ಬುಧವಾರ, ಜುಲೈ 8, 2020

ಅಪ್ಪ.. ಐ ಲವ್ ಯು ಅಪ್ಪ.. 2

ನಾವು ಶಿವಮೊಗ್ಗದ ನಂಜಪ್ಪ ಹಾಸ್ಪಿಟಲಿನ ಅಂಗಳಕ್ಕೆ ಬಂದಿಳಿಯುವ ಹೊತ್ತಿಗೆ ಸಮಯ ಒಂಭತ್ತು ದಾಟಿತ್ತು‌. ವರಸೆಯಲ್ಲಿ ನನಗೆ ದೊಡ್ಡಪ್ಪನಾಗಬೇಕಿದ್ದ ಬಂಧುವೊಬ್ಬರು ಆಗಲೇ ಆಸ್ಪತ್ರೆಯ ನರಶಾಸ್ತ್ರಜ್ಞರೊಬ್ಬರನ್ನು ಸಂಪರ್ಕಿಸಿ ನಾವು ಬಂದೊಡನೆಯೇ ಅಪ್ಪನನ್ನು ಪರೀಕ್ಷಿಸುವ ವ್ಯವಸ್ಥೆ ಮಾಡಿದ್ದರು. ಕೊರೋನಾದ ಮುನ್ನೆಚ್ಚರಿಕೆ ಕ್ರಮವಾಗಿ ಒಬ್ಬ ರೋಗಿಯ ಜೊತೆ ಇನ್ನೊಬ್ಬರು ಮಾತ್ರ ಆಸ್ಪತ್ರೆಯೊಳಗೆ‌ ಪ್ರವೇಶಿಸಬಹುದೆಂಬ ನಿಯಮವಿದ್ದರಿಂದ ಅಮ್ಮ ಹಾಗೂ ನಮ್ಮ ಸಹಾಯಕ್ಕೆ ಧಾವಿಸಿ ಬಂದಿದ್ದ, ಶಿವಮೊಗ್ಗ ತವರಿನವರಾದ ಅತ್ತೆಯನ್ನು ಹೊರಗೆ ಬಿಟ್ಟು ನಾನೊಬ್ಬನೇ ಅಪ್ಪನ ಸ್ಟ್ರೆಚ್ಚರನ್ನು ಹಿಂಬಾಲಿಸಿದೆ. ಬೇಸ್ಮೆಂಟಿನಲ್ಲಿನ ಪ್ರಥಮ ಪರೀಕ್ಷಾ ಘಟಕದಲ್ಲಿ ಮಂಚದ ಮೇಲೆ ನರಳುತ್ತಾ ಮಲಗಿದ್ದ ಅಪ್ಪನನ್ನು ಗಂಭೀರ ಮುಖದಲ್ಲಿ ನೋಡಿದ ನರಶಾಸ್ತ್ರಜ್ಞರು ನಾವು ಈಗಾಗಲೇ ಮಾಡಿಸಿದ್ದ ಸ್ಕ್ಯಾನಿಂಗ್ ರಿಪೋರ್ಟನ್ನು ಪರೀಕ್ಷಿಸಿದರು.

"ಇದು ಆಗಿದ್ದು ಯಾವಾಗ?"

ದಪ್ಪಗಿನ ಕಪ್ಪು ಹಾಳೆಯ ಮೇಲೆ ಮೂಡಿದ್ದ ಅಪ್ಪನ ಮೆದುಳಿನ ವಿವಿಧ ಚಿತ್ರಗಳ ನೋಡುತ್ತಿದ್ದಂತೆಯೇ ದುಪ್ಪಟ್ಟಾದ ಗಂಭೀರ ಮುಖದಲ್ಲಿ ನನ್ನನ್ನವರು ಪ್ರಶ್ನಿಸಿದರು.

"ಇಂದು ರಾತ್ರೆ ಹನ್ನೆರೆಡು-ಹನ್ನೆರೆಡೂ ಮೊವ್ವತ್ತರ ಹೊತ್ತಿಗೆ"

ಸಾವಿರ ಪ್ರಶ್ನೆಗಳ ಎದೆಯೊಳಗಿಟ್ಟುಕೊಂಡು, 'ನಥಿಂಗ್ ಟು ವರಿ. ನಾವಿದನ್ನು ಸರಿಪಡಿಸುತ್ತೇವೆ' ಎಂಬ ಪ್ರತಿಕ್ರಿಯೆಯನ್ನು ಅವರಿಂದ ನಿರೀಕ್ಷಿಸುತ್ತಾ ಉತ್ತರಿಸಿದೆ.

"ವಾಟ್? ರಾತ್ರೆ ಹನ್ನೆರೆಡಕ್ಕಾ? ಹಾಗಾದ್ರೆ ಇಷ್ಟು ಹೊತ್ತು ಏನು ಮಾಡ್ತಿದ್ರಿ?"

ಏನು ಹೇಳುವುದೆಂದು ತಿಳಿಯದೆ ಆತಂಕದಲ್ಲಿ ನಿಂತಿದ್ದ ನನ್ನನ್ನು ನೋಡುತ್ತಾ ಅವರೇ ಮಾತು ಮುಂದುವರೆಸಿದರು:

"ಸೀ, ನಿಮ್ಮ ತಂದೆಗೆ ಬ್ರೈನ್ ಹ್ಯಾಮರೇಜ್ ಆಗಿದೆ. ನೀವು ತುಂಬಾ ತಡಮಾಡಿಬಿಟ್ಟಿದ್ದೀರ. ಇದಾಗಿ ಮೂರು ಗಂಟೆಯ ಒಳಗೇ ಅವರನ್ನು ಕರೆದುಕೊಂಡುಬರಬೇಕಿತ್ತು. ಈಗ ಮೆದುಳಿನ ಮೇಲೆಲ್ಲಾ ವಿಪರೀತ ರಕ್ತ ಹರಿದಿರುವುದರಿಂದ ಅದನ್ನು ಆಪರೇಟ್ ಮಾಡುವುದೂ ಸಾಧ್ಯವಿಲ್ಲ...

ನಿಮ್ಮ ತಂದೆ ಉಳಿಯುವುದು ಕಷ್ಟ!"

ನಿಂತನಿಂತಲ್ಲೇ ಸಿಡಿಲೊಂದು ನಡು ನೆತ್ತಿಗೆ ಅಪ್ಪಳಿಸಿದಂತೆ..
ಈ ಮಾತನ್ನು ಕೇಳಿಸಿಕೊಂಡ ನನ್ನ ಕಿವಿ, ಮೆದುಳು, ಮನಸ್ಸುಗಳು ಭಗ್ಗನೆ ಹೊತ್ತಿ ಉರಿದಂತೆ..
ಇಡೀ ಬಾಳಿನ ಸಕಲ ನಂಬಿಕೆ, ಪ್ರಾರ್ಥನೆಗಳೆಲ್ಲ ಕ್ಷಣಮಾತ್ರದಲ್ಲಿ ಸುಟ್ಟು ಕರಕಲಾದಂತೆ..
ನಿಂತಲ್ಲೇ ಕಲ್ಲಾಗಿ ನಿಂತುಬಿಟ್ಟೆ.

ಅಪ್ಪ‌.. ನನ್ನ ಅಪ್ಪ! ನೆನ್ನೆ ರಾತ್ರೆಯಷ್ಟೇ ನನ್ನನ್ನು ಊಟಕ್ಕೆ ಬಾರೋ ಎಂದು ಅಕ್ಕರೆಯಿಂದ ಕರೆದಿದ್ದ ಅಪ್ಪ. ಅಲರ್ಜಿಗೆ ಕೊಬ್ಬರಿ ಎಣ್ಣೆ ಹಚ್ಚಿಕೋ ಎಂದು ಕಾಳಜಿ ತೋರಿದ್ದ ಅಪ್ಪ. ಆಗಷ್ಟೇ ಹುಟ್ಟಿದ ನನ್ನನ್ನು ಎತ್ತಿಕೊಂಡು ಸಂಭ್ರಮಿಸಿದ್ದ ಅಪ್ಪ. ತೊಟ್ಟಿಲಲ್ಲಿ ಕೈಕಾಲಾಡಿಸುತ್ತಾ ಮಲಗಿದ್ದ ನನ್ನನ್ನು ಬಿಬ್ಬೀ ಎಂದು ಮುದ್ದಿಸಿದ್ದ ಅಪ್ಪ‌. ಸಾಗರದಿಂದ ಮೂರು ಚಕ್ರದ ಸೈಕಲ್ಲನ್ನು ನನಗಾಗಿ ಹೊತ್ತುತಂದಿದ್ದ ಅಪ್ಪ.. 'ನನ್ನ ಮಗನಿಗೆ ಆಯುರಾರೋಗ್ಯವನ್ನು ಕರುಣಿಸು' ಎಂದು ಪ್ರತಿದಿನ ದೇವರ ಪೂಜೆ ಮಾಡುತ್ತಿದ್ದ ಅಪ್ಪ..

ಅವನೀಗ ನಮ್ಮನ್ನಗಲಿ ಹೋಗುತ್ತಾನಂತೆ!

ಕಾಲವೆಂಬ ಕಾಲ ನನ್ನ ಪಾಲಿಗೆ ಸ್ತಬ್ಧವಾಗಿಹೋಯಿತು. ಏನೇ ಸ್ಟ್ರೋಕೆಂದು ತಿಳಿದಿದ್ದರೂ, ಆಪರೇಶನ್ ಆಗಬೇಕೆಂದು ಗೊತ್ತಿದ್ದರೂ ಅಪ್ಪನಿಗಾಗಿರುವುದು ಮಾರಣಾಂತಿಕ ಖಾಯಿಲೆಯೆಂಬ ಸಣ್ಣ ಕಲ್ಪನೆಯೂ ನನಗಿರಲಿಲ್ಲ. ಇಷ್ಟು ಹೊತ್ತು ಅಪ್ಪನನ್ನು ಪರೀಕ್ಷಿಸಿ, ಶುಶ್ರೂಷೆ ಮಾಡಿದ್ದ ಯಾವ ಡಾಕ್ಟರೂ ಅಂಥಾದ್ದೊಂದು ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ನಮ್ಮೆಲ್ಲರ ಮನದಲ್ಲಿದ್ದದ್ದೂ ಒಂದೇ ನಂಬಿಕೆ: ಅಪ್ಪನಿಗೆ ಸ್ಟ್ರೋಕ್ ಆಗಿದೆ. ಸಣ್ಣದೊಂದು ಆಪರೇಶನ್ ಮಾಡಿ ಅದನ್ನು ಸರಿಪಡಿಸುತ್ತಾರೆ. ನಂತರ ಯಾವುದಾದರೂ ನಾಟಿ ವೈದ್ಯರಲ್ಲಿಗೆ ಕರೆದೊಯ್ದು ಎಣ್ಣೆ ಮಾಲಿಶ್ ಮಾಡಿಸಿದರೆ ಸಾಕು. ಕೆಲವೇ ದಿನಗಳಲ್ಲಿ ಅಪ್ಪ ನಮ್ಮೊಂದಿಗೆ ಮನೆಗೆ ಮರಳುತ್ತಾನೆ. ಇನ್ನೊಂದರೆಡು ತಿಂಗಳಿನಲ್ಲಿ ಮೊದಲಿನಂತೆ ಎದ್ದು ಓಡಾಡುತ್ತಾನೆ..

ಆದರೀಗ ಈ ಡಾಕ್ಟರು ಹೇಳುತ್ತಿರುವುದೇನು? ಅಪ್ಪ ನನ್ನದೇ ಅಜ್ಞಾನಕ್ಕೆ ಬಲಿಯಾಗಿಹೋದನಾ? ನಾನೇ ತಡಮಾಡಿ ಅಪ್ಪನ ಅಂತ್ಯಕ್ಕೆ ಕಾರಣವಾಗಿಬಿಟ್ಟೆನಾ? ನಾವಲ್ಲಿ ಅವರಿವರೊಂದಿಗೆ ಮಾತನಾಡುತ್ತಾ, ಮೆಡಿಕಲ್ಲು-ಸ್ಕ್ಯಾನಿಂಗ್ ಸೆಂಟರ್-ಹಾಸ್ಪಿಟಲ್ ಗಳಿಗೆ ಅಲೆಯುತ್ತಾ, ಅಪ್ಪನ ಮಂಚದ ಕಾಲಬುಡದಲ್ಲಿ ತೂಕಡಿಸುತ್ತಾ ಕುಳಿತಿದ್ದ ಪ್ರತಿಯೊಂದು ನಿಮಿಷದಲ್ಲೂ ಅಪ್ಪ ಸಾವಿಗೆ ಇಂಚಿಂಚು ಹತ್ತಿರವಾಗುತ್ತಿದ್ದನಾ? ಈಗ ನಾನು ಏನು ಮಾಡಲಿ? ಒಂದು ಮಾತೂ ಹೇಳದೇ ಹೊರಟು ನಿಂತಿರುವ ಅಪ್ಪನನ್ನು ಹೇಗೆ ಉಳಿಸಿಕೊಳ್ಳಲಿ? ಅಲ್ಲಿ, ಹೊರಗಡೆ ಅಪ್ಪನಿಗೆ ಗಂಭೀರವಾದುದೇನೂ ಆಗಿಲ್ಲವೆಂಬ ಸಮಾಧಾನದ ಸುದ್ದಿಗಾಗಿ ಕಾದು ಕುಳಿತಿರುವ ಅಮ್ಮನಿಗೆ ಏನೆಂದು ಹೇಳಲಿ? ನಾಳೆಯಿಂದ ಅಪ್ಪ ನಮ್ಮ ಪಾಲಿಗಿಲ್ಲವೆಂಬ ಕಠೋರ ಸತ್ಯವ ನಾನಾದರೂ ಹೇಗ ಜೀರ್ಣಿಸಿಕೊಳ್ಳಲಿ?

ನಡುಗುತ್ತಿದ್ದ ಹೃದಯದಲ್ಲೇ ಅಪ್ಪ ಮಲಗಿದ್ದಲ್ಲಿಗೆ ಬಂದೆ. ಕಣ್ಣೆದುರು ನಿಂತ ನನ್ನನ್ನು ದಯನೀಯವಾಗಿ ನೋಡಿದ ಅಪ್ಪ ತಲೆ ನೋವು ಎಂಬಂತೆ ಸನ್ನೆ ಮಾಡಿದ. ಮೆತ್ತಗೆ ಅವನ ತಲೆ ನೇವರಿಸುತ್ತಾ ಸಮಾಧಾನ ಹೇಳತೊಡಗಿದೆ: ಇನ್ನು ಸ್ವಲ್ಪವೇ ಹೊತ್ತು ಅಪ್ಪಾ. ಶಿವಮೊಗ್ಗಕ್ಕೆ ಬಂದಿದ್ದೇವೆ‌. ನಾಳೆ ಡಾಕ್ಟರು ಒಂದು ಇಂಜಕ್ಷನ್ ಕೊಡ್ತಾರೆ. ಎಲ್ಲಾ ಸರಿಯಾಗುತ್ತೆ‌. ನೋವೆಲ್ಲಾ ಕಡಿಮೆಯಾಗುತ್ತೆ‌‌.. ಅದಕ್ಕಿಂತ ಹೆಚ್ಚು ಮಾತನಾಡಲು ನನ್ನಿಂದಾಗಲಿಲ್ಲ. ಜೀವವೆಂಬ ಜೀವ ಕರಗಿ ಕೊರಳಿಗೆ ಬಂದು ಕಟ್ಟಿಕೊಂಡಂತಾಯಿತು. ಡಾಕ್ಟರ ಅದೇಶದಂತೆ ಅಡ್ಮೀಶನ್ ಕೆಲಸಗಳನ್ನು ಪೂರೈಸಲೆಂದು ಕ್ಯಾಶ್ ಕೌಂಟರಿನತ್ತ ತೆರಳುವ ಮುನ್ನ ಅಪ್ಪನನ್ನೊಮ್ಮೆ ತಿರುಗಿನೋಡಿದೆ.

ದೂರ ನಡೆಯುತ್ತಿದ್ದ ನನ್ನನ್ನು ಹೋಗಬೇಡ ಎಂಬಂತೆ ನೋಡುತ್ತಾ ಮಲಗಿದ್ದ.. ನನ್ನ ಅಪ್ಪ.

*************

ಅಡ್ಮೀಶನ್ ಕೆಲಸಗಳು ಲಗುಬಗೆಯಲ್ಲಿ ಮುಗಿದವು. ಕ್ಯಾಶ್ ಕೌಂಟರಿನಲ್ಲಿ ಕುಳಿತವ ಹೇಳಿದ 'ಆಪರೇಶನ್ ಗೆ ಒಂದು ಲಕ್ಷ ಖರ್ಚಾಗುತ್ತದೆ, ದಿನದ ಐಸಿಯು ಬಾಡಿಗೆ ಮೊವ್ವತ್ತು ಸಾವಿರ, ಎಷ್ಟು ದಿನ ಐಸಿಯುನಲ್ಲಿರಬೇಕೆಂದು ಈಗಲೇ ಹೇಳಬರುವುದಿಲ್ಲ' ಎಂಬೆಲ್ಲ ಎಚ್ಚರಿಕೆಗಳನ್ನು ಮೆದುಳು ಯಾವುದೋ ಮೂಲೆಗೆ ಎಸೆಯಿತು. ಕೈಯ್ಯಲ್ಲಿದ್ದದ್ದು, ಖಾತೆಯಲ್ಲಿದ್ದು ಎಲ್ಲವನ್ನೂ ಸೇರಿಸಿದರೆ ಇರುವ ಇಪ್ಪತ್ತು-ಮೊವ್ವತ್ತು ಸಾವಿರಕ್ಕೂ, ಇವರು ಹೇಳುತ್ತಿರವ ಮೊತ್ತಕ್ಕೂ ಸಂಬಂಧವೇ ಇಲ್ಲವೆಂಬ ಸತ್ಯ ಬುದ್ಧಿಯನ್ನು ತಾಕಿತಾದರೂ ಅದನ್ನೆಲ್ಲಾ ಯೋಚಿಸಲು ಸಮಯವಿರಲಿಲ್ಲ. ಜೀವದ ವಿಷಯಕ್ಕೆ ಬಂದಾಗ ಹಣವೆನ್ನುವ ಪ್ರಪಂಚದ ಅತ್ಯಂತ ಅಮೂಲ್ಯ ವಸ್ತು ಹೇಗೆ ಯಕಶ್ಚಿತ್ ಕಾಗದದ ಚೂರಾಗಿ ಬದಲಾಗಿಬಿಡುತ್ತದಲ್ಲವೇ? ಕುಟುಕು ಪ್ರಾಣವ ಉಳಿಸಿಕೊಂಡು ನರಳುತ್ತಿರುವ ಆಪ್ತ ಜೀವವ ಪಕ್ಕದಲ್ಲಿಟ್ಟು 'ಇಷ್ಟು ಖರ್ಚಾಗುತ್ತದೆ. ಏನು ಮಾಡುವೆ?' ಎಂದು ಕೇಳಿದಾಗ ಯಾವ ಮನುಷ್ಯ ತಾನೇ ಹಣದ ಬೆಲೆಯ ಲೆಕ್ಕಹಾಕಿಯಾನು? ಅಡ್ಮೀಶನ್ ಮುಗಿಸಿ ಮರಳಿಬರುವ ಹೊತ್ತಿಗೆ ಅಪ್ಪನನ್ನಾಗಲೇ ತುರ್ತು ನಿಗಾ ಘಟಕ- ಐಸಿಯುಗೆ ಕರೆದೊಯ್ದಿದ್ದರು. ಆಸ್ಪತ್ರೆಯ ಹೊರಗೆ ಕಾಯುತ್ತಿದ್ದ ಅಮ್ಮನನ್ನು ಅತ್ತೆಯ ಜೊತೆ ಅವರ ಮನೆಗೆ ಕಳಿಸಿ ಅಪ್ಪನಿರುವ ಐಸಿಯು ವಾರ್ಡಿನ ಹೊರಗಿನ ಕಾರಿಡಾರಿಗೆ ಬಂದು ಕುಳಿತೆ‌.

ಬದುಕಿನ ಭಯಾನಕವಾದ ರಾತ್ರೆಯೊಂದು ಕಣ್ತೆರೆದದ್ದೇ ಆಗ.

ಅದು ಐಸಿಯು ವಾರ್ಡಿನ ಹೊರ ಕಾರಿಡಾರ್. ಮುಚ್ಚಿದ ಕೋಣೆಯೊಳಗಿನ ಹಾಸಿಗೆಯ ಮೇಲೆ, ಯಂತ್ರಗಳ ಸೆರೆಗೆ ಉಸಿರನ್ನೊಪ್ಪಿಸಿ ಮಲಗಿರುವ ಪರಮಾಪ್ತ ಜೀವಗಳ ದಾರಿ ಕಾಯುತ್ತಿರುವ ಬಂಧುಗಳೆಲ್ಲಾ ಕುಳಿತ ನಿರೀಕ್ಷಣೆಯ ಜಾಗವದು. ಆಗಾಗ ತೆರೆದುಕೊಳ್ಳುತ್ತಿದ್ದ ಐಸಿಯು ವಾರ್ಡಿನ ಬಾಗಿಲಿನಿಂದ ಹೊರಬಂದ ನರ್ಸುಗಳು ಒಳಗಿರುವ ರೋಗಿಯ ಹೆಸರು ಹೇಳಿ 'ಇವರ ಕಡೆಯವರು ಬನ್ನಿ' ಎಂದು ಕರೆಯುತ್ತಿದ್ದರು. ಯಾವ ಕ್ಷಣ ಯಾರಿಗೆ ಕರೆಯೋ? ಯಾವ ನಿಮಿಷದಲ್ಲಿ ಯಾವ ಕೆಟ್ಟ ಸುದ್ದಿಯೋ? ಎಂಬ ಆತಂಕದಲ್ಲೇ ಕುಳಿತಿರುವವರ ಸಾಲಿನ ಕೊನೆಯ ಬೆಂಚಿನ ಮೇಲೆ ಕಾಲು ಚಾಚಿ ಮಲಗಿಕೊಂಡೆ.

ಬಿಟ್ಟು ಹೋಗಿಯೇ ಬಿಡುತ್ತಾನಾ ಅಪ್ಪ? ನೆನ್ನೆಯಷ್ಟೇ ಜೊತೆಗಿದ್ದನಲ್ಲಾ? ಅವನು ಕೇಳಬಯಸಿದ ಹಳೆಯ ಸಿನೆಮಾ ಹಾಡೊಂದು ನನ್ನ ಮೊಬೈಲ್ನಲ್ಲಿ ಯೂಟ್ಯೂಬ್ನಲ್ಲಿ ಸಿಗದೇ ಹೋದಾಗ ಅಮ್ಮನ ಮೊಬೈಲನ್ನು ತಂದುಕೊಡುತ್ತಾ 'ಇದರಲ್ಲಿ ಹುಡುಕು' ಎಂದು ಅದೆಷ್ಟು ಮುಗ್ಧವಾಗಿ ಕೇಳಿದ್ದ? ಎಲ್ಲಾ ಮೊಬೈಲುಗಳಲ್ಲಿ ಬರುವ ಯೂಟ್ಯೂಬೂ ಒಂದೇ ಅಪ್ಪಾ ಎಂದಾಗಲೂ ಅರ್ಥವಾಗದೇ ಮಗುವಿನಂತೆ ಮೊಬೈಲು ಹಿಡಿದುಕೊಂಡೇ ನಿಂತಿದ್ದನಲ್ಲಾ? ಕೊನೆಗೆ ಅವನ ಹಾಡನ್ನು ಹೇಗೋ ಹುಡುಕಿ ಹಾಕಿದಾಗ ಮೊಬೈಲನ್ನು ಕಿವಿಯ ಬಳಿಯಿಟ್ಟುಕೊಂಡು ಓಡಿದ್ದನಲ್ಲಾ? ಅಪ್ಪಾ.. ಆ ಹಾಡನ್ನು ಮತ್ತೆ ಹಾಕುತ್ತೇನೆ ಬಾರೋ. ಒಮ್ಮೆ ಹೊರಗೆ ಬಾ.. ಭಯವಾಗುತ್ತಿದೆ ನನಗೆ. ನೀನೆಂಬ ಧೈರ್ಯವೇ ಹೀಗೆ ಮಲಗಿಬಿಟ್ಟರೆ ಹೇಗೆ ಹೇಳು? ನನಗಾದ ಭಯದ ಕಥೆಯ ನಿನಗೆ ಹೇಳುತ್ತೇನೆ ಬಾ.. ಸ್ಟ್ರೆಚ್ಚರ್, ವೀಲ್ ಚೇರ್ ಗಳೆಲ್ಲದರಿಂದೆದ್ದು ನಿನ್ನದೇ ಕಾಲ ಮೇಲೇ ನಡೆಯುತ್ತಾ ಬಾ.. ಹೆದರಿಬಿಟ್ಯಾ? ನಂಗೇನೂ ಅಗಿಲ್ಲ ಎಂದು ತಲೆದಡವು ಬಾ.

ಕೆಲವೇ ಸಮಯದ ಮುಂಚೆ ಇಲ್ಲೇ ಇದ್ದೆಯಲ್ಲಾ. ಆಗಲೇ ಎಲ್ಲಿ ಹೋಗಿಬಿಟ್ಟೆ ಅಪ್ಪ? ಮನೆಯಲ್ಲಿದ್ದಾಗ ನಾನು ಸುಮ್ಮನೆ ಸೆಖೆಯೆಂದು ಬರಿ ನೆಲದ ಮೇಲೆ ಮಲಗಿದರೇನೇ ದಿಂಬು, ಹೊದಿಕೆ ತಂದು ಕೊಡುತ್ತಿದ್ದೆ. ಈಗ ಹೀಗೆ ಒರಟು ಬೆಂಚಿನ ಮೇಲೆ ನಿನ್ನನ್ನೇ ಕಾಯುತ್ತಾ ಮಲಗಿದ್ದೇನೆ. ಬಂದು ಮಾತನಾಡಿಸದೇ ಒಳಗೇ ಕುಳಿತಿದ್ದೀಯಲ್ಲಾ ಏಕೆ ಅಪ್ಪಾ?

ಅದೆಷ್ಟು ಮಾತನಾಡುತ್ತಿದ್ದೆ ನನ್ನ ಜೊತೆ.. ಇತಿಹಾಸ, ಹಳೆಯ ಸಿನೆಮಾ ಹಾಡುಗಳು, ನಿನ್ನ ಬಾಲ್ಯದ ನೆನಪುಗಳು.. ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದೆ ನನ್ನ ಬಳಿ. ಒಮ್ಮೆಯಾದರೂ ಕಿವಿಗೊಟ್ಟು ಕೇಳಿದ್ದೆನಾ ನಾನು? ರಗಳೆ ಮಾಡುವೆಯೆಂದು ನಿನ್ನನ್ನು ಕಡೆಗಣಿಸುತ್ತಿದ್ದೆನಲ್ಲಾ? ಈಗ ಏನಾಗಿ ಹೋಯಿತು‌ ನೋಡು? ನಾನಾಗಿ ಬಯಸಿದರೂ ಮಾತನಾಡದ ಸ್ಥಿತಿಯ ತಲುಪಿಬಿಟ್ಟೆಯಾ? ಹೋಗೋ ಅಪ್ಪಾ.. ಕೋಪ ನಿನ್ನ ಮೇಲೆ. ಅದೆಷ್ಟು ಹೆದರಿಸುತ್ತಿದ್ದೀಯ? ಎಲ್ಲವೂ ಸರಿಯಾಗಿ ನೀನು ಮನೆಗೆ ಬಂದ ಮೇಲೆ ಒಂದು ವಾರ ಮಾತುಬಿಡುತ್ತೇನೆ ನಿನ್ನ ಜೊತೆ.

ಯೋಚನೆಗಳು ಹಳಿ ತಪ್ಪುತ್ತಿದ್ದವು. ಘಟಿಸಿದ್ದೆಲ್ಲಾ ಸುಳ್ಳಾಗಿಹೋಗಬಾರದೇ? ಒಂದೇ ಒಂದು ಬಾರಿ ಕಾಲ ಹಿಂದಕ್ಕೆ ಸರಿದು ಅಪ್ಪ ಆರೋಗ್ಯವಂತನಾಗಿರುವ ದಿನಗಳು ಮರಳಿ ಬರಬಾರದೇ? ಮನಸ್ಸು ಭಾವುಕವಾಗಿ ಬೇಡುತ್ತಿತ್ತು. ಬಲವಂತವಾಗಿ ಕಣ್ಮುಚ್ಚಿ ನಿದ್ರೆಯನ್ನು ಕಣ್ಣಿಗೆಳೆದುಕೊಳ್ಳುವ ಶತಪ್ರಯತ್ನ ಮಾಡಿದೆ. ಆದರೆ ನಿದ್ರೆಯೆಂಬುದು ಜನುಮದಾಚೆಗೆಲ್ಲೋ ಕೈಜಾರಿಹೋದ ಬೊಗಸೆ ನೀರಿನಂತಾಗಿತ್ತು. ಡಾಕ್ಟರು ಹೇಳಿದ ಮಾತುಗಳೇ ಕಿವಿಯಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿದ್ದವು.

"ನಿಮ್ಮ ತಂದೆಗೆ ಬಹಳ ಸಮಯದಿಂದ ಬಿಪಿ ಇದೆ. ಆದರೆ ಅವರು ಮಾತ್ರೆ ತೆಗೆದುಕೊಂಡಿಲ್ಲ. ಇಂದು ರಾತ್ರೆ ಅದು ಮಿತಿ ಮೀರಿ ತಲೆಯೊಳಗಿನ ನರವೊಂದರಲ್ಲಿ ಬ್ಲಡ್ ಕ್ಲಾಟ್ ಆಗಿ ಬ್ರೈನ್ ಹ್ಯಾಮರೇಜ್ ಆಗಿದೆ. ಹರಿದ ರಕ್ತ ಮೆದುಳಿನ ಮೇಲೆಲ್ಲಾ ಕುಳಿತು ಹೆಪ್ಪುಗಟ್ಟಿ ಮೆದುಳಿನ ಬಹುಭಾಗ ನಿಷ್ಕ್ರಿಯವಾಗಿದೆ‌. ನೀವು ಬೇಗ ಕರೆತಂದಿದ್ದರೆ ತಕ್ಷಣ ಆಪರೇಶನ್ ಮಾಡಿ ಗುಣಪಡಿಸಬಹುದಿತ್ತು. ಆದರೀಗ ಕಾಲ ಮೀರಿದೆ. ಇನ್ನೊಂದು ವಾರ ಅವರನ್ನು ಐಸಿಯುನಲ್ಲಿ ಆಬ್ಸರ್ವೇಶನ್ ನಲ್ಲಿಟ್ಟು ರಕ್ತವನ್ನೆಲ್ಲಾ ಕ್ಲಿಯರ್ ಮಾಡಿ ನಂತರ ಆಪರೇಶನ್ ಮಾಡುತ್ತೇವೆ‌. ಈ ಆರು ದಿನಗಳು ಅತ್ಯಂತ ಅಪಾಯಕಾರಿಯಾಗಿದ್ದು ಏನು ಬೇಕಾದರೂ ಆಗಬಹುದು. ಒಂದು ವೇಳೆ ಈ ಒಂದು ವಾರ ಏನೂ ಆಗದೇ ಕಳೆದಲ್ಲಿ ನಂತರ ಆಪರೇಶನ್ ಮಾಡುತ್ತೇವೆ!"

ಅಪ್ಪನಿಗೆ ಬಿಪಿಯಿತ್ತೆಂಬ ವಿಷಯವನ್ನು ಇಂದು ಬೆಳಗ್ಗೆ ಪರೀಕ್ಷಿಸಲು ಬಂದಿದ್ದ ಊರಿನ ಡಾಕ್ಟರು ಹೇಳಿದ್ದರು. ಹಿಂದೆಂದೋ ಜ್ವರವೆಂದು ಅಪ್ಪ ಅವರ ಕ್ಲಿನಿಕ್ ಗೆ ಹೋದಾಗ ಅಕಸ್ಮಾತಾಗಿ ಈ ವಿಷಯ ಬಹಿರಂಗವಾಗಿತ್ತು. ಆದರೆ ಅಪ್ಪ, ಬಿಪಿಯಿದೆ, ಮಾತ್ರೆ ತೆಗೆದುಕೊಳ್ಳಿರೆಂಬ ಡಾಕ್ಟರ ಸಲಹೆಯನ್ನು ಅವರ ಕ್ಲಿನಿಕ್ಕಿನಲ್ಲೇ ಬಿಟ್ಟು ಮನೆಗೆ ಬಂದಿದ್ದ. ಆ ಒಂದು ಸಣ್ಣ ಮೈಮರೆವಿನ ಫಲವಾಗಿ ಮೊವ್ವತೈದು ಪೈಸೆಯ ಮಾತ್ರೆಗೆ ನಿಯಂತ್ರಣವಾಗಬೇಕಿದ್ದ ಬಿಪಿಯಿಂದು ತೀರಾ ಪ್ರಾಣಕ್ಕೇ ಕೈಯಿಟ್ಟುಬಿಟ್ಟಿತ್ತು.

*************

ಅಪ್ಪ ಇದ್ದದ್ದೇ ಹಾಗೆ. ಮಾತ್ರೆ ಔಷಧಗಳೆಂಬ ಪದಗಳು ಅವನ ಶಬ್ದಕೋಶದ ಯಾವ ಪುಟದಲ್ಲೂ ಇರಲಿಲ್ಲ. ಬೆಳಗ್ಗೆ ಆರಕ್ಕೆ ಎದ್ದರೆ ರಾತ್ರೆ ಹತ್ತರ ತನಕ ಒಂದಿಲ್ಲೊಂದು ಕೆಲಸ ಮಾಡುತ್ತಾ ಬೆವರು ಹರಿಸುತ್ತಿದ್ದವನಿಗದು ಬೇಕಾಗಿಯೂ ಇರಲಿಲ್ಲ. ಎಂದೋ ಸಣ್ಣಗೊಂದು ತಲೆನೋವು, ಮತ್ತೆಂದೋ ಪುಟ್ಟಗೊಂದು ಬೆನ್ನು ನೋವು, ಅಪರೂಪಕ್ಕೊಮ್ಮೆ ಹೊಟ್ಟೆ ನೋವು. ಇವೆಲ್ಲವಕ್ಕೂ ಅಪ್ಪನ ಆಹಾರ ಕ್ರಮದಲ್ಲಿ ಅವನದೇ ಆದ ವಿಚಿತ್ರ ಮದ್ದುಗಳಿದ್ದವು. ಚಹಾ ಕುಡಿಯುವುದು, ದಿನಕ್ಕೆ ಮೂರು ಉತ್ತುತ್ತೆ ತಿನ್ನುವುದು, ಮಸಾಲೆ ಪದಾರ್ಥಗಳ ತಿನ್ನದಿರುವುದು, ಅದೆಂಥದೋ ಕಶಾಯ ಕುಡಿಯುವುದು.. ಹೀಗೆ. ಕೆಸರು ಮಣ್ಣಿನಲ್ಲಿ ಓಡಾಡಿಕೊಂಡಿದ್ದವನ ಹಿಮ್ಮಡಿ ಸದಾ ಬಾಯ್ಬಿಟ್ಟುಕೊಂಡಿರುತ್ತಿತ್ತು. ಅದಕ್ಕೆ ಹಚ್ಚುವ ಕ್ರಾಕ್ ಕ್ರೀಮ್, ತಲೆನೋವಿಗೊಂದು ಝಂಡೂ ಬಾಮ್, ಬೆನ್ನು-ಸೊಂಟ ನೋವುಗಳಿಗೊಂದು ಮೂವ್.. ಇವೆಲ್ಲಾ ಫಸ್ಟೇಯ್ಡ್ ಬಾಕ್ಸ್ ನಲ್ಲಿ ಸದಾ ಅಪ್ಪನ ಸೇವೆಗೆ ಸಿದ್ಧವಾಗಿರುತ್ತಿದ್ದವು. ಇಷ್ಟೇ ಅಪ್ಪನ ಪಾಲಿನ ಆಸ್ಪತ್ರೆಯೆಂದರೆ. ಇನ್ನೆಲ್ಲೋ ವರ್ಷಕ್ಕೊಮ್ಮೆ ಜ್ವರ ಬಂದು, ತನ್ನ ಹಿತ್ತಲ ಗಿಡದ ಯಾವ ಮದ್ದಿಗೂ ಅದು ಬಗ್ಗದಿದ್ದರೆ ಆಗ ಊರಿನ ಡಾಕ್ಟರ ಬಳಿ ಓಡುತ್ತಿದ್ದ. ಅಲ್ಲಿಂದ ಮನೆಗೆ ಬಂದು ಮಾತ್ರೆ ನುಂಗುವಷ್ಟರಲ್ಲೇ ಆ ಜ್ವರವು ನಡುದಾರಿಯಲ್ಲೆಲ್ಲೋ ಬಿದ್ದುಹೋದಂತೆ ವಾಸಿಯಾಗಿಬಿಟ್ಟಿರುತ್ತಿತ್ತು.

ಬಹಳ ವರ್ಷಗಳ ಹಿಂದೆ ಅಪ್ಪನಿಗೆ ಗ್ಯಾಸ್ಟಿಕ್ ಹೊಟ್ಟೆನೋವಿತ್ತು. ನಡುರಾತ್ರೆಯಲ್ಲದು ಕಾಡತೊಡಗಿದಾಗ ಅಪ್ಪ ಸೀದಾ ಎದ್ದು ಪಣತದ ಕೊಟ್ಟಿಗೆಗೆ ನಡೆಯುತ್ತಿದ್ದ. ಅಲ್ಲಿನ ಕಂಬವೊಂದರೆದುರಿನ ಮಣ್ಣು ನೆಲದ ಮೇಲೆ ಕಂಬಳಿಯೊಂದನ್ನು ಹಾಸಿ, ತಲೆಕೆಳಗಾಗಿ ನಿಂತುಬಿಡುತ್ತಿದ್ದ. ಅನ್ನ, ಮಜ್ಜಿಗೆಗಳ ಹೊರತಾಗಿ ಮತ್ತೇನನ್ನೂ ಸೇವಿಸುತ್ತಲೇ ಇರಲಿಲ್ಲ. ಅವನ ಈ ಪಥ್ಯದ ತೀವ್ರತೆಯ ತಡೆಯಲಾರದ ಹೊಟ್ಟೆ ನೋವು ಮೆಲ್ಲನೆ ಪೇರಿಕಿತ್ತಿತ್ತು. ಅಲ್ಲದೆ ವರ್ಷವೊಂದರ ಕೆಳಗೆ ಅದೊಂದು ದಿನ ಗುಡ್ಡದಿಂದ ಸೊಪ್ಪಿನ ಹೊರೆ ಹೊತ್ತು ತರುತ್ತಿದ್ದವನು ಅಂಗಳದಲ್ಲಿ ಜಾರಿ ಬಿದ್ದುಬಿಟ್ಟ. ಅಲ್ಲೇ ಇದ್ದ ನನ್ನ ತಮ್ಮ ಹಾಗೂ ಪಕ್ಕದ ಮನೆಯ ಅಣ್ಣ ಅಪ್ಪನನ್ನು ಎತ್ತಿ, ಪಕ್ಕದಲ್ಲಿದ್ದ ಸೊಪ್ಪಿನ ಹೊರೆಯನ್ನು ಬದಿಗೆ ಸರಿಸಲು ಪ್ರಯತ್ನಿಸಿದ್ದರು. ಆದರೆ ಏನೇ ಹೆಣಗಾಡಿದರೂ ಅದನ್ನು ಒಂದಿಂಚು ಕದಲಿಸುವುದು ಸದೃಢ ದೇಹಿಗಳಾದ ಅವರಿಗೂ ಕಷ್ಟವಾಗಿತ್ತು. ಅಷ್ಟು ಭಾರೀ ಹೊರೆಯನ್ನು ಅಪ್ಪನೊಬ್ಬನೇ ದೂರದ ಗುಡ್ಡದ ಕಲ್ಲುದಾರಿಯಿಂದ ಹೊತ್ತು ತಂದಿದ್ದಾದರೂ ಹೇಗೆಂದು ಅವರಿಬ್ಬರೂ ಅಚ್ಚರಿ ವ್ಯಕ್ತಪಡಿಸಿದ್ದರು.

ಅಂದಹಾಗೇ ಈ ಘಟನೆ ನಡೆದಾಗ ಅಪ್ಪನಿಗೆ ಅರವತ್ತೆರೆಡರ ಪ್ರಾಯ!

ಇಂತಿದ್ದ ಅಪ್ಪ ತನ್ನ ಜೀವಮಾನವಿಡೀ ನನ್ನ, ಅಮ್ಮನ ಹಾಗೂ ತಮ್ಮನ ಖಾಯಿಲೆಗಳಿಗಾಗಿ ಕ್ಲಿನಿಕ್ ಗೆ ಹತ್ತಿಳಿದದ್ದೇ ಹೆಚ್ಚು. ಹೀಗೆ ಅರವತ್ತು ವರ್ಷಗಳ ತನ್ನ ಜೀವನದ ಬಹುಪಾಲನ್ನು ನಳನಳಿಸುವ ಆರೋಗ್ಯದಿಂದ, ಆರೋಗ್ಯಕರ ಅಭ್ಯಾಸಗಳಿಂದ ಕಳೆದಿದ್ದ ಅಪ್ಪ ಇಂದು ಹೀಗೆ ಹಠಾತ್ತನೆ ಐಸಿಯು ಸೇರಿದ್ದಾನೆಂಬುದನ್ನು ಅರಗಿಸಿಕೊಳ್ಳುವುದು ಮನಸ್ಸಿಗೆ ಮಾತ್ರವಲ್ಲ, ಬುದ್ಧಿಗೂ ಕಷ್ಟವೇ ಆಗಿತ್ತು.

ಐಸಿಯು ವಾರ್ಡಿನ ಹೊರಗೆ ದುಃಸ್ವಪ್ನದಂಥಹಾ ವಾಸ್ತವವನ್ನೂ, ಕಟು ವಾಸ್ತವದಂಥಹಾ ದುಃಸ್ವಪ್ನಗಳನ್ನೂ ಅನುಭವಿಸುತ್ತಾ ಮಲಗಿದ್ದ ನನ್ನನ್ನು ಬೆಳಗಿನ ಮೂರರ ಹೊತ್ತಿಗೆ ಎಬ್ಬಿಸಿ ಒಳಗೆ ಕರೆಯಲಾಯಿತು. ಬೆಚ್ಚಿ ಬಿದ್ದೆದ್ದು ಹೋಗಿ ನೋಡಿದರೆ ನನ್ನೆದುರು ನಿಂತಿದ್ದ ಡಾಕ್ಟರು ಗಂಭೀರ ಮುಖದಲ್ಲಿ ನೇರ ವಿಷಯಕ್ಕೆ ಬಂದುಬಿಟ್ಟರು:

"ನಿಮ್ಮ ತಂದೆಯ ಪರಿಸ್ಥಿತಿ ತುಂಬಾ ಕ್ರಿಟಿಕಲ್ ಆಗಿದೆ. ಅವರೀಗ ಇದ್ದ ಅಲ್ಪ ಪ್ರಜ್ಞೆಯನ್ನೂ ಕಳೆದುಕೊಂಡಿದ್ದಾರೆ. ಕೂಡಲೇ ಆಪರೇಶನ್ ಮಾಡಲೇಬೇಕು. ಹಾಗೆ ಮಾಡಿದ ಮೇಲಾದರೂ ಉಳಿಯುತ್ತಾರೆಂಬುದು ಖಾತ್ರಿಯಿಲ್ಲ. ಕೂಡಲೇ ಈ ಮಾದರಿಯ ರಕ್ತವನ್ನು ತಂದುಕೊಡಿ!"

ಹೊತ್ತಿನ್ನೂ ಮೂಡದ ನಡು ರಾತ್ರೆ. ಏನೇನೂ ಗೊತ್ತಿಲ್ಲದ ಅಪರಿಚಿತ ಶಹರ. ಕೈಯಲ್ಲಿ ಇನ್ನೇನು ಮುಗಿದು ಹೋಗಲಿರುವ ಚಿಲ್ಲರೆ ಕಾಸು. ಒಳಗೆ ತಳಮಳಿಸುತ್ತಾ ಮಲಗಿರುವ ಅಪ್ಪ! ಎಲಾ ಬದುಕೇ..ಎಲ್ಲಿಗೆ ತಂದು ನಿಲ್ಲಿಸಿಬಿಟ್ಟೆ? ಈ ನಡುರಾತ್ರೆಯಲ್ಲಿ ಎಲ್ಲಿಂದ ತರಲಿ ರಕ್ತವನ್ನು? ಅವರು ಹೇಳುವ ಬ್ಲಡ್ ಬ್ಯಾಂಕ್ ಅದಿನ್ಯಾವ ಮೂಲೆಯಲ್ಲಿದೆಯೋ ಕಂಡವರ್ಯಾರು? ತಂದು ಕೊಡುತ್ತೇನೆ ಎಂದಷ್ಟೇ ಹೇಳಿ ಆಸ್ಪತ್ರೆಯಿಂದ ಹೊರಬಂದೆ. ಬೇರೇನೂ ತೋಚದೆ ಕೊಂಚ ದೂರದ ತಮ್ಮ ಮನೆಯಲ್ಲಿದ್ದ ಅತ್ತೆಗೆ ಕರೆಮಾಡಿದೆ. ಕೆಲವೇ ನಿಮಿಷಗಳಲ್ಲಿ ತನ್ನ ತಮ್ಮನೊಂದಿಗೆ ಆಸ್ಪತ್ರೆಗೆ ಬಂದ ಅವರು ನನ್ನಿಂದ ರಕ್ತದ ಮಾದರಿಯನ್ನು ಪಡೆದು ಬ್ಲಡ್ ಬ್ಯಾಂಕ್ ಗೆ ತೆರಳಿದರು.

ಸುತ್ತಲ ವಾತಾವರಣ ಬೆಳಗಿನ ಮೂರೂ ಮೊವ್ವತ್ತರ ಭಯಾನಕ, ದಾರುಣ ಕತ್ತಲಲ್ಲಿ ಸ್ತಬ್ದವಾಗಿ ನಿಂತಿತ್ತು. ರಾತ್ರೆ ಅಡ್ಮೀಶನ್ ಹೋಗುವ ಮೊದಲು ನೋಡಿದ್ದೇ ಕೊನೆ, ಆ ನಂತರ ಇಲ್ಲಿಯವರೆಗೂ ದೂರದಿಂದಲಾದರೂ ಅಪ್ಪನ ಮುಖ ಕಂಡಿಲ್ಲ. ಹೇಗಿದ್ದಾನೆ ಅಪ್ಪ? ಯಾವ್ಯಾವ ಯಂತ್ರ, ಕೊಳವೆ, ಸೂಜಿಗಳ ಚುಚ್ಚಿಟ್ಟಿದ್ದಾರೋ? ಅದಿನ್ನೆಷ್ಟು ನೋವನ್ನನುಭವಿಸುತ್ತಿದ್ದಾನೋ? ಪ್ರಜ್ಞಯೇ ಹೋಗಿದೆಯಂತಲ್ಲಾ? ಬಹುಷಃ ಅಪ್ಪನ ಜೀವಮಾನದಲ್ಲೇ ಇದು ಮೊದಲ ಪ್ರಜ್ಞಾಹೀನತೆ. ಅಷ್ಟಕ್ಕೂ ನೆನ್ನೆ 'ಒಂದು ವಾರದ ನಂತರ ಆಪರೇಶನ್ ಮಾಡುತ್ತೇವೆ' ಎಂದಿದ್ದವರು ಈಗ ಹಠಾತ್ತನೆ ಇಂದೇ ಮಾಡುತ್ತೇವೆ ಅಂದಿದ್ದಾದರೂ ಏಕೆ? ಇದರಲ್ಲೇನೂ ಮೋಸವಿಲ್ಲ ತಾನೇ? ಅಪ್ಪನೀಗ ಜೀವಂತವಾಗಿದ್ದಾನೆ ತಾನೇ?

ಹುಟ್ಟುಗಳ ಕಂಡಿದ್ದೆ. ಪರಮಾಪ್ತರ ಸಾವುಗಳನ್ನೂ ನೋಡಿದ್ದೆ. ಆದರೆ ಜೀವದ ಒಂದು ಭಾಗವೇ ಕಣ್ಣೆದುರಿಗೆ ಕೈಜಾರಿಹೋಗುತ್ತಿರುವುದನ್ನು ಹೀಗೆ ಅಸಹಾಯಕವಾಗಿ ನೋಡುತ್ತಿರುವುದು ಇದೇ ಮೊದಲು.

ಎಲ್ಲಿ ಹೋದಿರಿ ಅಪ್ಪ ಪೂಜಿಸಿದ್ದ ದೈವಗಳೇ? ಯಾವ ಕಲ್ಲಿನೊಳಗೆ ಅವಿತುಬಿಟ್ಟಿರಿ? ಎಲ್ಲಿ ಹೋಯಿತು ಪ್ರತಿನಿತ್ಯ ಅವನು ನಿಮ್ಮ ತಲೆಯ ಮೇಲೆ ಸುರಿದ ಅಭಿಷೇಕದ ನೀರು? ಎಲ್ಲಿ ಹೋದವು ಅವನು ನಿಮಗೆ ಎರೆದ ಹಾಲು-ತುಪ್ಪ? ಇದೇನಾ ಅವನು ಏರಿಸಿದ ಮೃದು ಹೂಗಳಿಗೆ ನೀವು ಕೊಟ್ಟ ಪ್ರತಿಫಲ? ಏನಾಯಿತು ಅವನು ಪ್ರತಿನಿತ್ಯ ಮಾಡಿದ್ದ ಪ್ರಾರ್ಥನೆ? ನಿಮ್ಮದಾದರೂ ಏನು ತಪ್ಪಿದೆ ಹೇಳಿ? ಎಂದಾದರೂ ಅವನು ಪ್ರಾರ್ಥನೆಯಲ್ಲಿ ತನ್ನ ಬಗೆಗೆ ಏನನ್ನಾದರೂ ಕೇಳಿದ್ದಾನೆಯೇ? ಮಗನಿಗೆ ಅಲರ್ಜಿ ಕಡಿಮೆಯಾಗಲಿ, ಮಗನಿಗೆ ಒಳ್ಳೆಯ ಕೆಲಸ ಸಿಗಲಿ.. ಜಗದೆಲ್ಲ ಖುಷಿಯೂ ಮಗನಿಗೇ ಇರಲಿ..

ಜೀವ ಚೀರಿಕೊಳ್ಳುತ್ತಿತ್ತು. ಹೃದಯ ದಣಿಯುತ್ತಿತ್ತು. ಕಾಲು ಸೋಲುತ್ತಿತ್ತು. ನಾನೊಬ್ಬ ಗಂಡಸು ಹಾಗೂ ಗಂಡಸರು ಅಳಬಾರದು ಎಂಬೆಲ್ಲ ಗರ್ವಗಳ ಮರೆತು ಒಂದೇ ಸಮನೆ ಅತ್ತುಬಿಟ್ಟೆ. ಈ ಗಾಢಾಂಧಕಾರದಲ್ಲಿ ಸಮಾಧಾನದ ಮಾತನಾಡುವ ಒಂದೇ ಒಂದು ಜೀವವೂ ಜೊತೆಗಿಲ್ಲದ ಅದೆಂಥಹಾ ಒಬ್ವಂಟಿ ಇರುಳಿಗೆ ಬಂದು ನಿಂತುಬಿಟ್ಟೆ?

ಇದು ಕೇವಲ ನನ್ನೊಬ್ಬನ ಕಥೆಯಲ್ಲ. ಆಸ್ಪತ್ರೆಯೊಂದರ ಕಾರಿಡಾರಿನಲ್ಲಿ ಸುಮ್ಮನೆ ಒಂದು ದಿನ ಕಳೆದು ನೋಡಿ: ಇಂಥದೇ ಅದೆಷ್ಟೋ ನರಳಿಕೆ, ಅಳು, ರೋದನೆಗಳು ಜರುಗುತ್ತಲೇ ಇರುತ್ತವೆ. ಮಂದಿ ನರಳಿ, ಅತ್ತು, ಸಮಾಧಾನಪಡಿಸಿ, ಸಮಾಧಾನಗೊಂಡು ಒಂದಷ್ಟು ಹೊತ್ತು ಇದ್ದು, ಎದ್ದುಹೋಗುತ್ತಲೇ ಇರುತ್ತಾರೆ. ಇಂಥಹಾ ಅದೆಷ್ಟು ಜನರ ನರಳಾಟವ ಕೇಳಿಕೇಳಿ ಇಷ್ಟೊಂದು ನಿರ್ಭಾವುಕಗೊಂಡಿವೆಯೋ ಈ ಆಸ್ಪತ್ರೆಯ ಕಂಬ, ಗೋಡೆ, ಕಾರಿಡಾರುಗಳು?

ಅಪ್ಪ.. ಐ ಲವ್ ಯು ಅಪ್ಪಾ.. -1

ನಮ್ಮ ಬದುಕಿನಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ಅದರ ಎಲ್ಲಾ ಪರಿಣಾಮ, ಪ್ರಭಾವಗಳಿಗೂ ನಾವು ಮಾತ್ರ ಫಲಾನುಭವಿಗಳೂ, ಹೊಣೆಗಾರರೂ ಆಗಿದ್ದರೂ ಅವನ್ನು ನಾಲ್ಕು ಜನರೆದುರು ಹೇಳಿಕೊಳ್ಳಲೇಬೇಕು. ಅದು ಕೇವಲ ನಮ್ಮ ಮನದ ಭಾರವನ್ನು ಕಡಿಮೆಮಾಡಿಕೊಳ್ಳಲಿಕ್ಕಾಗಿಯಲ್ಲ. ಅಥವಾ ನಾಲ್ಕು ಜನರ ಸಿಂಪಥಿ ಗಿಟ್ಟಿಸಲಿಕ್ಕೂ ಅಲ್ಲ. ಬದುಕಿನ ತಿರುವೊಂದರಲ್ಲಿ ನಮಗರಿವೆಲ್ಲದಂತೆ ಕಷ್ಟಗಳು ಹೇಗೆ ಧುತ್ತೆಂದು ಕಣ್ಣಮುಂದೆ ನಿಂತುಬಿಡುತ್ತವೆಂಬುದನ್ನು ಉಳಿದವರಿಗೆ ಅರ್ಥಮಾಡಿಸಲಿಕ್ಕೆ. ಅಂಥಹಾ ಅನಿರೀಕ್ಷಿತ ಘಳಿಗೆಯಲ್ಲಿ ನಾವು ಮಾಡುವ ತಪ್ಪು, ಪ್ರಮಾದ, ಯೋಚಿಸಿದ ಬಗೆ, ಗಡಿಬಿಡಿಯಲ್ಲಿ ತುಳಿದ ತಪ್ಪು ಹಾದಿ, ತೋರಿದ ಜಾಣ್ಮೆಗಳನ್ನು ಉಳಿದವರಿಗೆ ಹೇಳಲಿಕ್ಕೆ. ಎಲ್ಲವೂ ಸರಿಯಾಗಿದ್ದಾಗ ನಾವು ನನಗೆ ಯಾರೂ ಬೇಡ, ನಾನೊಬ್ಬನೇ ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಒಣ ಜಂಭದಿಂದ ಬೀಗುತ್ತಿರುತ್ತೇವೆ. ಆದರೆ ಅದೃಷ್ಟರೇಖೆಯೆಂಬ ದೇವರು ಎಳೆದ ಗ್ರಾಫ್ ಎಲ್ಲಾ ಕಾಲದಲ್ಲೂ ಸಮನಾಂತರವಾಗಿರುವುದಿಲ್ಲ. ಅದು ನಮ್ಮನ್ನು ಹೇಗೆ ಅಸಹಾಯಕತೆಯ ಕಾರಿಡಾರಿನಲ್ಲಿ ಕೈಕಟ್ಟಿ ನಿಲ್ಲಿಸಿಬಿಡುತ್ತದೆಂಬುದು ಆ ಹಾದಿಯಲ್ಲಿ ಸಾಗಿದವರನ್ನು ನೋಡಿ ನಾವು ತಿಳಿಯಬೇಕಾದ ಪರಮ ಸತ್ಯ.

ಈ ಕೆಳಗಿನ ಬರಹ ನಾನು ಆಸ್ಪತ್ರೆಯ ನಸುಗತ್ತಲ ಅಸಹಾಯ ಕಾರಿಡಾರುಗಳಲ್ಲಿ, ಮುಗಿಯದ ಯಾತನೆಯಲ್ಲಿ ನಿಶ್ಚಲನಾಗಿ ಮಲಗಿರುವ ಅಪ್ಪನ ಮಂಚದ ಕಾಲ ಬುಡದಲ್ಲಿ, ಆಪರೇಶನ್ ಥಿಯೇಟರ್ ನ ಹೊರಗಿನ ಭಯಾನಕ ಮೌನದಲ್ಲಿ ಕುಳಿತು ಬರೆದದ್ದು. ತೀರಾ ಯಾರ ಸಾಂತ್ವನವೂ ಕವಿದ ಆತಂಕವನ್ನು ನಿವಾರಿಸಲಾಗದೇ ಹೋದಾಗೆಲ್ಲಾ ಸಂತೈಸಿದ್ದು ಈ ಬರಹ. ಅತ್ಯಂತ ಆತ್ಮೀಯವೆಂದು ನಂಬಿದ ಜೀವವೂ ನಿನ್ನ ಕಷ್ಟ ನಿನಗೆ, ನನ್ನ ಜೀವನ ನನಗೆ ಎಂದು ಕೈಕೊಡವಿದ ಮರುಕ್ಷಣ ಮನಸ್ಸಿನ ಆರೈಕೆಗೆ ನಿಂತಿದ್ದೂ ಇದೇ ಓದು-ಬರಹ. ಸ್ವಗತದಂತೆ, ಬಡಬಡಿಕೆಯಂತೆ, ದೇವರೆದುರು ನಿಂತು ಮಾಡಿದ ಪ್ರಾರ್ಥನೆಯಂತೆ ಇದನ್ನೆಲ್ಲ ಬರೆದಿದ್ದೇನೆ.

ಪ್ರಾರ್ಥಿಸಿದಾಗ ಕೇಳಿಸಿಕೊಳ್ಳದೇ ಹೋದ ದೇವರು ಬಿಡುವಾಗಿ ಕುಳಿತ ಯಾವ ಹೊತ್ತಿನಲ್ಲಾದರೂ ಓದಿ ಹರಸಿಯಾನೆಂಬ ಸಣ್ಣ ಆಸೆಯಲ್ಲಿ.

****************

ಅಪ್ಪನಿಗೆ ಬ್ರೈನ್ ಹ್ಯಾಮರೇಜ್ ಆಯಿತು.
ಆದರೆ ನಾವದನ್ನು ಸಣ್ಣ ಸ್ಟ್ರೋಕ್ ಎಂದು ತಪ್ಪಾಗಿ ತಿಳಿದೆವು.

ಅದು ಮೇ ಹನ್ನೆರೆಡರ ಮಧ್ಯರಾತ್ರೆ 12/12:30ರ ಸಮಯ. ಆ ದೌರ್ಭಾಗ್ಯದ ಕತ್ತಲು ನಮ್ಮನೆಯ ಮೆಲಿನ ಬಾನನ್ನು ಆವರಿಸಿಕೊಳ್ಳುವ ಮುನ್ನವೇ ಮಳೆಯೊಂದು ಧೋ ಎಂದು ಸುರಿದುಹೋಗಿತ್ತು. ಅಶುಭದ ಮೊದಲ ಸೂಚನೆಯಂತೆ ಕರೆಂಟೂ ಹೋಗಿತ್ತು. ಸಾಲದ್ದಕ್ಕೆ ಕಾಡುಕೋಣಗಳ ಗುಂಪೊಂದು ಮನೆಯ ಹಿಂದೆಯೇ ಇದ್ದ ತೋಟಕ್ಕೆ ಮತ್ತೆಮತ್ತೆ ಭೇಟಿ ಕೊಡುತ್ತಾ ಭಯ ಹುಟ್ಟಿಸಿತ್ತು. ಇಷ್ಟೆಲ್ಲ ಭೀತಿಗಳ ಸಮೇತ ಮುಸುಕಿನಿಂತಿದ್ದ ಆ ಕತ್ತಲ ನಡುರಾತ್ರೆಯ ವೇಳೆಗೆ ಅದೇಕೋ ಅಮ್ಮ ಇದ್ದಕ್ಕಿದ್ದಂತೆ ಎದ್ದು ಕುಳಿತಳು. ಎಂದೂ ಇಲ್ಲದ್ದು ಅಂದು ಅವಳಿಗೆ ಹೊರಗೆ ಹೋಗಬೇಕಿತ್ತು. ರಾತ್ರೆ, ಕತ್ತಲು, ಕಾಡುಕೋಣದ ಭಯ.. ಪಕ್ಕದಲ್ಲಿದ್ದ ಅಪ್ಪನನ್ನು ಎಬ್ಬಿಸಲು ಪ್ರಯತ್ನಿಸಿದಳು. ತಟ್ಟಿದಳು, ಕರೆದಳು, ಅಲ್ಲಾಡಿಸಿದಳು.. ಊಹೂಂ, ಅಪ್ಪ ಗಾಢ ನಿದ್ರೆಯಲ್ಲಿದ್ದ. ಸರಿ, ತಾನೊಬ್ಬಳೇ ಎದ್ದು ಬಚ್ಚಲಿಗೆ ಹೋಗಿಬಂದು ಮತ್ತೆ ಮಲಗಿದಳು‌.

ಆಗ ಎದ್ದ ಅಪ್ಪ. ಕೆಲವೇ ನಿಮಿಷದ ಮುನ್ನ ಅಮ್ಮ ಎಷ್ಟೆಲ್ಲಾ ಕರೆದು, ತಟ್ಟಿ, ಅಲ್ಲಾಡಿಸಿದಾಗಲೂ ಏಳದವನು ಯಾರೋ ಕರೆದಂತೆ ತಾನಾಗಿಯೇ ಎದ್ದು ಹೊರನಡೆದುಬಿಟ್ಟ. ಹಾಗೆ ಎದ್ದವನು ನೇರ ಬಚ್ಚಲಿಗೆ ನಡೆದದ್ದೂ, ಅಲ್ಲಿ ಅವನು ನಲ್ಲಿ ತಿರುಗಿಸಿ ನೀರು ಬಿಟ್ಟದ್ದೂ ಶಬ್ದಗಳಾಗಿ ಅಮ್ಮನ ಅರಿವಿಗೆ ಬಂದವು. ಆದರೆ ನಿದ್ರೆಗಣ್ಣಿನಲ್ಲಿದ್ದ ಅಮ್ಮನನ್ನು ಯೋಚನೆಗೆ ದೂಡಿದ್ದು ಅದ್ಯಾವುದೂ ಅಲ್ಲ. ಅಲ್ಲಿ ಬಚ್ಚಲಿನೊಳಗೆ ಅಪ್ಪ ಆಡತೊಡಗಿದ್ದ ಗೊಜಗೊಜ ಮಾತು!

ಮೊದಲಿಗೆ ಅಪ್ಪ ಬಚ್ಚಲಿನ ಕಟ್ಟೆಯ ಮೇಲಿಟ್ಟ ಬಕೇಟಿನಲ್ಲಿದ್ದ ನೀರನ್ನು ಖಾಲಿ ಮಾಡಿಟ್ಟಿರುವ ನನ್ನ ತಮ್ಮನಿಗೆ ಬೈಯುತ್ತಿದ್ದಾನೆಂದೇ ಅಮ್ಮ ಭಾವಿಸಿದಳು. ಆದರೆ ಒಂದು ನಿಮಿಷಕ್ಕೆಲ್ಲಾ ಮರಳಿ ಬಂದು ಮಗ್ಗುಲಲ್ಲಿ ಮಲಗಿದಮೇಲೂ ಅಪ್ಪನ ಗೊಣಗಾಟ ಮುಂದುವರಿದೇ ಇತ್ತು. ತೀರಾ ಪಕ್ಕದಲ್ಲೇ ಇದ್ದೂ ಅವನೇನು ಹೇಳುತ್ತಿದ್ದಾನೆಂಬುದು ಅಮ್ಮನ ಅರಿವಿಗೆ ಬಾರದಾಯಿತು. ಏನೆಂದು ಕೇಳಿದಳಾದರೂ ಆ ಪ್ರೆಶ್ನೆ ಅಪ್ಪನನ್ನು ತಾಕಲಿಲ್ಲ. ಅಷ್ಟರಲ್ಲಿ ವರಸೆ ಬದಲಿಸಿದ ಅಪ್ಪ ಮಲಗುವ ಮುನ್ನ ಸದಾ ತನ್ನ ಪಕ್ಕದಲ್ಲಿಟ್ಟುಕೊಳ್ಳುತ್ತಿದ್ದ ಫಸ್ಟೇಯ್ಡ್ ಬಾಕ್ಸ್ ನಲ್ಲಿ ವಿಕ್ಸ್ ಗಾಗಿ ತಡಕತೊಡಗಿದ. ಆ ತಡಕಾಟದ ಶಬ್ದ ಅದೆಷ್ಟು ವಿಕಾರವಾಗಿತ್ತೆಂದರೆ ಪಕ್ಕದ ಕೋಣೆಯಲ್ಲಿ ಆಳ ನಿದ್ರೆಯಲ್ಲಿದ್ದ ನಾನು ಹಾಗೂ ತಮ್ಮನನ್ನೂ ಅದು ಎಚ್ಚರಗೊಳಿಸಿಬಿಟ್ಟಿತು. ಭೀತ ಹೃದಯದ ಎದೆಬಡಿತದಂತೆ ಕರ್ಕಶವಾಗಿ ಕೇಳಿಬಂದ ಆ ಸದ್ದಿಗೆ ಎದ್ದು ಬಂದು ನೋಡಿದರೆ ಅಲ್ಲಿ ಇಷ್ಟಗಲದ ಚಿಕ್ಕ ಡಬ್ಬಿಯ ಮುಚ್ಚಳ ತೆಗದು ವಿಕ್ಸ್ ಹಚ್ಚಿಕೊಳ್ಳಲಾಗದ ಅಪ್ಪ ಡಬ್ಬಿಯ ತುಂಬಾ ಟಕಟಕನೆ ಬರಗುತ್ತಿದ್ದ. ಅದುರುವ ಕೈಯಲ್ಲಿ ಅದರೊಳಗಿನಿಂದ ವಿಕ್ಸನ್ನು ತೆಗೆತೆಗೆದು ತನ್ನ ಎಡಕಣತಲೆಗೆ ಒಂದೇ ಸಮನೆ ಹಚ್ಚಿಕೊಳ್ಳುತ್ತಾ ಅರ್ಥವಾಗದ್ದೇನನ್ನೋ ಮಣಮಣಿಸುತ್ತಿದ್ದ. ಅವನ ಬರಗುವಿಕೆಗೆ ಸಿಕ್ಕ ಇಡೀ ಡಬ್ಬಿ ವಿಕಾರವಾಗಿ ಕರಗುಟ್ಟುತ್ತಾ ಆಚೀಚೆ ಹೊಡಕುತ್ತಿತ್ತು. ಅಮ್ಮ ಮಾತ್ರ ಏನಾಗುತ್ತಿದೆಯೆಂಬುದೇ ಅರ್ಥವಾಗದೇ ಏನ್ರೀ? ಏನಾಗ್ತಿದೆ? ಎಂದು ಅತ್ತಲಿಂದ ಉತ್ತರ ಬಾರದ ಪ್ರಶ್ನೆಗಳ ಕೇಳುತ್ತಾ ಬೆಚ್ಚಿ ಕುಳಿತಿದ್ದಳು.

ಇಷ್ಟು ವರ್ಷಗಳಲ್ಲಿ ಹಿಂದೆಂದೂ ಕಾಣದ ಸ್ಥಿತಿಯಲ್ಲಿ ಅಪ್ಪನನ್ನು ನೋಡಿದ ನನಗೆ ಆಘಾತವಾಯಿತು.
ಹೀಗೆಲ್ಲಾ ಗೊಂದಲ-ನಿಶ್ಯಕ್ತಿಯಲ್ಲಿ ಕೈ, ಕಾಲು, ಮಾತುಗಳು ಅದುರುವ ವ್ಯಕ್ತಿಯಾಗಿರಲೇ ಇಲ್ಲ ಅಪ್ಪ. ಅಪ್ಪನೆಂದರೆ ದಣಿವರಿಯದ ಚೇತನ. ಬೆಳಗ್ಗೆ ಆರಕ್ಕೆದ್ದು ಕೆಲಸಕ್ಕೆ ಶುರುವಿಟ್ಟುಕೊಂಡನೆಂದರೆ ರಾತ್ರೆ ಹತ್ತರ ತನಕ ಅವನ ಮೈಯೊಳಗಿನ ಯಂತ್ರ ಆಫ್ ಆಗುತ್ತಲೇ ಇರಲಿಲ್ಲ. ಅದರಲ್ಲೂ ಅಮ್ಮನಿಗೆ ಅನಾರೋಗ್ಯ ಆರಂಭವಾದ ಮೇಲಂತೂ ಮನೆಯೊಳಗಿನ ಕೆಲಸಗಳಿಗೂ ಅಪ್ಪ ಕೈ ಹಚ್ಚತೊಡಗಿದ್ದ. ತೀರಾ ಅರವತ್ತು ದಾಟಿದ ಮೇಲೂ ಅಷ್ಟು ದೂರದ ಬೆಂಗೇರಿ ಗುಡ್ಡಕ್ಕೆ ಹೋಗಿ, ಸೊಪ್ಪು ಕೊಯ್ದು, ದೈತ್ಯ ಹೊರೆಯಾಗಿ ಕಟ್ಟಿ ತಲೆಯ ಮೇಲಿಟ್ಟುಕೊಂಡು ಹೊತ್ತು ತರುತ್ತಿದ್ದ. ಹೀಗೆ ಎತ್ತರ ನಿಲುವು, ಗಟ್ಟಿ ದೇಹದ ಅಪ್ಪನನ್ನು ಎಲ್ಲೊ ಒಂದೆರೆಡು ಹೊಟ್ಟೆನೋವುಗಳ ಹೊರತಾಗಿ ಮತ್ಯಾವ ಖಾಯಿಲೆಯೂ ಈ ವರೆಗೆ ಸುಸ್ತುಮಾಡಿ ಮಲಗಿಸಿರಲಿಲ್ಲ.

ಇಂತಿದ್ದ ಅಪ್ಪನ ಬಾಯಲ್ಲೀಗ 'ತಲೆನೋವು' ಎಂಬ ಅತಿ ಸರಳ ಪದವೇ ತೊದಲು ತೊದಲಾಗಿ, ಮತ್ತೇನೋ ಆಗಿ ಹೊರಬರುತ್ತಿತ್ತು. ಅವನ ಅಸ್ಪಷ್ಟ ಮಾತಿನ ಜಾಡು ಹಿಡಿದು‌ ತಲೆನೋವಾ? ಎಲ್ಲಿ? ಎಂದು ವಿಕ್ಸ್ ತಿಕ್ಕಿಕೊಳ್ಳುವ ವಿಫಲ ಪ್ರಯತ್ನ ಮಾಡುತ್ತಿದ್ದ ಅವನ ಎಡಕಣತಲೆಗೆ ಹಚ್ಚಿದೆ. ಸ್ವಲ್ಪ ಹಾಯೆನ್ನಿಸಿತೋ ಏನೋ? 'ಈಗ್ ಗೀಗ್ ಗೀಗ ಓಓಓಕೆ' ಎಂದು ತೊದಲುತ್ತಾ ಕಣ್ಮುಚ್ಚಿ ಮಲಗಲೆತ್ನಿಸಿದ. ಮರುಕ್ಷಣವೇ ಥಟ್ಟನೆ ಕಣ್ತೆರೆದು ತಾನು ಬಾತ್ರೂಮಿಗೆ ಹೋಗಬೇಕೆಂದು ಸನ್ನೆ ಮಾಡುತ್ತಾ ಏಳಲೆತ್ನಿಸಿದ. ಆದರೆ ತೂರಾಡುತ್ತಲೇ ನಿಂತವನ ದೇಹ ತನ್ನ ಪಾದಗಳ ಮೇಲೆ ಆಧರಿಸಲಾರದೇ ಪಕ್ಕಕ್ಕೆ ವಾಲಿತು. ಅಲ್ಲೇ ಇದ್ದ ತಮ್ಮ ಹಾಗೂ ನಾನು ಹೆಗಲಿಗೆ ಕೈಕೊಟ್ಟು ಅವನನ್ನು ನಡೆಸಿಕೊಂಡು ನಡೆದೆವು. ಇಪ್ಪತ್ತೊಂಭತ್ತು ವರ್ಷಗಳ ಬದುಕಿನಲ್ಲಿ ಮೊದಲ ಬಾರಿಗೆ ಅಪ್ಪನನ್ನು ಹೆಗಲು ಹಿಡಿದು ನಡೆಸುತ್ತಿರುವ ವಿಚಿತ್ರ ಆತಂಕದಲ್ಲಿ ನಾನಿದ್ದರೆ ಅರವತ್ಮೂರು ವರ್ಷಗಳ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಇನ್ನೊಬ್ಬರ ಹೆಗಲಿಗಾತು ನಡೆಯುತ್ತಿರುವ ವಿಚಿತ್ರ ಭಯದಲ್ಲಿ ಅಪ್ಪನಿದ್ದ‌‌.

ಬಚ್ಚಲಿಗೆ ಹೋಗಿ ಮರಳಿ ಬರುತ್ತಿದ್ದಂತೆಯೇ ಅಪ್ಪ ಮತ್ತೆ ಅಲ್ಲಿಗೇ ಕರೆದೊಯ್ಯುವಂತೆ ಸನ್ನೆ ಮಾಡಿದ. ಈ ಬಾರಿ ಅವನು ಮತ್ತಷ್ಟು ಭಾರವೂ, ಪರಾವಲಂಬಿಯೂ ಆಗಿರುವುದು ನಮ್ಮ ಗಮನಕ್ಕೆ ಬಂತು. ಮರಳಿ ಹಾಸಿಗೆಗೆ ಬಂದೊರಗಿದವನ ಮಾತು ತೀರಾ ಅರ್ಥಗಳ ಮೀರಿದ ಹಂತ ತಲುಪಿಬಿಟ್ಟಿತ್ತು. ಅವನು ಅಕ್ಷರಷಃ ಪದಗಳಿಗಾಗಿ ತಡಕಾಡುತ್ತಿದ್ದ. ಇದೇನಾಗುತ್ತಿದೆಯೆಂದು ನಾವು ಭೀತರಾಗುತ್ತಿರುವಾಗಲೇ ಇದ್ದಕ್ಕಿದ್ದಂತೆ ಅಪ್ಪ ತನ್ನ ಬಲಗಾಲನ್ನು ತೋರಿಸುತ್ತಾ ಏನೋ ಹೇಳತೊಡಗಿದ. ಮುಟ್ಟಿನೋಡಿದರೆ ಅದು ಛಳಿ ಹಿಡಿದಂತೆ ತಣ್ಣಗಾಗಿತ್ತು. ಈ ಮೊದಲು, ಬೆಂಗಳೂರಿನಲ್ಲಿರುವ ನನ್ನ ಅಕ್ಕನಿಗೆ ಹೀಗೇ ಆಗುತ್ತಿತ್ತೆನ್ನುವುದನ್ನು ನೆನಪಿಸಿಕೊಂಡ ನಾನು ಅದನ್ನು ಲೋ ಬಿಪಿಯೆಂದು ತಪ್ಪಾಗಿ ಅಂದಾಜಿಸಿ ಅಪ್ಪನ ಅಂಗಾಲನ್ನು ಉಜ್ಜತೊಡಗಿದೆ ಹಾಗೂ ಬದುಕಿನ ಅತ್ಯಂತ ದೊಡ್ಡ ಪ್ರಮಾದವನ್ನು ಮಾಡಿಬಿಟ್ಟೆ. ನಿಜದಲ್ಲಿ ಹೈ ಬಿಪಿಯ ಧಾಳಿಗೊಳಗಾಗಿದ್ದ ಅಪ್ಪನಿಗೆ ಉಪ್ಪುನೀರು ಕುಡಿಸುವಂತೆ ಅಮ್ಮನಿಗೆ ಹೇಳಿಬಿಟ್ಟೆ! ಜೀವನದ ಕಟ್ಟಕಡೆಯ ಕ್ಷಣದ ತನಕ ಪಶ್ಚಾತ್ತಾಪ ಪಡುತ್ತಲೇ ಇರಬೇಕಾದ ಕೆಲಸವೊಂದನ್ನು ನಾವೀಗ ಮಾಡುತ್ತಿದ್ದೇವೆಂಬ ಅರಿವು ನನಗಾಗಲೀ ಅಮ್ಮನಿಗಾಗಲೀ ಇರಲೇ ಇಲ್ಲ. ಒಂದು ಲೋಟ ನೀರಿಗೆ ಇಷ್ಟೇ ಇಷ್ಟು ಉಪ್ಪು ಬೆರೆಸಿದ ಅಮ್ಮ ಅದನ್ನು ಅಪ್ಪನಿಗೆ ಕುಡಿಸಿಯೇಬಿಟ್ಟಳು. ಅದನ್ನು ತನ್ನ ಕೈಯಲ್ಲೇ ಹಿಡಿದು ಕುಡಿದ ಅಪ್ಪ ಮೊದಲಿಗೆ ಕೊಂಚ ಸಮಾಧಾನಗೊಂಡವನಂತೆ ಕಂಡುಬಂದ. ಹೀಗೆ ಪ್ರಮಾದಕರ ಪ್ರಥಮಚಿಕಿತ್ಸೆಯನ್ನು ನೀಡಿದ ನಾವು ಅಪ್ಪನಿಗೆ 'ಏನೂ ಆಗಲ್ಲ, ಮಲಗಿ' ಎಂದು ಸಮಾಧಾನ ಹೇಳಿ ನಮ್ನಮ್ಮ ಹಾಸಿಗೆಗಳಿಗೆ ಮರಳಿಬಿಟ್ಟೆವು.

ಕೆಲವೊಂದು ಘಟನೆಗಳನ್ನು ನಾವು ನಮ್ಮ ಪಶ್ಚಾತ್ತಾಪವನ್ನೋ ಅಥವಾ ಮತ್ಯಾವುದೋ ಭಾವವನ್ನು ತೋಡಿಕೊಳ್ಳಬೇಕೆನ್ನುವುದಕ್ಕಿಂತ ಹೆಚ್ಚಾಗಿ ನಾವು ಮಾಡಿದ ತಪ್ಪನ್ನು ಇನ್ಬೊಬ್ಬರು ಮಾಡದಂತೆ ತಡೆಯಬೇಕೆಂಬ ಕಾರಣಕ್ಕಾಗಿಯಾದರೂ ನಾಲ್ಕು ಜನರ ಜೊತೆ ಹೇಳಿಕೊಳ್ಳಲೇಬೇಕು. ಅರ್ಧ ಜ್ಞಾನ ಅನರ್ಥಕ್ಕೆ ಮೂಲ. ಆದರಿಲ್ಲಿ ನನ್ನ ಅವಿವೇಕದ ನಿರ್ಧಾರ ಬಹುಷಃ ದುರ್ಘಟನೆಗೇ ಕಾರಣವಾಗಿಹೋಗಿತ್ತು. ಅಪ್ಪನ ತಲೆಯೊಳಗೆ ನಾವೆಂದೂ ಕಲ್ಪಿಸಿಕೊಳ್ಳದ ಅನೂಹ್ಯ ಪ್ರಕ್ರಿಯೆಯೊಂದು ಘಟಿಸತೊಡಗಿತ್ತು. ಅದರ ಮೊದಲ ಕಂತಾಗಿ ಯಾವುದೋ ನರವೊಂದರಿಂದ ಇನ್ನೇನು ಕೋಡಿಬೀಳಲಿದ್ದ ಅಥವಾ ಈಗಾಗಲೇ ಕೋಡಿಬಿದ್ದಿದ್ದ ಅತ್ಯಧಿಕ ರಕ್ತದೊತ್ತಡದ ಪ್ರವಾಹಕ್ಕೆ ನಾವು ಕೊಟ್ಟ ಉಪ್ಪು ನೀರು ಅದಿನ್ಯಾವ ಪರಿಯ ಬಲ ನೀಡಿತೋ ಏನೋ? ಆದದ್ದಾದರೂ ಏನೆಂದು ಚಿಂತಿಸುತ್ತಾ ನಾವು ಬಾರದ ನಿದ್ರೆಯ ನಿರೀಕ್ಷೆಯಲ್ಲಿ ಹಾಸಿಗೆಗೊರಗಿದ ಕೆಲ ನಿಮಿಷಗಳಲ್ಲೇ ಮತ್ತೆ ಅಪ್ಪನಲ್ಲಿ ತಳಮಳ ಆರಂಭವಾಯಿತು. ತಡಬಡಾಯಿಸಿ ಎದ್ದು ನೋಡಿದರೆ ಈ ಬಾರಿ ಅಪ್ಪ ತನ್ನ ಎಡಗೈಯಿಂದ ಬಲಗೈಯೆಡೆಗೆ ತೋರಿಸುತ್ತಾ ಸನ್ನೆಮಾಡಿದ. ಸೂಕ್ಷ್ಮವಾಗಿ ಗಮನಿಸಿದರೆ ಅವನ ಬಲಗೈ - ಬಲಗಾಲುಗಳೆರೆಡೂ ತಮ್ಮ ಚಲನೆಯನ್ನು ನಿಲ್ಲಿಸಿಬಿಟ್ಟಿದ್ದವು. ಆಗಲೇ ಆ ಪದ ಮೊಟ್ಟಮೊದಲಬಾರಿಗೆ ನಮ್ಮ ಅರಿವಿನೊಳಗೆ ಮಿಂಚಿದ್ದು:

ಸ್ಟ್ರೋಕ್! ಈ ಅರ್ಧರಾತ್ರೆಯಲ್ಲಿ ಅಪ್ಪನಿಗೆ ಬಂದೊದಗಿರುವ ಅನಾಹುತದ ಹೆಸರು ಸ್ಟ್ರೋಕ್ ಎಂಬ ಸಣ್ಣ ತಿಳಿವು ಮೂಡುತ್ತಿದ್ದಂತೆಯೇ ನಾವು ಪಕ್ಕದಮನೆಯಲ್ಲಿದ್ದ ಅಣ್ಣನಿಗೆ ಕರೆಮಾಡಿ, ಅವರ ಸಲಹೆಯಂತೆ ನಮ್ಮೂರಿನ ಡಾಕ್ಟರನ್ನು ಕರೆಸಿದೆವು. ಅದಕ್ಕೂ ಮುನ್ನ ನಾವು ನಮ್ಮ ಸ್ವಯಂಕೃತ ಅಪರಾಧ ಸರಣಿಯ ಎರೆಡನೇ ತಪ್ಪನ್ನು ಮಾಡಿಬಿಟ್ಟೆವು‌. ಸ್ಟ್ರೋಕ್ ಆದಾಗ ಕುಡಿಸಬೇಕಾದುದೆಂದು ನಾವು ನಂಬಿದ್ದ ಕೊಬ್ಬರಿ ಎಣ್ಣೆಯನ್ನು ಅಪ್ಪನಿಗೆ ಕುಡಿಸಿಬಿಟ್ಟೆವು.

ಇದಾಗಿ ಇಪ್ಪತ್ತು ನಿಮಿಷಗಳ ನಂತರ ಡಾಕ್ಟರು ಬರುವುದರೊಳಗೆ ಮತ್ತೊಂದು ಅವಗಢ ಸಂಭವಿಸಿಬಿಟ್ಟಿತು. ಅಪ್ಪನಿಗೆ ವಾಂತಿಯಾಯಿತು‌. ಇಂಥಹಾ ಸಂದರ್ಭಗಳಲ್ಲಿ ವಾಂತಿಯಾಗುವುದು ಮೆದುಳಿಗೇನೋ ತೊಂದರೆಯಾಗಿದೆಯೆಂಬುದರ ಸ್ಪಷ್ಟ ಸಂದೇಶ. ಮೆದುಳಿನಲ್ಲಿ ರಕ್ತಸ್ರಾವವಾದರೆ ಅಥವಾ ಅಪಘಾತದಲ್ಲಿ ತಲೆಯೊಳಗೇನಾದರೂ ಏಟಾದಾಗ ಹೀಗೆ ವಾಂತಿಯಾಗುವ ಮೂಲಕ ಮೆದುಳು ತನಗಾದ ತೊಂದರೆಯನ್ನು ಪ್ರಕಟಿಸುತ್ತದೆ‌. ಆದರೆ ಈ ವಿಷಯದ ತಿಳುವಳಿಕೆಯಿರದ ನಾವು ಕುಡಿಸಿದ ಉಪ್ಪುನೀರು, ಕೊಬ್ಬರಿ ಎಣ್ಣೆಗಳಿಂದಲೇ ಹೀಗಾಗಿದೆಯೆಂದುಕೊಳ್ಳುತ್ತಾ ವೈದ್ಯರ ಹಾದಿ ಕಾಯತೊಡಗಿದೆವು.

ಸಣ್ಣ ಪ್ರಥಮ ಚಿಕಿತ್ಸಾ ಕಿಟ್ ನೊಂದಿಗೆ ಬಂದ ಡಾಕ್ಟರು ನಮ್ಮನೆಯನ್ನು ಪ್ರವೇಶಿಸುವ ಹೊತ್ತಿಗೆ ಸಮಯ ಬೆಳಗಿನ ಜಾವದ ಒಂದೂ ಮೊವ್ವತ್ತು/ಎರೆಡು ಗಂಟೆ ದಾಟಿತ್ತು. ಕೆಲ ಮಾತ್ರೆ ಹಾಗೂ ಇಂಜಕ್ಷನ್ ಗಳನ್ನು ನೀಡಿದ ಅವರು ಸ್ಟ್ರೋಕ್ ಅಥವಾ ತಲೆಯೊಳಗೆ ಬ್ಲಡ್ ಕ್ಲಾಟ್ ಆಗಿರುವ ಅನುಮಾನವನ್ನು ವ್ಯಕ್ತಪಡಿಸಿ ಬೆಳಗಿನ ಜಾವ ಎಂಟರ ಹೊತ್ತಿಗೆ ತೀರ್ಥಹಳ್ಳಿಗೆ ಕರೆದೊಯ್ಯುವಂತೆ ಹೇಳಿದರು. ಅವರನ್ನು ಗೇಟಿನ ತನಕ ಬೀಳ್ಕೊಟ್ಟ ನಾವು ಅಪ್ಪನಿಗೆ ದಿವೀನಾಗಿ ಹೊದಿಕೆ ಹೊದ್ದಿಸಿ ಬೆಳಗಿನ ಜಾವದ ತನಕ ಅರಾಮಾಗಿ ನಿದ್ರಿಸುವಂತೆ ಸಮಾಧಾನ ಹೇಳಿ ನಮ್ನಮ್ಮ ಹಾಸಿಗೆಗಳಿಗೆ ಮರಳಿದೆವು.

ನಮ್ಮ ಸ್ವಯಂಕೃತ ಅಪರಾಧ ಸರಣಿಯ ಮೂರನೇ ಹಾಗೂ ಅತಿದೊಡ್ಡ ತಪ್ಪು ಹಾಗೆ ಜರುಗಿಹೋಗಿತ್ತು.

ವಾಸ್ತವವೇನೆಂದರೆ ಬ್ಲಡ್ ಕ್ಲಾಟ್ ಎಂದರೇನು ಹಾಗೂ ಅದು ಎಂಥಹಾ ಅನಾಹುತಕಾರೀ ಬೆಳವಣಿಗೆ ಎಂಬುದರ ಚಿಕ್ಕ ಅರಿವೂ ಇಲ್ಲದೆ 'ಅಂಥಾದ್ದೇನೂ ಆಗಿಲ್ಲ' ಎಂದು ಭ್ರಮಿಸಿದ ನಾವುಗಳು ಹೊದಿಕೆಯೆಳೆದು ಮಲಗಿದ ಆ ಪ್ರಮಾದಕಾರೀ ಹೊತ್ತಿಗೆ ಸರಿಯಾಗಿ ಅಪ್ಪನ ಎಡಕಣತಲೆಯ ನರವೊಂದರೊಳಗೆ ರಕ್ತ ಹೆಪ್ಪುಗಟ್ಟಲಾರಂಭಿಸಿತ್ತು. ಕರಾರುವಕ್ಕಾಗಿ ಆ ಹೊತ್ತಿಗೆ ರಕ್ತ ಹೆಪ್ಪುಗಟ್ಟಲಾರಂಭಿಸಿತ್ತೋ ಅಥವಾ ನಡುರಾತ್ರೆಯ ಯಾವುದೋ ಹೊತ್ತಿನಲ್ಲೇ ರಕ್ತ ಹೆಪ್ಪುಗಟ್ಟಿ ಈ ಹೊತ್ತಿಗಾಗಲೇ ರಕ್ತಸ್ರಾವವೇ ಆರಂಭವಾಗಿತ್ತೋ ಎನ್ನುವುದು ಇಂದಿಗೂ ಸ್ಪಷ್ಟವಾಗಿಲ್ಲ. ಎರೆಡೆರೆಡು ಬಾರಿ ಆದ ಹಳದಿ ವಾಂತಿಯ ಬಗ್ಗೆ ಸಣ್ಣ ಜ್ಞಾನವಿದ್ದರೂ ನಮಗದು ಗೊತ್ತಾಗಿಬಿಡುತ್ತಿತ್ತು. ಆದರೆ ದುರಂತದ ಬಹುಮುಖ್ಯ ಹಂತವಾದ, ಚಿಕಿತ್ಸೆ ದೊರಕಲೇಬೇಕಾದ ಅತ್ಯಮೂಲ್ಯ ವೇಳೆಯೊಂದು ಶ್ರುಶ್ರೂಷೆಯಿಲ್ಲದೆ ಹಾಗೆ ಕಳೆದುಹೋಗಿತ್ತು. ಮಲಗಿದ ಕೆಲ ನಿಮಿಷಗಳಿಗೇ ಅಪ್ಪನಲ್ಲಿ ವಾಂತಿ ಹಾಗೂ ವಿಸರ್ಜನೆಗಳು ಮತ್ತೆ ಆರಂಭವಾದವು. ಈ ಬಾರಿ ಮೂವರ ಸಹಾಯದಿಂದ ಎದ್ದು ಬಚ್ಚಲಿಗೆ ನಡೆಯುವಷ್ಟು ತ್ರಾಣ ಕೂಡಾ ಅಪ್ಪನಲ್ಲುಳಿದಿರಲಿಲ್ಲ. ಗಡಿಯಾರ ಒಂದೊಂದು ನಿಮಿಷ ಮುಂದಕ್ಕೆ ಹೋದಂತೆಯೂ ಅಪ್ಪನ ಪರಿಸ್ಥಿತಿ ಗಂಭೀರವಾಗತೊಡಗಿತು. ಕೈಕಾಲು ಒತ್ತಿ ತಲೆಗೆ ವಿಕ್ಸ್ ಹಚ್ಚಿ ನೀವಿದ್ದರಿಂದ ಹಿಡಿದು ಡಾಕ್ಟರು ನೀಡಿದ ಇಂಜಕ್ಷನ್ ನ ತನಕ ಯಾವುದೂ ಅಪ್ಪನ ಸ್ಥಿತಿಯನ್ನು ಸುಧಾರಿಸುವಷ್ಟು ಸಮರ್ಥವಾಗಿಲ್ಲವೆಂಬುದು ನಮ್ಮ ಅರಿವಿಗೆ ಬರುತ್ತಾ ಹೋಯಿತು. ಬೆಳಗಾಗುವುದನ್ನು ಕಾಯುತ್ತಾ ಕೂರುವುದೆಂದರೆ ಅನಾಹುತವನ್ನು ಮನೆಬಾಗಿಲಿಗೆ ಬರಗೊಟ್ಟಂತೆಂಬ ಯೋಚನೆ ಮೂಡತೊಡಗಿತು. ಇಷ್ಟು ಹೊತ್ತು ಘಟಿಸಿದ್ದ ಪ್ರಮಾದಗಳೆಲ್ಲದರ ನಡುವೆ ಮೊಟ್ಟಮೊದಲ ಸರಿಯಾದ ನಿರ್ಧಾರವೊಂದನ್ನು ತೆಗೆದುಕೊಂಡೆವು. ಅಪ್ಪನನ್ನು ನೇರ ತೀರ್ಥಹಳ್ಳಿ ಪಟ್ಟಣದ ಖಾಸಗೀ ಆಸ್ಪತ್ರೆಗೆ ಕರೆದೊಯ್ಯುವುದೆಂದು ನಿರ್ಧರಿಸಿ ಗೆಳೆಯನ ಓಮಿನಿಯನ್ನು ಕರೆಸಿದೆವು. ದಾರಿಯಲ್ಲಿ ಅಪ್ಪನಿಗೆ ಎರೆಡು ಬಾರಿ ವಾಂತಿಯಾಯಿತು. ನಿತ್ರಾಣನಾಗಿ ಅಮ್ಮನ ಹೆಗಲಿಗೊರಗಿದ್ದವನು ಓಮಿನಿ ನಮ್ಮೂರಿನ ಮಣ್ಣುದಾರಿಯ ದಾಟುವ ವೇಳೆಗೆ ಅದೇಕೋ ಕತ್ತು ಹೊರಳಿಸಿ ನಮ್ಮೂರಿನತ್ತ ಒಮ್ಮೆ ಕಡೆಯಬಾರಿಗೆಂಬಂತೆ ನೋಡಿಬಿಟ್ಟ. ನನ್ನ ಹೃದಯ ಜೋರಾಗಿ ಹೊಡೆದುಕೊಂಡಿದ್ದೇ ಆಗ. ನಮ್ಮೆಲ್ಲರ ಇಷ್ಟು ದಿನದ ಇಡೀ ಬದುಕಿನ ಚಿತ್ರಣವನ್ನೇ ಬದಲಿಸಿಹಾಕುವಂಥಾದ್ದೇನೋ ಘಟಿಸಿದೆಯೆಂದು ಅದೇಕೋ ಬಲವಾಗಿ ಅನ್ನಿಸತೊಡಗಿತು.

ನಾನಿಲ್ಲಿ ಪ್ರತಿಯೊಂದು ಸಮಯವನ್ನೂ ಕರಾರುವಕ್ಕಾಗಿ ಹೇಳಲು ಪ್ರಯತ್ನಪಟ್ಟಿದ್ದೇನೆ. ಏಕೆಂದರೆ ಬ್ರೈನ್ ಹ್ಯಾಮರೇಜ್ ನಂತಹಾ ಮಾರಣಾಂತಿಕ ಖಾಯಿಲೆ ಘಟಿಸಿದಾಗ ಒಂದೊಂದು ನಿಮಿಷವೂ ಅಮೂಲ್ಯವಾದದ್ದು. ಅಜ್ಞಾನದಿಂದ, ತಿಳುವಳಿಕೆಯ ಕೊರತೆಯಿಂದ ಹಾಗೂ ಮತ್ಯಾವುದೋ ಗಡಿಬಿಡಿಯಿಂದ ನಾವು ವ್ಯಯಮಾಡುತ್ತಾ ಹೋಗುವ ಒಂದೊಂದು ನಿಮಿಷದಲ್ಲೂ ಮೆದುಳಿನ ಒಂದೊಂದೇ ಜೀವಕೋಶವು ನಿಶ್ಕ್ರಿಯವಾಗುತ್ತಿರುತ್ತದೆ. ತೀರ್ಥಹಳ್ಳಿಯ ಖಾಸಗೀ ಆಸ್ಪತ್ರೆಯನ್ನು ತಲುಪುವ ವೇಳೆಗೆ ಸಮಯ ಬೆಳಗಿನ ಆರೂಮೊವ್ವತ್ತರ ಸಮೀಪ ಬಂದಿತ್ತು. ಅಪ್ಪನನ್ನು ಪ್ರಾಥಮಿಕ ಪರೀಕ್ಷೆಗೊಳಪಡಿಸಿದ ಡಾಕ್ಟರ್ ಹೈ ಬಿಪಿಯ ಕಾರಣದಿಂದಾಗಿ ಎಡಭಾಗದ ಮಿದುಳಿನಲ್ಲಿ ಬ್ಲಡ್ ಕ್ಲಾಟ್ ಆಗಿರುವುದರಿಂದ ಮಾತು ಹಾಗೂ ಬಲಭಾಗದ ಅಂಗಗಳು ಕಾರ್ಯ ನಿಲ್ಲಿಸಿವೆಯೆಂದೂ, ಈಗ ಅವರು ಕೋಮಾಗೆ ಹೋಗದಂತೆ ತಾತ್ಕಾಲಿಕ ಚಿಕಿತ್ಸೆ ನೀಡುವುದಾಗಿಯೂ, ನಾವು ಒಂಭತ್ತೂ ಮೊವ್ವತ್ತರ ಹೊತ್ತಿಗೆ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಅಪಾಂಯ್ಟ್ ಮೆಂಟ್ ತೆಗೆದುಕೊಂಡು ಅಪ್ಪನ ತಲೆಯ ಸಿಟಿ ಸ್ಕ್ಯಾನ್ ಮಾಡಿಸಿ ರಿಪೋರ್ಟ್ ತರಬೇಕೆಂದೂ, ನಂತರ ಕ್ಲಾಟ್ ನ ಪ್ರಮಾಣವನ್ನು ನೋಡಿ ಮುಖ್ಯ ಚಿಕಿತ್ಸೆಯನ್ನು ಆರಂಭಿಸುವುದಾಗಿಯೂ ಹೇಳಿದರು. ಮೇಲಿಂದ ಮೇಲೆ ಕರೆಮಾಡುತ್ತಿದ್ದ ಬಂಧು-ಮಿತ್ರರಿಗೆ ನಡೆದದ್ದೆಲ್ಲವನ್ನೂ ವಿವರಿಸುತ್ತಾ ಅಪ್ಪನನ್ನು ಐಸಿಯುಗೆ ಒಯ್ಯುತ್ತಿದ್ದ ಸ್ಟ್ರೆಚ್ಚರ್ ನ ಹಿಂದೆ ನಡೆಯುತ್ತಿದ್ದ ನಾನೇಕೋ ಒಮ್ಮೆ ತಿರುಗಿ ನೋಡಿದೆ. ಟ್ರಾಲಿ ಸಾಗಿಸುವ ಖಾಲಿ ದಾರಿಯಲ್ಲಿ ಅಮ್ಮ ಭೀತ ಗುಬ್ಬಿಮರಿಯಂತೆ ಒಬ್ಬಳೇ ಅಳುತ್ತಾ ನಡೆದುಬರುತ್ತಿದ್ದಳು. ಬಳಿಗೆ ಹೋದ ನನ್ನ ಬಳಿ ಕೋಮಾ ಗೀಮಾ ಅಂತೆಲ್ಲಾ ಯಾಕೆ ಹೇಳ್ತಿದಾರೆ ಎಂದು ಕೇಳಿದಳು‌. ಅದು ಹಾಗಲ್ಲ, ಪ್ರಥಮ ಚಿಕಿತ್ಸೆ ಕೊಡದೇ ಹೋದರೆ ಕೋಮಾಗೆ ಹೋಗುತ್ತಾರೆ ಎಂದು ಅಮ್ಮನನ್ನು ಸಮಾಧಾನ ಮಾಡಿದೆ.

ಹೀಗೆ ನಾವು ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಅಪಾಂಯ್ಟ್ ಮೆಂಟ್ ಪಡೆದು, ಅವರು ಹೇಳಿದ ಸಮಯಕ್ಕೆ ಅಂದರೆ ಹನ್ನೊಂದೂ ಮೊವ್ವತ್ತಕ್ಕೆ ಅಪ್ಪನನ್ನು ಒಯ್ದು, ಕ್ಯೂನಲ್ಲಿ ಕಾದು ಸ್ಕ್ಯಾನಿಂಗ್ ಮಾಡಿಸಿ, ಕೊನೆಯದಾಗಿ ರಿಪೋರ್ಟ್ ನಮ್ಮ ಕೈಗೆ ಸಿಗುವಾಗ ಮಧ್ಯಾಹ್ನದ ಎರೆಡೂವರೆ ಗಂಟೆ. ಇದೂ ಸಾಲದೆಂಬಂತೆ ಮಧ್ಯಾಹ್ನ ಮನೆಗೆ ಹೋಗಿದ್ದ ಪುಣ್ಯಾಧಿಪುಣ್ಯಪುರುಷ ವೈದ್ಯ ಊಟ ಮುಗಿಸಿಬಂದು ಸಿಟಿ ಸ್ಕ್ಯಾನಿನ ರಿಪೋರ್ಟ್ ಕೈಗೆತ್ತಿಕೊಂಡ ವೇಳೆಗೆ ಸಮಯ ಬರೋಬ್ಬರಿ ಸಂಜೆಯ ಐದೂಮೊವ್ವತ್ತು! ನಮ್ಮ ಸ್ವಯಂಕೃತ ಅಪರಾಧಗಳ ಪಟ್ಟಿಯ ಕಟ್ಟ ಕಡೆಯ ಹಾಗೂ ಅತ್ಯಂತ ಭೀಕರ ತಪ್ಪಾಗಿತ್ತದು‌. ಹ್ಯಾಮರೇಜ್ ಸಂಭವಿಸಿದ ಕನಿಷ್ಠ ಹನ್ನೆರೆಡರಿಂದ ಹದಿನೇಳು ಗಂಟೆಗಳಾಗಲೇ ಸರಿಯಾದ ಚಿಕಿತ್ಸೆಯಿಲ್ಲದೇ ವ್ಯಯವಾಗಿಹೋಗಿದ್ದವು.

ಸ್ಕ್ಯಾನಿಂಗ್ ರಿಪೋರ್ಟನ್ನು ಈ ತುದಿಯಿಂದ ಆ ತುದಿಯ ತನಕ ಪರೀಕ್ಷಿಸಿದ ಡಾಕ್ಟರು ಇದಕ್ಕೆ ಸಣ್ಣದೊಂದು ಆಪರೇಶನ್ ಮಾಡಬೇಕಾಗಿದ್ದು ಶಿವಮೊಗ್ಗ ಅಥವಾ ಮಣಿಪಾಲಕ್ಕೆ ಕರೆದೊಯ್ಯಿರಿ ಎಂದರು‌. "ಸಾಮಾನ್ಯವಾಗಿ ನಾವು ಇಂಥಹಾ ಕೇಸ್ ಗಳಲ್ಲಿ ರೋಗಿಯನ್ನು ಇಪ್ಪತ್ನಾಲ್ಕು ಗಂಟೆ ಪರೀಕ್ಷೆಯಲ್ಲಿಡುತ್ತೇವೆ. ಅಷ್ಟರಲ್ಲಿ ಯಾವುದೇ ಚೇತರಿಕೆ ಕಾಣದಿದ್ದರೆ ನಂತರ ಶಸ್ತ್ರಚಿಕಿತ್ಸೆಗೆ ಕಳಿಸುತ್ತೇವೆ. ನೀವು ನಾಳೆ ಬೆಳಗಿನ ತನಕ ನಮ್ಮ ಆಸ್ಪತ್ರೆಯಲ್ಲೇ ಇರಿ. ನಂತರ ಶಿವಮೊಗ್ಗ ಅಥವಾ ಮಣಿಪಾಲಕ್ಕೆ ಕರೆದೊಯ್ಯಿರಿ" ಎಂದು ಸೂಚಿಸಿದರು‌. ಅಲ್ಲದೇ ಬೆಳಗ್ಗೆಗಿಂತ ಮಧ್ಯಾಹ್ನದ ವೇಳೆಗೆ ಅಪ್ಪನೂ ಸಹಾ ಕೊಂಚ ಚೇತರಿಸಿಕೊಂಡಿದ್ದ. ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನದೂಟಗಳನ್ನು ಸೇವಿಸಿ ಸಣ್ಣ ನಿದ್ರೆಯನ್ನೂ ಮಾಡಿದ್ದ. ಇದನ್ನೇ 'ಚೇತರಿಕೆ' ಎಂದು ನಾವೆಲ್ಲಾ ಗುರುತಿಸಿದ್ದೆವು. ಸುತ್ತಮುತ್ತಲಿದ್ದವರಿಂದಲೂ ಡಾಕ್ಟರ ಮಾತಿಗೆ ಅನುಮೋದನೆ ದೊರಕಿ ನಾನಿಂದು ಅಪ್ಪನನ್ನುಳಿಸಿಕೊಂಡು ಇಲ್ಲಿಯೇ ಉಳಿಯುವುದು ಸರಿಯೆಂದೇ ಬಹುತೇಕರು ಸೂಚಿಸಿದರು.

ಬದುಕಿನ ಕೆಲವೊಂದು ಘಳಿಗೆಗಳಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮಗೇ ಗೊತ್ತಿಲ್ಲದೆ ನಡೆಯಬೇಕಿದ್ದ ಮಹಾನ್ ದುರಂತವೊಂದನ್ನು ಬದಲಿಸಿಬಿಡುತ್ತವೆ. ಡಾಕ್ಟರೂ ಸೇರಿದಂತೆ ಎಲ್ಲರೂ ಹೇಳಿದ 'ನಾಳೆಯ ತನಕ ಇಲ್ಲೇ ಇರಿಸಿಕೊಳ್ಳಿ' ಎಂಬ ಮಾತನ್ನು ನಾನು ಮೀರಿದ್ದು ಅಂಥದೇ ಒಂದು ಘಳಿಗೆ. ಡಾಕ್ಟರೊಂದಿಗೆ ಮಾತುಕತೆ ಮುಗಿಸಿ ವಾರ್ಡಿನೊಳಗಡಿಯಿಟ್ಟ ನನಗೆ ಭೀಕರ ಸ್ಥಿತಿಯಲ್ಲಿ ಕೆಮ್ಮುತ್ತಿದ್ದ ಅಪ್ಪ ಕಣ್ಣಿಗೆ ಬಿದ್ದ. ಪ್ರತೀಬಾರಿ ಕೆಮ್ಮುವಾಗಲೂ ಅವನ ಕಣ್ಣುಗಳು ಮೇಲೆ ಸಿಕ್ಕಿಕೊಳ್ಳುತ್ತಿದ್ದವು. ಅವನಿಗೀಗ ಎದ್ದು ಕೂರಲೂ ಆಗುತ್ತಿರಲಿಲ್ಲ‌. ಬಲಗೈ, ಬಲಗಾಲು ಹಾಗು ಮಾತುಗಳಾಗಲೇ ಈ ಹಿಂದೆ ಚಲನೆಯಿದ್ದದ್ದೇ ಸುಳ್ಳೆಂಬಂತೆ ಸಂಪೂರ್ಣ ಸ್ತಬ್ಧವಾಗಿಬಿಟ್ಟಿದ್ದವು. ಎಲ್ಲದಕ್ಕಿಂತ ಹೆಚ್ಚಾಗಿ ಮಹಾನ್ ಯಾತನೆಯೊಂದು ಅಪ್ಪನ ಮುಖದಲ್ಲಿ ಮನೆಮಾಡಿಕೊಂಡುಬಿಟ್ಟಿತ್ತು. 'ಅಪ್ಪ ಸುಧಾರಿಸಿಕೊಂಡಿದ್ದಾನೆ' ಎಂಬ ನನ್ನ ಮೂಢನಂಬಿಕೆ ಕಳಚಿ ಬಿದ್ದಿದ್ದೇ ಆಗ. ಅಲ್ಲದೆ ಈಗ ಬರಲಿರುವುದು ರಾತ್ರೆ‌. ರಾತ್ರೆಯೆಂಬುದು ಸಾಮಾನ್ಯವಾಗಿ ಎಲ್ಲ ಖಾಯಿಲೆ, ಯಾತನೆಗಳೂ ಉಲ್ಬಣಗೊಳ್ಳುವ ಸಮಯ. ಬೆಳಗ್ಗೆಯಾದರೂ ಬೇರೆಡೆಗೆ ಒಯ್ಯುವುದೇ ಆದರೆ ಈ ಒಂದಿಡೀ ರಾತ್ರೆ ಅಪ್ಪನನ್ನು ಈ ಯಾತನೆಯಾಳದಲ್ಲೇ ಉಳಿಸಬೇಕಾದರೂ ಏಕೆ? ಊರಿನ ಹಿತೈಶಿಯೊಬ್ಬರ ಮಾತಿನಲ್ಲಿ ಅಸ್ಪಷ್ಟವಾಗಿ ಸ್ಫುರಿಸಿದ ಆ ಅರ್ಥಕ್ಕೂ ಅಪ್ಪನ ಈಗಿನ ಸ್ಥಿತಿಗೂ ತಾಳೆಯಾಗುತ್ತಿದೆಯೆಂದೆನಿಸಿದ ಮರುಕ್ಷಣವೇ ಅಪ್ಪನನ್ನು ಶಿವಮೊಗ್ಗಕ್ಕೆ ಕರೆದೊಯ್ಯುವುದೆಂದು ನಿರ್ಧರಿಸಿಬಿಟ್ಟೆ. ಮಣಿಪಾಲ ನಮ್ಮ ಮೊದಲ ಆದ್ಯತೆಯಾಗಿತ್ತಾದರೂ ಕೊರೋನಾದಿಂದಾಗಿ ಜಿಲ್ಲೆ-ಜಿಲ್ಲೆಗಳ ನಡುವಿನ ಓಡಾಟದ ಮೇಲಿದ್ದ ನಿರ್ಬಂಧ ನಮ್ಮನ್ನು ಶಿವಮೊಗ್ಗದತ್ತ ಅಟ್ಟಿತು. ಶಿವಮೊಗ್ಗದಲ್ಲಿ ಯಾವ ಆಸ್ಪತ್ರೆ? ಅಲ್ಲಿ ಬಿಪಿಎಲ್ ಕಾರ್ಡ್ ಅಪ್ಲೈ ಆಗುತ್ತದಾ? ತುಂಬಾ ದುಬಾರಿಯಾದೀತು ಎಂಬೆಲ್ಲ ಸಣ್ಣ ಚರ್ಚೆ ನಡೆಯಿತಾದರೂ ಆ ಕ್ಷಣಕ್ಕೆ ಬೊಗಸೆಗೆ ಬಂದು ಕುಳಿತಂತಿದ್ದ ಅಪ್ಪನ ಆರೋಗ್ಯದೆದುರು ಮತ್ಯಾವ ಲೆಕ್ಕಾಚಾರಕ್ಕೂ ಬೆಲೆ ಕೊಡುವ ಸ್ಥಿತಿಯಲ್ಲಿ ನಾವಿರಲಿಲ್ಲ. ಗಡಿಬಿಡಿಯಲ್ಲಿ ಡಿಶ್ಚಾರ್ಜ್ ಮಾಡಿಸಿಕೊಂಡು ಅಪ್ಪ, ನಾನು ಹಾಗೂ ಅಮ್ಮನನ್ನು ಹೊತ್ತ ಆಂಬುಲೆನ್ಸ್ ಶಿವಮೊಗ್ಗದ ದಾರಿಯಲ್ಲಿ ಓಡಲಾರಂಭಿಸಿದಾಗ ಸಮಯ ರಾತ್ರೆಯ ಎಂಟು ಗಂಟೆ‌.

ಬದುಕಿಗೆ ಧಿಡೀರನೆ ಬಂದೆರೆರಗಿರುವ ಇರುಳಿನಷ್ಟೇ ಗಾಢವಾಗಿ ರಸ್ತೆಯ ಮೇಲೂ ಮುಸುಕಿದ್ದ ಕತ್ತಲ ದಾರಿಗೆ ಬೆಳಕು ಬೀರುತ್ತಾ ನಮ್ಮ ಆ್ಯಂಬುಲೆನ್ಸ್ ಶರವೇಗದಲ್ಲಿ ಧಾವಿಸುತ್ತಿತ್ತು. ಇದಕ್ಕೂ ಮೊದಲು ಅಪ್ಪ-ಅಮ್ಮನ ಜೊತೆಯಾಗಿ ನಾನು ಶಿವಮೊಗ್ಗಕ್ಕೆ ಹೋಗಿದ್ದು ಯಾವಾಗ? ಕೆಲವೇ ತಿಂಗಳ ಕೆಳಗೆ. ನನಗೆ ಹುಡುಗಿ ನೋಡಲಿಕ್ಕೆ! ಅಂದು ಅಪ್ಪ-ಅಮ್ಮ ಇಬ್ಬರೂ ಬಹಳ ಸಂಭ್ರಮದಲ್ಲಿ ನನ್ನ ಅಕ್ಕ-ಪಕ್ಕ ಕುಳಿತಿದ್ದರು. ಅಪ್ಪ ತಾನು ಹುಡುಗಿ ನೋಡಲು ಹೋದ ಪ್ರಸಂಗಗಳನ್ನೂ, ಕೊನೆಗೆ ಅಮ್ಮನನ್ನು ಒಪ್ಪಿದ ಕಥೆಯನ್ನೂ ಖುಷಿಖುಷಿಯಲ್ಲಿ ಹೇಳಿಕೊಂಡಿದ್ದ. ಬೆಪ್ಪನಂತೆ ಕುಳಿತಿದ್ದ ನನ್ನನ್ನು ನಗಿಸಲು ಯತ್ನಿಸಿದ್ದ. ಇಂದೂ ಸಹಾ ಅದೇ ದಾರಿ, ಅದೇ ಅಪ್ಪ, ಅಮ್ಮ ಹಾಗು ನಾನು. ಆದರೆ ಅಂದು ನಮ್ಮ ನಡುವೆ ಮಾತಾಗಿ, ಖುಷಿಯಾಗಿ, ಹಾಸ್ಯವಾಗಿ ಹಬ್ಬಿಕೊಂಡಿದ್ದ ಆ ಸಂತಸ ಇಂದೆಲ್ಲಿ ಹೋಯಿತು? ಸನ್ನಿವೇಶವೇಕೆ ಇಷ್ಟು ಬೇಗ ಬದಲಾಗಿಬಿಟ್ಟಿತು?

ಹಿಂದೆ ಅಪ್ಪ ಉತ್ತರಗಳಾಚೆಗಿನ ಪ್ರೆಶ್ನೆಯಾಗಿ ಅತ್ತ ಮಂಪರೂ ಅಲ್ಲದ, ಇತ್ತ ಎಚ್ಚರವೂ ಅಲ್ಲದ ಸ್ಥಿತಿಯಲ್ಲಿ ತಲೆಯನ್ನು ನೀವಿಕೊಳ್ಳುತ್ತಾ, ಮೌನವಾಗಿ ನರಳುತ್ತಾ ಮಲಗಿದ್ದ.

ಭಾನುವಾರ, ಫೆಬ್ರವರಿ 9, 2020

ಆ ಕನ್ನಡ 'ಇ' ಕನ್ನಡ..




ಆ ಕನ್ನಡ 'ಇ' ಕನ್ನಡ

"ನೀವು ಏನೇ ಹೇಳಿ, ಪುಸ್ತಕದಲ್ಲಿ ಓದುವ ಖುಷಿ ಈ ಮೊಬೈಲ್ನಲ್ಲಿ, ಕಂಪ್ಯೂಟರ್ನಲ್ಲಿ ಬರೋದಿಲ್ಲ"


ಈ ಮಾತನ್ನು ಸರ್ವೇಸಾಮಾನ್ಯವಾಗಿ ಎಲ್ಲರೂ ಆಡಿಯೇ ಆಡುತ್ತಾರೆ. ನಿಜ. ಕಥೆಯನ್ನಾಗಲೀ, ಕಾದಂಬರಿಯನ್ನಾಗಲೀ ಪುಸ್ತಕದಲ್ಲಿ ಓದುವ ಮಜವೇ ಬೇರೆ. ಒಂದು ಕೈಯಲ್ಲಿ ಪುಸ್ತಕವನ್ನು ಹಿಡಿದು, ಇನ್ನೊಂದು ಕೈಯನ್ನು ತಲೆಗಾನಿಸಿಕೊಂಡು ಸಾಕ್ಷಾತ್ ಶ್ರೀಮನ್ನಾರಾಯಣನ ಶೈಲಿಯಲ್ಲಿ ಪವಡಿಸಿ ಓದುತ್ತಿದ್ದರೆ ಅಂದಿನ ಕುವೆಂಪು, ಕಾರಾಂತ, ಬೇಂದ್ರೆ, ತೇಜಸ್ವಿಯಿವರಿಂದ ಹಿಡಿದು ಇಂದಿನ ಜಯಂತ ಕಾಯ್ಕಿಣಿ, ಭೈರಪ್ಪ, ಜೋಗಿ, ಎಚ್ಚೆಸ್ವಿಯವರ ತನಕ ಎಲ್ಲರೂ ಕಣ್ಮುಂದೆಯೇ ಪ್ರತ್ಯಕ್ಷವಾಗಿ ಕಥೆ ಹೇಳಿದಂತೆ, ಕವನ ವಾಚಿಸಿದಂತೆ ರಸವತ್ತಾಗಿರುತ್ತದೆ. ಜೊತೆಗೊಂದು ಲೋಟ ಕಾಫಿಯಿದ್ದರಂತೂ ಆ ಸ್ವಾದವೇ ಬೇರೆ! ಒಂದೊಂದು ಪುಟ ಮುಂದಕ್ಕೆ ಹೋದಾಗಲೂ ಹಾಯಿದೋಣಿಯಲ್ಲಿ ಒಂದೊಂದು ಮೈಲು ಮುಂದೆ ತೇಲಿದಂತಿರುತ್ತದೆ. ಪುಸ್ತಕದ ಭೌತಿಕ ಸ್ಪರ್ಷ, ಪುಟಗಳ ಘಮಗಳೆಲ್ಲ ಮಿಶ್ರಿತವಾಗಿ ಕೊಡುವ ಅನುಭೂತಿ ಮೊಬೈಲ್, ಕಂಪ್ಯೂಟರ್ ಗಳ ಪರದೆಯಲ್ಲಿ ಸಿಗುವುದಿಲ್ಲ. 


ಆದರೆ ಆಫೀಸು-ಟ್ರಾಫಿಕ್ಕು-ಮನೆಗಳ ನಡುವೆ ಹರಿದು ಹಂಚಿಹೋಗಿರುವ ಇಂದಿನ ಭಾಗ್ ದೌಡ್ ಭರೀ ಜೀವನದಲ್ಲಿ ಪುಸ್ತಕವನ್ನು ಕೊಂಡೊಯ್ಯುವ ತಾಳ್ಮೆ ಯಾರಿಗಿದೆ? ಹೇಳೀಕೇಳೀ ಇದು ಟ್ವೆಂಟಿಟ್ವೆಂಟಿ ಕಾಲ. ಎಲ್ಲವೂ ಚುಟುಕಾಗಿ, ಸ್ವಾದಭರಿತವಾಗಿ, ಇಷ್ಟೇಇಷ್ಟಿರಬೇಕೆಂದು ಬಯಸುವ 'ಚಿಕ್ಕ ಹಾಗೂ ಚೊಕ್ಕ'ದ ಕಾಲಘಟ್ಟವಿದು. ಆಫೀಸಿನಲ್ಲಿ ಬಾಸ್ ಎದ್ದುಹೋದಾಗ, ಟ್ರಾಫಿಕ್ಕಿನಲ್ಲಿ ಸಿಲುಕಿ ಚಲನೆಯೆಂಬ ಚಲನೆಯೇ ಕಾಣೆಯಾದಾಗ, ಬಸ್ಸಿನಲ್ಲಿ ನಿಂತು ನೇತಾಡುತ್ತಿರುವಾಗ.. ಇಂತಹಾ ಕಿರು ಘಳಿಗೆಗಳಲ್ಲಿಯೇ ಓದು, ಬರಹ ಮುಂತಾದ ಸದಭಿರುಚಿಯ ಕೈಂಕರ್ಯಗಳು ಜರುಗಬೇಕು. ಹೀಗೆ ಆಗಾಗ ಕಿರು ವಿರಾಮ ದೊರೆತಾಗೆಲ್ಲಾ ಇಂತಿಂಥಾ ದಪ್ಪದ ಪುಸ್ತಕವನ್ನು ಹೊರ ತೆರೆದು ಓದಲು ಸಾಧ್ಯವೇ? ಖಂಡಿತಾ ಇಲ್ಲ! ಅದಕ್ಕಿರುವ ಏಕೈಕ ಸಾಧನ ಮೊಬೈಲ್.


ಇಂದಿನ ಬಿಡುವುರಹಿತ, ಒತ್ತಡಭರಿತ ಜೀವನದಲ್ಲಿ ಓದು-ಬರಹಗಳು ಮರೆಯಾಗಬಾರದೆಂದೇ ಮನುಷ್ಯ ಅವನ್ನು ಸದಾ ತನ್ನೊಂದಿಗಿರುವ ಮೊಬೈಲ್, ಕಂಪ್ಯೂಟರ್ ಗಳೊಳಗೆ ಸೇರಿಸಿಕೊಂಡಿದ್ದಾನೆ. ಓದು-ಬರಹಗಳು ಬ್ಲಾಗ್, ಸೋಶಿಯಲ್ ಮೀಡಿಯಾ, ಪಿಡಿಎಫ್ ಮುಂತಾದ ಆಧುನಿಕ ಅವತಾರಗಳನ್ನು ತಾಳಿ ಮತ್ತೆ ಮನುಷ್ಯನ ಅಂತರಂಗ ಸೇರಿಕೊಂಡಿವೆ. ಆದರೆ ಇಷ್ಟೇ ಇಷ್ಟಿರುವ ಮೊಬೈಲ್ ಗಳಿಂದಾದ ದುಷ್ಪರಿಣಾಮವೆಂದರೆ ಅವು ನಮ್ಮ ತಾಳ್ಮೆಯನ್ನೂ ತಮ್ಮ ಗಾತ್ರಕ್ಕೇ ಕುಗ್ಗಿಸಿರುವುದು. ಎಲ್ಲವೂ ಚಿಕ್ಕ ಹಾಗೂ ಚೊಕ್ಕದಾಗಿರಬೇಕು, ಇಡೀ ಭಗವದ್ಗೀತೆಯೇ ನಾಲ್ಕು ಸಾಲಿನಲ್ಲಿ ಮುಗಿದುಹೋಗಬೇಕು, ಮಹಾಕಾವ್ಯಗಳೂ ಟೀ ವಿರಾಮದಲ್ಲಿ ಸಿಗುವ ಐದು ನಿಮಿಷದ ಬಿಡುವಿನಲ್ಲಿ ಓದುವಂತಿರಬೇಕು ಎಂಬ ಗಡಿಬಿಡಿಯೇ ಎಲ್ಲರಲ್ಲೂ. ಮುನ್ನೂರು ಪುಟದ ಪುಸ್ತಕವೊಂದನ್ನು ಹಿಡಿದಾಗ ಮನಸ್ಸಿನಲ್ಲಿದ್ದ ತಾಳ್ಮೆಯನ್ನು ಮೂರೂವರೆ ಇಂಚಿನ ಮೊಬೈಲ್ ಸದ್ದಲ್ಲದಂತೆ ನುಂಗುತ್ತಿರುವುದು ಅದನ್ನು ಕಂಡುಹಿಡಿದವನಾಣೆಗೂ ಸತ್ಯ!


                       ***************


ಜಗತ್ತಿನ ಹಲವಾರು ಭಾಷೆಗಳಂತೆ ಕನ್ನಡವೂ 'ಇ' ಮಾಧ್ಯಮಕ್ಕೆ ಹೊಂದಿಕೊಳ್ಳುತ್ತಿದೆ. ಇದನ್ನು, ಒಂದಾನೊಂದು ಕಾಲದಲ್ಲಿ ತಾಳೆಗರಿಯಲ್ಲಿದ್ದ ಲಿಪಿಯು ಪುಸ್ತಕ ಮಾಧ್ಯಮಕ್ಕೆ ತೇರ್ಗಡೆಯಾದ ಬೆಳವಣಿಗೆಗೆ ಹೋಲಿಸುವಂತಿಲ್ಲವಾದರೂ ಇಂದಿನ ಕಾಲಮಾನಕ್ಕಿದು ಸೂಕ್ತ ಬೆಳವಣಿಗೆಯೇ. ಯಾವ ಭಾಷೆ ಮನುಷ್ಯನ ಭಾವನೆಗಳ ಹರಿವಿನ ಮಾಧ್ಯಮವಾಗಿರುತ್ತದೋ ಆ ಭಾಷೆ ನಿರಂತರವಾಗಿರುತ್ತದೆ. ನಾವು ಊಟ ಆಯ್ತಾ, ತಿಂಡಿ ಆಯ್ತಾಗಳಿಂದ ಹಿಡಿದು ತತ್ ಕ್ಷಣಕ್ಕೆ ಹೊಳೆವ ಯೋಚೆನೆಗಳ ತನಕ ಎಲ್ಲವನ್ನೂ ಕನ್ನಡದಲ್ಲೇ ಟೈಪಿಸಿ ಸೋಶಿಯಲ್ ಮೀಡಿಯಾದಲ್ಲೋ, ಮತ್ತೆಲ್ಲೋ ಸಂಭಾಷಿಸುತ್ತೇವೆ, ಅಂಟಿಸುತ್ತೇವೆ. ಅಷ್ಟರ ಮಟ್ಟಿಗೆ ಅದು ನಮ್ಮೊಳಗೆ ನಿರಂತರವಾಗಿದೆ. ತೀರಾ ಪುಸ್ತಕವನ್ನೇ ತೆರೆಯದವರೂ ಸಹಾ ಮೊಬೈಲ್ನಲ್ಲಿ ಕಣ್ಣಿಗೆಟಕುವ ಬರಹಗಳೊಳಗೆ ಸಣ್ಣಗೊಂದು ಸುತ್ತು ಅಡ್ಡಾಡುತ್ತಾರೆ. ಇನ್ನು ಪುಸ್ತಕದ 'ಸ್ವಾದ'ವನ್ನರಿತವರು ಎರೆಡೂ ಮಾಧ್ಯಮಗಳಲ್ಲಿ ಓದಿಗೆ ತೊಡಗುತ್ತಾರೆ. ಹೀಗೆ 'ಇ' ಅವತರಿಣಿಕೆಯು ಕನ್ನಡದ ಹರಿವಿಗೆ ಹೊಸದಾದ ಉಪನದಿಯಂತಾಗಿದೆ. 


ಇತ್ತೀಚೆಗೆ ಕನ್ನಡದ ಬಹಳ ಹಳೆಯ ಮಾಸಿಕ ಪತ್ರಿಕೆಯೊಂದು 1960-70ರ ದಶಕದ ಸಂಚಿಕೆಗಳೂ ಸೇರಿದಂತೆ ತನ್ನ ಅನೇಕ ಹಳೆಯ ಸಂಚಿಕೆಗಳ ಸ್ಕ್ಯಾನ್ ಪ್ರತಿಗಳನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿತು. ತೆರೆದೋದಿದವರಿಗೆ ಅವು ಆ ಕಾಲಘಟ್ಟವನ್ನು ಮರುಸೃಷ್ಟಿಸುವ ಪಳೆಯುಳಿಕೆಗಳಂತೆ ಭಾಸವಾಗುತ್ತವೆ. ಅಲ್ಲದೇ ಮರುಮುದ್ರಣ ಕಾಣದ ಅದೆಷ್ಟೋ ಹಳೆಯ ಕೃತಿಗಳ ಪಿಡಿಎಫ್ ಪ್ರತಿಗಳು ದೇಹ ನಶಿಸಿದ ಮೇಲೂ ಉಳಿದ ಆತ್ಮಗಳಂತೆ ಅಂತರ್ಜಾಲದಲ್ಲಿ ಕುಳಿತಿವೆ. ಇವೆಲ್ಲ ಸಾಧ್ಯವಾಗಿರುವುದು 'ಇ' ಮಾಧ್ಯಮದಿಂದ. ಹೀಗೆ ಮನುಷ್ಯ ತನ್ನ ಹೃದಯಕ್ಕೆ ತೀರಾ ಹತ್ತಿರದಲ್ಲಿಟ್ಟುಕೊಳ್ಳುವ ಮೊಬೈಲ್ ನೊಳಗಿನಿಂದ ಕನ್ನಡವು ಚಿಗುರೊಡೆದಿರುವುದು ಸ್ವಾಗತಾರ್ಹವೇ. ಆದರೆ ಪುಸ್ತಕಗಳು ದೂರಮಾಡಬಾರದಷ್ಟು ಅನಿವಾರ್ಯವಾದ ವ್ಯಕ್ತಿತ್ವದ ಅಂಗಗಳು. ಎರೆಡರಲ್ಲೂ ಇರುವುದು ಅಕ್ಷರಗಳೇ ಆದರೂ ಎರೆಡೂ ಉಂಟುಮಾಡುವ ಅನುಭೂತಿ ವಿಭಿನ್ನವಾದುದು. ತಮ್ಮತಮ್ಮ ಮಿತಿಯಲ್ಲೇ ಮನುಷ್ಯನ ವ್ಯಕ್ತಿತ್ವಕ್ಕೆ ನಿರಂತರ ಕಾವು ಕೊಡುತ್ತಾ ಈ ಎರೆಡೂ ಕವಲುಗಳೂ ಕನ್ನಡದ ಹೆಮ್ಮರವನ್ನು ಮತ್ತಷ್ಟು ಹಬ್ಬಿಸುತ್ತಿವೆ.


(09-02-2020 ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ)

ಶುಕ್ರವಾರ, ಡಿಸೆಂಬರ್ 27, 2019

ಗುಡ್ಡದ ತುದಿಯಿಂದ ಕಾಣುವ ನಮ್ಮನೆಯ ಚಿತ್ರ...




ಹುಟ್ಟಿ ಇಲ್ಲೇ ಕಳೆದ ಇಪ್ಪತ್ತೊಂದು ವರ್ಷದಲ್ಲಿ ಒಂದು ದಿನವೂ ಈ ಮನೆ, ಸುತ್ತಲಿನ ಮರಗಳು, ಹಿಂಬದಿಯ ಹಸಿರು ಗುಡ್ಡ ಇವೆಲ್ಲ ಒಂದು ಚಂದದ ಚಿತ್ರದಂತೆ, ಕನಸೊಂದರಲ್ಲಿ ಕಂಡ ಸುಂದರ ಲೋಕದಂತೆ ಅನ್ನಿಸಿರಲೇ ಇಲ್ಲ. ಆದರೆ ಇವತ್ತು, ಬೆಂಗಳೂರಿನ ಬಸ್ಸು ಏರಬೇಕಾದ ದಿನ ಸುಮ್ಮನೆ ಗುಡ್ಡ ಹತ್ತಿ ನೋಡಿದರೆ, 'ಅರೆರೇ ಚಿಕ್ಕಂದಿನಲ್ಲಿ ಬಾಲಮಂಗಳ, ಚಂದಮಾಮಗಳಲ್ಲಿ ಬರುತ್ತಿದ್ದ ಹಳ್ಳಿಯ ಮನೆಗಳ ಚಿತ್ರ ಹೀಗೇ ಇರ್ತಿತ್ತಲ್ವ!' ಅನಿಸುತ್ತಿದೆ.

ಎಷ್ಟೇ ಬೇಜಾರು, ಹಿಂಸೆ ಅನ್ನಿಸಿದರೂ ಏನೂ ಮಾಡುವಂತಿಲ್ಲ. ಬೆಂಗಳೂರು ಅನ್ನೋ ಖೂಳವ್ಯಾಘ್ರನಿಗೆ 'ಮೂರು ದಿವಸ ಊರಲಿದ್ದು ಬಂದು ಸೇರುವೆನಿಲ್ಲಿಗೆ' ಎಂದು ಪುಣ್ಯಕೋಟಿಯಂತೆ ಮಾತುಕೊಟ್ಟು ಬಂದಾಗಿದೆ. ಕೊಟ್ಟ ಮಾತಿಗೆ ತಪ್ಪದೇ, ಕೆಟ್ಟ ಯೋಚನೆ ಮಾಡದೇ ಬಸ್ಸುಹತ್ತಿ ಹೊರಡಲೇಬೇಕು :-(

ಚಿನ್ನ ಎಂದೂ ನಗುತಿರು.. ನನ್ನ ಸಂಗ ಬಿಡದಿರು..



ಕೆಲವೊಂದು ಪ್ರೀತಿಗಳು ಅತ್ಯಂತ ನಿಷ್ಕಾರಣವಾಗಿರುತ್ತವೆ. ನೀನು ಯಾರು? ನಿನ್ನ ಸಂಬಳ ಎಷ್ಟು? ನೀನು ಸುಂದರನಾ? ಕುರೂಪಿಯಾ? ಕುಳ್ಳನಾ? ಡುಮ್ಮನಾ? ನಿನ್ನಿಂದ ನನಗೇನು ಲಾಭ? ನೀನು ನನ್ನ ಬಳಿ ಆಡುವ ಮಾತು ಸುಳ್ಳಾ? ಸತ್ಯವಾ? ಊಹೂಂ. ಇದ್ಯಾವ ಪ್ರೆಶ್ನೆಯನ್ನೂ ಇವನು ಕೇಳುವುದೇ ಇಲ್ಲ. ನಾನು ಹೇಗಿದ್ದೇನೋ ಹಾಗೆಯೇ ನನ್ನನ್ನು ಹಚ್ಚಿಕೊಳ್ಳುತ್ತಾನೆ‌. ಪ್ರೀತಿಸುತ್ತಾನೆ. ತನ್ನ ಪುಟ್ಟ ಹೃದಯವನ್ನು ಅಂಗೈಯಲ್ಲಿಟ್ಟುಕೊಂಡು ನನಗೋಸ್ಕರ ಓಡೋಡಿ ಬರುತ್ತಾನೆ. 'ಮಾಮು, ಇವತ್ತು ಬೇಡ, ನಾಳೆ ಬೆಂಗ್ಳೂರಿಗೆ ಹೋಗಾ' ಎಂದು ಹಠಹಿಡಿಯುತ್ತಾನೆ.

ಇವನನ್ನು ನಾನು ಪ್ರೀತಿಯಿಂದ ಬೊಮ್ಮಣ್ಣೀ ಎಂದು ಕರೆಯುತ್ತೇನೆ.

ಉಡುಪಿಯಿಂದ ನಾನು ಬೇಲಿ ಹಾರಿ ಓಡಿಬರುವ ಹೊತ್ತಿಗೆ ಇವನು ಬರೀ ಒಂದೂ ಚಿಲ್ಲರೆ ವರ್ಷದ ಪೋರ. ನಾನು ಕಾಲೇಜ್ ಮುಗಿಸಿ ತೀರ್ಥಹಳ್ಳಿಯಿಂದ ಬರುವ ಸಮಯಕ್ಕೆ ಪಕ್ಕದ ಮನೆಯ ಅಂಗಳದ ಚಿಟ್ಟೆಯ ಮೇಲೆ ಇಷ್ಟುದ್ದದ ಜುಟ್ಟು ಬಿಟ್ಟುಕೊಂಡು ಕೀಕೀಕೀ ಎಂದು ನಗುತ್ತಾ ಕುಳಿತಿರುತ್ತಿದ್ದ ಈ ಪುಟಾಣಿಯನ್ನು ಹೇಗೆ ಮಾತನಾಡಿಸಬೇಕೆಂಬುದೇ ನನಗೆ ತಿಳಿಯುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ನನಗೆ ಮಕ್ಕಳನ್ನು ನೆಟ್ಟಗೆ ಮಾತನಾಡಿಸುವುದಿರಲಿ, ಎತ್ತಿಕೊಳ್ಳಲಿಕ್ಕೂ ಬರುತ್ತಿರಲಿಲ್ಲ‌. ನನ್ನೆಡೆಗೆ ತನ್ನ ಅಬೋಧ ಮುಗ್ದ ಕಣ್ಣಿನಿಂದ ನೋಡುತ್ತಿದ್ದ ಇವನಿಗೆ ಬೇರೇನೂ ಹೇಳಲು ತೋಚದೆ ನಾನು 'ಮ್ಯಾಂವ್ ಮ್ಯಾಂವ್' ಎಂದು ಬೆಕ್ಕಿನಂತೆ ಕೂಗಿ ಮಾತನಾಡಿಸುತ್ತಿದ್ದೆ. ಅಷ್ಟೇ! ಚಿನ್ನೂ, ಮುದ್ದೂ, ಪುಟ್ಟೂ ಎಂದು ಎತ್ತಿಕೊಂಡು ಮುದ್ದಾಡುವ ಇತರರ ಮಧ್ಯೆ ಅಷ್ಟು ದೂರಕ್ಕೆ ನಿಂತು ಮ್ಯಾಂವ್ ಮ್ಯಾಂವ್ ಎಂದು ವಿಚಿತ್ರವಾದ ಸದ್ದು ಹೊರಡಿಸುವ ನಾನು ಇವನ ಕಣ್ಣಿಗೆ ಪ್ಯಾಂಟು, ಶರ್ಟು ತೊಟ್ಟ ಇಷ್ಟೆತ್ತರದ ಬೆಕ್ಕಣ್ಣನಂತೆ ಕಂಡೆನೋ ಏನೋ? ನನ್ನನ್ನು ನೋಡಿದಾಗ ಇವನೂ ಮ್ಯಾಂವ್ ಎಂದೇ ಕರೆಯತೊಡಗಿದ. 'ಮ್ಯಾಂವ್ ಬಂದ ನೋಡೂ' ಎಂದರೆ ಸಾಕು, ಕುಳಿತಲ್ಲೇ ಜಿಗಿಜಿಗಿಜಿಗಿಯುತ್ತಾ, ಹೀಹೀಹೀ ಎಂದು ನಲಿಯುತ್ತಾ ಸಂಭ್ರಮ ಪ್ರಕಟಿಸುತ್ತಿದ್ದ. ನಡೆಯಲು ಕಲಿತ ಮೇಲಂತೂ ನನ್ನನ್ನು ಕಂಡೊಡನೆಯೇ ಎರೆಡೂ ಕೈಗಳನ್ನು ಮೇಲೆತ್ತಿಕೊಂಡು ಪುಟ್ಟ ಗೊಂಬೆಯಂತೆ ತಬ್ಬಲು ಓಡಿಬರುತ್ತಿದ್ದ. ಅರಳಸುರಳಿ ಪೇಟೆಗೆ ಹೊರಟ ನನ್ನೊಂದಿಗೆ ಪುಟ್ಟ ಚಪ್ಪಲಿ ಧರಿಸಿ ತಾನೂ ಹೊರಟು ನಿಲ್ಲುತ್ತಿದ್ದ. ಅಮ್ಮನೇನಾದರೂ ಹೋಗಬೇಡ ಎಂದರೆ ಬೂ ಎಂದು ದೊಡ್ಡ ದನಿಯಲ್ಲಿ ಅಳುತ್ತಿದ್ದ. ಆಗೆಲ್ಲ ನನಗೆ ಹೃದಯ ಹಿಂಡಿದಂತೆ ನೋವಾಗುತ್ತಿತ್ತು. ಇದನ್ನೆಲ್ಲಾ ನೋಡಿದ ಅಮ್ಮಮ್ಮ 'ನೀನು ಅವನನ್ನು ಕೆಣಕುವುದಿಲ್ಲ. ಹಿಚುಕಿ ನೋಯಿಸುವುದಿಲ್ಲ. ಹೇಳಿದ ಹಾಗೆಲ್ಲಾ ಕೇಳ್ತೀಯ. ಅದಕ್ಕೇ ನೀನಂದ್ರೆ ಅಷ್ಟು ಪ್ರೀತಿ ಅವನಿಗೆ' ಎನ್ನುತ್ತಿದ್ದರು. ಆದರೆ ನನಗೆ ಇವತ್ತಿನ ತನಕ ಇವನ ಈ ಅಪಾರ ಅಕ್ಕರೆಗೆ ವಿವರಣೆ ಸಿಕ್ಕಿಲ್ಲ.

ಅದು ನಮ್ಮನೆಯ ನಾಗಪ್ರತಿಷ್ಟೆ ಕಾರ್ಯಕ್ರಮದ ದಿನ. ಮನೆಗೆ ಬಂದ ನೆಂಟರೆಲ್ಲಾ ಸಂಜೆ ಹೊರಟುನಿಂತಿದ್ದರು. ನಾನೂ ಬೆಂಗಳೂರಿನ ಪಯಣಕ್ಕಾಗಿ ಬ್ಯಾಗು ಪ್ಯಾಕುಮಾಡಿಕೊಳ್ಳುತ್ತಿದ್ದೆ. ಅಂಗಳದಿಂದ ಒಳಗಡಿಯಿಟ್ಟ ಇವನು ನನ್ನ ತಯಾರಿ ನೋಡಿ ಅರೆಕ್ಷಣ ಅವಾಕ್ಕಾದ‌. 'ನಾಳೆ ಹೋಗಾ ಮಾಮೂ' ಎಂದು ಎಂದಿನಂತೆ ಒತ್ತಾಯ ಮಾಡಿದ. ನಾನು ಒಪ್ಪಲಿಲ್ಲ. ಮುಖ ಚಿಕ್ಕದು ಮಾಡಿಕೊಂಡು ಮರಳಿಹೋದ. ಊಟ ಮುಗಿಸಿ, ಬ್ಯಾಗೇರಿಸಿಕೊಂಡು, ಹೊರಗಡೆ ಅಂಗಳಕ್ಕೆ ಬಂದ ನಾನು 'ಟಾಟಾ ಆಕಾಂಕೀ' ಎಂದು ಕೈಬೀಸಿ ನಾಲ್ಕೇ ನಾಲ್ಕು ಹೆಜ್ಜೆ ನಡೆದಿದ್ದೆ. ಹಿಂದಿನಿಂದ ಅವನ ಅಮ್ಮ ಹಾಗೂ ಅಮ್ಮಮ್ಮನ ದೊಡ್ಡದನಿಗಳು ಕೇಳತೊಡಗಿದವು. ಏನೆಂದು ತಿರುಗಿನೋಡಿದರೆ ನನ್ನ ಪ್ರೀತಿಯ ಆಕಾಂಕ್ಷು ಅಳುತ್ತಿದ್ದ! ಇಪ್ಫಳಿಸಿ ಇಪ್ಪಳಿಸಿ ಅಳುತ್ತಿದ್ದ! ಅಷ್ಟೇ. ಅಲ್ಲಿಂದ ಮುಂದಕ್ಕೆ ಒಂದು ಹೆಜ್ಜೆಯನ್ನಾದರೂ ಕಿತ್ತಿಡಲು ನನ್ನಿಂದಾಗಲಿಲ್ಲ. ಮರಳಿ ಹೋಗಿ ಬ್ಯಾಗನ್ನು ಮನೆಯೊಳಗೆ ಬಿಸುಟು ಅವನಿದ್ದಲ್ಲಿಗೆ ಬಂದೆ. ಅವನೆದುರು ಮೊಣಕಾಲೂರಿ ಕುಳಿತು  'ನಾನು ಇವತ್ತು ಹೋಗಲ್ಲ. ಅಳ್ಬೇಡ ಆಯ್ತಾ' ಎಂದು ಕೈ ಹಿಡಿದುಕೊಂಡೆ. ಇಷ್ಟು ಹೊತ್ತು ಅಳುತ್ತಿದ್ದವನ ಮುಖ ಅನಂತ ಸಂಭ್ರಮಕ್ಕೆ ತಿರುಗಿತು.

ನನ್ನ ಕಣ್ಣಿನಲ್ಲಿ ನೀರಾಡಿತು.

           ******************

ಈಗಲಾದರೂ 'ನಾನು ಬೆಂಗ್ಳೂರಿಂದ ಬರುವಾಗ ಎಂತ ತರ್ಲೋ?' ಎಂದು ಕೇಳಿದರೆ ಅವನು ಕೊಡುವ ಉತ್ತರ 'ಎಂತ ಬೇಡ ಮಾಮು' ಎನ್ನುವುದೊಂದೇ. ಆದರೂ ಬೆಂಗಳೂರಿನ ಬಸ್ಸಿನಿಂದ ತೀರ್ಥಹಳ್ಳಿಯಲ್ಲಿ ಇಳಿದ ತಕ್ಷಣ ಕಾಲುಗಳು ತಾನಾಗಿಯೇ ಇವನು ಇಷ್ಟಪಡುವ ಕಿಟ್ ಕ್ಯಾಟ್ ಅಂಗಡಿಯತ್ತ ಸಾಗುತ್ತವೆ. ಮನೆಗೆ ಬಂದು ಅರ್ಧ ದಿನವಾದರೂ ಇವನ ಮುಖ ಕಾಣದೇ ಹೋದರೆ ಇನ್ನಿಲ್ಲದಷ್ಟು ಬೇಸರವಾಗುತ್ತದೆ. ಕೊನೆಗೆ ನಾನೇ ಸೋತು ಎರೆಡು ಚಾಕಲೇಟ್ ಹಿಡಿದುಕೊಂಡು ಇವನಿರುವತ್ತ ನಡೆದುಬಿಡುತ್ತೇನೆ. ನಮ್ಮನೆಗೆ ಬರುತ್ತಿರುವ ಅವನನನ್ನು ಅವನ ಅಪ್ಪನೋ, ಅಮ್ಮನೋ ವಾಪಾಸ್ ಕರೆದರೆಂದರೆ ಅವರ ಮೇಲೆ ನನಗೆ ಅಪರಿಮಿತ ಸಿಟ್ಟು ಬರುತ್ತದೆ‌. ಮನೆಗೆ ಬೇರಾರೋ ನೆಂಟರು ಬಂದಿರುವರೆಂದು ಅವನು ನಮ್ಮನೆಗೆ ಬರದೇ ಹೋದಾಗ ಅವನ ಮೇಲೂ ಕೋಪವುಕ್ಕುತ್ತದೆ. ಆ ಸಿಟ್ಟು ತಣಿಯುವುದರೊಳಗೇ ಅವನು 'ಮಾಮು, ಕ್ರಿಕೆಟ್ ಆಡಣ ಬಾರಾ' ಎನ್ನುತ್ತಾ ಅಂಗಳದಲ್ಲಿ ಪ್ರತ್ಯಕ್ಷವಾಗಿಬಿಡುತ್ತಾನೆ. ನಾನೂ ಮುನಿಸೆಲ್ಲವನ್ನೂ ಮರೆತು ಅವನ ಹಿಂದೆ ನಡೆಯುತ್ತೇನೆ. 'ಮಾಮು, ಬೆಂಗ್ಳೂರಲ್ಲಿ ಬಾಕ್ಸರ್, ಮಸ್ತಫ್ ನಾಯಿಗಳೆಲ್ಲ ಬೆಳಿಗ್ಗೆ ವಾಕಿಂಗ್ ಹೋಗ್ತಿರ್ತಾವಂತೆ ಹೌದನಾ?'  'ಅಲ್ಲಿ ಯಾವ ಕಾರು ಜಾಸ್ತಿ ಇರೋದು? ಮರ್ಸಿಡಿಸ್ಸಾ ಲ್ಯಾಂಬೋರ್ಗಿನಿನಾ?' 'ನೆನ್ನೆ ವಿರಾಟ್ ಕೋಹ್ಲಿ ಹೆಂಗೆ ಸಿಕ್ಸರ್ ಹೊಡ್ದ ಗೊತ್ತನಾ?' ಎಂದೆಲ್ಲ ಹರಟುತ್ತಾ ಕ್ರಿಕೆಟ್ ಆಡುತ್ತಾನೆ. ನಾನು ಕೇಳಿಯೇ ಇರದ ಅದೆಷ್ಟೋ ತಳಿಯ ನಾಯಿಗಳನ್ನೂ,  ಹೊಸಹೊಸ ಮಾಡೆಲ್ ಕಾರುಗಳನ್ನೂ ಇವನು ವರ್ಣಿಸುವಾಗ ನಾನು ಅವಾಕ್ಕಾಗುತ್ತೇನೆ. ಅದರ ಬಗ್ಗೆ ಅವನು ಕೇಳುವ ಪ್ರೆಶ್ನೆಗಳ ತಲೆಬುಡವೇ ಗೊತ್ತಿಲ್ಲದಿದ್ದರೂ ಏನೇನೋ ಸುಳ್ಳುಪಳ್ಳು ಉತ್ತರ ಹೇಳಿ ಮರ್ಯಾದೆ ಉಳಿಸಿಕೊಳ್ಳುತ್ತೇನೆ. ತನಗಿಂತ ಹದಿನೈದು ವರ್ಷಕ್ಕೆ ದೊಡ್ಡವನಾದ ನನ್ನನ್ನು ಇವನು ಇಷ್ಟೊಂದು ಅಧಿಕಾರದಿಂದ ನಡೆಸಿಕೊಳ್ಳುವುದನ್ನು ನೋಡಿದಾಗೆಲ್ಲ ನನಗೆ 'ಇವತ್ತಿಗೂ ಇವನ ಕಣ್ಣಿಗೆ ನಾನು ಪ್ಯಾಂಟು ತೊಟ್ಟ ಬೆಕ್ಕಣ್ಣನ ಥರಾ ಕಾಣುತ್ತೀನೇನೋ' ಎಂಬ ಅನುಮಾನ ಕಾಡುತ್ತದೆ!

ಬದುಕಿನ ಅದೆಷ್ಟೋ ಸಮಯವನ್ನು ನಾವು ನಮ್ಮನ್ನು ಪ್ರೀತಿಸಿಯೇ ಇಲ್ಲದವರೆದುರು ಪ್ರೀತಿ ತೋಡಿಕೊಳ್ಳುತ್ತಾ, ಅವರಿಗೆ ಅಗತ್ಯವೇ ಇಲ್ಲದ ಕಾಳಜಿಯನ್ನು ವ್ಯಕ್ತಪಡಿಸುತ್ತಾ ಕಳೆದುಬಿಡುತ್ತೇವೆ. ನಮ್ಮ ನಮ್ಮ ಸ್ವಾರ್ಥಕ್ಕಾಗಿ ಯಾರನ್ನೋ ಓಲೈಸುತ್ತಾ, ಮತ್ಯಾರೆದುರೋ ಹಲ್ಲುಗಿಂಜುತ್ತಾ ವ್ಯರ್ಥವಾಗಿ ಬದುಕುತ್ತೇವೆ. ಆ ಎಲ್ಲ ಸ್ವಾರ್ಥದ ಪ್ರೀತಿಗಳೆದುರು ಈ ಮುಗ್ಧ, ನಿಷ್ಕಲ್ಮಶ ಪ್ರೀತಿ ವಜ್ರದಂತೆ ಹೊಳಪಾಗಿ ಕಾಣುತ್ತದೆ. ಹಾಗಂತ ಈ ಅಕ್ಕರೆಯಾದರೂ ಎಷ್ಟು ದಿನಗಳದ್ದು? ದೊಡ್ಡವನಾಗುತ್ತಾ ಹೋದಂತೆ, ಮನಸ್ಸಿನ ಮುಗ್ಧತೆಯನ್ನು ಕಳೆದುಕೊಳ್ಳುತ್ತಾ ಹೋಗಿ ಈ ಮಾಮುವೆಂಬ ಪ್ಯಾಂಟು ತೊಟ್ಟ ಬೆಕ್ಕಣ್ಣನೂ ಇವನ ಕಣ್ಣಲ್ಲಿ ಎಲ್ಲರಂತೆಯೇ ಸಾಮಾನ್ಯ ಮನುಷ್ಯನಾಗಿ ಬಿಡುತ್ತಾನಾ? 

ಹೀಗೆಲ್ಲ ಅನಿಸಿದಾಗ ಅದೇಕೋ ಬಹಳ ಸಂಕಟವಾಗುತ್ತದೆ.

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...