ಬುಧವಾರ, ಜೂನ್ 8, 2016

ಅಭಿವೃದ್ದಿ, ನಗರೀಕರಣ ಮತ್ತು ನಾವು...

"ಅಭಿವೃದ್ಧಿ " ಅನ್ನುವುದು ಜಗತ್ತಿನ ಮೂಲಭೂತ ಲಕ್ಷಣ. ಇಂದಿನ ಪ್ರಪಂಚ ನಿಂತಿರುವುದೇ ಅಭಿವೃದ್ಧಿ ಸೂತ್ರದ ಮೇಲೆ. ಸಕಾರಾತ್ಮಕವಾದ, ಏಳಿಗೆಯೆಡೆಗಿನ ಪ್ರತಿಯೊಂದೂ ಬದಲಾವಣೆಯೂ ಅಭಿವೃದ್ಧಿಯೇ. ಪ್ರತಿಯೊಂದು  ನಿನ್ನೆ  ಮತ್ತು ನಾಳೆಯ ಮಧ್ಯೆ ಜಗದ ಯಾವುದೋ ಒಂದು ಮೂಲೆಯಲ್ಲಾದರೂ ಸೂಕ್ಮಾತಿಸೂಕ್ಮ ಅಭಿವೃದ್ಧಿ ನಡೆದೇ ಇರುತ್ತದೆ, ನಡೆಯಲೇ ಬೇಕು! ಸೃಷ್ಟಿಯಲ್ಲಿ ಸಾವಿರಾರು ವರ್ಷಗಳ ಹಿಂದೆ ಘಟಿಸಿದ 'ಮಾನವ ವಿಕಾಸ'ವೂ ಸಹಾ ಒಂದರ್ಥದಲ್ಲಿ ಅವನು ಸಾಧಿಸಿದ ಅಭಿವೃದ್ಧಿಯೇ. ಕಾಡಿನಲ್ಲಿ ಮರದ, ಕಲ್ಲಿನ ಅಯುಧಗಳನ್ನ ಹಿಡಿದು ಪ್ರಾಣಿಗಳ ಹಿಂದೆ ಓಡುತ್ತದ್ದ ವಾನರರೂಪಿ ಆದಿಮಾನವ ಇಂದು ಭೂಮಂಡಲವನ್ನೇ ದಾಟಿ ಮಂಗಳನೆಡೆಗೆ ಹಾರಿದ್ದಾನೆಂದರೆ ಅವನಲ್ಲಿ ಉರಿಯುತ್ತಿರುವ ಅಭಿವೃದ್ಧಿಯ ತೀವ್ರತೆ ಎಷ್ಟಿರಬಹುದು!

ಪೊದೆಗಳಲ್ಲಿ, ಮರದ ಪೊಟರೆಗಳಲ್ಲಿ, ಗುಹೆಗಳಲ್ಲಿ ವಾಸಿಸುತ್ತಿದ್ದ ಅವನು ಮೆಲ್ಲನೆ ಕಲ್ಲು, ಬಂಡೆ, ರೆಂಬೆ-ಕೊಂಬೆಗಳನ್ನ ಬಳಸಿ ಕೃತಕ ಮನೆ ನಿರ್ಮಿಸಿಕೊಂಡು. ಮುಂದೆ ಅವು ಮಣ್ಣಿನ ಗೋಡೆ ಹಾಗೂ ಹುಲ್ಲು ಮಾಡಿನ ಗುಡಿಸಲುಗಳಾದವು. ಹತ್ತಾರು ಗುಡಿಸಲುಗಳು ಸೇರಿ ಊರು-ಕೇರಿಗಳು ರೂಪುಗೊಂಡವು.

ಮಾನವ ಜೀವನದ ಅಗತ್ಯತೆಗಳನ್ನೇ ಬಂಡವಾಳವಾಗಿಟ್ಟುಕೊಂಡು ಹೊಸ-ಹೊಸ ಸಂಶೋಧನೆಗಳಾಗುತ್ತಾ ಹೋದವು. ದೈನಂದಿನ ಕೆಲಸಕಾರ್ಯಗಳಿಗೆ ನೆರವಾಗುವ ಪರಿಕರಗಳ ಅವಿಷ್ಕಾರಗಳಾಗಿ, ಅವುಗಳ ಬಳಕೆ ಸಾಗರಗಳಾಚೆಗಿನ ದೇಶ-ವಿದೇಶಗಳಿಗೂ ಹಬ್ಬಿದವು. ಮುಂದೆ ಕೈಗಾರಿಕಾ ಕ್ರಾಂತಿ, ಜಾಗತೀಕರಣಗಳ ಪ್ರಭಾವದಿಂದ ಜಗತ್ತಿನ ನಾನಾ ದೇಶಗಳ ಜನರು ಕಾರ್ಖಾನೆ,ಕೈಗಾರಿಕೆಗಳ ಸ್ಥಾಪನೆಯಲ್ಲಿ ಆಸಕ್ತರಾದರು. ಅದಕ್ಕೆ ಸೂಕ್ತವಾದ ವಾತಾವರಣ, ಸೌಕರ್ಯಗಳ ಲಭ್ಯತೆ ಮುಂತಾದ ಅನುಕೂಲಗಳಿರುವ ಪ್ರದೇಶಗಳಲ್ಲಿ ಕಾರ್ಖನೆ, ಕೈಗಾರಿಕೆ, ಸಂಸ್ಥೆಗಳು ಚಿಗುರಿಕೊಂಡವು. ಅಲ್ಲಿ ಸಹಜವಾಗಿಯೇ ಉದ್ಯೋಗ ಸೃಷ್ಟಿಯಾಯಿತು. ಬೇರೆಬೇರೆ ಪ್ರದೇಶಗಳ ಜನರು ಅತ್ತ ಮುಖಮಾಡಿದರು. ಹೀಗೆ ಜನಸಾಂದ್ರತೆ ಹೆಚ್ಚಿದ ಪರಿಣಾಮವಾಗಿ ಅವರ ಅಗತ್ಯತೆಗಳನ್ನ ಪೂರೈಸುವುದನ್ನೇ 'ವ್ಯಾಪಾರ'ವನ್ನಾಗಿಸಿಕೊಂಡ ಅಂಗಡಿ-ಮುಂಗಟ್ಟುಗಳೂ, ಸೇವಾಸಂಸ್ಥೆಗಳೂ ಹುಟ್ಟಿಕೊಂಡವು. ಜೀವನ ಸುಲಭವಾಗುತ್ತಾ ಹೋಯಿತು. ಮತ್ತಷ್ಟು ಜನ ಬಂದರು. ನಗರ ತನ್ನ ಗಡಿಗಳನ್ನ ಒಡೆದುಕೊಂಡು ಬೆಳೆಯತೊಡಗಿತು. ಹೀಗೆ ಕಗ್ಗಾಡುಗಳಾಗಿದ್ದ ಪ್ರದೇಶಗಳು ಕಾಲದ ಕುಲುಮೆಯಲ್ಲಿ ಅರಳುತ್ತಾ ಗುಡಿಸಲುಗಳಾಗಿ, ಮನೆಗಳಾಗಿ, ಊರು-ಕೇರಿಗಳಾಗಿ, ಪಟ್ಟಣಗಳಾಗಿ, ಕೊನೆಗೆ ಮಹಾನಗರಗಳಾಗಿ ಬೆಳೆದು ನಿಂತವು.

ಹಳ್ಳಿ ಮತ್ತು ನಗರಗಳು ದೇಶವೊಂದರ ಎರೆಡು ಕಣ್ಣುಗಳಿದ್ದಂತೆ. ಯಾವುದರಲ್ಲಿ ಧೂಳು ಬಿದ್ದರೂ ಎರೆಡೂ ಅಳಲೇಬೇಕು! ಅಷ್ಟರ ಮಟ್ಟಿಗೆ ಎರೆಡು ಆಂತರಿಕವಾಗಿ ಒಂದಕ್ಕೊಂದು ಬೆಸೆದುಕೊಂಡಿವೆ. ಮೇಲ್ನೋಟಕ್ಕೆ ಈ ಮಾತು ಅಸಂಬದ್ಧವೆನಿಸಿದರೂ ಸೂಕ್ಷವಾಗಿ ಗಮನಿಸಿದರೆ ಇದು ಹೌದೆಂಬುದು ಅರಿವಾಗುತ್ತದೆ. ಹಳ್ಳಿ ಮತ್ತು ನಗರಗಳ ಸಮತೋಲನವೇ ದೇಶದ ಸಮತೋಲನ. ಆದರೆ ಕಳೆದ ಕೆಲವು ದಶಕಗಳಲ್ಲಿ ಜನರು ಪಟ್ಟಣಗಳತ್ತ ಹೆಚ್ಚು ಆಕರ್ಶಿತರಾಗುತ್ತಿದ್ದಾರೆ. ಹೆಚ್ಚಿಗೆ ಓದಿಕೊಂಡರೆ, ಒಳ್ಳೆಯ ಉದ್ಯೋಗ ಬೇಕೆಂದರೆ, ಹಣ ಗಳಿಸಬೇಕೆಂದರೆ, ಅನುಕೂಲಕರ ಬದುಕನ್ನ ಬಯಸುವುದಾದರೆ ನಗರವಾಸಿಗಳಾಗಬೇಕೆಂಬುದು ನದಿ-ಹೊಳೆಗಳು ಸಮುದ್ರ ಸೇರುವಷ್ಟೇ ಅನಿವಾರ್ಯ ಮತ್ತು ಸಾಮಾನ್ಯ ಸಂಗತಿಯಾಗಿದೆ. 

ಈ ಸಮಸ್ಯೆಗೆ ಮೂಲ ಕಾರಣವಾಗಿರುವ, ಇಂತಹದ್ದೊಂದು ಅಭಿವೃದ್ಧಿಯು ಮಾನವ ಜಗತ್ತಿಗೆ, ಈ ಪ್ರಪಂಚಕ್ಕೆ ಬೇಕಿತ್ತ ಅಂತ ಕೇಳಿಕೊಂಡರೆ, 'ಹೌದು' ಎನ್ನುವ ಉತ್ತರವೇ ಸರಿ ಎನ್ನಿಸುತ್ತದೆ. ಬದಲಾವಣೆ ಮತ್ತು ಬೆಳವಣಿಗೆಗಳು ಬರೀ ಮನುಷ್ಯನ ಅನುಕೂಲಕ್ಕಾಗಿ ಅದುದಲ್ಲ. ಅವು ಮನುಷ್ಯನ ಅಸ್ತಿತ್ವದ ಉಳಿವಿಗೆ ನೆರವಾದ ಅಂಶಗಳೂ ಹೌದು. ಬದಲಾವಣೆಗೆ ತೆರೆದುಕೊಳ್ಳದ ತಪ್ಪಿಗೆ ದೈತ್ಯ ಡೈನೋಸಾರ್ ಗಳೇ ತಮ್ಮ ಅಸ್ತಿತ್ವ ಕಳೆದುಕೊಂಡು ನಿರ್ನಾಮವಾದವು ಎಂಬ ವಾದವನ್ನು ನಾವು ಕೇಳಿದ್ದೇವೆ. ಇನ್ನೊಂದು ತಾಜಾ ಉದಾಹರಣೆ ಹೇಳುವುದಾದರೆ 'ನೋಕಿಯ'ದಂತಹ ಜಗತ್ಪ್ರಸಿದ್ಧ ಮೊಬೈಲ್ ತಯಾರಕ ಕಂಪನಿಯು ಯಾವ ತಪ್ಪನ್ನೆಸಗದಿದ್ದರೂ ಇದ್ದಕ್ಕಿದ್ದಂತೇ ಮಾರುಕಟ್ಟೆಯಲ್ಲಿ ಮಣ್ಣಾಗಲು ಮುಖ್ಯ ಕಾರಣವೆಂದರೆ ಕ್ಷಣ-ಕ್ಷಣವೂ ಬದಲಾಗುತ್ತಿದ್ದ ಮಾರುಕಟ್ಟೆಯ ಬೆಳವಣಿಗೆಗೆ ತನ್ನನ್ನು ತಾನು ತೆರೆದುಕೊಳ್ಳದೇ ಹೋದುದು!

ಹೌದು. ಮನುಷ್ಯ ಅದೇ ಗೊಂಡಾರಣ್ಯದ ಗುಹೆಗಳಲ್ಲಿ, ಮುರುಕಲು ಗುಡಿಸಲುಗಳಲ್ಲಿ, ಉಳಿಯುವುದು ಸಾಧ್ಯವಿರಲಿಲ್ಲ. ಅವನು ಕಾಲದ ಜೊತೆಗೇ ಬದಲಾಗಬೇಕಿತ್ತು, ಬದಲಾದ. ವ್ಯವಸ್ಥೆಗಳನ್ನ ಅಭಿವೃದ್ಧಿಗೊಳಿಸುತ್ತಾ ನಗರ, ಮಹಾನಗರಗಳನ್ನ ಕಟ್ಟಿಕೊಂಡದ್ದೂ ಕೂಡ ತಪ್ಪಲ್ಲ.ಆದರೆ ಯಾವಾಗ ಅದು ಒಂದು ಹಂತವನ್ನ ಮೀರಿತೋ ಅಗಲೇ ಅದು ಸಮಸ್ಯೆಯಾಗಿದ್ದು.ಉದಾಹರಣೆಗೆ ನಮ್ಮ ಬೆಂಗಳೂರನ್ನೇ ತೆಗೆದುಕೊಳ್ಳೋಣ: ಬರೀ ಒಂದೂಕಾಲು ದಶಕದ ಕೆಳಗೆ ನಗರದ ಹೃದಯ ಭಾಗವಾಗಿರುವ ಮೆಜಸ್ಟಿಕ್ಕನ್ನ ಕೇಂದ್ರವಾಗಿಟ್ಟುಕೊಂಡು ಒಂದು ವೃತ್ತ ಎಳೆದರೆ ಹತ್ತು-ಹನ್ನೆರೆಡು ಕಿಲೋಮೀಟರ್ ಪರಿಧಿಯೊಳಗೆ ಇಡೀ ಬೆಂಗಳೂರೇ ಮುಗಿದುಹೋಗುತ್ತಿತ್ತು. ಆದರೆ ಇಂದು ಅದರ ಮೂರುಪಟ್ಟು ವಿಸ್ತಾರಗೊಂಡಿದೆ ಬೆಂಗಳೂರು. ಇನ್ನು ಕೆಲವೇ ವರುಷಗಳಲ್ಲಿ ಒಂದುಕಡೆ ನೆಲಮಂಗಲದವರೆಗೆ, ಇನೊಂದುಕಡೆ ಹೊಸೂರಿನವರೆಗೆ, ಮತ್ತೊಂದುಕಡೆ ಚಿಕ್ಕ-ದೊಡ್ಡ ಬಳ್ಳಾಪುರಗಳಾಚೆಗೂ 'ಬೆಂಗಳೂರು ನಗರ'ವೇ ವ್ಯಾಪಿಸಿ ನಿಂತರೂ ಅಚ್ಚರಿಪಡುವಂತಿಲ್ಲ. ಇದರಿಂದ ಜನರಿಗೆ, ರಾಜ್ಯಕ್ಕೆ ಹಾಗೂ ದೇಶಕ್ಕೂ ಲಾಭವಿದೆ. ಲಕ್ಷಾಂತರ ಜನರಿಗೆ ಉದ್ಯೋಗ ದೊರೆತು, ದೇಶದ ಆರ್ಥೀಕ ಸ್ಥತಿ ಸುಧಾರಿಸುತ್ತದೆ. ಸಂಪನ್ಮೂಲಗಳು ಸದ್ಬಳಕೆಯಾಗುತ್ತವೆ. ವಾಣಿಜ್ಯ-ವಹಿವಾಟು ವ್ಯಾಪಾರವೂ ವೃದ್ಧಿಸುತ್ತದೆ. ಇದೆಲ್ಲಾ ಸರಿಯೇ. ಅದರೆ ಈ ಎಲ್ಲಾ ಬದಲಾವಣೆ, ಅಭಿವೃದ್ಧಿ, ಬೆಳವಣಿಗೆಗಳೂ ವ್ಯವಸ್ತಿತವಾಗಿ ಅಗುತ್ತಿವೆಯ? ಖಂಡಿತ ಇಲ್ಲ!

ಹಿಗ್ಗುತ್ತಾ ಹೋಗುವ ಮಹಾನಗರ ತನ್ನ ಸುತ್ತಮುತ್ತಲಿನ ಮರಗಿಡ, ಗದ್ದೆ, ತೋಟ, ಹುಲ್ಲುಬಯಲು ಮುಂತಾದ ನೈಸರ್ಗಿಕ ಪರಿಸರವನ್ನೂ ನುಂಗಿಕೊಂಡೇ ಬೆಳೆಯಬೇಕು; ಗುಡ್ಡ-ಬೆಟ್ಟಗಳನ್ನ ಕತ್ತರಿಸಲೇಬೇಕು. ಸಾವಿರಾರು ಮರಗಳನ್ನ ಕಡಿದುರುಳಿಸುವ ಮನುಷ್ಯ ಅದರ ಹತ್ತು ಭಾಗದಷ್ಟಾದರೂ ಮತ್ತೆ ನೆಟ್ಟುಬೆಳೆಸಬೇಕೆಂದು ಯೋಚಿಸುವುದೇ ಇಲ್ಲ. ಆದುನಿಕ ನಗರಿಯಲ್ಲಿ ದಿನವೂ ಟನ್ ಗಟ್ಟಲೆ  ಸೃಷ್ಟಿಯಾಗುವ ತ್ಯಾಜ್ಯವೂ ಅತ್ಯಾಧುನಿಕವಾಗೇ ಇರುತ್ತದೆ. ವರುಷಗಳೇ ಕಳೆದರೂ ಅವು ಮಣ್ಣಿನಲ್ಲಿ ಮಣ್ಣಾಗುವುದೇ ಇಲ್ಲ. ಇನ್ನು ನಾವು ಬಾಡಿಗೆಗೆ ಪಡೆದ ಮನೆಯನ್ನೇ ಸ್ವಂತದ್ದರಂತೆ ಸ್ವಚ್ಚವಾಗಿಟ್ಟುಕೊಳ್ಳಲು ಯೋಚಿಸುವ 'ನಾಗರೀಕ'ರಾದ ನಾವು, ನಮ್ಮ ನಗರವನ್ನು ಹೇಗೆತಾನೇ ಶುಚಿಯಾಗಿಟ್ಟುಕೊಂಡೇವು? ಕಂಡಲ್ಲಿ ಉಗುಳುತ್ತೇವೆ,  ರಾತ್ರೆ 9 ದಾಟಿದ ಮೇಲೆ ಮೆಲ್ಲನೆ ಕಸದ ಕಂತೆಯನ್ನ ಹಿಡಿದು ಹೊರಬಂದು 'ಇಲ್ಲಿ ಕಸ ಹಾಕಬಾರದು' ಎಂಬ ಫಲಕವೇ ಮುಚ್ಚಿಹೋಗುವಷ್ಟು ಕಸದ ರಾಶಿಯನ್ನೆಸೆದು ತಣ್ಣಗೆ ನಮ್ಮ-ನಮ್ಮ ಮನೆ ರೂಮುಗಳನ್ನ ಸೇರಿಕೊಳ್ಳುತ್ತೇವೆ. 

ನಾಲ್ಕೈದು ಜನ ಕೂರಬಹುದಾದ ದೈತ್ಯ ಕಾರಿನಲ್ಲಿ ನಮ್ಮ 'ಘನತೆ'ಯನ್ನಷ್ಟೇ ಪಕ್ಕದಲ್ಲಿ ಕೂರಿಸಿಕೊಂಡು, ಟ್ರಾಫಿಕ್ ಜ್ಯಾಮ್, ಇಂಧನವ್ಯಯ, ಮಾಲಿನ್ಯಗಳ ಬಗ್ಗೆ ಯೋಚಿಸದೇ ಪ್ರಯಾಣಿಸುತ್ತೇವೆ. ಬತ್ತಿಹೋದ ಕೆರೆಯ ತುಂಬಾ ಮಣ್ಣುಹೊಯ್ದು ಎತ್ತರೆತ್ತರದ ಅಪಾರ್ಟಮೆಂಟಗಳನ್ನ ಕಟ್ಟುತ್ತೇವೆ. ಅಪ್ಪಿತಪ್ಪಿ ನೀರಿರುವ ಕೆರೆಯೇನಾದರೂ ಕಂಡರೆ ನಗರದ ಸಕಲ ಮೋರಿಗಳ ನೀರನ್ನೂ ಅಲ್ಲಿಗೇ ಹರಿಸುತ್ತೇವೆ. ಹೀಗೆ ಮಾಲಿನ್ಯ-ಅಸಮತೋಲನಗಳಿಗೆ ನಮ್ಮ ಕೈಲಾದಷ್ಟೂ ಕೊಡುಗೆಗಳನ್ನು ಬಿಚ್ಚುಗೈಯಿಂದ ನೀಡುತ್ತೇವೆ!

ಹೌದು. ಇಂದು ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ಸಮಸ್ಯೆಗಳಾದ ಗಾಳಿ,ಜಲ,ಶಬ್ದ ಮತ್ತು ಭೂ ಮಾಲಿನ್ಯಗಳಾಗಲೀ, ಹೆಚ್ಚುತ್ತಿರುವ ತಾಪಮಾನಕ್ಕಾಗಲೀ, ಹಿಮಕರಗಿ ಏರುತ್ತಿರುವ ಸಮುದ್ರಮಟ್ಟಕ್ಕಾಗಲೀ, ಅತಿವೃಷ್ಟಿ-ಅನಾವೃಷ್ಟಿಗಳಿಗಾಗಲೀ ಸಿಂಹಪಾಲು ಕಾರಣವಾಗಿರುವುದು ನಗರಗಳೇ. ಚೀನಾದ ಕೆಲವು ನಗರಗಳಲ್ಲಿ ಬೆಳಗಿನಜಾವದ ಮಜಿಗಿಂತಲೂ ಗಾಢವಾಗಿ ಕವಿದಿರುವ ಹೊಗೆಯ ಮೋಡಗಳನ್ನು ಕಾಣಬಹುದೆದಂದು ಪತ್ರಿಕೆಗಳು ವರದಿಮಾಡಿದ್ದವು. ಹಾಗಾದರೇ ಆಧುನೀಕರಣ ಬರಲೇಬಾರದಿತ್ತಾ? ನಗರೀಕರಣವಾದದ್ದೇ ತಪ್ಪಾ? ಖಂಡಿತ ಅಲ್ಲ. ಪ್ರತಿಯೊಂದು ಸಂಗತಿಯಲ್ಲೂ ಅನುಕೂಲ ಹಾಗೂ ಅನಾನುಕೂಲಗಳೆಂಬ ಎರೆಡು ಮುಖಗಳಿದ್ದೇ ಇರುತ್ತವೆ. ಅನುಕೂಲಕ್ಕಾಗಿ ಅದನ್ನು ಬಳಸಿಕೊಳ್ಳುವ ನಾವು ಅದರಿಂದಾಗುವ ಸಮಸ್ಯೆಗಳ ಅರಿವಿದ್ದೂ ಅದನ್ನ ಗಂಭೀರವಾಗಿ ಪರಿಗಣಿಸದೇ ಹೋದದ್ದು ಮಾತ್ರ ತಪ್ಪು. 

ಹೇಗೆ ಸಮಸ್ಯೆ ನಮ್ಮಿಂದಾರಂಭವಾಗಿದೆಯೋ ಹಾಗೆಯೇ ಅದರ ಪರಿಹಾರವೂ ನಮ್ಮೊಳಗೇ ಇದೆ. ಅದಕ್ಕಾಗಿ ನಾವೇನೂ ಬಸ್ಸು, ಕಾರು, ವಿಮಾನಗಳನ್ನೆಲ್ಲ ಕುಟ್ಟಿ ಪುಡಿಮಾಡಿ ಸಮುದ್ರಕ್ಕೆಸೆಯಬೇಕಿಲ್ಲ; ಆಧುನಿಕ ಉಪಕರಣಾದಿಗಳನ್ನ ಬದಿಗೊತ್ತಿ ಸೊಪ್ಪ-ತೊಗಟೆಗಳನ್ನ ಮೈಗೆ ಸುತ್ತಿಕೊಂಡು ಮತ್ತೆ ಆದಿಮಾನವರಾಗಬೇಕಿಲ್ಲ.ಬರೀ ನಮ್ಮ ಅನುಕೂಲದ ಪರಿಧಿಯಲ್ಲಿ ಕುಳಿತು ಯೋಚಿಸುವುದನ್ನು ಬಿಟ್ಟು, ಅದರಾಚೆಗೆ ಬಂದು ನಮ್ಮ ಸುತ್ತಲಿನ ಹದಗೆಟ್ಟ ಪರಿಸ್ಥಿತಯನ್ನ ಒಮ್ಮೆ ನೋಡಬೇಕು. ಅದರಲ್ಲಿ ನಮ್ಮ ಪಾತ್ರ ಏನೆಂಬುದನ್ನ ಮನಗಾಣಬೇಕು ಮತ್ತು ತಿದ್ದಿಕೊಳ್ಳಬೇಕು. ಬಲುಮುಖ್ಯವಾಗಿ ಮಿತಿಮೀರಿದ ಹಾಗೂ ಪರಿಸರದ ಸಮತೋಲನವನ್ನು ಹಾಳುಮಾಡುವಂತಹ ಕಾರ್ಯಚಟುವಟಿಕೆಗಳನ್ನು ನಿಯಂತ್ರಣದಲ್ಲಿಡಬೇಕು.ಹೀಗೆ ವ್ಯಕ್ತಿ-ವ್ಯಕ್ತಿಯಿಂದ ಆರಂಭವಾಗುವ ಬದಲಾವಣೆಗಳು ಮುಂದೆ ಸಮಾಜವನ್ನೇ ಸುಧಾರಿಸುತ್ತವೆ. 

ಇವೆಲ್ಲಾ ಆಧುನೀಕರಣ ಹಾಗೂ ನಗರೀಕರಣದಿಂದ ಪರಿಸರದ ಮೇಲಾದ ಪರಿಣಾಮಗಳು. ಹಾಗೆಯೇ ಇಷ್ಟೇ ಪ್ರಮಾಣದಲ್ಲಿ ಇವುಗಳ ಪ್ರಭಾವಕ್ಕೊಳಗಾದ ಮತ್ತೆರೆಡು ಸಂಗತಿಗಳೆಂದರೆ ನಮ್ಮ ಸಂಸ್ಕೃತಿ ಮತ್ತು ನಮ್ಮ ಹಳ್ಳಿಗಳು. ಆಧುನೀಕರಣದ ಹೆಸರಲ್ಲಿ ಬೆಳೆದುನಿಂತ ನಗರಗಳಲ್ಲಿ ಮೆಲ್ಲನೆ ಹಬ್ಬುತ್ತಾ ಹೋದದ್ದು ಪಾಶ್ಚಾತ್ಯ ಸಂಸ್ಖೃತಿಯ ಪ್ರಭಾವ. ಅಲ್ಲಿನ ವಸ್ತ್ರ ವಿನ್ಯಾಸ, ಶಿಕ್ಷಣ, ಜೀವನ ಶೈಲಿಗಳು ಮಾತ್ರವಲ್ಲದೇ ಕೊನೆಗೆ ಅಲ್ಲಿರುವ ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಬಂಧಗಳ ಪರಿಕಲ್ಪನೆಯನ್ನೂ ಸಹಾ ನಗರಗಳು ಮೈಗೂಡಿಸಿಕೊಂಡವು. ಒಂದು ಮಟ್ಟಕ್ಕೆ ಇದರಿಂದ ಸಮಾಜಕ್ಕೆ ಒಳಿತೇ ಆಯಿತು. ಎಷ್ಟೋ ಮೌಢ್ಯಗಳೂ, ಕುರುಡು ಆಚಾರಗಳ ಕುರಿತಾದ ನಂಬಿಕೆಗಳು ಬದಲಾದವು.ಜಾತಿ-ಧರ್ಮಗಳ ನಡುವಿನ ಕಂದಕಗಳ ಆಳ ಕೊಂಚ ಕಡಿಮೆಯಾಯಿತು. ಆದರೆ ಹಳ್ಳಿ ಬದುಕಿನ ಅತಿ ಸುಂದರ ಪದ್ಧತಿಗಳಾದ ಕೊಡು-ಕೊಳ್ಳುವಿಕೆಗಳೂ, ಸಹಕಾರ ಮನೋಭಾವಗಳೂ ನಗರ ಬದುಕಿನಲ್ಲಿ ಕೊಚ್ಚಿಹೂದವು. ನೆರೆ-ಹೊರೆಯೆನ್ನುವ ಕಲ್ಪನೆ ಮರೆಯಾಗಿ ಪಟ್ಟಣವೆನ್ನುವುದು ಅಪರಿಚಿತ ಸಂತೆಯಂತಾಗಿಬಿಟ್ಟಿದೆ. ಇನ್ನು ಕೃಷಿಯ ತವರಾದ ಹಳ್ಳಿಗಳಿಂದ ಜನ ವಿಮುಖರಾಗುತ್ತಿರುವುದು ಭವಿಷ್ಯಕ್ಕೆ ದೊಡ್ಡ ಸವಾಲು. ವ್ಯವಸಾಯ ರಂಗದಲ್ಲಿರುವ ನೂರೆಂಟು ತೊಡಕುಗಳು, ಅಭದ್ರತೆ, ಆತಂಕಗಳನ್ನು ನೋಡಿ ದಣಿದಿರುವ ಯುವ ಪೀಳಿಗೆ ನಗರ ಜೀವನದ ಸೊಬಗಿಗೆ ಮರುಳಾಗುತ್ತಿದೆ. ಕೆಲವೊಮ್ಮೆ ಇದು ಅನಿವಾರ್ಯವೂ ಹೌದು. ನಗರದ ಶ್ರಮರಹಿತ ಜೀವನ ಭೌತಿಕ ಹಾಗೂ ಮಾನಸಿಕವಾಗಿ ಮನುಷ್ಯನನ್ನು ದುರ್ಬಲಗೊಳಿಸುತ್ತಿದೆ. ಆದರೆ ಎದುರು   ಹೊಳೆಯುತ್ತಿರುವ ವೈಭವ ಕಣ್ಣಿಗೆ ಕಾಣುತ್ತದೇ ಹೊರತು ಅದರಾಳದಲ್ಲಿ ಮರೆಯಾಗಿ ಬೆರೆತಿರುವ ಅಪಾಯಗಳು ಗೋಚರವಾಗುವುದೇ ಇಲ್ಲ!

ನಗರಗಳು ನಗರಗಳಾಗೇ ಇರಲಿ, ಹಳ್ಳಿಗಳು ಹಳ್ಳಿಗಳಾಗೇ ಇರಲಿ. ಆದರೆ ಅಭಿವೃದ್ಧಿ ಎನ್ನುವುದು ಮಾತ್ರ ಈ ಎರೆಡರಲ್ಲೂ ವ್ಯಾಪಿಸಬೇಕು. ಕೈಗಾರಿಕಾ ಕ್ರಾಂತಿಯಂತೆಯೇ ಕೃಷಿವಲಯದಲ್ಲೂ ಹಸಿರುಕ್ರಾಂತಿಯಾಗಬೇಕು. ಎರೆಡೂ ಕಡೆ ಸ್ವಚ್ಛತೆಯೂ ಸೆರಿದಂತೆ ಇನ್ನಿತರ ಮೂಲಭೂತ ವಿಷಯಗಳು ವೃದ್ಧಿಯಾಗಬೇಕು. ಅಗತ್ಯತೆಗನುಗುಣವಾಗಿ ಸೌಲಭ್ಯಗಳು ಹಂಚಿಕೆಯಾಗಬೇಕು. ಆರ್ಥಿಕ ಸುಸ್ತಿಥಿಗಳಿಸಲು ನಗರಕ್ಕೇ ಹೋಗಬೇಕೆನ್ನುವ ಬದಲು ಹಳ್ಳಿಗಳಲ್ಲೇ ಪರ್ಯಾಯ ಜೀವನೋಪಾಯಗಳನ್ನ ಕಂಡುಕೊಳ್ಳಬೇಕು. ತುಂಬಾ ಮುಖ್ಯವಾಗಿ ಈ ಅಂಶಗಳೆಲ್ಲವೂ  ನಮಗೆ ಮನದಟ್ಟಗಬೇಕು. ಆಗಲೇ ಅಭಿವೃದ್ಧಿ ಹಾಗೂ ನಗರೀಕರಣಗಳ ನಿಜವಾದ ಲಾಭ ಸಮಾಜಕ್ಕೆ ಸಿಗಲು ಸಾಧ್ಯ.

('ಅಖಿಲ ಕರ್ನಾಟಕ ಪ್ರಥಮ ಯುವಕವಿ ಸಮ್ಮೇಳನ'ದ ಸ್ಮರಣ ಸಂಚಿಕೆಗಾಗಿ ಬರೆದ ಲೇಖನ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...