಂತೆ ಕೆಲಸ ಮಾಡುತ್ತಾರೆ. ಒಂದು ಚಿಕ್ಕ ಸೂಜಿಯಂಚಿನಷ್ಟು ಬಿಂದುವನ್ನೂ ನಾಜೂಕಾಗಿ, ಆಸಕ್ತಿಯಿಂದ ರೂಪಿಸುತ್ತಾರೆ. ಮೋಹನರು ಮಾಡಿದ್ದೂ ಇದನ್ನೇ. ತಮ್ಮ‌ ಅದೆಷ್ಟೋ ಅಮೂಲ್ಯ ಭಾನುವಾರಗಳನ್ನು ಖರ್ಚು ಮಾಡಿ, ಚಂದವಾಗಿ ಹಾಡಿ, ಎಡಿಟ್ ಮಾಡಿದ್ದಲ್ಲದೆ ಕೊನೆಗೆ ಅಂದವಾದ ವೀಡಿಯೋವನ್ನೂ ಮಾಡಿಕೊಟ್ಟಿದ್ದಾರೆ. ಆ ಮೂಲಕ ಗುನುಗಿ ನನ್ನೊಳಗೇ ಮುಗಿದುಹೋಗಬೇಕಿದ್ದ ಹಾಡೊಂದಕ್ಕೆ ಮರುಜೀವ ನೀಡಿದ್ದಾರೆ.
ಒಮ್ಮೆ ನೋಡಿ.. ಅಭಿಪ್ರಾಯ ತಿಳಿಸಿ..
ಅಂದಹಾಗೇ ಇದು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಮಾಡಿದ್ದಲ್ಲ. ಕೇವಲ ಹವ್ಯಾಸಕ್ಕಾಗಿ, ಮನೋರಂಜನೆಗಾಗಿ ಮಾಡಿದ ವೀಡಿಯೋ.
ಯೂಟ್ಯೂಬ್ ವೀಡಿಯೋ ಲಿಂಕ್:

https://www.youtube.com/watch?v=CALKszDDKYk&feature=youtu.be

-ವಿನಾಯಕ ಅರಳಸುರಳಿ‌.

ಸೋಮವಾರ, ಮೇ 16, 2016

ಹೃದಯ ಶಿವ ಅವರದೊಂದು ಗಝಲ್...

ಹೃದಯ ಶಿವ ಎಂದೊಡನೆ ನೆನಪಾಗುವುದು 'ಮುಂಗಾರುಮಳೆ'ಯ 'ಇವನು ಗೆಳೆಯನಲ್ಲ' ಹಾಡು....

ಇವನು ಗೆಳೆಯನಲ್ಲ..
ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ
ತುಂಬ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ......
..................................
.....ಒಲುಮೆಯೆಂಬ ಸುಳಿಗೆ
ಈಜು ಬರದೆ ಇಳಿದಿಹನಲ್ಲ,
ಸಾವಿನಲ್ಲೂ ನಗುವುದ ಬಲ್ಲ
.....................
ಮುಳುಗುವವನ ಕೂಗು
ಚಾಚುವಂತೆ ಮಾಡಿದೆ ಕೈಯ್ಯ,
ಜಾರಿ ಬಿಡುವುದೀ ಹೃದಯ
ಏನೋ ತಳಮಳ...

ಹೀಗೆ ತೀರ ಸಿನಿಮೀಯವೆನಿಸದ,  ಸರಳ-ಸುಂದರ ಸಾಲುಗಳಲ್ಲಿ ಪ್ರೀತಿಗೆ ಸೋಲಬಾರದ, ಆದರೂ ಸೋಲುತ್ತಿರುವ ನಾಯಕಿಯ ಸಂದಿಗ್ಧ ತಳಮಳವನ್ನ ಚಿತ್ರಿಸಿ, ಎಲ್ಲರ ಮನಗೆದ್ದವರು ಹೃದಯಶಿವ. ಇತರ ಸಿನಿ ಸಾಹಿತಿಗಳಂತೆ ಹೃದಯಶಿವ ನಮಗೆ ಹಿಂಡುಹಿಂಡಾಗಿ ಸಿಕ್ಕಿದ್ದು ಕಡಿಮೆಯೇ.  ಸಾಲುಸಾಲು ಚಿತ್ರಗಳಿಗೆ ಹಾಡು ಬರೆದದ್ದು ಅಥವಾ ಒಂದೇ ಚಿತ್ರದಲ್ಲಿ ಮೂರ್ನಾಲ್ಕು ಹಾಡು ರಚಿಸಿದ್ದನ್ನ ನಾನಂತೂ ಕೇಳಿಲ್ಲ (ಇತ್ತೀಚಿಗಿನ ವರ್ಷಗಳ ಹೊರತಾಗಿ).


ಜಯಂತ್ ಕಾಯ್ಕಿಣಿಯವರ ಬಾಯಲ್ಲಿ ಬೇಂದ್ರೆಯವರ ಉಕ್ತಿಯೊಂದನ್ನ ಕೇಳಿದ್ದೆ: "ಹಸಿದವನ ಮುಂದೆ ಅನ್ನವನ್ನಿಡಬೇಕೇ ಹೊರತು ಪಾಕಶಾಸ್ತ್ರದ ಪುಸ್ತಕವನ್ನಲ್ಲ!" ಓದಲು ಕೂತವನೆದುರು ಅವನಿಗೆ ಹಿತವೆನಿಸುವುದನ್ನಿಡಬೇಕೇ ಹೊರತು ತನ್ನ ಪಾಂಡಿತ್ಯ ಪ್ರದರ್ಶನವನ್ನಲ್ಲ ಎಂದಿದ್ದರು ಜಯಂತ್. ಅಂತೆಯೇ ತೀರಾ ಕ್ಲಿಷ್ಟಕರ, ಭಯಂಕರ ಪ್ರತಿಮೆಗಳನ್ನ ಹಿಡಿದುತಂದು ಓದುಗರನ್ನ ಭೀತರಾಗಿಸುವ ಜಾಯಮಾನ ಹೃದಯಶಿವ ಅವರದ್ದಲ್ಲ ಅನ್ನಿಸುತ್ತದೆ. ಅವರದು ಅತ್ತ ತೀರಾ ಸರಳವೂ ಅಲ್ಲದ, ಇತ್ತ ಕ್ಲಿಷ್ಟವೂ ಅಲ್ಲದ ಹದವಾದ ಮೆದುಭಾಷೆ. ಇತ್ತೀಚಿಗೆ ದಿನಪತ್ರಿಕೆಯೊಂದರಲ್ಲಿ ಅವರ ಕವಿತೆಯೊಂದನ್ನ ಓದಿ ಇಷ್ಟಪಟ್ಟಿದ್ದೆ. ಮೊನ್ನೆ ಎಂದಿನಂತೆ ಇಂಟರ್ ನೆಟ್ ನಲ್ಲಿ ಅಲೆಯುತ್ತಿದ್ದಾಗ ಕು.ಸ.ಮಧುಸೂಧನ ಅವರು ಸಂಪಾದಿಸಿರುವ 'ಕಾವ್ಯ ಖಜಾನೆ' ಬ್ಲಾಗ್ ನಲ್ಲಿ ಅವರ ಇನ್ನೊಂದು ಕವನ ದೊರಕಿತು. ಇಷ್ಟವಾಯಿತು. ಚಂದದ ಬರಹಗಳು ನಾಲ್ಕು ಜನರ ಕೈಗೆಟುಕುವಂತೆ ಮಾಡುವುದು ಒಳ್ಳೆಯ ಓದುಗನ ಲಕ್ಷಣವೆಂದು ನಂಬಿ ಅವರ ಅನುಮತಿಯಿಲ್ಲದೇ ಈ ಕವನವನ್ನ ಬ್ಲಾಗಿಸುತ್ತಿದ್ದೇನೆ, ಹೃದಯಶಿವ ಹಾಗೂ ಮಧುಸೂದನ ಅವರ ಕ್ಷಮೆ ಕೋರುತ್ತಾ...

ಓದಿ... ಹೇಗಿದೆ ಅಂತ ಹೇಳಿ...

ಕತ್ತಲ ಕೋಣೆಯಲಿ ಒಬ್ಬನೇ ಕೂತು ಸದ್ದಿಲ್ಲದೆ ಅಳುತ್ತೇನೆ
ಮಾಗದ ನೂರಾರು ಎದೆಗಾಯಗಳಿಗೆ ಮದ್ದಿಲ್ಲದೆ ಅಳುತ್ತೇನೆ

ಏಕಾಂಗಿ ಮಿಡಿತ ಭೋರಿಡುವ ಹೊತ್ತು ಉಕ್ಕಿ ಬರಲು ಕಂಠ
ಕಂಬನಿಯನೊರಸಿ ಪೊರೆವ ಹಸ್ತಗಳ ಮುದ್ದಿಲ್ಲದೆ ಅಳುತ್ತೇನೆ

ಹಲವು ಹುನ್ನಾರ ಹೂಡಿ ನಿರಂತರ ಕೇಕೆ ಹಾಕಿ ನಗುತ್ತಿರುವ
ಕಾಲದ ಮೇಲೆ ಯಾವುದೇ ಬಗೆಯ ಜಿದ್ದಿಲ್ಲದೆ ಅಳುತ್ತೇನೆ

ದಿಕ್ಕೆಟ್ಟ ದಾರಿ ಕರೆದೊಯ್ದ ಕಡೆಗೆ ತಪ್ಪು ಹೆಜ್ಜೆಗಳ ಹಾಕಿ
ಬಾಳ ಜೂಜಿನಲ್ಲಿ ಕಡೆಗೂ ನನ್ನ ನಾ ಗೆದ್ದಿಲ್ಲದೆ ಅಳುತ್ತೇನೆ

ಹುಟ್ಟು-ಸಾವುಗಳ ನಡುವಿನಂತರದಿ ಜಡತೆ ಜಾಡ್ಯಕೆ ಮಣಿದು
ಬಿಟ್ಟ ಕಣ್ಣುಗಳ ಬಿಟ್ಟು 'ಹೇ ಹೃದಯ' ಎದ್ದಿಲ್ಲದೆ ಅಳುತ್ತೇನೆ

ಕವಿ: ಹೃದಯ ಶಿವ.

'ಕಾವ್ಯ ಖಜಾನೆ' ಬ್ಲಾಗ್ ಓದಿ:
http://kavyakajane.blogspot.in




ಮಂಗಳವಾರ, ಜನವರಿ 12, 2016

ಒಂದು ಅನಾಮಿಕ ಉರ್ದು ಕವನ...

ಮಾಲಿಕನ ಹೆಸರಿಲ್ಲದೆಯೇ ಅಂತರ್ಜಾಲದ ತಂಬೆಲ್ಲಾ ಅಲೆದಾಡುತ್ತಿರುವ ಉರ್ದು ಕವನವಿದು. ಬೆಳಗ್ಗೆ ವಾಟ್ಸಾಪ್ಪಿನಲ್ಲಿ ಬಂದು ಕೂತಿತ್ತು.  ಯಥಾವತ್ತಾಗಿ ಬ್ಲಾಗಿಸಿದ್ದೇನೆ. ಒಮ್ಮೆ ಓದಿ...

ತೇರಿ ಡೋಲಿ ಉಠೀ
ಮೇರಿ ಮಯ್ಯತ್ ಉಠೀ
ಫೂಲ್ ತುಜ್ ಪರ್ ಭೀ  ಬರ್ ಸೇ
ಫೂಲ್ ಮುಝ್ ಪರ್ ಭೀ  ಬರ್ ಸೇ
ಫರ್ಕ್ ಸಿರ್ಫ್ ಇತ್ ನಾ ಸಾ ಥಾ
ತು ಸಜ್ ಗಯೀ
ಮುಝೆ ಸಜಾಯಾ ಗಯಾ...

ತು ಭೀ ಘರ್ ಕೋ ಚಲೀ
ಮೈ ಭೀ ಘರ್ ಕೋ ಚಲಾ
ಫರ್ಕ್ ಸಿರ್ಫ್ ಇತ್ನಾ ಸಾ ಥಾ
ತು ಉಠ್ ಕೆ ಗಯೀ
ಮುಝೆ ಉಠಾಯಾ ಗಯಾ...

ಮೆಹೆಫಿಲ್ ವಹಾಂ ಭೀ ಥಿ
ಲೋಗ್ ಯಹಾಂ ಭೀ ಥೆ,
ಫರ್ಕ್ ಸಿರ್ಫ್ ಇತ್ನಾ ಸಾ ಥಾ
ಉನ್ ಕಾ ಹಸ್ನಾ ವಹಾಂ
ಇನ್ಕಾ ರೋನಾ ಯಹಾಂ...

ಖಾಝೀ ಉಧರ್ ಭೀ ಥಾ
ಮೌಲ್ವೀ ಇಧರ್ ಭೀ ಥಾ
ದೋ ಬೋಲ್ ತೇರೆ ಪಢೆ
ದೋ ಬೋಲ್ ಮೇರೆ ಪಢೆ
ತೇರಾ ನಿಕಾಹ್ ಪಢಾ
ಮೇರಾ ಜನಾಝಾ ಪಢಾ 
ಫರ್ಕ್ ಸಿರ್ಫ್ ಇತ್ನಾ ಸಾ  ಥಾ..
ತುಝೆ ಅಪ್ನಾಯಾ ಗಯಾ 
ಮುಝೆ ದಫ್ನಾಯಾ ಗಯಾ....
👇🏿👇🏿
ಅನುವಾದ- ಎಂ ಕೆ ಜೀರ್ಮುಖಿ

ನಿನ್ನ ಪಲ್ಲಕಿ ಹೊರಟಿತು 
ನನ್ನ ಹೆಣವೂ;
ಹೂ ಮಳೆ ನಿನ್ನ ಮೇಲೆ ಸುರಿಯಿತು 
ನನ್ನ ಮೇಲೂ;
ಆದರೆ ವ್ಯತ್ಯಾಸವಿಷ್ಟೆ,
ನೀನು ಸಜ್ಜಾಗಿದ್ದೆ 
ನನ್ನನ್ನು ಸಜ್ಜುಗೊಳಿಸಿದ್ದರು 

ನೀನು ಕೂಡ ಮನೆಗೆ ಹೊರಟಿದ್ದೆ,
ನಾನು ಕೂಡ ;
ಆದರೆ ವ್ಯತ್ಯಾಸವಿಷ್ಟೆ,
ನೀನು ಎದ್ದು ಹೊರಟಿದ್ದೆ 
ನನ್ನನ್ನು ಎತ್ತಿಕೊಂಡು ಹೊರಟರು  

ಸಮಾರಂಭ ಅಲ್ಲೂ ನಡೆಯುತಿತ್ತು
ಜನರ ಗುಂಪು ಇಲ್ಲೂ ಸೇರುತ್ತಿತ್ತು 
ಆದರೆ ವ್ಯತ್ಯಾಸವಿಷ್ಟೆ  
ಅಲ್ಲಿ ಮದರಂಗಿ ನಡೆಯುತಿತ್ತು
ಇಲ್ಲಿ ರೋಧನೆಯೇ ಕೇಳುತಿತ್ತು

ಗುರುಗಳು ಅಲ್ಲೂ ಇದ್ದರು 
ಗುರುಗಳು ಇಲ್ಲೂ ಇದ್ದರು  
ಅವರಲ್ಲಿ ನಿನಗೆ ನಿಕಾಹ್ ನೆರವೇರಿಸಿದರು 
ಇವರಿಲ್ಲಿ ನನಗೆ ಶವಸಂಸ್ಕಾರ ನೆರವೇರಿಸಿದರು 
ಆದರೆ ವ್ಯತ್ಯಾಸವಿಷ್ಟೆ
ನಿನ್ನನ್ನು ಅಲ್ಲಿ  ತಮ್ಮದಾಗಿಸಿಕೊಂಡರು
ನನ್ನನ್ನು ಇಲ್ಲಿ  ಮಣ್ಣಾಗಿಸಿದರು
**************************

ಬುಧವಾರ, ಡಿಸೆಂಬರ್ 30, 2015

ಒಂದೊಳ್ಳೆ ಬ್ಲಾಗ್..

ಸಂಜೆ ಇಂಟರ್ನೆಟ್ನಲ್ಲಿ ಹಾಗೇ ಸುಮ್ಮನೆ ಕಣ್ಣಾಡಿಸುತ್ತಿದ್ದಾಗ ಅಚಾನಕ್ಕಾಗಿ ಕಣ್ಣಿಗೆ ಬಿದ್ದ ಬ್ಲಾಗ್ ಡಾ|ಕೃಷ್ಣಮೂರ್ತಿ ಅವರ "ಕೊಳಲು". ಅವರ ವೈದ್ಯಬದುಕಿನ ಅನುಭವಗಳ ಸ್ವಾರಸ್ಯಕರ ಘಟನೆಗಳು, ಉತ್ತಮ ಚಿಂತನೆಗಳುಳ್ಳ ಕಥೆ, ಲೇಖನಗಳು, ಅರ್ಥಪೂರ್ಣ-ಸುಲಲಿತ ಕವನಗಳು ಹೀಗೇ  ಹಲವಾರು ಚಂದದ  ಬರಹಗಳಿರುವ ಬ್ಲಾಗ್.
ನೀವೂ ಒಮ್ಮೆ ಓದಿ...

http://dtkmurthy.blogspot.in

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...