ಭಾನುವಾರ, ಫೆಬ್ರವರಿ 9, 2020

ಆ ಕನ್ನಡ 'ಇ' ಕನ್ನಡ..




ಆ ಕನ್ನಡ 'ಇ' ಕನ್ನಡ

"ನೀವು ಏನೇ ಹೇಳಿ, ಪುಸ್ತಕದಲ್ಲಿ ಓದುವ ಖುಷಿ ಈ ಮೊಬೈಲ್ನಲ್ಲಿ, ಕಂಪ್ಯೂಟರ್ನಲ್ಲಿ ಬರೋದಿಲ್ಲ"


ಈ ಮಾತನ್ನು ಸರ್ವೇಸಾಮಾನ್ಯವಾಗಿ ಎಲ್ಲರೂ ಆಡಿಯೇ ಆಡುತ್ತಾರೆ. ನಿಜ. ಕಥೆಯನ್ನಾಗಲೀ, ಕಾದಂಬರಿಯನ್ನಾಗಲೀ ಪುಸ್ತಕದಲ್ಲಿ ಓದುವ ಮಜವೇ ಬೇರೆ. ಒಂದು ಕೈಯಲ್ಲಿ ಪುಸ್ತಕವನ್ನು ಹಿಡಿದು, ಇನ್ನೊಂದು ಕೈಯನ್ನು ತಲೆಗಾನಿಸಿಕೊಂಡು ಸಾಕ್ಷಾತ್ ಶ್ರೀಮನ್ನಾರಾಯಣನ ಶೈಲಿಯಲ್ಲಿ ಪವಡಿಸಿ ಓದುತ್ತಿದ್ದರೆ ಅಂದಿನ ಕುವೆಂಪು, ಕಾರಾಂತ, ಬೇಂದ್ರೆ, ತೇಜಸ್ವಿಯಿವರಿಂದ ಹಿಡಿದು ಇಂದಿನ ಜಯಂತ ಕಾಯ್ಕಿಣಿ, ಭೈರಪ್ಪ, ಜೋಗಿ, ಎಚ್ಚೆಸ್ವಿಯವರ ತನಕ ಎಲ್ಲರೂ ಕಣ್ಮುಂದೆಯೇ ಪ್ರತ್ಯಕ್ಷವಾಗಿ ಕಥೆ ಹೇಳಿದಂತೆ, ಕವನ ವಾಚಿಸಿದಂತೆ ರಸವತ್ತಾಗಿರುತ್ತದೆ. ಜೊತೆಗೊಂದು ಲೋಟ ಕಾಫಿಯಿದ್ದರಂತೂ ಆ ಸ್ವಾದವೇ ಬೇರೆ! ಒಂದೊಂದು ಪುಟ ಮುಂದಕ್ಕೆ ಹೋದಾಗಲೂ ಹಾಯಿದೋಣಿಯಲ್ಲಿ ಒಂದೊಂದು ಮೈಲು ಮುಂದೆ ತೇಲಿದಂತಿರುತ್ತದೆ. ಪುಸ್ತಕದ ಭೌತಿಕ ಸ್ಪರ್ಷ, ಪುಟಗಳ ಘಮಗಳೆಲ್ಲ ಮಿಶ್ರಿತವಾಗಿ ಕೊಡುವ ಅನುಭೂತಿ ಮೊಬೈಲ್, ಕಂಪ್ಯೂಟರ್ ಗಳ ಪರದೆಯಲ್ಲಿ ಸಿಗುವುದಿಲ್ಲ. 


ಆದರೆ ಆಫೀಸು-ಟ್ರಾಫಿಕ್ಕು-ಮನೆಗಳ ನಡುವೆ ಹರಿದು ಹಂಚಿಹೋಗಿರುವ ಇಂದಿನ ಭಾಗ್ ದೌಡ್ ಭರೀ ಜೀವನದಲ್ಲಿ ಪುಸ್ತಕವನ್ನು ಕೊಂಡೊಯ್ಯುವ ತಾಳ್ಮೆ ಯಾರಿಗಿದೆ? ಹೇಳೀಕೇಳೀ ಇದು ಟ್ವೆಂಟಿಟ್ವೆಂಟಿ ಕಾಲ. ಎಲ್ಲವೂ ಚುಟುಕಾಗಿ, ಸ್ವಾದಭರಿತವಾಗಿ, ಇಷ್ಟೇಇಷ್ಟಿರಬೇಕೆಂದು ಬಯಸುವ 'ಚಿಕ್ಕ ಹಾಗೂ ಚೊಕ್ಕ'ದ ಕಾಲಘಟ್ಟವಿದು. ಆಫೀಸಿನಲ್ಲಿ ಬಾಸ್ ಎದ್ದುಹೋದಾಗ, ಟ್ರಾಫಿಕ್ಕಿನಲ್ಲಿ ಸಿಲುಕಿ ಚಲನೆಯೆಂಬ ಚಲನೆಯೇ ಕಾಣೆಯಾದಾಗ, ಬಸ್ಸಿನಲ್ಲಿ ನಿಂತು ನೇತಾಡುತ್ತಿರುವಾಗ.. ಇಂತಹಾ ಕಿರು ಘಳಿಗೆಗಳಲ್ಲಿಯೇ ಓದು, ಬರಹ ಮುಂತಾದ ಸದಭಿರುಚಿಯ ಕೈಂಕರ್ಯಗಳು ಜರುಗಬೇಕು. ಹೀಗೆ ಆಗಾಗ ಕಿರು ವಿರಾಮ ದೊರೆತಾಗೆಲ್ಲಾ ಇಂತಿಂಥಾ ದಪ್ಪದ ಪುಸ್ತಕವನ್ನು ಹೊರ ತೆರೆದು ಓದಲು ಸಾಧ್ಯವೇ? ಖಂಡಿತಾ ಇಲ್ಲ! ಅದಕ್ಕಿರುವ ಏಕೈಕ ಸಾಧನ ಮೊಬೈಲ್.


ಇಂದಿನ ಬಿಡುವುರಹಿತ, ಒತ್ತಡಭರಿತ ಜೀವನದಲ್ಲಿ ಓದು-ಬರಹಗಳು ಮರೆಯಾಗಬಾರದೆಂದೇ ಮನುಷ್ಯ ಅವನ್ನು ಸದಾ ತನ್ನೊಂದಿಗಿರುವ ಮೊಬೈಲ್, ಕಂಪ್ಯೂಟರ್ ಗಳೊಳಗೆ ಸೇರಿಸಿಕೊಂಡಿದ್ದಾನೆ. ಓದು-ಬರಹಗಳು ಬ್ಲಾಗ್, ಸೋಶಿಯಲ್ ಮೀಡಿಯಾ, ಪಿಡಿಎಫ್ ಮುಂತಾದ ಆಧುನಿಕ ಅವತಾರಗಳನ್ನು ತಾಳಿ ಮತ್ತೆ ಮನುಷ್ಯನ ಅಂತರಂಗ ಸೇರಿಕೊಂಡಿವೆ. ಆದರೆ ಇಷ್ಟೇ ಇಷ್ಟಿರುವ ಮೊಬೈಲ್ ಗಳಿಂದಾದ ದುಷ್ಪರಿಣಾಮವೆಂದರೆ ಅವು ನಮ್ಮ ತಾಳ್ಮೆಯನ್ನೂ ತಮ್ಮ ಗಾತ್ರಕ್ಕೇ ಕುಗ್ಗಿಸಿರುವುದು. ಎಲ್ಲವೂ ಚಿಕ್ಕ ಹಾಗೂ ಚೊಕ್ಕದಾಗಿರಬೇಕು, ಇಡೀ ಭಗವದ್ಗೀತೆಯೇ ನಾಲ್ಕು ಸಾಲಿನಲ್ಲಿ ಮುಗಿದುಹೋಗಬೇಕು, ಮಹಾಕಾವ್ಯಗಳೂ ಟೀ ವಿರಾಮದಲ್ಲಿ ಸಿಗುವ ಐದು ನಿಮಿಷದ ಬಿಡುವಿನಲ್ಲಿ ಓದುವಂತಿರಬೇಕು ಎಂಬ ಗಡಿಬಿಡಿಯೇ ಎಲ್ಲರಲ್ಲೂ. ಮುನ್ನೂರು ಪುಟದ ಪುಸ್ತಕವೊಂದನ್ನು ಹಿಡಿದಾಗ ಮನಸ್ಸಿನಲ್ಲಿದ್ದ ತಾಳ್ಮೆಯನ್ನು ಮೂರೂವರೆ ಇಂಚಿನ ಮೊಬೈಲ್ ಸದ್ದಲ್ಲದಂತೆ ನುಂಗುತ್ತಿರುವುದು ಅದನ್ನು ಕಂಡುಹಿಡಿದವನಾಣೆಗೂ ಸತ್ಯ!


                       ***************


ಜಗತ್ತಿನ ಹಲವಾರು ಭಾಷೆಗಳಂತೆ ಕನ್ನಡವೂ 'ಇ' ಮಾಧ್ಯಮಕ್ಕೆ ಹೊಂದಿಕೊಳ್ಳುತ್ತಿದೆ. ಇದನ್ನು, ಒಂದಾನೊಂದು ಕಾಲದಲ್ಲಿ ತಾಳೆಗರಿಯಲ್ಲಿದ್ದ ಲಿಪಿಯು ಪುಸ್ತಕ ಮಾಧ್ಯಮಕ್ಕೆ ತೇರ್ಗಡೆಯಾದ ಬೆಳವಣಿಗೆಗೆ ಹೋಲಿಸುವಂತಿಲ್ಲವಾದರೂ ಇಂದಿನ ಕಾಲಮಾನಕ್ಕಿದು ಸೂಕ್ತ ಬೆಳವಣಿಗೆಯೇ. ಯಾವ ಭಾಷೆ ಮನುಷ್ಯನ ಭಾವನೆಗಳ ಹರಿವಿನ ಮಾಧ್ಯಮವಾಗಿರುತ್ತದೋ ಆ ಭಾಷೆ ನಿರಂತರವಾಗಿರುತ್ತದೆ. ನಾವು ಊಟ ಆಯ್ತಾ, ತಿಂಡಿ ಆಯ್ತಾಗಳಿಂದ ಹಿಡಿದು ತತ್ ಕ್ಷಣಕ್ಕೆ ಹೊಳೆವ ಯೋಚೆನೆಗಳ ತನಕ ಎಲ್ಲವನ್ನೂ ಕನ್ನಡದಲ್ಲೇ ಟೈಪಿಸಿ ಸೋಶಿಯಲ್ ಮೀಡಿಯಾದಲ್ಲೋ, ಮತ್ತೆಲ್ಲೋ ಸಂಭಾಷಿಸುತ್ತೇವೆ, ಅಂಟಿಸುತ್ತೇವೆ. ಅಷ್ಟರ ಮಟ್ಟಿಗೆ ಅದು ನಮ್ಮೊಳಗೆ ನಿರಂತರವಾಗಿದೆ. ತೀರಾ ಪುಸ್ತಕವನ್ನೇ ತೆರೆಯದವರೂ ಸಹಾ ಮೊಬೈಲ್ನಲ್ಲಿ ಕಣ್ಣಿಗೆಟಕುವ ಬರಹಗಳೊಳಗೆ ಸಣ್ಣಗೊಂದು ಸುತ್ತು ಅಡ್ಡಾಡುತ್ತಾರೆ. ಇನ್ನು ಪುಸ್ತಕದ 'ಸ್ವಾದ'ವನ್ನರಿತವರು ಎರೆಡೂ ಮಾಧ್ಯಮಗಳಲ್ಲಿ ಓದಿಗೆ ತೊಡಗುತ್ತಾರೆ. ಹೀಗೆ 'ಇ' ಅವತರಿಣಿಕೆಯು ಕನ್ನಡದ ಹರಿವಿಗೆ ಹೊಸದಾದ ಉಪನದಿಯಂತಾಗಿದೆ. 


ಇತ್ತೀಚೆಗೆ ಕನ್ನಡದ ಬಹಳ ಹಳೆಯ ಮಾಸಿಕ ಪತ್ರಿಕೆಯೊಂದು 1960-70ರ ದಶಕದ ಸಂಚಿಕೆಗಳೂ ಸೇರಿದಂತೆ ತನ್ನ ಅನೇಕ ಹಳೆಯ ಸಂಚಿಕೆಗಳ ಸ್ಕ್ಯಾನ್ ಪ್ರತಿಗಳನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿತು. ತೆರೆದೋದಿದವರಿಗೆ ಅವು ಆ ಕಾಲಘಟ್ಟವನ್ನು ಮರುಸೃಷ್ಟಿಸುವ ಪಳೆಯುಳಿಕೆಗಳಂತೆ ಭಾಸವಾಗುತ್ತವೆ. ಅಲ್ಲದೇ ಮರುಮುದ್ರಣ ಕಾಣದ ಅದೆಷ್ಟೋ ಹಳೆಯ ಕೃತಿಗಳ ಪಿಡಿಎಫ್ ಪ್ರತಿಗಳು ದೇಹ ನಶಿಸಿದ ಮೇಲೂ ಉಳಿದ ಆತ್ಮಗಳಂತೆ ಅಂತರ್ಜಾಲದಲ್ಲಿ ಕುಳಿತಿವೆ. ಇವೆಲ್ಲ ಸಾಧ್ಯವಾಗಿರುವುದು 'ಇ' ಮಾಧ್ಯಮದಿಂದ. ಹೀಗೆ ಮನುಷ್ಯ ತನ್ನ ಹೃದಯಕ್ಕೆ ತೀರಾ ಹತ್ತಿರದಲ್ಲಿಟ್ಟುಕೊಳ್ಳುವ ಮೊಬೈಲ್ ನೊಳಗಿನಿಂದ ಕನ್ನಡವು ಚಿಗುರೊಡೆದಿರುವುದು ಸ್ವಾಗತಾರ್ಹವೇ. ಆದರೆ ಪುಸ್ತಕಗಳು ದೂರಮಾಡಬಾರದಷ್ಟು ಅನಿವಾರ್ಯವಾದ ವ್ಯಕ್ತಿತ್ವದ ಅಂಗಗಳು. ಎರೆಡರಲ್ಲೂ ಇರುವುದು ಅಕ್ಷರಗಳೇ ಆದರೂ ಎರೆಡೂ ಉಂಟುಮಾಡುವ ಅನುಭೂತಿ ವಿಭಿನ್ನವಾದುದು. ತಮ್ಮತಮ್ಮ ಮಿತಿಯಲ್ಲೇ ಮನುಷ್ಯನ ವ್ಯಕ್ತಿತ್ವಕ್ಕೆ ನಿರಂತರ ಕಾವು ಕೊಡುತ್ತಾ ಈ ಎರೆಡೂ ಕವಲುಗಳೂ ಕನ್ನಡದ ಹೆಮ್ಮರವನ್ನು ಮತ್ತಷ್ಟು ಹಬ್ಬಿಸುತ್ತಿವೆ.


(09-02-2020 ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...