ಬುಧವಾರ, ಜುಲೈ 8, 2020

ಗುಮಾಸ್ತ

(ಮಯೂರದ ಮಾರ್ಚ್ 2020 ಸಂಚಿಕೆಯಲ್ಲಿ ಪ್ರಕಟವಾದ ಕಥೆ)


ಕಿಕಿಕ್ಕಿರಿದು ತುಂಬಿದ್ದ ಸಿಟಿ ಬಸ್ಸು ತನ್ನೊಳಗೆ ಇಂಚಿಗೊಬ್ಬರಂತೆ ನಿಂತಿದ್ದ ಪ್ರಯಾಣಿಕರನ್ನು ಕುಲುಕಾಡಿಸುತ್ತಾ ಮೆಲ್ಲನೆ ಮುನ್ನಡೆಯುತ್ತಿತ್ತು. ರಶ್, ಸೆಖೆ, ಧೂಳುಗಳಲ್ಲಿ ಬೇಯುತ್ತಾ, ರಾಡು, ಕಂಬಿ, ಚೈನುಗಳನ್ನು ಹಿಡಿದು ಅಲ್ಲಾಡುತ್ತಾ ನಿಂತಿದ್ದ, ಇನ್ನು ಸ್ವಲ್ಪ ಸಮಯದಲ್ಲಿ ಯಾವ್ಯಾವುದೋ ಆಫೀಸು, ಫ್ಯಾಕ್ಟರಿಗಳ ಒತ್ತಡದ ಕೆಲಸಗಳ ಪಾಲಾಗಲಿದ್ದ ಉದ್ಯೋಗಿಗಳು ಯಾವಾಗ ಬೇಕಾದರೂ ಸಿಡಿಯಬಹುದಾದ ಬಾಂಬುಗಳಂತೆ ಮುಖ ಸಿಂಡರಿಸಿಕೊಂಡು ನಿಂತಿದ್ದರು. ಅವರ ನಡುವೆ ಕಷ್ಟದಲ್ಲಿ ಕಾಲೂರಿ ನಿಂತಿದ್ದ ರಾಜೀವ ಬಸ್ಸು ನಿಂತು ಚಲಿಸಲಾರಂಭಿಸಿದಾಗ ಹಿಂದಕ್ಕೂ, ಬ್ರೇಕು ಹಾಕಿದಾಗ ಮುಂದಕ್ಕೂ ವಾಲುತ್ತಾ ಅಸಮಾಧಾನದಲ್ಲಿ 'ಪ್ಚ್' ಎಂದ. 


ಬರೀ ಆರೇಳು ಕಿಲೋಮೀಟರ್ ದೂರದ ಆಫೀಸು. ಬಿರುಸಾಗಿ ತುಳಿದರೆ ಮೊವ್ವತ್ತು ನಿಮಿಷಕ್ಕೆ ಸೈಕಲ್ನಲ್ಲೇ ತಲುಪಿಬಿಡಬಹುದು. ಆದರೆ ಬಸ್ಸೆಂಬ ಈ ಶರವೇಗದ ವಾಹನಕ್ಕೂ ಒಂದೂವರೆ ಗಂಟೆ ತಗುಲುತ್ತದೆ. ಇದು ಈ ಬೆಂಗಳೂರು ಟ್ರಾಫಿಕ್ ನ ವಿಶ್ವರೂಪ. ಇವತ್ತೇನೋ ಹತ್ತೂ ಮೊವ್ವತ್ತರ ಬಸ್ಸಿನಲ್ಲಿದ್ದಾನೆ. ಆದರೆ ಪ್ರತಿದಿನ ಬೆಳಗ್ಗೆ ಆರೂ ಮೊವ್ವತ್ತಕ್ಕೆ ಹೊಡೆದುಕೊಳ್ಳುವ ಅಲಾರಾಂನ ಕೆನ್ನೆಗೆ ಬಾರಿಸಿ, ಆ ಎಂದು ಆಕಳಿಸಿ ಏಳುವಷ್ಟರಲ್ಲೇ ಗಡಿಯಾರ ಏಳರ ಮನೆಯ ಸಮೀಪ ಬಂದಿರುತ್ತದೆ. ಛಂಗನೆ ಹಾಸಿಗೆ ಬಿಟ್ಟೆದ್ದು, ಗಸಗಸನೆ ಹಲ್ಲುಜ್ಜಿ, ಬಾಕ್ಸಿನಲ್ಲಿರುವ ಇಡೀ ಸೋಪನ್ನು ಕೈಗೆತ್ತಿಕೊಂಡು ಸಂದಿಗೊಂದಿಗೆಲ್ಲಾ ಉಜ್ಜಿ, ಧೊಪಧೊಪನೆ ನೀರು ಹೊಯ್ದುಕೊಂಡು ಭರತನಾಟ್ಯ ಮಾಡುವವನಂತೆ ಸ್ನಾನ ಮುಗಿಸಿ ಏಳೂ ಹತ್ತಕ್ಕೆ ರೂಮು ಬಿಡುವುದು ರಾಜೀವನ ನಿತ್ಯದ ಅಭ್ಯಾಸ. ಸೀಟು ಸಿಗುವುದೆಂಬ ಆಸೆಯಲ್ಲಿ ರೂಮಿನ ಬಳಿಯೇ ಇರುವ  ಜೇಡಿಮರು ನಿಲ್ದಾಣದ ಬದಲು ಮುಕ್ಕಾಲು ಕಿಲೋಮೀಟರ್ ನಡೆದುಹೋಗಿ ಜನತಾ ಬಜಾರ್ ನಿಲ್ದಾಣದಲ್ಲಿ ಬಸ್ಸು ಹತ್ತುತ್ತಾನೆ. ಗುರುಬಲ ಗಟ್ಟಿಯಿದ್ದ ಪಕ್ಷದಲ್ಲಿ ಯಾವುದೋ ಒಂದು ಬಸ್ಸು ಒಂದೆರೆಡು ಖಾಲಿ ಸೀಟುಗಳೊಂದಿಗೆ ಆಗಮಿಸುತ್ತದೆ. ಇಲ್ಲವಾದರೆ ಮುಂದಿನ ಒಂದೂವರೆ ಗಂಟೆ ದೊಂಬರಾಟದವನಂತೆ ಬಸ್ಸೊಳಗಿನ ಮೇಲ್ಕಂಬಿಗೆ ನೇತಾಡಿಕೊಂಡೇ ಆಫೀಸು ತಲುಪಬೇಕಾಗುತ್ತದೆ. "ಅಲ್ರೀ, ಸುಮ್ನೆ ಯಾಕೆ ಅಷ್ಟು ದೂರದಿಂದ ಓಡಾಡ್ತೀರಾ? ಇಲ್ಲೇ ಕೋರಮಂಗಲದಲ್ಲೇ ರೂಮು ಮಾಡಬಹುದಲ್ರೀ?" ಎನ್ನುವ ಸಹೋದ್ಯೋಗಿಗಳಿಗೆ "ಆ ಏರಿಯಾ ಸೆಟ್ ಆಗ್ಬಿಟ್ಟಿದೆರೀ" ಎಂದು ಹಾರಿಕೆಯ ಉತ್ತರ ಕೊಡುತ್ತಾನೆ. ಅದು, ಕೆಲಸಕ್ಕೆ ಸೇರಿದ ಮೊದಲ ಕಂಪನಿಯಿರುವ, ಹಿಂದೊಮ್ಮೆ ಗೆಳೆಯರೊಡನೆ ಖುಷಿಯಲ್ಲಿ ಅಲೆದಾಡಿದ ಬೀದಿಗಳಿರುವ, ವಿಫಲ ಪ್ರೇಮದ ನೆನಪುಳಿಸಿಹೋದ ಪ್ರೇಯಸಿಯನ್ನು ಹಿಂಬಾಲಿಸಿ ನಡೆದ ರಸ್ತೆಗಳಿರುವ ಏರಿಯಾವೆಂಬ ಭಾವುಕ ಸಂಗತಿಯನ್ನು ಮಾತ್ರ ಅವನು ಇದುವರೆಗೆ ಯಾರಿಗೂ ಹೇಳಿಲ್ಲ. 


ಅವಳಿ ಮಕ್ಕಳ ಹೊತ್ತ ಬಸುರಿಯಂತೆ ಮೆಲ್ಲಗೆ ಸಾಗಿದ ಬಸ್ಸು ನಿಲ್ದಾಣದ ಸಮೀಪ ಬಂತು. ಗೋಡೆ ಕಟ್ಟಿದಂತೆ ನಿಂತಿದ್ದ ಜನರ ನಡುವೆ ನುಸುಳುತ್ತಾ ರಾಜೀವ ಬಾಗಿಲಿನತ್ತ ಧಾವಿಸಿದ. "ಕಾಲು ತುಳೀಬೇಡ್ವೋ ಹೈವಾನ್", "ತಳ್ಳಬೇಡ್ವೋ ಲೇ" ಎಂಬ ಬೈಗುಳಗಳನ್ನು ಬಸ್ಸಿನ ಗುರುಗುಡುವಿಕೆಯಷ್ಟೇ ಸಾಮಾನ್ಯವಾಗಿ ಸ್ವೀಕರಿಸಿ ಅಂತೂ ಇಂತೂ ಕೆಳಗುದುರಿಕೊಂಡು ಆಫೀಸಿನ ದಾರಿಯಾಚೆ ಬೀದಿಯಲ್ಲಿರುವ ತಳ್ಳುಗಾಡಿ ಹೋಟೆಲ್ ನತ್ತ ನಡೆಯತೊಡಗಿದ. ಕಛೇರಿಯ ಪಕ್ಕದಲ್ಲೇ ಹೋಟೆಲೊಂದಿದೆ. ಆದರೆ ಮೊವತೈದು ರೂಪಾಯಿಗೆ ಇಷ್ಟೇ ಇಷ್ಟು ಉಪ್ಪಿಟ್ಟು ಕೊಡುವ ಅಲ್ಲಿ ತಿಂಡಿ ತಿಂದರೆ ರಾಜೀವನ ಹೊಟ್ಟೆ ಹಾಗೂ ಲೆಕ್ಕದ ಪುಸ್ತಕ ಎರೆಡೂ ಅಳತೊಡಗುತ್ತವೆ. ಅದಕ್ಕೇ 'ಹೋಟೆಲಿನ ಮುಚ್ಚಿದ ಅಡುಗೆ ಮನೆಯಲ್ಲಿ ಓಡಾಡುವ ಜಿರಳೆಯ ಕುಲಬಾಂಧವನೇ ತಳ್ಳುಗಾಡಿಯಲ್ಲೂ ಓಡಾಡುವುದು' ಎಂಬ ಸಮರ್ಥನೆಯನ್ನು ತನಗೆ ತಾನೇ ಕೊಟ್ಟುಕೊಂಡು, ಪ್ರತಿದಿನ ಅಲ್ಲೇ ತಿಂಡಿತಿಂದ ರಾಜೀವ ಕಛೇರಿಯನ್ನು ಪ್ರವೇಶಿಸಿಸುತ್ತಾನೆ.


ಇಂಜಿನಿಯರುಗಳು ಕೂರುವ ಸಾಲು ಕ್ಯಾಬಿನ್ ಗಳ ಕೊನೆಯ ತುದಿಯಲ್ಲಿ ಅವನ ಅಕೌಂಟ್ಸ್ ಡಿಪಾರ್ಟ್ ಮೆಂಟ್. ಇಂಜಿನಿಯರ್ ಗೆಳೆಯರು 'ಗುಮಾಸ್ತರ ವಿಭಾಗ' ಎಂದು ಹಾಸ್ಯಮಾಡುವ ಜಾಗವದು. ಕಂಪನಿಯ ಇಡೀ ಹಣಕಾಸು ವ್ಯವಹಾರಗಳು, ಉದ್ಯೋಗಿಗಳಿಗೆ ಕೊಡಬೇಕಾದ ಸಂಬಳ, ಲೆಕ್ಕ ಪತ್ರಗಳು, ಪೆಟ್ಟಿ ಕ್ಯಾಶ್ ಎಲ್ಲವೂ ಮುಚ್ಚಿದ ಬಾಗಿಲಿನ ಒಳಗಿರುವ, ಹೊರಗಿನವರಿಗೆ ತೀರಾ ರಹಸ್ಯಮಯವಾಗಿ ಕಾಣುವ ಡಿಪಾರ್ಡ್ ಮೆಂಟ್. ಯಾರನ್ನೇ ಕೇಳಿದರೂ 'ನೀನು ಬಿಡಪ್ಪಾ. ಲಕ್ಷಾಂತರಗಳಲ್ಲಿ ವ್ಯವಹರಿಸುವವನು' ಎಂದು ಆ ಇಡೀ ಹಣವೇ ತನ್ನದು ಎಂಬಂತೆ ಮಾತನಾಡುತ್ತಾರೆ. ಕೆಲವರು ಇನ್ನೂ ಮುಂದೆ ಹೋಗಿ 'ಸಣ್ಣದೊಂದು ಬಿಲ್ ಕ್ರಿಯೇಟ್ ಮಾಡಿ ಎರೆಡು ಸಾವಿರದ ಒಂದು ನೋಟು ಎಗರಿಸಿದ್ರೂ ಸಾಕಲ್ರೀ' ಎಂದು 10% ತಮಾಷೆಯೂ, 90% ಅನುಮಾನವೂ ತುಂಬಿದ ದನಿಯಲ್ಲಿ ಕುಹುಕವಾಡುತ್ತಾರೆ. ಆಗೆಲ್ಲಾ ರಾಜೀವನಿಗೆ ನಗು ಬರುತ್ತದೆ. ಚಿತ್ರಗುಪ್ತನ ಚಿಕ್ಕಪ್ಪನ ಮಗನಂತಹಾ ತನ್ನ ಮ್ಯಾನೇಜರ್ ಲೆಕ್ಕದಲ್ಲಿ ಎಷ್ಟು ಪಕ್ಕಾ ಎಂಬುದು ಅವನಿಗೆ ಮಾತ್ರ ಗೊತ್ತು. ಅವರ ಭಯದಲ್ಲಿ ಅದೆಷ್ಟೋ ಬಾರಿ ಕ್ಯಾಶ್ ಹೆಚ್ಚೂ ಕಡಿಮೆಯಾದಾಗ ತಾನೇ ಕೈಯಿಂದ ಹಣ ಹಾಕಿ ಲೆಕ್ಕ ಸರಿದೂಗಿಸಿರುವುದೂ ಇದೆ. ಅಂಥಾದ್ದರಲ್ಲಿ ಹಣ ಎತ್ತುವುದೆಲ್ಲಿಂದ ಬಂತು?


"ಏನ್ರೀ ರಾಜೀವ್ ಈಗ ಬರ್ತಿದ್ದೀರಿ?"


ಬಾಗಿಲಿನ ಬಳಿ ಕುಳಿತಿದ್ದ ಕ್ವಾಲಿಟಿ ಚೆಕ್ ಟೀಮಿನ ಕಾವ್ಯ ಕಂಪ್ಯೂಟರ್ ನಿಂದ ಕಣ್ಣು ಕೀಳದೇ ಪ್ರಶ್ನಿಸಿದಳು.


"ಟ್ಯಾಕ್ಸ್ ಡಿಪಾರ್ಟ್ಮೆಂಟಲ್ಲಿ ಕೆಲಸ ಇತ್ತು. ಅದಕ್ಕೇ ಲೇಟಾಯ್ತು."

ರಾಜೀವ ಉತ್ತರಿಸಿದ. 


"ನೀವೇ ಪುಣ್ಯವಂತರು ಬಿಡೀಪ್ಪಾ. ಟ್ಯಾಕ್ಸಾಫೀಸು, ಜಿಎಸ್ಟಿ ಅಂತ ಯಾವಾಗಂದರೆ ಆವಾಗ ಎದ್ದು ಹೋಗ್ತೀರ. ಸಂಜೆಯಂತೂ ಗಡಿಯಾರಕ್ಕಿಂತಲೂ ಮೊದಲೇ ನಿಮಗೆ ಆರು ಗಂಟೆಯಾಗ್ತದೆ. ನಮ್ಮನ್ನ ನೋಡಿ, ಏಳರ ತನಕ ಇಲ್ಲೇ ಕೋಳೀತಾ ಕೂತಿರ್ಬೇಕು"


ಕುಹುಕ, ವ್ಯಂಗ್ಯ, ಈರ್ಷೆಗಳ ಸಮ್ಮಿಶ್ರಣದಲ್ಲಿ ಅವಳಾಡಿದ ಮಾತಿಗೆ ಏನು ಉತ್ತರಿಸಬೇಕೆಂದು ರಾಜೀವನಿಗೆ ಹೊಳೆಯಲಿಲ್ಲ. ಸುಮ್ಮನೆ ನಕ್ಕಂತೆ ನಕ್ಕು ಕ್ಯಾಬಿನ್ ನೊಳಗೆ ಬಂದು ಕುಳಿತವನ ಮನಸ್ಸಿನಲ್ಲಿ ಅವಳಿಗೆ ಕೊಡಬಹುದಾಗಿದ್ದ ಉತ್ತರಗಳು ಒಂದೊಂದಾಗಿ ಮೂಡತೊಡಗಿದವು. ತಾನು ಎಲ್ಲರಿಗಿಂತ ಮೊದಲು ಹೊರಡುವುದು ನಿಜ; ಆದರೆ ಬೆಳಗ್ಗೆ ಎಲ್ಲರಿಗಿಂತ ಮೊದಲು ಬರುವವನೂ ತಾನೇ ಅಲ್ವಾ? ಹಾಗೆ ನೋಡಿದರೆ ಒಟ್ಟಾರೆಯಾಗಿ ತಾನು ಅವರಿಗಿಂತ ಅರ್ಧ ಗಂಟೆ ಜಾಸ್ತಿಯೇ ಆಫೀಸಿನಲ್ಲಿರುತ್ತೇನೆ! ಜಿಎಸ್ಟಿ, ಟ್ಯಾಕ್ಸಾಫೀಸು, ಆಡಿಟರ್ ಆಫೀಸ್ ಅಂತ ಹೊರಗೆ ಓಡಾಡುವುದೂ ಸತ್ಯವೇ. ಆದರೆ ಆ ಅಸಾಸುರರುಗಳೆಲ್ಲರ ಜೊತೆ ಹೆಣಗಾಡುವ ರಗಳೆಯೇನೆನ್ನುವುದು ತನಗೆ ಮಾತ್ರ ಗೊತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಕಾವ್ಯಾಳಿಗೆ ತಿಂಗಳಿಗೆ ಎಪ್ಪತ್ತು ಸಾವಿರ ಕೊಡುತ್ತಾರೆ‌. ತನಗೆ ಬರೀ ಇಪ್ಪತೈದು. ಅವರವರ ಹುದ್ದೆ, ಜವಾಬ್ದಾರಿಗಳಿಗನುಸಾರವಾಗಿ ಅವರವರ ಕೆಲಸದ ಸಮಯ, ಸಂಬಳಗಳು ನಿರ್ಧರಿಸಲ್ಪಟ್ಟಿರುತ್ತವೆ. ಅದಕ್ಕೇಕೆ ಹೀಗೆ ಕೊಂಕು ಮಾತಾಡಬೇಕು? 


ಬೆಳ್ಳಂಬೆಳಗ್ಗೆ ಬೇಸರ ತರಿಸಿದ ಕಾವ್ಯಾಳಿಗೆ ಬೈದುಕೊಳ್ಳುತ್ತಲೇ ರಾಜೀವ ಕಂಪ್ಯೂಟರ್ ಚಾಲೂ ಮಾಡಿದ. ಎಂಟ್ರಿ ಮಾಡಬೇಕಿದ್ದ ಬಿಲ್ಲುಗಳು ಟೇಬಲ್ ನ ಮೇಲೆ ನಕ್ಷತ್ರಿಕರಂತೆ ಕುಳಿತು ಕಾಯುತ್ತಿದ್ದವು. ಅವುಗಳ ರಾಶಿ ನೋಡಿದವನು ಸಣ್ಣಗೆ ಬೆಚ್ಚಿಬಿದ್ದ. ಕಳೆದೊಂದು ವಾರದಿಂದ ಅದೂ ಇದೂ ಕೆಲಸದ ಮಧ್ಯೆ ಇವನ್ನು ಗಮನಿಸಿಯೇ ಇಲ್ಲ. ಈಗೇನಾದರೂ ಇಷ್ಟು ದೊಡ್ಡ ಕಟ್ಟು ಮ್ಯಾನೇಜರ್ ಕಣ್ಣಿಗೆ ಬಿದ್ದರೆ ಸಾಕ್ಷಾತ್ ಬ್ರಹ್ಮರಾಕ್ಷಸನಾಗಿ ಮೈಮೇಲೆ ಬೀಳುತ್ತಾನೆ! ಹಾಗಂದುಕೊಳ್ಳುತ್ತಾ ರಾಜೀವ ಬೇಗಬೇಗನೇ ಬಿಲ್ ಗಳನ್ನು ಎಂಟ್ರಿ ಮಾಡತೊಡಗಿದ. ಬಾಕಿಯಿದ್ದ ಪ್ರತಿಯೊಂದು ಬಿಲ್ ನಲ್ಲೂ ಮ್ಯಾನೇಜರ್ ನ ಉಗ್ರ ಮುಖ ಕಾಣತೊಡಗಿ ಕೈ ತಡಬಡಾಯಿಸತೊಡಗಿತು.


"ಶರ್ಮಾ ಸರ್ ಕರೀತಿದಾರೆ"


ಹಾಗೆಂದು ಹೇಳಿದ ಜವಾನನ ಮುಖದಲ್ಲಿ 'ಐತೆ ಮಗನೇ ನಿಂಗೆ' ಎನ್ನುವ ಕುಹುಕದ ನಗೆಯೊಂದು ಅವಿತಿರುವಂತೆನಿಸಿತು. ಇನ್ಯಾವ ಜ್ವಾಲಾಮುಖಿ ಸ್ಫೋಟಿಸಲಿದೆಯೋ ಎಂದುಕೊಳ್ಳತ್ತಲೇ ಮ್ಯಾನೇಜರ್ ಕ್ಯಾಬಿನ್ ನತ್ತ ನಡೆದ. ಶರ್ಮಾರ ಕ್ಯಾಬಿನ್ ನೊಳಗಿನ ವಾತಾವರಣ ಸಹಾ ಅವರಷ್ಟೇ ಗಂಭೀರವಾಗಿತ್ತು. ಒಳ್ಳೆಯ ಕೆಲಸಗಾರ. ಆದರೆ, ಹೇಳಿದ್ದನ್ನು ಒಂದೇ ಸಲಕ್ಕೆ ಅರ್ಥಮಾಡಿಕೊಳ್ಳದ, ಕೆಲಸ ಮಾಡುವಾಗ ತಡಬಡಾಯಿಸುವ ತನ್ನನ್ನು ಕಂಡರೆ ಮಾತ್ರ ಅವನಿಗೆ ಉರಿಗೋಪ. ತಾನಾದರೂ ಅಷ್ಟೇ, ಅವನ ಪ್ರತಿಯೊಂದು ಆಜ್ಞೆಯನ್ನೂ ಭಯದ ನೆರಳಿನಲ್ಲಿ ನಿಂತೇ ಸ್ವೀಕರಿಸುತ್ತೇನೆ. 


ಮುಚ್ಚಿದ್ದ ಬಾಗಿಲನ್ನು ಇಷ್ಟೇ ಇಷ್ಟು ತೆರೆದು "ಮೇ ಐ ಕಮಿನ್ ಸರ್?" ಎಂದ. ಕಂಪ್ಯೂಟರ್ ಪರದೆಯಿಂದ ಕಣ್ಣು ಕೀಳದೆಯೇ "ಹೂಂ" ಎಂದವನ ಧಾಟಿಯಲ್ಲಿ ಗಂಭೀರತೆ ಸ್ಫೋಟಿಸುತ್ತಿರುವಂತಿತ್ತು. ಮೆಲ್ಲನೆ ಹೆಜ್ಜೆಯಿಡುತ್ತಾ ನಡೆದು ಅವರೆದುರು ನಿಂತುಕೊಂಡ. 


"ರಾಜನ್ ಅಸೋಸಿಯೇಟ್ಸ್ ದು ಪೇಮೆಂಟ್ ಯಾಕಿನ್ನೂ ಆಗಿಲ್ಲ?"


ತಲೆಯೆ ಮೇಲೆ ಸಿಡಿಲು ಕುಕ್ಕಿದಂತಾಯಿತು ರಾಜೀವನಿಗೆ. ಸೋಮವಾರವೇ ಆಗಬೇಕಿದ್ದ ಪೇಮೆಂಟ್. ಕಳೆದೆರೆಡು ದಿನಗಳಿಂದ ಬೇರೆ ಬೇರೆ ಹೊರಗಿನ ಕೆಲಸಗಳಲ್ಲೇ ಬ್ಯುಸಿಯಿದ್ದ ತಾನು ಗಡಿಬಿಡಿಯಲ್ಲಿ ಮರೆತುಬಿಟ್ಟಿದ್ದೇನೆ. 


"ರಾಜೀವ್, ನಿಮ್ಮ ತಲೆ ನಿಮ್ಮ ಜೊತೆಗೇ ಹುಟ್ಟಿತಾ ಅಥವಾ ನೀವು ಹುಟ್ಟಿ ಹತ್ತು ವರ್ಷಗಳಾದ ಮೇಲೆ ಹುಟ್ಟಿತಾ?"


ಹೊರಗಡೆ ಯಾರೋ ಕಿಸಕ್ಕೆಂದ ಸದ್ದು ಮುಚ್ಚಿದ ಬಾಗಿಲಿನ ಮರೆಯಿಂದ ತೆಳುವಾಗಿ ಕೇಳಿಬಂತು. ದರಿದ್ರದ ಬಾಗಿಲು. ತನಗೇನಾದರೂ ಹೊಗಳಿಕೆ ಸಿಕ್ಕರೆ ಅದನ್ನು ಆಚೆ ಇದ್ದವರಿಗೆ ಕೇಳಿಸುವುದಿಲ್ಲ. ಇಂತಹಾ ಬೈಗುಳಗಳನ್ನಾದರೆ ಮೊದಲು ಬಿಟ್ಟುಕೊಡುತ್ತದೆ.


"ಅದೂ.. ಸರ್.. ಎರೆಡು ದಿನಗಳಿಂದ ಐಟಿ ನೋಟೀಸ್ ವಿಚಾರಣೆಯ ಓಡಾಟವೇ ಆಗಿದೆ. ಹಾಗಾಗಿ ಪೇಮೆಂಟ್ ಮಾಡಲಾಗಲಿಲ್ಲ.."


ಅವನ ಮಾತಿನ್ನೂ ಪೀಠಿಕೆಯಲ್ಲೇ ಇತ್ತು, ಆಗಲೇ ಶರ್ಮಾ ಮತ್ತೊಮ್ಮೆ ಗುಡುಗಿದ:


"ಎರೆಡು ದಿನಗಳಿಂದ ಊಟ ಮಾಡಿದ್ದೀರ ತಾನೇ?"


"ಇಲ್ಲ" ಎನ್ನಬೇಕೆಂದುಕೊಂಡ ರಾಜೀವ್. ಹಿಂದಿನ ದಿನ ಅಸೆಸ್ಮೆಂಟ್ ಮುಗಿಸಿ, ಅವರು ಹೇಳಿದ ಫೈಲ್ ಗಳ ನಕಲು ತಯಾರಿಸಿ ಸಬ್ಮಿಟ್ ಮಾಡಿ ಹೊರಟವನಿಗೆ ನೇರವಾದ ಬಸ್ಸೇ ಸಿಕ್ಕಿರಲಿಲ್ಲ. ತಡವಾಗಿ ಮನೆ ತಲುಪಿದ ಸುಸ್ತಿನಲ್ಲಿ ಅಡುಗೆ ಮಾಡಿಕೊಳ್ಳುವ ಉತ್ಸಾಹವಿಲ್ಲದೇ ಉಪವಾಸ ಮಲಗಿಕೊಂಡು, ನಡುರಾತ್ರಿಗೆ ಹಸಿವಿನಿಂದ ಎಚ್ಚರವಾಗಿ, ತಿನ್ನಲು ಏನೂ ಸಿಕ್ಕದೆ ಕೊನೆಗೆ ಬರಿಯ ನೀರನ್ನಷ್ಟೇ  ಕುಡಿದು ಮಲಗಿದ ವಿಷಯವನ್ನು ಹೇಳಿಬಿಡಬೇಕೆನಿಸಿತಾದರೂ ಹೇಳದೆ ಸುಮ್ಮನಾದ.


"ಇನ್ನೊಂದು ಸಲ ಯಾವುದೇ ವೆಂಡರ್ ನಿಂದ ಪೇಮೆಂಟ್ ಆಗಿಲ್ಲಾಂತ ಕಂಪ್ಲೇಂಟ್ ಬಂದರೆ…"


ರಾಜೀವ ಕ್ಯಾಬಿನ್ ನಿಂದ ಹೊರಗೆ ಬಂದ. ಅಲ್ಲಿ ಇಷ್ಟು ಹೊತ್ತು ತನ್ನ ಮೇಲಾದ ಸಹಸ್ರನಾಮಾರ್ಚನೆಯನ್ನು ಕೇಳಿಸಿಕೊಂಡಿದ್ದ ಮುಖಗಳೆಲ್ಲ ಕುಹುಕ ನಗೆಯನ್ನು ಮುಚ್ಚಿಟ್ಟುಕೊಂಡು ಕುಳಿತಿರುವಂತೆ ಭಾಸವಾಯಿತು. ಈ ಬಿಲ್ಲುಗಳನ್ನು ತೆಗೆದು ಆಚೆ ಕುಳಿತಿರುವ ಕಾವ್ಯಾಳ ತಲೆಯ ಮೇಲೆ ಕುಕ್ಕಿ 'ನನ್ನ ಸುಖಗಳನ್ನ ಆಡಿಕೊಳ್ತೀಯಲ್ಲಾ, ಈ ಕಷ್ಟಗಳ ಬಗ್ಗೆಯೂ ಸ್ವಲ್ಪ ಮಾತಾಡು' ಎಂದು ಅಬ್ಬರಿಸಬೇಕೆನ್ನಿಸಿತು. ಆದಷ್ಟು ಬೇಗ ತನ್ನ ಬಹುದಿನಗಳ ಕನಸಿನಂತೆ ಊರಲ್ಲೊಂದೆಕರೆ ಜಮೀನು ಕೊಂಡು, ಈ ಗುಲಾಮಗಿರಿಯ ಬದುಕಿನ ಎದೆಯ ಮೇಲೆ ಕಾಲಿಟ್ಟು ದಾಟಿಹೋಗಬೇಕೆಂದುಕೊಳ್ಳುತ್ತಾ ಮತ್ತದೇ ಬಿಲ್ಲು, ಪೇಮೆಂಟುಗಳೊಳಗೆ ಮುಳುಗಿಹೋದ.

 

                         ******************


"ನೀವ್ಯಾಕೆ ಸುಮ್ಮನೆ ಬೈಸಿಕೊಂಡಿರಿ? ಐಟಿ ಆಫೀಸಲ್ಲಿ ಎಷ್ಟೊಂದು ಓಡಾಟವಿತ್ತೂಂತ ಹೇಳೋದು ತಾನೇ?"


ಮೇಲ್ಮಹಡಿಯ ಕ್ಯಾಂಟೀನಿನ ಟೇಬಲ್ ನಲ್ಲಿ ಎದುರು ಕುಳಿತು ಕಾಫಿಯ ಸಿಪ್ಪಿಗೆ ತುಟಿ ಕೊಡುತ್ತಾ ಹೇಳಿದಳು ಮಂಗಳ.


"ಹೇಳುವುದಕ್ಕೆ ಅವರಿಗೂ ಅದು ಗೊತ್ತುರೀ. ಆದರೂ ಸುಮ್ಮನೆ ಬೈತಾರೆ. ಅವರಿಗೆ ಕೆಲಸ ಆಗಬೇಕಷ್ಟೇ"

ಟೆರಾಸಿನಾಚೆ ವಿಸ್ತಾರದಲ್ಲಿ ಹರಡಿ ನಿಂತಿದ್ದ ಬಿಲ್ಡಿಂಗುಗಳ ರಾಶಿಯನ್ನೇ ದಿಟ್ಟಿಸುತ್ತಾ ಹೇಳಿದ ರಾಜೀವ.


"ನಿಮ್ಮ ಸೀನಿಯರ್ ಕೂಡಾ ಹಾಗೇ ಮಾಡಿದರು. ಅವರಿಗೂ ಈ ಶರ್ಮಾನಿಗೂ ಹುರಿದಕ್ಕಿ ಬೇಯುತ್ತಿರಲಿಲ್ಲ. ಅದಕ್ಕೇ ತಾನು ಬಿಟ್ಟುಹೋದ ಮೇಲೆ ಕಂಪನಿಗೆ ತನ್ನ ಬೆಲೆ ತಿಳಿಯಬೇಕೆಂಬ ಹಠದಲ್ಲಿ ನಿಮಗೆ ಸರಿಯಾಗಿ ನಾಲೆಡ್ಜ್ ಟ್ರಾನ್ಸ್ ಫರ್ ಮಾಡಲಿಲ್ಲ. ಅಲ್ಲದೆ ಈ ಶರ್ಮಾನಿಗಾದರೂ ನಿಮ್ಮ ಮೇಲೆ ಅದೇನೋ ಒಂದು ವಿಶೇಷವಾದ ದ್ವೇಶ. ಬೇರೆ ಯಾರ ಕೆಲಸದಲ್ಲೂ ಕಾಣದ ಐಬುಗಳನ್ನ ನಿಮ್ಮ ಕೆಲಸದಲ್ಲಿ ಹುಡುಕುತ್ತಾನೆ.. ಹೋಗಲಿ ಬಿಡಿ. ಮುಂದಿನ ಸಲ ಏನಾದ್ರೂ ಅರ್ಜೆಂಟ್ ಪೇಮೆಂಟಿದ್ರೆ ಇನ್ವಾಯ್ಸ್ ನನಗೆ ಕೊಟ್ಟು ಹೋಗಿ ಸರೀನಾ. ನೀವು ಹೀಗೆ ವಿನಾಕಾರಣ ಬೈಸಿಕೊಳ್ಳುವುದು ನನಗೆ ಇಷ್ಟವಾಗೊಲ್ಲ."


ಹಾಗೆಂದವಳ ಮುಖವನ್ನೇ ಅಚ್ಚರಿಯಿಂದೆಂಬಂತೆ ದಿಟ್ಟಿಸಿದ ರಾಜೀವ. ಅವಳ ಕಾಡಿಗೆ ಬೆರೆತ ಕಣ್ಣುಗಳೂ ಅವನನ್ನೇ ನೋಡುತ್ತಿದ್ದವು. ವಿವರಿಸಲಾಗದ ನವಿರುತನವೊಂದನ್ನು ಸೂಸುತ್ತಿರುವ ಆ ನೋಟಕ್ಕೆ ವಿಚಲಿತನಾಗಿ ದೃಷ್ಟಿಯನ್ನು ಆಚೀಚೆ ಹರಿಸಿದ. ತುಟಿಯಂಚಿನ ಲಿಪ್ಸ್ಟಿಕ್ ಗೆ ಅಂಟಿಕೊಂಡ ಮುಗುಳ್ನಗುವಿನೊಂದಿಗೆ ಅವಳು ಟೀ ಲೋಟಗಳನ್ನು ಎತ್ತಿಟ್ಟು ಬಸ್  ಸ್ಟ್ಯಾಂಡಿನತ್ತ ನಡೆಯತೊಡಗಿದಳು. ಎದೆಯಲ್ಲಿ ಈಗಷ್ಟೇ ಮೂಡಿರುವ ನವಿರಾದ ಅಚ್ಚರಿಯ ಸಮೇತ ಅವನು ಅವಳನ್ನು ಹಿಂಬಾಲಿಸತೊಡಗಿದ.


"ಮತ್ತೆ.. ನಿಮ್ಮ ಮದುವೆ ಯಾವಾಗ?"


ಮನದಲ್ಲಿ ಅರಳುತ್ತಿರುವ ಬಿಡಿ ಹೂಗಳಿಗೆ ದಾರ ಪೋಣಿಸುವಂತಹಾ ಪ್ರೆಶ್ನೆಯನ್ನು ಕೇಳಿದವಳ ಮುಖವನ್ನೇ ನೋಡುತ್ತಾ ರಾಜೀವ ಉತ್ತರಿಸಿದ.


"ಮದುವೆಯನ್ನೋ ಜಹಾಜನ್ನು ಹೇಗೆ ನಾನಿರೋ ದಡಕ್ಕೆ ಬಿಟ್ಟುಕೊಳ್ಳುವುದೋ ಗೊತ್ತಾಗುತ್ತಿಲ್ಲ ಮಂಗಳಾ. ಊರಲ್ಲಿ ಒಂದಷ್ಟು ಕೈಸಾಲಗಳಿವೆ. ಅವನ್ನ ತೀರಿಸಬೇಕು. ಮನೆ ರಿಪೇರಿ ಮಾಡಿಸಬೇಕು. ನಂತರ ಒಂದೆಕರೆ ನೀರಾವರಿ ಜಮೀನು ಕೊಳ್ಳಬೇಕು. ಜೊತೆಗೆ ನೋಟೀಸು ಕೊಡದೇ ಬರುವ ಸಾಂದರ್ಭಿಕ ಖರ್ಚುಗಳು ಬೇರೆ. ಗುಮಾಸ್ತಗಿರಿಯೆಂಬ ತೂತು ಮಡಿಕೆಯಲ್ಲಿ ಇಂತಹಾ ಆಸೆಗಳನ್ನು ತುಂಬಿಟ್ಟುಕೊಂಡು ಕಾಯುತ್ತಿರುವ ನಮ್ಮನ್ನೆಲ್ಲಾ ಯಾರು ತಾನೇ ಒಪ್ತಾರೆ ಹೇಳಿ?"


"ಅಲ್ಲೇ.. ಅಲ್ಲೇ ನೀವು ತಪ್ಪುತಿಳಿದಿರುವುದು. ನೀವಂದುಕೊಂಡಂತೆ ಎಲ್ಲಾ ಹುಡುಗಿಯರೂ ಹಣದ ಹಿಂದೆ ಬೀಳುವವರಲ್ಲ ರಾಜೀವ್. ಹಳ್ಳಿ, ಜಮೀನು, ಸರಳ ಜೀವನಗಳನ್ನು ಇಷ್ಟಪಡುವವರೂ ಇದ್ದಾರೆ. ಈಗ ನನ್ನನ್ನೇ ನೋಡಿ? ನನಗೆ ಲಕ್ಷಗಳ ಕಾರನ್ನು ಮನೆ ಮುಂದೆ ತಂದು ನಿಲ್ಲಿಸುವವ ಬೇಕಿಲ್ಲ. ಸರ್ಕಾರಿ ಬಸ್ಸಿಗೇ ಆದರೂ ಪ್ರೀತಿಯಿಂದ ಕೈಹಿಡಿದು ಹತ್ತಿಸುವವನಾದರೆ ಸಾಕು. ನಮ್ಮನ್ನು ಖುಷಿಯಾಗಿರಿಸಲಿಕ್ಕೆ ದೊಡ್ಡ ಸಂಬಳವೇ ಕೈಸೇರಬೇಕಿಲ್ಲ. ತಿಂಗಳ ಕೊನೆಗೆ ಚಿಕ್ಕ ಮಲ್ಲಿಗೆ ಮಾಲೆಯ ಜೊತೆಗೆ ಬೊಗಸೆ ತಲುಪುವ ಸಣ್ಣ ಮೊತ್ತವಾದರೂ ಸಾಕು".


ಯಾವ ಕೋನದಿಂದಲೂ ಅವಳ ಮಾತು ನಾಟಕೀಯವಾಗಿರುವಂತೆ ಕಾಣಲಿಲ್ಲ. ಅದೇಕೋ ಅವನ್ನು ಕೇಳಿಸಿಕೊಳ್ಳುವುದು ಹಿತವೆನಿಸಿತು. ಕೇಳುತ್ತಲೇ ಇರಬೇಕೆನಿಸುತ್ತಿರುವ ಈ ಸಂಭಾಷಣೆಯನ್ನು ಜಾರಿಯಲ್ಲಿಡುವಂತಹಾ ಪ್ರಶ್ನೆಯೊಂದನ್ನು ಕೇಳಲೆಂದು ಬಾಯಿತೆರೆಯುವಷ್ಟರಲ್ಲೇ ಅವಳು ಹತ್ತಬೇಕಾದ ಬಸ್ಸು ನಿಲ್ದಾಣವನ್ನು ಪ್ರವೇಶಿಸಿತು. ಬೈ ಹೇಳಿ ಬಸ್ಸು ಹತ್ತಿ ಹೋದವಳ ದಾರಿಯನ್ನೇ ನೋಡುತ್ತಾ ನಿಂತುಬಿಟ್ಟ ರಾಜೀವ್. 


ಈ ಮಾತನ್ನವಳು ತನಗೆಂದೇ ಆಡಿದಳಾ? 


ಅವಳು ಹಾಗೆ ಹೇಳುವಾಗ ತನ್ನನ್ನೇ ದಿಟ್ಟಿಸುತ್ತಿದ್ದ, ಅವರ್ಣನೀಯ ಭಾವಗಳು ತುಂಬಿದ್ದ ಅವಳ ಕಣ್ಣುಗಳ ಚಿತ್ರ 'ಹೌದು' ಎನ್ನುವ ಪುರಾವೆಯಂತೆ ಅವನೆದುರು ಮೂಡಿನಿಂತಿತು.


                      ********************


"ಬೋರ್ವೆಲ್ ತೋಡಿಸಲೇಬೇಕು"


ಆಚೆಕಡೆ ಫೋನಿನಲ್ಲಿ ಅಪ್ಪ ತುಸು ಗಂಭೀರವಾಗಿಯೇ ಹೇಳಿದರು. 


ರಾಜೀವನಿಗೂ ಗೊತ್ತಿತ್ತು. ಇದ್ದ ಒಂದೆಕರೆ ಗದ್ದೆ ಕಳೆದೆರೆಡು ವರ್ಷಗಳಿಂದ ಏನನ್ನೂ ಬೆಳೆಯದೇ ಹಾಳುಬಿದ್ದಿದೆ. ತನ್ನ ಕೆಲಸದ ಹೊರತಾಗಿ ತಮಗಿರುವ ಏಕ ಮಾತ್ರ ತುತ್ತಿನ ಪಾತ್ರೆಯದು. ನಾಳೆ ತಾನೇನಾದರೂ ಈ ಇಷ್ಟವಿಲ್ಲದ ಪಟ್ಟಣವನ್ನು ಬಿಟ್ಟು ಹೋದದ್ದೇ ಆದರೆ ಬದುಕುವುದಕ್ಕಾಗಿ ಆ ಪಾತ್ರೆಗೇ ಕೈಹಾಕಬೇಕಾಗುತ್ತದೆ. ಹಾಗಾಗಿ ಅದನ್ನು ಬಾಡಲು ಬಿಡುವ ಪ್ರೆಶ್ನೆಯೇ ಇಲ್ಲ. ಗದ್ದೆಯಾಚೆಗಿನ ಹಳ್ಳ ಡಿಸೆಂಬರ್ ವೇಳೆಗೇ ಹರಿಯುವುದನ್ನು ನಿಲ್ಲಿಸಿಬಿಡುತ್ತದೆ. ಹಾಗಾಗಿ ಬೋರ್ವೆಲ್ ತೋಡಿಸಲೇಬೇಕು. 


"ಸರಿ. ನೀವು ಮುಂದುವರೆಸಿ. ಹಣ ನಾನು ಹೊಂದಿಸುತ್ತೇನೆ".


ಅಷ್ಟಂದು ಫೋನಿಟ್ಟವನ ತಲೆಯೊಳಗೆ ನೂರು ಚಿಂತೆಯ ಹಕ್ಕಿಗಳು ಮೊಟ್ಟೆಯಿಡತೊಡಗಿದವು. ಒಂದು ಬೋರ್ವೆಲ್ ಗೆ ಹತ್ತಿರ ಹತ್ತಿರ ಒಂದು ಲಕ್ಷವಾದರೂ ಬೇಕು. ಅದು ಒಂದಕ್ಕೆ. ಹಾಗಂತ ಮೊದಲ ಪ್ರಯತ್ನದಲ್ಲೇ ನೀರು ಸಿಗುತ್ತದೆಯೆಂಬುದಕ್ಕೆ ಯಾವುದೇ ಖಾತ್ರಿಯಿಲ್ಲ. ಕಷ್ಟಪಟ್ಟು ದುಡಿದ ಎಷ್ಟು ಸಾವಿರಗಳನ್ನು ನೀರಿಲ್ಲದ ಕೊಳವೆಗಳಿಗೆ ಎಸೆಯಬೇಕೋ? ತಾನೀಗ ಮತ್ತಷ್ಟು ಸಾಲಕ್ಕೆ ಬೀಳಲಿದ್ದೇನೆನ್ನುವುದಷ್ಟೇ ಸಧ್ಯಕ್ಕೆ ಖಾತ್ರಿಯಿರುವ ಏಕಮಾತ್ರ ಸಂಗತಿ.


ಯಾರನ್ನು ಕೇಳುವುದು? ಗೆಳೆಯರ್ಯಾರೂ ಅಷ್ಟೆಲ್ಲ ಸಾಲ ಕೊಡುವಷ್ಟು ಸ್ಥಿತಿವಂತರಲ್ಲ. ಸ್ಥಿತಿವಂತರಾಗಿರುವವರ್ಯಾರೂ ಅಷ್ಟು ಸಾಲ ಕೊಡುವಷ್ಟು ಆತ್ಮೀಯರಲ್ಲ. ಭಾವನನ್ನು ಕೇಳೋಣವೆಂದರೆ "ಅಪ್ಪ ಮಾಡಿದ ಸಾಲವನ್ನು ತೀರಿಸುತ್ತೀಯೆಂದುಕೊಂಡರೆ ನೀನೇ ಒಂದು ಹೊಸ ಖಾತೆ ತೆರೆಯುತ್ತಿದ್ದೀಯಲ್ಲಾ" ಎಂದು ಕುಹುಕವಾಡುತ್ತಾರೆ‌. ಕಂಪನಿಯಲ್ಲಿ ಉದ್ಯೋಗಿಗಳಿಗೆ ಸಾಲಕೊಡುವುದನ್ನು ನಿಲ್ಲಿಸಿ ವರ್ಷವಾಗಿದೆ. ಇನ್ನು ಫೈನಾನ್ಸ್ ಕಂಪನಿಗಳ ಬಾಗಿಲಿಗೋ, ಇಲ್ಲಾ ಬ್ಯಾಂಕುಗಳ ಕೌಂಟರ್ ಗೋ ಎಡತಾಕೋಣವೆಂದರೆ ಅವರು ಹೊರಿಸುವ ಬಡ್ಡಿಯನ್ನು ತಾಳುವುದು ತನ್ನಿಂದ ಸಾಧ್ಯವಿಲ್ಲ.


ತಾನು ಹೊದ್ದಿರುವುದು ಚಾದರವನ್ನೋ ಅಲ್ಲಾ ಚಿಂತೆಗಳನ್ನೋ ಎಂಬಂತೆ ರಾಜೀವ ನಿದ್ರೆ ಬರದೆ ಹೊಡಕಾಡಿದ. ಯಾಕೋ ಮೊದಲ ಬಾರಿಗೆ ಪಟ್ಟಣದ ಬಸ್ಸು ಹತ್ತಿದಾಗಿನ ದಿನಗಳು ನೆನಪಾದವು. ಸಂಬಳ ಹತ್ತು ಸಾವಿರ ಸಿಕ್ಕರೂ ಸಾಕು, ರಾಜರಾಜವರ್ಮನಂತೆ ಬದುಕಿಬಿಡುತ್ತೇನೆಂದು ನಂಬಿದ್ದ ದಿನಗಳವು. ಇಷ್ಟು ದಿನ ಅಪ್ಪ ಕೊಡುತ್ತಿದ್ದ ಹಣದಲ್ಲಿ ಬದುಕುತ್ತಿದ್ದ ಲೆಕ್ಕಾಚಾರದ ಬದುಕು ಇನ್ನೇನು ಕೊನೆಯಾಗುತ್ತದೆಂಬ ಕನಸು ಕಾಣುತ್ತಿದ್ದ ಕಾಲ. ಆರಿದ್ದ ಸಂಬಳ ಹತ್ತಾಗಿ, ಹದಿನೈದಾಗಿ ಈಗ ಇಪ್ಪತೈದಾಗಿದೆ. ಲೆಕ್ಕದ ಪುಸ್ತಕ ಬದಲಾಗಿದೆಯಾದರೂ ಲೆಕ್ಕಗಳು ಮಾತ್ರ ಹಾಗೇ ಉಳಿದಿವೆ. 


ಹೇಗಾದರೂ ಮಾಡಿ ಒಂದೊಳ್ಳೆ ಎಂಎನ್ಸಿಗೆ ದಾಟಿಕೊಳ್ಳಬೇಕು ಎಂದುಕೊಂಡ ರಾಜೀವ. ಈ ಹಿಂದೆ ಕೂಡಾ ಆ ಪ್ರಯತ್ನ ಮಾಡಿದ್ದನಾದರೂ ಅಲ್ಲಿನ ನಿರ್ಬಂಧಿತ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಬಿಟ್ಟುಬಂದಿದ್ದ. ಈ ಬಾರಿ ತನ್ನ ಒಳ ತುಮುಲಗಳನ್ನೆಲ್ಲಾ ಬದಿಗಿಟ್ಟು ಸಂಬಳವೊಂದನ್ನೇ ಗಮನದಲ್ಲಿಟ್ಟುಕೊಂಡು ದುಡಿಯಬೇಕು. ಕನಿಷ್ಠ ಮೊವತೈದು ಸಾವಿರವಾದರೂ ಕೈಗೆ ಬಂದರೆ ಸಾಕು‌. ಬಾಡಿಗೆ, ಓಡಾಟ, ಊಟ, ತಿಂಡಿ, ಇತ್ಯಾದಿಗಳಿಗೆಂದು ತಿಂಗಳಿಗೆ ಹತ್ತು ಸಾವಿರ ಎತ್ತಿಟ್ಟರೂ ಕನಿಷ್ಟ ಇಪ್ಪತ್ತು ಸಾವಿರ ಕೈಯಲ್ಲುಳಿಯುತ್ತದೆ. ಹನ್ನೆರೆಡು ಲಕ್ಷ ಲೋನ್ ತೆಗೆದರೂ ಸಾಕು, ಅರ್ಧ-ಮುಕ್ಕಾಲೆಕರೆಯಷ್ಟು ತೋಟ ಕೊಳ್ಳಬಹುದು. ಸ್ವಲ್ಪ ವರ್ಷ ಕೆಲಸ ಮಾಡಿ ಒಂದಷ್ಟು ಸಾಲ ತೀರಿಸುವ ಹೊತ್ತಿಗೆ ತೋಟವೂ ಫಲಕೊಡತೊಡಗುತ್ತದೆ. ಆಗ ಮೆತ್ತಗೆ ಈ ಕಂಪನಿಯ ಹಡಗನ್ನು ನೀರಿಗೆ ಬಿಟ್ಟು ಊರಿನ ದೋಣಿಗೆ ದಾಟಿಕೊಳ್ಳಬೇಕು. ಈಗಲೇ ವಯಸ್ಸು ಮೊವ್ವತ್ತಕ್ಕೆ ಎರೆಡೇ ಮೆಟ್ಟಿಲು ದೂರವಿದೆ. ಇನ್ನು ನಾಲ್ಕು ವರ್ಷಗಳೊಳಗಾಗಿ ಇವನ್ನೆಲ್ಲಾ ಸಾಧಿಸಿ ಊರು ಸೇರಿಬಿಡಬೇಕು. ಮತ್ತೂ ತಡವಾದರೆ ದೇಹ ತೋಟದ ಕೆಲಸಕ್ಕೆ ಬಗ್ಗಲಾರದು. 


ಹಾಗಾದರೆ ಮದುವೆ? ಅದಕ್ಕೆ ಬೇಕಾದ ಹಣ? ಅದರ ಮುಂದಿನ ಕಥೆ?


ಕೊನೆಯಿಲ್ಲದ ಪ್ರೆಶ್ನೆಗಳಿಗೆ ಉತ್ತರ ಹುಡುಕುವುದಕ್ಕಿಂತ ನಿದ್ರಿಸುವುದೇ ಸುಲಭವೆಂದುಕೊಂಡ ಮನಸ್ಸು ನಿದ್ರೆಗೆ ಜಾರಿತು.


                      *******************


"ನಾಳೆ ಚಂದ್ರಲೇಖಾಳ ಮದುವೆಯಿದೆ ಸರ್. ಆಫೀಸಿನವರೆಲ್ಲಾ ಮೈಸೂರಿಗೆ ಹೋಗುತ್ತಿದ್ದಾರೆ. ನಾನೂ ಅವರೊಟ್ಟಿಗೆ ಹೋಗುವುದಕ್ಕೆ ರಜೆ ಬೇ.."


"ಗಜೇಂದ್ರ ಅ್ಯಂಡ್ ಕೋದು ಪೇಮೆಂಟ್ ಬಂತಾ?"

ರಾಜೀವನ ಮಾತು ಕೇಳಿಸಿಯೇ ಇಲ್ಲವೆಂಬಂತೆ ಕೇಳಿದ ಶರ್ಮಾ. 


"ಆಲ್ಮೋಸ್ಟ್ ಆಗಿದೆ ಸರ್. ಫಾಲೋ ಅಪ್ ಮಾಡುತ್ತಿದ್ದೇನೆ. ಈ ವೀಕೆಂಡ್ ಹೊತ್ತಿಗೆ ಮತ್ತೊಮ್ಮೆ…"


"ಇವತ್ತು ಇ-ಸ್ಟ್ಯಾಂಪಿಗ್ ಮುಗಿಸಿಕೊಂಡು ನಾಳೆಯೇ ಅವರಿಗೆ ಮತ್ತೊಂದು ರೌಂಡ್ ರಿಮೈಂಡರ್ ನೋಟೀಸು ಕೊಟ್ಟು ಬನ್ನಿ. ವಾರದ ಕೊನೆಯ ತನಕವೆಲ್ಲಾ ಕಾಯಲು ಸಾಧ್ಯವಿಲ್ಲ."


"ಅಲ್ಲ ಸರ್.‌ ನಾಳೆ ಮದುವೆ ಮುಗಿಸಿಕೊಂಡು ನಾಡಿದ್ದು ಬೆಳಗ್ಗೆಯೇ.."


"ವಾರಕ್ಕೆ ಮೂರು ಜನ ಮದುವೆಯಾಗುತ್ತಾರೆ. ಅದಕ್ಕೆಲ್ಲಾ ರಜೆ ಕೊಡುತ್ತಾ ಹೋದರ ಇಲ್ಲಿ ಕೆಲಸ ಮಾಡುವವರು ಯಾರು? ಪ್ಲೀಸ್ ಡೂ ಆ್ಯಸ್ ಐ ಸೆಡ್!"


ತಾನಿಟ್ಟ ಕೋರಿಕೆಗೂ, ಅವರು ಕೊಟ್ಟ ತೀರ್ಮಾನಕ್ಕೂ ಸಂಬಂಧವೇ ಇಲ್ಲವಲ್ಲಾ ಎಂದುಕೊಂಡು ಸಣ್ಣಗಿನ ದನಿಯಲ್ಲಿ ಕೊನೆಯ ಪ್ರಯತ್ನವೆಂಬಂತೆ ಕೇಳಹೊರಟ ರಾಜೀವನ ಮಾತನ್ನು ಅರ್ಧಕ್ಕೇ ತುಂಡರಿಸುತ್ತಾ ಶರ್ಮಾ ಹೆಚ್ಚುಕಮ್ಮಿ ಕಿರುಚಿಯೇ ಬಿಟ್ಟ. ಪೆಚ್ಚುಮೋರೆ ಹಾಕಿಕೊಂಡು ಹೊರಬಂದವನಿಗೆ ತನ್ನ ಕ್ಯಾಬಿನ್ ನ ತುಂಬಾ ಕುಹುಕದ ಮುಸಿಮುಸಿ ನಗೆ ತಾಂಡವವಾಡುತ್ತಿರುವಂತೆ ಭಾಸವಾಯಿತು. ಅವಮಾನದ ಭಾರಕ್ಕೆ ಕುಸಿದವನಂತೆ ಕುರ್ಚಿಯ ಮೇಲೆ ಕುಳಿತವನಿಗೆ ಕಾಳಜಿ ತುಂಬಿದ ನೋಟವೊಂದು ತನ್ನತ್ತಲೇ ನೋಡುತ್ತಿರುವಂತೆನಿಸಿ ಮೆಲ್ಲನೆ ಕತ್ತುಹೊರಳಿಸಿ ನೋಡಿದ.


ಸಾಂತ್ವನ ಸೂಸುವ ದೃಷ್ಟಿಯನ್ನು ತನ್ನತ್ತಲೇ ನೆಟ್ಟು ಕುಳಿತಿದ್ದಳು.. ಕಾಡಿಗೆ ಕಂಗಳ ಹುಡುಗಿ ಮಂಗಳಾ!


                       ******************


"ನೀವೇಕೆ ಬೇರೆ ಕಡೆ ಕೆಲಸ ನೋಡಬಾರದು?"


ಕಾಳಜಿ ಬೆರೆತ ದನಿಯಲ್ಲಿ ಹಾಗೆಂದು ಕೇಳಿದವಳು ಎಂದಿಗಿಂತ ಸಮೀಪದಲ್ಲಿ ಕುಳಿತಿರುವಂತೆನಿಸಿತು ರಾಜೀವನಿಗೆ.


"ಬಿಟ್ಟು ಹೋಗಬಹುದು. ಈ ಶರ್ಮಾನ ವರ್ತನೆ ನೋಡಿದಾಗೆಲ್ಲಾ ನನಗೆ ಹಾಗೇ ಅನಿಸುತ್ತದೆ. ಆದರೆ ರಮೇಶ್ ಸರ್ ರ ಮುಖ ನೋಡಿಕೊಂಡು ಸುಮ್ಮನಿದ್ದೇನೆ."

ಕಾಫಿಯ ಸಿಪ್ಪೊಂದನ್ನು ಹೀರಿ ರಾಜೀವ ಮುಂದುವರೆಸಿದ.


"ಅಂದು ಕೆಲಸವಿಲ್ಲದೆ ಅಲೆಯುತ್ತಿದ್ದಾಗ ಇಂಟರ್ವ್ಯೂ ಕೂಡಾ ಮಾಡದೆ ಸೇರಿಸಿಕೊಂಡವರು ರಮೇಶ್ ಸರ್. ಈಗ ಬೇರೆ ಯಾರೇ ಬಂದರೂ ನಾನು ಮಾಡುತ್ತಿರುವ ಕೆಲಸ ನಿಭಾಯಿಸುವುದು ಕಷ್ಟವಿದೆ. ಅದರಲ್ಲೂ ಈ ಶರ್ಮಾನನ್ನು ತಡೆದುಕೊಂಡಂತೂ ಯಾರೂ ಆರು ತಿಂಗಳಿಗಿಂತ ಹೆಚ್ಚಿಗೆ ಉಳಿಯಲಾರರು. ಅದೊಂದೇ ಋಣ, ಇವತ್ತಿಗೂ ನನ್ನನ್ನಿಲ್ಲೇ ಕಟ್ಟಿಹಾಕಿರುವುದು".


"ಅದೊಂದೇನಾ? ಬೇರೆ ಯಾರೂ ಇಲ್ವಾ?"

ಹಾಗೆ ಕೇಳಿದವಳ ದನಿಯಲ್ಲಿ ಥಟ್ಟನೆ ಇಣುಕಿತ್ತು ಹುಸಿಗೋಪ. ಆ ಮುನಿಸಿನ ಆಳದಿಂದ ಎದ್ದುಬಂದಿದ್ದ ಪ್ರೆಶ್ನೆ ತೀರಾ ಸ್ಪಷ್ಟವಾಗಿತ್ತು:


"ನಿಮ್ಮನ್ನಿಲ್ಲಿ ಕಟ್ಟಿ ಹಾಕಿರುವ ಸೆಳೆತಗಳ ಪಟ್ಟಿಯಲ್ಲಿ ನನ್ನ ಹೆಸರಿಲ್ಲವಾ?"


ಕ್ಯಾಂಟೀನಿನ ಗೋಡೆಗೆ ತೂಗುಹಾಕಿದ್ದ ಹೂವಿನ ಭಾವಚಿತ್ರ ಇದ್ದಕ್ಕಿದ್ದಂತೆ ಸುಮಧುರ ಘಮಸೂಸುತ್ತಿರುವಂತೆ ಭಾಸವಾಯಿತು ರಾಜೀವನಿಗೆ. ಗಿಡದಂಚಿನಲ್ಲಿ ಅರಳಲು ಸಿದ್ಧವಾಗಿ ನಿಂತಿರುವ ಮೊಗ್ಗಿನಂತೆ ನವಿರಾದ ರಹಸ್ಯವನ್ನು ಬಚ್ಚಿಟ್ಟುಕೊಂಡು ತನ್ನನ್ನೇ ನೋಡುತ್ತಿದ್ದ ಆ ಕಣ್ಣಿನಾಳವನ್ನೇ ನೋಡುತ್ತಾ ಉಳಿದುಬಿಟ್ಟ. ಆ ದಿನ ಕಛೇರಿಯಿಂದ ಬಸ್ ನಿಲ್ದಾಣದ ತನಕ ನಡೆದವರ ನಡುವೆ ಒಂದು ಮಾತಾದರೂ ಹುಟ್ಟಲಿಲ್ಲ. ತೀರಾ ಬಸ್ಸು ಹತ್ತುವಾಗ ಇಷ್ಟು ಹೊತ್ತಿನಿಂದ ತಯಾರಿ ಮಾಡಿಕೊಂಡ ಮಾತೊಂದನ್ನು ಅವನಿಗಷ್ಟೇ ಕೇಳುವಂತೆ ಪಿಸುಗುಟ್ಟಿ ಹೋದಳು ಮಂಗಳಾ:


"ನನಗೆ ಮನೆಯಲ್ಲಿ ಗಂಡು ನೋಡುತ್ತಿದ್ದಾರೆ!"


                     ***************


"ವೇಣು ಬಂದಿದಾನೆ ನೋಡೋ ರಾಜೀ.."


ಅಮ್ಮನ ಕರೆ ಕೇಳಿದ ರಾಜೀವ ಹಿತ್ತಲಕಡೆ ಅಂಗಳದಿಂದ ಮುಂಬಾಗಿಲಿಗೆ ಬಂದ. ನಡುವಳದ ಹೊಸಿಲಿನಲ್ಲಿ ಅವನ ಮುಖ ಕಾಣಿಸಿಕೊಳ್ಳುತ್ತಿದ್ದಂತೆಯೇ ಜಗುಲಿಯಲ್ಲಿ ಕುರ್ಚಿಯ ಮೇಲೆ ಆಸೀನನಾಗಿದ್ದ ವೇಣು ಮೇಲೆದ್ದು ಹೇಯ್ ಎಂದು ಮುಗುಳ್ನಕ್ಕ. ಒಂದೇ ಶಾಲೆಯ ಒಂದೇ ಬೆಂಚಿನಲ್ಲಿ ಕುಳಿತು ಓದಿದ ಬಾಲ್ಯದ ಗೆಳೆಯ ವೇಣು. ದೊಡ್ಡ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಇಂಜಿನಿಯರ್ರಾಗಿ ಕೆಲಸಮಾಡುತ್ತಿದ್ದ. ಇನ್ನೇನು ಎರೆಡು ವಾರದಲ್ಲಿ ಆಗಲಿದ್ದ ಮದುವೆಗೆ ಬಾಲ್ಯದ ಗೆಳೆಯನನ್ನು ಆಹ್ವಾನಿಸಲೆಂದು ತಾನೇ ಬಂದಿದ್ದ.


"ಯಾವಾಗ ಬಂದ್ಯಪ್ಪಾ ಲಂಡನ್ ನಿಂದ?"


ಅಪ್ಪ ಕೇಳಿದರು.


"ಒಂದು ತಿಂಗಳಾಯ್ತು ರಾಯ್ರೇ"

ವೇಣು ಉತ್ತರಿಸಿದ.


"ಮತ್ತೆ ಹೋಗ್ಬೇಕಾ ಹೇಗೆ?"


"ಇಲ್ಲ. ಪ್ರಾಜೆಕ್ಟ್ ಮುಗ್ದಿದೆ. ಇನ್ನು ಬೆಂಗಳೂರಲ್ಲೇ ಕೆಲಸ"


"ಗುಡ್. ಹೊಸ ಸಂಸಾರಕ್ಕೆ ಹೊಸ ಮನೆ ನೋಡಿ ಆಯ್ತಾ?"


"ಆಯ್ತು. ಅಲ್ಲೇ ಆಫೀಸಿಗೆ ಹತ್ರದಲ್ಲೇ ಒಂದು ಫ್ಲಾಟ್ ತಗೊಂಡೆ. ಬಾಡಿಗೆ ಗೀಡಿಗೆಯ ರಗಳೆಯೆಲ್ಲ ಬೇಡ ಅಂತ"


"ಎಷ್ಟಾಯ್ತು ಒಟ್ಟು?"


"ರಿಜಿಸ್ಟ್ರೇಶನ್ನೆಲ್ಲಾ ಸೇರಿ ಮೊವ್ವತ್ತೆಂಟು ಲಕ್ಷ ಆಯ್ತು. ಡೌನ್ ಪೇಮೆಂಟ್ ಇಪ್ಪತ್ತು ಮಾಡಿದೆ…"


ಅಪ್ಪ ಹಾಗೂ ಗೆಳೆಯನ ನಡುವೆ ನಡೆಯುತ್ತಿದ್ದ ಸಂಭಾಷಣೆ ತನ್ನ ಜಗತ್ತಿಗೆ ಸಂಬಂಧವೇ ಇಲ್ಲದ ಬೇರೆಯದೇ ಲೋಕದ್ದೇನೋ ಅನ್ನಿಸಿತು ರಾಜೀವನಿಗೆ. ಅವರಿಬ್ಬರೂ ಸಂಭಾಷಿಸುತ್ತಲೇ ಮನೆಯ ಹೊರಗಡೆ ಬಂದರು. ರಾಜೀವನೂ ಹಿಂಬಾಲಿಸಿದ. ಅವರ ಮಾತೀಗ ಅಂಗಳದಲ್ಲಿ ಠೀವಿಯಿಂದ ನಿಂತಿದ್ದ ವೇಣುವಿನ ಬೈಕಿನತ್ತ ತಿರುಗಿತು. 


"ಒಟ್ಟು ಒಂದು ಲಕ್ಷದ ನಲವತ್ತಾಯ್ತು ಬೈಕಿಗೆ. ತಿಂಗಳು ತಿಂಗಳು ಇಎಮೈ ರಗಳೆಯೆಲ್ಲ ಬೇಡ ಅಂತ ಒಂದೇ ಸಲಕ್ಕೆ ಪೇಮಾಡಿಬಿಟ್ಟೆ"


ರಾಜೀವ ಬೈಕಿನತ್ತ ನಡೆದ. ಹೆಚ್ಚುಗಾರಿಕೆಯ ಚಿಹ್ನೆಯಂತೆ, ಸಮಾಜದ ಗೌರವದ ಪ್ರತೀಕದಂತೆ, ಭದ್ರತೆ ಸಾಧಿಸಿದ ಬದುಕಿನ ಪ್ರತಿಬಿಂಬದಂತೆ ಬೀಗುತ್ತಾ ನಿಂತಿದ್ದ ಅದನ್ನು ಮೆಲ್ಲನೆ ಸವರಿದ. 


"ನಮ್ಮ ಪ್ರತೀಕ್ ಕೂಡಾ ಇದ್ನೇ ತಗೊಂಡಿದಾನೆ. ಪೇಸ್ಬುಕ್ನಲ್ಲಿ ಫೋಟೋ ಹಾಕಿದ್ದ. ನೋಡಿದ್ಯಾ?"

ವೇಣು ಪ್ರಶ್ನಿಸಿದ.


ಎಲ್ಲರೂ ಒಂದೇ ಶಾಲೆಯಲ್ಲಿ ಓದಿದವರು. ಅದೇ ಮರದ ಬೆಂಚಿನ ಮೇಲೆ ಕುಳಿತು, ಕಲಿತು ಎದ್ದು ಹೋದವರು. ತನ್ನ ಜಟಕಾಗಾಡಿಯಿನ್ನೂ ಅದದೇ ಕ್ಷುಲ್ಲಕ ಲೆಕ್ಕಾಚಾರಗಳ ಬೀದಿಯಲ್ಲಿ ಅಲೆಯುತ್ತಿರುವಾಗ ಇವರೆಲ್ಲರೂ ಎಲ್ಲೆಲ್ಲಿಗೆ ತಲುಪಿಬಿಟ್ಟರು!


"ಮತ್ತೆ.. ನೀನ್ಯಾವಾಗ್ಲೋ ಮದುವೆ ಊಟ ಹಾಕ್ಸೋದು?"

ವೇಣು ಪ್ರಶ್ನಿಸಿದ.


"ಎಂಥಾ ಮದುವೆನೋ ಏನೋ. ಮೊದಲು ಮನೆ ರಿಪೇರಿ ಮಾಡ್ಸಿ, ಊರಲ್ಲೇ ಎಲ್ಲಾದ್ರೂ ಒಂದೆಕರೆ ಜಮೀನು ತಗೋಬೇಕಂತಿದೀನಿ. ಆ ಸಾಲ ಸ್ವಲ್ಪವಾದ್ರೂ ತೀರಿದಮೇಲೆ ಮದುವೆ ಗಿದುವೆ ಎಲ್ಲಾ."

ರಾಜೀವ ತನ್ನ ಲೆಕ್ಕದ ಪುಸ್ತಕವನ್ನು ಬಿಡಿಸಿಟ್ಟ.


"ಕೆಲಸ ಬದಲಾಯಿಸೋದು ತಾನೇ? ಯಾಕೆ ಅದೇ ಕಂಪನಿಯಲ್ಲಿ ಉಳಿದು ಕೊಳೀತಿದೀಯಾ? ಜಾಸ್ತಿ ಸಂಬಳ ಎಲ್ಲಿ ಸಿಗುತ್ತದೋ ಅಲ್ಲಿಗೆ ದಾಟ್ಕೋಬೇಕು"


"ಬದಲಾಯಿಸ್ಬೋದು. ಆದ್ರೆ ಸಧ್ಯಕ್ಕೆ ನಮ್ಮ ಕಂಪನೀಲಿ ಅಕೌಂಟೆಂಟ್ ಅಂತ ಇರೋದು ನಾನೊಬ್ನೇ. ಇನ್ನೊಬ್ಬನನ್ನು ತಗೊಂಡು ಅವನು ಸ್ವಲ್ಪ ತಯಾರಾಗೋದ್ರೊಳಗೇ ನಾನೂ ಬಿಟ್ಟುಬಿಟ್ರೆ ಕಂಪನೀಗೆ ತುಂಬಾ ತೊಂದರೆಯಾಗುತ್ತೆ. ಕಷ್ಟದಲ್ಲಿದ್ದಾಗ ಕೆಲಸ ಕೊಟ್ಟ ಕಂಪನಿ. ಅವರ ಬಗ್ಗೇಗೂ ಸ್ವಲ್ಪ ಯೋಚಿಸಬೇಕಲ್ವಾ.."


"ಹಾಹಾಹಾ.."

ರಾಜೀವನ ಮಾತಿಗೆ ವೇಣು ನಕ್ಕುಬಿಟ್ಟ.


"ನೋಡು ಗುರೂ, ಈ ಥರದ ಸೆಂಟಿಮೆಂಟುಗಳೆಲ್ಲ ವಯಕ್ತಿಕ ಜೀವನದಲ್ಲಿರಬೇಕು, ವೃತ್ತಿ ಬದುಕಿನಲ್ಲಲ್ಲ. ಈ ಐಟಿ, ಕಾರ್ಪೋರೇಟ್ ಜಗತ್ತಿನಲ್ಲಿ ಭಾವನೆಗಳೆಲ್ಲಾ ಚಲಾವಣೆಯಾಗುವುದಿಲ್ಲ. ಇಲ್ಲಿ ಮನುಷ್ಯ ತನ್ನ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತಾನೆ ಹಾಗೂ ಅದನ್ನು 'ಪರಿಸ್ಥಿತಿ' ಎನ್ನುತ್ತಾನೆ. ನೀನೂ ಹಾಗೇ ಇದ್ದರೆ ಮಾತ್ರ ಇಲ್ಲಿ ಉದ್ಧಾರ ಆಗ್ತೀಯ. ನೀನು ಒಂದೊಂದಾಗಿ ಅಷ್ಟೆಲ್ಲಾ ಮಾಡುವಷ್ಟರಲ್ಲಿ ನಿನ್ನ ವಯಸ್ಸು ಮಠ ಸೇರಿಕೊಂಡಿರತ್ತೆ. ಏನನ್ನೇ ಆದ್ರೂ ಪ್ಲಾನ್ ಮಾಡಿಯೇ ಮಾಡ್ಬೇಕು. ನಿನ್ನಂಥದೇ ಯೋಚನೆಗಳಿರೋ, ಕೆಲಸಕ್ಕೆ ಹೋಗ್ತಿರೋ ಸರಳ ಹುಡುಗೀನ ಹುಡುಕಿ ಮದುವೆಯಾಗು. ನಿನ್ನ ಸಂಪಾದನೆಯ ಜೊತೆ ಅವಳ ಸಂಬಳವೂ ಸೇರಿದ್ರೆ ಈ ಎಲ್ಲ ಲೆಕ್ಕಾಚಾರಗಳೂ ಸುಲಭವಾಗುತ್ತವೆ"


ತನ್ನಂಥವೇ ಕನಸುಗಳಿರುವ ಸರಳ ಹುಡುಗಿ..


ಯಾಕೋ ಮಂಗಳಾ ಅಪ್ರಯತ್ನವಾಗಿ ನೆನಪಾದಳು.


ಬದುಕಿನ ಆಯವ್ಯಯದ ಕಡತದಲ್ಲಿ ಹೂಡಿಕೆಯ ಹೊಸ ಪುಟವೊಂದು ತೆರೆದುಕೊಂಡಂತಾಗಿ ರಾಜೀವನ ಕಣ್ಣು ಹೊಳೆಯತೊಡಗಿತು.


                *****************


"ಮತ್ತೆ.. ಯಾವಾಗ ಮದುವೆ?'


ಆ ಪ್ರೆಶ್ನೆಯನ್ನು ಸುಮ್ಮನೆ ಫೋನಿನಲ್ಲಿನ ಸಂಭಾಷಣೆಯನ್ನು ಮುಂದುವರಿಸಲೆಂಬಂತೆ  ಕೇಳಿದನಾದರೂ ಕೇಳಿದ ನಂತರ ಇದಕ್ಕೆ ಅವಳು ಕೊಡುವ ಉತ್ತರ ತನ್ನ ಇಡೀ ಜೀವಮಾನವನ್ನೇ ನಿರ್ಧರಿಸಲಿದೆಯೇನೋ ಅನ್ನಿಸಿತು ರಾಜೀವನಿಗೆ.


"ಏನೋ ಗೊತ್ತಿಲ್ಲಾರೀ. ಮನೆಯಲ್ಲಿ ಹುಡುಗ ನೋಡ್ತಿದಾರೆ. ಯಾವಾಗ ಸೆಟ್ಟಾಗತ್ತೋ ಏನೋ.."

ಮಂಗಳಾಳ ಧ್ವನಿಯಲ್ಲಿ ಚಿಂತೆಯ ಪಸೆಯಿತ್ತು.


"ಓಹೋ. ಯಾವ್ದಾದ್ರೂ ಸಂಬಂಧ ಬಂದಿದ್ಯಾ?"

ಮನಸ್ಸಿನಲ್ಲಿ ಭುಗಿಲೆದ್ದ ಆತಂಕ ಮಾತಿನಲ್ಲಿ ಸ್ಫುರಿಸದಂತೆ ಕಷ್ಟಪಟ್ಟು ತಡೆಹಿಡಿಯುತ್ತಾ ಕೇಳಿದ ರಾಜೀವ.


"ಒಂದೆರೆಡು ಬಂದುಹೋಗಿವೆ. ಇನ್ನೊಂದು ಬರುವುದಿದೆ"

ದೀರ್ಘವಾದ ನಿಟ್ಟುಸಿರಿನೊಂದಿಗೆ ಮಾತನ್ನು ಅರ್ಧಕ್ಕೇ ನಿಲ್ಲಿಸಿದಳು.


"ಯಾಕ್ರೀ? ನಿಮಗಿಷ್ಟವಾಗಿಲ್ವಾ ಆ ಸಂಬಂಧಗಳು?"


"ತಲೆ ಚಿಟ್ಟುಹಿಡಿದು ಹೋಗಿದೆ ರಾಜೀವ್. ಇಂಜಿನಿಯರ್ರು, ಡಾಕ್ಟ್ರು. ಅಷ್ಟು ಸಂಬಳ, ಇಷ್ಟು ಆಸ್ತಿ. ಅಲ್ಲೊಂದು ಸೈಟು, ಇಲ್ಲೊಂದು ಕಂಪನಿ. ಜಾತಕದಲ್ಲಿ ಗುರು ಅಲ್ಲಿ, ಶನಿ ಇಲ್ಲಿ… ಎಷ್ಟು ಲೆಕ್ಕಾಚಾರಗಳು ಗೊತ್ತಾ? ತಮಾಷೆಯೇನಂದ್ರೆ ಈ ಯಾವ ಲೆಕ್ಕಾಚಾರದಲ್ಲೂ ನನಗೇನು ಇಷ್ಟ ಎನ್ನುವ ಅಂಶವೇ ಇಲ್ಲ!"


"ನಿಮಗೇನು ಇಷ್ಟ?"


ನಿಟ್ಟುಸಿರಿನದೇ ಮಾತಿನ ರೂಪವೆಂಬಂತೆ ನುಡಿದವಳಿಗೆ ಉಸಿರಿನಷ್ಟೇ ನಯವಾದ ಸ್ವರದಲ್ಲಿ ಆ ಪ್ರೆಶ್ನೆ ಕೇಳಿದ. ಪ್ರತಿಯಾಗಿ ಅತ್ತಕಡೆಯಿಂದ ಬಿಕ್ಕಿನ ಧ್ವನಿ ಭಾವಲಹರಿಯ ಮೊನಚು ಮೊನೆಯಂತೆ ತೇಲುತ್ತಾ ಬಂದು ಅವನ ಕಿವಿಯನ್ನು ಇರಿಯಿತು.


"ನನಗೆ.. ನನಗೆ.. ನನ್ನನ್ನು ಅರ್ಥಮಾಡಿಕೊಳ್ಳುವವನು ಇಷ್ಟ. ಕಡಿಮೆ ಸಂಬಳವಾದರೂ ಪರವಾಗಿಲ್ಲ, ನನ್ನನ್ನು ಪ್ರೀತಿಸುವವನು ಇಷ್ಟ. ಹಳ್ಳಿಯ ಮಡಿಲಿನ ಪುಟ್ಟ ಹಂಚಿನ ಮನೆಯಲ್ಲಿ ಮನೆಕೆಲಸ ಮಾಡಿ ದಣಿಯುವ ನನಗೆಂದೇ ತೋಟದ ಹೂವೊಂದನ್ನ ಕೊಯ್ದು ತರುವವನು ಇಷ್ಟ. ಹಣ, ಆಸ್ತಿ, ಅಂತಸ್ತುಗಳೆಲ್ಲದರಾಚೆಗೂ ಇರುವ ಅಪ್ಪಟ ಬದುಕನ್ನು ಪ್ರೀತಿಸುವ ಸಾಮಾನ್ಯ ವ್ಯಕ್ತಿಯೇ ನನಗಿಷ್ಟ. ಹೇಳಿ ರಾಜಿ.. ನನಗೆ ಅಂಥವನೇ ಸಿಗ್ತಾನೆ ಅಲ್ವಾ?"


ಕಿಟಕಿಯಾಚೆಗೆಲ್ಲೋ ಹಕ್ಕಿಯೊಂದು ನವಿರಾಗಿ ಉಲಿಯಿತು‌. ಹಾದು ಬಂದ ತಂಗಾಳಿ ಹೊತ್ತು ತಂದ ಹೂ ಘಮದ ಸಮೇತ ನೇರ ಎದೆಯನ್ನೇ ಹೊಕ್ಕಂತಾಯಿತು. 


"ಹೇಳಿ ಗೋಪೀ.. ಸಿಗ್ತಾನೆ ಅಲ್ವಾ?"

ಅವಳು ಪುನರುಚ್ಛರಿಸಿದಳು.


"ಸಿಗುತ್ತಾನೆ ಮಂಗಳಾ.. ಸಿಕ್ಕೇ ಸಿಗುತ್ತಾನೆ. ಚಾಚುವ ಹಾಗೂ ಬಾಚುವ ಕೈಗಳೆರೆಡನ್ನೂ ಪರಸ್ಪರ ಸೇರಿಸಲೆಂದೇ ಮೇಲ್ಲೊಬ್ಬ ಕುಳಿತಿದ್ದಾನೆ. ಅವನು ಖಂಡಿತಾ ನೀವು ಬಯಸಿದವನನ್ನೇ ನೀಡುತ್ತಾನೆ."


'ಸಿಗುತ್ತೇನೆ' ಎಂಬ ಪದವನ್ನು 'ಸಿಗುತ್ತಾನೆ' ಎಂದು ತಪ್ಪಾಗಿ ಹೇಳಿಬಿಟ್ಟೆನೇನೋ ಅನ್ನಿಸಿತು ರಾಜೀವನಿಗೆ.


"ಅಲ್ಲಾ, ನನ್ನ ಮನಸ್ಸಿನ ಲೆಕ್ಕಾಚಾರಗಳನ್ನೆಲ್ಲಾ ಇಷ್ಟು ಮುಕ್ತವಾಗಿ ನಿಮ್ಮತ್ರ ಹೇಳ್ಕೊಳ್ತಿದೀನಲ್ಲಾ, ಅಷ್ಟಕ್ಕೂ ನೀವು ಯಾರು ನನಗೆ?"

ತಾನು ಕೇಳಬಯಸುತ್ತಿರುವ ಉತ್ತರವನ್ನು ಪ್ರೆಶ್ನೆಯಲ್ಲೇ ಮುಚ್ಚಿಟ್ಟಂತೆ ಕೇಳಿದಳು ಮಂಗಳಾ. ತುಟಿಯಂಚಿನಲ್ಲಿ ತುದಿಗಾಲಿನಲ್ಲಿ ನಿಂತಿರುವ ಆ ಸವಿಸತ್ಯವನ್ನು ಮರೆಮಾಚುತ್ತಾ ಅವನು ನುಡಿದ:


"ಇನ್ನೊಮ್ಮೆ ಹೇಳ್ತೀನಿ"


"ನಿಜವಾಗ್ಯೂ ಹೇಳ್ತೀರಾ?"


"ನಿಜವಾಗ್ಯೂ ಹೇಳ್ತೀನಿ"


"ನಾನು ಕಾಯ್ತಿರ್ತೀನಿ.."


"ಗುಡ್ ನೈಟ್"


"ಗುಡ್ ನೈಟ್"


ಒಲ್ಲದ ಮನಸ್ಸಿನಿಂದ ಸಂಪರ್ಕ ಕತ್ತರಿಸಿದ ರಾಜೀವ ಹಾಸಿಗೆಗೆ ಒರಗಿಕೊಂಡ. ಬಹಳ ದಿನಗಳ ನಂತರ ಚಂದದ ಕನಸೊಂದು ತನಗಾಗೇ ಕಾಯುತ್ತಿರುವಂತೆ ಮನಸ್ಸೆಲ್ಲಾ ಉಲ್ಲಾಸಮಯವಾಗಿತ್ತು‌.


"ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ

ಕೈಹಿಡಿದು ನಡೆಸೆನ್ನನೂ"


ಹೊರಗಿನ ನಿರ್ಜನ ರಸ್ತೆಯಲ್ಲಿ ಕಾರೊಂದು ಅವನೆದೆಯದೇ ಹಾಡನ್ನು ಗುನುಗುತ್ತಾ ಹಾದುಹೋಯಿತು.


ಒಪ್ಪಿಬಿಡುತ್ತಾಳಾ?


ತಾನೆಂಬ ಅಲೆಮಾರಿ ದೋಣಿಯೀಗ ಮಂಗಳಾಳೆನ್ನುವ ಸುಂದರ ತೀರವನ್ನು ತಲುಪಿನಿಂತಿದೆಯಾ?


ನವಿರಾದ ಅಯೋಮಯದ ಹೊದಿಕೆಯಡಿಯಲ್ಲಿ ಮೆಲ್ಲನೆ ಯೋಚಿಸತೊಡಗಿದ. ಬೇಡ. ಈಗಲೇ ಕೇಳುವುದು ಬೇಡ. ಮೊದಲು ಆರ್ಥಿಕವಾಗಿ ಸ್ವಲ್ಪ ಬಲಾಢ್ಯನಾಗಬೇಕು. ತನ್ನ ಮಗಳ ಆಯ್ಕೆಯನ್ನು ಪರೀಕ್ಷಿಸಲೆಂದು ಅವಳ ಮನೆಯವರು ಬಂದಾಗ ತಾನು ತೀರಾ ಅರಮನೆಯಲ್ಲಲ್ಲದಿದ್ದರೂ ಚೊಕ್ಕದಾದ ಟೆರಾಸಿನ ಮನೆಯಲ್ಲಾದರೂ ನಿಂತು ಅವರನ್ನು ಸ್ವಾಗತಿಸಬೇಕು. ಬದುಕಿನಲ್ಲಿ ಮೊಟ್ಟಮೊದಲಬಾರಿಗೆ ತನ್ನನ್ನು ಆಯ್ಕೆಮಾಡಿಕೊಂಡಿರುವವಳ ಆಯ್ಕೆಯನ್ನು ತಾನು ಸಮರ್ಥಿಸಲೇಬೇಕು!


ಅಂದಿನ ಅವನ ನಿದಿರೆ ಎಂದಿನಂತಿರಲಿಲ್ಲ.


               ***************



ಕನಸು ನನಸಾಗುತ್ತಿದೆ!


ಇನ್ನೇನು ಮಂಗಳಾ ಬಂದು ಕೂರಬೇಕಿರುವ ಕ್ಯಾಬಿನ್ ನ ಕುರ್ಚಿಯನ್ನೇ ನೋಡುತ್ತಾ ತನ್ನೊಳಗೇ ಹಾಗೆಂದುಕೊಂಡ ರಾಜೀವ್. ಜೊತೆಯಲ್ಲಿ ಓದಿ ಬೆಳೆದ ಗೆಳೆಯರೆಲ್ಲರ ಮದುವೆ ದಿಬ್ಬಣಗಳು ಮನೆಯ ಮುಂದೆಯೇ ಸಾಗುತ್ತಿವೆ. ಅವರ 'ವೆಲ್ ಸೆಟಲ್ಡ್' ಬದುಕಿನ ಹೆಮ್ಮೆಯ ಪ್ರತೀಕಗಳಾದ ಕಾರು, ಬೈಕುಗಳ ಉನ್ಮಾದದ ಹಾರನ್ನೀಗ ತನ್ನ ಅಸ್ಥಿರ ಬದುಕನ್ನು ಕೆಣಕುತ್ತಿದೆ. ತನ್ನ ತೇರೂ ಹೊರಡಬೇಕಿದೆ‌. ಕಾರಿನಲ್ಲಲ್ಲದಿದ್ದರೂ ಕಾಲ್ನಡಿಗೆಯಲ್ಲಾದರೂ ನಡೆದು ಸಾಗಬೇಕಿದೆ. ಖುಷಿಯ ಸಂಗತಿಯೆಂದರೆ ಜೊತೆನಡೆಯಲಿಕ್ಕೆ ತನಗೀಗ ವಿನೂತನ ಜೊತೆಯೊಂದು ದೊರಕಿದೆ.. 


ಮಂಗಳಾ! 


ಅಭಿಪ್ರಾಯಗಳಲ್ಲಿ ಸಾಮ್ಯತೆಯಿದೆ. ಆಕಾಂಕ್ಷೆಗಳು ಒಂದೇ ಆಗಿವೆ. ಲೆಕ್ಕಾಚಾರಗಳು ಮ್ಯಾಚ್ ಆಗುತ್ತಿವೆ. ಅವಳು ಹುಡುಕುತ್ತಿರುವ ವಿಗ್ರಹದ್ದೂ, ತಾನು ಕೆತ್ತುತ್ತಿರುವ ಕಲ್ಲಿನದ್ದೂ ಅಂತಿಮ ರೂಪ ಒಂದೇ ಆಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ತನ್ನೆದೆಯಲ್ಲಿ ಪ್ರಜ್ವಲಿಸುತ್ತಿರುವ ಪ್ರೇಮ ಜ್ಯೋತಿಯೇ ಅವಳ ಹೃದಯದಲ್ಲೂ ಉರಿಯುತ್ತಿದೆ. ತನ್ನಂತೆಯೇ ಮಧ್ಯಮ ವರ್ಗದವಳು. ಊರು, ನೆಮ್ಮದಿ, ಜಮೀನು ಎಂದು ತನ್ನಹಾಗೇ ಚಿಕ್ಕಚಿಕ್ಕ ಆಸೆಗಳ ಕೈತೋಟ ಬೆಳೆಸಿಕೊಂಡಿರುವವಳು. ಇಬ್ಬರೂ ಸಂಗಾತಿಗಳಾಗಿ ಕೈಜೋಡಿಸಿದರೆ ಆ ಕೈತೋಟ ಉದ್ಯಾನವನವಾಗಲಿಕ್ಕೆ ಎಷ್ಟು ಹೊತ್ತು? ಇಬ್ಬರ ಸಂಬಳದಲ್ಲಿ ಒಬ್ಬರದ್ದನ್ನು ತಿಂಗಳ ಖರ್ಚಿಗೆ ಬಳಸಿ ಇನ್ನೊಬ್ಬರದ್ದನ್ನು ಉಳಿಸಿದರೂ ಮುಂದಿನ ಎರೆಡು ವರ್ಷದಲ್ಲಿ ಒಂದೊಳ್ಳೆ ಜಮೀನು ಕೊಳ್ಳಬಹುದು. ಇಲ್ಲಿ ದುಡಿದು ಲೋನ್ ತೀರಿಸುತ್ತಾ ಅಲ್ಲಿ ಕೃಷಿಯನ್ನೂ ನಿಭಾಯಿಸದರೆ ಮತ್ತೆರೆಡು ವರ್ಷಗಳಲ್ಲಿ ತೋಟವೂ ಫಲಕೊಡಲಾರಂಭಿಸುತ್ತದೆ. ಆ ಪ್ರತಿಫಲ ತಮ್ಮ ನೆಮ್ಮದಿಯ ಬದುಕಿಗೆ ಸಾಕಾಗುವ ಮಟ್ಟವನ್ನು ತಲುಪಿದ ದಿನ ತಾನು ಹಾಗೂ ಮಂಗಳಾ ಈ ಒತ್ತಡ, ಯಾಂತ್ರಿಕತೆಗಳ ಮಹಾನಗರಿಯನ್ನೊಮ್ಮೆ ಕೊನೆಯ ಬಾರಿಗೆ ನೋಡಿ ಊರಿನ ಬಸ್ಸು ಹತ್ತುತ್ತೇವೆ!


ಕನಸಿನ ಗೂಡನ್ನು ಜೊತೆಯಾಗಿ ಹೆಣೆಯುವುದರಲ್ಲಿ ಎಷ್ಟೊಂದು ಸಂಭ್ರಮವಿದೆಯಲ್ಲಾ?


ಅವಳಿನ್ನೂ ಬಂದು ಕೂರದ ಖಾಲಿ ಕುರ್ಚಿಯ ಸುತ್ತಾ ಕನಸುಗಳ ಬಳ್ಳಿ ಹಬ್ಬಿಸುತ್ತಿದ್ದ ರಾಜೀವ ಥಟ್ಟನೆ ವಾಚು ನೋಡಿಕೊಂಡ. ಸಮಯ ಹತ್ತೂ ಮೊವ್ವತ್ತು ದಾಟಿದೆ. ಅವಳೇಕಿನ್ನೂ ಆಫೀಸಿಗೆ ಬಂದಿಲ್ಲ? ಹುಷಾರು ಗಿಷಾರು ತಪ್ಪಿರಬಹುದೇ? ಕೇಳೋಣವೆಂದು ಫೋನಾಯಿಸಿದ. ಆಚೆ ಕಡೆ ಸಂಪೂರ್ಣ ರಿಂಗಾದರೂ ಅವಳಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸಣ್ಣ ಚಿಂತೆಯ ಕಿಟಕಿಯೊಂದನ್ನು ತೆರೆದಿಟ್ಟಕೊಂಡೇ ಕೆಲಸ ಮುಂದುವರೆಸಿದ. 


"ಸರ್ ಬರಬೇಕಂತೆ"


ರಾಜೀವ ಈ ಲೋಕಕ್ಕೆ ಮರಳಿದ. ಕರೆ ಕಳಿಸಿದ ಶರ್ಮಾನ ಕ್ಯಾಬಿನ್ ನತ್ತ ನಡೆದ. ಆಶ್ಚರ್ಯವೆಂಬಂತೆ ಅಲ್ಲಿ ಶರ್ಮಾನ ಪಕ್ಕ ಕುಳಿತಿದ್ದ ರಮೇಶ್ ಸರ್ ಸಹಾ ಕಣ್ಣಿಗೆ ಬಿದ್ದರು. 


"ಏನು ಕೆಲಸ ಮಾಡ್ತೀರ್ರೀ ರಾಜೀವ್?"

ತೀರಾ ಅನಿರೀಕ್ಷಿತವಾದ ಆ ಮಾತು ರಮೇಶ್ ರ ಬಾಯಿಂದ ಬಂತು.


"ವರ್ಮಾ ಟ್ರೇಡರ್ಸ್ ನವರ ಫೈಲ್ ಎಲ್ಲೋ ಕಳೆದುಹಾಕಿದೀರಂತೆ?"


ರಾಜೀವನಿಗೆ ಕಾಲ ಕೆಳಗಿನ ನೆಲ ಜರ್ರನೆ ಜಾರಿದಂತೆ ಭಾಸವಾಯಿತು. ಐದಾರು ತಿಂಗಳ ಕೆಳಗೆ ತನ್ನ ಕೈಗೇ ಬಂದಿದ್ದ ಫೈಲದು. ಈಗ ಹಠಾತ್ತನೆ ಕಾಣೆಯಾಗಿದೆ. ಬಹುಮುಖ್ಯ ಕಾಗದ ಪತ್ರ, ಕೊಟೇಶನ್, ಟೆಂಡರ್ ವಿವರಗಳಿದ್ದ ಅದನ್ನು ಇದೇ ಶರ್ಮಾನಿಗೆ ಕೊಟ್ಟಂತೆ ಮಾಸಲು ಮಾಸಲು ನೆನಪು ತನಗೆ. ತನ್ನೀ ಅನಿಶ್ಚಿತತೆಯನ್ನೇ ಬಂಡವಾಳವಾಗಿಸಿಕೊಂಡಿರುವ ಶರ್ಮಾ ತಾನದನ್ನು ಪಡೆದೇ ಇಲ್ಲ ಎಂದು ವಾದ ಮಾಡುತ್ತಿದ್ದಾನೆ.  ಪಡೆದಿಲ್ಲವೋ ಇಲ್ಲಾ ಎಲ್ಲೋ ಇಟ್ಟು ಮರೆತು ಈಗ ತಪ್ಪನ್ನು ತನ್ನ ಮೂತಿಗೆ ಒರೆಸುತ್ತಿದ್ದಾನೋ ಹೇಗೆ ಹೇಳುವುದು? ಸದಾ ತನ್ನ ಟೇಬಲ್ ಮೇಲೆ ಫೈಲುಗಳ ಗುಡ್ಡೆ ಹಾಕಿಕೊಂಡಿರುತ್ತಾನೆ. ಅದರಲ್ಲಿ ಯಾವುದನ್ನೋ ಕಳೆದುಕೊಂಡು ತನ್ನ ಮೇಲೆ ಎಗರಾಡುತ್ತಾನೆ. ನೆನ್ನೆಯಷ್ಟೇ ಆ ಫೈಲಿನ ಬಗ್ಗೆಯೂ ಒಂದು ಸುತ್ತಿನ ವಾದ ಮುಗಿದಿತ್ತು. ಈಗದು ನೇರ ರಮೇಶ್ ಸರ್ ಟೇಬಲ್ ತನಕ ಬಂದು ತಲುಪಿದೆ. ಯಾವುದೋ ಗಡಿಬಿಡಿಯಲ್ಲಿ ಅದನ್ನು ಕೊಟ್ಟು ಮರೆತ ತನ್ನ ದುರ್ಬಲ ಸ್ಮೃತಿಶಕ್ತಿಯನ್ನು ಹಳಿದುಕೊಳ್ಳುತ್ತಾ, ಮುಂದಿನ ಬೈಗುಳಕ್ಕಾಗಿ ಎದುರುನೋಡುತ್ತಾ ನಿಂತುಕೊಂಡ ರಾಜೀವ್.


"ಯಾಕೆ ಇಷ್ಟೊಂದು ಎಡಬಿಡಂಗಿ ಕೆಲಸ ಮಾಡ್ತೀರ? ಆ ಫೈಲಿನ ಪ್ರಾಮುಖ್ಯತೆ ಗೊತ್ತಿಲ್ವ ನಿಮಗೆ? ಚಿಲ್ಲರೆಯಂತೆ ಕಳೆದುಬಿಟ್ಟಿದ್ದೀರಲ್ಲಾ ಅದನ್ನ?"

ರಮೇಶ್ ಮಾತಿಗೆ ಏನು ಹೇಳುವುದೆಂದೇ ತಿಳಿಯದೆ ತಲೆತಗ್ಗಿಸಿದ ರಾಜೀವ್. ತನ್ನದಲ್ಲದ ತಪ್ಪಿಗೆ ಇಂತಹಾ ಮಾತು ಕೇಳುತ್ತಿರುವುದಕ್ಕೆ ಮನಸ್ಸಿಗೆ ಹಿಂಸೆಯಾಗುತ್ತಿತ್ತು.


"ಯಾವ ಕೆಲಸ ಕೊಟ್ಟರೂ ಹೀಗೇ ಮಾಡೋದು ಇವನು. ನನಗಂತೂ ಸಾಕಾಗಿಹೋಗಿದೆ. ಹೀಗೇ ನಡೆದರೆ ಬೇರೊಬ್ಬನನ್ನು ನೋಡಿಕೊಳ್ಳಬೇಕಾಗುತ್ತದೆ!"


ಈ ಬಾರಿ ಶರ್ಮಾ ಆಡಿದ ಆ ಮಾತು ನೇರ ರಾಜೀವನ ಗೌರವಕ್ಕೇ ಇರಿಯಿತು. ತಾನೂ ಮಾಡಿರಬಹುದಾದ ತಪ್ಪು. ಅದನ್ನು ನನ್ನ ತಲೆಗೆ ಕಟ್ಟುತ್ತಿದ್ದಾನೆ! ಬೆಳಗಿನಿಂದ ಸಂಜೆಯ ತನಕ ತಾನು ಮಾಡುವ ನೂರು ಸಫಲ ಕೆಲಸಗಳನ್ನು ನೋಡದೇ ವಿಫಲವಾದದ್ದನ್ನು ಮಾತ್ರ ಎತ್ತಿಯಾಡುತ್ತಾನೆ. ಈಗಂತೂ ತೀರಾ ಏಕವಚನಕ್ಕೇ ಇಳಿದಿದ್ದಾನೆ! ರಾಜೀವನ ಆತ್ಮಗೌರವ ಕನಲಿಹೋಯಿತು.


"ಆ ಫೈಲನ್ನು ನಾನು ನಿಮಗೆ ಕೊಟ್ಟಿದ್ದೇನೆ!"

ಮೊಟ್ಟಮೊದಲಬಾರಿಗೆ ದನಿಯನ್ನು ತಾರಕಕ್ಕೇರಿಸಿದ ರಾಜೀವ್.


"ಏನು ಮಾತಾಡ್ತಿದ್ದೀಯಾ? ಹಾಗೆ ಅರ್ದರ್ಧ ಕೆಲಸ ಮಾಡಲಿಕ್ಕೆ ನಾನೇನೂ ನೀನಲ್ಲ!"

ಶರ್ಮಾ ಚೀರಿದ.


"ಕೆಲಸಗಳು ಅರ್ಧಂಬರ್ಧವಾಗಲಿಕ್ಕೆ ಯಾರು ಸರ್ ಕಾರಣ? ಮಾಡುತ್ತಿರುವ ಕೆಲಸವನ್ನು ಪೂರ್ಣಮಾಡಲು ಬಿಡದೆ ಅದು ಬೇಡ ಇದು ಮಾಡು, ಇದು ಬೇಡ ಅದು ಮಾಡು ಎನ್ನುವವರು ಯಾರು ಹೇಳಿ? ಒಂದೇ ಸಮಯಕ್ಕೆ ನಾಲ್ಕು ಕೆಲಸ ಹೇಳಿ, ನಾಲ್ಕನ್ನೂ ಒಟ್ಟಿಗೇ ಮುಗಿಸು ಎಂದರೆ ನಾನಾದರೂ ಏನು ಮಾಡಲಿ?"

ಬಹಳ ಕಷ್ಟದಿಂದ ಮಾತಿನಲ್ಲಿ ಗೌರವವನ್ನುಳಿಸಿಕೊಳ್ಳುತ್ತಾ ಹೇಳಿದ ರಾಜೀವ್.


"ಮಾಡಬೇಕು. ನಿನಗೆ ಸಂಬಳ ಕೊಡುತ್ತಿರುವುದೇ ಅದಕ್ಕೆ! ಅಷ್ಟಕ್ಕೂ ಈಗ ಮತ್ತೊಬ್ಬ ಜೂನಿಯರ್ ನನ್ನು ಕೊಟ್ಟಿಲ್ವಾ?"

ಶರ್ಮಾ ಭುಸುಗುಟ್ಟಿದ.


"ಅವರು ಬಂದಿರುವುದು ಮೂರು ತಿಂಗಳ ಕೆಳಗೆ. ಅದಕ್ಕೂ ಮೊದಲು ಒಂದು ವರ್ಷ ನಾನೊಬ್ಬನೇ ಎಲ್ಲವನ್ನೂ ಮಾಡಿದ್ದೇನೆ. ಆ ಸಮಯದಲ್ಲಾದ ತಪ್ಪುಗಳ ಬಗ್ಗೆಯೇ ನೀವೀಗ ಮಾತಾಡ್ತಿರೋದು!" 

ಪಟ್ಟು ಹಿಡಿದವನಂತೆ ನುಡಿದ ರಾಜೀವ್. 


"ನಾನೀಗ ನಿಮ್ಮನ್ನು ಕರೆದದ್ದು ವಾದ ಮಾಡಲಿಕ್ಕಲ್ಲ ರಾಜೀವ್"

ರಮೇಶ್ ಶರ್ಮಾನ ಪರವಾಗಿ ಬ್ಯಾಟು ಬೀಸಿದರು.


"ಹಾಗಲ್ಲ ಸರ್. ನನಗೆ ನೀವೂ ಕೆಲಸ ಹೇಳ್ತೀರ. ಇವರೂ ಹೇಳುತ್ತಾರೆ. ಅತ್ತಕಡೆ ಬ್ರಾಂಚ್ ಮ್ಯಾನೇಜರ್ ಗಳೂ ಸಹಾ ಒತ್ತಡ ಹಾಕುತ್ತಾರೆ. ಎಲ್ಲರೂ ಕುದುರೆ ಮೇಲೆ ಕುಳಿತುಕೊಂಡೇ ಬರುತ್ತಾರೆ. ಎಲ್ಲರಿಗೂ ಅವರವರ ಕೆಲಸವೇ ಮೊದಲು ಮುಗಿಯಬೇಕಿರುತ್ತದೆ. ಇವೆಲ್ಲದರ ಮಧ್ಯೆ ನನಗೆ ಪ್ರತಿದಿನವೂ ಮಾಡಬೇಕಾದ ನನ್ನದೇ ಆದ ಜವಾಬ್ದಾರಿಗಳಿವೆ. ಇವರು ಹೀಗೆ ಎಲ್ಲದಕ್ಕೂ ಅಡ್ಡಗಾಲು ಹಾಕಿ, ಕೊನೆಗೆ ಯಾವ ಕೆಲಸವೂ ಪೂರ್ಣವಾಗಿಲ್ಲ ಎಂದು ನನ್ನನ್ನು ದೂರುತ್ತಾರೆ. ಹೀಗೆ ಮಾಡಿದರೆ ನನಗೆ ಕಷ್ಟವಾಗುತ್ತೆ"

ರಾಜೀವ ತನ್ನ ಅಸಹಾಯಕತೆಯನ್ನು ತೋಡಿಕೊಂಡ.


"ಸರಿ ರಾಜೀವ್. ಅಷ್ಟೊಂದು ಕಷ್ಟವಾಗುವುದಾದರೆ ನೀವು ಬೇರೆಲ್ಲದಾರೂ ಕೆಲಸ ನೋಡಿಕೊಳ್ಳಿ!"


ಆಘಾತಕ್ಕಿಂತ ಹೆಚ್ಚಾಗಿ ಆಶ್ಚರ್ಯ ತುಂಬಿದ ಕಂಗಳಿಂದ ನೋಡಿದ ರಾಜೀವ್. ಆ ಮಾತು ಕುಟಿಲ ಶರ್ಮಾನ ನಾಲಿಗೆಯಿಂದ ಉದುರಿರದೇ ರಮೇಶರ ಬಾಯಿಂದ ಬಂದಿತ್ತು!


"ನಮಗೆ ಕಷ್ಟಪಟ್ಟು ಕೆಲಸ ಮಾಡುವವರು ಬೇಕಿಲ್ಲ ರಾಜೀವ್. ಇಷ್ಟಪಟ್ಟು ಮಾಡುವವರು ಬೇಕು. ಇನ್ನೆರೆಡು ವಾರದಲ್ಲಿ ನೀವು ಮಾಡುತ್ತಿರುವ ಕೆಲಸವನ್ನೆಲ್ಲಾ ಜೂನಿಯರ್ ಗೆ ಕಲಿಸಿ ಈ ತಿಂಗಳ ಕೊನೆಗೆ ಎಂಡ್ ಮಾಡಿ."


"ಈಗ ನಾನೊಬ್ಬನೇ ಇರುವುದು.. ನಾನೂ ಬಿಟ್ಟರೆ ಕಂಪನಿಗೆ ತೊಂದರೆಯಾಗುತ್ತದೆ"


ಹಿಂದೆ ತಾನಾಡಿದ ಆ ಮಾತು ತನ್ನನ್ನೇ ಅಪಹಾಸ್ಯ ಮಾಡಿದಂತೆ ಭಾಸವಾಯಿತು ರಾಜೀವನಿಗೆ. ಮೂರು ವರ್ಷಗಳಿಂದ 'ತನ್ನ ಕಂಪನಿ' ಎಂಬ ಪ್ರೀತಿಯಲ್ಲಿ ನಿರ್ವಹಿಸಿದ ಉದ್ಯೋಗ. ಒಂದೇ ಕ್ಷಣದಲ್ಲಿ ಮುರಿದುಹೋಯಿತಲ್ಲಾ? ಊಟ ಬಿಟ್ಟು ನಡೆದಿದ್ದೆ. ರಾತ್ರೆಯ ತನಕ ದುಡಿದಿದ್ದೆ. ನಡುರಾತ್ರೆಯಲ್ಲೂ ಲ್ಯಾಪ್ಟಾಪು ತೆರೆದು ಹೇಳಿದ ಕೆಲಸ ಮಾಡಿಕೊಟ್ಟಿದ್ದೆ. ಯಾವುದೂ ಲೆಕ್ಕಕ್ಕೆ ಬಾರದೇ ಹೋಯ್ತಲ್ಲ? ಸಂಸ್ಥೆ-ಉದ್ಯೋಗಿಯೆನ್ನುವ ಸಂಬಂಧದ ಋಣವನ್ನು ಬರಿಯ ಸಂಬಳದಲ್ಲೇ ತೀರಿಸಿಬಿಟ್ಟರಲ್ಲಾ? ತಾನೊಬ್ಬನೇ ಇದ್ದಾಗ ನಯವಾಗಿ ನಡೆಸಿಕೊಂಡು ಇನ್ನೊಬ್ಬನು ಬಂದಾಗ ತೊಲಗು ಎಂದುಬಿಟ್ಟರಲ್ಲಾ?


ಮತ್ತೆ ಅಲ್ಲಿ ನಿಲ್ಲಲು ಮನಸ್ಸಾಗದೆ ಆಚೆಬಂದ ರಾಜೀವ್ ರಾಜೇನಾಮೆಯ ಈಮೆಯ್ಲ್ ಟೈಪಿಸತೊಡಗಿದ. ಎಂತಹಾ ಹುಸಿ ಲೋಕವಿದು! ತನ್ನಂತಹಾ ಉದ್ಯೋಗಿಗಳು ಬೀದಿಗೆ ನೂರುಮಂದಿ ಸಿಗುತ್ತಾರೆ. ಸುಮ್ಮನೆ ಒಂದು ಜಾಹೀರಾತು ಕೊಟ್ಟರೆ ನುಗ್ಗಿಬಂದು ಸಾಲುಗಟ್ಟಿ ನಿಲ್ಲುತ್ತಾರೆ. ಇವರ ಪಾಲಿಗೆ ತಾನು ಬರಿಯ ಗುಮಾಸ್ತನೆಂಬ ಹುದ್ದೆಯೇ ಹೊರತು ರಾಜೀವನೆಂಬ ಸಜೀವ ವ್ಯಕ್ತಿಯಲ್ಲ.


ಸಂಜೆ ಭಾರದ ಹೆಜ್ಜೆಗಳನ್ನಿಡುತ್ತಾ ಕಂಪನಿಯ ಆವರಣದಿಂದ ಹೊರಬಂದ ರಾಜೀವ್ ಬಸ್ ಸ್ಟಾಪಿನತ್ತ ನಡೆಯತೊಡಗಿದ. ತಲೆ ಉರುಳಿಬಿದ್ದ ಹಕ್ಕಿಗೂಡಿನಂತಾಗಿತ್ತು. ನಾಳೆಯಿಂದ ಹೊಸತಾಗಿ ಕೆಲಸ ಹುಡುಕಲು ಆರಂಭಿಸಬೇಕು. ಅದಿನ್ನೆಷ್ಟು ಬೀದಿಗಳಲ್ಲಿ ಅಲೆದಾಟವೋ? ಅದಿನ್ನೆಷ್ಟು ಕೋಟು, ಟೈಗಳೆದುರಿಗಿನ ಬಿನ್ನಹವೋ? ಖಾತೆಯಲ್ಲೀಗ ಬರೀ ಮೊವ್ವತ್ತು ಸಾವಿರವಿದೆ. ಮತ್ತೊಂದು ಕೆಲಸ ಸಿಗುವ ತನಕ ಅಷ್ಟನ್ನೇ ಬಳಸಬೇಕು. 


ಏಳು ವರ್ಷಗಳ ಕಾಲ 'ಸೆಟಲ್ ಆಗುವುದು' ಎನ್ನುವ ಕಾಣದ ತೀರದತ್ತ ಹೊರಟ ಬದುಕು ಹೇಗೆ ಇದ್ದಕ್ಕಿದ್ದಂತೆ ಮತ್ತೆ ಅಲೆದಾಟ ಆರಂಭಿಸಿದ ಜಾಗಕ್ಕೇ ಬಂದು ನಿಂತುಬಿಟ್ಟಿತಲ್ಲಾ?


ಯೋಚನೆಗಳನ್ನು ಹರಿಯುವಂತೆ ಥಟ್ಟನೆ ಫೋನು ರಿಂಗಾಗತೊಡಗಿತು. ಆಚೆಕಡೆಯಿಂದ 'ಹಲೋ' ಎಂದ ಅಪ್ಪನ ಧ್ವನಿಗೆ 'ಹೇಳಿ' ಎಂದ.


"ಅದೂ.. ಬೋರ್ವೆಲ್ ನವ ಬಂದಿದ್ದ. ಅವನ ಬಾಕಿ ಐವತ್ತು ಸಾವಿರ ಕೊಡಬೇಕಂತೆ. ನಾಳೆ ಮೊವ್ವತ್ತು ಕೊಡಿ. ಇನ್ನು ಇಪ್ಪತ್ತು ಶನಿವಾರ ಕೊಡಿ ಅಂದ. ನನ್ನ ಹತ್ತಿರ ಬರೀ ಹತ್ತು ಸಾವಿರ ಇದೆ.."


ಸಾಕು ನಿಲ್ಲಿಸೀ ಎಂದು ಕಿರುಚಬೇಕೆನಿಸಿತು ರಾಜೀವನಿಗೆ. ಲೆಕ್ಕಕ್ಕೆ ಲೆಕ್ಕ ಜೋಡಿಸುವ ಗುಮಾಸ್ತನ ಕೆಲಸವನ್ನೇ ಬಿಟ್ಟು ಹೊರಬಿದ್ದಿದ್ದೇನೆ. ಆದರೂ ಈ ಸಾಲ, ವೆಚ್ಛಗಳ ಲೆಕ್ಕ ಮಾತ್ರ ತನ್ನನ್ನು ಬಿಡುತ್ತಿಲ್ಲವಲ್ಲಾ? ಮನೆ ತಲುಪಿದವನೇ ನೆಟ್ ಬ್ಯಾಂಕಿಂಗ್ ತೆರೆದು ಹದಿನೈದು ಸಾವಿರ ಅಪ್ಪನ ಖಾತೆಗೆ ವರ್ಗಾಯಿಸಿ ಸುಮ್ಮನೆ ಕುಳಿತುಕೊಂಡ‌. ಆಚೆ ಆಗಸ ಗುಡುಗು, ಮಿಂಚುಗಳ ಕಾರುತ್ತಾ ಜಡಿಮಳೆಯೊಂದಕ್ಕೆ ತಯಾರಾಗುತ್ತಿತ್ತು.


ಯಾಕೋ ಮಂಗಳಾ ಇನ್ನಿಲ್ಲದಂತೆ ನೆನಪಾಗತೊಡಗಿದಳು. ಅವಳೊಂದಿಗೆ ಎಲ್ಲವನ್ನೂ ಹೇಳಿಕೊಳ್ಳಬೇಕು. ಅವಳ ಸಾಂತ್ವನದ ನುಡಿಗಳ ಕೇಳಬೇಕು. 'ನಿಮ್ಮೊಂದಿಗೆ ನಾನಿದ್ದೇನೆ' ಎಂಬ ಅವಳ ಭರವಸೆಯ ಮಾತಿನಿಂದೊಷ್ಟು ನೆಮ್ಮದಿ ಪಡೆಯಬೇಕು. ಅವಳಿಗೆ ಕರೆ ಮಾಡಲೆಂದು ಮೊಬೈಲ್ ಆಚೆ ತೆಗೆದ‌.


ಥಟ್ಟನೆ ಅದು ರಿಂಗಣಿಸುತ್ತಾ, ಪರದೆಯ ಮೇಲೆ ಮಂಗಳಾಳ ಹೆಸರು ಮೂಡಿಬರತೊಡಗಿತು!


ಮಂಗಳಾ.. ತನ್ನದೇ ಭಾವನೆಗಳ ಪ್ರತಿರೂಪವಾಗಿರುವ ಮಂಗಳಾ.. ತಾನೆಂಬ ಶತಮೂರ್ಖನನ್ನು ಸಂತೈಸುವ ಏಕಮಾತ್ರ ಜೀವ..


ಉದ್ವೇಗವುಕ್ಕುವ ದನಿಯಲ್ಲಿ 'ಹಲೋ' ಎಂದ. ಅತ್ತಕಡೆಯಿಂದ ಭಾವವೀಣೆಯೇ ನುಡಿಯುತ್ತಿರುವಂತೆ ಹಿತವಾದ ಆ ದನಿ "ಹಲೋ, ಎಲ್ಲಿದ್ದೀರಾ?" ಎಂದಿತು. "ನಿಮ್ಮದೇ ನಿರೀಕ್ಷೆಯಲ್ಲಿ.." ಎನ್ನಬೇಕೆಂದುಕೊಂಡಿದ್ದವನು ಸಾವರಿಸಿಕೊಂಡು "ರೂಮಿನಲ್ಲಿ" ಎಂದ. 


"ನಿಮಗೊಂದು ವಿಷಯ ಹೇಳ್ಬೇಕು" 

ಹಾಗೆಂದವಳ ದನಿಯಲ್ಲಿ ನವಿರಾದ ನಾಚಿಕೆಯಿತ್ತು.


ಆಶ್ಚರ್ಯದಿಂದ "ಏನು?" ಎಂದ.


"ನನಗೆ ಸಂಬಂಧ ನಿಶ್ಚಯವಾಯ್ತು!"


ಗುಡುಗುತ್ತಿದ್ದ ಆಕಾಶ ಸ್ತಬ್ದವಾಯಿತು. ಹೊಯ್ದಾಡುತ್ತಿದ್ದ ಮರಗಳು ನಿಶ್ಚಲವಾದವು. ಬೀಸುತ್ತಿದ್ದ ಗಾಳಿಯೂ ಚಲನೆ ಮರೆತಂತೆ ನಿಂತುಹೋಯಿತು.


"ಏನು..?"


ತಾನು ಕೇಳಿಸಿಕೊಂಡಿದ್ದು ಸುಳ್ಳಾಗಿರಬಹುದೇನೋ ಎಂಬ ಕುಟುಕು ಆಸೆಯಲ್ಲಿ ಮತ್ತೆ ಕೇಳಿದ.


"ನನ್ನ ಅತ್ತೆಯ ಪರಿಚಯದ ಹುಡುಗ. ಜರ್ಮನಿಯಲ್ಲಿ ಇಂಜಿನಿಯರ್ ಆಗಿದಾರೆ. ಅದು ಮುಖ್ಯ ಅಲ್ಲ ಬಿಡಿ. ಇಂದು ನೋಡಲಿಕ್ಕೆ ಬಂದಿದ್ದರು. ಅವರೊಂದಿಗೆ ಮಾತನಾಡಿದ ನನಗೆ ಬಹಳ ನೇರ ಹಾಗೂ ಸ್ಪಷ್ಟ ಅನ್ನಿಸಿದರು. ಇನ್ನು ನಾಲ್ಕು ತಿಂಗಳಲ್ಲಿ ಮರಳಿ ಹೋಗ್ಬೇಕಂತೆ. ಹಾಗಾಗಿ ಎಲ್ಲ ಗಡಿಬಿಡಿಯಲ್ಲಿ ನಡೆದುಹೋಯ್ತು. ಮೊದಲೇ ಹೇಳೋಕಾಗಿಲ್ಲ. ಸಾರಿ.."


ಅವಳು ಹೇಳುತ್ತಲೇ ಹೋದಳು. ಸುಳಿಗಾಳಿ ಕಟ್ಟಿ ನಿಂತಿದ್ದ ದುಃಖದಂತೆ ವೇಗಾವಾಗಿ ನುಗ್ಗಿಬಂತು. ಮೇಜಿನ ಮೇಲಿದ್ದ, ಮನೆ-ತೋಟ-ಭವಿಷ್ಯ-ಮದುವೆಗಳೆಂಬ ನೂರಾರು ಆಸೆಗಳ ಲೆಕ್ಕವನ್ನು ಹೊತ್ತಿದ್ದ ಅವನ ಲೆಕ್ಕದ ಪುಸ್ತಕ ಫಟ್ಟೆಂಬ ಶಬ್ದದೊಂದಿಗೆ ಕೆಳಗಿದ್ದ ನೀರನ ಹೂಜಿಯ ಮೇಲೆ ಬಿದ್ದು ತೋಯ್ದು ಹೋಯ್ತು.


"ಯಾಕೆ ಮಾತಾಡ್ತಿಲ್ಲ? ಕೋಪಾನಾ? ಸಾರಿ ಹೇಳಿದ್ನಲ್ಲಾ? ಇನ್ನಿರೋದು ಬರೀ ನಾಲ್ಕೇ ತಿಂಗಳು ರೀ. ಈಗ್ಲೂ ಹೀಗೆ ಮೌನವಾಗಿದ್ರೆ ಹೇಗೆ? ಈ ವಿಷಯಾನ ಇನ್ನೂ ಯಾರಿಗೂ ಹೇಳಿಲ್ಲ ಗೊತ್ತಾ? ನನಗೀಗ ಅತ್ಯಂತ ಆತ್ಮೀಯರೆಂದರೆ ನೀವೊಬ್ಬರೇ. ಅದಕ್ಕೇ ಮೊದಲು ನಿಮಗೇ ಕಾಲ್ ಮಾಡ್ತಿದೀನಿ.."


ಮುಚ್ಚಿದ ಬಾಗಿಲಿನಾಚೆ ಕತ್ತಲಲ್ಲಿ ಸುರಿಯುತ್ತಿದ್ದ ಅಗೋಚರ ಮಳೆಯ ಸದ್ದು ತಾರಕಕ್ಕೇರಿತು. ಅವಳು ಮಾತು ಮುಂದುವರೆಸಿದಳು.


"ಅಂದ್ಕೊಂಡೆ ನಿಮಗೆ ಸರ್ಪೈಸ್ ಆಗತ್ತೆ ಅಂತ. ಹೋಗ್ಲಿ ಬಿಡಿ. ಹೇ.. ಅಂದಹಾಗೇ ಮೊನ್ನೆ 'ನನಗೆ ನೀವು ಯಾರು' ಅಂತ ಹೇಳ್ತೀನಿ ಅಂದಿದ್ರಲ್ಲಾ? ಮುಂದೆ ಕೇಳಲಿಕ್ಕೆ ಆಗುತ್ತದೋ ಇಲ್ವೋ. ಪ್ಲೀಸ್ ಈಗಲೇ ಹೇಳ್ರೀ.‌. ಯಾರು ನೀವು ನನಗೆ?"


"ನಾನು.. ನಾನು‌‌‌.."


ಭಾವಲೋಕದ ಅತಿಸೂಕ್ಷ್ಮ ತಂತಿಯೊಂದು ತುಂಡಾಗುತ್ತಿರುವ ಸದ್ದಿನಂತೆ ಅವನು ನುಡಿದ:


"ನಾನು ಗುಮಾಸ್ತ"



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬ್ಯಾಚುಲರ್ ಬದುಕಿನ ಬಾನ್ಗಡಿಗಳು...

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕ...