ಬುಧವಾರ, ಜುಲೈ 8, 2020

ನಿನ್ನ ಹಾಗೆ ಯಾಕೆ ಯಾರಿಲ್ಲ?

ಈಗಷ್ಟೇ ಬೆಳಗಾಗಿದೆ. ಕಿಟಕಿಯಿಂದ ಹಾದ ಬೆಳಕಿನ ಕೋಲು ಕೋಣೆಯ ತುಂಬಾ ಹರಡಿಕೊಂಡು ಬೆಳಕಾಗಿದೆ. ಪುಟ್ಟನಿಗೆ ಎಚ್ಚರವಾಗಿದೆ. ಅವನ ಕೈ ಅಪ್ರಯತ್ನವಾಗಿ ತಡಕಾಡುತ್ತಿದೆ. ಅವನ ಪಕ್ಕದ ಹಾಸಿಗೆಯೀಗ ಬರಿದಾಗಿದೆ. ಅಲ್ಲೀಗ ಅಪ್ಪ ಇಲ್ಲ! ಎಲ್ಲಿಹೋಗಿಬಿಟ್ಟ? ರಾತ್ರೆ ಇದ್ದನಲ್ಲ? ಗುಮ್ಮಣ್ಣನಿಗೆ ಆಂಜನೇಯ ಚಾಮಿ ತಕ್ಕ ಶಾಸ್ತಿ ಮಾಡಿದ ಕಥೆಯನ್ನು ಹೇಳಿದ್ದನಲ್ಲಾ? ಈಗೆಲ್ಲಿ ಹೋದ? ಪುಟ್ಟನಿಗೆ ಭಯವಾಗಿದೆ. ಅಪ್ಪಾ.. ಊಊಊ. ಅವನೀಗ ಅಳುತ್ತಿದ್ದಾನೆ. ಆ ಅಳು ಆಚೆ ಕೊಟ್ಟಿಗೆಯಲ್ಲಿ ಒಲೆಗೆ ಬೆಂಕಿ ಒಟ್ಟುತ್ತಿರುವ ಅಪ್ಪನಿಗಿಂತ ಮೊದಲು ಅಡುಗೆಮನೆಯಲ್ಲಿರುವ ಅಮ್ಮನನ್ನು ತಲುಪಿದೆ.

"ಬೆಳ್ ಬೆಳಗ್ಗೆ ಏನೋ ನಿಂದು? ಕೋಲು ತರ್ತೇನೆ ನೋಡು"
ಅಮ್ಮ ಗದರುತ್ತಿದ್ದಾಳೆ. ಪುಟ್ಟನಿಗೀಗ ಗುಮ್ಮಣ್ಣನ ಭಯದ ಜೊತೆ ಅಮ್ಮನ ಏಟಿನ ಭಯವೂ ಉಂಟಾಗಿ ಮತ್ತಷ್ಟು ಅಳುತ್ತಿದ್ದಾನೆ.

"ಏಯ್, ನೀನು ಸುಮ್ನಿರೇ‌. ತಡಿ ಪಾಪೂ. ನಾನು ಬಂದೆ"
ಅಮ್ಮನನ್ನು ಗದರಿದ ಅಪ್ಪ ಪುಟ್ಟನನ್ನು ಎತ್ತಿಕೊಂಡು ಹೊರಬಂದಿದ್ದಾನೆ.

"ಓಹೋಹೋ, ಇನ್ನೂ ತೊಟ್ಟಿಲಿನ ಮಗು ಇದು‌. ಆಗ್ಲೇ ನಾಲ್ಕು ವರ್ಷ ಆಗಿದೆ. ಆದ್ರೂ ಎತ್ಕೋಬೇಕು. ಇಳಿ, ಕೆಳಗಿಳಿ"
ಅಪ್ಪನ ತೋಳಿನಲ್ಲಿರುವ ಪುಟ್ಟುವನ್ನು ಅಮ್ಮ ಕೆಣಕುತ್ತಿದ್ದಾಳೆ.

"ಓಗೇ ನೀನು, ಹೊದೀತೀನಿ ನಿಂಗೆ ಅಂಗೆಲ್ಲಾ ಅಂದ್ರೆ"
ಜೊತೆಗೆ ಅಪ್ಪನಿದ್ದಾನೆನ್ನುವ ಧೈರ್ಯದಲ್ಲಿ ಪುಟ್ಟ ಅಮ್ಮನಿಗೆ ಆವಾಸ಼್ ಹಾಕುತ್ತಿದ್ದಾನೆ.

"ಓಹೋ, ಹೌದಾ? ಅಪ್ಪ ಇವತ್ತು ಸಾಗರದ ಅಡಿಕೆ ಮಂಡಿಗೆ ಹೋಗ್ತಾರಲ್ಲಾ, ಆಗೇನು ಮಾಡ್ತೀಯ ನೋಡ್ತೀನಿ ನಾನು"
ಅಮ್ಮ ಮತ್ತೆ ಕೆಣಕಿದ್ದಾಳೆ.

"ನಾನೂ ಅಪ್ಪಂಜೊತೆ ಹೋತೀನಿ. ಬರ್ತಾ ನಿಂಗೇನೂ ತರಲ್ಲ.. ಅಪ್ಪ ಇವತ್ತು ಚಾಗ್ರಕ್ಕೆ ನನ್ನೂ ಕರ್ಕಂಡ್ ಹೋಗಾ.."
ಅಪ್ಪನ ತೆಕ್ಕೆಯಿಂದ ಪುಟ್ಟ ಹೇಳುತ್ತಾನೆ. ಹೇಳಹೇಳುತ್ತಲೇ ಅವನ ಮಾತಿನಿಂದ ಅಳು ತುಳುಕಿದೆ.

"ಆಯ್ತು ಪಾಪು‌. ಅಮ್ಮನ್ನ ಬಿಟ್ಟು ನಾನು ನೀನು ಮಾತ್ರ ಪೇಟೆಗೆ ಹೋಗಣ ಆಯ್ತಾ? ಈಗ ಅಳಬಾರ್ದು. ಮುಖ ತೊಳ್ಕಂಡು ಸಾಮಿ ಚಿತ್ತ ಮಾಡು ಆಯ್ತಾ? ಜಾಣಮರಿ"

ಅಪ್ಪನ ರಮಿಕೆಗೆ ಅಳು ದೂರವಾಗಿದೆ. ಹಾಲು ಕುಡಿದ ಪುಟ್ಟ ತನ್ನ ಆಟಿಕೆಯ ಬುಟ್ಟಿಯತ್ತ ನಡೆದಿದ್ದಾನೆ. ಅದರ ತುಂಬಾ ಅಪ್ಪ ಕೊಡಿಸಿದ ಆಟಿಕೆಗಳು! ಡ್ರಂ ಬಾರಿಸುವ ಬೊಂಬೆ, ಮೋಟಾರ್ ಕಾರು, ತೆಂಡೂಲ್ಕರ್ ಚಿತ್ರವಿರುವ ಪ್ಲಾಸ್ಟಿಕ್ ಬ್ಯಾಟು-ಬಾಲು, ನೀಲಿ ಗೋಲಿ, ಕೆಂಪು ಬುಗುರಿ, ಪ್ಲಾಸ್ಟಿಕ್ ಕೋವಿ.. ಸಾಗರದಿಂದ, ತೀರ್ಥಹಳ್ಳಿಯಿಂದ, ಊರ ಜಾತ್ರೆಯಿಂದ, ಊರಿನ ಯಾವ್ಯಾವುದೋ ಮೂಲೆಯಿಂದೆಲ್ಲಾ ಹುಡುಕಿ ಅಪ್ಪ ತಂದುಕೊಟ್ಟ ಆಟಿಕೆಗಳು. ಪುಟ್ಟನ ಆಟ ಆರಂಭವಾಗಿದೆ. ಅರೆರೇ, ಇದೇನಿದು? ಮೋಟಾರ್ ಕಾರು ಓಡುತ್ತಿಲ್ಲವಲ್ಲಾ? ಹಿಂದೆ ತಿರುಗಿಸಿದರೂ ಇಲ್ಲ, ಮುಂದೆ ತಿರುಗಿಸಿದರೂ ಇಲ್ಲ. ತನಗೆ ಹುಷಾರಿಲ್ಲದಾಗ ಕೋಣಂದೂರು ಡಾಕ್ಟರ ಹತ್ತಿರ ಕರೆದೊಯ್ದ ಅಪ್ಪ ಅಲ್ಲೇ ಪಕ್ಕದ ಆಟಿಕೆಯಂಗಡಿಯಲ್ಲಿ ಕೊಡಿಸಿದ ಕಾರು. ಅದೀಗ ಹಾಳಾಗಿದೆ! ಪುಟ್ಟನಿಗೆ ಮತ್ತೆ ಅಳು ಬಂದಿದೆ.

"ಅಪ್ಪಾ, ಇದು ಹಾಳಾಗಿದೆ ನೋಡಾ. ಚರಿ ಮಾಡ್ಕೊಡಾ"
ಅವನು ಅಳುತ್ತಾ ಅಪ್ಪನ ಬಳಿಗೆ ಓಡಿದ್ದಾನೆ.

"ಅಳ್ಬೇಡ ಪಾಪು. ಸರಿ ಮಾಡ್ತೀನಿ ಅದನ್ನ"
ಸ್ಕ್ರೂ ಡ್ರೈವರ್ ಹಿಡಿದ ಅಪ್ಪ ಕಾರಿನ ಮೋಟಾರ್ ಬಿಚ್ಚಿ ಸರಿಮಾಡಿದ್ದಾನೆ. ಡುರ್ ಡುರ್.. ರಿಪೇರಿಯಾದ ಕಾರೀಗ ಮನೆಯ ತುಂಬಾ ಶಬ್ದ ಮಾಡುತ್ತಾ ಓಡುತ್ತಿದೆ.

"ನನ್ನ ನಿನ್ನ ಕಾರಲ್ಲಿ ಒಂಚೂರು ಸಂತೆಗೆ ಬಿಡೋ ಪಾಪು"
ಅಮ್ಮ ಕೇಳಿದ್ದಾಳೆ.

"ಇಲ್ಲ, ನೀನು ನಂಗೆ ಹೊಡೀತಿ. ನಾನು ಕಾರಲ್ಲಿ ಅಪ್ಪನ್ನ ಮಾತ್ರ ಕರ್ಕೊಂಡ್ ಹೋತೀನಿ"
ಪುಟ್ಟ ದಿಟ್ಟವಾಗಿ ಉತ್ತರಿಸಿದ್ದಾನೆ. ಏನೇ ಆದರೂ ಜೊತೆಗೆ ಅಪ್ಪನಿದ್ದಾನೆನ್ನು ಧೈರ್ಯ ಅವನಿಗೆ.

**************

"ನನ್ ಅಪ್ಪಂಗೆ ಎಷ್ಟು ಶಕ್ತಿ ಇದೆ ಗೊತ್ತಾ? ಅವನು ದೊಡ್ಡ ಹಿಂಡಿ ಮೂಟೇನ ಒಂದೇ ಸಲಕ್ಕೆ ಹೇಗೆ ಎತ್ ತಾನೆ ಗೊತ್ತಾ?"
ಪುಟ್ಟು ತನ್ನ ಗೆಳೆಯನಿಗೆ ಹೇಳುತ್ತಿದ್ದಾನೆ.

"ನನ್ನಪ್ಪಂಗೆ ಇನ್ನೂ ಜಾಸ್ತಿ ಶಕ್ತಿ ಇದೆ. ಅವನು ಇನ್ನೂ ದೊಡ್ಡ ಮೂಟೇನ ಎತ್ ತಾನೆ‌.. ಒಂದೇ ಕೈಯಲ್ಲಿ!"
ಪುಟ್ಟನ ಗೆಳೆಯ ಹಾಗೆಂದು ಹೇಳಿದ್ದಾನೆ.

"ಏಯ್ ಹೋಗಾ! ನನ್ನಪ್ಪ ಅದ್ಕಿಂತ ದೊಡ್ಡ ಬಂಡೇನ ಎತ್ತಿ ಬಿಸಾಕ್ತಾನೆ ಗೊತ್ತಾ? ನನ್ನಪ್ಪಂಗೇ ಜಾಸ್ತಿ ಶಕ್ತಿ!"
ಪುಟ್ಟು ವಾದವನ್ನು ಬಿಗಿಗೊಳಿಸಿದ್ದಾನೆ.

"ಸಾಕು ಸುಮ್ನಿರಾ, ನಮ್ಮಪ್ಪ ಇಡೀ ಭೂಮೀನೇ ಎತ್ತಿ ಹಿಡ್ಕೋತಾನೆ, ಒಂದೇ ಕೈಯಲ್ಲಿ"
ಗೆಳೆಯ ಹಾಗೆಂದಾಗ ಪುಟ್ಟುವಿಗೆ ಗೊಂದಲವಾಗಿದೆ. ಭೂಮಿಗಿಂತ ದೊಡ್ಡದು ಯಾವುದು? ಗೊತ್ತಿಲ್ಲ. ಅವನಿಗೆ ಗೊತ್ತಿರುವುದು ಒಂದೇ. ಈ ಭೂಮಿಯಲ್ಲಿ ಅತ್ಯಂತ ಶಕ್ತಿವಂತನೆಂದರೆ - ಅದು ತನ್ನ ಅಪ್ಪ!

"ಏಯ್, ಹೋಗಾ ನನ್ನಪ್ಪಂಗೇ ಜಾಸ್ತಿ ಶಕ್ತಿ!"

"ನೀನ್ ಹೋಗಾ, ನನ್ನಪ್ಪಂಗೇ ಜಾಸ್ತಿ ಶಕ್ತಿ!"

ವಾದ ವಿವಾದವಾಗಿ, ವಿವಾದ ಜಗಳವಾಗಿ, ಜಗಳ ಕದನವಾಗಿ ಇಬ್ಬರೂ ಕೈಕೈ ಮಿಲಾಯಿಸಿಕೊಂಡು ಬಯಲಿನ ಮಣ್ಣಿನಲ್ಲಿ ಉರುಳಾಡಿ ಹೊಡೆದಾಡಿಕೊಂಡಿದ್ದಾರೆ. ಗೆಳೆಯನನ್ನು ಪುಟ್ಟನೂ, ಪುಟ್ಟನನ್ನು ಗೆಳೆಯನೂ ತಳ್ಳಾಡಿ ಎಳೆದಾಡಿಕೊಂಡಿದ್ದಾರೆ.

ಹೌದು ಮತ್ತೆ, ಅಪ್ಪನಿಗೇ ಕಡಿಮೆ ಶಕ್ತಿ ಅಂದ್ರೆ ಸುಮ್ನೆ ಬಿಡೋಕಾಗತ್ತಾ?

ನಾನು ಓದೋ ಪಾಠದಲಿ
ಅದು ಯಾಕೆ ನಿನ್ನ ಹೆಸರಿಲ್ಲ?
ನಿನ್ನ ಹಾಗೆ ಯಾಕೆ ಯಾರಿಲ್ಲ?
ನೀನು ಇರುವ ಧೈರ್ಯದಲಿ
ಯಾರೊಂದಿಗೂ ನಾ ಸೋಲಲ್ಲ
ನಿನ್ನ ಪ್ರೀತಿ ಮುಂದೆ ಏನಿಲ್ಲ..

**************

ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದುಗಾರ ಅಪ್ಪ..
ಹಗಲು ಬೆವರಿನ ಕೂಲಿಕಾರ
ರಾತ್ರೆ ಮನೆಯಲಿ ಚೌಕಿದಾರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ..
ಗದರೋಮೀಸೆಗಾರ ಮನಸೇ ಕೋಮಲ
ನಿನ್ನ ಹೋಲೋ ಕರ್ಣ ಯಾರಿಲ್ಲ..

ಅಪ್ಪನೆಂದರೆ ಬಾಲ್ಯದ ಹೀರೋ. ಅವನು ಅಮ್ಮನಂತೆ ವಾಸ್ತವವಾದಿಯಲ್ಲ. ಅವನು ಭಾವುಕ. ಅವನ ಗಂಭೀರ ಮುಖ, ಎತ್ತರದ ನಿಲುವು ನೋಡಿದರೆ ಭಯವಾಗುತ್ತದೆ ನಿಜ, ಆದರೆ ಅವನ ಮನಸ್ಸು ಕೋಮಲ. ಶಾಲೆಯ ಮೊದಲ ದಿನ ತರಗತಿಯಲ್ಲಿ ಬಿಟ್ಟು ಹೊರಟವನ ಹಿಂದೆ "ಅಪ್ಪಾ, ನಾನೂ ನಿಂಜೊತೆ ಬತ್ತೀನಾ, ನಾನು ಚಾಲೆಗೆ ಹೋಗಲ್ವಾ" ಎಂದು ಮಗ ಅಳುತ್ತಾ ಓಡಿಬಂದಾಗ ಅಪ್ಪ ಕರಗಿಹೋಗಿದ್ದ. "ಸರಿ ಪಾಪು. ನಾಳೆಯಿಂದ ಶಾಲೆಗೆ ಹೋಗು ಆಯ್ತಾ" ಎಂದು ಅಳುತ್ತಿದ್ದ ಮಗನನ್ನು ರಮಿಸಿ ಮನೆಗೆ ಕರೆದೊಯ್ದಿದ್ದ‌‌.

ಯಾವ ಜಾತ್ರೆಗೇ ಹೋಗಲಿ, ಪೇಟೆಗೇ ಹೋಗಲಿ, ಜೇಬಿನಲ್ಲಿ ಚಾಕಲೇಟಿಲ್ಲದೇ ಅವನು ಮರಳಿದ್ದೇ ಇಲ್ಲ. ಬೆಳೆಗೆ ಕೊಂಚ ಒಳ್ಳೆಯ ಬೆಲೆ ಸಿಕ್ಕಿದಾಗಲಂತೂ ಮುಗಿದೇ ಹೋಯಿತು. ಬೋಟಿ, ಕಂಬಾರ್ ಕಟ್ಟು, ಡಣಟಣ ಗಾಡಿ.. ಅಪ್ಪ ಚೀಲದ ತುಂಬಾ ಅದೆಷ್ಟೋ ವಿಸ್ಮಯಗಳ ತುಂಬಿಕೊಂಡು ಮರಳುತ್ತಾನೆ. ಬೆಳೆದ ಬೆಳೆಗೆ ತೀರಾ ಅರ್ಧದಷ್ಟು ರೇಟು ಸಿಕ್ಕದೇ ಹೋದಾಗಲೂ ಅವನ ಜೇಬಿನಲ್ಲಿ ಚಾಕಲೇಟು ತಪ್ಪಿಲ್ಲ. ಇನ್ನು ಸಂಜೆ ಊರಿನ ಅಂಗಡಿಗೆ ಕರೆದೊಯ್ದಾಗಲಂತೂ "ಅಮ್ಮನಿಗೆ ಹೇಳ್ಬೇಡ ಆಯ್ತಾ?" ಎಂದು ಹಳದಿ ಪೀಲೆ ಕೊಡಿಸುತ್ತಾನೆ. ಜಗತ್ತಿನ ಸಕಲ ಗುಮ್ಮ, ದೆವ್ವ, ರಾಕ್ಷಸಗಳೆಲ್ಲವನ್ನೂ ಹೆದರಿಸುವ ಅಪ್ಪ ಅಮ್ಮನಿಗೆ ಹೆದರುತ್ತಾನಾ? ಹಾಗೊಂದು ಅನುಮಾನ ಪುಟ್ಟುವಿಗಿದೆ.

ಅಪ್ಪ ಶಕ್ತಿಶಾಲಿ. ಮಣ ಭಾರದ ಒಳಕಲ್ಲನ್ನು ಅನಾಮತ್ತಾಗಿ ಎತ್ತಿ ಸಾಗಿಸುತ್ತಾನೆ. ಅಪ್ಪ ಗಾಯಕ. ಹುಲ್ಲು ಕೊಯ್ಯುವಾಗ "ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು" ಎಂದು ಇಂಪಾಗಿ ಹಾಡುತ್ತಾನೆ. ಅಪ್ಪ ಮೆಕ್ಯಾನಿಕ್. ಕೆಟ್ಟು ನಿಂತ ತೋಟದ ಮೋಟಾರನ್ನು, ಹಾಳಾದ ರೇಡಿಯೋವನ್ನೂ ತಾನೇ ಸರಿಪಡಿಸುತ್ತಾನೆ. ಅಪ್ಪ ಭಾವುಕ. ಟಿವಿಯಲ್ಲಿ ರಾಜ್ ಕುಮಾರ್ "ಎಲ್ಲೂ ಹೋಗೊಲ್ಲ ಮಾಮಾ ಎಲ್ಲೂ ಹೋಗೊಲ್ಲ" ಎಂದು ಅತ್ತಿದ್ದನ್ನು ನೋಡಿ ತಾನೂ ಅಳುತ್ತಾನೆ‌.‌ ಅಪ್ಪ ನಟ. ಊರಿನ ನಾಟಕದಲ್ಲಿ ಗಯ್ಯಾಳಿ ಅತ್ತೆಯ ಪಾತ್ರಮಾಡುತ್ತಾನೆ. ಅಪ್ಪ ಕರುಣಾಮಯಿ. ಕೊಟ್ಟಿಗೆಯಲ್ಲಿ ನರಳುತ್ತಾ ಮಲಗಿರುವ ಎಮ್ಮೆಗೆ ಶ್ರುಶ್ರೂಷೆ ಮಾಡುತ್ತಾನೆ. ಅಪ್ಪ ಮುಗ್ಧ. ಬ್ಯಾಣದ ವಿಚಾರದಲ್ಲಿ ಯಾರಿಂದಲೋ ಮೋಸಹೋಗುತ್ತಾನೆ. ಅಪ್ಪ ಪ್ರೇಮಿ. ಅಮ್ಮನಿಗೆ ಹುಷಾರಿಲ್ಲವೆಂದು ಮನೆಯ ಕೆಲಸಗಳೆಲ್ಲವನ್ನೂ ತಾನೇ ಮಾಡುತ್ತಾನೆ. ಅಪ್ಪ ಎಂದೂ ದಣಿಯದ ಕೆಲಸಗಾರ. ಸಣ್ಣಗೆ ಏದುಸಿರು ಬಿಡುತ್ತಾ, ಒಡೆದ ಹಿಮ್ಮಡಿಗೆ ಎಣ್ಣೆ ಹಚ್ಚುತ್ತಾ, ಸುರಿವ ಬೆವರ ಒರೆಸಿಕೊಳ್ಳುತ್ತಾ ವರುಷಾನುವರುಷ ದುಡಿಯುತ್ತಾನೆ.

ತಾಯಿ ಮಾತ್ರ ತವರಲ್ಲ
ತಂದೆ ಇರದೆ ತಾಯಿಲ್ಲ
ಆಕಾಶದಂತೆ ನಿನ್ನ ಮನಸಪ್ಪಾ..
ನಾನು ಎಂದೂ ಹೇಳಿಲ್ಲ
ಯಾಕಂತ ನಂಗೂ ತಿಳಿದಿಲ್ಲ
ನೀನು ಅಂದ್ರೆ ಅಚ್ಚುಮೆಚ್ಚಪ್ಪ..

ಅಪ್ಪ.‌. ಐ ಲವ್ ಯೂ ಅಪ್ಪಾ..

*************

ಅಪ್ಪನಿಗೀಗ ವೃದ್ದಾಪ್ಯ. ಐವತ್ತು ವರ್ಷಗಳಿಂದ ಬಾಕಿಯಿದ್ದ ಖಾಯಿಲೆಗಳೆಲ್ಲ ಯಾವ ಜನ್ಮದ ಹಗೆಯೋ ಎಂಬಂತೆ ಸಾಲು ಸಾಲಾಗಿ ಬಂದು ಕಾಡುತ್ತಿವೆ. ಹಿಂದೆ ಯುವಕನಾಗಿದ್ದಾಗ ಬಂದಿದ್ದ ರೋಗಗಳಿಗೆ "ನಾನು ನನ್ನ ಹೆಂಡತಿ ಮಕ್ಕಳನ್ನು ಸಾಕಬೇಕು. ದಯವಿಟ್ಟು ಈಗ ಬರಬೇಡಿ" ಎಂದು ಬೇಡಿಕೊಂಡಿದ್ದನೋ ಏನೂ? ಆಗ ಏನೂ ಇಲ್ಲದ್ದು ಈಗ ಎಲ್ಲವೂ ಬಂದು ಒಕ್ಕರಿಸಿವೆ. ಸ್ಟ್ರೋಕ್ ಆಗಿ ಕೈ-ಕಾಲು ಸ್ತಬ್ದವಾಗಿದೆ. ಕಣ್ಣು ಮಂಜಾಗಿದೆ. ದೊಡ್ಡ ಆಪರೇಶನ್ ಗೊಳಗಾದ ತಲೆ ನಿರಂತರ ನೋವಿಗೀಡಾಗಿದೆ. ಒಂದೇ ಸಮನೆ ಕೆಮ್ಮು. ಅಪ್ಪನೀಗ ಮಂಚದ ಮೇಲೆ ಬಂಧಿ.

ಈಗ ಅಪ್ಪನ ಲೋಕವೇ ಬೇರೆ. ಹೊರ ಜಗತ್ತಿನ ಕದಲಿಕೆಗಳು ಕೇವಲ ಶಬ್ದಗಳಾಗಿ ಅವನನ್ನು ತಲುಪುತ್ತಿವೆ. ಹೊರಗೆ ಅಂಗಳದಲ್ಲಿ ಮಳೆ ಬಿದ್ದ ಸದ್ದು. ಅಲ್ಲೆಲ್ಲೋ ಸಿಡಿಲು ಬಡಿದ ಮೊರೆತ. ಅಡಿಗೆ ಮನೆಯಲ್ಲಿ ಅಮ್ಮ ಮಾಡುತ್ತಿರುವ ಪಾತ್ರೆಗಳ ಟಣಟಣ. ಅಂಗಳದಲ್ಲಿ ಮೊಮ್ಮಕ್ಕಳು ಹಚ್ಚಿರುವ ಪಟಾಕಿ. ಪಕ್ಕದ ಕೋಣೆಯಲ್ಲಿ ಮಗ-ಸೊಸೆ ಮಾಡುತ್ತಿರುವ ವಾದ. ಜಗುಲಿಯಲ್ಲಿ ಅದ್ಯಾರೋ ನೆಂಟರು ಹೊಡೆಯುತ್ತಿರುವ ಹರಟೆ. ಕಿಡಕಿಯಿಂದ ನುಸುಳಿ ಬರುತ್ತಿರುವ ಡೇರೆ ಹೂವಿನ ಪರಿಮಳ..

ಅಪ್ಪನ ಲೋಕವೀಗ ಬೇರೆಯಾಗಿದೆ. ಅವನೀಗ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾನೆ. ಯಾವುದೋ ಹಳೆಯ ಹಾಸ್ಯವನ್ನು ನೆನೆದು ತನ್ನಷ್ಟಕ್ಕೇ ನಗುತ್ತಾನೆ. ತನ್ನೊಡನೆ ಮಾತನಾಡಲು ಯಾರಾದರೂ ಬರುವರೇನೋ ಎಂದು ಬಾಗಿಲಿನತ್ತ ನೋಡುತ್ತಾನೆ. ಸ್ನಾನ ಮಾಡಿಸು, ಊಟ ಕೊಡು, ಬಟ್ಟೆ ಬದಲಾಯಿಸು ಎಂದೆಲ್ಲಾ ಕೇಳಿ ಮನೆಯವರಿಂದ ಬೈಸಿಕೊಳ್ಳುತ್ತಾನೆ. ಮತ್ತೆ ಮತ್ತೆ ಎದ್ದು ಕೂರಲು ನೋಡಿ ಬೀಳುತ್ತಾನೆ. ಕೋಣೆಗೆ ಬಂದ ಮೊಮ್ಮಗನನ್ನು ಬಾಚಿತಬ್ಬಲೆಂದು ಕೈಚಾಚುತ್ತಾನೆ.

ಐವತ್ತು ವರ್ಷಗಳ ಕಾಲ ತಾನೇ ದುಡಿದು, ಕಟ್ಟಿ, ಬೆಳೆಸಿದ ಮನೆ, ತೋಟ, ಕುಟುಂಬಗಳಿಂದ ತಾನೇ ಹೊರತಾಗಿ, ಹೊರ ಕುಳಿತು ಒಂಟಿಯಾಗಿ ನರಳುತ್ತಿದ್ದಾನೆ.

ತುಸು ಮೆಲ್ಲ ಬಡಿಯೇ ಸಿಡಿಲೇ
ಇಲ್ಲೊಂದು ನಿದಿರೆ ಜಾರಿಯಲ್ಲಿದೆ;
ತೂಗಿ ದಣಿದು ಮಲಗಿಹನು ಅಪ್ಪ
ಅವನ ನಿದಿರೆಗೆ ಲಾಲಿಯೆಲ್ಲಿದೆ?

ವರುಷಾನುವರುಷ ದುಡಿದ ಅನವರತ
ಈಗಷ್ಟೇ ವಿಶ್ರಾಂತಿ ಶುರುವಾಗಿದೆ;
ಛಳಿಯನೆರಚದಿರು ಓ ಸಂಜೆ ಗಾಳಿ
ನಡುಗುವ ತ್ರಾಣ ಈ ಪ್ರಾಯಕೆಲ್ಲಿದೆ?

ತುತ್ತುಗಳ ತಿನ್ನಿಸಿ ಸವೆದಂಥ ಕೈಯಿದು
ಕತ್ತರಿಸಿದೆಯೇಕೆ ಓ ದೇವರೇ?
ಕಹಿಗಳ ತಾ ನುಂಗಿ ಸಿಹಿಯಷ್ಟೇ ಹಂಚಿದ
ಅವನ ಪಾತ್ರೆಯಲೇಕೆ ನೋವುಳಿದಿದೆ?

ಎಷ್ಟೊಂದು ಪ್ರೀತಿ ಈ ತಂದೆ ಕಣ್ಣಲಿ
ಕೇಳದೆಯೇ ಕೊಟ್ಟನು ಈ ಜೀವಕೆ;
ಏನೆಲ್ಲ ಯಾತನೆಯು ಮಡುವುಗಟ್ಟಿದೆ ಇಂದು
ನಮಗಿನಿತೂ ಕೊಡುತಿಲ್ಲ ಇಂದೇತಕೆ?

ಅಪ್ಪ.. ಐ ಲವ್ ಯು ಅಪ್ಪಾ.. 5

ಆಸ್ಪತ್ರೆಯೆಂದರೆ ಬದುಕು ಹಾಗೂ ಸಾವು ನಡುವಿನ ದಿಬ್ಬ. ಇಲ್ಲಿ ಕಳೆದ ಇಪ್ಪತ್ತು ದಿನಗಳಲ್ಲಿ ಮೂರು ಸಾವುಗಳನ್ನು ನೋಡಿಬಿಟ್ಟೆ.‌ ಅವುಗಳ ಪೈಕಿ ಒಂದಂತೂ ಕಣ್ಮುಂದೆಯೇ ನಡೆದುಹೋಗಿತ್ತು.

ನ್ಯೂರೋ ಐಸಿಯುನಲ್ಲಿ ಅಪ್ಪನ ಪಕ್ಕದ ಬೆಡ್ನಲ್ಲೇ ಮಲಗಿದ್ದರು ಆ ತಾತ. ತಾತನೆಂದರೆ ಅಪ್ಪನಿಗಿಂತ ಕೇವಲ ನಾಲ್ಕು ವರ್ಷಕ್ಕೆ ಹಿರಿದಾದ ಜೀವವದು. ಆದರೆ ನೋಡಲಿಕ್ಕೆ ಅಪ್ಪನಿಗಿಂತ ಕನಿಷ್ಠ ಹತ್ತು ವರ್ಷಗಳಷ್ಟು ದೊಡ್ಡವರಂತೆ ಕಾಣುತ್ತಿದ್ದರು. ಹೃದಯ, ಶ್ವಾಸಕೋಶ, ಕಿಡ್ನಿಗಳಂಥಹಾ ಪ್ರಮುಖಾತಿ ಪ್ರಮುಖ ಅಂಗಗಳೆಲ್ಲಾ ಒಟ್ಟೊಟ್ಟಿಗೇ ಘಾಸಿಗೊಂಡ ಸ್ಥಿತಿಯಲ್ಲಿದ್ದ ಆ ವ್ಯಕ್ತಿ ದಿನವಿಡೀ ಕಿರುಚುತ್ತಲೇ ಇರುತ್ತಿದ್ದರು. ತನ್ನ ಅರೈಕೆಗೆಂದು ಜೊತೆಗಿದ್ದ ಮಡದಿಯನ್ನೇ ಸದಾ ಬೈಯುತ್ತಾ ಎಲ್ಲೋ ಇರುವ ತನ್ನ ಮಕ್ಕಳ ಹೆಸರನ್ನು ಒಂದೊಂದಾಗಿ ಕರೆಯುತ್ತಾ ತನ್ನನ್ನು ಇಲ್ಲಿಂದ ಕರೆದೊಯ್ಯುವಂತೆ ಮೊರೆಯಿಡುತ್ತಿದ್ದರು. ಅವರು ಮಾತ್ರವಲ್ಲದೆ ಯಾರೇ ಅವರ ಕಣ್ಣೆದುರು ನಡೆದರೂ ಅಣ್ಣಾ.. ಇಲ್ಲಿ ಬಾರಪ್ಪಾ, ನನ್ನ ಒಂಚೂರು ಎಬ್ಬಿಸಿ ಕೂರಿಸು ಬಾರೋ ಎಂದು ದಯನೀಯವಾಗಿ ಕರೆಯುತ್ತಿದ್ದರು. ಪ್ರಾಯದ ದಿನಗಳಲ್ಲಿ ಲಾರಿ ಡ್ರೈವಿಂಗ್ ಮಾಡುತ್ತಿದ್ದ ಅವರು ಅತ್ಯಂತ ಒರಟರೂ, ಕುಡಿತ-ಬಿಡಿ-ತಂಬಾಕುಗಳ ಅತಿ ದೊಡ್ಡ ದಾಸರೂ ಆಗಿದ್ದರೆಂದೂ, ಆದ್ದರಿಂದ ಹೀಗಾಯಿತೆಂದೂ ಅವರ ಮಡದಿ ಹೇಳಿಕೊಂಡರೆ ಅಲ್ಲೇ ಇದ್ದ ನರ್ಸ್ ಕುಡಿತ, ಸಿಗರೇಟು ಜಾಸ್ತಿ ಅಲ್ವಾ ಅದಿಕ್ಕೆ ಪೇಷಂಟುಗಳು ಜಾಸ್ತಿ ಎಂದು ದನಿಗೂಡಿಸಿದಳು. ಅವರ ಮಾತಿಗೆ ನಾನು ಒಳಗೇ ನಕ್ಕು ಬಿಟ್ಟೆ. ಸಿಗರೇಟಿನ ಯಾವ ತುದಿಯನ್ನು ಬಾಯಿಗಿಟ್ಟು, ಯಾವ ತುದಿಗೆ ಬೆಂಕಿ ಹಚ್ಚಬೇಕನ್ನುವುದನ್ನೇ ತಿಳಿಯದವನು ನನ್ನಪ್ಪ! ಕುತೂಹಲಕ್ಕಾಗಿಯಾದರೂ ಒಂದು ದಿನ ಎಲೆ-ಅಡಿಕೆ-ಕವಳವನ್ನೂ ಹಾಕಿದವನಲ್ಲ‌. ಬೆವರೊಂದನ್ನೇ ಕುಡಿದು, ಬೆವರನ್ನಷ್ಟೇ ಹರಿಸಿದವನು. ಅಂಥವನಿಗೇ ಹೀಗಾಯಿತೆಂದರೆ ಇನ್ಯಾವ ದುಷ್ಚಟವನ್ನು ದೂರೋಣ? ಹಸಿರು ಕಾಡಿನೊಳಗೆ ಬೆಳೆದ ಅನಾಮಿಕ ಸಸಿಯಂಥಹಾ ಸ್ವಚ್ಛ, ಅರೋಗ್ಯಕರ ಬದುಕನ್ನು ಬಾಳಿದ ಅಪ್ಪ, ದುಶ್ಚಟಗಳನ್ನೇ ಉಸಿರಾಡಿದ ಆ ವ್ಯಕ್ತಿ - ಈ ಇಬ್ಬರೂ ಒಂದೇ ಆಸ್ಪತ್ರೆಯ ಅಕ್ಕಪಕ್ಕದ ಬೆಡ್ ಗಳಲ್ಲಿ ಹೀಗೆ ನಿತ್ರಾಣರಾಗಿ ಮಲಗುತ್ತಾರೆಂದರೆ ಅದಿನ್ಯಾವ ಆರೋಗ್ಯವನ್ನು ನಂಬೋಣ?

ಅದೊಂದು ದುರಾದೃಷ್ಟಕರ ಮಧ್ಯಾಹ್ನ. ಸಂಜೆಯಿಂದ ಬೆಳಗಿನ ತನಕ ಕೂಗುತ್ತಲೇ ಇದ್ದ ಆ ವ್ಯಕ್ತಿ ಕೆಲ ಸಮಯದ ಮುಂಚೆಯಷ್ಟೇ ನಿತ್ರಾಣರಾಗಿ ನಿದ್ರೆಗೆ ಶರಣಾಗಿದ್ದರು. ಮಧ್ಯಾಹ್ನ ಒಂದೂ ಮೊವ್ವತ್ತರ ಹೊತ್ತಿಗೆ ಇದ್ದಕ್ಕಿದ್ದಂತೆ ಅವರಿಗೆ ಅಳವಡಿಸಿದ್ದ ಮಾನಿಟರ್ ವಿಕಾರವಾಗಿ ಕಿರುಚಿಕೊಂಡುಬಿಟ್ಟಿತು. ಪರದೆಯಲ್ಲಿ ಬಿಪಿ, ಆಕ್ಸಿಜನ್, ನಾಡಿಮಿಡಿತಗಳೆಲ್ಲಾ ಕನಿಷ್ಠ ಮಟ್ಟಕ್ಕಿಂತ ಕೆಳಜಾರಿ, ಅದರ ಹಣೆಯಲ್ಲಿ ಕೆಂಪು ದೀಪವೊಂದು ಗಂಟಲು ಹರಿಯುವಂತೆ ಅರಚಿಕೊಳ್ಳುತ್ತಾ ಆರಿ ಆರಿ ಹೊತ್ತಿಕೊಳ್ಳುತ್ತಿತ್ತು. ಕೂಡಲೇ ರೂಮಿನ ಒಂದೊಂದು ಮೂಲೆಯಿಂದಲೂ ಬಿದ್ದೆದ್ದು ಓಡಿಬಂದ ನರ್ಸುಗಳೆಲ್ಲ ಅವರನ್ನು ಸುತ್ತುವರಿದರು. ಕೆಲ ನಿಮಿಷಗಳ ಆತಂಕ, ಉದ್ವೇಗ, ಗಡಿಬಿಡಿ, ಹೆಣಗಾಟಗಳ ನಂತರ ಅವರೆಲ್ಲರೂ ಹಿಂದೆ ಸರಿದ ಮೇಲೆ ಅಲ್ಲಿ ಉಳಿದಿತ್ತು- ಉಸಿರಾಟ, ಮಿಡುಕಾಟಗಳೆಲ್ಲದರಿಂದ ಮುಕ್ತವಾಗಿ ಮಂಚದ ಮೇಲೆ ನಿಶ್ಚಲವಾಗಿ ಮಲಗಿದ್ದ ಆತನ ಶವ!

ಅರವತ್ತೇಳು ವರ್ಷಗಳ ಬದುಕು, ಕಟ್ಟಿಕೊಂಡ ಸಂಸಾರ, ಅಂಟಿಸಿಕೊಂಡ ಚಟಗಳು, ಓಡಿಸುತ್ತಿದ್ದ ಲಾರಿ.. ಇವೆಲ್ಲವನ್ನೂ ಒಂದೇ ಕ್ಷಣದಲ್ಲಿ ಹಿಂದೆ ಬಿಟ್ಟು ಕಡ್ಡಿಯೊಂದು ಮುರಿದಷ್ಟೇ ಸಲೀಸಾಗಿ ಜೀವ ದೇಹವ ತೊರೆದುಹೋಗಿತ್ತು‌.

ಬರುಬರುತ್ತಾ ಆಸ್ಪತ್ರೆ ನನಗೆ ಅಭ್ಯಾಸವಾಗತೊಡಗಿತು‌. ಇಲ್ಲಿನ ಮುಸುಕುಗತ್ತಲ ಕಾರಿಡಾರುಗಳು, ಒಂದಿಲ್ಲೊಂದು ಜೀವದ ಎದೆಯಲ್ಲಿ ಬಾರಿಸುವ ಅಪಾಯದ ಗಂಟೆ, ಕೆಲವೇ ನಿಮಿಷದಲ್ಲಿ ಇಹದ ಋಣ ಮುಗಿಸಿ ಸ್ಟ್ರೆಚ್ಚರ್ ಮೇಲೇರಿ ಸಾಗುವ ಶವಗಳು, ಉಸಿರಾಟದಷ್ಟೇ ನಿರಂತರವೂ, ಸಾಮನ್ಯವೂ ಆದ ಕಣ್ಣೀರು, ನಿರ್ಭಾವುಕ ಡಾಕ್ಟರುಗಳು, ನಿಶ್ಯಕ್ತರಾಗಿ ನರಳುತ್ತಾ ಮಲಗಿರುವ ರೋಗಿಗಳು ಹಾಗೂ ಅವರ ಚೇತರಿಕೆಗಾಗಿ ತುಂಬುಗಣ್ಣುಗಳಲ್ಲಿ ಕಾಯುತ್ತಾ ನಿಂತಿರುವ ಅವರ ಕಡೆಯವರ ನಡುವೆಯೇ ತಂತಮ್ಮ ಹಾಸ್ಯ, ನಗು, ಮಾತುಗಳ ಹಂಚಿಕೊಳ್ಳುತ್ತಾ ಬಾಳುವ ನರ್ಸ್-ವಾರ್ಡ್ ಬಾಯ್ ಗಳು, ಆರಿ ಆರಿ ಹೊತ್ತುವ, ಹೊತ್ತಿ ಹೊತ್ತಿ ಆರುವ ಆಪರೇಶನ್ ಥಿಯೇಟರ್ ನ ಕೆಂಪು ದೀಪ, ಆಚೆ ಕುಳಿತವರ ಕಣ್ಣಲ್ಲಿ ತುಳುಕುವ ಮಾನವ ಲೋಕದ ಅನನ್ಯ ಪ್ರೀತಿ.. ಇವೆಲ್ಲ ನನ್ನ ನಿತ್ಯ ಬದುಕಿನ ಭಾಗಗಳೇ ಅನ್ನಿಸತೊಡಗಿದವು. ಒಮ್ಮೆ ಆಸ್ಪತ್ರೆಯ ಬಲ್ಬು-ದೀಪಗಳ ಕೃತಕ, ಅಖಂಡ ಹಗಲಿನೊಳಗೆ ಪ್ರವೇಶಿಸಿಬಿಟ್ಟರೆ ಹೊರಗಡೆ ಹಗಲೋ, ಸಂಜೆಯೋ, ರಾತ್ರೆಯೋ, ಮಳೆಯೋ, ಬಿಸಿಲೋ ಒಂದೂ ತಿಳಿಯುತ್ತಿರಲಿಲ್ಲ.

ಅಪ್ಪನೀಗ ಮೆಲ್ಲಮೆಲ್ಲನೆ ಈ ಲೋಕದವನಾಗತೊಡಗಿದ್ದ. ಅವನ ಎಡದ ಕೈ-ಕಾಲುಗಳು ಮತ್ತೆ ಚಲನೆಗೆ ಮರಳಿದ್ದವು. ಗಾಯದ ಹುಲಿಗೆಗಳಿರುವ ತನ್ನ ತಲೆಯನ್ನವನು ಕುತೂಹಲದಿಂದೆಂಬಂತೆ ಮುಟ್ಟಿ ನೋಡಿಕೊಳ್ಳುತ್ತಿದ್ದ. ವಾರ್ಡಿನೊಳಗಿನ ಬೆಳಕು, ಬೀಪ್ ಬೀಪ್ ಎನ್ನುವ ಮಾನಿಟರ್, ಬಟ್ಟೆ ಬದಲಿಸಲು ಬಂದ ವಾರ್ಡ್ ಬಾಯ್ ಹಾಗೂ ಪಕ್ಕದಲ್ಲಿ ಕುಳಿತಿರುವ ನಾನು.. ಎಲ್ಲರನ್ನೂ ಬೆರಗುಗಣ್ಣುಗಳಿಂದ ನೋಡುತ್ತಿದ್ದ‌.
ಉಪಚರಿಸಬಂದ ನರ್ಸನ್ನು ನೋಡಿ ಇವರು ಯಾರು? ಎಂದು ಬೆರಳುಮಾಡುತ್ತಿದ್ದ. ಈ ಬಾರಿ ಅಪ್ಪನ ಈ ಅಯೋಮಯ ಸ್ಥಿತಿ ನನ್ನಲ್ಲಿ ಭಾವುಕತೆಗಿಂತ ಹೆಚ್ಚಾಗಿ ಯೋಚನೆಯನ್ನು ಹುಟ್ಟುಹಾಕಿತು. ಈ ದುರ್ಘಟನಾ ಸರಣಿಯ ಎಲ್ಲಿಯ ತನಕದ ಕಂತುಗಳು ಅಪ್ಪನಿಗೆ ನೆನಪಿನಲ್ಲುಳಿದಿರಬಹುದು? ಆ ಕಾಳರಾತ್ರೆಯಲ್ಲಿ ತಲೆಯೊಳಗಿನ ನರವೊಂದು ತನ್ನನ್ನು ತಾನೇ ಸ್ಫೋಟಿಸಿಕೊಂಡು ಅಗಾಧವಾದ ನೋವಿನಲೆಗಳು ಹುಟ್ಟಿ ಮಾತು ಸ್ತಬ್ಧವಾದ ಆ ಕ್ಷಣಕ್ಕೇ ಅಪ್ಪನ ನೆನಪಿನ ಗಡಿಯಾರ ನಿಂತುಹೋಯಿತಾ? ಆನಂತರದಿಂದ ಇಂದಿನ ತನಕ ನಡೆದುದ್ದೆಲ್ಲವೂ ಅವನಿಗೆ ಕೊನೆಯಿಲ್ಲದ ಕೆಟ್ಟ ಕನಸಿನಂತೆ ಭಾಸವಾಗುತ್ತಿದೆಯಾ? ಅಂದು ಅಗಾಧ ನೋವಿನೊಂದಿಗೆ ನಿಂತಿದ್ದ ಪ್ರಜ್ಞೆ ಇಂದು ಇಲ್ಲಿ ಐಸಿಯು ವಾರ್ಡಿನ ಕೋಣೆಯೊಳಗೆ, ಜೀವರಕ್ಷಕ ಯಂತ್ರಗಳ ಕೀಂಕೀಂ ಸದ್ದಿನ ನಡುವೆ, ನರಳುತ್ತಿರುವ ರೋಗಿಗಳ ಮಧ್ಯದಲ್ಲಿ ಪುನರಾರಂಭವಾದಾಗ ಅಪ್ಪನಿಗೆ ಏನನ್ನಿಸಿರಬಹದು?

ದೇಹವೆಂಬ ಯಂತ್ರ ಅದೆಷ್ಟು ವಿಚಿತ್ರವಲ್ಲವೇ ಅನ್ನಿಸಿತು.

***************

ಮುಂದಿನ ಹದಿನೈದು ದಿನಗಳನ್ನು ನಾವು ಅಸ್ಪತ್ರೆಯಲ್ಲೇ ಕಳೆದೆವು. ಅಪ್ಪನೀಗ ಕೆಲವೇ ದಿನದ ಹಿಂದೆ ಹುಟ್ಟಿದ ಮಗುವಿನಂತೆ ವರ್ತಿಸುತ್ತಿದ್ದ. ನನಗೆ ಊಟ ಕೊಡು, ತಲೆಗೆ ಎಣ್ಣೆ ಹಾಕು, ಮೂರು ಉತ್ತುತ್ತೆ ತಿನ್ನಲು ಕೊಡು ಎಂದೆಲ್ಲ ನನ್ನ ಬಳಿ ಸನ್ನೆಯಲ್ಲಿ ಕೇಳುತ್ತಿದ್ದ. ನಾವೀಗ ಎಲ್ಲಿದ್ದೇವೆ? ಇದು ಯಾವ ಊರು? ಅವತ್ತು ರಾತ್ರೆ ನನಗೆ ತಲೆನೋವು ಬಂತಲ್ಲಾ, ಅಂದು ಆಗಿದ್ದಾದರೂ ಏನು? ನನ್ನ ಪಕ್ಕದಲ್ಲಿ ನರಳುತ್ತಿರುವುದು ಯಾರು? ನೀನೇಕೆ ಒಬ್ಬನೇ ಕೂತಿದ್ದೀಯಾ? ಅಮ್ಮ ಎಲ್ಲಿ.. ಅಪ್ಪನ ಕುತೂಹಲಗಳಿಗೆ ಕೊನೆಯೇ ಇರಲಿಲ್ಲ. ಮೂರು-ನಾಲ್ಕರ ಬಾಲ್ಯದಲ್ಲಿ ಬಹುಷಃ ನಾನು ಕೇಳಿ ತಲೆ ತಿಂದಿದ್ದ ಪ್ರಶ್ನೆಗಳ ಜಿದ್ದನ್ನು ಈಗ ಹೀಗೆ ತೀರಿಸಿಕೊಳ್ಳುತ್ತಿದ್ದನೋ ಏನೋ? ಒಟ್ಟಾರೆ ಅವನ ಎಲ್ಲ ಪ್ರಶ್ನೆಗಳಿಗೂ ಸುಳ್ಳುಸುಳ್ಳು ಉತ್ತರಗಳ ಕೊಡುತ್ತಾ ನಾನು ಬಚವಾಗುತ್ತಿದ್ದೆ.

ಆಸ್ಪತ್ರೆಯಲ್ಲಿದ್ದ ಮುಂದಿನ ಎರೆಡು ವಾರಗಳಲ್ಲಿ ಅಪ್ಪನನ್ನು ಜ್ವರ, ಕಫ, ಬಿಪಿ, ತಲೆನೋವುಗಳು ಕಾಡುತ್ತಲೇ ಇದ್ದವು. ಅವನ ಬಿಪಿ ಹೆಚ್ಚಿದಂತೆಲ್ಲಾ ನನ್ನ ಎದೆಬಡಿತವೂ ಹೆಚ್ಚುತ್ತಿತ್ತು. ಗಟ್ಟಿಯಿದ್ದ ನರವನ್ನೇ ಕತ್ತರಿಸಿ ಹಾಕಿದ ಬಿಪಿಯಿದು. ಹೊಲಿದ ಗಾಯವಾರದ ನರವಿನ್ಯಾವ ಲೆಕ್ಕ? ಯಾವ ಹೊತ್ತಿನಲ್ಲಿ ಮತ್ತೆ ಕೋಡಿಬೀಳುತ್ತದೋ ಯಾರಿಗೆ ಗೊತ್ತು? ಹಾಗೆಂದುಕೊಂಡೇ ನಾನು ಮತ್ತೆ ಮತ್ತೆ ನರ್ಸುಗಳ ಬಳಿ ಅಪ್ಪನ ಬಿಪಿಯ ಪ್ರಮಾಣವನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆ. ಹಾಕಬೇಕಾದ ಮಾತ್ರೆಯನ್ನು ಹಾಕಿಯಾಯಿತಾ ಎಂದು ವಿಚಾರಿಸುತ್ತಿದ್ದೆ. ಅಪ್ಪನಾದರೂ ಈಗೀಗ ಕೊಂಚ ಕೈಕಾಲು ಆಡತೊಡಗಿದ ಮೇಲೆ ಕಪಿ ಚೇಶ್ಟೆಗಳನ್ನು ಆರಂಭಿಸಿದ್ದ. ಊಟಕ್ಕೆಂದು ಮೂಗಿಗೆ ತೂರಿಸಿದ್ದ ಪೈಪನ್ನು ಕಿತ್ತು ಒಗೆಯುತ್ತಿದ್ದ. ಡಾಕ್ಟರ ಬಳಿ ಕೈ ಸನ್ನೆಯಲ್ಲೇ 'ಇವರು ನನಗೆ ಮೂರು ದಿನದಿಂದ ಊಟ ಕೊಟ್ಟಿಲ್ಲ' ಎಂದು ನರ್ಸುಗಳ ಮೇಲೆ ಕಂಪ್ಲೇಂಟ್ ಹೇಳುತ್ತಿದ್ದ. ರೈಲ್ಸ್ ಟ್ಯೂಬಿನಿಂದ ನೇರವಾಗಿ ಹೊಟ್ಟೆಗೆ ಹೋಗಿ ಬೀಳುತ್ತಿದ್ದ ಆಹಾರ ಅವನ ಗಮನಕ್ಕೆ ಬರುತ್ತಿರಲಿಲ್ಲ. ಎರೆಡು ವಾರ ಕಳೆದ ಮೇಲಂತೂ ಎಡಗೈಯಿಂದ ಮಂಚದ ಕಂಬಿಗಳನ್ನು ಹಿಡಿದು ಏಳಲು ಪ್ರಯತ್ನಿಸತೊಡಗಿದ. ಒಂದು ಬದಿಗೆ ಜಾರುತ್ತಾ ಬಂದು ಮಂಚದ ಅಂಚನ್ನು ತಲುಪಿಬಿಡುತ್ತಿದ್ದ. ಹಗಲಿನ ಹೊತ್ತಿನಲ್ಲಿ ಪಕ್ಕ ಕುಳಿತಿರುತ್ತಿದ್ದ ಅಮ್ಮ ಕೆಲವು ನಿಮಿಷದ ಮಟ್ಟಿಗೆ ಎಲ್ಲಿಗಾದರೂ ಎದ್ದು ಹೋದರೆ ಅವಳ ಮೇಲೆ ಮುನಿಸಿಕೊಳ್ಳುತ್ತಿದ್ದ.

ಅಪ್ಪನ ಈ ಒಂದೊಂದು ಸಣ್ಣ ಕದಲಿಕೆಯೂ ನಮ್ಮ ಪಾಲಿಗೆ ದೊಡ್ಡ ಸಂಭ್ರಮದ ವಿಷಯವಾಗಿತ್ತು. ಹಗಲಿನ ವೇಳೆ ಅಮ್ಮ ಹಾಗೂ ರಾತ್ರೆಯಲ್ಲಿ ನಾನು ಅವನ ಬಳಿಯಿದ್ದು ಕಾಯುತ್ತಿದ್ದೆವು. ಅವನು ಇಂಥಹಾ ಯಾವುದೇ ಕಪಿಚೇಶ್ಟೆ ಮಾಡಿದರೂ ಥಟ್ಟನೆ ಫೋನು ಮಾಡಿ ಒಬ್ಬರಿಗೊಬ್ಬರು ಹೇಳಿಕೊಂಡು ಖುಷಿಪಡುತ್ತಿದ್ದೆವು. ನಾವು ಉಳಿದುಕೊಂಡಿದ್ದ ಅತ್ತೆಯ ಮನೆಯಲ್ಲಿ ಒಂದು ವರ್ಷದ ಮಗುವೊಂದಿತ್ತು. ಮನೆಯವರೆಲ್ಲರೂ ಅದರ ಬಳಿ ಚುಪ್ ಮಾಡು, ತಾರಮ್ಮಯ್ಯ ಮಾಡು, ಡ್ಯಾನ್ಸ್ ಮಾಡು ಎಂದೆಲ್ಲಾ ಸನ್ನೆಗಳನ್ನು ಮಾಡಿಸಿ ಖುಷಿಪಡುತ್ತಿದ್ದರು. ಬದುಕಿನ ಚಿಗುರು ಕಾಲದಲ್ಲಿ ಹೀಗೆ ಸನ್ನೆ, ಭಾವ, ಭಂಗಿಗಳನ್ನು ಮೊದಲ ಬಾರಿಗೆ ಕಲಿಯುತ್ತಿರುವ ಈ ಮಗು; ಅರವತ್ಮೂರು ವರ್ಷಗಳಲ್ಲಿ ಕಲಿತದ್ದನ್ನೆಲ್ಲಾ ಒಂದು ರಾತ್ರೆಯಲ್ಲಿ ಮರೆತು ಈಗ ಅವೆಲ್ಲವನ್ನೂ ಮತ್ತೆ ನೆನಪಿಸಿಕೊಳ್ಳುತ್ತಿರುವ ಅಪ್ಪ.. ಬದುಕಿನ ಎರೆಡು ವಿರುದ್ಧ ತುದಿಗಳಲ್ಲಿರುವ ಈ ಇಬ್ಬರ ನಡುವಿನ ವಿಚಿತ್ರ ಸಾಮ್ಯವನ್ನು ನೋಡುವಾಗ ನನಗೆ ಜೀವನದ ವೈಚಿತ್ರದ ದರ್ಶನವಾದಂತೆನಿಸುತ್ತಿತ್ತು.

ಡಾಕ್ಟರುಗಳ ಪ್ರಕಾರ ಅಪ್ಪನೀಗ ಸಂಪೂರ್ಣ ಗುಣಮುಖನಾಗಿದ್ದ. ಆದರೆ ಅಪ್ಪನ ಬಲಗಾಲು, ಬಲಗೈ, ಮಾತುಗಳಲ್ಲಿ ಹತ್ತು ಪೈಸೆಯಷ್ಟಾದರೂ ಚೇತರಿಕೆಯಾಗಿರಲಿಲ್ಲ. ಆದರೆ ಬರುಬರುತ್ತಾ ನನಗೂ ಅವರ ಮಾತಿನ ಮರ್ಮ ಅರ್ಥವಾಯಿತು. ಚೇತರಿಕೆಯೆಂದರೆ ಎದ್ದು ಓಡಾಡುವುದಲ್ಲ. ಕೈಕಾಲು ಆಡಿಸುವುದೂ ಅಲ್ಲ. ಒಳಗಿನ ಅವಯವಗಳು ಮತ್ತೆ ಘಾಸಿಗೊಳ್ಳದೇ ಇರುವುದು! ಒಳಗಡೆ ರಕ್ತ ಸೋರದೇ ಇರುವುದು. ಇದೇ ಈ ಹೊತ್ತಿನ ಅತಿಮುಖ್ಯ ಚೇತರಿಕೆ! ಅಪ್ಪನ ತಲೆಯೊಳಗಿನ ರಕ್ತಸ್ರಾವವನ್ನು ನಿಲ್ಲಿಸುವಲ್ಲಿಗೆ ಇಂಗ್ಲೀಷ್ ಮೆಡಿಸನ್ ನ ಕಾರ್ಯ ವ್ಯಾಪ್ತಿ ಮುಕ್ತಾಯಗೊಂಡಿತ್ತು.

ವೈದ್ಯ ವಿಜ್ಞಾನ ಎಲ್ಲಿಗೆ ಮುಕ್ತಾಯಗೊಳ್ಳುತ್ತದೋ ಮನುಷ್ಯನ ಅಂತಃಸತ್ವ ಅಲ್ಲಿಂದ ಆರಂಭವಾಗುತ್ತದೆ. ಸಕಾರಾತ್ಮಕ ಯೋಚನೆ, ಮಾಡಬಲ್ಲೆನೆಂಬ ಆತ್ಮ ವಿಶ್ವಾಸ, ಗುಣವಾಗುವೆನೆಂಬ ಛಲ.. ಇವೆಲ್ಲ ಜಗತ್ತಿನ ಯಾವ ಮೆಡಿಕಲ್ ಶಾಪ್ ನಲ್ಲೂ ಸಿಗದ ಶತಪ್ರತಿಶತ ಫಲಿತಾಂಶ ಕೊಡುವ ಔಷಧಗಳು. ಆದರೆ ದುರಾದೃಷ್ಟವಶಾತ್ ಹೆಚ್ಚಿನ ವೈದ್ಯರುಗಳು ಇದನ್ನೆಲ್ಲಾ ಹೇಳುವುದೇ ಇಲ್ಲ. ಅಪ್ಪನಿಗೂ ಹಾಗೇ. ಕಾಲು, ಕೈ, ಮಾತು.‌. ಬಂದರೆ ಬಂತು, ಇಲ್ಲದಿದ್ದರೆ ಇಲ್ಲ ಎಂದು ಹೇಳಿಯೇ ಅವರು ನಮ್ಮೊಳಗಿನ ಆತಂಕವನ್ನು ಜೀವಂತವಾಗಿಟ್ಟಿದ್ದರು. ನೋ ಗ್ಯಾರಂಟಿ, ನೋ ರಿಕವರಿ ಎಂದು ಅಪ್ಪನ ವಯಸ್ಸು ಅರವತ್ಮೂರು ಎಂಬುದು ಗೊತ್ತಾದ ಮರುಕ್ಷಣದಿಂದ ಆರಂಭವಾದ ಅವರ ನೋನೋಗಳ ಸರಣಿ ಆಪರೇಶನ್ ಆದ ವಾರದುದ್ದಕ್ಕೂ ಮುಂದುವರೆದಿತ್ತು.

ಆದರೆ ಅವರಿಗೆಲ್ಲಾ ಅಚ್ಚರಿಯನ್ನುಂಟುಮಾಡಿ ನೋನೋ ಗಳಿಗೊಂದು ಪೂರ್ಣವಿರಾಮವಿಟ್ಟವನು ಸಾಕ್ಷಾತ್ ಅಪ್ಪ!

ಎಡ ತಲೆಯ ಹೆಮರೇಜ್ ಗೊಳಗಾಗಿ ಮಾತು, ಕೈ, ಕಾಲುಗಳ ಸ್ವಾಧೀನ ಕಳೆದುಕೊಂಡ ಇಪ್ಪತ್ತೊಂದು ಗಂಟೆಗಳ ನಂತರ ಆಸ್ಪತ್ರೆಯಂಗಳಕ್ಕೆ ಸರಿದುಬಂದಿದ್ದ ಅಪ್ಪನನ್ನು ನೋಡಿದ ವೈದ್ಯರುಗಳಿಗೆ ಈ ಪರಿಯ ಆಘಾತಕ್ಕೊಳಗಾಗಿರುವ, ಈ ವಯೋಮಾನದ ವ್ಯಕ್ತಿ ಕನಿಷ್ಠ ಮೆಡಿಸಿನ್ ಗಳಿಗೆ ಸ್ಪಂದಿಸುವುದಾದರೂ ಸಾಧ್ಯವೇ ಎಂಬ ಸಂಶಯವಾಗಿತ್ತು. ಸ್ಪಂದಿಸಿದರೂ ಆರು ತಿಂಗಳು, ವರ್ಷದ ತನಕ ಇವರ ಕೈಕಾಲುಗಳ ಚಲನೆ ಮರಳಿ ಬರಲಾರದೆಂದೇ ಅವರು ನಂಬಿದ್ದರು. ಅಷ್ಟಕ್ಕೂ ಅವರ ಸಂಶಯ ಸಕಾರಣದ್ದೇ ಆಗಿತ್ತು. ಹಿಂದಿನ ರಾತ್ರೆ ಹನ್ನೆರಡೂವರೆಯಿಂದ ಹಿಡಿದು ಮರುದಿನ ಬೆಳಗ್ಗೆ ಒಂಭತ್ತರ ತನಕ, ಅಂದರೆ ಮೊವ್ವತ್ಮೂರು ಗಂಟೆಗಳ ಕಾಲ ಅಪ್ಪನ ಮೆದುಳಿನ ಮೇಲೆ ಕುಳಿತಿದ್ದ ಘನೀಭವಿಸಿದ ರಕ್ತ ಅವನ ಎಡ ಮೆದುಳಿನ ಬಹುಪಾಲನ್ನು ಘಾಸಿಗೊಳಿಸಿಬಿಟ್ಟಿತ್ತು. ಕೋಮಾಗೇ ಹೋಗದಿರುವುದೇ ಹೆಚ್ಚು, ಜೀವಂತವಾಗಿರುವುದೇ ದೊಡ್ಡದು ಎಂಬ ಮಟ್ಟಿಗೆ ಘಾಸಿಯಾದ ವ್ಯಕ್ತಿಯೊಬ್ಬ ಆಪರೇಶನ್ ಆದ (ಎರೆಡನೇ ಬಾರಿಗೆ) ಮೂರು ದಿನಕ್ಕೆ ಕಣ್ಬಿಟ್ಟು ಕಾಫಿ ಕೊಡಿ ಎನ್ನುವುದೆಂದರೇನು? ಅರವತ್ತು ದಾಟಿದ ಯಾವ ದೇಹ ತಾನೇ ಅಷ್ಟು ಬೇಗ ಚೇತರಿಸಿಕೊಂಡಾತು? ಹಾಗಂದುಕೊಂಡೇ ಅವರು ನಮಗೆ ನೋನೋ ಎಂದಿದ್ದರು.

ಆದರೆ ಅಪ್ಪ ಚೇತರಿಸಿಕೊಂಡುಬಿಟ್ಟ!

ವಾರ್ಡಿನಲ್ಲಿದ್ದ ನರ್ಸ್, ಕ್ಲೀನರ್ ಗಳಿಂದ ಹಿಡಿದು ಕೊನೆಗೆ ಸಾಕ್ಷಾತ್ ಸರ್ಜನ್ ರೇ ಅಚ್ಚರಿಗೊಂಡು 'ವಿ ಡಿಡ್ ನಾಟ್ ಎಕ್ಸ್ ಪೆಕ್ಟೆಡ್ ದಿಸ್' ಎಂದು ನಮ್ಮೆದುರೇ ಚರ್ಚಿಸುವ ಮಟ್ಟಿಗೆ ಅಪ್ಪ ಚೇತರಿಕೊಂಡು ಬಿಟ್ಟ. ಎರೆಡನೇ ಆಪರೇಶನ್ ಆದ ಒಂದು ವಾರದ ತರುವಾಯ ಕಟ್ಟಕಡೆಯ ಸಿಟಿ ಸ್ಕ್ಯಾನ್ ಮಾಡಿಸಲು ಹೋದಾಗ ಅಲ್ಲಿ ರಿಪೋರ್ಟ್ ನೋಡಲು ಬಂದಿದ್ದ ಡಾ. ಸಾತ್ವಿಕ್ ಅಪ್ಪನನ್ನು ಸುಮ್ಮನೆ ಹೇಗಿದ್ದೀರಿ? ಎಂದು ಕೇಳಿದರು. ಆ ಪ್ರೆಶ್ನೆಗೆ ಚೆನ್ನಾಗಿದ್ದೇನೆ ಎಂದು ತಲೆಯಾಡಿಸಿದ್ದಲ್ಲದೇ ಅಪ್ಪ ಯಾವುದೋ ಹಳೆಯ ಪರಿಚಯವೆಂಬಂತೆ ಎಡಗೈಯನ್ನು ಮೇಲೆತ್ತಿ ನಮಸ್ತೇ ಕೂಡಾ ಹೇಳಿಬಿಟ್ಟ! ನೂರು ಬಲ್ಪುಗಳು ಒಟ್ಟಿಗೇ ಹೊತ್ತಿಕೊಂಡಂತೆ ದೇದೀಪ್ಯವಾದ ನಗೆಯ ತುಂಬಿಕೊಂಡ ಅವರು ನನಗೆ 'ಸ್ಕ್ಯಾನಿಂಗ್ ರಿಪೋರ್ಟ್ ನೋಡೋದೇ ಬೇಡ, ಕರ್ಕೊಂಡು ಹೋಗ್ರೀ ನಿಮ್ಮಪ್ಪನ್ನ. ಹೀ ಈಸ್ ಪರ್ಫೆಕ್ಟ್ ನೌ' ಎಂದುಬಿಟ್ಟರು.

****************

ಮೇ ಇಪ್ಪತ್ತೊಂಭತ್ತರಂದು ಅಪ್ಪನ ಕತ್ತಿನಲ್ಲಿದ್ದ ಉಸಿರಾಟದ ನಳಿಕೆಯನ್ನು ತೆಗೆದು ಗಂಟಲ ತೂತನ್ನು ಮುಚ್ಚಿದ್ದರು. ನಾನು ನಿರೀಕ್ಷಿಸಿದಂತೆ ಅವನಿಗೆ ಮಾತು ಮರಳಲಿಲ್ಲ. ಸಾಲದ್ದಕ್ಕೆ ಇಷ್ಟು ದಿನ ಇಲ್ಲದ್ದು ಮೂಳೆ ತೆಗೆದ ತಲೆಯ ಭಾಗ ಒಳಕ್ಕೆ ನೆಗ್ಗಿಹೋಗಿ ತಲೆ ಚಕ್ಕಾಗಿ ಕಾಣುತೊಡಗಿತು. ಕಳೆದ ಹದಿನೇಳು ದಿನಗಳಲ್ಲಿ ಇದೇ ಮೊದಲ ಬಾರಿಗೆ ಮೂಗಿನಲ್ಲಿ ಉಸಿರಾಡುತ್ತಿದ್ದ ಅಪ್ಪನಿಗೆ ಉಸಿರು ಕಟ್ಟುತ್ತಿತ್ತು. ಅವನು ಕುತ್ತಿಗೆಯ ಬ್ಯಾಂಡೇಜು ಕಿತ್ತುಕೊಳ್ಳದಂತೆ, ನೆಗ್ಗಿದ ತಲೆಯ ಭಾಗವನ್ನು ತಟ್ಟಿಕೊಳ್ಳದಂತೆ ಕಾಯುತ್ತಾ ನಾನು ಮಂಚದ ಪಕ್ಕದಲ್ಲಿ ಕುಳಿತಿದ್ದೆ.

ಅದು ಡಿಶ್ಚಾರ್ಜಾಗುವ ಹಿಂದಿನ ದಿನದ ರಾತ್ರಿ.

ಸಮಯ ನೋಡಿಕೊಂಡೆ. ಸರಿಯಾಗಿ ನಡುರಾತ್ರೆಯ ಹನ್ನೆರೆಡೂ ಮೊವ್ವತ್ತು.

ಇಪ್ಪತ್ತು ದಿನಗಳ ಹಿಂದೆ ನಮ್ಮ ಪುಟ್ಟ ಗೂಡಿನ ಶಾಂತಿಗೆ ಸಿಡಿಲು ಬಡಿದ ಸಮಯ..

ಇಪ್ಪತ್ತೇ ಇಪ್ಪತ್ತು ದಿನಗಳ ಹಿಂದೆ ಇದ್ದ ಚಂದದ ಬದುಕು. ಅದು ನಿಜಕ್ಕೂ ಬದುಕೇನಾ ಅಥವಾ ಅರ್ಧ ಕಂಡು ಎದ್ದ ಕನಸಾ?

ಆ ಕಾಳ ರಾತ್ರೆಗೆ ಮುನ್ನ 'ಅಲರ್ಜಿಗೆ ಎಣ್ಣೆ ಹಚ್ಚಿಕೋ' ಎಂದು ಕಾಳಜಿ ತೋರಿ ಮಲಗಿದ್ದ ಅಪ್ಪನ ಚಿತ್ರ ಕಣ್ಮುಂದೆ ಸುಳಿಯಿತು.

ನಾನು ನೋಡಿದ ಆರೋಗ್ಯವಂತ ಅಪ್ಪನ ಕಟ್ಟ ಕಡೆಯ ಚಿತ್ರವದು.

ಈಗಿಲ್ಲಿ, ನನ್ನ ಕಣ್ಮುಂದೆ ಮಲಗಿರುವ ಅಪ್ಪನೇ ಬೇರೆ.

ತಡೆತಡೆದು ಬರುತ್ತಿರುವ ಉಸಿರು, ಒಳಸೇರಿಕೊಂಡ ಗಲ್ಲ, ಬಾರದ ಮಾತು, ಒಂದೇ ಸಲಕ್ಕೆ ಹತ್ತು ವರ್ಷ ಮುಂದಕ್ಕೆ ಹೋದಂತೆ ಕಾಣುತ್ತಿರುವ ದೇಹ, ಕಾಂತಿ ಹೀನ ಕಣ್ಣು..

ಅಪ್ಪ ಹಾಸಿಗೆಯ ಮೇಲೆ ಮಿಸುಕಾಡುತ್ತಿದ್ದ. ತನ್ನಷ್ಟಕ್ಕೆ ತಾನೇ ಏನೇನೋ ಸನ್ನೆ ಮಾಡುತ್ತಾ ತನ್ನೊಳಗೇ ತಾನು ಸಂಭಾಶಿಸಿಕೊಳ್ಳುತ್ತಿದ್ದ. ಏಳಲು ನೋಡುತ್ತಿದ್ದ. ಯಾರಿಗೋ ಕೈ ತೋರಿಸುತ್ತಿದ್ದ. ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ.

ಅವನಿನ್ನು ಹೀಗೇ.. ತನ್ನ ಜಗದೊಳಗೇ ಉಳಿದು ಬಿಡುತ್ತಾನೆ. ನಮ್ಮ ಪ್ರಪಂಚಕ್ಕೆ ಬರುವುದೇ ಇಲ್ಲ. ನಮ್ಮೊಂದಿಗೆ ಕುಳಿತು ರಾಜಕುಮಾರನ ಹಳೆಯ ಸಿನೆಮಾ ನೋಡುವುದಿಲ್ಲ. ಮೊಬೈಲ್ ತಂದು ಆ ಹಾಡು ಹಾಕು, ಈ ಹಾಡು ಹಾಕು ಎನ್ನುವುದಿಲ್ಲ. ನನಗೆ ಜ್ವರ ಬಂದಾಗ ಹಣೆ ಸವರುವುದಿಲ್ಲ. ನಾನು ಬೆಂಗಳೂರಿಗೆ ಹೊರಟಾಗ ನನ್ನ ಚೀಲ ಹಿಡಿದು ಮುಂದೆ ನಡೆಯುವುದಿಲ್ಲ. ಮತ್ತೆ ಯಾವಾಗ ಬರ್ತಿ? ಎಂದು ಕೇಳುವುದಿಲ್ಲ. ಅಲ್ಲಿಂದ ನಾನು ಅಮ್ಮನಿಗೆ ಫೋನು ಮಾಡಿ ಮಾತನಾಡುವಾಗ ನಂಗೆ ಕೊಡು ಎಂದು ಮೊಬೈಲು ಇಸಿದುಕೊಳ್ಳುವುದಿಲ್ಲ.

ಆ ಹಳೆಯ ಅಪ್ಪನಿನ್ನು ಮತ್ತೆ ಸಿಗಲಾರ.

ಆ ಕ್ಷಣಕ್ಕೇ ನನಗದು ಅರ್ಥವಾಗಿಹೋಯಿತು. ವಿಧಿ ಅವನಿಗೆ ರಿಪೇರಿಯಾಗದಷ್ಟು ಘಾಸಿ ಮಾಡಿಬಿಟ್ಟಿದೆ.

ನಿದಿರೆಯ ಭಾರಕ್ಕೆ ಚಲನೆ ಕೊಂಚ ಮಂದಗೊಂಡ ಅಪ್ಪನ ಕೈಯನ್ನು ಮಂಚಕ್ಕೆ ಬಂಧಿಸಿ ಮೆಲ್ಲನಿಳಿದು ಬೇಸ್ಮೆಂಟಿನತ್ತ ನಡೆದೆ. ಇಪ್ಪತ್ತು ದಿನಗಳ ಹಿಂದೆ ಅಪ್ಪ ಅಡ್ಮೀಟಾದ ದಿನ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಆಸ್ಪತ್ರೆಯ ನಿರ್ಜನ ಕಾರಿಡಾರಿನಲ್ಲಿ ನಡೆಯತೊಡಗಿದೆ.

ಅಗೋ ಅಲ್ಲಿ ಬರುತ್ತಿದೆ.. ಅಪ್ಪನನ್ನು ಹೊತ್ತ ಆ್ಯಂಬುಲೆನ್ಸ್. ಅದೋ ಬಂತು. ನಾನು ಇಳಿದೆ. ಅಮ್ಮ ಇಳಿದಳು. ಅಪ್ಪನನ್ನೂ ಇಳಿಸಿದರು. ಅದೋ ಅಲ್ಲಿ ಬರುತ್ತಿದ್ದಾರೆ ಡಾಕ್ಟರು. ಅಪ್ಪನನ್ನು ಪರೀಕ್ಷಿಸುತ್ತಿದ್ದಾರೆ. ಸ್ಕ್ಯಾನಿಂಗ್ ರಿಪೋರ್ಟನ್ನೂ ನೋಡುತ್ತಿದ್ದಾರೆ.

ಯಾಕಿಷ್ಟು ತಡ ಮಾಡಿದಿರಿ? ಬ್ರೈನ್ ತುಂಬಾ ಡ್ಯಾಮೇಜಾಗಿದೆ..

ಇಲ್ಲ.. ಇಲ್ಲ.. ಈ ಬಾರಿ ಅವರು ಹಾಗೆ ಹೇಳುತ್ತಿಲ್ಲ. ಅವರ ಮುಖದಲ್ಲೀಗ ಆ ಗಂಭೀರತೆಯಿಲ್ಲ. ಬದಲಿಗೆ ಸಮಾಧಾನದ ಮುಗುಳ್ನಗುವಿದೆ.

"ನಥಿಂಗ್ ಟು ವರಿ. ಸಣ್ಣ ಮಟ್ಟದ ಸ್ಟ್ರೋಕ್ ಆಗಿದೆ. ಎರೆಡೇ ದಿನ. ಎಲ್ಲವೂ ಸರಿಹೋಗುತ್ತದೆ.."

ಡಾಕ್ಟರು ಅಭಯ ನೀಡುತ್ತಿದ್ದಾರೆ. ನಾನು ನಗುತ್ತಿದ್ದೇನೆ. ಅಮ್ಮ ನಗುತ್ತಿದ್ದಾಳೆ. ಅಪ್ಪನೂ ನಗುತ್ತಿದ್ದಾನೆ. ಎಲ್ಲವೂ ಸರಿಯಾಗಿದೆ. ಅಪ್ಪನೀಗ ಅವನ ಕಾಲ ಮೇಲೇ ನಡೆಯುತ್ತಾ ಓಮಿನಿಯತ್ತ ಸಾಗುತ್ತಿದ್ದಾನೆ..

ಈ ಕಥೆಯ ಅಂತ್ಯ ಹೀಗಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಲ್ವಾ?

ಮೇಲಿನ ಮಹಡಿಯಿಂದ ಇಳಿದು ಬಂದಷ್ಟೇ ಸುಲಭದಲ್ಲಿ ಹತ್ತೊಂಭತ್ತು ದಿನ ಹಿಂದಕ್ಕೆ ಹೋಗಲು ಸಾಧ್ಯವಾಗಿದ್ದರೆ.. ಹಳೆಯ ತಪ್ಪುಗಳನ್ನೆಲ್ಲಾ ಸರಿಪಡಿಸಿಕೊಳ್ಳಲು ಆಗಿದ್ದರೆ.‌. ಅಪ್ಪನ ಮಾತು, ಕೈ, ಕಾಲುಗಳನ್ನು ಉಳಿಸಿಕೊಳ್ಳುವಂತಿದ್ದರೆ..

ಒಂದು ಬಾರಿ ಹಿಂದೆ ಹೋಗಿ
ಅಳಿಸಬೇಕು ಎಲ್ಲಾ
ಯಾಕೆ ಅಂಥ ಹಾದಿಯೊಂದು
ಬಾಳಿನಲ್ಲಿ ಇಲ್ಲ?

ಅಪ್ಪ.. ಐ ಲವ್ ಯು ಅಪ್ಪಾ.. 4

ಅದು ಐಸಿಯು ಹೊರಗಿನ ನಿರೀಕ್ಷಣಾ ಸ್ಥಳ.

ಇಲ್ಲಿ ಸಮಯ ನಿಮಿಷ -ಗಂಟೆಗಳಾಗಿ ಸರಿಯುವುದಿಲ್ಲ. ಮೆದುಳಿನಲ್ಲಿ ರಕ್ತಸ್ರಾವವಾಗುತ್ತಿದೆ, ಈಗ ಕಡಿಮೆಯಾಗಿದೆ, ಮತ್ತೆ ಜಾಸ್ತಿಯಾಗಿದೆ, ಈಗ ಕೈಯಾಡಿಸುತ್ತಿದ್ದಾರೆ, ನೋಡುತ್ತಿದ್ದಾರೆ, ಈಗೊಂದು ಶಬ್ದ ಮಾತನಾಡಿದರು ಎಂಬ ವಿಲಕ್ಷಣ, ಸೂಕ್ಷ್ಮ ಚಟುವಟಿಕೆಗಳ ರೂಪದಲ್ಲಿ ಚಲಿಸುತ್ತದೆ. ಕೆಲವರ ಪಾಲಿಗದು ಮುಂದಕ್ಕೆ ಚಲಿಸಿದರೆ ಇನ್ನು ಕೆಲವರ ಪಾಲಿಗೆ ಹಿಂದಕ್ಕೆ ನೆಗೆಯುತ್ತದೆ. ಐವತ್ತು ಅರವತ್ತು ವರ್ಷಗಳ ಕಾಲ ಬಾಳಿದ ಜೀವವೊಂದು ಅನಾಮತ್ತು ಮೂರು ನಿಮಿಷದ ಹಿಂದೆ ಹುಟ್ಟಿದ ಮಗುವಾಗಿಬಿಡುತ್ತದೆ. ಕೈ ಆಡಿಸುವುದು, ಕಾಲಾಡಿಸುವುದು, ಮಾತನಾಡುವುದು, ಕತ್ತು ಕದಲಿಸುವುದು.. ಹೀಗೆ ಪ್ರತಿಯೊಂದು ಚಲನೆಯನ್ನೂ ಹೊಸತಾಗಿ ಆರಂಭಿಸುವ ಮರುಜನ್ಮಸ್ಥಳವಿದು.

ಯಾವ್ಯಾವುದೋ ಊರಿನ, ಯಾವ್ಯಾವುದೋ ಕೇರಿಯ, ಯಾವ್ಯಾವುದೋ ಬದುಕಿನ ವಿವಿಧ ಸ್ಥರಗಳಿಂದ ತಮ್ಮ ಬಂಧುಗಳ ಹೊತ್ತು ರಾತ್ರೋರಾತ್ರೆ ಧಾವಿಸಿಬಂದವರೆಲ್ಲ ಅಲ್ಲಿ ಜಮೆಯಾಗಿದ್ದೆವು. ಊರು, ಕೇರಿ, ಬದುಕುಗಳು ಬೇರೆಯಾದರೇನು? ಎಲ್ಲರ ನಿರೀಕ್ಷಣೆಯೂ ಒಂದೇ‌- ಒಳಗಿರುವ ನಮ್ಮವರು ಗುಣಮುಖರಾಗಲೆಂಬುದು. ಒಳಗೆ ಮಲಗಿರುವ ಪ್ರೀತಿ ಪಾತ್ರ ಜೀವಕ್ಕೀಗ ನೋವನ್ನೂ ಆಚರಿಸಲಾಗಂಥಹಾ ನಿಶ್ಯಕ್ತಿ. ಅವರ ಪಾಲಿನ ಕಣ್ಣೀರನ್ನೂ ತಾವೇ ಹರಿಸುತ್ತಾ ಇಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯಾತೆ ಹೊರಗೆ ಕಾಯುತ್ತಾ ಕುಳಿತವರಿಗೆ.

ಸಂಜೆ ಕಳೆದು ರಾತ್ರೆಯಾಯಿತು. ಎಲ್ಲರೂ ಅಲ್ಲೇ ನೆಲ, ಬೆಂಚ್ ಗಳ ಮೇಲೆ ಅಡ್ಡಾದೆವು. ಒಮ್ಮೆ ಮಲಗಿದ ಎಲ್ಲರತ್ತ ಕಣ್ಣಾಡಿಸಿದೆ. ಒಬ್ಬರ ತಂದೆ ಒಳಗಿದ್ದರೆ ಇನ್ನೊಬ್ಬರ ಮಗ ಐಸಿಯುನಲ್ಲಿದ್ದಾನೆ. ಮತ್ಯಾರದೋ ತಾಯಿ, ತಂಗಿ ಒಳಗೆ ನರಳು ಮಂಚದ ಮೇಲೆ ಅಧೀರರಾಗಿ ಮಲಗಿದ್ದಾರೆ. ಒಬ್ಬರಿಗೊಬ್ಬರು ಪರಿಚಯವಿಲ್ಲದ ನಮ್ಮೆಲ್ಲರನ್ನೂ ಕಾಲ ಒಂದೇ ಆಸ್ಪತ್ರೆಯ ಐಸಿಯು ಹೊರಗಿನ ನಿರೀಕ್ಷಣಾ ಕೊಠಡಿಗೆ ತಂದುಹಾಕಿದೆ. ಎಲ್ಲರ ನೋವೂ ಒಂದೇ. ಕೊರೋನಾ ಮಾಸ್ಕ್ ಹಿಂದೆ ಮರೆಯಾಗಿರುವ ಮುಖದಲ್ಲಿರುವ ದುಃಖವೆಲ್ಲವೂ ಒಂದೇ. ಒಂದೇ ಕಷ್ಟದ ಫಲಾನುಭವಿಗಳೇ ನಾವೆಲ್ಲ.

ಪಕ್ಕದಲ್ಲೇ ಇತ್ತು ಶಸ್ತ್ರಚಿಕಿತ್ಸಕ ವೈದ್ಯರ ಕೊಠಡಿ. ತೆರೆಯಲಿಕ್ಕೇ ಬಾರದೇನೋ ಎಂಬಂತೆ ಸದಾ ಮುಚ್ಚಿಕೊಂಡಿರುತ್ತಿದ್ದ ಅದರೊಳಕ್ಕೆ ಆಗೊಮ್ಮೆ ಈಗೊಮ್ಮೆ ರೋಗಿಯ ಕಡೆಯವರನ್ನು ಕರೆದು ಒಳಗಿರುವ ರೋಗಿಯ ಸ್ಥಿತಿಗತಿಗಳ ಹೇಳುತ್ತಿದ್ದರು. ತೀರಾ ಸಾವಿನ ಸುದ್ದಿಯೂ ಇಲ್ಲೇ ವರ್ಗಾವಣೆಯಾಗುತ್ತಿತ್ತು. ಅಳು, ಬಿಕ್ಕಳಿಕೆ, ರೋದನೆ, ಅಂಗಲಾಚುವಿಕೆಗಳೆಲ್ಲ ಸಾಲುಸಾಲಾಗಿ ಡಾಕ್ಟರ ಕೋಣೆಯ ಹೊಕ್ಕು ಹೊರಬರುತ್ತಿದ್ದವು. ಕಣ್ಣು ಮಾರಿಯಾದರೂ ಹಣ ಹೊಂದಿಸುತ್ತೇನೆ, ನಮ್ಮವರ ಜೀವ ಉಳಿಸಣ್ಣಾ ಎಂದು ಎಲ್ಲರೆದುರೇ ಅಳತೊಡಗಿದ ಹೆಂಗಸನ್ನೂ, ಅವಳಿಗೆ ಸಮಾಧಾನ ಹೇಳಬಹುದಾದ ಪದಗಳಿಗಾಗಿ ತನ್ನಿಡೀ ಎಂಬಿಬಿಎಸ್ ಜ್ಞಾನಕೋಶವನ್ನೇ ಅರಸಿ ಸೋತ ಅಸಹಾಯಕ ಡಾಕ್ಟರನ್ನೂ ನಾನು ನೋಡಿದ್ದೇ ಇಲ್ಲಿ.

ಅಪ್ಪನ ಆರೋಗ್ಯದ ಕುರಿತಾಗಿ ಪ್ರತೀಬಾರಿಯೂ ನಮ್ಮ ಲೆಕ್ಕ ತಪ್ಪುತ್ತಿತ್ತು. ಈಗ ಕೊಂಚ ಆರಾಮಾದನೆಂಬ ಖುಷಿಯ ಸುದ್ದಿ ಕೇಳಿ ಮನೆ ತಲುಪುವಷ್ಟರಲ್ಲೇ ಮತ್ತಿನ್ನೇನೋ ಕೆಟ್ಟ ಸುದ್ದಿ ಬೆನ್ನಟ್ಟಿಕೊಂಡು ಬರುತ್ತಿತ್ತು. ಡಾಕ್ಟರಂತೂ ಅವರು ಕೊಟ್ಟ ಹೇಳಿಕೆಗಳನ್ನು ಅವರೇ ಮುರಿಯುತ್ತಿದ್ದರು. ಈಗ ಪರವಾಗಿಲ್ಲ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನನ್ನನ್ನು ಮನೆಗೆ ಕಳಿಸಿದವರು ತನ್ನ ಪಾಳಿ ನಡೆಸಲು ಬಂದ ಅಮ್ಮನ ಬಳಿ ಮತ್ತೆ ತಲೆಯೊಳಗೆ ಬ್ಲೀಡ್ ಆಗಿದೆ, ಮತ್ತೆ ಆಪರೇಷನ್ ಬೇಕಾಗಬಹುದು ಎಂದು ಬಾಂಬ್ ಸ್ಫೋಟಿಸಿಬಿಡುತ್ತಿದ್ದರು. ಅಪ್ಪನ ಆರೋಗ್ಯವೂ ಅಷ್ಟೇ ಅಸ್ಥಿರವಾಗಿತ್ತು. ಬಿಪಿಯೆಂಬುದು‌ ಎಲ್ಲ ಮಾತ್ರೆ, ಡ್ರಿಪ್, ಇಂಜಕ್ಷನ್ ಗಳ ಹಿಡಿತ ಮೀರಿ 180, 190ರ ಗಡಿದಾಟಿ ನೆಗೆಯುತ್ತಿತ್ತು. ಸುಧಾರಿಸಿದರು ಎಂಬ ಸಿಹಿ ಸುದ್ದಿಯನ್ನು ಖುಷಿಯಾಗಿ ಬಂಧು-ಮಿತ್ರರೆಲ್ಲರಿಗೂ ಫೋನು ಮಾಡುತ್ತಿದ್ದ ನಾನು ಮರುಕ್ಷಣವೇ ಇಲ್ಲ, ಮತ್ತೆ ಹೀಗಾಗಿದೆ ಎಂಬ ಸುದ್ದಿಯನ್ನೂ ತಿಳಿಸಬೇಕಾಗುತ್ತಿತ್ತು.

ಹಾನಿಗೊಳಗಾಗಿರುವ ನರ ಸ್ಮೃತಿಗೆ ಸಂಬಂಧಿಸಿದ್ದಾಗಿರುವುದರಿಂದ ಅಪ್ಪನಿಗೆ ಭಾಷೆ ಹಾಗೂ ನೆನಪು ನಷ್ಟವಾಗಿವೆಯೆಂದೇ ಡಾಕ್ಟರು ಪ್ರತಿಪಾದಿಸಿದರು. ಸಾಲು ಸಾಲಾಗಿ ಬಂದೆರಗುತ್ತಿರುವ ಕೆಟ್ಟ ಸುದ್ದಿಗಳ ಪೈಕಿ ಇದೆಷ್ಟನೆಯದು? ಅಪ್ಪನ ಬದುಕಿನ ಅತ್ಯಮೂಲ್ಯ ಭಾಗವೆಂದರೆ ನೆನಪುಗಳು. ತನ್ನ ಬಾಲ್ಯದಿಂದ ಹಿಡಿದು ತೀರಾ ನೆನ್ನೆ ಮೊನ್ನೆಯ ತನಕದ ಪ್ರತಿಯೊಂದು ಘಟನೆಯನ್ನೂ ಅವನು ಇಸವಿ ಸಮೇತ ನೆನಪಿಟ್ಟುಕೊಂಡಿದ್ದ. ಐದನೇ ವಯಸ್ಸಿನಲ್ಲಿದ್ದಾಗ ತನ್ನಮ್ಮನ ಜೊತೆ ಅಜ್ಜನ ಮನೆಗೆ ಹೋಗಿದ್ದು, ಎಲ್ಲೋ ಕಾಣಿಸಿಕೊಂಡ ಹುಲಿ ನೇರ ಮನೆಯ ಕೊಟ್ಟಿಗೆಗೇ ನುಗ್ಗಿದ್ದು, ಅದನ್ನು ಊರಿನ ಬೇಟೆಗಾರನೊಬ್ಬ ಹೊಡೆದದ್ದು, ತಾನು ಹೈಸ್ಕೂಲಿನಲ್ಲಿದ್ದಾಗ ಗ್ರಾಮಪಂಚಾಯತಿ ಕಛೇರಿಗೆ ಗ್ರಾಮಾಫೋನು ಬಂದಿದ್ದು, ರಾಜ್ ಕುಮಾರ್ ಲೀಲಾವತಿಯ ಹೊಸ ಸಿನೆಮಾ ಬಂದದ್ದು, ಮದುವೆಯಾಗಿ ಮೊದಲ ಬಾರಿಗೆ ಮಾವನ ಮನೆಗೆ ತೆರಳಿದ್ದು.. ಪ್ರತಿಯೊಂದು ನೆನಪನ್ನೂ ಅಮೂಲ್ಯ ರತ್ನದಂತೆ ಕಾಪಿಟ್ಟುಕೊಂಡಿದ್ದ ಅಪ್ಪ. ಇಂತಿದ್ದವನನ್ನು ನೆನಪುಗಳ ಹೊರತಾಗಿ ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಆದರೆ ನಮ್ಮ ಆಗಿನ ಪರಿಸ್ಥಿತಿ ಹೇಗಿತ್ತೆಂದರೆ ತೀರಾ ಕಾಲ ಬುಡಕ್ಕೇ ಬಂದಿರುವ ಸಾವಿನ ಬಳಿ ಏನು ಬೇಕಾದರೂ ಒಯ್ಯಿ, ಆದರೆ ಜೀವವೊಂದನ್ನುಳಿಸು ಎಂಬ ಕಟ್ಟಕಡೆಯ ಚೌಕಾಶಿಗೆ ಇಳಿದಾಗಿತ್ತು. ಕೈ ಇಲ್ಲ, ಪರವಾಗಿಲ್ಲ. ಕಾಲಿಲ್ಲ ಪರವಾಗಿಲ್ಲ. ಮಾತಿಲ್ಲ ಅದೂ ಪರವಾಗಿಲ್ಲ. ಆದರೆ ಜೀವವೊಂದು ಉಳಿದು ಅಪ್ಪ ಮನೆಗೆ ಬರಲಿ, ಇಡೀ ಬದುಕಿನುದ್ದಕ್ಕೂ ಅವನನ್ನು ಮಲಗಿಸಿಕೊಂಡಾದರೂ ಸಾಕಿಬಿಡುತ್ತೇವೆಂಬ ನಿಲುವು ನನ್ನದೂ, ಅಮ್ಮನದೂ ಆಗಿತ್ತು. ಆದರೆ ಅದೃಷ್ಟವಶಾತ್ ಡಾಕ್ಟರ ಈ ಅಭಿಪ್ರಾಯ ತಪ್ಪೆಂಬಂತೆ ಒಮ್ಮೆ ಸಿಟಿ ಸ್ಕ್ಯಾನಿಗೆ ಸ್ಟ್ರೆಚರ್ ಮೇಲೆ ಕರೆದೊಯ್ಯುತ್ತಿದ್ದ ವೇಳೆಗೆ ನರ್ಸು, ವಾರ್ಡ್ ಬಾಯ್ ಗಳ ಮಧ್ಯೆ ನಿಂತಿದ್ದ ನನ್ನನ್ನು ಅಪ್ಪ ತೆರೆದ ಅರೆಬರೆಗಣ್ಣಿನಲ್ಲೇ ಗುರುತಿಸಿಬಿಟ್ಟ. ಬಹಳ ಕಷ್ಟದಲ್ಲಿ ಕದಲುತ್ತಿದ್ದ ಆ ಕಣ್ಣುಗಳು ನನ್ನನ್ನೇ ಹಿಂಬಾಲಿಸುತ್ತಿರುವುದನ್ನು ಗಮನಿಸಿದ ನನಗೆ ಅಪ್ಪನ ಸ್ಮೃತಿಪಟಲದಲ್ಲಿ ನನ್ನ ದಾಖಲೆಯಿನ್ನೂ ಉಳಿದಿರುವುದು ಖಾತರಿಯಾಯಿತು.

ನಾಲ್ಕು ದಿನಗಳ ಬಳಿಕ ಅಪ್ಪನನ್ನು ಐಸಿಯುಗೆ ಬದಲಾಗಿ ಒಬ್ಬರು ಜೊತೆಗಿರಬಹುದಾದ ನ್ಯೂರೋ ಐಸಿಯುನಲ್ಲಿರಿಸಿದರು. ಇಷ್ಟು ದಿನ ದಿನಕ್ಕೆರೆಡೇ ಬಾರಿ ಕಾಣಸಿಗುತ್ತಿದ್ದ ಅಪ್ಪನ ಪ್ರತಿ ಕ್ಷಣದ ಕದಲಿಕೆಯನ್ನೂ ಈಗ ನೋಡಬಹುದಾಗಿತ್ತು. ಅವನ ಮೂಗಿಗೆ ಆಹಾರದ ಪೈಪನ್ನು ಜೋಡಿಸಲಾಗಿತ್ತು. ಗಂಟಲಲ್ಲೊಂದು ತೂತು ಮಾಡಿ ಅಲ್ಲಿಗೆ ಉಸಿರಾಟದ ಕೊಳವೆಯನ್ನು ಇಡಲಾಗಿತ್ತು. ಇನ್ನು ತಲೆಗೆ ಸುತ್ತಿದ ಬ್ಯಾಂಡೇಜಿನೊಳಗಿನಿಂದ ಹೊರಕ್ಕೆ ಚಾಚಿ ಬಂದ ಎರೆಡು ಕೊಳವೆಗಳಿದ್ದವು. ಡ್ರೈನ್ ಎಂದು ಕರೆಯುವ ಆ ಪಾರದರ್ಶಕ ಕೊಳವೆಗಳೊಳಗೆ ಹರಿದ ನೆತ್ತರಿನ ಸ್ಪಷ್ಟ ಗುರುತಿತ್ತು. ಅದರ ಅಂಚಿನಲ್ಲಿದ್ದ ಕ್ಯಾನಿನಲ್ಲಿ ಈಗಾಗಲೇ ಬಸಿದ ನೆತ್ತರು ಶೇಖರಣೆಯಾಗಿತ್ತು. ಅದೇನು ಆಪರೇಶನ್ ಗಾಯದಿಂದ ಹರಿದ ನೆತ್ತರೋ ಇಲ್ಲಾ ನೇರ ಮೆದುಳಿನಿಂದಲೇ ಹರಿದ ರಕ್ತವೋ? ಯಾವುದೇ ಆದರೂ ಅದು ಅಪ್ಪನ ಮುಖಕ್ಕೆ ಇನ್ನಿಲ್ಲದ ಭೀಕರತೆಯನ್ನು ಕೊಟ್ಟಿತ್ತು. ಹೀಗೆ ನಾಲ್ಕಾರು ನಾಳ, ಕೊಳವೆ, ಸೂಜಿಗಳು ಅಪ್ಪನಿಗೆ ಅಂಟಿಕೊಂಡು ಒಯ್ದಲ್ಲೆಲ್ಲಾ ಅವನನ್ನು ಹಿಂಬಾಲಿಸುತ್ತಿದ್ದವು.‌
ಅವನ ಪ್ರತಿ ಸೆಕೆಂಡಿನ ನರಳಿಕೆಯೂ ಈಗ ನನ್ನ ಕಣ್ಮುಂದೆಯೇ ಜರುಗುತ್ತಿತ್ತು. ನಿಶ್ಚಲವಾಗಿ ಬಿದ್ದ ಅಪ್ಪನ ಎಡಗೈ ಅದೇನನ್ನೋ ಸರಿಪಡಿಸಿಕೊಳ್ಳುವುದಕ್ಕೆ, ಕಾಣದ ಅದ್ಯಾವುದೋ ಗಾಯವನ್ನು ಸಂತೈಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವಂತೆ ಹಠಾತ್ತನೆ ಎದ್ದು, ಅದು ಸಾಧ್ಯವಾಗದೇ ಥಟ್ಟನೆ ಕೆಳಕ್ಕೆ ಬೀಳುತ್ತಿತ್ತು. ಆ ಒಂದೊಂದು ನಿಮಿಷವೂ ಅತ್ಯಂತ ಭಯಾನಕವಾಗಿತ್ತು‌‌. ರಾತ್ರೆ ಮಂಚದ ಪಕ್ಕದಲ್ಲಿ ಕೆಳಗೆ ಮಲಗುತ್ತಿದ್ದ ನನಗೆ ಮೇಲೆ ಮಂಚದಲ್ಲಿ ಕೊಂಚ ಸದ್ದಾದರೂ ಅಪ್ಪ ಮಗ್ಗಲು ಬದಲಿಸಿದನೇನೋ ಅನ್ನಿಸಿ ನಿದ್ರೆಗಣ್ಣಿನಲ್ಲೇ ಖುಷಿಯಾಗುತ್ತಿತ್ತು. ಎದ್ದು ನೋಡಿದರೆ ಅಪ್ಪ ಯಾವ ಚಲನೆಯಿಲ್ಲದೆ ಹಾಗೆಯೇ ಮಲಗಿಕೊಂಡು ನಿರಾಸೆ ಹುಟ್ಟಿಸುತ್ತಿದ್ದ. ನರ್ಸ್ ಅದೆಂಥದೋ ನಾಳವನ್ನು ಅಪ್ಪನ ಕತ್ತಿನಲ್ಲಿ ಮಾಡಿದ್ದ ತೂತಿನಲ್ಲಿ ತುರಕಿ ಯಂತ್ರವೊಂದಕ್ಕೆ ಜೋಡಿಸುತ್ತಿದಳು. ಇದ್ದಕ್ಕಿದ್ದಂತೆ ಗಾಳಿ ಗಂಟಲಿನೊಳಗೆ ನುಗ್ಗಿದ್ದಂತೆ ಅಪ್ಪ ಗಂಟಲು, ಮೂಗುಗಳಿಂದ ಕೆಮ್ಮುತ್ತಾ ಎದ್ದೆದ್ದು ಬೀಳುತ್ತಿದ್ದ. ಅರೆ ತೆರೆದ ರೆಪ್ಪೆಯೊಳಗಿನ ಅವನ ಕಣ್ಣು ವಿಕಾರವಾಗಿ ಮೇಲೆಸಿಕ್ಕಿಕೊಳ್ಳುತ್ತಿತ್ತು. ಕಫ ತೆಗೆಯುವ ಈ ಭೀಕರ ಸ್ಥಿತಿಯನ್ನು ನೋಡಲಾಗದೇ ಪ್ರತೀ ಬಾರಿಯೂ ನಾನು ಅಲ್ಲಿಂದ ಎದ್ದು ಹೊರನಡೆದುಬಿಡುತ್ತಿದ್ದೆ. ಅಳು ಒತ್ತರಿಸಿಕೊಂಡು ಬರುತ್ತಿತ್ತು. ಕಾರಿಡಾರಿನ ಕಂಬದೆದುರು ಬಂದು ಮೌನವಾಗಿ ನಿಲ್ಲುತ್ತಿದ್ದೆ. ಈ ಕ್ಷಣಕ್ಕೆ ಈ ಕಂಬದಷ್ಟೇ ನಿರ್ಭಾವುಕವಾಗಿ, ಗಟ್ಟಿಯಾಗಿ ನಿಲ್ಲಬೇಕು. ಹಾಗೆಂದು ಸುಧಾರಿಸಿಕೊಳ್ಳುತ್ತಾ ಒಳಗೆ ಹೋಗಿ ನೋಡಿದರೆ ಅಪ್ಪ ಮುಖವನ್ನು ವಾಲಿಸಿಕೊಂಡು, ಅರೆಬರೆ ಬಾಯ್ತೆರೆದು ಮತ್ತೆ ನಿದ್ರೆಗೆ ಶರಣಾಗಿದ್ದ. ಅವನ ಕಣ್ಣಿನಿಂದ ಇಳಿದಿದ್ದ ಕಂಬನಿ ದಿಂಬನ್ನು ತೋಯಿಸಿತ್ತು.

ಮೇಲಿಂದ ಮೇಲೆ ಸಿಟಿ, ಎಮ್ಮಾರೈ ಸ್ಕ್ಯಾನುಗಳಾದವು. ಪ್ರತಿಯೊಂದು ರಿಪೋರ್ಟೂ ತಲೆಯೊಳಗೆ ನೆತ್ತರು ಹರಿದ ಗುರುತನ್ನು ಹೊತ್ತುಕೊಂಡೇ ಪ್ರಕಟವಾಗುತ್ತಿತ್ತು. ಏನೇ ಹೆಣಗಿದರೂ ಒಮ್ಮೆಯಾದರೂ ರಕ್ತಸ್ರಾವ ನಿಂತ ಒಂದೇ ಒಂದು ಸುದ್ದಿ ನಮ್ಮನ್ನು ತಲುಪಲಿಲ್ಲ. ಈ ನಡುವೆ ಶನಿವಾರದ ಹೊತ್ತಿಗೆ ಅಪ್ಪನ ಎಡಗೈ-ಕಾಲುಗಳಲ್ಲಿದ್ದ ಸಣ್ಣ ಚಲನೆಯೂ ಭಾನುವಾರದ ಹೊತ್ತಿಗೆ ಸ್ತಬ್ದವಾಗಿಹೋಯಿತು. ಮುಖದಲ್ಲಿ ಯಾತನೆ ಬೆರೆತ ನಿದ್ರೆಯೊಂದು ಪ್ರತ್ಯಕ್ಷವಾಯಿತು. ಹ್ಯಾಮರೇಜ್ ಆದ ದಿನಕ್ಕಿಂತಲೂ ಹೆಚ್ಚಿನ ಅನಾರೋಗ್ಯ ತೀರಾ ಬರಿಗಣ್ಣಿಗೂ ಕಾಣುವಷ್ಟು ಸ್ಪಷ್ಟವಾಗಿ ಅವನಲ್ಲೀಗ ಉದ್ಭವಿಸಿತು. ಈ ಎಲ್ಲ ಏರಿಳಿತಗಳ ಕೊನೆಗೆ ಒಂದು ತೀರ್ಮಾನಕ್ಕೆ ಬಂದ ಡಾಕ್ಟರು ಸೋಮವಾರದ ವೇಳೆಗೆ 'ತಲೆಯೊಳಗೆ ರಕ್ತಸ್ರಾವವಿನ್ನೂ ನಿಂತಿಲ್ಲ. ಇನ್ನೊಂದು ಆಪರೇಶನ್ ಮಾಡಲೇಬೇಕು' ಎಂದು ಘೋಷಿಸಿಯೇ ಬಿಟ್ಟರು.

ಮನಸ್ಸೀಗ ದುಃಖ ಪಡಲೂ ಆಗದಷ್ಟು ದಣಿದುಹೋಗಿತ್ತು. ಯಾರಿಗೂ ಏನೂ ಹೇಳದೇ, ಯಾರ ಜೊತೆಗೂ ಮಾತನಾಡದೇ ಅಪ್ಪನ ಕಾಲಬುಡದಲ್ಲಿ ಸುಮ್ಮನೆ ಮಲಗಿಬಿಡಬೇಕೆನಿಸಿತು.

ಅಪ್ಪ ಮಾತ್ರ ಈ ಎಲ್ಲ ದುಃಖಾತಂಕಗಳ ಮೀರಿದ ಧ್ಯಾನದಲ್ಲಿರುವಂತೆ ಗಾಢ ನಿದ್ರೆಯಲ್ಲಿದ್ದ.

*************

ಅದು ಆಪರೇಷನ್ ಥಿಯೇಟರ್ ನ ಹೊರಗಿನ ಜಗುಲಿ.

ದೇವರೆಂಬ ದೇವರೂ ಭಯಭೀತನಾಗಿ ಆಚೀಚೆ ಶತಪತ ಓಡಾಡುವ ಜಾಗವದು. ಅದೆಷ್ಟೋ ಸಿನೆಮಾ, ಧಾರಾವಾಹಿಗಳಲ್ಲಿ ನಾಯಕ-ನಾಯಕಿಯರನ್ನು ಹೀಗೆ ಶಥಪಥ ಆಚೀಚೆ ಓಡಾಡಿಸಿದ್ದರೂ ಈ ಕಾಯುವಿಕೆಯಲ್ಲಿನ ನಿಜವಾದ ನೋವೇನೆಂಬುದು ಅರ್ಥವಾಗುವುದು ನಮ್ಮ ಪ್ರೀತಿಪಾತ್ರರೊಬ್ಬರ ಜೀವ ಒಳಗಡೆ ಕತ್ತರಿ-ಸೂಜಿಗಳಂಚಿನಲ್ಲಿ ನಿರ್ಧರಿತವಾಗಿರುವ ಸೂಕ್ಷ್ಮ ಪರಿಸ್ಥಿತಿಯಲ್ಲಿ ಮಾತ್ರ. ಇಲ್ಲಿ ಒಂದೊಂದು ನಿಮಿಷವೂ ಗಂಟೆಯಾಗಿ, ಗಂಟೆಗಳು ದಿನವಾಗಿ, ದಿನ ಯುಗವಾಗಿ ಜಾರುತ್ತದೆ. ಪ್ರತೀ ಬಾರಿ ನರ್ಸ್ ಅಥವಾ ಡಾಕ್ಟರೊಬ್ಬರು ಈ ಕೋಣೆಯ ಬಾಗಿಲು ತೆಗೆದು ಆಚೆ ಬಂದಾಗಲೂ ಅಲ್ಲಿರುವವರಲ್ಲರೂ ಉದ್ವೇಗದಲ್ಲಿ ಎದ್ದು ನಿಲ್ಲುತ್ತಾರೆ. ಅವರೆಲ್ಲರ ಕಣ್ಣಲ್ಲೂ 'ಒಳಗಿರುವ ನಮ್ಮವರು ಸೌಖ್ಯವಾಗಿದ್ದಾರೆಂಬ ಒಂದೇ ಒಂದು ಸಿಹಿ ಸುದ್ದಿ ಹೇಳಿ' ಎಂಬ ಅಯಾಚಿತ ಪ್ರಾರ್ಥನೆಯಿರುತ್ತದೆ.

ಮೂರು ಗಂಟೆಗಳು ಜರುಗಿ ಆಪರೇಶನ್ ಮುಗಿಯುವಷ್ಟರಲ್ಲಿ ಒಂದು ಜನುಮವೇ ಕಳೆದುಹೋಯಿತೇನೋ ಎಂಬಷ್ಟು ದಣಿವಾಗಿತ್ತು ನನಗೆ. ಒಂದು ಕೈಯಲ್ಲಿ ಸಣ್ಣ ಬಟ್ಟಲನ್ನೂ, ಇನ್ನೊಂದು ಕೈಯಲ್ಲಿ ಅಂಗೈಯಗಲದ ಕಪ್ಪೆಚಿಪ್ಪಿನಂಥಹಾ ರಚನೆಯನ್ನೂ ಹಿಡಿದಿದ್ದ ಡಾಕ್ಟರೊಬ್ಬರು 'ಬಾಲಕೃಷ್ಣ ಕಡೆಯವರ್ಯಾರು?' ಎನ್ನುತ್ತಾ ಆಪರೇಷನ್ ಥಿಯೇಟರ್ ನ ಬಾಗಿಲಿನಲ್ಲಿ ಪ್ರತ್ಯಕ್ಷವಾದರು. ಅತ್ತ ಓಡಿದೆ. 'ನೋಡಿ, ತಲೆಯೊಳಗಿನಿಂದ ಇಷ್ಟು ರಕ್ತವನ್ನು ಹೊರತೆಗೆದಿದ್ದೇವೆ' ಎನ್ನುತ್ತಾ ಕೈಯಲ್ಲಿನ ಬಟ್ಟಲು ತೋರಿಸಿದರು. ಅದರೊಳಗೆ ಕೆಂಪು ಚೆರ್ರಿ ಹಣ್ಣನ್ನು ಗಿವುಚಿ, ನೀರಿನೊಂದಿಗೆ ಕಲಸಿಟ್ಟಂಥಹಾ ಮಡ್ಡಿ ದ್ರಾವಣವೊಂದಿತ್ತು. ಇನ್ನೊಂದು ಕೈಯಲ್ಲಿದ್ದ ಚಿಪ್ಪನ್ನು ತೋರಿಸುತ್ತಾ 'ಇದು ತಲೆಯೊಳಗಿನ ಚಿಪ್ಪು. ತಲೆಯೊಳಗೆ ರಕ್ತಸ್ರಾವವಾದಾಗ ಇದರ ಹಾಗೂ ಮೆದುಳಿನ ಮಧ್ಯೆ ರಕ್ತ ಬಂದು ಕುಳಿತು, ಇಕ್ಕಟ್ಟು ಉಂಟಾಗಿ ಮೆದುಳಿಗೆ ತೊಂದರೆಯಾಗುತ್ತದೆ. ಒಂದುವೇಳೆ ರಕ್ತ ಹರಿದರೂ ಅಷ್ಟೊಂದು ಒತ್ತಡ ಉಂಟಾಗದಿರಲೆಂದು ಇದನ್ನು ಸಧ್ಯಕ್ಕೆ ತೆಗೆದಿದ್ದೇವೆ. ಇದು ನಮ್ಮ ಬಳಿಯೇ ಇರುತ್ತದೆ' ಎಂದು ತುಸು ತಡೆದವರು 'ನೋಡಿ, ಇದು ನಮ್ಮ ಕೊನೆಯ ಪ್ರಯತ್ನ‌. ಈ ಬಾರಿಯೂ ಬಿಪಿ ನಿಯಂತ್ರಣಕ್ಕೆ ಬಾರದೆ ರಕ್ತಸ್ರಾವವಾದರೆ ನಾನೇನೂ ಮಾಡಲಾಗುವುದಿಲ್ಲ' ಎಂದು ಖಡಾಖಂಡಿತವಾಗಿ ಹೇಳಿ ನಡೆದುಬಿಟ್ಟರು.

ಮೂರ್ಛೆ ಬಂದಂತೆನಿಸಿತು. ಏನಿದು ದೇವರೇ ಇಷ್ಟೊಂದು ಯಾತನೆ? ಈ ಮಡ್ಡಿಮಡ್ಡಿಯಾದ ರಕ್ತ, ತುಂಡಾದ ನರ, ಈ ಮೂಳೆಯ ಕವಚ, ನೆನ್ನೆಯ ತನಕ ಸರಿಯಿದ್ದು ಇಂದು ಮಿತಿಮೀರಿದ ಬಿಪಿ.. ಇವನ್ನೆಲ್ಲಾ ಸೃಷ್ಟಿಸಿದವನೂ ನೀನೇ. ತಲೆಯೊಳಗೆ ಇಟ್ಟವನೂ ನೀನೇ. ಈಗ ಅವುಗಳನ್ನೇ ಖಾಯಿಲೆಯಾಗಿಸಿ ಈ ಪರಿಯ ನೋವು ನೀಡುತ್ತಿರುವುದಾದರೂ ಏಕೆ?

ಯಾವ ಮನುಷ್ಯ ತಾನೇ ತನ್ನನ್ನು ಹುಟ್ಟಿಸೆಂದು ನಿನ್ನನ್ನು ಕೇಳುತ್ತಾನೆ? ನೀನೇ ಹುಟ್ಟಿಸುತ್ತೀಯ. ಶರೀರವೆಂಬ ಮತ್ಯಾರೂ ರೂಪಿಸಲಾಗದ ಅತ್ಯದ್ಭುತ ರಚನೆಯನ್ನು ಕಟ್ಟುತ್ತೀಯ. ಮೆದುಳು, ನರಮಂಡಲ, ಹೃದಯ, ಕೈ, ಕಾಲು, ಉದರ, ಜೀವಕೋಶಗಳೆಂಬ ನೂರು-ಸಾವಿರ-ಲಕ್ಷ ಅಂಗಗಳ ಒಂದಕ್ಕೊಂದು ಮೇಳೈಸಿ ಹೆಣೆಯುತ್ತೀಯ. ಎಲ್ಲವೂ ಒಟ್ಟಾಗಿ ಕೆಲಸಮಾಡುತ್ತಾ ರೂಪುಗೊಂಡ ಮನುಷ್ಯನೆಂಬ ಮನುಷ್ಯ ತನ್ನದೇ ಸಂಸಾರ, ಮನೆಗಳ ಬದುಕು ಕಟ್ಟಿಕೊಂಡು ನಗುತ್ತಲೋ, ಅಳುತ್ತಲೋ ತನ್ನ ಪಾಡಿಗೆ ಬದುಕುತ್ತಿರುವಾಗ ಅವುಗಳ ಪೈಕಿ ಯಾವುದೋ ಒಂದು ಅಂಗವನ್ನು ವಿನಾಕಾರಣವಾಗಿ ನೀನಾಗೇ ಕೆಡಿಸುತ್ತೀಯ. ಬೀಳಿಸುತ್ತೀಯ, ಮಲಗಿಸುತ್ತೀಯ, ನರಳಿಸುತ್ತೀಯ, ಪ್ರಜ್ಞೆಯನ್ನೇ ಕಿತ್ತುಕೊಳ್ಳುತ್ತೀಯ. ಅವನ ಬಂಧುಬಾಂಧವರೆಲ್ಲಾ ನಿನ್ನೆದರು ದೀನರಾಗಿ ನಿಂತು ಬೇಡಿಕೊಳ್ಳುವಂತೆ ಮಾಡುತ್ತೀಯ. ನಾವು ಹುಲುಮಾನವರು. ಹುಟ್ಟುತ್ತೇವೆ. ಬೆಳೆಯುತ್ತೇವೆ. ಅಪ್ಪಾ, ಅಮ್ಮಾ, ಮಗುವೇ ಎನ್ನುತ್ತೇವೆ. ಪ್ರೀತಿಸುತ್ತೇವೆ. ದ್ವೇಶಿಸುತ್ತೇವೆ. ಮನೆಕಟ್ಟಿ, ಮದುವೆಯಾಗಿ, ಮಕ್ಕಳ ಹೆತ್ತು, ದುಡಿದು ಬದುಕೊಂದ ಕಟ್ಟಿಕೊಳ್ಳುತ್ತೇವೆ. ನೀ ನಗಿಸಿದಾಗ ನಗುತ್ತೇವೆ. ಅಳಿಸಿದಾಗ ಅಳುತ್ತೇವೆ. ನಿನ್ನನ್ನು ಬೈಯುತ್ತೇವೆ. ಬೈದಿದ್ದನ್ನು ಮರೆತು ಮತ್ತೆ ಪೂಜಿಸುತ್ತೇವೆ. ನಿನಗೆ ಗೊತ್ತು. ಏನೇ ಮುನಿದರೂ, ಬೈದರೂ ಪರಿಸ್ಥಿತಿ ತನ್ನೆಲ್ಲ ಕೈಮೀರದ ನಂತರ ಮನುಷ್ಯ ನಿನ್ನೆದುರು ನಿಲ್ಲಲೇಬೇಕು.

ಕೀಲು ನಿನ್ನ ಕೈಯಲ್ಲಿದೆಯೆಂಬ ಕಾರಣಕ್ಕೆ ಹೀಗೆಲ್ಲಾ ಆಡಿಸುವುದೇನು?

**********

ಮೊದಲ ಸಲ ಒಂದೇ ಒಂದು ನರ ಒಡೆದು ರಕ್ತಸ್ರಾವವಾಗಿದ್ದರೆ ಎರೆಡನೇ ಬಾರಿ ಮೂರು ನರಗಳಲ್ಲಿ ರಕ್ತ ಕೋಡಿಬಿದ್ದು ಮೆದುಳಿನ ಮೇಲೆಲ್ಲಾ ಹರಿದಿತ್ತು. ಅದರ ಪರಿಣಾಮವಾಗಿಯೇ ಅಪ್ಪನ ಎಡ ಕೈ-ಕಾಲುಗಳೂ ಚಲನೆ ನಿಲ್ಲಿಸಿದ್ದವು. ನಾವು ನಿಶ್ಚಲವೆಂದು ತಿಳಿದಿದ್ದ ಅಪ್ಪ ಒಳಗೊಳಗೇ ತೀವ್ರವಾದ ಬಿಪಿ ಹಾಗೂ ರಕ್ತಸ್ರಾವದ ನೋವನ್ನು ನುಂಗುತ್ತಾ ಮಲಗಿದ್ದ.

ಎರೆಡನೇ ಬಾರಿಗೆ ಆಪರೇಶನ್ ಮಾಡಿದ ಕೆಲವೇ ಗಂಟೆಗಳಲ್ಲೇ ಪವಾಡವೆಂಬಂತೆ ಅಪ್ಪ ಇಷ್ಟಗಲಕ್ಕೆ ಕಣ್ತೆರೆದುಬಿಟ್ಟ. ಆದರೆ ಆಚೀಚೆ ಹೊರಳದ ಆ ನೋಟ ಕಣ್ಮುಚ್ಚಿಕೊಂಡ ಸ್ಥಿತಿಯದೇ ಇನ್ನೊಂದು ರೂಪದಂತೆ ಭಾಸವಾಗುತ್ತಿತ್ತು. ಬಿಪಿ ಏಕ್ದಂ 130/80ಕ್ಕೆ ಇಳಿದಿತ್ತು. ಮರುದಿನ ಬೆಳಗ್ಗೆ ಸಿಟಿ ಸ್ಕ್ಯಾನ್ ಮಾಡಿ ನೋಡಿದಾಗ ಕಳೆದ ಎಂಟು ದಿನಗಳಲ್ಲಿ ಇದೇ ಮೊದಲ ಬಾರಿಗೆ ತಲೆಯೊಳಗೆ ರಕ್ತ ಚೆಲ್ಲದ ಚಿತ್ರಗಳು ಗೋಚರಿಸಿದವು.

ಅಪ್ಪನ ಈ ಎಚ್ಚರವನ್ನು ಹೋಲುವ ನಿದ್ರಾಸ್ಥಿತಿಯ ಬಗ್ಗೆ ಎಲ್ಲರೊಂದಿಗೆ ಚರ್ಚಿಸುವಾಗ ಅವನಿಗೆ ಹೊರಗಿನ ಎಲ್ಲಾ ಸಂಗತಿಗಳೂ ತಿಳಿಯುತ್ತಿವೆ ಆದರೆ ಅವುಗಳಿಗೆ ಪ್ರತಿಕ್ರಿಯಿಸಲು ಆಗುತ್ತಿಲ್ಲ ಎಂಬ ಅಭಿಪ್ರಾಯ ಬರತೊಡಗಿತು. ಕದಲಲಾಗದ ಅಸಹಾಯ ಸ್ಥಿತಿ, ನೋವು, ಬ್ಯಾಂಡೇಜು, ಸೂಜಿ, ರಕ್ತ, ಎಲ್ಲೆಡೆಯಿಂದಲೂ ಕೇಳಿಬರುವ ನರಳಾಟ.. ಇವೆಲ್ಲವೂ ಮೌನವಾಗಿ ಅವನ ಆಳ ಪ್ರಜ್ಞೆಯನ್ನು ಕೆಣಕುತ್ತಿವೆಯೇ? ಅದೇ ಅವನ ಬಿಪಿಯ ಏರುಗತಿಗೆ ಕಾರಣವಾಗಿದೆಯೇ?
ಈ ಒಂದು ಯೋಚನೆ ಬಂದ ಮರುಕ್ಷಣದಿಂದ ನಾನು ಅಪ್ಪನೊಂದಿಗೆ ಮಾತನಾಡಲು ಶುರುವಿಟ್ಟುಕೊಂಡೆ. ನಿಮಗೆ ಏನೂ ಆಗಿಲ್ಲ, ಇನ್ನು ಎರೆಡೇ ದಿನ, ಮನೆಗೆ ಹೋಗೋಣ, ನಾವೆಲ್ಲಾ ಇದ್ದೇವೆ, ಅಮ್ಮ ಇದ್ದಾಳೆ, ಅತ್ತೆ ಮಾವ ಇದ್ದಾರೆ, ಮಧುವಿನ ಕಾರು ಬಂದಿದೆ, ನಾಳೆಯೇ ಮೂಡುಗುಡ್ಡೆಗೆ ಹೋಗೋಣ..

ಸುತ್ತಮುತ್ತಲಿದ್ದ ಸಿಸ್ಟರ್, ಪೇಷಂಟುಗಳು ನನ್ನನ್ನು ಹುಚ್ಚನೆಂಬಂತೆ ನೋಡುತ್ತಿದ್ದರೇನೋ? ಅಪ್ಪನೂ ನನ್ನ ಯಾವುದೇ ಮಾತಿಗೆ ಪ್ರತಿಕ್ರಿಯಿಸದೇ ಅವರ ಪರ ವಹಿಸಿಕೊಂಡವನಂತೆ ಸುಮ್ಮನೆ ಮಲಗಿದ್ದ. ಅದಕ್ಕೆ ತಲೆಕೆಡಿಸಿಕೊಳ್ಳದ ನಾನು ಆಗಾಗ ಅಪ್ಪನ ಜೊತೆ ಮಾತನಾಡುವುದನ್ನು ಮುಂದುವರಿಸಿಯೇ ಇದ್ದೆ. ಗಾಜುಗಣ್ಣಿನ ಗೊಂಬೆಯಂತೆ ಆಗಾಗ ಮಿಟುಕುವುದೊಂದನ್ನೇ ಮಾಡುತ್ತಿದ್ದ ಅಪ್ಪ ಕೊನೆಗೂ ನನ್ನೊಂದು ಮಾತಿಗೆ ಸ್ಪಂದಿಸಿಯೇಬಿಟ್ಟ!

ಮನೆಯಲ್ಲಿರುವ ತಮ್ಮ ತೋಟಕ್ಕೆ ಬೇಸಾಯ ಮಾಡಿಸಿದ್ದಾನೆ. ಅಡಿಕೆ ತೋಟವೀಗ ಕ್ಷೇಮವಾಗಿದೆ. ನೀವೇನೂ ಚಿಂತೆ ಮಾಡಬೇಡಿ!

ಎರೆಡನೇ ಆಪರೇಶನ್ ಆದ ಮರುದಿನ ರಾತ್ರೆ ನನ್ನ ತಮ್ಮನೇ ಕೊಟ್ಟಿದ್ದ ಸಲಹೆಯಂತೆ ಅಪ್ಪನ ಕಿವಿಗೆ ಬಹು ಸಮೀಪದಲ್ಲಿ ನಿಂತ ನಾನು ಆ ಒಂದು ಮಾತನ್ನು ಹೇಳಿಬಿಟ್ಟೆ. ಆಗ ಹೊಳೆದವು ಅಪ್ಪನ ಕಣ್ಣು! ಇಷ್ಟು ದಿನ ಶೂನ್ಯದಲ್ಲಿ ನೆಟ್ಟಂತಿದ್ದ, ಎಲ್ಲೋ ಆಗೊಮ್ಮೆ ಈಗೊಮ್ಮೆ ಭಾವಹೀನ ದೃಷ್ಟಿಯಿಂದೆಂಬಂತೆ ನನ್ನತ್ತ ತಿರುಗುತ್ತಿದ್ದ ಅವುಗಳಲ್ಲೀಗ ನೋವಿನ ಬದಲಿಗೆ ಮಗುವಿನ ಕಣ್ಣಲ್ಲಿರುವಂಥಹಾ ಬೆರಗೊಂದು ಉದ್ಭವವಾಯಿತು. ಅಪ್ಪನ ಚಿಂತೆಯ ಮೂಲವೀಗ ನಿಚ್ಚಳವಾಗಿತ್ತು!

"ನೊಣಬೂರಿನ ರವಿ ನೀವು ಹೇಳಿದ ರೇಟಿಗೇ ಬೇಸಾಯ ಮಾಡಿಕೊಟ್ಟಿದ್ದಾನೆ. ನಾಳೆಯ ಹೊತ್ತಿಗೆ ಬೇಸಾಯ ಮುಗಿದೇ ಹೋಗುತ್ತದೆ. ನೀವೇ ತಂದಿಟ್ಟ ಬೇವಿನ ಹಿಂಡಿಯನ್ನು ಹಾಕಿದ್ದಾರೆ. ತಮ್ಮ ಮಳೆಗಾಲಕ್ಕೆ ಔಷಧ ಹೊಡೆಯಲಿಕ್ಕೆಂದು ಮೈಲು ತುತ್ತವನ್ನೂ ತಂದಿಟ್ಟಿದ್ದಾನೆ. ಮುಂದಿನ ತಿಂಗಳು ಖುದ್ದು ನೀವೇ ನಿಂತು ತೋಟಕ್ಕೆ ಔಸ್ತಿ ಹೊಡೆಯುವಿರಂತೆ!"

ಕೇಳುತ್ತಾ ಹೋದಂತೆ ಅಪ್ಪನ ಕಣ್ಣುಗಳು ದೇದೀಪ್ಯವಾದವು. ಕತ್ತು ನನ್ನತ್ತ ಹೊರಳಿತು. ಒಡಲಾಳದಿಂದ ಎದ್ದು ಬಂದ ಮಾತೊಂದು ಗಂಟಲಲ್ಲಿ ಸಿಕ್ಕಿಕೊಂಡಂತೆ ಅಪ್ಪ ತುಟಿ ಕದಲಿಸಿದ! ನಲವತೈದು ವರ್ಷಗಳಿಂದ ತಾನು ಮಗುವಿನಂತೆ ಪಾಲನೆ ಮಾಡಿದ್ದ ತೋಟವೀಗ ತನ್ನ ಅನುಪಸ್ಥಿತಿಯಲ್ಲೂ ಕ್ಷೇಮವಾಗಿದೆಯೆಂಬ ಸುದ್ದಿ ಇಷ್ಟು ದಿನದ ಔಷಧ-ಆಪರೇಶನ್ ಗಳು ಮಾಡಿದ್ದಕ್ಕಿಂತ ಹೆಚ್ಚಿನ ಪರಿಣಾಮವನ್ನೇ ಉಂಟು ಮಾಡಿದ್ದವು. ಚಿಂತೆಯ ಕೀಲಿ ಕೈ ಸಿಕ್ಕಿದ ಖುಷಿಯಲ್ಲಿ ನಾನು ಅವೇ ಮಾತುಗಳನ್ನು ಪುನರುಚ್ಛರಿಸಿ ನಕ್ಕೆ.

ನನ್ನ ಮುಖವನ್ನೇ ದಿಟ್ಟಿಸುತ್ತಿದ್ದ ಅಪ್ಪ ಅದೇ ನಗುವಿನ ಪ್ರತಿಫಲನದಂತೆ ಅರ್ಧ ತುಟಿಯನ್ನಷ್ಟೇ ಕದಲಿಸಿ ನಕ್ಕ!

ಕಳೆದ ಹಲವು ದಿನಗಳ ದುರ್ಘಟನಾ ಸರಣಿಯ ಶುಭಾಂತ್ಯದ ಮೊದಲ ಅಧ್ಯಾಯ ಹಾಗೆ ಅರಂಭವಾಯಿತು.

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...