ಸೋಮವಾರ, ಮೇ 8, 2017

ಅಜ್ಜನ ಊರು ಹಾಗೂ ಅಲ್ಲಿನ ದೆವ್ವದ ಕಥೆಗಳು...

ನೀವು ಈ ದೆವ್ವ-ಭೂತಗಳನ್ನು ನಂಬ್ತೀರಾ? ನಾನಂತು ನಂಬುತ್ತೇನೆ. ನಾನೇನೋ ಹಗಲಿನ ಹೊತ್ತಿನಲ್ಲಿ ಜೊತೆಗಿರುವ ಮೂರುವರೆ ಪೈಸೆ ಧೈರ್ಯದಲ್ಲಿ 'ಈ ದೆವ್ವ ಗಿವ್ವ ಎಲ್ಲಾ ಸುಳ್ಳು' ಅನ್ನೋದು; ಅದು ಇಲ್ಲೇ ಯಾವುದೋ ಹುಣಿಸೆ ಮರದಲ್ಲಿ ನೇತಾಡುತ್ತಿರುವ ದೆವ್ವವೊಂದರ ಕಿವಿಗೆ ಬೀಳೋದು; ಆಮೇಲೆ ರಾತ್ರಿಯಾಗಿ ಎಲ್ಲರೂ ಮಲಗಿದ ಮೇಲೆ ಅದು ಮರದಿಂದ ಇಳಿದು ನೇರ ನನ್ನ ರೂಮಿಗೆ ಬಂದು "ಏನಂದೆ ಮಗನೇ? ಇನ್ನೊಂದ್ಸಲ ಹೇಳು" ಅಂತ ಕೋರೆಹಲ್ಲು ತೋರಿಸಿ ನಗೋದು; ಆಮೇಲೆ ನಾನು.......
ಇದೆಲ್ಲಾ ಯಾಕೆ ಬೇಕು ಹೇಳಿ? ಅದಕ್ಕೇ ನಾನು ಈ ದೆವ್ವಗಳನ್ನ ಕೆರಳಿಸುವಂತಹ ಯಾವ ಹೇಳಿಕೆಗಳನ್ನು ಕೊಡಬಾರದೂಂತ ನಿರ್ಧರಿಸಿಬಿಟ್ಟಿದ್ದೇನೆ!

ಹಾಗಂತ ನೀವು ನನ್ನ ಹೆದರುಪುಕ್ಲ ಅಂತ ಆಡಿಕೊಳ್ಳೋದೇನೂ ಬೇಡ. ನಮ್ಮ ಮನೆಯಲ್ಲಿ ಇರೋದ್ರಲ್ಲಿ ನಾನೇ ಧೈರ್ಯವಂತ! ಅಪ್ಪ, ಅಮ್ಮ ಹಾಗೂ ತಮ್ಮ ರಾತ್ರಿ ಹೊತ್ತಲ್ಲಿ ಹೊರಗೆ ಓಡಾಡುವ ವಿಷಯದಲ್ಲಿ ಪುಕ್ಕಲರೇ! ಈ ವಿಷಯದಲ್ಲಿ ನಾನೇ ಇದ್ದಿದ್ದರಲ್ಲಿ ಗಟ್ಟಿಗ. ನಮ್ಮ ಮನೆ ಇರೋದು ನಮ್ಮೂರಿನ ಮುಖ್ಯ ರಸ್ತೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ. ಬೀದಿ ದೀಪಗಳಿಲ್ಲದ, ಅಕ್ಕಪಕ್ಕ ಮನೆಗಳೂ ಇಲ್ಲದ ಮಣ್ಣ ದಾರಿಯಲ್ಲಿ ಮರಗಳ ಮಧ್ಯೆ, ಮಧ್ಯರಾತ್ರಿಯಲ್ಲಿ ಸಹಾ ಒಬ್ಬನೇ ನಡೆದುಬರುತ್ತೇನೆಂಬ ಕಾರಣಕ್ಕೆ ನನಗೆ ಈ ಧೈರ್ಯಶಾಲಿಯೆಂಬ ಬಿರುದು ಬಂದಿದ್ದು.

ಆದರೆ ನಿಜದಲ್ಲಿ ನನ್ನ ಅವಸ್ಥೆ ನನಗೆ ಮಾತ್ರ ಗೊತ್ತು! ಮೊದಲು ನಾನು ಊರಿನಲ್ಲಿದ್ದಾಗ ಅಪರೂಪಕ್ಕೆ ಊರಿಗೆ ಬರುತ್ತಿದ್ದ ಗೆಳೆಯರನ್ನು ಭೇಟಿಯಾಗಿ, ರಾತ್ರೆ ಒಂಭತ್ತರ ತನಕ ಊರೆಲ್ಲಾ ತಿರುಗಿ, ನಂತರ ಒಬ್ಬನೇ ನಡೆದು ಮನೆಗೆ ಬರುತ್ತಿದ್ದೆ. ಊರಿನ ಟಾರ್ ರಸ್ತೆಯಿಂದ ನಮ್ಮ ಕೇರಿಯ ಮಣ್ಣ ರಸ್ತೆಗೆ ತಿರುಗಿ ಇಪ್ಪತ್ತು ಮೊವತ್ತು ಹೆಜ್ಜೆ ನಡೆದರೆ ಎಡಭಾಗದಲ್ಲಿರುವ ಇಳಿಜಾರಿನಲ್ಲಿ ತುಂಬಾ ಹಳೆಯ ಕಾಲದ ಬಾವಿಯೊಂದಿದೆ. ಅದರ ಪಕ್ಕದಲ್ಲೇ ದಟ್ಟವಾದ ಪೊದೆಗಳಿಂದಾವೃತವಾದ ಬೃಹತ್ ಅತ್ತಿಯ ಮರವೂ ಇದೆ. ಅದು ಭೀಕರವಾದ ಸರ್ಪಗಳ ವಾಸಸ್ಥಾನವೆಂದು ಅಪ್ಪ ಆಗಾಗ ಹೇಳುತ್ತಾರೆ. ಅಲ್ಲದೇ ಕೆಲವು ವರ್ಷಗಳ ಕೆಳಗೆ ಸುಮಾರು ಹದಿಮೂರು ಅಡಿ ಉದ್ದದ ಕಾಳಿಂಗ ಸರ್ಪವೊಂದು ಅದೇ ಪೊದರಿನಿಂದ ಹೊರಬಂದು ಎದುರೇ ಇರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನುಗ್ಗಿದ್ದನ್ನ ನಾನೇ ಕಣ್ಣಾರೆ ನೋಡಿದ್ದೇನೆ. ಸಾಲದ್ದಕ್ಕೆ ನಾನು ಚಿಕ್ಕವನಿದ್ದಾಗ ಸುಕ್ಕಡ್ಯಾ ಎನ್ನುವವನೊಬ್ಬ ಅದೇ ಬಾವಿಗೆ ಬಿದ್ದು ಸತ್ತಿದ್ದ ಕೂಡಾ! ಬಾವಿಯ ನೀರಿನಲ್ಲಿ ಮುಖ ಕೆಳಗಾಗಿ ತೇಲುತ್ತಿರುವ ಸುಕಡ್ಯಾನ ಚಿತ್ರ ಈಗಲೂ ಕಣ್ಮುಂದೆ ಹಾಗೇ ಇದೆ. ಇಷ್ಟೆಲ್ಲಾ ಭೀಬತ್ಸಗಳಿರುವ ದಾರಿಯಲ್ಲಿ ರಾತ್ರೆ ಒಬ್ಬನೇ ನಡೆಯುವಾಗ ಎಲ್ಲವೂ ನೆನಪಾಗುತ್ತದೆ. ಮತ್ತೆ ಮತ್ತೆ ಹಿಂದಕ್ಕೆ- ಮುಂದಕ್ಕೆ ಮೊಬೈಲ್ ಟಾರ್ಚ್ ಹಾಕಿ ಸಮೀಪದಲ್ಲಿ ಯಾವುದೇ ದೆವ್ವವಾಗಲೀ, ಕಾಳಸರ್ಪವಾಗಲೀ ಇಲ್ಲವೆಂದು ಖಚಿತಪಡಿಸಿಕೊಳ್ಳುತ್ತಾ, ಸಣ್ಣ ಸದ್ದಾದರೂ ಬೆಚ್ಚಿಬೀಳುತ್ತ, ಮನಸ್ಸಿನಲ್ಲೇ ಗಾಯತ್ರೀ ಮಂತ್ರ ಪಠಿಸುತ್ತಾ ಹೇಗೋ ಮನೆತಲುಪದಮೇಲೇ ಗಟ್ಟಿಯಾಗಿ ಉಸಿರಾಡುತ್ತೇನೆಂಬುದು ಗೊತ್ತಿಲ್ಲದ  ಮನೆಯವರು ನನ್ನನ್ನು ಧೈರ್ಯಶಾಲಿ ಎಂದು ತಿಳಿದಿದ್ದರು!

ಆದರೆ ಕೊನೆಗೂ ಒಮ್ಮೆ ನಾನೆಂತಹ ರಣಧೀರನೆಂಬುದು ಎಲ್ಲರಿಗೂ ಗೊತ್ತಾಗಿಹೋಯಿತು. ಅದು ನಾನು ಕೊನೆಯ ವರ್ಷದ ಡಿಗ್ರಿ ಓದುತ್ತಿದ್ದ ಸಮಯ. ಆಗಷ್ಟೇ ಹೊಸದಾಗಿ ಮ್ಯೂಸಿಕ್ ಕೇಳಬಲ್ಲ ಮೊಬೈಲ್ ಖರೀದಿಸಿದ್ದೆ. ರಾತ್ರೆ ಎಲ್ಲರೂ ಮಲಗಿದ ಮೇಲೆ ಸ್ವಲ್ಪ ಹೊತ್ತು ಕಿವಿಗೆ ಇಯರ್ ಫೋನ್ ಚುಚ್ಚಿಕೊಂಡು  ಅಂಗಳದ ಕತ್ತಲಲ್ಲಿ ಅತ್ತಿಂದಿತ್ತ ಓಡಾಡುತ್ತಾ ಹಾಡುಕೇಳುವುದು ನನ್ನ ನಿತ್ಯದ ಅಭ್ಯಾಸ. ಎಷ್ಟೇ ಆದರೂ 'ಧೈರ್ಯಶಾಲಿ'ಯಲ್ವಾ! ಅಂದೂ ಕೂಡಾ ಹಾಗೇ ಅತ್ತಿಂದಿತ್ತ, ಇತ್ತಿಂದತ್ತ ನಡೆದಾಡುತ್ತಾ ಹಾಡು ಕೇಳುತ್ತಿದ್ದೆ; ಥಟ್ಟನೆ ಕಾಲಿಗೆ ಏನೋ ಸಿಲುಕಿಂದಂತಾಯಿತು. ಅದೇನೆಂದು ಪರೀಕ್ಷಿಸಲು ಕಾಲನ್ನು ಮೆಲ್ಲಗೆ ಅಲ್ಲಾಡಿಸಿದೆ. ಆಗಲೇ ನನಗೆ ಗೊತ್ತಾಗಿದ್ದು...

ಘಟಸರ್ಪವೊಂದು ನನ್ನ ಕಾಲಿಗೆ ಸುತ್ತಿಕೊಂಡಿತ್ತು!!!

ಕೈಯ್ಯಲ್ಲಿದ್ದ ಇಯರ್ ಫೋನನ್ನು ಮೊಬೈಲ್ ನ ಸಮೇತ ಎಸೆದು "ಅಯ್ಯಯ್ಯಪ್ಪಾ.... ಹಾವೂ..." ಎಂದು ಸೀದಾ ಮನೆಯಕಡೆ ಓಡಿದೆ. ಕಾಲಿಗೆ ಸುತ್ತಿಕೊಂಡಿದ್ದ ಆ ಕ್ರೂರ ಸರ್ಪವೂ ನನ್ನನ್ನು ಹಿಂಬಾಲಿಸಿತು. ನನ್ನ ಹಾಹಾಕಾರ ಕೇಳಿ ಬೆಚ್ಚಿಬಿದ್ದು ಎಚ್ಚರಾದ ಅಪ್ಪ ಅಮ್ಮ, ಕೈಗೆ ಸಿಕ್ಕಿದ ಕಟ್ಟಿಗೆ, ಪೊರಕೆಗಳನ್ನು ಹಿಡಿದುಕೊಂಡು ತಮ್ಮ ಧೀರ ಪುತ್ರನನ್ನು ಬೆನ್ನಟ್ಟಿಬರುತ್ತಿರುವ ಘಟಸರ್ಪಕ್ಕೊಂದು ಗತಿ ಕಾಣಿಸಲು ಸಿದ್ಧರಾಗಿ ನಿಂತರು.. ಅಷ್ಟರಲ್ಲಿ ತಮ್ಮ ಲೈಟ್ ಹಾಕಿದ. ಎಲ್ಲಿ ನೋಡಿದರೂ ಹಾವಿನ ಸುಳಿವೇ ಇಲ್ಲ! ಅಷ್ಟು ಬೇಗ ಎಲ್ಲಿ ಹೋಯಿತೆಂದು ಹುಡುಕುತ್ತಾ ಎಲ್ಲರೂ ಅಂಗಳದೆದುರಿನ ಬಾಗಿಲಿನತ್ತ ಬಂದೆವು. ಅಲ್ಲಿ ಬಿದ್ದಿತ್ತು.... ಗೊಬ್ಬರದ ಚೀಲಗಳನ್ನು ಹೊಲಿಯಲು ಬಳಸುವ ಮಾರುದ್ದದ ಪ್ಲಾಸ್ಟಿಕ್ ಹಗ್ಗ!

ಆಗಿದ್ದಿಷ್ಟೇ: ಅಂಗಳದ ಮಧ್ಯದಲ್ಲಿ ಸುರುಳಿಯಾಗಿ ಬಿದ್ದಿದ್ದ ಹಗ್ಗ ನಡೆದಾಡುವಾಗ ನನ್ನ ಕಾಲಿಗೆ ಸುತ್ತಿಕೊಂಡಿದೆ. ಮೊದಲೇ ತಲೆಯ ತುಂಬಾ ಪ್ರೇತ, ಸರ್ಪಾದಿಗಳನ್ನು ತುಂಬಿಕೊಂಡಿರುವ ನಾನು ಅದನ್ನೇ ಹಾವೆಂದೆಣಿಸಿ ಜೀವಭಯದಲ್ಲಿ ಓಟ ಕಿತ್ತಿದ್ದೆ. ಕಾಲಿಗೆ ಸುತ್ತಿಕೊಂಡು ಬಾಗಿಲ ತನಕ ಜೊತೆಗೇ ಬಂದ ಹಗ್ಗ ಬಾಗಿಲ ಬುಡದಲ್ಲಿ ಜಾರಿಹೋಗಿತ್ತು.

ಸರಿರಾತ್ರಿಯಲ್ಲಿ ನನ್ನನ್ನು ಇಷ್ಟೆಲ್ಲಾ ಅಟ್ಟಾಡಿಸಿದ ಆ ಭಯಾನಕ ಸರ್ಪವನ್ನು ನೋಡುತ್ತಾ ಮೂವರೂ ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದರೆ ನಾನು ಮಾತ್ರ ಅದನ್ನು ಸುಟ್ಟುಬಿಡುವಂತೆ ಗುರಾಯಿಸುತ್ತಾ ನಿಂತೆ....

                  *******************

ದೆವ್ವಗಳು ಇವೆಯೋ ಇಲ್ಲವೋ, ಅವುಗಳ ಹೆಸರಿನಲ್ಲಿ ಹತ್ತುಹಲವು ಸ್ವಾರಸ್ಯಕರ ಕಥೆಗಳಿರುವುದಂತೂ ನಿಜ. ನನ್ನ ಅಜ್ಜನ ಮನೆಯಿರುವುದು ಸಾಗರ ತಾಲೋಕಿನ ಒಂದು ಹಳ್ಳಿಯಲ್ಲಿ.  ಅಲ್ಲಿ ಒಳಗೊಳಗೆ ಹೋದಂತೆಲ್ಲಾ ಪ್ರತೀ ಕಿಲೋಮೀಟರ್ ಗೆ ಮೂರೋ ನಾಲ್ಕೋ ಮನೆಗಳಿವೆ ಅಷ್ಟೇ. ಈಗ ಸಂಖ್ಯೆ ಜಾಸ್ತಿಯಾಗಿದೆ ಬಿಡಿ; ಗುಡ್ಡ, ಬೆಟ್ಟ, ಕಾಡುಗಳೇ ಹೆಚ್ಚಾಗಿರುವ ಆ ಊರಿನಲ್ಲಿ ದೆವ್ವ-ಭೂತದ ಕಥೆಗಳು ಅನೇಕ. ನನಗೆ ಅಜ್ಜ ಹಾಗೂ ಅಮ್ಮ ಹೇಳಿದ ಕೆಲವೊಂದು ಕಥೆಗಳನ್ನು ನಿಮಗೂ ಹೇಳುತ್ತೇನೆ ಕೇಳಿ:

ಅಜ್ಜನ ಮನೆಯಿರುವುದು ಮುಖ್ಯ ರಸ್ತೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಕಾಡಿನ ಮಧ್ಯೆ. ಎಡಗಡೆಯ ಗುಡ್ಡ ಹಾಗೂ ಬಲಗಡೆಯ ಇಳಿಜಾರಿನ ಮಧ್ಯೆ ಸಾಗುತ್ತದೆ ಇಕ್ಕಟ್ಟಾದ ಮಣ್ಣು ರಸ್ತೆ. ಸುತ್ತಲೂ ಕಾಡು, ಪೊದರು ಹಾಗೂ ಹುಲ್ಲು. ಮನೆಗೆ ಏನೇ ಸಣ್ಣದೊಂದು ವಸ್ತು ಬೇಕೆಂದರೂ ಐದು ಕಿಲೋ ಮೀಟರ್ ದೂರದ ತುಮರಿಗೇ ಹೋಗಬೇಕು. ಅಮ್ಮ ಚಿಕ್ಕವಳಿದ್ದಾಗ ಅವಳಪ್ಪ ಅಂದರೆ ನನ್ನ ಅಜ್ಜ ಹಗಲಿಡೀ ದೇವರ ಪೂಜೆ ಹಾಗೂ ತೋಟದ ಕೆಲಸಗಳಲ್ಲಿ ಮುಳುಗಿಹೋಗಿರುತ್ತಿದ್ದ. ಸಂಜೆ ಕಳೆದ ಮೇಲೆ ಮನೆಗೆ ಬೇಕಾದ ವಸ್ತುಗಳನ್ನ ತರಲೆಂದು ದೂರದ ತುಮರಿಗೆ ಹೋಗುತ್ತಿದ್ದ. ಮರಳುವಾಗ ರಾತ್ರೆ ಹತ್ತಾಗುತ್ತಿತ್ತು. ಒಮ್ಮೆ ಆ ಕಿಷ್ಕಿಂದೆಯಂತಹಾ ದಾರಿಯಲ್ಲಿ, ಕಾಳ ಕತ್ತಲಿನಲ್ಲಿ ಒಬ್ಬನೇ ಸಾಮಾನುಗಳ ಮೂಟೆ ಹೊತ್ತು ಬರುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಯಾರೋ ನಿಂತಂತೆ ಭಾಸವಾಯಿತು. ಅದರತ್ತ ಗಮನ ಹರಿಸದೇ ಮುಂದೆ ಬಂದರೆ ಸ್ವಲ್ಪ ದೂರದಲ್ಲಿ ಮತ್ತೆ ಅದೇ ಆಕೃತಿ ನಿಂತಿದೆ! ಅದನ್ನೂ ಕಡೆಗಣಿಸಿ ಮುಂದೆ ಬಂದರೆ ಹಿಂದಿನಿಂದ "ಚಿದಂಬರಾ... ಚಿದಂಬರಾ..." ಎಂದು ಕರೆದ ಸದ್ದು! ಆದರೆ ದಿನವೂ ಗಂಟೆಗಟ್ಟಲೆ ಜಪತಪಾದಿಗಳನ್ನು ಮಾಡುತ್ತಿದ್ದ ಅಜ್ಜ ಇದ್ಯಾವುದಕ್ಕೂ ಹೆದರದೇ ಮನೆ ತಲುಪಿದನಂತೆ.

ಇನ್ನೊಮ್ಮೆ ಅಜ್ಜನ ಜೊತೆ ಮನೆಯ ಎದುರಿನ ಕಣದಲ್ಲಿಕೆಲಸ ಮಾಡುತ್ತಿದ್ದ ನನ್ನ ದೊಡ್ಡ ಮಾವ (ಆಗಿನ್ನೂ ಅವರು ಚಿಕ್ಕವರಿದ್ದರು) ಗುದ್ದಲಿಯನ್ನು ಅಲ್ಲೇ ಮರೆತು ಬಂದುಬಿಟ್ಟರು. ರಾತ್ರೆ ಊಟ ಮಾಡಿದ ಮೇಲೆ ಅದನ್ನು ತರಲೆಂದು ಮತ್ತೆ ಅಲ್ಲಿಗೆ ಹೋಗಿ ನೋಡಿದರೆ ಆ ಜಾಗದಲ್ಲಿ  ಬಿಳಿಯ ಆಕೃತಿಯೊಂದು ಗುದ್ದಲಿಯನ್ನು ಹಿಡಿದು ನಿಂತುಕೊಂಡಿದೆ! ಇವರು ನೋಡುತ್ತಿರುವಂತೆಯೇ ಅದು ಕುಳ್ಳಗಾಗುತ್ತಾ ಹೋಗಿ ಕೊನೆಗೆ ಮಾಯವೇ ಆಯಿತಂತೆ. ಭೀತರಾಗಿ ಅಳುತ್ತಾ ಮನೆಗೆ ಬಂದ ಮಾವ ಒಂದು ವಾರ ಛಳಿ ಜ್ವರ ಹಿಡಿದು ಮಲಗಿಬಿಟ್ಟರು.

ಇವೆಲ್ಲಾ ನಮಗೆ ಅಜ್ಜ ಹೇಳಿದ ಕಥೆಯಾದ್ದರಿಂದ ಅದನ್ನು ಅಷ್ಟಾಗಿ ನಂಬುವಂತಿಲ್ಲ. ಏಕೆಂದರೆ ಮೊದಲೇ "ಬೋಕಾಳಿ ಮಾಂತ್ರಿಕ" ಎಂದು ತಮಾಷೆ ಮಾಡಲ್ಪಡುತ್ತಿದ್ದ ಅಜ್ಜ ಹೇಳುವುದರಲ್ಲಿ ಅರ್ಧಕ್ಕರ್ಧ ಬೋಕಾಳಿಯೇ ಆಗಿರುತ್ತಿತ್ತು. ಆದರೆ ಮುಂದಿನದು ನನಗೆ ಅಮ್ಮ ಹೇಳಿದ ಕಥೆ. ಇವತ್ತಿಗೂ ಅವಳು ಅದನ್ನು ಸತ್ಯ ಎಂದೇ ವಾದಿಸುತ್ತಾಳೆ.

ಆಗ ಅಮ್ಮ ಇನ್ನೂ ಮಿಡ್ಲಿಸ್ಕೂಲಿನಲ್ಲಿದ್ದಳು. ಒಂದು ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ಬಂದು ಊಟವಾದ ಮೇಲೆ ಅಕ್ಕ ಪಕ್ಕದ ಮನೆಯ ಹುಡುಗ ಹುಡುಗಿಯರೆಲ್ಲಾ ಒಟ್ಟಾಗಿ ಸ್ವಲ್ಪ ದೂರದಲ್ಲಿದ್ದ ತೋಟಕ್ಕೆ ಪೇರಳೆ ಹಣ್ಣುಕೊಯ್ಯಲು ಹೊರಟರು. ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ಹೊರಟವರಿಗೆ ಗೊತ್ತಿಲ್ಲದ ಸಂಗತಿಯೆಂದರೆ ಆ ಜಾಗದ ಸಮೀಪದಲ್ಲಿ ಕೆಲವೇ ದಿನಗಳ ಕೆಳಗೆ ಅಕಾಲ ಮರಣಕ್ಕೀಡಾಗಿದ್ದ ಬಾಣಂತಿಯೊಬ್ಬಳನ್ನು ಸುಟ್ಟಿದ್ದರೆಂಬುದು!

ಎಲ್ಲರೂ ಪೇರಳೆ ಮರಕ್ಕೆ ಲಗ್ಗೆಯಿಟ್ಟರು. ಬೇಕಾದಷ್ಟು ಹಣ್ಣು ತಿಂದು ಉಳಿದಿದ್ದನ್ನು ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡು ಇನ್ನೇನು ಹೊರಡಬೇಕು, ಅಷ್ಟರಲ್ಲಿ ಭಯಾನಕವಾದ ಆರ್ತನಾದವೊಂದು ತೀರಾ ಹತ್ತಿರದಿಂದಲೇ ಕೇಳಿಬಂತು! ಸುತ್ತಲೂ ನೋಡಿದ ಅಮ್ಮನಿಗೆ ಏನೂ ಕಾಣಲಿಲ್ಲ. ಆದರೆ ಜೊತೆಯಲ್ಲಿದ್ದವರೆಲ್ಲಾ 'ದೆವ್ವ ಬರ್ತಿದ್ದು... ಓಡೇ' ಅಂತ ಅರಚಿದಾಗ ಹಿಂದುಮುಂದು ನೋಡದೇ ನಾಗಾಲೋಟ ಕಿತ್ತಿದ್ದಾಳೆ. ಆ ಭಯಾನಕ ಸದ್ದೂ ಇವರನ್ನು ಬೆನ್ನತ್ತಿ ಬಂದಿದೆ. ಓಟದ ಮಧ್ಯೆ ಒಮ್ಮೆ ಅಮ್ಮ ತಿರುಗಿ ನೋಡಿದಳಂತೆ. ವಿವರಣೆಗೆ ನಿಲುಕದ, ವಿಚಿತ್ರ ಆಕಾರವೊಂದು ಕಪ್ಪಿನಿಂದ ಕಪ್ಪಿಗೆ (ಅಡಿಕೆ ತೋಟದಲ್ಲಿ ಎರೆಡು ಸಾಲುಗಳ ನಡುವೆ ಮಾಡಿರುವ ಕಾಲುವೆಯಂತಹ ಉದ್ದದ ತೋಡು) ಹಾರುತ್ತಾ ಬರುತ್ತಿರುವುದು ಕಂಡಿದೆ. ಮತ್ತೇನೂ ಯೋಚಿಸದೆ ಪ್ರತಿಯೊಬ್ಬರೂ ಒಬ್ಬೊಬ್ಬ ಆಂಜನೇಯನಂತೆ ಹೊಂಡ,ಗುಂಡಿ,ಏರು, ತಗ್ಗುಗಳೆಲ್ಲವನ್ನೂ ಒಂದೇ ನೆಗೆತಕ್ಕೆ ನೆಗೆಯುತ್ತಾ ಮನೆ ತಲುಪಿದರು. ತನ್ನ 'ಸೀಮೆ' ಮುಗಿಯುವ ತನಕ ಇವರನ್ನು ಬೆನ್ನಟ್ಟಿದ ಆ ಅವರ್ಣನೀಯ ಆಕೃತಿ ನಂತರ ಮರೆಯಾಯಿತು.

ಇನ್ನೊಂದು ಅವಳ ಶಾಲೆಯಲ್ಲಿ ನಡೆದ ಘಟನೆ: ಆಗ ಶಾಲೆಗಳಲ್ಲಿ ಈಗಿನಂತೆ ಬಿಸಿಯೂಟ ಇರಲಿಲ್ಲ. ಮಧ್ಯಾಹ್ನದ ಊಟಕ್ಕೆ  ಮನೆ ಸಮೀಪವಿರುವವರು ತಮ್ಮ ಮನೆಗೇ ಹೋಗುತ್ತಿದ್ದರೆ, ಉಳಿದವರು ಹತ್ತಿರದಲ್ಲಿರುವ ತಮ್ಮ ಪರಿಚಿತರ ಮನೆಗೋ ಅಥವಾ ನೆಂಟರಿಷ್ಟರ ಮನೆಗೋ ಹೋಗುತ್ತಿದ್ದರು. ಹಾಗಾಗಿ ಮಧ್ಯಾಹ್ನ ಊಟದ ಸಮಯದಲ್ಲಿ ಶಾಲೆಯಲ್ಲಿರುತ್ತಿದ್ದವರು ತೀರಾ ಕಡಿಮೆ. ಕೆಲವೊಂದು ಹುಡುಗಿಯರ ನಡುವೆ ಹೀಗೆ ಊಟಕ್ಕೆ ಹೋಗಿ ಬರುವುದರಲ್ಲೊಂದು ಪೈಪೋಟಿ- ಯಾರು ಮೊದಲು ಊಟ ಮುಗಿಸಿ ಬರುತ್ತಾರೆ ಅಂತ. ಈ ಸ್ಪರ್ಧೆಯಲ್ಲಿ ಸದಾ ಸೋಲುತ್ತಿದ್ದ ಹುಡುಗಿಯೊಬ್ಬಳು ಏನೇ ಆದರೂ ಇಂದು ತಾನು ಗೆಲ್ಲಲೇ ಬೇಕೆಂದು ಒಂದು ದಿನ ಮಧ್ಯಾಹ್ನ ಬಹಳ ಬೇಗ ಊಟ ಮುಗಿಸಿ ಮರಳಿದಳಂತೆ. ತರಗತಿಗೆ ಬಂದು ನೋಡಿದರೆ ಇನ್ನೂ ಯಾರೂ ಬಂದಿಲ್ಲ. ಕೊನೆಗೂ ತಾನು ಗೆದ್ದೆನೆಂದು ಬೀಗುತ್ತಾ, ಗೆಳತಿಯರು ಬಂದ ಮೇಲೆ ಅವರಿಗೆ ಹೇಗೆ ಹೊಟ್ಟೆ ಉರಿಸಬೇಕೆಂದು ಯೋಚಿಸುತ್ತಾ ಒಬ್ಬಳೇ ತರಗತಿಯಲ್ಲಿ ಕೂತಿದ್ದಾಳೆ. ಆಗಲೇ ಕೊಠಡಿಯ ಹಿಂದಿನ ಭಾಗದ, ಕಾಡಿನಕಡೆ ತೆರೆದಿರುವ ಕಿಟಕಿಯಿಂದ ಘಲ್..ಘಲ್.. ಎಂದು ಬಳೆಯ ಸದ್ದು ಕೇಳಿದೆ. ಗೆಳತಿಯರು ಬಂದರೆಂದು ಅವಳು ಇಣುಕಿ ನೋಡಿದರೆ ಯಾರೂ ಇಲ್ಲ! ಅಷ್ಟರಲ್ಲಿ ಮತ್ತದೇ ಕಡೆಯಿಂದ ಬಳೆಯ ಸದ್ದು, ಈ ಬಾರಿ ತುಸು ಜೋರಾಗೇ ಕೇಳಿದೆ. ತಾನು ಗೆದ್ದೆನೆಂಬ ಹೊಟ್ಟೇಕಿಚ್ಚಿಗೆ ತನ್ನ ಗೆಳತಿಯರೇ ಹೀಗೆ ಹೆದರಿಸುತ್ತಿದ್ದಾರೆಂದೆಣಿಸಿದ ಅವಳು "ನನ್ನೇ ಹೆದರಿಸ್ತ್ರಾ? ಹಿಂದಿಂದ ಬಂದ್ರೆ ಯಂಗ್ ಗೊತ್ತಾಗ್ತಲ್ಲೆ ಅಂದ್ಕಂಡ್ರಾ" ಎನ್ನುತ್ತಾ ಕಿಟಕಿಯತ್ತ ನಡೆದಿದ್ದಾಳೆ.

ಆಗಲೇ ಕಿಟಕಿಯ ಸರಳುಗಳ ಮೇಲೆ ಬಣ್ಣಬಣ್ಣದ ಬಳೆಗಳನ್ನು ತೊಟ್ಟಿರುವ ವಿಕಾರವಾದ ಕಡುಗಪ್ಪು ಕೈಯೊಂದು ಕಂಡಿದೆ!

ಭೀತಳಾದ ಹುಡುಗಿ ಕಿರುಚಿಕೊಂಡು ಕೊಠಡಿಯಿಂದ ಹೊರಾಗೋಡಿದಳು. ಮುಖ ಬಿಳುಚಿಕೊಂಡು ಓಡಿ ಬರುತ್ತಿರುವವಳನ್ನು ಆಗಷ್ಟೇ ಶಾಲೆ ಪ್ರವೇಶಿಸುತ್ತಿದ್ದ ಮಾಸ್ತರು ನಿಲ್ಲಿಸಿ ಏನಾಯಿತೆಂದು ಕೇಳಿದರು. ಅವಳು ನಡೆದದ್ದೆಲ್ಲವನ್ನೂ ಹೇಳಿ, ಅವರೂ ಬಂದು ನೋಡಿದರೆ ಕೊಠಡಿಯಲ್ಲಿ ಯಾವ ಬಳೆಯೂ ಇಲ್ಲ, ಕೈಯ್ಯೂ ಇಲ್ಲ!

ಹೆದರಿದ ಹುಡುಗಿ ವಾರ ಪೂರಾ ಛಳಿ ಜ್ವರ ಬಂದು ಮಲಗಿದ್ದಳೆಂದು ಪ್ರತ್ಯೇಕಾವಾಗಿ ಹೇಳಬೇಕಿಲ್ಲವಲ್ಲಾ?

                       ****************

ಇವೆಲ್ಲವೂ ನಾನು ಹುಟ್ಟುವ ಮೊದಲೇ ನಡೆದ ಅಥವಾ ಸೃಷ್ಟಿಸಿದ ಕಥೆಗಳು. ಆದರೆ ಇಂದಿಗೂ ಜೀವಂತವಾಗಿರುವ ಘಟನೆಯೊಂದು ದೆವ್ವ ಭೂತಗಳ ಬಗ್ಗೆ ತೀರಾ ಹಗುರವಾಗಿ ಯೋಚಿಸದಂತೆ ಮಾಡಿದೆ.

ನನ್ನ ಅಜ್ಜಿಯ (ಅಮ್ಮನ ಅಮ್ಮ) ಕೊನೆಯ ತಂಗಿ ಆಗ ಎರೆಡು-ಮೂರು ತಿಂಗಳ ಬಾಣಂತಿಯಾಗಿದ್ದರು. ಒಂದು ದಿನ ರಾತ್ರಿ ಮನೆಯವರೆಲ್ಲಾ ಊಟ ಮಾಡಿದ ಬಾಳೇ ಎಲೆಗಳನ್ನು ಎಸೆಯಲೆಂದು ಮನೆಯ ಹಿಂದಿನ ಗೊಬ್ಬರದ ಗುಂಡಿಯತ್ತ ಹೋದವರು ಭಯದಿಂದ ನಡುಗುತ್ತಾ ವಾಪಾಸು ಬಂದರು. ಏನಾಯಿತೆಂದು ಕೇಳಿದರೆ ಅಲ್ಲಿ ಯಾರೋ ಇದ್ದಾರೆಂದು ಹೊರಗಿನ ಕತ್ತಲಿನತ್ತ ಕೈ ತೋರಿಸುತ್ತಾ ಮತ್ತಷ್ಟು ನಡುಗಿದರು.

ಆ ಘಟನೆ ನಡೆದ ಕೆಲ ದಿನಗಳಿಗೆಲ್ಲಾ ಅವರ ವರ್ತನೆ ಬದಲಾಗುತ್ತಾ ಹೋಯಿತು. ಏನೋ ಕೆಲಸ ಮಾಡುತ್ತಿದ್ದವರು ಇದ್ದಕ್ಕಿದ್ದಂತೆ ಒಂದು ಮೂಲೆ ಸೇರಿ ಕುಳಿತುಬಿಡುತ್ತಿದ್ದರು. ತಮ್ಮಷ್ಟಕ್ಕೆ ತಾವೇ ಗಿಟಿಗಿಟಿ ಅಂತ ನಗಲಾರಂಭಿಸುತ್ತಿದ್ದರು. ಬರುಬರುತ್ತಾ ಅದು ವಿಪರೀತಕ್ಕೆ ತಿರುಗಿತ್ತು. 'ಆ' ಸ್ಥಿತಿಗೆ ಹೋದಾಗ ಎದುರಿಗಿದ್ದವರ ಮೇಲೆ ಹರಿಹಾಯಲಾರಂಭಿಸಿದರು. ಕೊನೆಗೆ ನಾನಾ ಜಪ-ತಪಾದಿ ಮಂತ್ರ-ಪೂಜೆಗಳಿಂದ ಅವರನ್ನು ಒಂದು ಹಂತಕ್ಕೆ ಸುಧಾರಿಸಿದರಂತೆ.

ಅವರು ಈಗಲೂ ಹಾಗೇ ಇದ್ದಾರೆ. ಚೆನ್ನಾಗಿ ಮಾತನಾಡುತ್ತಿರುವವರ ಧಾಟಿ ಇದ್ದಕ್ಕಿದ್ದಂತೆಯೇ ಬದಲಾಗಿಬಿಡುತ್ತದೆ. ಒಮ್ಮೆಗೇ ವಿಚಿತ್ರವಾದ ನಗು, ಸ್ವರದಲ್ಲೊಂದು ಗಡಸುತನ ಬಂದುಬಿಡುತ್ತದೆ. ಆ ಇಳಿವಯಸ್ಸಿನ ದೇಹದಲ್ಲೂ ಅಗಾಧವಾದ ಶಕ್ತಿ ಅದೆಲ್ಲಿಂದ ಬರುತ್ತದೋ ಏನೋ, ಅಪ್ರಿಯವಾಗಿ ಮಾತನಾಡಿದವರ ಹಾಗೂ ತಡೆಯಲು ಬಂದವರ ಮೇಲೆ ಧಾಳಿ ಮಾಡುತ್ತಾರೆ. ಒಮ್ಮೆ ಅವರು ಒಳಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಹೊರಗೆ ಅವರ ಸಂಬಂಧಿಕರಲ್ಲೇ ಒಬ್ಬರು 'ಭೂತ-ಪ್ರೇತ ಎಂತದೂ ಇಲ್ಲೆ. ಎಲ್ಲ ಬರೀ ನಾಟ್ಕ!' ಅಂದರಂತೆ. ಒಳಗಿದ್ದ ಯಾರಿಗೂ ಕೇಳಿಸದ್ದು ಅವರಿಗೆ ಮಾತ್ರ ಹೇಗೆ ಕೆಳಿಸಿತೋ ಏನೋ,  'ಏನೋ ಅಂದೆ? ಇನ್ನೊಂದ್ಸಲ ಹೇಳು ನೋಡಣ' ಎನ್ನುತ್ತಾ ಸೀರೆ ಎತ್ತಿಕಟ್ಟಿ ನುಗ್ಗಿಬಂದೇಬಿಟ್ಟರು. ಕಕ್ಕಾಬಿಕ್ಕಿಯಾದ ಆ ಆಸಾಮಿ ಒಂದೇ ನೆಗೆತಕ್ಕೆ ಬೇಲಿ ಹಾರಿ ತಮ್ಮ ಮನೆಯತ್ತ ಓಟ ಕಿತ್ತರು!
                        ******************

ಭಯದ ಕಣ್ಣಿಗೆ ಪ್ರತಿಯೊಂದೂ ಭೂತವೇ. ಉದಾಹರಣೆಗೆ ನಮಗೆಲ್ಲ ನಮ್ನಮ್ಮ ಬಾಸ್ ಗಳು ದೆವ್ವದಂತೆ ಕಾಣುವುದು ಯಾಕೆ ಹೇಳಿ? ಒಳಗೆಲ್ಲೋ ಅವರಮೇಲಿರುವ ಭಯದಿಂದ ತಾನೇ? ಇತ್ತೀಚೆಗೆ ಭೂತಗಳ ಚೇಷ್ಟೆ ಕಡಿಮೆಯಾಗಿದೆ ಅಂತ ನಾವೆಲ್ಲ ನಿರಾಳರಾಗಿದ್ದೇವೆ ನಿಜ; ಆದರೆ ಯಾರಿಗೆ ಗೊತ್ತು, ಅವೂ ಸಹಾ ನಮ್ಮಂತೇ 'ಅಪ್ಡೇಟ್' ಆಗಿ ಕತ್ತಲ ಸ್ಮಶಾನಗಳಿಂದ, ಪಾಳುಬಿದ್ದ ಬಂಗಲೆಗಳಿಂದ ಹೊರಬಂದು ಈ ರಾಜಕಾರಣಿಗಳ, ಭ್ರಷ್ಟ ಅಧಿಕಾರಿಗಳ, ಆಫೀಸಿನ ಬಾಸ್ ಗಳ ದೇಹಸೇರಿ 'ಆಧುನಿಕ' ರೀತಿಯಲ್ಲಿ ನಮ್ಮನ್ನು ಕಾಡುತ್ತಿರಬಹುದಲ್ಲವೇ?!

ಭೂತಗಳ ನಾಡಾಗಿದ್ದ ನಮ್ಮ ಅಜ್ಜನಮನೆಯಲ್ಲಿ ನಾನು ಬೇಸ್ತುಬಿದ್ದ ಈ ಕೆಳಗಿನ ಕಥೆಯ ಮೂಲಕ ನನ್ನೀ ಲೇಖನವನ್ನು ಮುಗಿಸುತ್ತೇನೆ.

ಸುಮಾರು ಹದಿನೈದು ವರ್ಷಗಳ ಕೆಳಗೆ, ತೀರಿಹೋದ ಅಜ್ಜಿಯ ಅಪರಕರ್ಮಗಳಿದ್ದುದರಿಂದ ಅಮ್ಮ ಹಾಗೂ ಅವಳ ಅಣ್ಣ, ತಂಗಿಯರೆಲ್ಲ ಅಜ್ಜನ ಮನೆಯಲ್ಲಿ ಒಟ್ಟಾಗಿದ್ದರು. ಒಳಗೆ ವಿವಿಧ ಕ್ರಿಯಾಕರ್ಮಗಳು ನಡೆಯುತ್ತಿದ್ದರೆ ಮಕ್ಕಳಾದ ನಾವು ಹೊರಗಡೆ ಆಡಿಕೊಳ್ಳುತ್ತಿದ್ದೆವು. ಭೂತಗಳ ಬಗ್ಗೆ ಎಷ್ಟೇ ಭಯವಿದ್ದರೂ ಹಗಲಿಡೀ ನಾವು ಆಡುತ್ತಿದ್ದುದು ಭೂತದ ಆಟಗಳನ್ನೇ. ರಾತ್ರೆಯಾದರೆ ಎಲ್ಲರೂ ಒಂದು ಕೋಣೆಯಲ್ಲಿ ಒಟ್ಟಾಗಿ ಭೂತದ ಕಥೆಗಳನ್ನು ಹೇಳುವ ಸ್ಪರ್ಧೆಯನ್ನೇ ಏರ್ಪಡಿಸುತ್ತಿದ್ದೆವು. ಒಬ್ಬರಿಗಿಂತ ಒಬ್ಬರು ಭಯಾನಕ, ಭೀಭತ್ಸಕರವಾದ ಭೂತಗಳ ಕಥೆ ಹೇಳುತ್ತಾ, ನಾವು ಸೃಷ್ಟಿಸಿದ ಪ್ರೇತಗಳನ್ನು ನೆನೆದು ನಾವೇ ಗಡಗಡ ನಡುಗುತ್ತಾ ಸ್ಪರ್ಧೆ ಮುಂದುವರಿಸಿತ್ತಿದ್ದೆವು.

ಆದಿನ ಮಧ್ಯಾಹ್ನವೂ ಅಂತಹದ್ದೇ ಆಟವೊಂದನ್ನ ಆಯೋಜಿಸಲಾಗಿತ್ತು. ಮನೆಯಿಂದ ಸ್ವಲ್ಪ ದೂರದಲ್ಲಿ ಅಡಿಕೆ ದಬ್ಬೆಯ ಹಳೆಯ ಬೇಲಿಗಳನ್ನು ಇರಿಸಿದ್ದರು. ಅಲ್ಲೇ ನಮ್ಮ ಆಟ ಶುರುವಾಯಿತು. ಆಟದ ಕಥೆ ಇಷ್ಟೇ. ಅದೊಂದು ಭೂತದ ಬಂಗಲೆ. ನಾವು ಹೇಗೋ ಅದರೊಳಗೆ ಸಿಕ್ಕಿಕೊಳ್ಳುತ್ತೇವೆ. ಭೂತ ನಮ್ಮನ್ನು ಕಾಡಿಸುತ್ತದೆ. ಕೊನೆಗೆ ಕಥೆಯ ಹೀರೋ ಬಂದು ಭೂತವನ್ನು ಸಾಯಿಸಿ (!!) ನಮ್ಮನ್ನೆಲ್ಲಾ ಕಾಪಾಡುತ್ತಾನೆ.

ಪಾತ್ರಗಳ ಹಂಚಿಕೆ ಶುರುವಾಯಿತು. ಒಬ್ಬಳಿಗೆ ಮುಖಕ್ಕೆ ಭೂತದಂತೆ ಬಿಳೀ ಬಟ್ಟೆ ಹೊದಿಸಿ ನಿಲ್ಲಿಸಲಾಯಿತು. ಮಾತಿನಲ್ಲಿ ಜೋರಿನವನಾದ, ನನ್ನ ದೊಡ್ಡ ಮಾವನ ಮಗ ಎಲ್ಲರನ್ನೂ ಕಾಪಾಡುವ ಹೀರೋ ಆಗಿ ಕೈಯ್ಯಲ್ಲೊಂದು ಮಂತ್ರದಂಡ ಹಿಡಿದು ನಿಂತ. ಉಳಿದವರೆಲ್ಲರೂ ದಾರಿ ತಪ್ಪಿದವರಾಗಿ ಬೇಲಿಯ ಬಂಗಲೆಯೊಳಗೆ ಕುಳಿತೆವು. ಆಟ ಇನ್ನೇನು ಆರಂಭವಾಗಬೇಕು.

"ಅಲ್ನೋಡಿ ಅಲ್ಲಿ.... ದೆವ್ವ!"
ತಂಗಿ ಕೈ ತೋರಿಸಿದ ದಿಕ್ಕಿನತ್ತಲೇ ಎಲ್ಲರೂ ನೋಡಿದೆವು. ಕುಳ್ಳಗೆ ದಪ್ಪಗಿರುವ, ಕೊರಳಲ್ಲಿ ಮೂಳೆಯ ಮಾಲೆ ಧರಿಸಿರುವ ಭಯಾನಕ ದೆವ್ವವೊಂದು ವಿಕಾರವಾಗಿ ಬಾಯಿ ತೆರೆದುಕೊಂಡು ನಮ್ಮತ್ತಲೇ ನಡೆದು ಬರುತ್ತಿತ್ತು!!!

ಅಷ್ಟೇ! ಕಥೆಯಲ್ಲಷ್ಟೇ ಬರಬೇಕಿದ್ದ ದೆವ್ವ ಹೀಗೆ ಭೀಕರ ರೂಪದಲ್ಲಿ ಕಣ್ಣೆದುರೇ ಬರುತ್ತಿರುವುದನ್ನು ನೋಡಿ ಕಕ್ಕಾಬಿಕ್ಕಿಯಾದ ಪಾತ್ರಧಾರಿಗಳೆಲ್ಲಾ ಕಣ್ಮುಚ್ಚಿ ತರೆಯುವುದರೊಳಗೆ ಸತ್ತೆನೋ ಕೆಟ್ಟೆನೋ ಎಂದು ಎದ್ದು ಓಡತೊಡಗಿದೆವು. ದೆವ್ವದ ಜೊತೆ ಬಡಿದಾಡುವ 'ಹೀರೋ' ಆಗಿದ್ದ ಮಾವನ ಮಗ ಕೈಯ್ಯಲ್ಲಿದ್ದ ದಂಡವನ್ನ ಎತ್ತಲೋ ಬಿಸಾಡಿ ಎಲ್ಲರಿಗಿಂತಲೂ ಮುಂದೆ ಓಡುತ್ತಿದ್ದ. "ಕಾಪಾಡೀsss..." ಎಂದು ಕಿರುಚುತ್ತಾ  ಮನೆಯ ಆವರಣ ತಲುಪಿ ಒಮ್ಮೆ ತಿರುಗಿ ನೋಡಿದರೆ ದೆವ್ವ ಅಟ್ಟಹಾಸ ಮಾಡುತ್ತಾ ಗೇಟು ತೆರೆದುಕೊಂಡು ಒಳಗೇ ಬರಿತ್ತಿದೆ! ಮತ್ತಷ್ಟು ಹೆದರಿದ ಪುಟ್ಟ ಹುಡುಗಿಯೊಬ್ಬಳು ಜೋರಾಗಿ ಕಿರುಚಿಕೊಂಡುಬಿಟ್ಟಳು. ಅಷ್ಟರಲ್ಲಿ ಒಳಗಿಂದ ಓಡಿಬಂದ ಚಿಕ್ಕಮ್ಮ ಒಂದೊಂದು ಬಾರಿಸಿ ಎಲ್ಲರನ್ನೂ ಈ ಲೋಕಕ್ಕೆ  ಇಳಿಸಿದರು.

ಆಗಿದ್ದೇನೆಂದರೆ, ಯಾವುದೋ ಶಾಸ್ತ್ರದ ಪೂರೈಕೆಗಾಗಿ ಹೊಳೆಗೆ ಹೋಗಿದ್ದ ನಮ್ಮ ಮಾವ ಬಿಳಿಬಣ್ಣದ ತುಂಡು ಪಂಚೆ ತೊಟ್ಟು ನಡೆದು ಬರುತ್ತಿದ್ದರು. ಸದಾ ಬಾಯಿಗೆ ಹಲ್ಸೆಟ್ ಹಾಕಿಕೊಳ್ಳುತ್ತಿದ್ದ ಅವರು ಇಂದು ಹಾಗೇ ಬೊಚ್ಚುಬಾಯಿ ಬಿಟ್ಟುಕೊಂಡು ಬರುತ್ತಿದ್ದರಲ್ಲದೇ ಹೊಳೆಯ ಕೆಸರಿನಲ್ಲಿ ಕಾಲು ಜಾರಿದ್ದರಿಂದ ಮೈ ಮಣ್ಣಾಗಿತ್ತು. ಸೊಂಟ ಹಾಗೂ ಕೊರಳಲ್ಲಿ ಕೊಳಕಾದ ತುಂಡು ಪಾಣಿ ಪಂಚೆ, ಕತ್ತಲ ಗುಹೆಯೊಂದರ ದ್ವಾರದಂತಿರುವ ಬೊಚ್ಚುಬಾಯಿ, ಬೊಕ್ಕ ತಲೆ, ಕುಳ್ಳ ನಿಲುವು, ಕಪ್ಪು- ಗುಂಡು ದೇಹ.... ನಮ್ಮ ಕಲ್ಪನೆಯ ಭೂತಕ್ಕಿಂತ ಒಂದು ಕೈ ಹೆಚ್ಚೇ ಭಯಾನಕವಾಗಿ ಕಾಣುತ್ತಿದ್ದರು ನಮ್ಮ ಮಾವ. ಎಲ್ಲರೂ ಹೆದರಿದೆವಾದರೂ ಪುಣ್ಯಕ್ಕೆ ಯಾರಿಗೂ ಛಳಿ ಜ್ವರ ಬರಲಿಲ್ಲ. ಇಲ್ಲವಾದರೆ ಎಲ್ಲರೂ ಇನ್ನೊಂದು ಸುತ್ತು ಒದೆ ತಿನ್ನಬೇಕಾಗುತ್ತಿತ್ತು...!

('ಪ್ರತಿಲಿಪಿ ಕನ್ನಡ'ದಲ್ಲಿ ಪ್ರಕಟಿತ)

ಸೋಮವಾರ, ಏಪ್ರಿಲ್ 3, 2017

ಹೀಗೊಬ್ಬ ಶಹಜಹಾನ್...

ಇಲ್ಲೊಬ್ಬ ಷಹಜಹಾನ್
ಒಬ್ಬನೇ ಮಾತನಾಡುತ್ತಾನೆ;
ಯಾವುದೋ ತಿರುವಿನಲಿ ಗಂಟೆಗಟ್ಟಲೆ ನಿಂತು,
ನಿಟ್ಟುಸಿರಿಟ್ಟು ಮರಳುತ್ತಾನೆ.
ತನ್ನ ಹಾಡಿಗೆ ತಾನೇ ಬಿಕ್ಕಿ
ಏನೇನೋ ಗೀಚುತ್ತಾನೆ;
ಮುಮ್ತಾಜ್ ಬಂದಂತೆ ಕನಸು ಕಂಡು
ಬಾಗಿಲು ತೆರೆದು ಕಾಯುತ್ತಾನೆ...

ಅವಳು ಸ್ಪರ್ಷಿಸಿದ ಕೊರಡು ಕೂಡ
ಹೂವಾಗಿ ಅರಳುತ್ತದೆ ಅವನೊಳಗೆ;
ಅವಳು ನಿಂತ, ಕುಳಿತ, ಮಾತನಾಡಿದ ಜಾಗಗಳೆಲ್ಲಾ
ತಾಜಮಹಲುಗಳು!
ಹೀಗೆ ನೆನಪಿಗೊಂದರಂತೆ ಗೋರಿ ಕಟ್ಟುತ್ತಾ
ಮರೆಯುವ ನೆಪದಲ್ಲಿ
ಅಮರವಾಗಿಸುತ್ತಿದ್ದಾನೆ...

ಮುಮ್ತಾಜ್ ಬದುಕಿಯೇ ಇದ್ದಾಳೆ!
ಅವನನ್ನು ಕಂಡೂ ಕಾಣದಂತೆ
ತನ್ನ ಪಾಡಿಗೆ ತಾನಿದ್ದಾಳೆ;
ಅವಳ ಪಾಲಿಗವನು ಎರೆಡನೆಯ ಷಹಜಹಾನ್!
ಹಿಂದೊಬ್ಬ ಛದ್ಮವೇಷದ ಷಹಜಹಾನನನ್ನ ನಂಬಿ
ತಾನೇ ಕಟ್ಟಿದ್ದ 'ಮಹಲು'
ಒಡೆದು ಚೂರಾದಾಗಲೇ ಅವಳಿಗೆ ಅರ್ಥವಾಗಿದ್ದು-
'ತಾಜಮಹಲಲ್ಲಿ ಬದುಕುವುದಕ್ಕಾಗುವುದಿಲ್ಲ!'
ಅದಕ್ಕೇನಿದ್ದರೂ
ಬಾದ್ ಷಾನ ಅರಮನೆಯೇ ಸರಿ.

ಪಾಪ ಈ ನಿಜಷಹಜಹಾನ್;
ಬಂದೇ ಇರದವಳ ಕಳುಹಿಸಲು ಮನಸ್ಸಾಗದೇ
ತನ್ನದೇ ಗೋರಿ ಕಟ್ಟಿಕೊಳ್ಳುತ್ತಾ
ಅವಳ ಹೆಸರಿಡುತ್ತಿದ್ದಾನೆ...

('ಮಂಗಳ'ದಲ್ಲಿ ಪ್ರಕಟಿತ)

ಹೀಗೊಂದು ಪ್ರೀತಿಯ ಕಥೆ...

ಮಲೆನಾಡ ಗಂಡಿಗೆ ತುಳುನಾಡ ಹೆಣ್ಣೆಡೆಗೆ
ಹೀಗೊಂದು ಪ್ರೇಮವಂತೆ..
ಹೇಳುವುದೋ, ತಾಳುವುದೋ ಅವನ ಚಿಂತೆ!

ಕಡಲತಡಿಯ ಊರವಳು, ಮಾತಿನಲಿ ಬಲು ಜೋರು,
ತನ್ನದೋ ಮೌನರಾಗ!
ಪ್ರೀತಿಯಲಿ ಮಾತೇಕೆ? ಕಿರುನಗೆಯೆ ಸಾಕದಕೆ
ಎನ್ನುವುದು ಹೃದಯ ಆಗ!

ತನ್ನೂರ ಸೂರ್ಯನೂ ಘಾಟಿಯಿಳಿದು ಜಾರುವನು,
ತುಳುನಾಡ ಕಡಲ ಮಡಿಲಿಗೆ..
ತನ್ನಂತೆ ಅವನಿಗೂ ಪ್ರೇಮವಂತೆ!

ಮಲೆನಾಡ ಹಸಿರಿಗೆ ಹನಿಸುವ ಮಳೆಮೋಡ
ತೇಲಿಬಂತು ಹೇಳು ಎಲ್ಲಿಂದ?
ಸುರಿದ ಮಳೆ ಹನಿಯೆಲ್ಲ ಹೊಳೆಯಾಗಿ ಓಡುವುದು
ಮತ್ತದೇ ಕಡಲ ಕರೆಯಿಂದ!

ತುಳುನಾಡು - ಮಲೆನಾಡ ಬೀಗ-ನೆಂಟ ಸಂಬಂಧ
ಇಂದು ನೆನ್ನೆಯದಲ್ಲ;
ಕಡಲಿಗೂ ಕಾಡಿಗೂ 'ಮೇಘ' ದೂತ!

ಬೇಸರದ ಸಂಜೆಯಲಿ ಆಗುಂಬೆ ಗಿರಿಯೇರಿ
ಹುಡುಕುವನು ಕಡಲಿನೂರ;
ತೀರದ ಮರಳಿನಲಿ, ಓಡುವ ಅಲೆಯ ಜೊತೆ
ಆಡುತಿಹ ಅವಳ ಊರ!

ತೆಂಕಣದ ತೋಟದಲಿ ಅರಳಿನಿಂತ ಹೂವೊಂದು
ತುಂಟಘಮವ ಬೀರಿ ನಕ್ಕಿದೆ;
ಬಡಗಣದಿ ಭ್ರಮರವು ನಿದಿರೆಮರೆತಿದೆ.

('ಮಂಗಳ'ದಲ್ಲಿ ಪ್ರಕಟಿತ)

ಸೋಮವಾರ, ಮಾರ್ಚ್ 27, 2017

ಕೆಲಸ ಮಾಡಿಸುವುದಕ್ಕೆ ಉರಿಗೋಪವೇ ಆಗಬೇಕೇ?

"ಒಂದೊಳ್ಳೆ ಕೆಲಸ ಸಿಗಬೇಕಂದ್ರೆ ಪುಣ್ಯ ಮಾಡಿರಬೇಕು; ಅದೇ ಒಳ್ಳೇ ಬಾಸ್ ಸಿಗಬೇಕಂದ್ರೆ ಹಿಂದಿನ ಜನ್ಮದ ಪುಣ್ಯ ಬೇಕು!"

ಈ ಮಾತು ಕೇಳಿ ಸಾಮಾನ್ಯರು ನಗಬಹುದು. ಆದರೆ ಇಂದಿನ ಐಟಿ ಹಾಗೂಕಾರ್ಪೋರೇಟ್ ಪ್ರಪಂಚದಲ್ಲಿ ದುಡಿಯುತ್ತಿರುವ ಒಬ್ಬನೇ ಒಬ್ಬನೂ ಈ ವಾಕ್ಯ ಸುಳ್ಳೆಂದು ಅಲ್ಲಗಳೆಯಲು ಸಾಧ್ಯವೇ ಇಲ್ಲ! ಹಾಗಿದೆ ಔದ್ಯೋಗಿಕ ಬದುಕಿನಲ್ಲಿ ಬಾಸ್ ಗಳ ಪಾತ್ರ.

ಮೊದಲು ಮ್ಯಾನೇಜರ್/ಬಾಸ್ ಬಗ್ಗೆ ತಿಳಿದುಕೊಳ್ಳೋಣ. ಆಧುನಿಕ ಜಗತ್ತಿನ, ಪೈಪೋಟಿಯನ್ನೇ ಉಸಿರಾಗಿಸಿಕೊಂಡು ಚಲಿಸುತ್ತಿರುವ ಖಾಸಗೀ ವಲಯದಲ್ಲಿ ಯಾವುದೇ ವಿಭಾಗದಲ್ಲಿ 'ಬಾಸ್' ಆಗುವುದೆಂದರೆ ತಮಾಷೆಯ ಮಾತಲ್ಲ. ಇಲ್ಲಿ ಯಾರದೋ ಕೈ 'ಬೆಚ್ಚಗೆ' ಮಾಡುವುದರಿಂದ ಅಥವಾ ಯಾವುದೋ ಒಂದು ಜಾತಿಯಲ್ಲಿ ಜನಿಸುವುದರಿಂದ ಮ್ಯಾನೇಜರ್ ಗಳಾಗುವದಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ವರ್ಷಗಳ ಅನುಭವ ಬೇಕು. ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಚುರುಕುತನ ಬೇಕು. ಕೊರಡನ್ನು ತೇಯ್ದು ಗಂಧವನ್ನು ತೆಗೆಯುವ ಉಪಾಯ ಗೊತ್ತಿರಬೇಕು. ನುಗ್ಗಿ ಬರುವ ಅಲೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ, ಅದರಲ್ಲೇ ಕೊಳೆ ತೊಳೆದುಕೊಳ್ಳುವ ಜಾಣತನವೂ ಇರಬೇಕು! ಆಗಲೇ ಒಬ್ಬ ಸಾಮಾನ್ಯ ಕೆಲಸಗಾರನೊಬ್ಬ  'ಬಾಸ್' ಆಗಲು ಸಾಧ್ಯ. ಆದರೆ ಇಷ್ಟಲ್ಲಾ ದೊಡ್ಡ ಗುಣಗಳನ್ನು ಮೈಗೂಡಿಸಿಕೊಳ್ಳುವ ಭರದಲ್ಲಿ ತನ್ನ ಕೈಕೆಳಗಿನವರನ್ನು ಹೇಗೆ ನಡೆಸಿಕೊಳ್ಳಬೇಕು, ಅವರ ಜೊತೆ ಹೇಗೆ ನಡೆದುಕೊಳ್ಳಬೇಕೆಂಬ 'ಸಣ್ಣ' ವಿಷಯವನ್ನವರು ಮರೆಯುತ್ತಿದ್ದಾರಾ?

ಬಹುಷಃ ಹೆಚ್ಚಿನ ಉತ್ತರಗಳು 'ಹೌದು' ಎಂದೇ ಬರುತ್ತವೆ. ಒಂದು ತಂಡವನ್ನಾಗಲೀ, ವ್ವವಸ್ಥೆಯನ್ನಾಗಲೀ ಮುನ್ನಡಿಸಬೇಕೆಂದರೆ ಅಲ್ಲಿ ಒತ್ತಡ ಹಾಕಬೇಕು, ಅಧಿಕಾರಯುತವಾದ ಅಪ್ಪಣೆಯಿರಬೇಕು, ತಪ್ಪುಗಳನ್ನು ತಡೆಯುವ ಗದರಿಕೆಯಿರಬೇಕು.... ಇದೆಲ್ಲಾ ನಿಜವೇ. ಆದರೆ ಎಷ್ಟರಮಟ್ಟಿಗೆ? ಒತ್ತಡವೇ ವಾತಾವರಣವಾಗಿಬಿಟ್ಟರೆ? ಪ್ರತೀ ಮಾತೂ ಗದರಿಕೆಯೇ ಆಗಿಹೋದರೆ? ಪ್ರತಿಯೊಂದು ಕೆಲಸವನ್ನೂ ನಡುಗುವ ಕೈಯ್ಯಲ್ಲೇ ಮಾಡುವಂತಾದರೆ? ಆಗ ಉದ್ಯೋಗವೆನ್ನುವುದು ಕೇವಲ ಯಂತ್ರಗಳೊಂದಿಗೆ ಒಡನಾಡುವ 'ಕರ್ಮ'ವಾಗುತ್ತದೇ ಹೊರತು ಮನಸ್ಸಿಗೆ ನೆಮ್ಮದಿಕೊಡುವ 'ಕಾಯಕ'ವಾಗುವುದೇ ಇಲ್ಲ!

ಐಟಿ,ಕಾರ್ಪೋರೇಟ್ ಉದ್ಯೋಗಿಗಳ ಬದುಕೆನ್ನುವ ದೂರದ ಬೆಟ್ಟದಲ್ಲಿ ಅದೆಷ್ಟೋ ಕಲ್ಲುಮುಳ್ಳುಗಳು. ಬೆಳಗ್ಗೆ ಎದ್ದೊಡನೆಯೇ ತಯಾರಾಗಿ ಓಡಬೇಕು. ರುಚಿಯಿರಲೇಬೇಕು ಎಂದೇನೂ ಇಲ್ಲದ ಬೆಳಗಿನ ಉಪಹಾರ; ತಡವಾದರೆ ಅದೂ ಇಲ್ಲ. ಚಲಿಸುವುದಕ್ಕಿಂತ ನಿಲ್ಲುವುದೇ ಜಾಸ್ತಿಯಿರುವ ಟ್ರಾಫಿಕ್ನಲ್ಲಿ, ಸಂದಣಿಭರಿತ ಬಸ್ನಲ್ಲಿ ಒಂಟಿ ಕಾಲಲ್ಲಿ ಎಲ್ಲೋ ಹುಟ್ಟಿ ಎಲ್ಲೋ ಚಾಚಿಕೊಂಡ ತೆಂಗಿನಮರಗಳಂತೆ ನಿಂತು ತಮ್ಮ ಪರ್ಸ್, ಮೊಬೈಲ್ ಗಳನ್ನು ಕಳ್ಳರಿಂದ ಕಾಪಾಡಿಕೊಳ್ಳುತ್ತಾ ಆಫೀಸು ತಲುಪಬೇಕು. (ದಿನದ ಮೂರ್ನಾಲ್ಕು ಗಂಟೆಗಳನ್ನು ಅತ್ತ ಆಫೀಸಿನಲ್ಲೂ ಅಲ್ಲದೇ, ಇತ್ತ ಮನೆಯಲ್ಲೂ ಅಲ್ಲದೇ ನಡುದಾರಿಯ ಟ್ರಾಫಿಕ್ನಲ್ಲಿ ತೂಕಡಿಸುತ್ತ ವ್ಯಯಿಸಬೇಕಾದ ಕರ್ಮ ಎಷ್ಟೋ ಜನರಿಗಿದೆ) ದಿನವಿಡೀ ಕಂಪ್ಯೂಟರ್ ಒಳಗಿನ ಲೆಕ್ಕಾಚಾರದ ಆಳದಲ್ಲಿ ಕೈಕಾಲು ಬಡಿಯಬೇಕು. ಮಧ್ಯದಲ್ಲಿ ಮತ್ತದೇ ರುಚಿ-ಶುಚಿಗಳರಿಯದ ಹೊರಗಿನೂಟ. ಸಂಜೆ ಮತ್ತೆ ಟ್ರಾಫಿಕ್ ಎನ್ನುವ ಸಮುದ್ರವನ್ನು ದಾಟಿ ಮನೆ/ರೂಮು ತಲುಪುವಷ್ಟರಲ್ಲಿ ಜೀವ 'ಹಾಸಿಗೆ ಮೇಲೆ ಬಿದ್ದರೆ ಸಾಕು' ಎನ್ನುವಷ್ಟು ದಣಿದುಹೋಗಿರಿತ್ತದೆ. ಆರು ದಿನಗಳು ಕಾದಮೇಲೆ ಸಿಕ್ಕ ವೀಕೆಂಡ್ ಕೇವಲ ಬಟ್ಟೆ ತೊಳೆದು,  ಕಸ-ಜಿರಲೆಗಳನ್ನು ಹೊಡೆದಟ್ಟಿ, ಊಟ ತಿಂಡಿ ಮುಗಿಸುವಷ್ಟರಲ್ಲೇ ಮುಗಿದು ಹೋಗುತ್ತದೆ. ಇನ್ನು ನೈಟ್ ಡ್ಯೂಟಿ ಮಾಡುವವರಂತೂ ಈ ಲೋಕದವರಾಗಿಯೇ ಉಳಿದಿರುವುದಿಲ್ಲ. ನಿದ್ರೆಯ ಸಮಯದಲ್ಲಿ ಕೆಲಸ, ಕೆಲಸದ ಸಮಯದಲ್ಲಿ ನಿದ್ರೆ. ಯಾವುದಕ್ಕೂ ನಿಗದಿತ ಸಮಯವಿಲ್ಲದೇ ಯಾವುದು ತಿಂಡಿಯೋ, ಯಾವುದು ಊಟವೋ,  ಯಾವುದು ನಿನ್ನೆಯೋ, ಯಾವುದು ನಾಳೆಯೋ...ಎಲ್ಲಾ ಅಯೋಮಯವಾಗಿಹೋಗಿರುತ್ತದೆ! 

ಹೀಗೆ ಜೀವನ ನಡೆಸುತ್ತಿರುವ ಲಕ್ಷಾಂತರ ಜನರು ತಮ್ಮೀ ಯಾಂತ್ರಿಕತೆಯ ಬಗ್ಗೆ ಸಣ್ಣದಾಗಿ ದೂರುತ್ತಾರಾದರೂ ತಮ್ಮ ಪಾಲಿನ ಜವಾಬ್ದಾರಿಗಳನ್ನು ಪ್ರೀತಿಯಿಂದಲೇ ನಿರ್ವಹಿಸಿಕೊಂಡು ಹೋಗುತ್ತಾರೆ. ಅರ್ಧರಾತ್ರಿಯ ತನಕ ಗೇಯ್ದರೂ ಸರಿಯೇ, ಮಾಡಬೇಕಾದುದನ್ನು ಮಾಡಿಯೇ ತೀರುತ್ತಾರೆ. ವಿಶ್ರಾಂತಿಗೆಂದು ಇರುವ ಒಂದೇ ಒಂದು ಭಾನುವಾರವನ್ನೂ ಕೆಲವೊಮ್ಮೆ ಉದಾರವಾಗಿ ಬಿಟ್ಟುಕೊಡುತ್ತಾರೆ. ಮುಖದಲ್ಲಿ ಕಾಣುವ ಬೇಸರ ಮಾಡುವ ಕೆಲಸದಲ್ಲೂ ಪ್ರತಿಫಲಿಸಲು ಬಿಡುವುದಿಲ್ಲ. ಆದರೆ ಔದ್ಯೋಗಿಕ ಜೀವನವೊಂದು ಯಾವಾಗ ನರಕವೆನಿಸತೊಡಗುತ್ತದೆ ಗೊತ್ತಾ? ಯಾವಾಗ ಕೆಲಸ ಮಾಡುವ ಜಾಗದಲ್ಲಿ ನೆಮ್ಮದಿಯಿರುವುದಲ್ಲವೋ, ಗೌರವವಿರುವುದುಲ್ಲವೋ, ಮಾಡಿದ ಕೆಲಸಕ್ಕೊಂದು ಬೆಲೆ ಅನ್ನುವುದು ದೊರೆಯುವುದಿಲ್ಲವೋ ಆಗ.

ಎಷ್ಟೋ ಬಾರಿ ದಿನವಿಡೀ ಕುಳಿತು ಶ್ರಧ್ದೆಯಿಂದ ಮಾಡಿ ಮುಗಿಸಿದ ಹತ್ತಾರು 'ಎಫರ್ಟ್'ಗಳು ಚಿಕ್ಕದೊಂದು 'ಗುಡ್' ಎಂಬ ಮೆಚ್ಚುಗೆಯನ್ನೂ ಪಡೆಯುವುದಿಲ್ಲ. ಆದರೆ ದಿನದ ಕೊನೆಯಲ್ಲಿ ಮಾಡಿದ ಸಣ್ಣದೊಂದು ತಪ್ಪು ಮೇಲಾಧಿಕಾರಿಯ ಕ್ಯಾಬಿನ್ ತನಕ ಎಳೆದುಬಿಡುತ್ತದೆ. ಚಿಕ್ಕ ಗೌರವವೂಬಿಲ್ಲದೇ ತಾರಾಮಾರೀ ಬೈಗುಳಗಳಿಗೊಳಗಾಗುತ್ತದೆ. ಇಲ್ಲಿ ತನ್ನ 'ಸರಿ' ಗಳಿಗಿಂತ 'ತಪ್ಪು'ಗಳೇ ಹೆಚ್ಚು ಗುರುತಿಸಲ್ಪಡುತ್ತವೆ ಎಂಬ ಭಾವನೆ ಒಮ್ಮೆ ಬಂದುಬಿಟ್ಟರೆ ಮುಗಿದೇ ಹೋಯಿತು, ಆ ವಾತಾವರಣದ ಮೇಲೆ 'ನನ್ನದು' ಎನ್ನುವ ಪ್ರೀತಿ ಹುಟ್ಟುವುದಾದೇ ಇಲ್ಲ. ವರ್ಷವಿಡೀ ಗೇಯ್ದು, ತಮ್ಮ ಜೀವನದ ಅಮೂಲ್ಯ ಸಮಯ, ಬುದ್ಧಿ, ಶ್ರಮಗಳನ್ನೆಲ್ಲಾ ಕಂಪನಿಗಾಗಿ ವ್ಯಯಿಸಿ, ವರುಷದುದ್ದಕ್ಕೂ ಕಾದ 'ಸಂಬಳ ಏರಿಕೆ'ಯ ದಿನ ಆಸೆಯಿಂದ ಮೇಲಾಧಿಕಾರಿಯ ಕ್ಯಾಬಿನ್ ಹೊಕ್ಕಾಗ ಅವರು ನೀವು ವರುಷವಿಡೀ ಮಾಡಿದ ತಪ್ಪುಗಳನ್ನಷ್ಟೇ ಪಟ್ಟಿ ಮಾಡಿಕೊಂಡು ಕೂತಿದ್ದರೆ ಹೇಗಾಗಬೇಡ!?

ಕೆಲವು ಬಾಸ್ ಗಳೇಕೆ ಹಾಗಿರುತ್ತಾರೆ? ಎಲ್ಲರೂ ಎಲ್ಲರೂ ನೂರಕ್ಕೆ ನೂರು ಪರ್ಫೆಕ್ಟ್ ಆಗಿರಬೇಕೆಂಬ ಹಠಕ್ಕೋ? 'ಕ್ರೋಧಂ ಸರ್ವರ್ಥ ಸಾಧನಂ' ಎಂಬ ತಪ್ಪು ತಿಳುವಳಿಕೆಗೋ? ಬಹುಷಃ ಕಾರಣ ಅವರಿಗೂ ಗೊತ್ತಿರಲಿಕ್ಕಿಲ್ಲ. ಹೆಚ್ಚಿನಸಲ ಒಬ್ಬ ಉರಿಗೋಪದ ಬಾಸ್ ಕೈಕೆಳಗೆ ಪಳಗಿದ ಶಿಷ್ಯನೇ ಮುಂದೆ ಮತ್ತೊಬ್ಬ ಉರಿಗೋಪದ ಬಾಸ್ ಆಗಿ ರೂಪುಗೊಳ್ಳುತ್ತಾನೆ. 'ಅಂದು ನಾನು ಅನುಭವಿಸದ್ದರೆದುರು ಇದೇನೂ ಅಲ್ಲ' ಎನ್ನುವ ಭಾವನೆ ಬೇರೂರಿರುತ್ತದೋ ಅಥವಾ 'ಹೀಗೆ ನಡೆದುಕೊಳ್ಳುವುದೇ ಸರಿಯಾದ ರೀತಿ' ಎಂದುಕೊಂಡಿರುತ್ತಾರೋ ಗೊತ್ತಿಲ್ಲ. ಎಂದೋ ಯಾರೋ ಕಟ್ಟಿಸಿಕೊಂಡ ದಂಡ ಇಂದು ವಸೂಲಾಗುತ್ತಿರುತ್ತದೆ. ದುರಂತವೆಂದರೆ ಇಂದು ತನ್ನ ಕೈಕೆಳಗಿನವರ ಮೇಲೆ ಎಗರಾಡುವಾಗ ಅಂದು ತನ್ನ ಮೇಲಾಧಿಕಾರಿಯ ಕಡುಗೋಪದಿಂದ ತನಗೆಷ್ಟು ನೋವಾಗುತ್ತಿತ್ತೆಂಬುದು ಅವರಿಗೆ ನೆನಪಾಗುವುದೇ ಇಲ್ಲ! ಅಲ್ಲದೇ ಕೆಲವೊಮ್ಮೆ ಅನುಭವದ 'ಆಳ'ಕ್ಕಿಂತ ಹಿರಿತನದ 'ಎತ್ತರ'ವೇ ಹೆಚ್ಚಾಗಿ ಕೆಲಸಮಾಡತೊಡಗುತ್ತದೆ. ತನ್ನ ಮನದೊಳಗೇ ಹಾಕಿಕೊಂಡಿರುವ ಅಥವಾ ಹತ್ತಾರು ವರ್ಷಗಳಿಂದ ಆಚರಿಸುತ್ತಾ, ಆಚರಿಸುತ್ತಾ ಡಿಫಾಲ್ಟ್ ಆಗಿಹೋಗಿರುವ ಸಿದ್ಧಸೂತ್ರದಂತೇ ತನ್ನ ಕೈಕೆಳಗಿನವರೂ ನಡೆಯಬೇಕೆಂದು ಅದು ಬಯಸುತ್ತದೆ. 

ಹಾಗಂತ ಎಲ್ಲಾ ಮೇಲ್ವಿಚಾರಕರೂ ಹೀಗೇ ಅನ್ನಲಿಕ್ಕಾಗುವುದಿಲ್ಲ.  ಸಂಬಳ, ಪದವಿಗಳ ಬೇಧವಿಲ್ಲದೆ ಗೆಳೆಯನಂತೆ ನಡೆದುಕೊಳ್ಳುವವರಿದ್ದಾರೆ. 'ಏನ್ರೀ,  ಹೇಗಿದಾಳ್ರೀ ನಿಮ್ಮ ಗರ್ಲ್ ಫ್ರೆಂಡ್?" ಎಂದು ತಮಾಷೆಮಾಡುವ ಹಗುರ ಮನಸ್ಸಿನವರಿದ್ದಾರೆ. "ಇದೊಂದು ಶನಿವಾರ ವರ್ಕ್ ಮಾಡಿ ಆಯ್ತಾ?" ಎಂದು ಗೌರವಯುತವಾಗಿ ದುಡಿಸಿಕೊಳ್ಳುವ ಜಾಣರಿದ್ದಾರೆ. ಕೆಲಸದಾಚೆಗಿನ ವಿಚಾರಗಳನ್ನೂ ಚರ್ಚಿಸುತ್ತಾ ಮನಸ್ಸಿಗೆ ಹತ್ತಿರವಾಗುವವರಿದ್ದಾರೆ. ಇಂಥವರ ಮಾತನ್ನ ತೆಗೆದು ಹಾಕುವುದು ಎಂತಹವರಿಗೂ ಕಷ್ಟವೇ. ನನ್ನ ಪ್ರಯತ್ನಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ವ್ಯಕ್ತಿಯೊಬ್ಬ ನನ್ನ ತಪ್ಪುಗಳನ್ನೂ ಗುರುತಿಸಿದಾಗ ನಾನದನ್ನು ಸ್ವೀಕರಿಸುವ ರೀತಿಯೇ ಬೇರೆಯಾಗಿರುತ್ತದೆ. ಅವರು ತನ್ನ ಮೇಲೆ ಭರವಸೆಯಿಟ್ಟಿದ್ದಾರೆನ್ನುವುದನ್ನು ಅರಿತುಕೊಂಡ ಪ್ರತಿಯೊಬ್ಬನೂ ಹೆಚ್ಚೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾನೆ. ಆ ಭರವಸೆಯನ್ನು ಉಳಿಸಿಕೊಳ್ಳುವ ಹಾದಿಯಲ್ಲೇ ಯೋಚಿಸುತ್ತಾನೆ. 

ಕೆಲಸ ಮಾಡಿಸುವುದೇ ಒಬ್ಬರ ಕರ್ತವ್ಯವಾಗಿರುವಾಗ ಅದನ್ನು ಗೌರವಯುತವಾಗಿಯೇ ಮಾಡಿಸಬಹುದಲ್ಲ? ತಪ್ಪನ್ನು ತಿದ್ದುವ ರೀತಿ ಶಿಲ್ಪಿ ಉಳಿಯಿಂದ ಕೊಟ್ಟ ಏಟಿನಂತಿರಬೇಕಲ್ಲದೇ, ಚಾಲಕ ಚಾವಟಿಯಿಂದ ಕೊಟ್ಟ ಒದೆಯಂತಲ್ಲ ಅಲ್ವಾ? ತಿದ್ದಬೇಕು, ಬೆಳೆಯಲು ಬಿಡಬೇಕು. ಆ ಮೂಲಕ ನಾವು ಬೆಳೆಯಬೇಕು' ಎನ್ನುವ ಉದಾರಗುಣ ಹೊಂದಿರುವ ಬಾಸ್ ಸಿಕ್ಕಿದರೆಂದರೆ ಉದ್ಯೋಗ ಜೀವನದ ಅರ್ಧ ಕಷ್ಟಗಳು ಮುಗಿದಂತೆಯೇ.

(ಮಾರ್ಚ್ 2017ರ 'ನಿಮ್ಮೆಲ್ಲರ ಮಾನಸ'ದಲ್ಲಿ ಪ್ರಕಟವಾದ ಲೇಖನ)

ಶನಿವಾರ, ಜನವರಿ 28, 2017

ಗೋಪಿಯ ಅಜ್ಜಿ..

ಅಜ್ಜಿ ಮನೆಗೆ ವಾಪಾಸ್ ಬರ್ತಿದಾಳಂತೆ!
ಈ ಸುದ್ದಿ ಕೇಳಿ ಖುಷಿಪಟ್ಟವನು ಹನ್ನೆರೆಡು ವರ್ಷದ ಗೋಪಿಯೊಬ್ಬನೇ. ಅಪ್ಪ ತಟಸ್ಥನಾಗಿದ್ದ. ಅಮ್ಮ ಬೆಳಗಿನಿಂದಲೂ ಭುಸುಗುಟ್ಟುತ್ತಾ ಓಡಾಡಿಕೊಂಡಿದ್ದಳು. "ಅವತ್ತು ದೊಡ್ಡದಾಗಿ ನಾವು ಸಾಕ್ತೀವಿ ಅಂತ ಅಷ್ಟೆಲ್ಲಾ ರಾದ್ದಾಂತ ಮಾಡಿ ಕರ್ಕೊಂಡ್ ಹೋದ್ರಲ್ಲಾ ನಿಮ್ಮ ಅಣ್ಣ-ಅತ್ತಿಗೆ, ಇಷ್ಟು ಬೇಗ ಸಾಕಾಗಿ ಹೋಯ್ತಂತಾ? ಅವರ ಕಾಯಿಲೇನ ಇನ್ನಷ್ಟು ಜಾಸ್ತಿ ಮಾಡಿ, ಈಗ ಇಲ್ಲಿ ತಂದ್ ಹಾಕಿದ್ರೆ ನೋಡ್ಕೊಳ್ಳೋರ್ಯಾರು? ನಾನವತ್ತು ಬಾಣಂತಿಯಾಗಿ ಮಲಗಿದ್ದಾಗ ನೋಡೋಕೆ ಬಂದಿದ್ದ ನನ್ನ ಅಪ್ಪ-ಅಮ್ಮನ್ನ ಕಣ್ಣೀರು ಹಾಕಿಸಿ ಕಳ್ಸಿದ್ರಲ್ಲಾ ನಿಮ್ಮಮ್ಮ, ಇವತ್ತು ಅವರು ಮಲಗಿದಾಗ ನೋಡ್ಕೊಳ್ಳೋಕೆ ನಾನೇ ಬೇಕಂತ?" ಎಂದು ಅವಳು ಅಡಿಗೆಮನೆಯಲ್ಲಿ ಕೂಗಾಡುತ್ತಿದ್ದದ್ದು ಕೇಳಿ ಚೂಯಿಂಗ್ ಗಮ್ ತಗೊಳ್ಳೋಕೆ ಒಂದು ರೂಪಾಯಿ ಕೇಳಲೆಂದು ಬಂದಿದ್ದ ಗೋಪಿ ಬಾಗಿಲಲ್ಲೇ ನಿಂತುಬಿಟ್ಟ. ಜೇಬಲ್ಲಿ ಒಂದು ರೂಪಾಯಿಯಿದೆ. ಇನ್ನೊಂದು ರೂಪಾಯಿ ಸಿಕ್ಕಿದ್ರೆ ಎರೆಡು ಚೂಯಿಂಗ್ ಗಮ್ ಜೊತೆ ಒಂದು WWE ಕಾರ್ಡ್ ಫ್ರೀ ಬರ್ತಿತ್ತು. ಆದ್ರೆ ಈಗೇನಾದ್ರೂ ಅಮ್ಮನತ್ರ ಕೇಳಿದ್ರೆ ಒಂದು ರೂಪಾಯಿಗೆ ಹತ್ತು ಒದೆತ ತಿನ್ಬೇಕಾಗುತ್ತೆ! ಏನು ಮಾಡೋದು ಅಂತ ಯೋಚಿಸುತ್ತಾ ನಿಂತಿರುವಾಗಲೇ ಮನೆಯೆದುರು ಗೇಟ್  ತೆರೆದ ಸದ್ದಾಯಿತು. ಕೈಯ್ಯಲ್ಲೊಂದು ಬ್ಯಾಗ್ ಹಿಡಿದು ದಾಪುಗಾಲಿಡುತ್ತಾ ಬರುತ್ತಿದ್ದ ದೊಡ್ಡಪ್ಪ; ಅವರ ಹಿಂದೆ ಚಿಕ್ಕ ಬಟ್ಟೆಯ ಗಂಟನ್ನು ಕಂಕುಳಲ್ಲಿಟ್ಟುಕೊಂಡು ವಾಲುತ್ತಾ ನಡೆದುಬರುತ್ತಿರುವ ಅಜ್ಜಿ. ಆರೇಳು ತಿಂಗಳ ಕೆಳಗೆ ಇದೇ ದೊಡ್ಡಪ್ಪ ಅಪ್ಪ-ಅಮ್ಮನ ಜೊತೆ ಜಗಳಾಡಿ ತನ್ನ ಮನೆಗೆ ಕರೆದುಕೊಂಡು ಹೋಗುವಾಗ ಅವಳ ಬೆನ್ನು ಇಷ್ಟೊಂದು ಬಾಗಿರಲಿಲ್ಲ; ಇವತ್ಯಾಕೋ ತೀರ ವಯಸ್ಸಾದವಳಂತೆ ಕಾಣುತ್ತಿದ್ದಾಳೆ ಕಾವೇರಜ್ಜಿ.

ಜಗುಲಿಯ ಖುರ್ಚಿಯ ಮೇಲೆ ಕೈಲಿದ್ದ ಚೀಲವನ್ನ ಹೆಚ್ಚೂ ಕಡಿಮೆ ಬಿಸಾಕುವಂತೆಯೇ ಇಟ್ಟ ದೊಡ್ಡಪ್ಪ "ಹೂಂ, ಒಳಗೆ ಹೋಗು" ಅಂದರು.
"ಅಲ್ಲ ಶಂಕ್ರು ಅದೂ...." ಅಂತ ಏನೋ ಹೇಳಲು ಹೊರಟ ಅಜ್ಜಿಯ ಮಾತನ್ನು ಅರ್ಧಕ್ಕೇ ತುಂಡರಿಸಿ, "ನೋಡೂ, ನೀನು ಜಾಸ್ತಿ ಮಾತಾಡ್ಬೇಡ. ನಿನಗೆ ಇನ್ನೂ ಪ್ರಾಯ ತುಂಬಿ ಬರೋದಿಲ್ಲ. ಬಾಯಿ ಮುಚ್ಕಂಡು ಒಂದು ಮೂಲೇಲಿ ಕೂರೋದ್ನ ಕಲಿ" 
ಹಾಗಂತ ಗುಡುಗಿ ಹೊರಡಲೆಂದು ತಿರುಗಿದವರನ್ನ ಅಮ್ಮನ ಮಾತು ತಿವಿದಿತ್ತು: "ಅವತ್ತು ಮತ್ತೆ ಈ ಮನೆ ಮೆಟ್ಲು ಹತ್ಸೊಲ್ಲ, ನನ್ನಮ್ಮನ್ನ ನಾನೇ ಸಾಕ್ತೀನಿ ಅಂತ ಕರ್ಕೊಂಡ್ ಹೋದೋರ್ಗೆ ಇಷ್ಟು ಬೇಗ ಅಮ್ಮ ಭಾರ ಅದ್ಲೇನೋ!"

ತಕ್ಷಣ ಬಾಲ ಮೆಟ್ಟಿಸಿಕೊಂಡ ಹಾವಿನಂತೆ ಭುಸುಗುಟ್ಟಿದ್ದರು ದೊಡ್ಡಪ್ಪ: "ಈ ಕೊಂಕು ಮಾತೆಲ್ಲ ನಿನ್ನ ಗಂಡನ್ಹತ್ರ ಇಟ್ಕೋ. ಅಷ್ಟಕ್ಕೂ ಅಮ್ಮನ ಆಸ್ತಿ ಇಟ್ಕೊಂಡ್ ತಿಂತಿರವ್ರು ನೀವು ತಾನೇ? ಬೇಕಾದ್ರೆ ನೋಡ್ಕೊಳ್ಳಿ, ಇಲ್ಲ ಬಿಡಿ" ಅಂತ ಧಡಧಡನೆ ಮೆಟ್ಟಿಲಿಳಿದು ಬಿರುಗಾಳಿಯಂತೆ ಹೊರಟೇಹೋದರು. ಅಪ್ಪ ಇದ್ಯಾವುದನ್ನೂ ಕೇಳಿಸಿಕೊಳ್ಳದವನಂತೆ ಗದ್ದೆಯಕಡೆ ನಡೆದ.

ಹಿತ್ತಲ ಬದಿಯಲ್ಲಿದ್ದ ಪುಟ್ಟ ಕೋಣೆಯನ್ನು ಅಜ್ಜಿಗೆ ಬಿಟ್ಟುಕೊಡಲಾಯಿತು. ಅಜ್ಜಿಗ್ಯಾಕೋ ಅದು ಹಿಡಿಸಿದಂತೆ ಕಾಣಲಿಲ್ಲ. "ನಂಗೆ ಈ ಕೋಣೆ ಬೇಡ. ಇಲ್ಲಿ  ಓಡುಹುಳ ಬರ್ತಾವೆ" ಅಂತ ರಾಗ ತೆಗೆದಾಗ ಅಮ್ಮ ಧುಮುಗುಟ್ಟಿದಳು. "ನಿಮಗಂತ ಹೊಸ ಕೋಣೆ ಎಲ್ಲಿಂದ ತರೋಣ? ಇರೋದ್ರಲ್ಲೇ ಹೊಂದ್ಕೊಂಡು ಹೋಗ್ಬೇಕು. ನಾವೆಲ್ಲಾ ಏನು ಅರಮನೇಲಿ ಮಲಗ್ತಿದೀವ?" ಅಜ್ಜಿ ಮುಂದೆ ಮಾತನಾಡಲಿಲ್ಲ. ಸುಮ್ಮನೆ ಒಳಗೆ ಹೋಗಿ ತನಗಾಗಿ ಹಾಸಿದ್ದ ಹಾಸಿಗೆಯ ಮೇಲೆ ಕೂತಳು. ಕಿಟಕಿಯ ಮೂಲಕ ಅಂಗಳದಲ್ಲಿ ಸೈಕಲ್ ಹೊಡೆಯುತ್ತಿರುವ ಗೋಪಿಯನ್ನು ನೋಡಿದವಳೇ ಏನೋ ನೆನಪಾದಂತೆ ತನ್ನ ಬಟ್ಟೆಯ ಗಂಟು ತೆರೆದು, ಅದರೊಳಗೆ ಪುಟ್ಟ ಪ್ಲಾಸ್ಟಿಕ್ ಕವರಿನೊಳಗೆ ಇಟ್ಟುಕೊಂಡಿದ್ದ ಉತ್ತುತ್ತೆಯನ್ನ ತೆಗೆದು ಗೋಪಿಯನ್ನ ಕರೆದಳು:
"ಮಾಣೀ.. ಬಾರಾ ಇಲ್ಲಿ" 
ಸೈಕಲ್ ತುಳಿಯುತ್ತಿದ್ದ ಗೋಪಿ ಅಲ್ಲಿಂದಲೇ ಕೂಗಿದ "ಎಂತ ಅಜ್ಜೀ? ನಾನು ಸೈಕಲ್ ಹೊಡೀತಿದೀನಿ" 
ನಾಲ್ಕು ಉತ್ತುತ್ತೆಯನ್ನ ಕೈಲಿ ಹಿಡಿದುಕೊಂಡು ವಾಲಾಡುವ ಹೆಜ್ಜೆಯಲ್ಲಿ ತಾನೇ ಅಂಗಳಕ್ಕೆ ಬಂದಳು. "ಇಕಾ ಉತ್ತುತ್ತೆ. ಮೊನ್ನೆ ಶಾರದ ಬಂದೊಳು ದಿನಾ ಎರೆಡೆರಡು ತಿನ್ನಿ ಅಂತ ಕೊಟ್ಟು ಹೋದ್ಲು. ನಂಗೆ ಹಲ್ಲು ಗಟ್ಟಿ ಇಲ್ಲ. ತಗಾ, ನೀನಾದ್ರೂ ತಿನ್ನು" 
ಗೋಪಿ ಖುಷಿಯಿಂದ ಅಷ್ಟನ್ನೂ ಒಟ್ಟಿಗೇ ಬಾಯಿಗೆ ತುರುಕಿಕೊಂಡ. ಏನೋ ಜಂಬು ವಾಸನೆ ಅನ್ನಿಸಿದರೂ ರುಚಿಯಾಗೇ ಇತ್ತು ಉತ್ತುತ್ತೆ. 
"ನಿಂಗಿವತ್ ಇಸ್ಕೂಲಿಲ್ವಾ?"
"ಇಲ್ಲ ಅಜ್ಜೀ. ಭಾನುವಾರ ಅಲ್ವಾ"
ಎರೆಡು ನಿಮಿಷ ಅಲ್ಲೇ ಎಳೆ ಬಿಸಿಲಲ್ಲಿ ಛಳಿಕಾಸುತ್ತ ನಿಂತು ಮತ್ತೆ ವಾಲಾಡುತ್ತಾ ಒಳಗೆ ಹೋದವಳನ್ನ ನೋಡಿದ ಗೋಪಿಗೆ ಏನೋ ಹೊಳೆದು ಅವಳ ಹಿಂದೆಯೇ ಓಡಿದ. ಹಾಸಿಗೆಯೆದುರು ಮೊಣಕಾಲೂರಿ ಕೂತವನು ಸಣ್ಣ ದನಿಯಲ್ಲಿ ಕೇಳಿದ:
"ಅಜ್ಜೀ ನಿನ್ಹತ್ರ ಒಂದು ರೂಪಾಯಿ ಇದ್ಯಾ?"
"ಎಂತಕೆ ಮಾಣೀ?"
"ಮತ್ತೇ.. ನಾನು ಚೂಯಿಂಗ್ ಗಮ್ ತಗೋಬೇಕು ಅದಿಕ್ಕೇ"
"ನೋಡ್ತೀನಿ, ತಡಿ" ಅಂದವಳು ತನ್ನ ದಿಂಬಿನಡಿ ಇದ್ದ ಸಣ್ಣ ಕೈಚೀಲದಿಂದ ನಾಲ್ಕಾರು ನಾಣ್ಯಗಳನ್ನು ಹೊರತೆಗೆದಳು. ಅವನ್ನು ಕಿಟಕಿಯಿಂದ ಬರುತ್ತಿರುವ ಬೆಳಕಿನಲ್ಲಿ ಕಣ್ಣಿನ ಸಮೀಪ ಹಿಡಿದು ನೋಡಿ ತಲಾ ಐದು ಹಾಗೂ ಒಂದರ ಒಂದೊಂದು ನಾಣ್ಯ ಗೋಪಿಯರ ಕೈಗಿತ್ತು ಪಿಸುಗುಟ್ಟಿದಳು- "ಹಂಗೇ ಬರ್ಬೇಕಾದ್ರೆ ನಂಗೆ ಕಾವೇರಿ ಹೋಟ್ಲಿಂದ ಕಾರ್ಸೇವು ತಗೊಂಡ್ಬಾ. ಅಮ್ಮಂಗೆ ಹೇಳ್ಬೇಡ!" 
ಗೋಪಿ ಖುಷಿಯಿಂದ ಓಡಿದ.

                   ****************

ಅಜ್ಜಿ ಬಂದ ದಿನದಿಂದ ಮನೆಯಲ್ಲಿ ಒಂದಿಲ್ಲೊಂದು ಗಲಾಟೆ ನಡೆಯುತ್ತಲೇ ಇತ್ತು. ಟಾಯ್ಲೆಟ್ ಗೆ ಹೋದೋರು ಸರಿಯಾಗಿ ನೀರು ಹಾಕಿಲ್ಲ, ವದ್ದೆ ಬಟ್ಟೆ ಮಂಚದ ಮೇಲೇ ಇಟ್ಟಿದ್ದಾರೆ, ಕೈಚೀಲದಲ್ಲಿ ಕೊಳಕು ತಿಂಡಿ ಇಟ್ಟುಕೊಂಡಿರೋದ್ರಿಂದ ಇಲಿ, ಜಿರಲೆ ಜಾಸ್ತಿ ಆಗಿದಾವೆ.... ಹೀಗೇ ಏನೇನೋ ಕಾರಣಕ್ಕೆ. ಕೆಲವೊಮ್ಮೆ ಕಾರಣವೇನೆಂದೇ ಗೋಪಿಗೆ ತಿಳಿಯುತ್ತಿರಲಿಲ್ಲ. ಅಮ್ಮನ ಬೈಗುಳದಿಂದ ಶುರುವಾಗಿ, ನಂತರ ಅಪ್ಪನ ಧ್ವನಿ ತಾರಕಕ್ಕೇರಿ ಕೊನೆಗದು ಅಜ್ಜಿಯ ಕಣ್ಣೀರಿನೊಂದಿಗೆ ಕೊನೆಯಾಗುತ್ತಿತ್ತು. ಎರೆಡೇ ವರ್ಷಗಳ ಕೆಳಗೆ ಇವರಿಗೆ ಎದುರು ನಿಂತು ಅಷ್ಟೇ ಗಟ್ಟಿದನಿಯಲ್ಲಿ ಜಗಳಾಡುತ್ತಿದ್ದ ಅಜ್ಜಿ ಇಂದು ಈ ಪರಿ ಮೆತ್ತಗಾಗಿರುವುದನ್ನ ನೋಡಿ ಗೋಪಿಗೆ ಒಮ್ಮೊಮ್ಮೆ ಆಶ್ಚರ್ಯವಾಗುತ್ತಿತ್ತು. 

ಇವರಲ್ಲಿ ಯಾರು ಸರಿಯೋ, ಯಾರು ತಪ್ಪೋ, ದೇವರೇ ಬಲ್ಲ. ಎರೆಡು ವರ್ಷಗಳ ಕೆಳಗೆ ಅಜ್ಜ ತೀರಿಕೊಂಡಾಗ ಆಸ್ತಿ ಭಾಗದ ವಿಷಯದಲ್ಲಿ ಆರಂಭವಾಗಿತ್ತು ದಾಯಾದಿ ಕಲಹ. ಯಾರ್ಯಾರಿಗೆ ಎಷ್ಟೆಟ್ಟು ಬರಬೇಕಿತ್ತೋ, ಎಷ್ಟೆಷ್ಟು ಬಂತೋ ಗೊತ್ತಿಲ್ಲ; ಇದ್ದ ಮೂರುಮೆಟ್ಟು ಭೂಮಿಗಾಗಿ ಮೂವರು ಅಣ್ಣ-ತಮ್ಮಂದಿರು ಹಾಗೂ ಒಬ್ಬ ಅಕ್ಕ ಪೆಡಂಭೂತಗಳಂತೆ ಕಿತ್ತಾಡಿಕೊಂಡು ದೂರಾಗಿದ್ದರು. ಆಗೆಲ್ಲಾ ದೊಡ್ಡಪ್ಪ-ದೊಡ್ಡಮ್ಮಾದಿಗಳಿಂದ ಹಿಡಿದು ಇದೇ ಅಜ್ಜಿಯ ತನಕ ಎಲ್ಲರೂ ತನ್ನ ಅಮ್ಮನ ಮೇಲೆ ಹರಿಹಾಯುತ್ತಿದ್ದಾಗ, ನೊಂದ ಅಮ್ಮ ತನ್ನನ್ನು ತಬ್ಬಿಕೊಂಡು ಅಳುತ್ತಾ ಮಲಗುತ್ತಿದ್ದಾಗ 'ಅಮ್ಮ ಪಾಪ' ಅನ್ನಿಸುತ್ತಿತ್ತು ಗೋಪಿಗೆ.  ಆದರೆ ಇಂದು ಬೆನ್ನು ಬಾಗಿ, ಸರಿಯಾಗಿ ನಡೆಯಲು ಆಗದೇ, ಸುಕ್ಕುಗಳ ನಡುವೆ ಅಡಗಿಕೊಂಡಿರುವ ಕಣ್ಗಳನ್ನ ಮತ್ತಷ್ಟು ಕಿರಿದಾಗಿಸಿಕೊಂಡು ಅಳುವ ಅಜ್ಜಿಯನ್ನ ನೋಡಿದಾಗಲೂ 'ಪಾಪ' ಅಂತಲೇ ಅನ್ನಿಸುತ್ತಿತ್ತು. ಅಮ್ಮ ಮನೆಯಲ್ಲಿಲ್ಲದ ಹೊತ್ತಿನಲ್ಲಿ ತನ್ನ ಕೋಣೆಗೆ ಕರೆದೊಯ್ದು ಕೈಚೀಲದಲ್ಲಿ ಮುಚ್ಚಿಟ್ಟುಕೊಂಡಿರುತ್ತಿದ್ದ , ತನ್ನನ್ನು ನೋಡಲು ಬಂದವರ್ಯಾರೋ ಕೊಟ್ಟು ಹೋಗಿದ್ದ ತಿಂಡಯನ್ನ ಕೈಗಿತ್ತು "ಗಬಗಬ ತಿನ್ನು, ಅಮ್ಮ ಬರೋಕೂ ಮುಂಚೆ!" ಎಂದು ತನ್ನ ಬೆನ್ನು ನೇವರಿಸುತ್ತಿದ್ದ ಅಜ್ಜಿಗೆ, ಅಮ್ಮನಿಗೆ ತಿಳಿಯದಂತೆ ಕಾರ್ಸೇವು, ಗೋಲಿಬಜೆ, ಬೋಂಡಾ ತಂದು ಕೊಡುತ್ತಿದ್ದ, ಅವಳ ದುಡ್ಡಿನಲ್ಲಿಯೇ!

ಮರಳಿ ಬಂದ ಆರಂಭದಲ್ಲಿ ಅಜ್ಜಿ ಅಲ್ಲೇ ಹತ್ತಿರದಲ್ಲಿದ್ದ ಲೋಕೆಶರಾಯರ ಮನೆಗೆ ಯಾವಾಗಲೂ ಹೋಗಿ ಬರುತ್ತಿದ್ದಳು. ಅಲ್ಲಿ ಇವಳಿಗಿಂತ ಕೆಲವೇ ವರ್ಷಗಳಿಗೆ ಚಿಕ್ಕವರಾದ ಲೋಕೆಶರಾಯರ ತಾಯಿ ಸುಂದ್ರಮ್ಮನ ಜೊತೆ ಹರಟುತ್ತಾ, ಅವರ ಸೊಸೆ ಫಾಲ್ಗುಣಿ ಕೊಡುವ ಕಾಫಿ, ಪಾನಕ ಕುಡಿಯುವುದು, ಕುರುಕಲು ತಿಂಡಿ ಮೆಲ್ಲುವುದು ಅಜ್ಜಿಯ ಮೆಚ್ಚಿನ ದಿನಚರಿಯಾಗಿತ್ತು. ಆದರೆ ಯಾವಾಗ ಇವಳ ಕೆಮ್ಮು, ಅನಾರೋಗ್ಯಗಳು ಜಾಸ್ತಿಯಾದವೋ, ಅವರೂ ಇವಳನ್ನು ದೂರವಿರಿಸತೊಡಗಿದರು. ಕೊನೆಗೊಂದು ದಿನ ಫಾಲ್ಗುಣಿ  "ಕಾವೇರಮ್ಮ, ನನ್ನ ಮಕ್ಕಳಿನ್ನೂ ಚಿಕ್ಕವು. ನೀವು ಹೀಗೆ ಕೆಮ್ತಾ ಇಲ್ಲೇ ಕೂತಿದ್ರೆ ಅವಕ್ಕೂ ಕೆಮ್ಮು ಅಂಟಿಕೊಳ್ಳತ್ತೆ. ಮತ್ತೆ ಮತ್ತೆ ಇಲ್ಲಿಗೆ ಬರಬೇಡಿ" ಅಂತ ಮುಖಕ್ಕೆ ಹೊಡೆದಂತೆ ಹೇಳಿಯೇಬಿಟ್ಟಳು! ಅವಮಾನದಿಂದ ಸೋತ ಹೆಜ್ಜೆಗಳನ್ನಿಡುತ್ತಾ ಮನೆಗೆ ಬಂದಿದ್ದಳು ಕಾವೇರಜ್ಜಿ.

ಈ ವಿಷಯ ತಿಳಿದ ಅಮ್ಮನಿಗೂ ಅಜ್ಜಿಯ ಮೇಲೆ ಕನಿಕರ ಮೂಡಿತ್ತೋ ಏನೋ. "ನೋಡಿದ್ರಾ? ಅವತ್ತು ಅತ್ತೆ ಗಟ್ಟಿ ಇದ್ದು, ನಮ್ಜೊತೆ ಜಗಳ ಕಾಯ್ತಿದ್ದಾಗ ಅವರ ಕಿವಿ ಊದ್ತಿದ್ದ ಇದೇ ಫಾಲ್ಗುಣಿ-ಸುಂದರಮ್ಮ, ಇವತ್ತು ಅವರಿಗೆ ವಯಸ್ಸಾದ ಕೂಡ್ಲೇ ಹೇಗೆ ಮಾತಾಡ್ತಿದಾರೆ ಅಂತ?" ಎಂದು ಅಪ್ಪನ ಬಳಿ ಹೇಳಿದ್ದು ಪಕ್ಕದಲ್ಲೇ ಮಲಗಿದ್ದ ಗೋಪಿಯ ಕಿವಿಗೆ ಸ್ಪಷ್ಟವಾಗಿಯೇ ಕೇಳಿತ್ತು.

ಬರುಬರುತ್ತಾ ಅಜ್ಜಿಯ ಜೀರ್ಣಶಕ್ತಿ ಕುಸಿಯತೊಡಗಿತು. ಏನೇ ತಿಂದರೂ ವಾಂತಿಯೋ, ಬೇದಿಯೋ  ಶುರುವಾಗಿಬಿಡುತ್ತಿತ್ತು. ನಿಶ್ಯಕ್ತಿಯಿಂದ ಮಲಗಿಯೇ ಇರುತ್ತಿದ್ದ ಅವಳು, ಅಪ್ಪ ಪೇಟೆಯ ಕಡೆಗೆ ಹೊರಟಿದ್ದು ಕಂಡರೆ ಸಾಕು "ಚಂದ್ರೂ.... ಶಂಕ್ರು, ಶಶಿ ಯಾರಾದ್ರೂ ಕಂಡ್ರೆ ಬಂದು ನನ್ನ ನೋಡ್ಕೊಂಡು ಹೋಗೋಕೆ ಹೇಳೋ" ಅಂತ ಮಲಗಿದಲ್ಲಿಂದಲೇ ಕೂಗಿ ಹೇಳುತ್ತಿದ್ದಳು. ಪ್ರತೀ ಸಲವೂ ಇದನ್ನೇ ಕೇಳಿ, ಕೇಳಿ ಬೇಸತ್ತ ಅಪ್ಪ "ಹೌದೌದು. ದಿನಕ್ಕೆ ನಾಲ್ಕು ಸಲ ಬಂದು ಹೋಗೋಕೆ ಅವರಿಗೆ ಬೇರೆ ಉದ್ಯೋಗವೇ ಇಲ್ಲಾಂದ್ಕೊಂಡ್ಯಾ?" ಅಂತ ರೇಗಿದ್ದನಾದರೂ ತನ್ನ ಅಣ್ಣಂದಿರಿಗೆ ತಾಯಿಯ ಕರೆಯನ್ನು ಮುಟ್ಟಿಸಲು ಮರೆತಿರಲಿಲ್ಲ. ಆದರೆ ತಾಯಿ ಬೇರಿನ ಹಂಗು ಕಳಚಿಕೊಂಡು ಸ್ವತಂತ್ರ ವೃಕ್ಷಗಳಾಗಿ ಬೆಳೆದು ನಿಂತಿದ್ದವರಿಗೆ ನಾಲ್ಕು ಹೆಜ್ಜೆ ಬಂದು ವೃದ್ಧ ತಾಯಿಯನ್ನ ಮಾತನಾಡಿಸಿಕೊಂಡು ಹೋಗುವುದೂ ವೃಥಾ ಶ್ರಮವೆನಿಸಿತ್ತು!

ಬೆಳಗ್ಗೆ ಉತ್ತುತ್ತೆ ಕೇಳಲು ಅಜ್ಜಿಯ ಕೋಣೆಗೆ ಹೋದಾಗ "ನೋಡಾ ಮಾಣೀ... ಮಕ್ಳಿಗೆಲ್ಲಾ ಈ ಮುದುಕಿ ಬ್ಯಾಡಾಗಿಹೋದ್ಲು" ಅಂತ ಬಿಕ್ಕಿದ್ದ ಅಜ್ಜಿಗೆ ಏನು ಹೇಳಬೇಕೆಂದು ತಿಳಿಯದೇ ಕಣ್ಕಣ್ಣು ಬಿಡುತ್ತಾ ನಿಂತುಬಿಟ್ಟ ಗೋಪಿ.

ಹಾಗೇ ಹದಿನೈದು ದಿನ ಕಳೆದ ಮೇಲೆ ಒಂದು ದಿನ ಸಂಜೆ ಗೋಪಿ ಶಾಲೆಯಿಂದ ಬರುವ ಹೊತ್ತಿಗೆ ಅಜ್ಜಿ ಲವಲವಿಕೆಯಿಂದ ಎದ್ದು ಓಡಾಡುತ್ತಿದ್ದಳು. ಗೋಪಿಯನ್ನು ಕಂಡವಳೇ "ಬಾರೋ ಮಾಣೀ.. ಇಲ್ನೋಡೋ... ಯಮ ಬರೆ ಎಳ್ದಿದಾನೆ! ನಾನು ಸಧ್ಯಕ್ಕೆ ಸಾಯಲ್ಲ!" ಎಂದು ತನ್ನ ಮೊಣಕಾಲಿನ ಮೇಲೆ ಮಚ್ಚೆಯಂತೆ ಮಂದವಾಗಿ ಮೂಡಿದ್ದ ಕಪ್ಪು ಗುರುತನ್ನು ತೋರಿಸಿ ಹಿಗ್ಗಿನಿಂದ ಹೇಳಿದಳು. ಅಲ್ಲೇ ಇದ್ದ ಅಮ್ಮನೂ "ಹೌದೋ ಪುಟ್ಟೂ. ಇನ್ನೂ ಕೆಲವು ವರ್ಷ ನೀನು ಉತ್ತುತ್ತೆ,  ದ್ರಾಕ್ಷಿ ತಿನ್ತಿರ್ಬೋದು!" ಎಂದು ನಕ್ಕಳು. ಗೋಪಿಯೂ ನಕ್ಕ: "ಅಂದರೆ... ಅಜ್ಜಿ ಸಾಯಲ್ಲ!"

                   ****************

ಎಂಟನೇ ತರಗತಿ ಪಾಸಾದ ಗೋಪಿಯನ್ನು ಮುಂದೆ ಉಡುಪಿಯಲ್ಲಿ ಬಿಟ್ಟು ಓದಿಸಬೇಕೆಂದು ತೀರ್ಮಾನಿಸಲಾಯಿತು. ಅಲ್ಲಿ ಗೌರಿಶಂಕರ್ ಎನ್ನುವವರೊಬ್ಬರು ತಮ್ಮ ತಂದೆಯ ಸ್ಮರಣಾರ್ಥ ಹಾಸ್ಟೆಲ್ ಒಂದನ್ನು ನಡೆಸುತ್ತಿದ್ದಾರಂತೆ. ವಿದ್ಯಾರ್ಥಿಗಳಿಗಾಗೇ ಇರುವ ಆ ಹಾಸ್ಟೆಲ್ ಗೆ ತಿಂಗಳಿಗೆ ಐವತ್ತೇ ರೂಪಾಯಿ ಬಾಡಿಗೆ! ಆದರೆ ಕೆಲವೊಂದು ಶರತ್ತುಗಳಿವೆ; ವಿದ್ಯಾರ್ಥಿಗಳು ವರುಷಕ್ಕೆ ಎರೆಡು ಬಾರಿ ಮಾತ್ರ ಊರಿಗೆ ಹೋಗಿ ಬರಬಹುದು. ಒಂದು ಅಕ್ಟೋಬರ್ ರಜೆಗೆ, ಇನ್ನೊಂದು ಬೇಸಿಗೆ ರಜೆಗೆ! ಉಳಿದಂತೆ ವಿದ್ಯಾರ್ಥಿಗಳ ರಿಪೋರ್ಟ್ ಕಾರ್ಡಿನಿಂದ ಹಿಡಿದು ಎಲ್ಲಾ ಶೈಕ್ಷಣಿಕ ಜವಾಬ್ದಾರಿ, ಮೇಲ್ವಿಚಾರಣೆಗಳೂ ಗೌರಿಶಂಕರ್ ಅವರದೇ ಆಗಿರುತ್ತದೆ. 

ಗೋಪಿಯ ಮಾವ ಅಲ್ಲೇ ಇದ್ದು ಓದಿದ್ದರಿಂದ ಗೋಪಿಗೆ ಅಲ್ಲಿಯ 'ಸೀಟ್' ಸುಲಭವಾಗಿ ಸಿಕ್ಕಿತ್ತು. ಉಡುಪಿಗೆ ಹೋಗುತ್ತಿರುವ ವಿಷಯವನ್ನು ಅಜ್ಜಿಗೆ ಹೇಳಬಾರದೆಂದು ಅಮ್ಮ ತಾಕೀತು ಮಾಡಿದ್ದಳು. ಅಂತೂ, ಇಂತೂ ಗೋಪಿ ಮನೆಬಿಡುವ ದಿನ ಬಂದೇ ಬಿಟ್ಟಿತು. ಹೊರಡಲು ಇನ್ನೇನು ಸ್ವಲ್ಪ ಸಮಯವಿದ್ದಾಗ ಗೋಪಿ ಅಜ್ಜಿಯ ಕೋಣೆ ಹೊಕ್ಕ. ಮೊದಲಿನಂತೆ ನಡೆದಾಡಲಾಗದ ಅಜ್ಜಿ ಹೆಚ್ಚಾಗಿ ಮಲಗಿಯೇ ಇರುತ್ತಿದ್ದಳು. ಗೋಪಿಯನ್ನು ಕಂಡವಳೇ ಕಾರ್ಸೇವಿಗೆಂದು ಬೆಳಗ್ಗೆಯೇ ತೆಗೆದಿಟ್ಟುಕೊಂಡಿದ್ದ ಚಿಲ್ಲರೆಯನ್ನು ಕೊಡಲೆಂದು ಕೈ ಮುಂದೆ ಚಾಚಿದಳು....
"ಅಜ್ಜೀ... ನಾನು ಉಡುಪಿಗೆ ಹೋಗ್ತಿದೀನಿ"
"ಆಂ... ಉಡುಪಿಗಾ? ಯಾಕೆ ಮಾಣೀ? ಯಾವತ್ತು ವಾಪಾಸ್ ಬರ್ತೀಯ?"
"ಇನ್ಮುಂದೆ ಅಲ್ಲೇ ಇದ್ಕೊಂಡು ಓದ್ತೀನಿ ಅಜ್ಜಿ...."
ಚಿಲ್ಲರೆ ಹಿಡಿದು ಮುಂಚಾಚಿದ್ದ ಕೈ ಅಲ್ಲೇ ಸ್ತಬ್ಧವಾಯಿತು. 
ಬಳಲಿ ಮುದುರಿದ್ದ ಕಣ್ಣು ತುಂಬಿ ಬಂತು.
"ನಂಗೆ ಹೇಳ್ಲೇ ಇಲ್ವಲ್ಲಾ ಮಾಣೀ...." ಎಂದು ಗದ್ಗದವಾಗಿ ಕೇಳಿದ ಸ್ವರದಲ್ಲಿ ನೋವು ಮಡುಗಟ್ಟಿ ನಿಂತಿತ್ತು. 
ಸೋತ ದೃಷ್ಟಿಯಲ್ಲಿ ಅಜ್ಜಿಯನ್ನೇ ನೋಡುತ್ತ ನಿಂತಿದ್ದ ಗೋಪಿ ಏನೋ ಹೊಳೆದಂತೆ ಥಟ್ಟನೆ ಅಜ್ಜಿಯ ಕೈಲಿದ್ದ ಚಿಲ್ಲರೆಯನ್ನ ತೆಗೆದುಕೊಂಡ.
"ಇರು ಅಜ್ಜೀ. ಈಗ್ಲೇ ಹೋಗಿ ನಿಂಗೆ ಕಾರ್ಸೇವು ತಂದ್ಕೊಡ್ತೀನಿ" ಅಂತ ಒಂದೇ ಉಸಿರಿಗೆ ಹೊರಗೋಡಿದವನು ಬಂದು ನಿಂತದ್ದು ಹೋಟೆಲ್ ಎದುರಿನ ಅಂಗಳದಲ್ಲೇ. ಏದುಸಿರು ಬಿಡುತ್ತಾ ತಲೆಯೆತ್ತಿ ನೋಡಿದ- 
'ಕಾವೇರಿ ಹೋಟೆಲ್' ಬಾಗಿಲು ಮುಚ್ಚಿತ್ತು!

ಹೊರಟುನಿಂತ ಗೋಪಿಯನ್ನು " ಚೆನ್ನಾಗಿ ಓದು ಮಾಣೀ... ಒಳ್ಳೇದಾಗ್ಲಿ...ಹೋಗಿ ಬಾ... ಈ ಅಜ್ಜೀನ ಮರ್ತ್ ಬಿಡ್ಬೇಡ. ಆಗಾಗ ಬಂದು ಹೋಗ್ತಿರು ಆಯ್ತಾ...." ಎಂದು ಮನಸಾರೆ ಹರಸಿ ಕಳಿಸಿದಳು ಕಾವೇರಜ್ಜಿ.

                  ****************

ಗೋಪಿ ಉಡುಪಿಗೆ ಹೋದ ಎರೆಡು ತಿಂಗಳಿಗೆಲ್ಲಾ ಅಜ್ಜಿಯ ಆರೊಗ್ಯ ಬಿಗಡಾಯಿಸಿತು. ಶಿವಮೊಗ್ಗದ ಆಸ್ಪತ್ರೆಯ ಸ್ಪೆಶಲ್ ವಾರ್ಡಿನಲ್ಲಿ ಬಳಲಿ, ಬೆಂಡಾಗಿ, ಜೀವಚ್ಛವದಂತೆ ಮಲಗಿದ್ದ ಎಂಬತ್ತರ ಮುದುಕಿಯನ್ನು ಪರೀಕ್ಷಿಸಿದ್ದ ಡಾಕ್ಟರ್ ಘೋಷಿಸಿಬಿಟ್ಟರು:
"ಇದು ಲಿವರ್ ಜಾಂಡೀಸ್!"
"ಹೆಚ್ಚೆಂದರೆ ಇನ್ನೊಂದು ತಿಂಗಳು ಬದುಕಬಹುದು. ಕರ್ಕೊಂಡು ಹೋಗಿ, ಇದ್ದಷ್ಟು ದಿನ ಚೆನ್ನಾಗಿ ನೋಡ್ಕೊಳ್ಳಿ"
ನಡೆದುದೆಲ್ಲವನ್ನೂ ಗೋಪಿಗೆ ಫೋನಿನಲ್ಲಿ ಹೇಳಿದ ಅಮ್ಮ ಒಮ್ಮೆ ಬಂದು ನೋಡಿಕೊಂಡು ಹೋಗೆಂದಿದ್ದಳು. ಅಂತೆಯೇ ಗೋಪಿ ಊರಿಗೆ ಹೋಗಲು ತನ್ನ ವಾರ್ಡನ್ ಗೌರಿ ಶಂಕರರ ಅನುಮತಿ ಕೇಳಲು ಬಂದ.
"ನಿನ್ನಂಥವರು ತುಂಬಾ ಜನರನ್ನು ನೋಡಿದೀನಿ ಹುಡುಗಾ!"
ಹುಚ್ಚು ಕೆದರಿದ ಕರಡಿ ಅರಚಿದಂತಿತ್ತು ಅವನ ಧ್ವನಿ.
"ಬಂದು ಇನ್ನೂ ಎರೆಡು ತಿಂಗಳಾಗಿಲ್ಲ, ಆಗ್ಲೇ ಕಥೆ ಹೇಳ್ತೊಂಡು ಬಂದ್ಬಿಟ್ಟ. ನಿಂಗೆ ಮೊದಲೇ ಹೇಳಿಲ್ವಾ ವರ್ಷಕ್ಕೆ ಎರೆಡು ಸಲ ಮಾತ್ರ ಊರಿಗೆ ಬಿಡೋದೂಂತ? ಅಕ್ಟೋಬರ್ ತನಕ ಬಾಯ್ಮುಚ್ಚಿಕೊಂಡು ಇರ್ಬೇಕು ಗೊತ್ತಾಯ್ತಾ?"

ಅಲ್ಲಿಗೆ ಅಜ್ಜಿಯನ್ನು ಜೀವಂತ ನೋಡುವ ಅಂತಿಮ ಅವಕಾಶ ಮುಗಿದುಹೋಗಿತ್ತು.

ಇದಾಗಿ ಎರೆಡು ವಾರವಾಗಿತ್ತಷ್ಟೇ. ಅದೊಂದು ಶನಿವಾರ ಗೋಪಿ ಶಾಲೆ ಮುಗಿಸಿ ಬರುವ ಹೊತ್ತಿಗೆ ಆ ಕಹಿ ಸುದ್ದಿ ಅವನಿಗಾಗಿ ಕಾದುಕೂತಿತ್ತು. ಅಜ್ಜಿ ತನ್ನ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಳು. ಉಟ್ಟ ಬಟ್ಟೆಯಲ್ಲೇ ಗೋಪಿ ಬಸ್ಸು ಹತ್ತಿದ. ಮನೆ ತಲುಪುವ ಹೊತ್ತಿಗೆ ಸಂಜೆಯಾಗಿತ್ತು...

ಅಲ್ಲಿ... ಅಂಗಳದ ನಟ್ಟ ನಡುವೆ ಮಲಗಿತ್ತು ಅಜ್ಜಿಯ ಶವ...

ಅಜ್ಜಿ.. ತನ್ನ ಪ್ರೀತಿಯ ಅಜ್ಜಿ... ಮಾಣೀ ಎಂದು ತಲೆ ನೇವರಿಸುತ್ತಿದ್ದ ಅಜ್ಜಿ... ಹಿಡಿ ಕಾರ್ಸೇವಿಗಾಗಿ ಹಾತೊರೆಯುತ್ತಿದ್ದ ಅಜ್ಜಿ.. ಮಕ್ಕಳು-ಮರಿ, ನೆಂಟರಿಷ್ಠರಿಗೆಲ್ಲಾ ಬೇಡಾಗಿ ಕಣ್ಣೀರಿಡುತ್ತಿದ್ದ ಅಜ್ಜಿ....

ಗೋಪಿ ನೋಡಿದ.. ನೋಡಿಯೇ ನೋಡಿದ... ಜೀವಮಾನದಲ್ಲಿ ಇನ್ನೆಂದೂ ನೋಡಲಾಗದ ಈ ಮುಖ ತನ್ನ ಕೊನೆಯ ಕ್ಷಣದ ತನಕವೂ ಹಾಗೇ ಕಣ್ಣಲ್ಲಿ ಉಳಿದು ಹೋಗಲೆಂಬಂತೆ ಮೈಯೆಲ್ಲಾ ಕಣ್ಣಾಗಿ ನಿಂತು ನೋಡಿದ...

ಅಂತಿಮ ಸಂಸ್ಕಾರಕ್ಕೆಂದು ಶವವನ್ನ ಒಯ್ಯತೊಡಗಿದರು. ಗೋಪಿ ನಿಂತಲ್ಲೇ ಕಲ್ಲಾಗಿ ನೋಡುತ್ತಿದ್ದ. ಕೆಲವೇ ಕ್ಷಣಗಳ ಹಿಂದೆ ಜೀವಂತವಾಗಿದ್ದ, ಯಾರದೋ ಅಮ್ಮನಾಗಿ, ಯಾರದೋ ಅಜ್ಜಿಯಾಗಿ, ಇನ್ಯಾರದೋ ಪ್ರೀತಿಯಾಗಿ ಉಸಿರಾಡಿಕೊಂಡಿದ್ದ ದೇಹವನ್ನ ಅಗ್ನಿ ಇಂಚಿಂಚಾಗಿ ಆಹುತಿ ತೆಗೆದುಕೊಂಡಿತು. ಎಲ್ಲವೂ ಮುಗಿದು, ಎಲ್ಲರೂ ಮನೆಗೆ ಬಂದರು. ಸ್ನಾನ ಮಾಡಿಕೊಂಡು ಒಳಗೆ ಬಂದ ಗೋಪಿ ಥಟ್ಟನೆ ಏನೋ ಹೊಳೆದಂತಾಗಿ ಬ್ಯಾಗಿನಲ್ಲಿದ್ದ ಪರ್ಸ್ ತೆರೆದ. ಅಲ್ಲಿ ಬೆಚ್ಚಗೆ ಕೂತಿತ್ತು ಅವನು ಜೋಪಾನವಾಗಿಟ್ಟುಕೊಂಡಿದ್ದ ಐದು ರೂಪಾಯಿಯ ನಾಣ್ಯ.....ಅಜ್ಜಿ ಕಟ್ಟಕಡೆಯ ಬಾರಿಗೆ ಕಾರ್ಸೇವು ತಾ ಎಂದು ಕೊಟ್ಟಿದ್ದ ನಾಣ್ಯ...
ಅದನ್ನೊಮ್ಮೆ ಆಸ್ಥೆಯಿಂದ ಸವರಿದ. 
ಪಕ್ಕದಿಂದಲೇ ಅಜ್ಜಿಯ ದನಿ ಕೇಳಿದಂತಾಯ್ತು:
"ಬರ್ಬೇಕಾದ್ರೆ ನಂಗೆ ಕಾವೇರಿ ಹೋಟ್ಲಿಂದ ಕಾರ್ಸೇವು ತಗೊಂಡು ಬಾ ಮಾಣೀ... ಅಮ್ಮಂಗೆ ಹೇಳ್ಬೇಡ!" 

('ಮೈಸೂರು ಅಸೋಸಿಯೇಷನ್-ಮುಂಬೈ' ಸಂಸ್ಥೆಯ 'ಮಾಸ್ತಿ ಜಾಗತಿಕ ಕನ್ನಡ ಕಥಾ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಗಳಿಸಿದ ಕಥೆ)

ಗುರುವಾರ, ಜನವರಿ 5, 2017

ಜೀವಜಲ

ಬರಡು ಧೂಳಿನ ಮಣ್ಣ ಕಣ್ಣಿಗೆ
ಹಸಿರು ದೃಷ್ಟಿಯ ಚಿಮುಕಿಸಿ;
ಕಲ್ಲ ನರದಲಿ ನೆತ್ತರುಕ್ಕಿಸಿ
ಜೀವ ಸಂತತಿ ಅರಳಿಸಿ.

ಸಪ್ತ ಗ್ರಹಗಳಲೆಲ್ಲೂ ಕಾಣದ
ನಾಗರೀಕತೆ ಚಿಗುರನು,
ತೀರ ತೊಟ್ಟಿಲೊಳಿಟ್ಟು ತೂಗಿದ
ಉದಕ ಮಾತೆಯ ಮಡಿಲಿದು.

ಕಡಲೊ ನದಿಯೋ, ಕೆರೆಯೋ ಝರಿಯೋ
ಸಿರಿಯು ಬತ್ತದ ಆಳವೋ;
ಅಗಾಧ ಸುಳಿಗಳ, ಪ್ರಚಂಡ ಅಲೆಗಳ
ನುಂಗಿ ನಿಂತಿಹ ಶಾಂತಿಯೋ.

ಜೀವ ವಾಹಿನಿ ಹರಿದು ಸಾಗುತ
ಹಸಿವನೆಲ್ಲವ ಕಿತ್ತಳು;
ಹರಿವು ತಾಕದ ನೆಲದ ತಾಪಕೂ
ಮಳೆಯ ಹನಿಗಳ ಸುರಿದಳು.

ವಿಷವ ಹರಿಸುವ ಕೈಯ್ಯ ದಾಹಕೂ
ಜೀವಜಲವನೆ ಎರೆವಳು;
ಯುಗವೆ ಸವೆದರೂ ಮತ್ತೆ ಹುಟ್ಟುತ
ಜಗದ ಉಳಿವಿಗೆ ದುಡಿವಳು.

('3ಕೆ: ಕನ್ನಡ ಕವಿತೆ ಕಥನ' ದ ರಾಜ್ಯೋತ್ಸವ ಕವನ ಸ್ಪರ್ಧೆ 2016ರಲ್ಲಿ ಸಮಾಧಾನಕರ ಬಹುಮಾನ ಪಡೆದ ನನ್ನ ಕವನ. ಕವನ ಸ್ಪರ್ಧೆಯ ವಿಷಯ 'ಜಲಸಂಸ್ಕೃತಿ')

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...