ಶನಿವಾರ, ಸೆಪ್ಟೆಂಬರ್ 23, 2017

ಬೆಕ್ಕುಗಳ ಜೊತೆಗೆ ಭಾವ-ಬಂಧ...



ಮನುಷ್ಯನಿಗೆ ಅತಿ ಪ್ರಿಯವಾದ ಪ್ರಾಣಿಗಳಲ್ಲಿ ಮೊದಲನೆಯದು ನಾಯಿ. ಅದರ ನಂತರದ ಸ್ಥಾನದಲ್ಲಿ, ಮನುಷ್ಯನಿಗೆ ಅತೀ ಹತ್ತಿರದಲ್ಲಿ, ತೊಡೆಯ ಮೇಲೇ ಕುಳಿತು ಗರ್ವದಿಂದ ಮೀಸೆ ತಿರುವುತ್ತಿರುವ ಇನ್ನೊಂದು ಪ್ರಾಣಿಯೆಂದರೆ ಬೆಕ್ಕು. ಕೆಲವರ ಹೊರತಾಗಿ ನಾಯಿಯನ್ನು ಮನೆಯೊಳಗೆ ಬಿಟ್ಟುಕೊಳ್ಳುವವರು ಕಡಿಮೆ. ನಾಯಿಯ ಸಂಚಾರ ಅಂಗಳ, ವರಾಂಡ, ಇನ್ನೂ ಹೆಚ್ಚೆಂದರೆ ಜಗುಲಿ(ಹಾಲ್) ಗಳಿಗೆ ಸೀಮಿತವಾಗಿರುತ್ತದೆ. ಆದರೆ ಬೆಕ್ಕು ಹಾಗಲ್ಲ. ಅದು ಸರ್ವ ಸ್ವತಂತ್ರಿ. ಅಡಿಗೆಮನೆ, ಮಲಗುವ ಕೋಣೆಯೂ  ಸೇರಿದಂತೆ ಮನೆಯ ಮತ್ಯಾವುದೇ ಕೋಣೆಗಳಲ್ಲಿ, ಮೂಲೆಮೂಲೆಗಳಲ್ಲಿ ಯಾವ ಸಂದರ್ಭದಲ್ಲಾದರೂ ಓಡಾಡುವ ಅಧಿಕಾರ ಅದಕ್ಕಿದೆ. ಪಟ್ಟಣದ ಹಲವಾರು ಮನೆಗಳಲ್ಲಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಮನೆಯ ಯಜಮಾನನಿಗಿಂತಲೂ ಹೆಚ್ಚಿನ ಠೀವಿಯಲ್ಲಿ, ಸೋಫಾಮೇಲೆ ಕಾಲುಚಾಚಿ ಮಲಗಿರುವ ನುಣುಪು ಮೈ-ಕುಡಿಮೀಸೆಯ ಮಾರ್ಜಾಲವನ್ನು ನೀವು ನೋಡಬಹುದು. ಮೆತ್ತಗಿನ ಸೋಫಾಮೇಲೆ ಅಷ್ಟೇ ಮೆತ್ತಗಿರುವ ತನ್ನ ದೇಹವನ್ನು ಚಾಚಿಕೊಂಡು, ತನ್ನ ಮುಂಗೈಯ್ಯಿಗೆ ಬಳಿದುಕೊಂಡ ಎಂಜಲಿನಿಂದ ಮೈ-ಮುಖವನ್ನೆಲ್ಲಾ ವರೆಸಿಕೊಳ್ಳುತ್ತಾ ಗಮ್ಮತ್ತಾಗಿ ಕುಳಿತಿರುವ ಈ ಬೆಕ್ಕಣ್ಣನ ಪಕ್ಕ ನೀವು ಹೋಗಿ ಕುಳಿತುನೋಡಿ; ಅರೆಕ್ಷಣ ತನ್ನ ಕೆಲಸ ನಿಲ್ಲಿಸಿ ಸಾಲ ಕೇಳಲು ಬಂದವನನ್ನು ನೋಡುವ ಸಾವುಕಾರನಂತೆ ನಿಮ್ಮತ್ತ ಗಂಭೀರನೋಟ ಬೀರಿ, ಮತ್ತೆ ತನ್ನ ಕೆಲಸ ಮುಂದುವರೆಸುತ್ತದೆ.

'ಎಷ್ಟೇ ಪ್ರೀತಿಯಿದ್ದರೂ ಬೆಂಗಳೂರಿನಲ್ಲಿ ರಸ್ತೆ-ಕಾಂಪೌಂಡುಗಳ ಮೇಲೆ ಕುಳಿತಿರುವ, ಓಡಾಡುತ್ತಿರುವ ಅಥವಾ ನಿದ್ರಿಸುತ್ತಿರುವ ಯಾವುದೇ ಅಪರಿಚಿತ ಮಾರ್ಜಾಲವನ್ನು ಮಾತನಾಡಿಸುವುದು ಅಪಾಯಕಾರಿ' ಎನ್ನುವುದು ವರ್ಷಗಳ ಕೆಳಗೆ ನನಗೆ ಗೊತ್ತಾದ ಸತ್ಯ. ಹಿಂದೊಮ್ಮೆ ರೊಮ್ಯಾಂಟಿಕ್ ತಂಗಾಳಿಯೊಂದು ಬೀಸುತ್ತಿದ್ದ ಸಂಜೆಯಲ್ಲಿ ಟೆರಾಸ್ ಮೇಲೆ ಕುಳಿತಿದ್ದ ಮಾರ್ಜಾಲ ತರುಣಿಯೊಬ್ಬಳು ನನ್ನ ಕಣ್ಣಿಗೆ ಬಿದ್ದಿದ್ದಳು. ಬಾಯಿಯಿಂದ ಎಂಜಲನ್ನು ತನ್ನ ನುಣುಪು ಕೈಯ್ಯ ಮೂಲಕ ಮುಖಕ್ಕೆಲ್ಲಾ ಸವರಿಕೊಂಡು 'ಮೇಕಪ್' ಮಾಡಿಕೊಳ್ಳುತ್ತಿದ್ದ ಆ ಚೆಲುವೆಯನ್ನು ಕಂಡ, ಮೊದಲೇ ಬೆಕ್ಕುಗಳೆಂದರೆ ಬೆಟ್ಟದಷ್ಟು ಪ್ರೀತಿಯಿರುವ ನಾನು ಮತ್ತಷ್ಟು ರೊಮ್ಯಾಂಟಿಕ್ ಆಗಿಬಿಟ್ಟಿದ್ದೆ. ಅಲ್ಲದೇ ಊರುಬಿಟ್ಟ ಮೇಲೆ ಬೆಕ್ಕು, ನಾಯಿಗಳ ಒಡನಾಟವೂ ಕಮ್ಮಿಯಾಗಿತ್ತಲ್ಲಾ, ಈಗ ಹೇಗಾದರೂ ಇವಳನ್ನು ಒಲಿಸಿಕೊಳ್ಳಲೇಬೇಕೆಂದು ನಿರ್ಧರಿಸಿ ಸಾಧ್ಯವಾದಷ್ಟು ಸುಮಧುರ ದನಿಯಲ್ಲಿ "ತ್ಚುತ್ಚುತ್ಚು.. ಬಾಬಾಬಾ" ಎಂದು ಕರೆದೆ. ಯಾವುದೋ ಕಬಾಬ್ ಹೋಟೆಲ್ ಮುಂದೆ 'ಪೀಸ್'ಗಾಗಿ ಕಾದುನಿಂತಿರುವ ತನ್ನ ಬಾಯ್ ಫ್ರೆಂಡ್ ನ ಯೋಚನೆಯಲ್ಲಿದ್ದಳೋ ಏನೋ, ಅನಿರೀಕ್ಷಿತವಾಗಿ ತೇಲಿಬಂದ ನನ್ನ ಧ್ವನಿ ಕೇಳಿ ಅರೆಕ್ಷಣ ಬೆಚ್ಚಿಬಿದ್ದು ನನ್ನನ್ನೇ ಗುರಾಯಿಸತೊಡಗಿದಳು. ನಾನು ಮತ್ತಷ್ಟು ರೊಮ್ಯಾಂಟಿಕ್ ಸ್ವರದಲ್ಲಿ "ತ್ಚುತ್ಚುತ್ಚೂ... ಮಿಯಾಂವ್.. ಬಾಬಾಬಾ" ಎಂದು ಕರೆಯುತ್ತಾ ಎರೆಡು ಹೆಜ್ಜೆ ಮುಂದಿಟ್ಟಿದ್ದಷ್ಟೇ, ಬಾಯ್ಬಿಟ್ಟರೆ "ಪಿಂಕಿ ಕಮಾನ್... ಮ್ಯೂಮ್ಯೂ" ಎಂದೋ, "ಬಿಲ್ಲಿ ಭಯ್ಯಾ ಆಜಾವೋ" ಎಂದೋ ಕರೆಯುವ ಬಿಟಿಎಮ್ ಬಡಾವಣೆಯ ನಾರ್ಥ್ ಇಂಡಿಯನ್ ಜನರನ್ನೇ ಹೆಚ್ಚಾಗಿ ನೋಡಿ ಅಭ್ಯಾಸವಿದ್ದ ಈ ಮಾರ್ಜಾಲಕುಮಾರಿ ನನ್ನ ಲೋಕಲ್ ಭಾಷೆ ಕೇಳಿ ಕೆರಳಿಹೋದಳು. ಅಲ್ಲದೇ ಕೆದರಿದ ಕೂದಲು, ಕುರುಚಲು ಗಡ್ಡ, ಸೋಡಾಗ್ಲಾಸ್ ತೊಟ್ಟಿದ್ದ ನಾನು  ಬೆಕ್ಕುಗಳನ್ನು ಜೀವಂತ ಸುಟ್ಟುತಿನ್ನುವ 'ಬೆಕ್ಕು ಭಕ್ಷಕ' ಆದಿವಾಸಿಯಂತೆ ಕಂಡೆನೋ ಏನೋ, ತುದಿಗಾಲಿನಲ್ಲಿ ಸೆಟೆದು ನಿಂತು, ತನ್ನ ರೋಮಗಳನ್ನಲ್ಲಾ ನಿಮಿರಿಸಿ, ಬಾಲವನ್ನು ಈಟಿಯಂತೆ ಚೂಪಗೆ ನಿಲ್ಲಿಸಿಕೊಂಡು "ವ್ವ್.. ಈಯಾಂವ್...ಯೂಂವ್..." ಎಂದು ಕಿರುಚತೊಡಗಿದಳು. ನನ್ನ ಇಪ್ಪತ್ನಾಲಕ್ಕು ವರ್ಷಗಳ ಅನುಭವದಲ್ಲಿ ಅದುವರೆಗೆ ಬಾ ಎಂದಾಗ ಬರುವ ಬೆಕ್ಕುಗಳನ್ನು ನೋಡಿದ್ದೆ. ಬಿದ್ದು ಓಡಿಹೋಗಿರುವ ಬೆಕ್ಕುಗಳನ್ನೂ ನೋಡಿದ್ದೆ, ಆದರೆ ಹೀಗೆ 'ಪರಚು'ಯುದ್ಧಕ್ಕೆ ನಿಂತ ಬೆಕ್ಕನ್ನು ನೋಡುತ್ತಿದ್ದುದು ಇದೇ ಮೊದಲು! ಇನ್ನೊಂದು ಮಾತನಾಡಿದರೂ ಒದೆ ಬೀಳುವುದು ಖಂಡಿತವೆಂಬುದು ಅರ್ಥವಾಗಿ "ಕ್ಷಮಾ ಕೀಜಿಯೇ ಬಿಲ್ಲೀ ರಾಣೀ" ಎಂದು ಅಲ್ಲಿಂದ ಕಾಲ್ಕಿತ್ತೆ.

ಮಲೆನಾಡು ಮೂಲೆಯ ಹಳ್ಳಿಯೊಂದರಲ್ಲಿರುವ ನಮ್ಮನೆಯಲ್ಲಿ ಮೊದಲಿನಿಂದಲೂ ಇಲಿಗಳ ಹಾವಳಿ ಜಾಸ್ತಿ. ಹಗಲು ಹೊತ್ತಿನಲ್ಲಿ ಬಿಲಗಳಲ್ಲಿ, ಗೋಡೆಯ ಸಂದುಗೊಂದಿಯಲ್ಲಿ, ಗೊಬ್ಬರಗುಂಡಿಯ ಹೊಂಡಗಳಲ್ಲಿ ಅಡಗಿಕೊಂಡಿರುವ ಇವುಗಳು ರಾತ್ರೆಯಾಗುತ್ತಿದ್ದಂತೆಯೇ ಸಂಸಾರ ಸಮೇತವಾಗಿ ದರೋಡೆಗಿಳಿಯುತ್ತಿದ್ದವು. ತಡರಾತ್ರಿ ದರೋಡೆಕೋರರಾದ ಈ ಇಲಿಗಳದ್ದೊಂದು ರಗಳೆಯಾದರೆ ಇವನ್ನು ಹಿಡಿಯಲು ಬರುವ ಬೆಕ್ಕು-ಹಾವುಗಳದ್ದು ಇನ್ನೊಂದು ತೆರನಾದ ಹಾವಳಿ. ಇವುಗಳಿಗೆಲ್ಲಾ ಮಣ್ಣಿನ ಗೋಡೆಗಳು, ಪೆಟ್ಟಿಗೆ-ಟ್ರಂಕ್ ಗಳು, ಬುಟ್ಟಿ,ಗುದ್ದಲಿ,ಪಿಕಾಸಿಗಳೇ ಇತ್ಯಾದಿ ಸಾಮಾನು ಸರಂಜಾಮುಗಳಿಂದ ತುಂಬಿಹೋಗಿದ್ದ ನಮ್ಮ ಹಳೆಯ ಮನೆ ಅಮೇಜಾನ್ ಕಾಡಿನಂತೆ ಕಾಣುತ್ತಿತ್ತೋ ಏನೋ, ಇಲ್ಲಿ ಮನುಷ್ಯನೆಂಬ ಎರೆಡುಕಾಲಿನ ಸರ್ವೋಚ್ಛ ಪ್ರಾಣಿ ಇದ್ದಾನೆಂಬುದನ್ನೂ ಲೆಕ್ಕಿಸದೆ ತಮ್ಮ ಬೇಟೆಯನ್ನು ಬೆನ್ನಟ್ಟಿ ಹೊತ್ತಲ್ಲದ ಹೊತ್ತಿನಲ್ಲಿ ಒಳನುಗ್ಗಿಬಿಡುತ್ತಿದ್ದವು. ಹೀಗೆ ಬರುವವುಗಳಲ್ಲಿ ಹಾವುಗಳನ್ನು ಹೆದರಿಸಿ(ಹೆದರಿ!) ಓಡಿಸುತ್ತಿದ್ದೆವು. ಆದರೆ ಇಲಿಗಳ ಹಾವಳಿ ತಪ್ಪಿಸುವ ಈ ಮುದ್ದುಮುಖದ ಮಾರ್ಜಾಲಗಳ ಮೇಲೆ ಯಾರೂ ಕೈಮಾಡುತ್ತಿರಲಿಲ್ಲವಾದ್ದರಿಂದ ಅವುಗಳಿಗೆ ನಮ್ಮ ಮನೆ ಅಕ್ಷರಶಃ ಸ್ವತಂತ್ರ ಅಮೆಜಾನ್ ಕಾಡೇ ಆಗಿತ್ತು.

ಹೀಗೆ ಚಿಕ್ಕಂದಿನಿಂದಲೂ ತರಹೇವಾರಿ ರೀತಿಯ ಬೆಕ್ಕುಗಳನ್ನು ನೋಡುತ್ತಾ ಬಂದಿದ್ದೇನೆ. ಮನೆಯ ಸುತ್ತಮುತ್ತ ಓಡಾಡುತ್ತಿದ್ದ ಬೆಕ್ಕುಗಳಿಗೆ ಅವುಗಳ ಬಣ್ಣ, ಗಾತ್ರ, ರೂಪಗಳಿಗನುಗುಣವಾಗಿ ಅಪ್ಪ ಒಂದೊಂದು ಹೆಸರಿಡುತ್ತಿದ್ದರು. ಮೈಯ್ಯ ಹೆಚ್ಚಿನ ಭಾಗ ಬಿಳಿಯಾಗಿದ್ದು ಮಧ್ಯೆಮಧ್ಯೆ ಕಂದು ಹಾಗೂ ಕೆಂಚು ಮಿಶ್ರಿತ ರೋಮಗಳಿರುವ ದೈತ್ಯಗಾತ್ರದ 'ಪಾಂಡು ಬೆಕ್ಕು', ಪ್ರತೀ ಆರು ತಿಂಗಳಿಗೊಮ್ಮೆ ಬಸುರಿಯಾಗಿ, 'ಬಯಕೆ' ತೀರಿಸಿಕೊಳ್ಳುವುದಕ್ಕೆ ಅಡಿಗೆಮನೆಯಲ್ಲಿ ಕಳ್ಳತನಮಾಡಿ, ಬಸುರಿಯೆಂಬ ಕಾರಣಕ್ಕೆ ಬೀಳಬೇಕಾದ ಒದೆಗಳಿಂದ ಬಚಾವಾಗುತ್ತಿದ್ದ 'ಬಿಲ್ಲಿ ಬೆಕ್ಕು', ಕಂದು-ಪಾಚಿ ಬಣ್ಣ ಮಿಶ್ರಿತ 'ಪಾಚು ಬೆಕ್ಕು', ಪಕ್ಕದ ಗೌಡರ ಮನೆಯಲ್ಲಿ ನಾನ್ವೆಜ್ ತಿಂದು ದಷ್ಟಪುಷ್ಟವಾಗಿ ಬೆಳೆದ ದೈತ್ಯ 'ಕೆಂಚ ರಾಕ್ಷಸ' ಇತ್ಯಾದಿ. ಇವುಗಳಲ್ಲಿ ಸಂಪೂರ್ಣ ಡಿಫರೆಂಟಾಗಿರುವವೆಂದರೆ ದೈತ್ಯ ಪಾಂಡುಬೆಕ್ಕುಗಳು. ಪಾಂಡುಬೆಕ್ಕುಗಳೆಂದರೆ ಯಾರ ಕೈಗೂ ಸಿಗದೆ ಪೋಲಿ ಅಲೆಯುವ 'ಮಾಳ'(ಗಂಡು)ಗಳು. ಶುದ್ಧ ಮಾಂಸಾಹಾರಿಗಳಾದ ಅವುಗಳ ಎದುರೇ ಹಾಲಿನ ಬಟ್ಟಲಿಟ್ಟುಹೋದರೂ ಮುಟ್ಟಿಮೂಸುತ್ತಿರಲಿಲ್ಲ. ಎಷ್ಟೇ ಮುದ್ದಾಗಿ ಬಾಬಾ.. ತ್ಚುತ್ಚು.. ಮಿಯಾಂವ್.... ಎಂದು ಪ್ರೀತಿಯಿಂದ ಕರೆದರೂ ಹತ್ತಿರ ಬರುತ್ತಿರಲಿಲ್ಲ. ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಕಣ್ಣಿಗೆ ಬೀಳುತ್ತಿದ್ದ ಈ ದೈತ್ಯ ಬೆಕ್ಕುಗಳ ಸಾಮರ್ಥ್ಯದ ಮೇಲೆ ನನಗೊಂದು ವಿಧವಾದ ಅಭಿಮಾನ. ಇವೇ ಪ್ರಪಂಚದ ಅತೀ ಶಕ್ತಿಶಾಲಿ ಬೆಕ್ಕುಗಳು ಎನ್ನುವ ನಂಬಿಕೆ. ತಾವು ನೆಲೆನಿಂತ ಸೀಮೆಯಲ್ಲಿ ಮತ್ತೊಂದು ಗಂಡುಬೆಕ್ಕು ಬರುವುದನ್ನು ಇವು ಸುತರಾಂ ಸಹಿಸುತ್ತಿರಲಿಲ್ಲ. ತಮ್ಮ ಇಲಾಖೆಯಲ್ಲಿ ಅಪ್ಪಿತಪ್ಪಿ ಮತ್ಯಾವುದೇ ಮಾಳಬೆಕ್ಕಿನ ನೆರಳು ಕಂಡರೂ ಮುಗಿದೇ ಹೋಯಿತು, ಅದನ್ನು ಅಲ್ಲೇ ಅಡ್ಡಹಾಕಿ, ತಮ್ಮ ಬಲವಾದ ಚೋಟಿನಿಂದ(ಪಂಜ) ಅದರ ಕೆನ್ನೆಗೆ ನಾಲ್ಕು ಬಾರಿಸಿ, ತನ್ನ ಮ್ಯಾಂವ್ ಭಾಷೆಯಲ್ಲಿ "ಇನ್ನೊಮ್ಮೆ ಇಲ್ಲಿಗೆ ಬಂದರೆ ಹುಷಾರ್!" ಎಂದು ಊರಿಗೆಲ್ಲಾ ಕೇಳುವಂತೆ ಎಚ್ಚರಿಕೆ ಕೊಟ್ಟು ದೂರ ಅಟ್ಟುತ್ತಿದ್ದವು. ಆದರೆ ಕೆಲವೊಮ್ಮೆ ಎದುರಾಳಿಯೂ ಪ್ರಬಲನಾಗಿದ್ದಾಗ ಈ ಹೋರಾಟ ಅಷ್ಟು ಸುಲಭವಾಗಿ ಮುಗಿಯುತ್ತಿರಲಿಲ್ಲ. ಸ್ಪರ್ಧಿ-ಪ್ರತಿಸ್ಪರ್ಧಿಗಳೆರೆಡೂ ಎತ್ತರದ ಗೋಡೆಯ ಮೇಲೋ, ಹಂಚು ಮಾಡಿನ ಮೇಲೋ ಎದುರುಬದುರಾಗಿ, ನಿಮಿಷಗಟ್ಟಲೆ ಕದಲದಂತೆ ನಿಂತು ಒಂದನ್ನೊಂದು ಬೈದುಕೊಳ್ಳುತ್ತಿದ್ದವು. "ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ...." ಎಂದು ಮಾತ್ರಾಗಣಸಹಿತ ವಾಕ್ಯುದ್ಧ ನಡೆಸುತ್ತಿದ್ದವೋ, "ಇದು ಈ ಅರ್ಮುಗಂ ಕೋಟೆ ಕಣೋ" ಎಂದು ಮಾಸ್ ಡೈಲಾಗ್ ಹೊಡೆಯುತ್ತಿದ್ದವೋ ಗೊತ್ತಿಲ್ಲ, ಹುಲುಮಾನವರಾದ ನಮಗೆ ಕೇಳುತ್ತಿದ್ದುದು 'ಮೀsssಯಾಂವ್ssss' ಎನ್ನುವ ಕಿರುಚಾಟ ಮಾತ್ರ! ಕೊನೆಗೆ ಅಪ್ಪನೋ ಅಮ್ಮನೋ ಹೋಗಿ, ಭೀಮ-ದುರ್ಯೋಧನರಂತೆ ತೊಡೆತಟ್ಟಿ ('ಪಂಜ' ತಟ್ಟಿ!) ನಿಂತಿರುವ ಇವುಗಳ ಮೇಲೇ ಕಲ್ಲನ್ನೋ, ನೀರನ್ನೋ ಎಸೆದಾಗ ಬೆಚ್ಚಿ ಕೆಳಗೆ ಜಿಗಿದು ಒಂದನ್ನೊಂದು ಬೆನ್ನಟ್ಟುತ್ತಾ ರಾತ್ರೆಯ ಕತ್ತಲಲ್ಲಿ ಅಂತರ್ಧಾನವಾಗುತ್ತಿದ್ದವು.

ಅದೇಕೋ ಗೊತ್ತಿಲ್ಲ, ರೂಪದಲ್ಲಿ ಹುಲಿಯ ಹತ್ತಿರದ ಸಂಬಂಧಿಗಳಂತೆ ಕಾಣುವ ಈ ಬೆಕ್ಕುಗಳ ಮೇಲೆ ಮೊದಲಿನಿಂದಲೂ ನನಗೊಂದು ತೆರನಾದ ಪ್ರೀತಿತುಂಬಿದ ಕುತೂಹಲ. ಎಲ್ಲೇ ಪುಟಾಣಿ ಬೆಕ್ಕುಮರಿ ಕಂಡರೂ ಅದನ್ನು ಮನೆಗೆ ಒಯ್ಯೋಣವೆಂದು ನಾನು ಹಠ ಹಿಡಿಯುವುದು, ಅಮ್ಮ/ಅಪ್ಪ ಗದರಿಸಿ ಸುಮ್ಮನಾಗಿಸುವುದು ನಡೆಯುತ್ತಲೇ ಇರುತ್ತಿತ್ತು. ನಮ್ಮನೆಗೆ ತಾನಾಗೇ ಬಂದು ಸೇರಿಕೊಂಡಿದ್ದ ಪಾಚುಬೆಕ್ಕು ಅಮ್ಮ ಬೆಳಗ್ಗೆ ಏಳುತ್ತಿದ್ದಂತೆಯೇ ಅದೆಲ್ಲಿಂದಲೋ ಓಡಿಬಂದು ಮ್ಯಾಂವ್ ಮ್ಯಾಂವ್ ಎನ್ನುತ್ತಾ, ಅವಳ ಕಾಲಿಗೆ ತನ್ನ ನುಣುಪಾದ ಮೈಯ್ಯನ್ನು ಸವರುತ್ತಾ ಹಾಲು ಹಾಕುವಂತೆ ಪೂಸಿಹೊಡೆಯುವುದನ್ನೂ, ತನಗೆಂದೇ ಮೀಸಲಿಟ್ಟ ಬಟ್ಟಲಿಗೆ ಹಾಕಿದ ಹಾಲನ್ನು ಜಗತ್ತಿನ ಇನ್ಯಾರಿಗೂ ಕಾಣದಂತೆ(!) ಕಣ್ಮುಚ್ಚಿಕೊಂಡು ಕುಡಿಯುವುದನ್ನೂ ನಾನು ಕುತೂಹಲದಿಂದ ನೋಡುತ್ತಿದ್ದೆ. ಕೆಲವೊಮ್ಮೆ ಹಠಮಾಡಿ ನಾನೇ ಬಟ್ಟಲಿಗೆ ಹಾಲು ಹಾಕುತ್ತಿದ್ದೆ. ಅದು ಬಾಲ ನೆಟ್ಟಗೆ ಮಾಡಿಕೊಂಡು ಏರುದನಿಯಲ್ಲಿ ಕೂಗುತ್ತಾ ಹಾಲಿನ ಲೋಟ ಹಿಡಿದ ನನ್ನನ್ನು ಹಿಂಬಾಲಿಸಿಕೊಂಡು ಓಡಿ ಬರುವುದನ್ನು ನೋಡುವುದೇ ನನಗೊಂದು ಹೆಮ್ಮೆ. ತನ್ನ ಬಟ್ಟಲಿಗೆ ಹಾಕಿದ ಹಾಲನ್ನದು ಕಣ್ಮುಚ್ಚಿಕೊಂಡು ಚಪ್ಪರಿಸುವಾಗ ಹಿತವಾಗಿ ಮೈದಡವುತ್ತಾ ಅದರ ಸ್ನೇಹ ಸಂಪಾದಿಸಲು ಪ್ರಯತ್ನಿಸುತ್ತಿದ್ದೆ. ಅಡಿಗೆಮನೆಯಲ್ಲಿ ನಾವು ಸಾಲಾಗಿ ಕುಳಿತು ತಿಂಡಿ ತಿನ್ನುವಾಗ ತಾನೂ ಸಾಲಿನ ಕೊನೆಯಲ್ಲಿ ಕಾಲು ಮಡಿಚಿಕೊಂಡು ಕುಳಿತು, ನಮ್ಮ ತಟ್ಟೆಯಲ್ಲಿದ್ದ ತಿಂಡಿಯನ್ನು ಆಸೆಯಿಂದ ದಿಟ್ಟಿಸುತ್ತ, ಏನಿಲ್ಲವೆಂದರೂ ಎರೆಡು-ಮೂರು ದೋಸೆ/ರೊಟ್ಟಿ/ಚಪಾತಿಗಳನ್ನು ಹೊಟ್ಟೆಗಿಳಿಸುತ್ತಿತ್ತು. ಹಸಿವಾದಾಗ ಜಗತ್ತಿನ ಅತ್ಯಂತ ಸಾಧು ಪ್ರಾಣಿಯಂತೆ ಫೋಸ್ ಕೊಡುತ್ತಾ, ವಿನಮ್ರ ದನಿಯಲ್ಲಿ ಕೂಗುತ್ತಾ ಬಳಿಗೆ ಬರುತ್ತಿದ್ದ ಅದಕ್ಕೆ ಊಟವಾಗುತ್ತಿದ್ದಂತೆಯೇ ಆಟವಾಡವ ಮೂಡ್ ಬಂದು ಒಂದೋ ಅಡಿಗೆಮನೆಯ ಹೊಸಿಲಿನ ಮೇಲೆ ಕುಳಿತು ಆಚೀಚೆ ಓಡಾಡುವರ ಕಾಲನ್ನು ತನ್ನ ಪಂಜದಿಂದ ಹಿಡಿದುಕೊಂಡು ಕಚ್ಚುತ್ತಿತ್ತು; ಇಲ್ಲಾ ಅಂಗಳದ ಕಟ್ಟೆಯಮೇಲೋ, ಹುಲ್ಲುಗೊಣಬೆಯ ಮೇಲೋ ಕುಳಿತು ಮುಖತೊಳೆಯಲಾರಂಭಿಸುತ್ತಿತ್ತು.  ಆಗೇನಾದರೂ ನಾನು ಹತ್ತಿರ ಹೋದರೆ ಕುಳಿತಲ್ಲೇ ಅಂಗಾತ ಬಿದ್ದುಕೊಂಡು ಗುಲಾಬಿ ಮುಳ್ಳುಗಳಂತಿರುವ ಉಗುರುಗಳಿಂದ ಕೂಡಿದ ತನ್ನ ಕೈಯ್ಯನ್ನು ಬೀಸುತ್ತಾ ಆಟಕ್ಕೆ ಬರುವಂತೆ ಸವಾಲೆಸೆಯುತ್ತಿತ್ತು. ಅದರ ಸವಾಲನ್ನು ಸ್ವೀಕರಿಸಿದ ನಾನು ತೆಂಗಿನ ಗರಿಯನ್ನೋ, ಹಿಡಿಕಡ್ಡಿಯನ್ನೋ ಹಿಡಿದು ಅದರ ಮೈ-ಮೂತಿಗಳಿಗೆಲ್ಲಾ ತಾಗಿಸಿದರೆ, ತನ್ನೆರೆಡೂ ಪುಟಾಣಿ ಪಂಜಗಳಿಂದ ಆ ತೆಳ್ಳಗಿನ ಕಡ್ಡಿಯನ್ನು ಹಿಡಿದು ಬಾಯಿಗೆ ಹಾಕಿಕೊಳ್ಳಲೆತ್ನಿಸುತ್ತಾ ನೆಲದ ತುಂಬಾ ಹೊರಳಾಡುತ್ತಿತ್ತು. ಅದು ಉಳುಚಿಹೋಗುವ ಕಡ್ಡಿಯನ್ನು ಹಿಡಿದುಕೊಂಡು ತೆರೆದ ಬಾಯಿಯೊಳಕ್ಕೆ ತುಂಬಿಕೊಳ್ಳುವುದು, ನಾನು ಆ ಕಡ್ಡಿಯನ್ನು ತಪ್ಪಿಸಿ ಮಲಗಿರುವ ಅದರ ಮೃದುವಾದ ಹೊಟ್ಟೆ-ಎದೆಭಾಗಕ್ಕೆ ಅದೇ ಕಡ್ಡಿಯಿಂದ ಕಚಗುಳಿ ಕೊಡುವುದು, ಕಚಗುಳಿ ಇಡಿಸಿಕೊಂಡೂ ನಗಲಾಗದ ಅದು ಮಲಗಿದಲ್ಲೇ ಪಲ್ಟಿ ಹೊಡೆಯುವುದು... ಹೀಗೆ ಮೋಜಿನಿಂದ ಸಾಗುತ್ತಿತ್ತು ನಮ್ಮ ಆಟ.

ಹೀಗೆ ಪ್ರೀತಿಯಿಂದ ಸಾಕಿದ ಬೆಕ್ಕಿನ ಸಂಗ-ಸ್ನೇಹ ಎಷ್ಟು ಖುಷಿ ಕೊಡುತ್ತದೆಯೋ, ಅವುಗಳ ಸಾವು ಅಷ್ಟೇ ನೋವುಂಟುಮಾಡುತ್ತದೆ. ಬೆಕ್ಕೊಂದು ಸರಾಸರಿ ಹತ್ತರಿಂದ ಹನ್ನೆರೆಡು ವರ್ಷ ಬದುಕಬಲ್ಲದೆಂಬ ಅಂದಾಜಿದೆಯಾದರೂ ಆ ಕಾಲಕ್ಕೆ ನಾವು ಸಾಕಿದ್ದ ಯಾವುದೇ ಬೆಕ್ಕು ಆರೇಳು ವರ್ಷಕ್ಕಿಂತ ಹೆಚ್ಚು ಬದುಕಿದ್ದನ್ನು ನಾನು ನೋಡಿಲ್ಲ. ನಾಯಿಗಳ ಬಾಯಿಗೆ ಸಿಕ್ಕಿ, ತಮ್ಮದೇ ಕುಲಬಾಂಧವರಿಂದ ಕಚ್ಚಿಸಿಕೊಂಡು, ವಾಹನಗಳಡಿಗೆ ಅಪ್ಪಚ್ಚಿಯಾಗಿ.. ಹೀಗೇ ಬೆಕ್ಕುಗಳ ಬದುಕು ಒಂದಿಲ್ಲೊಂದು ದುರಂತ ಅಂತ್ಯ ಕಾಣುವುದೇ ಹೆಚ್ಚು. ಹಳ್ಳಿಗಳಲ್ಲಂತೂ ಎಲ್ಲೆಂದರಲ್ಲಿ ಓಡಾಡುವ ಇವುಗಳು ಹೇಳದೇ ಕೇಳದೇ ನಾಪತ್ತೆಯಾಗಿಬಿಡುವುದೇ ಜಾಸ್ತಿ. ಹೀಗಾದಾಗೆಲ್ಲ ಎಲ್ಲೇ, ಯಾವುದೇ ಬೆಕ್ಕಿನ 'ಮ್ಯಾಂವ್' ಕೇಳಿಸಿದರೂ ಒಂದು ಕ್ಷಣ ಅದು ನಮ್ಮ ಮುದ್ದಿನ ಬೆಕ್ಕೇ ಇರಬಹುದೇನೋ ಅನಿಸುವುದು ಸಹಜವಾದರೂ ನನ್ನ ಪ್ರಕಾರ ಪ್ರೀತಿಯಿಂದ ಸಾಕಿದ ಬೆಕ್ಕೊಂದು ಕಣ್ಣೆದುರೇ ಮೃತವಾಗುವುದಕ್ಕಿಂತ ಹೀಗೇ ನಾಪತ್ತೆಯಾಗಿಹೋಗುವುದೇ ಮೇಲು.  ಸಾಕಿದ ಬೆಕ್ಕೊಂದು ನಾಪತ್ತೆಯಾದಾಗ "ಮಾಂಸದ ಆಸೆಗೆ ಅಲ್ಲೆಲ್ಲೋ ಯಾರದೋ ಮನೆಗೆ ಹೋಗಿ ಸೇರಿಕೊಂಡಿದೆಯಂತೆ" ಅಂತ ನಮ್ಮನಮ್ಮಲ್ಲೇ ಮಾತನಾಡಿಕೊಂಡು ಸಮಾಧಾನಮಾಡಿಕೊಳ್ಳಬಹುದು. ಚಿಕ್ಕಂದಿನಲ್ಲಿ ಶಾಲೆಯಿಂದ ಮರಳುವ ನನಗಾಗಿ ಬಾಗಿಲಲ್ಲೇ ಕಾದುಕುಳಿತಿರುತ್ತಿದ್ದ, ಓದುತ್ತಾ ಕುಳಿತ ನನ್ನ ತೊಡೆಯೇರಿ ಮುದ್ದಾಗಿ ನಿದ್ರಿಸುತ್ತಿದ್ದ, ಮನೆಯೊಳಗೆ ಹರಿದು ಬರುತ್ತಿದ್ದ ಹಾವನ್ನು ಅಡ್ಡಹಾಕಿ ತಡೆದು ಶೌರ್ಯ ಮೆರೆದಿದ್ದ, ಬಾಲ ಎತ್ತಿಕೊಂಡು ಮ್ಯಾಂವ್ ಮ್ಯಾಂವ್ ಎಂದು ಮನೆಯ ತುಂಬಾ ಓಡಾಡುತ್ತಾ ಎಲ್ಲರ ಪ್ರೀತಿಪಾತ್ರವಾಗಿದ್ದ ಪಾಚುಬೆಕ್ಕು ಕಾರಣವೇ ಗೊತ್ತಾಗದಂತೆ ಅನ್ನಾಹಾರ ಬಿಟ್ಟು ಕೃಶವಾಗುತ್ತಾ ಆಗುತ್ತಾ ಕೊನೆಗೊಂದು ದಿನ ಅಪ್ಪನ ಕೈಯ್ಯಲ್ಲಿ ಗಂಗಾಜಲ ಬಿಡಿಸಿಕೊಂಡು ಇಹಲೋಕ ತ್ಯಜಿಸಿದ ಕ್ಷಣ ನೆನಪಾದಾಗ ಈಗಲೂ ಸಂಕಟವಾಗುತ್ತದೆ. ಮೊನ್ನೆಮೊನ್ನೆಯವರೆಗೂ ಮುದ್ದಾಗಿ ಓಡಾಡಿಕೊಂಡಿದ್ದ ಆ ಪುಟ್ಟ ಜೀವ ಸಾವಿನ ಸಂಕಟ ತಾಳಲಾರದೆ ಕಟ್ಟಕಡೆಯ ಬಾರಿಗೆಂಬಂತೆ ಕ್ಷೀಣದನಿಯಲ್ಲೊಮ್ಮೆ ನರಳಿ ನಿಶ್ಚಲವಾಗಿಹೋದಾಗ ಮನೆಯವರೆಲ್ಲರ ಕಣ್ಣಲ್ಲೂ ನೀರು. ಕೊನೆಗೆ ಹಿತ್ತಲಲ್ಲೊಂದು ಗುಂಡಿತೋಡಿ ಹೂಳುವ ಕ್ಷಣದಲ್ಲಿ ತೆರೆದೇ ಇದ್ದ ಅದರ ಮೃತ ಕಣ್ಣುಗಳಲ್ಲಿ ಕಂಡ ಆ ಯಾತನೆಯ ಚಿತ್ರ ಇಂದಿಗೂ ಮನಸ್ಸಿನಲ್ಲೇ ಉಳಿದುಹೋಗಿದೆ.

ನಾಯಿಗಳಷ್ಟಲ್ಲದಿದ್ದರೂ ಬೆಕ್ಕುಗಳೂ ಒಂದು ಮಟ್ಟಕ್ಕೆ ಭಾವುಕ ಜೀವಿಗಳು. ಮುಪ್ಪಡರಿ, ಸರಿಯಾಗಿ ನಡೆಯಲೂ ಆಗದೇ, ರೋಮವುದುರಿ ಮೈಯ್ಯೆಲ್ಲಾ ದದ್ದರಿಸಿಹೋಗಿ, ಎಲ್ಲರಿಂದ ಕಡೆಗಣಿಕೆಗೊಳಪಟ್ಟಿದ್ದ ಗಂಡು ಬೆಕ್ಕೊಂದರೆಡೆಗೆ ಅದರ ಯೌವನದ ದಿನಗಳ ಸಂಗಾತಿಯಾಗಿದ್ದ ಹೆಣ್ಣು ಬೆಕ್ಕೊಂದು ತೋರಿಸಿದ್ದ ಪ್ರೀತಿಯನ್ನು ಕಣ್ಣಾರೆ ನೋಡಿದ ಮೇಲೇ ನನಗೆ ಹೀಗನಿಸಿದ್ದು. ಅದೊಂದು ಸುಡುಸುಡು ಬಿಸಿಲಿನ ಮಧ್ಯಾಹ್ನ 'ಅವಳು' ಈಗಷ್ಟೇ ಊಟ ಮುಗಿಸಿ ಅಂಗಳದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತ ಮಲಗಿದ್ದಳು. ಇದ್ದಕ್ಕಿದ್ದಂತೆ ಹುಲ್ಲುಗೊಣಬೆಯಲ್ಲಿ ಏನೋ ಸರಸರ ಸರಿದಾಟ. ಅವಳು ಕಾಲುಗಳ ಮೇಲಿಟ್ಟುಕೊಂಡಿದ್ದ ತಲೆಯನ್ನು ಫಕ್ಕನೆ ಎತ್ತಿ ಅತ್ತ ನೋಡಿದರೆ ಅಲ್ಲಿದ್ದುದು ಜೀವವೇ ಭಾರವಾದಂತೆ ಆಯಾಸದ ಹೆಜ್ಜೆಯಿಡುತ್ತಾ ಬರುತ್ತಿದ್ದ ತನ್ನ ಮುದಿಗೆಳೆಯ. ಅದೇನಾಯಿತೋ ಏನೋ, ಅವಳು ಮರುಕ್ಷಣವೇ ಮಲಗಿದಲ್ಲಿಂದ ಎದ್ದು ನೇರ ಅಡಿಗೆಮನೆಯ ಒಳಗೋಡಿದಳು‌. ಅಲ್ಲಿದ್ದ ನನ್ನಮ್ಮನೊಂದಿಗೆ ಜಗಳಾಡಿ, ಕೂಗಿ, ಗಲಾಟೆಮಾಡಿ, ತಾನು ಈಗಷ್ಟೇ ಕುಡಿದು ಖಾಲಿ ಮಾಡಿದ್ದ ಬಟ್ಟಲಿಗೆ ಮತ್ತೊಂದಿಷ್ಟು ಹಾಲು ಹಾಕಿಸಿಕೊಂಡಳು. ಆದರೆ ಬಟ್ಟಲಿಗೆ ಹಾಲುಬಿದ್ದ ಮರುಕ್ಷಣವೇ ನೋಡುತ್ತಿದ್ದ ನಾನು-ಅಮ್ಮ ಅಚ್ಚರಿಪಡುವಂತೆ ಒಂದು ತೊಟ್ಟು ಹಾಲನ್ನೂ ಕುಡಿಯದೇ ತಾನು ಇಷ್ಟೊತ್ತು ಗಲಾಟೆ ಮಾಡಿದ್ದೇ ಸುಳ್ಳೇನೋ ಎಂಬಂತೆ ಹೊರನಡೆದು, ಮೊದಲು ಮಲಗಿದ ಜಾಗದಲ್ಲೇ ಕಾಲುಚಾಚಿ ಮಲಗಿಬಿಟ್ಟಳು! ನೋಡನೋಡುತ್ತಿದ್ದಂತೆಯೇ ಅಂಗಳದಲ್ಲಿದ್ದ ಅವಳ ಮುದಿಗೆಳೆಯ ಅದೇ ಆಯಾಸದ ಭಾರ ಹೆಜ್ಜೆಗಳನ್ನಿಡುತ್ತಾ ಒಳಹೊಕ್ಕು ಬಟ್ಟಲಿನಲ್ಲಿದ್ದ ಹಾಲು ಕುಡಿಯತೊಡಗಿದ! ನನಗಂತೂ ಕಣ್ಣು ಹೊರಬರುವಷ್ಟು ಅಚ್ಚರಿ. ನಾವೆಲ್ಲರೂ ಕಡೆಗಣಿಸಿದ್ದ, ಸಾವಿಗೆ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿದ್ದ ಆ ಮುದಿಬೆಕ್ಕು.. ಅದು ತನಗೆ ಹಸಿವಾಗಿದೆಯೆಂದಾಗಲೀ, ಹಾಲು ಹಾಕಿಸೆಂದಾಗಲೀ ಒಂದು ಮಾತೂ ಬಾಯ್ಬಿಟ್ಟು ಕೇಳಿರಲಿಲ್ಲ. ಅದ್ಯಾವ ಮೂಕ ಸಂವೇದನೆಯೋ, ಭಾವ ಸಂವಹನೆಯೋ.. ನೂರಾರು ಭಾಷೆಗಳ, ಸಾವಿರಾರು ಪದಗಳ ಮೀರಿದ ಮಾತುಕತೆಯೊಂದು ಅಲ್ಲಿ ಒಂದು ಸಣ್ಣ ಇಶಾರೆಯೂ ಇಲ್ಲದಷ್ಟು ಮೌನದಲ್ಲಿ ನಡೆದುಹೋಗಿತ್ತು.

ಹೇಳುತ್ತಾ ಹೋದರೆ ಮಾರ್ಜಾಲ ಲೋಕದಲ್ಲಿ ಇಂತಹ ಹತ್ತಾರು ಭಾವುಕ ಸಂಗತಿಗಳಿವೆ‌. ತಾನಿಲ್ಲದ ಹೊತ್ತಿನಲ್ಲಿ ಧಾಳಿಮಾಡಿದ 'ಮಾಳ' ಬೆಕ್ಕೊಂದಕ್ಕೆ ಬಲಿಯಾದ ತನ್ನ ಎರೆಡುವಾರ ಪ್ರಾಯದ ಮೂರು ಪುಟಾಣಿ ಮರಿಗಳ ಶವವನ್ನು ತೋರಿಸುತ್ತಾ, ನೋಡಲು ಬಂದವರೆಲ್ಲರ ಕಾಲಿಗೆ ಸುತ್ತುಬರುತ್ತಾ, ಅರ್ಥವಾಗದ ಅದ್ಯಾವುದೋ ಕೂಗಿನಲ್ಲಿ ರೋಧಿಸುತ್ತಿದ್ದ ತಾಯಿಬೆಕ್ಕಿನ ನೋವು ತುಂಬಿದ ಕೂಗು ಇಂದಿಗೂ ನೆನೆಪಿನಲ್ಲುಳಿದಿದೆ.

                 *****************

ತಮ್ಮ ಕುಲಬಾಂಧವರನ್ನೆಲ್ಲ ಬಿಟ್ಟು ಮನುಷ್ಯನೊಂದಿಗೆ ರಾಜಿಮಾಡಿಕೊಂಡು, ಮುದ್ದಿಸಿಕೊಂಡು ಬದುಕುವ ಈ ಕುಡಿಮೀಸೆಯ ಮಾರ್ಜಾಲಗಳ ಒಡನಾಟ ಬೆಂಗಳೂರಿಗೆ ಬಂದಮೇಲೆ ನಿಂತೇಹೋಗಿದೆ. ಇಲ್ಲಿ ನಾಲಿಗೆಗೆ ಉಚ್ಛರಿಸಲಿಕ್ಕೂ ಕಷ್ಟವಾಗುವ ತಳಿಗಳಿಂದ ಗುರುತಿಸಲ್ಪಡುವ, ಡ್ಯಾನಿ, ಮಾರ್ಕೋ, ಸ್ಯಾಮ್ ಮುಂತಾದ ಮನುಷ್ಯರಿಗಿಂತಲೂ ಚಂದದ ಹೆಸರುಗಳಿಂದ ಕರೆಯಿಸಿಕೊಳ್ಳುವ, ಉದ್ದುದ್ದ ರೋಮದ, ಥಟ್ಟನೆ ನೋಡಿದರೆ ವಿಗ್ ಹಾಕಿಕೊಂಡ ಕುಳ್ಳ ನಾಯಿಯಂತೆ ಕಾಣುವ, ತರಹೇವಾರಿ ರೂಪ-ಆಕಾರಗಳ, ತನ್ನ ಒಂದು ಚಿಕ್ಕ ಪಲ್ಟಿಗೂ ಮನೆಯವರೆಲ್ಲರಿಂದ ಶಭಾಶ್ಗಿರಿಯನ್ನು ಪಡೆಯುವ ಮುದ್ದು ಬೆಕ್ಕಣ್ಣಗಳನ್ನು ನೋಡುವಾಗ ಬಾಲ್ಯದ ಬಿಲ್ಲಿ, ಪಾಚು, ಪಾಂಡುಗಳೆಲ್ಲ ಮತ್ತೆ ಜೀವಂತವಾಗಿ ಮೀಸೆ ಕುಣಿಸಿದಂತಾಗುತ್ತದೆ. ಮುಂದೊಂದು ದಿನ ಮತ್ತದೇ ಹಳ್ಳಿ ಜೀವನಕ್ಕೆ ಮರಳಿ, ಹೊಸಿಲ ಮೇಲೆ ಕುಳಿತ ಬೆಕ್ಕನ್ನು ಬೊಗಸೆಯಲ್ಲಿ ಹಿಡಿದು ಮುದ್ದಿಸುವೆನೆಂಬ ಕನಸೊಂದು ಹೊಸತಾಗಿ ಅರಳುತ್ತದೆ.

[ಈ ಬರಹವು ಕೆಲವೊಂದು ಕತ್ತರಿ ಪ್ರಯೋಗಗಳೊಂದಿಗೆ ದಿನಾಂಕ 24-9-2017ರ  ವಿಶ್ವವಾಣಿ ವಿರಾಮ ಸಾಪ್ತಾಹಿಕದ 'ಮಾರ್ಜಾಲ ಮೋಹ' ಅಂಕಣದಲ್ಲಿ 'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ' ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿದೆ.]

ಸೋಮವಾರ, ಆಗಸ್ಟ್ 14, 2017

ಮಳೆಗಾಲ ಬಂತೋ ಮಲೆನಾಡ ಶಾಲೆಗೆ...



ಅದು ಮೇ ತಿಂಗಳ ಕೊನೆಯ ವಾರ. ಪುಟ್ಟು ಗೋಡೆಗೆ ಎಸೆಯಲ್ಪಟ್ಟು ಒಲ್ಲದ ಮನಸ್ಸಿನಿಂದ ಪುಟಿದು ಬರುತ್ತಿರುವ ಚೆಂಡಿಗೆ ಅಷ್ಟೇ ಒಲ್ಲದ ಮನಸ್ಸಿನಿಂದ ಬ್ಯಾಟು ತಾಗಿಸುತ್ತಾ ಅಂಗಳದಲ್ಲಿ ನಿಂತಿದ್ದಾನೆ. ಇಷ್ಟು ದಿನ ಅವನ ಪುಂಡಾಟ, ಚೇಷ್ಟೆ, ಗಲಾಟೆಗಳಿಗೆ ಜೊತೆಯಾಗಿದ್ದ ಅತ್ತೆ-ಮಾವ-ಚಿಕ್ಕಮ್ಮನ ಮಕ್ಕಳೆಲ್ಲಾ ಕೆಲವೇ ನಿಮಿಷದ ಕೆಳಗೆ ಬಸ್ಸು ಹತ್ತಿ ತಂತಮ್ಮ ಊರಿಗೆ ಹೊರಟುಹೋಗಿದ್ದಾರೆ. ಈ ಬೇಸರ ಒಂದುಕಡೆಯಾದರೆ ಕಳೆದೆರೆಡು ತಿಂಗಳಿಂದ ಸ್ವತಂತ್ರವಾಗಿ ಹಾರಿ, ಕುಣಿದು, ಕುಪ್ಪಳಿಸುವಂತೆ ಮಾಡಿದ್ದ ಬೇಸಿಗೆ ರಜೆ ಇನ್ನು ಮೂರೇ ಮೂರು ದಿನದಲ್ಲಿ ಮುಗಿದು ಹೋಗುತ್ತದೆನ್ನುವ ಸಂಕಟ ಇನ್ನೊಂದುಕಡೆ. ಜೊತೆಗೆ ದಪ್ಪ ಮೀಸೆಯ ಸಿದ್ರಾಮ ಮೇಷ್ಟ್ರು ರಜೆಯಲ್ಲಿ ಮಾಡಲು ಕೊಟ್ಟಿದ್ದ ಹೋಂ ವರ್ಕ್ ಮುಗಿದಿಲ್ಲವೆಂಬ ಆತಂಕಬೇರೆ! ಈಗ ಜಗತ್ತಿನ ಅತ್ಯಂತ ದುಃಖತಪ್ತ ಜೀವಿಗಳಲ್ಲಿ ಪುಟ್ಟುವೂ ಒಬ್ಬ. ಆಟದ ಮೇಲಿನ ಬೇಸರ ಜಾಸ್ತಿಯಾದಾಗಲೇ ಅಮ್ಮ ಮಾಡಿದ ಹಲಸಿನಕಾಯಿ ಚಿಪ್ಸು ನೆನಪಾಗುತ್ತದೆ. ಅಡಿಗೆಮನೆಗೆ ಬಂದು ಮೆಲ್ಲಗೆ ನಾಗಂದಿಗೆಯ ಮೇಲಿರುವ ಡಬ್ಬಿಯಿಳಿಸಿ, ಒಂದಿಷ್ಟು ಚಿಪ್ಸನ್ನು ತಟ್ಟೆಗೆ ಹಾಕಿಕೊಂಡು ಕ್ರುಂಕ್ರುಂ ಶಬ್ಧಮಾಡುತ್ತಾ ತಿನ್ನುತ್ತಿದ್ದಾನೆ. ಇದ್ದಕ್ಕಿದ್ದಂತೆ ಅವನೆದುರು ನೆಲದಮೇಲೆ ಕಿಟಕಿ ಸರಳುಗಳ ನೆರೆಳಿನ ಸಮೇತ ಬೀಳುತ್ತಿದ್ದ ಬಿಸಿಲು ಮಂದವಾಗುತ್ತಾ ಆಗುತ್ತಾ ಮಾಯವೇ ಆಗಿಬಿಡುತ್ತದೆ. ಪುಟ್ಟು ಕುತೂಹಲದಿಂದ ಹೊರಬಂದು ಆಕಾಶದೆಡೆಗೆ ನೋಡುತ್ತಾನೆ. ಅದೆಲ್ಲಿದ್ದವೋ ಏನೋ, ಆಕಾಶದ ಎಂಟು ಮೂಲೆಗಳಿಂದಲೂ ಹಿರಿ,ಕಿರಿ,ಮರಿ,ಭಾರೀ ಮೋಡಗಳೆಲ್ಲಾ ನುಗ್ಗಿಬಂದು ಸೂರ್ಯನನ್ನು ಮುಚ್ಚಿಬಿಡುತ್ತವೆ. ಬಿಸಿಲಿದ್ದದ್ದೇ ಸುಳ್ಳೇನೋ ಎಂಬಷ್ಟು ಮುಸುಕು. ಗಾಳಿ ಸುಂಯ್ಯನೆ ಬೀಸುತ್ತಾ ಮಾವು, ಅಡಿಕೆ, ತೆಂಗಿನ ಮರಗಳೆಲ್ಲವೂ ಯಾರೋ ಜುಟ್ಟು ಹಿಡಿದೆಳೆಯುತ್ತಿರುವಂತೆ ಅಲ್ಲಾಡತೊಡಗುತ್ತವೆ. ನೋಡ ನೋಡುತ್ತಿದ್ದಂತೆ ಕಪ್ಪು ಮೋಡದಂಚಿನಲ್ಲಿ ಮಿಂಚೊಂದು ಫಳೀರನೆ ಹೊಳೆಯುತ್ತದೆ. ಅದರ ಬೆನ್ನಿಗೇ ಹಂಚುಮಾಡಿನ ಮೇಲೆ ದೈತ್ಯ ಕಲ್ಲುಗುಂಡೊಂದು ಉರುಳಿಬರುತ್ತಿರುವಂತಹಾ ಸದ್ದಿನ ಗುಡುಗುಡು ಗುಡುಗು! 

"ಸಿಡ್ಲು ಹೊಡೀತು. ಬಾ ಅಪ್ಪಿ ಒಳ್ಗೇ" ಅಮ್ಮ ಕೂಗುತ್ತಾಳೆ. ನಾಲ್ಕೂ ಮೊವತ್ತರಿಂದ ಏಕ್ ದಂ ಆರೂ ಮೊವತ್ತಕ್ಕೆ ಜಿಗಿದ ಹವಾಮಾನಕ್ಕೆ ಹೆದರಿದ ಪುಟ್ಟು ಒಳಗೆ ಬರಲೆಂದು ತಿರುಗುತ್ತಾನೆ.

'ಟಪ್!'

ಮೇಘಲೋಕದಿಂದುರುಳಿಬಂದ ತಂಪು ಹನಿಯೊಂದು ಪುಟ್ಟುವಿನ ಕೆನ್ನೆಯ ಮೇಲೆ ಬೀಳುತ್ತದೆ. ಅದು ಆ ವರುಷದ ಮೊದಲ ಮಳೆಹನಿ! ನೋಡುನೋಡುತ್ತಿದ್ದಂತೆ ಮೇಲೆಲ್ಲೋ ನೂರಾರು ಹಳೆಯ ಚಲನಚಿತ್ರ ನಾಯಕಿಯರು ಗೋಳೋ ಎಂದು ಅಳುತ್ತಿರುವಂತೆ ಹನಿಗಳು ಪಟಪಟನೆ ಜಾರತೊಡಗುತ್ತವೆ. ಬಿಸಿಲಿನ ಹೊಡೆತಕ್ಕೆ ಧೂಳುಧೂಳಾಗಿ ಒಡೆದುಹೋಗಿದ್ದ ಅಂಗಳದ ಮಣ್ಣೆಲ್ಲ ಮಳೆಯಲಿ ನೆಂದು, ಛಳಿಗೆ ಒಂದನ್ನೊಂದು ಗಟ್ಟಿಯಾಗಿ ತಬ್ಬಿಕೊಂಡು ಘಮ್ಮೆಂಬ ಕಂಪು ಮೂಗಿಗೆ ರಾಚುತ್ತದೆ. ಹಂಚಿನ ಮಾಡಿನ ಮೇಲೆ ಹನಿಗಳು ಬೀಳುತ್ತಿರುವ ಟಪಟಪ ಸದ್ದು ಹಂತ ಹಂತವಾಗಿ ತಾರಕಕ್ಕೇರುತ್ತದೆ. ಕತ್ತಲೆಂದು ಸ್ವಿಚ್ ಹಾಕಿದರೆ ಮಿಂಚು-ಗುಡುಗುಗಳ ಭಯಕ್ಕೆ ಕರೆಂಟು ಯಾವಾಗಲೋ ಪರಾರಿಯಾಗಿಬಿಟ್ಟಿದೆ. ಅದಿನ್ನು ಮರಳಿ ಬರುವುದು ನಾಳೆಯೋ, ನಾಡಿದ್ದೋ ಇಲ್ಲಾ ಮುಂದಿನ ವಾರವೋ ಎಂಬುದು ಸಾಕ್ಷಾತ್ ಲೈನ್ ಮ್ಯಾನ್ ಮಂಜಣ್ಣನಿಗೂ ಗೊತ್ತಿರಲಿಕ್ಕಿಲ್ಲ.

ಪುಟ್ಟು ಅಪ್ಪ-ಅಮ್ಮನ ಜೊತೆ ವರಾಂಡದಲ್ಲಿ ನಿಂತು ಮೊದಲ ಮಳೆಯಲ್ಲಿ ತೋಯುತ್ತ ನಿಂತಿರುವ ಅಂಗಳವನ್ನೂ, ಮಾಡಿನಿಂದ ಸುಂಯ್ಯನೆ ಜಾರುತ್ತಿರುವ ಹನಿಗಳನ್ನೂ, ಮಿಂದು ಶುಚಿಯಾಗುತ್ತಿರುವ ಮರಗಳನ್ನೂ ಸಂಭ್ರಮದಿಂದ ನೋಡುತ್ತಿದ್ದಾನೆ. ಇದ್ದಕ್ಕಿದ್ದಂತೆ ಹನಿಗಳ ಶಬ್ದ ಹೆಚ್ಚಿ ತಟತಟನೆ ಸದ್ದಾಗುತ್ತದೆ.

"ಅಮ್ಮಾ.. ಆನೆಕಲ್ಲು!"
ಪುಟ್ಟು ಕಿರುಚಿಕೊಳ್ಳುತ್ತಾನೆ.

"ಅದು ಆನೆಕಲ್ಲಲ್ದ ಅಪ್ಪಿ, ಆಲೀಕಲ್ಲು. ತಡೀ. ಪಾತ್ರೆ ತರ್ತಿ" ಅಮ್ಮ ಒಳಗಿನಿಂದ ಪುಟ್ಟ ಬಟ್ಟಲೊಂದನ್ನು ತರುತ್ತಾಳೆ. ಹಂಚಿನ ಮೇಲೆ, ಮಣ್ಣಿನ ಮೇಲೆ, ಅಂಗಳದ ಚಪ್ಪಡಿ ಕಲ್ಲಿನ ಮೇಲೆ ಟಪಟಪನೆ ಬೀಳುತ್ತಿರುವ ಮೋಡದ ತುಣುಕುಗಳನ್ನು ಮೂವರೂ ಆಯ್ದು ಬಟ್ಟಲಿನೊಳಕ್ಕೆ ತುಂಬಿಕೊಳ್ಳುತ್ತಾರೆ. ಹೆಕ್ಕುತ್ತಿರುವಾಗಲೇ ಮೂರ್ನಾಲ್ಕು ಆಲಿಕಲ್ಲುಗಳನ್ನು ಪುಟ್ಟು ಮೆತ್ತಗೆ, ಅಪ್ಪ-ಅಮ್ಮನಿಗೆ ಕಾಣದಂತೆ ಬಾಯಿಗೆಸೆದುಕೊಳ್ಳುತ್ತಾನೆ. ಕರೆಂಟಿಲ್ಲದ ರಾತ್ರಿ ಚಿಮಣಿ ದೀಪದ ಬೆಳಕಲ್ಲಿ ಊಟ ಮುಗಿಸಿ ಬೇಗನೆ ಮಲಗಿಕೊಳ್ಳುತ್ತಾರೆ. ಮನೆಯೆದುರು ಗುಡ್ಡದ ನೀರೆಲ್ಲ ಮೇಲಿಂದ ಧುಮುಕುತ್ತಿರುವ ಧಡಧಡ ಸದ್ದು ಕೇಳಿಸಿಕೊಳ್ಳುತ್ತಲೇ ಪುಟ್ಟು ನಿದ್ರೆಗೆ ಜಾರುತ್ತಾನೆ.

                       *************

ಶಾಲೆ ಆರಂಭವಾಗಿದೆ. ಬೆನ್ನಿಗೆ ಬ್ಯಾಗು ಏರಿಸಿಕೊಂಡು ಅಪ್ಪ ತಂದುಕೊಟ್ಟ, ಗುಂಡಿ ಒತ್ತಿದೊಡನೆ ಥಟ್ಟನೆ ತರೆದುಕೊಳ್ಳುವ ಬಟನ್ ಛತ್ರಿಯನ್ನು ಮೆಲ್ಲಗೆ ತಿರುಗಿಸುತ್ತಾ ಪುಟ್ಟು ಶಾಲೆಗೆ ಹೋಗುತ್ತಿದ್ದಾನೆ. ರಸ್ತೆಯ ಎರೆಡೂ ಬದಿ ತೋಡಿನಲ್ಲಿ ಹರಿಯುತ್ತಿರುವ ನೀರು ಅವನನ್ನು ಆಟಕ್ಕೆ ಕರೆಯುತ್ತಿದೆ. ಶಾಲೆಗೆ ತಡವಾಗುತ್ತದೆನ್ನುವ ಭಯಕ್ಕೆ ನೀರಿನಾಟವನ್ನು ಸಂಜೆಗೆ ಮುಂದೂಡಿ ನಡೆಯುತ್ತಿದ್ದಾನೆ. ಮುಖ್ಯ ರಸ್ತೆ ತಲುಪಿದೊಡನೆ ಮೇಲಿನಮಕ್ಕಿಯಿಂದ ಬರುತ್ತಿರುವ ಸುಮಂತ ಎದುರಾಗಿದ್ದಾನೆ. ಅವನೂ ಸಹಾ ತನ್ನಂತೆಯೇ ಅರ್ಧ ಹೋಂ ವರ್ಕ್ ಮಾಡಿರುವುದು ಕೇಳಿ ಪುಟ್ಟುವಿಗೆ ಕೊಂಚ ಧೈರ್ಯ ಬಂದಿದೆ. ಅವನ ಬಣ್ಣಬಣ್ಣದ ಛತ್ರಿಯಂಚಿನಲ್ಲಿ ನೇತಾಡುತ್ತಿರುವ 'ಸೀಟಿ'ಯನ್ನೊಮ್ಮೆ ಊದಲು ಪುಟ್ಟುವಿಗೆ ಆಸೆಯಾಗಿದೆ.

ಮಳೆಯ ಕಾರಣ ಶಾಲೆಯ ಅಂಗಳದಲ್ಲಿ ನಡೆಯಬೇಕಿದ್ದ ಪ್ರಾರ್ಥನೆ 'ಹಾಲ್ ರೂಮ್'ಗೆ ವರ್ಗಾವಣೆಯಾಗಿದೆ. ತಡವಾಗಿ ಓಡುತ್ತಾ ಬಂದ ಗೋಪಿ ಅಂಗಳದಲ್ಲಿ ಜಾರಿಬಿದ್ದು ಅಂಗಿಯೆಲ್ಲಾ ಕೆಸರುಮಾಡಿಕೊಂಡಿದ್ದಾನೆ. ಹೊರಗೆ ಭರ್ರೆಂದು ಸುರಿಯುತ್ತಿರುವ ಮಳೆಯ ಸದ್ದಿನ ನಡುವೆಯೇ ಕನ್ನಡ ಮೇಷ್ಟ್ರು ದೊಡ್ಡ ದನಿಯಲ್ಲಿ ರಾಗವಾಗಿ ಪದ್ಯ ಹಾಡುತ್ತಿದ್ದಾರೆ:

"ಮಳೆ ಬಂತು ಮಳೆ
ಅಂಗಳದಲ್ಲಿ ಹೊಳೆ;
ನಾನು ಓಡಿ ಜಾರಿಬಿದ್ದು 
ಅಂಗಿಯೆಲ್ಲ ಕೊಳೆ!"

ಎಲ್ಲರೂ ಗೋಪಿಯತ್ತ ನೋಡಿ ಮುಸಿಮುಸಿ ನಕ್ಕಿದ್ದಾರೆ. ನಾಚಿಕೊಂಡ ಗೋಪಿ ಕುಳಿತಲ್ಲೇ ಮತ್ತಷ್ಟು ಮುರುಟಿಕೊಂಡಿದ್ದಾನೆ. ಸಿದ್ರಾಮ ಮೇಷ್ಟ್ರು ರಜೆಯ ಹೋಂ ವರ್ಕನ್ನು ನಾಳೆ ನೋಡುವುದಾಗಿ ಹೇಳಿದ್ದು ಕೇಳಿ ಪುಟ್ಟುವಿಗೆ ಸಮಾಧಾನವಾಗಿದೆ. ಸಂಜೆ ಮಳೆ ಕಡಿಮೆಯಾಗಿದ್ದರಿಂದ ನಾಲ್ಕು ಗಂಟೆಗೆ 'ಆಟದ ಬೆಲ್ಲು' ಹೊಡೆಯಲಾಗಿದೆ. ಮಕ್ಕಳೆಲ್ಲಾ ಹೋ ಎನ್ನುತ್ತಾ ಹೊರಗೋಡಿಬರುತ್ತಿದ್ದಾರೆ. ಜಪ್ಪೆ ಆಡುತ್ತಿದ್ದ ಚೈತ್ರ ಧಸಾಲ್ಲನೆ ಜಾರಿಬಿದ್ದದ್ದು ನೋಡಿ ಹುಡುಗರೆಲ್ಲ ಕಿಸಕ್ಕನೆ ನಕ್ಕಿದ್ದಾರೆ. ಪುಟ್ಟು ಗೋಪಿ-ಸುಮಂತರ ಜೊತೆಸೇರಿ ರಸ್ತೆಯ ಪಕ್ಕದ ತೋಡಿನಲ್ಲಿ ಹರಿಯುತ್ತಿರುವ ನೀರಿಗೆ ಆಣೆಕಟ್ಟು ಕಟ್ಟುತ್ತಿದ್ದಾನೆ. ಹರಿದು ಬಂದ ನೀರನ್ನು ತಡೆದು ನಿಲ್ಲಿಸಿ ಆಡುತ್ತಿರುವ ಕಿಲಾಡಿಗಳ ಮೇಲೆ ಸಿದ್ರಾಮ ಮಾಸ್ತರ ಕೆಂಗಣ್ಣು ಬಿದ್ದಿದೆ. ಮೂವರನ್ನೂ ಸಾಲಾಗಿ ನಿಲ್ಲಿಸಿ ಎರೆಡೆರೆಡು ಬಾರಿಸಲಾಗಿದೆ. ಏಟು ತಿಂದು ನೋವಾದ ಅಂಗೈಯ್ಯನ್ನು ಛತ್ರಿಯ ಕಡ್ಡಿಯಂಚಿನಿಂದ ಜಾರುತ್ತಿರುವ ಹನಿಗಳಿಗೆ ಚಾಚಿಕೊಂಡು ಪುಟ್ಟು ಮನೆಯತ್ತ ನಡೆಯುತ್ತಿದ್ದಾನೆ. 

                     ****************

ದಿನ ಕಳೆದಂತೆಲ್ಲಾ ಮುಂಗಾರಿನ ಆಟಾಟೋಪ ಹೆಚ್ಚಿದೆ. ತುಂಗಾನದಿಯಲ್ಲಿ ಯಾರದೋ ಶವ ತೇಲಿಹೋಗುತ್ತಿತ್ತೆಂಬ ಸುದ್ದಿ ಎಲ್ಲೆಡೆ ಸುಳಿದಾಡುತ್ತಿದೆ. ತೀರ್ಥಹಳ್ಳಿಯ ಬೀದಿಗಳಲ್ಲಿ ಓಡಾಡುತ್ತಿದ್ದ ಹುಚ್ಚನೊಬ್ಬ ಏಕಾಏಕಿ ನಾಪತ್ತೆಯಾಗಿದ್ದು ಆ ಶವ ಅವನದೇ ಇರಬಹುದೆಂಬ ಗುಮಾನಿ ಎದ್ದಿದೆ. ನೆಲ್ಲೀಸರದಲ್ಲಿ ಸೇತುವೆಯೇ ಕೊಚ್ಚಿಹೋಗಿರುವುದರಿಂದ ಗೋಪಿ ಎರೆಡು ದಿನದಿಂದ ಶಾಲೆಗೆ ಬಂದಿಲ್ಲ. ತನ್ನ ಮನೆಯ ಬಳಿಯೂ ಸೇತುವೆ ಕೊಚ್ಚಿಹೋಗುವಂತಹಾ ದೊಡ್ಡ ಹಳ್ಳ ಇರಬಾರದಿತ್ತಾ ಎಂದು ಚಿಂತಿಸುತ್ತಲೇ ಪುಟ್ಟು ಶಾಲೆಗೆ ಹೊರಟಿದ್ದಾನೆ. ಬೆಳಗ್ಗೆ ಪ್ರಾರ್ಥನೆಯಾಗುತ್ತಿದ್ದಂತೆಯೇ ಹೆಡ್ ಮೇಷ್ಟ್ರು "ಜಿಲ್ಲಾಧಿಕಾರಿಗಳ ಘೋಷಣೆಯಂತೆ ಇವತ್ತು ಶಾಲೆಗೆ ರಜೆ ನೀಡುತ್ತಿದ್ದೇವೆ. ಎಲ್ರೂ ಹುಷಾರಾಗಿ ಮನೆ ತಲುಪಿಕೊಳ್ಳಿ. ಹಳ್ಳ, ಸೇತುವೆ ದಾಟಿ ಹೋಗಬೇಕಾದ ಮಕ್ಳೆಲ್ಲ ಆಫೀಸ್ ರೂಮಿಗೆ ಬನ್ನಿ" ಎಂದಿದ್ದಾರೆ. ಮಕ್ಕಳೆಲ್ಲಾ "ಹೋss......" ಎಂದು ಕೂಗುತ್ತಾ ಚದುರಿದ್ದಾರೆ. ಪುಟ್ಟು ನೇರ ಮನೆಗೆ ಹೋಗದೇ ಮೊದಲೇ ಮಾತಾಡಿಕೊಂಡಂತೆ ಸುಮಂತನ ಮನೆಯ ಹಿಂದಿನ ಗುಡ್ಡಕ್ಕೆ ಹೋಗಿದ್ದಾನೆ. ಅಲ್ಲಿ ಕೈಗೆಟುಕುವ ಎತ್ತರದಲ್ಲೇ ಬಿಟ್ಟಿರುವ ನೇರಳೆ ಹಣ್ಣುಗಳನ್ನು ಕೈ-ಬಾಯಿಗಳೆಲ್ಲಾ ನೀಲಿಯಾಗುವಷ್ಟು ಇಬ್ಬರೂ ತಿಂದಿದ್ದಾರೆ. ಮರಳಿ ಬರುವಾಗ ಕೇರೆ ಹಾವೊಂದು ಸರ್ರನೆ ಹರಿಯುತ್ತಾ ಅವರ ದಾರಿಗೆ ಅಡ್ಡಹೋಗಿದೆ. ಭೀತರಾದ ಇಬ್ಬರೂ ಓಡೋಡಿ ಮನೆಸೇರಿಕೊಂಡಿದ್ದಾರೆ. ಅಂಗಳದಲ್ಲೇ ಒಂದಡಿ ಆಳದ ಬಾವಿ ತೋಡಿ, ಪೆನ್ನಿನ ಕೊಳವೆಗಳನ್ನು ಪೈಪಿನಂತೆ ಸಿಕ್ಕಿಸಿದ್ದಾರೆ. ಬಾವಿ ತುಂಬಿ ಪೈಪಿನಲ್ಲಿ ನೀರುಕ್ಕಿ ಬರುತ್ತಿರುವ ಸಂಭ್ರಮವನ್ನು ನೋಡಿ ಮೈಮರೆಯುತ್ತಿದ್ದಾರೆ.

ಪಾಚಿ ಕಟ್ಟಿ ಜಾರುತ್ತಿರುವ ಅಂಗಳಕ್ಕೆ ಅಪ್ಪ ಅಡಿಕೆ ದಬ್ಬೆಗಳ 'ಸಾರ' ಹಾಕಿದ್ದಾನೆ. ಅಂಗಳದ ತುಂಬಾ ಡೇರೆ ಗಿಡಗಳು ಹೂಬಿಟ್ಟು ನಿಂತಿವೆ. ಎಲೆಗಳ ಮಧ್ಯೆ ಅಡಗಿಕೊಂಡು ಹೂವು ತಿನ್ನುವ ಕಂಬಳಿಹುಳು, ಸಿಂಬಳದ ಹುಳುಗಳಿಗೆ ಅಮ್ಮ ಬೈಯ್ಯುತ್ತಲೇ ಬೂದಿ ಎರಚುತ್ತಿದ್ದಾಳೆ. ಅಪ್ಪ ತೋಟಕ್ಕೆ ಔಷಧಿ ಹೊಡೆಯಲು ತಯಾರಿ ಮಾಡುತ್ತಿದ್ದಾನೆ. ಕೇವಲ ಚಡ್ಡಿಯನ್ನಷ್ಟೇ ಧರಿಸಿರುವ ಸೀನ ಕಾಲಿಗೆ 'ಕೊಟ್ಟೆ ಮಣೆ' ಹಾಕಿಕೊಂಡು ಅಡಿಕೆ ಮರ ಹತ್ತಲು ತಯಾರಾಗಿದ್ದಾನೆ. ಗುಡ್ಡದಲ್ಲಿ ಅಲ್ಲಲ್ಲಿ 'ಜಲ' ಎದ್ದು ತಿಳಿಯಾದ ನೀರು ಮಳೆ ನೀರಿನ ಜೊತೆ ಸೇರಿಕೊಂಡು ಜುಳಜುಳನೆ ಹರಿದುಬರುತ್ತಿದೆ. ದಡದ ಮೇಲೆ ಕುಳಿತ ದೈತ್ಯ 'ಗ್ವಾಂಟ್ರು ಕಪ್ಪೆ'ಯೊಂದು ಕ್ರೋಂ ಕ್ರೋಂ ಎಂದು ಹಾಡುತ್ತಿದೆ. ಹಸಿರು ಹಾವೊಂದು ಬೇಲಿಯ ಗಿಡದ ಮೇಲೆ ಅಡಗಿಕೊಂಡು ಆ ದೊಳ್ಳ ಕಪ್ಪೆಯನ್ನು ನುಂಗುವ ಕನಸು ಕಾಣುತ್ತಿದೆ. ಚಕ್ಕುಲಿ ಹುಳವೊಂದು ದಾರಿ ತಪ್ಪಿ ಜಗುಲಿಗೆ ಬಂದು ಪುಟ್ಟ ಮಗುವಿನ ಕೈಯ್ಯಲ್ಲಿ ಸಿಕ್ಕಿಹಾಕಿಕೊಂಡಿದೆ. ಇನ್ನೂ ವರುಷ ತುಂಬದ ಮಗು ತಾನು ಮುಟ್ಟಿದೊಡನೆ ಚಕ್ಕುಲಿಯಾಗಿ ಬಿದ್ದುಕೊಂಡ ಆ ವಿಚಿತ್ರದತ್ತ ತನ್ನ ಪುಟಾಣಿ ಬೆರಳು ಚಾಚಿ 'ಕಚ್ಚೂ...' ಎನ್ನುತ್ತಿದೆ. ಹಳ್ಳದಲ್ಲಿ ಪುಟ್ಟು ತೇಲಿಬಿಟ್ಟ ದೋಣಿ ಓಲಾಡುತ್ತಾ ಮುಂದಮುಂದಕ್ಕೆ ಸಾಗುತ್ತಿದೆ.

                     ****************

ಜೂನ್, ಜುಲೈಗಳು ಮಳೆಯಲ್ಲಿ ಕೊಚ್ಚಿಹೋಗಿ ಕೊಂಚ ಬಿಸಿಲಿನ ಆಗಸ್ಟ್ ಬಂದಿದೆ. ಆಗಸ್ಟ್ ಹದಿನೈದರ ಸ್ವತಂತ್ರ ದಿನಾಚರಣೆಗೆ ಶಾಲೆಯಲ್ಲಿ ತಯಾರಿಗಳು ಮುಗಿದಿವೆ. ಗ್ರಾಮಪಂಚಾಯ್ತಿ ಅಧ್ಯಕ್ಷರ ಕೈಯ್ಯಂದ ಎಳೆಯಲ್ಪಟ್ಟು ಧ್ವಜಕಂಬದ ತುತ್ತತುದಿಯಲ್ಲಿ ತನ್ನ ಅಶೋಕ ಚಕ್ರಸಹಿತ ತ್ರಿವರ್ಣವನ್ನು ಬಾನಿಗೆ ಬೀಸುತ್ತಾ ನಿಂತಿರುವ ಧ್ವಜವನ್ನು ನೋಡಲು ಸೂರ್ಯನೂ ತನ್ನ ಎಳೆಯ ಕಿರಣಗಳ ಜೊತೆ ಹಾಜರಾಗಿದ್ದಾನೆ. ಮಕ್ಕಳೆಲ್ಲರೂ 'ಸೆಲ್ಯೂಟ್' ಹೊಡೆದು ರಾಷ್ಟ್ರಗೀತೆ ಹಾಡುತ್ತಿದ್ದಾರೆ. ಒಳಗಡೆ ಆಫೀಸು ರೂಮಿನಲ್ಲಿ ಮಕ್ಕಳಿಗೆ ಹಂಚಲೆಂದು ಡಬ್ಬಿಯೊಳಗಿಟ್ಟಿರುವ ಚಾಕ್ಲೇಟುಗಳೂ ತಮ್ಮ ಬ್ಯಾಗಡೆಯಂಚನ್ನು ಮೇಲಕ್ಕೆತ್ತಿ 'ಸೆಲ್ಯೂಟ್' ಸ್ಥಿತಿಯಲ್ಲಿ ರಾಷ್ಟ್ರಗೀತೆಯನ್ನು ಆಲಿಸುತ್ತಿವೆ.


('ಮಾನಸ'ದ ಆಗಸ್ಟ್ 2017ರ ಸಂಚಿಕೆಯಲ್ಲಿ ಪ್ರಕಟಿತ)

ಗುರುವಾರ, ಜುಲೈ 27, 2017

ಊರ ದಾರಿಯ ಚಿತ್ರಗಳು... (ಚಿತ್ರಬರಹಗಳು)

ಅದೇಕೋ ಗೊತ್ತಿಲ್ಲ, ಊರಿನ ಬಗ್ಗೆ, ಅಲ್ಲಿಯ ಮಳೆಯ ಬಗ್ಗೆ ಎಷ್ಟೇ ಬರೆದರೂ, ಎಷ್ಟೇ ಮಾತಾಡಿದರೂ ಮುಗಿಯೋದೇ ಇಲ್ಲ. ನಾನು ಹಾಗೂ ನನ್ನ ರೂಮ್ ಮೆಟ್ ಸುಮಂತ ಹೊತ್ತಲ್ಲದ ಹೊತ್ತಿನಲ್ಲಿ ಎದ್ದು ಕುಳಿತು ಊರು, ಅಲ್ಲಿಯ ಮಳೆ, ತುಂಬಿ ಹರಿಯುವ ತುಂಗಾ ಹೊಳೆ, ಅಮ್ಮ ಮಾಡುವ ಬಿಸಿಬಿಸಿ ನೀರ್ದೋಸೆ ಹಾಗೂ ಇವನ್ನೆಲ್ಲ ಬಿಟ್ಟು ಈ ಬೆಂಗಳೂರೆನ್ನುವ ಬಂಗಾರದ ಬೋನಿನಲ್ಲಿ ಬಿಕನಾಸಿಗಳಂತೆ ಬದುಕುತ್ತಿರುವ ನಾವು.. ಇವೆಲ್ಲದರ ಬಗ್ಗೆ ಗಂಟೆಗಟ್ಟಲೆ ಮಾತಾಡಿಕೊಳ್ಳುತ್ತೇವೆ. ಅದರಲ್ಲೂ ಆಫೀಸಿನಲ್ಲಿ ಕೆಲಸ ತಲೆಮೇಲೆ ಅಡರಿಕೂತ ವಾರಾರಂಭದ ದಿನಗಳಲ್ಲಂತೂ ಊರು ಹಾಗೂ ಅಲ್ಲಿನ ಮಳೆ ನನ್ನನ್ನು ಇನ್ನಿಲ್ಲದಂತೆ ಕಾಡುತ್ತದೆ. ಬಾಸ್ ಸೀಟಿನಲ್ಲಿ ಇಲ್ಲದ ಚಿಕ್ಕ ಗ್ಯಾಪ್ ನಲ್ಲೇ ಯಾವುದಾದರೊಂದು ಬ್ಲಾಗ್ ತೆರೆದು ಅದರಲ್ಲಿರುವ ಮಲೆನಾಡಿನ ಮಳೆಯ ಲೇಖನಗಳನ್ನೂ, ಚಿತ್ರಗಳನ್ನೂ ನೋಡಿ ಅಷ್ಟರಮಟ್ಟಿಗಾದರೂ 'ತಂಪಾಗಲು' ಪ್ರಯತ್ನಿಸುತ್ತೇನೆ. ಏನೇನೋ ಕವನ, ಲೇಖನ ಗೀಚುತ್ತಾ ಮಾನಸಿಕವಾಗಿ ಊರಿಗೆ ಹತ್ತಿರಾಗಲು ಪ್ರಯತ್ನಿಸುತ್ತೇನೆ. 

ಹೀಗೆಲ್ಲ ಇರುವಾಗಲೇ ಕಳೆದೈದು ವರುಷಗಳಿಂದ ಕಾಯುತ್ತಿದ್ದ ದಿವ್ಯಘಳಿಗೆಯೊಂದು ಈ ವರ್ಷ ಬಂದುಬಿಟ್ಟಿದೆ. ಒಂದು ಕಂಪನಿ ಬಿಟ್ಟು ಇನ್ನೊಂದನ್ನು ಸೇರಿಕೊಳ್ಳುವ ಚಿಕ್ಕ ಗ್ಯಾಪ್ನಲ್ಲಿ ಒಂದು ವಾರದ ರಜೆಸಿಕ್ಕಿಬಿಟ್ಟಿದೆ. ಅದೂ ಜುಲೈ ತಿಂಗಳ ಕೊನೆಯ ವಾರದಲ್ಲಿ! ಕಳೆದ ಒಂದೂವರೆ ತಿಂಗಳಿಂದ ಸರಿಯಾಗಿ ಬಾರದೇ ಕಾಡಿದ್ದ ಮುಂಗಾರು ಈಗ ಒಂದುವಾರದ ಹಿಂದಷ್ಟೇ ಮುನಿಸುಬಿಟ್ಟು ಸುರಿಯಲಾರಂಭಿಸಿದೆ. ಯಾವಾಗ ಪೋನ್ ಮಾಡಿದರೂ ಅಮ್ಮ ಹೇಳುವ "ಮಳೆ ಶಬ್ದ ಕಣೋ, ನಿನ್ ಮಾತು ಸರಿಯಾಗಿ ಕೇಳಿಸ್ತಿಲ್ಲ" ಎನ್ನುವ ಮಾತುಗಳು ಮತ್ತಷ್ಟು ಖುಷಿ ಕೊಡುತ್ತವೆ. ಅಲ್ಲದೇ ಕಳೆದ ವಾರ ಊರಿಗೆ ಹೋಗಿಬಂದ ಸುಮಂತ ತೀರ್ಥಹಳ್ಳಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯ ಚಿತ್ರಗಳನ್ನು ಕಣ್ಣ ತುಂಬಾ ತುಂಬಿಕೊಂಡು ಬಂದಿದ್ದಾನೆ. ಫೆಸ್ಬುಕ್ಕಿನಲ್ಲಿ ಕುರುವಳ್ಳಿ ಸೇತುವೆಯ ಎದೆಮಟ್ಟಕ್ಕೆ ತುಂಬಿ ಹರಿಯುತ್ತಿರುವ ತುಂಗೆಯ ಫೋಟೋಗಳು ಒಂದರ ಹಿಂದೊಂದರಂತೆ ಅಪ್ಲೋಡಾಗುತ್ತಿವೆ. ಇದೆಲ್ಲದರಿಂದ ಉದ್ವೇಗಗೊಂಡ ಮನಸ್ಸು ತೆಂಗಿನಕಾಯಿ ಕಂಡ ಓತಿಕೇತದಂತೆ ಊರಿನತ್ತ ಓಡತೊಡಗಿದೆ...

ಇದೊಂದು ಶುಭ್ರವಾದ ಭಾನುವಾರ ಹಿಂದೆಂದೂ ಇಲ್ಲದ ಸಂಭ್ರಮದೊಂದಿಗೆ ನನ್ನೆದುರು ತೆರೆದುಕೊಂಡಿದೆ. ಬಸ್ ಸ್ಟಾಂಡಿನತನಕ ಬಂದು ಬೈ ಹೇಳಿದ ಸುಮಂತನಿಗೆ ಕೈ ಬೀಸಿ ಮೆಜಸ್ಟಿಕ್ಕಿನ ಬಸ್ಸೇರಿ ಕುಳಿತಿದ್ದೇನೆ. 

"ಮುಂಜಾವಿನ ಅಭಿಶೇಕಕೆ ಮೃದುವಾಯಿತು ನೆಲವು..."
"ಎಂದೆಂದೂ ಮುಗಿಯದೆ ಇರಲಿ.. ಈ ಪಯಣ ಸಾಗುತಲಿರಲಿ.." 
ಇಯರ್ ಫೋನಿನೊಳಗೆ ಕುಳಿತ ಬಿ.ಆರ್. ಛಾಯಾ, ಹರಿಹರನ್ ಖುಷಿಯಿಂದ ಹಾಡುತ್ತಿದ್ದಾರೆ. 

ಈ ಹಗಲು ಪ್ರಯಾಣವೆಂದರೆ ನನಗೆ ಒಂಥರಾ ಖುಷಿ. ಬೀದಿ ದೀಪಗಳು ಹಲ್ಲುಕಿರಿಯುವ ಹೊತ್ತಿಗೆ ಬಸ್ಸುಹತ್ತಿ, ಸೂರ್ಯ ಹಲ್ಲುಜ್ಜುವ ಹೊತ್ತಿಗೆ ಊರಿಗೆ ಬಂದಿಳಿಯುವ ಕತ್ತಲ ಪ್ರಯಾಣ ನಿಜಕ್ಕೂ ಬೇಸರದಾಯಕ. ಹತ್ತಿದ ಊರಿನಿಂದ ಇಳಿಯುವ ಊರಿನ ತನಕ ಎದಿರಾಗುವ ಹತ್ತಾರು ಗದ್ದೆ, ಬಯಲು, ಕೆರೆ, ಹಳ್ಳಿ, ಪಟ್ಟಣ, ತೋಟಗಳನ್ನೆಲ್ಲಾ ಕಣ್ಕಾಣದ ಕತ್ತಲಿನಲ್ಲೇ ಹಾದುಬರುವ ಈ ರಾತ್ರಿಯಾನದಲ್ಲಿ ನಾವು ಸಾಗಿಬಂದ ದೂರ ನಿಜಕ್ಕೂ ಸೊನ್ನೆ. ಅದಕ್ಕೇ ಒಂದು ವಾರದಷ್ಟು ದೀರ್ಘ ರಜೆ ಸಿಕ್ಕ ಸಂದರ್ಭಗಳಲ್ಲಿ ನಾನು ಹಗಲಿನ ಪ್ರಯಾಣವನ್ನೇ ಆಯ್ದುಕೊಳ್ಳುತ್ತೇನೆ. ಬೆಂಗಳೂರಿನ ಕಟ್ಟಡಮಯ ಹಾದಿ ಕೊನೆಯಾದ ಮೇಲೆ ಒಂದೊಂದಾಗಿ ಎದಿರಾಗುವ ತುಮಕೂರು, ಗುಬ್ಬಿ, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿಗಳನ್ನು ನೋಡುತ್ತಲೇ ಹಗಲು-ಮಧ್ಯಾಹ್ನ-ಸಂಜೆಗಳು ಸವೆಯಬೇಕು. ಇಲ್ಲಿ ತಂತಮ್ಮ ದಿನಚರಿಯಲ್ಲಿ ಮುಳುಗಿಹೋಗಿರುವ ನೂರಾರು ಜನರ ನಡುವೆ ಹಾದುಬರುವಾಗ "ಬದುಕುವುದಕ್ಕೆ ಬೆಂಗಳೂರೊಂದೇ ಕಟ್ಟಕಡೆಯ ಕರ್ಮಭೂಮಿಯಲ್ಲ" ಎನ್ನುವ ದಿವ್ಯ ನೆಮ್ಮದಿಯೊಂದು ಬಲವಾಗುತ್ತಾ ಹೋಗುತ್ತದೆ. ಮುಂದೊಂದು ದಿನ ನಾನೂ ಆ ಕಾಂಕ್ರೀಟ್ ಕಾಡನ್ನು ತೊರೆದು ಇವರಂತೆಯೇ ನನ್ನೂರಿನಲ್ಲಿ ಬದುಕುತ್ತೇನೆನ್ನುವ ಚಂದದ ಹಗಲುಗನಸೊಂದು ರೆಪ್ಪೆಗಳನ್ನಪ್ಪಿ ಚಂದದ ನಿದಿರೆಗೆ ನನ್ನನ್ನು ತಳ್ಳುತ್ತದೆ.

ಇವು ಬೆಂಗಳೂರು-ಶಿವಮೊಗ್ಗ ಹಾದಿಯಲ್ಲಿ ಕಂಡ ಕೆಲ ಚಿತ್ರಗಳು. ನಾನೇನೂ ಭಯಂಕರ ಫೋಟೋಗ್ರಾಫರ್ ಅಲ್ಲದಿರುವುದರಿಂದ, ಗಡಗಡನೆ ನಡುಗುತ್ತಾ ಓಡುವ ಬಸ್ಸಿನಿಂದ ತೆಗೆದವಾಗಿರುವುದರಿಂದ, ನನ್ನ ಮೊಬೈಲ್ನದು ಅಷ್ಟೇನೂ ನುರಿತ ಕ್ಯಾಮರಾ ಅಲ್ಲದಿದ್ದರಿಂದ, ಅದರಲ್ಲಿ ಸಾಕಷ್ಟು ಚಾರ್ಜ್ ಕೂಡಾ ಇಲ್ಲದಿದ್ದರಿಂದ ಇಲ್ಲಿನ ಫೋಟೋಗಳು ಭಾರೀ ಚಂದ ಬಂದಿಲ್ಲವೆನ್ನುವುದನ್ನು ಮೊದಲೇ ಹೇಳಿಬಿಡುತ್ತೇನೆ. ನೋಡಿ, ಹೇಗಿದೆ ಅಂತ ಹೇಳಿ...

1)

ಮುರುಕು ಮರದಾಚೆಗೆ ಕೆಮ್ಮಣ್ಣ ಹೊಲ. ನಡುವಿನ ಹಸಿರು ದಾರಿಯಲ್ಲಿ ಸಾಗಿದರೆ ತುದಿಯಲ್ಲೊಂದು ಬೋಳುಗುಡ್ಡ. ಅದನ್ನು ಹತ್ತಿ ನೋಡಿದರೆ ಈ ಹೊಲ, ಮರ, ಟಾರು ರಸ್ತೆ, ಭರ್ರನೆ ಓಡುತ್ತಿರುವ ನಾನು ಕುಳಿತಿರುವ ಈ ಬಸ್ಸು... ಇವೆಲ್ಲ ಎಷ್ಟು ಚಂದ ಕಾಣಬಹುದು ಅಲ್ವಾ?

2)

ಪೊದೆಗಳ ಹಿಂದಿನ ತೆಂಗಿನ ಮರಗಳು ನೆಟ್ಟಿದ್ದೋ ತಾವಾಗೇ ಹುಟ್ಟಿಕೊಂಡದ್ದೋ ಗೊತ್ತಿಲ್ಲ. ಅದರ ಹಿಂಭಾಗದಲ್ಲಿನ ಗುಡ್ಡದ ಮೇಲಿರುವ ಮನೆಗಳಲ್ಲಿ ವಾಸಿಸುವ ಜನರು ಮಾತ್ರ ಪುಣ್ಯವಂತರೇ ಸರಿ!



3)

ಕವಿಯುತ್ತಿರುವ ಕರಿಮೋಡ ಇನ್ನೇನು ಸುರಿಸಲಿರುವ ಮಳೆಯಲ್ಲಿ ನೆನೆಯಲು ತಯಾರಾಗಿ ನಿಂತಿರುವ ಅರೆಬೋಳು ಮರ, ಕೆಮ್ಮಣ್ಣ ನೆಲೆ ಹಾಗೂ ದಿಗಂತದಂಚಿನ ಬೆಟ್ಟ!


4)


ಮೋಡವೇ ನೋಡು ಬಾ.. ವೃಕ್ಷದಾ ನರ್ತನ...!


5)

ಒಂದ್ಸಲನಾದ್ರೂ ಈ ದಾರೀಗುಂಟ ಸೈಕಲ್ ಹೊಡ್ಕಂಡು ಹೋಗ್ಬೇಕು ನೋಡಿ...


6)


ಅದೇ ಬಾನು, ಅದೇ ನೆಲ,
ಅದೇ ಹಳಿ, ಅದೇ ಹೊಲ,
ಈ ಪಯಣ ನೂತನ!


7)

ಮೋಡದ ಎದೆಗೆ ತಿವಿದು ನಿಂತಿರುವ ವಿದ್ಯುತ್ ಸ್ಥಾವರ. ನನ್ನಂತೆಯೆ ಊರಿಗೆ ಹೋಗುವ ಸಡಗರದಲ್ಲಿ ಕುಣಿಯುತ್ತಿರುವ ನೂರಾರು ಮನಸ್ಸುಗಳನ್ನು ಹೊತ್ತು ಬರಲಿರುವ ರೈಲಿಗಾಗಿ ಕಾಯುತ್ತಾ ಮೇಘಗಳ ಚಪ್ಪರಕಟ್ಟಿ ನಿಂತಿರುವ ರೈಲ್ವೇಹಳಿ!

ಮೊಬೈಲ್ನಲ್ಲಿ ಚಾರ್ಜ್ ಇಲ್ಲದಿದ್ದರಿಂದ, ನಾನು ನುರಿತ ಫೋಟೋ ಗ್ರಾಫರ್ ಅಲ್ಲದಿರುವುದರಿಂದ ಹೆಚ್ಚಿನ ಹಾಗೂ ಚಂದದ ಫೋಟೋಗಳನ್ನು ತೆಗೆಯಲಾಗಲಿಲ್ಲ. ಕವಿದ ಮೋಡ, ಬೀಸುತ್ತಿದ್ದ ತಂಗಾಳಿಗಳು "ಮಳೆಬರುವ ಹಾಗಿದೆ..." ಎಂದು ಹಾಡುತ್ತಿದ್ದವಾದರೂ ಬೆಂಗಳೂರಿನಿಂದ ಭದ್ರಾವತಿಯ ತನಕ ಸಣ್ಣ ಕೆಸರಿನ ಪಸೆಯೂ ಕಾಣಲಿಲ್ಲ. ಆದರೆ ಶಿವಮೊಗ್ಗ ಹತ್ತಿರವಾದಂತೆಲ್ಲ ಮಳೆಯ ಕುರುಹುಗಳು ದಟ್ಟವಾಗುತ್ತಾಹೋದವು. ಇಷ್ಟೆಲ್ಲ ಖುಷಿಗಳ ನಡುವೆಯೇ ಮುಂದಿನವಾರ ಇದೇ ದಿನ, ಇದೇ ದಾರಿಯಲ್ಲಿ, ಇಂದಿನ ಖುಷಿಗಿಂತ ದುಪ್ಪಟ್ಟು ಬೇಸರದಲ್ಲಿ, ಇಂದು ಹೋಗುತ್ತಿರುವ ದಿಕ್ಕಿಗೆ ತದ್ವಿರುದ್ಧವಾದ ದಾರಿಯಲ್ಲಿ ಬೆಂಗಳೂರಿನ ಕಡೆಗೆ ಸಾಗುತ್ತಿರುತ್ತೇನೆನ್ನುವುದು ನೆನಪಾಗಿ ಸಣ್ಣಗೆ ಹೊಟ್ಟೆ ತೊಳೆಸಿದಂತಾಗಿದ್ದು ಸುಳ್ಳಲ್ಲ. 

                     **************

ಊರೊಳಗಿನ ಚಿತ್ರಗಳು:



ಬುಧವಾರ, ಜುಲೈ 26, 2017

ಹಾರಾಟದ ಸುತ್ತಮುತ್ತ..




ಪ್ರತಿದಿನ ಬೆಳಗ್ಗೆ ಬೆಂಗಳೂರು-ಹೊಸೂರು ಮುಖ್ಯರಸ್ತೆಯ ರೂಪೇನ ಅಗ್ರಹಾರ ನಿಲ್ದಾಣದಲ್ಲಿ ನಿಂತು ಕಂಪನಿಯ ವಾಹನಕ್ಕಾಗಿ ಕಾಯುವುದು ನನ್ನ ದಿನಚರಿ. 'ಹೊಸೂರು ರೋಡ್' ಎಂದೇ (ಕು)ಖ್ಯಾತವಾದ ಈ ರಸ್ತೆಯನ್ನು ದಾಟುವುದಕ್ಕೂ, ಉಕ್ಕಿ ಹರಿಯುತ್ತಿರುವ ನದಿಯೊಂದನ್ನು ಈಜಿ ದಡಸೇರುವುದಕ್ಕೂ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ. ಎರೆಡೂ ನಿಲ್ಲದ ಪ್ರವಾಹಗಳೇ! ಸಿಲ್ಕ್ ಬೋರ್ಡ್ ಎನ್ನುವ ಬೃಹತ್ ಜಂಕ್ಷನ್ ನಿಂದ ಕಟ್ಟೆಯೊಡೆದು ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೊಸೂರುಗಳ ಕಡೆಗೆ ಧಾವಿಸುವ ಸಾವಿರಾರು ಬೈಕು, ಕಾರು, ಬಸ್ಸೇ ಇತ್ಯಾದಿ ವಾಹನಗಳು ಭರಗುಡುತ್ತಾ ಓಡುತ್ತಿದ್ದರೆ ಈ ದ್ವಿಪಥ ರಸ್ತೆ ಅಕ್ಷರಶಃ ಬಿಸಿಲು, ಧೂಳು, ಹೊಗೆಗಳಿಂದ ಬೇಯುವ ಅಗ್ನಿಕುಂಡವಾಗಿಬಿಡುತ್ತದೆ. ಇಂತಹಾ ನೂರಾರು ರಸ್ತೆಗಳು ಒಟ್ಟು ಮೊತ್ತವೇ ಆಗಿರುವ ಬೆಂಗಳೂರಿಗೆ ಇದೇನು ಹೆಚ್ಚಲ್ಲ ಬಿಡಿ. ಇಲ್ಲಿ ನಿಂತು ಕಾಯುವಾಗೆಲ್ಲಾ ನನ್ನನ್ನು ವಿಚಿತ್ರ ಬಯಕೆಯೊಂದು ಕಾಡುತ್ತದೆ.

ಮನುಷ್ಯನಿಗೂ ಹಾರಲು ಬರಬೇಕಿತ್ತು!

ಚಿಕ್ಕವನಿದ್ದಾಗ ದೂರ್ ದರ್ಶನ್ ದಲ್ಲಿ 'ಜೈ ಹನುಮಾನ್' ಧಾರಾವಾಹಿಯಲ್ಲಿ ಆಂಜನೇಯ ಬಾನಿಗೆ ನೆಗೆದು ಹಾರಾಡುವುದನ್ನು ನೋಡುವಾಗಲೂ ಹೀಗೇ ಅನಿಸುತ್ತಿತ್ತು. ಹ...  ಒಂದು ನಿಮಿಷ. ರೆಕ್ಕೆಯಿಲ್ಲದಿದ್ದರೂ ವಿಧಾನಸೌಧದ ಸೂರು ಕಿತ್ತುಹೋಗುವಂತೆ ಹಾರಾಡುವ, ನೆಗೆದಾಡುವ ರಾಜಕಾರಣಿಗಳನ್ನು ನಾನೂ ನೋಡಿದ್ದೇನೆ. ಆದರೆ ನಾನು ಹೇಳುತ್ತಿರುವುದು ಆ ಹಾರಾಟದ ಬಗ್ಗೆಯಲ್ಲ; ಹಾತೆಹುಳಗಳಿಂದ ಹಿಡಿದು ದೈತ್ಯ ಹದ್ದುಗಳತನಕ ನೂರಾರು ಜಾತಿಯ ಕೀಟ-ಪಕ್ಷಿಗಳು ಸಣ್ಣ ಸದ್ದನ್ನೂ ಮಾಡದೇ ರೆಕ್ಕೆ-ಪುಕ್ಕ ಬಿಚ್ಚಿ ಬಾನಿನೆತ್ತರದಲ್ಲಿ ತೇಲಾಡುತ್ತಾವಲ್ಲಾ, ಆ ಹಾರಾಟದ ಬಗ್ಗೆ. ನಾವು ಮನುಷ್ಯರೂ ಹೀಗೇ ಹಾರುವಂತಿದ್ದರೆ ನಮ್ಮ ಪೃಥ್ವಿಯ ಎಷ್ಟೋ ಸಮಸ್ಯೆಗಳು ಹುಟ್ಟುತ್ತಲೇ ಇರಲಿಲ್ಲ ಅಲ್ವಾ?!

ನಮ್ಮ ಕಥೆಗಳನ್ನೇ ತೆಗೆದುಕೊಳ್ಳೋಣ. ನಾವು ಬೆಳಗ್ಗೆ ಎದ್ದವರೇ ಶಾಲೆಗೋ, ಕಾಲೇಜುಗೋ, ಆಫೀಸಿಗೋ ಹೊರಡುತ್ತೇವೆ. ಇನ್ನೂ ತಿಂಡಿ ತಿಂದಿಲ್ಲ, ಟೈ ಕಟ್ಟಿಕೊಂಡಿಲ್ಲ, ಶೂ ಪಾಲಿಶ್ ಆಗಿಲ್ಲ. ಶಾಲೆಯ/ಕಛೇರಿಯ ಬಸ್ಸು/ಕ್ಯಾಬು ಬರುವುದರೊಳಗೆ ಎಷ್ಟೆಲ್ಲಾ ಕೆಲಸ ಮುಗಿಸಿ ತಯಾರಾಗಬೇಕು. ಆ ಗಡಿಬಿಡಿಯಲ್ಲಿ ಏನೇನ್ನೋ ಮರೆತುಬಿಡುತ್ತೇವೆ. ವಿದ್ಯಾರ್ಥಿಗಳು ಅರ್ಧರಾತ್ರೆಯ ತನಕ ಕುಳಿತು ಬರೆದಿದ್ದ ಹೋಂ ವರ್ಕನ್ನು ಟೇಬಲ್ ಮೇಲೇ ಬಿಟ್ಟುಹೋಗುತ್ತಾರೆ. ಕಛೇರಿಯ ಯಾವುದೋ ಪ್ರಮುಖ ಫೈಲು ಸೋಫಾ ಮೇಲೇ ಉಳಿದುಬಿಟ್ಟಿರುತ್ತದೆ. ಬಸ್ ಪಾಸು ಯಾವುದೋ ಪ್ಯಾಂಟಿನ ಜೇಬಿನಲ್ಲಿ ಅವಿತಿರುತ್ತದೆ. ಐಡಿ ಕಾರ್ಡು ಮತ್ತೆಲ್ಲೋ ಕೈತಪ್ಪುತ್ತದೆ. ಬಸ್ಸಿನಲ್ಲಿ 'ಪಾಸ್' ಎಂದು ಹೇಳಿ ಜೇಬಿನಲ್ಲಿ ಪಾಸ್ ಇಲ್ಲದೇಹೋದಾಗ ಕಂಡಕ್ಟರ್ 'ಸಂಸ್ಕೃತ'ದಲ್ಲಿ ಬುದ್ಧಿಮಾತು ಹೇಳುತ್ತಾನೆ. ಹೋಂ ವರ್ಕ್ ತಂದಿಲ್ಲವೆಂದೊಡನೆಯೇ ಶಾಲೆಯ ಮಾಸ್ತರು ಕೈಯ್ಯಲ್ಲಿರುವ ಬೆತ್ತವನ್ನು ಟಿಪ್ಪೂಸುಲ್ತಾನನ ಖಡ್ಗದಂತೆ ಝಳಪಿಸುತ್ತಾರೆ. ಆಫೀಸಿನಲ್ಲಿ ಬಾಸು ಮರೆತ ಫೈಲನ್ನು ನೆನೆನೆನೆದು ತಾಂಡವ ನೃತ್ಯವನ್ನೇ ಆಡುತ್ತಾನೆ. ಇದಕ್ಕೆಲ್ಲಾ ಮೂಲಕಾರಣ ನಮಗಾಗಿ ಕಾಯದ ಕ್ಯಾಬು ಹಾಗೂ ಬಸ್ಸುಗಳು!

ಇರುವ ಒಂದೇ ಒಂದು ಭೂಮಿಯನ್ನು ಈ ವಾಹನಗಳು ಗಬ್ಬೆಬ್ಬಸುತ್ತಿರುವ ಬಗ್ಗೆ ಹೊಸತಾಗಿ ಏನೂ ಹೇಳಬೇಕಿಲ್ಲ. ವಿಜ್ಞಾನಿಗಳ ಮಾತನ್ನೇ ನಂಬುವುದಾದರೆ ಇನ್ನು ಮೊವತ್ತು-ನಲವತ್ತು ವರ್ಷಗಳಲ್ಲಿ ಪ್ರಪಂಚದ ಪೆಟ್ರೋಲ್, ಡೀಸೆಲ್ ಗಳೆಲ್ಲಾ ಮುಗಿದುಹೋಗುತ್ತವೆ. ದುಬೈನ ಕಟ್ಟಕಡೆಯ ಬಾವಿಯಲ್ಲೂ ಪೆಟ್ರೋಲ್ ಬತ್ತಿಹೋಗಿ ಫುಸ್ಸೆನ್ನುವ ಗಾಳಿಯೊಂದೇ ಉಳಿಯುವ ಆ ದಿನವನ್ನು, ವಿಪರೀತ ಎನ್ನುವಷ್ಟು ವಾಹನಗಳ ಮೇಲೆ ಅವಲಂಬಿತವಾಗಿರುವ ನಾವು-ನೀವು ಕಲ್ಪಿಸಿಕೊಳ್ಳುವುದೂ ಕಷ್ಟ. ವಿದೇಶಗಳಲ್ಲಿ, ನಮ್ಮ ಕೆಲವು ಪಟ್ಟಣಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ಬರಬಹುದು. ಆದರೆ ಮೊಬೈಲನ್ನು ಚಾರ್ಜ್ ಮಾಡಿಕೊಳ್ಳುವುದಕ್ಕೇ ಪರದಾಡುವಷ್ಟು ಕರೆಂಟ್ ನ ಅಭಾವವಿರುವ ನಮ್ಮ ಹಳ್ಳಿಗಳ ಕಥೆ? ಅವರೆಲ್ಲಾ ಮತ್ತೆ ಕುದುರೆ, ಎತ್ತುಗಳ ಕಾಲಿಗೇ ಬೀಳಬೇಕು! ಇದೆಲ್ಲವನ್ನೂ ಯೋಚಿಸಿದಾಗ 'ಮಿಲಿಯನ್ ಡಾಲರ್' ಪ್ರೆಶ್ನೆಯೊಂದು ನನ್ನೊಳಗೆ ಮೂಡುತ್ತದೆ:

ಕಾಗೆ, ಗೂಬೆಗಳಿಗೂ ಇರುವ ರೆಕ್ಕೆ ಮನುಷ್ಯನಿಗೇಕಿಲ್ಲ?

ಒಮ್ಮೆ ಕಲ್ಪನೆ ಮಾಡಿಕೊಳ್ಳೋಣ. ಹಾರುವ ಶಕ್ತಿಯೊಂದಿದ್ದರೆ ಬೆಳಗ್ಗೆ ಒಂಭತ್ತಕ್ಕೋ, ಹತ್ತಕ್ಕೋ ಶುರುವಾಗುವ ಕಛೇರಿ, ಶಾಲೆಗಾಗಿ ಏಳೂ ಮೊವತ್ತಕ್ಕೇ ಮನೆಬಿಡುವ ಅಗತ್ಯವಿರುತ್ತಿರಲ್ಲಿಲ್ಲ. ನಿಧಾನಕ್ಕೆ ಎದ್ದು ಬೇಕಾದಷ್ಟು ಬಾರಿ ಆಕಳಿಸಬಹುದಿತ್ತು. ಬಿಸಿಬಿಸಿ ಕಾಫಿಯನ್ನು ಮೆಲ್ಲಗೆ ಹೀರುತ್ತಾ ನ್ಯೂಸ್ ಪೇಪರ್ ನ ಕಟ್ಟಕಡೆಯ ಮೂಲೆಯಲ್ಲಿರುವ ಜಾಹೀರಾತನ್ನೂ ಬಿಡದಂತೆ ಸಕಲ ಜ್ಞಾನವನ್ನೂ ತಲೆಯೊಳಗೆ ತುಂಬಿಕೊಳ್ಳಬಹುದಿತ್ತು. ತಿಂಡಿ ಬೇಯಿಸಿತ್ತಿರುವ ಹೆಂಡತಿಗೆ ತಿಳಿಯದಂತೆ ಎರೆಡು ಸುತ್ತು 'ದಮ್' ಎಳೆಯಬಹುದಿತ್ತು. ಇಷ್ಟದ ಹಾಡನ್ನು ಕೋರಸ್ ನ ಸಮೇತ ಹಾಡಿಕೊಳ್ಳುತ್ತಾ ಸ್ನಾನ ಮಾಡಬಹುದಿತ್ತು. ಈ ಸಂಭ್ರಮಗಳೆಲ್ಲಾ ಮುಗಿದು, ಇನ್ನೇನು ಅರ್ಧಗಂಟೆಯಷ್ಟೇ ಉಳಿದಿದೆಯೆನ್ನುವಾಗ ಅಂಗಳಕ್ಕೋ, ಟೆರಾಸಿಗೋ ಬಂದು ದೀರ್ಘವಾಗಿ ಉಸಿರೆಳೆದುಕೊಂಡು, ಎರೆಡೂ ಕೈಯ್ಯನ್ನು ಪಟಪಟನೆ ಆಡಿಸಿದರಾಯಿತು, ನಮ್ಮ ಪ್ರಯಾಣ ಶುರು! ಹೊಂಡಗುಂಡಿಗಳಿಗೆ ಬರೆದುಕೊಟ್ಟಿರುವ ರಸ್ತೆಗಳು, ತೊಟ್ಟಿಗಿಂತ ಜಾಸ್ತಿ ರಸ್ತೆಯ ಮೇಲೇ ಬಿದ್ದಿರುವ ಕಸಕಡ್ಡಿಗಳು, ತೋಡಿರಾಗ ಹಾಡುತ್ತಾ ಹಾರಿಬಂದು ನಮ್ಮಿಂದ ಬಲವಂತವಾಗಿ ರಕ್ತದಾನ ಮಾಡಿಸಿಕೊಳ್ಳುವ   ಸೊಳ್ಳೆಗಳು, ರಸ್ತೆಯನ್ನೇ ಮೋರಿಯನ್ನಾಗಿಸಿಕೊಂಡು ನಿಂತಿರುವ ಕೊಳಚೆ ನೀರು.... ಇದ್ಯಾವುದರ ತಲೆಬಿಸಿಯಿಲ್ಲದೇ, ವೇಲು, ಕರ್ಚೀಫೇ ಇತ್ಯಾದಿಗಳನ್ನು ಮೂತಿಗೆ ಬಿಗಿದುಕೊಳ್ಳುವ ರಗಳೆಯಿಲ್ಲದೇ ಹಾಯಾಗಿ ಹಾರುತ್ತಾ ಆಫೀಸು/ಶಾಲೆಗಳನ್ನು ತಲುಪಬಹುದಿತ್ತು. ಹೋಗಿ ಟೆರಾಸಿನ ಮೇಲೆ 'ಲ್ಯಾಂಡ್' ಆಗಿ ಒಮ್ಮೆ ಮೇಲಕ್ಕೆ ನೋಡಿದರೆ ಬಾಸ್ ಕೂಡಾ ಸೇರಿದಂತೆ ಸೂಟು-ಬೂಟು ತೊಟ್ಟ ನೂರಾರು ಉದ್ಯೋಗಿಗಳು ಹಾರುತ್ತಾ ಬರುತ್ತಿರುವ ವಿಹಂಗಮ ದೃಶ್ಯ ಕಣ್ಣಿಗೆ ಬೀಳುತ್ತಿತ್ತು!

ಹಾರಾಟದಿಂದ ತಪ್ಪಿಹೋಗುವ ಇನ್ನೊಂದು ಅಪಾಯವೆಂದರೆ ಬೀದಿನಾಯಿಗಳ ಧಾಳಿ. ಹಗಲಿನ ಹೊತ್ತಿನಲ್ಲಿ ಪಾಪಚ್ಚಿಗಳಂತೆ ಬಿದ್ದುಕೊಂಡಿರುವ ಈ ನಿರ್ಗತಿಕ ಶ್ವಾನಗಳು ರಾತ್ರೆಯಾಗುತ್ತಿರುವಂತೆಯೇ 'ಗ್ರಾಮಸಿಂಹ'ಗಳಾಗಿಬಿಡುತ್ತವೆ. ಇಡೀ ಏರಿಯಾವನ್ನೇ ತಮ್ಮ ಸುಪರ್ದಿಗೆ ತೆಗೆದುಕೊಂಡು ಗಸ್ತು ತಿರುಗುತ್ತಾ ಎದುರಿಗೆ ಸಿಗುವ ಒಬ್ಬಂಟಿ ಯಾತ್ರಿಕರನ್ನು ಬೆದರಿಸುತ್ತವೆ. ಅದರಲ್ಲೂ ಚಿಂದಿ ಜೀನ್ಸ್, ನಾಲ್ಕಾರು ಜೇಬು-ಬಾಲಗಳಿರುವ ಕಾರ್ಗೋ ಪ್ಯಾಂಟ್ ನಂತಹಾ 'ಡಿಂಗ್ರಿ' ಉಡುಪು ತೊಟ್ಟವರು ಕಂಡರಂತೂ ಮುಗಿದೇಹೋಯಿತು, ಹೀನಾಮಾನವಾಗಿ ಬೊಗಳುತ್ತಾ ಧಾಳಿಮಾಡಿಬಿಡುತ್ತವೆ. ಹೀಗಾಗಿ ರಾತ್ರೆ ಒಬ್ಬಂಟಿಯಾಗಿ ಓಡಾಡುವರು ಹಾಗೂ 'ಡಿಂಗ್ರಿ' ವಸ್ತ್ರ ತೊಡುವವರಿಗೆ ಹಾರುವ ಶಕ್ತಿ ವರದಾನವಾಗಲಿದೆ. ಇನ್ನು ಲಕ್ಷಾಂತರ ಪತಿರಾಯರುಗಳಿಗೆ ಈ 'ಹಾರಾಟ'ದಿಂದ ಅದೆಷ್ಟು ಉಪಯೋಗವಾಗುತ್ತದೆ ಗೊತ್ತಾ? ಅವರಿನ್ನು ಪದೇ ಪದೇ ತಮ್ಮ ಹೆಂಡತಿಯನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗುವ ಅಗತ್ಯವೇ ಇರುವುದಿಲ್ಲ. ಕ್ರೆಡಿಟ್ ಕಾರ್ಡನ್ನು ಅದರ ಪಾಸ್ ವರ್ಡಿನ ಸಮೇತ ಕೈಲಿಟ್ಟು ಕಳಿಸಿಕೊಟ್ಟರಾಯಿತು, ಮಹಿಳಾಮಣಿಗಳು ತಮ್ಮ ಪಾಡಿಗೆ ಹಾರಿಕೊಂಡು ಹೊರಟುಬಿಡುತ್ತಾರೆ.  ತಮಗೆ ಬೇಕಾದಷ್ಟು ಶಾಪಿಂಗ್ ಮಾಡಿಕೊಂಡು, ಅಂಗಡಿಯಲ್ಲಿರುವ ಅಷ್ಟೂ ವೆರೈಟಿಗಳನ್ನೂ ಆಚೆ ತರಿಸಿ, ಯಾವ ವಾಹನದ ಹಂಗಿಲ್ಲದೇ ಸ್ವತಂತ್ರವಾಗಿ ಹಾರುತ್ತಾ ಬಂದುಬಿಡುತ್ತಾರೆ. ಹಾಂ, ಈ ಒಡವೆ, ಬಟ್ಟೆ ಅಂಗಡಿಗಳ ಸೇಲ್ಸ್ ಮ್ಯಾನ್ ಗಳಿಗೆ ಮಾತ್ರ ಈ 'ಹಾರಾಟ'ದಿಂದ ತೊಂದರೆಯಾಗುತ್ತಿತ್ತೆನ್ನುವುದರಲ್ಲಿ ಸಂಶಯವೇ ಇಲ್ಲ. ಇಲ್ಲದ ಟ್ರಾಫಿಕ್ನಿಂದ ಉಳಿಯುವ ಸಮಯವನ್ನೂ ಈ ಮಹಿಳಾಮಣಿಗಳು ಅಂಗಡಿಯಲ್ಲಿ ಸೆಲೆಕ್ಷನ್ ಗೆಂದೇ ವ್ಯಯಿಸುವುದರಿಂದ ಅವರ ಶ್ರಮ ಹೆಚ್ಚಾಗುತ್ತದೆ. ಹೀಗಾಗಿ ಅವರೆಲ್ಲಾ ಒಟ್ಟಾಗಿ ನಮ್ಮೀ 'ಹಾರು ಸಿದ್ಧಾಂತ'ದ ವಿರುದ್ಧ ಹೋರಾಟನಡೆಸುವ ಅಪಾಯವೂ ಇಲ್ಲದಿಲ್ಲ.

ಹಾಗಂತ ಹಾರಾಟದಿಂದ ಬರೀ ಉಪಯೋಗಗಳು ಮಾತ್ರ ಇವೆಯೆಂದು ಹೇಳುವಂತಿಲ್ಲ. ಎಲ್ಲೆಲ್ಲಿ 'ಹಾರಾಟ' ಹೆಚ್ಚಾಗುತ್ತದೋ ಅಲ್ಲೆಲ್ಲಾ ನಿಯಮಾವಳಿಗಳು ಹುಟ್ಟಿಕೊಳ್ಳುತ್ತವೆ. ಇಲ್ಲೂ ಅಷ್ಟೇ. ಎತ್ತರದ ಟವರ್ ಗಳನ್ನು ಕಟ್ಟಿಸಿ, ಜೇಬಿಗೆ ಪೀಪಿ ಸಿಕ್ಕಿಸಿಕೊಂಡ ಟ್ರಾಫಿಕ್ ಪೋಲೀಸರನ್ನು ಅಲ್ಲಲ್ಲಿ ನಿಲ್ಲಿಸಿ ಹಾರುತ್ತಾ ಬರುವವರ ಮೇಲೊಂದು ಕಣ್ಣಿಡಬೇಕಾಗುತ್ತದೆ. ಏಕೆಂದರೆ ಈಗ ರಸ್ತೆಗಳಲ್ಲಿ ವೀಲಿಂಗ್ ಮಾಡುವ, ಹ್ಯಾಂಡಲ್ ಬಿಟ್ಟು ಬೈಕ್ ಓಡಿಸುವ ಬಿಸಿರಕ್ತದ ಹುಡುಗರು ಆಕಾಶದಲ್ಲಿ  ಒಂದೇ ಕೈ ಬಡಿಯುವುದು, ಗಾಳಿಯಲ್ಲಿ ಪಲ್ಟಿ ಹೊಡೆಯುವುದೇ ಮುಂತಾದ ಕಪಿಚೇಷ್ಟೆಗಳನ್ನ ಮಾಡಲಿಕ್ಕೂ ಸಾಕು. ಇನ್ನು ಕೆಲವು ಮುರುಷಪುಂಗವರು ಕುಡಿದು ಹಾರುತ್ತಾ ಬಂದು 'ಶಿವಾ' ಎಂದು ತಮ್ಮಪಾಡಿಗೆ ಹೋಗುತ್ತಿರುವ ಬಡಪಾಯಿಗಳಿಗೆ ಢೀ ಕುಟ್ಟಿ, ಕೊನೆಗೆ ಇಬ್ಬರೂ ಕಾಲುಮೇಲಾಗಿ ನೆಲಕ್ಕೆ ಬೀಳುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ!  ಸಿಗ್ನಲ್ ಗಳಲ್ಲಿ ಕಡಲೆಕಾಯಿ, ಸೊಳ್ಳೆ ಬ್ಯಾಟ್, ನೀರಿನ ಬಾಟಲಿ,  ಇತ್ಯಾದಿಗಳನ್ನು ಮಾರುವ ರಸ್ತೆ ವ್ಯಾಪಾರಿಗಳೆಲ್ಲಾ ಹಾರುತ್ತಾ ಹಿಂದೆ ಬಂದು ತಮ್ಮ ಉತ್ಪನ್ನಗಳನ್ನು ಕೊಳ್ಳುವಂತೆ ಬೇಡಿಕೆ (ಬೆದರಿಕೆ!) ಇಡುತ್ತಾ ಬೆನ್ನಟ್ಟಿಬರುವ ಸಂಭವವೂ ಇಲ್ಲದಿಲ್ಲ. ಸರಗಳ್ಳರೇ ಮುಂತಾದವರು ಹಾರುಗಳ್ಳರುಗಳಾಗಿ ಬದಲಾಗಿ ನಡುಆಕಾಶದಲ್ಲೇ ಧಾಳಿನಡೆಸುವ ಸಾಧ್ಯತೆಗಳೂ ಹೆಚ್ಚಿವೆ. ಈ ಎಲ್ಲಾ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಈಗಿರುವ ರಸ್ತೆ ನಿಯಮಗಳಂತೆಯೇ 'ಹಾರಾಟ ವಿಧೇಯಕ'ಗಳನ್ನು ರೂಪಿಸಬೇಕಾಗುತ್ತದೆ. 

ಈ ಒಂದೆರೆಡು ದುಷ್ಪರಿಣಾಮಗಳ ಹೊರತಾಗಿ ಹೇಳುವುದಾದರೆ ಹಾರಾಟ ಒಂದು ಅದ್ಭುತ ಶಕ್ತಿ. ನಿಮಗೆಲ್ಲಾ ಜೀವವಿಕಾಸದ ಸಿದ್ಧಾಂತ ನೆನಪಿದೆಯಾ? ಸಮುದ್ರದಲ್ಲಿ ಮಾತ್ರವಿದ್ದ ಜೀವಿಸಂಕುಲ ನೀರಿನಿಂದ ಮೇಲಕ್ಕೆ ಎಗರುತ್ತಾ ಎಗರುತ್ತಾ ಕ್ರಮೇಣ ಅವುಗಳಲ್ಲಿ ನೆಲದಮೇಲಿನ ವಾತಾವರಣಕ್ಕೆ ಬೇಕಾದ ರಚನೆಗಳು ಮೈಗೂಡಿದವಂತೆ. ಅಂತೆಯೇ ನಾವುಗಳೂ ಇವತ್ತಿನಿಂದಲೇ ದಿನಕ್ಕೆ ಅರ್ಧಗಂಟೆಯಾದರೂ ಕೈಯ್ಯನ್ನು ರೆಕ್ಕೆಯಂತೆ ಬಡಿಯುತ್ತಾ ಮಂಚ, ಕಟ್ಟೆ, ದಿಬ್ಬ ಮುಂತಾದ ಚಿಕ್ಕ ಎತ್ತರಗಳಿಂದ ಹಾರಲು ಪ್ರಯತ್ನಿಸುವುದು ಒಳ್ಳೆಯದು. ಯಾರಿಗೆ ಗೊತ್ತು? ಕೊನೆಗೆ ನಮ್ಮ ಮೊಮ್ಮಕ್ಕಳು, ಮರಿಮಕ್ಕಳ ಕಾಲಕ್ಕಾದರೂ ಕನಿಷ್ಟ ಬಾವಲಿಗಿರುವಂತಹಾ ರೆಕ್ಕೆಗಳು ಮೂಡಿದರೂ ಮೂಡಬಹುದು! ಆಗ ನನ್ನೀ ಲೇಖನವು 'ಹ್ಯೂಮನ್ ಫ್ಲೈ ಥಿಯರಿ' ಅಂತಲೋ, 'ಮನುಷ್ಯನ ಹಾರು ಸಿದ್ಧಾಂತ' ಅಂತಲೋ ಪ್ರಸಿದ್ಧವಾಗಿ ನನಗೆ ನೊಬೆಲ್ ಬಹುಮಾನ ದೊರೆತರೂ ದೊರೆಯಬಹುದು. ಇಂತಹಾ ಒಂದು ಮಹಾನ್ ವಿಕಾಸದ ಮುನ್ನುಡಿಕಾರರಾದ ನಾನು-ನೀವು 'ಹಾರು ಸಿದ್ಧಾಂತದ ಹರಿಕಾರರು' ಎಂದು ಮೋಡಗಳ ಮೇಲಿನ ವೇದಿಕೆಯಲ್ಲಿ ಹಾರಾಡುತ್ತಾ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಸೃಷ್ಟಿಯಾದರೂ ಆಗಬಹುದು. ಏನಂತೀರಾ?

ವಿಶೇಷ ಸೂಚನೆ: ಈ ಲೇಖನದಿಂದ ಪ್ರೇರಿತರಾಗಿ ಬೇಗ ರೆಕ್ಕೆಗಳು ಬರಬೇಕೆಂಬ ಅತಿಯಾಸೆಯಿಂದ, ಹಾರಿಯೇ ಬಿಡುತ್ತೇನೆಂಬ ಓವರ್ ಕಾನ್ಫಿಡೆನ್ಸ್ ನಿಂದ ಎತ್ತರದ ಮಹಡಿಯಿಂದಲೋ, ಮರದಿಂದಲೋ ಧುಮುಕಿ ಕೈ, ಕಾಲು, ಸೊಂಟ ಮುರಿದುಕೊಂಡರೆ ಅದಕ್ಕೆ ಲೇಖಕರು ಜವಾಬ್ದಾರರಾಗಿರುವುದಿಲ್ಲ!

(ಮಂಗಳ 24-5-2017ರ ಸಂಚಿಕೆಯಲ್ಲಿ ಪ್ರಕಟವಾದ ನಗೆಬರಹ)

ಭಾನುವಾರ, ಜುಲೈ 23, 2017

ಮೂಡುಗುಡ್ಡೆ ಪ್ರೀಮಿಯರ್ ಲೀಗ್!



ಚಿಕ್ಕವನಿದ್ದಾಗ ನನಗೆ ಕ್ರಿಕೆಟ್ ಎಂದರೆ ಒಂದು ರೀತಿ ಕೋಪ. ಡಿಡಿ1 ರಲ್ಲಿ ಕಡ್ಡಾಯವಾಗಿ ನೇರ ಪ್ರಸಾರವಾಗುತ್ತಿದ್ದ ಭಾರತದ ಪಂದ್ಯಗಳು ವಾರಕ್ಕೆ ಒಮ್ಮೆ ಮಾತ್ರ ಬರುವ ನನ್ನ ಮೆಚ್ಚಿನ ಭಾನುವಾರದ ಸಿನೆಮಾವನ್ನು ನುಂಗಿ ಹಾಕುತ್ತವೆಂಬುದೇ ನನ್ನ ಬೇಸರಕ್ಕೆ ಕಾರಣವಾಗಿತ್ತು. ಆದ್ದರಿಂದಲೇ ಕ್ರಿಕೆಟ್ ಆಟದ ಅಆಇಈಗಳೇ ಗೊತ್ತಿಲ್ಲದ ನನ್ನ ಅಮ್ಮ "ಈ ರಿಪ್ಲೈ, ಅಡ್ವರ್ಟೈಸ್ ಗಳನ್ನ ಮತ್ತೆಮತ್ತೆ ಹಾಕ್ದೇ ಇದ್ದಿದ್ರೆ ಆಟ ಬೇಗ ಮುಗ್ದು ಪಿಚ್ಚರ್ ನೋಡ್ಲಕ್ಕಿತ್ತು" ಎಂದು ವಾದಿಸುವಾಗ ಹೌದೌದು ಎಂದು ತಲೆ ಆಡಿಸುತ್ತಿದ್ದೆ. ಅದರಲ್ಲೂ ಒಂದು ಇನ್ನಿಂಗ್ಸ್ ಮುಗಿದ ನಂತರ ಬರುತ್ತಿದ್ದ 'ಫೋರ್ಥ್ ಅಂಪಾಯರ್' (ಆಗ ಅದಕ್ಕೇನನ್ನುತ್ತಿದ್ದರೋ ನೆನಪಿಲ್ಲ) ಬಂದಾಗಲಂತೂ ಅಮ್ಮನಿಗೆ ಪಿತ್ತ ನೆತ್ತಿಗೇರುತ್ತಿತ್ತು. "ಹಿಂಗೆ ಕೂತ್ಕಂಡು ಕಟ್ಟೆ ಪಂಚಾಯ್ತಿ ಮಾಡೋ ಬದ್ಲು ಬೇಗ ಬೇಗ ಆಡಿ ಮುಗ್ಸಬಾರ್ದಾ" ಎಂದು ಟೀವಿಯಲ್ಲಿ ಪಂದ್ಯದ ಬಗ್ಗೆ ಚರ್ಚಿಸುತ್ತಾ ಕುಳಿತಿರುವ ಕಪಿಲ್ ದೇವ್, ರವಿ ಶಾಸ್ತ್ರಿಗಳನ್ನೆಲ್ಲಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. 

ಏನೂ ಅರ್ಥವಾಗದಿದ್ದರೂ ಕೆಲವೊಮ್ಮೆ ನಾನು ಓದಲೆಂದು ನಮ್ಮನೆಯಲ್ಲಿದ್ದ ಅಕ್ಕನ ಜೊತೆ ಕುಳಿತು ಕ್ರಿಕೆಟ್ ನೋಡುತ್ತಿದ್ದೆ. ಕ್ರಿಕೆಟ್ ನ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದ ಅಕ್ಕ ಏನೂ ಗೊತ್ತಿಲ್ಲದ ನನಗೆ "ನೋಡಿಲ್ಲಿ, ಹಿಂಗೆ ಹೊಡೆದ್ರೆ ಸಿಕ್ಸ್, ಹಿಂಗೆ ಹೊಡೆದ್ರೆ ಫೋರ್" ಎಂದು ಸದಭಿನಯಪೂರ್ವಕವಾಗಿ ತೋರಿಸುತ್ತಿದ್ದಳು. ಅವಳನ್ನು ಅನುಕರಿಸಲಾಗದ ನಾನು ಪೆಕರನಂತೆ ಕೈಯ್ಯನ್ನು ಹೇಗ್ಹೇಗೋ ಬೀಸಿ "ಹಿಂಗೆ ಹೊಡೆದ್ರೆ?" ಎಂದು ಕೇಳುತ್ತಿದ್ದೆ. ಇದುವರೆಗೆ ಯಾವ ತಂಡದ ಯಾವ ಬ್ಯಾಟ್ಸ್ ಮನ್ ಕೂಡಾ ಹೊಡೆಯದ ಆ ವಿಚಿತ್ರ ಹೊಡೆತವನ್ನು ಕಂಡು ಗಲಿಬಿಲಿಗೊಂಡ ಅವಳು "ಹಂಗೆ ಹೊಡೆದ್ರೆ ಫರ್ಸ್ಟ್ ಬಾಲಿಗೇ ಓಟ್ ಆಗ್ತೀಯ ಅಷ್ಟೇ" ಎಂದು ಗದರುತ್ತಾ ಮತ್ತೊಮ್ಮೆ ಬರಿಗೈಯ್ಯಲ್ಲಿ ಗಾಳಿಗೆ ಸಿಕ್ಸರ್-ಫೋರ್ ಬಾರಿಸಿ ತೋರಿಸುತ್ತಿದ್ದಳು. ಅವಳ ಪರಮವಿಧೆಯ ಗಾಂಪ ಶಿಶ್ಯನಾದ ನಾನು ಆ ಅದ್ಭುತ 'ಶಾಟ್'ಗೆ ಬೆರಗಾಗಿ ತಲೆದೂಗುತ್ತಿದ್ದೆ.

ನಾನು, ನನ್ನ ತಮ್ಮ ಹಾಗೂ ಚಿಕ್ಕಪ್ಪನ ಮಗ- ನಮ್ಮ ಕೇರಿಯಲ್ಲಿದ್ದುದು ಒಟ್ಟು ಮೂವರು ಹುಡುಗರು. ಆಗಿನ್ನೂ ನಮ್ಮ ದೈನಂದಿನ ಆಟಗಳೊಳಗೆ ಕ್ರಿಕೆಟ್ ಪ್ರವೇಶಿಸಿರಲಿಲ್ಲ. ನಮ್ಮ ಮೇಲೆ ಶಕ್ತಿಮಾನ್, ಜೂನಿಯರ್-ಜಿ, ಜೈ ಹನುಮಾನ್ ನಂತಹಾ ಫಿಕ್ಷನ್ ಹಾಗೂ ಪೌರಾಣಿಕ ಧಾರಾವಾಹಿಗಳ ಪ್ರಭಾವ ತುಸು ಹೆಚ್ಚೇ ಇದ್ದುದರಿಂದ ನಾವಾಡುವ ಆಟಗಳಲ್ಲೂ ಸಹಾ ಅವೇ ಇರುತ್ತಿದ್ದವು. ಕೈಗೆ ಸಿಕ್ಕ ದೊಣ್ಣೆ,ಕೋಲು-ಕೊಕ್ರುಗಳನ್ನು ಖಡ್ಗ-ಗದೆಗಳಂತೆ ಹಿಡಿದು ಬಾಯಿಂದ ಠಾಣ್ ಠಾಣ್ ಎನ್ನುವ ಸದ್ದು ಹೊರಡಿಸುತ್ತಾ ಅಂಗಳದಲ್ಲೇ ಭಯಾನಕ ಯುದ್ಧದ ಸನ್ನಿವೇಶವನ್ನು ಸೃಷ್ಟಿಸುತ್ತಿದ್ದೆವು. ನನ್ನ ತಮ್ಮನಂತೂ ಮೋಟುದ್ದದ ಕೋಲನ್ನು ಮಂತ್ರದಂಡದಂತೆ ಬೀಸುತ್ತಾ, ಚಿತ್ರವಿಚಿತ್ರ ಮಂತ್ರಗಳನ್ನು ಪಠಿಸುತ್ತಾ ಎಲ್ಲರನ್ನೂ ಬೆಚ್ಚಿಬೀಳಿಸುತ್ತಿದ್ದ. ಹೀಗಿದ್ದ ನಮ್ಮ 'ಫಿಕ್ಷನ್' ಲೋಕಕ್ಕೆ ಕ್ರಿಕೆಟ್ಟನ್ನು ಪರಿಚಯಿಸಿದವರು ಪಕ್ಕದ ಮನೆಯಲ್ಲೇ ಇದ್ದ ನಮ್ಮ ಅಣ್ಣ (ದೊಡ್ಡಪ್ಪನ ಮಗ). ದೂರದೂರಿನಲ್ಲಿದ್ದ ತಮ್ಮ ಅಂಗಡಿಯನ್ನು ಮುಚ್ಚಿ ಮನೆಯಲ್ಲೇ ಇರಲಾರಂಭಿಸಿದ ಅವರು ಕಾಗೆ-ಗುಬ್ಬಿ ಆಟ ಆಡುತ್ತಿದ್ದ ನಮ್ಮ ಕೈಗೆ ಮೊದಲ ಬಾರಿಗೆ ಚೆಂಡು-ದಾಂಡು ಕೊಟ್ಟರು.

ಕೊಟ್ಟಿದ್ದನ್ನು ಶಿಸ್ತಾಗಿ ತೆಗೆದುಕೊಂಡಿದ್ದೇನೋ ಹೌದು, ಆದರೆ ಆಡಲು ಬರಬೇಕಲ್ಲ? ಬ್ಯಾಟನ್ನು ಗದೆಯಂತೆಯೂ, ಬಾಲನ್ನು ಬಾಂಬಂತೆಯೂ ಬೀಸುತ್ತಾ ಕ್ರಿಕೆಟ್ಟನ್ನೂ ಪೌರಾಣಿಕ-ಫಿಕ್ಷನ್ ಮಿಶ್ರಿತ ಹೈಬ್ರೀಡ್ ಯುದ್ಧದಂತೆ ಆಡುತ್ತಿರುವ ನಮ್ಮ ಶೈಲಿ ನೋಡಿ ಅಕ್ಷರಷಃ ಬೆಚ್ಚಿಬಿದ್ದ ಅಣ್ಣ ಕೊನೆಗೆ ಸ್ವತಃ ತಾವೇ ಅಂಗಳಕ್ಕಿಳಿದರು. ನಮಗೆ ಕಲಿಸುತ್ತಾ, ತಾವೂ ಆಡುತ್ತಾ ಕ್ರಿಕೆಟ್ ಎನ್ನುವ ಎಂದೂ ವಾಸಿಯಾಗದ ಹುಚ್ಚನ್ನು ನಮ್ಮ ತಲೆಯೊಳಕ್ಕೆ ತುಂಬಿದರು. ನೂರುಕೋಟಿ ಭಾರತೀಯರ ಉಸಿರಾಟವಾಗಿರುವ, ಆಡಿದಷ್ಟೂ ಆಡಬೇಕೆನಿಸುವ ಈ ಆಟ ನಮಗೆ ಇನ್ನಿಲ್ಲದಷ್ಟು ಇಷ್ಟವಾಗಿಹೋಯಿತು. ಶನಿವಾರ ಮಧ್ಯಾಹ್ನವಾದರೆ ಸಾಕು, ಯಾವ ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ಕಡಿಮೆಯಿಲ್ಲದ ಸಂಭ್ರಮವೊಂದು ನಮ್ಮನೆಯ ಅಂಗಳದಲ್ಲಿ ಜಮಾಯಿಸುತ್ತಿತ್ತು. ಆದರೆ ಇಲ್ಲಿ ನಮ್ಮ ಆಟಕ್ಕೆ ಹತ್ತಾರು ಅಡೆತಡೆಗಳು. ನಮ್ಮನೆ ಇರುವುದು ಗುಡ್ಡದ ಇಳಿಜಾರಿನ ನಡುವೆಯಾಗಿರುವುದರಿಂದ ಸುತ್ತಲೂ ಆಳವಾದ ತಗ್ಗು-ಹೊಂಡಗಳಿವೆ. ಸಾಲದ್ದಕ್ಕೆ ಈ ಹೊಂಡ-ತಗ್ಗುಗಳ ತುಂಬಾ ತರಹೇವಾರಿ ಗಿಡ,ಗಂಟಿ, ಪೊದೆಗಳು ಒತ್ತಾಗಿ ಬೆಳೆದು ಅಲ್ಲೆಲ್ಲೂ ಕಾಲಿಡದಂತಾಗಿದೆ. ನೇರವಾಗಿ ಅಥವಾ ಬಲಭಾಗದಲ್ಲಿ ಸ್ವಲ್ಪ ಜೋರಾಗಿ ಹೊಡೆದರೂ ಚೆಂಡು ಛಂಗನೆ ಹಾರಿ ಈ ಆಳಹೊಂಡದ ಪೊದೆಗಳ ನಡುವೆಲ್ಲೋ ಮರೆಯಾಗಿ, ಆಡಿದ್ದಕ್ಕಿಂತಲೂ ಹೆಚ್ಚಿನ ಸಮಯ ಚೆಂಡು ಹುಡುಕಲಿಕ್ಕೇ ವ್ಯಯವಾಗುತ್ತಿತ್ತು. ಬಹುಷಃ ಬೇರೆಲ್ಲಾದರೂ ಇಷ್ಟು ಹುಡುಕಿದ್ದರೆ ಭಾರೀ ಖಜಾನೆಯೇ ಸಿಗುತ್ತಿತ್ತೋ ಏನೋ, ಚೆಂಡು ಮಾತ್ರ ಸಿಗುತ್ತಿರಲಿಲ್ಲ. ಹುಡುಕುವ ಕಣ್ಣಿಗೆ ಹಳದಿ ಬಣ್ಣದ ವಸ್ತುಗಳೆಲ್ಲವೂ ಬಾಲ್ ನಂತೆಯೇ ಕಂಡು ದಾರಿ ತಪ್ಪಿಸುತ್ತಿದ್ದವು. ಇದು ಸಾಯಲಿ ಎಂದು ಎಡಕ್ಕೇನಾದರೂ ಹೊಡೆದರೆ ಮುಗಿದೇ ಹೋಯಿತು. ಚೆಂಡು ಮನೆಗೆ ತಗುಲಿ, ಮಣ್ಣಿನ ಗೋಡೆಯಿಂದ ಮಣ್ಣು ಧಸಾಲ್ಲನೆ ಉದುರಿ, ಒಳಗಿದ್ದ ಅಪ್ಪನಿಗೆ ಪಿತ್ತ ಕೆದರಿ, ನಾವು ಹುಗಿದ ವಿಕೆಟನ್ನೇ ಕಿತ್ತು ನಮಗೆ ನಾಲ್ಕು ಬಿಗಿಯುವುದರಲ್ಲಿ ಅನುಮಾನವೇ ಇರಲಿಲ್ಲ.

ಆ ದಿನಗಳಲ್ಲಿ ನೂರಿನ್ನೂರು ರೂಪಾಯಿ ಬೆಲೆ ಬಾಳುತ್ತಿದ್ದ ಹೊಸ ಬ್ಯಾಟು ಬೇಕೆಂದೇನಾದರೂ ಕೇಳಿದ್ದೇ ಆದರೆ ಅಪ್ಪ ಕೋಪದಲ್ಲಿ 'ಮಾಸ್ಟರ್-ಬ್ಲಾಸ್ಟರ್' ಆಗಿಬಿಡುವ ಅಪಾಯವಿದ್ದುದರಿಂದ ನಾವು ಆ 'ರಿಸ್ಕ್' ತೆಗೆದುಕೊಂಡಿರಲಿಲ್ಲ. ಯಥೇಚ್ಚವಾಗಿ ಬಿದ್ದಿರುತ್ತಿದ್ದ ತೆಂಗಿನ ಗರಿಗಳಲ್ಲಿ ಒಳ್ಳೆಯದೊಂದನ್ನು ಆಯ್ದು, ಅದರ ತಲೆಯನ್ನು ಅಗತ್ಯಕ್ಕೆ ತಕ್ಕಂತೆ ಕೊಯ್ದು, ಬುಡವನ್ನು ಹಿಡಿಕೆಯಂತೆ ಚಿಕ್ಕದಾಗಿ ಕತ್ತರಿಸಿ, ಮಧ್ಯದಲ್ಲಿ 'MRF' ಎಂದು ದೊಡ್ಡಕ್ಷರಗಳಲ್ಲಿ ಕೆತ್ತಿ ನಮ್ಮದೇ ಆದ ಬ್ಯಾಟನ್ನು ಸಿದ್ಧಪಡಿಸಿಕೊಂಡಿದ್ದೆವು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ನನ್ನ ಗೆಳೆಯನೊಬ್ಬ ಅಡಿಕೆ ಮರದ ಹಾಳೆಯನ್ನೇ ಕತ್ತರಿಸಿ 'ಪ್ಯಾಡ್' ನಂತೆ ಕೈ-ಕಾಲುಗಳಿಗೆ ಕಟ್ಟಿಕೊಂಡು ಯಾವ ತೆಂಡೂಲ್ಕರ್ ಗೂ ಕಮ್ಮಿ ಇಲ್ಲದಂತೆ ಸರ್ವಸನ್ನದ್ಧನಾಗಿ ತನ್ನ ಆರು ವರ್ಷದ ತಂಗಿಯ ಜೊತೆ ಆಡಲು ಅಂಗಳಕ್ಕಿಳಿಯುತ್ತಿದ್ದ! 

ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದ ತಮ್ಮಂದಿರನ್ನು ಜೊತೆಗೂಡಿಸಿಕೊಂಡು ಆಟವನ್ನು ಪೂರ್ಣಗೊಳಿಸುವುದು ನನ್ನ ಪಾಲಿಗೆ ದೊಡ್ಡ ಸವಾಲಾಗಿತ್ತು. ಸದಾ ತಾವೇ ಬ್ಯಾಟಿಂಗ್ ಮಾಡಬೇಕು ಹಾಗೂ ತಾವೇ ಗೆಲ್ಲಬೇಕು ಎಂದು ಹಟ ಮಾಡುತ್ತಿದ್ದ ಅವರಿಬ್ಬರೂ ಅದು ಸಾಧ್ಯವಾಗದೇ ಹೋದಾಗ ರಗಳೆ ತೆಗೆಯುತ್ತಿದ್ದರು. ಎಷ್ಟೋ ಸಲ ಕ್ರಿಕೆಟ್ ನಲ್ಲಿ ಆರಂಭವಾದ ಆಟ ಮಲ್ಲಯುದ್ಧ-ಮುಷ್ಠಿಯುದ್ಧಗಳಲ್ಲಿ ಅಂತ್ಯವಾಗುತ್ತಿತ್ತು. ಕೊನೆಗೆ ಈ ಹೊಡೆದಾಟವನ್ನು ತಡೆಯಲು ನಾವು ಅದ್ಭುತ ಉಪಾಯವೊಂದನ್ನು ಕಂಡುಕೊಂಡೆವು. ಅದೇನೆಂದರೆ ನಾವು ನಮ್ಮದೇ ಹೆಸರಿನಲ್ಲಿ ಆಡುವ ಬದಲು ಅಂತರಾಷ್ಟ್ರೀಯ ಆಟಗಾರರ ಹೆಸರಿನಲ್ಲಿ ಆಡುವುದು! ಒಮ್ಮೆ 'ಸಚಿನ್' ಆಗಿ ಔಟಾದ ನನ್ನ ತಮ್ಮ ಸ್ವಲ್ಪ ದೂರ ನಡೆದುಹೋಗಿ 'ಸೆಹ್ವಾಗ್' ಆಗಿ ಮರಳಿಬರುತ್ತಿದ್ದ. ನಾನ್ ಸ್ಟ್ರೈಕರ್ ನಲ್ಲಿರುವ ನನ್ನ ಚಿಕ್ಕಪ್ಪನ ಮಗ ದ್ರಾವಿಡ್ ಆದರೆ ಇವರಿಬ್ಬರಿಗೂ ಬೌಲಿಂಗ್ ಮಾಡುತ್ತಿರುವ ನಾನು ಜಹೀರ್ ಖಾನ್! ಹೀಗೆ ಕೋಟಿಕೋಟಿ ಬೆಲೆಬಾಳುವ ಆಟಗಾರರೆಲ್ಲಾ ನಮ್ಮ ಮುರುಕು ಮನೆಯಂಗಳದಲ್ಲಿ ತೆಂಗಿನ ಗರಿಯ ಬ್ಯಾಟ್ ಹಿಡಿದು ಬಿಟ್ಟಿಯಾಗಿ ಆಡಿ ಔಟಾಗುವ 'ಅದ್ಭುತ'ವನ್ನು ನೋಡಿ ನಮಗೆ ಕ್ರಿಕೆಟ್ ಕಲಿಸಿದ್ದ ನಮ್ಮಣ್ಣ ತಲೆತಲೆ ಚಚ್ಚಿಕೊಳ್ಳುತ್ತಿದ್ದರು.

ಆಗಷ್ಟೇ ಶುರುವಾಗಿದ್ದ ಐಪಿಎಲ್ ನಿಂದ ಪ್ರಭಾವಿತರಾದ ನಾವು 'ಎಂಪಿಎಲ್' (ಮೂಡುಗುಡ್ಡೆ ಪ್ರೀಮಿಯರ್ ಲೀಗ್!) ಎನ್ನುವ ಹೊಸ ಪಂದ್ಯಾವಳಿಯನ್ನೇ ಆರಂಭಿಸಿಬಿಟ್ಟೆವು. ಕೇವಲ ವಿದೇಶೀ ಆಟಗಾರರು ಮಾತ್ರವಲ್ಲದೆ ಎಷ್ಟೋ ವರ್ಷಗಳ ಕೆಳಗೆ ರಿಟೈರ್ಡ್ ಆಗಿರುವ ಆಟಗಾರರೂ ನಮ್ಮೀ ಪಂದ್ಯಾವಳಿಯಲ್ಲಿ ಬಿಡ್ ಆಗಿದ್ದರು. (ಒಮ್ಮೆಯಂತೂ ನನ್ನ ತಮ್ಮಂದಿರೇ ಕಟ್ಟಿದ ತಂಡವೊಂದರಲ್ಲಿ ಎರೆಡು ಮೂರು ಜನ ಡಬ್ಲ್ಯೂ.ಡಬ್ಲ್ಯೂ.ಇ. 'ಹೊಡೆದಾಟ'ಗಾರರೂ ಸೇರಿಕೊಂಡುಬಿಟ್ಟಿದ್ದರು! ಹೇಗಿದ್ದರೂ ಆಟದ ಕೊನೆಯಲ್ಲಿ ಬಡಿದಾಡಲಿಕ್ಕೆ ಬೇಕಾಗುತ್ತಾರೆಂದು ನಾನೂ ಸುಮ್ಮನಿದ್ದೆ.) ಒಮ್ಮೆ ಹೀಗೇ 'ಗಂಗೂಲಿ ಹೋದ್ನಂತೆ, ಗಿಲ್ ಕ್ರಿಸ್ಟ್ ಬಂದ್ನಂತೆ' ಎಂದು ಗಟ್ಟಿಯಾಗಿ ಮಾತನಾಡುತ್ತಾ ಆಡುತ್ತಿದ್ದಾಗ ಅಲ್ಲೇ ಇದ್ದ ಅಣ್ಣ "ಯಾರ್ಯಾರನ್ನೋ ಕರ್ಸ್ತೀರಲ್ಲಾ, ಹಂಗೇ ನಮ್ಮ ಕೊನೆ ತೆಗೆಯೋ ಮಂಜನನ್ನೂ ಕರ್ಸ್ರೋ ಮಾರಾಯಾ. ಅಡಿಕೆ ಕೊನೆ ಎಲ್ಲಾ ಹಣ್ಣಾಗಿದೆ" ಎಂದಾಗ ಕೆಲಸದಾಳುಗಳೆಲ್ಲ ಗೊಳ್ಳನೆ ನಕ್ಕಿದ್ದರು.

ಪಂದ್ಯದ ಪ್ರತೀ ಬಾಲಿನ ಸ್ಕೋರ್ ಮಾತ್ರವಲ್ಲದೇ, ನಂತರ ಆ ಪಂದ್ಯದ ಕುರಿತಾಗಿ ಪತ್ರಿಕೆಯಲ್ಲಿ ಬರುವ ವರದಿಯನ್ನೂ ಸಹಾ ಬರೆಯುತ್ತಿದ್ದೆವು. ಒರಿಜಿನಲ್ ಐಪಿಎಲ್ ನಂತೆ ಇಲ್ಲಿಯೂ ಸಹಾ ವಿವಾದಗಳಿಗೇನೂ ಕೊರತೆಯಿರಲಿಲ್ಲ. ತಮ್ಮ ಇಷ್ಟದ ಆಟಗಾರನ ಹೆಸರು ಬಂದಾಗ ತುಂಬಾ ಚೆನ್ನಾಗಿ ಆಡುತ್ತಿದ್ದ ನನ್ನ ತಮ್ಮಂದಿರು, ತಮಗೆ ಇಷ್ಟವಿಲ್ಲದವನು ಬಂದಾಗ ಬೇಕೆಂದೇ ಔಟಾಗುತ್ತಿದ್ದರು. ನೈಜ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಸದಾ ಹೆಚ್ಚೆಚ್ಚು ರನ್ ಗಳಿಸುತ್ತಾ ನಮ್ಮ ಕೋಪಕ್ಕೆ ಗುರಿಯಗಿದ್ದ ರಿಕಿ ಪಾಂಟಿಂಗ್ ನಂತಹಾ ಆಟಗಾರರು ನಮ್ಮ ಆಟದಲ್ಲಿ ಒಂದೂ ರನ್ ಹೊಡೆಯದೇ ತಮಗೆ ತಾವೇ ವಿಕೆಟ್ ಗೆ ಹೊಡೆದುಕೊಂಡು 'ಹಿಟ್ ವಿಕೆಟ್' ಆಗಿಬಿಡುತ್ತಿದ್ದರು! ಇದನ್ನು ಸಮರ್ಥಿಸಿಕೊಳ್ಳುವುದಕ್ಕೆ 'ಇಂಟರ್ನ್ಯಾಷನಲ್ ಮ್ಯಾಚ್ ಗಳೂ ಹೀಗೇ ಆಗೋದು' ಎನ್ನುವ ಹೊಸ ವಾದವನ್ನೇ ಸೃಷ್ಟಿಸಿದ್ದೆವು!

ನಮ್ಮ ಕ್ರಿಕೆಟ್ ಗಿದ್ದ ಅತಿದೊಡ್ಡ ವಿರೋಧಿಯೆಂದರೆ ನಮ್ಮ ದೊಡ್ಡಪ್ಪ. ಸದಾ ಏನಾದರೊಂದು ಉಪಯೋಗಕಾರಿ ಕೆಲಸ ಮಾಡುತ್ತಲೇ ಇರುತ್ತಿದ್ದ ಅವರ ಕಣ್ಣಿಗೆ ಈ ಕ್ರಿಕೆಟ್ ಎನ್ನುವುದು ಜಗತ್ತಿನ ಅತ್ಯಂತ ನಿರುಪಯುಕ್ತ ಚಟುವಟಿಕೆಯಂತೆ ಕಾಣುತ್ತಿತ್ತು. ಇತ್ತಕಡೆ ನಮ್ಮ ಅಟ ಶುರುವಾಗುತ್ತಿದ್ದಂತೆಯೇ ಅತ್ತಕಡೆ ಅವರ ಗೊಣಗಾಟದ ಕಾಮೆಂಟ್ರಿ ಶುರುವಾಗುತ್ತಿತ್ತು. ಒಂದು ಮಧ್ಯಾಹ್ನ ಎಂದಿನಂತೆ ನಮ್ಮ ಎಂಪಿಎಲ್ ಶುರುವಾಗಿತ್ತು. ದೊಡ್ಡಪ್ಪ ಮಲಗಿದ್ದಾರೆಂಬ ಧೈರ್ಯದಲ್ಲಿ ಟಾಸ್ ಹಾರಿಸಿ ಮೊದಲು ಬ್ಯಾಟಿಂಗ್ ಮಾಡುವ ತಂಡದ ಪರವಾಗಿ ಆಗಷ್ಟೇ ಆಟ ಆರಂಭಿಸಿದ್ದೆವು. ಅದೆಲ್ಲಿದ್ದರೋ ಗೊತ್ತಿಲ್ಲ, "ಮತ್ತೆ ಶುರುವಾಯ್ತಾ ನಿಮ್ ಗಲಾಟೆ?" ಎಂದು ಸೈಲೆನ್ಸರ್ ಅಳವಡಿಸಿರುವ ಗುಡುಗಿನಂತೆ ಗುಡುಗುತ್ತಾ ಅಂಗಳದಲ್ಲಿ ಪ್ರತ್ಯಕ್ಷವಾಗಿಯೇಬಿಟ್ಟರು. ನಾವು ಆಟ ನಿಲ್ಲಿಸಲಿಲ್ಲವಾದರೂ ಚೆಂಡು ಅವರ ಮನೆಯಂಗಳಕ್ಕೆ ಹೋಗದಂತೆ ನಿಧಾನವಾಗಿ ಆಡತೊಡಗಿದೆವು. ಪರಿಣಾಮವಾಗಿ ಮೊದಲು ಬ್ಯಾಟ್ ಮಾಡಿದ ತಂಡ 20 ಓವರ್ ಗಳಲ್ಲಿ ಕೇವಲ 99 ರನ್ ಗಳನ್ನಷ್ಟೇ ಗಳಿಸುವಂತಾಯಿತು. ಆದರೆ ಇನ್ನೊಂದು ತಂಡದ ಬ್ಯಾಟಿಂಗ್ ಮಾಡುವಾಗ ದೊಡ್ಡಪ್ಪ ಮನೆಯಲ್ಲಿರಲಿಲ್ಲವಾದ್ದರಿಂದ ಬಿಡುಬೀಸಾಗಿ ಬ್ಯಾಟ್ ಬೀಸಿ ಆ ಚಿಕ್ಕ ಮೊತ್ತವನ್ನು ಸುಲಭದಲ್ಲಿ 'ಚೇಸ್' ಮಾಡಲಾಯಿತು. ಪಂದ್ಯದ ಕೊನೆಗೆ 'ಮ್ಯಾನ್ ಆಫ್ ದಿ ಮ್ಯಾಚ್' ಕೊಡಬೇಕಲ್ಲಾ? ಮೊದಲ ಇನ್ನಿಂಗ್ಸ್ ಆಡುವಾಗ ನಮ್ಮನ್ನೆಲ್ಲಾ ಹೆದರಿಸಿ, ಚಿಕ್ಕ ಮೊತ್ತಕ್ಕೆ ಕಟ್ಟಿಹಾಕಲು ಪ್ರತ್ಯಕ್ಷ ಹಾಗೂ ಪರೊಕ್ಷ ಕಾರಣವಾಗಿದ್ದ ದೊಡ್ಡಪ್ಪನನ್ನೇ 'ಪಂದ್ಯ ಪುರುಷ' ಎಂದು ಒಮ್ಮತದಿಂದ ಘೋಷಿಸಲಾಯಿತು. 'ಮ್ಯಾನ್ ಆಫ್ ದಿ ಮ್ಯಾಚ್: ರಂಗಣ್ಣ ದೊಡ್ಡಪ್ಪ' ಎಂದು ಬರೆದುಕೊಂಡಿರುವ ಆ ಪುಸ್ತಕ ಹಳೆಯ ಟ್ರಂಕ್ ಒಂದರ ಮೂಲೆಯಲ್ಲಿ ಇಂದಿಗೂ ಹಾಗೇ ಇದೆ. ಗದರುತ್ತಿದ್ದ ದೊಡ್ಡಪ್ಪ ಮಾತ್ರ ಶಾಶ್ವತವಾಗಿ ಮಾತು ನಿಲ್ಲಿಸಿಬಿಟ್ಟಿದ್ದಾರೆ.

                        ****************

ಊರಿನಲ್ಲಿ, ಖಾಲಿ ಅಂಗಳ-ಬಯಲುಗಳಲ್ಲಿ ಕ್ರಿಕೆಟ್ ಆಡುವುದು ಒಂದು ಕಥೆಯಾದರೆ ಬೆಂಗಳೂರಿನಂತಹಾ ನಗರಗಳ ತುಂಬಿ ತುಳುಕುವ ಮೈದಾನಗಳಲ್ಲಿ ಆಡುವವರದು ಇನ್ನೊಂದು ಕಥೆ. ಇಲ್ಲಿ ಒಂದು ಮೈದಾನದಲ್ಲಿ ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ತಂಡಗಳು ಒಟ್ಟಿಗೇ ಕ್ರಿಕೆಟ್ ಆಡುತ್ತಿರುತ್ತವೆ. ಒಬ್ಬರ ಪಿಚ್ ಕೊನೆಯಾದ ಸ್ವಲ್ಪ ಅಂತರದಲ್ಲೇ ಇನ್ನೊಬ್ಬರದು ಆರಂಭವಾಗಿರುತ್ತದೆ. ಈ ಇಬ್ಬರ ಮಧ್ಯದ ಚಿಕ್ಕ ಗ್ಯಾಪ್ನಲ್ಲೇ ಪ್ಲಾಸ್ಟಿಕ್ ಬ್ಯಾಟು ಬಾಲು ಹಿಡದ ನಾಲ್ಕಾರು ಚಿಲ್ಟಾರಿಗಳ 'ಅಂಡರ್ ನೈಂಟೀನ್' ಮ್ಯಾಚ್ ನಡೆದಿರುತ್ತದೆ! ಆ ಕಡೆಯಿಂದೊಬ್ಬ ಬೌಲಿಂಗ್ ಮಾಡಲು ಓಡಿಬಂದರೆ ಇತ್ತಲಿಂದ ಇನ್ನೊಬ್ಬ ರನ್ ಗಳಿಸಲು ಓಡಿಹೋಗುತ್ತಾನೆ. ಇಬ್ಬರ ಮಧ್ಯದಲ್ಲಿ ಫೀಲ್ಡಿಂಗ್ ಮಾಡುವನೊಬ್ಬ ಅದೆಲ್ಲಿಂದಲೋ ನುಗ್ಗಿಬಂದು ಧಸಾಲ್ಲನೆ ಬೀಳುತ್ತಾನೆ. ಯಾರನ್ನು ಎತ್ತಬೇಕೋ, ಯಾರನ್ನು ಔಟ್ ಮಾಡಬೇಕೋ, ಯಾರಿಗೆ ಚೆಂಡು ಮರಳಿಸಬೇಕೋ... ಸಾಕ್ಷಾತ್ ದೇವರೇ ಬಂದರೂ ಕನ್ಫ್ಯೂಸ್ ಆಗುವುದರಲ್ಲಿ ಸಂಶಯವಿಲ್ಲ. ಇನ್ನು ಈ ಗೊಂದಲವೇ ಬೇಡವೆಂದು ಬೌಂಡರಿ ಕಾಯಲು ಸೀಮಾರೇಖೆಯ ಬಳಿ ನಿಂತು ಮೇಲೆ ನೋಡಿದರೆ ಒಂದೇ ಸಲಕ್ಕೆ ನಾಲ್ಕು ಚೆಂಡುಗಳು ಸಂಸಾರ ಸಮೇತ ಗಾಳಿಯಲ್ಲಿ ಹಾರಿಬರುತ್ತವೆ! ಅತ್ತಲಿಂದ ಯಾರೋ 'ಬಾಲ್ss.. ಬಾಲ್ss..' ಎಂದು ಕಿರುಚಿಕೊಳ್ಳುತ್ತಾರೆ. 'ಅಂಚಿ, ಪಿಂಚಿ, ಚಾವಲ ಚುಂಚಿ..' ಎಂದು ಕವಡೆ ಶಾಸ್ತ್ರ ಬಳಸಿ ಯಾವುದೋ ಒಂದು ಚೆಂಡನ್ನು ಕೊನೆಗೂ ಹಿಡಿದು, ಎದುರಾಳಿಯನ್ನು ಔಟ್ ಮಾಡಿದ ಸಂಭ್ರಮದಲ್ಲಿ 'ಹೀ ಯಾ.. ಹೂssss' ಎಂದು ಸಂಭ್ರಮಿಸವಾಗ ನಮ್ಮ ತಂಡದ ಆಟಗಾರರೆಲ್ಲ ಕೆಂಗಣ್ಣು ಬೀರುತ್ತಾ ನಿಂತಿರುತ್ತಾರೆ. ಏಕೆಂದು ತಿರುಗಿ ನೋಡಿದರೆ ನಾವು ನಿಜವಾಗಿ ಹಿಡಿಯಬೇಕಿದ್ದ ಚೆಂಡು ಬೌಂಡರಿ ಗೆರೆ ದಾಟಿ ಮೈದಾನದಾಚೆಗಿನ ಮೋರಿಯತ್ತ ಓಡುತ್ತಿರುತ್ತದೆ!

                        ****************

ವಯಸ್ಸು ಹೆಚ್ಚಿದಂತೆಲ್ಲ ಮೈದಾನ ದೂರವಾಗಿ ಆಸ್ಪತ್ರೆ ಹತ್ತಿರವಾಗುತ್ತಿದೆ. ಕ್ರಿಕೆಟ್ ಆಡುತ್ತಿದ್ದಾಗ ಒಳಗೆಲ್ಲೋ ಇದ್ದ ಹೊಟ್ಟೆ ಈಗ ಆಟವೆನ್ನುವುದು ಬರೀ ಟೀವಿಯಲ್ಲಿ ನೋಡುವ ಸರಕಾಗಿರುವುದರಿಂದ ಹೊರಬಂದು ಮತ್ತೆ ಸರಾಗವಾಗಿ ಕ್ರಿಕೆಟ್ ಆಡಲಾಗದಂತೆ ಮಾಡಿದೆ. ಅಲ್ಲದೇ ಉತ್ಸಾಹದಿಂದ ಪಂದ್ಯಗಳನ್ನೂ, ಪಂದ್ಯಾವಳಿಗಳನ್ನೂ ಆಯೋಜಿಸುತ್ತಿದ್ದ ಗೆಳೆಯರಿಂದು ಮನೆ, ಮಕ್ಕಳು, ಸಂಸಾರ ಎಂದು ಬಿಡುವಿಲ್ಲದಾಗಿದ್ದಾರೆ. ಅಲ್ಲಿ ಊರಿನಲ್ಲೂ ಅಮ್ಮ ಸಗಣಿನೀರು ಬಳಿದ ಅಂಗಳದಲ್ಲೀಗ ಆಡಿ ಧೂಳೆಬ್ಬಿಸುವ ಮಕ್ಕಳ ಕಲರವವಿಲ್ಲ. ಹತ್ತಾರು ಚೆಂಡುಗಳ ಬಚ್ಚಿಟ್ಟುಕೊಂಡು ಕಾಡಿಸುತ್ತಿದ್ದ ಪೊದೆಯಿಂದಾವೃತವಾದ ಹೊಂಡವಿಂದು ಹುಡುಕಲು ಬರುವ ಹುಡುಗರಿಲ್ಲದೇ ಹಾಳು ಬಿದ್ದಿದೆ.
ತಮ್ಮೊಡಲ ತುಂಬಾ ಹತ್ತಾರು ಸ್ಕೋರ್ ಹೆಸರಿನ ಸವಿಸವಿ ನೆನಪುಗಳನ್ನು ಬರೆದುಕೊಂಡಿರುವ ಪುಸ್ತಕಗಳು ಪೆಟ್ಟಿಗೆಯಲ್ಲಿ ಬೆಚ್ಚಗೆ ಕುಳಿತುಬಿಟ್ಟಿವೆ. ಊರಿಗೆ ಹೋದ ರಜೆಯ ಸಂಜೆಯೊಂದರಲ್ಲಿ ನಿಂತು ನೋಡುವಾಗ ಖಾಲೀ ಹೊಡೆಯುತ್ತಿರುವ ಅಂಗಳ ಮುಂದೆಂದೋ ಸಚಿನ್, ದ್ರಾವಿಡ್ ಗಳಾಗಿ ಮತ್ತೆ ಆಡಲು ಬರಲಿರುವ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಕಾಯುತ್ತಿರುವಂತೆ ಭಾಸವಾಗುತ್ತದೆ. 

ನಾನು ಹೀಗೆಲ್ಲಾ ಯೋಚಿಸುತ್ತಾ ನಿಂತಿರುವಾಗಲೇ ಅಂದು ನಮಗೆ ಕ್ರಿಕೆಟ್ ಕಲಿಸಿದ್ದ ಅಣ್ಣನ ಹತ್ತು ವರ್ಷದ ಮಗ "ಅಣ್ಣಾ.." ಎನ್ನುತ್ತಾ ನನ್ನತ್ತ ಓಡಿಬರುತ್ತಾನೆ. ಅವನ ಕೈಯ್ಯಲ್ಲಿ ಮತ್ತದೇ ಮೋಟುದ್ದದ ಬ್ಯಾಟು, ಟೆನ್ನಿಸ್ ಬಾಲು! ನೋಡುತ್ತಾ ನಿಂತ ನನ್ನ ಕೈಗೆ ಚೆಂಡು ಕೊಡುತ್ತಾ ಹೇಳುತ್ತಾನೆ:

"ಕ್ರಿಕೆತ್ ಆಡಣ ಕಣಾ... ನಾನು ವಿರಾಟ್ ಕೋಹ್ಲಿ, ನೀನು ಭುವನೇಶ್ವರ್ ಕುಮಾರ್!"

('ವಿಶ್ವವಾಣಿ'ಯ 23.7.2017ರ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಿತ)

ಬುಧವಾರ, ಜುಲೈ 5, 2017

ಸಮಯ ಅದೆಷ್ಟು ಸುಂದರವಾಗಿ ಹಿಂದಿರುಗಿ ಬರುತ್ತೆ ಅಲ್ವಾ?


ಮಧ್ಯಾಹ್ನ ಹನ್ನೆರೆಡರ ಸಮಯ. ಶ್ರೀನಿವಾಸನಗರದ ಆ ಮನೆಯಲ್ಲಿ ನೆನಪೊಂದು ಚಿಪ್ಪೊಡೆಯಲು ತಯಾರಾಗಿ ನನ್ನೆದುರು ಕುಳಿತಿತ್ತು. ನಾನು ತುಟಿಬಿಚ್ಚದೇ ನೋಡುತ್ತಿದ್ದೆ. 

"ನಾನು ನೈಟ್ ಡ್ಯೂಟಿ ಮುಗಿಸಿ ಆಗಷ್ಟೇ ರೂಮಿಗೆ ಬಂದಿದ್ದೆ" 
ಅವನು ಕೊನೆಗೂ ಮೌನ ಮುರಿದ.

"ಅಂದೇಕೋ ಎಂದೂ ಇಲ್ಲದ ಹಸಿವು. ನಿದ್ರೆ ಹತ್ತಲಿಲ್ಲ. ಬಲವಂತವಾಗಿ ಕಣ್ಮುಚ್ಚಿ ನಿದ್ರಿಸುವ ಪ್ರಯತ್ನದಲ್ಲಿದ್ದೆ. ಆಗಲೇ ರಾಜಾಜೀನಗರದ ಚಿಕ್ಕಮ್ಮನ ಮನೆಯಿಂದ ಕಾಲ್ ಬಂದಿದ್ದು. "ಈಗಲೇ ಹೊರಟು ಬಾ. ಅಪ್ಪಂಗೆ ಹುಷಾರಿಲ್ವಂತೆ" ಎಂದರು. ಆದರೆ ಅವರ ಮನೆ ತಲುಪುವ ಹೊತ್ತಿಗಾಗಲೇ ನನಗೆ ಅರ್ಥವಾಗಿಹೋಯಿತು- ಇದು ಕೇವಲ ಹುಷಾರು ತಪ್ಪಿರುವ ವಿಷಯವಲ್ಲ ಅಂತ"

ಅವನ ಧ್ವನಿಯಲ್ಲಿನ ಕಂಪನ ನೇರ ನನ್ನೆದೆಗೇ ಬಡಿಯುತ್ತಿತ್ತು. "ಮುಂದೇನಾಯ್ತು?" ಎನ್ನುವಂತೆ ನೋಡಿದೆ.

"ಕಾರು ಮಾಡಿಕೊಂಡು ನನ್ನನ್ನು ಊರಿಗೆ ಕರೆದೊಯ್ದರು. ಮನೆಯ ತುಂಬಾ ಜನ- ರಸ್ತೆಯಲ್ಲಿ, ಅಂಗಳದಲ್ಲಿ, ಜಗುಲಿಯಲ್ಲಿ... ನನ್ನನ್ನು ನೋಡುತ್ತಿದ್ದಂತೆ ಎಲ್ಲರೂ ಸರಿದುನಿಂತರು. ಆಗ ಕಂಡಿತು... ಜಗುಲಿಯಲ್ಲಿ ಮಲಗಿಸಿದ್ದ ಅಪ್ಪನ ದೇಹ..."

ಅವನ ಸ್ವರ ಮುಂದೆ ಮಾತನಾಡಲಾರದಷ್ಟು ಗದ್ಗದಿತವಾಯಿತು. ಅರೆ ನಿಮಿಷ ಮೌನವಾದ. ಅಂದು ನಡೆದ ಆ ಘಟನೆಯು ಚಿತ್ರಗಳಾಗಿ ನನ್ನ ಕಲ್ಪನೆಯಲ್ಲಿ ಕದಲತೊಡಗಿದವು.

"ಹಿಂದಿನ ದಿನ ರಾತ್ರೆಯಷ್ಟೇ ನನ್ನೊಂದಿಗೆ ಮಾತನಾಡಿದ್ದರು. ರಜೆ ಹಾಕಿ ಊರಿಗೆ ಬಾ ಎಂದಿದ್ದರು. ಅದೇ ಅವರೊಂದಿಗಿನ ಕೊನೆಯ ಮಾತಾಗಿಹೋಯಿತು"

ಅವನ ಕಣ್ಣು ತುಂಬಿ ಹರಿದವು, ಜೊತೆಗೆ ನನ್ನವೂ... ಅಪ್ಪನ ನೆನಪಿಗೆ ಹಾಗೂ ಹಳೆಯದನ್ನು ನೆನಪಿಸಿ ಅವನನ್ನು ಅಳಿಸಿದ ಪಶ್ಚಾತ್ತಾಪಕ್ಕೆ. ಏನು ಹೇಳಬೇಕೆಂದು ತಿಳಿಯಲಿಲ್ಲ. ಜನ್ಮನೀಡಿದ,  ಇಪ್ಪತ್ತೆರೆಡು ವರ್ಷಗಳ ಕಾಲ ನೆರಳಾಗಿ ಬೆಳೆಸಿದ, ಇನ್ನೂ ಇಪ್ಪತೈದು ವರ್ಷ ಜೊತೆಗಿದ್ದು ಮಗನ ಬದುಕಿನ ಏಳಿಗೆಗಳನ್ನು ಕಣ್ಣಾರೆ ಸವಿಯಬೇಕಿದ್ದ ತಂದೆಯನ್ನು ರಾತ್ರೆ ಬೆಳಗಾಗುವುದರೊಳಗೆ ಕಳಕೊಂಡ ಆ ನಿರ್ಭಾಗ್ಯ ಮಗನೊಂದಿಗೆ ಎರೆಡು ಹನಿ ಕಣ್ಣೀರಿನ ಹೊರತಾಗಿ ಬೇರೇನು ಮಾತನಾಡಲೂ ನನ್ನಿಂದಾಗಲಿಲ್ಲ. 

                    *************

ಪ್ರೀತಿಯ ಅಪ್ಪಾ,

ಈ ಘಟನೆಯನ್ನು ಕೇಳಿದ ಮೇಲೂ ನಿನ್ನ ನೆನಪಾಗದಿರುವುದಕ್ಕೆ ಹೇಗೆ ತಾನೇ ಸಾಧ್ಯ ಹೇಳು? ಯಾರದೋ ಅಪ್ಪನ ಕಥೆಕೇಳಿ ನನ್ನ ಕಣ್ಣಿನಲ್ಲಿ ನೀರಾಗಿ ತುಳುಕಿದ್ದು ನಿನ್ನ ಮಮತೆಯೇ ಅಲ್ವಾ? ಹೌದು... ಇದೇ ನನಗೂ ನಿನಗೂ ಇರುವ ವ್ಯತ್ಯಾಸ. ಪಟ್ಟಣದ ಐಶಾರಾಮಿನಲ್ಲಿ ಹಾಯಾಗಿರುವ ನನಗೆ ನಿನ್ನ ನೆನಪಾಗಬೇಕೆಂದರೆ ಒಂದೋ ಕಷ್ಟ ಬರಬೇಕು; ಇಲ್ಲಾ ಇಂಥಾದ್ದೊಂದು ಕಥೆ ಕೇಳಬೇಕು. ಆದರೆ ನಿನಗೆ ಹಾಗಲ್ಲ. ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರೆ ಮಲಗುವ ತನಕ ನೀನು ಸುರಿಸುವ ಸಾವಿರಾರು ಬೆವರ ಹನಿಗಳಲ್ಲಿ, ದೇವರ ತಲೆಯ ಮೇಲೆ ಹರಿಸುವ ಅಭಿಶೇಕದ ಧಾರೆಯಲ್ಲಿ, ಮಣ್ಣ ಉತ್ತುವ ಏದುಸಿರಿನಲ್ಲಿ, ಫಲವ ಹೊತ್ತುತರುವ ಸಂತಸದಲ್ಲಿ, ಕೊನೆಗೆ ನಡುರಾತ್ರೆಯಲ್ಲಿ ಹೆದರಿಸಿ ಎಚ್ಚರಗೊಳಿಸಿದ ಸ್ವಪ್ನದ ಕನವರಿಕೆಯಲ್ಲೂ ಇರುವುದು 'ಮಗ ಚೆನ್ನಾಗಿರಲಿ' ಎನ್ನುವ ಹಾರೈಕೆಯೊಂದೇ.

ನನಗಿನ್ನೂ ಚೆನ್ನಾಗಿ ನೆನಪಿದೆ ಅಪ್ಪಾ... ಬೆಳ್ಳಂಬೆಳಗ್ಗೆ ಅಳುತ್ತಾ ಏಳುತ್ತಿದ್ದ ನನ್ನ ಮುಖ ತೊಳೆಸಿ ನೀನು 'ಸಾಮಿ ಚಿತ್ತ ಮಾಡು' ಎಂದು ದೇವರೆದುರು ನಿಲ್ಲಿಸುತ್ತಿದ್ದುದು, 'ನಾನೂ ಬತ್ತೀನಿ ತಡಿಯಾ' ಎಂದು ಕೂಗುತ್ತಾ ಒಂದು ಕೈಯ್ಯಲ್ಲಿ ಜಾರಿಹೋಗುತ್ತಿರುವ ಚಡ್ಡಿಯನ್ನೂ, ಇನ್ನೊಂದು ಕೈಯ್ಯಲ್ಲಿ ಮೋಟುದ್ದದ ಪೈಪನ್ನೂ ಹಿಡಿದುಕೊಂಡು ಹಿಂದೆಹಿಂದೆ ಓಡಿ ಬರುತ್ತಿದ್ದ ನನ್ನ ಕೈ ಹಿಡಿದು ತೋಟಕ್ಕೆ ಕರೆದೊಯ್ಯುತ್ತಿದ್ದುದು, ಶಬ್ದಕ್ಕೇ ಹೆದರುವ ನನ್ನನ್ನು ಅಡಿಕೆಮರದ ಮರೆಯಲ್ಲಿ ನಿಲ್ಲಿಸಿ ನೀನು ಮೋಟಾರು ಸ್ಟಾರ್ಟ್ ಮಾಡುತ್ತಿದ್ದುದು, 'ಕೊನೆ ಬೀಳತ್ತೆ ಇಲ್ಲೇ ನಿಂತ್ಕ' ಎಂದು ನನ್ನನ್ನು ದೂರನಿಲ್ಲಿಸಿ ನೀನು ಅಡಿಕೆ ಕೊನೆ ಹಿಡಿಯುತ್ತಿದ್ದುದು..... ಎಲ್ಲವೂ ನಿನ್ನೆಯೋ ಮೊನ್ನೆಯೋ ನಡೆದಷ್ಟು ಹಸಿರಾಗಿವೆ. ನಿನ್ನಂತೆಯೇ ಕೈ ಕಟ್ಟಿ ನಿಲ್ಲುತ್ತಿದ್ದ ನನ್ನನ್ನು ನೋಡಿದವರೆಲ್ಲಾ "ಥೇಟ್ ಅಪ್ಪನ ಥರಾನೇ" ಎಂದಾಗ ನನಗೇನೋ ಒಂದು ಹೆಮ್ಮೆ. ಏಕೆಂದರೆ ಅವತ್ತಿನ ನನ್ನ ಪುಟ್ಟ ಪ್ರಪಂಚದಲ್ಲಿ ನೀನೇ ಹೀರೋ. ನನ್ನ ಬಿಟ್ಟು ನೀನು ಅಡಿಕೆ ಮಂಡಿಗೋ, ಅಜ್ಜನ ಮನೆಗೋ ಹೊರಟುನಿಂತಾಗ ನಾನು ಅದೆಷ್ಟು ಅಳುತ್ತಿದ್ದೆ! ನೀನು "ಪೇಪಿ ತರ್ತೀನಿ ಅಕಾ" ಎಂದು ಪೂಸಿ ಹೊಡೆದರೂ ಕೇಳುತ್ತಿರಲಿಲ್ಲ. "ನಾನೂ ಬತ್ತೀನಾ" ಎಂದು ರಚ್ಚೆ ಹಿಡಿದು ಹೊರಳಾಡುತ್ತಿದ್ದೆ. ನಿನ್ನ ಹಿಂದೆಯೇ ಬಸ್ಸಿನೊಳಕ್ಕೆ ನುಗ್ಗಲು ಬಂದ ನನ್ನನ್ನು ಅಮ್ಮ ಬಲವಂತವಾಗಿ ಎಳೆದೊಯ್ದು ಚುಳುಕೆಯೇಟು ಕೊಡುವವರೆಗೂ ನನ್ನ ಅಳು ನಿಲ್ಲುತ್ತಿರಲಿಲ್ಲ. ಸಾಗರದಿಂದ ಮರಳುವಾಗ ನೀನು ಹೊತ್ತು ತಂದಿದ್ದ ಮೂರು ಚಕ್ರದ ಸೈಕಲ್, ಪ್ರತಿದಿನ ಸಂಜೆ ಉಪೇಂದ್ರನ ಅಂಗಡಿಯಿಂದ ತರುತ್ತಿದ್ದ ಕಂಬಾರ್ ಕಟ್ಟು - ಬೆಣ್ಣೆ ಬಿಸ್ಕತ್ತು, ಸಾಗರದ ಅಡಿಕೆ ಮಂಡಿಯೆದುರಿನ ಮರದ ಬೆಂಚಿನಮೇಲೆ ಕೂರಿಸಿಕೊಂಡು ಓದಿಹೇಳಿದ ಡಿಂಗನ ಕಥೆ, ಯಾವುದೋ ಹೆಸರಿಲ್ಲದ ಗೂಡಂಗಡಿಯಲ್ಲಿ ಕೊಡಿಸಿದ ಪೀಲೆ, ನನ್ನನ್ನು ಮಾತ್ರ ಉಪ್ಪರಿಗೆಗೆ ಕರೆದೊಯ್ದು ತೋರಿಸಿದ್ದ ಹಳದಿಬಣ್ಣದ ಟಿಂಟಿಂ ಗಾಡಿ.... ಇವೆಲ್ಲವೂ ಇಂದಿಗೂ ನನ್ನ ಸ್ಮೃತಿಪೆಟ್ಟಿಗೆಯೊಳಗೆ ಭದ್ರವಾಗಿವೆ. ಮನಸ್ಸು ಮಗುವಾಗಿ ಹಠಹಿಡಿದ ಸಂಜೆಗಳಲ್ಲಿ ಅವನ್ನೆಲ್ಲಾ ಒಂದೊಂದಾಗಿ ಆಚೆ ತೆಗೆಯುತ್ತೇನೆ. ಮತ್ತದೇ ಸೈಕಲ್ ತುಳಿದು, ಕಂಬಾರ್ಕಟ್ಟು ಮೆಂದು, ಟಿಂಟಿಂ ಗಾಡಿಯನ್ನು ನೂಕಿ ಸಂಭ್ರಮಿಸುತ್ತೇನೆ, ಮನತುಂಬಿಕೊಳ್ಳುತ್ತೇನೆ.

ನಾನು ಶಾಲೆಗೆ ಹೋಗಲಾರಂಭಿಸಿದಾಗ ನನ್ನನ್ನು 'ಡ್ರಾಪ್' ಮಾಡುವುದಕ್ಕೆ ಅಮ್ಮ ಬರುತ್ತಿದ್ದಳೇ ಹೊರತು ನಿನ್ನನ್ನು ಕಳಿಸುತ್ತಿರಲಿಲ್ಲ. ಏಕೆಂದರೆ ಶಾಲೆಯ ಗೇಟು ತಲುಪಿದಕೂಡಲೇ 'ಹೋ..' ಎಂದು ಅಳುತ್ತಾ "ನಾನು ಶಾಲೆಗೆ ಹೋಗಲ್ಲಾ.." ಎಂದು ಹಠಹಿಡಿಯುತ್ತಿದ್ದ ನನಗೆ ಬೈದು ಬೆದರಿಸುವ ಮನಸ್ಸಿರದ ನೀನು "ನಾಳೆಯಿಂದ ಹೋದ್ರಾಯ್ತು ಬಾ" ಎಂದು ಮರಳಿ ಮನೆಗೆ ಕರೆತರುತ್ತಿದ್ದೆ. ಆದರೆ ನನ್ನೀ ಅಳು ಹಠಗಳೆಲ್ಲಾ ಅಮ್ಮನ ಹತ್ತಿರ ನಡೆಯುತ್ತಿರಲಿಲ್ಲ. "ಹೋಗ್ತೀಯಾ ಇಲ್ವಾ" ಎಂದು ದಾಸವಾಳಗಿಡದ ಬರಲು ಹಿಡಿದು ಬೆನ್ನಟ್ಟಿಬರಲಾರಂಭಿಸಿದಳೆಂದರೆ, ನಾನು ಶಾಲೆ ತಲುಪುವತನಕ ಅವಳ 'ಚೇಸಿಂಗ್' ನಿಲ್ಲುತ್ತಿರಲಿಲ್ಲ.

ನಿನ್ನದು ಒಂದು ಥರಾ ಕರಡಿಪ್ರೀತಿ! ನನಗೆ ಹೊಡೆದನೆಂಬ ಕಾರಣಕ್ಕೆ ಮಾವನ ಮಗನನ್ನು ಗಿರಿಗಿರಿ ತಿರುಗಿಸಿ ಬಿಸುಟಿದ್ದೆಯಲ್ಲಾ.... ಅದನ್ನು ನೆನಪಿಸಿಕೊಂಡಾಗಲೆಲ್ಲಾ ಹಾಗನಿಸುತ್ತದೆ. ಕೋಪವನ್ನು ಸದಾ ನಿನ್ನ ಪಟಾಪಟಿ ಚಡ್ಡಿಯ ಜೇಬಿನಲ್ಲೇ ಇಟ್ಟುಕೊಂಡಿರುತ್ತೀಯ ಅಲ್ವಾ? ಈ ವಿಷಯದಲ್ಲಿ ನಿನ್ನ ಆವೇಶಕ್ಕೆ ಸಿಲುಕುವವೆಂದರೆ ಮನುಷ್ಯರಿಗಿಂತ ಹೆಚ್ಚಾಗಿ ವಸ್ತುಗಳು! ಕಾರಣವೇ ಇಲ್ಲದೆ ಕನೆಕ್ಷನ್ ಕಳಚಿಹೋದ ನೀರಿನ ಪೈಪು, ಏನನ್ನೋ ಕಡಿಯುವಾಗ ಕೈಮೇಲೆಬಂದ ಕತ್ತಿ, ಒದ್ದೆಯಾಗಿ ನಿನ್ನ ಕಾಲು ಜಾರುವಂತೆ ಮಾಡಿದ ಸಿಮೆಂಟುನೆಲ, ನಡೆಯುವಾಗ ತಲೆಗೆತಾಗಿ ನೋವುಂಟುಮಾಡಿದ ಬಾಗಿಲಿನ ಛಾವಣಿ, ಸರಿಯಾಗಿ ಹಾಡದೆ ಕೊರ್ ಎನ್ನುವ ರೇಡಿಯೋ... ಇವೆಲ್ಲವೂ ನಿನ್ನಿಂದ ಬಿಸಾಡಿಸಿಕೊಂಡು, 'ಸಾಯಿ' ಎಂದು ಬೈಸಿಕೊಂಡವುಗಳೇ. ಆಗೆಲ್ಲಾ ಅಮ್ಮ ಮರೆಯಲ್ಲಿ ನಿಂತು ಮುಸಿಮುಸಿ ನಗುತ್ತಿದ್ದಳು, ಜೊತೆಗೆ ನಾನೂ. ಆದರೆ ಈಗ ಅನಿಸುತ್ತಿದೆ: ಠೀಕುಠಾಕಿನ ಬಣ್ಣದ ಜಗತ್ತಿಗೆ ಹೊಂದಿಕೊಳ್ಳಲಾಗದ, ಕಡೆಗಣಿಸಿ ಮೂಲೆಗುಂಪು ಮಾಡಿದವರಿಗೆ ಎದುರು ಹೇಳಲಾರದ ಬಡತನದ ಅಸಹಾಯಕತೆಯನ್ನು ಹೀಗೆ ವಸ್ತುಗಳ ಮೇಲೆ ತೀರಿಸಿಕೊಳ್ಳುವುದನ್ನ ಅಭ್ಯಾಸಮಾಡಿಕೊಂಡಿದ್ದೆಯೆಂದು.

ಶ್.... ಅಮ್ಮನಿಗೆ ಕೇಳದಂತೆ ಮೆತ್ತಗೆ ಹೇಳು. ದಿನವಿಡೀ ತೋಟದಲ್ಲಿ, ಬೇಲಿ-ಪೊದರುಗಳ ಇರುಕಿನಲ್ಲೇ ಓಡಾಡುವವನಾಗಿದ್ದರೂ ನಿನಗೆ ಹಾವು-ಚೇಳುಗಳೆಂದರೆ, ಕಾಡು ಪ್ರಾಣಿಗಳೆಂದರೆ ತುಂಬಾ ಭಯ ಅಲ್ವಾ? ಮದುವೆಯಾದ ಹೊಸತರಲ್ಲಿ ಅಮ್ಮನಜೊತೆ ತೋಟದಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹಾರ್ಬೆಕ್ಕೊಂದು (ಮರದ ಮೇಲೆ ವಾಸಿಸುವ ಬೆಕ್ಕಿನ ಜಾತಿಗೆ ಸೇರಿದ ಪುಟ್ಟ ಪ್ರಾಣಿ) ಮರದಿಂದ ಮರಕ್ಕೆ ಹಾರುತ್ತಾ ಬರುತ್ತಿರುವುದನ್ನು ನೋಡಿ ಗಾಬರಿಯಾದ ನೀನು ಜೊತೆಗಿದ್ದ ಹೆಂಡತಿಯನ್ನು ಅಲ್ಲೇ ಬಿಟ್ಟು ಓಟಕಿತ್ತಿದ್ದೆಯಂತೆ? ತೋಟದ ಅಂಚಿನ ಸುರಕ್ಷಿತ ಜಾಗ ತಲುಪಿ 'ಹೆಂಡತಿ ಇದಾಳಾ ಇಲ್ಲಾ ಹಾರ್ಬೆಕ್ಕು ಕಚ್ಕೊಂಡೋಯ್ತಾ' ಎನ್ನುವಂತೆ ತಿರುಗಿ ನೋಡಿದ್ದೆಯಂತೆ? ನಿನ್ನ ಓಟದ ರಭಸವನ್ನು ತನ್ನ ಪಾಡಿಗೆ ತಾನು ಆಡುತ್ತಿದ್ದ ಆ ಪುಟ್ಟ ಪ್ರಾಣಿಯೂ ಬೆರಗಾಗಿ ನಿಂತು ನೋಡಿತಂತೆ. ಅಮ್ಮ ಆಗಾಗ ಹೇಳಿಕೊಂಡು ನಗುತ್ತಿರುತ್ತಾಳೆ. ಆದರೂ ಕಾಡು ಪ್ರಾಣಿಗಳೆಂದರೆ ನಿನಗೆ ತುಂಬಾ ಕುತೂಹಲ. ಅದಕ್ಕೆಂದೇ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲನ್ನು ಹಾಕಿಸಿಕೊಂಡಿದ್ದೀಯ. ಅದರಲ್ಲಿ ಬರುವ ಹುಲಿ, ಸಿಂಹ, ಚಿರತೆಗಳನ್ನೆಲ್ಲಾ ನೋಡುತ್ತಾ ಮೈಮರೆಯುತ್ತೀಯ. ಮುಂದಿನಸಲ ನೀನು ಬೆಂಗಳೂರಿಗೆ ಬಂದಾಗ ಬನ್ನೇರುಘಟ್ಟದ ಸಂರಕ್ಷಿತಾರಣ್ಯದಲ್ಲಿ 'ಸಫಾರಿ'ಗೆ ಕರೆದೊಯ್ಯುತ್ತೇನೆ. ನಿನ್ನ ನೆಚ್ಚಿನ ಹುಲಿ, ಸಿಂಹ, ಕರಡಿ, ಹೆಬ್ಬಾವುಗಳನ್ನೆಲ್ಲಾ ಹತ್ತಿರದಿಂದ ನೋಡಿದಾಗ ನಿನ್ನ ಮುಖದಲ್ಲಿ ಮೂಡುವ ಬೆರಗನ್ನು ಒಮ್ಮೆ ನೋಡಬೇಕೆಂಬ ಆಸೆ ನನಗೆ.

ಇನ್ನು ಹಳೆಯ ಸಿನೆಮಾಗಳೆಂದರೆ ನಿನಗೆ ಇನ್ನಿಲ್ಲದಷ್ಟು ಹುಚ್ಚು. ಟಿವಿಯಲ್ಲಿ ಚಾನೆಲ್ ಚೇಂಜ್ ಮಾಡುವಾಗ ಮಧ್ಯದಲ್ಲೆಲ್ಲೋ ಅಪ್ಪಿತಪ್ಪಿ ಡಾ. ರಾಜಕುಮಾರ್ ರ ಮುಖ ಕಂಡರೆ ಸಾಕು "ಹೇ ತಡಿತಡಿ, ಹಾಕು ಅದನ್ನ" ಎಂದು ಕುಳಿತುಬಿಡ್ತೀಯ. ಅವರ ಪ್ರತಿಯೊಂದು ಸಿನೆಮಾವನ್ನೂ ನಿನ್ನ ಯಾವುದೋಒಂದು ಹಳೆಯ, ಮಧುರ ನೆನಪಿನೊಂದಿಗೆ ಬೆಸೆದುಕೊಂಡಿದ್ದೀಯ. ಯಾವ ಸಿನೆಮಾ ಯಾವ ವರ್ಷ ರಿಲೀಸ್ ಆಯ್ತು, ಅದರ ನಟರು, ಸಂಗೀತ-ಸಾಹಿತ್ಯ ನಿರ್ದೇಶಕರು ಯಾರ್ಯಾರು, ಅಂದಿನ ಗ್ರಾಮಪಂಚಾಯತಿಯ ಗ್ರಾಮಾಫೋನು ಆ ಹಾಡುಗಳನ್ನು ಹೇಗೆ ಹಾಡುತ್ತಿತ್ತು, ಕಾಮೆಂಟರಿ ಕೇಳುವ ಅಣ್ಣನ ಜೊತೆ 'ಚಿತ್ರಗೀತೆ ಹಾಕು' ಎಂದು ಹೇಗೆಲ್ಲಾ ಜಗಳಾಡಿದ್ದೆ... ಇದನ್ನೆಲ್ಲಾ ಮತ್ತೆಮತ್ತೆ ನೆನಪಿಸಿಕೊಂಡು ಹೇಳುತ್ತೀಯ, ತೀರಾ ನಮಗೂ ಬಾಯಿಪಾಠವಾಗುವಷ್ಟು! ಚಿಕ್ಕ ಮಗುವೊಂದು ತನ್ಮಯನಾಗಿ ಕಾರ್ಟೂನು ನೋಡುವಷ್ಟೇ ಶ್ರದ್ಧೆಯಿಂದ ಚಲನಚಿತ್ರದೊಳಗೆ ಮುಳುಗಿಹೋಗ್ತೀಯ ಅಲ್ವಾ?ಅವತ್ತು ಪಕ್ಕದಮನೆಯಲ್ಲಿ ಮನೆಯವರು, ಕೆಲಸದವರು ಎಲ್ಲರೂ ಅಡಿಕೆಸುಲಿಯುತ್ತಾ ಕುಳಿತಿದ್ದಾಗ ಹಾಕಿದ್ದ ಫಿಲಮ್ಮೊಂದರಲ್ಲಿ ವಿಲನ್ ಹೀರೋನನ್ನು ಹೊಡೆಯುವ ದೃಶ್ಯನೋಡಿ ರೊಚ್ಚಿಗೆದ್ದ ನೀನು "ಯಾಕೋ ಹೊಡೆತ ತಿಂತೀಯಾ? ತಿರುಗಿ ಒದೆಯೋ ಅವ್ನಿಗೆ!" ಎಂದು ಕೂಗುತ್ತಾ ಟೀವಿಯತ್ತ ನುಗ್ಗಿದ್ದ ದೃಶ್ಯ ಈಗಲೂ ಕಣ್ಣಿಮುಂದಿದೆ. ಎಲ್ಲರೂ "ಹೋ" ಎಂದು ಕಿರುಚಿ ನಿನ್ನನ್ನು ಪಿಚ್ಚರ್ರಿನ ಹೊಡೆದಾಟದ ಕಣದಿಂದ ಈ ಲೋಕಕ್ಕೆ ಮರಳಿತರದೇಹೋಗಿದ್ದರೆ ವಿಲನ್ ನ ಮೇಲಿನ ಕೋಪಕ್ಕೆ ಟಿವಿಗೊಂದು ಗತಿ ಕಾಣಿಸುತ್ತಿದ್ದಿ ಅಲ್ವಾ? ಅಂದು ಅದು ತಮಾಷೆಯಾಗಿ ಕಂಡಿತ್ತಾದರೂ ಈಗ ಅನಿಸುತ್ತಿದೆ- ನಿನ್ನ ಈ ಕಳೆದುಹೋಗುವಿಕೆ, ತನ್ಮಯತೆ, ಭಾವುಕತೆಗಳು ನನ್ನೊಳಗೂ ಹರಿದುಬಂದಿವೆಯೇನೋ ಎಂದು.

ಅರವತ್ತು ವರ್ಷಗಳ ಜೀವನದಲ್ಲಿ ನೀನು ಸೃಷ್ಟಿಸಿಕೊಂಡ ಪ್ರಪಂಚದೊಳಗೊಮ್ಮೆ ಇಣುಕಿದರೆ ಅಚ್ಚರಿಯಾಗುತ್ತದೆ. ಕೊಳೆರೋಗ ಬಂದರೂ, ಬೆಳೆ ನೆಲಕಚ್ಚಿದರೂ ಯಾವ ಸರಕಾರದೆದುರೂ ಕೈಚಾಚಲಿಲ್ಲ. ಯಾರೊಬ್ಬರ ನಯಾಪೈಸೆಯ ಋಣವನ್ನೂ ಇಟ್ಟುಕೊಳ್ಳಲಿಲ್ಲ. ನಿನ್ನ ಖಾಯಿಲೆಗಳಿಗೆ ನಿನ್ನದೇ ವೈದ್ಯ, ನಿನ್ನದೇ ಪಥ್ಯ. ಹೊಟ್ಟೆನೋವು ಬಂದಾಗ ಪಣತಕೊಟ್ಟಿಗೆಗೆ ಹೋಗಿ ತಲೆಕೆಳಗಾಗಿ ನಿಲ್ಲುವುದು, ಟೀ ಕುಡಿಯುವುದು, ದ್ರಾಕ್ಷಿ ತಿನ್ನುವುದು.... ಇದನ್ನೆಲ್ಲಾ ನಿನಗೆ ಯಾವ ವೈದ್ಯಪುಸ್ತಕ ಹೇಳಿಕೊಟ್ಟಿತೋ ಗೊತ್ತಿಲ್ಲ. ನಿನ್ನ ನಂಬಿಕೆಗಳೇ ನಿನಗೆ ಔಷಧಿ! ಉಪ್ಪು- ಹುಳಿಗಳಿಲ್ಲದ ಸಾದಾ ಊಟ ತಿಂದುಕೊಂಡೇ ದಿನಪೂರ್ತಿ ಮನೆಯಂಗಳದ ಈ ಅಂಚಿನಿಂದ ತೋಟದಕೊನೆಯ ಆ ಅಂಚಿನತನಕದ ಒಂದೊಂದು ಹುಲ್ಲುಕಡ್ಡಿಯನ್ನೂ ವಿಚಾರಿಸಿಕೊಳ್ಳುವ ಚೈತನ್ಯ, ಶ್ರದ್ಧೆಯನ್ನು ಕೇವಲ ಎಸೆಸ್ಸೆಲ್ಸಿ ಕಲಿತ ನಿನಗೆ ಅದ್ಯಾವ ಶಾಲೆ ಕಲಿಸಿಕೊಟ್ಟಿತೆಂಬುದೇ ನನಗೆ ದೊಡ್ಡ ಅಚ್ಚರಿ. ಈ ವಯಸ್ಸಿನಲ್ಲೂ ನೀನು ದೂರದ ಗುಡ್ಡದಿಂದ ಹೊತ್ತು ತರುವ ದೈತ್ಯ ಸೊಪ್ಪಿನ ಹೊರೆಯನ್ನು ಅಲ್ಲಾಡಿಸಲೂ ನನ್ನಿಂದಾಗುವುದಿಲ್ಲ!

                       ****************

ಬೆಳೆದಂತೆಲ್ಲಾ ಮಕ್ಕಳು ದೊಡ್ಡವರಾಗುತ್ತಾರೆ, ಹೆತ್ತವರು ಮಕ್ಕಳಾಗುತ್ತಾರೆ. ವರ್ಷಗಳ ಕೆಳಗೆ ನೀನು ಮೊದಲಬಾರಿಗೆ ಬೆಂಗಳೂರಿಗೆ ಬಂದು ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದೆ. ಹಳ್ಳಿಯ ಹಸಿರು, ನಿಶ್ಯಬ್ದತೆಗಳಲ್ಲಿ ಬೆರೆತುಹೋಗಿದ್ದ ನಿನಗೆ ಈ ಬೆಂಗಳೂರಿನ ಸಂದಣಿ, ಸದ್ದುಗದ್ದಲಗಳನ್ನು ನೋಡಿ ಆತಂಕವಾಗಿತ್ತು. ರಾತ್ರೆ ಮಲಗುವುದಕ್ಕೆ ಜಾಗ ಸಾಲುವುದಿಲ್ಲವೆಂದು ನಿನ್ನನ್ನು ಅಲ್ಲೇ ಬಿಟ್ಟ ನಾನು ಇನ್ನೊಬ್ಬ ಚಿಕ್ಕಮ್ಮನ ಮನೆಗೆ ಹೊರಟುನಿಂತಾಗ "ಪುಟ್ಟು ಇಲ್ಲೇ ಇರಲಿ" ಎಂದು ಹಠಮಾಡುವಂತೆ ಹೇಳಿದೆಯಲ್ಲಾ, ಆಗೇಕೋ ಅಪರಿಚಿತ ಊರಿನಲ್ಲಿ ಅಮ್ಮ ಜೊತೆಗೇ ಇರಬೇಕೆಂದು ಹಠಮಾಡುವ ಮುಗ್ಧ ಮಗುವಿನಂತೆ ಕಂಡುಬಿಟ್ಟೆ. ಬಸವನಗುಡಿಯ ಭರಗುಟ್ಟುವ ಟ್ರಾಫಿಕ್ನಲ್ಲಿ ನಿನ್ನ ಕೈಹಿಡಿದು ರಸ್ತೆ ದಾಟಿಸುತ್ತಿದ್ದಾಗ ಹಿಂದೆಂದೋ ಇದೇ ಕೈ ಹಿಡಿದು ನಾನು ಹೆದರುತ್ತಾ ರಸ್ತೆದಾಟಿದ್ದ ನೆನಪೊಂದು ಮನದಾಳದಲ್ಲಿ ಮುಗುಳ್ನಕ್ಕಿತ್ತು.

ನಾಲ್ಕು ಜನರೊಂದಿಗೆ ಬೆರೆಯದ ನಿನ್ನ ಏಕಾಂಗಿತನ, ಸಿಟ್ಟನ್ನು ದೊಡ್ಡದನಿಯಲ್ಲಿ ವ್ಯಕ್ತಪಡಿಸುವ ನಿನ್ನ ಕೋಪಗಳನ್ನು ನೋಡಿದವರೆಲ್ಲಾ ನಿನ್ನನ್ನು 'ಒಂಟಿಗ', 'ರಾಕ್ಷಸ' ಎನ್ನುತ್ತಾರೆ. ಆದರೆ ನನಗೆ ಮಾತ್ರ ಗೊತ್ತು ಅಪ್ಪಾ.. ಹೆರಿಗೆಯ ಸಮಯದಲ್ಲಿ ಅಮ್ಮನನ್ನು ಆಸ್ಪತ್ರೆಗೆ ಸೇರಿಸಲು ನೆರವಾದ ಹಿರಿಯನೆದುರು, ಮನೆಗೆ ಕರೆದು ಅಕ್ಕರೆಯಿಂದ ಉಪಚರಿಸಿದ ಅಣ್ಣನ ಮಗನೆದುರು, ಬಹಳ ವರ್ಷಗಳ ನಂತರ ನೋಡಿದ ಗ್ರಾಮದೇವರ ಉತ್ಸವದೆದುರು ನಿಂತು ಭಾವುಕನಾಗಿ ಕಣ್ಣೊರೆಸಿಕೊಂಡ ನಿನ್ನ ಮನಸ್ಸು ಅದೆಷ್ಟು ಮೃದುವೆನ್ನುವುದು. ನಿನ್ನೊಳಗೆ ಹತ್ತಾರು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡ, ಯಾರೂ ಗುರುತಿಸದೇ ಹೋದರೂ ಇಂದಿಗೂ ಜೀವಂತವಾಗಿರುವ ನಟನೊಬ್ಬನಿದ್ದಾನೆ. ಎಂತಹಾ ರೇಡಿಯೋವನ್ನೂ ಹಾಡಿಸಬಲ್ಲ 'ಮೆಕ್ಯಾನಿಕ್' ಇದ್ದಾನೆ. ಯಾವ ಸಂಘ-ಸಂಸ್ಥೆಯೂ ಗುರುತಿಸಿ ಸನ್ಮಾನಿಸದೇಹೋದ ಪ್ರಗತಿಪರ ಕೃಷಿಕನಿದ್ದಾನೆ. ಕೊನೆಗೆ ಸಮಾಜಕ್ಕೆ ಹೆದರಿ ತನ್ನ ಸಾಮರ್ಥ್ಯಗಳನ್ನು ತನ್ನೊಳಗೇ ಮುಚ್ಚಿಟ್ಟುಕೊಂಡು ಕೊಂದುಕೊಂಡ ಮುಗ್ಧ ಅಸಹಾಯಕನಿದ್ದಾನೆ....

ಆದರೇನಂತೆ? ನಾನಿದ್ದೇನೆ.. ನೀನು ಅರ್ಧ ಹೆಣೆದು ಪಕ್ಕಕ್ಕಿಟ್ಟ ಕಸೂತಿಗಳಿಂದು ನನ್ನ ಕೈಯ್ಯಲ್ಲಿವೆ. ನಿನ್ನ ಕನಸಿನ ಮುಂದುವರಿದ ಭಾಗವೇ ನಾನಾಗಿ ಎಲ್ಲವನ್ನೂ ಪೂರ್ಣಗೊಳಿಸುತ್ತೇನೆ. ನೀ ನೆಟ್ಟ ಪ್ರತಿ ಗಿಡದ ಹಸಿರನ್ನೂ ನನ್ನ ಉಸಿರಿನಂತೆ ಕಾಯುತ್ತೇನೆ...

ಹೇಳೋಕೆ ಮರೆತೆ. ಮೊನ್ನೆ ನನಗೊಂದು ಕನಸು ಬಿತ್ತು. ಬೆಳಗಿನಜಾವ ಬಿದ್ದ ನಿಜವಾಗುವ ಕನಸು! ಅದರಲ್ಲಿ ನೀನು ಮುಂದೆಂದೋ ಹುಟ್ಟಲಿರುವ ನನ್ನ ಪುಟಾಣಿ ಮಗಳ ಕೈಹಿಡಿದು ತೋಟಕ್ಕೆ ನಡೆಸಿಕೊಂಡು ಹೋಗುತ್ತಿದ್ದೆ. ಅಂದು ನನ್ನ ನಡೆಸಿಕೊಂಡು ಹೋಗಿದ್ದೆಯಲ್ಲಾ, ಹಾಗೇ!

ಸಮಯ ಅದೆಷ್ಟು ಸುಂದರವಾಗಿ ಹಿಂದಿರುಗಿಬರುತ್ತದೆ ಅಲ್ವಾ?

ಇಂತಿ ನಿನ್ನ ಪ್ರೀತಿಯ
ಪುಟ್ಟು

(ಶ್ರೀ. ಗುರುಪ್ರಸಾದ ಕುರ್ತಕೋಟಿ ಅವರು ಸಂಪಾದಿಸಿದ 'ಎಲ್ಲರಂಥವನಲ್ಲ ನನ್ನಪ್ಪ' ಕೃತಿಯಲ್ಲಿ ಪ್ರಕಟವಾದ ಲೇಖನ)

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...