ಶನಿವಾರ, ಫೆಬ್ರವರಿ 3, 2018

ಬಾಬಣ್ಣನಂಗಡಿಯೆಂಬ ನಮ್ಮೂರ ಬಿಗ್ ಬಜಾರ್!



ಅಂಗಡಿ ಎಂದರೆ ಹೇಗಿರುತ್ತದೆ?

ನನಗೆ ಈ ಜೆನರಲ್ ಸ್ಟೋರ್ಸ್ ಗೊತ್ತು, ಫ್ಯಾಕ್ಟರಿ ಔಟ್ಲೆಟ್ ಗೊತ್ತು. ಮಾಲ್ ಗೊತ್ತು. ರಿಲಯನ್ಸ್ ಡಿಜಿಟಲ್, ರಿಟೈಲರ್ ಶಾಪ್, ಬಿಗ್ ಬಜಾರ್, ಸೂಪರ್ ಮಾರ್ಕೆಟ್, ಬ್ರ್ಯಾಂಡ್ ಫ್ಯಾಕ್ಟರಿ ಎಲ್ಲವೂ ಗೊತ್ತು. ಇದ್ಯಾವುದಿದು ಅಂಕಲ್ ಅಂಗಡಿ? ಅದು ರಿಲಯನ್ಸ್ ದಾ ಇಲ್ಲಾ ಒರಾಯನ್ ದಾ?

ಮುಂದಿನ ಪೀಳಿಗೆಯ ಚಿಲ್ಟಾರಿಗಳು ಹೀಗಂತ ಕೇಳಿದರೆ ಬೆಚ್ಚಿಬೀಳಬೇಡಿ. ಈಗ ಚಿಕ್ಕ ಚಿಕ್ಕ ನಗರಗಳಲ್ಲೂ ಸೂಪರ್ ಮಾರ್ಕೆಟ್, ಬ್ರಾಂಡ್ ಫ್ಯಾಕ್ಟರಿ, ಫ್ಯಾಶನ್ ಸ್ಟೋರ್ ಗಳು ತುಂಬಿಕೊಳ್ಳುತ್ತಿರುವುದನ್ನು ನೋಡಿದರೆ 'ಅಂಗಡಿ' ಎನ್ನುವ ನಾವು-ನೀವು ನಿಂಬೆಹುಳಿ ಚಾಕ್ಲೇಟ್ ಕೊಳ್ಳುತ್ತಿದ್ದ ಆ ಪುಟ್ಟ ಮಾಯಾಮಳಿಗೆ ಮಾಯವಾಗಿ ಹೋಗುವ ದಿನ ದೂರವಿಲ್ಲವೇನೋ ಅನಿಸುತ್ತದೆ. ಹಾಗಂತ ಇಲ್ಲಿನ ತನಕದ ಪೀಳಿಗೆಯಲ್ಯಾರೂ ಅಂಗಡಿಯನ್ನು ನೋಡದೇ ಬೆಳೆದವರು ಇರಲಿಕ್ಕಿಲ್ಲ. ನಿಮಗೆಲ್ಲ ನಿಮ್ಮೂರಿನ ನಟ್ಟ ನಡುವಿನಲ್ಲಿ ಅಥವಾ ಬಸ್ ಸ್ಟ್ಯಾಂಡಿನ ಪಕ್ಕ ನಾಲ್ಕು ಜನ ಸೇರುವ ಜಾಗದಲ್ಲಿ ಬಾಬಣ್ಣ, ರಾಮಣ್ಣ, ಉಪೇಂದ್ರಣ್ಣ ಎಂಬ ಯಾವುದೋ ಹೆಸರಿನ 'ಅಣ್ಣ'ನೊಬ್ಬ ಇಟ್ಟಿದ್ದ ಅಂಗಡಿ ನೆನಪಿದೆ ತಾನೇ? ಆಗಿನ ಕಾಲಕ್ಕೆ ಇಡೀ ಊರಿಗೇ ಬಿಗ್ ಬಜಾರಾಗಿದ್ದ ಅವುಗಳನ್ನು ಮರೆಯುವುದಾದರೂ ಹೇಗೆ ಅಲ್ವಾ? ನನಗಿನ್ನೂ ಚೆನ್ನಾಗಿ ನೆನಪಿದೆ. ನಮ್ಮೂರಿನ ಬಸ್ ಸ್ಟಾಪಿನ ಎದುರು, ಮುಖ್ಯರಸ್ತೆಯ ಬದಿಯಲ್ಲಿ, ರಸ್ತೆಗಿಂತ ಕೊಂಚ ಎತ್ತರದ ಜಾಗದಲ್ಲಿ ಹಂಚಿನದೊಂದು ಸೂರು. ಅದರ ಕೆಳಗೆ ಮೂರಡಿ ಎತ್ತರದ ಆವರಣ ಎನ್ನಬಹುದಾದ ಚಿಕ್ಕದೊಂದು ಕಟ್ಟೆ. ಚಪ್ಪಲಿಯನ್ನು ಅಲ್ಲೇ ಬಿಚ್ಚಿಟ್ಟು ಒಳಗೆ ನಡೆದರೆ ಮೊದಲು ಎದಿರಾಗುವುದು ನೆಲದ ಮೇಲೆ ಟೊಮೇಟೋ, ಕ್ಯಾರೇಟ್, ಅಲೂಗಡ್ಡೆ ಮುಂತಾದ ತರಕಾರಿಗಳನ್ನು ತುಂಬಿಟ್ಟಿರುವ ಬುಟ್ಟಿಗಳು. ಪಕ್ಕದಲ್ಲಿ ಮರದ ಪೆಟ್ಟಿಗೆಗಳೊಳಗೆ ಶಿಸ್ತಾಗಿ ನಿಂತಿರುವ ಗೋಲಿ ಸೋಡದ ನೀಲಿ ಬಾಟಲ್ ಗಳು‌. ಎದುರುಗಡೆ ಅಂಗಡಿಯ ಬಾಗಿಲಿನಲ್ಲಿ ಪುಟ್ಟದೊಂದು ಮರದ ಸ್ಟ್ಯಾಂಡಿನ ಮೇಲೆ ಸಾಲಾಗಿ ನಿಂತು ತಮ್ಮೊಳಗಿನ ಚಾಕ್ಲೇಟೇ ಇತ್ಯಾದಿ ಸಿಹಿ-ಹುಳಿ ತಿಂಡಿಗಳನ್ನು ಜಗತ್ತಿಗೆ ತೋರಿಸುತ್ತ ಕೈಬೀಸಿ ಕರೆಯುತ್ತಿರುವ ಗಾಜಿನ ಭರಣಿಗಳು. ಪಕ್ಕದ ಗೋಡೆಯ ಮೇಲೆ ಹಾರದಂತೆ ನೇತಾಡುತ್ತಿರುವ, ಲೇಟೆಸ್ಟ್ ಆಗಿ ಮಾರುಕಟ್ಟೆಗೆ ಬಂದಿರುವ ಕಟ್ಟಮಿಟ್ಟ, ಶಕ್ತಮಾನ್ ಚಾಕಲೇಟ್ ಗಳು. ಒಳಗಿನ ಸ್ಟ್ಯಾಂಡುಗಳಲ್ಲಿ ಸಾಲಾಗಿ ಜೋಡಿಸಿಟ್ಟ ದಿನಬಳಕೆಯ ವಸ್ತುಗಳು..‌‌

ಅದು ಬಾಬಣ್ಣನ ಅಂಗಡಿ!

ಪಕ್ಕದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪ್ರತಿಯೊಬ್ಬ ಚಿಣ್ಣನೂ ತಿರುತಿರುಗಿ ನೋಡುತ್ತಾ ಹೋಗುತ್ತಿದ್ದ ಅಂಗಡಿಯದು. ಇಪ್ಪತೈದು ಪೈಸೆಯ ನಿಂಬೆ ಹುಳಿ ಚಾಕ್ಲೆಟ್ ನಿಂದ ಹಿಡಿದು ಇಪ್ಪತೈದು ರುಪಾಯಿಯ ಕ್ಯಾಸ್ಕೋ ಬಾಲಿನ ತನಕ ಮಕ್ಕಳ ಮನಗೆದ್ದುದೆಲ್ಲವೂ ಅಲ್ಲಿ ಲಭ್ಯ. ಸಂಜೆ ಹೊರಗೆ ಹೊರಟ ಅಪ್ಪನ ಜೊತೆ ಹಠ ಮಾಡಿ ತಾನೂ ಹೋರಟುಬಂದು ಆ ಅಂಗಡಿಯ ಬಾಗಿಲಿನಲ್ಲಿ ನಿಂತ ಪೋರನ ಕಣ್ಣೆದುರು ಗೊಂಚಲು ಗೊಂಚಲು ಕನಸುಗಳು! ಆ ಬದಿಯಲ್ಲಿ ನೋಡಿದರೆ ಬಾಟಲಿಯೊಳಗೆ ಬೆರಳು ತೂರಿಸಿ ಫಟ್ ಎಂದು ಒಡೆದುಕೊಡುವ ಗೋಲಿಸೋಡ. ಮಧ್ಯದಲ್ಲಿ ಮರದ ಸ್ಟ್ಯಾಂಡಿನ ಮೇಲೆ ನಮ್ಮ ಜೇಬಿನೊಳಗೇ ಇದೆಯೇನೋ ಎನ್ನುವಷ್ಟು ಪಾರದರ್ಶಕವಾಗಿರುವ ಭರಣಿಗಳೊಳಗೆ ಜೋಡಿಸಿರುವ ಸೋಂಪಾಪುಡಿ, ಮೈಸೂರ್ ಪಾಕು, ಕಂಬಾರ್ ಕಟ್(ಕಡ್ಲೆ ಮಿಠಾಯಿ), ಶುಂಟಿ ಪೇಪರ್ಮೆಂಟ್, ಮಹಾಲ್ಯಾಕ್ಟೋ, ಜೆಲ್ಲಿ, ಲ್ಯಾಕ್ಟೋ ಕಿಂಗ್, ಕಾಫೀ ಬೈಟ್, ನಿಂಬೆಹುಳಿ ಚಾಕ್ಲೇಟ್, ರಸಗುಲ್ಲಗಳು. 'ನನ್ನನ್ನು ಊದು' ಎಂದು ಕೈ ಬೀಸಿ ಕರೆಯುತ್ತಿರುವ ಬಾಟಲಿಯೊಳಗಿನ ಬಣ್ಣಬಣ್ಣದ ಪುಗ್ಗಿಗಳು, ಕೈಮೇಲೆ ಅಂಟಿಸಿಕೊಂಡು ನೀರು ಹಚ್ಚಿ ಗಸಗಸನೆ ಉಜ್ಜಿದಾಗ ಒಳಗಿರುವ ಬೂಮರ್, ಶಕ್ತಿಮಾನ್ ರ ಚಿತ್ರಗಳು ಕೈಯ ಮೇಲಕ್ಕೆ ವರ್ಗಾವಣೆಯಾಗಿಬಿಡುವ ಅದ್ಭುತ ಟ್ಯಾಟೂಗಳು ಫ್ರೀ ಬರುವ ಬೂಮರ್, ಬಿಗ್ ಬಬೂಲ್, ಮಾರ್ಬಲ್ಸ್ ಗಳು...

ಚಿಕ್ಕಚಿಕ್ಕ ಪ್ಯಾಕೇಟುಗಳಲ್ಲಿ ನೇತುಹಾಕಿರುವ ಹಸಿರು ಕಡಲೆ, ಇಂಗ್ಲೀಷ್ ನ ಅಕ್ಷರಗಳೇ ಹಿಡಿಕೆಗಳಾಗಿರುವ ಎಬಿಸಿಡಿ ಲಾಲಿಪಾಪ್, ಕವರ್ ನೊಳಗೆ ಪ್ಲಾಸ್ಟಿಕ್ ಉಂಗುರ, ಸರ, ಪೀಪಿ, ಬಿಲ್ಲು-ಬಾಣ ಮುಂತಾದ 'ಸರ್ಪೈಸ್ ಗಿಫ್ಟ್' ಗಳು ಫ್ರೀ ದೊರೆಯುವ ಶಕ್ತಿಮಾನ್ ಚಾಕಲೇಟ್ ಗಳು, ಚಿಕ್ಕಚಿಕ್ಕ ಕಡ್ಡಿಗೆ ಬಣ್ಣಬಣ್ಣದ ಬ್ಯಾಗಡೆ ಸುತ್ತಿರುವ, ಒಳಗಡೆ ನಾಲಿಗೆ ನಲಿನಲಿದಾಡುವಂತೆ ಮಾಡುವ ಹುಣಿಸೆಯ ಲೇಹ್ಯವಿರುವ ಕಟ್ಟಮಿಟ್ಟ, ಅದೋ ಅಲ್ಲಿ- ಅಂಗಡಿಯೊಳಗಿನ ತುತ್ತತುದಿಯ ಮೂಲೆಯಲ್ಲಿ ಕಾಣುತ್ತಿರುವ ಕೆಂಬಣ್ಣದ ಫ್ರಿಜ್ಜಿನೊಳಗಿನ ಚಿಕ್ಕ ಕವರ್ ನೊಳಗೆ ತುಂಬಿಟ್ಟಿರುವ ಬಣ್ಣಹಚ್ಚಿದ ಹಿಮದಂತಿರುವ ಗಟ್ಟಿ ಪೆಪ್ಸಿ, ಬಾಯಲ್ಲಿ ಕುಡಿದರೆ ಮೂಗಲ್ಲಿ ತೇಗು ಬರುವ ಪೀಲೆ.. ಇಷ್ಟೆಲ್ಲ ವೈವಿಧ್ಯಮಯ ತಿಂಡಿಗಳ ಮಧ್ಯೆ ಒಂದೇ ಒಂದನ್ನು ಆಯ್ಕೆ ಮಾಡಬೇಕೆಂಬುದು ಎಂತಹ ಘೋರ! ಮನೆಗೆ ಬೇಕಾದ ಉಪ್ಪು, ಕಡಲೆಹಿಟ್ಟು, ಅಡಿಗೆ ಎಣ್ಣೆಗಳನ್ನೆಲ್ಲ ಕೊಂಡಾದ ಮೇಲೆ ಅಪ್ಪ ಕೇಳುವ "ನಿಂಗೇನ್ಬೇಕ?" ಎಂಬ ಒಂದೇ ಒಂದು ಪ್ರೆಶ್ನೆಗೆ ಪೋರನ ಬಾಯಿಯಲ್ಲಿ ಹತ್ತು ಉತ್ತರ ತಯಾರಿರುತ್ತಿತ್ತು:

"ಶಕ್ತಿಮಾನ್ ಚಾಕ್ಲೇಟ್.."

"ಬೇಡಬೇಡ ಭೂಮರ್.."

"ಇದು ಬೇಡ ಪೆಪ್ಸಿ..."

ಹೀಗೆ ಇಡೀ ಅಂಗಡಿಗೆ ಅಂಗಡಿಯೇ ಬೆರಳಂಚಿಗೆ ಬಂದು ನಿಂತುಬಿಡುತ್ತಿದ್ದ ಕ್ಷಣವದು. ಕೊನೆಗೆ ಅಪ್ಪ-ಬಾಬಣ್ಣ ಇಬ್ಬರೂ ಕಣ್ಣಲ್ಲೇ ಮಾತಾಡಿಕೊಂಡು, ಯಾವುದೋ ಒಂದು ಜಾತಿಯ ಚಾಕಲೇಟನ್ನು ಪೋರನ ಕೈಗಿತ್ತು, ಅದೇ ಜಗತ್ತಿನ ಸರ್ವ ಶ್ರೇಷ್ಠ ಚಾಕಲೇಟೆಂದು ಅವನನ್ನು ನಂಬಿಸಿ ಸಾಗಹಾಕುವ ಮೂಲಕ ಈ ಗೊಂದಲ ಕೊನೆಯಾಗುತ್ತದೆ. ಹೀಗೆ ಯಾವುದೋ ಒಂದು ತಿಂಡಿಯನ್ನು ಹಿಡಿದು ಹೊರಟು, ಕೊನೆಯ ಬಾರಿಗೆಂಬಂತೆ ತಿರುಗಿ ನೋಡಿದ ಆ ಚಿಣ್ಣನಿಗೆ ಕೊನೆಗೂ ಅಂಗಡಿಯಲ್ಲೇ ಉಳಿದುಹೋದ, ಅವನು ಕೊಳ್ಳಲಾಗದ ಆ ಚಾಕ್ಲೇಟುಗಳೆಲ್ಲ ಕಣ್ಣೀರು ತುಂಬಿಕೊಂಡು ವಿದಾಯ ಹೇಳುತ್ತವೆ.

ಇದು ಅಲ್ಲಿ ಅಂಗಡಿಯಲ್ಲಿ ದಿನಕ್ಕೆ ಏನಿಲ್ಲವೆಂದರೂ ಹತ್ತು ಬಾರಿಯಂತೆ, ವಾರದ ಏಳೂ ದಿನವೂ ಪುನರಾವರ್ತನೆಯಾಗುತ್ತಿದ್ದ ಘಟನೆ. ಹಂಚಿನ ಮಾಡಿನ ಚಿಕ್ಕ ಜಾಗವಾಗಿತ್ತಾದರೂ ಬಾಬಣ್ಣನ ಅಂಗಡಿ ಕೇವಲ ದಿನಬಳಕೆಯ ದಿನಸಿ ವಸ್ತುಗಳಿಗೆ ಸೀಮಿತವಾಗಿರಲಿಲ್ಲ. ಯಾವುದೇ ಹಬ್ಬವಾದರೂ ಊರಿನಲ್ಲಿ ಮೊದಲು ಕಾಲಿಡುತ್ತಿದ್ದುದು ಇಲ್ಲಿಗೇ. ದೀಪಾವಳಿ, ರಾಖಿ ಹಬ್ಬಗಳೆಲ್ಲ ಸನಿಹ ಬಂದಿದ್ದು ನಮಗೆ ಗೊತ್ತಾಗುತ್ತಿದ್ದುದೇ ಬಾಬಣ್ಣನ ಅಂಗಡಿಯನ್ನು ಹೊಸದಾಗಿ ಅಲಂಕರಿಸಿರುವ ಪಟಾಕಿ, ರಾಖಿಗಳಿಂದ. ಕೋವಿ, ಮದ್ದು, ಪಟಾಕಿಗಳು ಬಾಬಣ್ಣನ ಅಂಗಡಿಯನ್ನು ಪ್ರವೇಶಿಸಿದ ಮರುದಿನ ಸಂಜೆಯೇ ನಮ್ಮ ಶಾಲೆಯ ಹಿಂದಿನ ಗುಡ್ಡದಲ್ಲಿ ಢಮಾರ್ ಎನ್ನುವ ಶಬ್ದ ಮೊಳಗುತ್ತಿತ್ತು. ಅಮ್ಮನನ್ನು ಕಾಡಿ, ಗೊಗರೆದು ಐವತ್ತೋ ಅರವತ್ತೋ ಇಸಿದುಕೊಂಡು ಅಂಗಡಿಗೆ ಬರುವ ಮಕ್ಕಳಿಗೆ ಬಾಬಣ್ಣನಿಂದ ಯಾವ ಒಬಾಮಾನಿಗೂ ಕಡಿಮೆಯಿಲ್ಲದ ಭವ್ಯ ಸ್ವಾಗತ ದೊರೆಯುತ್ತಿತ್ತು. "ಬಾರಾ ಮಾಣಿ.. ಹೊಸ ಹೊಸ ಪಟಾಕಿ ಬಂದಿದೆ ನೋಡಾ" ಎನ್ನುತ್ತಾ ಒಳಗಿನಿಂದ ಬಿಡಿಮದ್ದು, ಕೋವಿ, ಮೆಣಸಿನಕಾಯಿ ಪಟಾಕಿ, ನೆಲಚಕ್ರ, ಸುರುಸುರು ಬತ್ತಿ, ಬಾಳೆಕಂಬ, ರಾಕೆಟ್ ಗಳ ಬಾಕ್ಸ್ ಗಳನ್ನು ತೆಗೆದು ಎದಿರಿಡುತ್ತಿದ್ದ. "ಇಪ್ಪತ್ತು ರೂಪಾಯಿ ವಾಪಾಸು ತರ್ಬೇಕು" ಎಂದು ಹೇಳಿಕಳಿಸಿರುತ್ತಿದ್ದ ಅಮ್ಮನ ಮಾತನ್ನು ನಾವು ಕಣ್ಣೆದುರಿನ ಆ ವೈಭವವನ್ನು ನೋಡನೋಡುತ್ತಲೇ ಮರೆತುಬಿಟ್ಟಿರುತ್ತಿದ್ದೆವು. ಆದರೆ ಕಡಿಮೆ ಬೆಲೆಕೊಟ್ಟು ತಂದ ಕಡಿಮೆ ಗುಣಮಟ್ಟದ್ದಾಗಿತ್ತೋ ಅಥವಾ ಬಾಬಣ್ಣ ಅವನ್ನು ತಣ್ಣಗಿನ ಜಾಗದಲ್ಲಿಟ್ಟಿರುತ್ತಿದ್ದನೋ ಏನೋ, ಅಲ್ಲಿ ಕೊಂಡ ಪಟಾಕಿಗಳಲ್ಲಿ ಹಲವು ಠುಸ್ ಗುಂಪಿಗೆ ಸೇರಿಬಿಡುತ್ತಿದ್ದವು. ಢಮಾರೆಂಬ ದೊಡ್ಡ ಶಬ್ದದೊಂದಿಗೆ ಹೊಟ್ಟಬೇಕಾದ ಮೆಣಸಿನಕಾಯಿ ಪಟಾಕಿ ಸುರುಸುರು ಬತ್ತಿಯಂತೆ ಸುರ್ರನೆ ಬೆಂಕಿಯನ್ನೆರಚುತ್ತ ಚೀರಾಡುತ್ತಿತ್ತು. ನಿಂತಲ್ಲೇ ಅಷ್ಟೆತ್ತರಕ್ಕೆ ನಕ್ಷತ್ರಗಳನ್ನೆರಚಬೇಕಾದ ಬಾಳೆಕಂಬ ಢಮಾರನೆ ಹೊಟ್ಟಿ ಆಕಾಶಕ್ಕೆ ನೆಗೆಯುತ್ತಿತ್ತು. ಇನ್ನು ಬಾಬಣ್ಣ "ಮೂರು ತೆಂಗಿನಮರದಷ್ಟು ಎತ್ತರಕ್ಕೆ ಹಾರತ್ತೆ ನೋಡು!" ಎಂದು ಬೂಸಿ ಹೊಡೆದು ಕೊಟ್ಟಿದ್ದ ರಾಕೆಟ್ ನೆಟ್ಟಗೆ ನಿಲ್ಲಿಸಿ ಉಡಾಯಿಸಿದರೂ ಬೆಂಕಿ ಅಂಟಿಸಿದವನನ್ನೇ ಅಟ್ಟಿಸಿಕೊಂಡು ಹೋಗಿ ಅಂಗಳದ ತುಂಬಾ ಅಟ್ಟಾಡಿಸಿದ ಘಟನೆಗಳೂ ನಡೆದಿದ್ದವು!

ಇನ್ನು ರಾಖಿ ಹಬ್ಬ ಬಂದರಂತೂ ಮುಗಿದೇ ಹೋಯಿತು, ಕೊರಳ ತುಂಬಾ ನಾನಾ ಬಣ್ಣ, ನೂಲು, ಸ್ಪಂಜುಗಳ ರಾಖಿಗಳ ಮಾಲೆ ಕಟ್ಟಿಕೊಂಡ ಬಾಬಣ್ಣನ ಅಂಗಡಿ ಸ್ವರ್ಗಲೋಕದ ಬಾಗಿಲೇ ಆಗಿಬಿಡುತ್ತಿತ್ತು. ರುಪಾಯಿಗೆ ಹತ್ತುಬರುವ ಉದ್ದುದ್ದ ತೆಳು ಎಳೆಗಳಿರುವ ಗೌರೀದಾರ, ರೂಪಾಯಿಗೆ ನಾಲ್ಕು ಬರುವ ಉಲ್ಲನ್ನಿನ ಪುಟ್ಟ, ಉರುಟು ತಲೆಯ ರಾಖಿ, ಅದರಲ್ಲೇ ಕೊಂಚ ದೊಡ್ಡ ತಲೆಯಿರುವ ಐವತ್ತು ಪೈಸೆಯದ್ದು, ಸಂತ್ರದ ತಗಡಿನ ಹಾಳೆಯ ಮೇಲೆ ಸ್ಪಂಜಿನ ಚಕ್ರವಿರುವ ಎರೆಡು ರೂಪಾಯಿಯ, ದೊಡ್ಡ ಗಾತ್ರದ ಅತಿ ದುಬಾರಿ ರಾಖಿ.. ಬೆಲೆಗೆ ತಕ್ಕಷ್ಟು ಗಾತ್ರ, ಗಾತ್ರಕ್ಕೆ ತಕ್ಕಷ್ಟು ಖುಷಿ! ಆ ದಿನ ಸ್ವಲ್ಪ ಬೇಗ ಹೊರಟು ಜೇಬಿನಲ್ಲಿದ್ದ ಐದೋ-ಆರೋ ರುಪಾಯಿಗಳನ್ನು ಬಾಬಣ್ಣನಂಗಡಿಯಲ್ಲಿ ಬಣ್ಣ ಬಣ್ಣದ ರಾಖಿಗಳಾಗಿ ಪರಿವರ್ತಿಸಿಕೊಂಡ ಮೇಲೇ ಎಲ್ಲರೂ ಶಾಲೆಗೆ ಹೋಗುತ್ತಿದ್ದುದು. ಹುಡುಗ-ಹುಡುಗಿಯರೆನ್ನದೆ, ಮೇಷ್ಟ್ರು-ಮಿಸ್ ಗಳೆನ್ನದೆ ಎಲ್ಲರ ಕೈಗೂ ರಾಖಿ ಕಟ್ಟುವ ಮೂಲಕ ಸಂಭ್ರಮ ವರ್ಗಾವಣೆಯಾಗುತ್ತಿತ್ತು. ಕೆಲವರಂತೂ ದಿನದ ಕೊನೆಯಲ್ಲಿ ಅತಿ ಕಷ್ಟದಲ್ಲಿ ಎರೆಡು ರಾಖಿಗಳನ್ನು ಉಳಿಸಿಕೊಂಡು "ಇದು ಅಪ್ಪ-ಅಮ್ಮಂಗೆ ಕಟ್ಟಕ್ಕೆ" ಎಂದು ಜಂಭದಿಂದ ಹೇಳಿಕೊಳ್ಳುತ್ತಿದ್ದರು! ಹೀಗೆ ಪ್ರತಿಯೊಂದು ಹಬ್ಬದ ಮುಗ್ಧ ಸಂಭ್ರಮವೂ ಈ ಅಂಗಡಿಯ ಬಾಗಿಲಿನಿಂದಲೇ ಹೊರಟು ಊರಿನೆಲ್ಲ ಚಳ್ಳೆ-ಪಿಳ್ಳೆಗಳ ಮನಮನಕ್ಕೆ ರವಾನೆಯಾಗುತ್ತಿತ್ತು.

ಬಾಬಣ್ಣ ಅಪ್ಪಿತಪ್ಪಿಯೂ ಮಕ್ಕಳಿಗೆ ಕಡ(ಸಾಲ) ಕೊಡುತ್ತಿರಲಿಲ್ಲ. ಮಕ್ಕಳು ಹೇಳುವ ಸಾಲಕ್ಕೆ ಅವರ ಅಪ್ಪಂದಿರನ್ನು ಹುಡುಕುವ ತಾಪತ್ರಯವನ್ನು ಅವನು ಅಪ್ಪಿತಪ್ಪಿಯೂ ಮೈಮೇಲೆಳೆದುಕೊಳ್ಳುತ್ತಿರಲಿಲ್ಲ. ಅದೊಂದು ಮಧ್ಯಾಹ್ನ ಊಟದ ಪಿರಿಯಡ್ನಲ್ಲಿ ಗೆಳೆಯನ ಜೊತೆ ರಾಖಿ ಕೊಳ್ಳಲು ಹೋದ ನನ್ನನ್ನು ಎರೆಡು ರೂಪಾಯಿಯ, ಅರಿಶಿಣ ಬಣ್ಣದ ದೊಡ್ಡ ಸ್ಪಂಜಿನ ರಾಖಿ ಇನ್ನಿಲ್ಲದಂತೆ ಸೆಳೆದಿತ್ತು‌. ಆದರೆ ಜೇಬಲ್ಲಿದ್ದುದು ಬರೀ ಎಂಟಾಣೆಯ ಬಿಲ್ಲೆ . "ಉಳಿದ ದುಡ್ಡು ಸಂಜೆ ಅಪ್ಪ ಕೊಡ್ತಾರೆ" ಎಂದು ಆಸೆಯಿಂದ ಚಾಚಿದ ಕೈಯ್ಯನ್ನು ಒರಟಾಗಿ ತಳ್ಳಿದ ಬಾಬಣ್ಣ "ಅದೆಲ್ಲ ಆಗಲ್ಲ" ಎಂದುಬಿಟ್ಟ. ಆ ಕ್ಷಣಕ್ಕೆ ಅವಮಾನವಾಗಿ ಕಣ್ತುಂಬಿ ಬಂದಿತ್ತಾದರೂ ಮುಂದೆಂದೂ ನಾನು ಯಾವ ಅಂಗಡಿಯಲ್ಲೂ 'ಕಡ' ಹೇಳುವ ಧೈರ್ಯ ಮಾಡಲಿಲ್ಲ. ಅದು ಬಾಬಣ್ಣನಂಗಡಿ ಕಲಿಸಿದ ಜೀವಮಾನದ ಪಾಠ.

ಅಂಗಡಿಯೊಳಗೇ ಬಾಬಣ್ಣ ಚಿಕ್ಕ ಹೋಟೆಲ್ ಸಹಾ ಇಟ್ಟಿದ್ದ. ಅಲ್ಲಿ ಬೆಳಗಿನ ತಿಂಡಿಗಳಾದ ದೋಸೆ, ಇಡ್ಲಿ, ವಡೆ, ಉಪ್ಪಿಟ್ಟುಗಳ ಜೊತೆ ಸಂಜೆಯ ತುಡು ಕಳೆಯುವ ಗೋಲಿಬಜೆ, ಪಕೋಡ, ಮೆಣಸಿನಕಾಯಿ ಬಜ್ಜಿ, ಟೀ, ಕಾಫಿಗಳು ಸದಾ ಸಿದ್ಧವಾಗಿರುತ್ತಿದ್ದವು. ಸಂಜೆಯ ಹೊತ್ತಿಗೆ ಕುಳಿತು ಹರಟುವವರಿಗೆ ಬಾಬಣ್ಣನ ಅಂಗಡಿಯೆಂಬುದು ಇಂದಿನ ಟಿವಿ9 ಸ್ಟುಡಿಯೋ ಇದ್ದಂತೆ. ಊರಿನ ನುರಿತ ಅರ್ಥಶಾಸ್ತ್ರಜ್ಞರು, ರಾಜಕೀಯ ವಿಶ್ಲೇಷಕರೆಲ್ಲ ಕಚ್ಚಿದ ಮೆಣಸಿನಕಾಯಿ ಬಜ್ಜಿಯ ಖಾರಕ್ಕೆ ಸ್ssssss ಎಂದು ಬಾಯಿಯಿಂದ ಗಾಳಿ ಎಳೆದುಕೊಳ್ಳುತ್ತಾ, ಸೊರ್ರನೆ ಬಿಸಿ ಚಾ ಹೀರುತ್ತಾ ಪರ-ವಿರೋಧದ ಚರ್ಚೆಯಲ್ಲಿ ತೊಡಗುತ್ತಿದ್ದರು. ತೋಟಕ್ಕೆ ಹಂದಿ ನುಗ್ಗಿದ್ದರಿಂದ ಹಿಡಿದು ಜಾರ್ಜ್ ಬುಶ್ ಬಾಂಬು ಹಾಕಿದ್ದರ ತನಕ, ವಾಜಪೇಯಿ ಸರಕಾರ ಗೆದ್ದಿದ್ದರಿಂದ ಹಿಡಿದು ವಾಸಣ್ಣನ ಮಗಳಿಗೆ ಗಂಡು ಗೊತ್ತಾದುದರ ತನಕ ಅದೆಷ್ಟೋ ರಾಷ್ಟ್ರ, ಅಂತರಾಷ್ಟ್ರ ಮಟ್ಟದ ಸಂಗತಿಗಳೆಲ್ಲ ಅಲ್ಲಿ ಕೇವಲ ನಾಲ್ಕು ಪ್ಲೇಟು ಬೋಂಡಾ ಹಾಗೂ ಫೋರ್ ಬೈ ಟೂ ಕಾಫಿಯ ಖರ್ಚಿನಲ್ಲಿ ಚರ್ಚಿತವಾಗಿ ಪರಿಹಾರ ಕಂಡುಕೊಳ್ಳುತ್ತಿದ್ದವು. ಈ ಎಲ್ಲ ಪರ-ವಿರೋಧ ಚರ್ಚೆಗಳ ನಡುವೆ ಆ್ಯಂಕರ್ ಆಗುತ್ತಿದ್ದ ಬಾಬಣ್ಣ ಯಾವ ಕಡೆಯವರಿಗೂ ಬೇಸರವಾಗದಂತೆ, ತನ್ನ ಹೋಟೆಲ್ ನ ಮಾರನೇ ದಿನ ಸಂಜೆಯ ಗೋಲಿಬಜೆಗೆ ಯಾವೊಬ್ಬ ಗಿರಾಕಿಯೂ ಮಿಸ್ ಆಗದಂತೆ ಎಚ್ಚರಿಕೆಯಿಂದ ಇಬ್ಬರ ಪಕ್ಷದಲ್ಲಿಯೂ ಮಾತನಾಡುತ್ತಿದ್ದ. ವಾಗ್ವಾದ ತಾರಕಕ್ಕೇರುವ ಸೂಚನೆ ಕಂಡಾಗೆಲ್ಲ "ಅಣ್ಣು ಹಾಂಡ್ರ ಮನೆ ಯಮ್ಮಿ ಹೊತ್ತಿಗೆ ಐದು ಲೀಟ್ರು ಹಾಲು ಕೊಡ್ತಂಬ್ರು, ಹೌದಾ ಮರ್ರೆ?" ಎಂದು ವಿಷಯ ಬದಲಾಯಿಸಿಬಿಡುತ್ತಿದ್ದ.

ರಸ್ತೆಗಿಂತ ಎತ್ತರದಲ್ಲಿದ್ದ ಬಾಬಣ್ಣನಂಗಡಿಯ ಕಟ್ಟೆಯ ಮೇಲೆ ಕುಳಿತರೆ ಹಳ್ಳಿಯ ಸಂಜೆಯ ದೃಶ್ಯಗಳು ಕಲಾವಿದನೊಬ್ಬನ ಚಂದದ ಚಿತ್ರದಂತೆ ಕಣ್ತುಂಬಿಕೊಳ್ಳುತ್ತಿದ್ದವು. ದಿನಗೆಲಸ ಮುಗಿಸಿ ದೊಡ್ಡದಾಗಿ ಹರಟುತ್ತಾ ತಂತಮ್ಮ ಮನೆಗಳಿಗೆ ಮರಳುತ್ತಿರುವ ಗಂಡಾಳು-ಹೆಣ್ಣಾಳುಗಳು, ಬೆನ್ನಿಗೆ ಬ್ಯಾಗು ತಗುಲಿಸಿಕೊಂಡು ಚಿಲಿಪಿಲಿಗುಟ್ಟುತ್ತಾ ಪುಟಪುಟನೆ ಓಡುವ ಶಾಲೆಯ ಮಕ್ಕಳು, ಪಟ್ಟಣದಿಂದ ಮರಳುವವರನ್ನು ತುಂಬಿಕೊಂಡು ಗಂಟೆಗೊಂದರಂತೆ ವಾಲಾಡುತ್ತಾ ಉಸ್ಸೋ ಎಂದು ಏರು ಹತ್ತಿ ಬರುವ ಬಸ್ಸುಗಳು, ಅದರಿಂದಿಳಿದ ಜಂಭದ ನಡಿಗೆಯ ಕಾಲೇಜು ಹುಡುಗಿಯರು, ಅವರನ್ನು ಹಿಂಬಾಲಿಸುವ ನೇತಾಡುವ ಬ್ಯಾಗಿನ ಹುಡುಗರು, ಪೇಟೆಗೆ ರಿಪೇರಿ ಮಾಡಿಸಲೆಂದು ಒಯ್ದಿದ್ದ, ತೋಟಕ್ಕೆ ಔಷಧಿ ಹೊಡೆಯುವ ಮೆಶಿನ್ನನ್ನು ಹೊತ್ತು ಮನೆಯೆಡೆಗೆ ನಡೆಯುತ್ತಿರುವ ದ್ಯಾಮೇಗೌಡರು, ಇರುವ ಕಾಲುಭಾಗ ರಸ್ತೆಯ ಮುಕ್ಕಾಲುಭಾಗವನ್ನು ಆಕ್ರಮಿಸಿಕೊಂಡು, ಪಿಡಬ್ಲುಡಿಯವರೂ ನಾಚುವಂತೆ ರಸ್ತೆಯನ್ನಳೆಯುತ್ತ ನಡೆಯುವ ಪಾನಮತ್ತ 'ಮಧು'ಲೋಕ ಚಕ್ರವರ್ತಿಗಳು, ಕೆಮ್ಮೋಡಗಳ ಹಿನ್ನಲೆಯಲ್ಲಿ ಹಾರುತ್ತಾ ದೂರ ದಿಗಂತದಲ್ಲೆಲ್ಲೋ ಮರೆಯಾಗಿ ಹೋಗುವ ಹಕ್ಕಿಗಳು, ಅದೇ ಹಾದಿಯಲ್ಲಿ ಕೊನೆಗೆ ತಾನೂ ಮುಳುಗಿಹೋಗುವ ಸೂರ್ಯ... ಹಳ್ಳಿ ಪರಿಸರದ ಪರದೆಯ ಮೇಲೆ ಮೂಡುವ ಪ್ರತಿ ದೃಶ್ಯಕ್ಕೂ ಈ ಅಂಗಡಿ ಕಟ್ಟೆಯೇ ಬಾಲ್ಕನಿ ಸೀಟು. ಕವಿದ ಕತ್ತಲ ನಡುವೆ ಚಲಿಸುವ ಬೆಳಕಿನ ಡಬ್ಬದಂತೆ ಸಾಗಿಬಂದ, ಪಟ್ಟಣದಿಂದ ಬರುವ ಕಟ್ಟಕಡೆಯ ಬಸ್ಸಾದ ಗಾಯತ್ರೀ ಬಸ್ಸೂ ಶೆಡ್ಡು ಸೇರಿದಾಗ ಬಾಬಣ್ಣ ಆಕಳಿಸುತ್ತ ಮೇಲೇಳುತ್ತಿದ್ದ. ಅದೇ ಬಸ್ಸಿಗೆ ಬಂದಿಳಿದವನ್ಯಾರನ್ನೋ "ಕಾಮತ್ ಬಸ್ಸು ತಪ್ಸಿಕೊಂಡ್ಯನೋ" ಎಂದು ಕೇಳುತ್ತ, ಈ ಊರಿಗೆ ಮದುವೆಮಾಡಿಕೊಟ್ಟ ತನ್ನ ಮಗಳನ್ನು ನೋಡಲೆಂದು ದೂರದೂರಿನಿಂದ ಬಂದಿಳಿದ ಹೆಸರು ಗೊತ್ತಿಲ್ಲದ ಹಿರಿಯರನ್ನು "ಏನು ಭಟ್ರೇ, ಅರಾಮಾ?" ಎಂದು ಕುಶಲ ವಿಚಾರಿಸುತ್ತ ಅಂಗಡಿಯ ಬಾಗಿಲು ಮುಚ್ಚುತ್ತಿದ್ದ. ಒಳಗಡೆ ಮಾರಾಟವಾಗದ ಚಾಕ್ಲೇಟು, ಸಿಹಿತಿಂಡಿ, ಆಟಿಕೆಗಳೆಲ್ಲ ಮರುದಿನ ತಮ್ಮನ್ನರಸಿ ಬರಲಿರುವ ಚಿಣ್ಣರಿಗಾಗಿ ಕಾಯುತ್ತ ತಂತಮ್ಮ ಭರಣಿಗಳೊಳಗೆ ನಿದ್ರೆಗೆ ಜಾರುತ್ತಿದ್ದವು.

(ತುಷಾರದ ಫೆಬ್ರವರಿ 2018ರ ಸಂಚಿಕೆಯಲ್ಲಿ ಪ್ರಕಟಿತ)

ಗುರುವಾರ, ಡಿಸೆಂಬರ್ 14, 2017

ಪರಮೇಶಿ ಪರಾಕ್ರಮ

ಪರಮೇಶಿಗೆ ಪತ್ತೇದಾರಿ ಕಾದಂಬರಿಗಳೆಂದರೆ ಇನ್ನಿಲ್ಲದ ಹುಚ್ಚು. ತನ್ನ ಚಾಣಾಕ್ಷ ಬುದ್ಧಿಯಿಂದ ಖಳರ ಜೊತೆಗೆ ಸೆಣೆಸುತ್ತಾ, ಕೊಲೆಗಾರನನ್ನು ಸೆರೆಹಿಡಿಯುತ್ತಾ, ನಾಯಕಿಯನ್ನು ಇಂಪ್ರೆಸ್ ಮಾಡುವ ನಾಯಕನೊಂದಿಗೆ ತನ್ನನ್ನು ಹೋಲಿಸಿಕೊಂಡು ಹಗಲುಗನಸು ಕಾಣುವುದು ಪರಮೇಶಿಯ ನೆಚ್ಚಿನ ಅಭ್ಯಾಸಗಳಲ್ಲೊಂದು. ಬನೀನು ತೊಟ್ಟ ಬೇತಾಳದಂತಿರುವ ತನ್ನ ಭುಜಬಲದ ಮೇಲೆ ಅವನಿಗೊಂದು ತೆರನಾದ ಅಭಿಮಾನ. ಸಣ್ಣವನಿದ್ದಾಗ ತನಗಿಂತ ನಾಲ್ಕುಪಟ್ಟು ದಪ್ಪವಿದ್ದ ಕೋದಂಡನೊಂದಿಗೆ ಹೇಗೆ ಸೆಣೆಸಿದ್ದನೆನ್ನುವುದನ್ನು ಈಗಲೂ ನೆನಪಿಸಿಕೊಂಡು ಮೀಸೆ ತಿರುವಿಕೊಳ್ಳುವ ಪರಮೇಶಿ ಸದಾ ಚಿಕ್ಕ ತೋಳಿನ, ಮೈಗೆ ಅಂಟಿಕೊಂಡಂತಿರುವ ಬಟ್ಟೆಗಳನ್ನೇ ಧರಿಸುತ್ತಾನೆ‌. ಕನ್ನಡಿ ಕಂಡರೆ ಸಾಕು, ಪರಮೇಶಿಯ ಅಂಗಿ ಅವನ ಮೈಮೇಲೆ ನಿಲ್ಲುವುದಿಲ್ಲ. ಹಲ್ಮಟ್ಟೆ ಕಚ್ಚಿಹಿಡಿದು, ವಾರಗಳ ಹಿಂದೆ ಒಣಗಿಹೋದ ನುಗ್ಗೇಕಾಯಿಯಂತಿರುವ ತನ್ನ ಮಾಂಸಖಂಡಗಳನ್ನು ಬಿಗಿಗೊಳಸಿ "ಹೂಂ" ಎಂದು ಹೂಂಕರಿಸುತ್ತಾನೆ. ಇನ್ನೇನು ಮುರಿದು ಹೋಗುವಂತಿರುವ ಅವನ ಮೂಳೆಗಳನ್ನು ಕಂಡ ಕನ್ನಡಿ ಗಡಗಡನೆ ನಡುಗುತ್ತದೆ.

ಊರಿನಲ್ಲಿ ಡಿಗ್ರಿ ಓದುತ್ತಿದ್ದ ದಿನಗಳಲ್ಲಿ ಮನೆಯಲ್ಲಿದ್ದ ತೂಕದ ಕಲ್ಲು, ಕಬ್ಬಿಣದ ಸರಳೇ ಮುಂತಾದ ಭಾರದ ವಸ್ತುಗಳನ್ನೆಲ್ಲ ಹೇಗ್ಹೇಗೋ ಎತ್ತಿಳಿಸಿ ವ್ಯಾಯಾಮ ಮಾಡುತ್ತಾ ಮನೆಯವರನ್ನೆಲ್ಲ ಭಯಬೀಳಿಸುತ್ತಿದ್ದ ಪರಮೇಶಿ  ಕಳೆದ ಆರು ತಿಂಗಳಿಂದ ಪ್ರತಿದಿನ ಜಿಮ್'ಗೆ ಹೋಗುತ್ತಿದ್ದಾನೆ. ಇವನ ದೇಹದಾರ್ಢ್ಯವನ್ನು ಹೆಚ್ಚಿಸಬಲ್ಲ ಯಾವ ಉಪಕರಣವೂ ಅಲ್ಲಿಲ್ಲವೆನ್ನುವುದು ಬೇರೆ ವಿಷಯ ಬಿಡಿ. ಅಲ್ಲಿ ಮೊದಲ ದಿನ ಅಂಗಿ ಕಳಚಿದಾಗ ಇವನ ಡಯೆಟ್ ಮಾಡದೇ ಬಂದಿರುವ ಸಿಕ್ಸ್ ಪ್ಯಾಕನ್ನು ನೋಡಿ ಟ್ರೈನರ್ ಕೂಡಾ ಬೆಚ್ಚಿಬಿದ್ದದ್ದು ಈಗ ಇತಿಹಾಸ. ಅಲ್ಲದೇ ಸಂಜೆ ತನ್ನ ರೂಮಿನೆದುರಿಗಿನ ಪಾರ್ಕಿನಲ್ಲಿ ಮಕ್ಕಳಿಗೆ ಹೇಳಿಕೊಡುವ ಕರಾಟೆಯ ಪಟ್ಟು-ಪೆಟ್ಟುಗಳನ್ನು ಪರಮೇಶಿ ಆಸಕ್ತಿಯಿಂದ ನೋಡಿಕೊಳ್ಳುತ್ತಾನೆ. ರೂಮ್ ಮೇಟ್ ಇಲ್ಲದ ಹೊತ್ತಿನಲ್ಲಿ 'ಕ್ಯೂ ಯಾ ಹೈ....' ಎಂಬ ಭಯಾನಕ ಕೂಗಿನೊಂದಿಗೆ ಕರಾಟೆ ಅಭ್ಯಾಸಕ್ಕೆ ತೊಡಗಿದನೆಂದರೆ ಗೋಡೆಯ ಮೇಲಿರುವ ಹಲ್ಲಿ, ಜೇಡ, ಜಿರಳೆಗಳೆಲ್ಲ ಬಿದ್ದು ಓಡತೊಡಗುತ್ತವೆ‌.

ಪರಮೇಶಿಯ ಸಣಕಲು ದೇಹದ ಹಿಂದಿರುವ ಅಗಾಧ ಶಕ್ತಿಯ ಅರಿವಿಲ್ಲದ ಗೆಳೆಯರು ಅವನನ್ನು ಹಾಸ್ಯಮಾಡುತ್ತಾರೆ. ಆದರೆ ಇವತ್ತಲ್ಲ ನಾಳೆ ತನ್ನೊಳಗಿರುವ ಸಿಂಹ ಆಚೆಗೆ ಬರುತ್ತದೆನ್ನುವುದು ಪರಮೇಶಿಗೆ ಮಾತ್ರ ಗೊತ್ತಿರುವ ಸತ್ಯ. ತನ್ನ ಕಲ್ಪನೆಯಲ್ಲಿ ತಾನು ಖಳರೊಂದಿಗೆ ಹೇಗೆ ಸೆಣೆಸುತ್ತೇನೆಂದು ಗೊತ್ತಿಲ್ಲದೆ ಮಾತಾಡುವ ಅವರನ್ನು ನೋಡಿ ಒಳಗೊಳಗೇ ನಗುವ ಪರಮೇಶಿ ಆಫೀಸಿನ ಸುಂದರಿ- ರಿಸೆಪ್ಷನಿಸ್ಟು ಲೀಶಾಳನ್ನು ಸಹಾ ಅನೇಕ ಬಾರಿ ರೌಡಿಗಳಿಂದ ಕಾಪಾಡಿದ್ದಾನೆ.

ಹೀಗಿದ್ದಾಗ ಪರಮೇಶಿಯ ಪರಾಕ್ರಮ ಜಗತ್ತಿಗೆ ತಿಳಿಯುವಂತಹಾ ಘಟನೆಯೊಂದು ನಡೆದೇಹೋಯಿತು. ಅದೊಂದು ಗಿಜಿಗುಡುತ್ತಿದ್ದ ಸೋಮವಾರ ಬೆಳಗ್ಗೆ ಯಾವುದೋ ಕೆಲಸದ ಮೇಲೆ ಬ್ಯಾಂಕಿಗೆ ಹೋಗಿದ್ದ ಪರಮೇಶಿ ಉದ್ದದ ಕ್ಯೂನಲ್ಲಿ ನಿಂತು ಚಲನ್ ತುಂಬುವುದರಲ್ಲಿ ನಿರತನಾಗಿದ್ದ. ಎಲ್ಲರೂ ತಂತಮ್ಮ ಕೆಲಸಗಳಲ್ಲಿ ಮುಳುಗಿಹೋಗಿದ್ದರು.

ಆಗ ಕೇಳಿತು ಅಪಾಯದ ಸೈರನ್!

ಆಗಲಿರುವ ಅನಾಹುತವೇನೆಂಬುದನ್ನು ಹೇಳದೇ ಕ್ಯೂಂವ್ ಕ್ಯೂಂವ್ ಎಂದು ಒಂದೇ ಸಮನೆ ಬಾಯ್ಬಡಿದುಕೊಳ್ಳತೊಡಗಿದ ಸೆಕ್ಯೂರಿಟಿ ಸೈರನ್ನಿಗೆ ನಿಂತ, ಕುಳಿತ, ಓಡಾಡುತ್ತಿದ್ದ ಗ್ರಾಹಕರೆಲ್ಲರೂ ದಂಗಾಗಿ ಸುತ್ತಲೂ ನೋಡತ್ತಿರುವಾಗಲೇ ದಪ್ಪ ಮೀಸೆಯ, ಕೈಯ್ಯಲ್ಲಿ ಮಾರುದ್ದದ ರೈಫಲ್ ಹಿಡಿದ ಠೋಣಪನೊಬ್ಬ ಬ್ಯಾಂಕಿನ ಒಳಗೆಬಂದು ಬಾಗಿಲುಹಾಕಿಬಿಟ್ಟ!

ಹೈಜಾಕ್!

ನೂರಾರು ಪತ್ತೇದಾರಿ ಕಾದಂಬರಿ, ಸಿನೆಮಾಗಳನ್ನು ನೋಡಿ ಪಳಗಿದ್ದ ಪರಮೇಶಿಯ ಚತುರ ಬುದ್ಧಿ ಕ್ಷಣಾರ್ಧದಲ್ಲಿ ಹಾಗೆಂದು ನಿರ್ಧರಿಸಿಬಿಟ್ಟಿತು. ಅವನು ನಿಂತ ಜಾಗದಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿ ಕೈಯ್ಯಲ್ಲಿ ಮಾರುದ್ದದ ರೈಫಲ್ ಹಿಡಿದ ಆ ಕ್ರೂರಮುಖದ ಉಗ್ರಗಾಮಿ ನಡೆದುಬರುತ್ತಿದ್ದ. ಇದೇ ಸರಿಯಾದ ಸಮಯ, ತನ್ನ ನಿಜವಾದ ತಾಕತ್ತೇನೆನ್ನುವುದನ್ನು ಜಗತ್ತಿಗೆ ತೋರಿಸಬೇಕು... ಪರಮೇಶಿಯೊಳಗಿನ ಸಿಂಹ ಬಾಲ ಬೀಸತೊಡಗಿತು.

"ಕ್ಯೂ.. ಯಾ... ಹೈ.."

ಸಾಲಿನಲ್ಲಿ ಹಿಂದೆ ಮುಂದೆ ನಿಂತವರೆಲ್ಲ ಬೆಚ್ಚಿಬೀಳುವಂತೆ ಕಿರುಚಿದ ಪರಮೇಶಿ ಛಂಗನೆ ಕುಪ್ಪಳಿಸಿ ಮುಂದಡಿಯಿಡುತ್ತಿದ್ದ ಆತಂಕವಾದಿಯ ಹೊಟ್ಟೆಗೆ ಬಲವಾಗಿ ಒಂದೇಟುಹಾಕಿದ. ತೀರಾ ಅನಿರೀಕ್ಷಿತವಾಗಿದ್ದ ಈ ಪ್ರಹಾರಕ್ಕೆ ಬೆಚ್ಚಿದ ಅವನು ಎರೆಡು ಹೆಜ್ಜೆ ಹಿಂದಕ್ಕೆ ಸರಿದ‌ನಾದರೂ ಮರುಕ್ಷಣವೇ ಸುಧಾರಿಸಿಕೊಂಡು ಪರಮೇಶಿಯ ಮೇಲೆರಗಿದ. ನೋಡನೋಡುತ್ತಿದ್ದಂತೆಯೇ ಬ್ಯಾಂಕಿನ ಆವರಣ ರಣರಂಗವಾಗಿ ಹೋಯಿತು. ಮುಂದಿನ ಮೂರು ನಿಮಿಷಗಳ ಕಾಲ ನಡೆದ ಭೀಕರ ಹೋರಾಟದಲ್ಲಿ ಪರಮೇಶಿಗೆ ಆಶ್ಚರ್ಯವಾಗುವಂತಹಾ ಘಟನೆಯೊಂದು ನಡೆದುಹೋಯಿತು. ಪರಮೇಶಿಯ ಪ್ರತಿಯೊಂದು ಕರಾಟೆ ಪಟ್ಟಿಗೂ ತಕ್ಕ ಪ್ರತ್ಯುತ್ತರ ನೀಡುತ್ತಿದ್ದ ಆತಂಕವಾದಿಯ ಜೊತೆಗೆ ಪ್ಯೂನ್ ಪಾಪಣ್ಣ ಹಾಗೂ ಕ್ಯಾಶಿಯರ್ ಕಾಮರಾಜ್ ಕೂಡಾ ಸೇರಿಕೊಂಡುಬಿಟ್ಟರು. ಇದೇನಿದು ಆಶ್ಚರ್ಯ? ಇವರೂ ಸಹಾ ಆತಂಕವಾದಿಯ ಜೊತೆಗೆ ಶಾಮೀಲಾಗಿದ್ದಾರಾ? ಹಾಗೆಂದು ಯೋಚಿಸುತ್ತಲೇ ಪರಮೇಶಿ ತನ್ನ ಧಾಳಿಯನ್ನು ತೀವ್ರಗೊಳಿಸಿದ. ಆದರೆ ಮುಂದಿನ ಕೆಲವೇ ನಿಮಿಷಗಳಲ್ಲಿ ಮೂವರೂ ಸೇರಿ ಭೀಕರವಾಗಿ ಎಗರಾಡುತ್ತಿದ್ದ ಪರಮೇಶಿಯನ್ನು ಹಿಡಿದು ಒಂದು ಹದಕ್ಕೆ ತಂದರು.

ತಾನು ಅಷ್ಟೆಲ್ಲ ವೀರಾವೇಶದಿಂದ ಹೋರಾಡಿದ್ದು ಯಾವುದೋ ಅಲ್-ಖೈದಾ ಉಗ್ರವಾದಿಯೊಂದಿಗೆ ಅಲ್ಲವೆಂದೂ, ಅಚಾನಕ್ಕಾಗಿ ಕೂಗತೊಡಗಿದ ಸೈರನ್ನನ್ನು ಪರೀಕ್ಷಿಸಲೆಂದು ಒಳಗೆ ಬಂದಿದ್ದ, ಆಗಷ್ಟೇ ಡ್ಯೂಟಿಗೆ ಹಾಜರಾಗಿ ಇನ್ನೂ ಯೂನಿಫಾಮ್ ತೊಡದ ಬ್ಯಾಂಕಿನ ಸೆಕ್ಯೂರಿಟಿ ಗಾರ್ಡ್ ಶೇರ್ ಸಿಂಗ್'ನ ಜೊತೆಯೆಂದೂ ಅರ್ಥವಾಗುವ ಹೊತ್ತಿಗೆ ಪರಮೇಶಿಯನ್ನು ಅವನೊಳಗಿನ ಸಿಂಹದ ಜೊತೆಗೇ ಹೆಡೆಮುರಿಕಟ್ಟಿ ಮೂಲೆಯಲ್ಲಿ ಕೂರಿಸಲಾಗಿತ್ತು.

('ಮಂಗಳ'ದಲ್ಲಿ ಪ್ರಕಟಿತ)

ಭಾನುವಾರ, ನವೆಂಬರ್ 12, 2017

ಪುಳಿಯೋಗರೆ ಉಡ್ಡಯನ!



ಬ್ರಹ್ಮಚಾರಿ ಜೀವನದ ಸಾರ್ವತ್ರಿಕ ಸಮಸ್ಯೆಗಳಲ್ಲಿ ಅಡಿಗೆ ಮಾಡಿಕೊಳ್ಳುವುದೂ ಒಂದು ಎನ್ನುವುದು ನನಗೆ ತುಂಬಾ ತಡವಾಗಿ ಅರ್ಥವಾದ ಸತ್ಯ. ಈ ಮೊದಲು ಕೆಲವು ಗೆಳೆಯರು "ಹೊರಗಡೆ ತಿಂದೂ ತಿಂದೂ ಸಾಕಾಗಿದೆ ಮಗಾ. ಬೇಗ ಮದುವೆ ಆಗ್ಬೇಕು" ಎಂದರೆ "ಅಲ್ವೋ ಒಂದು ಪ್ಲೇಟ್ ಚಿತ್ರಾನ್ನ, ಎರೆಡು ಪ್ಲೇಟ್ ಸೌತ್ ಮೀಲ್ಸ್'ಗೋಸ್ಕರ ಫೈವ್ ಸ್ಟಾರ್ ಹೋಟೆಲ್ನೇ ಪರ್ಚೇಸ್ ಮಾಡ್ತೀನಿ ಅಂತೀಯಲ್ಲೋ" ಎಂದು ತೀರಾ ಉಡಾಫೆಯಿಂದ ನಗುತ್ತಿದ್ದೆ. ಹುಟ್ಟಿದ ಮೊದಲ ಇಪ್ಪತ್ತೊಂದು ವರ್ಷ ಅಮ್ಮನ ಕೈಯ್ಯಡಿಗೆ ಸವಿಯುತ್ತಾ ಕಳೆದವನು ನಾನು. ನನ್ನ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ, ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ಮೊದಲ ಎರೆಡು ಕಂಪನಿಯವರೂ ಅತೀ ಕಡಿಮೆಬೆಲೆಗೆ ಮೂರು ಹೊತ್ತೂ ಊಟ ಕೊಟ್ಟಿದ್ದರು. ಇನ್ನು ರಜೆ ಇದ್ದ ಶನಿವಾರ ಭಾನುವಾರಗಳ ಬೆಳಗ್ಗೆ ಹಸಿವಾದರೆ ಅಕ್ಕಿ ಗಂಜಿ, ಇಲ್ಲದಿದ್ದರೆ ಹಾಪ್ ಕಾಮ್ಸ್'ನ ಬಾಳೇಹಣ್ಣು. ಮಧ್ಯಾಹ್ನ, ರಾತ್ರೆಗಳ ಊಟಕ್ಕೆ ಒಂದೋ ನೆಂಟರ ಮನೆ, ಇಲ್ಲವಾದರೆ ಮುಕ್ಕಾಲು ಲೋಟ ಅಕ್ಕಿಯನ್ನು ಮುಕ್ಕಾಲು ಬಟ್ಟಲು ನೀರಿನಲ್ಲಿ ಮುಳುಗಿಸಿ, ಇಂಡಕ್ಷನ್ ಒಲೆಯಮೇಲಿಟ್ಟು ಬೇಯಿಸಿ ಕೊನೆಗೆ ತಯಾರಾಗುವ, ಹೆಚ್ಚೂಕಡಿಮೆ ಅನ್ನವನ್ನೇ ಹೋಲುವ ಪದಾರ್ಥವನ್ನು ಹತ್ತಿರದ ಹೋಟೆಲ್ನಿಂದ ತಂದ ಸಾಂಬಾರಿನಲ್ಲಿ ಕಲಸಿಕೊಂಡು ತಿನ್ನುತ್ತಾ "ಎಲ್ಲಾ ಸೋಂಬೇರಿಗಳೂ ಹೋಟೆಲ್ನಲ್ಲಿ ತಿನ್ನುವಾಗ ರೂಮ್ನಲ್ಲೇ ಅಡಿಗೆ ಮಾಡಿಕೊಳ್ಳೋ ನಾವೆಷ್ಟು ಶ್ರಮಜೀವಿಗಳು ಅಲ್ವಾ ಮಗಾ?" ಎಂದು ರೂಮ್ ಮೆಟ್ ಹತ್ರ ಜಂಭಕೊಚ್ಚಿಕೊಳ್ಳುತ್ತಿದ್ದೆ.  ಹೀಗೆ ಒಟ್ಟಾರೆ ಬದುಕಿನ ಇಪ್ಪತ್ತಾರು ವರ್ಷಗಳು ಅಡಿಗೆಯೆಂಬ ಉಸಿರಾಟದಷ್ಟೇ ಸಹಜವಾದ, ಆದರೆ ಅಷ್ಟೇ ನಾಜೂಕಾದ ಕ್ರಿಯೆಯನ್ನು ಕಲಿಯದೆಯೇ ಕಳೆದುಹೋಗಿತ್ತು. ಕಾಳುಶ್ರಮವಿಲ್ಲದೇ ತಿನ್ನುತ್ತಿದ್ದ ಆಹಾರವೇನೂ ಸುಮ್ಮನೆ ಗಂಟಲಿಗಿಳಿಯುತ್ತಿರಲಿಲ್ಲ. "ಇದೇನಮ್ಮ, ದಿನಾ ಇದೇ ದೋಸೆ, ಉಪ್ಪಿಟ್ಟು, ರೊಟ್ಟಿ ಮಾಡ್ತೀಯಾ", "ಯಾರ್ ಗುರೂ ಅಡಿಗೆ ಮಾಡಿದ್ದು? ಬರೀ ಬಟಾಣಿ ಹಾಕಿ ಬೇಯ್ಸಿದಾರೆ", " ಏನ್ರೀ ಇವ್ರು, ಅನ್ನ ಸರಿಯಾಗಿ ಬೆಂದೇ ಇಲ್ಲ. ಹೋದವಾರ ಮಾಡಿದ್ದೇ ಮತ್ತೆ ಮಾಡಿದಾರೆ" ಎಂಬ ಇನ್ನೂ ಮುಂತಾದ ಟೀಕೆಗಳು ಅನ್ನ ಇಳಿದ ಅದೇ ಗಂಟಲಿನಿಂದ ಹೊರಬರುತ್ತಿದ್ದವು. ಆದರೆ ಕೇವಲ ಮೊವತೈದು ರುಪಾಯಿಗೆ ತಿಂಗಳಿಡೀ ಊಟ ಕೊಡುತ್ತಿದ್ದ ಎರೆಡನೇ ಕಂಪನಿಯನ್ನೂ ಬಿಟ್ಟೆನೋಡಿ? ಆಗಲೇ ಗೊತ್ತಾಗಿದ್ದು- ಅನ್ನದ ಹಾಗೂ ಅನ್ನದಾತರ ಮಹತ್ವ.

ಊಟದ ಮಟ್ಟಿಗೆ ಹೊಸ ಕಂಪನಿ ಹೊಸ ಹೊಸ ಸಮಸ್ಯೆಗಳನ್ನೊಡ್ಡಿತ್ತು. ಮೊದಲ ದಿನ ಮಧ್ಯಾಹ್ನವೇ ಶುರುವಾಯಿತು ಊಟದ ಬೇಟೆ. ಕಂಪನಿಯಿದ್ದ ಸುಮಾರು ಅರ್ಧ-ಮುಕ್ಕಾಲು ಕಿಲೋಮೀಟರ್ ಸುತ್ತಳತೆಯಲ್ಲಿ ಒಂದೇ ಒಂದು ಚಿಕ್ಕ-ಚೊಕ್ಕ ಹೋಟೆಲ್ ಕಣ್ಣಿಗೆ ಬೀಳಲಿಲ್ಲ. ಇದ್ದ ಒಂದೇ ಒಂದು ಹೋಟೆಲಿಗೆ ನುಗ್ಗಿ 'ಒಂದು ಸೌತ್ ಮೀಲ್ಸ್' ಎಂದು ನೂರರ ನೋಟು ಚಾಚಿದೆ. ನೋಡ ನೋಡುತ್ತಿದ್ದಂತೆ ನನ್ನ ಕೈಲಿದ್ದ ನೂರರ ನೋಟನ್ನು ಕಸಿದುಕೊಂಡ ಕ್ಯಾಶಿಯರ್ ಬಡ್ಡೀಮಗ ಮರಳಿಕೊಟ್ಟಿದ್ದು ಬರೀ ಹತ್ತು ರೂಪಾಯಿಯನ್ನ! ಕೆಲವೇ ಸೆಕೆಂಡ್'ಗಳ ಕೆಳಗೆ ನೂರರ ನೋಟಿದ್ದ ಕೈಗೀಗ ಬರೀ ಹತ್ತರ ಹರಕು ನೋಟು ಬಂದ ಅದ್ಭುತವನ್ನು ಪೆಚ್ಚಾಗಿ ನೋಡುತ್ತಾ ನಿಂತ ನನಗೆ ಬೆಂಗಳೂರು ಸಿಂಗಾಪುರ ಆಗಿದೆ ಅನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ.

ಈಗ ಮಧ್ಯಾಹ್ನದೂಟಕ್ಕಿರುವ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸತೊಡಗಿದೆ. ಒಂದೊತ್ತಿನ ಊಟಕ್ಕೆ ಸಾವಿರಗಟ್ಟಲೆ ತೆರುವುದಕ್ಕೆ ನಾನು ಯಾವ ಅಂಬಾನಿಯ ಅಳಿಯನೂ ಅಲ್ಲ. ಅಮ್ಮ ಸೂಚಿಸಿದ 'ಮದುವೆ ಆಗ್ಬಿಡು' ಎನ್ನುವುದು ಅತ್ಯಂತ ದುಬಾರಿ ಹಾಗೂ ಅಪಾಯಕಾರಿ ಮಾರ್ಗ. ಇನ್ನುಳಿದ ಏಕೈಕ ದಾರಿ ರೂಮಿನಲ್ಲೇ ಮಾಡಿಕೊಳ್ಳುವುದು. ಅಂದಹಾಗೇ ಇದು ಈಗ ಹೊಳೆದ ಉಪಾಯವೇನೂ ಆಗಿರಲಿಲ್ಲ. ಈ ಕಂಪನಿಗೆ ಆಯ್ಕೆಯಾದಾಗ "ಮಧ್ಯಾಹ್ನ ಊಟಕ್ಕೇನು ಮಾಡ್ತೀಯ?" ಎಂದು ಕೇಳದವರಿಗೆಲ್ಲ "ಪುಳಿಯೋಗರೆ, ಚಿತ್ರಾನ್ನ, ಉಪ್ಪಿಟ್ಟು... ಹೀಗೇ ಏನಾದ್ರೂ ರೂಮಲ್ಲೇ ಮಾಡಿ ತಗೊಂಡೋಗ್ತೀನಿ" ಎಂದು ಎದೆಯುಬ್ಬಿಸಿಕೊಂಡು ಹೇಳಿದ್ದೆ. ಅವರು ಅಚ್ಚರಿಯಲ್ಲಿ "ಅರೆರೇ ಹೌದಾ? ಶಭಾಶ್!" ಎಂದು ಮೆಚ್ಚಿದಾಗ ವೀರ ಕರ್ನಲ್'ನಂತೆ ಮೀಸೆ ತಿರುವಿಕೊಂಡಿದ್ದೆ. ಆದರೆ ಅಪ್ಪೀತಪ್ಪೀ ಯಾರಾದರೂ ಒಬ್ಬ "ಏನು ಹಾಕಿ ಉಪ್ಪಿಟ್ಟು ಮಾಡ್ತೀಯಪ್ಪ ನಳಮಹಾರಾಜ?" ಎಂದು ಕೇಳಿದ್ದರೂ ಉತ್ತರಕ್ಕೆ ನಾಲ್ಕು ಆಪ್ಶನ್ ಕೇಳುತ್ತಿದ್ದೆನೆನ್ನುವುದು ನನಗೆ ಮಾತ್ರ ಗೊತ್ತಿದ್ದ ಸತ್ಯ! ಇನ್ನಷ್ಟೇ ಕಲಿತು ಅಡಿಗೆ ಮಾಡಬೇಕಾದವನು, ಈಗಾಗಲೇ ಬಂಡಿಗಟ್ಟಲೆ ಬೇಯಿಸಿ ಬಿಸಾಕಿರುವ ಬಾಣಸಿಗನಂತೆ ಫೋಸ್ ಕೊಟ್ಟಿದ್ದೆ. ಅದ್ಯಾವ ಶಕುನ ದೇವತೆ ಅಸ್ತು ಅಂದಿದ್ದರೋ ಗೊತ್ತಿಲ್ಲ, ಆ ಸುಳ್ಳು ಸತ್ಯವಾಗುವ ಕಾಲವೀಗ ಬಂದೇಬಿಟ್ಟಿತು.

ಸಂಜೆ ಬಂದವನೇ ನೇರ ಅಂಗಡಿಗೆ ಹೋಗಿ "ಪುಳಿಯೋಗರೆ ಮಿಕ್ಸ್ ಯಾವ್ದ್ಯಾವ್ದಿದೆ?" ಎಂದೆ. ಮುತ್ತಿಕೊಂಡಿದ್ದ ಗ್ರಾಹಕರ ನಡುವೆ ಸುಸ್ತಾಗಿದ್ದ ಅಂಗಡಿಯವನು "ಅಯ್ಯಂಗಾರ್ ಇದೆ ಕೊಡ್ಲಾ ಸರ್?" ಎಂದ. ನನಗೆ ಗೊತ್ತಿರೋ ಮಟ್ಟಿಗೆ ಈ ಅಯ್ಯಂಗಾರಿಗಳು ಎಂದರೆ ತಮಿಳುನಾಡಿನವರೋ, ಕೇರಳದವರೋ ಇರಬೇಕು. "ಅವರ ಶೈಲಿ ನಂಗೆ ಅಷ್ಟಾಗಿ ಆಗಿಬರೋಲ್ಲ. ನಮ್ಮೂರಿನ ಈ ಅಡಿಗ, ಐತಾಳ, ಭಟ್ಟ ಅಂತ ಯಾವ್ದಾದ್ರೂ ಇದ್ಯಾ ಗುರೂ?" ಎಂದು ಕೇಳಬೇಕೆಂದುಕೊಂಡೆ. ಆದರೆ ಅವನ ಪಕ್ಕದಲ್ಲಿದ್ದ ತಕ್ಕಡಿಯ ತೂಕದ ಕಲ್ಲು ಹಾಗೂ ಅವನ ಅಸಮಾಧಾನದ ಮುಖ ನೋಡಿ ಭಯವಾಗಿ 'ಭಾರತೀಯರೆಲ್ಲ ಒಂದೇ' ಎಂಬ ನಿರ್ಧಾರಕ್ಕೆ ಬಂದು "ಸರಿ, ಅಯ್ಯಂಗಾರನ್ನೇ ಕೊಡಿ" ಎಂದೆ. ಜೊತೆಗೆ ಎರೆಡು ವಾರಕ್ಕಾಗುವಷ್ಟು ಅಡಿಗೆ ಎಣ್ಣೆಯನ್ನೂ ಖರೀದಿಸಿ ರೂಮಿಗೆ ಬಂದು ಪವಡಿಸಿದೆ. ನಿದಿರೆಯಲ್ಲಿ ನಾನು ಭರ್ಜರಿ ಪುಳಿಯೋಗರೆ ಮಾಡಿದಂತೆ, ಅದನ್ನು ನನ್ನ ಹೊಸ ಸಹೋದ್ಯೋಗಿಗಳೆಲ್ಲ ಚಪ್ಪರಿಸಿಕೊಂಡು ತಿಂದು ಡರ್ರನೆ ತೇಗಿದಂತೆ ಕನಸು ಕಂಡು ಮಲಗಿದಲ್ಲೇ ಬೆನ್ನು ತಟ್ಟಿಕೊಂಡೆ.

ಕೊನೆಗೂ ನನ್ನ ಪುಳಿಯೋಗರೆ ಪ್ರಯೋಗದ ಹಗಲು ಬಂದೇಬಿಟ್ಟಿತು. ಒಂದು ಗಂಟೆ ಮುಂಚೆಯೇ ಎದ್ದು ಯಾವ ಫೈವ್ ಸ್ಟಾರ್ ಹೋಟೆಲಿನ ಅಡಿಗೆಭಟ್ಟನಿಗೂ ಕಮ್ಮಿ ಇಲ್ಲದಂತೆ ಆಪ್ರೋನ್ ಕ್ಲಾತ್ ಕಟ್ಟಿಕೊಂಡು ತಯಾರಾದೆ. ಒಂದು ಆ್ಯಂಗಲ್'ನಿಂದ ಅನ್ನದಂತೇ ಕಾಣುತ್ತಿದ್ದ ಪದಾರ್ಥವನ್ನು ತಯಾರಿಸಿ ಪಕ್ಕಕ್ಕಿಟ್ಟೆ.

ಮುಂದಿನ ಸರದಿ ಪುಳಿಯೋಗರೆ ಮಿಕ್ಸ್ ನದು!

ಸ್ಟೀಲ್ ಪಾತ್ರೆಯನ್ನು ಇಂಡಕ್ಷನ್ ಒಲೆಯ ಮೇಲಿಟ್ಟು ಚಾಲೂಮಾಡಿದೆ. ಪಾತ್ರೆಯೊಳಕ್ಕೆ ಪಾಮಾಯಿಲನ್ನು ಸುರಿದು ಬಾಯಿ ಒಡೆದ ಪುಳಿಯೋಗರೆ ಪೊಟ್ಟಣ ತೆಗೆದುಕೊಂಡೆ. ಅರೆಕ್ಷಣದಲ್ಲಿ ಎಣ್ಣೆ ಚಿಟಿಚಿಟಿಗುಟ್ಟಲು ಪ್ರಾರಂಭಿಸಿತು. ಅಲ್ಲಿಯ ತನಕ ಎಲ್ಲವೂ ಸರಿಯಾಗಿಯೇ ಇತ್ತು, ಆದರೆ ಕೈಲಿದ್ದ ಪೊಟ್ಟಣದ ಅಷ್ಟೂ ಪುಳಿಯೋಗರೆ ಪುಡಿಯನ್ನು ಪಾತ್ರೆಯೊಳಕ್ಕೆ ಸುರಿದು ಮುಖದ ತುಂಬಾ ಕಣ್ಣಿದ್ದ 'ಕಣ್ ಸೆಟ್ಗ'ದಿಂದ ಅಲ್ಲಾಡಿಸತೊಡಗಿದೆ ನೋಡಿ,  ಇದ್ದಕ್ಕಿದ್ದಂತೆಯೇ ಎದುರಿದ್ದ ಪಾತ್ರೆಯೊಳಗೆ ಕೋಲಾಹಲ ಆರಂಭವಾಯಿತು! ಒಳಗಿದ್ದ ಎಣ್ಣೆ ಈಗಷ್ಟೇ ಬಂದ ಅಪರಿಚಿತ ಪುಳಿಯೋಗರೆ ಪುಡಿಯ ಜೊತೆ ಚಿಟಿಚಿಟಿಯೆನ್ನುತ್ತಾ ಭೀಕರ ಹೋರಾಟಕ್ಕಿಳಿಯಿತು. ಬೇಯುತ್ತಿದ್ದ ಪುಳಿಯೋಗರೆ ಪುಡಿ ಕಪ್ಪುಬಣ್ಣಕ್ಕೆ ತಿರುಗತೊಡಗಿತು. ಈ ಮಾರಾಮಾರಿಕಂಡು ಗಾಬರಿಯಾದ ನಾನು ಒಲೆಯ ಸ್ವಿಚ್ ಆರಿಸಿ ಕೈ ಹಿಂದೆತರುತ್ತಿದ್ದೆ...

ಢಮಾರ್!

ಅದ್ಯಾವ ರಾಸಾಯನಿಕ ಕ್ರಿಯೆ ನಡೆಯಿತೋ, ಎಣ್ಣೆ-ಪುಳಿಯೋಗರೆಪುಡಿಗಳ ಅದ್ಯಾವ ಅಣು-ಪರಮಾಣುಗಳು ಕಚ್ಚಾಡಿಕೊಂಡವೋ ಗೊತ್ತಿಲ್ಲ, ದೊಡ್ಡ ಸದ್ದಿನೊಂದಿಗೆ ಸ್ಫೋಟ ಸಂಭವಿಸಿ ಪಾತ್ರೆಯೇ ಅಲ್ಲಾಡಿಹೋಯಿತು. ಬೆಚ್ಚಿಬಿದ್ದ ನಾನು ಬಾಂಬ್ ಸ್ಫೋಟಕ್ಕ ಸಿಲುಕಿದವನಂತೆ ಛಂಗನೆ ನೆಗೆದು ಪಕ್ಕದಲ್ಲಿದ್ದ ಮಂಚವೇರಿಕುಳಿತೆ!

ಸುಟ್ಟ ಹೊಗೆ, ಕರಟಿದ ವಾಸನೆ, ಮೇಜಿನ ಮೇಲೆಲ್ಲಾ ಚೆಲ್ಲಾಪಿಲ್ಲಿಯಾದ ಕಡಲೆಬೀಜ-ಪುಳಿಯೋಗರೆ ಪುಡಿಗಳು...  ಉಪಗ್ರಹವನ್ನು ಹೊತ್ತ ರಾಕೇಟೊಂದು ಈಗಷ್ಟೇ ಬಾಹ್ಯಾಕಾಶಕ್ಕೆ ಹಾರಿದ ಜಾಗದಲ್ಲಿ ಇರುವಂತಹಾ ಎಲ್ಲಾ ಲಕ್ಷಣಗಳೂ ಅಲ್ಲಿದ್ದವು. ಪುಣ್ಯಕ್ಕೆ ಒಲೆಯ ಸ್ವಿಚ್ಚನ್ನು ನಾನಾಗಲೇ ಆರಿಸಿದ್ದರಿಂದ ಸ್ಫೋಟ ಅಲ್ಲಿಗೇ ನಿಂತಿತು. ಆಗಿದ್ದಾದರೂ ಏನೆಂಬುದೇ ಅರಿವಾಗದೆ ಕಂಗಾಲದ ನಾನು ಮೆಲ್ಲನೆ ಸುಧಾರಿಸಿಕೊಂಡೆ. ನಾನು ಕೊಂಡು ತಂದದ್ದು ಪುಳಿಯೋಗರೆ ಪುಡಿಯೋ ಅಥವಾ ಬೇರ್ಯಾವ ಆಸ್ಫೋಟನಾಕಾರಿ ಸಾಮಗ್ರಿಯೋ ಎಂದು ಪರೀಕ್ಷಿಸಿದೆ. ಯಾರಿಗೆ ಗೊತ್ತು? ಆಲ್-ಖೈದಾದವರೋ, ಇನ್ಯಾವ ಉಗ್ರ ಸಂಘಟನೆಯವರೋ ಪುಳಿಯೋಗರೆ ಪ್ಯಾಕ್ನಲ್ಲಿ ಪುಡಿಪುಡಿ ಬಾಂಬ್ ತುಂಬಿಸಿ ಕಳಿಸಿರಲಿಕ್ಕೂ ಸಾಕು! ಅಥವಾ ಮೊದಲು ನಾನು ಅಯ್ಯಂಗಾರನ್ನು ಬೇಡ ಅಂದಿದ್ದನ್ನೇನಾದರೂ ಕೇಳಿಸಿಕೊಂಡ, ಇಲ್ಲೇ ಎಲ್ಲೋ ತೆಲಾಡುತ್ತಿರುವ ಯಾವದೋ ಅಯ್ಯಂಗಾರಿ ಆತ್ಮ ಹೀಗೆ ಮಾಡಿದ್ದರೂ ಮಾಡಿರಬಹುದು.

ಸಂಜೆ ಈ ಘಟನೆಯ ಕುರಿತಾದ ಸಮಗ್ರ ವರದಿಯೊಂದನ್ನು ತಯಾರಿಸಿ, ಗೆಳತಿಯೊಬ್ಬಳಿಗೆ ಒಪ್ಪಿಸಿ ಅವಳ ತಜ್ಞ ಅಭಿಪ್ರಾಯ ಕೇಳಿದೆ. ಎರೆಡು ನಿಮಿಷಗಳ ಕಾಲ ಸುಧೀರ್ಘವಾಗಿ ನಕ್ಕ ಅವಳು ಒಲೆಯ ಉಷ್ಣದ ಪ್ರಮಾಣ ಜಾಸ್ತಿ ಇದ್ದುದು ಹಾಗೂ ಸ್ಟೀಲ್ ಪಾತ್ರೆಗೆ ಪಾಮಾಯಿಲ್ ಹಿಡಿಸದೇ ಹೋಗಿದ್ದೇ ಈ ಸ್ಫೋಟಕ್ಕೆ ಕಾರಣವೆಂದು ತೀರ್ಪುಕೊಟ್ಟಳು. ಅಲ್ಲದೆ ತಾನು ಅಡಿಗೆ ಮಾಡತೊಡಗಿದ್ದ ಆರಂಭದಲ್ಲೂ ಹೀಗೇ  ಆಗುತ್ತಿತ್ತೆಂದು ಹೇಳಿ 'ಆಸ್ಫೋಟವಿಲ್ಲದೆ ಅಡಿಗೆ ಕಲಿತವರಿಲ್ಲವೈ' ಎಂದು ಸಮಾಧಾನಮಾಡಿದಳು.

ಅಂದು ಮಧ್ಯಾಹ್ನ ಮತ್ತೆ ಹೋಟೆಲ್ನಲ್ಲಿ ಹತ್ತರ ಹರಕು ನೋಟು ಹಿಡಿದುಕೊಂಡು ಸೋಡಬೆರೆಸಿದ ಅನ್ನತಿನ್ನುತ್ತಾ ಕುಳಿತಿದ್ದಾಗ ಹಿಂದಿನ ಕಛೇರಿಯಲ್ಲಿ ಪ್ರೀತಿಯಿಂದ ಬಡಿಸುತ್ತಿದ್ದ ಹೆಡ್ ಕುಕ್ ಅಜ್ಜಿ, ಮನೆಯಿಂದ ತಂದದ್ದನ್ನು ಹಂಚಿಕೊಳ್ಳುತ್ತಿದ್ದ ಸಹೋದ್ಯೋಗಿಗಳು, ಕೇಳಿದ್ದನ್ನೆಲ್ಲ ಬೇಸರವಿಲ್ಲದೆ ಮಾಡಿ ಬಡಿಸುವ ಅಮ್ಮ ಕಣ್ಮುಂದೆ ನಿಂತಂತಾಯಿತು. ಎದ್ದು ಕೈ ತೊಳೆದುಕೊಂಡೆ. ಸಿಂಕಿನಲ್ಲಿ ಮುಖಕ್ಕೆರಚಿಕೊಂಡ ನೀರಿನ ಜೊತೆಗೆ ಒಂದೆರೆಡು ಕಣ್ಣ ಹನಿಗಳೂ ಸದ್ದಿಲ್ಲದೇ ಜಾರಿಹೋದವು.

(12-11-2017ರ ವಿಶ್ವವಾಣಿ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಿತ)

ಸೋಮವಾರ, ನವೆಂಬರ್ 6, 2017

ಮರೆವಿನೊಳಗಿನ ಮಹಲು

"ಏನಾದ್ರೂ ಕಳ್ಕೊಂಡ್ರಾ ಅಜ್ಜಿ?"

ಒಂದು ಕೈಯ್ಯಲ್ಲಿ ಕೈಚೀಲವನ್ನು ಹಿಡಿದು, ಇನ್ನೊಂದರಿಂದ ಬಗಲಲ್ಲಿರುವ ವ್ಯಾನಿಟಿ ಬ್ಯಾಗ್ ನೊಳಗೆ ತಡಕಾಡುತ್ತಿದ್ದ ಅಜ್ಜಿ ತಲೆಯೆತ್ತಿ ನೋಡಿದಳು. ಎದುರುಗಡೆ ಹಲ್ಕಿರಿಯುತ್ತಾ ನಿಂತಿದ್ದಾನೆ ಮುದುಕ! ತನಗಿಂತ ವಯಸ್ಸಾದವನು ತನ್ನನ್ನು 'ಅಜ್ಜಿ' ಎಂದದ್ದು ಆಕೆಗೆ ರೇಗಿಹೋಯಿತು. "ಅದೆಲ್ಲಾ ನಿಮಗ್ಯಾಕೆ? ಸುಮ್ಮನೆ ನಿಮ್ಮೆದೆಷ್ಟೋ ಅಷ್ಟು ನೋಡಿಕೊಂಡು ಮುಂದೆ ಹೋಗಿ" ಎಂದು ಮುದುರುಬಿದ್ದ ಕಣ್ಣುಗಳನ್ನು ಕೆಂಪಗೆಮಾಡುತ್ತಾ ಬಿರುಸಾಗಿ ನುಡಿದಳು.

"ಮುಂದೆ ಹೋಗು ಅನ್ನೋದಕ್ಕೆ ನಾನೇನು ಭಿಕ್ಷೆ ಕೇಳಿದೆನಾ? ಪರಿಚಯದ ಅಜ್ಜಿ,
 ಪಾಪ ಏನೋ ಹುಡುಕುತ್ತಿದ್ದಾರಲ್ಲಾ ಅಂತ ಕೇಳಿದೆ ಅಷ್ಟೇ" ವೃದ್ಧನ ಮುಖದಲ್ಲಿನ ಮಂದಹಾಸ ಹಾಗೇ ಇತ್ತು.

"ಏನು ಪರಿಚಯ? ನಾನಂತೂ ಇದೇ ಮೊದಲು ನಿಮ್ಮನ್ನ ನೋಡ್ತಿರೋದು. ಇನ್ನೆಲ್ಲಿಂದ ಬರ್ಬೇಕು ಪರಿಚಯ" ಮತ್ತೆ ಮತ್ತೆ ತನ್ನನ್ನು ಅಜ್ಜಿ ಎನ್ನುವ ಅಜ್ಜನ ಮೇಲೆ ಆಕೆಗಿನ್ನೂ ಕೋಪ ಹೋಗಿಲ್ಲ.

"ನೀವು ನೋಡದೇ ಇರಬಹುದು. ಆದರೆ ನಾನು ನೋಡಿದೀನಲ್ಲಾ! ನಿಮ್ಮ ಮನೆಯ ಹತ್ತಿರಾನೇ ನಾನೂ ಇರೋದು."

"ಅಷ್ಟಕ್ಕೇ ಹೀಗೆ ಮದ್ಯ ದಾರಿಯಲ್ಲಿ ಅಡ್ಡಹಾಕಿ ಮಾತನಾಡಿಸಬಹುದೂ ಅಂದುಕೊಂಡ್ರಾ? ಇಷ್ಟು ವಯಸ್ಸಾಗಿದೆ, ಸಭ್ಯತೆ ಬೇಡ್ವಾ?"

"ನೀವು ಏನು ಹುಡುಕ್ತಿದೀರಾಂತ ನಂಗೆ ಗೊತ್ತು ಅಜ್ಜೀ" ಅವಳ ಕೋಪವನ್ನ ಗಮನಿಸಿಯೇ ಇಲ್ಲದಂತೆ ನಗುತ್ತಾ ನುಡಿದರು.

"ಏನು?"

"ನಿಮ್ಮ ಮನೆಯ ವಿಳಾಸವಿರುವ ಚೀಟಿಯನ್ನ ತಾನೇ?"

"ಅದು..... ನಿಮಗ್ಹೇಗೆ ಗೊತ್ತಾಯ್ತು?" ಅಜ್ಜಿಗೆ  ಪರಮಾಶ್ಚರ್ಯ.

"ನನಗೆಲ್ಲಾ ಗೊತ್ತು. ನಾನೂ ಅತ್ತಕಡೆಯೇ ಹೊರಟಿದ್ದೇನೆ. ಬನ್ನಿ ನಿಮ್ಮನ್ನೂ ಮನೆ ತಲುಪಿಸ್ತೇನೆ" ಅಜ್ಜನ ಮುಖದಲ್ಲಿ ಗೆಲುವಿನ ಮಂದಹಾಸ.

"ನಾನ್ಯಾಕೆ ನಿಮ್ಮ ಜೊತೆ ಬರ್ಲಿ? ನನಗೆ ನಮ್ಮ ಮನೆಯ ದಾರಿ ಗೊತ್ತಿದೆ" ಅಜ್ಜಿಯ ಬಿಂಕದ ನುಡಿ.

"ಹಾಗಾದರೆ ಮತ್ಯಾಕೆ ವಿಳಾಸದ ಚೀಟಿ ಹುಡುಕ್ತಿದ್ರಿ?"

".................."

"ಪರವಾಗಿಲ್ಲ ಬನ್ನಿ. ನೀವು ಮನೇ ದಾರಿ ಮರೆತ್ರೀಂತ ನಿಮ್ಮ ಯಜಮಾನ್ರಿಗೆ ಹೇಳಲ್ಲ ನಾನು"

"ಅವರು ನಿಮಗೆ ಗೊತ್ತಾ?"  ಅಜ್ಜಿಗೆ ಮತ್ತೊಮ್ಮೆ ಅಚ್ಚರಿ.

"ಬುದ್ಧಿ ಬಂದಾಗಿಂದಾನೂ ಗೊತ್ತು"

"ಆದ್ರೆ ನಾನ್ಯಾವತ್ತೂ ನಿಮ್ಮನ್ನು ನೋಡೇ ಇಲ್ವಲ್ಲಾ?"

"ನಾನು ನೋಡಿದೀನಲ್ಲ"

ಹೆಜ್ಜೆಗಳು ಬೆರೆತು ಮುನ್ನಡೆದವು.

"ಅಲ್ಲಾ... ಮನೆ ದಾರಿ ಮರೆಯೋರು ಹೊರಗ್ಯಾಕೆ ಬರ್ತೀರ?" ಅಜ್ಜನ ಕುಹುಕ.

"ನಾನೇನು ದಾರಿ ಮರ್ತಿಲ್ಲ. ಈ ಬೆಂಗ್ಳೂರಲ್ಲಿ ಎಲ್ಲಾ ಬೀದಿಗಳು ಒಂದೇ ಥರಾ ಕಾಣ್ತಾವೆ. ಅದ್ಕೆ ಸ್ವಲ್ಪ ಗೊಂದಲ ಅಷ್ಟೇ"
ಸಮರ್ಥಿಸಿಕೊಳ್ಳುತ್ತಾ ಮುಂದುವರಿಸಿದಳು:
"ನಾಳೆಯಿಂದ ಬೇಸಿಗೆ ರಜೆ ಆರಂಭ. ನನ್ನ ಮೊಮ್ಮಗ ಬರ್ತಿದಾನೆ ಅಮೆರಿಕಾದಿಂದ. ಅವನಿಗೆ ದೂದ್ ಪೇಡ ಅಂದ್ರೆ ತುಂಬಾ ಇಷ್ಟ. ಆದ್ರೆ ಅವನಮ್ಮ ಇದೆಲ್ಲಾ ತಿನ್ನೋಕೆ ಬಿಡಲ್ಲ. ಅವಳಿಲ್ಲದಾಗ ನನ್ಹತ್ರ ಗಲಾಟೆ ಮಾಡ್ತಾನೆ ಪೇಡ ಕೊಡಿಸು ಅಂತ. ಅದಕ್ಕೆ ಈಗಲೇ ತಗೊಂಡೆ, ಅವರು ಬಂದ್ಮೇಲೆ ಪುರ್ಸೊತ್ತಾಗಲ್ಲ ಅಂತ."

"ಓಹೋ ಹೌದಾ....."

"ಸಣ್ಣವನಿದ್ದಾಗ ನನ್ನ ಮಗನಿಗೂ  ಹಾಗೇ, ಪೇಡ ಅಂದ್ರೆ ಪ್ರಾಣ. ಆಗೆಲ್ಲಾ ನಾನು ಮನೆಲೇ ಮಾಡಿಕೊಡ್ತಿದ್ದೆ. ಈಗ ವಯಸ್ಸಾಯ್ತು ನೋಡಿ. ಮಾಡೋಕಾಗಲ್ಲ"

"ಹಾಂ. ನಿಜ ನಿಜ. ಆದ್ರೂ ಅದಕ್ಕೆ ನೀವೇ ಬರ್ಬೇಕ? ಎಷ್ಟೊಂದು ವಾಹನಗಳು ಓಡಾಡೋ ರಸ್ತೆ ಇದು"

"ಇನ್ಯಾರಿದಾರೆ ಹೇಳಿ? ನನ್ನ ಹೆಂಡತಿ ಮಕ್ಕಳಷ್ಟೇ ನನ್ನ ಪ್ರಪಂಚ ಅಂತ ಮಗ ದೂರ ಹೋದ. ಇರೋ ಒಂದು ಕಿರಾಣಿ ಅಂಗಡಿಯೇ ನನ್ನ ಜಗತ್ತು  ಎನ್ನುತ್ತಾ ಗಂಡ ಹೊರಗೆ ಹೋಗ್ತಾರೆ. ಅಂದ್ಮೇಲೆ  ಇವರೆಲ್ಲರೂ ನನ್ನ ಪ್ರಪಂಚ ಅಂದುಕೊಂಡಿರುವ ನಾನೇ ಈ ಎಲ್ಲಾ ಕೆಲಸ ಮಾಡಬೇಕಲ್ವಾ.....?"
ಮುದುಕನ ಮುಖದಲ್ಲಿ ಕಳವಳಿಕೆಯೊಂದು ಹಾದು ಹೋಯಿತು.

"ಅಂದಹಾಗೇ ನಿಮ್ಮನೆಯಲ್ಲಿ ಈ ವಂದಲಗ ಏನಾದ್ರೂ ಬೆಳೆದಿದೀರ? ಇದ್ದರೆ ಇವರ ಹತ್ರ ಕೊಟ್ಟು ಕಳಿಸ್ತೀರ? ಅದರ ಲೇಹ ಮಾಡಿ ಕಳಿಸ್ಬೇಕು. ದಿನಾ ಬೆಳಗ್ಗೆ ತಿಂದ್ರೆ ಮೊಮ್ಮಗನ ನೆನಪಿನ ಶಕ್ತಿ ಹೆಚ್ಚಾಗುತ್ತೆ. ಪಾಪ, ಚಿಕ್ಕ ವಯಸ್ಸಿಗೇ ಅದೆಷ್ಟೆಲ್ಲಾ ಕಲೀಬೇಕು ಅವ್ನು ."

"ಹೂಂ, ಇರ್ಬೇಕು ನೋಡ್ತೀನಿ"

ಮನೆ ಬಂತು. ಬಾಗಿಲು ತೆರೆದ ಕೆಲಸದವಳು ವೃದ್ಧನನ್ನು ನೋಡಿ ತಲೆತಗ್ಗಿಸಿ ನಿಂತಳು. ಒಳಗೆ ಬಂದೊಡನೆಯೇ ಕೈಲಿದ್ದ ಪೇಡದ ಪೊಟ್ಟಣವನ್ನು ಫ್ರಿಜ್ಜಿನಲ್ಲಿಡಲೆಂದು ಅಡುಗೆ ಕೋಣೆಗೆ ನಡೆದವಳನ್ನೇ ನೋಡುತ್ತಾ ಅಜ್ಜ ಜೇಬಿನಿಂದ ಮೊಬೈಲ್ ತೆಗೆದು ಕಿವಿಗಿಟ್ಟುಕೊಂಡರು. "ಹಲೋ ಮಾಣಿ... ಹುಡುಕೋದು ಬೇಡ, ಅನುಸೂಯ ಸಿಕ್ಕಿದ್ಲು... ಮತ್ತೆ ಸ್ವೀಟ್ಸ್ ಅಂಗಡಿಗೆ ಹೋಗಿದ್ಲು, ಮೊಮ್ಮಗನಿಗೆ ಪೇಡ ತರ್ತೀನಿ ಅಂತ. ಮನೇಗೆ ಕರ್ಕೊಂಡ್ಬಂದೆ. ಕೆಲಸವಳು ಇದಾಳೆ ಜೊತೆಗೆ. ನೀನು ಅಂಗ್ಡೀಗೆ ಬಾ. ನಾನೂ ಹೊರ್ಟಿದೀನಿ....."

ಮೊಬೈಲ್ ಜೇಬಿಗಿಳಿಸಸಿದವರು ಅಲ್ಲೇ ನಿಂತಿದ್ದ ಕೆಲಸದವಳಿಗೆ  "ಜೋಪಾನ. ಮತ್ತೆ ಆಚೆ ಹೋಗದಂಗೆ ನೋಡ್ಕೋ" ಎಂದು ಗಡುಸುದನಿಯಲ್ಲಿ ತಾಕೀತು ಮಾಡಿದರು. ಅಷ್ಟರಲ್ಲಿ ಅವರ ನೋಟ ಗೋಡೆಯತ್ತ ಸರಿಯಿತು....

ಅಲ್ಲಿ  ತನ್ನ ಸುತ್ತಲೂ ಗಂಧದ ಹಾರ ಹಾಕಿಸಿಕೊಂಡು ತಣ್ಣಗೆ ನಗುತ್ತಾ ನಿಂತಿತ್ತು, ವರುಷದ ಕೆಳಗೆ ಅಪಘಾತಕ್ಕೀಡಾದ ಅವರ ಮಗ, ಸೊಸೆ ಹಾಗೂ ಮೊಮ್ಮಗನ ಫೋಟೋ....

ಅದನ್ನೇ ಅರೆಕ್ಷಣ ದಿಟ್ಟಿಸಿ ನಿಟ್ಟುಸಿರಿಟ್ಟು ಅಡಿಗೆ ಮನೆಯತ್ತ ಮತ್ತೊಮ್ಮೆ ತುಂಬುಗಣ್ಣಿಂದ ನೋಡಿದರು. ಭಾರವಾದ ಹೆಜ್ಜೆಗಳನ್ನಿಡುತ್ತಾ ಹೊರಗೆ ನಡೆದವರಿಗೆ ಬಾಗಿಲಿನಿಂದ ಹೇಳಿತು ಆ ದನಿ..

"ವಂದಲಗನ ಸೊಪ್ಪು ಮರೀಬೇಡೀ....."


(ವಿಶ್ವವಾಣಿ ಸಾಪ್ತಾಹಿಕ 'ವಿರಾಮ'ದ ೫-೧೧-೨೦೧೭ರ ಸಂಚಿಕೆಯಲ್ಲಿ ಪ್ರಕಟಿತ)

ಶನಿವಾರ, ನವೆಂಬರ್ 4, 2017

ರಜೆಯಲ್ಲಿ ಕಾಣುವ ಬೆಂಗಳೂರು

ನವೆಂಬರ್ ಒಂದು ಕೂಡಾ ಮುಗಿದಿದೆ. ಅಲ್ಲಿಗೆ 2017ರ ಕ್ಯಾಲೆಂಡರ್ ನ ರಜಾದಿನಗಳೆಲ್ಲ ಬಹುತೇಕ ಮುಗಿದಹಾಗೇ. ಕ್ರಿಸ್ಮಸ್ ಒಂದೇ ಉಳಿದುಕೊಂಡಿರುವ ಈ ಕ್ಯಾಲೆಂಡರ್ ನ ಕಟ್ಟಕಡೆಯ ಹಬ್ಬ.
ಈ ಸಾಲುಸಾಲು ರಜೆಗಳು ಬಂದಾಗ ಬೆಂಗಳೂರಿನಲ್ಲೆ ಉಳಿದುಹೋಗುವರಿಗೆ ಸಿಗುವ ಅತಿದೊಡ್ಡ ಖುಷಿ ಏನು ಗೊತ್ತಾ? ಖಾಲಿ ರೋಡುಗಳು ಹಾಗೂ ಖಾಲಿ ಬಸ್ಸುಗಳು! ಇಷ್ಟುದಿನ ಕಾಲು ಮುರಿದ ಆಮೆಯಂತೆ ಕುಗುರುತ್ತಾ ಸಾಗುತ್ತಿದ್ದ ಇದೇ ರಸ್ತೆಗಳಲ್ಲಿನ ವಾಹನಗಳಿಗೀಗ ಊರಿನ ಬಸ್ಸಿನಂತೆ ಸುಂಯ್ಯನೆ ಓಡತೊಡಗುತ್ತವೆ. ಅದೇಕೋ ಗೊತ್ತಿಲ್ಲ, ರಶ್ಶಿಲ್ಲದ ಬಿಎಂಟಿಸಿ ಗಳಲ್ಲಿ ಓಡಾಡುವುದೆಂದರೆ ನನಗೊಂಥರಾ ಖುಷಿ. ನಗರದೊಳಗಿನ ಅದೇ ಬನಶಂಕರಿ, ಜಯನಗರ, ಬಸವನಗುಡಿಗಳಲ್ಲಾಗಿರಬಹುದು ಅಥವಾ ಊರ ಹೊರಗಿನ ಯಲಹಂಕ, ಜಾಲಹಳ್ಳಿ, ಬಿಇಎಲ್ ಗಳಲ್ಲಾಗಿರಬಹುದು, ಇಷ್ಟುದಿನ ಬಸುರಿ ಹೆಂಗಸಿನಂತೆ ಮಾರಿಗೊಮ್ಮೆ ನಿಲ್ಲುತ್ತಾ, ಏದುಸಿರು ಬಿಡುತ್ತಾ, ಚಿಕ್ಕ ಏರು ಬಂದರೂ ಭರ್ರೋ ಎಂದು ಬೊಬ್ಬಿಡುತ್ತಾ, ಒಳಗೆ ಒಂಟಿಕಾಲಿನಲ್ಲಿ ನಿಂತ ಐಟಿಬಿಟಿ ತಪಸ್ವಿಗಳೆಲ್ಲ ಒಬ್ಬರ ಮೇಲೊಬ್ಬರು ಮಗುಚಿ ಬೀಳುವಂತೆ ಥಟಾಥಟ್ಟನೆ ಬ್ರೇಕುಹಾಕುತ್ತಾ, ಅಡ್ಡಬಂದ ಬೈಕಿನವನು ಮನೆಯಲ್ಲಿ ಹೇಳಿಬಂದಿದ್ದಾನಾ ಇಲ್ಲವಾ ಎಂದು ವಿಚಾರಿಸಿಕೊಳ್ಳುತ್ತಾ, ನಿಲ್ಲುತ್ತಾ, ತೆವಳುತ್ತಾ, ಚಲಿಸುತ್ತಿದ್ದ ಪ್ರಯಾಣವಿಂದು ತಂಗಾಳಿ ಮುಖಕ್ಕೆ ರಾಚುವಷ್ಟರಮಟ್ಟಿಗೆ ವೇಗವಾಗಿ ಓಡುತ್ತಿದೆ. ಇಷ್ಟುದಿನ ಉರಿಸಿದ್ದಪ್ಪನಂತೆ ಭುಸುಗುಟ್ಟುತ್ತಿದ್ದ ಕಂಡಕ್ಟರ್ ಇಂದು ಉಲ್ಲಾಸದಿಂದ "ಬೆಳ್ಳಿ ರಥದಲಿ ಸೂರ್ಯ ತಂದ ಕಿರಣಾ" ಎಂದು ಹಾಡುತ್ತಿದ್ದಾನೆ. ಎರೆಡು ರೂಪಾಯಿ ಚಿಲ್ಲರೆಗೇ ಮನೆ ಮಂದಿಯೆಲ್ಲರ ಮಾನ ಹರಾಜು ಹಾಕುತ್ತಿದ್ದವನಿಂದು ಏಳು ರೂ ಚಿಲ್ಲರೆಯನ್ನು ಸದ್ದಿಲ್ಲದೆ ಕೊಟ್ಟುಬಿಟ್ಟಿದ್ದಾನೆ. ಕಿಟಕಿಯಿಂದ ಹೊರಗೆ ನೋಡಿದರೆ ಇಷ್ಟು ದಿನ ಬಾಸಿನ ಮುಖದಂತೆ ಬಿರುಸಾಗಿ ಕಾಣುತ್ತಿದ್ದ ಹೊರಗಿನ ವಾತಾವಾರಣ ಇಂದು 'ಅವಳ' ವದನದಷ್ಟು ನಿರ್ಮಲವಾಗಿದೆ. ಈ ಉಲ್ಲಾಸಮಯ ಪ್ರಯಾಣದಲ್ಲಿ ಕೈಯಲ್ಲಿ ಹಿಡಿದ ಪುಸ್ತಕದೊಳಗಿನ ಶೆರ್ಲಾಕ್ ಹೋಮ್ಸ್ ಹಿಂದೆಂದಿಗಿಂತ ರೋಚಕವಾಗಿ ಕಥೆಹೇಳುತ್ತಿದ್ದಾರೆ.
ಇನ್ನು ಬೆಂಗಳೂರಿನ ಬೀದಿಗಳಂತೂ ಸೀಸನ್ನಿಗೆ ತಕ್ಕಂತೆ ಸಿಂಗರಿಸಿಕೊಳ್ಳುತ್ತವೆ. ಗಣಪತಿ ಹಬ್ಬದ ರಜೆಯಲ್ಲಿ ಎಲ್ಲಿ ನೋಡಿದರೂ ಒಂದಡಿಯಿಂದ ಹಿಡಿದು ಒಂಭತ್ತಡಿಯ ತನಕದ, ಹಲವಾರು ಭಾವ-ಭಂಗಿಗಳ ಗಣೇಶನ ವಿಗ್ರಹಗಳು, ಸ್ವತಂತ್ರ ದಿನಾಚರಣೆಯ ಸಮಯದಲ್ಲಿ ವಾಹನಗಳ ಕಿವಿಗೆ ಚುಚ್ಚಿಕೊಂಡ ತ್ರಿವರ್ಣ ಧ್ವಝಗಳು, ರಾಜ್ಯೋತ್ಸವದ ದಿನ ಪಟಪಟ ಹಾರಾಡುತ್ತಾ ಓಡುವ ಕನ್ನಡದ ಬಾವುಟಗಳು, ದೀಪಾವಳಿಯಲ್ಲಿ ಮನೆಮನೆಯ ಬಾಗಿಲಲಲ್ಲೂ ಮಿನುಗುವ ದೀಪ, ಪಟಾಕಿ, ನಕ್ಷತ್ರಕಡ್ಡಿಗಳು... ಹೀಗೇ ಬೆಂಗಳೂರಿಗೆ ಬೆಂಗಳೂರೇ ಒಂದಿಲ್ಲೊಂದು ಬಣ್ಣ/ಬೆಳಕಿನಲ್ಲಿ ತೊಯ್ದುಹೋಗುತ್ತದೆ. ಯಾವ ಕಲಿಗಾಲ ಮುರಕೊಂಡು ಬಿದ್ದರೂ, ಎಷ್ಟೇ ಬುದ್ಧಿ ತುಂಬಿ ತುಳುಕಿದರೂ, ಯಾವ ರಾಜಕಾರಣಿ ಬತ್ತಿ ಇಟ್ಟರೂ, ಯಾವ ಘಾತುಕ ಶಕ್ತಿ ಬಾಯಿಬಡಿದುಕೊಂಡರೂ, ಹಬ್ಬ-ಭಾಷೆ-ಸಂಸ್ಕೃತಿ.. ಈ ಮೂರು ಸಂಭ್ರಮಗಳನ್ನು ಮನುಷ್ಯನಿಂದ, ಮನಸ್ಸಿನಿಂದ ದೂರಮಾಡುವುದು ಸಾಧ್ಯವೇ ಇಲ್ಲ ಅಂತ ಅನಿಸೋದು ಇಂತಹಾ ಆಚರಣೆಗಳನ್ನು ನೋಡಿದಾಗಲೇ‌. ಈ ಎಲ್ಲ ಸಂಭ್ರಮಗಳ ಕಣ್ತುಂಬಿಕೊಳ್ಳುತ್ತಾ, ಕಿವಿಗೊಂದು ಇಯರ್ ಫೋನು ಚುಚ್ಚಿಕೊಂಡೋ, ಇಲ್ಲಾ ಪುಸ್ತಕವೊಂದನ್ನು ಹಿಡಿದುಕೊಂಡೋ ಕಿಟಕಿ ಬದಿಯ ಸೀಟಿನಲ್ಲಿ ಕುಳಿತು ಬೆಂಗಳೂರು ಸುತ್ತುವಂತಹಾ ಈ ಮೋಜು ಎಂತಹದ್ದೆಂಬುದನ್ನು ಬಲ್ಲವ ಮಾತ್ರ ಬಲ್ಲ! ಎತ್ತರದ ಫ್ಲೈ ಓವರುಗಳ ಮೇಲಿಂದ ಕಾಣುವ ಪಕ್ಷಿನೋಟ, ಆಳದ ಅಂಡರ್ ಪಾಸ್ಗಳ ಕತ್ತಲೆಯೊಳಗಿನ ನಮ್ಮದೇ ಬಸ್ಸಿನ ಪ್ರತಿಧ್ವನಿಯ ಸದ್ದು, ಬಸವನಗುಡಿಯಲ್ಲಿ ಮೂಗಿಗೆ ರಾಚುವ ಹೂಹಣ್ಣುಗಳ ಘಮಲು, ಕಾದು ಕಾದು ಕೊನೆಗೂ ಬಂದ ನಾ ಹತ್ತಬೇಕಾದ ಬಸ್ಸು.. ಬೆಂಗಳೂರೂ ನನ್ನೂರಿನಂತೆನಿಸುತ್ತದೆ.
ಆದರೆ ಸಧ್ಯಕ್ಕೆ ಬೆಂಗಳೂರಿನಲ್ಲಿ ಒತ್ತಡವೊಂದನ್ನು ಬಿಟ್ಟು ಮತ್ತೇನೂ ಸ್ಥಿರವಾಗಿಲ್ಲ. ಒಂದು ಭಾನುವಾರ ಅಥವಾ ಎರೆಡು ದಿನದ ದೀಪಾವಳಿ ಮುಗಿಯುತ್ತಿದ್ದಂತೆ ಮತ್ತದೇ ಟ್ರಾಫಿಕ್ಕು ಮರಳಿಬಂದು ಬೆಂಗಳೂರಿನ ರಸ್ತೆಗಳನ್ನು ಅಟಕಾಯಿಸಿಕೊಳ್ಳುತ್ತದೆ. ಮತ್ತದೇ ನಿಲ್ಲಲಾಗದ ರಶ್ಶು, ಮುಂದೆ ಹೋಗದ ಟ್ರಾಫಿಕ್ಕು, ಜೇಬುಕತ್ತರಿಸುವ ಕಾಕರು... ಇವೆಲ್ಲದರ ನಡುವೆ ಕೆಲಕ್ಷಣಗಳ ಉಲ್ಲಾಸ ತರುವ ಭಾನುವಾರವೇ ಮುಂತಾದ ಇನ್ನಿತರ ರಜಾದಿನಗಳಿಗೊಂದು ದೊಡ್ಡ ಸಲಾಂ ಹೇಳಬೇಕೆಂದು ಇಷ್ಟೆಲ್ಲ ಬರೆದೆ.

ಶನಿವಾರ, ಸೆಪ್ಟೆಂಬರ್ 23, 2017

ಬೆಕ್ಕುಗಳ ಜೊತೆಗೆ ಭಾವ-ಬಂಧ...



ಮನುಷ್ಯನಿಗೆ ಅತಿ ಪ್ರಿಯವಾದ ಪ್ರಾಣಿಗಳಲ್ಲಿ ಮೊದಲನೆಯದು ನಾಯಿ. ಅದರ ನಂತರದ ಸ್ಥಾನದಲ್ಲಿ, ಮನುಷ್ಯನಿಗೆ ಅತೀ ಹತ್ತಿರದಲ್ಲಿ, ತೊಡೆಯ ಮೇಲೇ ಕುಳಿತು ಗರ್ವದಿಂದ ಮೀಸೆ ತಿರುವುತ್ತಿರುವ ಇನ್ನೊಂದು ಪ್ರಾಣಿಯೆಂದರೆ ಬೆಕ್ಕು. ಕೆಲವರ ಹೊರತಾಗಿ ನಾಯಿಯನ್ನು ಮನೆಯೊಳಗೆ ಬಿಟ್ಟುಕೊಳ್ಳುವವರು ಕಡಿಮೆ. ನಾಯಿಯ ಸಂಚಾರ ಅಂಗಳ, ವರಾಂಡ, ಇನ್ನೂ ಹೆಚ್ಚೆಂದರೆ ಜಗುಲಿ(ಹಾಲ್) ಗಳಿಗೆ ಸೀಮಿತವಾಗಿರುತ್ತದೆ. ಆದರೆ ಬೆಕ್ಕು ಹಾಗಲ್ಲ. ಅದು ಸರ್ವ ಸ್ವತಂತ್ರಿ. ಅಡಿಗೆಮನೆ, ಮಲಗುವ ಕೋಣೆಯೂ  ಸೇರಿದಂತೆ ಮನೆಯ ಮತ್ಯಾವುದೇ ಕೋಣೆಗಳಲ್ಲಿ, ಮೂಲೆಮೂಲೆಗಳಲ್ಲಿ ಯಾವ ಸಂದರ್ಭದಲ್ಲಾದರೂ ಓಡಾಡುವ ಅಧಿಕಾರ ಅದಕ್ಕಿದೆ. ಪಟ್ಟಣದ ಹಲವಾರು ಮನೆಗಳಲ್ಲಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಮನೆಯ ಯಜಮಾನನಿಗಿಂತಲೂ ಹೆಚ್ಚಿನ ಠೀವಿಯಲ್ಲಿ, ಸೋಫಾಮೇಲೆ ಕಾಲುಚಾಚಿ ಮಲಗಿರುವ ನುಣುಪು ಮೈ-ಕುಡಿಮೀಸೆಯ ಮಾರ್ಜಾಲವನ್ನು ನೀವು ನೋಡಬಹುದು. ಮೆತ್ತಗಿನ ಸೋಫಾಮೇಲೆ ಅಷ್ಟೇ ಮೆತ್ತಗಿರುವ ತನ್ನ ದೇಹವನ್ನು ಚಾಚಿಕೊಂಡು, ತನ್ನ ಮುಂಗೈಯ್ಯಿಗೆ ಬಳಿದುಕೊಂಡ ಎಂಜಲಿನಿಂದ ಮೈ-ಮುಖವನ್ನೆಲ್ಲಾ ವರೆಸಿಕೊಳ್ಳುತ್ತಾ ಗಮ್ಮತ್ತಾಗಿ ಕುಳಿತಿರುವ ಈ ಬೆಕ್ಕಣ್ಣನ ಪಕ್ಕ ನೀವು ಹೋಗಿ ಕುಳಿತುನೋಡಿ; ಅರೆಕ್ಷಣ ತನ್ನ ಕೆಲಸ ನಿಲ್ಲಿಸಿ ಸಾಲ ಕೇಳಲು ಬಂದವನನ್ನು ನೋಡುವ ಸಾವುಕಾರನಂತೆ ನಿಮ್ಮತ್ತ ಗಂಭೀರನೋಟ ಬೀರಿ, ಮತ್ತೆ ತನ್ನ ಕೆಲಸ ಮುಂದುವರೆಸುತ್ತದೆ.

'ಎಷ್ಟೇ ಪ್ರೀತಿಯಿದ್ದರೂ ಬೆಂಗಳೂರಿನಲ್ಲಿ ರಸ್ತೆ-ಕಾಂಪೌಂಡುಗಳ ಮೇಲೆ ಕುಳಿತಿರುವ, ಓಡಾಡುತ್ತಿರುವ ಅಥವಾ ನಿದ್ರಿಸುತ್ತಿರುವ ಯಾವುದೇ ಅಪರಿಚಿತ ಮಾರ್ಜಾಲವನ್ನು ಮಾತನಾಡಿಸುವುದು ಅಪಾಯಕಾರಿ' ಎನ್ನುವುದು ವರ್ಷಗಳ ಕೆಳಗೆ ನನಗೆ ಗೊತ್ತಾದ ಸತ್ಯ. ಹಿಂದೊಮ್ಮೆ ರೊಮ್ಯಾಂಟಿಕ್ ತಂಗಾಳಿಯೊಂದು ಬೀಸುತ್ತಿದ್ದ ಸಂಜೆಯಲ್ಲಿ ಟೆರಾಸ್ ಮೇಲೆ ಕುಳಿತಿದ್ದ ಮಾರ್ಜಾಲ ತರುಣಿಯೊಬ್ಬಳು ನನ್ನ ಕಣ್ಣಿಗೆ ಬಿದ್ದಿದ್ದಳು. ಬಾಯಿಯಿಂದ ಎಂಜಲನ್ನು ತನ್ನ ನುಣುಪು ಕೈಯ್ಯ ಮೂಲಕ ಮುಖಕ್ಕೆಲ್ಲಾ ಸವರಿಕೊಂಡು 'ಮೇಕಪ್' ಮಾಡಿಕೊಳ್ಳುತ್ತಿದ್ದ ಆ ಚೆಲುವೆಯನ್ನು ಕಂಡ, ಮೊದಲೇ ಬೆಕ್ಕುಗಳೆಂದರೆ ಬೆಟ್ಟದಷ್ಟು ಪ್ರೀತಿಯಿರುವ ನಾನು ಮತ್ತಷ್ಟು ರೊಮ್ಯಾಂಟಿಕ್ ಆಗಿಬಿಟ್ಟಿದ್ದೆ. ಅಲ್ಲದೇ ಊರುಬಿಟ್ಟ ಮೇಲೆ ಬೆಕ್ಕು, ನಾಯಿಗಳ ಒಡನಾಟವೂ ಕಮ್ಮಿಯಾಗಿತ್ತಲ್ಲಾ, ಈಗ ಹೇಗಾದರೂ ಇವಳನ್ನು ಒಲಿಸಿಕೊಳ್ಳಲೇಬೇಕೆಂದು ನಿರ್ಧರಿಸಿ ಸಾಧ್ಯವಾದಷ್ಟು ಸುಮಧುರ ದನಿಯಲ್ಲಿ "ತ್ಚುತ್ಚುತ್ಚು.. ಬಾಬಾಬಾ" ಎಂದು ಕರೆದೆ. ಯಾವುದೋ ಕಬಾಬ್ ಹೋಟೆಲ್ ಮುಂದೆ 'ಪೀಸ್'ಗಾಗಿ ಕಾದುನಿಂತಿರುವ ತನ್ನ ಬಾಯ್ ಫ್ರೆಂಡ್ ನ ಯೋಚನೆಯಲ್ಲಿದ್ದಳೋ ಏನೋ, ಅನಿರೀಕ್ಷಿತವಾಗಿ ತೇಲಿಬಂದ ನನ್ನ ಧ್ವನಿ ಕೇಳಿ ಅರೆಕ್ಷಣ ಬೆಚ್ಚಿಬಿದ್ದು ನನ್ನನ್ನೇ ಗುರಾಯಿಸತೊಡಗಿದಳು. ನಾನು ಮತ್ತಷ್ಟು ರೊಮ್ಯಾಂಟಿಕ್ ಸ್ವರದಲ್ಲಿ "ತ್ಚುತ್ಚುತ್ಚೂ... ಮಿಯಾಂವ್.. ಬಾಬಾಬಾ" ಎಂದು ಕರೆಯುತ್ತಾ ಎರೆಡು ಹೆಜ್ಜೆ ಮುಂದಿಟ್ಟಿದ್ದಷ್ಟೇ, ಬಾಯ್ಬಿಟ್ಟರೆ "ಪಿಂಕಿ ಕಮಾನ್... ಮ್ಯೂಮ್ಯೂ" ಎಂದೋ, "ಬಿಲ್ಲಿ ಭಯ್ಯಾ ಆಜಾವೋ" ಎಂದೋ ಕರೆಯುವ ಬಿಟಿಎಮ್ ಬಡಾವಣೆಯ ನಾರ್ಥ್ ಇಂಡಿಯನ್ ಜನರನ್ನೇ ಹೆಚ್ಚಾಗಿ ನೋಡಿ ಅಭ್ಯಾಸವಿದ್ದ ಈ ಮಾರ್ಜಾಲಕುಮಾರಿ ನನ್ನ ಲೋಕಲ್ ಭಾಷೆ ಕೇಳಿ ಕೆರಳಿಹೋದಳು. ಅಲ್ಲದೇ ಕೆದರಿದ ಕೂದಲು, ಕುರುಚಲು ಗಡ್ಡ, ಸೋಡಾಗ್ಲಾಸ್ ತೊಟ್ಟಿದ್ದ ನಾನು  ಬೆಕ್ಕುಗಳನ್ನು ಜೀವಂತ ಸುಟ್ಟುತಿನ್ನುವ 'ಬೆಕ್ಕು ಭಕ್ಷಕ' ಆದಿವಾಸಿಯಂತೆ ಕಂಡೆನೋ ಏನೋ, ತುದಿಗಾಲಿನಲ್ಲಿ ಸೆಟೆದು ನಿಂತು, ತನ್ನ ರೋಮಗಳನ್ನಲ್ಲಾ ನಿಮಿರಿಸಿ, ಬಾಲವನ್ನು ಈಟಿಯಂತೆ ಚೂಪಗೆ ನಿಲ್ಲಿಸಿಕೊಂಡು "ವ್ವ್.. ಈಯಾಂವ್...ಯೂಂವ್..." ಎಂದು ಕಿರುಚತೊಡಗಿದಳು. ನನ್ನ ಇಪ್ಪತ್ನಾಲಕ್ಕು ವರ್ಷಗಳ ಅನುಭವದಲ್ಲಿ ಅದುವರೆಗೆ ಬಾ ಎಂದಾಗ ಬರುವ ಬೆಕ್ಕುಗಳನ್ನು ನೋಡಿದ್ದೆ. ಬಿದ್ದು ಓಡಿಹೋಗಿರುವ ಬೆಕ್ಕುಗಳನ್ನೂ ನೋಡಿದ್ದೆ, ಆದರೆ ಹೀಗೆ 'ಪರಚು'ಯುದ್ಧಕ್ಕೆ ನಿಂತ ಬೆಕ್ಕನ್ನು ನೋಡುತ್ತಿದ್ದುದು ಇದೇ ಮೊದಲು! ಇನ್ನೊಂದು ಮಾತನಾಡಿದರೂ ಒದೆ ಬೀಳುವುದು ಖಂಡಿತವೆಂಬುದು ಅರ್ಥವಾಗಿ "ಕ್ಷಮಾ ಕೀಜಿಯೇ ಬಿಲ್ಲೀ ರಾಣೀ" ಎಂದು ಅಲ್ಲಿಂದ ಕಾಲ್ಕಿತ್ತೆ.

ಮಲೆನಾಡು ಮೂಲೆಯ ಹಳ್ಳಿಯೊಂದರಲ್ಲಿರುವ ನಮ್ಮನೆಯಲ್ಲಿ ಮೊದಲಿನಿಂದಲೂ ಇಲಿಗಳ ಹಾವಳಿ ಜಾಸ್ತಿ. ಹಗಲು ಹೊತ್ತಿನಲ್ಲಿ ಬಿಲಗಳಲ್ಲಿ, ಗೋಡೆಯ ಸಂದುಗೊಂದಿಯಲ್ಲಿ, ಗೊಬ್ಬರಗುಂಡಿಯ ಹೊಂಡಗಳಲ್ಲಿ ಅಡಗಿಕೊಂಡಿರುವ ಇವುಗಳು ರಾತ್ರೆಯಾಗುತ್ತಿದ್ದಂತೆಯೇ ಸಂಸಾರ ಸಮೇತವಾಗಿ ದರೋಡೆಗಿಳಿಯುತ್ತಿದ್ದವು. ತಡರಾತ್ರಿ ದರೋಡೆಕೋರರಾದ ಈ ಇಲಿಗಳದ್ದೊಂದು ರಗಳೆಯಾದರೆ ಇವನ್ನು ಹಿಡಿಯಲು ಬರುವ ಬೆಕ್ಕು-ಹಾವುಗಳದ್ದು ಇನ್ನೊಂದು ತೆರನಾದ ಹಾವಳಿ. ಇವುಗಳಿಗೆಲ್ಲಾ ಮಣ್ಣಿನ ಗೋಡೆಗಳು, ಪೆಟ್ಟಿಗೆ-ಟ್ರಂಕ್ ಗಳು, ಬುಟ್ಟಿ,ಗುದ್ದಲಿ,ಪಿಕಾಸಿಗಳೇ ಇತ್ಯಾದಿ ಸಾಮಾನು ಸರಂಜಾಮುಗಳಿಂದ ತುಂಬಿಹೋಗಿದ್ದ ನಮ್ಮ ಹಳೆಯ ಮನೆ ಅಮೇಜಾನ್ ಕಾಡಿನಂತೆ ಕಾಣುತ್ತಿತ್ತೋ ಏನೋ, ಇಲ್ಲಿ ಮನುಷ್ಯನೆಂಬ ಎರೆಡುಕಾಲಿನ ಸರ್ವೋಚ್ಛ ಪ್ರಾಣಿ ಇದ್ದಾನೆಂಬುದನ್ನೂ ಲೆಕ್ಕಿಸದೆ ತಮ್ಮ ಬೇಟೆಯನ್ನು ಬೆನ್ನಟ್ಟಿ ಹೊತ್ತಲ್ಲದ ಹೊತ್ತಿನಲ್ಲಿ ಒಳನುಗ್ಗಿಬಿಡುತ್ತಿದ್ದವು. ಹೀಗೆ ಬರುವವುಗಳಲ್ಲಿ ಹಾವುಗಳನ್ನು ಹೆದರಿಸಿ(ಹೆದರಿ!) ಓಡಿಸುತ್ತಿದ್ದೆವು. ಆದರೆ ಇಲಿಗಳ ಹಾವಳಿ ತಪ್ಪಿಸುವ ಈ ಮುದ್ದುಮುಖದ ಮಾರ್ಜಾಲಗಳ ಮೇಲೆ ಯಾರೂ ಕೈಮಾಡುತ್ತಿರಲಿಲ್ಲವಾದ್ದರಿಂದ ಅವುಗಳಿಗೆ ನಮ್ಮ ಮನೆ ಅಕ್ಷರಶಃ ಸ್ವತಂತ್ರ ಅಮೆಜಾನ್ ಕಾಡೇ ಆಗಿತ್ತು.

ಹೀಗೆ ಚಿಕ್ಕಂದಿನಿಂದಲೂ ತರಹೇವಾರಿ ರೀತಿಯ ಬೆಕ್ಕುಗಳನ್ನು ನೋಡುತ್ತಾ ಬಂದಿದ್ದೇನೆ. ಮನೆಯ ಸುತ್ತಮುತ್ತ ಓಡಾಡುತ್ತಿದ್ದ ಬೆಕ್ಕುಗಳಿಗೆ ಅವುಗಳ ಬಣ್ಣ, ಗಾತ್ರ, ರೂಪಗಳಿಗನುಗುಣವಾಗಿ ಅಪ್ಪ ಒಂದೊಂದು ಹೆಸರಿಡುತ್ತಿದ್ದರು. ಮೈಯ್ಯ ಹೆಚ್ಚಿನ ಭಾಗ ಬಿಳಿಯಾಗಿದ್ದು ಮಧ್ಯೆಮಧ್ಯೆ ಕಂದು ಹಾಗೂ ಕೆಂಚು ಮಿಶ್ರಿತ ರೋಮಗಳಿರುವ ದೈತ್ಯಗಾತ್ರದ 'ಪಾಂಡು ಬೆಕ್ಕು', ಪ್ರತೀ ಆರು ತಿಂಗಳಿಗೊಮ್ಮೆ ಬಸುರಿಯಾಗಿ, 'ಬಯಕೆ' ತೀರಿಸಿಕೊಳ್ಳುವುದಕ್ಕೆ ಅಡಿಗೆಮನೆಯಲ್ಲಿ ಕಳ್ಳತನಮಾಡಿ, ಬಸುರಿಯೆಂಬ ಕಾರಣಕ್ಕೆ ಬೀಳಬೇಕಾದ ಒದೆಗಳಿಂದ ಬಚಾವಾಗುತ್ತಿದ್ದ 'ಬಿಲ್ಲಿ ಬೆಕ್ಕು', ಕಂದು-ಪಾಚಿ ಬಣ್ಣ ಮಿಶ್ರಿತ 'ಪಾಚು ಬೆಕ್ಕು', ಪಕ್ಕದ ಗೌಡರ ಮನೆಯಲ್ಲಿ ನಾನ್ವೆಜ್ ತಿಂದು ದಷ್ಟಪುಷ್ಟವಾಗಿ ಬೆಳೆದ ದೈತ್ಯ 'ಕೆಂಚ ರಾಕ್ಷಸ' ಇತ್ಯಾದಿ. ಇವುಗಳಲ್ಲಿ ಸಂಪೂರ್ಣ ಡಿಫರೆಂಟಾಗಿರುವವೆಂದರೆ ದೈತ್ಯ ಪಾಂಡುಬೆಕ್ಕುಗಳು. ಪಾಂಡುಬೆಕ್ಕುಗಳೆಂದರೆ ಯಾರ ಕೈಗೂ ಸಿಗದೆ ಪೋಲಿ ಅಲೆಯುವ 'ಮಾಳ'(ಗಂಡು)ಗಳು. ಶುದ್ಧ ಮಾಂಸಾಹಾರಿಗಳಾದ ಅವುಗಳ ಎದುರೇ ಹಾಲಿನ ಬಟ್ಟಲಿಟ್ಟುಹೋದರೂ ಮುಟ್ಟಿಮೂಸುತ್ತಿರಲಿಲ್ಲ. ಎಷ್ಟೇ ಮುದ್ದಾಗಿ ಬಾಬಾ.. ತ್ಚುತ್ಚು.. ಮಿಯಾಂವ್.... ಎಂದು ಪ್ರೀತಿಯಿಂದ ಕರೆದರೂ ಹತ್ತಿರ ಬರುತ್ತಿರಲಿಲ್ಲ. ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಕಣ್ಣಿಗೆ ಬೀಳುತ್ತಿದ್ದ ಈ ದೈತ್ಯ ಬೆಕ್ಕುಗಳ ಸಾಮರ್ಥ್ಯದ ಮೇಲೆ ನನಗೊಂದು ವಿಧವಾದ ಅಭಿಮಾನ. ಇವೇ ಪ್ರಪಂಚದ ಅತೀ ಶಕ್ತಿಶಾಲಿ ಬೆಕ್ಕುಗಳು ಎನ್ನುವ ನಂಬಿಕೆ. ತಾವು ನೆಲೆನಿಂತ ಸೀಮೆಯಲ್ಲಿ ಮತ್ತೊಂದು ಗಂಡುಬೆಕ್ಕು ಬರುವುದನ್ನು ಇವು ಸುತರಾಂ ಸಹಿಸುತ್ತಿರಲಿಲ್ಲ. ತಮ್ಮ ಇಲಾಖೆಯಲ್ಲಿ ಅಪ್ಪಿತಪ್ಪಿ ಮತ್ಯಾವುದೇ ಮಾಳಬೆಕ್ಕಿನ ನೆರಳು ಕಂಡರೂ ಮುಗಿದೇ ಹೋಯಿತು, ಅದನ್ನು ಅಲ್ಲೇ ಅಡ್ಡಹಾಕಿ, ತಮ್ಮ ಬಲವಾದ ಚೋಟಿನಿಂದ(ಪಂಜ) ಅದರ ಕೆನ್ನೆಗೆ ನಾಲ್ಕು ಬಾರಿಸಿ, ತನ್ನ ಮ್ಯಾಂವ್ ಭಾಷೆಯಲ್ಲಿ "ಇನ್ನೊಮ್ಮೆ ಇಲ್ಲಿಗೆ ಬಂದರೆ ಹುಷಾರ್!" ಎಂದು ಊರಿಗೆಲ್ಲಾ ಕೇಳುವಂತೆ ಎಚ್ಚರಿಕೆ ಕೊಟ್ಟು ದೂರ ಅಟ್ಟುತ್ತಿದ್ದವು. ಆದರೆ ಕೆಲವೊಮ್ಮೆ ಎದುರಾಳಿಯೂ ಪ್ರಬಲನಾಗಿದ್ದಾಗ ಈ ಹೋರಾಟ ಅಷ್ಟು ಸುಲಭವಾಗಿ ಮುಗಿಯುತ್ತಿರಲಿಲ್ಲ. ಸ್ಪರ್ಧಿ-ಪ್ರತಿಸ್ಪರ್ಧಿಗಳೆರೆಡೂ ಎತ್ತರದ ಗೋಡೆಯ ಮೇಲೋ, ಹಂಚು ಮಾಡಿನ ಮೇಲೋ ಎದುರುಬದುರಾಗಿ, ನಿಮಿಷಗಟ್ಟಲೆ ಕದಲದಂತೆ ನಿಂತು ಒಂದನ್ನೊಂದು ಬೈದುಕೊಳ್ಳುತ್ತಿದ್ದವು. "ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ...." ಎಂದು ಮಾತ್ರಾಗಣಸಹಿತ ವಾಕ್ಯುದ್ಧ ನಡೆಸುತ್ತಿದ್ದವೋ, "ಇದು ಈ ಅರ್ಮುಗಂ ಕೋಟೆ ಕಣೋ" ಎಂದು ಮಾಸ್ ಡೈಲಾಗ್ ಹೊಡೆಯುತ್ತಿದ್ದವೋ ಗೊತ್ತಿಲ್ಲ, ಹುಲುಮಾನವರಾದ ನಮಗೆ ಕೇಳುತ್ತಿದ್ದುದು 'ಮೀsssಯಾಂವ್ssss' ಎನ್ನುವ ಕಿರುಚಾಟ ಮಾತ್ರ! ಕೊನೆಗೆ ಅಪ್ಪನೋ ಅಮ್ಮನೋ ಹೋಗಿ, ಭೀಮ-ದುರ್ಯೋಧನರಂತೆ ತೊಡೆತಟ್ಟಿ ('ಪಂಜ' ತಟ್ಟಿ!) ನಿಂತಿರುವ ಇವುಗಳ ಮೇಲೇ ಕಲ್ಲನ್ನೋ, ನೀರನ್ನೋ ಎಸೆದಾಗ ಬೆಚ್ಚಿ ಕೆಳಗೆ ಜಿಗಿದು ಒಂದನ್ನೊಂದು ಬೆನ್ನಟ್ಟುತ್ತಾ ರಾತ್ರೆಯ ಕತ್ತಲಲ್ಲಿ ಅಂತರ್ಧಾನವಾಗುತ್ತಿದ್ದವು.

ಅದೇಕೋ ಗೊತ್ತಿಲ್ಲ, ರೂಪದಲ್ಲಿ ಹುಲಿಯ ಹತ್ತಿರದ ಸಂಬಂಧಿಗಳಂತೆ ಕಾಣುವ ಈ ಬೆಕ್ಕುಗಳ ಮೇಲೆ ಮೊದಲಿನಿಂದಲೂ ನನಗೊಂದು ತೆರನಾದ ಪ್ರೀತಿತುಂಬಿದ ಕುತೂಹಲ. ಎಲ್ಲೇ ಪುಟಾಣಿ ಬೆಕ್ಕುಮರಿ ಕಂಡರೂ ಅದನ್ನು ಮನೆಗೆ ಒಯ್ಯೋಣವೆಂದು ನಾನು ಹಠ ಹಿಡಿಯುವುದು, ಅಮ್ಮ/ಅಪ್ಪ ಗದರಿಸಿ ಸುಮ್ಮನಾಗಿಸುವುದು ನಡೆಯುತ್ತಲೇ ಇರುತ್ತಿತ್ತು. ನಮ್ಮನೆಗೆ ತಾನಾಗೇ ಬಂದು ಸೇರಿಕೊಂಡಿದ್ದ ಪಾಚುಬೆಕ್ಕು ಅಮ್ಮ ಬೆಳಗ್ಗೆ ಏಳುತ್ತಿದ್ದಂತೆಯೇ ಅದೆಲ್ಲಿಂದಲೋ ಓಡಿಬಂದು ಮ್ಯಾಂವ್ ಮ್ಯಾಂವ್ ಎನ್ನುತ್ತಾ, ಅವಳ ಕಾಲಿಗೆ ತನ್ನ ನುಣುಪಾದ ಮೈಯ್ಯನ್ನು ಸವರುತ್ತಾ ಹಾಲು ಹಾಕುವಂತೆ ಪೂಸಿಹೊಡೆಯುವುದನ್ನೂ, ತನಗೆಂದೇ ಮೀಸಲಿಟ್ಟ ಬಟ್ಟಲಿಗೆ ಹಾಕಿದ ಹಾಲನ್ನು ಜಗತ್ತಿನ ಇನ್ಯಾರಿಗೂ ಕಾಣದಂತೆ(!) ಕಣ್ಮುಚ್ಚಿಕೊಂಡು ಕುಡಿಯುವುದನ್ನೂ ನಾನು ಕುತೂಹಲದಿಂದ ನೋಡುತ್ತಿದ್ದೆ. ಕೆಲವೊಮ್ಮೆ ಹಠಮಾಡಿ ನಾನೇ ಬಟ್ಟಲಿಗೆ ಹಾಲು ಹಾಕುತ್ತಿದ್ದೆ. ಅದು ಬಾಲ ನೆಟ್ಟಗೆ ಮಾಡಿಕೊಂಡು ಏರುದನಿಯಲ್ಲಿ ಕೂಗುತ್ತಾ ಹಾಲಿನ ಲೋಟ ಹಿಡಿದ ನನ್ನನ್ನು ಹಿಂಬಾಲಿಸಿಕೊಂಡು ಓಡಿ ಬರುವುದನ್ನು ನೋಡುವುದೇ ನನಗೊಂದು ಹೆಮ್ಮೆ. ತನ್ನ ಬಟ್ಟಲಿಗೆ ಹಾಕಿದ ಹಾಲನ್ನದು ಕಣ್ಮುಚ್ಚಿಕೊಂಡು ಚಪ್ಪರಿಸುವಾಗ ಹಿತವಾಗಿ ಮೈದಡವುತ್ತಾ ಅದರ ಸ್ನೇಹ ಸಂಪಾದಿಸಲು ಪ್ರಯತ್ನಿಸುತ್ತಿದ್ದೆ. ಅಡಿಗೆಮನೆಯಲ್ಲಿ ನಾವು ಸಾಲಾಗಿ ಕುಳಿತು ತಿಂಡಿ ತಿನ್ನುವಾಗ ತಾನೂ ಸಾಲಿನ ಕೊನೆಯಲ್ಲಿ ಕಾಲು ಮಡಿಚಿಕೊಂಡು ಕುಳಿತು, ನಮ್ಮ ತಟ್ಟೆಯಲ್ಲಿದ್ದ ತಿಂಡಿಯನ್ನು ಆಸೆಯಿಂದ ದಿಟ್ಟಿಸುತ್ತ, ಏನಿಲ್ಲವೆಂದರೂ ಎರೆಡು-ಮೂರು ದೋಸೆ/ರೊಟ್ಟಿ/ಚಪಾತಿಗಳನ್ನು ಹೊಟ್ಟೆಗಿಳಿಸುತ್ತಿತ್ತು. ಹಸಿವಾದಾಗ ಜಗತ್ತಿನ ಅತ್ಯಂತ ಸಾಧು ಪ್ರಾಣಿಯಂತೆ ಫೋಸ್ ಕೊಡುತ್ತಾ, ವಿನಮ್ರ ದನಿಯಲ್ಲಿ ಕೂಗುತ್ತಾ ಬಳಿಗೆ ಬರುತ್ತಿದ್ದ ಅದಕ್ಕೆ ಊಟವಾಗುತ್ತಿದ್ದಂತೆಯೇ ಆಟವಾಡವ ಮೂಡ್ ಬಂದು ಒಂದೋ ಅಡಿಗೆಮನೆಯ ಹೊಸಿಲಿನ ಮೇಲೆ ಕುಳಿತು ಆಚೀಚೆ ಓಡಾಡುವರ ಕಾಲನ್ನು ತನ್ನ ಪಂಜದಿಂದ ಹಿಡಿದುಕೊಂಡು ಕಚ್ಚುತ್ತಿತ್ತು; ಇಲ್ಲಾ ಅಂಗಳದ ಕಟ್ಟೆಯಮೇಲೋ, ಹುಲ್ಲುಗೊಣಬೆಯ ಮೇಲೋ ಕುಳಿತು ಮುಖತೊಳೆಯಲಾರಂಭಿಸುತ್ತಿತ್ತು.  ಆಗೇನಾದರೂ ನಾನು ಹತ್ತಿರ ಹೋದರೆ ಕುಳಿತಲ್ಲೇ ಅಂಗಾತ ಬಿದ್ದುಕೊಂಡು ಗುಲಾಬಿ ಮುಳ್ಳುಗಳಂತಿರುವ ಉಗುರುಗಳಿಂದ ಕೂಡಿದ ತನ್ನ ಕೈಯ್ಯನ್ನು ಬೀಸುತ್ತಾ ಆಟಕ್ಕೆ ಬರುವಂತೆ ಸವಾಲೆಸೆಯುತ್ತಿತ್ತು. ಅದರ ಸವಾಲನ್ನು ಸ್ವೀಕರಿಸಿದ ನಾನು ತೆಂಗಿನ ಗರಿಯನ್ನೋ, ಹಿಡಿಕಡ್ಡಿಯನ್ನೋ ಹಿಡಿದು ಅದರ ಮೈ-ಮೂತಿಗಳಿಗೆಲ್ಲಾ ತಾಗಿಸಿದರೆ, ತನ್ನೆರೆಡೂ ಪುಟಾಣಿ ಪಂಜಗಳಿಂದ ಆ ತೆಳ್ಳಗಿನ ಕಡ್ಡಿಯನ್ನು ಹಿಡಿದು ಬಾಯಿಗೆ ಹಾಕಿಕೊಳ್ಳಲೆತ್ನಿಸುತ್ತಾ ನೆಲದ ತುಂಬಾ ಹೊರಳಾಡುತ್ತಿತ್ತು. ಅದು ಉಳುಚಿಹೋಗುವ ಕಡ್ಡಿಯನ್ನು ಹಿಡಿದುಕೊಂಡು ತೆರೆದ ಬಾಯಿಯೊಳಕ್ಕೆ ತುಂಬಿಕೊಳ್ಳುವುದು, ನಾನು ಆ ಕಡ್ಡಿಯನ್ನು ತಪ್ಪಿಸಿ ಮಲಗಿರುವ ಅದರ ಮೃದುವಾದ ಹೊಟ್ಟೆ-ಎದೆಭಾಗಕ್ಕೆ ಅದೇ ಕಡ್ಡಿಯಿಂದ ಕಚಗುಳಿ ಕೊಡುವುದು, ಕಚಗುಳಿ ಇಡಿಸಿಕೊಂಡೂ ನಗಲಾಗದ ಅದು ಮಲಗಿದಲ್ಲೇ ಪಲ್ಟಿ ಹೊಡೆಯುವುದು... ಹೀಗೆ ಮೋಜಿನಿಂದ ಸಾಗುತ್ತಿತ್ತು ನಮ್ಮ ಆಟ.

ಹೀಗೆ ಪ್ರೀತಿಯಿಂದ ಸಾಕಿದ ಬೆಕ್ಕಿನ ಸಂಗ-ಸ್ನೇಹ ಎಷ್ಟು ಖುಷಿ ಕೊಡುತ್ತದೆಯೋ, ಅವುಗಳ ಸಾವು ಅಷ್ಟೇ ನೋವುಂಟುಮಾಡುತ್ತದೆ. ಬೆಕ್ಕೊಂದು ಸರಾಸರಿ ಹತ್ತರಿಂದ ಹನ್ನೆರೆಡು ವರ್ಷ ಬದುಕಬಲ್ಲದೆಂಬ ಅಂದಾಜಿದೆಯಾದರೂ ಆ ಕಾಲಕ್ಕೆ ನಾವು ಸಾಕಿದ್ದ ಯಾವುದೇ ಬೆಕ್ಕು ಆರೇಳು ವರ್ಷಕ್ಕಿಂತ ಹೆಚ್ಚು ಬದುಕಿದ್ದನ್ನು ನಾನು ನೋಡಿಲ್ಲ. ನಾಯಿಗಳ ಬಾಯಿಗೆ ಸಿಕ್ಕಿ, ತಮ್ಮದೇ ಕುಲಬಾಂಧವರಿಂದ ಕಚ್ಚಿಸಿಕೊಂಡು, ವಾಹನಗಳಡಿಗೆ ಅಪ್ಪಚ್ಚಿಯಾಗಿ.. ಹೀಗೇ ಬೆಕ್ಕುಗಳ ಬದುಕು ಒಂದಿಲ್ಲೊಂದು ದುರಂತ ಅಂತ್ಯ ಕಾಣುವುದೇ ಹೆಚ್ಚು. ಹಳ್ಳಿಗಳಲ್ಲಂತೂ ಎಲ್ಲೆಂದರಲ್ಲಿ ಓಡಾಡುವ ಇವುಗಳು ಹೇಳದೇ ಕೇಳದೇ ನಾಪತ್ತೆಯಾಗಿಬಿಡುವುದೇ ಜಾಸ್ತಿ. ಹೀಗಾದಾಗೆಲ್ಲ ಎಲ್ಲೇ, ಯಾವುದೇ ಬೆಕ್ಕಿನ 'ಮ್ಯಾಂವ್' ಕೇಳಿಸಿದರೂ ಒಂದು ಕ್ಷಣ ಅದು ನಮ್ಮ ಮುದ್ದಿನ ಬೆಕ್ಕೇ ಇರಬಹುದೇನೋ ಅನಿಸುವುದು ಸಹಜವಾದರೂ ನನ್ನ ಪ್ರಕಾರ ಪ್ರೀತಿಯಿಂದ ಸಾಕಿದ ಬೆಕ್ಕೊಂದು ಕಣ್ಣೆದುರೇ ಮೃತವಾಗುವುದಕ್ಕಿಂತ ಹೀಗೇ ನಾಪತ್ತೆಯಾಗಿಹೋಗುವುದೇ ಮೇಲು.  ಸಾಕಿದ ಬೆಕ್ಕೊಂದು ನಾಪತ್ತೆಯಾದಾಗ "ಮಾಂಸದ ಆಸೆಗೆ ಅಲ್ಲೆಲ್ಲೋ ಯಾರದೋ ಮನೆಗೆ ಹೋಗಿ ಸೇರಿಕೊಂಡಿದೆಯಂತೆ" ಅಂತ ನಮ್ಮನಮ್ಮಲ್ಲೇ ಮಾತನಾಡಿಕೊಂಡು ಸಮಾಧಾನಮಾಡಿಕೊಳ್ಳಬಹುದು. ಚಿಕ್ಕಂದಿನಲ್ಲಿ ಶಾಲೆಯಿಂದ ಮರಳುವ ನನಗಾಗಿ ಬಾಗಿಲಲ್ಲೇ ಕಾದುಕುಳಿತಿರುತ್ತಿದ್ದ, ಓದುತ್ತಾ ಕುಳಿತ ನನ್ನ ತೊಡೆಯೇರಿ ಮುದ್ದಾಗಿ ನಿದ್ರಿಸುತ್ತಿದ್ದ, ಮನೆಯೊಳಗೆ ಹರಿದು ಬರುತ್ತಿದ್ದ ಹಾವನ್ನು ಅಡ್ಡಹಾಕಿ ತಡೆದು ಶೌರ್ಯ ಮೆರೆದಿದ್ದ, ಬಾಲ ಎತ್ತಿಕೊಂಡು ಮ್ಯಾಂವ್ ಮ್ಯಾಂವ್ ಎಂದು ಮನೆಯ ತುಂಬಾ ಓಡಾಡುತ್ತಾ ಎಲ್ಲರ ಪ್ರೀತಿಪಾತ್ರವಾಗಿದ್ದ ಪಾಚುಬೆಕ್ಕು ಕಾರಣವೇ ಗೊತ್ತಾಗದಂತೆ ಅನ್ನಾಹಾರ ಬಿಟ್ಟು ಕೃಶವಾಗುತ್ತಾ ಆಗುತ್ತಾ ಕೊನೆಗೊಂದು ದಿನ ಅಪ್ಪನ ಕೈಯ್ಯಲ್ಲಿ ಗಂಗಾಜಲ ಬಿಡಿಸಿಕೊಂಡು ಇಹಲೋಕ ತ್ಯಜಿಸಿದ ಕ್ಷಣ ನೆನಪಾದಾಗ ಈಗಲೂ ಸಂಕಟವಾಗುತ್ತದೆ. ಮೊನ್ನೆಮೊನ್ನೆಯವರೆಗೂ ಮುದ್ದಾಗಿ ಓಡಾಡಿಕೊಂಡಿದ್ದ ಆ ಪುಟ್ಟ ಜೀವ ಸಾವಿನ ಸಂಕಟ ತಾಳಲಾರದೆ ಕಟ್ಟಕಡೆಯ ಬಾರಿಗೆಂಬಂತೆ ಕ್ಷೀಣದನಿಯಲ್ಲೊಮ್ಮೆ ನರಳಿ ನಿಶ್ಚಲವಾಗಿಹೋದಾಗ ಮನೆಯವರೆಲ್ಲರ ಕಣ್ಣಲ್ಲೂ ನೀರು. ಕೊನೆಗೆ ಹಿತ್ತಲಲ್ಲೊಂದು ಗುಂಡಿತೋಡಿ ಹೂಳುವ ಕ್ಷಣದಲ್ಲಿ ತೆರೆದೇ ಇದ್ದ ಅದರ ಮೃತ ಕಣ್ಣುಗಳಲ್ಲಿ ಕಂಡ ಆ ಯಾತನೆಯ ಚಿತ್ರ ಇಂದಿಗೂ ಮನಸ್ಸಿನಲ್ಲೇ ಉಳಿದುಹೋಗಿದೆ.

ನಾಯಿಗಳಷ್ಟಲ್ಲದಿದ್ದರೂ ಬೆಕ್ಕುಗಳೂ ಒಂದು ಮಟ್ಟಕ್ಕೆ ಭಾವುಕ ಜೀವಿಗಳು. ಮುಪ್ಪಡರಿ, ಸರಿಯಾಗಿ ನಡೆಯಲೂ ಆಗದೇ, ರೋಮವುದುರಿ ಮೈಯ್ಯೆಲ್ಲಾ ದದ್ದರಿಸಿಹೋಗಿ, ಎಲ್ಲರಿಂದ ಕಡೆಗಣಿಕೆಗೊಳಪಟ್ಟಿದ್ದ ಗಂಡು ಬೆಕ್ಕೊಂದರೆಡೆಗೆ ಅದರ ಯೌವನದ ದಿನಗಳ ಸಂಗಾತಿಯಾಗಿದ್ದ ಹೆಣ್ಣು ಬೆಕ್ಕೊಂದು ತೋರಿಸಿದ್ದ ಪ್ರೀತಿಯನ್ನು ಕಣ್ಣಾರೆ ನೋಡಿದ ಮೇಲೇ ನನಗೆ ಹೀಗನಿಸಿದ್ದು. ಅದೊಂದು ಸುಡುಸುಡು ಬಿಸಿಲಿನ ಮಧ್ಯಾಹ್ನ 'ಅವಳು' ಈಗಷ್ಟೇ ಊಟ ಮುಗಿಸಿ ಅಂಗಳದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತ ಮಲಗಿದ್ದಳು. ಇದ್ದಕ್ಕಿದ್ದಂತೆ ಹುಲ್ಲುಗೊಣಬೆಯಲ್ಲಿ ಏನೋ ಸರಸರ ಸರಿದಾಟ. ಅವಳು ಕಾಲುಗಳ ಮೇಲಿಟ್ಟುಕೊಂಡಿದ್ದ ತಲೆಯನ್ನು ಫಕ್ಕನೆ ಎತ್ತಿ ಅತ್ತ ನೋಡಿದರೆ ಅಲ್ಲಿದ್ದುದು ಜೀವವೇ ಭಾರವಾದಂತೆ ಆಯಾಸದ ಹೆಜ್ಜೆಯಿಡುತ್ತಾ ಬರುತ್ತಿದ್ದ ತನ್ನ ಮುದಿಗೆಳೆಯ. ಅದೇನಾಯಿತೋ ಏನೋ, ಅವಳು ಮರುಕ್ಷಣವೇ ಮಲಗಿದಲ್ಲಿಂದ ಎದ್ದು ನೇರ ಅಡಿಗೆಮನೆಯ ಒಳಗೋಡಿದಳು‌. ಅಲ್ಲಿದ್ದ ನನ್ನಮ್ಮನೊಂದಿಗೆ ಜಗಳಾಡಿ, ಕೂಗಿ, ಗಲಾಟೆಮಾಡಿ, ತಾನು ಈಗಷ್ಟೇ ಕುಡಿದು ಖಾಲಿ ಮಾಡಿದ್ದ ಬಟ್ಟಲಿಗೆ ಮತ್ತೊಂದಿಷ್ಟು ಹಾಲು ಹಾಕಿಸಿಕೊಂಡಳು. ಆದರೆ ಬಟ್ಟಲಿಗೆ ಹಾಲುಬಿದ್ದ ಮರುಕ್ಷಣವೇ ನೋಡುತ್ತಿದ್ದ ನಾನು-ಅಮ್ಮ ಅಚ್ಚರಿಪಡುವಂತೆ ಒಂದು ತೊಟ್ಟು ಹಾಲನ್ನೂ ಕುಡಿಯದೇ ತಾನು ಇಷ್ಟೊತ್ತು ಗಲಾಟೆ ಮಾಡಿದ್ದೇ ಸುಳ್ಳೇನೋ ಎಂಬಂತೆ ಹೊರನಡೆದು, ಮೊದಲು ಮಲಗಿದ ಜಾಗದಲ್ಲೇ ಕಾಲುಚಾಚಿ ಮಲಗಿಬಿಟ್ಟಳು! ನೋಡನೋಡುತ್ತಿದ್ದಂತೆಯೇ ಅಂಗಳದಲ್ಲಿದ್ದ ಅವಳ ಮುದಿಗೆಳೆಯ ಅದೇ ಆಯಾಸದ ಭಾರ ಹೆಜ್ಜೆಗಳನ್ನಿಡುತ್ತಾ ಒಳಹೊಕ್ಕು ಬಟ್ಟಲಿನಲ್ಲಿದ್ದ ಹಾಲು ಕುಡಿಯತೊಡಗಿದ! ನನಗಂತೂ ಕಣ್ಣು ಹೊರಬರುವಷ್ಟು ಅಚ್ಚರಿ. ನಾವೆಲ್ಲರೂ ಕಡೆಗಣಿಸಿದ್ದ, ಸಾವಿಗೆ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿದ್ದ ಆ ಮುದಿಬೆಕ್ಕು.. ಅದು ತನಗೆ ಹಸಿವಾಗಿದೆಯೆಂದಾಗಲೀ, ಹಾಲು ಹಾಕಿಸೆಂದಾಗಲೀ ಒಂದು ಮಾತೂ ಬಾಯ್ಬಿಟ್ಟು ಕೇಳಿರಲಿಲ್ಲ. ಅದ್ಯಾವ ಮೂಕ ಸಂವೇದನೆಯೋ, ಭಾವ ಸಂವಹನೆಯೋ.. ನೂರಾರು ಭಾಷೆಗಳ, ಸಾವಿರಾರು ಪದಗಳ ಮೀರಿದ ಮಾತುಕತೆಯೊಂದು ಅಲ್ಲಿ ಒಂದು ಸಣ್ಣ ಇಶಾರೆಯೂ ಇಲ್ಲದಷ್ಟು ಮೌನದಲ್ಲಿ ನಡೆದುಹೋಗಿತ್ತು.

ಹೇಳುತ್ತಾ ಹೋದರೆ ಮಾರ್ಜಾಲ ಲೋಕದಲ್ಲಿ ಇಂತಹ ಹತ್ತಾರು ಭಾವುಕ ಸಂಗತಿಗಳಿವೆ‌. ತಾನಿಲ್ಲದ ಹೊತ್ತಿನಲ್ಲಿ ಧಾಳಿಮಾಡಿದ 'ಮಾಳ' ಬೆಕ್ಕೊಂದಕ್ಕೆ ಬಲಿಯಾದ ತನ್ನ ಎರೆಡುವಾರ ಪ್ರಾಯದ ಮೂರು ಪುಟಾಣಿ ಮರಿಗಳ ಶವವನ್ನು ತೋರಿಸುತ್ತಾ, ನೋಡಲು ಬಂದವರೆಲ್ಲರ ಕಾಲಿಗೆ ಸುತ್ತುಬರುತ್ತಾ, ಅರ್ಥವಾಗದ ಅದ್ಯಾವುದೋ ಕೂಗಿನಲ್ಲಿ ರೋಧಿಸುತ್ತಿದ್ದ ತಾಯಿಬೆಕ್ಕಿನ ನೋವು ತುಂಬಿದ ಕೂಗು ಇಂದಿಗೂ ನೆನೆಪಿನಲ್ಲುಳಿದಿದೆ.

                 *****************

ತಮ್ಮ ಕುಲಬಾಂಧವರನ್ನೆಲ್ಲ ಬಿಟ್ಟು ಮನುಷ್ಯನೊಂದಿಗೆ ರಾಜಿಮಾಡಿಕೊಂಡು, ಮುದ್ದಿಸಿಕೊಂಡು ಬದುಕುವ ಈ ಕುಡಿಮೀಸೆಯ ಮಾರ್ಜಾಲಗಳ ಒಡನಾಟ ಬೆಂಗಳೂರಿಗೆ ಬಂದಮೇಲೆ ನಿಂತೇಹೋಗಿದೆ. ಇಲ್ಲಿ ನಾಲಿಗೆಗೆ ಉಚ್ಛರಿಸಲಿಕ್ಕೂ ಕಷ್ಟವಾಗುವ ತಳಿಗಳಿಂದ ಗುರುತಿಸಲ್ಪಡುವ, ಡ್ಯಾನಿ, ಮಾರ್ಕೋ, ಸ್ಯಾಮ್ ಮುಂತಾದ ಮನುಷ್ಯರಿಗಿಂತಲೂ ಚಂದದ ಹೆಸರುಗಳಿಂದ ಕರೆಯಿಸಿಕೊಳ್ಳುವ, ಉದ್ದುದ್ದ ರೋಮದ, ಥಟ್ಟನೆ ನೋಡಿದರೆ ವಿಗ್ ಹಾಕಿಕೊಂಡ ಕುಳ್ಳ ನಾಯಿಯಂತೆ ಕಾಣುವ, ತರಹೇವಾರಿ ರೂಪ-ಆಕಾರಗಳ, ತನ್ನ ಒಂದು ಚಿಕ್ಕ ಪಲ್ಟಿಗೂ ಮನೆಯವರೆಲ್ಲರಿಂದ ಶಭಾಶ್ಗಿರಿಯನ್ನು ಪಡೆಯುವ ಮುದ್ದು ಬೆಕ್ಕಣ್ಣಗಳನ್ನು ನೋಡುವಾಗ ಬಾಲ್ಯದ ಬಿಲ್ಲಿ, ಪಾಚು, ಪಾಂಡುಗಳೆಲ್ಲ ಮತ್ತೆ ಜೀವಂತವಾಗಿ ಮೀಸೆ ಕುಣಿಸಿದಂತಾಗುತ್ತದೆ. ಮುಂದೊಂದು ದಿನ ಮತ್ತದೇ ಹಳ್ಳಿ ಜೀವನಕ್ಕೆ ಮರಳಿ, ಹೊಸಿಲ ಮೇಲೆ ಕುಳಿತ ಬೆಕ್ಕನ್ನು ಬೊಗಸೆಯಲ್ಲಿ ಹಿಡಿದು ಮುದ್ದಿಸುವೆನೆಂಬ ಕನಸೊಂದು ಹೊಸತಾಗಿ ಅರಳುತ್ತದೆ.

[ಈ ಬರಹವು ಕೆಲವೊಂದು ಕತ್ತರಿ ಪ್ರಯೋಗಗಳೊಂದಿಗೆ ದಿನಾಂಕ 24-9-2017ರ  ವಿಶ್ವವಾಣಿ ವಿರಾಮ ಸಾಪ್ತಾಹಿಕದ 'ಮಾರ್ಜಾಲ ಮೋಹ' ಅಂಕಣದಲ್ಲಿ 'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ' ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿದೆ.]

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...