ಶನಿವಾರ, ಜನವರಿ 19, 2019

ಇವತ್ತು ಸ್ನೇಹಿತರ ದಿನ..

ಇವತ್ತು ಸ್ನೇಹಿತರ ದಿನ. ಬೆಳಗ್ಗೆ ಎದ್ದ ಹಾಸಿಗೆಯಲ್ಲೇ ವಾಟ್ಸಾಪ್ ತೆರೆದು ಚಂದದ ಪೋಸ್ಟೊಂದನ್ನು ಸೆಲೆಕ್ಟ್ ಮಾಡಿ ಕಾಂಟ್ಯಾಕ್ಟ್ ಲೀಸ್ಟ್ ನಲ್ಲಿರುವ ಎಲ್ಲ ಸ್ನೇಹಿತರಿಗೂ ಕಳಿಸಿದೆ. ಅವರಲ್ಲಿ ಹಲವರಿಂದ ಅಂಥಾದ್ದೇ ಒಂದು ಪೋಸ್ಟ್ ತಿರುಗಿಬಂತು. ಜೋಶ್ ನಲ್ಲಿ ನಮ್ಮ ಹಾಲಿ ಕಂಪನಿಯ ಬಾಸ್ ಗೂ ಒಂದು ಪೋಸ್ಟ್ ಇನ್ನೇನು ಫಾರ್ವರ್ಡ್ ಆಗುವುದರಲ್ಲಿತ್ತು! ಪುಣ್ಯಕ್ಕೆ ಕೊನೆಯ ಕ್ಷಣದಲ್ಲಿ ಮತ್ತೊಮ್ಮೆ ಚೆಕ್ ಮಾಡಿದ್ದರಿಂದ ಆಗಲಿದ್ದ ಅನಾಹುತ ತಪ್ಪಿಹೋಯಿತು. ಇಲ್ಲದಿದ್ದರೆ ಮುಂದೊಮ್ಮೆ ಏನಾದರೂ ಯಡವಟ್ಟು ಮಾಡಿ ಸಿಕ್ಕಿಹಾಕಿಕೊಂಡಾಗ "ನಿಮಗೆ ಫ್ರೆಂಡ್ಶಿಪ್ ಡೇ ಮೆಸೇಜ್ ನ ತಪ್ಪಿಲ್ದೇ ಕಳಿಸೋಕೆ ಬರುತ್ತೆ. ಅದೇ ಆಫೀಸ್ ಕೆಲಸ ಸರಿಯಾಗಿ ಮಾಡೋಕೆ ಬರಲ್ಲ ಅಲ್ವಾ?" ಎಂದು ಬೈಸಿಕೊಳ್ಳುವ ಅಪಾಯವಿತ್ತು. ಪುಣ್ಯ. ದೇವರು ದೊಡ್ಡವನು. ತಪ್ಪಿಸಿಬಿಟ್ಟ.
ಬಿಡಿ, ವಿಷಯ ಅದಲ್ಲ. ಸ್ನೇಹಿತರ ದಿನದಂದು ಇರುವವರು ನೆನಪಾಗುವುದು ವಾಡಿಕೆ. ಆದರೆ ಇವತ್ತೇಕೋ ಇಲ್ಲದೇ ಇರುವವನೊಬ್ಬ ಅಚಾನಕ್ಕಾಗಿ ನೆನಪಾದ. ನಿಜ ಹೇಳಬೇಕೆಂದರೆ ಅವನು ನನ್ನ ಗೆಳೆಯನೇ ಅಲ್ಲ. ಅವನ ಜೊತೆಗೆ ಕಳೆದ ಯಾವ ನೆನಪೂ ನನಗಿಲ್ಲ, ಇದೊಂದರ ಹೊರತಾಗಿ:
ಅದು ಬಹುಷಃ ನನ್ನ ಶಾಲೆಯ ಮೊದಲ ದಿನ. ಆಗೆಲ್ಲ ಈಗಿನಂತೆ ಮಾತನಾಡಲಿಕ್ಕೂ ಬಾರದ ವಯಸ್ಸಗೇ ಶಾಲೆಗೆ ಕಳಿಸುವ ಪರಿಪಾಠ ಇದ್ದಿರಲಿಲ್ಲ ನೋಡೀ? ನನಗಾಗಲೇ ಆರು ವರ್ಷ ತುಂಬಿತ್ತು. ಜೀವನದಲ್ಲಿ ಮೊದಲ ಬಾರಿಗೆ ಅಪ್ಪ-ಅಮ್ಮನನ್ನ, ಅದರಲ್ಲೂ ಎಸ್ಪೆಷಲೀ ಅಪ್ಪನನ್ನ ಬಿಟ್ಟು ಒಂದಿಡೀ ದಿನ ಕಳೆದಿದ್ದೆ. ಸಂಜೆ ನಾಲ್ಕೂ ಮೊವ್ವತ್ತಾಗಿತ್ತು. ಇನ್ನೇನು ಲಾಂಗ್ ಬೆಲ್ ಹೊಡೆದು ನಾವೆಲ್ಲ ಮನೆಗೆ ಹೊರಡಬೇಕಿತ್ತು.
ಆದರೆ ಬೆಲ್ ಹೊಡೆಯಲೇ ಇಲ್ಲ.
ನಾನಂತೂ ಗಾಬರಿಯಾಗಿಬಿಟ್ಟಿದ್ದೆ. ಯಾಕೆ ಬೆಲ್ ಹೊಡೆದಿಲ್ಲ? ನಾನು ಇವತ್ತಿಡೀ ಶಾಲೆಯಲ್ಲೇ ಇರಬೇಕಾಗತ್ತಾ? ಇನ್ನೂ ಏನೇನೋ ಯೋಚನೆಗಳು ಮನಸ್ಸಿನಲ್ಲಿ ಬಂದು ಅಳು ಬರುವಂತಾಗಿತ್ತು. ಆಗಲೇ ನಾನವನನ್ನು ಮಾತನಾಡಿಸಿದ್ದು.
ಸರಿಯಾಗಿ ನೆನಪಿದೆ. ಅವನ ಹೆಸರು ನವೀನ. ಮುಖದ ಎರೆಡೂ ಕಡೆ ಇಳಿಬಿದ್ದ ಉದ್ದ ಕೂದಲು. ಗುಂಡಿ ಅಂಗಿ. ಚಡ್ಡಿ. ಉದ್ದದ ಕ್ಯಾಟೆಲ್ ಒಂದರಲ್ಲಿ ಮಧ್ಯಾಹ್ನದ ಊಟ ತುಂಬಿಸಿಕೊಂಡು ಬರುತ್ತಿದ್ದ. ಜೋಗಿ ಚಿತ್ರದಲ್ಲಿ ಶಿವಣ್ಣ ಚಿಕ್ಕವರಿದ್ದಾಗಿನದೊಂದು ಪಾತ್ರ ಬರುತ್ತದಲ್ಲ? ಥೇಟ್ ಹಾಗೇ ಇದ್ದ. ಬಹುಷಃ ನನ್ನ ಪಕ್ಕವೇ ಕುಳಿತಿದ್ದನೋ ಏನೋ, ಸರಿಯಾಗಿ ನೆನಪಿಲ್ಲ. ಅಳು ಮುಖ ಮಾಡಿಕೊಂಡೇ 'ಶಾಲೆ ಯಾವಾಗ ಬಿಡ್ತಾರೆ?' ಅಂತ ಕೇಳಿದ್ದೆ. ಅವನು ತನ್ನ ಗೊಜಗೊಜ ಧ್ವನಿಯಲ್ಲಿ ಉತ್ತರಿಸಿದ್ದ:
"ದಾಂತಿ ಆದ್ಮೇಲೆ ಬಿಡ್ತಾರೆ!"
ಕನ್ಫ್ಯೂಸ್ ಆದ್ರಾ? ಹೆದರಬೇಡಿ. ನಿಮ್ಮ ಜೊತೆಗೆ ನಾನೂ ಇದ್ದೇನೆ. ದೇವರಾಣೆಗೂ ನನಗೂ ಏನೂ ಅರ್ಥವಾಗಿರಲಿಲ್ಲ. ಇವತ್ತಿಗೂ ಆಗಿಲ್ಲ. ನಾನು ಸುಮಾರು ಸಲ ಅವನನ್ನು ಪ್ರಶ್ನಿಸಿದ್ದೆ. ಅವನು ಮತ್ತೆ ಮತ್ತೆ ಅದೇ ಉತ್ತರ ಕೊಟ್ಟಿದ್ದ:
"ದಾಂತಿ.. ದಾಂತಿ ಆದ್ಮೇಲೆ ಬಿಡ್ತಾರೆ!"
ಈ ದಾಂತಿ ಅಂದರೆ ಏನು? ದಾಂತಿ ಮಾಡೋದಂದ್ರೆ ಏನು ಮಾಡಬೇಕು? ಅಷ್ಟಕ್ಕೂ ಅದು ಈ ಗ್ರಹದ ಮನುಷ್ಯರು ಮಾಡುವ ಕೆಲಸವೇ ಹೌದಾ? ಈ ಯಾವ ಪ್ರೆಶ್ನೆಯನ್ನೂ ದಯವಿಟ್ಟು ಕೇಳಬೇಡಿ. ಉತ್ತರ ನನಗೂ ಗೊತ್ತಿಲ್ಲ. ಆದರೆ ಅವನು ಮಾತ್ರ ಅದೊಂದು ಉತ್ತರವನ್ನು ಬಿಟ್ಟು ಮತ್ತೇನೂ ಹೇಳಿರಲಿಲ್ಲ. ಅವನ ಈ ಅನ್ಯಗ್ರಹ ಭಾಷೆಯಿಂದ ಮತ್ತಷ್ಟು ಕನ್ಫ್ಯೂಸ್ ಆದ ನಾನು ಕುಳಿತಲ್ಲೇ ಇಪ್ಪಳಿಸಿ ಇಪ್ಪಳಿಸಿ ಅಳಲಾರಂಭಿಸಿದ್ದೆ. ನಿಜ ಹೇಳಬೇಕೆಂದರೆ ಆ ಹೊತ್ತಿಗಾಗಲೇ ಶಾಲೆ ಬಿಡುವ ಲಾಂಗ್ ಬೆಲ್ ಹೊಡೆದಾಗಿತ್ತು. ಆದರೆ ನಮ್ಮ ಕ್ಲಾಸಿನವರು ಸೂರು ಹಾರಿಹೋಗುವಂತೆ ಗಲಾಟೆ ಮಾಡಿಕೊಂಡಿದ್ದರಿಂದ ಆ ಶಬ್ದ ಯಾರಿಗೂ ಕೇಳಿಸಿಯೇ ಇರಲಿಲ್ಲ. ಕೊನೆಗೆ ಕೋಲಿನ ಸಮೇತ ಬಂದ ಮಾಸ್ತರು ನಮಗದನ್ನು ಮನವರಿಕೆ ಮಾಡಿಕೊಟ್ಟರು.
ಹಾಗೆ ಗೊಜಗೊಜ ಮಾತಾಡುತ್ತಿದ್ದ ನವೀನ ಎಷ್ಟು ಸಮಯ ನಮ್ಮ ಶಾಲೆಯಲ್ಲಿದ್ದ? ಆಮೇಲೇನಾದ? ಅವನ ಊರು ಯಾವುದು? ಈಗೆಲ್ಲಿದ್ದಾನೆ? ಯಾವುದೂ ಗೊತ್ತಿಲ್ಲ. ಆದರೆ "ದಾಂತಿ ಆದ್ಮೇಲೆ" ಎನ್ನುವ ವಾಕ್ಯ ಹಾಗೂ ಉದ್ದ ಕೂದಲು ಗಿಡ್ಡ ಚಡ್ಡಿಯ ಆ ಅಸ್ಪಷ್ಟ ಆಕಾರ ಮಾತ್ರ ಮನಸ್ಸಿನಲ್ಲಿ ಉಳಿದುಹೋಗಿದೆ.
-ವಿನಾಯಕ ಅರಳಸುರಳಿ.

ಸ್ವಾತಂತ್ರೋತ್ಸವದ ಪ್ರಭಾತ್ ಪೇರಿ...

ಸಮೀಪದಿಂದಲೇ ಕೇಳಿಬಂದ ಬ್ಯಾಂಡ್ಸೆಟ್ ನ ಸದ್ದಿಗೆ ಥಟ್ಟನೆ ಎಚ್ಚರಾಯಿತು. ಸಮಯ ಇನ್ನೂ ಏಳೂ ಮೊವ್ವತ್ತು. ಅಂದರೆ ಒಂದಿಡೀ ರಜಾದಿನ ನನ್ನ ಕಣ್ಮುಂದಿದೆ! ತುಂಬಾ ಖುಷಿಯಾಯ್ತು. ಈ ಆಫೀಸಿಗೆ ರಜೆ ಇದೆ ಅನ್ನೋ ಭಾವನೆ ತರುವ ಸಂಭ್ರಮ ಇದೆಯಲ್ಲಾ? ಅದಕ್ಕಿಂತ ಮಿಗಿಲಾದುದು ಇನ್ನೊಂದಿಲ್ಲ. ಹಾಗಂತ ಸಿಕ್ಕ ಈ ಅಮೂಲ್ಯ ರಜೆಯಲ್ಲಿ ಏನು ಕಡಿದು ಗುಡ್ಡೆ ಹಾಕ್ತೀಯಪ್ಪಾ ರಾಜಾ ಅಂದ್ರೆ ಏನೂ ಇಲ್ಲ. ವಾರವಿಡೀ ಬಚ್ಚಲಿನ ನ್ಯಾಲೆಯ ಮೇಲೆ ಕಡಿದಿಟ್ಟ ಕುರಿಯ ಮಾಂಸದಂತೆ ನೇತಾಡಿಕೊಂಡಿರುವ ಬಟ್ಟೆಗಳನ್ನು ತೊಳೆದು, ವಾರದಿಂದ ಹಿಡಿ ಕಾಣದ ಕೋಣೆಯ ಕಸ ಹೊಡೆದು, ಅಡ್ಡಬಂದ ಜಿರಳೆ-ಹಕ್ಳೆಗಳ ರುಂಡ ಚೆಂಡಾಡಿ, ಸ್ನಾನ ಮಾಡಿಕೊಂಡು ಪರಿಶುದ್ಧನಾಗಿ ಕೋಣೆಯಿಂದಾಚೆ ಬರುವಷ್ಟರಲ್ಲಿ ಸೂರ್ಯ ತನ್ನ ಮಧ್ಯಾಹ್ನದ ಲಂಚ್ ಬಾಕ್ಸ್ ತೆರೆಯುತ್ತಿರುತ್ತಾನೆ. ಸಿಕ್ಕ ಬಸ್ಸು ಹತ್ತಿಕೊಂಡು ಅಕ್ಕನ ಮನೆಗೋ, ಚಿಕ್ಕಮ್ಮನ ಮನೆಗೋ ಅಥವಾ ಗೆಳೆಯನ ಭೇಟಿಗೋ ಹೊರಟರೆ ಅಲ್ಲಿಗೆ ಆ ರಜಾ ದಿನ ಸಂಪನ್ನವಾದಂತೆ.
ಬಿಡಿ. ನಾನು ಹೇಳೋಕೆ ಹೊರಟಿದ್ದು ಅದಲ್ಲ. ಬೆಳ್ಳಂಬೆಳಗ್ಗೆ ನನ್ನನ್ನು ಎಚ್ಚರಗೊಳಿಸಿದ ಆ ಪೆಪ್ಪೆರೆ ಪೆಪ್ಪೆರೆ ಬ್ಯಾಂಡ್ ಸದ್ದು ಸಮೀಪದ ಎಂಇಎಸ್ ಶಾಲೆಯ ಸ್ವಾತಂತ್ರೋತ್ಸವದ ಪ್ರಭಾತ್ ಪೇರಿಯದು. ಹಳೆಯ ನೆನಪುಗಳು ಗರಿಗೆದರೋದಕ್ಕೆ ಅಷ್ಟೇ ಸಾಕು. ಏನು? ಸ್ವತಂತ್ರ ದಿನದಂದು ಧ್ವಜಾರೋಹಣದಲ್ಲಿ ಪಾಲ್ಗೊಳ್ಳೋದು ಬಿಟ್ಟು ಏನೇನೋ ಹರಟ್ತಿದೀಯಾ ಅಂತ ಕೇಳಿದ್ರಾ? ನೋಡಿ ಈ ವಿಷಯದಲ್ಲಿ ನೀವು ನನ್ನನ್ನು ದೂರುವ ಹಾಗೇ ಇಲ್ಲ. ಮೊದಲಿದ್ದ ಕಂಪನಿಯಲ್ಲಾದರೆ ತಪ್ಪದೇ ಧ್ವಝಾರೋಹಣ ಮಾಡುತ್ತಿದ್ದರು. ಕೂಡಿಕೊಂಡು ಹೋಗಲಿಕ್ಕೆ ಜೊತೆಗೊಂದಿಷ್ಟು ಜನ ಗೆಳೆಯರೂ ಇದ್ದರು. ಆದರೀಗ ನನ್ನ ಕಂಪನಿ ಬದಲಾಗಿ, ಇದ್ದ ಗೆಳೆಯರಲ್ಲಿ ಹಲವರಿಗೆ ಮದುವೆಯಾಗಿ, ಅವರೇ ತಮ್ಮ ಸ್ವತಂತ್ರ ಕಳೆದುಕೊಂಡು, ಹೆಂಡತಿ ಎನ್ನುವ ಎಲಿಜಬೆತ್ ರಾಣಿಯ ಆಳ್ವಿಕೆಯಲ್ಲಿ ಸಿಲುಕಿಕೊಂಡಿರುವಾಗ ನಾನಾದರೂ ಯಾರ ಜೊತೆಗೆ ಹೋಗಲಿ ಹೇಳಿ? ಅಷ್ಟಾಗಿಯೂ ಹಳೆಯ ಕಂಪನಿಗೆ ಹೋದರೆ ಒಂದು ಕಾಲದಲ್ಲಿ ನಾನೇ ಸಂಬಳದ ಚೆಕ್ ಬರೆದುಕೊಟ್ಟಿದ್ದ ಅದೇ ಸೆಕ್ಯುರಿಟಿಯವರಿಂದ 'ಒಳಗೆ ಪ್ರವೇಶವಿಲ್ಲ' ಅಂತನ್ನಿಸಿಕೊಳ್ಳಬೇಕಾಗೋದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ? ಅದಕ್ಕೇ ನಾನು ಸ್ವತಂತ್ರ ದಿನಾಚರಣೆಯನ್ನು ಕೋಣೆಯಲ್ಲೇ ಆಚರಿಸುತ್ತೇನೆ.
ನೋಡಿ.. ಮಾತು ಮತ್ತೆ ದಾರಿ ತಪ್ತಿದೆ. ನಾನೇನು ಹೇಳ್ತಿದ್ದೆ? ನೆನಪುಗಳ ಬಗ್ಗೆ ಅಲ್ವಾ? ಹೌದು.. ಎಂಇಎಸ್ ಶಾಲೆಯ ಮೆರವಣಿಗೆಯ ಸದ್ದು ಕೇಳಿದಾಗ ಮೊದಲು ನೆನಪಾದದ್ದೇ ಶಾಲೆ. ಅರಳಸುರಳಿ ಶಾಲೆ. ಸುಮಾರು ಏಳು ವರ್ಷಗಳ ಕಾಲ ಈ ದಿನದಂದು ಬಾವುಟ ಹಾರಿಸಿ, ಮರವಣಿಗೆ ಹೋಗಿ, ಘೋಷಣೆ ಕೂಗಿ, ಭಾಷಣ ಕೇಳಿ, ಕೊನೆಯಲ್ಲಿ ಚಾಕ್ಲೇಟು ತಿಂದುಕೊಂಡು ಮನೆಗೆ ಬರುತ್ತಿದ್ದ ಸ.ಹಿ.ಪ್ರಾ. ಶಾಲೆ!
ಆಗಸ್ಟ್ ಹದಿನೈದಕ್ಕಿನ್ನೂ ಹತ್ತು-ಹದಿನೈದು ದಿನ ಇದ್ದಾಗಲೇ ಪಿಟಿ ಮೇಷ್ಟರ ಸುಪರ್ದಿಯಲ್ಲಿ ಬ್ಯಾಂಡ್ಸೆಟ್ ನ ಅಭ್ಯಾಸ ಆರಂಭವಾಗುತ್ತಿತ್ತು. ಸಂಜೆ ನಾಲ್ಕರ ಆಟದ ಸಮಯದಲ್ಲಿ ಆರು ಹಾಗೂ ಏಳನೇ ತರಗತಿಯ ಐದಾರೇಳು ಹುಡುಗರನ್ನು ಆಯ್ದು ಪ್ರಾಕ್ಟೀಸ್ ಕೊಡಲು ಆರಂಭಿಸುತ್ತಿದ್ದರು. ಶಾಲೆಯೆದುರು ಅಂಗಳದಲ್ಲಿ ಅಥವಾ ವಿಶಾಲವಾಗಿದ್ದ ಹಾಲ್ ರೂಮಿನಲ್ಲಿ ಅವರೆಲ್ಲ ಪೆಪ್ಪೆಪ್ಪೆ... ಪೆರೆಪೆರೆಪೆ.. ಪೇಪೆಪ್ಪೆಪ್ಪೆ... ಡುಂಡುಂಡುಂ ಎಂದು ಬಾರಿಸುತ್ತಾ ಅಭ್ಯಾಸ ಮಾಡುವುದನ್ನು ನಾವು ದೂರದಿಂದ ನೋಡುತ್ತಿದ್ದೆವು. ಪ್ರಭಾತ್ ಪೇರಿಯಲ್ಲಿ ಹಾಡಬೇಕಾದ ಹುಡುಗಿಯರು ಚೀಟಿಗಳಲ್ಲಿ ಬರೆದಿಟ್ಟುಕೊಂಡ ದೇಶಭಕ್ತಿಗೀತೆಗಳನ್ನು ರಾಗವಾಗಿ ಅಭ್ಯಾಸ ಮಾಡುತ್ತಿರುವ ಪಕ್ಕದ ಕೋಣೆಯತ್ತಲೂ ಒಂದು ಕಣ್ಣಿಟ್ಟಿರುತ್ತಿದ್ದೆವು.
ನೋಡನೋಡುತ್ತಿದ್ದಂತೆಯೇ ಆಗಸ್ಟ್ ಹದಿನೈದು ಓಡಿಕೊಂಡು ಬರುತ್ತಿತ್ತು. ಬೆಳಗ್ಗೆ ಆರೂ ಮೊವ್ವತ್ತಕ್ಕೇ ಎದ್ದು ಸ್ನಾನ ಮಾಡಿ, ಕಡುನೀಲಿಯ ಚಡ್ಡಿಗೆ ಆಕಾಶನೀಲಿಯ ಅಂಗಿಯನ್ನು ಇನ್ ಶರ್ಟ್ ಮಾಡಿಕೊಂಡು, ಕತ್ತಿಗೆ ಅದೇ ಬಣ್ಣದ ಟೈ ಕಟ್ಟಿಕೊಂಡು ಹೊರಡುತ್ತಿದ್ದೆವು. ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ನನ್ನಂತೆಯೇ ತಪ್ಪುತಪ್ಪಾಗಿ ಇನ್ಶರ್ಟ್ ಮಾಡಿಕೊಂಡಿರುವ ಇನ್ನಷ್ಟು ಹುಡುಗರೂ, ಆಕಾಶನೀಲಿ ಅಂಗಿ, ಕಡುನೀಲಿಯ ಲಂಗ ತೊಟ್ಟು, ಮಡಿಚಿದ ಜಡೆಗೆ ಕೆಂಪು ರಿಬ್ಬನ್ ಕಟ್ಟಿಕೊಂಡು ಬರುತ್ತಿರುವ ಹುಡುಗಿಯರೂ ಜೊತೆಯಾಗುತ್ತಿದ್ದರು. ಇವತ್ತು ಗ್ರಾಮ ಪಂಚಾಯತಿಯಲ್ಲಿ ಚಾಕ್ಲೇಟ್ ಕೊಡ್ತಾರೋ ಇಲ್ಲಾ ಸೋಂಪಾಪುಡಿ ಕೊಡ್ತಾರೋ ಎಂಬ ಘನಗಂಭೀರ ವಿಷಯವನ್ನು ಚರ್ಚಿಸುತ್ತಾ ಎಲ್ಲರೂ ಶಾಲೆಯತ್ತ ನಡೆಯುತ್ತಿದ್ದೆವು.
ಹೇಳೋಕೆ ಮರೆತೆ. ಈ ಸ್ವತಂತ್ರ ದಿನ, ಗಾಂಧೀಜಯಂತಿ, ಗಣರಾಜ್ಯ ದಿನಗಳಂದು ಚಕ್ಕರ್ ಹಾಕಿದರೂ ಒಂದು ಪಕ್ಷ ಪಾರಾಗಬಹುದಿತ್ತೇನೋ, ಆದರೆ ಯೂನಿಫಾಂ ಹಾಕದೇ ಬಂದರೆ ಮಾತ್ರ ಪಾರಾಗುವುದಕ್ಕೆ ಸಾಧ್ಯವೇ ಇರಲಿಲ್ಲ. ಕಾರ್ಯಕ್ರಮವೆಲ್ಲ ಮುಗಿದ ಮೇಲೆ ಅಂತಹಾ 'ವಿಶೇಷ ವಿದ್ಯಾರ್ಥಿ'ಗಳನ್ನು ಸ್ವತಃ ಹೆಡ್ ಮೇಷ್ಟರೇ, ತಮ್ಮ ಕೈಯಾರೆ ವಿಚಾರಿಸಿಕೊಳ್ಳುತ್ತಿದ್ದರು. "ಸ್ವಾತಂತ್ರ ದಿನಾಚರಣೆಗೆ ಯೂನಿಫಾಂ ಹಾಕ್ಕೊಂಡ್ಬೇರ್ಕಂತ ಗೊತ್ತಾಗಲ್ವೇನೋ ನಾನ್ ಸೆನ್ಸ್ ಫೆಲೋ" ಎಂಬ ಅವರ ಅಬ್ಬರವನ್ನು ಅವರ ರೂಲ್ ದೊಣ್ಣೆ ಮುಂದುವರಿಸುತ್ತಿತ್ತು. ಹಾಗಾಗಿ ನಾವು ಏನೇ ತಪ್ಪಿಸಿದರೂ ಯೂನಿಫಾಂ ತಪ್ಪಿಸುತ್ತಿರಲಿಲ್ಲ.
ಸ್ವತಂತ್ರ ದಿನದ ಇನ್ನೊಂದು ಸಂಭ್ರಮವೆಂದರೆ ಬಾವುಟ ಕೊಳ್ಳುವುದು! ಎರೆಡು ರೂಪಾಯಿಯದು, ಐದು ರೂಪಾಯಿಯದು, ಹತ್ತರದ್ದು... ಹೀಗೆ ನಾನಾ ಬೆಲೆಯ, ಬೆಲೆಗೆ ತಕ್ಕ ಗಾತ್ರದ ಬಾವುಟಗಳು ವಾರದ ಕೆಳಗೇ ಊರಿನ ಎಲ್ಲ ಅಂಗಡಿಗಳಿಗೂ ಬಂದು, ಪಥಸಂಚಲನಕ್ಕೆ ಹೊರಟ ಸೈನಿಕರಂತೆ ಸಾಲಾಗಿ ನಿಂತಿರುತ್ತಿದ್ದವು. ಬರೀ ಬಾವುಟ ಮಾತ್ರವಲ್ಲ, ಜೇಬಿಗೆ ಪಿನ್ನು ಚುಚ್ಚಿ ಸಿಕ್ಕಿಸಿಕೊಳ್ಳುವ ಎರೆಡಿಂಚಿನ ಮಿನಿ ಸ್ಟಿಕ್ಕರ್ ಬಾವುಟ, ಮಣಿಕಟ್ಟಿಗೆ ಹಾಕಿಕೊಳ್ಳಬಹುದಾದ ಕೇಸರಿ-ಬಿಳಿ-ಹಸಿರಿನ ಬಟ್ಟೆಯ ಬ್ಯಾಂಡ್, ಮುಂದಲೆಗಷ್ಟೇ ಹಾಕಬಲ್ಲ ಅದೇ ಬಣ್ಣಗಳ ಕಾಗದದ ಟೋಪಿ... ಹೀಗೆ ಬಾವುಟಗಳು ನಾನಾ ವಿಧ, ರೂಪ, ಆಕಾರಗಳಲ್ಲಿ ಬಂದು ನಮ್ಮ ಕೈಸೇರಿ ಕುಳಿತುಕೊಳ್ಳುತ್ತಿದ್ದವು. ಒಂದು ಸಲವಂತೂ ಅಪ್ಪನಿಗೆ ಅದೇನನ್ನಿಸಿತ್ತೋ ಏನೋ, ಹೆಚ್ಚೂ ಕಡಿಮೆ ಶಾಲೆಯಲ್ಲಿ ಹಾರಿಸುವಷ್ಟೇ ದೊಡ್ಡದಾದ ಬಟ್ಟೆಯ ಬಾವುಟವೊಂದನ್ನು ಹೇಳದೇ ಕೇಳದೇ ತಂದುಬಿಟ್ಟಿದ್ದರು! ಅದಕ್ಕೆ ದೊಣ್ಣೆಯೊಂದನ್ನು ತಾವೇ ಕೆತ್ತಿ ಸಿಕ್ಕಿಸಿ ಮನೆಯೆದುರಿನ ಕಂಬದಲ್ಲಿ ಧ್ವಜಾರೋಹಣ ಮಾಡಿದ್ದರು. ಅದು ಹಾರುವಷ್ಟು ಜೋರು ಗಾಳಿ ಬೀಸುತ್ತಿರಲಿಲ್ಲವಾದರೂ ಅದರ ಗಾತ್ರ ನೋಡಿದ ನನಗೆ ಎಲ್ಲಿಲ್ಲದ ಖುಷಿಯಾಗಿತ್ತು. ಹೋತೂಬಂತೂ ಅದನ್ನೇ ನೋಡುತ್ತಾ, ಕೋಲು ತಿರುಗಿಸಿ ಅದರ ದಿಕ್ಕು ಬದಲಿಸುತ್ತಾ ಸಂಭ್ರಮಿಸಿದ್ದೆ. ಆದರೆ 'ಬಿಸಿಲಿಗೆ ಹಾಳಾಗತ್ತೆ' ಎಂದು ತೆಗೆದು ಕೋಣೆಯೊಳಗಿಟ್ಟ ಆ ಬಾವುಟ ಯಾವುದೋ ಮೂಲೆಗೆ ಸೇರಿದ್ದು ಮತ್ತೆ ಸಿಗಲೇ ಇಲ್ಲ.

**********

"ಕ್ಲಾಸ್ ವಿಶ್ರಾಮ್... ಕ್ಲಾಸ್ ಸಾವ್ಧಾನ್..."
ಕಾಶ್ಶನ್ ಕೊಡುವ ಹುಡುಗನ ಸದ್ದಿಗೆ ತಕ್ಕಂತೆ ಶಾಲೆಯ ಆವರಣದಲ್ಲಿ ಸಾಲಾಗಿ ನಿಂತ ನಾವೆಲ್ಲ ಕಾಲನ್ನು ಎತ್ತಿಡುತ್ತಿದ್ದೇವೆ. ನಾಲ್ಕು ಹೆಜ್ಜೆ ಮುಂದಕ್ಕೆ ನಡೆದು ಬಂದ ಎಸ್ಡೀಎಂಸಿ ಅಧ್ಯಕ್ಷರು ಧ್ವಝಕಂಬದ ಮುಂದೆ ನಿಂತು ಹೆಡ್ ಮೇಷ್ಟರು ಬಿಚ್ಚಿಕೊಟ್ಟ ಹಗ್ಗವನ್ನು ಎಳೆಯುತ್ತಾರೆ. ಕಂಬದ ತುದಿಯಲ್ಲಿ ಕಟ್ಟಲ್ಪಟ್ಟ ಧ್ವಜ ಫಟ್ಟನೆ ಬಿಚ್ಚಿಕೊಳ್ಳುತ್ತದೆ.
"ಸಲಾಮ್ಯಾಂ ದೋ"
ಎಲ್ಲರೂ ಸೆಲ್ಯೂಟ್ ಹೊಡೆದು ತಲೆಯೆತ್ತಿ ಧ್ವಜದತ್ತಲೇ ನೋಡುತ್ತಾ ಮೊದಲು ಜನಗಣಮನವನ್ನೂ, ನಂತರ ವಂದೇ ಮಾತರಂ ಅನ್ನೂ ಹಾಡುತ್ತೇವೆ. ನಂತರ ಪ್ರಭಾತ್ ಪೇರಿ. ಬ್ಯಾಂಡ್ಸೆಟ್ಟಿನ ಹುಡುಗರೂ, ದೇಶಭಕ್ತಿಗೀತೆಯ ಹುಡುಗಿಯರೂ ಹಾಗೂ ಟೀಚರ್ (ಮೇಡಂ)ಗಳೂ ಮುಂದೆ ನಡೆಯುತ್ತಾರೆ. ಅವರ ಹಿಂದೆ ಹುಡುಗರು ಹಾಗೂ ಹುಡಿಗಿಯರು ಎಂಬ ಎರೆಡು ಪ್ರತ್ಯೇಕ ಸಾಲುಗಳಾಗಿ ಕವಲೊಡೆದ ನಾವೆಲ್ಲ ಹೆಜ್ಜೆ ಹಾಕುತ್ತೇವೆ. ಮೊದಲು ನಮ್ಮ ಮೆರವಣಿಗೆ ಗ್ರಾಮಪಂಚಾಯತಿಯತ್ತ ನಡೆಯುತ್ತದೆ. ಆರಂಭದ ಹತ್ತು ನಿಮಿಷ 'ಬೋಲೋ ಭಾರತ್ ಮಾತಾಕೀ.... ಜೈ', 'ವಂದೇ ಮಾತರಂ...', 'ಶಿಸ್ತು... ಶಾಂತಿ, ಶಾಂತಿ... ಶಿಸ್ತು', 'ಇಂಕಿಲಾಬ್... ಜಿಂದಾಬಾದ್', 'ಮಹಾತ್ಮಾ ಗಾಂಧೀಕೀ... ಜೈ' ಎಂಬೆಲ್ಲ ಘೋಷಣೆಗಳೊಂದಿಗೆ ಗಂಭೀರವಾಗಿಯೇ ಸಾಗುವ ನಮ್ಮ ನಡಿಗೆ ನಮ್ಮನ್ನು ನಿಯಂತ್ರಿಸುತ್ತಿರುವ ಮೇಷ್ಟ್ರು ಆಚೆ ಹೋಗುತ್ತಿದ್ದಂತೆಯೇ ಮಂಗನಾಟಕ್ಕೆ ತಿರುಗುತ್ತದೆ. ನಾನು ಅವನಿಗಿಂತ ಮುಂದೆ ಹೋಗ್ಬೇಕು, ನಾನು ಇವನ ಹಿಂದೆ ನಿಲ್ಬೇಕು ಎಂದೆಲ್ಲ ಪಂಥ ಕಟ್ಟುತ್ತಾ, ಜಗಳಾಡುತ್ತಾ ಸಾಲು ಬಿಟ್ಟು ಓಡುತ್ತೇವೆ. ಅಷ್ಟರಲ್ಲಿ ರಸ್ತೆಯ ಪಕ್ಕದಲ್ಲಿ ತನ್ನಪಾಡಿಗೆ ಮಲಗಿದ್ದ ನಾಯಿಯತ್ತ ಯಾರೋ ಕಲ್ಲೆಸೆಯುತ್ತಾರೆ. ಒದೆ ತಿಂದ ಅದು ಕಂಯ್ಯಯ್ಯೋ ಎಂದು ಕೂಗುತ್ತಾ ದಿಕ್ಕಾಪಾಲಾಗಿ ಓಡುತ್ತದೆ. ಬೆಚ್ಚಿಬಿದ್ದ ಮೇಷ್ಟ್ರು 'ಏಯ್ ಯಾರೋ ಅವ್ನೂ' ಎನ್ನುತ್ತಾ ಓಡಿಬರುತ್ತಾರೆ. ನಾವೆಲ್ಲ ಕಿಸಕ್ಕನೆ ನಕ್ಕು ಸುಮ್ಮನಾಗುತ್ತೇವೆ.
ಹೀಗೆ ನಮ್ಮ ಮೆರವಣಿಗೆ ಗ್ರಾಮಪಂಚಾಯಿತಿ ಕಛೇರಿಯನ್ನು ತಲುಪುತ್ತದೆ. ಮೊದಲೇ ಕಿರಿದಾದ ಅದರ ಅಂಗಳದಲ್ಲಿ ನಿಲ್ಲುವಾಗ ನಮ್ಮೊಳಗೇ ವಾದ-ವಿವಾದಗಳೇರ್ಪಡುತ್ತವೆ. ಮಳೆ ಬಂದು ಜಾರುಬಂಡಿಯಾಗಿರುವ ಆ ನೆಲದಲ್ಲಿ ಸಾಲಾಗಿ ಜಮೆಯಾಗುವಾಗ ಏನಿಲ್ಲವೆಂದರೂ ಸಾಲಿಗೆ ಇಬ್ಬರಂತೆ ಧಸಾಲ್ ಧಸಾಲ್ಲನೆ ಜಾರಿಬೀಳುತ್ತಾರೆ. ಉಳಿದವರು ಕಿಸಕ್ಕನೆ ನಗುತ್ತಲೇ ಸಾಲಾಗಿ ನಿಲ್ಲುತ್ತಾರೆ. ಅಲ್ಲೂ ಧ್ವಝಾರೋಹಣವಾಗಿ ಎಲ್ಲರ ನಿರೀಕ್ಷೆಯಂತೆ ಸೋಂಪಾಪುಡಿ ಹಂಚಲಾಗುತ್ತದೆ. ತಿಂದ ಕೈಯನ್ನು ಚಡ್ಡಿಗೂ, ಲಂಗಕ್ಕೂ ಒರೆಸಿಕೊಳ್ಳುತ್ತಾ ಎಲ್ಲರೂ ಮೆರವಣಿಗೆ ಮುಂದುವರಿಸುತ್ತೇವೆ. ಸುಬ್ರಹ್ಮಣ್ಯ ಸರ್ಕಲ್ ಗೊಂದು ಸುತ್ತುಹಾಕಿದ ನಮ್ಮ ಪ್ರಭಾತ್ ಪೇರಿಯ ಮೆರವಣಿಗೆ ಮತ್ತೆ ಶಾಲೆಯಂಗಳಕ್ಕೆ ಬಂದು ಸಮಾಪ್ತಿಯಾಗುತ್ತದೆ. ಈ ದಿನದ ಅತಿ ಮುಖ್ಯ ಕಾರ್ಯಕ್ರಮ ಆರಂಭವಾಗುವುದೇ ಈಗ. ಅದರ ಹೆಸರು:
ಭಾಷಣದ ಕಾರ್ಯಕ್ರಮ!

**********

"ಮಾನ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅವರೇ, ಎಸ್ಡಿಎಂಸಿ ಸದಸ್ಯರಾದ ಇವರೇ, ಮುಖ್ಯ ಅತಿಥಿಗಳಾದ ಮತ್ತೊಬ್ಬರೇ..... ಹಾಗೂ ನನ್ನ ಪುಟಾಣಿ ಮಕ್ಕಳೇ"
ಹೀಗೆ ಶುರುವಾಗುತ್ತವೆ ಎಲ್ಲರ ಭಾಷಣಗಳು. ನಾನು ಶಾಲೆಯಲ್ಲಿದ್ದಾಗ ಅತ್ಯಂತ ಬೇಸರ ತರಿಸುತ್ತಿದ್ದ ಭಾಗವೆಂದರೆ ಅದು ಈ ಭಾಷಣದ್ದು. ವಿಶಾಲವಾದ ಹಾಲ್ ರೂಂ ಕೊಠಡಿಯ ನೆಲದ ಮೇಲೆ ನಮ್ಮನ್ನೆಲ್ಲ "ಶ್.. ಮಾತಾಡಬಾರ್ದು. ಅಲ್ಲಾಡಬಾರ್ದು..." ಎಂಬೆಲ್ಲ ಬೆದರಿಕೆಗಳ ಜೊತೆಗೆ ಸಾಲಾಗಿ ಕೂರಿಸಿ, ಎದುರಿಗಿನ ವೇದಿಕೆಯೇರುತ್ತಿದ್ದ ಮೇಷ್ಟರು ಹಾಗೂ ಗಣ್ಯರೆಲ್ಲ ಸಭಾಕಾರ್ಯಕ್ರಮವನ್ನು ಆರಂಭಿಸುತ್ತಿದ್ದರು. ಸಭಾಕಾರ್ಯಕ್ರಮವೆಂದರೆ ಮತ್ತೇನಲ್ಲ. ವೇದಿಕೆಯ ಈ ತುದಿಯಿಂದ ಆ ತುದಿಯ ತನಕ ಖುರ್ಚಿಯಲ್ಲಿ ಸಾಲಾಗಿ ಕುಳಿತವರೆಲ್ಲ ನಿಮಿಷಗಟ್ಟಲೆ ಮಾಡುವ ಭಾಷಣ!
ನುರಿತ ಭಾಷಣಕಾರರಾದ ಪ್ರತಿಯೊಬ್ಬರೂ ಏನಿಲ್ಲವೆಂದರೂ ಇಪ್ಪತ್ತರಿಂದ ಮೊವ್ವತ್ತು ನಿಮಿಷ ಮಾತನಾಡುತ್ತಿದ್ದರು. ತಪ್ಪು ತಿಳೀಬೇಡಿ. ಭಾಷಣ ಮಾಡುವುದರ ಬಗ್ಗೆ ಈಗ ನನಗೆ ಯಾವ ದೂರೂ ಇಲ್ಲ. ಆದರೆ ಆಗಿನ ವಯಸ್ಸಿಗೆ ಹಾಗೆ ಅಲ್ಲಾಡದೆ, ಏನೂ ಕಿತಾಪತಿ ಮಾಡದೇ, ಪಕ್ಕದಲ್ಲಿರುವವನನ್ನು ಗೋಳು ಹೊಯ್ಯದೇ, ಎರೆಡು-ಎರೆಡೂವರೆ ಗಂಟೆ ಸುಮ್ಮನೆ ಕೂರುವುದೆಂದರೆ ಎಂತಹಾ ಕಷ್ಟ ಎಂಬುದನ್ನು ನೀವೇ ಯೋಚಿಸಿನೋಡಿ. ನಾವೂ ಅಷ್ಟೇ. ಮೊದಲ ಒಂದೋ ಎರೆಡೋ ಭಾಷಣವನ್ನು ಸುಮ್ಮನೆ ಆಲಿಸುತ್ತಿದ್ದೆವು. ಆದರೆ ಮೇಷ್ಟರು ಏನೇ ಬೆದರಕೆ ಹಾಕಿದರೂ ನಮ್ಮೀ ತಾಳ್ಮೆ ಇಪ್ಪತ್ತು-ಮೊವ್ವತ್ತು ನಿಮಿಷಕ್ಕಿಂತ ಹೆಚ್ಚಿಗೆ ನಿಲ್ಲುತ್ತಿರಲಿಲ್ಲ. ಕುಳಿತಲ್ಲೇ ಪಕ್ಕದವನ ಜೊತೆ ಯಾವುದೋ ಬಾನ್ಗಡಿ ಆರಂಭಿಸುತ್ತಿದ್ದೆವು.
ಹೀಗೆ ಕೈಯಲ್ಲಿ ಯಾವುದೇ ಸಾಮಗ್ರಿಯಿಲ್ಲದೆ, ಸಭೆಯಲ್ಲಿ ಗಂಭೀರವಾಗಿ ಕುಳಿತಿರುವಾಗ ಬೇಜಾರು ಕಳೆಯಲಿಕ್ಕೆ ನಾವು ಮಾಡುತ್ತಿದ್ದ ಚಟುವಟಿಕೆಗಳದೇ ಒಂಥರಾ ಗಮ್ಮತ್ತು. ಎದುರೆಲ್ಲೋ ಕುಳಿತವನಿಗೆ ಸುಮ್ಮನೆ ಚಿವುಟುವುದು, ಕಾಗದ ಚಿಕ್ಕ ಉಂಡೆ ಕಟ್ಟಿ ಯಾರದೋ ಮೇಲೆ ಎಸೆಯುವುದು, ಎಂಥದೋ ಕಸವನ್ನು ತೆಗೆದು ಎದುರಿಗಿನವನ ಅಂಗಿಯೊಳಗೆ ಹಾಕುವುದು, ಕೈಯನ್ನು ಗಸಗಸನೆ ಉಜ್ಜಿದಾಗ ಬರುವ ಬೆಂಕಿಕಡ್ಡಿಯ ವಾಸನೆಯನ್ನು ಮೂಸುವುದು, ಎದುರಿಗೆ ಮೇಷ್ಟರುಗಳ ದಂಡೇ ಇದೆಯೆನ್ನುವುದನ್ನೂ ಮರೆತು ದೊಡ್ಡ ದನಿಯಲ್ಲಿ ಮಾತನಾಡತೊಡಗುವುದು... ಇಷ್ಟೇ ಅಲ್ಲ, ಇವೆಲ್ಲವನ್ನೂ ಮೀರಿದ ನಿಶ್ಯಬ್ದ ಕೀಟಲೆಗಳನ್ನು ಮಾಡುವ ಅಸಾಸುರನೊಬ್ಬ ನನ್ನ ಗೆಳೆಯರ ಗುಂಪಿನಲ್ಲಿದ್ದ. ಅವನ ದೇಹದ ಅದ್ಯಾವ ಕ್ರೋಮೋಜೋಮ್ ನಲ್ಲಿ ವ್ಯತ್ಯಾಸವಾಗಿತ್ತೋ ಗೊತ್ತಿಲ್ಲ, ಕುಳಿತಲ್ಲೇ ಮುಖವನ್ನು ಹೇಗ್ಹೇಗೋ ಮಾಡಿ, ಬಾಯೊಳಗೆ ನಾಲಿಗೆಯನ್ನು ಹೇಗ್ಹೇಗೋ ಆಡಿಸುತ್ತಿದ್ದ. ಥಟ್ಟನೆ ಅವನ ಕಣ್ಣಿನಿಂದ ನೀರು ಜಾರುತ್ತಿತ್ತು! ಹಾಗೆ ಸುರಿದ ನೀರನ್ನು ಸೆಲೋ ಗ್ರಿಪ್ಪರ್ ಪೆನ್ ನ ಕ್ಯಾಪ್ನಲ್ಲಿ ಶೇಖರಿಸುವುದೇ ನಮ್ಮ ಆಟವಾಗಿತ್ತು. ಬಾಯಲ್ಲಿ ಹೆಹೆಹೆ ಎಂದು ನಗುತ್ತಾ, ಕಣ್ಣಲ್ಲಿ ಧಾರಾಕಾರವಾಗಿ ನೀರು ಸುರಿಸುತ್ತಾ ವಿಚಿತ್ರವಾಗಿ ಕಾಣುತ್ತಿದ್ದ ಅವನಿಗೆ ತನ್ನ ಕಣ್ಣೀರಿನಿಂದ ಒಂದು ಕ್ಯಾಪ್ ಭರ್ತಿ ಮಾಡುವುದೇ ಗುರಿಯಾಗಿರುತ್ತಿತ್ತು‌. ಪಕ್ಕದಲ್ಲಿ ಕುಳಿತ ನಾವೆಲ್ಲ ಪಿಸುಮಾತುಗಳ ಮೂಲಕವೇ ಅವನಿಗೆ ಬಕಾಪ್ ಹೇಳಿ ಮತ್ತಷ್ಟು ಕಣ್ಣೀರು ಸುರಿಸಲಿಕ್ಕೆ ಪ್ರೋತ್ಸಾಹಿಸುತ್ತಿದ್ದೆವು. ಸಭೆಯಲ್ಲಿ ಕುಳಿತು ಇಂತಹಾ ಕಪಿಚೇಷ್ಟೆ ಮಾಡಿದ್ದಕ್ಕೆ ನಮಗೆಲ್ಲ ಮಾರನೇ ದಿನ ಪ್ರತ್ಯೇಕ ಬಹುಮಾನಗಳು ಕಾದಿರುತ್ತಿದ್ದವಾದರೂ ಅದೆಲ್ಲ ನಾಳೆಯ ವಿಷಯವಾದ್ದರಿಂದ ಯಾರೂ ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅಧ್ಯಕ್ಷರ ಭಾಷಣ ಮುಗಿದು ವಂದನಾರ್ಪಣೆ ಆರಂಭವಾಗುತ್ತಿದ್ದಂತೆಯೇ ಎಲ್ಲರಲ್ಲೂ ಹೊಸ ಉತ್ಸಾಹವೊಂದು ಸಂಚಾರವಾಗುತ್ತಿತ್ತು. ಇಷ್ಟು ಹೊತ್ತು ಪ್ರತಿಯೊಂದು ಭಾಷಣ ಮುಗಿದಾಗ ಮೂಕಿ ಚಿತ್ರದ ನಟರಂತೆ ಕೈತಟ್ಟುವ ನಟನೆ ಮಾಡುತ್ತಿದ್ದವರೆಲ್ಲ ಈಗ ಆದ್ಯಕ್ಷರ ಭಾಷಣ ಹಾಗೂ ವಂದನಾರ್ಪಣೆಗಳಿಗೆ, ಯಾರು ಯಾರಿಗೆ ವಂದನೆಗಳನ್ನು ಸಲ್ಲಿಸಿದರು ಎಂಬುದನ್ನೂ ಕೇಳಿಸಿಕೊಳ್ಳದೆ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದೆವು. ಪಕ್ಕದಲ್ಲೇ ಪ್ಲಾಸ್ಟಿಕ್ ಕವರ್ ಗಳೊಳಗೆ ಕುಳಿತಿರುತ್ತಿದ್ದ ಚಾಕ್ಲೇಟುಗಳು ನಮ್ಮೀ ಚಪ್ಪಾಳೆಗಳಿಂದ ಉತ್ಸಾಹಗೊಂಡು ಮತ್ತಷ್ಟು ಉಲ್ಲಾಸದಿಂದ ನಮ್ಮ ಕೈ ಸೇರಲಿಕ್ಕೆ ತಯಾರಾಗುತ್ತಿದ್ದವು.
-ವಿನಾಯಕ ಅರಳಸುರಳಿ.

ಪ್ರೀತಿಸಿ ಸೋಲುವ ದೇವಯಾನಿಯರು...


ಏಕೋ ದೇವಯಾನಿ ಬಹಳ ಕಾಡುತ್ತಾಳೆ.
"ನೀವು ನನ್ನ ಬುದ್ಧಿಯಾದರೆ ಅವನು ನನ್ನ ಹೃದಯ!"
"ನಿನಗೆ ನಾನು ಬೇಕೋ, ಇಲ್ಲಾ ಆ ಕಚ ಬೇಕೋ?" ಎಂಬ, ಜಗತ್ತಿನ ಬಹುತೇಕ ಹೆಣ್ಣು ಹೆತ್ತ ತಂದೆಯರು ಕೇಳುವ ಪ್ರೆಶ್ನೆಯನ್ನೇ ಕೇಳುವ ಶುಕ್ರಾಚಾರ್ಯರಿಗೆ ಮಗಳು ದೇವಯಾನಿ ಕೊಡುವ ಉತ್ತರವಿದು. ರಾಕ್ಷಸರ ಗುರುಗಳಾದ ಶುಕ್ರಾಚಾರ್ಯರಿಗೆ ಸತ್ತವರನ್ನು ಮತ್ತೆ ಬದುಕಿಸುವ ಮೃತ ಸಂಜೀವಿನಿ ವಿದ್ಯೆ ತಿಳಿದಿರುತ್ತದೆ. ಅದನ್ನು ಕಲಿಯಲೋಸುಗ ದೇವಲೋಕದಿಂದ ಇಳಿದುಬರುವವನೇ ದೇವಗುರು ಬೃಹಸ್ಪತಿಗಳ ಮಗನಾದ ಕಚ. ಅವನ ಮುಖ್ಯ ಉದ್ದೇಶವೇ ಅದಾದರೂ ಅದಕ್ಕಾಗಿ ಅವನು ಗೆಲ್ಲಬೇಕಾದುದು ಶುಕ್ರಾಚಾರ್ಯರನ್ನ. ಲೋಕಕಲ್ಯಾಣಾರ್ಥವಾದ ಆ ತಂತ್ರವೇನೋ ಸರಿಯಾದ್ದೇ. ಆದರೆ ಆ ಮಹತ್ಕಾರ್ಯಕ್ಕೆ ದಾಳವಾಗಿ ಬಳಕೆಯಾಗುವವಳು ಮಾತ್ರ ಮುಗ್ಧ ಪ್ರೀತಿಯ ದೇವಯಾನಿ!
ದೇವಯಾನಿ ಪ್ರೀತಿಸುತ್ತಾಳೆ. ಋಷಿಪುತ್ರನಾದ ಸ್ಪುರದ್ರೂಪಿ ಕಚನನನ್ನು ಮೊದಲ ನೋಟದಿಂದಲೇ ಇನ್ನಿಲ್ಲದಂತೆ ಆರಾಧಿಸುತ್ತಾಳೆ. ಮತ್ತೆ ಮತ್ತೆ ರಾಕ್ಷಸರು ಅವನನ್ನು ಕೊಂದು ಬಿಸಾಡಿದಾಗಲೂ ಭೋರಿಟ್ಟು ಅಳುತ್ತಾಳೆ. "ಅವನನ್ನು ಬದುಕಿಸಿಕೊಡು" ಎಂದು ಶುಕ್ರಾಚಾರ್ಯರ ಬಳಿ ಮಗುವಿನಂತೆ ಹಠ ಹಿಡಿಯುತ್ತಾಳೆ. ಪ್ರೀತಿಯ ಮಗಳ ಕಣ್ಣೀರನ್ನು ನೋಡಲಾಗದ ತಂದೆ ತಮಗೆ ಮಾತ್ರ ತಿಳಿದ ಮೃತ ಸಂಜೀವಿನಿ ವಿದ್ಯೆಯನ್ನು ಬಳಸಿ ಕಚನನ್ನು ಬದುಕಿಸುತ್ತಾರೆ. ಮೊದಲ ಬಾರಿ ಅಸುರರು ಅವನನ್ನು ಕತ್ತರಿಸಿ ತೋಳಗಳಿಗೆಸೆದಾಗ, ಎರೆಡನೇ ಬಾರಿ ಸಮುದ್ರಕ್ಕೆಸೆದಾಗ ಅವರ ಕೆಲಸ ಸುಲಭವಾಗಿಯೇ ಆಗುತ್ತದೆ. ಆದರೆ ಮೂರನೇ ಬಾರಿ ಮತ್ತೂ ತಲೆ ಓಡಿಸುವ ರಾಕ್ಷಸರು ಕಚನನ್ನು ಕೊಂದು, ಅವನ ದೇಹವನ್ನು ಸುಟ್ಟು ಬೂದಿಮಾಡಿ ಮಧ್ಯದಲ್ಲಿ ಹಾಕಿ ಶುಕ್ರಾಚಾರ್ಯರಿಗೇ ಕುಡಿಸುತ್ತಾರೆ. ಹೊರಹೋದ ಕಚ ಸಂಜೆಯಾದಾಗಲೂ ಮರಳಿ ಬಾರದಿದ್ದಾಗ ದೇವಯಾನಿ ಮತ್ತೆ ಅಳತೊಡಗುತ್ತಾಳೆ. ಮತ್ತೆ ತಂದೆಯೆದುರು ಕಚನನ್ನು ಹುಡುಕಿ ತರುವಂತೆ ಭೋರಿಡುತ್ತಾಳೆ. ಈ ಬಾರಿ ಶುಕ್ರಾಚಾರ್ಯರು ಕೂಗಿ ಕರೆದಾಗ ಕಚ ಅವರ ಹೊಟ್ಟೆಯಿಂದಲೇ ಓಗೊಡುತ್ತಾನೆ. ಕೊನೆಗೆ ಹೊಟ್ಟೆಯಲ್ಲಿರುವಂತೆಯೇ ಅವನಿಗೆ ಮೃತ ಸಂಜೀವಿನಿ ಮಂತ್ರ ಕಲಿಸಿ, ನಂತರ ಅವನಿಗೆ ಜೀವನೀಡುತ್ತಾರೆ. ಅವರ ಹೊಟ್ಟೆ ಸೀಳಿಕೊಂಡು ಹೊರಬರುವ ಕಚ ಅದೇ ವಿದ್ಯೆಯನ್ನು ಬಳಸಿ ಅವರಿಗೆ ಮರುಜೀವ ಕೊಡುತ್ತಾನೆ.
ಕಥೆಯ ಕಾಡುವ ಭಾಗ ಶುರುವಾಗುವುದೇ ಇಲ್ಲಿ. ಬಂದ ಕೆಲಸ ಪೂರೈಸಿಕೊಂಡ ಕಚ ಹೊರಟುನಿಲ್ಲುತ್ತಾನೆ‌. ಅಷ್ಟು ಸುಲಭದಲ್ಲಿ ಬಾರದ ಲೋಕಕ್ಕೆ ಹೊರಟುನಿಂತ ಅವನ ಬಳಿ ದೇವಯಾನಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ. ನೀನೆಂದರೆ ತನಗೆ ಅದೆಷ್ಟು ಪ್ರೀತಿಯೆಂಬುದನ್ನು ಪರಿಪರಿಯಾಗಿ ವರ್ಣಿಸುತ್ತಾಳೆ. ತಂದೆಯ ಬಳಿ ಮಾಡಿದಂತೆಯೇ ಹಠಮಾಡುತ್ತಾಳೆ. ನೀನಿಲ್ಲದೆ ಬದುಕಲಾರೆ ಎನ್ನುತ್ತಾಳೆ. ಕಣ್ಣೀರಾಗುತ್ತಾಳೆ. ಬಿಟ್ಟು ಹೋಗಬೇಡ ಎಂದು ಗೋಗರೆಯುತ್ತಾಳೆ. ಆದರೆ ಅಚಲನಾದ ಕಚ ಯಾವುದಕ್ಕೂ ಕರಗುವುದಿಲ್ಲ. ಹತಾಶಳಾದ ದೇವಯಾನಿ "ಮೃತ ಸಂಜೀವಿನಿ ನಿನಗೆ ಉಪಯೋಗಕ್ಕೆ ಬಾರದೇ ಹೋಗಲಿ" ಎಂದು ಶಪಿಸುತ್ತಾಳೆ. ಆಗಲಾದರೂ ಅವನು ತನ್ನನ್ನು ಒಪ್ಪುವನೇನೋ ಎಂದು ಅವನತ್ತ ಆಸೆಯಿಂದ ನೋಡುತ್ತಾಳೆ. ಆದರೆ ಅವಳಿಗೇ ತಿರುಗಿ ಶಪಿಸುವ ಕಚ ತಿರುಗಿಯೂ ನೋಡದೆ, ಬದುಕೇ ನೀನೆಂದು ಪ್ರೀತಿಸಿದ ದೇವಯಾನಿಯ ಪಾಲಿಗೆ ಕಾಡುವ ನೋವನ್ನಷ್ಟೇ ಉಳಿಸಿ ಹೊರಟೇಹೋಗುತ್ತಾನೆ.
ಹಾಗೆ ನೋಡಿದರೆ ಕಚನನ್ನು ಪ್ರೀತಿಸಿದ ದೇವಯಾನಿ ನೊಂದಿದ್ದೇ ಹೆಚ್ಚು. ಪ್ರತೀ ಬಾರಿಯೂ ಅವನು ಮನೆಯಿಂದಾಚೆ ಹೋಗುವಾಗ ಆತಂಕದಿಂದಲೇ ಕಳಿಸಿಕೊಡುತ್ತಾಳೆ. ಹೊರ ಹೋದ ಅವನು ಕತ್ತಲಾದರೂ ಮರಳಿ ಬಾರದಾದಾಗ, ಕಾಡೆಲ್ಲ ಅಲೆದು ಹುಡುಕಿದರೂ ಅವನು ಕಾಣದೇ ಹೋದಾಗ, ಅವನನ್ನು ಬದುಕಿಸಲು ತಂದೆ ಹಿಂದೆಮುಂದೆ ಯೋಚಿಸಿದಾಗ.... ದೇವಯಾನಿ ಅತ್ತೇ ಅಳುತ್ತಾಳೆ. ಪ್ರೀತಿಸದ ಕೆಲಕ್ಷಣಗಳ ಹೊರತಾಗಿ ಪ್ರೇಮವೆಂಬುದು ಅವಳ ಬದುಕಿನಲ್ಲಿ ಸಂಭ್ರಮವನ್ನು ಚಿಗುರಿಸುವುದೇ ಇಲ್ಲ. ಆದರೂ ಸಹಾ ದೇವಯಾನಿ ಪ್ರೀತಿಸುತ್ತಲೇ ಹೋಗುತ್ತಾಳೆ. ಇಡೀ ಅಸುರ ಜಗತ್ತೇ ಅವನನ್ನು ತನ್ನಿಂದ ದೂರ ಮಾಡಲು ಹವಣಿಸುವಾಗಲೂ ಎದೆಯೊಳಗೆ ಕನಸುಗಳನ್ನಿಟ್ಟುಕೊಂಡು ಕನವರಿಸುತ್ತಾಳೆ. ಪ್ರತೀ ಬಾರಿ ಅವನು ನಿರ್ಜೀವವಾದಾಗಲೂ ಅವನನ್ನು ಬದುಕಿಸಿಕೊಳ್ಳುತ್ತಾಳೆ. ಹಾಗೆ ತಾನು ಬದುಕಿಸಿಕೊಂಡ ಹುಡುಗ ತನಗೇ ಸಿಗುತ್ತಾನೆಂದು ಸಂಭ್ರಮಿಸುತ್ತಾಳೆ. ಅವನಿಗಾಗಿ ಸುರಿಸುವ ಒಂದೊಂದು ಕಣ್ಣೀರ ಹನಿಯೂ ಮುಂದೊಂದು ದಿನ ಸಂಭ್ರಮದ ಮುತ್ತಾಗುತ್ತದೆಂದು ಭ್ರಮಿಸುತ್ತಾಳೆ.
ಕೊನೆಗೆ ಮಾಯದ ನೆನಪುಗಳ ಹೃದಯದಲ್ಲೇ ಮರೆಮಾಡಿಕೊಂಡು, ಕಚನ ಶಾಪದಂತೆ ಋಷಿಪುತ್ರನಲ್ಲದ, ಕ್ಷತ್ರಿಯನಾದ ಯಯಾತಿಯನ್ನು ಮದುವೆಯಾಗುತ್ತಾಳೆ.
************
ದೇವಯಾನಿ.. ದೇವಲೋಕದಂದಿಳಿದುಬಂದ ತನ್ನನ್ನು, ಹಿಂದೆಂದೋ ಬೇರಾಗಿದ್ದ ತನ್ನ ಬದುಕಿನ ಭಾಗವೇ ಮರಳಿ ಬಂತೇನೋ ಎಂಬಂತೆ ನಲ್ಮೆಯಿಂದ ಬರಮಾಡಿಕೊಂಡ ದೇವಯಾನಿ.. ಮೊಟ್ಟ ಮೊದಲ ನೋಟದಲ್ಲೇ ತನ್ನೊಡನೆ ಬದುಕಿನ ಕಟ್ಟ ಕಡೆಯ ಹೆಜ್ಜೆಯನ್ನು ನಡೆಯಬೇಕೆಂದು ನಿರ್ಧರಿಸಿ ಸಾವಿರ ಕನಸುಕಂಡ ದೇವಯಾನಿ.. ಪ್ರತಿದಿನ ತಾನು ಮನೆಯಿಂದ ಹೊರಡುವಾಗ ಭಾರ ಹೃದಯದಿಂದ ಬೀಳ್ಕೊಡುತ್ತಿದ್ದ ಹೂವಿನಂತಹಾ ದೇವಯಾನಿ.. ಸಂಜೆ ಮರಳುವ ಹೊತ್ತಿಗೆ ಮೈಯೆಲ್ಲ ಹೃದಯವಾಗಿ ಕಾದು ನಿಂತಿರುತ್ತಿದ್ದ ಪ್ರೇಮ ಮೂರ್ತಿ ದೇವಯಾನಿ.. ಅಸುರರ ಕೈಲಿ ದಾರುಣವಾಗಿ ಹತ್ಯೆಯಾದ ತನ್ನನ್ನು ಮತ್ತೆ ಮತ್ತೆ ಬದುಕಿಸಿಕೊಂಡ ದೇವಯಾನಿ.. ಹೆತ್ತ ತಂದೆಯ ಪ್ರಾಣವನ್ನೂ ಪಣಕ್ಕಿಟ್ಟು ತಾನೆಂಬ ಮೋಸಗಾರನನ್ನು ಉಳಿಸಿಕೊಂಡ ದೇವಯಾನಿ.
ಹಿಡಿ ಪ್ರೀತಿಯೊಂದಲ್ಲದೆ ಮತ್ತಾವ ಸೌಭಾಗ್ಯವನ್ನೂ ಬಯಸದೆ ತನ್ನನ್ನು ಇಷ್ಟೆಲ್ಲ ಆರಾಧಿಸಿದ ದೇವಯಾನಿ..
ಯಾಕೆ ಕಚನ ದೃಷ್ಟಿಗೆ ದೇವಯಾನಿ ಹೀಗೆ ಕಾಣಲಿಲ್ಲ? ಯಾಕೆ ಕೊನೆಗೂ ಅವನಿಂದ ಅವಳನ್ನು ಪ್ರೀತಿಸಲಾಗಲೇ ಇಲ್ಲ? ತನ್ನನ್ನು ಇನ್ನಿಲ್ಲದಂತೆ ಪ್ರೀತಿಸಿದ ಜೀವ ಎದುರಲ್ಲಿ ನಿಂತು ಕೈಚಾಚಿದಾಗಲೂ ಏಕವನು ಕರಗಲಿಲ್ಲ? ಒಂದು ಹೃದಯದಲ್ಲಿ ಅಷ್ಟೊಂದು ಉತ್ಕಟವಾದ ಜ್ಯೋತಿಯನ್ನುರಿಸಿದ ಪ್ರೀತಿ ಅದೇಕೆ ಇನ್ನೊಂದು ಮನದಲ್ಲಿ ಸಣ್ಣ ಕಿಡಿಯನ್ನೂ ಹಚ್ಚದೇ ನಂದಿ ಹೋಯಿತು?
ಪ್ರೆಶ್ನೆಗಳು ಮೃತ ಕಚನಂತೆಯೇ ಎದ್ದೆದ್ದು ಬಂದು ಕಾಡುತ್ತವೆ.
ಕಚನ ದೃಷ್ಟಿ ಅಚಲವಾಗಿತ್ತು. ಅವನಿಗೆ ಸಾಧ್ಯತೆ-ಅಸಾಧ್ಯತೆಗಳ ಅರಿವಿತ್ತು. ಕರ್ತವ್ಯ ಪ್ರಜ್ಞೆ ಸ್ಪಷ್ಟವಾಗಿತ್ತು. ಕಾರ್ಯವನ್ನು ಈಡೇರಿಸಿಕೊಳ್ಳುವ ಜಾಣತನವಿತ್ತು. ಆದರೆ ದೇವಯಾನಿ? ಅವಳು ಹಾಗಲ್ಲ. ಅವಳಿಗೆ ತಿಳಿದಿದ್ದುದು ಒಂದೇ.. ಪ್ರೀತಿಸುವುದು. ಸರಿ-ತಪ್ಪು, ಸಾಧ್ಯತೆ-ಅಸಾಧ್ಯತೆ, ದೈವಿಕತೆ-ರಾಕ್ಷಸತೆ, ನಿಜ-ಮೋಸ.. ಇವೆಲ್ಲವುಗಳಾಚೆಗೆ ನಿರ್ಮಲ ಹೃದಯದಿಂದ ಪ್ರೀತಿಸುವ ಮುಗ್ಧತೆಯೊಂದೇ ಅವಳಲ್ಲಿದ್ದುದು. ಬಹುಷಃ ಮುಗ್ಧವಾದ ಹೃದಯವೊಂದಲ್ಲದೆ ಮತ್ತಾರಿಗೂ ಜಗತ್ತಿನಲ್ಲಿ ಇಷ್ಟೊಂದು ಉತ್ಕಟವಾಗಿ ಪ್ರೀತಿಸಲಿಕ್ಕೆ ಸಾಧ್ಯವಿಲ್ಲವೇನೋ ಎಂಬಂತೆ ಪ್ರೀತಿಸಿದ ದೇವಯಾನಿ ಪ್ರೀತಿಸಿ ಮೋಸಹೋದ ಜಗತ್ತಿನೆಲ್ಲ ಮನಸ್ಸುಗಳ ಪ್ರತೀಕವಾಗಿ ಉಳಿದುಹೋದಳು.
************
ದೇವಯಾನಿ ಇಂದಿಗೂ ಜೀವಂತವಾಗಿದ್ದಾಳೆ. ಆಧುನಿಕ ಕಲಿಯುಗುದಲ್ಲೂ ತನ್ನಂತೆಯೇ ಮೋಸ ಹೋಗುವ ಮುಗ್ಧ ಹೃದಯಗಳ ನಿಶ್ಯಬ್ಧ ಬಿಕ್ಕುಗಳಲ್ಲಿ ಉಸಿರಾಡಿಕೊಂಡಿದ್ದಾಳೆ. ಅವನ ರೂಪಕ್ಕೋ, ಜಾಣತನಕ್ಕೋ, ಮಾತಿನಲ್ಲಿನ ಸರಸಕ್ಕೋ, ಎಂದೆಂದೂ ಕೈ ಬಿಡನೆಂಬ ದಿವ್ಯ ನಂಬಿಕೆಗೋ ಸೋತು ಕರಗಿದ, ತನ್ನಂಥವರೇ ಆದ ಕೋಟ್ಯಾಂತರ ದೇವಯಾನಿಯರಲ್ಲಿ ಹಂಚಿಹೋಗಿದ್ದಾಳೆ. ಬಿಟ್ಟು ಹೋಗಲೆಂದೇ ಬಳಿಬರುವ ಕಚನಿಂದ ಘಾಸಿಗೊಳ್ಳಲೆಂದೇ ಅವನನ್ನು ಅಪಾರವಾಗಿ ಪ್ರೀತಿಸಿಕೊಂಡಿದ್ದಾಳೆ. ಆ ಋಷಿಪುತ್ರನಂತೆ ಯಾವ ಮಹದುದ್ದೇಶವಿಲ್ಲದೆಯೂ ಸಹಾ ಅವನಿಗಿಂತ ಕಠೋರವಾಗಿ ತಿರಸ್ಕರಿಸಿ ಹೋಗುವನಿಗೆಂದೇ ಜಾರಲಿರುವ ಕಂಬನಿಗಳ ಕಾದಿಟ್ಟುಕೊಂಡಿದ್ದಾಳೆ.
ಕೊನೆಗೆ ಅವನದೇ ಶಾಪದಂತೆ, ತನಗೆ ಜೊತೆಯಾಗುವ ಯಾವುದೋ ಯಯಾತಿಯಲ್ಲಿ ಮತ್ತೆ ಮತ್ತೆ ಕರಗಿ ಅಮರಳಾಗುತ್ತಿದ್ದಾಳೆ.
(ಮಾನಸದಲ್ಲಿ ಪ್ರಕಟಿತ)
-ವಿನಾಯಕ ಅರಳಸುರಳಿ.

ನಮ್ಮೊಳಗೇ ಬೆಳೆವ ಓದು...





ಸಾಹಿತ್ಯದ ಓದು ತಾಳ್ಮೆ ಹಾಗೂ ಏಕಾಗ್ರತೆಯನ್ನು ಬೇಡುವ ಕ್ರಿಯೆ. ಇನ್ನೊಂದರ್ಥದಲ್ಲಿ ಅದು ತಾಳ್ಮೆ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುವ ಪ್ರಕ್ರಿಯೆ. ದೃಶ್ಯ ಮಾಧ್ಯಮಕ್ಕೆ ತನ್ನದೇ ಆದ ವ್ಯಾಪ್ತಿಯಿದೆ. ಆದರೆ ಓದು ಹಾಗಲ್ಲ. ಅದು ಕಲ್ಪನಾವಿಲಾಸವನ್ನು ಅರಳಿಸುತ್ತದೆ. ಅಪರಿಮಿತ ವ್ಯಾಪ್ತಿಯಲ್ಲಿ ಅರಳಿನಿಲ್ಲುತ್ತದೆ. ಉದಾಹರಣೆಗೆ ತೇಜಸ್ವಿಯವರ ಕಾಡಿನ ಕಥೆಗಳನ್ನು ಓದುವಾಗ ಅರಣ್ಯವೆಂಬುದು ಪ್ರತಿಯೊಬ್ಬ ಓದುಗನ ಮನದಲ್ಲೂ ಒಂದೊಂದು ರೂಪದಲ್ಲಿ, ಬೃಹತ್ ವ್ಯಾಪ್ತಿಯಲ್ಲಿ ಹಬ್ಬಿನಿಲ್ಲುತ್ತದೆ. ಏಕೆಂದರೆ ಅದರ ನೇರ ಸಂಪರ್ಕವಿರುವುದೇ ಮನುಷ್ಯನ ಕಲ್ಪನೆಗಳ ಜೊತೆಗೆ. ಕಥೆಯಾಗಲೀ, ಕವನವಾಗಲೀ ಅಥವಾ ಲೇಖನವೇ ಆಗಲಿ, ತನ್ನ ಕೊನೆಯ ಸಾಲಿನ ಕಟ್ಟಕಡೆಯ ಪೂರ್ಣವಿರಾಮದ ನಂತರವೂ ಅದರ ಮುಂದುವರಿದ ಭಾಗವೊಂದನ್ನು ಓದುಗನ ಮನದಲ್ಲಿ ಬಿತ್ತುವ ಸಾಲು ಸಾಹಿತ್ಯಕ್ಕಿದೆ. ಗೊತ್ತು ಗುರಿಯಿಲ್ಲದೆ ಅಲೆಯುವ ಮನದ ಯೋಚನೆಗಳು ಸತ್ಯದ ಗಾಳಿಯಲ್ಲಿ ಕೇರಲ್ಪಟ್ಟು ಸರಿ-ತಪ್ಪುಗಳಾಗಿ ವಿಂಗಡಿಸಲ್ಪಡುವುದು ಸಾಹಿತ್ಯದ ಮೂಸೆಯಲ್ಲೇ.
ಸಾಹಿತ್ಯ ಹುಟ್ಟಿರುವುದೇ ಅನುಭವದಿಂದ. ಹಾಗಾಗಿಯೇ ಅದು ಒಂದಿಲ್ಲೊಂದು ರೀತಿಯಲ್ಲಿ ಎಲ್ಲರ‌ ಬದುಕಿನೊಂದಿಗೂ ಬೆಸೆದುಕೊಂಡಿದೆ. ಕಾಯ್ಕಿಣಿಯವರ ಕಥೆಯೊಂದರಲ್ಲಿ ಓದಿದ್ದ 'ಸಾವಿಗಾಗಲೀ, ಊರಿಂದ ಬರುವ ಯಾವುದೋ ಕೆಟ್ಟ ಸುದ್ದಿಗಾಗಲೀ ಹೆದರದ ಊರು ಬಿಟ್ಟು ಪಟ್ಟಣಕ್ಕೆ ಬರುವ ಕಾರ್ಮಿಕರು ಖಾಯಿಲೆ ಬೀಳುವುದಕ್ಕೆ ಹೆದರುತ್ತಾರೆ' ಎಂಬ ಸಾಲು, ಮಹಾನಗರಿಯ ಒಂಟಿ ಕೋಣೆಯಲ್ಲಿ ಖಾಯಿಲೆ ಬಂದು ಶೃಶ್ರೂಷೆ ಮಾಡುವರಿಲ್ಲದೆ ಮಲಗಿದ ಕ್ಷಣಗಳಲ್ಲಿ ಮತ್ತೆ ಮತ್ತೆ ನೆನಪಾಗಿ ಕಾಡಿದ್ದಿದೆ‌. ಅಷ್ಟೇ ಅಲ್ಲ, ಸಾಹಿತ್ಯವೆನ್ನುವುದು ಏಕಾಂತದ ಕೋಣೆಯಲ್ಲಿ ಕಣ್ಣೆದುರೇ ಉರಿಯುತ್ತಿರುವ ಆತ್ಮಾವಲೋಕನದ ದೀಪ. ಮನುಷ್ಯ ತನ್ನ ಬದುಕಿನ ಅದೆಷ್ಟೋ ಅಪರಾಧಗಳನ್ನು ಮೌನವಾಗಿ ಒಪ್ಪಿಕೊಳ್ಳುವುದೇ ಅಲ್ಲಿ. ಯಾವುದೋ ಕಥೆಯಲ್ಲಿ ಪಾತ್ರವೊಂದು ತಾನು ಎದುರಿಸಿದ ತಲ್ಲಣಗಳನ್ನು ಹೇಳಿಕೊಳ್ಳುವಾಗ ಪ್ರಾಮಾಣಿಕ ಓದುಗನೊಬ್ಬನ ಮನದಲ್ಲಿ ಅಂತಹದೇ ಶೋಷಣೆಯೊಂದಕ್ಕೆ ತಾನೂ ಕಾರಣನಾದ ಘಟನೆಯೊಂದು ನೆನಪಾಗಿಯೇ ಆಗುತ್ತದೆ. ಪಶ್ಚಾತ್ತಾಪದ ಕಿಡಿಯೊಂದು ಸಣ್ಣಗೆ ಹೊಗೆಯಾಡುತ್ತದೆ. ಏಕೆಂದರೆ ಅಲ್ಲಿ ಓದುಗ ಹಾಗೂ ಅವನ ಅಂತರಾತ್ಮದ ಹೊರತಾಗಿ ಮಾತ್ತಾರೂ ಇರುವುದಿಲ್ಲ. ಹೀಗೆ ಸಾಹಿತ್ಯದ ಪುಟಗಳಲ್ಲಿ ಕಲಿಯುವ ಪಾಠಗಳಿಗೆ ಬದಕಿನ ಕಟ್ಟಕಡೆಯ ಹೆಜ್ಜೆಯ ತನಕ ಜೊತೆಗೇ ನಡೆದುಬರುವ ಕಸುವಿದೆ.
ಸಾಹಿತ್ಯವೆನ್ನುವುದು ಮನುಷ್ಯ ತನ್ನನ್ನು ತಾನೇ ಸಂಧಿಸುವ ದಿವ್ಯ ತಾಣ. ವಸುಧೇಂದ್ರರು ತಮ್ಮ ಲಲಿತ ಪ್ರಬಂಧಗಳ ಮೂಲಕ ಕಟ್ಟಿಕೊಡುವ ಬಾಲ್ಯ ನಮ್ಮದೇ ಅಲ್ಲವೇ? ಅಲ್ಲಿ ಬರುವ ಊರು, ಊರ ಹೊರಗಿನ ಬೆಟ್ಟ, ಬೆಟ್ಟದ ಮೇಲಿನ‌ ಗುಡಿ,‌ ಊರ ನಡುವಿರುವ ಶಾಲೆ, ಆ ಶಾಲೆಗೆ ಲೇಖಕರನ್ನು ತಯಾರುಮಾಡಿ ಕಳಿಸಿಕೊಡುವ ಅವರ ತಾಯಿ... ಹೀಗೆ ಹಿಂದೆಂದೋ ನಾವು ಬಿಟ್ಟುಬಂದ ನಮ್ಮದೇ ಬದುಕಿನ ತುಣುಕುಗಳೆಲ್ಲ ಪುಸ್ತಕದ ಪುಟವೊಂದರಲ್ಲಿ ಬಿಡಿಬಿಡಿಯಾಗಿ ಮತ್ತೆ ಸಿಗುವ ಅದ್ಭುತವಿರುವುದು ಸಾಹಿತ್ಯದಲ್ಲಿ ಮಾತ್ರ. ಯಾವುದೋ ಬರಹವೊಂದರಲ್ಲಿ ಬರುವ ತಾಯಿಯ ಪಾತ್ರಕ್ಕೆ ನಮ್ಮ ಅಮ್ಮನದೇ ಮುಗ್ಧ ಮುಖವನ್ನು ನೆನಪಿಸುವ ತಾಕತ್ತಿದೆ. ನಮ್ಮ ಜೊತೆಯಲ್ಲೇ ಇರುವ ಸಂಬಂಧವೊಂದರ ಮಹತ್ವವನ್ನು ನಾವು ಕಥೆಯ ಪಾತ್ರವೊಂದರಿಂದ ತಿಳಿದುಕೊಳ್ಳುತ್ತೇವೆ. ಏಕೆಂದರೆ ಇರುವ ಒಂದೇ ಬದುಕನ್ನು, ಕಣ್ಣೆದುರಿನ ಅದೇ ಜಗತ್ತನ್ನು ಬೇರೆಬೇರೆ ದೃಷ್ಟಿಕೋನಗಳಿಂದ ಚಿತ್ರಿಸುವ ಹಾಗೂ ಬೇರೊಬ್ಬರ ಕಣ್ಣಿನಿಂದ ನೋಡುವಂತೆ ಮಾಡುವ ಅದಮ್ಯ ಶಕ್ತಿ ಸಾಹಿತ್ಯಕ್ಕಿದೆ.
ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಮನುಷ್ಯ ತನ್ನ ಅಂತರಂಗದಿಂದ ತಾನೇ ದೂರಾಗುತ್ತಿದ್ದಾನೆಂಬುದು ನಿಜವಾದರೂ ಕಾಲದ ಚಕ್ರ ತಿರುಗಿದಂತೆ ಮುಂದೊಂದು ದಿನ ನಾವು ಕಳೆದುಕೊಳ್ಳುತ್ತಿರುವುದೇನೆಂಬುದು ನಮಗೆ ಅರಿವಾಗಿಯೇ ಆಗುತ್ತದೆ.
(ವಿಜಯಕರ್ನಾಟಕದ ಲವಲVKಯಲ್ಲಿ ಪ್ರಕಟವಾದ ಬರಹ)
-ವಿನಾಯಕ ಅರಳಸುರಳಿ.

ನಾನು ಬರೆದ ಹಾಡು..

ಸಿನಿಮಾದ ಹಾಡುಗಳಿಗೆ ತಮ್ಮದೇ ಸಾಹಿತ್ಯ ಬರೆದು ಹಾಡಿಕೊಳ್ಳುವುದು ಬಹಳ ಜನರಿಗಿರುವ ಖಯಾಲಿ. ಅದರ ಪಲ್ಲವಿಗೋ, ಚರಣಕ್ಕೋ ಹೊಂದುವಂತಹಾ ಒಂದು ಚಂದದ ಸಾಲು ಸಿಕ್ಕಿಬಿಟ್ಟರೆ ಸಾಕು, ಮಂದೆ ಅದು ತನ್ನಂತಾನೇ ಬರೆಸಿಕೊಳ್ಳುತ್ತಾ ಮತ್ತೊಂದು ಹಾಡೇ ಆಗಿಬಿಡುತ್ತದೆ. ಹೀಗೆ ಗುನುಗಿಕೊಳ್ಳುವವರ ಬಾಯಲ್ಲಿ ಅವರದೇ ಆದ ಹೊಸ ಹೊಸ ಸಾಹಿತ್ಯದ ಉಡುಗೆ ತೊಟ್ಟು, ಗುನುಗಿಸಿಕೊಂಡು, ಕೊನೆಗೆ ಅವರಲ್ಲೇ ಮುಗಿದುಹೋಗುವ ಸಿನಿಮಾ ಹಾಡುಗಳು ಅದೆಷ್ಟೋ?
ಹೀಗೆ ನಾನು ಗುನುಗಲಿಕ್ಕೆಂದೇ ಎರೆಡು ವರ್ಷಗಳ ಕೆಳಗೆ ಬರೆದಿದ್ದ ಸಾಹಿತ್ಯವೊಂದು ಮೋಹನ ತೋಡಾರ್ ಅವರ ಧ್ವನಿಗೆ ಸಿಕ್ಕಿ ಹಾಡಾಗಿದೆ. ಮಂಗಳೂರಿನ ಜನ ಯಾವುದೇ ಕಾರ್ಯಕ್ಕೆ ಕೂತರೂ ಶಿಲ್ಪಿಗಳಂತೆ ಕೆಲಸ ಮಾಡುತ್ತಾರೆ. ಒಂದು ಚಿಕ್ಕ ಸೂಜಿಯಂಚಿನಷ್ಟು ಬಿಂದುವನ್ನೂ ನಾಜೂಕಾಗಿ, ಆಸಕ್ತಿಯಿಂದ ರೂಪಿಸುತ್ತಾರೆ. ಮೋಹನರು ಮಾಡಿದ್ದೂ ಇದನ್ನೇ. ತಮ್ಮ‌ ಅದೆಷ್ಟೋ ಅಮೂಲ್ಯ ಭಾನುವಾರಗಳನ್ನು ಖರ್ಚು ಮಾಡಿ, ಚಂದವಾಗಿ ಹಾಡಿ, ಎಡಿಟ್ ಮಾಡಿದ್ದಲ್ಲದೆ ಕೊನೆಗೆ ಅಂದವಾದ ವೀಡಿಯೋವನ್ನೂ ಮಾಡಿಕೊಟ್ಟಿದ್ದಾರೆ. ಆ ಮೂಲಕ ಗುನುಗಿ ನನ್ನೊಳಗೇ ಮುಗಿದುಹೋಗಬೇಕಿದ್ದ ಹಾಡೊಂದಕ್ಕೆ ಮರುಜೀವ ನೀಡಿದ್ದಾರೆ.
ಒಮ್ಮೆ ನೋಡಿ.. ಅಭಿಪ್ರಾಯ ತಿಳಿಸಿ..
ಅಂದಹಾಗೇ ಇದು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಮಾಡಿದ್ದಲ್ಲ. ಕೇವಲ ಹವ್ಯಾಸಕ್ಕಾಗಿ, ಮನೋರಂಜನೆಗಾಗಿ ಮಾಡಿದ ವೀಡಿಯೋ.
ಯೂಟ್ಯೂಬ್ ವೀಡಿಯೋ ಲಿಂಕ್:

https://www.youtube.com/watch?v=CALKszDDKYk&feature=youtu.be

-ವಿನಾಯಕ ಅರಳಸುರಳಿ‌.

ನನ್ನ ಪ್ರೀತಿಯೇ ಸುಳ್ಳಾದರೆ..‌.


ಪ್ರೀತಿಯ ಕಡಲೇ...
ಹೇಗಿದ್ದೀಯ? ಎಷ್ಟು ದಿನವಾಯ್ತು ನಿನ್ನನ್ನು ನೋಡಿ? ಅಂದು ಆ ಸಂಜೆಗತ್ತಲಿನ ಮೊಬ್ಬಿನಲ್ಲಿ ತೊರೆದು ಬರುವಾಗ ಹೊರಳಿ ನೋಡಿದ್ದೇ ಕೊನೆ, ಮತ್ತೆ ನಾವು ಭೇಟಿಯಾಗುತ್ತಿರುವುದು ಇಂದೇ. ಹೇಳು.. ಹೇಗಿದ್ದೀ ಈಗ? ನಾನಿಲ್ಲದ ನಿನ್ನ ಸಂಜೆಗಳು ಹೇಗಿವೆ? ಅದೆಷ್ಟು ಹೊಸ ಜನ ಬಂದರು ನಿನ್ನ ತೀರಕ್ಕೆ? ಅದೆಷ್ಟು ಪ್ರೇಮಿಗಳ ಹೆಸರ ದಾಖಲಿಸಿಕೊಂಡೆ ನಿನ್ನ ಮರಳೆದೆಯ ಮೇಲೆ? ಎಷ್ಟೆಲ್ಲ ಮರಳ ಗೂಡುಗಳು ಎದ್ದವು? ಎಷ್ಟನ್ನು ಉಳಿಸಿದೆ? ಎಷ್ಟನ್ನು ಕೆಡವಿದೆ? ಹೇಳಿಬಿಡು... ಏಕೋ ಎಲ್ಲ ಕೇಳಬೇಕೆನಿಸುತ್ತಿದೆ.
ಯೋಚಿಸುತ್ತೇನೆ: ನಿನಗೆ ನಾನು ತುಂಬಾ ದೂರ. ಆದರೆ ನನಗೆ ನೀನು ಎಷ್ಟೊಂದು ಸನಿಹ! ನೀನು ಹೀಗೆ ಇಷ್ಟವಾಗಿರುವುದಾದರೂ ಯಾಕೆ? ಅವಳ ಊರಿನವನೆಂಬ ಒಂದೇ ಕಾರಣಕ್ಕೇ? ಅವಳಾಡುವ ಭಾಷೆ, ಅವಳಿಷ್ಟದ ಬಣ್ಣ, ಅವಳೂರಿಗೆ ಹೋಗುವ ಬಸ್ಸು, ಅವಳ ಹಳ್ಳಿಯ ಹೆಸರು, ಅವಳು ನಡೆದ ಜಾಗ, ಅವಳ ಮುಡಿಯಿಂದ ಜಾರಿದ, ನಾನು ಜೋಪಾನವಾಗಿ ಎತ್ತಿಟ್ಟುಕೊಂಡ ಹೂವು... ಹೀಗೆ 'ಅವಳದು' ಎನ್ನುವ ಟ್ಯಾಗ್ ಅಂಟಿಸಿಕೊಂಡಿರುವುದೆಲ್ಲವೂ ನನಗೆ ಇಷ್ಟವೇ. ನೇರ ನನ್ನ ಕನಸಿಗೇ ನಡೆದು ಬರುವಷ್ಟು ಪ್ರಿಯವಾದವೇ ಅವೆಲ್ಲವೂ. ಆದರೆ, ಯಾಕೆಂದು ಕೇಳಬೇಡ, ನೀನು ಕೇವಲ‌ ಅವಳೂರಿನವ ಮಾತ್ರವಲ್ಲ. ನನ್ನ ಪಾಲಿಗೆ ನೀನೇ ಅವಳು.. ಅವಳೇ ನೀನು.
ಇಪ್ಪತೈದು ವರ್ಷಗಳ ಕೆಳಗೆ ಇದೇ ದಿನದಂದು ಮೊದಲ ಬಾರಿಗೆ ಜಗತ್ತಿಗೆ ಕಣ್ಣು ತೆರೆದ ಅವಳು ಕೇಳಿಸಿಕೊಂಡ ಮೊದಲ ಮೊರೆತ ನಿನ್ನದು. ಶ್ರಾವಣದ ಮಳೆಗೆ ಉಕ್ಕುಕ್ಕಿ ಹಾಡುತ್ತಿದ್ದ ನಿನ್ನ ಭೋರ್ಗರೆತವನ್ನು, ತೊಟ್ಟಿಲಿನಲ್ಲೇ ಮಲಗಿ, ಇಷ್ಟಗಲ ಕಣ್ಬಿಟ್ಟು ಕೇಳಿಸಿಕೊಂಡು ಖುಷಿಯಾಗಿ ಕೈಕಾಲು ಬಡಿಯುತ್ತಿದ್ದಳಂತೆ ಹೌದಾ? ಮೊದಲ ಸಲ ಹೂಹೂವಿನ ಫ್ರಾಕು ತೊಟ್ಟು, ಅಪ್ಪನ ತೋಳಿನಲ್ಲಿ ನಿನ್ನ ತೀರಕ್ಕವಳು ಬಂದ ದಿನ ಯಾವುದು? ಅವಳ ಪುಟಾಣಿ ಕಾಲನ್ನು ಸ್ಪರ್ಶಿಸಿದ ನಿನ್ನ ಮಧುರ ಅಲೆ ಯಾವುದು? ತನ್ನ ತೊದಲು ಭಾಷೆಯಲ್ಲವಳು ನಿನ್ನನ್ನು ಏನೆಂದು ಕರೆದಳು? ತನ್ನ ಮುದ್ದು ಕೈಯಿಂದ ನಿನ್ನ ಅಲೆಯನ್ನು ಮುಟ್ಟಿ ನಕ್ಕ ಆ ಸ್ಪರ್ಷ ಹೇಗಿತ್ತು? ದಯವಿಟ್ಟು ಹೇಳು...
ಇಂದು ಅವಳ ಜನುಮದಿನ‌. ಆಶ್ಚರ್ಯವಾಗುತ್ತದೆ. ಹುಟ್ಟಿ ಬೆಳೆದ ಇಷ್ಟು ವರ್ಷಗಳ ಕಾಲ ಸೂರ್ಯ ಹೀಗೆ ಹುಟ್ಟಿ ಹಾಗೆ ಮುಳುಗುವ ಉಳಿದ ದಿನಗಳಂತೆಯೇ ಸಾಮಾನ್ಯವಾಗಿದ್ದ ಈ ದಿನಾಂಕ ಇದ್ದಕ್ಕಿದ್ದಂತೆಯೇ ಇಷ್ಟೊಂದು ವಿಶೇಷವಾಗಿದ್ದಾದರೂ ಹೇಗೆ? ಈ ಹೊಸಿಲ ದೀಪ, ಗುಡಿಯ ದೇವರೆದುರಿನ ಪ್ರಾರ್ಥನೆ, ಮಧ್ಯರಾತ್ರಿ ಹನ್ನೆರೆಡಾಗುತ್ತಿದ್ದಂತೆಯೇ ಹುಟ್ಟಿಕೊಂಡ, ಹೊಸಬದುಕೇ ಆರಂಭವಾಯಿತೇನೋ ಎಂಬಂತಹ ಸಂಭ್ರಮ, ಅಳಿಸಿ ಅಳಿಸಿ ಬರೆದ, ಕೊನೆಗೂ ಅವಳಿಂದ ಉತ್ತರ ಬಾರದ ಶುಭಾಶಯ ಸಂದೇಶ.. ಇವೆಲ್ಲ ಎಲ್ಲಿದ್ದವು ಇಷ್ಟು ದಿನ? ಯಾಕಾಗಿ ನಿದ್ರಿಸುತ್ತಿದ್ದ ಈ ಬದುಕಿನೊಳಗೆ ಕನವರಿಕೆಗಳಂತೆ ಬಂದು ಸೇರಿಕೊಂಡವು?
ಅವಳಿಗೆ ಗೊತ್ತಿಲ್ಲ ಕಡಲೇ.. ಆಡಿದ ಆ ಒಂದು ಮಾತಿನೊಳಗೆ ಹೇಳದೇಹೋದ ಸಾವಿರ ಮಾತುಗಳಿವೆ. ಕಳಿಸಿದ ಒಂದು ಸಂದೇಶದೊಳಗೆ ಅಳಿಸಿದ ನೂರು ಸಾಲುಗಳಿವೆ. ರಿಂಗಾದ ಒಂದು ಕರೆಯ ಹಿಂದೆ ರಿಂಗಣಿಸುವ ಮೊದಲೇ ತುಂಡರಿಸಿದ ಅದೆಷ್ಟೋ ಕರೆ ಮಾಡದೇ ಹೋದ ಪ್ರಯತ್ನಗಳಿವೆ. ನಾನು ಧರಿಸುವ ಒಂದೊಂದು ಬಟ್ಟೆಯಲ್ಲೂ ಅವಳ ಮಧುರ ನೆನಪುಗಳಿವೆ. ಅವಳೂ ಅದೇ ಬಣ್ಣದ ಬಟ್ಟೆ ಧರಿಸಿ ಬಂದ ದಿನ ಯಾವುದೋ ಅದ್ಭುತವೇ ಘಟಿಸಿಹೋಯಿತೇನೋ ಎಂಬಂತೆ ಅನುಭವಿಸಿದ ಪೆದ್ದ ಆಚ್ಚರಿಗಳಿವೆ. ಕಛೇರಿಯ ಯಾವುದೋ ರಿಜಿಸ್ಟರ್ ನಲ್ಲಿ ನಮ್ಮಿಬ್ಬರ ಹೆಸರು ಜೊತೆಯಾಗಿ ಬಂದಿದ್ದು ನೋಡಿ ಮದುವೆಯ ಕರೆಯೋಲೆಯೇ ಅಚ್ಚಾದಂತೆ ಸಂಭ್ರಮಿಸಿದ ಮೂರ್ಖ ಸಂತೋಷವಿದೆ. ನಾನು ಮಾತನಾಡದ ದಿನ ಅವಳ ಮುಖದಲ್ಲಾದ ಬದಲಾವಣೆಯನ್ನು 'ಪ್ರೀತಿ' ಎಂದುಕೊಂಡ ಹುಚ್ಚುತನವಿದೆ. ಈ ಬದುಕಿನ ಎಲ್ಲ ಹಾದಿಗಳೂ ಅವಳತ್ತಲೇ ಸಾಗುತ್ತಿರುವ ಕಾಕತಾಳೀಯವನ್ನು 'ಋಣಾನುಬಂಧ' ಎಂದು ನಂಬಿದ ದಿವ್ಯ ದುರಂತವಿದೆ...
ಪಾಪ, ಇದರಲ್ಲಿ ಅವಳ ತಪ್ಪೇನೂ ಇಲ್ಲ. ಹಣದಲ್ಲಿ, ಗುಣದಲ್ಲಿ, ಧೈರ್ಯ, ಸೌಂದರ್ಯಗಳಲ್ಲಿ ತನಗಿಂತ ಮಿಗಿಲಾದವನನ್ನು ಬಯಸುವುದು ಹೆಣ್ಣಿನ ಸಹಜ ಗುಣ. ಹಾಗಿರುವಾಗ ಅವಳ ಒಂದು ಮಾತಿಗೆ ಸೋಲುವ, ಚಿಕ್ಕ ಮುಗುಳ್ನಗುವಿಗೇ ಕರಗಿ ಹೋಗುವ, ಅವಳ ಹೆಸರು ಕೇಳಿದೊಡನೆಯೇ ಸ್ತಬ್ಧವಾಗಿಬಿಡುವ, ಅವಳೆದುರು ತೊದತೊದತೊದಲುವ, ಯಾವ ರೀತಿಯಲ್ಲೂ ಅವಳಿಗಿಂತ ಮಿಗಿಲಲ್ಲದವನನ್ನು ಹೇಗೆ ತಾನೇ ಇಷ್ಟಪಟ್ಟಾಳು?
ಅವಳಂತೂ ಉತ್ತರಿಸುವುದಿಲ್ಲ. ನೀನಾದರೂ ಹೇಳು ಸಾಗರವೇ... ಯಾವುದೋ ನಿನ್ನೆಗಳಲ್ಲಿ ಅವಳನ್ನು ಅಳಿಸಿದ ನೋವುಗಳು ಇಂದಿಗೂ ನನ್ನನ್ನು ಕಾಡುವುದೇಕೆ? ಪ್ರೀತಿಯ ಅಪ್ಪ ಇನ್ನಿಲ್ಲವಾದ ಕ್ಷಣ ಅವಳ ಕಣ್ಣಿಂದ ಜಾರಿ ಹೋದ ಕಂಬನಿಯ ಗುರುತನ್ನು ಹುಡುಕಿ ಅಳಿಸಬೇಕೆಂಬ ಈ ಹುಚ್ಚು ಹಂಬಲವೇಕೆ? ಪ್ರೇಮದ ಹೆಸರಲ್ಲಿ ಯಾರೋ ಮಾಡಿದ ಗಾಯವನ್ನು, ಅವಳೊಳಗೆ ಇಂದಿಗೂ ಉಳಿದಿರಬಹುದಾದ ಅದರ ವೇದನೆಯನ್ನು ರಮಿಸಬೇಕೆಂದು ಅನಿಸುವುದೇಕೆ? ಯಾರೇ ಅವಳ ಕುರಿತು ಚಿಕ್ಕ ಮಾತಂದರೂ ನಾನು ನೋಯುವುದೇಕೆ? ಅವಳೂರಿನಿಂದ ಬಂದವರೆಲ್ಲ ಯಾವುದೋ ದಿವ್ಯ ಸಂದೇಶವನ್ನು ಹೊತ್ತುತಂದ ಪತ್ರಗಾರರಂತೆ ಕಾಣುವುದೇಕೆ? ಅವಳ ಒಡನಾಡುವವರ ಕಂಡಾಗ ಅವಳ ಕುರಿತಾದ ನೂರು ಪ್ರೆಶ್ನೆಗಳ ಕೇಳಬೇಕೆನಿಸುವುದೇಕೆ? ಈ ವೇದನೆ, ನಿವೇದನೆಗಳೆಲ್ಲ ಸಾವಿರಾರು ವರ್ಷಗಳೇ ಕಳೆದರೂ ಸಿಗದ ಚಂದ್ರಮನಿಗಾಗಿ ಉಕ್ಕುತ್ತಲೇ ಉಳಿದಿರುವ ನಿನಗಲ್ಲದೇ ಇನ್ಯಾರಿಗೆ ಅರ್ಥವಾಗಬೇಕು ಹೇಳು?
ನನಗೆ ಹೆಮ್ಮೆಯಿದೆ.. ಕಿರಿಬೆರಳ ಸ್ಪರ್ಷಕ್ಕೂ ನಿಲುಕದೇ ಹೋದ ಜೀವವೊಂದನ್ನು ಇಷ್ಟೆಲ್ಲ ಆರಾಧಿಸಿದ್ದಕ್ಕೆ. ನಿರಾಕರಿಸುವ ಕ್ಷಣದಲ್ಲಾದರೂ ನನ್ನ ಹೆಸರು ಅವಳ ನಾಲಿಗೆಯಿಂದ ಹಾದು ಬಂದಿದ್ದಕ್ಕೆ. ಕೈ ಜಾರುವ ಕಟ್ಟಕಡೆಯ ಕ್ಷಣದ ತನಕ ಕಾಯುತ್ತಲೇ ನಿಂತಿದ್ದಕ್ಕೆ. ಕೈ ಜಾರಿದ ಮೇಲೂ ಪ್ರೇಮಿಯಾಗಿಯೇ ಉಳಿದಿದ್ದಕ್ಕೆ. ಹೌದು.. ನನಗೆ ಹೆಮ್ಮೆಯಿದೆ.
ಇನ್ನೇನು ಸ್ವಲ್ಪವೇ ದಿನ.. ತನ್ನ ಹೊಸಬಾಳ ಸಂಗಾತಿಯೊಂದಿಗೆ ಅವಳಿಲ್ಲಿಗೆ ಬರುತ್ತಾಳೆ. ಅವನ ಕೈಗೆ ಕೈ ಬೆಸೆದು ನಿನ್ನೀ ತೀರದುದ್ದಕ್ಕೂ ನಡೆಯುತ್ತಾಳೆ. ಅಂದು ಅಪ್ಪನ ಜೊತೆಗಿದ್ದಾಗಿನ ಅದೇ ಸಂಭ್ರಮದಲ್ಲಿ ನಿನ್ನ ತೆರೆಗಳನ್ನು ಸ್ಪರ್ಷಿಸಿ ನಲಿಯುತ್ತಾಳೆ. ನೀನೂ ಅವರ ಪಾದಗಳನ್ನು ತೊಳೆತೊಳೆದು ಹಾರೈಸುತ್ತೀ. ಅದಕ್ಕೂ ಮುನ್ನ..
ಒಮ್ಮೆ ಹೇಳು ಸಮುದ್ರವೇ.. ಆ ಸಿರಿವಂತ ನನ್ನಷ್ಟು ಅವಳನ್ನು ಪ್ರೀತಿಸಿದ್ದಾನಾ? ಅವಳು ಬಾರದ ದಾರಿಗಳಲ್ಲಿ ನಿಂತು ಕಾದುಕಾದು ಸೋತಿದ್ದಾನಾ? ಅವಳ ಹಳೆಯ ನೋವೊಂದನ್ನು ತನ್ನದೇ ಎಂಬಂತೆ ನೆನೆದು ಕೊರಗಿದ್ದಾನಾ? ಅವಳಿಲ್ಲದ ಇಂತಹಾ ಸಂಜೆಯೊಂದರಲ್ಲಿ ನಿನ್ನೀ ಹತಾಶ ಬಂಡೆಯ ಮೇಲೆ ಕುಳಿತು ಅವಳ ಬಾಲ್ಯದ ಕಥೆ ಕೇಳಿದ್ದಾನಾ?
ಹೇಳು ಕಡಲೇ.. ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ?
-ವಿನಾಯಕ ಅರಳಸುರಳಿ.

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...