ಮಂಗಳವಾರ, ನವೆಂಬರ್ 12, 2019

ಸ್ವಚ್ಛಂದ



ರಾತ್ರೆ ಸುರಿದ ಮಳೆಯಿಂದಾಗಿ ಶಿವಮೊಗ್ಗದಿಂದ ಕೊಡಚನಹಳ್ಳಿಗೆ ಹೋಗುವ ಎರೆಡು ಮಾರ್ಗಗಳಲ್ಲೂ ವಾಹನ ಸಂಚಾರ ಸ್ಥಗಿತಗೊಂಡಿದೆಯೆಂಬ ವಿಷಯ ತಿಳಿಯುವ ಹೊತ್ತಿಗಾಗಲೇ ನಾನು ಶಿವಮೊಗ್ಗದ ರೈಲ್ವೇ ನಿಲ್ದಾಣದಲ್ಲಿ ಇಳಿದಾಗಿತ್ತು. ಹೋಗೋಣವೆಂದರೆ ಒಬ್ಬನೇ ಒಬ್ಬ ಪರಿಚಿತನ ಮನೆಯೂ ಶಿವಮೊಗ್ಗದಲ್ಲಿಲ್ಲ. ದೂರದ ಪಟ್ಟಣಸೇರಿ ನನ್ನ ಜಿಲ್ಲೆಗೇ ನಾನು ಅದೆಷ್ಟು ಅಪರಿಚಿತನಾಗಿಬಿಟ್ಟೆನೆಂದು ಯೋಚಿಸುತ್ತಿದ್ದಾಗಲೇ ರಿಶಿಕೇಶ್ ನ ನೆನಪಾಗಿದ್ದು. 

ರಿಶಿ ನನ್ನ ಎಕ್ಸ್ ಕಲೀಗ್ ಕಮ್ ರೂಮ್ ಮೆಟ್. ತೀರ್ಥಹಳ್ಳಿಯವನು. ನಾಲ್ಕು ಜನರೆದುರು ನಿಂತು ಎರೆಡು ಮಾತನಾಡಲೂ ಅಂಜುತ್ತಲೇ ಗಣಪತಿ ಹಬ್ಬದ ರಾಜಬೀದಿ ಮೆರವಣಿಗೆಯಲ್ಲಿ ತಮಟೆಯ ಸದ್ದಿಗೆ ಕುಣಿಯಬೇಕೆಂದು ಆಸೆ ಪಡುತ್ತಿದ್ದವನು. ಇಪ್ಪತ್ತೋ, ಮೊವ್ವತ್ತೋ ಉಳಿಸಲು ರಾತ್ರೆ ಮಾಡಿದ ಗಂಜಿಯನ್ನೇ ಹಗಲೂ ಕುಡಿಯುತ್ತಾ ಖಾಯಿಲೆ ಬಿದ್ದು ಕೊನೆಗೆ ನೂರಾರು ರೂಪಾಯಿ ಮಾತ್ರೆ, ಔಷಧಗಳಿಗೆ ಚೆಲ್ಲುತ್ತಿದ್ದವನು. ನಿದ್ರೆಗಣ್ಣಿನಲ್ಲಿ ಎಬ್ಬಿಸಿ ಕೇಳಿದರೂ ತನ್ನ ಬಾಸ್, ಮ್ಯಾನೇಜರ್ ಗಳನ್ನು ಬೈಯ್ಯುತ್ತಲೇ ಮಾತು ಆರಂಭಿಸುತ್ತಿದ್ದವನು. ಕೊನೆಗೊಂದು ದಿನ  ನಿದ್ರೆಯಿಂದೆದ್ದಂತೆಯೇ ಎದ್ದು ತನಗೆ ಇಷ್ಟವಿಲ್ಲದ ಕೆಲಸದ ಜೊತೆ ಬೆಂಗಳೂರನ್ನೂ ಬಿಟ್ಟು ಹೊರಟುಹೋದವನು. ಅದಾಗಿ ನಾಲ್ಕು ವರ್ಷ ಅವನು ಸಂಪರ್ಕವೇ ತಪ್ಪಿಹೋಗಿತ್ತು. ಊರಿನಲ್ಲಿ ಯಾವುದೋ ಆಡಿಟರ್ ಫರ್ಮ್'ನಲ್ಲಿದ್ದಾನಂತೆ, ಕೃಷಿ ಮಾಡುತ್ತಿದ್ದಾನಂತೆ, ಮತ್ತೆ ಬೆಂಗಳೂರಿಗೆ ಬಂದ್ನಂತೆ, ಯಾವುದೋ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಿದ್ದಾನಂತೆ... ಪ್ರತೀ ಬಾರಿ ವಿಚಾರಿಸಿದಾಗಲೂ ಅವನ ಕುರಿತಾದ ಹೊಸ ಸಮಾಚಾರವೊಂದು ಕಿವಿಗೆ ಬೀಳುತ್ತಿತ್ತು. ಸ್ಥಿರವಾದ ಒಂದು ನೆಲೆಯಿಲ್ಲದ ಅವನ ಈ ಅಲೆದಾಟದ ಸಮಾಚಾರಗಳನ್ನು ಹೇಳಿದವರೆಲ್ಲ ಇಷ್ಟು ವರ್ಷದಿಂದ ಬೆಂಗಳೂರಿನಲ್ಲೇ ಉಳಿದಿರುವ ನನ್ನ ತಾಳ್ಮೆ, ಶ್ರದ್ಧೆಗಳನ್ನು ಹಾಡಿಹೊಗಳಿದ್ದರು. ಆಗೆಲ್ಲ, ಪ್ರತಿದಿನ ಬೆಳಗ್ಗೆ ಒತ್ತಡದ ಮನಸ್ಸಿನೊಂದಿಗೆ ಕೆಲಸಕ್ಕೆ ಹೋಗುವಾಗ ರಿಶಿ ಮಾಡಿದ್ದೇ ಸರಿಯೆಂದೂ, ಸಂಜೆ ತಣ್ಣಗೆ ಮರಳಿಬರುವಾಗ ನಾನು ಸರಿಯೆಂದೂ ಯೋಚಿಸುವ ನಾನು, ಈ ಬೆಂಗಳೂರಿನೊಂದಿಗೆ ಯಾವುದೇ ಕ್ಷಣದಲ್ಲಾದರೂ ಕಳಚಿಹೋಗಬಹುದಾದ ಸೂಕ್ಷ್ಮ ನಂಟಿನೆಳೆಯಲ್ಲೇ ಬದುಕುತ್ತಿರುವೆನೆಂಬ ಸತ್ಯ ನೆನಪಾಗಿ ಅವರ ಶಭಾಶ್ಗಿರಿಯನ್ನು ನುಂಗಲೂ ಆಗದೇ, ಉಗುಳಲೂ ಆಗದೇ ಪೆಚ್ಚುನಗೆ ನಗುತ್ತಿದ್ದೆ. 

ಈಗ ರಿಶಿ ಇಲ್ಲೇ ಎಲ್ಲೋ ಶಿವಮೊಗ್ಗ ಪಟ್ಟಣದಲ್ಲೇ ಇದ್ದಾನೆಂಬ ಪಕ್ಕಾ ಸುದ್ದಿಯಿತ್ತು. ಅವನಿಗೆ ಕರೆಮಾಡುವುದೇ ಉಳಿದಿರುವ ಮಾರ್ಗವೆನಿಸಿ ಮೊಬೈಲ್ ಕೈಗೆತ್ತಿಕೊಂಡು ಫೋನಾಯಿಸಿದೆ‌. ಮೂರನೇ ರಿಂಗಿಗೇ ಫೋನು ಎತ್ತಿದ, ಖಾಲಿ ಕೂತವನಂತೆ.

"ಹಲೋ, ಅರೆರೇ ಭಟ್ರು! ಹೇಳಿ ಭಟ್ರೇ ಹೇಗಿದೀರ? ಅಪರೂಪಕ್ಕೆ ನೆನಪಿಸಿಕೊಂಡಿದೀರ? ಏನ್ ಸಮಾಚಾರ?"
ನಾಲ್ಕು ವರ್ಷಗಳ ಹಿಂದಿನ ಅದೇ ಹಳೇ ಧ್ವನಿಯಲ್ಲಿನ ಆತ್ಮೀಯತೆ ಮಾತ್ರ ಹೊಚ್ಚಹೊಸತರಂತಿತ್ತು.

"ಹಲೋ ರಿಶಿ! ನಾನು ಚೆನ್ನಾಗಿದೀನಿ. ನೀನು ಹೇಗಿದ್ದಿ? ಜಸ್ಟ್ ಈಗ ಶಿವಮೊಗ್ಗಕ್ಕೆ ಬಂದಿಳಿದೆ. ಇಲ್ಲಿ ನೋಡಿದ್ರೆ ನಮ್ಮೂರಿನ ದಾರಿನೇ ಬಂದ್ ಆಗಿದ್ಯಂತೆ..."

"ಓಹ್ ಹೌದಾ? ರಾತ್ರೆಯಿಡೀ ಭಯಂಕರ ಮಳೆ ಹುಯ್ದಿದೆ. ಒಂದ್ಕೆಲಸ ಮಾಡಿ. ನೇರ ನನ್ನ ರೂಮಿಗೆ ಬಂದ್ಬಿಡಿ. ದುರ್ಗಿಗುಡಿ ಗೊತ್ತಲ್ಲ, ಅದರ ಪಕ್ಕದ ರಸ್ತೆಯ ನಾಲ್ಕನೇ ಕ್ರಾಸಲ್ಲೇ ಇರೋದು ನನ್ನ ರೂಮು"

ಇಷ್ಟು ದಿನ ಹೇಗಿದ್ದೀ ಎಂದೂ ವಿಚಾರಿಸದೇ ಈಗ ಸಂಕಟ ಬಂದಿರುವಾಗ ನೆನಪಿಸಿಕೊಳ್ಳುತ್ತಿದ್ದೇನೆಂಬ ಮುಜುಗರದಿಂದ ತೊದಲುತ್ತಿದ್ದ ನನ್ನ ಮಾತಿನೊಳಗಿನ ದಾಕ್ಷಿಣ್ಯವನ್ನು ಅರಿತವನಂತೆ, ಬೇಡುವ ಮೊದಲೇ ಸಹಾಯಹಸ್ತ ಚಾಚಿದ ಅವನ ಅದೇ ಹಳೆಯ ಆತ್ಮೀಯತೆಗೆ ಅರೆಕ್ಷಣ ಮನಸ್ಸು ತುಂಬಿಬಂತು. ಬ್ಯಾಗ್ ಏರಿಸಿಕೊಂಡು ಅವನು ಹೇಳಿದ ವಿಳಾಸದತ್ತ ನಡೆಯತೊಡಗಿದೆ.

ಮಳೆ ಮುದ್ದಿಸಿಹೋದ ಚುಮುಚುಮು ಬೆಳಗೊಂದು ಶಿವಮೊಗ್ಗೆಯಲ್ಲಿ ಮೆಲ್ಲನೆ ಅರಳುತ್ತಿತ್ತು. ರಜೆಯ ಮೇಲೆ ತವರಿಗೆ ಬರುತ್ತಿರುವ ಅದೆಷ್ಟೋ ಹೃದಯಗಳನ್ನು ಹೊತ್ತ ಸಂಭ್ರಮದಿಂದೆಂಬಂತೆ ಹತ್ತಾರು ಬಸ್ಸುಗಳು ಲವಲವಿಕೆಯಿಂದ ನಿಲ್ದಾಣದೊಳಕ್ಕೆ ನುಗ್ಗುತ್ತಿದ್ದವು. ಅಲ್ಲಲ್ಲಿ ಬಟಾವಡೆಯಾಗಬೇಕಾದ ಅಂದಿನ ದಿನಪತ್ರಿಕೆಗಳನ್ನು ಗುಡ್ಡೆಹಾಕಿಕೊಂಡ ಹುಡುಗರು ಗಡಿಬಿಡಿಯಿಂದ ಕೆದಕಾಡುತ್ತಿದ್ದರು. ಜೊತೆಗೇ ಹಾಲಿನವರು, ಹೂವಿನವರು, ಹಬೆಯಾಡುತ್ತಿರುವ ಚಹಾದವರು.... ಹೀಗೆ ತಾಜಾ ಮುಂಜಾನೆಯೊಂದನ್ನು ಮತ್ತಷ್ಟು ತಾಜಾ ಆಗಿಸುವ ಎಲ್ಲ ರೀತಿಯ ಚಟುವಟಿಕೆಗಳೂ ಹನಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಜರುಗುತ್ತಿದ್ದವು. ನನ್ನೂರಿನ ಜನಜೀವನದ ಮುಖಗಳನ್ನು ಕಣ್ತುಂಬಿಕೊಳ್ಳುತ್ತಾ ದುರ್ಗಿಗುಡಿ ರಸ್ತೆಯತ್ತ ನಡೆಯತೊಡಗಿದೆ.

ಬೆಂಗಳೂರಿನಿಂದ ಊರಿಗೆ ಬಂದಿಳಿಯುವ ಈ ಮುಂಜಾನೆಗಳು, ಕಳೆದ ಏಳು ವರ್ಷಗಳಿಂದ ನನ್ನ ಬದುಕಿನ ಅತೀ ಸಂತಸದ ಕ್ಷಣಗಳು. ನಾನು ಕೇವಲ ನಾನಾಗಿ ಇರಬಲ್ಲ, ಆಫೀಸಿನ ಮುಗಿಯದ ಮಂಡೆಬಿಸಿಗಳ ಕರಿನೆರಳಿಲ್ಲದ, ಅಮ್ಮನ ಬೆಚ್ಚಗಿನ ಮಡಿಲಿನಂತಹ ಈ ಎರೆಡು-ಮೂರು ರಜಾದಿನಗಳು ನನ್ನೆದುರಿವೆಯೆಂಬ ಈ ದಿವ್ಯ ನೆಮ್ಮದಿಗೆ ಸಮನಾದ ಇನ್ನೊಂದು ಸಂಭ್ರಮವಿಲ್ಲ. ಈಗಷ್ಟೇ ಅಂಗಡಿ ಮುಂಗಟ್ಟುಗಳ ಕದ ತೆರೆಯುತ್ತಿರುವ, ಮನೆಯೆದುರು ರಂಗೋಲಿ ಹಾಕುತ್ತಿರುವ, ಸಿಟಿ ಬಸ್ಸಿಗಾಗಿ ಕಾಯುತ್ತಿರುವ, ತಮ್ಮದೇ ಊರಿನಲ್ಲಿ ಬದುಕು ಕಂಡುಕೊಂಡ ಇಲ್ಲಿನ ಪುಣ್ಯಪುರುಷರನ್ನೆಲ್ಲ ಕಣ್ತುಂಬಿಕೊಳ್ಳುವಾಗ ಮುಂದೊಂದು ದಿನ ಇವರಲ್ಲಿ ನಾನೂ ಒಬ್ಬನಾಗುವ ಹಗಲುಗನಸು ತನ್ನಷ್ಟಕ್ಕೆ ತಾನೇ ಮನದೊಳಗೆ ಬಿತ್ತರವಾಗುತ್ತದೆ. ನಾನು ಸಧ್ಯಕ್ಕೆ ಕಲ್ಪನೆಯಲ್ಲಿ ಮಾತ್ರ ಕಾಣಬಹುದಾದ ಈ ಬದುಕನ್ನು ಈಗಾಗಲೇ ಬದುಕುತ್ತಿರುವ ರಿಶಿಯನ್ನು ಭೇಟಿಯಾಗುತ್ತಿರುವುದಕ್ಕೆ ಒಂದು ತೆರನಾದ ಕುತೂಹಲ ಬೆರೆತ ಸಂತೋಷ ತಂತಾನೇ ಅರಳಿಕೊಂಡಿತ್ತು. ಈಗ ಹೇಗಿರಬಹುದು ರಿಶಿ? ಅಂದು ಐಟಿ ಬದುಕಿನ ಬಂಗಾರದ ಪಂಜರದಂತಹಾ ಬಂಧನದೊಳಗೆ ಕುಳಿತು ಅವನು ಹಂಬಲಿಸುತ್ತಿದ್ದ ಸ್ವತಂತ್ರ ಜೀವನ ಅವನಿಗೆ ಸಿಕ್ಕಿದೆಯಾ? ಪಟ್ಟಣದಾಚೆಗೂ ಇರುವ ಬದುಕುವ ದಾರಿ ಅವನ ಕೈ ಹಿಡಿದಿದೆಯಾ? ಯೋಚಿಸುತ್ತಿದ್ದಾಗಲೇ ಹೆಜ್ಜೆಗಳು ರಿಶಿ ಹೇಳಿದ ರಸ್ತೆಯ ತಿರುವಿನಲ್ಲಿದ್ದವು. ನಾಲ್ಕನೇ ಕ್ರಾಸಿನಲ್ಲಿ ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲೇ ಎದುರಿದ್ದ ಎರೆಡು ಮಹಡಿ ಕಟ್ಟಡದ ಟೆರಾಸಿನ ಮೇಲೆ ಕೈಬೀಸುತ್ತ ನಿಂತಿದ್ದ ರಿಶಿ ಕಣ್ಣಿಗೆಬಿದ್ದ.

"ಓಹೋಹೋ ಬನ್ನಿ ಬನ್ನಿ... ಎಂತದಿದು ಭಟ್ರೇ. ನಾಲ್ಕು ವರ್ಷ ಆಯ್ತು, ಒಂಚೂರು ತ್ವಾರ-ಗೀರ ಎಂತದೂ ಆಗೇ ಇಲ್ವಲ್ಲ ನೀವು! ಹೊಟ್ಟೆಗೇನಾದ್ರೂ ತಿಂತಿದೀರೋ ಇಲ್ವೋ?"
ಮುಖದ ಮೇಲೆ ನಗೆ ತುಂಬಿಕೊಂಡು ಮೆಟ್ಟಿಲೇರುತ್ತಾ ಬಂದ ನನ್ನನ್ನು ಬ್ಯಾಗಿನ ಸಮೇತ ತಬ್ಬಿಕೊಳ್ಳುತ್ತಾ ಹೇಳಿದವನ ಮಾತು ಮಲೆನಾಡಿನ ಮಳೆಯಷ್ಟೇ ತಿಳಿಯಾಗಿತ್ತು.

"ಎಂತ ಮಾಡೋದು ಮಾರಾಯ? ಆಫೀಸಲ್ಲಿ ಬಾಸಿನ ಕಾಟ. ರೂಮಲ್ಲಿ ಓನರ್ ಕಾಟ. ಊರಿಗೆ ಬಂದ್ರೆ ಮದುವೆ ಅಗು ಅಂತ ಅಮ್ಮನ ಕಾಟ. ಎಲ್ಲದರ ಮಧ್ಯೆ ಹೋಟೆಲಿನ ಸೋಡಾ ಬೆರೆಸಿದ ಊಟ! ದಪ್ಪ ಆಗೋದಾದ್ರೂ ಹೆಂಗೆ ಹೇಳು?" 

"ಹ..ಹ.. ಬೆಂಗಳೂರಿನ ಬದುಕೇ ಹಾಗೆ. ಒಂಥರಾ ಶೋಕೇಸ್ ಇದ್ದಹಾಗೆ! ನೋಡೋದಕ್ಕೆ, ಹೇಳಿಕೊಳ್ಳೋದಕ್ಕೆ ತುಂಬಾ ಚಂದ. ಆದರೆ ಅನುಭವಿಸೋದಕ್ಕೆ ಬರೋದಿಲ್ಲ!" ಎನ್ನುತ್ತಾ ಹೆಗಲಮೇಲಿನ ಕೈ ತೆಗೆಯದೆಯೇ ರೂಮಿನೊಳಕ್ಕೆ ಕರೆದೊಯ್ದ. ಎತ್ತರದ ಮರದ ಮೇಲಿನ ಪುಟ್ಟ ಗೂಡಿನಂತಿತ್ತು ಅವನ ರೂಮು. ಕೋಣೆಯೆದುರಿನ ಖಾಲಿ ಜಾಗದಲ್ಲಿ ಪುಟ್ಟಪುಟ್ಟಗೆ ಹೂಬಿಟ್ಟುನಿಂತ ಪಾಟ್ ಗಳು, ಕೋಣೆಯೊಳಗೆ ಆಗಷ್ಟೇ ಹಚ್ಚಿದ್ದ ಅಗರಬತ್ತಿಯ ಘಮಲು, ಹಣತೆಯುರಿಯುತ್ತಿದ್ದ ದೇವರ ಫೋಟೋ, ಕಪಾಟಿನಲ್ಲಿ ಮಟ್ಟಸವಾಗಿ ಜೋಡಿಸಿಟ್ಟ ಪುಸ್ತಕಗಳು, ತಂತಮ್ಮ ಜಾಗದಲ್ಲಿ ಶಿಸ್ತಾಗಿ ಕುಳಿತಿರುವ, ಅವನು ತನ್ನ ಅಡಿಗೆಯನ್ನು ತಾನೇ ಮಾಡಿಕೊಳ್ಳುತ್ತಿದ್ದಾನೆಂದು ಸಾರುತ್ತಿರುವ ವಿವಿಧ ಪಾತ್ರೆಗಳು.. ಪರವಾಗಿಲ್ಲ ಆಸಾಮಿ, ಕೆಲಸ ಬಿಟ್ಟರೂ ಶಿಸ್ತು ಬಿಟ್ಟಿಲ್ಲ ಎಂದುಕೊಳ್ಳುತ್ತಲೇ ಹಾಸಿಗೆ ಹಾಸಿಕೊಂಡೇ ಇದ್ದ ಮಂಚದಮೇಲೆ ಕುಳಿತೆ. 

"ಮತ್ತೇನ್ರೀ ಸಮಾಚಾರ? ಹಬ್ಬಕ್ಕೆ ಎಷ್ಟುದಿನ ರಜೆ?"
ಕಾಫಿಪುಡಿ ಪ್ಯಾಕೇಟಿನ ತುದಿ ಕತ್ತರಿಸುತ್ತಾ ಕೇಳಿದ.

"ಮ್ಯಾನೇಜರ್ ಕೊಟ್ಟಿರೋದು ಒಂದು ದಿನ, ನಾನು ತಗೊಳ್ತಿರೋದು ಎರೆಡು ದಿನ."
ಮುಗುಳ್ನಕ್ಕು ಉತ್ತರಿಸಿದೆ.

"ಇನ್ನೂ ನಿಮಗೊಬ್ಬ ಒಳ್ಳೇ ಬಾಸ್ ಸಿಕ್ಕಿಲ್ಲ ಅಂತಾಯ್ತು ಹಂಗಾದ್ರೆ!"

"ನನ್ನ ಜಾತಕದಲ್ಲೇ ಆ ಯೋಗ ಇಲ್ಲಾಂತ ಕಾಣತ್ತೆ ರಿಶಿ. ಬಿಡು. ಮತ್ತೇನು ಸಮಾಚಾರ? ಹೇಗಿದೆ ಊರಿನ ಲೈಫು? ಈಗೆಲ್ಲಿ ಕೆಲಸ ಮಾಡ್ತಿದ್ದೀ?"
ಮತ್ತದೇ ಬೆಂಗಳೂರು, ಆಫೀಸು, ಬಾಸ್'ಗಳನ್ನು ನೆನಪಿಸಿಕೊಳ್ಳಲಿಕ್ಕೆ ಇಷ್ಟವಿಲ್ಲದೇ ಮಾತಿನ ದಿಕ್ಕು ಬದಲಿಸುವ ಜೊತಗೆ ಅವನ ಬದುಕಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲವೂ ಜೊತೆಯಾಗಿ ಆ ಪ್ರೆಶ್ನೆ ಕೇಳಿದೆ.

"ಸಧ್ಯಕ್ಕೆ ಎಲ್ಲೂ ಇಲ್ಲ!"
ನನ್ನ ಕಣ್ಣು, ಬಾಯಿಗಳು ಇಷ್ಟಗಲಕ್ಕೆ ತೆರೆದುಕೊಳ್ಳುವಂತಹಾ ಅಚ್ಚರಿಯ ಉತ್ತರವನ್ನು ತೀರಾ ತಣ್ಣಗಿನ ದನಿಯಲ್ಲಿ  ಕೊಟ್ಟುಬಿಟ್ಟ.

"ಉದ್ಯೋಗವೇ ಇಲ್ವಾ? ಹಾಗಾದರೆ ಬದುಕಿಗೇನು ಮಾಡ್ತಿದ್ದೀಯಪ್ಪಾ?"
ಅರ್ಧ ಅಚ್ಚರಿ, ಇನ್ನರ್ಧ ಆಘಾತದಿಂದೆಂಬಂತೆ ಕೇಳಿದೆ.

"ಉದ್ಯೋಗವೊಂದೇ ಆದಾಯದ ಮೂಲ ಅಲ್ಲ ಅಲ್ವ ಭಟ್ರೇ. ಅಷ್ಟಕ್ಕೂ ಈ ಉದ್ಯೋಗ ಬದುಕಿನ ಪರಕೀಯತೆಯಿಂದಾಚೆ ಬರಬೇಕೆಂದೇ ಅಲ್ವ ನಾನು ಬೆಂಗಳೂರು ಬಿಟ್ಟು ಬಂದದ್ದು? ಕಳೆದ ವರ್ಷ ಹೊಸದಾಗಿ ಮುಕ್ಕಾಲೆಕರೆ ತೋಟ ಖರೀದಿಸಿದೆ. ಮಳೆಗಾಲ ನೋಡೀ, ತೋಟಕ್ಕೆ ಔಷಧಿ ಹೊಡೆಯೋದಿತ್ತು. ಈ ತೋಟ ತಗೊಂಡಿದ್ದು ಅಪ್ಪನಿಗೆ ಒಂಚೂರೂ ಇಷ್ಟವಿಲ್ಲ. ಅಪ್ಪೀತಪ್ಪೀ ಕಾಲೆಡವಿದಾಗಲೂ ತೋಟದಾಚೆಗಿನ ಹಳ್ಳಕ್ಕಾದರೂ ಬೀಳುತ್ತಾರೆಯೇ ಹೊರತೂ ನನ್ನ ತೋಟಕ್ಕೆ ಕಾಲು ಇಡೋದಿಲ್ಲ! ಅದಕ್ಕೆ ನಾನೇ ಹೋಗಿ ಎಲ್ಲ ಕೆಲಸ ಮುಗಿಸಿ ಬಂದೆ..."

"ಅದೇನೋ ಸರಿ, ತೋಟ, ಮನೆ, ಅಪ್ಪ, ಅಮ್ಮ ಎಲ್ಲ ಅಲ್ಲಿರುವಾಗ ನೀನು ಇಲ್ಲೇನು ಮಡ್ತಿದ್ದೀಯ?"
ಅವನ ಉತ್ತರ ನನ್ನೊಳಗೆ ಮತ್ತೊಂದು ಪ್ರೆಶ್ನೆಯನ್ನು ಹುಟ್ಟುಹಾಕಿತ್ತು.

"ಇರೋ ಮುಕ್ಕಾಲೆಕರೆ ಜಮೀನಿಗೆ ಪೂರ್ತಿ ಜೀವನವನ್ನೇ ಬರೆದುಕೊಡೋಕಾಗತ್ತಾ ಹೇಳಿ? ಇಲ್ಲೊಬ್ಬರು ಆಡಿಟರ್ ಪರಿಚಯವಾಗಿದ್ದಾರೆ. ಅವರ ಕೆಲಸಗಳಲ್ಲಿ ಚಿಕ್ಕಪುಟ್ಟದನ್ನ ನನಗೆ ಕೊಡ್ತಾರೆ. ಒಂದಿಷ್ಟು ಪುಡಿಗಾಸೂ ಬರತ್ತೆ. ಅಲ್ಲದೇ ಇಲ್ಲೇ ಬೇಗೂರಲ್ಲಿ ನನ್ನ ಪರಿಚಯದವರೊಬ್ಬರ ಹೊಸದೊಂದು ಸೀರಿಯಲ್ ನ ಶೂಟಿಂಗ್ ನಡೀತಿದೆ. ಅದಕ್ಕೆ ಸಂಭಾಷಣೆ ನಾನೇ ಬರೀತಿದೀನಿ. ಹಾಗಾಗಿಯೇ ಈ ಟೆರಾಸು, ರೂಮು ಎಲ್ಲ..."

"ಓಹ್.. ಊರಿಗೆ ಬಂದು ಆಲ್ರೌಂಡರ್ ಆಗಿದೀಯ ಅನ್ನು! ಇನ್ನೂ ಏನೇನು ಧಂಧೆ ಮಾಡ್ತೀಯಪ್ಪಾ ಸಕಲ ಕಲಾವಲ್ಲಭ?"

"ಅದೂ ಇದೂ ಅಂತ ಏನಿಲ್ಲ ಸರ್. ಪುರ್ಸೊತ್ತಿದ್ದಾಗ ಬಂದು ಬಾಗಿಲು ಬಡಿಯೋ ಯಾವ ಕೆಲಸಕ್ಕೂ ಇಲ್ಲ ಅನ್ನೋದಿಲ್ಲ. ಊರಿನಲ್ಲಿ ಗೆಳೆಯನೊಬ್ಬನ ಓಮಿನಿ ಇದೆ. ಅವನು ಬ್ಯುಸಿ ಇದ್ದಾಗ ಅದಕ್ಕೆ ನಾನೇ ಡ್ರೈವರ್. ಆಗಾಗ ಕ್ಯಾಟರಿಂಗ್ ಗೂ ಹೋಗ್ತೀನಿ... ಬಿಡಿ. ಹೇಳೋದಕ್ಕೇನು? ಹತ್ತಾರು ಕೆಲಸಗಳಿವೆ. ಆದರೆ ಪಕ್ಕಾ ಉದ್ಯೋಗ ಅನ್ನುವಂಥಾದ್ದು, ನಿಶ್ಚಿತ ಕಮಾಯಿ ಆಗುವಂಥಾದ್ದು, ಬಹು ಮುಖ್ಯವಾಗಿ ಹೆಣ್ಣು ಕೊಡಬೇಕಾದ ಮಾವಂದಿರಿಗೆ ತೋರಿಸಬಹುದಾದಂಥಾದ್ದು ಒಂದೂ ಇಲ್ಲ... ಸರಿ ಭಟ್ರೇ, ನೀವೀಗ ರೆಸ್ಟ್ ಮಾಡಿ. ನಿಮ್ಮೂರಿನ ರೂಟು ಸರಿಯಾಗಲಿಕ್ಕೆ ಏನಿಲ್ಲವೆಂದರೂ ಸಂಜೆಯಾಗುತ್ತೆ. ಮಧ್ಯಾಹ್ನ ಅರಾಮಾಗಿ ಕೂತು ಮಾತಾಡೋಣ. ನನಗೊಂದು ಚಿಕ್ಕ ಕೆಲಸ ಇದೆ. ಹನ್ನೊಂದು ಗಂಟೆಗೆಲ್ಲ ವಾಪಾಸು ಬಂದು ಬಿಡ್ತೀನಿ. ನಿನ್ನೆಯ ಊಟಕ್ಕೇ ಒಗ್ಗರಣೆ ಹಾಕಿ ಹೆಚ್ಚೂ ಕಡಿಮೆ ಚಿತ್ರಾನ್ನ ಅನ್ನಬಹುದಾಂದಂಥಾದ್ದೊಂದನ್ನು ಮಾಡಿದೀನಿ. ತಗೊಳ್ಳಿ.. ಬೇಜಾರಾದ್ರೆ ಟಿವಿ ನೋಡಿ. ಏನೂ ಅಂದ್ಕೋಬೇಡಿ.." 
ಚಿತ್ರಾನ ತುಂಬಿದ ತಟ್ಟೆಯನ್ನು ಕೈಯ್ಯಲ್ಲಿಟ್ಟು, ನಾನು ಬೇಡವೆನ್ನುವ ಮೊದಲೇ ಬಾಗಿಲಿನಾಚೆ ಮಾರೆಯಾಗಿಬಿಟ್ಟ. 

ಇವನ ಬದುಕೂ ಬಣ್ಣ ಹಚ್ಚಿಕೊಂಡ ಈ ತಂಗಳಿನಂತಾಗಿಲ್ಲ ತಾನೇ?
ಚಿತ್ರಾನ್ನದ ತಟ್ಟೆ ಹಿಡಿದುಕೊಂಡು ಯೋಚಿಸತೊಡಗಿದೆ.

                      ****************

ಮೂರೂಕಾಲು ವರ್ಷಗಳ ಕಾಲ ಒಂದೇ ಸೂರಡಿಯಲ್ಲಿ ಬಾಡಿಗೆಯ ಜೊತೆ ಲೆಕ್ಕವಿಲ್ಲದಷ್ಟು ಬೈಟೂ ಕಾಫಿಗಳನ್ನೂ, ಫುಲ್ ಪ್ಲೇಟ್ ನ ಅರ್ಧಭಾಗ ಗೋಭೀಮಂಚೂರಿಗಳನ್ನು, ತಡ ರಾತ್ರೆಗೆ ನೆನಪಿಗೆ ಬರುತ್ತಿದ್ದ ಬಾಲ್ಯದ ತಮಾಷೆಗಳನ್ನೂ, ಹೊತ್ತಲ್ಲದ ಹೊತ್ತಿನಲ್ಲಿ ಊರಿನ ನೆನಪು ತರುತ್ತಿದ್ದ ಬಡಬಡಿಕೆಗಳನ್ನೂ, ಬೆಂಗಳೂರೆಂಬ ಬೆಂಗಾಡಿನಲ್ಲಿ ಬಂದೊದಗುತ್ತಿದ್ದ ಬೇಸರ-ತಲ್ಲಣಗಳನ್ನೂ ಹಂಚಿಕೊಂಡು ಜೊತೆಗಿದ್ದ ರಿಶಿಕೇಶ್ ಒಮ್ಮೊಮ್ಮೆ ಕನ್ನಡಿಯೊಳಗಿನ ನನ್ನದೇ ಬಿಂಬದಂತೆ ಕಾಣುತ್ತಿದ್ದ. ನಾಮಫಲಕದ ಅಕ್ಷರಗಳೇ ಮಾಸಿಹೋಗಿದ್ದ ಕಾಲೇಜೊಂದರಲ್ಲಿ ಓದು ಮುಗಿಸಿ, ಕಣ್ಮುಚ್ಚಿಕೊಂಡು ತಗ್ಗಿನೆಡೆಗೆ ಹರಿಯುವ ನೀರಿನಂತೆ ಬೆಂಗಳೂರೆಡೆಗೆ ಹರಿದುಬಂದಿದ್ದ ಇವನು, ಬದುಕು-ಭವಿಷ್ಯಗಳ ಬಗ್ಗೆ ಇಂತಹದೇ ಎನ್ನುವ ಸ್ಪಷ್ಟ ಕಲ್ಪನೆಗಳಿಲ್ಲದೆ ಯಾರೋ ಕೊಡಿಸುವ ಕೆಲಸವನ್ನು ನಂಬಿ ನಡುರಾತ್ರೆಯಲ್ಲಿ ಬಸ್ಸು ಹತ್ತಿ ಬಂದಿದ್ದ ಪಕ್ಕಾ ಹಳ್ಳಿಹೈದ. ತನ್ನ ಮೊದಲ ವೇತನ ಭಡ್ತಿಯಲ್ಲಿ ಎಲ್ಲರಿಗಿಂತ ಹೆಚ್ಚಿನ 'ಹೈಕ್' ಸಿಕ್ಕಾಗಲೂ "ಎಲ್ಲರಿಗಿಂತಲೂ ನನಗೇ ಜಾಸ್ತಿ ಹೈಕ್ ಕೊಟ್ಟಿದಾರೆ. ಇನ್ನು ನನ್ನ ಟೀಮಿನವರೆಲ್ಲ ನನ್ನನ್ನು ಪರಕೀಯನಂತೆ ನೋಡ್ತಾರೆ" ಎಂದು ಪೆಚ್ಚುಮುಖ ಹಾಕಿಕೊಂಡು ನುಡಿದವನು ಮುಗ್ಧನೋ, ಪೆದ್ದನೋ, ನಟನೋ ಎಂದು ನಿರ್ಧರಿಸಲಾಗದೆ ನಕ್ಕಿದ್ದೆ‌. ಹಿಂಜರಿಕೆ, ಅತಿಯಾದ ಚಿಂತಿಸುವಿಕೆ, ನಕಾರಾತ್ಮಕ ಯೋಚನೆ, ಕೀಳರಿಮೆ, ಭಾವುಕತೆಗಳ ಅಕ್ಷಯಪಾತ್ರೆಯಂತಿದ್ದವನನ್ನು ಬೆಂಗಳೂರಿನ ರೀತಿನೀತಿಗಳಿಗೆ 'ಅಪ್ಡೇಟ್' ಮಾಡಲು ಹೆಣಗಾಡಿದ್ದ ಗೆಳೆಯರಿಗೆಲ್ಲ ಅವನ ಕಾಲಿನ ಚಪ್ಪಲಿಯನ್ನೂ ಬದಲಾಯಿಸಲು ಸಾಧ್ಯವಾಗಿರಲಿಲ್ಲ. ಆದರೆ ಹೀಗೆ ಜೋಬದ್ರನಂತೆ ಆಫೀಸಿಗೆ ಹೋಗಿಬರುತ್ತಿದ್ದವನು ಅದೊಂದು ಸಂಜೆ ಮಾತ್ರ ಕಣ್ತುಂಬಾ ಪ್ರೀತಿ ಸುರಕೊಂಡು ಮರಳಿದ್ದ.

ಜ್ಯೋತಿ!

ಆ ಎರೆಡೂವರೆ ಅಕ್ಷರದ ಹೆಸರನ್ನು ಕೇವಲ ತನ್ನ ಹೃದಯಕ್ಕೆ ಮಾತ್ರ ಕೇಳಿಸುವಂತೆ ಪಿಸುಗುಟ್ಟಿದವನ ಕಣ್ಣಲ್ಲಿ ಈಗಷ್ಟೇ ಹುಟ್ಟಿದ ಕನಸೊಂದು ನವಿರಾಗಿ ಮೈಮುರಿಯುತ್ತಿತ್ತು. 

"ಯಾರೊಂದಿಗೂ ಅಷ್ಟಾಗಿ ಬೆರೆಯಲ್ಲ. ಗಟ್ಟಿಯಾಗಿ ಒಂದೂ ಮಾತಾಡಲ್ಲ. ಪಕ್ಕಾ ಗೌರಮ್ಮ.. ನಿನಗಂತಲೇ ಹೇಳಿ ಮಾಡಿಸಿದ ಹುಡುಗಿ!"

ಗೆಳೆಯರು ಹಾಗೆಂದು ತಮಾಷೆಮಾಡಿದಾಗ ನೂರು ದೀಪಗಳು ಒಮ್ಮಗೇ ಹೊತ್ತಿಕೊಂಡಂತೆ ಫಕ್ಕನೆ ಅವನ ಕೆನ್ನೆಯಲ್ಲರಳಿದ ನಾಚಿಕೆಯ ನಗುವಿತ್ತಲ್ಲ, ಅದು ಅವನು ಹೇಳದುದ್ದೆಲ್ಲವನ್ನೂ ಹೇಳಿಬಿಟ್ಟಿತ್ತು. ಅವಳೂ ಅಷ್ಟೇ, ಮೌನದ ಗೂಡೊಳಗಿನ ಮುದ್ದುಗಿಳಿಯಂತೆ ಸದಾ ಒಬ್ಬಳೇ ಇರುತ್ತಿದ್ದವಳು ಈ ರಿಶಿಯ ಬಳಿ ಮಾತ್ರ ತನ್ನೆಲ್ಲ ನಿನ್ನೆ, ನಾಳೆಗಳ ಸಂಗತಿಗಳನ್ನು ಪಿಸುಗುಟ್ಟಿಬಿಟ್ಟಿದ್ದಳು. ಯಾರದೋ ಪ್ರಾಜೆಕ್ಟ್ ನ ಕೆಲಸಕ್ಕಾಗಿ ಸಾಲ್ಡರ್ ಮಾಡುತ್ತಾ ಕೈಸುಟ್ಟುಕೊಂಡ ಅವನ ತೋರುಬೆರಳು ತನ್ನದೇ ಎಂಬಷ್ಟು ಅಕ್ಕರೆಯಿಂದ ಮುಲಾಮು ಹಚ್ಚಿದ್ದಳು. ನಮ್ಮೆಲ್ಲರ ಮುಖ ನೋಡಿ ಮಾತಾನಾಡಲೂ ಅಂಜುತ್ತಿದ್ದವಳು ಇವನ ಜೊತೆ ಮಾತ್ರ ಭವಿತವ್ಯದ ಯಾವುದೋ ಮಧುರ ಪಯಣಕ್ಕೆ ಅಣಿಯಾದವಳಂತೆ ನಗುನಗುತ್ತಾ ರಸ್ತೆಯುದ್ದಕ್ಕೂ ನಡೆದುಬಿಡುತ್ತಿದ್ದಳು. ಉಳಿದ ಹುಡುಗ-ಹುಡುಗಿಯರಂತೆ ತಂಟೆ, ತಕರಾರು, ಗೌಜು, ಗಲಾಟೆಗಳಲ್ಲದೆ ಹೀಗೆ ಸುಮ್ಮನೆ ನಡೆದುಹೋಗುವ ಇವರಿಬ್ಬರೂ ಮುಂದೊಮ್ಮೆ ಯಾರಿಗೂ ಹೇಳದೇ ದಾರಿಯ ನಡುವೆಯೇ ಯಾವುದೋ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು ಬಂದರೂ ಆಶ್ಚರ್ಯವಿಲ್ಲ ಎಂದು ನಾವೆಲ್ಲ ತಮಾಷೆಮಾಡಿ ಛೇಡಿಸಿದ್ದೆವು.

ರಿಶಿ ಕೆನ್ನೀರಿನಲ್ಲಿ ಮಿಂದಂತೆ ನಾಚಿದ್ದ.

                  *****************

"ಜ್ಯೋತಿ ಅಮೇರಿಕಾಗೆ ಹೋದ್ಲಂತೆ?"
ಬಿಸಿಯಾರದ ಹಾಲಿನ ಪಾತ್ರೆಯನ್ನು ಬರಿಗೈಯ್ಯಲ್ಲಿಳಿಸಲುಹೋಗಿ ಸುಟ್ಟಕೊಂಡ ತನ್ನ ಕೈಯ್ಯನ್ನು ತಣ್ಣೀರಿಗದ್ದುತ್ತಾ ಕೇಳಿದ ರಿಶಿಕೇಶ್. ಸುಟ್ಟ ಬೆರಳನ್ನು ಸವರಿಕೊಂಡವನ ಸ್ಪರ್ಷಕ್ಕೆ ಅದೆಷ್ಟು ಮಧುರ ನೆನಪುಗಳು ತಾಕಿದ್ದವೋ?

"ಕೆಲವೊಂದು ಗಾಯಗಳು ಹೊಸತಾದರೂ ನೋವು ಮಾತ್ರ ಹಳತೇ ಆಗಿರುತ್ತದೆ, ಅಲ್ವಾ ಭಟ್ರೇ? ಅದೃಷ್ಟವಂತೆ.. ಕೊನೆಗೂ ತನ್ನಿಷ್ಟದಂತೆಯೇ ಶ್ರೀಮಂತ ಹುಡುಗನನ್ನೇ ಮಾದುವೆಯಾದಳು. ಈಗ್ಲೂ ಒಮ್ಮೊಮ್ಮೆ ಅನಿಸುತ್ತೆ, ಬೆಂಗಳೂರು ಬಿಟ್ಟುಬರದೇ ಸುಮ್ಮನೆ ಕೈಲಿದ್ದ ಕೆಲಸವನ್ನೇ ಮುಂದುವರೆಸಿಕೊಂಡು ಹೋಗಿದ್ದರೆ ಇವತ್ತು ನಾನೂ ಮೊವ್ವತ್ತು-ಮೊವ್ವತೈದು ಸಾವಿರ ಸಂಬಳ ತೆಗೆದುಕೊಳ್ಳುತ್ತಿದ್ದೆನೇನೋ, ಸಿರಿವಂತನನ್ನೇ ಮದುವೆಯಾಗುತ್ತೇನೆಂದು ನನ್ನ ಪ್ರೀತಿಯನ್ನು ತಿರಸ್ಕರಿಸಿದ್ದ ಅವಳು ಆಗಲಾದರೂ ನನ್ನನ್ನು ಒಪ್ಪುತ್ತಿದ್ದಳೇನೋ ಅಂತ.."
ನಿಟ್ಟುಸಿರಿಟ್ಟು ಮುಂದುವರಿಸಿದ.

"ನಾವೇನೇ ಮಾಡಿದರೂ ಆಗಬೇಕಾದುದು ಆಗಿಯೇ ತೀರುತ್ತದೆ ಅಲ್ವಾ... ಅಂದು ನಾನು ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು ಅಂತ ಅಂದುಕೊಳ್ಳೋದೆಲ್ಲ ಆಗಿ ಹೋದ ಗಾಯವನ್ನು ಜೀವಂತವಾಗಿರಿಸಲು ನಮಗೆ ನಾವೇ ಕೊಟ್ಟುಕೊಳ್ಳುವ ಏಟುಗಳಷ್ಟೇ..." 

ಅವನೇ ಪ್ರೆಶ್ನೆ ಕೇಳಿಕೊಂಡ, ಉತ್ತರವನ್ನೂ ಕೊಟ್ಟುಕೊಂಡ. ಹೀಗೆ ಸಮಸ್ಯೆ-ಸಮಾಧಾನಗಳೆರೆಡೂ ತಿಳಿದಿದ್ದೂ ಒಗಟು ಒಗಾಟಾಗಿಯೇ ಉಳಿಯುವ ಸ್ಥಿತಿಯೇ ಬದುಕೇ? 

ಅವನು ಮುಂದುವರೆಸಿದ‌.

"ಎಷ್ಟೊಂದು ಒದ್ದಾಡುತ್ತಿದ್ವಿ ಅಲ್ವಾ ಆ ದಿನಗಳಲ್ಲಿ? ಮೊವ್ವತ್ತು ರೂಪಾಯಿಗೆ ಊಟ ಸಿಗುತ್ತೇಂತ ಮೈಲು ದೂರದ ಎಲ್ಲೈಸಿ ಕ್ಯಾಂಟೀನಿಗೆ ನಡಕೊಂಡು ಹೋಗುತ್ತಿದ್ದಿದ್ದು, ಜ್ಯೂಸ್ ಅಂಗಡೀಲಿ ಪ್ರತೀಸಲ ಬಟರ್ ಫ್ರೂಟ್ ಜ್ಯೂಸಿನ ಬೆಲೆ ವಿಚಾರಿಸಿ ನಿಂಬೆ ಶರಬತ್ತು ಕುಡಿಯುತ್ತದ್ದಿದ್ದು, ಬ್ರಾಂಡೆಡ್ ಬಟ್ಟೆ ಕಡಿಮೆ ರೇಟಿಗೆ ಸಿಗುತ್ತೇಂತ ಅದ್ಯಾವುದೋ ಬೀದಿಗೆ ಹೋಗಿ ಟೋಪಿ ಹಾಕಿಸಿಕೊಂಡು ಬಂದಿದ್ದು... ಇವೆಲ್ಲ ಆಗಾಗ ನೆನಪಾಗಿ ಒಳಗೊಳಗೇ ನಗ್ತಿರ್ತೀನಿ, ಪಕ್ಕದಲ್ಲಿರುವವರು ನನ್ನ ಹುಚ್ಚ ಅಂದುಕೊಳ್ಳುವ ಮಟ್ಟಿಗೆ! ಆದರೆ ಆರುದಿನ ಕಾದಮೇಲೆ ಒಂದು ಭಾನುವಾರ ಸಿಗುತಿದ್ದ ಆ ಬದುಕಿನ ಖುಷಿ, ಜೀವನ ಪೂರ್ತಿ ಭಾನುವಾರವೇ ಆಗಿಹೋದ ಈ ಬದುಕಿನಲ್ಲೇಕೋ ಸಿಗ್ತಿಲ್ಲ."

ವಿಷಾದವೊಂದು ಮುನ್ನಡೆಸುತ್ತಿರುವಂತಿತ್ತು ಅವನ ಮಾತು. ನಿಜ ಹೇಳಬೇಕೆಂದರೆ ಅಂದು ರಿಶಿ  ತೆಗೆದುಕೊಂಡಿದ್ದು ತುಂಬಾ ದೊಡ್ಡ ನಿರ್ಧಾರವೇ ಆಗಿತ್ತು. ಅವನೇ ಹೇಳಿದಂತೆ ಶೋಕೇಶ್ ನಂತಿರುವ ಈ ಪಟ್ಟಣದ ಬದುಕಿನ ವೈಭವಗಳಾಚೆಗೆ ಕಾಲಿರಿಸಲು ಹಲವರಿಗೆ ಪೂರ್ಣ ಜೀವಮಾನವೇ ಸಾಕಾಗುವುದಿಲ್ಲ. 'ಮಗ ಬೆಂಗಳೂರಲ್ಲಿ ದುಡಿಯುತ್ತಿದ್ದಾನೆ' ಅನ್ನೋ ಮಾತನ್ನು ಅಪ್ಪ-ಅಮ್ಮ ಊರಿನಲ್ಲಿ ಎಲ್ಲರೆದುರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವಾಗ, 'ನೋಡು ಇವನನ್ನ, ಆರೂವರೆ ಸಾವಿರ ಸಂಬಳಕ್ಕೆ ಕೆಲಸಕ್ಕೆ ಸೇರಿದವನು. ಇವತ್ತು ಮೊವ್ವತ್ತು ಸಾವಿರ ತಗೋತಿದಾನೆ' ಎಂದು ಎಷ್ಟೋ ಕಿರಿಯರಿಗೆ ನಮ್ಮನ್ನು ಮಾದರಿಯಾಗಿ ಉದಾಹರಿಸಿ ಹೊಗಳುತ್ತಿರುವಾಗ, ಏನೇ ಒದ್ದಾಟಗಳಿದ್ದರೂ ತಿಂಗಳ ಕೊನೆಗೆ ನಿಗದಿತ ಮೊತ್ತವೊಂದು ಅಕೌಂಟಿಗೆ ಬಂದು ಬೀಳುತ್ತಿರುವಾಗ, ನಾವಾಗಿ ಕೇಳದಿದ್ದರೂ ಈ ಬೆಂಗಳೂರಿನ ಬದುಕು ನಮ್ಮವರ ನಡುವೆ ನಮಗೊಂದು ಘನತೆ-ಗೌರವಗಳನ್ನು ತಂದು ಕೊಟ್ಟಿರುವಾಗ, ಪಟ್ಟಣದಲ್ಲಿ ಕೆಲಸದಲ್ಲಿಲ್ಲದ ಹುಡುಗನಿಗೆ ಯಾವುದೇ ಕಾರಣಕ್ಕೂ ಮಗಳನ್ನು ಕೊಡಬಾರದೆಂದು ಜಗತ್ತಿನ ಮಾವಂದಿರೆಲ್ಲ ಗಟ್ಟಿಯಾಗಿ ನಿರ್ಧಾರಿಸಿ ಕುಳಿತಿರುವಾಗ.. ಮನಸ್ಸಿನ ಮಾತು ಕೇಳಿ, ಅಪ್ಪ-ಅಮ್ಮನನ್ನು ನೋಯಿಸಿ, ಇರುವ ಆದಾಯ-ಗೌರವಗಳನ್ನು ಕಳೆದುಕೊಳ್ಳುವುದಾದರೂ ಹೇಗೆ? ಎನ್ನುವ ಗೊಂದಲದಲ್ಲೇ ಹಲವರ ಬದುಕು ಮುಗಿದುಹೋಗುತ್ತದೆ. 

ಇವೆಲ್ಲ ಸಂದಿಗ್ಧಗಳಾಚೆಗೂ ತನ್ನ ಅಂತರಂಗದ ಮಾತು ಕೇಳಿ ರಿಶಿ ತಪ್ಪು ಮಾಡಿದನೇ?

"ಹೀಗೆ ಹೇಳ್ತೀನಂತ ಬೇಜಾರುಮಾಡಿಕೋಬೇಡ ರಿಶಿ. ಇಲ್ಲಿಗೆ ಬರೋಕೆ ಮುಂಚೆ ನೀನು ಮಾಡಿದ್ದು ಸರಿ ಅಂತಾನೇ ನಂಬಿದ್ದೆ. ನನಗೆ ನಿಲುಕದ ನೆಮ್ಮದಿಯೊಂದು ನಿನಗೆ ದಕ್ಕಿರಬಹುದೆಂದು ನಿರೀಕ್ಷಿಸಿದ್ದೆ. ಆದರೆ ಈಗ, ಸ್ಥಿರವಾದ ಒಂದು ನೆಲೆಯಿಲ್ಲ. ಹೇಳಿಕೊಳ್ಳುವಂತಹಾ ವರಮಾನವಿಲ್ಲ. 'ಒಂದು ಮಟ್ಟದ್ದು' ಎನ್ನುವಂತಹಾ ಉದ್ಯೋಗವೂ ಇಲ್ಲ.. ಸಿಗಬಹುದಾಗಿದ್ದ ಹೆಚ್ಚಿನ ಗೌರವದ ಬದುಕೊಂದನ್ನು ನೀನು ಕಳೆದುಕೊಂಡೆಯೇನೋ ಅನಿಸ್ತಿದೆ."

ಕೊಂಚ ಹಿಂಜರಿಕೆಯಿಂದಲೇ ಹೇಳಿಮುಗಿಸಿದೆ. ಈ ಮಾತುಗಳನ್ನು ಈ ಮೊದಲೇ ಹತ್ತಾರುಬಾರಿ ಕೇಳಿದಂತೆ  ಗಾಢ ಮುಗುಳ್ನಗುವೊಂದು ಅವನ ಮುಖದಮೇಲೆ ಮೂಡಿತು.

"ಹೌದು ಭಟ್ರೇ. ಒಂದು ಕಡೆಯಿಂದ ನೋಡಿದಾಗ ನೀವು ಹೇಳಿದ್ದೆಲ್ಲ ನಿಜವೇ. ಆ ಅನುಮಾನ ನನಗೂ ಇದೆ. ಆದರೆ ನಿಮಗೆ ನನ್ನದೊಂದು ಪ್ರೆಶ್ನೆ: ನೀವು ಹೇಳಿದ ಈ ಸ್ಥಿರವಾದ ನೆಲೆ, ಹೇಳಿಕೊಳ್ಳುವಂತಹಾ ವರಮಾನ, ಒಂದು ಮಟ್ಟದ ಉದ್ಯೋಗ... ಇವೆಲ್ಲವೂ ಇರುವ ನೀವು ಖುಷಿಯಾಗಿದ್ದೀರಾ?"
ಸದ್ದಿಲ್ಲದೇ ತೂರಿದ ಬುಲೆಟ್ನಂತಿತ್ತು ಅವನ ಪ್ರೆಶ್ನೆ.

"ನಾನು ಖುಷಿಯಾಗಿದ್ದೇನಾ?"
ಈ ಬಾರಿ ನನ್ನನ್ನು ನಾನೇ ಕೇಳಿಕೊಂಡೆ.

ನಾಳೆಗಳ ಬಗೆಗಿದ್ದ ವರ್ಷಗಳ ಹಿಂದಿನ ಅದೇ ತಳಮಳ, ಇಂದಲ್ಲ ನಾಳೆ ಹಳ್ಳಿಗೆ ಮರಳುವೆನೆಂಬ ಭರವಸೆಯೊಂದಿಗೇ ಆರಂಭವಾಗುವ ಪ್ರತಿದಿನದ ಹಗಲುಗಳು, ಕಾಡುವ ನಿನ್ನೆಯ ನೆನಪುಗಳು, ಎಷ್ಟೇ ಮಾಡಿದರೂ ಇಷ್ಟವಾಗದ ಕೆಲಸ, ಬಾಸ್ ಮೇಲಿನ ಕೋಪ, ಆಗಾಗ ಕಾಡುವ ನಾನು ತೀರಾ ಏಕಾಂಗಿಯೆಂಬ ನೋವು, ಇಲ್ಲದ್ದೇನನ್ನೋ ಪಡೆದುಕೊಳ್ಳಬೇಕೆಂಬ ಒದ್ದಾಟ... ಇಂದಿಗೂ ಇವೆಲ್ಲದರ ಜೊತೆಗೇ ಬದುಕಿದ್ದೇನೆ. ಒಂದುದಿನ ಎಲ್ಲದರಿಂದ ಮುಕ್ತಿಹೊಂದುವ ಕನಸು ಕಾಣುತ್ತಲೇ ಇವೆಲ್ಲವನ್ನೂ ಮೈಮೇಲೆಳೆದುಕೊಂಡು ಸಹಿಸುತ್ತಿದ್ದೇನೆ.

"ಏಕೋ ಗೊತ್ತಿಲ್ಲ ರಿಶಿ, ಈ ಬದುಕಿನ ಬಗ್ಗೆ ಅದೊಂದು ತೀರದ ಅಸಮಾಧಾನ ಹಾಗೇ ಉಳಿದುಬಿಟ್ಟಿದೆ. ನಾನು ಮಾಡುತ್ತಿರುವ ಕೆಲಸವೊಂದನ್ನು ಬಿಟ್ಟು ಉಳಿದುದೆಲ್ಲವೂ ನೆಮ್ಮದಿಯ ಉದ್ಯೋಗಗಳಂತೆ ಕಾಣುತ್ತವೆ. ಬಿಟ್ಟುಬಂದ ಪ್ರತಿಯೊಂದು ಜಾಗದಲ್ಲೂ ಖುಷಿಯಿತ್ತು, ಈಗ ಇರುವಲ್ಲಿ ಮಾತ್ರ ಇಲ್ಲ ಎನಿಸಿ ಒದ್ದಾಡುತ್ತೇನೆ. ನೀನು ನಂಬ್ತೀಯೋ ಇಲ್ವೋ, ಆಫೀಸಿನ ಹೊರಗೆ ನಿಂತಿರೋ ಸೆಕ್ಯುರಿಟಿ ಗಾರ್ಡ್'ನ ಕೆಲಸವೇ ಎಷ್ಟು ಚೆನ್ನಾಗಿದೆ ಅಂತ ಅದೆಷ್ಟೋ ಸಲ ಯೋಚಿಸಿದ್ದೇನೆ! ಇದೆಲ್ಲವನ್ನೂ ಬಿಟ್ಟು ಊರಿಗೆ ಹೋಗಿಬಿಡಬೇಕೆಂದು ಈ ಏಳು ವರ್ಷಗಳಲ್ಲಿ  ದಿನಕ್ಕೊಮ್ಮೆಯಾದರೂ ಯೋಚಿಸಿದ್ದೇನೆ. ಆದರೆ ಎಲ್ಲಿ ಈ ಸಮಾಜದೆದುರು, ವಿರೋಧಿಗಳೆದುರು, ಆಡಿಕೊಳ್ಳುವವರೆದುರು ಸೋತುಬಿಡುತ್ತೇನೋ ಎನ್ನುವ ಭಯ ನನ್ನನ್ನು ಕಟ್ಟಿಹಾಕಿದೆ."

ಕ್ಷಣಕಾಲ ಯೋಚಿಸುವನಂತೆ ಗಂಭೀರವಾದ ರಿಶಿ ದೀರ್ಘವಾಗೊಮ್ಮೆ ಉಸಿರೆಳೆದುಕೊಂಡು ಹೇಳಲಾರಂಭಿಸಿದ.

"ಗೆಲ್ಲೋದು ಹಾಗೂ ಸೋಲೋದು- ಇದರಲ್ಲಿ ಎರೆಡು ರೀತಿಯಿದೆ ಭಟ್ರೆ. ಒಂದು ನಮ್ಮೀ ಜನರು, ಸಮಾಜಗಳೆಂಬ ಕನ್ನಡಕಗಳಿಂದ ನೋಡಿ ನಿರ್ಧರಿಸುವುದು. ಇನ್ನೊಂದು ನಮ್ಮನಮ್ಮ ಸ್ವಂತ ಕಣ್ಣಲ್ಲೇ ನೋಡಿಕೊಳ್ಳುವುದು. ಅಂದು ಮಹಾನಗರದ ಆ ಒಂಟಿ ರೂಮಿನಿಂದೆದ್ದು ಕೆಎಸ್ಸಾರ್ಟಿಸಿ ಬಸ್ಸು ಹತ್ತಿ ಬಂದಿದ್ದ ನಾನು ಇಂದೇನಾದರೂ ಹುಂಡೈ ಕಾರಿನಲ್ಲಿ ಓಡಾಡುತ್ತಿದ್ದರೆ ಜಗತ್ತಿನ ದೃಷ್ಟಿಯಲ್ಲದು ಗೆಲುವು. ಆದರೆ ನಾನು ಹೀಗೆ, ಮತ್ತದೇ ಸರ್ಕಾರೀ ಬಸ್ಸಿನಲ್ಲಿ ಅಲೆಯುತ್ತಿರುವುದರಿಂದ ನನ್ನದು ಸೋಲು! ಪರರ ಅಳತೆಗೋಲಿಗೆ ಎಟಕುವುದು ಇಷ್ಟೇ. ಇನ್ನೂ ಆಳದಲ್ಲಿರುವ ನನ್ನ-ನಿಮ್ಮಂಥವರ ವಯಕ್ತಿಕ ತಳಮಳ, ಆಸೆ, ಕನಸು, ದುಃಖ, ದುಮ್ಮಾನಗಳೆಲ್ಲ ನಮ್ಮ ಹೊರತು ಮತ್ಯಾರಿಗೂ ಕಾಣುವುದಿಲ್ಲ. ಕಂಡರೂ ಸಮಾಜದ ದೃಷ್ಟಿಯಲ್ಲಿ ಅವೆಲ್ಲ ಎಲ್ಲರೂ ಅನುಭವಿಸುವ, ದಿನನಿತ್ಯದ ಸಾಮಾನ್ಯ ಜಂಜಾಟವಷ್ಟೇ. ಆದರೆ ಎರೆಡನೆಯದಿದೆಯಲ್ಲಾ ನಮ್ಮದೇ ಕಣ್ಣು, ಅದರಲ್ಲಿ ಇವೆಲ್ಲವೂ ಬಿಂಬಗಳಾಗಿ ಕದಲುತ್ತಿವೆ. ಕ್ಷಣಕ್ಷಣಕ್ಕೂ ನೆನಪಾಗಿ, ನೋವಾಗಿ, ಪ್ರೇಮವಾಗಿ, ತುಡಿತವಾಗಿ, ಹಂಬಲವಾಗಿ ತುಂಬಿ ಹರಿಯುತ್ತಿವೆ. ನಮ್ಮ ಬದುಕನ್ನು ನಾವು ನೋಡಿಕೊಳ್ಳಬೇಕಿರುವುದು ಆ ಕಣ್ಣಿನಿಂದಲೇ. ಆದರೆ ದುರಂತವೇನು ಗೊತ್ತಾ? ನಾವು ನಮ್ಮ ಕಣ್ಣಿಗೆ ಒಂದೋ ಆ ಸಮಾಜದ ದೃಷ್ಟಿಕೋನದ ಕನ್ನಡಕವನ್ನು ತೊಟ್ಟುಕೊಳ್ಳುತ್ತೇವೆ‌. ಇಲ್ಲ, ನಾವೇನೇ ಮಾಡಿದರೂ ಸರಿಯೆಂಬ ಮೊಂಡುತನದ ಪೊರೆಯನ್ನು ಬೆಳೆಸಿಕೊಳ್ಳುತ್ತೇವೆ. ಇವೆರೆಡರ ನಡುವಿನ ಸಮಚಿತ್ತವೆಂಬ ನಿಜವಾದ ನೇತ್ರಗಳಿಂದ ನಮ್ಮೀ ಬದುಕನ್ನು ನೋಡಿಕೊಳ್ಳುವುದೇ ಇಲ್ಲ!"

"ಆದರೆ ರಿಶಿ, ನಾವು ಬೇಡವೆನ್ನುತ್ತಿರುವ ಇದೇ ಯಾಂತ್ರಿಕ ಬದುಕಿನಲ್ಲಿ ಲಕ್ಷಾಂತರ ಜನ ಬದುಕುತ್ತಿರುವಾಗ ನಾವು ಮಾತ್ರ ಹೀಗೆ ಒಂದು ಕಡೆ ಹೋದಮೇಲೆ, ಇಲ್ಲಿಗಿಂತ ಅಲ್ಲೇ ಚೆನ್ನಾಗಿತ್ತು ಅಂದುಕೊಳ್ಳುವುದು, ಇಲ್ಲದಿರುವುದೇನನ್ನೋ ನೆನೆದು ಸುಮ್ಮನೆ ಕೊರಗುವುದು, ಎಲ್ಲ ಕಡೆಯೂ ಇರಬಹುದಾದ ಚಿಕ್ಕಪುಟ್ಟ ಸವಾಲುಗಳನ್ನೇ ದೊಡ್ಡ ಸಮಸ್ಯೆಗಳೆಂಬಂತೆ ಭ್ರಮಿಸಿ ಬಿಟ್ಟುಓಡುವುದು... ಇವೆಲ್ಲ ಮನಸ್ಸಿನ ದೌರ್ಬಲ್ಯ, ಹೊಣೆಗೇಡಿತನ, ದುಡುಕಿನ ನಿರ್ಧಾರ ಅಂತ ಅನಿಸ್ತಿಲ್ವಾ ನಿನಗೆ?"

"ಇಲ್ಲ ಭಟ್ರೇ... ನನ್ನ ಪ್ರಕಾರ ಬೆಂಗಳೂರು ಬದುಕನ್ನು ಇಷ್ಟ ಎಂದು ಅಪ್ಪಿಕೊಂಡವರಿಗಿಂತ ಅನಿವಾರ್ಯ ಎಂದು ಒಪ್ಪಿಕೊಂಡವರೇ ಜಾಸ್ತಿ. ನನ್ನ-ನಿಮ್ಮ ನಿಜವಾದ ಸಮಸ್ಯೆಯೇನು ಗೊತ್ತಾ? ನಮಗೆ ಸ್ವತಂತ್ರ ಬೇಕು. ಯಾರದೋ ಮೂಗಿನ ನೇರದ ಆದೇಶಗಳಿಗೆ ಕೈಕಾಲಾಡಿಸುವ ಹಂಗಿನ ಬದುಕಿನಿಂದ ಮುಕ್ತಿ ಬೇಕು. ನಮ್ಮದೇ ಆಸಕ್ತಿಗಳು, ಅಭಿರುಚಿಗಳು, ಕನಸುಗಳು.. ಇವುಗಳ ಜೊತೆ ಒಡನಾಡಲಿಕ್ಕೆ ಒಂದಿಷ್ಟು ಖಾಸಗೀ ಸಮಯಬೇಕು. ಮನಸ್ಸು ಹೇಳಿದ ತಾಣದಲ್ಲಿ ನಿಶ್ಚಿಂತರಾಗಿ ಅಲೆದಾಡುವ ಸ್ವಚ್ಛಂದತೆ ಬೇಕು. ಹಸಿರಿನ ತೋಟ, ಗದ್ದೆ ಬದಿಯ ಕಾಲುದಾರಿ, ಹೊಳೆಯ ನೀರಿನ ತಂಪು, ಹಿತ್ತಲ ಮಲ್ಲಿಗೆಯ ಪರಿಮಳ.. ಇವೆಲ್ಲವೂ ನಮಗೆ ಬೇಕು. ಇವೆಲ್ಲವನ್ನೂ ನಾವು ನಮಗೇ ತಿಳಿಯದಂತೆ ಮಿಸ್ ಮಾಡಿಕೊಳ್ಳುತ್ತಿರುತ್ತೇವೆ. ಆದ್ದರಿಂದಲೇ ಎಷ್ಟೇ ಕಾಲ ಉಸಿರಾಡಿಕೊಂಡಿದ್ದರೂ  ಪಟ್ಟಣದ ಗಾಳಿ ನಮ್ಮುಸಿರಿನಲ್ಲಿ ಬೆರೆಯುವುದೇ ಇಲ್ಲ. ಇದು ನಮ್ಮ ಅಂತರಾಳದ ಹಂಬಲವೇ ಹೊರತು ಹೊಣೆಗೇಡಿತನವೋ, ದುರ್ಬಲ ಮನಸ್ಥಿತಿಯೋ ಖಂಡಿತಾ ಅಲ್ಲ!"

"ನಿಜ. ಆದರೆ, ಹಂಬಲಿಸಿ ಮಣ್ಣಿಗೆ ಮರಳುವವನನ್ನು ಈ ಸಮಾಜ ಸ್ವಾಗತಿಸುತ್ತದಾ? ಚುಚ್ಚು ಮಾತುಗಳಿಂದ ನೋಯಿಸುವುದಿಲ್ವ?"
ಕೊನೆಯ ಸಂದಿಗ್ಧವನ್ನು ಕೇಳಿಬಿಟ್ಟೆ.

"ನಿಮ್ಮ ಮಾತು ನಿಜ.. ಅಂದು ಆ ವಿದೇಶೀ ಕಂಪನಿಯ ಪ್ರತಿಷ್ಠಿತ ಕೆಲಸ, ಏನೇ ಆದರೂ ತಿಂಗಳ ಕೊನೆಗೆ ಜೇಬು ತುಂಬುತ್ತಿದ್ದ ಸಂಬಳ, ಐಟಿ ಉದ್ಯೋಗಿಯೆಂಬ ಗೌರವದ ಲೇಬಲ್... ಇವನ್ನೆಲ್ಲ ಕಳಚಿಟ್ಟು ಬರಿಗಾಲಿನಲ್ಲಿ ಊರಿನ ಮಣ್ಣಿನ ಮೇಲಿಟ್ಟ ಆ ಹೆಜ್ಜೆ ನನಗಿನ್ನೂ ಚೆನ್ನಾಗಿ ನೆನಪಿದೆ... ಅದನ್ನು ಎಲ್ಲರೂ ಆಡಿಕೊಂಡರು. ಸೋತ ಹೆಜ್ಜೆ ಎಂದರು. ಬಿಟ್ಟೋಡಿಬಂದ ಬರಿಗಾಲು ಎಂದರು. ಆದರೆ ಯಾಕಾಗಿ ಬಿಟ್ಟುಬಂದೆ? ದಿಕ್ಕೆಟ್ಟುಬಂದ ಆ ಪಾದದಲ್ಲಿ ಅದೆಷ್ಟು ಬೊಬ್ಬೆಗಳಿದ್ದವು? ಅದನ್ನು ಮಾತ್ರ ಯಾರೂ ಕೇಳಲೇ ಇಲ್ಲ..."

ದೀರ್ಘ ಮೌನವೊಂದು ಇಬ್ಬರನ್ನೂ ಆವರಿಸಿತು. ದೂರ ಆಕಾಶದಲ್ಲಾಗಲೇ ಸೂರ್ಯ ತನ್ನ ಅವರೋಹಣ ಯಾತ್ರೆ ಆರಂಭಿಸಿದ್ದ. ಆಗಸದಲ್ಲಿ ಅಪರೂಪಕ್ಕೆ ಎದಿರಾದ ಹಳೆಯ ಗೆಳೆಯರಂತೆ ಜೊತೆ ನಿಂತಿದ್ದ ತುಂಡು ಮೋಡಗಳೆರೆಡು ದಿಗಂತದ ಬೇರೆ ಬೇರೆ ಅಂಚುಗಳತ್ತ ಹೊರಡಲು ಅಣಿಯಾಗುತ್ತಿದ್ದವು.

"ಬಿಡಿ ಭಟ್ರೇ.. ಈ ಗೊಂದಲಗಳೆಲ್ಲ ಜೀವನದಷ್ಟೇ ನಿರಂತರ. ಬನ್ನಿ, ನನ್ನ ಕೈತೋಟ ತೋರಿಸ್ತೀನಿ"

ಯೋಚನೆಗಳೊಳಗೆ ಮುಳುಗಿ ಹೋಗಿದ್ದ ನನ್ನನ್ನು ಕೆಳಗಿನ ಮನೆಯೆದುರಿನ ಪುಟ್ಟ ತೋಟಕ್ಕೆ ಕರೆದೊಯ್ದು. ಅಲ್ಲಿ ಸಾಲಾಗಿ ಡೇರೆ, ಗುಲಾಬಿ, ದಾಸವಾಳ, ಜಿನಿಯಾಗಳ ಜೊತೆ ಟೊಮೇಟೋ, ಬದನೇಕಾಯಿ, ಬೀನ್ಸ್ ಮುಂತಾದ ಗಿಡ-ಬಳ್ಳಿಗಳೆಲ್ಲ ಹೂ, ಹಣ್ಣು, ಕಾಯಿ ಧರಿಸಿನಿಂತಿದ್ದವು.

"ಇದು ನಮ್ಮ ಓನರ್ ಜಾಗ. ಪಾಪದ ಅಜ್ಜ. ಖಾಲಿ ಜಾಗದಲ್ಲಿ ನಿಂತು ಹೂದೋಟದ ಕನಸು ಕಾಣುತ್ತಿದ್ದರು. ನನಗೀಗ ಹಚ್ಚಿಕೊಳ್ಳೋಕೆ ಯಾವ ಜ್ಯೋತಿಯೂ ಇಲ್ಲ ನೋಡಿ, ಅದಕ್ಕೆ ಇವನ್ನು ಹಚ್ಚಿಕೊಂಡೆ!  ಈ ಗಿಡವಿದೆಯಲ್ಲ, ಇದು ಬಿಳಿ ಮತ್ತೆ ಕೆಂಪು ಗುಲಾಬಿಗಳೆರಡನ್ನೂ ಕಸಿ ಮಾಡಿದ್ದು. ಹೇಗೆ ಹೂಬರುತ್ತೇಂತ ನೋಡಬೇಕು. ಕಳೆದ ಸಲ ತುಂಬಾ ಡೇರೆಗಳು ಹುಟ್ಕೊಂಡಿದ್ವು, ಈ ಸಲ ಯಾಕೋ ಅಷ್ಟು ಇಲ್ಲ..." ರಿಶಿ ಹೇಳುತ್ತಲೇ ಇದ್ದ. 

ಯೋಚಿಸತೊಡಗಿದೆ: ಗಟ್ಟಿಯಾಗಿ ಎರೆಡು ಮಾತನಾಡಲೂ ಅಂಜುತ್ತಿದ್ದ. ಬಾಸ್ ಹೆಸರಿನಲ್ಲಿ ಫೋನ್ ರಿಂಗಾದಾಗೆಲ್ಲ ಬೆಚ್ಚಿಬೀಳುತ್ತಿದ್ದ. ತನ್ನಿಷ್ಟದ ಕೆಲಸಗಳನ್ನು ಮಾಡಲು ಸಮಯವೇ ಇಲ್ಲವೆಂದು ದೂರುತ್ತಿದ್ದ. ತಮಟೆಯ ಸದ್ದಿಗೆ ಕುಣಿಯಬೇಕೆನ್ನುತ್ತಿದ್ದ.  ತಿರಸ್ಕರಿಸಿಹೋದ ತನ್ನ ಹುಡುಗಿಯ ದಾರಿಯಲ್ಲಿ ಗಂಟೆಗಟ್ಟಲೆ ನಿಂತುಕಾಯುತ್ತಿದ್ದ. ಇಂದಲ್ಲ ನಾಳೆ ಅದ್ಯಾವುದೋ ಪವಾಡ ಜರುಗಿ ಅವಳು ತನ್ನನ್ನು ಒಪ್ಪಿಯೇ ಒಪ್ಪುತ್ತಾಳೆಂದು ಹಗಲುಗನಸು ಕಾಣುತ್ತಿದ್ದ. ಅವಳು ಮೆಚ್ಚುವಂತಹಾ ಲಕ್ಷಾಧಿಪತಿಯಾಗುತ್ತೇನೆಂದು ಕಂಪನಿಯಿಂದ ಕಂಪನಿಗೆ ಜಿಗಿದಿದ್ದ.

ಕೊನೆಗೊಂದು ದಿನ ಅದ್ಯಾವುದೋ ದಿವ್ಯ ನೆಮ್ಮದಿಯನ್ನರಸಿ ಈ ಎಲ್ಲಾ ಒದ್ದಾಟಗಳಿಗೂ ವಿದಾಯ ಹೇಳಿ ಎದ್ದು ನಡೆದಿದ್ದ...

ಅಸಮಾಧಾನದ ಅಪ್ಪ, ನೆನಪಾಗಿ ಉಳಿದುಹೋದ ಜ್ಯೋತಿ, ನಾಳೆ ಮತ್ತೆ ಸಿಕ್ಕೀತೆಂಬ ಖಾತ್ರಿಯಿಲ್ಲದ ಆದರೆ ಯಾವ ಗೋಡೆಗಳ ನಡುವಿನ ಬಂಧನಕ್ಕೂ ಒಳಪಡದ ಈ ಸ್ವಚ್ಛಂದ ಕಾಯಕ, ಆದಾಯ, ಪರಕೀಯತೆಗಳ ಹಂಗಿಲ್ಲದೆ ಯಾರದೋ ಜಾಗದಲ್ಲಿ ಇವನು ಅರಳಿಸಿಕೊಂಡಿರುವ ಈ ಹೂದೋಟ... 

ರಿಶಿ ಗೆದ್ದನಾ, ಸೋತನಾ? 

ಮತ್ತದೇ ಕಗ್ಗಂಟು ಬಿಗಿದುಕೊಳ್ಳುತ್ತಿದ್ದ ಹೊತ್ತಿಗೆ ನಮ್ಮೆದುರಿನ ಬೀದಿಯಲ್ಲಿ ಯಾವುದೋ ದೇವರ ಮೆರವಣಿಗೆಯೊಂದು ಸಾಗಿಬಂತು. ಅದರ ಎದುರಲ್ಲಿ ತಲೆಗೆ ಬಣ್ಣದ ಟೇಪು ಕಟ್ಟಿಕೊಂಡು ಕುಣಿಯುತ್ತಿದ್ದ ಯುವಕರ ಗುಂಪಿನ ನಡುವಿನಿಂದ ಇಬ್ಬರು ನಮ್ಮತ್ತ ನೋಡಿ ರಿಶಿಗೆ ಬಾ ಎಂಬಂತೆ ಕೈ ಬೀಸಿದರು. ರಿಶಿ ಪಕ್ಕದಲ್ಲಿದ್ದ ನನ್ನನ್ನು ತೋರಿಸಿ ಆಗುವುದಿಲ್ಲವೆಂಬಂತೆ ತಲೆಯಾಡಿಸಿದ. ಅವನ ಇಶಾರೆ ಕಂಡರೂ ಕಾಣದಂತೆ ಒಳಬಂದ ಅವರು ನೋಡನೋಡುತ್ತಿದ್ದಂತೆಯೇ ರಿಶಿಯ ಕೈಹಿಡಿದು ಮೆರವಣಿಗೆಯತ್ತ ಎಳೆದೊಯ್ದೇಬಿಟ್ಟರು.

ರಿಶಿ ಕುಣಿದ.. ಮೊದಲ ಬಾರಿಗೆ ಅಂಗಳಕ್ಕಿಳಿದ ಕರುವಿನಂತೆ.. ಬೋನು ಮುರಿದುಕೊಂಡು ಬಾನಿಗೇರಿದ ಸ್ವಚ್ಛಂದ ಹಕ್ಕಿಯಂತೆ.. ಏಳೇಳು ಜನ್ಮಗಳ ಕನಸೊಂದನ್ನು ನನಸಾಗಿಸಿಕೊಂಡ ಪ್ರೇಮಿಯಂತೆ.. ತನ್ನ ಬದುಕಿನ ಸಂಭ್ರಮವೆಲ್ಲ ತಮಟೆಯ ಸದ್ದಾಗಿ ಹೊಮ್ಮುತ್ತಿದೆಯೇನೋ ಎಂಬಂತೆ... ಬದುಕಿನ ಬೇಸರಗಳನ್ನೆಲ್ಲ ನೆಲದಾಳಕ್ಕೆ ಅದುಮಿಬಿಡುವವನಂತೆ... ರಿಶಿ ಕುಣಿದೇ ಕುಣಿದ.

ಸ್ವಚ್ಛಂದ ಆಗಸದಲ್ಲಿ ಹಾರುತ್ತಿದ್ದ ಹಕ್ಕಿಯೊಂದು ತನ್ನದೇ ಹಾಡು ಹಾಡಿಕೊಳ್ಳುತ್ತಿತ್ತು.

ನೋಡುತ್ತಾ ನಿಂತಿದ್ದ ನನ್ನ ಮನವೇಕೋ ತುಂಬಿಬಂತು. ರೂಮಿಗೆ ಮರಳಿ ಬ್ಯಾಗು ಏರಿಸಿಕೊಂಡು ಮೆಟ್ಟಿಲಿಳಿದೆ. ರಿಶಿ ನನ್ನನ್ನು ಬೀಳ್ಕೊಡಲು ಬಸ್ಸು ನಿಲ್ದಾಣದ ತನಕ ಬಂದ. 

"ಹೊರಟೇ ಬಿಟ್ರ ಭಟ್ರೆ? ಇತ್ತೀಚೆಗೇಕೋ ಗೊತ್ತಿಲ್ಲ, ಬಂದವರೆಲ್ಲ ಜೊತೆಗೇ ಇರಬೇಕು ಅನಿಸುತ್ತದೆ.. ಹಹ.. ಹೋದವರು ಹೋಗಿಯೇ ಬಿಡಬೇಡಿ. ಟಚ್ಚಲ್ಲಿರಿ..."

ನಗುವಿಗಿಂತ ಹೆಚ್ಚಿನದೇನೋ ಆಗಿದ್ದ ನಗು ನಕ್ಕು ಕೈಕುಲುಕಿದವನನ್ನು ಮೆಲ್ಲಗೆ ತಬ್ಬಿಕೊಂಡೆ. ಬಾಯ್ ಎಂದು ಕೈ ಬೀಸಿ ನಡೆದವನು ಈಗ ಮೆರವಣಿಗೆ ಮುಗಿದಿರಬಹುದಾದ ಬೀದಿಯ ಅದೇ ಒಂಟಿ ಕೋಣೆಯತ್ತ ನಡೆಯುತ್ತಾ, ನಿಲ್ದಾಣದೊಳಗಿನ ಜನಜಂಗುಳಿಯಲ್ಲಿ ಬೆರೆತುಹೋದ. 

('ನಿಮ್ಮೆಲ್ಲರ ಮಾನಸ'ಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...