ಭಾನುವಾರ, ಜುಲೈ 23, 2017

ಮೂಡುಗುಡ್ಡೆ ಪ್ರೀಮಿಯರ್ ಲೀಗ್!



ಚಿಕ್ಕವನಿದ್ದಾಗ ನನಗೆ ಕ್ರಿಕೆಟ್ ಎಂದರೆ ಒಂದು ರೀತಿ ಕೋಪ. ಡಿಡಿ1 ರಲ್ಲಿ ಕಡ್ಡಾಯವಾಗಿ ನೇರ ಪ್ರಸಾರವಾಗುತ್ತಿದ್ದ ಭಾರತದ ಪಂದ್ಯಗಳು ವಾರಕ್ಕೆ ಒಮ್ಮೆ ಮಾತ್ರ ಬರುವ ನನ್ನ ಮೆಚ್ಚಿನ ಭಾನುವಾರದ ಸಿನೆಮಾವನ್ನು ನುಂಗಿ ಹಾಕುತ್ತವೆಂಬುದೇ ನನ್ನ ಬೇಸರಕ್ಕೆ ಕಾರಣವಾಗಿತ್ತು. ಆದ್ದರಿಂದಲೇ ಕ್ರಿಕೆಟ್ ಆಟದ ಅಆಇಈಗಳೇ ಗೊತ್ತಿಲ್ಲದ ನನ್ನ ಅಮ್ಮ "ಈ ರಿಪ್ಲೈ, ಅಡ್ವರ್ಟೈಸ್ ಗಳನ್ನ ಮತ್ತೆಮತ್ತೆ ಹಾಕ್ದೇ ಇದ್ದಿದ್ರೆ ಆಟ ಬೇಗ ಮುಗ್ದು ಪಿಚ್ಚರ್ ನೋಡ್ಲಕ್ಕಿತ್ತು" ಎಂದು ವಾದಿಸುವಾಗ ಹೌದೌದು ಎಂದು ತಲೆ ಆಡಿಸುತ್ತಿದ್ದೆ. ಅದರಲ್ಲೂ ಒಂದು ಇನ್ನಿಂಗ್ಸ್ ಮುಗಿದ ನಂತರ ಬರುತ್ತಿದ್ದ 'ಫೋರ್ಥ್ ಅಂಪಾಯರ್' (ಆಗ ಅದಕ್ಕೇನನ್ನುತ್ತಿದ್ದರೋ ನೆನಪಿಲ್ಲ) ಬಂದಾಗಲಂತೂ ಅಮ್ಮನಿಗೆ ಪಿತ್ತ ನೆತ್ತಿಗೇರುತ್ತಿತ್ತು. "ಹಿಂಗೆ ಕೂತ್ಕಂಡು ಕಟ್ಟೆ ಪಂಚಾಯ್ತಿ ಮಾಡೋ ಬದ್ಲು ಬೇಗ ಬೇಗ ಆಡಿ ಮುಗ್ಸಬಾರ್ದಾ" ಎಂದು ಟೀವಿಯಲ್ಲಿ ಪಂದ್ಯದ ಬಗ್ಗೆ ಚರ್ಚಿಸುತ್ತಾ ಕುಳಿತಿರುವ ಕಪಿಲ್ ದೇವ್, ರವಿ ಶಾಸ್ತ್ರಿಗಳನ್ನೆಲ್ಲಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. 

ಏನೂ ಅರ್ಥವಾಗದಿದ್ದರೂ ಕೆಲವೊಮ್ಮೆ ನಾನು ಓದಲೆಂದು ನಮ್ಮನೆಯಲ್ಲಿದ್ದ ಅಕ್ಕನ ಜೊತೆ ಕುಳಿತು ಕ್ರಿಕೆಟ್ ನೋಡುತ್ತಿದ್ದೆ. ಕ್ರಿಕೆಟ್ ನ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದ ಅಕ್ಕ ಏನೂ ಗೊತ್ತಿಲ್ಲದ ನನಗೆ "ನೋಡಿಲ್ಲಿ, ಹಿಂಗೆ ಹೊಡೆದ್ರೆ ಸಿಕ್ಸ್, ಹಿಂಗೆ ಹೊಡೆದ್ರೆ ಫೋರ್" ಎಂದು ಸದಭಿನಯಪೂರ್ವಕವಾಗಿ ತೋರಿಸುತ್ತಿದ್ದಳು. ಅವಳನ್ನು ಅನುಕರಿಸಲಾಗದ ನಾನು ಪೆಕರನಂತೆ ಕೈಯ್ಯನ್ನು ಹೇಗ್ಹೇಗೋ ಬೀಸಿ "ಹಿಂಗೆ ಹೊಡೆದ್ರೆ?" ಎಂದು ಕೇಳುತ್ತಿದ್ದೆ. ಇದುವರೆಗೆ ಯಾವ ತಂಡದ ಯಾವ ಬ್ಯಾಟ್ಸ್ ಮನ್ ಕೂಡಾ ಹೊಡೆಯದ ಆ ವಿಚಿತ್ರ ಹೊಡೆತವನ್ನು ಕಂಡು ಗಲಿಬಿಲಿಗೊಂಡ ಅವಳು "ಹಂಗೆ ಹೊಡೆದ್ರೆ ಫರ್ಸ್ಟ್ ಬಾಲಿಗೇ ಓಟ್ ಆಗ್ತೀಯ ಅಷ್ಟೇ" ಎಂದು ಗದರುತ್ತಾ ಮತ್ತೊಮ್ಮೆ ಬರಿಗೈಯ್ಯಲ್ಲಿ ಗಾಳಿಗೆ ಸಿಕ್ಸರ್-ಫೋರ್ ಬಾರಿಸಿ ತೋರಿಸುತ್ತಿದ್ದಳು. ಅವಳ ಪರಮವಿಧೆಯ ಗಾಂಪ ಶಿಶ್ಯನಾದ ನಾನು ಆ ಅದ್ಭುತ 'ಶಾಟ್'ಗೆ ಬೆರಗಾಗಿ ತಲೆದೂಗುತ್ತಿದ್ದೆ.

ನಾನು, ನನ್ನ ತಮ್ಮ ಹಾಗೂ ಚಿಕ್ಕಪ್ಪನ ಮಗ- ನಮ್ಮ ಕೇರಿಯಲ್ಲಿದ್ದುದು ಒಟ್ಟು ಮೂವರು ಹುಡುಗರು. ಆಗಿನ್ನೂ ನಮ್ಮ ದೈನಂದಿನ ಆಟಗಳೊಳಗೆ ಕ್ರಿಕೆಟ್ ಪ್ರವೇಶಿಸಿರಲಿಲ್ಲ. ನಮ್ಮ ಮೇಲೆ ಶಕ್ತಿಮಾನ್, ಜೂನಿಯರ್-ಜಿ, ಜೈ ಹನುಮಾನ್ ನಂತಹಾ ಫಿಕ್ಷನ್ ಹಾಗೂ ಪೌರಾಣಿಕ ಧಾರಾವಾಹಿಗಳ ಪ್ರಭಾವ ತುಸು ಹೆಚ್ಚೇ ಇದ್ದುದರಿಂದ ನಾವಾಡುವ ಆಟಗಳಲ್ಲೂ ಸಹಾ ಅವೇ ಇರುತ್ತಿದ್ದವು. ಕೈಗೆ ಸಿಕ್ಕ ದೊಣ್ಣೆ,ಕೋಲು-ಕೊಕ್ರುಗಳನ್ನು ಖಡ್ಗ-ಗದೆಗಳಂತೆ ಹಿಡಿದು ಬಾಯಿಂದ ಠಾಣ್ ಠಾಣ್ ಎನ್ನುವ ಸದ್ದು ಹೊರಡಿಸುತ್ತಾ ಅಂಗಳದಲ್ಲೇ ಭಯಾನಕ ಯುದ್ಧದ ಸನ್ನಿವೇಶವನ್ನು ಸೃಷ್ಟಿಸುತ್ತಿದ್ದೆವು. ನನ್ನ ತಮ್ಮನಂತೂ ಮೋಟುದ್ದದ ಕೋಲನ್ನು ಮಂತ್ರದಂಡದಂತೆ ಬೀಸುತ್ತಾ, ಚಿತ್ರವಿಚಿತ್ರ ಮಂತ್ರಗಳನ್ನು ಪಠಿಸುತ್ತಾ ಎಲ್ಲರನ್ನೂ ಬೆಚ್ಚಿಬೀಳಿಸುತ್ತಿದ್ದ. ಹೀಗಿದ್ದ ನಮ್ಮ 'ಫಿಕ್ಷನ್' ಲೋಕಕ್ಕೆ ಕ್ರಿಕೆಟ್ಟನ್ನು ಪರಿಚಯಿಸಿದವರು ಪಕ್ಕದ ಮನೆಯಲ್ಲೇ ಇದ್ದ ನಮ್ಮ ಅಣ್ಣ (ದೊಡ್ಡಪ್ಪನ ಮಗ). ದೂರದೂರಿನಲ್ಲಿದ್ದ ತಮ್ಮ ಅಂಗಡಿಯನ್ನು ಮುಚ್ಚಿ ಮನೆಯಲ್ಲೇ ಇರಲಾರಂಭಿಸಿದ ಅವರು ಕಾಗೆ-ಗುಬ್ಬಿ ಆಟ ಆಡುತ್ತಿದ್ದ ನಮ್ಮ ಕೈಗೆ ಮೊದಲ ಬಾರಿಗೆ ಚೆಂಡು-ದಾಂಡು ಕೊಟ್ಟರು.

ಕೊಟ್ಟಿದ್ದನ್ನು ಶಿಸ್ತಾಗಿ ತೆಗೆದುಕೊಂಡಿದ್ದೇನೋ ಹೌದು, ಆದರೆ ಆಡಲು ಬರಬೇಕಲ್ಲ? ಬ್ಯಾಟನ್ನು ಗದೆಯಂತೆಯೂ, ಬಾಲನ್ನು ಬಾಂಬಂತೆಯೂ ಬೀಸುತ್ತಾ ಕ್ರಿಕೆಟ್ಟನ್ನೂ ಪೌರಾಣಿಕ-ಫಿಕ್ಷನ್ ಮಿಶ್ರಿತ ಹೈಬ್ರೀಡ್ ಯುದ್ಧದಂತೆ ಆಡುತ್ತಿರುವ ನಮ್ಮ ಶೈಲಿ ನೋಡಿ ಅಕ್ಷರಷಃ ಬೆಚ್ಚಿಬಿದ್ದ ಅಣ್ಣ ಕೊನೆಗೆ ಸ್ವತಃ ತಾವೇ ಅಂಗಳಕ್ಕಿಳಿದರು. ನಮಗೆ ಕಲಿಸುತ್ತಾ, ತಾವೂ ಆಡುತ್ತಾ ಕ್ರಿಕೆಟ್ ಎನ್ನುವ ಎಂದೂ ವಾಸಿಯಾಗದ ಹುಚ್ಚನ್ನು ನಮ್ಮ ತಲೆಯೊಳಕ್ಕೆ ತುಂಬಿದರು. ನೂರುಕೋಟಿ ಭಾರತೀಯರ ಉಸಿರಾಟವಾಗಿರುವ, ಆಡಿದಷ್ಟೂ ಆಡಬೇಕೆನಿಸುವ ಈ ಆಟ ನಮಗೆ ಇನ್ನಿಲ್ಲದಷ್ಟು ಇಷ್ಟವಾಗಿಹೋಯಿತು. ಶನಿವಾರ ಮಧ್ಯಾಹ್ನವಾದರೆ ಸಾಕು, ಯಾವ ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ಕಡಿಮೆಯಿಲ್ಲದ ಸಂಭ್ರಮವೊಂದು ನಮ್ಮನೆಯ ಅಂಗಳದಲ್ಲಿ ಜಮಾಯಿಸುತ್ತಿತ್ತು. ಆದರೆ ಇಲ್ಲಿ ನಮ್ಮ ಆಟಕ್ಕೆ ಹತ್ತಾರು ಅಡೆತಡೆಗಳು. ನಮ್ಮನೆ ಇರುವುದು ಗುಡ್ಡದ ಇಳಿಜಾರಿನ ನಡುವೆಯಾಗಿರುವುದರಿಂದ ಸುತ್ತಲೂ ಆಳವಾದ ತಗ್ಗು-ಹೊಂಡಗಳಿವೆ. ಸಾಲದ್ದಕ್ಕೆ ಈ ಹೊಂಡ-ತಗ್ಗುಗಳ ತುಂಬಾ ತರಹೇವಾರಿ ಗಿಡ,ಗಂಟಿ, ಪೊದೆಗಳು ಒತ್ತಾಗಿ ಬೆಳೆದು ಅಲ್ಲೆಲ್ಲೂ ಕಾಲಿಡದಂತಾಗಿದೆ. ನೇರವಾಗಿ ಅಥವಾ ಬಲಭಾಗದಲ್ಲಿ ಸ್ವಲ್ಪ ಜೋರಾಗಿ ಹೊಡೆದರೂ ಚೆಂಡು ಛಂಗನೆ ಹಾರಿ ಈ ಆಳಹೊಂಡದ ಪೊದೆಗಳ ನಡುವೆಲ್ಲೋ ಮರೆಯಾಗಿ, ಆಡಿದ್ದಕ್ಕಿಂತಲೂ ಹೆಚ್ಚಿನ ಸಮಯ ಚೆಂಡು ಹುಡುಕಲಿಕ್ಕೇ ವ್ಯಯವಾಗುತ್ತಿತ್ತು. ಬಹುಷಃ ಬೇರೆಲ್ಲಾದರೂ ಇಷ್ಟು ಹುಡುಕಿದ್ದರೆ ಭಾರೀ ಖಜಾನೆಯೇ ಸಿಗುತ್ತಿತ್ತೋ ಏನೋ, ಚೆಂಡು ಮಾತ್ರ ಸಿಗುತ್ತಿರಲಿಲ್ಲ. ಹುಡುಕುವ ಕಣ್ಣಿಗೆ ಹಳದಿ ಬಣ್ಣದ ವಸ್ತುಗಳೆಲ್ಲವೂ ಬಾಲ್ ನಂತೆಯೇ ಕಂಡು ದಾರಿ ತಪ್ಪಿಸುತ್ತಿದ್ದವು. ಇದು ಸಾಯಲಿ ಎಂದು ಎಡಕ್ಕೇನಾದರೂ ಹೊಡೆದರೆ ಮುಗಿದೇ ಹೋಯಿತು. ಚೆಂಡು ಮನೆಗೆ ತಗುಲಿ, ಮಣ್ಣಿನ ಗೋಡೆಯಿಂದ ಮಣ್ಣು ಧಸಾಲ್ಲನೆ ಉದುರಿ, ಒಳಗಿದ್ದ ಅಪ್ಪನಿಗೆ ಪಿತ್ತ ಕೆದರಿ, ನಾವು ಹುಗಿದ ವಿಕೆಟನ್ನೇ ಕಿತ್ತು ನಮಗೆ ನಾಲ್ಕು ಬಿಗಿಯುವುದರಲ್ಲಿ ಅನುಮಾನವೇ ಇರಲಿಲ್ಲ.

ಆ ದಿನಗಳಲ್ಲಿ ನೂರಿನ್ನೂರು ರೂಪಾಯಿ ಬೆಲೆ ಬಾಳುತ್ತಿದ್ದ ಹೊಸ ಬ್ಯಾಟು ಬೇಕೆಂದೇನಾದರೂ ಕೇಳಿದ್ದೇ ಆದರೆ ಅಪ್ಪ ಕೋಪದಲ್ಲಿ 'ಮಾಸ್ಟರ್-ಬ್ಲಾಸ್ಟರ್' ಆಗಿಬಿಡುವ ಅಪಾಯವಿದ್ದುದರಿಂದ ನಾವು ಆ 'ರಿಸ್ಕ್' ತೆಗೆದುಕೊಂಡಿರಲಿಲ್ಲ. ಯಥೇಚ್ಚವಾಗಿ ಬಿದ್ದಿರುತ್ತಿದ್ದ ತೆಂಗಿನ ಗರಿಗಳಲ್ಲಿ ಒಳ್ಳೆಯದೊಂದನ್ನು ಆಯ್ದು, ಅದರ ತಲೆಯನ್ನು ಅಗತ್ಯಕ್ಕೆ ತಕ್ಕಂತೆ ಕೊಯ್ದು, ಬುಡವನ್ನು ಹಿಡಿಕೆಯಂತೆ ಚಿಕ್ಕದಾಗಿ ಕತ್ತರಿಸಿ, ಮಧ್ಯದಲ್ಲಿ 'MRF' ಎಂದು ದೊಡ್ಡಕ್ಷರಗಳಲ್ಲಿ ಕೆತ್ತಿ ನಮ್ಮದೇ ಆದ ಬ್ಯಾಟನ್ನು ಸಿದ್ಧಪಡಿಸಿಕೊಂಡಿದ್ದೆವು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ನನ್ನ ಗೆಳೆಯನೊಬ್ಬ ಅಡಿಕೆ ಮರದ ಹಾಳೆಯನ್ನೇ ಕತ್ತರಿಸಿ 'ಪ್ಯಾಡ್' ನಂತೆ ಕೈ-ಕಾಲುಗಳಿಗೆ ಕಟ್ಟಿಕೊಂಡು ಯಾವ ತೆಂಡೂಲ್ಕರ್ ಗೂ ಕಮ್ಮಿ ಇಲ್ಲದಂತೆ ಸರ್ವಸನ್ನದ್ಧನಾಗಿ ತನ್ನ ಆರು ವರ್ಷದ ತಂಗಿಯ ಜೊತೆ ಆಡಲು ಅಂಗಳಕ್ಕಿಳಿಯುತ್ತಿದ್ದ! 

ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದ ತಮ್ಮಂದಿರನ್ನು ಜೊತೆಗೂಡಿಸಿಕೊಂಡು ಆಟವನ್ನು ಪೂರ್ಣಗೊಳಿಸುವುದು ನನ್ನ ಪಾಲಿಗೆ ದೊಡ್ಡ ಸವಾಲಾಗಿತ್ತು. ಸದಾ ತಾವೇ ಬ್ಯಾಟಿಂಗ್ ಮಾಡಬೇಕು ಹಾಗೂ ತಾವೇ ಗೆಲ್ಲಬೇಕು ಎಂದು ಹಟ ಮಾಡುತ್ತಿದ್ದ ಅವರಿಬ್ಬರೂ ಅದು ಸಾಧ್ಯವಾಗದೇ ಹೋದಾಗ ರಗಳೆ ತೆಗೆಯುತ್ತಿದ್ದರು. ಎಷ್ಟೋ ಸಲ ಕ್ರಿಕೆಟ್ ನಲ್ಲಿ ಆರಂಭವಾದ ಆಟ ಮಲ್ಲಯುದ್ಧ-ಮುಷ್ಠಿಯುದ್ಧಗಳಲ್ಲಿ ಅಂತ್ಯವಾಗುತ್ತಿತ್ತು. ಕೊನೆಗೆ ಈ ಹೊಡೆದಾಟವನ್ನು ತಡೆಯಲು ನಾವು ಅದ್ಭುತ ಉಪಾಯವೊಂದನ್ನು ಕಂಡುಕೊಂಡೆವು. ಅದೇನೆಂದರೆ ನಾವು ನಮ್ಮದೇ ಹೆಸರಿನಲ್ಲಿ ಆಡುವ ಬದಲು ಅಂತರಾಷ್ಟ್ರೀಯ ಆಟಗಾರರ ಹೆಸರಿನಲ್ಲಿ ಆಡುವುದು! ಒಮ್ಮೆ 'ಸಚಿನ್' ಆಗಿ ಔಟಾದ ನನ್ನ ತಮ್ಮ ಸ್ವಲ್ಪ ದೂರ ನಡೆದುಹೋಗಿ 'ಸೆಹ್ವಾಗ್' ಆಗಿ ಮರಳಿಬರುತ್ತಿದ್ದ. ನಾನ್ ಸ್ಟ್ರೈಕರ್ ನಲ್ಲಿರುವ ನನ್ನ ಚಿಕ್ಕಪ್ಪನ ಮಗ ದ್ರಾವಿಡ್ ಆದರೆ ಇವರಿಬ್ಬರಿಗೂ ಬೌಲಿಂಗ್ ಮಾಡುತ್ತಿರುವ ನಾನು ಜಹೀರ್ ಖಾನ್! ಹೀಗೆ ಕೋಟಿಕೋಟಿ ಬೆಲೆಬಾಳುವ ಆಟಗಾರರೆಲ್ಲಾ ನಮ್ಮ ಮುರುಕು ಮನೆಯಂಗಳದಲ್ಲಿ ತೆಂಗಿನ ಗರಿಯ ಬ್ಯಾಟ್ ಹಿಡಿದು ಬಿಟ್ಟಿಯಾಗಿ ಆಡಿ ಔಟಾಗುವ 'ಅದ್ಭುತ'ವನ್ನು ನೋಡಿ ನಮಗೆ ಕ್ರಿಕೆಟ್ ಕಲಿಸಿದ್ದ ನಮ್ಮಣ್ಣ ತಲೆತಲೆ ಚಚ್ಚಿಕೊಳ್ಳುತ್ತಿದ್ದರು.

ಆಗಷ್ಟೇ ಶುರುವಾಗಿದ್ದ ಐಪಿಎಲ್ ನಿಂದ ಪ್ರಭಾವಿತರಾದ ನಾವು 'ಎಂಪಿಎಲ್' (ಮೂಡುಗುಡ್ಡೆ ಪ್ರೀಮಿಯರ್ ಲೀಗ್!) ಎನ್ನುವ ಹೊಸ ಪಂದ್ಯಾವಳಿಯನ್ನೇ ಆರಂಭಿಸಿಬಿಟ್ಟೆವು. ಕೇವಲ ವಿದೇಶೀ ಆಟಗಾರರು ಮಾತ್ರವಲ್ಲದೆ ಎಷ್ಟೋ ವರ್ಷಗಳ ಕೆಳಗೆ ರಿಟೈರ್ಡ್ ಆಗಿರುವ ಆಟಗಾರರೂ ನಮ್ಮೀ ಪಂದ್ಯಾವಳಿಯಲ್ಲಿ ಬಿಡ್ ಆಗಿದ್ದರು. (ಒಮ್ಮೆಯಂತೂ ನನ್ನ ತಮ್ಮಂದಿರೇ ಕಟ್ಟಿದ ತಂಡವೊಂದರಲ್ಲಿ ಎರೆಡು ಮೂರು ಜನ ಡಬ್ಲ್ಯೂ.ಡಬ್ಲ್ಯೂ.ಇ. 'ಹೊಡೆದಾಟ'ಗಾರರೂ ಸೇರಿಕೊಂಡುಬಿಟ್ಟಿದ್ದರು! ಹೇಗಿದ್ದರೂ ಆಟದ ಕೊನೆಯಲ್ಲಿ ಬಡಿದಾಡಲಿಕ್ಕೆ ಬೇಕಾಗುತ್ತಾರೆಂದು ನಾನೂ ಸುಮ್ಮನಿದ್ದೆ.) ಒಮ್ಮೆ ಹೀಗೇ 'ಗಂಗೂಲಿ ಹೋದ್ನಂತೆ, ಗಿಲ್ ಕ್ರಿಸ್ಟ್ ಬಂದ್ನಂತೆ' ಎಂದು ಗಟ್ಟಿಯಾಗಿ ಮಾತನಾಡುತ್ತಾ ಆಡುತ್ತಿದ್ದಾಗ ಅಲ್ಲೇ ಇದ್ದ ಅಣ್ಣ "ಯಾರ್ಯಾರನ್ನೋ ಕರ್ಸ್ತೀರಲ್ಲಾ, ಹಂಗೇ ನಮ್ಮ ಕೊನೆ ತೆಗೆಯೋ ಮಂಜನನ್ನೂ ಕರ್ಸ್ರೋ ಮಾರಾಯಾ. ಅಡಿಕೆ ಕೊನೆ ಎಲ್ಲಾ ಹಣ್ಣಾಗಿದೆ" ಎಂದಾಗ ಕೆಲಸದಾಳುಗಳೆಲ್ಲ ಗೊಳ್ಳನೆ ನಕ್ಕಿದ್ದರು.

ಪಂದ್ಯದ ಪ್ರತೀ ಬಾಲಿನ ಸ್ಕೋರ್ ಮಾತ್ರವಲ್ಲದೇ, ನಂತರ ಆ ಪಂದ್ಯದ ಕುರಿತಾಗಿ ಪತ್ರಿಕೆಯಲ್ಲಿ ಬರುವ ವರದಿಯನ್ನೂ ಸಹಾ ಬರೆಯುತ್ತಿದ್ದೆವು. ಒರಿಜಿನಲ್ ಐಪಿಎಲ್ ನಂತೆ ಇಲ್ಲಿಯೂ ಸಹಾ ವಿವಾದಗಳಿಗೇನೂ ಕೊರತೆಯಿರಲಿಲ್ಲ. ತಮ್ಮ ಇಷ್ಟದ ಆಟಗಾರನ ಹೆಸರು ಬಂದಾಗ ತುಂಬಾ ಚೆನ್ನಾಗಿ ಆಡುತ್ತಿದ್ದ ನನ್ನ ತಮ್ಮಂದಿರು, ತಮಗೆ ಇಷ್ಟವಿಲ್ಲದವನು ಬಂದಾಗ ಬೇಕೆಂದೇ ಔಟಾಗುತ್ತಿದ್ದರು. ನೈಜ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಸದಾ ಹೆಚ್ಚೆಚ್ಚು ರನ್ ಗಳಿಸುತ್ತಾ ನಮ್ಮ ಕೋಪಕ್ಕೆ ಗುರಿಯಗಿದ್ದ ರಿಕಿ ಪಾಂಟಿಂಗ್ ನಂತಹಾ ಆಟಗಾರರು ನಮ್ಮ ಆಟದಲ್ಲಿ ಒಂದೂ ರನ್ ಹೊಡೆಯದೇ ತಮಗೆ ತಾವೇ ವಿಕೆಟ್ ಗೆ ಹೊಡೆದುಕೊಂಡು 'ಹಿಟ್ ವಿಕೆಟ್' ಆಗಿಬಿಡುತ್ತಿದ್ದರು! ಇದನ್ನು ಸಮರ್ಥಿಸಿಕೊಳ್ಳುವುದಕ್ಕೆ 'ಇಂಟರ್ನ್ಯಾಷನಲ್ ಮ್ಯಾಚ್ ಗಳೂ ಹೀಗೇ ಆಗೋದು' ಎನ್ನುವ ಹೊಸ ವಾದವನ್ನೇ ಸೃಷ್ಟಿಸಿದ್ದೆವು!

ನಮ್ಮ ಕ್ರಿಕೆಟ್ ಗಿದ್ದ ಅತಿದೊಡ್ಡ ವಿರೋಧಿಯೆಂದರೆ ನಮ್ಮ ದೊಡ್ಡಪ್ಪ. ಸದಾ ಏನಾದರೊಂದು ಉಪಯೋಗಕಾರಿ ಕೆಲಸ ಮಾಡುತ್ತಲೇ ಇರುತ್ತಿದ್ದ ಅವರ ಕಣ್ಣಿಗೆ ಈ ಕ್ರಿಕೆಟ್ ಎನ್ನುವುದು ಜಗತ್ತಿನ ಅತ್ಯಂತ ನಿರುಪಯುಕ್ತ ಚಟುವಟಿಕೆಯಂತೆ ಕಾಣುತ್ತಿತ್ತು. ಇತ್ತಕಡೆ ನಮ್ಮ ಅಟ ಶುರುವಾಗುತ್ತಿದ್ದಂತೆಯೇ ಅತ್ತಕಡೆ ಅವರ ಗೊಣಗಾಟದ ಕಾಮೆಂಟ್ರಿ ಶುರುವಾಗುತ್ತಿತ್ತು. ಒಂದು ಮಧ್ಯಾಹ್ನ ಎಂದಿನಂತೆ ನಮ್ಮ ಎಂಪಿಎಲ್ ಶುರುವಾಗಿತ್ತು. ದೊಡ್ಡಪ್ಪ ಮಲಗಿದ್ದಾರೆಂಬ ಧೈರ್ಯದಲ್ಲಿ ಟಾಸ್ ಹಾರಿಸಿ ಮೊದಲು ಬ್ಯಾಟಿಂಗ್ ಮಾಡುವ ತಂಡದ ಪರವಾಗಿ ಆಗಷ್ಟೇ ಆಟ ಆರಂಭಿಸಿದ್ದೆವು. ಅದೆಲ್ಲಿದ್ದರೋ ಗೊತ್ತಿಲ್ಲ, "ಮತ್ತೆ ಶುರುವಾಯ್ತಾ ನಿಮ್ ಗಲಾಟೆ?" ಎಂದು ಸೈಲೆನ್ಸರ್ ಅಳವಡಿಸಿರುವ ಗುಡುಗಿನಂತೆ ಗುಡುಗುತ್ತಾ ಅಂಗಳದಲ್ಲಿ ಪ್ರತ್ಯಕ್ಷವಾಗಿಯೇಬಿಟ್ಟರು. ನಾವು ಆಟ ನಿಲ್ಲಿಸಲಿಲ್ಲವಾದರೂ ಚೆಂಡು ಅವರ ಮನೆಯಂಗಳಕ್ಕೆ ಹೋಗದಂತೆ ನಿಧಾನವಾಗಿ ಆಡತೊಡಗಿದೆವು. ಪರಿಣಾಮವಾಗಿ ಮೊದಲು ಬ್ಯಾಟ್ ಮಾಡಿದ ತಂಡ 20 ಓವರ್ ಗಳಲ್ಲಿ ಕೇವಲ 99 ರನ್ ಗಳನ್ನಷ್ಟೇ ಗಳಿಸುವಂತಾಯಿತು. ಆದರೆ ಇನ್ನೊಂದು ತಂಡದ ಬ್ಯಾಟಿಂಗ್ ಮಾಡುವಾಗ ದೊಡ್ಡಪ್ಪ ಮನೆಯಲ್ಲಿರಲಿಲ್ಲವಾದ್ದರಿಂದ ಬಿಡುಬೀಸಾಗಿ ಬ್ಯಾಟ್ ಬೀಸಿ ಆ ಚಿಕ್ಕ ಮೊತ್ತವನ್ನು ಸುಲಭದಲ್ಲಿ 'ಚೇಸ್' ಮಾಡಲಾಯಿತು. ಪಂದ್ಯದ ಕೊನೆಗೆ 'ಮ್ಯಾನ್ ಆಫ್ ದಿ ಮ್ಯಾಚ್' ಕೊಡಬೇಕಲ್ಲಾ? ಮೊದಲ ಇನ್ನಿಂಗ್ಸ್ ಆಡುವಾಗ ನಮ್ಮನ್ನೆಲ್ಲಾ ಹೆದರಿಸಿ, ಚಿಕ್ಕ ಮೊತ್ತಕ್ಕೆ ಕಟ್ಟಿಹಾಕಲು ಪ್ರತ್ಯಕ್ಷ ಹಾಗೂ ಪರೊಕ್ಷ ಕಾರಣವಾಗಿದ್ದ ದೊಡ್ಡಪ್ಪನನ್ನೇ 'ಪಂದ್ಯ ಪುರುಷ' ಎಂದು ಒಮ್ಮತದಿಂದ ಘೋಷಿಸಲಾಯಿತು. 'ಮ್ಯಾನ್ ಆಫ್ ದಿ ಮ್ಯಾಚ್: ರಂಗಣ್ಣ ದೊಡ್ಡಪ್ಪ' ಎಂದು ಬರೆದುಕೊಂಡಿರುವ ಆ ಪುಸ್ತಕ ಹಳೆಯ ಟ್ರಂಕ್ ಒಂದರ ಮೂಲೆಯಲ್ಲಿ ಇಂದಿಗೂ ಹಾಗೇ ಇದೆ. ಗದರುತ್ತಿದ್ದ ದೊಡ್ಡಪ್ಪ ಮಾತ್ರ ಶಾಶ್ವತವಾಗಿ ಮಾತು ನಿಲ್ಲಿಸಿಬಿಟ್ಟಿದ್ದಾರೆ.

                        ****************

ಊರಿನಲ್ಲಿ, ಖಾಲಿ ಅಂಗಳ-ಬಯಲುಗಳಲ್ಲಿ ಕ್ರಿಕೆಟ್ ಆಡುವುದು ಒಂದು ಕಥೆಯಾದರೆ ಬೆಂಗಳೂರಿನಂತಹಾ ನಗರಗಳ ತುಂಬಿ ತುಳುಕುವ ಮೈದಾನಗಳಲ್ಲಿ ಆಡುವವರದು ಇನ್ನೊಂದು ಕಥೆ. ಇಲ್ಲಿ ಒಂದು ಮೈದಾನದಲ್ಲಿ ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ತಂಡಗಳು ಒಟ್ಟಿಗೇ ಕ್ರಿಕೆಟ್ ಆಡುತ್ತಿರುತ್ತವೆ. ಒಬ್ಬರ ಪಿಚ್ ಕೊನೆಯಾದ ಸ್ವಲ್ಪ ಅಂತರದಲ್ಲೇ ಇನ್ನೊಬ್ಬರದು ಆರಂಭವಾಗಿರುತ್ತದೆ. ಈ ಇಬ್ಬರ ಮಧ್ಯದ ಚಿಕ್ಕ ಗ್ಯಾಪ್ನಲ್ಲೇ ಪ್ಲಾಸ್ಟಿಕ್ ಬ್ಯಾಟು ಬಾಲು ಹಿಡದ ನಾಲ್ಕಾರು ಚಿಲ್ಟಾರಿಗಳ 'ಅಂಡರ್ ನೈಂಟೀನ್' ಮ್ಯಾಚ್ ನಡೆದಿರುತ್ತದೆ! ಆ ಕಡೆಯಿಂದೊಬ್ಬ ಬೌಲಿಂಗ್ ಮಾಡಲು ಓಡಿಬಂದರೆ ಇತ್ತಲಿಂದ ಇನ್ನೊಬ್ಬ ರನ್ ಗಳಿಸಲು ಓಡಿಹೋಗುತ್ತಾನೆ. ಇಬ್ಬರ ಮಧ್ಯದಲ್ಲಿ ಫೀಲ್ಡಿಂಗ್ ಮಾಡುವನೊಬ್ಬ ಅದೆಲ್ಲಿಂದಲೋ ನುಗ್ಗಿಬಂದು ಧಸಾಲ್ಲನೆ ಬೀಳುತ್ತಾನೆ. ಯಾರನ್ನು ಎತ್ತಬೇಕೋ, ಯಾರನ್ನು ಔಟ್ ಮಾಡಬೇಕೋ, ಯಾರಿಗೆ ಚೆಂಡು ಮರಳಿಸಬೇಕೋ... ಸಾಕ್ಷಾತ್ ದೇವರೇ ಬಂದರೂ ಕನ್ಫ್ಯೂಸ್ ಆಗುವುದರಲ್ಲಿ ಸಂಶಯವಿಲ್ಲ. ಇನ್ನು ಈ ಗೊಂದಲವೇ ಬೇಡವೆಂದು ಬೌಂಡರಿ ಕಾಯಲು ಸೀಮಾರೇಖೆಯ ಬಳಿ ನಿಂತು ಮೇಲೆ ನೋಡಿದರೆ ಒಂದೇ ಸಲಕ್ಕೆ ನಾಲ್ಕು ಚೆಂಡುಗಳು ಸಂಸಾರ ಸಮೇತ ಗಾಳಿಯಲ್ಲಿ ಹಾರಿಬರುತ್ತವೆ! ಅತ್ತಲಿಂದ ಯಾರೋ 'ಬಾಲ್ss.. ಬಾಲ್ss..' ಎಂದು ಕಿರುಚಿಕೊಳ್ಳುತ್ತಾರೆ. 'ಅಂಚಿ, ಪಿಂಚಿ, ಚಾವಲ ಚುಂಚಿ..' ಎಂದು ಕವಡೆ ಶಾಸ್ತ್ರ ಬಳಸಿ ಯಾವುದೋ ಒಂದು ಚೆಂಡನ್ನು ಕೊನೆಗೂ ಹಿಡಿದು, ಎದುರಾಳಿಯನ್ನು ಔಟ್ ಮಾಡಿದ ಸಂಭ್ರಮದಲ್ಲಿ 'ಹೀ ಯಾ.. ಹೂssss' ಎಂದು ಸಂಭ್ರಮಿಸವಾಗ ನಮ್ಮ ತಂಡದ ಆಟಗಾರರೆಲ್ಲ ಕೆಂಗಣ್ಣು ಬೀರುತ್ತಾ ನಿಂತಿರುತ್ತಾರೆ. ಏಕೆಂದು ತಿರುಗಿ ನೋಡಿದರೆ ನಾವು ನಿಜವಾಗಿ ಹಿಡಿಯಬೇಕಿದ್ದ ಚೆಂಡು ಬೌಂಡರಿ ಗೆರೆ ದಾಟಿ ಮೈದಾನದಾಚೆಗಿನ ಮೋರಿಯತ್ತ ಓಡುತ್ತಿರುತ್ತದೆ!

                        ****************

ವಯಸ್ಸು ಹೆಚ್ಚಿದಂತೆಲ್ಲ ಮೈದಾನ ದೂರವಾಗಿ ಆಸ್ಪತ್ರೆ ಹತ್ತಿರವಾಗುತ್ತಿದೆ. ಕ್ರಿಕೆಟ್ ಆಡುತ್ತಿದ್ದಾಗ ಒಳಗೆಲ್ಲೋ ಇದ್ದ ಹೊಟ್ಟೆ ಈಗ ಆಟವೆನ್ನುವುದು ಬರೀ ಟೀವಿಯಲ್ಲಿ ನೋಡುವ ಸರಕಾಗಿರುವುದರಿಂದ ಹೊರಬಂದು ಮತ್ತೆ ಸರಾಗವಾಗಿ ಕ್ರಿಕೆಟ್ ಆಡಲಾಗದಂತೆ ಮಾಡಿದೆ. ಅಲ್ಲದೇ ಉತ್ಸಾಹದಿಂದ ಪಂದ್ಯಗಳನ್ನೂ, ಪಂದ್ಯಾವಳಿಗಳನ್ನೂ ಆಯೋಜಿಸುತ್ತಿದ್ದ ಗೆಳೆಯರಿಂದು ಮನೆ, ಮಕ್ಕಳು, ಸಂಸಾರ ಎಂದು ಬಿಡುವಿಲ್ಲದಾಗಿದ್ದಾರೆ. ಅಲ್ಲಿ ಊರಿನಲ್ಲೂ ಅಮ್ಮ ಸಗಣಿನೀರು ಬಳಿದ ಅಂಗಳದಲ್ಲೀಗ ಆಡಿ ಧೂಳೆಬ್ಬಿಸುವ ಮಕ್ಕಳ ಕಲರವವಿಲ್ಲ. ಹತ್ತಾರು ಚೆಂಡುಗಳ ಬಚ್ಚಿಟ್ಟುಕೊಂಡು ಕಾಡಿಸುತ್ತಿದ್ದ ಪೊದೆಯಿಂದಾವೃತವಾದ ಹೊಂಡವಿಂದು ಹುಡುಕಲು ಬರುವ ಹುಡುಗರಿಲ್ಲದೇ ಹಾಳು ಬಿದ್ದಿದೆ.
ತಮ್ಮೊಡಲ ತುಂಬಾ ಹತ್ತಾರು ಸ್ಕೋರ್ ಹೆಸರಿನ ಸವಿಸವಿ ನೆನಪುಗಳನ್ನು ಬರೆದುಕೊಂಡಿರುವ ಪುಸ್ತಕಗಳು ಪೆಟ್ಟಿಗೆಯಲ್ಲಿ ಬೆಚ್ಚಗೆ ಕುಳಿತುಬಿಟ್ಟಿವೆ. ಊರಿಗೆ ಹೋದ ರಜೆಯ ಸಂಜೆಯೊಂದರಲ್ಲಿ ನಿಂತು ನೋಡುವಾಗ ಖಾಲೀ ಹೊಡೆಯುತ್ತಿರುವ ಅಂಗಳ ಮುಂದೆಂದೋ ಸಚಿನ್, ದ್ರಾವಿಡ್ ಗಳಾಗಿ ಮತ್ತೆ ಆಡಲು ಬರಲಿರುವ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಕಾಯುತ್ತಿರುವಂತೆ ಭಾಸವಾಗುತ್ತದೆ. 

ನಾನು ಹೀಗೆಲ್ಲಾ ಯೋಚಿಸುತ್ತಾ ನಿಂತಿರುವಾಗಲೇ ಅಂದು ನಮಗೆ ಕ್ರಿಕೆಟ್ ಕಲಿಸಿದ್ದ ಅಣ್ಣನ ಹತ್ತು ವರ್ಷದ ಮಗ "ಅಣ್ಣಾ.." ಎನ್ನುತ್ತಾ ನನ್ನತ್ತ ಓಡಿಬರುತ್ತಾನೆ. ಅವನ ಕೈಯ್ಯಲ್ಲಿ ಮತ್ತದೇ ಮೋಟುದ್ದದ ಬ್ಯಾಟು, ಟೆನ್ನಿಸ್ ಬಾಲು! ನೋಡುತ್ತಾ ನಿಂತ ನನ್ನ ಕೈಗೆ ಚೆಂಡು ಕೊಡುತ್ತಾ ಹೇಳುತ್ತಾನೆ:

"ಕ್ರಿಕೆತ್ ಆಡಣ ಕಣಾ... ನಾನು ವಿರಾಟ್ ಕೋಹ್ಲಿ, ನೀನು ಭುವನೇಶ್ವರ್ ಕುಮಾರ್!"

('ವಿಶ್ವವಾಣಿ'ಯ 23.7.2017ರ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಿತ)

ಬುಧವಾರ, ಜುಲೈ 5, 2017

ಸಮಯ ಅದೆಷ್ಟು ಸುಂದರವಾಗಿ ಹಿಂದಿರುಗಿ ಬರುತ್ತೆ ಅಲ್ವಾ?


ಮಧ್ಯಾಹ್ನ ಹನ್ನೆರೆಡರ ಸಮಯ. ಶ್ರೀನಿವಾಸನಗರದ ಆ ಮನೆಯಲ್ಲಿ ನೆನಪೊಂದು ಚಿಪ್ಪೊಡೆಯಲು ತಯಾರಾಗಿ ನನ್ನೆದುರು ಕುಳಿತಿತ್ತು. ನಾನು ತುಟಿಬಿಚ್ಚದೇ ನೋಡುತ್ತಿದ್ದೆ. 

"ನಾನು ನೈಟ್ ಡ್ಯೂಟಿ ಮುಗಿಸಿ ಆಗಷ್ಟೇ ರೂಮಿಗೆ ಬಂದಿದ್ದೆ" 
ಅವನು ಕೊನೆಗೂ ಮೌನ ಮುರಿದ.

"ಅಂದೇಕೋ ಎಂದೂ ಇಲ್ಲದ ಹಸಿವು. ನಿದ್ರೆ ಹತ್ತಲಿಲ್ಲ. ಬಲವಂತವಾಗಿ ಕಣ್ಮುಚ್ಚಿ ನಿದ್ರಿಸುವ ಪ್ರಯತ್ನದಲ್ಲಿದ್ದೆ. ಆಗಲೇ ರಾಜಾಜೀನಗರದ ಚಿಕ್ಕಮ್ಮನ ಮನೆಯಿಂದ ಕಾಲ್ ಬಂದಿದ್ದು. "ಈಗಲೇ ಹೊರಟು ಬಾ. ಅಪ್ಪಂಗೆ ಹುಷಾರಿಲ್ವಂತೆ" ಎಂದರು. ಆದರೆ ಅವರ ಮನೆ ತಲುಪುವ ಹೊತ್ತಿಗಾಗಲೇ ನನಗೆ ಅರ್ಥವಾಗಿಹೋಯಿತು- ಇದು ಕೇವಲ ಹುಷಾರು ತಪ್ಪಿರುವ ವಿಷಯವಲ್ಲ ಅಂತ"

ಅವನ ಧ್ವನಿಯಲ್ಲಿನ ಕಂಪನ ನೇರ ನನ್ನೆದೆಗೇ ಬಡಿಯುತ್ತಿತ್ತು. "ಮುಂದೇನಾಯ್ತು?" ಎನ್ನುವಂತೆ ನೋಡಿದೆ.

"ಕಾರು ಮಾಡಿಕೊಂಡು ನನ್ನನ್ನು ಊರಿಗೆ ಕರೆದೊಯ್ದರು. ಮನೆಯ ತುಂಬಾ ಜನ- ರಸ್ತೆಯಲ್ಲಿ, ಅಂಗಳದಲ್ಲಿ, ಜಗುಲಿಯಲ್ಲಿ... ನನ್ನನ್ನು ನೋಡುತ್ತಿದ್ದಂತೆ ಎಲ್ಲರೂ ಸರಿದುನಿಂತರು. ಆಗ ಕಂಡಿತು... ಜಗುಲಿಯಲ್ಲಿ ಮಲಗಿಸಿದ್ದ ಅಪ್ಪನ ದೇಹ..."

ಅವನ ಸ್ವರ ಮುಂದೆ ಮಾತನಾಡಲಾರದಷ್ಟು ಗದ್ಗದಿತವಾಯಿತು. ಅರೆ ನಿಮಿಷ ಮೌನವಾದ. ಅಂದು ನಡೆದ ಆ ಘಟನೆಯು ಚಿತ್ರಗಳಾಗಿ ನನ್ನ ಕಲ್ಪನೆಯಲ್ಲಿ ಕದಲತೊಡಗಿದವು.

"ಹಿಂದಿನ ದಿನ ರಾತ್ರೆಯಷ್ಟೇ ನನ್ನೊಂದಿಗೆ ಮಾತನಾಡಿದ್ದರು. ರಜೆ ಹಾಕಿ ಊರಿಗೆ ಬಾ ಎಂದಿದ್ದರು. ಅದೇ ಅವರೊಂದಿಗಿನ ಕೊನೆಯ ಮಾತಾಗಿಹೋಯಿತು"

ಅವನ ಕಣ್ಣು ತುಂಬಿ ಹರಿದವು, ಜೊತೆಗೆ ನನ್ನವೂ... ಅಪ್ಪನ ನೆನಪಿಗೆ ಹಾಗೂ ಹಳೆಯದನ್ನು ನೆನಪಿಸಿ ಅವನನ್ನು ಅಳಿಸಿದ ಪಶ್ಚಾತ್ತಾಪಕ್ಕೆ. ಏನು ಹೇಳಬೇಕೆಂದು ತಿಳಿಯಲಿಲ್ಲ. ಜನ್ಮನೀಡಿದ,  ಇಪ್ಪತ್ತೆರೆಡು ವರ್ಷಗಳ ಕಾಲ ನೆರಳಾಗಿ ಬೆಳೆಸಿದ, ಇನ್ನೂ ಇಪ್ಪತೈದು ವರ್ಷ ಜೊತೆಗಿದ್ದು ಮಗನ ಬದುಕಿನ ಏಳಿಗೆಗಳನ್ನು ಕಣ್ಣಾರೆ ಸವಿಯಬೇಕಿದ್ದ ತಂದೆಯನ್ನು ರಾತ್ರೆ ಬೆಳಗಾಗುವುದರೊಳಗೆ ಕಳಕೊಂಡ ಆ ನಿರ್ಭಾಗ್ಯ ಮಗನೊಂದಿಗೆ ಎರೆಡು ಹನಿ ಕಣ್ಣೀರಿನ ಹೊರತಾಗಿ ಬೇರೇನು ಮಾತನಾಡಲೂ ನನ್ನಿಂದಾಗಲಿಲ್ಲ. 

                    *************

ಪ್ರೀತಿಯ ಅಪ್ಪಾ,

ಈ ಘಟನೆಯನ್ನು ಕೇಳಿದ ಮೇಲೂ ನಿನ್ನ ನೆನಪಾಗದಿರುವುದಕ್ಕೆ ಹೇಗೆ ತಾನೇ ಸಾಧ್ಯ ಹೇಳು? ಯಾರದೋ ಅಪ್ಪನ ಕಥೆಕೇಳಿ ನನ್ನ ಕಣ್ಣಿನಲ್ಲಿ ನೀರಾಗಿ ತುಳುಕಿದ್ದು ನಿನ್ನ ಮಮತೆಯೇ ಅಲ್ವಾ? ಹೌದು... ಇದೇ ನನಗೂ ನಿನಗೂ ಇರುವ ವ್ಯತ್ಯಾಸ. ಪಟ್ಟಣದ ಐಶಾರಾಮಿನಲ್ಲಿ ಹಾಯಾಗಿರುವ ನನಗೆ ನಿನ್ನ ನೆನಪಾಗಬೇಕೆಂದರೆ ಒಂದೋ ಕಷ್ಟ ಬರಬೇಕು; ಇಲ್ಲಾ ಇಂಥಾದ್ದೊಂದು ಕಥೆ ಕೇಳಬೇಕು. ಆದರೆ ನಿನಗೆ ಹಾಗಲ್ಲ. ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರೆ ಮಲಗುವ ತನಕ ನೀನು ಸುರಿಸುವ ಸಾವಿರಾರು ಬೆವರ ಹನಿಗಳಲ್ಲಿ, ದೇವರ ತಲೆಯ ಮೇಲೆ ಹರಿಸುವ ಅಭಿಶೇಕದ ಧಾರೆಯಲ್ಲಿ, ಮಣ್ಣ ಉತ್ತುವ ಏದುಸಿರಿನಲ್ಲಿ, ಫಲವ ಹೊತ್ತುತರುವ ಸಂತಸದಲ್ಲಿ, ಕೊನೆಗೆ ನಡುರಾತ್ರೆಯಲ್ಲಿ ಹೆದರಿಸಿ ಎಚ್ಚರಗೊಳಿಸಿದ ಸ್ವಪ್ನದ ಕನವರಿಕೆಯಲ್ಲೂ ಇರುವುದು 'ಮಗ ಚೆನ್ನಾಗಿರಲಿ' ಎನ್ನುವ ಹಾರೈಕೆಯೊಂದೇ.

ನನಗಿನ್ನೂ ಚೆನ್ನಾಗಿ ನೆನಪಿದೆ ಅಪ್ಪಾ... ಬೆಳ್ಳಂಬೆಳಗ್ಗೆ ಅಳುತ್ತಾ ಏಳುತ್ತಿದ್ದ ನನ್ನ ಮುಖ ತೊಳೆಸಿ ನೀನು 'ಸಾಮಿ ಚಿತ್ತ ಮಾಡು' ಎಂದು ದೇವರೆದುರು ನಿಲ್ಲಿಸುತ್ತಿದ್ದುದು, 'ನಾನೂ ಬತ್ತೀನಿ ತಡಿಯಾ' ಎಂದು ಕೂಗುತ್ತಾ ಒಂದು ಕೈಯ್ಯಲ್ಲಿ ಜಾರಿಹೋಗುತ್ತಿರುವ ಚಡ್ಡಿಯನ್ನೂ, ಇನ್ನೊಂದು ಕೈಯ್ಯಲ್ಲಿ ಮೋಟುದ್ದದ ಪೈಪನ್ನೂ ಹಿಡಿದುಕೊಂಡು ಹಿಂದೆಹಿಂದೆ ಓಡಿ ಬರುತ್ತಿದ್ದ ನನ್ನ ಕೈ ಹಿಡಿದು ತೋಟಕ್ಕೆ ಕರೆದೊಯ್ಯುತ್ತಿದ್ದುದು, ಶಬ್ದಕ್ಕೇ ಹೆದರುವ ನನ್ನನ್ನು ಅಡಿಕೆಮರದ ಮರೆಯಲ್ಲಿ ನಿಲ್ಲಿಸಿ ನೀನು ಮೋಟಾರು ಸ್ಟಾರ್ಟ್ ಮಾಡುತ್ತಿದ್ದುದು, 'ಕೊನೆ ಬೀಳತ್ತೆ ಇಲ್ಲೇ ನಿಂತ್ಕ' ಎಂದು ನನ್ನನ್ನು ದೂರನಿಲ್ಲಿಸಿ ನೀನು ಅಡಿಕೆ ಕೊನೆ ಹಿಡಿಯುತ್ತಿದ್ದುದು..... ಎಲ್ಲವೂ ನಿನ್ನೆಯೋ ಮೊನ್ನೆಯೋ ನಡೆದಷ್ಟು ಹಸಿರಾಗಿವೆ. ನಿನ್ನಂತೆಯೇ ಕೈ ಕಟ್ಟಿ ನಿಲ್ಲುತ್ತಿದ್ದ ನನ್ನನ್ನು ನೋಡಿದವರೆಲ್ಲಾ "ಥೇಟ್ ಅಪ್ಪನ ಥರಾನೇ" ಎಂದಾಗ ನನಗೇನೋ ಒಂದು ಹೆಮ್ಮೆ. ಏಕೆಂದರೆ ಅವತ್ತಿನ ನನ್ನ ಪುಟ್ಟ ಪ್ರಪಂಚದಲ್ಲಿ ನೀನೇ ಹೀರೋ. ನನ್ನ ಬಿಟ್ಟು ನೀನು ಅಡಿಕೆ ಮಂಡಿಗೋ, ಅಜ್ಜನ ಮನೆಗೋ ಹೊರಟುನಿಂತಾಗ ನಾನು ಅದೆಷ್ಟು ಅಳುತ್ತಿದ್ದೆ! ನೀನು "ಪೇಪಿ ತರ್ತೀನಿ ಅಕಾ" ಎಂದು ಪೂಸಿ ಹೊಡೆದರೂ ಕೇಳುತ್ತಿರಲಿಲ್ಲ. "ನಾನೂ ಬತ್ತೀನಾ" ಎಂದು ರಚ್ಚೆ ಹಿಡಿದು ಹೊರಳಾಡುತ್ತಿದ್ದೆ. ನಿನ್ನ ಹಿಂದೆಯೇ ಬಸ್ಸಿನೊಳಕ್ಕೆ ನುಗ್ಗಲು ಬಂದ ನನ್ನನ್ನು ಅಮ್ಮ ಬಲವಂತವಾಗಿ ಎಳೆದೊಯ್ದು ಚುಳುಕೆಯೇಟು ಕೊಡುವವರೆಗೂ ನನ್ನ ಅಳು ನಿಲ್ಲುತ್ತಿರಲಿಲ್ಲ. ಸಾಗರದಿಂದ ಮರಳುವಾಗ ನೀನು ಹೊತ್ತು ತಂದಿದ್ದ ಮೂರು ಚಕ್ರದ ಸೈಕಲ್, ಪ್ರತಿದಿನ ಸಂಜೆ ಉಪೇಂದ್ರನ ಅಂಗಡಿಯಿಂದ ತರುತ್ತಿದ್ದ ಕಂಬಾರ್ ಕಟ್ಟು - ಬೆಣ್ಣೆ ಬಿಸ್ಕತ್ತು, ಸಾಗರದ ಅಡಿಕೆ ಮಂಡಿಯೆದುರಿನ ಮರದ ಬೆಂಚಿನಮೇಲೆ ಕೂರಿಸಿಕೊಂಡು ಓದಿಹೇಳಿದ ಡಿಂಗನ ಕಥೆ, ಯಾವುದೋ ಹೆಸರಿಲ್ಲದ ಗೂಡಂಗಡಿಯಲ್ಲಿ ಕೊಡಿಸಿದ ಪೀಲೆ, ನನ್ನನ್ನು ಮಾತ್ರ ಉಪ್ಪರಿಗೆಗೆ ಕರೆದೊಯ್ದು ತೋರಿಸಿದ್ದ ಹಳದಿಬಣ್ಣದ ಟಿಂಟಿಂ ಗಾಡಿ.... ಇವೆಲ್ಲವೂ ಇಂದಿಗೂ ನನ್ನ ಸ್ಮೃತಿಪೆಟ್ಟಿಗೆಯೊಳಗೆ ಭದ್ರವಾಗಿವೆ. ಮನಸ್ಸು ಮಗುವಾಗಿ ಹಠಹಿಡಿದ ಸಂಜೆಗಳಲ್ಲಿ ಅವನ್ನೆಲ್ಲಾ ಒಂದೊಂದಾಗಿ ಆಚೆ ತೆಗೆಯುತ್ತೇನೆ. ಮತ್ತದೇ ಸೈಕಲ್ ತುಳಿದು, ಕಂಬಾರ್ಕಟ್ಟು ಮೆಂದು, ಟಿಂಟಿಂ ಗಾಡಿಯನ್ನು ನೂಕಿ ಸಂಭ್ರಮಿಸುತ್ತೇನೆ, ಮನತುಂಬಿಕೊಳ್ಳುತ್ತೇನೆ.

ನಾನು ಶಾಲೆಗೆ ಹೋಗಲಾರಂಭಿಸಿದಾಗ ನನ್ನನ್ನು 'ಡ್ರಾಪ್' ಮಾಡುವುದಕ್ಕೆ ಅಮ್ಮ ಬರುತ್ತಿದ್ದಳೇ ಹೊರತು ನಿನ್ನನ್ನು ಕಳಿಸುತ್ತಿರಲಿಲ್ಲ. ಏಕೆಂದರೆ ಶಾಲೆಯ ಗೇಟು ತಲುಪಿದಕೂಡಲೇ 'ಹೋ..' ಎಂದು ಅಳುತ್ತಾ "ನಾನು ಶಾಲೆಗೆ ಹೋಗಲ್ಲಾ.." ಎಂದು ಹಠಹಿಡಿಯುತ್ತಿದ್ದ ನನಗೆ ಬೈದು ಬೆದರಿಸುವ ಮನಸ್ಸಿರದ ನೀನು "ನಾಳೆಯಿಂದ ಹೋದ್ರಾಯ್ತು ಬಾ" ಎಂದು ಮರಳಿ ಮನೆಗೆ ಕರೆತರುತ್ತಿದ್ದೆ. ಆದರೆ ನನ್ನೀ ಅಳು ಹಠಗಳೆಲ್ಲಾ ಅಮ್ಮನ ಹತ್ತಿರ ನಡೆಯುತ್ತಿರಲಿಲ್ಲ. "ಹೋಗ್ತೀಯಾ ಇಲ್ವಾ" ಎಂದು ದಾಸವಾಳಗಿಡದ ಬರಲು ಹಿಡಿದು ಬೆನ್ನಟ್ಟಿಬರಲಾರಂಭಿಸಿದಳೆಂದರೆ, ನಾನು ಶಾಲೆ ತಲುಪುವತನಕ ಅವಳ 'ಚೇಸಿಂಗ್' ನಿಲ್ಲುತ್ತಿರಲಿಲ್ಲ.

ನಿನ್ನದು ಒಂದು ಥರಾ ಕರಡಿಪ್ರೀತಿ! ನನಗೆ ಹೊಡೆದನೆಂಬ ಕಾರಣಕ್ಕೆ ಮಾವನ ಮಗನನ್ನು ಗಿರಿಗಿರಿ ತಿರುಗಿಸಿ ಬಿಸುಟಿದ್ದೆಯಲ್ಲಾ.... ಅದನ್ನು ನೆನಪಿಸಿಕೊಂಡಾಗಲೆಲ್ಲಾ ಹಾಗನಿಸುತ್ತದೆ. ಕೋಪವನ್ನು ಸದಾ ನಿನ್ನ ಪಟಾಪಟಿ ಚಡ್ಡಿಯ ಜೇಬಿನಲ್ಲೇ ಇಟ್ಟುಕೊಂಡಿರುತ್ತೀಯ ಅಲ್ವಾ? ಈ ವಿಷಯದಲ್ಲಿ ನಿನ್ನ ಆವೇಶಕ್ಕೆ ಸಿಲುಕುವವೆಂದರೆ ಮನುಷ್ಯರಿಗಿಂತ ಹೆಚ್ಚಾಗಿ ವಸ್ತುಗಳು! ಕಾರಣವೇ ಇಲ್ಲದೆ ಕನೆಕ್ಷನ್ ಕಳಚಿಹೋದ ನೀರಿನ ಪೈಪು, ಏನನ್ನೋ ಕಡಿಯುವಾಗ ಕೈಮೇಲೆಬಂದ ಕತ್ತಿ, ಒದ್ದೆಯಾಗಿ ನಿನ್ನ ಕಾಲು ಜಾರುವಂತೆ ಮಾಡಿದ ಸಿಮೆಂಟುನೆಲ, ನಡೆಯುವಾಗ ತಲೆಗೆತಾಗಿ ನೋವುಂಟುಮಾಡಿದ ಬಾಗಿಲಿನ ಛಾವಣಿ, ಸರಿಯಾಗಿ ಹಾಡದೆ ಕೊರ್ ಎನ್ನುವ ರೇಡಿಯೋ... ಇವೆಲ್ಲವೂ ನಿನ್ನಿಂದ ಬಿಸಾಡಿಸಿಕೊಂಡು, 'ಸಾಯಿ' ಎಂದು ಬೈಸಿಕೊಂಡವುಗಳೇ. ಆಗೆಲ್ಲಾ ಅಮ್ಮ ಮರೆಯಲ್ಲಿ ನಿಂತು ಮುಸಿಮುಸಿ ನಗುತ್ತಿದ್ದಳು, ಜೊತೆಗೆ ನಾನೂ. ಆದರೆ ಈಗ ಅನಿಸುತ್ತಿದೆ: ಠೀಕುಠಾಕಿನ ಬಣ್ಣದ ಜಗತ್ತಿಗೆ ಹೊಂದಿಕೊಳ್ಳಲಾಗದ, ಕಡೆಗಣಿಸಿ ಮೂಲೆಗುಂಪು ಮಾಡಿದವರಿಗೆ ಎದುರು ಹೇಳಲಾರದ ಬಡತನದ ಅಸಹಾಯಕತೆಯನ್ನು ಹೀಗೆ ವಸ್ತುಗಳ ಮೇಲೆ ತೀರಿಸಿಕೊಳ್ಳುವುದನ್ನ ಅಭ್ಯಾಸಮಾಡಿಕೊಂಡಿದ್ದೆಯೆಂದು.

ಶ್.... ಅಮ್ಮನಿಗೆ ಕೇಳದಂತೆ ಮೆತ್ತಗೆ ಹೇಳು. ದಿನವಿಡೀ ತೋಟದಲ್ಲಿ, ಬೇಲಿ-ಪೊದರುಗಳ ಇರುಕಿನಲ್ಲೇ ಓಡಾಡುವವನಾಗಿದ್ದರೂ ನಿನಗೆ ಹಾವು-ಚೇಳುಗಳೆಂದರೆ, ಕಾಡು ಪ್ರಾಣಿಗಳೆಂದರೆ ತುಂಬಾ ಭಯ ಅಲ್ವಾ? ಮದುವೆಯಾದ ಹೊಸತರಲ್ಲಿ ಅಮ್ಮನಜೊತೆ ತೋಟದಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹಾರ್ಬೆಕ್ಕೊಂದು (ಮರದ ಮೇಲೆ ವಾಸಿಸುವ ಬೆಕ್ಕಿನ ಜಾತಿಗೆ ಸೇರಿದ ಪುಟ್ಟ ಪ್ರಾಣಿ) ಮರದಿಂದ ಮರಕ್ಕೆ ಹಾರುತ್ತಾ ಬರುತ್ತಿರುವುದನ್ನು ನೋಡಿ ಗಾಬರಿಯಾದ ನೀನು ಜೊತೆಗಿದ್ದ ಹೆಂಡತಿಯನ್ನು ಅಲ್ಲೇ ಬಿಟ್ಟು ಓಟಕಿತ್ತಿದ್ದೆಯಂತೆ? ತೋಟದ ಅಂಚಿನ ಸುರಕ್ಷಿತ ಜಾಗ ತಲುಪಿ 'ಹೆಂಡತಿ ಇದಾಳಾ ಇಲ್ಲಾ ಹಾರ್ಬೆಕ್ಕು ಕಚ್ಕೊಂಡೋಯ್ತಾ' ಎನ್ನುವಂತೆ ತಿರುಗಿ ನೋಡಿದ್ದೆಯಂತೆ? ನಿನ್ನ ಓಟದ ರಭಸವನ್ನು ತನ್ನ ಪಾಡಿಗೆ ತಾನು ಆಡುತ್ತಿದ್ದ ಆ ಪುಟ್ಟ ಪ್ರಾಣಿಯೂ ಬೆರಗಾಗಿ ನಿಂತು ನೋಡಿತಂತೆ. ಅಮ್ಮ ಆಗಾಗ ಹೇಳಿಕೊಂಡು ನಗುತ್ತಿರುತ್ತಾಳೆ. ಆದರೂ ಕಾಡು ಪ್ರಾಣಿಗಳೆಂದರೆ ನಿನಗೆ ತುಂಬಾ ಕುತೂಹಲ. ಅದಕ್ಕೆಂದೇ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲನ್ನು ಹಾಕಿಸಿಕೊಂಡಿದ್ದೀಯ. ಅದರಲ್ಲಿ ಬರುವ ಹುಲಿ, ಸಿಂಹ, ಚಿರತೆಗಳನ್ನೆಲ್ಲಾ ನೋಡುತ್ತಾ ಮೈಮರೆಯುತ್ತೀಯ. ಮುಂದಿನಸಲ ನೀನು ಬೆಂಗಳೂರಿಗೆ ಬಂದಾಗ ಬನ್ನೇರುಘಟ್ಟದ ಸಂರಕ್ಷಿತಾರಣ್ಯದಲ್ಲಿ 'ಸಫಾರಿ'ಗೆ ಕರೆದೊಯ್ಯುತ್ತೇನೆ. ನಿನ್ನ ನೆಚ್ಚಿನ ಹುಲಿ, ಸಿಂಹ, ಕರಡಿ, ಹೆಬ್ಬಾವುಗಳನ್ನೆಲ್ಲಾ ಹತ್ತಿರದಿಂದ ನೋಡಿದಾಗ ನಿನ್ನ ಮುಖದಲ್ಲಿ ಮೂಡುವ ಬೆರಗನ್ನು ಒಮ್ಮೆ ನೋಡಬೇಕೆಂಬ ಆಸೆ ನನಗೆ.

ಇನ್ನು ಹಳೆಯ ಸಿನೆಮಾಗಳೆಂದರೆ ನಿನಗೆ ಇನ್ನಿಲ್ಲದಷ್ಟು ಹುಚ್ಚು. ಟಿವಿಯಲ್ಲಿ ಚಾನೆಲ್ ಚೇಂಜ್ ಮಾಡುವಾಗ ಮಧ್ಯದಲ್ಲೆಲ್ಲೋ ಅಪ್ಪಿತಪ್ಪಿ ಡಾ. ರಾಜಕುಮಾರ್ ರ ಮುಖ ಕಂಡರೆ ಸಾಕು "ಹೇ ತಡಿತಡಿ, ಹಾಕು ಅದನ್ನ" ಎಂದು ಕುಳಿತುಬಿಡ್ತೀಯ. ಅವರ ಪ್ರತಿಯೊಂದು ಸಿನೆಮಾವನ್ನೂ ನಿನ್ನ ಯಾವುದೋಒಂದು ಹಳೆಯ, ಮಧುರ ನೆನಪಿನೊಂದಿಗೆ ಬೆಸೆದುಕೊಂಡಿದ್ದೀಯ. ಯಾವ ಸಿನೆಮಾ ಯಾವ ವರ್ಷ ರಿಲೀಸ್ ಆಯ್ತು, ಅದರ ನಟರು, ಸಂಗೀತ-ಸಾಹಿತ್ಯ ನಿರ್ದೇಶಕರು ಯಾರ್ಯಾರು, ಅಂದಿನ ಗ್ರಾಮಪಂಚಾಯತಿಯ ಗ್ರಾಮಾಫೋನು ಆ ಹಾಡುಗಳನ್ನು ಹೇಗೆ ಹಾಡುತ್ತಿತ್ತು, ಕಾಮೆಂಟರಿ ಕೇಳುವ ಅಣ್ಣನ ಜೊತೆ 'ಚಿತ್ರಗೀತೆ ಹಾಕು' ಎಂದು ಹೇಗೆಲ್ಲಾ ಜಗಳಾಡಿದ್ದೆ... ಇದನ್ನೆಲ್ಲಾ ಮತ್ತೆಮತ್ತೆ ನೆನಪಿಸಿಕೊಂಡು ಹೇಳುತ್ತೀಯ, ತೀರಾ ನಮಗೂ ಬಾಯಿಪಾಠವಾಗುವಷ್ಟು! ಚಿಕ್ಕ ಮಗುವೊಂದು ತನ್ಮಯನಾಗಿ ಕಾರ್ಟೂನು ನೋಡುವಷ್ಟೇ ಶ್ರದ್ಧೆಯಿಂದ ಚಲನಚಿತ್ರದೊಳಗೆ ಮುಳುಗಿಹೋಗ್ತೀಯ ಅಲ್ವಾ?ಅವತ್ತು ಪಕ್ಕದಮನೆಯಲ್ಲಿ ಮನೆಯವರು, ಕೆಲಸದವರು ಎಲ್ಲರೂ ಅಡಿಕೆಸುಲಿಯುತ್ತಾ ಕುಳಿತಿದ್ದಾಗ ಹಾಕಿದ್ದ ಫಿಲಮ್ಮೊಂದರಲ್ಲಿ ವಿಲನ್ ಹೀರೋನನ್ನು ಹೊಡೆಯುವ ದೃಶ್ಯನೋಡಿ ರೊಚ್ಚಿಗೆದ್ದ ನೀನು "ಯಾಕೋ ಹೊಡೆತ ತಿಂತೀಯಾ? ತಿರುಗಿ ಒದೆಯೋ ಅವ್ನಿಗೆ!" ಎಂದು ಕೂಗುತ್ತಾ ಟೀವಿಯತ್ತ ನುಗ್ಗಿದ್ದ ದೃಶ್ಯ ಈಗಲೂ ಕಣ್ಣಿಮುಂದಿದೆ. ಎಲ್ಲರೂ "ಹೋ" ಎಂದು ಕಿರುಚಿ ನಿನ್ನನ್ನು ಪಿಚ್ಚರ್ರಿನ ಹೊಡೆದಾಟದ ಕಣದಿಂದ ಈ ಲೋಕಕ್ಕೆ ಮರಳಿತರದೇಹೋಗಿದ್ದರೆ ವಿಲನ್ ನ ಮೇಲಿನ ಕೋಪಕ್ಕೆ ಟಿವಿಗೊಂದು ಗತಿ ಕಾಣಿಸುತ್ತಿದ್ದಿ ಅಲ್ವಾ? ಅಂದು ಅದು ತಮಾಷೆಯಾಗಿ ಕಂಡಿತ್ತಾದರೂ ಈಗ ಅನಿಸುತ್ತಿದೆ- ನಿನ್ನ ಈ ಕಳೆದುಹೋಗುವಿಕೆ, ತನ್ಮಯತೆ, ಭಾವುಕತೆಗಳು ನನ್ನೊಳಗೂ ಹರಿದುಬಂದಿವೆಯೇನೋ ಎಂದು.

ಅರವತ್ತು ವರ್ಷಗಳ ಜೀವನದಲ್ಲಿ ನೀನು ಸೃಷ್ಟಿಸಿಕೊಂಡ ಪ್ರಪಂಚದೊಳಗೊಮ್ಮೆ ಇಣುಕಿದರೆ ಅಚ್ಚರಿಯಾಗುತ್ತದೆ. ಕೊಳೆರೋಗ ಬಂದರೂ, ಬೆಳೆ ನೆಲಕಚ್ಚಿದರೂ ಯಾವ ಸರಕಾರದೆದುರೂ ಕೈಚಾಚಲಿಲ್ಲ. ಯಾರೊಬ್ಬರ ನಯಾಪೈಸೆಯ ಋಣವನ್ನೂ ಇಟ್ಟುಕೊಳ್ಳಲಿಲ್ಲ. ನಿನ್ನ ಖಾಯಿಲೆಗಳಿಗೆ ನಿನ್ನದೇ ವೈದ್ಯ, ನಿನ್ನದೇ ಪಥ್ಯ. ಹೊಟ್ಟೆನೋವು ಬಂದಾಗ ಪಣತಕೊಟ್ಟಿಗೆಗೆ ಹೋಗಿ ತಲೆಕೆಳಗಾಗಿ ನಿಲ್ಲುವುದು, ಟೀ ಕುಡಿಯುವುದು, ದ್ರಾಕ್ಷಿ ತಿನ್ನುವುದು.... ಇದನ್ನೆಲ್ಲಾ ನಿನಗೆ ಯಾವ ವೈದ್ಯಪುಸ್ತಕ ಹೇಳಿಕೊಟ್ಟಿತೋ ಗೊತ್ತಿಲ್ಲ. ನಿನ್ನ ನಂಬಿಕೆಗಳೇ ನಿನಗೆ ಔಷಧಿ! ಉಪ್ಪು- ಹುಳಿಗಳಿಲ್ಲದ ಸಾದಾ ಊಟ ತಿಂದುಕೊಂಡೇ ದಿನಪೂರ್ತಿ ಮನೆಯಂಗಳದ ಈ ಅಂಚಿನಿಂದ ತೋಟದಕೊನೆಯ ಆ ಅಂಚಿನತನಕದ ಒಂದೊಂದು ಹುಲ್ಲುಕಡ್ಡಿಯನ್ನೂ ವಿಚಾರಿಸಿಕೊಳ್ಳುವ ಚೈತನ್ಯ, ಶ್ರದ್ಧೆಯನ್ನು ಕೇವಲ ಎಸೆಸ್ಸೆಲ್ಸಿ ಕಲಿತ ನಿನಗೆ ಅದ್ಯಾವ ಶಾಲೆ ಕಲಿಸಿಕೊಟ್ಟಿತೆಂಬುದೇ ನನಗೆ ದೊಡ್ಡ ಅಚ್ಚರಿ. ಈ ವಯಸ್ಸಿನಲ್ಲೂ ನೀನು ದೂರದ ಗುಡ್ಡದಿಂದ ಹೊತ್ತು ತರುವ ದೈತ್ಯ ಸೊಪ್ಪಿನ ಹೊರೆಯನ್ನು ಅಲ್ಲಾಡಿಸಲೂ ನನ್ನಿಂದಾಗುವುದಿಲ್ಲ!

                       ****************

ಬೆಳೆದಂತೆಲ್ಲಾ ಮಕ್ಕಳು ದೊಡ್ಡವರಾಗುತ್ತಾರೆ, ಹೆತ್ತವರು ಮಕ್ಕಳಾಗುತ್ತಾರೆ. ವರ್ಷಗಳ ಕೆಳಗೆ ನೀನು ಮೊದಲಬಾರಿಗೆ ಬೆಂಗಳೂರಿಗೆ ಬಂದು ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದೆ. ಹಳ್ಳಿಯ ಹಸಿರು, ನಿಶ್ಯಬ್ದತೆಗಳಲ್ಲಿ ಬೆರೆತುಹೋಗಿದ್ದ ನಿನಗೆ ಈ ಬೆಂಗಳೂರಿನ ಸಂದಣಿ, ಸದ್ದುಗದ್ದಲಗಳನ್ನು ನೋಡಿ ಆತಂಕವಾಗಿತ್ತು. ರಾತ್ರೆ ಮಲಗುವುದಕ್ಕೆ ಜಾಗ ಸಾಲುವುದಿಲ್ಲವೆಂದು ನಿನ್ನನ್ನು ಅಲ್ಲೇ ಬಿಟ್ಟ ನಾನು ಇನ್ನೊಬ್ಬ ಚಿಕ್ಕಮ್ಮನ ಮನೆಗೆ ಹೊರಟುನಿಂತಾಗ "ಪುಟ್ಟು ಇಲ್ಲೇ ಇರಲಿ" ಎಂದು ಹಠಮಾಡುವಂತೆ ಹೇಳಿದೆಯಲ್ಲಾ, ಆಗೇಕೋ ಅಪರಿಚಿತ ಊರಿನಲ್ಲಿ ಅಮ್ಮ ಜೊತೆಗೇ ಇರಬೇಕೆಂದು ಹಠಮಾಡುವ ಮುಗ್ಧ ಮಗುವಿನಂತೆ ಕಂಡುಬಿಟ್ಟೆ. ಬಸವನಗುಡಿಯ ಭರಗುಟ್ಟುವ ಟ್ರಾಫಿಕ್ನಲ್ಲಿ ನಿನ್ನ ಕೈಹಿಡಿದು ರಸ್ತೆ ದಾಟಿಸುತ್ತಿದ್ದಾಗ ಹಿಂದೆಂದೋ ಇದೇ ಕೈ ಹಿಡಿದು ನಾನು ಹೆದರುತ್ತಾ ರಸ್ತೆದಾಟಿದ್ದ ನೆನಪೊಂದು ಮನದಾಳದಲ್ಲಿ ಮುಗುಳ್ನಕ್ಕಿತ್ತು.

ನಾಲ್ಕು ಜನರೊಂದಿಗೆ ಬೆರೆಯದ ನಿನ್ನ ಏಕಾಂಗಿತನ, ಸಿಟ್ಟನ್ನು ದೊಡ್ಡದನಿಯಲ್ಲಿ ವ್ಯಕ್ತಪಡಿಸುವ ನಿನ್ನ ಕೋಪಗಳನ್ನು ನೋಡಿದವರೆಲ್ಲಾ ನಿನ್ನನ್ನು 'ಒಂಟಿಗ', 'ರಾಕ್ಷಸ' ಎನ್ನುತ್ತಾರೆ. ಆದರೆ ನನಗೆ ಮಾತ್ರ ಗೊತ್ತು ಅಪ್ಪಾ.. ಹೆರಿಗೆಯ ಸಮಯದಲ್ಲಿ ಅಮ್ಮನನ್ನು ಆಸ್ಪತ್ರೆಗೆ ಸೇರಿಸಲು ನೆರವಾದ ಹಿರಿಯನೆದುರು, ಮನೆಗೆ ಕರೆದು ಅಕ್ಕರೆಯಿಂದ ಉಪಚರಿಸಿದ ಅಣ್ಣನ ಮಗನೆದುರು, ಬಹಳ ವರ್ಷಗಳ ನಂತರ ನೋಡಿದ ಗ್ರಾಮದೇವರ ಉತ್ಸವದೆದುರು ನಿಂತು ಭಾವುಕನಾಗಿ ಕಣ್ಣೊರೆಸಿಕೊಂಡ ನಿನ್ನ ಮನಸ್ಸು ಅದೆಷ್ಟು ಮೃದುವೆನ್ನುವುದು. ನಿನ್ನೊಳಗೆ ಹತ್ತಾರು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡ, ಯಾರೂ ಗುರುತಿಸದೇ ಹೋದರೂ ಇಂದಿಗೂ ಜೀವಂತವಾಗಿರುವ ನಟನೊಬ್ಬನಿದ್ದಾನೆ. ಎಂತಹಾ ರೇಡಿಯೋವನ್ನೂ ಹಾಡಿಸಬಲ್ಲ 'ಮೆಕ್ಯಾನಿಕ್' ಇದ್ದಾನೆ. ಯಾವ ಸಂಘ-ಸಂಸ್ಥೆಯೂ ಗುರುತಿಸಿ ಸನ್ಮಾನಿಸದೇಹೋದ ಪ್ರಗತಿಪರ ಕೃಷಿಕನಿದ್ದಾನೆ. ಕೊನೆಗೆ ಸಮಾಜಕ್ಕೆ ಹೆದರಿ ತನ್ನ ಸಾಮರ್ಥ್ಯಗಳನ್ನು ತನ್ನೊಳಗೇ ಮುಚ್ಚಿಟ್ಟುಕೊಂಡು ಕೊಂದುಕೊಂಡ ಮುಗ್ಧ ಅಸಹಾಯಕನಿದ್ದಾನೆ....

ಆದರೇನಂತೆ? ನಾನಿದ್ದೇನೆ.. ನೀನು ಅರ್ಧ ಹೆಣೆದು ಪಕ್ಕಕ್ಕಿಟ್ಟ ಕಸೂತಿಗಳಿಂದು ನನ್ನ ಕೈಯ್ಯಲ್ಲಿವೆ. ನಿನ್ನ ಕನಸಿನ ಮುಂದುವರಿದ ಭಾಗವೇ ನಾನಾಗಿ ಎಲ್ಲವನ್ನೂ ಪೂರ್ಣಗೊಳಿಸುತ್ತೇನೆ. ನೀ ನೆಟ್ಟ ಪ್ರತಿ ಗಿಡದ ಹಸಿರನ್ನೂ ನನ್ನ ಉಸಿರಿನಂತೆ ಕಾಯುತ್ತೇನೆ...

ಹೇಳೋಕೆ ಮರೆತೆ. ಮೊನ್ನೆ ನನಗೊಂದು ಕನಸು ಬಿತ್ತು. ಬೆಳಗಿನಜಾವ ಬಿದ್ದ ನಿಜವಾಗುವ ಕನಸು! ಅದರಲ್ಲಿ ನೀನು ಮುಂದೆಂದೋ ಹುಟ್ಟಲಿರುವ ನನ್ನ ಪುಟಾಣಿ ಮಗಳ ಕೈಹಿಡಿದು ತೋಟಕ್ಕೆ ನಡೆಸಿಕೊಂಡು ಹೋಗುತ್ತಿದ್ದೆ. ಅಂದು ನನ್ನ ನಡೆಸಿಕೊಂಡು ಹೋಗಿದ್ದೆಯಲ್ಲಾ, ಹಾಗೇ!

ಸಮಯ ಅದೆಷ್ಟು ಸುಂದರವಾಗಿ ಹಿಂದಿರುಗಿಬರುತ್ತದೆ ಅಲ್ವಾ?

ಇಂತಿ ನಿನ್ನ ಪ್ರೀತಿಯ
ಪುಟ್ಟು

(ಶ್ರೀ. ಗುರುಪ್ರಸಾದ ಕುರ್ತಕೋಟಿ ಅವರು ಸಂಪಾದಿಸಿದ 'ಎಲ್ಲರಂಥವನಲ್ಲ ನನ್ನಪ್ಪ' ಕೃತಿಯಲ್ಲಿ ಪ್ರಕಟವಾದ ಲೇಖನ)

ಸೋಮವಾರ, ಮೇ 8, 2017

ಅಜ್ಜನ ಊರು ಹಾಗೂ ಅಲ್ಲಿನ ದೆವ್ವದ ಕಥೆಗಳು...

ನೀವು ಈ ದೆವ್ವ-ಭೂತಗಳನ್ನು ನಂಬ್ತೀರಾ? ನಾನಂತು ನಂಬುತ್ತೇನೆ. ನಾನೇನೋ ಹಗಲಿನ ಹೊತ್ತಿನಲ್ಲಿ ಜೊತೆಗಿರುವ ಮೂರುವರೆ ಪೈಸೆ ಧೈರ್ಯದಲ್ಲಿ 'ಈ ದೆವ್ವ ಗಿವ್ವ ಎಲ್ಲಾ ಸುಳ್ಳು' ಅನ್ನೋದು; ಅದು ಇಲ್ಲೇ ಯಾವುದೋ ಹುಣಿಸೆ ಮರದಲ್ಲಿ ನೇತಾಡುತ್ತಿರುವ ದೆವ್ವವೊಂದರ ಕಿವಿಗೆ ಬೀಳೋದು; ಆಮೇಲೆ ರಾತ್ರಿಯಾಗಿ ಎಲ್ಲರೂ ಮಲಗಿದ ಮೇಲೆ ಅದು ಮರದಿಂದ ಇಳಿದು ನೇರ ನನ್ನ ರೂಮಿಗೆ ಬಂದು "ಏನಂದೆ ಮಗನೇ? ಇನ್ನೊಂದ್ಸಲ ಹೇಳು" ಅಂತ ಕೋರೆಹಲ್ಲು ತೋರಿಸಿ ನಗೋದು; ಆಮೇಲೆ ನಾನು.......
ಇದೆಲ್ಲಾ ಯಾಕೆ ಬೇಕು ಹೇಳಿ? ಅದಕ್ಕೇ ನಾನು ಈ ದೆವ್ವಗಳನ್ನ ಕೆರಳಿಸುವಂತಹ ಯಾವ ಹೇಳಿಕೆಗಳನ್ನು ಕೊಡಬಾರದೂಂತ ನಿರ್ಧರಿಸಿಬಿಟ್ಟಿದ್ದೇನೆ!

ಹಾಗಂತ ನೀವು ನನ್ನ ಹೆದರುಪುಕ್ಲ ಅಂತ ಆಡಿಕೊಳ್ಳೋದೇನೂ ಬೇಡ. ನಮ್ಮ ಮನೆಯಲ್ಲಿ ಇರೋದ್ರಲ್ಲಿ ನಾನೇ ಧೈರ್ಯವಂತ! ಅಪ್ಪ, ಅಮ್ಮ ಹಾಗೂ ತಮ್ಮ ರಾತ್ರಿ ಹೊತ್ತಲ್ಲಿ ಹೊರಗೆ ಓಡಾಡುವ ವಿಷಯದಲ್ಲಿ ಪುಕ್ಕಲರೇ! ಈ ವಿಷಯದಲ್ಲಿ ನಾನೇ ಇದ್ದಿದ್ದರಲ್ಲಿ ಗಟ್ಟಿಗ. ನಮ್ಮ ಮನೆ ಇರೋದು ನಮ್ಮೂರಿನ ಮುಖ್ಯ ರಸ್ತೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ. ಬೀದಿ ದೀಪಗಳಿಲ್ಲದ, ಅಕ್ಕಪಕ್ಕ ಮನೆಗಳೂ ಇಲ್ಲದ ಮಣ್ಣ ದಾರಿಯಲ್ಲಿ ಮರಗಳ ಮಧ್ಯೆ, ಮಧ್ಯರಾತ್ರಿಯಲ್ಲಿ ಸಹಾ ಒಬ್ಬನೇ ನಡೆದುಬರುತ್ತೇನೆಂಬ ಕಾರಣಕ್ಕೆ ನನಗೆ ಈ ಧೈರ್ಯಶಾಲಿಯೆಂಬ ಬಿರುದು ಬಂದಿದ್ದು.

ಆದರೆ ನಿಜದಲ್ಲಿ ನನ್ನ ಅವಸ್ಥೆ ನನಗೆ ಮಾತ್ರ ಗೊತ್ತು! ಮೊದಲು ನಾನು ಊರಿನಲ್ಲಿದ್ದಾಗ ಅಪರೂಪಕ್ಕೆ ಊರಿಗೆ ಬರುತ್ತಿದ್ದ ಗೆಳೆಯರನ್ನು ಭೇಟಿಯಾಗಿ, ರಾತ್ರೆ ಒಂಭತ್ತರ ತನಕ ಊರೆಲ್ಲಾ ತಿರುಗಿ, ನಂತರ ಒಬ್ಬನೇ ನಡೆದು ಮನೆಗೆ ಬರುತ್ತಿದ್ದೆ. ಊರಿನ ಟಾರ್ ರಸ್ತೆಯಿಂದ ನಮ್ಮ ಕೇರಿಯ ಮಣ್ಣ ರಸ್ತೆಗೆ ತಿರುಗಿ ಇಪ್ಪತ್ತು ಮೊವತ್ತು ಹೆಜ್ಜೆ ನಡೆದರೆ ಎಡಭಾಗದಲ್ಲಿರುವ ಇಳಿಜಾರಿನಲ್ಲಿ ತುಂಬಾ ಹಳೆಯ ಕಾಲದ ಬಾವಿಯೊಂದಿದೆ. ಅದರ ಪಕ್ಕದಲ್ಲೇ ದಟ್ಟವಾದ ಪೊದೆಗಳಿಂದಾವೃತವಾದ ಬೃಹತ್ ಅತ್ತಿಯ ಮರವೂ ಇದೆ. ಅದು ಭೀಕರವಾದ ಸರ್ಪಗಳ ವಾಸಸ್ಥಾನವೆಂದು ಅಪ್ಪ ಆಗಾಗ ಹೇಳುತ್ತಾರೆ. ಅಲ್ಲದೇ ಕೆಲವು ವರ್ಷಗಳ ಕೆಳಗೆ ಸುಮಾರು ಹದಿಮೂರು ಅಡಿ ಉದ್ದದ ಕಾಳಿಂಗ ಸರ್ಪವೊಂದು ಅದೇ ಪೊದರಿನಿಂದ ಹೊರಬಂದು ಎದುರೇ ಇರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನುಗ್ಗಿದ್ದನ್ನ ನಾನೇ ಕಣ್ಣಾರೆ ನೋಡಿದ್ದೇನೆ. ಸಾಲದ್ದಕ್ಕೆ ನಾನು ಚಿಕ್ಕವನಿದ್ದಾಗ ಸುಕ್ಕಡ್ಯಾ ಎನ್ನುವವನೊಬ್ಬ ಅದೇ ಬಾವಿಗೆ ಬಿದ್ದು ಸತ್ತಿದ್ದ ಕೂಡಾ! ಬಾವಿಯ ನೀರಿನಲ್ಲಿ ಮುಖ ಕೆಳಗಾಗಿ ತೇಲುತ್ತಿರುವ ಸುಕಡ್ಯಾನ ಚಿತ್ರ ಈಗಲೂ ಕಣ್ಮುಂದೆ ಹಾಗೇ ಇದೆ. ಇಷ್ಟೆಲ್ಲಾ ಭೀಬತ್ಸಗಳಿರುವ ದಾರಿಯಲ್ಲಿ ರಾತ್ರೆ ಒಬ್ಬನೇ ನಡೆಯುವಾಗ ಎಲ್ಲವೂ ನೆನಪಾಗುತ್ತದೆ. ಮತ್ತೆ ಮತ್ತೆ ಹಿಂದಕ್ಕೆ- ಮುಂದಕ್ಕೆ ಮೊಬೈಲ್ ಟಾರ್ಚ್ ಹಾಕಿ ಸಮೀಪದಲ್ಲಿ ಯಾವುದೇ ದೆವ್ವವಾಗಲೀ, ಕಾಳಸರ್ಪವಾಗಲೀ ಇಲ್ಲವೆಂದು ಖಚಿತಪಡಿಸಿಕೊಳ್ಳುತ್ತಾ, ಸಣ್ಣ ಸದ್ದಾದರೂ ಬೆಚ್ಚಿಬೀಳುತ್ತ, ಮನಸ್ಸಿನಲ್ಲೇ ಗಾಯತ್ರೀ ಮಂತ್ರ ಪಠಿಸುತ್ತಾ ಹೇಗೋ ಮನೆತಲುಪದಮೇಲೇ ಗಟ್ಟಿಯಾಗಿ ಉಸಿರಾಡುತ್ತೇನೆಂಬುದು ಗೊತ್ತಿಲ್ಲದ  ಮನೆಯವರು ನನ್ನನ್ನು ಧೈರ್ಯಶಾಲಿ ಎಂದು ತಿಳಿದಿದ್ದರು!

ಆದರೆ ಕೊನೆಗೂ ಒಮ್ಮೆ ನಾನೆಂತಹ ರಣಧೀರನೆಂಬುದು ಎಲ್ಲರಿಗೂ ಗೊತ್ತಾಗಿಹೋಯಿತು. ಅದು ನಾನು ಕೊನೆಯ ವರ್ಷದ ಡಿಗ್ರಿ ಓದುತ್ತಿದ್ದ ಸಮಯ. ಆಗಷ್ಟೇ ಹೊಸದಾಗಿ ಮ್ಯೂಸಿಕ್ ಕೇಳಬಲ್ಲ ಮೊಬೈಲ್ ಖರೀದಿಸಿದ್ದೆ. ರಾತ್ರೆ ಎಲ್ಲರೂ ಮಲಗಿದ ಮೇಲೆ ಸ್ವಲ್ಪ ಹೊತ್ತು ಕಿವಿಗೆ ಇಯರ್ ಫೋನ್ ಚುಚ್ಚಿಕೊಂಡು  ಅಂಗಳದ ಕತ್ತಲಲ್ಲಿ ಅತ್ತಿಂದಿತ್ತ ಓಡಾಡುತ್ತಾ ಹಾಡುಕೇಳುವುದು ನನ್ನ ನಿತ್ಯದ ಅಭ್ಯಾಸ. ಎಷ್ಟೇ ಆದರೂ 'ಧೈರ್ಯಶಾಲಿ'ಯಲ್ವಾ! ಅಂದೂ ಕೂಡಾ ಹಾಗೇ ಅತ್ತಿಂದಿತ್ತ, ಇತ್ತಿಂದತ್ತ ನಡೆದಾಡುತ್ತಾ ಹಾಡು ಕೇಳುತ್ತಿದ್ದೆ; ಥಟ್ಟನೆ ಕಾಲಿಗೆ ಏನೋ ಸಿಲುಕಿಂದಂತಾಯಿತು. ಅದೇನೆಂದು ಪರೀಕ್ಷಿಸಲು ಕಾಲನ್ನು ಮೆಲ್ಲಗೆ ಅಲ್ಲಾಡಿಸಿದೆ. ಆಗಲೇ ನನಗೆ ಗೊತ್ತಾಗಿದ್ದು...

ಘಟಸರ್ಪವೊಂದು ನನ್ನ ಕಾಲಿಗೆ ಸುತ್ತಿಕೊಂಡಿತ್ತು!!!

ಕೈಯ್ಯಲ್ಲಿದ್ದ ಇಯರ್ ಫೋನನ್ನು ಮೊಬೈಲ್ ನ ಸಮೇತ ಎಸೆದು "ಅಯ್ಯಯ್ಯಪ್ಪಾ.... ಹಾವೂ..." ಎಂದು ಸೀದಾ ಮನೆಯಕಡೆ ಓಡಿದೆ. ಕಾಲಿಗೆ ಸುತ್ತಿಕೊಂಡಿದ್ದ ಆ ಕ್ರೂರ ಸರ್ಪವೂ ನನ್ನನ್ನು ಹಿಂಬಾಲಿಸಿತು. ನನ್ನ ಹಾಹಾಕಾರ ಕೇಳಿ ಬೆಚ್ಚಿಬಿದ್ದು ಎಚ್ಚರಾದ ಅಪ್ಪ ಅಮ್ಮ, ಕೈಗೆ ಸಿಕ್ಕಿದ ಕಟ್ಟಿಗೆ, ಪೊರಕೆಗಳನ್ನು ಹಿಡಿದುಕೊಂಡು ತಮ್ಮ ಧೀರ ಪುತ್ರನನ್ನು ಬೆನ್ನಟ್ಟಿಬರುತ್ತಿರುವ ಘಟಸರ್ಪಕ್ಕೊಂದು ಗತಿ ಕಾಣಿಸಲು ಸಿದ್ಧರಾಗಿ ನಿಂತರು.. ಅಷ್ಟರಲ್ಲಿ ತಮ್ಮ ಲೈಟ್ ಹಾಕಿದ. ಎಲ್ಲಿ ನೋಡಿದರೂ ಹಾವಿನ ಸುಳಿವೇ ಇಲ್ಲ! ಅಷ್ಟು ಬೇಗ ಎಲ್ಲಿ ಹೋಯಿತೆಂದು ಹುಡುಕುತ್ತಾ ಎಲ್ಲರೂ ಅಂಗಳದೆದುರಿನ ಬಾಗಿಲಿನತ್ತ ಬಂದೆವು. ಅಲ್ಲಿ ಬಿದ್ದಿತ್ತು.... ಗೊಬ್ಬರದ ಚೀಲಗಳನ್ನು ಹೊಲಿಯಲು ಬಳಸುವ ಮಾರುದ್ದದ ಪ್ಲಾಸ್ಟಿಕ್ ಹಗ್ಗ!

ಆಗಿದ್ದಿಷ್ಟೇ: ಅಂಗಳದ ಮಧ್ಯದಲ್ಲಿ ಸುರುಳಿಯಾಗಿ ಬಿದ್ದಿದ್ದ ಹಗ್ಗ ನಡೆದಾಡುವಾಗ ನನ್ನ ಕಾಲಿಗೆ ಸುತ್ತಿಕೊಂಡಿದೆ. ಮೊದಲೇ ತಲೆಯ ತುಂಬಾ ಪ್ರೇತ, ಸರ್ಪಾದಿಗಳನ್ನು ತುಂಬಿಕೊಂಡಿರುವ ನಾನು ಅದನ್ನೇ ಹಾವೆಂದೆಣಿಸಿ ಜೀವಭಯದಲ್ಲಿ ಓಟ ಕಿತ್ತಿದ್ದೆ. ಕಾಲಿಗೆ ಸುತ್ತಿಕೊಂಡು ಬಾಗಿಲ ತನಕ ಜೊತೆಗೇ ಬಂದ ಹಗ್ಗ ಬಾಗಿಲ ಬುಡದಲ್ಲಿ ಜಾರಿಹೋಗಿತ್ತು.

ಸರಿರಾತ್ರಿಯಲ್ಲಿ ನನ್ನನ್ನು ಇಷ್ಟೆಲ್ಲಾ ಅಟ್ಟಾಡಿಸಿದ ಆ ಭಯಾನಕ ಸರ್ಪವನ್ನು ನೋಡುತ್ತಾ ಮೂವರೂ ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದರೆ ನಾನು ಮಾತ್ರ ಅದನ್ನು ಸುಟ್ಟುಬಿಡುವಂತೆ ಗುರಾಯಿಸುತ್ತಾ ನಿಂತೆ....

                  *******************

ದೆವ್ವಗಳು ಇವೆಯೋ ಇಲ್ಲವೋ, ಅವುಗಳ ಹೆಸರಿನಲ್ಲಿ ಹತ್ತುಹಲವು ಸ್ವಾರಸ್ಯಕರ ಕಥೆಗಳಿರುವುದಂತೂ ನಿಜ. ನನ್ನ ಅಜ್ಜನ ಮನೆಯಿರುವುದು ಸಾಗರ ತಾಲೋಕಿನ ಒಂದು ಹಳ್ಳಿಯಲ್ಲಿ.  ಅಲ್ಲಿ ಒಳಗೊಳಗೆ ಹೋದಂತೆಲ್ಲಾ ಪ್ರತೀ ಕಿಲೋಮೀಟರ್ ಗೆ ಮೂರೋ ನಾಲ್ಕೋ ಮನೆಗಳಿವೆ ಅಷ್ಟೇ. ಈಗ ಸಂಖ್ಯೆ ಜಾಸ್ತಿಯಾಗಿದೆ ಬಿಡಿ; ಗುಡ್ಡ, ಬೆಟ್ಟ, ಕಾಡುಗಳೇ ಹೆಚ್ಚಾಗಿರುವ ಆ ಊರಿನಲ್ಲಿ ದೆವ್ವ-ಭೂತದ ಕಥೆಗಳು ಅನೇಕ. ನನಗೆ ಅಜ್ಜ ಹಾಗೂ ಅಮ್ಮ ಹೇಳಿದ ಕೆಲವೊಂದು ಕಥೆಗಳನ್ನು ನಿಮಗೂ ಹೇಳುತ್ತೇನೆ ಕೇಳಿ:

ಅಜ್ಜನ ಮನೆಯಿರುವುದು ಮುಖ್ಯ ರಸ್ತೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಕಾಡಿನ ಮಧ್ಯೆ. ಎಡಗಡೆಯ ಗುಡ್ಡ ಹಾಗೂ ಬಲಗಡೆಯ ಇಳಿಜಾರಿನ ಮಧ್ಯೆ ಸಾಗುತ್ತದೆ ಇಕ್ಕಟ್ಟಾದ ಮಣ್ಣು ರಸ್ತೆ. ಸುತ್ತಲೂ ಕಾಡು, ಪೊದರು ಹಾಗೂ ಹುಲ್ಲು. ಮನೆಗೆ ಏನೇ ಸಣ್ಣದೊಂದು ವಸ್ತು ಬೇಕೆಂದರೂ ಐದು ಕಿಲೋ ಮೀಟರ್ ದೂರದ ತುಮರಿಗೇ ಹೋಗಬೇಕು. ಅಮ್ಮ ಚಿಕ್ಕವಳಿದ್ದಾಗ ಅವಳಪ್ಪ ಅಂದರೆ ನನ್ನ ಅಜ್ಜ ಹಗಲಿಡೀ ದೇವರ ಪೂಜೆ ಹಾಗೂ ತೋಟದ ಕೆಲಸಗಳಲ್ಲಿ ಮುಳುಗಿಹೋಗಿರುತ್ತಿದ್ದ. ಸಂಜೆ ಕಳೆದ ಮೇಲೆ ಮನೆಗೆ ಬೇಕಾದ ವಸ್ತುಗಳನ್ನ ತರಲೆಂದು ದೂರದ ತುಮರಿಗೆ ಹೋಗುತ್ತಿದ್ದ. ಮರಳುವಾಗ ರಾತ್ರೆ ಹತ್ತಾಗುತ್ತಿತ್ತು. ಒಮ್ಮೆ ಆ ಕಿಷ್ಕಿಂದೆಯಂತಹಾ ದಾರಿಯಲ್ಲಿ, ಕಾಳ ಕತ್ತಲಿನಲ್ಲಿ ಒಬ್ಬನೇ ಸಾಮಾನುಗಳ ಮೂಟೆ ಹೊತ್ತು ಬರುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಯಾರೋ ನಿಂತಂತೆ ಭಾಸವಾಯಿತು. ಅದರತ್ತ ಗಮನ ಹರಿಸದೇ ಮುಂದೆ ಬಂದರೆ ಸ್ವಲ್ಪ ದೂರದಲ್ಲಿ ಮತ್ತೆ ಅದೇ ಆಕೃತಿ ನಿಂತಿದೆ! ಅದನ್ನೂ ಕಡೆಗಣಿಸಿ ಮುಂದೆ ಬಂದರೆ ಹಿಂದಿನಿಂದ "ಚಿದಂಬರಾ... ಚಿದಂಬರಾ..." ಎಂದು ಕರೆದ ಸದ್ದು! ಆದರೆ ದಿನವೂ ಗಂಟೆಗಟ್ಟಲೆ ಜಪತಪಾದಿಗಳನ್ನು ಮಾಡುತ್ತಿದ್ದ ಅಜ್ಜ ಇದ್ಯಾವುದಕ್ಕೂ ಹೆದರದೇ ಮನೆ ತಲುಪಿದನಂತೆ.

ಇನ್ನೊಮ್ಮೆ ಅಜ್ಜನ ಜೊತೆ ಮನೆಯ ಎದುರಿನ ಕಣದಲ್ಲಿಕೆಲಸ ಮಾಡುತ್ತಿದ್ದ ನನ್ನ ದೊಡ್ಡ ಮಾವ (ಆಗಿನ್ನೂ ಅವರು ಚಿಕ್ಕವರಿದ್ದರು) ಗುದ್ದಲಿಯನ್ನು ಅಲ್ಲೇ ಮರೆತು ಬಂದುಬಿಟ್ಟರು. ರಾತ್ರೆ ಊಟ ಮಾಡಿದ ಮೇಲೆ ಅದನ್ನು ತರಲೆಂದು ಮತ್ತೆ ಅಲ್ಲಿಗೆ ಹೋಗಿ ನೋಡಿದರೆ ಆ ಜಾಗದಲ್ಲಿ  ಬಿಳಿಯ ಆಕೃತಿಯೊಂದು ಗುದ್ದಲಿಯನ್ನು ಹಿಡಿದು ನಿಂತುಕೊಂಡಿದೆ! ಇವರು ನೋಡುತ್ತಿರುವಂತೆಯೇ ಅದು ಕುಳ್ಳಗಾಗುತ್ತಾ ಹೋಗಿ ಕೊನೆಗೆ ಮಾಯವೇ ಆಯಿತಂತೆ. ಭೀತರಾಗಿ ಅಳುತ್ತಾ ಮನೆಗೆ ಬಂದ ಮಾವ ಒಂದು ವಾರ ಛಳಿ ಜ್ವರ ಹಿಡಿದು ಮಲಗಿಬಿಟ್ಟರು.

ಇವೆಲ್ಲಾ ನಮಗೆ ಅಜ್ಜ ಹೇಳಿದ ಕಥೆಯಾದ್ದರಿಂದ ಅದನ್ನು ಅಷ್ಟಾಗಿ ನಂಬುವಂತಿಲ್ಲ. ಏಕೆಂದರೆ ಮೊದಲೇ "ಬೋಕಾಳಿ ಮಾಂತ್ರಿಕ" ಎಂದು ತಮಾಷೆ ಮಾಡಲ್ಪಡುತ್ತಿದ್ದ ಅಜ್ಜ ಹೇಳುವುದರಲ್ಲಿ ಅರ್ಧಕ್ಕರ್ಧ ಬೋಕಾಳಿಯೇ ಆಗಿರುತ್ತಿತ್ತು. ಆದರೆ ಮುಂದಿನದು ನನಗೆ ಅಮ್ಮ ಹೇಳಿದ ಕಥೆ. ಇವತ್ತಿಗೂ ಅವಳು ಅದನ್ನು ಸತ್ಯ ಎಂದೇ ವಾದಿಸುತ್ತಾಳೆ.

ಆಗ ಅಮ್ಮ ಇನ್ನೂ ಮಿಡ್ಲಿಸ್ಕೂಲಿನಲ್ಲಿದ್ದಳು. ಒಂದು ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ಬಂದು ಊಟವಾದ ಮೇಲೆ ಅಕ್ಕ ಪಕ್ಕದ ಮನೆಯ ಹುಡುಗ ಹುಡುಗಿಯರೆಲ್ಲಾ ಒಟ್ಟಾಗಿ ಸ್ವಲ್ಪ ದೂರದಲ್ಲಿದ್ದ ತೋಟಕ್ಕೆ ಪೇರಳೆ ಹಣ್ಣುಕೊಯ್ಯಲು ಹೊರಟರು. ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ಹೊರಟವರಿಗೆ ಗೊತ್ತಿಲ್ಲದ ಸಂಗತಿಯೆಂದರೆ ಆ ಜಾಗದ ಸಮೀಪದಲ್ಲಿ ಕೆಲವೇ ದಿನಗಳ ಕೆಳಗೆ ಅಕಾಲ ಮರಣಕ್ಕೀಡಾಗಿದ್ದ ಬಾಣಂತಿಯೊಬ್ಬಳನ್ನು ಸುಟ್ಟಿದ್ದರೆಂಬುದು!

ಎಲ್ಲರೂ ಪೇರಳೆ ಮರಕ್ಕೆ ಲಗ್ಗೆಯಿಟ್ಟರು. ಬೇಕಾದಷ್ಟು ಹಣ್ಣು ತಿಂದು ಉಳಿದಿದ್ದನ್ನು ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡು ಇನ್ನೇನು ಹೊರಡಬೇಕು, ಅಷ್ಟರಲ್ಲಿ ಭಯಾನಕವಾದ ಆರ್ತನಾದವೊಂದು ತೀರಾ ಹತ್ತಿರದಿಂದಲೇ ಕೇಳಿಬಂತು! ಸುತ್ತಲೂ ನೋಡಿದ ಅಮ್ಮನಿಗೆ ಏನೂ ಕಾಣಲಿಲ್ಲ. ಆದರೆ ಜೊತೆಯಲ್ಲಿದ್ದವರೆಲ್ಲಾ 'ದೆವ್ವ ಬರ್ತಿದ್ದು... ಓಡೇ' ಅಂತ ಅರಚಿದಾಗ ಹಿಂದುಮುಂದು ನೋಡದೇ ನಾಗಾಲೋಟ ಕಿತ್ತಿದ್ದಾಳೆ. ಆ ಭಯಾನಕ ಸದ್ದೂ ಇವರನ್ನು ಬೆನ್ನತ್ತಿ ಬಂದಿದೆ. ಓಟದ ಮಧ್ಯೆ ಒಮ್ಮೆ ಅಮ್ಮ ತಿರುಗಿ ನೋಡಿದಳಂತೆ. ವಿವರಣೆಗೆ ನಿಲುಕದ, ವಿಚಿತ್ರ ಆಕಾರವೊಂದು ಕಪ್ಪಿನಿಂದ ಕಪ್ಪಿಗೆ (ಅಡಿಕೆ ತೋಟದಲ್ಲಿ ಎರೆಡು ಸಾಲುಗಳ ನಡುವೆ ಮಾಡಿರುವ ಕಾಲುವೆಯಂತಹ ಉದ್ದದ ತೋಡು) ಹಾರುತ್ತಾ ಬರುತ್ತಿರುವುದು ಕಂಡಿದೆ. ಮತ್ತೇನೂ ಯೋಚಿಸದೆ ಪ್ರತಿಯೊಬ್ಬರೂ ಒಬ್ಬೊಬ್ಬ ಆಂಜನೇಯನಂತೆ ಹೊಂಡ,ಗುಂಡಿ,ಏರು, ತಗ್ಗುಗಳೆಲ್ಲವನ್ನೂ ಒಂದೇ ನೆಗೆತಕ್ಕೆ ನೆಗೆಯುತ್ತಾ ಮನೆ ತಲುಪಿದರು. ತನ್ನ 'ಸೀಮೆ' ಮುಗಿಯುವ ತನಕ ಇವರನ್ನು ಬೆನ್ನಟ್ಟಿದ ಆ ಅವರ್ಣನೀಯ ಆಕೃತಿ ನಂತರ ಮರೆಯಾಯಿತು.

ಇನ್ನೊಂದು ಅವಳ ಶಾಲೆಯಲ್ಲಿ ನಡೆದ ಘಟನೆ: ಆಗ ಶಾಲೆಗಳಲ್ಲಿ ಈಗಿನಂತೆ ಬಿಸಿಯೂಟ ಇರಲಿಲ್ಲ. ಮಧ್ಯಾಹ್ನದ ಊಟಕ್ಕೆ  ಮನೆ ಸಮೀಪವಿರುವವರು ತಮ್ಮ ಮನೆಗೇ ಹೋಗುತ್ತಿದ್ದರೆ, ಉಳಿದವರು ಹತ್ತಿರದಲ್ಲಿರುವ ತಮ್ಮ ಪರಿಚಿತರ ಮನೆಗೋ ಅಥವಾ ನೆಂಟರಿಷ್ಟರ ಮನೆಗೋ ಹೋಗುತ್ತಿದ್ದರು. ಹಾಗಾಗಿ ಮಧ್ಯಾಹ್ನ ಊಟದ ಸಮಯದಲ್ಲಿ ಶಾಲೆಯಲ್ಲಿರುತ್ತಿದ್ದವರು ತೀರಾ ಕಡಿಮೆ. ಕೆಲವೊಂದು ಹುಡುಗಿಯರ ನಡುವೆ ಹೀಗೆ ಊಟಕ್ಕೆ ಹೋಗಿ ಬರುವುದರಲ್ಲೊಂದು ಪೈಪೋಟಿ- ಯಾರು ಮೊದಲು ಊಟ ಮುಗಿಸಿ ಬರುತ್ತಾರೆ ಅಂತ. ಈ ಸ್ಪರ್ಧೆಯಲ್ಲಿ ಸದಾ ಸೋಲುತ್ತಿದ್ದ ಹುಡುಗಿಯೊಬ್ಬಳು ಏನೇ ಆದರೂ ಇಂದು ತಾನು ಗೆಲ್ಲಲೇ ಬೇಕೆಂದು ಒಂದು ದಿನ ಮಧ್ಯಾಹ್ನ ಬಹಳ ಬೇಗ ಊಟ ಮುಗಿಸಿ ಮರಳಿದಳಂತೆ. ತರಗತಿಗೆ ಬಂದು ನೋಡಿದರೆ ಇನ್ನೂ ಯಾರೂ ಬಂದಿಲ್ಲ. ಕೊನೆಗೂ ತಾನು ಗೆದ್ದೆನೆಂದು ಬೀಗುತ್ತಾ, ಗೆಳತಿಯರು ಬಂದ ಮೇಲೆ ಅವರಿಗೆ ಹೇಗೆ ಹೊಟ್ಟೆ ಉರಿಸಬೇಕೆಂದು ಯೋಚಿಸುತ್ತಾ ಒಬ್ಬಳೇ ತರಗತಿಯಲ್ಲಿ ಕೂತಿದ್ದಾಳೆ. ಆಗಲೇ ಕೊಠಡಿಯ ಹಿಂದಿನ ಭಾಗದ, ಕಾಡಿನಕಡೆ ತೆರೆದಿರುವ ಕಿಟಕಿಯಿಂದ ಘಲ್..ಘಲ್.. ಎಂದು ಬಳೆಯ ಸದ್ದು ಕೇಳಿದೆ. ಗೆಳತಿಯರು ಬಂದರೆಂದು ಅವಳು ಇಣುಕಿ ನೋಡಿದರೆ ಯಾರೂ ಇಲ್ಲ! ಅಷ್ಟರಲ್ಲಿ ಮತ್ತದೇ ಕಡೆಯಿಂದ ಬಳೆಯ ಸದ್ದು, ಈ ಬಾರಿ ತುಸು ಜೋರಾಗೇ ಕೇಳಿದೆ. ತಾನು ಗೆದ್ದೆನೆಂಬ ಹೊಟ್ಟೇಕಿಚ್ಚಿಗೆ ತನ್ನ ಗೆಳತಿಯರೇ ಹೀಗೆ ಹೆದರಿಸುತ್ತಿದ್ದಾರೆಂದೆಣಿಸಿದ ಅವಳು "ನನ್ನೇ ಹೆದರಿಸ್ತ್ರಾ? ಹಿಂದಿಂದ ಬಂದ್ರೆ ಯಂಗ್ ಗೊತ್ತಾಗ್ತಲ್ಲೆ ಅಂದ್ಕಂಡ್ರಾ" ಎನ್ನುತ್ತಾ ಕಿಟಕಿಯತ್ತ ನಡೆದಿದ್ದಾಳೆ.

ಆಗಲೇ ಕಿಟಕಿಯ ಸರಳುಗಳ ಮೇಲೆ ಬಣ್ಣಬಣ್ಣದ ಬಳೆಗಳನ್ನು ತೊಟ್ಟಿರುವ ವಿಕಾರವಾದ ಕಡುಗಪ್ಪು ಕೈಯೊಂದು ಕಂಡಿದೆ!

ಭೀತಳಾದ ಹುಡುಗಿ ಕಿರುಚಿಕೊಂಡು ಕೊಠಡಿಯಿಂದ ಹೊರಾಗೋಡಿದಳು. ಮುಖ ಬಿಳುಚಿಕೊಂಡು ಓಡಿ ಬರುತ್ತಿರುವವಳನ್ನು ಆಗಷ್ಟೇ ಶಾಲೆ ಪ್ರವೇಶಿಸುತ್ತಿದ್ದ ಮಾಸ್ತರು ನಿಲ್ಲಿಸಿ ಏನಾಯಿತೆಂದು ಕೇಳಿದರು. ಅವಳು ನಡೆದದ್ದೆಲ್ಲವನ್ನೂ ಹೇಳಿ, ಅವರೂ ಬಂದು ನೋಡಿದರೆ ಕೊಠಡಿಯಲ್ಲಿ ಯಾವ ಬಳೆಯೂ ಇಲ್ಲ, ಕೈಯ್ಯೂ ಇಲ್ಲ!

ಹೆದರಿದ ಹುಡುಗಿ ವಾರ ಪೂರಾ ಛಳಿ ಜ್ವರ ಬಂದು ಮಲಗಿದ್ದಳೆಂದು ಪ್ರತ್ಯೇಕಾವಾಗಿ ಹೇಳಬೇಕಿಲ್ಲವಲ್ಲಾ?

                       ****************

ಇವೆಲ್ಲವೂ ನಾನು ಹುಟ್ಟುವ ಮೊದಲೇ ನಡೆದ ಅಥವಾ ಸೃಷ್ಟಿಸಿದ ಕಥೆಗಳು. ಆದರೆ ಇಂದಿಗೂ ಜೀವಂತವಾಗಿರುವ ಘಟನೆಯೊಂದು ದೆವ್ವ ಭೂತಗಳ ಬಗ್ಗೆ ತೀರಾ ಹಗುರವಾಗಿ ಯೋಚಿಸದಂತೆ ಮಾಡಿದೆ.

ನನ್ನ ಅಜ್ಜಿಯ (ಅಮ್ಮನ ಅಮ್ಮ) ಕೊನೆಯ ತಂಗಿ ಆಗ ಎರೆಡು-ಮೂರು ತಿಂಗಳ ಬಾಣಂತಿಯಾಗಿದ್ದರು. ಒಂದು ದಿನ ರಾತ್ರಿ ಮನೆಯವರೆಲ್ಲಾ ಊಟ ಮಾಡಿದ ಬಾಳೇ ಎಲೆಗಳನ್ನು ಎಸೆಯಲೆಂದು ಮನೆಯ ಹಿಂದಿನ ಗೊಬ್ಬರದ ಗುಂಡಿಯತ್ತ ಹೋದವರು ಭಯದಿಂದ ನಡುಗುತ್ತಾ ವಾಪಾಸು ಬಂದರು. ಏನಾಯಿತೆಂದು ಕೇಳಿದರೆ ಅಲ್ಲಿ ಯಾರೋ ಇದ್ದಾರೆಂದು ಹೊರಗಿನ ಕತ್ತಲಿನತ್ತ ಕೈ ತೋರಿಸುತ್ತಾ ಮತ್ತಷ್ಟು ನಡುಗಿದರು.

ಆ ಘಟನೆ ನಡೆದ ಕೆಲ ದಿನಗಳಿಗೆಲ್ಲಾ ಅವರ ವರ್ತನೆ ಬದಲಾಗುತ್ತಾ ಹೋಯಿತು. ಏನೋ ಕೆಲಸ ಮಾಡುತ್ತಿದ್ದವರು ಇದ್ದಕ್ಕಿದ್ದಂತೆ ಒಂದು ಮೂಲೆ ಸೇರಿ ಕುಳಿತುಬಿಡುತ್ತಿದ್ದರು. ತಮ್ಮಷ್ಟಕ್ಕೆ ತಾವೇ ಗಿಟಿಗಿಟಿ ಅಂತ ನಗಲಾರಂಭಿಸುತ್ತಿದ್ದರು. ಬರುಬರುತ್ತಾ ಅದು ವಿಪರೀತಕ್ಕೆ ತಿರುಗಿತ್ತು. 'ಆ' ಸ್ಥಿತಿಗೆ ಹೋದಾಗ ಎದುರಿಗಿದ್ದವರ ಮೇಲೆ ಹರಿಹಾಯಲಾರಂಭಿಸಿದರು. ಕೊನೆಗೆ ನಾನಾ ಜಪ-ತಪಾದಿ ಮಂತ್ರ-ಪೂಜೆಗಳಿಂದ ಅವರನ್ನು ಒಂದು ಹಂತಕ್ಕೆ ಸುಧಾರಿಸಿದರಂತೆ.

ಅವರು ಈಗಲೂ ಹಾಗೇ ಇದ್ದಾರೆ. ಚೆನ್ನಾಗಿ ಮಾತನಾಡುತ್ತಿರುವವರ ಧಾಟಿ ಇದ್ದಕ್ಕಿದ್ದಂತೆಯೇ ಬದಲಾಗಿಬಿಡುತ್ತದೆ. ಒಮ್ಮೆಗೇ ವಿಚಿತ್ರವಾದ ನಗು, ಸ್ವರದಲ್ಲೊಂದು ಗಡಸುತನ ಬಂದುಬಿಡುತ್ತದೆ. ಆ ಇಳಿವಯಸ್ಸಿನ ದೇಹದಲ್ಲೂ ಅಗಾಧವಾದ ಶಕ್ತಿ ಅದೆಲ್ಲಿಂದ ಬರುತ್ತದೋ ಏನೋ, ಅಪ್ರಿಯವಾಗಿ ಮಾತನಾಡಿದವರ ಹಾಗೂ ತಡೆಯಲು ಬಂದವರ ಮೇಲೆ ಧಾಳಿ ಮಾಡುತ್ತಾರೆ. ಒಮ್ಮೆ ಅವರು ಒಳಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಹೊರಗೆ ಅವರ ಸಂಬಂಧಿಕರಲ್ಲೇ ಒಬ್ಬರು 'ಭೂತ-ಪ್ರೇತ ಎಂತದೂ ಇಲ್ಲೆ. ಎಲ್ಲ ಬರೀ ನಾಟ್ಕ!' ಅಂದರಂತೆ. ಒಳಗಿದ್ದ ಯಾರಿಗೂ ಕೇಳಿಸದ್ದು ಅವರಿಗೆ ಮಾತ್ರ ಹೇಗೆ ಕೆಳಿಸಿತೋ ಏನೋ,  'ಏನೋ ಅಂದೆ? ಇನ್ನೊಂದ್ಸಲ ಹೇಳು ನೋಡಣ' ಎನ್ನುತ್ತಾ ಸೀರೆ ಎತ್ತಿಕಟ್ಟಿ ನುಗ್ಗಿಬಂದೇಬಿಟ್ಟರು. ಕಕ್ಕಾಬಿಕ್ಕಿಯಾದ ಆ ಆಸಾಮಿ ಒಂದೇ ನೆಗೆತಕ್ಕೆ ಬೇಲಿ ಹಾರಿ ತಮ್ಮ ಮನೆಯತ್ತ ಓಟ ಕಿತ್ತರು!
                        ******************

ಭಯದ ಕಣ್ಣಿಗೆ ಪ್ರತಿಯೊಂದೂ ಭೂತವೇ. ಉದಾಹರಣೆಗೆ ನಮಗೆಲ್ಲ ನಮ್ನಮ್ಮ ಬಾಸ್ ಗಳು ದೆವ್ವದಂತೆ ಕಾಣುವುದು ಯಾಕೆ ಹೇಳಿ? ಒಳಗೆಲ್ಲೋ ಅವರಮೇಲಿರುವ ಭಯದಿಂದ ತಾನೇ? ಇತ್ತೀಚೆಗೆ ಭೂತಗಳ ಚೇಷ್ಟೆ ಕಡಿಮೆಯಾಗಿದೆ ಅಂತ ನಾವೆಲ್ಲ ನಿರಾಳರಾಗಿದ್ದೇವೆ ನಿಜ; ಆದರೆ ಯಾರಿಗೆ ಗೊತ್ತು, ಅವೂ ಸಹಾ ನಮ್ಮಂತೇ 'ಅಪ್ಡೇಟ್' ಆಗಿ ಕತ್ತಲ ಸ್ಮಶಾನಗಳಿಂದ, ಪಾಳುಬಿದ್ದ ಬಂಗಲೆಗಳಿಂದ ಹೊರಬಂದು ಈ ರಾಜಕಾರಣಿಗಳ, ಭ್ರಷ್ಟ ಅಧಿಕಾರಿಗಳ, ಆಫೀಸಿನ ಬಾಸ್ ಗಳ ದೇಹಸೇರಿ 'ಆಧುನಿಕ' ರೀತಿಯಲ್ಲಿ ನಮ್ಮನ್ನು ಕಾಡುತ್ತಿರಬಹುದಲ್ಲವೇ?!

ಭೂತಗಳ ನಾಡಾಗಿದ್ದ ನಮ್ಮ ಅಜ್ಜನಮನೆಯಲ್ಲಿ ನಾನು ಬೇಸ್ತುಬಿದ್ದ ಈ ಕೆಳಗಿನ ಕಥೆಯ ಮೂಲಕ ನನ್ನೀ ಲೇಖನವನ್ನು ಮುಗಿಸುತ್ತೇನೆ.

ಸುಮಾರು ಹದಿನೈದು ವರ್ಷಗಳ ಕೆಳಗೆ, ತೀರಿಹೋದ ಅಜ್ಜಿಯ ಅಪರಕರ್ಮಗಳಿದ್ದುದರಿಂದ ಅಮ್ಮ ಹಾಗೂ ಅವಳ ಅಣ್ಣ, ತಂಗಿಯರೆಲ್ಲ ಅಜ್ಜನ ಮನೆಯಲ್ಲಿ ಒಟ್ಟಾಗಿದ್ದರು. ಒಳಗೆ ವಿವಿಧ ಕ್ರಿಯಾಕರ್ಮಗಳು ನಡೆಯುತ್ತಿದ್ದರೆ ಮಕ್ಕಳಾದ ನಾವು ಹೊರಗಡೆ ಆಡಿಕೊಳ್ಳುತ್ತಿದ್ದೆವು. ಭೂತಗಳ ಬಗ್ಗೆ ಎಷ್ಟೇ ಭಯವಿದ್ದರೂ ಹಗಲಿಡೀ ನಾವು ಆಡುತ್ತಿದ್ದುದು ಭೂತದ ಆಟಗಳನ್ನೇ. ರಾತ್ರೆಯಾದರೆ ಎಲ್ಲರೂ ಒಂದು ಕೋಣೆಯಲ್ಲಿ ಒಟ್ಟಾಗಿ ಭೂತದ ಕಥೆಗಳನ್ನು ಹೇಳುವ ಸ್ಪರ್ಧೆಯನ್ನೇ ಏರ್ಪಡಿಸುತ್ತಿದ್ದೆವು. ಒಬ್ಬರಿಗಿಂತ ಒಬ್ಬರು ಭಯಾನಕ, ಭೀಭತ್ಸಕರವಾದ ಭೂತಗಳ ಕಥೆ ಹೇಳುತ್ತಾ, ನಾವು ಸೃಷ್ಟಿಸಿದ ಪ್ರೇತಗಳನ್ನು ನೆನೆದು ನಾವೇ ಗಡಗಡ ನಡುಗುತ್ತಾ ಸ್ಪರ್ಧೆ ಮುಂದುವರಿಸಿತ್ತಿದ್ದೆವು.

ಆದಿನ ಮಧ್ಯಾಹ್ನವೂ ಅಂತಹದ್ದೇ ಆಟವೊಂದನ್ನ ಆಯೋಜಿಸಲಾಗಿತ್ತು. ಮನೆಯಿಂದ ಸ್ವಲ್ಪ ದೂರದಲ್ಲಿ ಅಡಿಕೆ ದಬ್ಬೆಯ ಹಳೆಯ ಬೇಲಿಗಳನ್ನು ಇರಿಸಿದ್ದರು. ಅಲ್ಲೇ ನಮ್ಮ ಆಟ ಶುರುವಾಯಿತು. ಆಟದ ಕಥೆ ಇಷ್ಟೇ. ಅದೊಂದು ಭೂತದ ಬಂಗಲೆ. ನಾವು ಹೇಗೋ ಅದರೊಳಗೆ ಸಿಕ್ಕಿಕೊಳ್ಳುತ್ತೇವೆ. ಭೂತ ನಮ್ಮನ್ನು ಕಾಡಿಸುತ್ತದೆ. ಕೊನೆಗೆ ಕಥೆಯ ಹೀರೋ ಬಂದು ಭೂತವನ್ನು ಸಾಯಿಸಿ (!!) ನಮ್ಮನ್ನೆಲ್ಲಾ ಕಾಪಾಡುತ್ತಾನೆ.

ಪಾತ್ರಗಳ ಹಂಚಿಕೆ ಶುರುವಾಯಿತು. ಒಬ್ಬಳಿಗೆ ಮುಖಕ್ಕೆ ಭೂತದಂತೆ ಬಿಳೀ ಬಟ್ಟೆ ಹೊದಿಸಿ ನಿಲ್ಲಿಸಲಾಯಿತು. ಮಾತಿನಲ್ಲಿ ಜೋರಿನವನಾದ, ನನ್ನ ದೊಡ್ಡ ಮಾವನ ಮಗ ಎಲ್ಲರನ್ನೂ ಕಾಪಾಡುವ ಹೀರೋ ಆಗಿ ಕೈಯ್ಯಲ್ಲೊಂದು ಮಂತ್ರದಂಡ ಹಿಡಿದು ನಿಂತ. ಉಳಿದವರೆಲ್ಲರೂ ದಾರಿ ತಪ್ಪಿದವರಾಗಿ ಬೇಲಿಯ ಬಂಗಲೆಯೊಳಗೆ ಕುಳಿತೆವು. ಆಟ ಇನ್ನೇನು ಆರಂಭವಾಗಬೇಕು.

"ಅಲ್ನೋಡಿ ಅಲ್ಲಿ.... ದೆವ್ವ!"
ತಂಗಿ ಕೈ ತೋರಿಸಿದ ದಿಕ್ಕಿನತ್ತಲೇ ಎಲ್ಲರೂ ನೋಡಿದೆವು. ಕುಳ್ಳಗೆ ದಪ್ಪಗಿರುವ, ಕೊರಳಲ್ಲಿ ಮೂಳೆಯ ಮಾಲೆ ಧರಿಸಿರುವ ಭಯಾನಕ ದೆವ್ವವೊಂದು ವಿಕಾರವಾಗಿ ಬಾಯಿ ತೆರೆದುಕೊಂಡು ನಮ್ಮತ್ತಲೇ ನಡೆದು ಬರುತ್ತಿತ್ತು!!!

ಅಷ್ಟೇ! ಕಥೆಯಲ್ಲಷ್ಟೇ ಬರಬೇಕಿದ್ದ ದೆವ್ವ ಹೀಗೆ ಭೀಕರ ರೂಪದಲ್ಲಿ ಕಣ್ಣೆದುರೇ ಬರುತ್ತಿರುವುದನ್ನು ನೋಡಿ ಕಕ್ಕಾಬಿಕ್ಕಿಯಾದ ಪಾತ್ರಧಾರಿಗಳೆಲ್ಲಾ ಕಣ್ಮುಚ್ಚಿ ತರೆಯುವುದರೊಳಗೆ ಸತ್ತೆನೋ ಕೆಟ್ಟೆನೋ ಎಂದು ಎದ್ದು ಓಡತೊಡಗಿದೆವು. ದೆವ್ವದ ಜೊತೆ ಬಡಿದಾಡುವ 'ಹೀರೋ' ಆಗಿದ್ದ ಮಾವನ ಮಗ ಕೈಯ್ಯಲ್ಲಿದ್ದ ದಂಡವನ್ನ ಎತ್ತಲೋ ಬಿಸಾಡಿ ಎಲ್ಲರಿಗಿಂತಲೂ ಮುಂದೆ ಓಡುತ್ತಿದ್ದ. "ಕಾಪಾಡೀsss..." ಎಂದು ಕಿರುಚುತ್ತಾ  ಮನೆಯ ಆವರಣ ತಲುಪಿ ಒಮ್ಮೆ ತಿರುಗಿ ನೋಡಿದರೆ ದೆವ್ವ ಅಟ್ಟಹಾಸ ಮಾಡುತ್ತಾ ಗೇಟು ತೆರೆದುಕೊಂಡು ಒಳಗೇ ಬರಿತ್ತಿದೆ! ಮತ್ತಷ್ಟು ಹೆದರಿದ ಪುಟ್ಟ ಹುಡುಗಿಯೊಬ್ಬಳು ಜೋರಾಗಿ ಕಿರುಚಿಕೊಂಡುಬಿಟ್ಟಳು. ಅಷ್ಟರಲ್ಲಿ ಒಳಗಿಂದ ಓಡಿಬಂದ ಚಿಕ್ಕಮ್ಮ ಒಂದೊಂದು ಬಾರಿಸಿ ಎಲ್ಲರನ್ನೂ ಈ ಲೋಕಕ್ಕೆ  ಇಳಿಸಿದರು.

ಆಗಿದ್ದೇನೆಂದರೆ, ಯಾವುದೋ ಶಾಸ್ತ್ರದ ಪೂರೈಕೆಗಾಗಿ ಹೊಳೆಗೆ ಹೋಗಿದ್ದ ನಮ್ಮ ಮಾವ ಬಿಳಿಬಣ್ಣದ ತುಂಡು ಪಂಚೆ ತೊಟ್ಟು ನಡೆದು ಬರುತ್ತಿದ್ದರು. ಸದಾ ಬಾಯಿಗೆ ಹಲ್ಸೆಟ್ ಹಾಕಿಕೊಳ್ಳುತ್ತಿದ್ದ ಅವರು ಇಂದು ಹಾಗೇ ಬೊಚ್ಚುಬಾಯಿ ಬಿಟ್ಟುಕೊಂಡು ಬರುತ್ತಿದ್ದರಲ್ಲದೇ ಹೊಳೆಯ ಕೆಸರಿನಲ್ಲಿ ಕಾಲು ಜಾರಿದ್ದರಿಂದ ಮೈ ಮಣ್ಣಾಗಿತ್ತು. ಸೊಂಟ ಹಾಗೂ ಕೊರಳಲ್ಲಿ ಕೊಳಕಾದ ತುಂಡು ಪಾಣಿ ಪಂಚೆ, ಕತ್ತಲ ಗುಹೆಯೊಂದರ ದ್ವಾರದಂತಿರುವ ಬೊಚ್ಚುಬಾಯಿ, ಬೊಕ್ಕ ತಲೆ, ಕುಳ್ಳ ನಿಲುವು, ಕಪ್ಪು- ಗುಂಡು ದೇಹ.... ನಮ್ಮ ಕಲ್ಪನೆಯ ಭೂತಕ್ಕಿಂತ ಒಂದು ಕೈ ಹೆಚ್ಚೇ ಭಯಾನಕವಾಗಿ ಕಾಣುತ್ತಿದ್ದರು ನಮ್ಮ ಮಾವ. ಎಲ್ಲರೂ ಹೆದರಿದೆವಾದರೂ ಪುಣ್ಯಕ್ಕೆ ಯಾರಿಗೂ ಛಳಿ ಜ್ವರ ಬರಲಿಲ್ಲ. ಇಲ್ಲವಾದರೆ ಎಲ್ಲರೂ ಇನ್ನೊಂದು ಸುತ್ತು ಒದೆ ತಿನ್ನಬೇಕಾಗುತ್ತಿತ್ತು...!

('ಪ್ರತಿಲಿಪಿ ಕನ್ನಡ'ದಲ್ಲಿ ಪ್ರಕಟಿತ)

ಸೋಮವಾರ, ಏಪ್ರಿಲ್ 3, 2017

ಹೀಗೊಬ್ಬ ಶಹಜಹಾನ್...

ಇಲ್ಲೊಬ್ಬ ಷಹಜಹಾನ್
ಒಬ್ಬನೇ ಮಾತನಾಡುತ್ತಾನೆ;
ಯಾವುದೋ ತಿರುವಿನಲಿ ಗಂಟೆಗಟ್ಟಲೆ ನಿಂತು,
ನಿಟ್ಟುಸಿರಿಟ್ಟು ಮರಳುತ್ತಾನೆ.
ತನ್ನ ಹಾಡಿಗೆ ತಾನೇ ಬಿಕ್ಕಿ
ಏನೇನೋ ಗೀಚುತ್ತಾನೆ;
ಮುಮ್ತಾಜ್ ಬಂದಂತೆ ಕನಸು ಕಂಡು
ಬಾಗಿಲು ತೆರೆದು ಕಾಯುತ್ತಾನೆ...

ಅವಳು ಸ್ಪರ್ಷಿಸಿದ ಕೊರಡು ಕೂಡ
ಹೂವಾಗಿ ಅರಳುತ್ತದೆ ಅವನೊಳಗೆ;
ಅವಳು ನಿಂತ, ಕುಳಿತ, ಮಾತನಾಡಿದ ಜಾಗಗಳೆಲ್ಲಾ
ತಾಜಮಹಲುಗಳು!
ಹೀಗೆ ನೆನಪಿಗೊಂದರಂತೆ ಗೋರಿ ಕಟ್ಟುತ್ತಾ
ಮರೆಯುವ ನೆಪದಲ್ಲಿ
ಅಮರವಾಗಿಸುತ್ತಿದ್ದಾನೆ...

ಮುಮ್ತಾಜ್ ಬದುಕಿಯೇ ಇದ್ದಾಳೆ!
ಅವನನ್ನು ಕಂಡೂ ಕಾಣದಂತೆ
ತನ್ನ ಪಾಡಿಗೆ ತಾನಿದ್ದಾಳೆ;
ಅವಳ ಪಾಲಿಗವನು ಎರೆಡನೆಯ ಷಹಜಹಾನ್!
ಹಿಂದೊಬ್ಬ ಛದ್ಮವೇಷದ ಷಹಜಹಾನನನ್ನ ನಂಬಿ
ತಾನೇ ಕಟ್ಟಿದ್ದ 'ಮಹಲು'
ಒಡೆದು ಚೂರಾದಾಗಲೇ ಅವಳಿಗೆ ಅರ್ಥವಾಗಿದ್ದು-
'ತಾಜಮಹಲಲ್ಲಿ ಬದುಕುವುದಕ್ಕಾಗುವುದಿಲ್ಲ!'
ಅದಕ್ಕೇನಿದ್ದರೂ
ಬಾದ್ ಷಾನ ಅರಮನೆಯೇ ಸರಿ.

ಪಾಪ ಈ ನಿಜಷಹಜಹಾನ್;
ಬಂದೇ ಇರದವಳ ಕಳುಹಿಸಲು ಮನಸ್ಸಾಗದೇ
ತನ್ನದೇ ಗೋರಿ ಕಟ್ಟಿಕೊಳ್ಳುತ್ತಾ
ಅವಳ ಹೆಸರಿಡುತ್ತಿದ್ದಾನೆ...

('ಮಂಗಳ'ದಲ್ಲಿ ಪ್ರಕಟಿತ)

ಹೀಗೊಂದು ಪ್ರೀತಿಯ ಕಥೆ...

ಮಲೆನಾಡ ಗಂಡಿಗೆ ತುಳುನಾಡ ಹೆಣ್ಣೆಡೆಗೆ
ಹೀಗೊಂದು ಪ್ರೇಮವಂತೆ..
ಹೇಳುವುದೋ, ತಾಳುವುದೋ ಅವನ ಚಿಂತೆ!

ಕಡಲತಡಿಯ ಊರವಳು, ಮಾತಿನಲಿ ಬಲು ಜೋರು,
ತನ್ನದೋ ಮೌನರಾಗ!
ಪ್ರೀತಿಯಲಿ ಮಾತೇಕೆ? ಕಿರುನಗೆಯೆ ಸಾಕದಕೆ
ಎನ್ನುವುದು ಹೃದಯ ಆಗ!

ತನ್ನೂರ ಸೂರ್ಯನೂ ಘಾಟಿಯಿಳಿದು ಜಾರುವನು,
ತುಳುನಾಡ ಕಡಲ ಮಡಿಲಿಗೆ..
ತನ್ನಂತೆ ಅವನಿಗೂ ಪ್ರೇಮವಂತೆ!

ಮಲೆನಾಡ ಹಸಿರಿಗೆ ಹನಿಸುವ ಮಳೆಮೋಡ
ತೇಲಿಬಂತು ಹೇಳು ಎಲ್ಲಿಂದ?
ಸುರಿದ ಮಳೆ ಹನಿಯೆಲ್ಲ ಹೊಳೆಯಾಗಿ ಓಡುವುದು
ಮತ್ತದೇ ಕಡಲ ಕರೆಯಿಂದ!

ತುಳುನಾಡು - ಮಲೆನಾಡ ಬೀಗ-ನೆಂಟ ಸಂಬಂಧ
ಇಂದು ನೆನ್ನೆಯದಲ್ಲ;
ಕಡಲಿಗೂ ಕಾಡಿಗೂ 'ಮೇಘ' ದೂತ!

ಬೇಸರದ ಸಂಜೆಯಲಿ ಆಗುಂಬೆ ಗಿರಿಯೇರಿ
ಹುಡುಕುವನು ಕಡಲಿನೂರ;
ತೀರದ ಮರಳಿನಲಿ, ಓಡುವ ಅಲೆಯ ಜೊತೆ
ಆಡುತಿಹ ಅವಳ ಊರ!

ತೆಂಕಣದ ತೋಟದಲಿ ಅರಳಿನಿಂತ ಹೂವೊಂದು
ತುಂಟಘಮವ ಬೀರಿ ನಕ್ಕಿದೆ;
ಬಡಗಣದಿ ಭ್ರಮರವು ನಿದಿರೆಮರೆತಿದೆ.

('ಮಂಗಳ'ದಲ್ಲಿ ಪ್ರಕಟಿತ)

ಸೋಮವಾರ, ಮಾರ್ಚ್ 27, 2017

ಕೆಲಸ ಮಾಡಿಸುವುದಕ್ಕೆ ಉರಿಗೋಪವೇ ಆಗಬೇಕೇ?

"ಒಂದೊಳ್ಳೆ ಕೆಲಸ ಸಿಗಬೇಕಂದ್ರೆ ಪುಣ್ಯ ಮಾಡಿರಬೇಕು; ಅದೇ ಒಳ್ಳೇ ಬಾಸ್ ಸಿಗಬೇಕಂದ್ರೆ ಹಿಂದಿನ ಜನ್ಮದ ಪುಣ್ಯ ಬೇಕು!"

ಈ ಮಾತು ಕೇಳಿ ಸಾಮಾನ್ಯರು ನಗಬಹುದು. ಆದರೆ ಇಂದಿನ ಐಟಿ ಹಾಗೂಕಾರ್ಪೋರೇಟ್ ಪ್ರಪಂಚದಲ್ಲಿ ದುಡಿಯುತ್ತಿರುವ ಒಬ್ಬನೇ ಒಬ್ಬನೂ ಈ ವಾಕ್ಯ ಸುಳ್ಳೆಂದು ಅಲ್ಲಗಳೆಯಲು ಸಾಧ್ಯವೇ ಇಲ್ಲ! ಹಾಗಿದೆ ಔದ್ಯೋಗಿಕ ಬದುಕಿನಲ್ಲಿ ಬಾಸ್ ಗಳ ಪಾತ್ರ.

ಮೊದಲು ಮ್ಯಾನೇಜರ್/ಬಾಸ್ ಬಗ್ಗೆ ತಿಳಿದುಕೊಳ್ಳೋಣ. ಆಧುನಿಕ ಜಗತ್ತಿನ, ಪೈಪೋಟಿಯನ್ನೇ ಉಸಿರಾಗಿಸಿಕೊಂಡು ಚಲಿಸುತ್ತಿರುವ ಖಾಸಗೀ ವಲಯದಲ್ಲಿ ಯಾವುದೇ ವಿಭಾಗದಲ್ಲಿ 'ಬಾಸ್' ಆಗುವುದೆಂದರೆ ತಮಾಷೆಯ ಮಾತಲ್ಲ. ಇಲ್ಲಿ ಯಾರದೋ ಕೈ 'ಬೆಚ್ಚಗೆ' ಮಾಡುವುದರಿಂದ ಅಥವಾ ಯಾವುದೋ ಒಂದು ಜಾತಿಯಲ್ಲಿ ಜನಿಸುವುದರಿಂದ ಮ್ಯಾನೇಜರ್ ಗಳಾಗುವದಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ವರ್ಷಗಳ ಅನುಭವ ಬೇಕು. ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಚುರುಕುತನ ಬೇಕು. ಕೊರಡನ್ನು ತೇಯ್ದು ಗಂಧವನ್ನು ತೆಗೆಯುವ ಉಪಾಯ ಗೊತ್ತಿರಬೇಕು. ನುಗ್ಗಿ ಬರುವ ಅಲೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ, ಅದರಲ್ಲೇ ಕೊಳೆ ತೊಳೆದುಕೊಳ್ಳುವ ಜಾಣತನವೂ ಇರಬೇಕು! ಆಗಲೇ ಒಬ್ಬ ಸಾಮಾನ್ಯ ಕೆಲಸಗಾರನೊಬ್ಬ  'ಬಾಸ್' ಆಗಲು ಸಾಧ್ಯ. ಆದರೆ ಇಷ್ಟಲ್ಲಾ ದೊಡ್ಡ ಗುಣಗಳನ್ನು ಮೈಗೂಡಿಸಿಕೊಳ್ಳುವ ಭರದಲ್ಲಿ ತನ್ನ ಕೈಕೆಳಗಿನವರನ್ನು ಹೇಗೆ ನಡೆಸಿಕೊಳ್ಳಬೇಕು, ಅವರ ಜೊತೆ ಹೇಗೆ ನಡೆದುಕೊಳ್ಳಬೇಕೆಂಬ 'ಸಣ್ಣ' ವಿಷಯವನ್ನವರು ಮರೆಯುತ್ತಿದ್ದಾರಾ?

ಬಹುಷಃ ಹೆಚ್ಚಿನ ಉತ್ತರಗಳು 'ಹೌದು' ಎಂದೇ ಬರುತ್ತವೆ. ಒಂದು ತಂಡವನ್ನಾಗಲೀ, ವ್ವವಸ್ಥೆಯನ್ನಾಗಲೀ ಮುನ್ನಡಿಸಬೇಕೆಂದರೆ ಅಲ್ಲಿ ಒತ್ತಡ ಹಾಕಬೇಕು, ಅಧಿಕಾರಯುತವಾದ ಅಪ್ಪಣೆಯಿರಬೇಕು, ತಪ್ಪುಗಳನ್ನು ತಡೆಯುವ ಗದರಿಕೆಯಿರಬೇಕು.... ಇದೆಲ್ಲಾ ನಿಜವೇ. ಆದರೆ ಎಷ್ಟರಮಟ್ಟಿಗೆ? ಒತ್ತಡವೇ ವಾತಾವರಣವಾಗಿಬಿಟ್ಟರೆ? ಪ್ರತೀ ಮಾತೂ ಗದರಿಕೆಯೇ ಆಗಿಹೋದರೆ? ಪ್ರತಿಯೊಂದು ಕೆಲಸವನ್ನೂ ನಡುಗುವ ಕೈಯ್ಯಲ್ಲೇ ಮಾಡುವಂತಾದರೆ? ಆಗ ಉದ್ಯೋಗವೆನ್ನುವುದು ಕೇವಲ ಯಂತ್ರಗಳೊಂದಿಗೆ ಒಡನಾಡುವ 'ಕರ್ಮ'ವಾಗುತ್ತದೇ ಹೊರತು ಮನಸ್ಸಿಗೆ ನೆಮ್ಮದಿಕೊಡುವ 'ಕಾಯಕ'ವಾಗುವುದೇ ಇಲ್ಲ!

ಐಟಿ,ಕಾರ್ಪೋರೇಟ್ ಉದ್ಯೋಗಿಗಳ ಬದುಕೆನ್ನುವ ದೂರದ ಬೆಟ್ಟದಲ್ಲಿ ಅದೆಷ್ಟೋ ಕಲ್ಲುಮುಳ್ಳುಗಳು. ಬೆಳಗ್ಗೆ ಎದ್ದೊಡನೆಯೇ ತಯಾರಾಗಿ ಓಡಬೇಕು. ರುಚಿಯಿರಲೇಬೇಕು ಎಂದೇನೂ ಇಲ್ಲದ ಬೆಳಗಿನ ಉಪಹಾರ; ತಡವಾದರೆ ಅದೂ ಇಲ್ಲ. ಚಲಿಸುವುದಕ್ಕಿಂತ ನಿಲ್ಲುವುದೇ ಜಾಸ್ತಿಯಿರುವ ಟ್ರಾಫಿಕ್ನಲ್ಲಿ, ಸಂದಣಿಭರಿತ ಬಸ್ನಲ್ಲಿ ಒಂಟಿ ಕಾಲಲ್ಲಿ ಎಲ್ಲೋ ಹುಟ್ಟಿ ಎಲ್ಲೋ ಚಾಚಿಕೊಂಡ ತೆಂಗಿನಮರಗಳಂತೆ ನಿಂತು ತಮ್ಮ ಪರ್ಸ್, ಮೊಬೈಲ್ ಗಳನ್ನು ಕಳ್ಳರಿಂದ ಕಾಪಾಡಿಕೊಳ್ಳುತ್ತಾ ಆಫೀಸು ತಲುಪಬೇಕು. (ದಿನದ ಮೂರ್ನಾಲ್ಕು ಗಂಟೆಗಳನ್ನು ಅತ್ತ ಆಫೀಸಿನಲ್ಲೂ ಅಲ್ಲದೇ, ಇತ್ತ ಮನೆಯಲ್ಲೂ ಅಲ್ಲದೇ ನಡುದಾರಿಯ ಟ್ರಾಫಿಕ್ನಲ್ಲಿ ತೂಕಡಿಸುತ್ತ ವ್ಯಯಿಸಬೇಕಾದ ಕರ್ಮ ಎಷ್ಟೋ ಜನರಿಗಿದೆ) ದಿನವಿಡೀ ಕಂಪ್ಯೂಟರ್ ಒಳಗಿನ ಲೆಕ್ಕಾಚಾರದ ಆಳದಲ್ಲಿ ಕೈಕಾಲು ಬಡಿಯಬೇಕು. ಮಧ್ಯದಲ್ಲಿ ಮತ್ತದೇ ರುಚಿ-ಶುಚಿಗಳರಿಯದ ಹೊರಗಿನೂಟ. ಸಂಜೆ ಮತ್ತೆ ಟ್ರಾಫಿಕ್ ಎನ್ನುವ ಸಮುದ್ರವನ್ನು ದಾಟಿ ಮನೆ/ರೂಮು ತಲುಪುವಷ್ಟರಲ್ಲಿ ಜೀವ 'ಹಾಸಿಗೆ ಮೇಲೆ ಬಿದ್ದರೆ ಸಾಕು' ಎನ್ನುವಷ್ಟು ದಣಿದುಹೋಗಿರಿತ್ತದೆ. ಆರು ದಿನಗಳು ಕಾದಮೇಲೆ ಸಿಕ್ಕ ವೀಕೆಂಡ್ ಕೇವಲ ಬಟ್ಟೆ ತೊಳೆದು,  ಕಸ-ಜಿರಲೆಗಳನ್ನು ಹೊಡೆದಟ್ಟಿ, ಊಟ ತಿಂಡಿ ಮುಗಿಸುವಷ್ಟರಲ್ಲೇ ಮುಗಿದು ಹೋಗುತ್ತದೆ. ಇನ್ನು ನೈಟ್ ಡ್ಯೂಟಿ ಮಾಡುವವರಂತೂ ಈ ಲೋಕದವರಾಗಿಯೇ ಉಳಿದಿರುವುದಿಲ್ಲ. ನಿದ್ರೆಯ ಸಮಯದಲ್ಲಿ ಕೆಲಸ, ಕೆಲಸದ ಸಮಯದಲ್ಲಿ ನಿದ್ರೆ. ಯಾವುದಕ್ಕೂ ನಿಗದಿತ ಸಮಯವಿಲ್ಲದೇ ಯಾವುದು ತಿಂಡಿಯೋ, ಯಾವುದು ಊಟವೋ,  ಯಾವುದು ನಿನ್ನೆಯೋ, ಯಾವುದು ನಾಳೆಯೋ...ಎಲ್ಲಾ ಅಯೋಮಯವಾಗಿಹೋಗಿರುತ್ತದೆ! 

ಹೀಗೆ ಜೀವನ ನಡೆಸುತ್ತಿರುವ ಲಕ್ಷಾಂತರ ಜನರು ತಮ್ಮೀ ಯಾಂತ್ರಿಕತೆಯ ಬಗ್ಗೆ ಸಣ್ಣದಾಗಿ ದೂರುತ್ತಾರಾದರೂ ತಮ್ಮ ಪಾಲಿನ ಜವಾಬ್ದಾರಿಗಳನ್ನು ಪ್ರೀತಿಯಿಂದಲೇ ನಿರ್ವಹಿಸಿಕೊಂಡು ಹೋಗುತ್ತಾರೆ. ಅರ್ಧರಾತ್ರಿಯ ತನಕ ಗೇಯ್ದರೂ ಸರಿಯೇ, ಮಾಡಬೇಕಾದುದನ್ನು ಮಾಡಿಯೇ ತೀರುತ್ತಾರೆ. ವಿಶ್ರಾಂತಿಗೆಂದು ಇರುವ ಒಂದೇ ಒಂದು ಭಾನುವಾರವನ್ನೂ ಕೆಲವೊಮ್ಮೆ ಉದಾರವಾಗಿ ಬಿಟ್ಟುಕೊಡುತ್ತಾರೆ. ಮುಖದಲ್ಲಿ ಕಾಣುವ ಬೇಸರ ಮಾಡುವ ಕೆಲಸದಲ್ಲೂ ಪ್ರತಿಫಲಿಸಲು ಬಿಡುವುದಿಲ್ಲ. ಆದರೆ ಔದ್ಯೋಗಿಕ ಜೀವನವೊಂದು ಯಾವಾಗ ನರಕವೆನಿಸತೊಡಗುತ್ತದೆ ಗೊತ್ತಾ? ಯಾವಾಗ ಕೆಲಸ ಮಾಡುವ ಜಾಗದಲ್ಲಿ ನೆಮ್ಮದಿಯಿರುವುದಲ್ಲವೋ, ಗೌರವವಿರುವುದುಲ್ಲವೋ, ಮಾಡಿದ ಕೆಲಸಕ್ಕೊಂದು ಬೆಲೆ ಅನ್ನುವುದು ದೊರೆಯುವುದಿಲ್ಲವೋ ಆಗ.

ಎಷ್ಟೋ ಬಾರಿ ದಿನವಿಡೀ ಕುಳಿತು ಶ್ರಧ್ದೆಯಿಂದ ಮಾಡಿ ಮುಗಿಸಿದ ಹತ್ತಾರು 'ಎಫರ್ಟ್'ಗಳು ಚಿಕ್ಕದೊಂದು 'ಗುಡ್' ಎಂಬ ಮೆಚ್ಚುಗೆಯನ್ನೂ ಪಡೆಯುವುದಿಲ್ಲ. ಆದರೆ ದಿನದ ಕೊನೆಯಲ್ಲಿ ಮಾಡಿದ ಸಣ್ಣದೊಂದು ತಪ್ಪು ಮೇಲಾಧಿಕಾರಿಯ ಕ್ಯಾಬಿನ್ ತನಕ ಎಳೆದುಬಿಡುತ್ತದೆ. ಚಿಕ್ಕ ಗೌರವವೂಬಿಲ್ಲದೇ ತಾರಾಮಾರೀ ಬೈಗುಳಗಳಿಗೊಳಗಾಗುತ್ತದೆ. ಇಲ್ಲಿ ತನ್ನ 'ಸರಿ' ಗಳಿಗಿಂತ 'ತಪ್ಪು'ಗಳೇ ಹೆಚ್ಚು ಗುರುತಿಸಲ್ಪಡುತ್ತವೆ ಎಂಬ ಭಾವನೆ ಒಮ್ಮೆ ಬಂದುಬಿಟ್ಟರೆ ಮುಗಿದೇ ಹೋಯಿತು, ಆ ವಾತಾವರಣದ ಮೇಲೆ 'ನನ್ನದು' ಎನ್ನುವ ಪ್ರೀತಿ ಹುಟ್ಟುವುದಾದೇ ಇಲ್ಲ. ವರ್ಷವಿಡೀ ಗೇಯ್ದು, ತಮ್ಮ ಜೀವನದ ಅಮೂಲ್ಯ ಸಮಯ, ಬುದ್ಧಿ, ಶ್ರಮಗಳನ್ನೆಲ್ಲಾ ಕಂಪನಿಗಾಗಿ ವ್ಯಯಿಸಿ, ವರುಷದುದ್ದಕ್ಕೂ ಕಾದ 'ಸಂಬಳ ಏರಿಕೆ'ಯ ದಿನ ಆಸೆಯಿಂದ ಮೇಲಾಧಿಕಾರಿಯ ಕ್ಯಾಬಿನ್ ಹೊಕ್ಕಾಗ ಅವರು ನೀವು ವರುಷವಿಡೀ ಮಾಡಿದ ತಪ್ಪುಗಳನ್ನಷ್ಟೇ ಪಟ್ಟಿ ಮಾಡಿಕೊಂಡು ಕೂತಿದ್ದರೆ ಹೇಗಾಗಬೇಡ!?

ಕೆಲವು ಬಾಸ್ ಗಳೇಕೆ ಹಾಗಿರುತ್ತಾರೆ? ಎಲ್ಲರೂ ಎಲ್ಲರೂ ನೂರಕ್ಕೆ ನೂರು ಪರ್ಫೆಕ್ಟ್ ಆಗಿರಬೇಕೆಂಬ ಹಠಕ್ಕೋ? 'ಕ್ರೋಧಂ ಸರ್ವರ್ಥ ಸಾಧನಂ' ಎಂಬ ತಪ್ಪು ತಿಳುವಳಿಕೆಗೋ? ಬಹುಷಃ ಕಾರಣ ಅವರಿಗೂ ಗೊತ್ತಿರಲಿಕ್ಕಿಲ್ಲ. ಹೆಚ್ಚಿನಸಲ ಒಬ್ಬ ಉರಿಗೋಪದ ಬಾಸ್ ಕೈಕೆಳಗೆ ಪಳಗಿದ ಶಿಷ್ಯನೇ ಮುಂದೆ ಮತ್ತೊಬ್ಬ ಉರಿಗೋಪದ ಬಾಸ್ ಆಗಿ ರೂಪುಗೊಳ್ಳುತ್ತಾನೆ. 'ಅಂದು ನಾನು ಅನುಭವಿಸದ್ದರೆದುರು ಇದೇನೂ ಅಲ್ಲ' ಎನ್ನುವ ಭಾವನೆ ಬೇರೂರಿರುತ್ತದೋ ಅಥವಾ 'ಹೀಗೆ ನಡೆದುಕೊಳ್ಳುವುದೇ ಸರಿಯಾದ ರೀತಿ' ಎಂದುಕೊಂಡಿರುತ್ತಾರೋ ಗೊತ್ತಿಲ್ಲ. ಎಂದೋ ಯಾರೋ ಕಟ್ಟಿಸಿಕೊಂಡ ದಂಡ ಇಂದು ವಸೂಲಾಗುತ್ತಿರುತ್ತದೆ. ದುರಂತವೆಂದರೆ ಇಂದು ತನ್ನ ಕೈಕೆಳಗಿನವರ ಮೇಲೆ ಎಗರಾಡುವಾಗ ಅಂದು ತನ್ನ ಮೇಲಾಧಿಕಾರಿಯ ಕಡುಗೋಪದಿಂದ ತನಗೆಷ್ಟು ನೋವಾಗುತ್ತಿತ್ತೆಂಬುದು ಅವರಿಗೆ ನೆನಪಾಗುವುದೇ ಇಲ್ಲ! ಅಲ್ಲದೇ ಕೆಲವೊಮ್ಮೆ ಅನುಭವದ 'ಆಳ'ಕ್ಕಿಂತ ಹಿರಿತನದ 'ಎತ್ತರ'ವೇ ಹೆಚ್ಚಾಗಿ ಕೆಲಸಮಾಡತೊಡಗುತ್ತದೆ. ತನ್ನ ಮನದೊಳಗೇ ಹಾಕಿಕೊಂಡಿರುವ ಅಥವಾ ಹತ್ತಾರು ವರ್ಷಗಳಿಂದ ಆಚರಿಸುತ್ತಾ, ಆಚರಿಸುತ್ತಾ ಡಿಫಾಲ್ಟ್ ಆಗಿಹೋಗಿರುವ ಸಿದ್ಧಸೂತ್ರದಂತೇ ತನ್ನ ಕೈಕೆಳಗಿನವರೂ ನಡೆಯಬೇಕೆಂದು ಅದು ಬಯಸುತ್ತದೆ. 

ಹಾಗಂತ ಎಲ್ಲಾ ಮೇಲ್ವಿಚಾರಕರೂ ಹೀಗೇ ಅನ್ನಲಿಕ್ಕಾಗುವುದಿಲ್ಲ.  ಸಂಬಳ, ಪದವಿಗಳ ಬೇಧವಿಲ್ಲದೆ ಗೆಳೆಯನಂತೆ ನಡೆದುಕೊಳ್ಳುವವರಿದ್ದಾರೆ. 'ಏನ್ರೀ,  ಹೇಗಿದಾಳ್ರೀ ನಿಮ್ಮ ಗರ್ಲ್ ಫ್ರೆಂಡ್?" ಎಂದು ತಮಾಷೆಮಾಡುವ ಹಗುರ ಮನಸ್ಸಿನವರಿದ್ದಾರೆ. "ಇದೊಂದು ಶನಿವಾರ ವರ್ಕ್ ಮಾಡಿ ಆಯ್ತಾ?" ಎಂದು ಗೌರವಯುತವಾಗಿ ದುಡಿಸಿಕೊಳ್ಳುವ ಜಾಣರಿದ್ದಾರೆ. ಕೆಲಸದಾಚೆಗಿನ ವಿಚಾರಗಳನ್ನೂ ಚರ್ಚಿಸುತ್ತಾ ಮನಸ್ಸಿಗೆ ಹತ್ತಿರವಾಗುವವರಿದ್ದಾರೆ. ಇಂಥವರ ಮಾತನ್ನ ತೆಗೆದು ಹಾಕುವುದು ಎಂತಹವರಿಗೂ ಕಷ್ಟವೇ. ನನ್ನ ಪ್ರಯತ್ನಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ವ್ಯಕ್ತಿಯೊಬ್ಬ ನನ್ನ ತಪ್ಪುಗಳನ್ನೂ ಗುರುತಿಸಿದಾಗ ನಾನದನ್ನು ಸ್ವೀಕರಿಸುವ ರೀತಿಯೇ ಬೇರೆಯಾಗಿರುತ್ತದೆ. ಅವರು ತನ್ನ ಮೇಲೆ ಭರವಸೆಯಿಟ್ಟಿದ್ದಾರೆನ್ನುವುದನ್ನು ಅರಿತುಕೊಂಡ ಪ್ರತಿಯೊಬ್ಬನೂ ಹೆಚ್ಚೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾನೆ. ಆ ಭರವಸೆಯನ್ನು ಉಳಿಸಿಕೊಳ್ಳುವ ಹಾದಿಯಲ್ಲೇ ಯೋಚಿಸುತ್ತಾನೆ. 

ಕೆಲಸ ಮಾಡಿಸುವುದೇ ಒಬ್ಬರ ಕರ್ತವ್ಯವಾಗಿರುವಾಗ ಅದನ್ನು ಗೌರವಯುತವಾಗಿಯೇ ಮಾಡಿಸಬಹುದಲ್ಲ? ತಪ್ಪನ್ನು ತಿದ್ದುವ ರೀತಿ ಶಿಲ್ಪಿ ಉಳಿಯಿಂದ ಕೊಟ್ಟ ಏಟಿನಂತಿರಬೇಕಲ್ಲದೇ, ಚಾಲಕ ಚಾವಟಿಯಿಂದ ಕೊಟ್ಟ ಒದೆಯಂತಲ್ಲ ಅಲ್ವಾ? ತಿದ್ದಬೇಕು, ಬೆಳೆಯಲು ಬಿಡಬೇಕು. ಆ ಮೂಲಕ ನಾವು ಬೆಳೆಯಬೇಕು' ಎನ್ನುವ ಉದಾರಗುಣ ಹೊಂದಿರುವ ಬಾಸ್ ಸಿಕ್ಕಿದರೆಂದರೆ ಉದ್ಯೋಗ ಜೀವನದ ಅರ್ಧ ಕಷ್ಟಗಳು ಮುಗಿದಂತೆಯೇ.

(ಮಾರ್ಚ್ 2017ರ 'ನಿಮ್ಮೆಲ್ಲರ ಮಾನಸ'ದಲ್ಲಿ ಪ್ರಕಟವಾದ ಲೇಖನ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...